೦೪

[ನಾಲ್ಕನೆಯ ಅಧ್ಯಾಯ]

ಭಾಗಸೂಚನಾ

ಋಷಭದೇವರ ಮಹಿಮೆ ರಾಜ್ಯಶಾಸನ

(ಶ್ಲೋಕ - 1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಅಥ ಹ ತಮುತ್ಪತ್ತ್ಯೈವಾಭಿವ್ಯಜ್ಯಮಾನಭಗವಲ್ಲಕ್ಷಣಂ ಸಾಮ್ಯೋಪಶಮವೈರಾಗ್ಯೈಶ್ವರ್ಯ ಮಹಾವಿಭೂತಿಭಿರನುದಿನಮೇಧ ಮಾನಾನುಭಾವಂ ಪ್ರಕೃತಯಃ ಪ್ರಜಾ ಬ್ರಾಹ್ಮಣಾ ದೇವತಾಶ್ಚಾವನಿತಲಸಮವನಾಯಾತಿತರಾಂ ಜಗೃಧುಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿದ್ರಾಜನೇ! ನಾಭಿರಾಜನ ಪುತ್ರನಾಗಿ ಅವತರಿಸಿದವನು ಹುಟ್ಟಿನಿಂದಲೇ ಭಗವಾನ್ ನಾರಾಯಣನ ಚಿಹ್ನೆಗಳಾದ ವಜ್ರ, ಅಂಕುಶ ಮುಂತಾದವುಗಳಿಂದ ಅಲಂಕೃತನಾಗಿದ್ದು, ಶಾಂತಿ, ಸಮತೆ, ವೈರಾಗ್ಯ ಮತ್ತು ಐಶ್ವರ್ಯ ಮುಂತಾದ ದಿವ್ಯ ಲಕ್ಷಣಗಳಿಂದ ದಿನೇ-ದಿನೇ ವೃದ್ಧಿ ಹೊಂದುತ್ತಿದ್ದನು. ಇದನ್ನು ನೋಡಿ ಮಂತ್ರಿ, ಪುರೋಹಿತರೇ ಮುಂತಾದ ಪ್ರಕೃತಿಗಳಿಗೂ (ಮಂತ್ರಿಗಳಿಗೂ), ಪ್ರಜೆಗಳಿಗೂ ಬ್ರಾಹ್ಮಣರಿಗೂ, ದೇವತೆಗಳಿಗೂ ಈತನೇ ಮುಂದೆ ರಾಜನಾಗಿ ಭೂಮಿಯನ್ನು ಆಳಬೇಕೆಂಬ ಉತ್ಕಟವಾದ ಅಭಿಲಾಷೆಯುಂಟಾಯಿತು. ॥1॥

(ಶ್ಲೋಕ - 2)

ಮೂಲಮ್

ತಸ್ಯ ಹ ವಾ ಇತ್ಥಂ ವರ್ಷ್ಮಣಾ ವರೀಯಸಾ ಬೃಹಚ್ಛ್ಲೋಕೇನ ಚೌಜಸಾ ಬಲೇನ ಶ್ರಿಯಾ ಯಶಸಾ ವೀರ್ಯಶೌರ್ಯಾಭ್ಯಾಂ ಚ ಪಿತಾ ಋಷಭ ಇತೀದಂ ನಾಮ ಚಕಾರ ॥

ಅನುವಾದ

ಆ ಶಿಶುವಿನ ಸುಂದರವೂ, ಸುಲಕ್ಷಣವೂ, ಸುದೃಢವೂ ಆದ ದೇಹವನ್ನೂ, ತೇಜಸ್ಸು, ಯಶಸ್ಸು, ಬಲ, ಐಶ್ವರ್ಯ, ಪರಾಕ್ರಮ, ಶೌರ್ಯ, ವೀರ್ಯ ಮುಂತಾದ ಗುಣಗಳಿಂದಾಗಿ ಮಹಾರಾಜಾ ನಾಭಿಯು ಅವನಿಗೆ ‘ಋಷಭ’ (ಶ್ರೇಷ್ಠ) ಎಂಬ ನಾಮಕರಣ ಮಾಡಿದನು. ॥2॥

(ಶ್ಲೋಕ - 3)

ಮೂಲಮ್

ತಸ್ಯ ಹೀಂದ್ರಃ ಸ್ಪರ್ಧಮಾನೋ ಭಗವಾನ್ ವರ್ಷೇ ನ ವವರ್ಷ ತದವಧಾರ್ಯ ಭಗವಾನೃಷಭದೇವೋ ಯೋಗೇಶ್ವರಃ ಪ್ರಹಸ್ಯಾತ್ಮಯೋಗಮಾಯಯಾ ಸ್ವವರ್ಷಮಜನಾಭಂ ನಾಮಾಭ್ಯವರ್ಷತ್ ॥

ಅನುವಾದ

ಒಮ್ಮೆ ಭಗವಾನ್ ಇಂದ್ರನು ಅಸೂಯೆಗೊಂಡು ಆತನ ರಾಜ್ಯದಲ್ಲಿ ಮಳೆಯನ್ನೇ ಸುರಿಸಲಿಲ್ಲ. ಆಗ ಯೋಗೇಶ್ವರನಾದ ಭಗವಾನ್ ಋಷಭದೇವನು ಇಂದ್ರನ ಮೂರ್ಖತೆಯ ಬಗ್ಗೆ ನಗುತ್ತಾ ತನ್ನ ಯೋಗಮಾಯೆಯ ಪ್ರಭಾವದಿಂದ ಅಜನಾಭವೆಂಬ ಹೆಸರುಳ್ಳ ತನ್ನ ಭಾರತವರ್ಷದಲ್ಲಿ ಹೇರಳ ವಾಗಿ ಮಳೆಯನ್ನು ಸುರಿಸಿದನು. ॥3॥

(ಶ್ಲೋಕ - 4)

ಮೂಲಮ್

ನಾಭಿಸ್ತು ಯಥಾಭಿಲಷಿತಂ ಸುಪ್ರಜಸ್ತ್ವಮವರುಧ್ಯಾತಿಪ್ರಮೋದ ಭರವಿಹ್ವಲೋ ಗದ್ಗದಾಕ್ಷರಯಾ ಗಿರಾ ಸ್ವೈರಂ ಗೃಹೀತ ನರಲೋಕಸಧರ್ಮಂ ಭಗವಂತಂ ಪುರಾಣಪುರುಷಂ ಮಾಯಾವಿಲಸಿತಮತಿರ್ವತ್ಸ ತಾತೇತಿ ಸಾನುರಾಗಮುಪ ಲಾಲಯನ್ ಪರಾಂ ನಿರ್ವೃತಿಮುಪಗತಃ ॥

ಅನುವಾದ

ತನ್ನ ಇಚ್ಛೆಗೆ ಅನುಗುಣವಾದ ಶ್ರೇಷ್ಠ ಪುತ್ರನು ದೊರಕಿದುದನ್ನು ಕಂಡು ನಾಭಿಮಹಾರಾಜನಿಗೆ ಪರಮಾನಂದವಾಯಿತು. ತನ್ನ ಸಂಕಲ್ಪದಿಂದಲೇ ಮನುಷ್ಯ-ಶರೀರವನ್ನು ಧರಿಸಿದ್ದ ಆ ಪುರಾಣಪುರುಷನ ಮಾಯಾವಿಲಾಸಕ್ಕೆ ಮರುಳಾಗಿ ಆತನು ಆ ಶಿಶುವನ್ನು ಪ್ರೀತಿಯಿಂದ ಮುದ್ದಿಸುತ್ತಾ ಅಪ್ಪ! ಮಗು! ಎಂದು ಮೃದುವಾಗಿ ಗದ್ಗದ ಕಂಠದಿಂದ ಕರೆಯುತ್ತಾ ಸುಖ ಸಾಗರದಲ್ಲಿ ಓಲಾಡುತ್ತಿದ್ದನು. ॥4॥

(ಶ್ಲೋಕ - 5)

ಮೂಲಮ್

ವಿದಿತಾನುರಾಗಮಾಪೌರಪ್ರಕೃತಿ ಜನಪದೋ ರಾಜಾ ನಾಭಿರಾತ್ಮಜಂ ಸಮಯಸೇತುರಕ್ಷಾಯಾಮಭಿಷಿಚ್ಯ ಬ್ರಾಹ್ಮಣೇಷೂಪನಿಧಾಯ ಸಹ ಮೇರುದೇವ್ಯಾ ವಿಶಾಲಾಯಾಂ ಪ್ರಸನ್ನನಿಪುಣೇನ ತಪಸಾ ಸಮಾಧಿಯೋಗೇನ ನರನಾರಾಯಣಾಖ್ಯಂ ಭಗವಂತಂ ವಾಸುದೇವಮುಪಾಸೀನಃ ಕಾಲೇನ ತನ್ಮಹಿಮಾನಮವಾಪ ॥

ಅನುವಾದ

ಮಂತ್ರಿಮಂಡಲವೂ, ನಾಗರೀಕರೂ ಮತ್ತು ರಾಷ್ಟ್ರದ ಜನತೆಯೂ ಆ ಋಷಭದೇವನನ್ನು ಬಹಳವಾಗಿ ಪ್ರೀತಿಸುವು ದನ್ನು ಕಂಡಾಗ ನಾಭಿಮಹಾರಾಜನು ಧರ್ಮಮರ್ಯಾದೆಯ ರಕ್ಷಣೆಗಾಗಿ ಆತನಿಗೆ ರಾಜ್ಯಾಭಿಷೇಕವನ್ನು ಮಾಡಿ ಬ್ರಾಹ್ಮಣರ ವಶಕ್ಕೆ ಒಪ್ಪಿಸಿದನು. ತಾನು ಪತ್ನಿಯಾದ ಮೇರುದೇವಿ ಯೊಡನೆ ಬದರಿಕಾಶ್ರಮಕ್ಕೆ ತೆರಳಿ, ಅಲ್ಲಿ ಯಾರಿಗೂ ಉದ್ವೇಗವನ್ನು ಉಂಟುಮಾಡದಿರುವ ಅಹಿಂಸಾವೃತ್ತಿಯಿಂದ ಕೂಡಿ, ಕುಶಲತೆಯಿಂದ ತೀವ್ರವಾದ ತಪಸ್ಸನ್ನಾಚರಿಸಿ ಸಮಾಧಿಯೋಗದ ಮೂಲಕ ಭಗವಾನ್ ವಾಸುದೇವನ ನರ-ನಾರಾಯಣರೂಪವನ್ನು ಆರಾಸುತ್ತಾ ಸಮಯ ಬಂದಾಗ ಭಗವಂತನ ಸ್ವರೂಪದಲ್ಲಿ ಲೀನವಾಗಿ ಹೋದನು. ॥5॥

(ಶ್ಲೋಕ - 6)

ಮೂಲಮ್

ಯಸ್ಯ ಹ ಪಾಂಡವೇಯ ಶ್ಲೋಕಾವುದಾಹರಂತಿ ಕೋ ನು ತತ್ಕರ್ಮ ರಾಜರ್ಷೇರ್ನಾಭೇರನ್ವಾ ಚರೇತ್ಪುಮಾನ್
ಅಪತ್ಯತಾಮಗಾದ್ಯಸ್ಯ ಹರಿಃ ಶುದ್ಧೇನ ಕರ್ಮಣಾ ॥

ಅನುವಾದ

ಪಾಂಡುನಂದನನೇ! ಆ ನಾಭಿರಾಜನ ವಿಷಯದಲ್ಲಿ ಈ ಲೋಕೋಕ್ತಿಯು ಪ್ರಸಿದ್ಧವಾಗಿದೆ — ರಾಜರ್ಷಿಯಾದ ನಾಭಿರಾಜನ ಉದಾರವಾದ ಕರ್ಮಗಳನ್ನು ಆಚರಿಸಲು ಬೇರೆ ಯಾರಿಗೆ ತಾನೇ ಸಾಧ್ಯವಾಗುವುದು? ಆತನ ವಿಶುದ್ಧವಾದ ಕರ್ಮಗಳಿಂದ ಸಂತುಷ್ಟನಾಗಿ ಶ್ರೀಹರಿಯೇ ಆತನಿಗೆ ಪುತ್ರನಾದನಲ್ಲ! ॥6॥

(ಶ್ಲೋಕ - 7)

ಮೂಲಮ್

ಬ್ರಹ್ಮಣ್ಯೋನ್ಯಃ ಕುತೋ ನಾಭೇರ್ವಿಪ್ರಾ ಮಂಗಲಪೂಜಿತಾಃ ಯಸ್ಯ ಬರ್ಹಿಷಿ ಯಜ್ಞೇಶಂ ದರ್ಶಯಾಮಾಸುರೋಜಸಾ ॥

ಅನುವಾದ

ಆ ನಾಭಿ ಮಹಾರಾಜನಿಗೆ ಸಮಾನವಾದ ಬ್ರಾಹ್ಮಣಭಕ್ತನು ಬೇರೆ ಯಾರು ಇದ್ದಾರೆ? ಮಂಗಳಕರ್ಮ- ಪೂಜಾದಿಗಳಿಂದ ಸಂತುಷ್ಟರಾದ ಬ್ರಾಹ್ಮಣ ಶ್ರೇಷ್ಠರು ತಮ್ಮ ಮಂತ್ರ ಬಲದಿಂದ ಯಜ್ಞಶಾಲೆಯಲ್ಲಿ ಆತನಿಗೆ ಸಾಕ್ಷಾತ್ ಶ್ರೀಮಹಾ ವಿಷ್ಣುವಿನ ದರ್ಶನ ಮಾಡಿಸಿದರು. ॥7॥

(ಶ್ಲೋಕ - 8)

ಮೂಲಮ್

ಅಥ ಹ ಭಗವಾನೃಷಭದೇವಃ ಸ್ವವರ್ಷಂ ಕರ್ಮಕ್ಷೇತ್ರಮನುಮನ್ಯಮಾನಃ ಪ್ರದರ್ಶಿತ ಗುರುಕುಲವಾಸೋ ಲಬ್ಧವರೈರ್ಗುರುಭಿರನುಜ್ಞಾತೋ ಗೃಹಮೇಧಿನಾಂ ಧರ್ಮಾನನುಶಿಕ್ಷಮಾಣೋ ಜಯಂತ್ಯಾಮಿಂದ್ರದತ್ತಾಯಾ ಮುಭಯಲಕ್ಷಣಂ ಕರ್ಮ ಸಮಾಮ್ನಾಯಾಮ್ನಾತಮಭಿಯುಂ ಜನ್ನಾತ್ಮಜಾನಾಮಾತ್ಮಸಮಾನಾನಾಂ ಶತಂ ಜನಯಾಮಾಸ ॥

ಅನುವಾದ

ಭಗವಾನ್ ಋಷಭದೇವನು ತನ್ನ ದೇಶವಾದ ಅಜನಾಭ ಖಂಡವನ್ನು ಕರ್ಮಭೂಮಿಯೆಂದು ತಿಳಿದು ಲೋಕ ಸಂಗ್ರಹಕ್ಕಾಗಿ ಕೊಂಚಕಾಲ ಗುರುಕುಲವಾಸವನ್ನು ಮಾಡಿ ದನು. ಗುರುಗಳಿಗೆ ಯಥೋಚಿತವಾದ ದಕ್ಷಿಣೆಯನ್ನು ಸಮರ್ಪಿಸಿ, ಗೃಹಸ್ಥಾಶ್ರಮವನ್ನು ಕೈಗೊಳ್ಳಲು ಅವರಿಂದ ಅನುಮತಿಯನ್ನು ಪಡೆದನು. ಮತ್ತೆ ಜನರಿಗೆ ಗೃಹಸ್ಥಾಶ್ರಮದ ಆದರ್ಶವನ್ನು ತೋರುವುದಕ್ಕಾಗಿ ದೇವ ರಾಜನಾದ ಇಂದ್ರನು ತನಗೆ ಕನ್ಯಾದಾನಮಾಡಿಕೊಟ್ಟ ಜಯಂತೀ ದೇವಿ ಯನ್ನು ವಿವಾಹಮಾಡಿ ಕೊಂಡನು. ಅನಂತರ ಶ್ರೌತ, ಸ್ಮಾರ್ತ ಎರಡೂ ಬಗೆಯ ಶಾಸ್ತ್ರೀಯ ಕರ್ಮಗಳನ್ನು ಆಚರಿಸುತ್ತಾ ಜಯಂತಿಯಲ್ಲಿ ತನಗೆ ಸಮಾನವಾದ ಗುಣಗಳುಳ್ಳ ನೂರು ಮಂದಿ ಪುತ್ರರನ್ನು ಪಡೆದನು. ॥8॥

(ಶ್ಲೋಕ - 9)

ಮೂಲಮ್

ಯೇಷಾಂ ಖಲು ಮಹಾಯೋಗೀ ಭರತೋ ಜ್ಯೇಷ್ಠಃ ಶ್ರೇಷ್ಠಗುಣ ಆಸೀದ್ಯೇನೇದಂ ವರ್ಷಂ ಭಾರತಮಿತಿ ವ್ಯಪದಿಶಂತಿ ॥

ಅನುವಾದ

ಮಹಾಯೋಗೀ ಭರತನು ಆ ನೂರುಮಂದಿಯಲ್ಲಿ ಎಲ್ಲರಿಗೆ ಹಿರಿಯವ ನಾಗಿದ್ದು, ಎಲ್ಲರಿಂದ ಗುಣಗಳಲ್ಲಿಯೂ ಶ್ರೇಷ್ಠನಾಗಿದ್ದನು. ಆ ಭರತನ ಹೆಸರಿನಿಂದಲೇ ಈ ಅಜನಾಭಖಂಡಕ್ಕೆ ‘‘ಭಾರತವರ್ಷ’’ ಎಂಬ ಹೆಸರಾಯಿತು.॥9॥

(ಶ್ಲೋಕ - 10)

ಮೂಲಮ್

ತಮನು ಕುಶಾವರ್ತ ಇಲಾವರ್ತೋ ಬ್ರಹ್ಮಾವರ್ತೋ ಮಲಯಃ ಕೇತುರ್ಭದ್ರಸೇನ ಇಂದ್ರಸ್ಪೃಗ್ವಿದರ್ಭಃ ಕೀಕಟ ಇತಿ ನವ ನವತಿಪ್ರಧಾನಾಃ ॥

ಅನುವಾದ

ಅವನಿಂದ ಕಿರಿಯವರಾದ ಕುಶಾವರ್ತ, ಇಳಾವರ್ತ, ಬ್ರಹ್ಮಾವರ್ತ, ಮಲಯ, ಕೇತು, ಭದ್ರಸೇನ, ಇಂದ್ರಸ್ಪೃಕ್, ವಿದರ್ಭ ಮತ್ತು ಕೀಕಟ ಎಂಬ ಈ ಒಂಭತ್ತು ರಾಜಕುಮಾರರು ಉಳಿದ ತೊಂಭತ್ತು ತಮ್ಮಂದಿರಿಂದ ಹಿರಿಯವರೂ, ಶ್ರೇಷ್ಠರೂ ಆಗಿದ್ದರು. ॥10॥

(ಶ್ಲೋಕ - 11)

ಮೂಲಮ್

ಕವಿರ್ಹರಿರಂತರಿಕ್ಷಃ ಪ್ರಬುದ್ಧಃ ಪಿಪ್ಪಲಾಯನಃ ।
ಆವಿರ್ಹೋತ್ರೋಥ ದ್ರುಮಿಲಶ್ಚಮಸಃ ಕರಭಾಜನಃ ॥

(ಶ್ಲೋಕ - 12)

ಮೂಲಮ್

ಇತಿ ಭಾಗವತಧರ್ಮದರ್ಶನಾ ನವ ಮಹಾಭಾಗವತಾಸ್ತೇಷಾಂ ಸುಚರಿತಂ ಭಗವನ್ಮಹಿಮೋಪಬೃಂಹಿತಂ ವಸುದೇವನಾರದಸಂವಾದಮುಪಶಮಾಯನಮುಪರಿಷ್ಟಾದ್ವರ್ಣಯಿಷ್ಯಾಮಃ ॥

ಅನುವಾದ

ಅವರಿಗಿಂತಲೂ ಕಿರಿಯವರಾದ ಕವಿ, ಹರಿ, ಅಂತರಿಕ್ಷ, ಪ್ರಬುದ್ಧ, ಪಿಪ್ಪಲಾಯನ, ಆವಿರ್ಹೋತ್ರ, ದ್ರುಮಿಲ, ಚಮಸ ಮತ್ತು ಕರಭಾಜನ ಎಂಬ ಒಂಭತ್ತು ಮಂದಿರಾಜ ಕುಮಾರರು ಭಾಗವತಧರ್ಮವನ್ನು ಪ್ರಚಾರ ಮಾಡಿದ ಭಗವದ್ಭಕ್ತ ಶಿರೋಮಣಿಗಳಾಗಿದ್ದರು. ಶ್ರೀಭಗವಂತನ ಮಹಿಮೆಯಿಂದ ಮಹಿಮಾನ್ವಿತರಾಗಿ ಪರಮಶಾಂತಿಯಿಂದ ಸಂಪನ್ನರಾಗಿದ್ದ ಇವರ ಪವಿತ್ರ ಚರಿತ್ರೆಯನ್ನು ನಾವು ಮುಂದೆ ನಾರದ-ವಸುದೇವರ ಸಂವಾದದ ಪ್ರಸಂಗದಲ್ಲಿ (ಏಕಾದಶ ಸ್ಕಂಧದಲ್ಲಿ) ಹೇಳುವೆವು. ॥11-12॥

(ಶ್ಲೋಕ - 13)

ಮೂಲಮ್

ಯವೀಯಾಂಸ ಏಕಾಶೀತಿರ್ಜಾಯಂತೇಯಾಃ ಪಿತುರಾದೇಶಕರಾ ಮಹಾಶಾಲೀನಾ ಮಹಾಶ್ರೋತ್ರಿಯಾ ಯಜ್ಞಶೀಲಾಃ ಕರ್ಮವಿಶುದ್ಧಾ ಬ್ರಾಹ್ಮಣಾ ಬಭೂವುಃ ॥

ಅನುವಾದ

ಇವರಿಂದಲೂ ಕಿರಿಯವರಾಗಿದ್ದ ಎಂಭತ್ತೊಂದು ಮಂದಿ ಜಯಂತಿಯ ಪುತ್ರರು ತಂದೆಯ ಆಜ್ಞೆಯನ್ನು ಪಾಲಿಸುವವರೂ, ಅತ್ಯಂತ ವಿನಯಶಾಲಿಗಳೂ, ವೇದಜ್ಞರೂ ಆಗಿದ್ದು ನಿರಂತರ ಯಜ್ಞಗಳನ್ನು ಆಚರಿಸುತ್ತಾ ಪುಣ್ಯಕರ್ಮಗಳ ಅನುಷ್ಠಾನದಿಂದ ಶುದ್ಧರಾಗಿ ಬ್ರಾಹ್ಮಣ್ಯವನ್ನು ಪಡೆದುಕೊಂಡರು. ॥13॥

(ಶ್ಲೋಕ - 14)

ಮೂಲಮ್

ಭಗವಾನೃಷಭಸಂಜ್ಞ ಆತ್ಮತಂತ್ರಃ ಸ್ವಯಂ ನಿತ್ಯನಿವೃತ್ತಾ- ನರ್ಥಪರಂಪರಃ ಕೇವಲಾನಂದಾನುಭವ ಈಶ್ವರ ಏವ ವಿಪರೀತವತ್ಕರ್ಮಾಣ್ಯಾರಭಮಾಣಃ ಕಾಲೇನಾನುಗತಂ ಧರ್ಮಮಾಚರಣೇನೋಪಶಿಕ್ಷಯನ್ನತದ್ವಿದಾಂ ಸಮ ಉಪಶಾಂತೋಮೈತ್ರಃಕಾರುಣಿಕೋ ಧರ್ಮಾರ್ಥಯಶಃ ಪ್ರಜಾನಂದಾಮೃತಾವರೋಧೇನ ಗೃಹೇಷು ಲೋಕಂ ನಿಯಮಯತ್ ॥

ಅನುವಾದ

ಭಗವಾನ್ ಋಷಭದೇವರು ಭಗವದವತಾರಿಗಳಾಗಿದ್ದು ಆತ್ಮ ತಂತ್ರರಾಗಿದ್ದವರು. ಎಂದಿಗೂ ಯಾವ ಅನರ್ಥ ಪರಂಪರೆಗೂ ಸಿಲುಕದೆ ಕೇವಲ ಆನಂದಾನುಭವಸ್ವರೂಪದಲ್ಲೇ ನೆಲೆಗೊಂಡಿದ್ದರು. ಹೀಗೆ ಸಾಕ್ಷಾತ್ ಈಶ್ವರಸ್ವರೂಪರೇ ಆಗಿದ್ದರೂ ಅಜ್ಞಾನಿಗಳಂತೆ ಕರ್ಮಗಳನ್ನಾಚರಿಸುತ್ತಾ, ಕಾಲಾನುಸಾರವಾಗಿ ಪ್ರಾಪ್ತ ಧರ್ಮಗಳನ್ನೂ ಅನುಷ್ಠಾನ ಮಾಡುತ್ತಾ ಅದರ ತತ್ತ್ವವನ್ನು ಅರಿಯದ ಜನರಿಗೆ ಆ ಬಗೆಗೆ ಶಿಕ್ಷಣವನ್ನು ನೀಡುತ್ತಿದ್ದರು. ಜೊತೆಗೆ ಸರ್ವಸಮರೂ, ಶಾಂತರೂ, ಸುಹೃದಯರೂ, ಕಾರುಣಿಕರೂ ಆಗಿದ್ದು, ಧರ್ಮ, ಅರ್ಥ, ಯಶಸ್ಸು, ಸಂತಾನ, ಭೋಗಸುಖ ಮತ್ತು ಮೋಕ್ಷವನ್ನು ಸಂಗ್ರಹಿಸುತ್ತಾ ಜನರನ್ನು ಗೃಹಸ್ಥಾಶ್ರಮದಲ್ಲಿ ನಿಯಮಿಸುತ್ತಿದ್ದರು. ॥14॥

(ಶ್ಲೋಕ - 15)

ಮೂಲಮ್

ಯದ್ಯಚ್ಛೀರ್ಷಣ್ಯಾಚರಿತಂ ತತ್ತದನುವರ್ತತೇ ಲೋಕಃ ॥

ಅನುವಾದ

ಮಹಾಪುರುಷರು ಹೇಗೆ-ಹೇಗೆ ಆಚರಿಸುತ್ತಾರೋ ಬೇರೆ ಜನರು ಅದನ್ನೇ ಅನುಕರಣ ಮಾಡ ತೊಡಗುವರು. ॥15॥

(ಶ್ಲೋಕ - 16)

ಮೂಲಮ್

ಯದ್ಯಪಿ ಸ್ವವಿದಿತಂ ಸಕಲಧರ್ಮಂ ಬ್ರಾಹ್ಮಂ ಗುಹ್ಯಂ ಬ್ರಾಹ್ಮಣೈರ್ದರ್ಶಿ ತಮಾರ್ಗೇಣ ಸಾಮಾದಿಭಿರುಪಾಯೈರ್ಜನತಾ ಮನುಶಶಾಸ ॥

ಅನುವಾದ

ಧರ್ಮಗಳ ಸಾರರೂಪ ವಾದ ವೇದಗಳ ಗೂಢರಹಸ್ಯಗಳನ್ನು ತಾವು ಚೆನ್ನಾಗಿ ಅರಿತಿದ್ದರೂ, ಬ್ರಾಹ್ಮಣರು ತಿಳಿಸಿದ ವಿಧಿಯಂತೆ ಸಾಮ-ದಾನಗಳೇ ಮುಂತಾದ ನೀತಿಗೆ ಅನುಸಾರವಾಗಿಯೇ ಜನರನ್ನು ಪಾಲಿಸುತ್ತಿದ್ದರು. ॥16॥

ಮೂಲಮ್

(ಶ್ಲೋಕ - 17)
ದ್ರವ್ಯದೇಶಕಾಲವಯಃಶ್ರದ್ಧರ್ತ್ವಿಗ್ವಿವಿಧೋದ್ದೇಶೋಪಚಿತೈಃ ಸರ್ವೈರಪಿ ಕ್ರತುಭಿರ್ಯಥೋಪದೇಶಂ ಶತಕೃತ್ವ ಇಯಾಜ ॥

ಅನುವಾದ

ಅವರು ಶಾಸ್ತ್ರಗಳ ಮತ್ತು ಶಾಸ್ತ್ರಜ್ಞರಾದ ಬ್ರಾಹ್ಮಣರ ಉಪದೇಶಗಳಂತೆ ಬೇರೆ-ಬೇರೆ ದೇವತೆಗಳನ್ನು ಉದ್ದೇಶಿಸಿ ದ್ರವ್ಯ, ದೇಶ, ಕಾಲ, ವಯಸ್ಸು, ಶ್ರದ್ಧೆ ಮತ್ತು ಋತ್ವಿಜರು ಮುಂತಾದವುಗಳಿಂದ ಸಂಪನ್ನವಾದ ಎಲ್ಲ ಯಜ್ಞಗಳನ್ನು ನೂರು ಬಾರಿ ಆಚರಿಸಿದರು. ॥17॥

(ಶ್ಲೋಕ - 18)

ಮೂಲಮ್

ಭಗವತರ್ಷಭೇಣ ಪರಿರಕ್ಷ್ಯಮಾಣ ಏತಸ್ಮಿನ್ವರ್ಷೇ ನ ಕಶ್ಚನ ಪುರುಷೋ ವಾಂಛತ್ಯ
ವಿದ್ಯಮಾನಮಿವಾತ್ಮನೋನ್ಯಸ್ಮಾತ್ಕಥಂಚನ ಕಿಮಪಿ ಕರ್ಹಿಚಿದವೇಕ್ಷತೇ ಭರ್ತರ್ಯನುಸವನಂ
ವಿಜೃಂಭಿತ- ಸ್ನೇಹಾತಿಶಯಮಂತರೇಣ ॥

ಅನುವಾದ

ಭಗವಾನ್ ಋಷಭದೇವರ ಆಳ್ವಿಕೆಯ ಕಾಲದಲ್ಲಿ ಭಾರತವರ್ಷದ ಜನರು ತಮ್ಮ ಪ್ರಭುವಿನ ವಿಷಯದಲ್ಲಿ ಪ್ರತಿದಿನವೂ ಬೆಳೆಯುತ್ತಿದ್ದ ಅನುರಾಗವಲ್ಲದೆ ಬೇರೆ ಯಾವ ವಸ್ತುವನ್ನು ಎಂದೂ ಬಯಸುತ್ತಿರಲಿಲ್ಲ. ಇಷ್ಟೇ ಅಲ್ಲ, ಪರರ ಪದಾರ್ಥಗಳನ್ನು ಆಕಾಶಕುಸುಮವೇ ಮುಂತಾದವುಗಳಂತೇ ಭಾವಿಸಿ ಯಾರೂ ಬಯಸುತ್ತಿರಲಿಲ್ಲ. ಅದರತ್ತ ದೃಷ್ಟಿಯನ್ನೂ ಹರಿಸುತ್ತಿರಲಿಲ್ಲ. ॥18॥

(ಶ್ಲೋಕ - 19)

ಮೂಲಮ್

ಸ ಕದಾಚಿದಟಮಾನೋ ಭಗವಾನೃಷಭೋ ಬ್ರಹ್ಮಾವರ್ತಗತೋ ಬ್ರಹ್ಮರ್ಷಿಪ್ರವರಸಭಾಯಾಂ ಪ್ರಜಾನಾಂ ನಿಶಾಮಯಂತೀ ನಾಮಾತ್ಮಜಾನವಹಿತಾತ್ಮನಃ ಪ್ರಶ್ರಯಪ್ರಣಯಭರಸುಯಂತ್ರಿತಾನಪ್ಯುಪಶಿಕ್ಷಯನ್ನಿತಿ ಹೋವಾಚ ॥

ಅನುವಾದ

ಭಗವಾನ್ ಋಷಭದೇವರು ದೇಶ ದಲ್ಲಿ ಸಂಚರಿಸುತ್ತಾ ಒಮ್ಮೆ ಬ್ರಹ್ಮಾವರ್ತಕ್ಕೆ ದಯಮಾಡಿಸಿದರು. ಅಲ್ಲಿ ಅವರು ದೊಡ್ಡ-ದೊಡ್ಡ ಮಹರ್ಷಿಗಳ ಸಭೆಯಲ್ಲಿ ಎಲ್ಲ ಪ್ರಜೆಗಳ ಎದುರಿಗೆ ಎಲ್ಲರೂ ಕೇಳುವಂತೇ ಜಿತೇಂದ್ರಿಯರೂ, ವಿನಯಶಾಲಿಗಳೂ, ಪಿತೃ ಭಕ್ತಿ ಸಂಪನ್ನರೂ ಆದ ತನ್ನ ಪುತ್ರರನ್ನು ಕುರಿತು ಹೀಗೆ ಉಪದೇಶ ಮಾಡಿದರು.॥19॥

ಅನುವಾದ (ಸಮಾಪ್ತಿಃ)

ನಾಲ್ಕನೆಯ ಅಧ್ಯಾಯವು ಮುಗಿಯಿತು. ॥4॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಪಂಚಮಸ್ಕಂಧೇ ಚತುರ್ಥೋಽಧ್ಯಾಯಃ ॥4॥