[ಆರನೆಯ ಅಧ್ಯಾಯ]
ಭಾಗಸೂಚನಾ
ಋಷಭದೇವರ ದೇಹತ್ಯಾಗ
(ಶ್ಲೋಕ - 1)
ಮೂಲಮ್ (ವಾಚನಮ್)
ರಾಜೋವಾಚ
ಮೂಲಮ್
ನ ನೂನಂ ಭಗವ ಆತ್ಮಾರಾಮಾಣಾಂ ಯೋಗ ಸಮೀರಿತಜ್ಞಾನಾವಭರ್ಜಿತಕರ್ಮಬೀಜಾನಾಮೈಶ್ವರ್ಯಾಣಿ ಪುನಃ ಕ್ಲೇಶದಾನಿ ಭವಿತುಮರ್ಹಂತಿ ಯದೃಚ್ಛಯೋಪಗತಾನಿ ॥
ಅನುವಾದ
ರಾಜಾ ಪರೀಕ್ಷಿತನು — ಕೇಳಿದನು ಮುನಿವರ್ಯರೇ! ಯೋಗರೂಪವಾದ ವಾಯುವಿನ ಮೂಲಕ ಪ್ರಜ್ವಲಿತ ವಾದ ಜ್ಞಾನಾಗ್ನಿಯಿಂದ ರಾಗಾದಿ ಕರ್ಮಬೀಜಗಳು ಸುಟ್ಟು ಹೋಗಿರುವಂತಹ ಆತ್ಮಾರಾಮ ಮುನಿಗಳಿಗೆ ದೈವವಶಾತ್ ಸ್ವತಃ ಅಣಿಮಾದಿ ಸಿದ್ಧಿಗಳು ದೊರಕಿದರೆ, ಅವು ಅವರಿಗೆ ರಾಗ-ದ್ವೇಷಾದಿ ಕ್ಲೇಶಗಳಿಗೆ ಕಾರಣಗಳಾಗುವುದೇ ಇಲ್ಲ. ಹಾಗಿರುವಾಗ ಭಗವಾನ್ ಋಷಭದೇವರು ಅವನ್ನು ಏಕೆ ಸ್ವೀಕರಿಸಲಿಲ್ಲ? ॥1॥
(ಶ್ಲೋಕ - 2)
ಮೂಲಮ್ (ವಾಚನಮ್)
ಋಷಿರುವಾಚ
ಮೂಲಮ್
ಸತ್ಯಮುಕ್ತಂ ಕಿಂತ್ವಿಹ ವಾ ಏಕೇ ನ ಮನಸೋದ್ಧಾ ವಿಶ್ರಂಭಮನವಸ್ಥಾನಸ್ಯ ಶಠಕಿರಾತ ಇವ ಸಂಗಚ್ಛಂತೇ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ರಾಜೇಂದ್ರನೇ! ನೀನು ಹೇಳಿರುವುದು ಸರಿಯಾಗಿದೆ. ಆದರೆ ಧೂರ್ತನಾದ ಬೇಡನು ಮೃಗಗಳು ತನ್ನ ಬಲೆಯಲ್ಲಿ ಬಂದು ಬಿದ್ದು ತನ್ನ ಹಿಡಿತದಲ್ಲಿದ್ದರೂ ಅವುಗಳ ಮೇಲೆ ಭರವಸೆಯನ್ನು ಇಡುವುದಿಲ್ಲ; ಹಾಗೆಯೇ ಬುದ್ಧಿವಂತರಾದವರು ಈ ಚಂಚಲವಾದ ಚಿತ್ತದ ಮೇಲೆ ಭರವಸೆಯನ್ನಿಡುವುದಿಲ್ಲ. ॥2॥
(ಗದ್ಯ - 3)
ಮೂಲಮ್
ತಥಾ ಚೋಕ್ತಮ್ ನ ಕುರ್ಯಾತ್ಕರ್ಹಿಚಿತ್ಸಖ್ಯಂ ಮನಸಿ ಹ್ಯನವಸ್ಥಿತೇ ಯದ್ವಿಶ್ರಂಭಾಚ್ಚಿರಾಚ್ಚೀರ್ಣಂ ಚಸ್ಕಂದ ತಪ ಐಶ್ವರಮ್ ॥
ಅನುವಾದ
ಈ ಪ್ರಸಿದ್ಧವಾದ ಶ್ಲೋಕಗಳು ಇದೇ ಅಭಿಪ್ರಾಯವನ್ನು ಸಾರುತ್ತಿವೆ ಈ ಚಂಚಲವಾದ ಚಿತ್ತದಲ್ಲಿ ಎಂದಿಗೂ ಸ್ನೇಹ-ನಂಬಿಕೆ ಗಳನ್ನಿಡಬಾರದು. ಇದರಲ್ಲಿ ನಂಬಿಕೆಯನ್ನಿಟ್ಟಿದ್ದರಿಂದಲೇ ಬಹುಮಂದಿ ಯೋಗೀಶ್ವರರು ತಾವು ಚಿರಕಾಲದಿಂದ ಸಂಪಾದಿಸಿದ್ದ ತಪಸ್ಸನ್ನು ಕಳಕೊಂಡರು. ಅವರ ತಪಶ್ಶಕ್ತಿಯು ಕ್ಷಯಹೊಂದಿತು. ॥3॥
(ಶ್ಲೋಕ - 4)
ಮೂಲಮ್
ನಿತ್ಯಂ ದದಾತಿ ಕಾಮಸ್ಯ ಚ್ಛಿದ್ರಂ ತಮನು ಯೇರಯಃ ।
ಯೋಗಿನಃ ಕೃತಮೈತ್ರಸ್ಯ ಪತ್ಯುರ್ಜಾಯೇವ ಪುಂಶ್ಚಲೀ ॥
ಅನುವಾದ
ವ್ಯಭಿಚಾರಿಣಿಯಾದ ಹೆಂಗಸು ಜಾರಪುರುಷರಿಗೆ ಅವಕಾಶಕೊಟ್ಟು ತನ್ನಲ್ಲಿ ನಂಬಿಕೆಯ ನ್ನಿಟ್ಟಿರುವ ಪತಿಯನ್ನು ಅವರ ಮೂಲಕ ಕೊಲ್ಲಿಸುವಂತೆಯೇ ಯೋಗಿಯು ತನ್ನ ಮನಸ್ಸಿನ ಮೇಲೆ ವಿಶ್ವಾಸವನ್ನಿಟ್ಟರೆ ಆ ಮನಸ್ಸು ಕಾಮಕ್ಕೂ, ಅದರ ಜೊತೆಗಾರರಾದ ಕ್ರೋಧವೇ ಮುಂತಾದವುಗಳು ಆ ಯೋಗಿಯ ಮೇಲೆ ಆಕ್ರಮಣ ಮಾಡಲು ಅವಕಾಶವನ್ನು ಕಲ್ಪಿಸಿಕೊಟ್ಟ ಅವನನ್ನು ನಷ್ಟ- ಭ್ರಷ್ಟನನ್ನಾಗಿ ಮಾಡುತ್ತದೆ. ॥4॥
(ಶ್ಲೋಕ - 5)
ಮೂಲಮ್
ಕಾಮೋ ಮನ್ಯುರ್ಮದೋ ಲೋಭಃ
ಶೋಕಮೋಹಭಯಾದಯಃ ।
ಕರ್ಮಬಂಧಶ್ಚ ಯನ್ಮೂಲಃ
ಸ್ವೀಕುರ್ಯಾತ್ಕೋನು ತದ್ಬುಧಃ ॥
ಅನುವಾದ
ಕಾಮ-ಕ್ರೋಧ- ಮದ-ಲೋಭ-ಶೋಕ-ಮೋಹ ಮತ್ತು ಭಯಗಳೇ ಮುಂತಾದ ಶತ್ರುಗಳಿಗೂ ಮತ್ತು ಕರ್ಮಬಂಧನಕ್ಕೂ ಈ ಮನಸ್ಸೇ ಮೂಲವಾದುದು. ಇದರ ಮೇಲೆ ಯಾವುದೇ ಬುದ್ಧಿವಂತನು ಭರವಸೆಯನ್ನಿಡಬಾರದು. ॥5॥
(ಗದ್ಯ - 6)
ಮೂಲಮ್
ಅಥೈವಮಖಿಲಲೋಕಪಾಲಲಲಾಮೋಪಿ ವಿಲಕ್ಷಣೈರ್ಜಡವದವಧೂತವೇಷಭಾಷಾಚರಿತೈರವಿಲಕ್ಷಿತ ಭಗವತ್ ಪ್ರಭಾವೋ ಯೋಗಿನಾಂ ಸಾಂಪರಾಯವಿಧಿಮನುಶಿಕ್ಷಯನ್ ಸ್ವಕಲೇವರಂ ಜಿಹಾಸುರಾತ್ಮನ್ಯಾತ್ಮಾನಮಸಂವ್ಯವಹಿತಮನರ್ಥಾಂತರಭಾವೇನಾನ್ವೀಕ್ಷಮಾಣ ಉಪರತಾನುವೃತ್ತಿರುಪರರಾಮ ॥
ಅನುವಾದ
ಇದರಿಂದಲೇ ಭಗವಾನ್ ಋಷಭದೇವರು ಇಂದ್ರಾದಿ ಸಮಸ್ತ ಲೋಕಪಾಲಕರಿಗೆ ಭೂಷಣಸ್ವರೂಪರಾಗಿದ್ದರೂ, ಅವರು ಜಡ-ಮೂರ್ಖಮನುಷ್ಯನಂತೆ ಅವಧೂತರಿಗೆ ಸರಿಹೋಲುವ ನಾನಾ ವೇಷ, ಭಾಷೆ, ಆಚರಣೆಗಳಿಂದ ತನ್ನ ಈಶ್ವರೀಯ ಪ್ರಭಾವವನ್ನು ಮರೆಮಾಚಿಕೊಂಡಿದ್ದರು. ಕೊನೆಗೆ ಅವರು ಯೋಗಿಗಳಿಗೆ ದೇಹ ತ್ಯಾಗದ ವಿಧಿಯನ್ನು ಕಲಿಸುವುದಕ್ಕಾಗಿ ತನ್ನ ಶರೀರವನ್ನು ತ್ಯಜಿಸಲು ಬಯಸಿದರು. ಅವರು ತನ್ನ ಅಂತಃಕರಣದಲ್ಲಿ ಅಭೇದರೂಪದಿಂದ ಸ್ಥಿತನಾದ ಪರಮಾತ್ಮನನ್ನು ಅಭಿನ್ನರೂಪದಿಂದ ನೋಡುತ್ತಾ ವಾಸನೆಗಳ ಅನುವೃತ್ತಿಯನ್ನು ಬಿಟ್ಟು ಲಿಂಗದೇಹದ ಅಭಿಮಾನವನ್ನೂ ಪೂರ್ಣವಾಗಿ ತೊರೆದಿದ್ದರು. ॥6॥
(ಗದ್ಯ - 7)
ಮೂಲಮ್
ತಸ್ಯ ಹ ವಾ ಏವಂ ಮುಕ್ತಲಿಂಗಸ್ಯ ಭಗವತ ಋಷಭಸ್ಯ ಯೋಗಮಾಯಾ ವಾಸನಯಾ ದೇಹ ಇಮಾಂ ಜಗತೀಮಭಿಮಾನಾ ಭಾಸೇನ ಸಂಕ್ರಮಮಾಣಃ ಕೊಂಕವೇಂಕಕುಟಕಾನ್ ದಕ್ಷಿಣಕರ್ಣಾಟಕಾನ್ ದೇಶಾನ್ಯದೃಚ್ಛಯೋಪಗತಃ ಕುಟಕಾ- ಚಲೋಪವನ ಆಸ್ಯಕೃತಾಶ್ಮಕವಲ ಉನ್ಮಾದ ಇವ ಮುಕ್ತ- ಮೂರ್ಧಜೋಸಂವೀತ ಏವ ವಿಚಚಾರ ॥
ಅನುವಾದ
ಹೀಗೆ ಲಿಂಗದೇಹದ ಅಭಿಮಾನದಿಂದ ಮುಕ್ತರಾದ ಭಗವಾನ್ ಋಷಭದೇವರ ಶರೀರವು ಯೋಗ ಮಾಯೆಯ ವಾಸನೆಯಿಂದ ಕೇವಲ ಅಭಿಮಾನದ ಆಭಾಸವನ್ನೇ ಆಶ್ರಯಿಸಿ ಭೂಮಿಯಲ್ಲಿ ಸಂಚರಿಸುತ್ತಿತ್ತು. ಅವರು ದೈವವಶದಿಂದ ಕೊಂಕಣ ವೆಂಕಟಾಚಲ ಮತ್ತು ದಕ್ಷಿಣದ ಕನ್ನಡದ ದೇಶಗಳಿಗೆ ಕಟಕಗಿರಿಯ ಉಪವನದಲ್ಲಿ ಬಾಯಿಗೆ ಕಲ್ಲುಗಳನ್ನು ಹಾಕಿಕೊಂಡು, ಕೂದಲನ್ನು ಕೆದರಿಕೊಂಡು ಉನ್ಮತ್ತರಂತೆ ದಿಗಂಬರರಾಗಿ ತಿರುಗಾಡ ತೊಡಗಿದರು. ॥7॥
(ಗದ್ಯ - 8)
ಮೂಲಮ್
ಅಥ ಸಮೀರವೇಗವಿಧೂತ ವೇಣುವಿಕರ್ಷಣಜಾತೋಗ್ರದಾವಾನಲಸ್ತದ್ವನಮಾಲೇಲಿಹಾನಃ ಸಹ ತೇನ ದದಾಹ ॥
ಅನುವಾದ
ಅದೇ ಸಮಯದಲ್ಲಿ ಬಿರುಗಾಳಿ ಯೊಂದು ಭರ್ರನೇ ಬೀಸಿ ಬಿದಿರು ಮೇಳೆಗಳ ತಿಕ್ಕಾಟದಿಂದ ಹುಟ್ಟಿದ ಕಾಡುಗಿಚ್ಚು ಭುಗಿಲೆದ್ದು ಕೆಂಪುಜ್ಞಾಲೆಗಳಿಂದ ಇಡೀ ಅರಣ್ಯವನ್ನೂ ಹಾಗೂ ಅಲ್ಲಿ ಸಂಚರಿಸುತ್ತಿದ್ದ ಋಷಭ ದೇವರ ದೇಹವನ್ನೂ ಕಬಳಿಸಿ ಭಸ್ಮಮಾಡಿಬಿಟ್ಟಿತು. ॥8॥
(ಗದ್ಯ - 9)
ಮೂಲಮ್
ಯಸ್ಯ ಕಿಲಾನುಚರಿತಮುಪಾಕರ್ಣ್ಯ ಕೊಂಕವೇಂಕ ಕುಟಕಾನಾಂ ರಾಜಾರ್ಹನ್ನಾಮೋಪಶಿಕ್ಷ್ಯ ಕಲಾವಧರ್ಮ ಉತ್ಕೃಷ್ಯಮಾಣೇ ಭವಿತವ್ಯೇನ ವಿಮೋಹಿತಃ ಸ್ವಧರ್ಮ- ಪಥಮಕುತೋಭಯ ಮಪಹಾಯ ಕುಪಥಪಾಖಂಡ- ಮಸಮಂಜಸಂ ನಿಜಮನೀಷಯಾ ಮಂದಃ ಸಂಪ್ರವರ್ತಯಿಷ್ಯತೇ ॥
ಅನುವಾದ
ಎಲೈ ರಾಜನೇ! ಕಲಿಯುಗದಲ್ಲಿ ಅಧರ್ಮವು ವೃದ್ಧಿ ಹೊಂದಿದಾಗ ಕೊಂಕ, ವೆಂಕ ಮತ್ತು ಕುಟಕದೇಶಗಳಿಗೆ ಅಧಿಪತಿಯಾದ ಮಂದಮತಿಯಾದ ಓರ್ವ ರಾಜನಾದ ಅರ್ಹತ್ ಎಂಬುವನು ಶ್ರೀಋಷಭದೇವರ ಆಶ್ರಮಧರ್ಮಗಳನ್ನು ಮೀರಿದ ಆಚರಣೆಯ ವೃತ್ತಾಂತವನ್ನು ಕೇಳಿ, ತಾನು ಅದಕ್ಕೆ ಅಧಿಕಾರಿಯಲ್ಲದಿದ್ದರೂ ಅದನ್ನು ಅನುಕರಿಸುತ್ತಾ ನಿರ್ಭಯನಾಗಿ ಸ್ವಧರ್ಮವನ್ನು ಬಿಟ್ಟು ಪಾಖಂಡ ಧರ್ಮದ ಮಾರ್ಗವನ್ನು ಜನರಲ್ಲಿ ಪ್ರಚಾರ ಮಾಡುವನು. ॥9॥
(ಗದ್ಯ - 10)
ಮೂಲಮ್
ಯೇನ ಹ ವಾವ ಕಲೌ ಮನುಜಾಪ ಸದಾ ದೇವಮಾಯಾ ಮೋಹಿತಾಃ ಸ್ವವಿಧಿನಿಯೋಗ ಶೌಚಚಾರಿತ್ರವಿಹೀನಾ ದೇವಹೇಲನಾನ್ಯಪವ್ರತಾನಿ ನಿಜ ನಿಜೇಚ್ಛಯಾ ಗೃಹ್ಣಾನಾ ಅಸ್ನಾನಾನಾಚಮನಾಶೌಚಕೇ ಶೋಲ್ಲುಂಚನಾದೀನಿ ಕಲಿನಾಧರ್ಮಬಹುಲೇನೋಪ ಹತಧಿಯೋ ಬ್ರಹ್ಮಬ್ರಾಹ್ಮಣಯಜ್ಞಪುರುಷಲೋಕವಿದೂಷಕಾಃ ಪ್ರಾಯೇಣ ಭವಿಷ್ಯಂತಿ ॥
(ಗದ್ಯ - 11)
ಮೂಲಮ್
ತೇ ಚ ಹ್ಯರ್ವಾಕ್ತನಯಾ ನಿಜಲೋಕಯಾತ್ರಯಾಂಧಪರಂಪರಯಾಶ್ವಸ್ತಾಸ್ತಮಸ್ಯಂಧೇ ಸ್ವಯಮೇವ ಪ್ರಪತಿಷ್ಯಂತಿ ॥
ಅನುವಾದ
ಅದರಿಂದ ಕಲಿಯುಗದಲ್ಲಿ ದೇವಮಾಯೆಯಿಂದ ಮೋಹಿತರಾದ ಅನೇಕ ಮನುಷ್ಯರು ತಮ್ಮ ಶಾಸ್ತ್ರವಿಹಿತವಾದ ಶೌಚಾಚಾರವನ್ನು ಬಿಟ್ಟು ಬಿಡುವರು. ವೇದವನ್ನೂ, ಬ್ರಾಹ್ಮಣರನ್ನೂ, ಯಜ್ಞಪುರುಷನನ್ನೂ ನಿಂದಿಸತೊಡಗುವರು ಹಾಗೂ ವೇದವಿರುದ್ಧವಾದ ಅಂಧ ಪರಂಪರೆಯಿಂದ ಪ್ರೋತ್ಸಾಹಿತರಾಗಿ ಅವರಲ್ಲಿ ವಿಶ್ವಾಸವನ್ನಿಟ್ಟು, ಸ್ನಾನಮಾಡದಿರುವುದು, ಆಚಮನ ಮಾಡದಿರುವುದು, ಅಶುದ್ಧವಾಗಿರುವುದು, ಕೇಶಗಳನ್ನು ಕೀಳಿಸಿಕೊಳ್ಳುವುದು ಮುಂತಾಗಿ ಸ್ವೇಚ್ಛೆಯಿಂದ ವರ್ತಿಸುತ್ತಾ ತಾವಾಗಿಯೇ ಅಂಧತಮಸ್ಸಿನಲ್ಲಿ ಬೀಳುವರು. ಅದು ಅವರ ಪತನಕ್ಕೆ ಕಾರಣವಾಗುವುದು. ॥10-11॥
(ಗದ್ಯ - 12)
ಮೂಲಮ್
ಅಯಮವತಾರೋ ರಜಸೋಪಪ್ಲುತಕೈವಲ್ಯೋಪ ಶಿಕ್ಷಣಾರ್ಥಃ ॥ ತಸ್ಯಾನುಗುಣಾನ್ ಶ್ಲೋಕಾನ್ ಗಾಯಂತಿ-
ಅನುವಾದ
ಶ್ರೀಭಗವಂತನು ರಜೋಗುಣದಿಂದ ತುಂಬಿರುವ ಜನರಿಗೆ ಮೋಕ್ಷಮಾರ್ಗದ ಶಿಕ್ಷಣಕೊಡಲು ಈ ಋಷಭ ಅವತಾರ ವನ್ನು ಮಾಡಿದನು. ॥12॥
(ಶ್ಲೋಕ - 13)
ಮೂಲಮ್
ಅಹೋ ಭುವಃ ಸಪ್ತಸಮುದ್ರವತ್ಯಾ
ದ್ವೀಪೇಷು ವರ್ಷೇಷ್ವಧಿಪುಣ್ಯಮೇತತ್
ಗಾಯಂತಿ ಯತ್ರತ್ಯಜನಾ ಮುರಾರೇಃ
ಕರ್ಮಾಣಿ ಭದ್ರಾಣ್ಯವತಾರವಂತಿ ॥
ಅನುವಾದ
ಈ ಅವತಾರದ ದಿವ್ಯ ಗುಣಗಳನ್ನು ವರ್ಣಿಸುವ ಈ ಶ್ಲೋಕಗಳನ್ನು ವಿದ್ವಾಂಸರು ಹಾಡುತ್ತಾ ಬಂದಿದ್ದಾರೆ — ಆಹಾ! ಏಳು ಸಮುದ್ರಗಳಿಂದ ಕೂಡಿದ ಸಮಸ್ತ ದ್ವೀಪಗಳಲ್ಲಿಯೂ, ವರ್ಷಗಳಲ್ಲಿಯೂ ಈ ಭಾರತ ವರ್ಷವು ಎಂತಹ ಪುಣ್ಯಭೂಮಿಯಾಗಿದೆ! ಇಲ್ಲಿಯ ಜನರು ಶ್ರೀಹರಿಯ ಮಂಗಳಮಯ ಅವತಾರ ಚರಿತ್ರೆಗಳನ್ನು ಹಾಡುತ್ತಾ ಇರುತ್ತಾರೆ. ॥13॥
(ಶ್ಲೋಕ - 14)
ಮೂಲಮ್
ಅಹೋ ನು ವಂಶೋ ಯಶಸಾವದಾತಃ
ಪ್ರೈಯವ್ರತೋ ಯತ್ರ ಪುಮಾನ್ಪುರಾಣಃ
ಕೃತಾವತಾರಃ ಪುರುಷಃ ಸ ಆದ್ಯಃ
ಚಚಾರ ಧರ್ಮಂ ಯದಕರ್ಮಹೇತುಮ್ ॥
ಅನುವಾದ
ಆಹಾ! ಮಹಾರಾಜಾ ಪ್ರಿಯವ್ರತನ ವಂಶವು ಉಜ್ವಲವಾದ ಕೀರ್ತಿಯಿಂದ ಕೂಡಿ ಅತ್ಯಂತ ಪವಿತ್ರವಾಗಿದೆ. ಅದರಲ್ಲಿಯೇ ಪುರಾಣಪುರುಷನಾದ ಆದಿನಾರಾಯಣನು ಋಷಭಾವತಾರವನ್ನು ತಾಳಿ ಮೋಕ್ಷವನ್ನು ದೊರಕಿಸು ವಂತಹ ಪರಮಹಂಸಧರ್ಮವನ್ನು ಆಚರಿಸಿದನು. ॥14॥
(ಶ್ಲೋಕ - 15)
ಮೂಲಮ್
ಕೋ ನ್ವಸ್ಯ ಕಾಷ್ಠಾಮಪರೋನುಗಚ್ಛೇನ್ಮನೋರಥೇನಾಪ್ಯಭವಸ್ಯ ಯೋಗೀಯೋ ಯೋಗಮಾಯಾಃ ಸ್ಪೃಹಯತ್ಯುದಸ್ತಾಹ್ಯಸತ್ತಯಾ ಯೇನ ಕೃತಪ್ರಯತ್ನಾಃ ॥
ಅನುವಾದ
ಆಹಾ! ಈ ಜನ್ಮರಹಿತ ಭಗವಾನ್ ಋಷಭ ದೇವರ ಅಸಾಧಾರಣವಾದ ನಡೆವಳಿಕೆಯನ್ನು ಇತರ ಯೋಗಿಗಳು ಮನಸ್ಸಿನಿಂದಲೂ ಮುಟ್ಟಲಾರರು. ಏಕೆಂದರೆ, ಯೋಗಿಗಳು ಯಾವ ಯೋಗಸಿದ್ಧಿಗಳಿಗಾಗಿ ಆಶಿಸಿ ನಿರಂತರ ಪ್ರಯತ್ನಿಸುತ್ತಾರೋ, ಆ ಸಿದ್ಧಿಗಳೆಲ್ಲವೂ ತಾವಾಗಿಯೇ ಪ್ರಾಪ್ತವಾಗಿದ್ದರೂ ಅವನ್ನು ಅಸತ್ತೆಂದು ಭಾವಿಸಿ ನಿರಾಕರಿಸಿಬಿಟ್ಟನು. ॥15॥
(ಶ್ಲೋಕ - 16)
ಮೂಲಮ್
ಇತಿ ಹ ಸ್ಮ ಸಕಲವೇದಲೋಕದೇವಬ್ರಾಹ್ಮಣಗವಾಂ ಪರಮಗುರೋರ್ಭಗವತ ಋಷಭಾಖ್ಯಸ್ಯ ವಿಶುದ್ಧಾಚರಿತಮೀರಿತಂ ಪುಂಸಾಂ ಸಮಸ್ತದುಶ್ಚರಿತಾಭಿಹರಣಂ ಪರಮಮಹಾಮಂಗಲಾಯನಮಿದಮನು ಶ್ರದ್ಧಯೋಪಚಿತಯಾನುಶೃಣೋತ್ಯಾಶ್ರಾವಯತಿವಾವಹಿತೋ ಭಗವತಿ ತಸ್ಮಿನ್ವಾಸುದೇವ ಏಕಾಂತತೋ ಭಕ್ತಿರನಯೋರಪಿ ಸಮನುವರ್ತತೇ ॥
ಅನುವಾದ
ಪರೀಕ್ಷಿದ್ರಾಜೇಂದ್ರಾ! ಹೀಗೆ ನಾನು ನಿನಗೆ ಸಮಸ್ತ ವೇದಗಳು, ಲೋಕಗಳು, ಬ್ರಾಹ್ಮಣರು ಮತ್ತು ಗೋವುಗಳು ಇವರೆಲ್ಲರಿಗೂ ಪರಮಗುರುವಾಗಿರುವ ಭಗವಾನ್ ಶ್ರೀಋಷಭ ದೇವರ ಪರಿಶುದ್ಧವಾದ ಚರಿತ್ರೆಯನ್ನು ವರ್ಣಿಸಿರುವೆನು. ಇದು ಮನುಷ್ಯರ ಸಮಸ್ತ ಪಾಪಗಳನ್ನು ಕಳೆಯುವಂತಹುದು. ಪರಮ ಮಂಗಳಮಯವಾದ ಈ ಪವಿತ್ರ ಚರಿತ್ರೆಯನ್ನು ಏಕಾಗ್ರಚಿತ್ತದಿಂದ ಶ್ರದ್ಧಾ ಪೂರ್ವಕ ನಿರಂತರವಾಗಿ ಕೇಳುವ, ಹೇಳುವ ಮನುಷ್ಯರಿಗೆ ಭಗವಾನ್ ವಾಸುದೇವನಲ್ಲಿ ಅನನ್ಯವಾದ ಭಕ್ತಿಯು ಉಂಟಾಗುವುದು. ॥16॥
(ಶ್ಲೋಕ - 17)
ಮೂಲಮ್
ಯಸ್ಯಾಮೇವ ಕವಯ ಆತ್ಮಾನಮವಿರತಂ ವಿವಿಧವೃಜಿನಸಂಸಾರಪರಿತಾಪೋಪತಪ್ಯಮಾನಮನುಸವನಂ ಸ್ನಾಪಯಂತಸ್ತಯೈವ ಪರಯಾ ನಿರ್ವೃತ್ತ್ಯಾ ಹ್ಯಪವರ್ಗಮಾತ್ಯಂತಿಕಂ ಪರಮ ಪುರುಷಾರ್ಥಮಪಿ ಸ್ವಯಮಾಸಾದಿತಂ ನೋ ಏವಾದ್ರಿಯಂತೇ ಭಗವದೀಯತ್ವೇನೈವ ಪರಿಸಮಾಪ್ತಸರ್ವಾರ್ಥಾಃ ॥
ಅನುವಾದ
ಬಗೆ-ಬಗೆಯ ಪಾಪಗಳಿಂದ ತುಂಬಿರುವ ಸಾಂಸಾರಿಕ ತಾಪಗಳಿಂದ ಬೆಂದು-ನೊಂದಿರುವ ಪಂಡಿತರು ತಮ್ಮ ಅಂತಃಕರಣವನ್ನು ಈ ಭಕ್ತಿರಸ ವಾಹಿನಿಯಲ್ಲಿ ನಿರಂತರವಾಗಿ ಮೀಯಿಸುವರು. ಅದರಿಂದ ಅವರಿಗೆ ದೊರೆಯುವ ಪರಮ ಶಾಂತಿಯು ವರ್ಣನಾತೀತವಾದುದು. ಅದನ್ನು ಪಡೆದ ಸುಕೃತಿಗಳು ತಾನಾಗಿಯೇ ಒದಗಿ ಬರುವ ಮೋಕ್ಷವೆಂಬ ಪರಮ ಪುರುಷಾರ್ಥವನ್ನು ಕೂಡ ಆದರಿಸುವುದಿಲ್ಲ. ಶ್ರೀಭಗವಂತನಿಗೆ ಸ್ವಕೀಯರಾಗಿದ್ದರಿಂದಲೇ ಅವರ ಸಮಸ್ತ ಪುರುಷಾರ್ಥಗಳು ಈಡೇರುತ್ತವೆ. ॥17॥
(ಶ್ಲೋಕ - 18)
ಮೂಲಮ್
ರಾಜನ್ ಪತಿರ್ಗುರುರಲಂ ಭವತಾಂ ಯದೂನಾಂ
ದೈವಂ ಪ್ರಿಯಃ ಕುಲಪತಿಃ ಕ್ವ ಚ ಕಿಂಕರೋ ವಃ ।
ಅಸ್ತ್ವೇವಮಂಗ ಭಗವಾನ್ ಭಜತಾಂ ಮುಕುಂದೋ
ಮುಕ್ತಿಂ ದದಾತಿ ಕರ್ಹಿಚಿತ್ಸ್ಮ ನ ಭಕ್ತಿಯೋಗಮ್ ॥
ಅನುವಾದ
ಎಲೈ ರಾಜನೇ! ಭಗವಾನ್ ಶ್ರೀಕೃಷ್ಣನು ಸ್ವಯಂ ಪಾಂಡವರ ಮತ್ತು ಯದುವಂಶೀಯರ ರಕ್ಷಕನೂ, ಗುರುವೂ, ಇಷ್ಟದೇವನೂ, ಸಖನೂ, ಕುಲಪತಿಯೂ ಆಗಿದ್ದನು. ಇಷ್ಟು ಮಾತ್ರವಲ್ಲ; ಕೆಲವೊಮ್ಮೆ ನಿಮ್ಮ ಆಜ್ಞಾಕಾರಿ ಸೇವಕನೂ ಆಗಿರುತ್ತಿದ್ದನು. ಹೀಗೆಯೇ ಶ್ರೀಭಗವಂತನು ತನ್ನನ್ನು ಭಜಿಸುವ ಇತರ ಭಕ್ತರಿಗೂ ಈ ಉಪಕಾರಗಳನ್ನಲ್ಲದೆ ಮುಕ್ತಿಯನ್ನು ದಯಪಾಲಿಸುವನು. ಆದರೆ ಅದಕ್ಕೂ ಅತಿಶಯವಾಗಿರುವ ಭಕ್ತಿಯೋಗವನ್ನು ಮಾತ್ರ ಸುಲಭವಾಗಿ ಕೊಡುವುದಿಲ್ಲ. ॥18॥
(ಶ್ಲೋಕ - 19)
ಮೂಲಮ್
ನಿತ್ಯಾನುಭೂತನಿಜಲಾಭನಿವೃತ್ತತೃಷ್ಣಃ
ಶ್ರೇಯಸ್ಯತದ್ರಚನಯಾ ಚಿರಸುಪ್ತಬುದ್ಧೇಃ ।
ಲೋಕಸ್ಯ ಯಃ ಕರುಣಯಾಭಯಮಾತ್ಮಲೋಕ-
ಮಾಖ್ಯಾನ್ನಮೋ ಭಗವತೇ ಋಷಭಾಯ ತಸ್ಮೈ॥
ಅನುವಾದ
ನಿರಂತರವಾಗಿ ಆತ್ಮಾನುಭವದಲ್ಲಿ ಮುಳುಗಿದವನಾಗಿ, ಎಲ್ಲ ಕಾಮನೆಗಳನ್ನು ಕಳೆದುಕೊಂಡವನಾಗಿದ್ದ, ಕೃತಕೃತ್ಯನಾದ ಮಹಾಪುರುಷನು-ನಿರಂತರವಾಗಿ ವಿಷಯ ಭೋಗಗಳಲ್ಲಿ ಮುಳುಗಿ ತಮ್ಮ ವಾಸ್ತವಿಕ ಶ್ರೇಯಸ್ಸನ್ನು ಮರೆತಿರುವ ಜನರಲ್ಲಿ ದಯೆದೋರಿ ಅವರಿಗೆ ನಿರ್ಭಯವಾದ ಆತ್ಮಸ್ವರೂಪವನ್ನು ಉಪದೇಶ ಮಾಡಿದ ಆ ಭಗವಾನ್ ಋಷಭದೇವನಿಗೆ ನಮಸ್ಕಾರವು.॥19॥
ಅನುವಾದ (ಸಮಾಪ್ತಿಃ)
ಆರನೆಯ ಅಧ್ಯಾಯವು ಮುಗಿಯಿತು. ॥6॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಪಂಚಮಸ್ಕಂಧೇ ಋಷಭದೇವಾನುಚರಿತೇ ಷಷ್ಠೋಽಧ್ಯಾಯಃ ॥6॥