೦೩

[ಮೂರನೆಯ ಅಧ್ಯಾಯ]

ಭಾಗಸೂಚನಾ

ನಾಭಿಮಹಾರಾಜನ ಚರಿತ್ರೆ

(ಗದ್ಯ - 1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ನಾಭಿರಪತ್ಯಕಾಮೋಪ್ರಜಯಾ ಮೇರುದೇವ್ಯಾ ಭಗವಂತಂ ಯಜ್ಞಪುರುಷಮವಹಿತಾತ್ಮಾಯಜತ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ರಾಜೇಂದ್ರನೇ! ಆಗ್ನೀಧ್ರನ ಪುತ್ರನಾದ ನಾಭಿಮಹಾರಾಜನಿಗೆ ಸಂತಾನವಿರಲಿಲ್ಲ. ಅದಕ್ಕಾಗಿ ಅವನು ತನ್ನ ಭಾರ್ಯೆಯಾದ ಮೇರುದೇವಿಯೊಂದಿಗೆ ಪುತ್ರಕಾಮನೆಯಿಂದ ಏಕಾಗ್ರವಾದ ಮನಸ್ಸಿನಿಂದ ಭಗವಾನ್ ಯಜ್ಞಪುರುಷನನ್ನು ಆರಾಧಿಸಿದನು. ॥1॥

(ಗದ್ಯ - 2)

ಮೂಲಮ್

ತಸ್ಯ ಹ ವಾವ ಶ್ರದ್ಧಯಾ ವಿಶುದ್ಧಭಾವೇನ ಯಜತಃ ಪ್ರವರ್ಗ್ಯೇಷು ಪ್ರಚರತ್ಸು ದ್ರವ್ಯದೇಶಕಾಲ ಮಂತ್ರರ್ತ್ವಿಗ್ದಕ್ಷಿಣಾ ವಿಧಾನಯೋಗೋಪಪತ್ತ್ಯಾ ದುರಧಿಗಮೋಪಿ ಭಗವಾನ್ ಭಾಗವತವಾತ್ಸಲ್ಯತಯಾ ಸುಪ್ರತೀಕ ಆತ್ಮಾನಮಪರಾಜಿತಂ ನಿಜಜನಾಭಿಪ್ರೇತಾರ್ಥವಿಧಿತ್ಸಯಾ ಗೃಹೀತಹೃದಯೋ ಹೃದಯಂಗಮಂ ಮನೋನಯನಾನಂದ ನಾವಯವಾಭಿರಾಮ ಮಾವಿಶ್ಚಕಾರ ॥

ಅನುವಾದ

ಸುಂದರಾಂಗನಾದ ಶ್ರೀಭಗವಂತನು ದ್ರವ್ಯ, ದೇಶ, ಕಾಲ, ಮಂತ್ರ, ಋತ್ವಿಜ, ದಕ್ಷಿಣೆ ಮತ್ತು ವಿಧಿ ಮುಂತಾದ ಯಜ್ಞದ ಸಾಧನೆಗಳಿಂದ ಸಹಜವಾಗಿ ದೊರಕುವವನಲ್ಲವಾದರೂ ಅವನು ಭಕ್ತರ ಮೇಲೆ ಕೃಪೆ ಮಾಡುವವನಾಗಿದ್ದಾನೆ. ಅದಕ್ಕಾಗಿ ನಾಭಿಮಹಾರಾಜನು ಶ್ರದ್ಧೆಯಿಂದ ವಿಶುದ್ಧಭಾವದಿಂದ ಅವನ ಆರಾಧನೆಯನ್ನು ಮಾಡಿದಾಗ ಅವನ ಚಿತ್ತವು ತನ್ನ ಭಕ್ತನ ಅಭೀಷ್ಟವನ್ನು ಈಡೇರಿಸಲು ಉತ್ಸುಕವಾಯಿತು. ಅವನ ಸ್ವರೂಪವು ಸರ್ವಥಾ ಸ್ವತಂತ್ರವಾಗಿದ್ದರೂ ಅವನು ಪ್ರವರ್ಗ್ಯವೆಂಬ ಕರ್ಮದ ಅನುಷ್ಠಾನ ನಡೆಯುತ್ತಿದ್ದಾಗ ಕಣ್ಮನಗಳಿಗೆ ಆನಂದವನ್ನು ಈಯುವ ಅವಯವಗಳಿಂದ ಕೂಡಿ ಅವನು ಅತಿಸುಂದರವಾದ ಹೃದಯವನ್ನು ಸೂರೆಗೊಳ್ಳುವ ದಿವ್ಯಮಂಗಳ ವಿಗ್ರಹದೊಡನೆ ಅಲ್ಲಿ ಪ್ರಕಟಗೊಂಡನು. ॥2॥

(ಗದ್ಯ - 3)

ಮೂಲಮ್

ಅಥ ಹ ತಮಾವಿಷ್ಕೃತಭುಜಯುಗಲದ್ವಯಂ ಹಿರಣ್ಮ- ಯಂ ಪುರುಷವಿಶೇಷಂ ಕಪಿಶಕೌಶೇಯಾಂಬರಧರಮುರಸಿ ವಿಲಸಚ್ಛ್ರೀವತ್ಸಲಲಾಮಂ ದರವರವನರುಹವನಮಾಲಾ ಚ್ಛೂರ್ಯಮೃತಮಣಿಗದಾದಿಭಿರುಪಲಕ್ಷಿತಂ ಸ್ಫುಟಕಿರಣ- ಪ್ರವರಮುಕುಟಕುಂಡಲಕಟಕಕಟಿಸೂತ್ರಹಾರಕೇಯೂರ ನೂಪುರಾದ್ಯಂಗಭೂಷಣ ವಿಭೂಷಿತಮೃತ್ವಿಕ್ಸದಸ್ಯಗೃಹ ಪತಯೋಧನಾ ಇವೋತ್ತಮಧನಮುಪಲಭ್ಯ ಸಬಹುಮಾನ ಮರ್ಹಣೇನಾವನತಶೀರ್ಷಾಣ ಉಪತಸ್ಥುಃ ॥

ಅನುವಾದ

ಶ್ರೀಸ್ವಾಮಿಯು ಹೊಂಬಣ್ಣದ ಪೀತಾಂಬರವನ್ನು ಧರಿಸಿದ್ದನು. ಆತನ ವಕ್ಷಃಸ್ಥಳದಲ್ಲಿ ಸುಮನೋಹರವಾದ ಶ್ರೀವತ್ಸಲಾಂಛನ ಶೋಭಿಸುತ್ತಿತ್ತು. ಭುಜಗಳಲ್ಲಿ ಶಂಖ, ಚಕ್ರ, ಗದೆ, ಪದ್ಮಗಳೂ ಹಾಗೂ ಕೊರಳಲ್ಲಿ ವನಮಾಲೆಯೂ, ಕೌಸ್ತುಭಮಣಿಯೂ ಶೋಭಿಸುತ್ತಿದ್ದವು. ಅವನ ಇಡೀ ಶರೀರವು ಅಂಗ ಪ್ರತ್ಯಂಗಗಳ ಕಾಂತಿಯನ್ನು ಹೆಚ್ಚಿಸುತ್ತಿದ್ದ, ಕಿರಣಜಾಲಗಳಿಂದ ಮಂಡಿತವಾಗಿ ಮಣಿಮಯವಾಗಿದ್ದ ಕಿರೀಟ, ಕುಂಡಲ, ಕಂಕಣ, ಉಡಿದಾರ, ಹಾರ, ತೋಳ್ಬಳೆ, ನೂಪುರ ಮುಂತಾದ ಭೂಷಣಗಳಿಂದ ಭೂಷಿತವಾಗಿತ್ತು. ಇಂತಹ ಪರಮ ತೇಜಸ್ವಿಯಾದ ಚತುರ್ಭುಜನಾದ ಪರಮಪುರುಷನ ಶ್ರೀಮೂರ್ತಿಯನ್ನು ಪ್ರತ್ಯಕ್ಷವಾಗಿ ಕಂಡೊಡನೆಯೇ ಋತ್ವಿಜರು, ಸದಸ್ಯರು ಮತ್ತು ಯಜಮಾನರೇ ಮುಂತಾದವರೆಲ್ಲರೂ ಧನರಾಶಿಯನ್ನು ಪಡೆದ ಕಡುಬಡವನಂತೆ ಪರಮಾನಂದದಿಂದ ಹಿರಿ-ಹಿರಿ ಹಿಗ್ಗಿದರು. ಅನಂತರ ಎಲ್ಲರೂ ತಲೆಬಾಗಿ ಅತ್ಯಂತ ಆದರದಿಂದ ಪ್ರಭುವನ್ನು ಅರ್ಘ್ಯಾದಿಗಳಿಂದ ಆರಾಧಿಸಿದರು. ಋತ್ವಿಜರು ಅವನನ್ನು ಸ್ತುತಿಸತೊಡಗಿದರು. ॥3॥

(ಗದ್ಯ - 4)

ಮೂಲಮ್ (ವಾಚನಮ್)

ಋತ್ವಿಜ ಊಚುಃ

ಮೂಲಮ್

ಅರ್ಹಸಿ ಮುಹುರರ್ಹತ್ತಮಾರ್ಹಣಮಸ್ಮಾಕಮನುಪಥಾನಾಂ ನಮೋ ನಮ ಇತ್ಯೇತಾವತ್ಸದುಪಶಿಕ್ಷಿತಂ ಕೋರ್ಹತಿ ಪುಮಾನ್ ಪ್ರಕೃತಿಗುಣವ್ಯತಿಕರಮತಿರನೀಶ ಈಶ್ವರಸ್ಯ ಪರಸ್ಯ ಪ್ರಕೃತಿಪುರುಷಯೋರರ್ವಾಕ್ತ ನಾಭಿರ್ನಾಮರೂಪಾಕೃತಿಭೀ ರೂಪನಿರೂಪಣಮ್ ॥

ಅನುವಾದ

ಋತ್ವಿಜರೆಂದರು — ಎಲೈ ಪೂಜ್ಯತಮನಾದ ಪ್ರಭುವೇ! ನಿನ್ನನ್ನೇ ಅನುಸರಿಸುತ್ತಿರುವ ಭಕ್ತರಾದ ನಮಗೆ ನೀನು ಮತ್ತೆ-ಮತ್ತೆ ಪೂಜನೀಯನಾಗಿದ್ದೀಯೆ. ಆದರೆ ನಿನ್ನನ್ನು ಪೂಜಿಸಲು ನಾವೇನು ಬಲ್ಲೆವು? ಮಹಾಪುರುಷರು ನಮಗೆ ನಿನ್ನನ್ನು ಕುರಿತು ‘ನಮೋ ನಮಃ’ ಎಂಬುದನ್ನು ಮಾತ್ರ ಕಲಿಸಿಕೊಟ್ಟಿದ್ದಾರೆ. ನಮ್ಮ ಈ ವಂದನೆಯನ್ನೇ ಪೂಜೆಯೆಂದು ಸ್ವೀಕರಿಸು. ಸ್ವಾಮಿ! ನೀನು ಪ್ರಕೃತಿಯನ್ನು ಪುರುಷನನ್ನು ಮೀರಿ ಅವುಗಳಿಗೆ ನಿಯಾಮಕನಾಗಿರುವವನು. ಅಪ್ರಾಕೃತನಾಗಿರುವ ಸಾಕ್ಷಾತ್ ಪರಮೇಶ್ವರನು. ಹೀಗಿರುವಾಗ ಪ್ರಾಕೃತ ಗುಣಗಳ ಕಾರ್ಯವಾಗಿರುವ ಈ ಪ್ರಪಂಚದಲ್ಲಿ ಬುದ್ಧಿಯು ಸಿಕ್ಕಿಕೊಂಡಿರುವುದರಿಂದ ನಿನ್ನ ಗುಣಗಳನ್ನು ಗಾನಮಾಡಲು ಅತ್ಯಂತ ಅಸಮರ್ಥನಾಗಿರುವ ಯಾವ ಪುರುಷನು ತಾನೇ ಪ್ರಾಕೃತವಾದ ನಾಮ, ರೂಪ, ಆಕೃತಿಗಳ ಮೂಲಕ ನಿನ್ನ ಸ್ವರೂಪವನ್ನು ನಿರೂಪಿಸಿಯಾನು? ॥4॥

(ಶ್ಲೋಕ - 5)

ಮೂಲಮ್

ಸಕಲಜನನಿಕಾಯವೃಜಿನನಿರಸನಶಿವತಮಪ್ರವರಗುಣಗಣೈಕದೇಶಕಥನಾದೃತೇ ॥

ಅನುವಾದ

ನಿನ್ನ ಪರಮ ಮಂಗಲಮಯ ಗುಣಗಳು ಎಲ್ಲ ಜನರ ದುಃಖಗಳನ್ನು ಹೋಗಲಾಡಿಸುವಂತಹುದು. ಯಾರಾದರೂ ಅದನ್ನು ವರ್ಣಿಸುವ ಸಾಹಸ ಮಾಡಿದರೆ ಕೇವಲ ಅತ್ಯಲ್ಪಭಾಗವನ್ನು ಮಾತ್ರ ವರ್ಣಿಸಬಲ್ಲನು. ॥5॥

(ಶ್ಲೋಕ - 6)

ಮೂಲಮ್

ಪರಿಜನಾನುರಾಗವಿರಚಿತ-ಶಬಲಸಂಶಬ್ದಸಲಿಲಸಿತಕಿಸಲಯತುಲಸಿಕಾ
ದೂರ್ವಾಂಕುರೈರಪಿ ಸಂಭೃತಯಾ ಸಪರ್ಯಯಾ ಕಿಲ ಪರಮ ಪರಿತುಷ್ಯಸಿ ॥

ಅನುವಾದ

ಆದರೆ ಪ್ರಭುವೇ! ನಿನ್ನ ಭಕ್ತರು ಪ್ರೇಮದಿಂದ ಗದ್ಗದವಾದ ವಾಣಿಯಿಂದ ಸ್ತುತಿಸುತ್ತಾ ಸಾಮಾನ್ಯ ವಾದ ನೀರು, ಶುದ್ಧವಾದ ಎಳೆ ತುಲಸೀದಳ ಮತ್ತು ಗರಿಕೆಗಳೇ ಮುಂತಾದ ಸಾಮಗ್ರಿಗಳಿಂದ ಪೂಜೆ ಮಾಡಿದರೂ ನೀನು ಅತ್ಯಂತ ಸಂತೋಷಪಡುವೆ. ॥6॥

(ಶ್ಲೋಕ - 7)

ಮೂಲಮ್

ಅಥಾನಯಾಪಿ ನ ಭವತ ಇಜ್ಯಯೋರುಭಾರಭರಯಾ ಸಮುಚಿತಮರ್ಥಮಿಹೋಪಲಭಾಮಹೇ ॥

ಅನುವಾದ

ಭಕ್ತಿಯೊಂದು ಇಲ್ಲದೆ ಇದ್ದ ಪಕ್ಷದಲ್ಲಿ ಈ ದ್ರವ್ಯ-ಕಾಲಗಳೇ ಮುಂತಾದ ಅನೇಕ ಅಂಗಗಳುಳ್ಳ ಯಜ್ಞದಿಂದಲೂ ನಿನಗೆ ಯಾವ ಪ್ರಯೋಜನವೂ ಇಲ್ಲವೆಂದು ನಾವು ಬಲ್ಲೆವು. ॥7॥

(ಶ್ಲೋಕ - 8)

ಮೂಲಮ್

ಆತ್ಮನ ಏವಾನುಸವನಮಂಜಸಾವ್ಯತಿರೇಕೇಣ ಬೋಭೂಯ-ಮಾನಾಶೇಷಪುರುಷಾರ್ಥಸ್ವರೂಪಸ್ಯ ಕಿಂತು ನಾಥಾಶಿಷ ಆಶಾಸಾನಾನಾಮೇತದಭಿಸಂರಾಧನಮಾತ್ರಂ ಭವಿತು- ಮರ್ಹತಿ ॥

ಅನುವಾದ

ಏಕೆಂದರೆ, ತನಗೆ ತಾನೇ ಸದಾ ಸಂಪೂರ್ಣವಾಗಿ ಬೆಳಗುತ್ತಿರುವ ಸಮಸ್ತ ಪುರುಷಾರ್ಥ ಸ್ವರೂಪವಾದ ಯಾವ ಪರಮಾನಂದ ವಿದೆಯೋ ಆ ಪರಮಾನಂದದ ಸಾಕ್ಷಾತ್ ಸ್ವರೂಪವೇ ನೀನು. ನಿನಗೆ ಈ ಪೂಜಾದಿಗಳಿಂದ ಯಾವುದೇ ಪ್ರಯೋಜನವೂ ಇಲ್ಲ ದಿದ್ದರೂ ಅನೇಕ ಪ್ರಕಾರದ ಕಾಮನೆಗಳ ಸಿದ್ದಿಯನ್ನು ಬಯಸುವ ನಮ್ಮಂತಹವರಿಗೆ ಮನೋರಥಸಿದ್ಧಿಯ ಸಾಧನೆ ಇದೇ ಆಗಿದೆ. ॥8॥

(ಶ್ಲೋಕ - 9)

ಮೂಲಮ್

ತದ್ಯಥಾ ಬಾಲಿಶಾನಾಂ ಸ್ವಯಮಾತ್ಮನಃ ಶ್ರೇಯಃ ಪರಮವಿದುಷಾಂ ಪರಮಪರಮಪುರುಷಪ್ರಕರ್ಷಕರುಣಯಾ ಸ್ವಮಹಿಮಾನಂ ಚಾಪವರ್ಗಾಖ್ಯಮುಪಕಲ್ಪಯಿಷ್ಯನ್ ಸ್ವಯಂ ನಾಪಚಿತ ಏವೇತರವದಿಹೋಪಲಕ್ಷಿತಃ ॥

ಅನುವಾದ

ನೀನು ಬ್ರಹ್ಮದೇವರೇ ಮುಂತಾದ ಪರಮಪುರುಷರಿಗಿಂತಲೂ ಪರಮಶ್ರೇಷ್ಠನಾಗಿರುವೆ. ನಮ್ಮ ಪರಮ ಶ್ರೇಯಸ್ಸು ಯಾವುದರಲ್ಲಿದೆ ಎಂಬುನ್ನು ನಾವು ಅರಿಯೆವು. ಯಥೋಚಿತವಾದ ನಿನ್ನ ಪೂಜೆಯೂ ನಮ್ಮಿಂದ ನಡೆಯಲಿಲ್ಲ. ಆದರೂ ತತ್ತ್ವಜ್ಞರಾದ ಪುರುಷರು ಕರೆಯದೇ ಕೇವಲ ಕರುಣಾವಶರಾಗಿ ಅಜ್ಞಾನಿಗಳ ಬಳಿಗೆ ಹೋಗುವಂತೆ ನೀನೂ ಕೂಡ ನಮಗೆ ಮೋಕ್ಷವೆಂಬ ತನ್ನ ಪರಮಪದವನ್ನು ಮತ್ತು ನಮ್ಮ ಅಭೀಷ್ಟ ವಸ್ತುಗಳನ್ನು ಕರುಣಿಸಲಿಕ್ಕಾಗಿ ಬೇರೆ ಸಾಧಾರಣ ಯಜ್ಞದರ್ಶಕರಂತೆ ಇಲ್ಲಿ ಪ್ರಕಟನಾಗಿರುವೆ. ॥9॥

(ಶ್ಲೋಕ - 10)

ಮೂಲಮ್

ಅಥಾಯಮೇವ ವರೋ ಹ್ಯರ್ಹತ್ತಮ ಯರ್ಹಿ ಬರ್ಹಿಷಿ ರಾಜರ್ಷೇರ್ವರದರ್ಷಭೋಭವಾನ್ನಿಜ ಪುರುಷೇಕ್ಷಣವಿಷಯ ಆಸೀತ್ ॥

ಅನುವಾದ

ಪೂಜ್ಯತಮನಾದ ಪರಮಾತ್ಮನೇ! ಬ್ರಹ್ಮಾದಿ ಸಮಸ್ತ ವರಪ್ರದರಲ್ಲಿಯೂ ಶ್ರೇಷ್ಠನಾಗಿದ್ದರೂ ನೀನು ರಾಜರ್ಷಿ ನಾಭಿಯ ಈ ಯಜ್ಞ ಶಾಲೆಯಲ್ಲಿ ಸಾಕ್ಷಾತ್ ನಮ್ಮ ಕಣ್ಣುಗಳ ಮುಂದೆ ಪ್ರಕಟ ನಾಗಿರುವೆಯಲ್ಲ! ಇದೇ ನಮಗೆ ಎಲ್ಲಕ್ಕಿಂತ ದೊಡ್ಡ ವರವನ್ನು ನೀನು ಕೊಟ್ಟಿರುವೆ. ಈಗ ನಾವು ನಿನ್ನಲ್ಲಿ ಬೇರೆ ಯಾವ ವರವನ್ನು ಬೇಡಲಿ? ॥10॥

(ಶ್ಲೋಕ - 11)

ಮೂಲಮ್

ಅಸಂಗನಿಶಿತಜ್ಞಾನಾನಲವಿಧೂತಾಶೇಷಮಲಾನಾಂ ಭವತ್ ಸ್ವಭಾವಾನಾಮಾತ್ಮಾರಾಮಾಣಾಂ ಮುನೀನಾಮನ- ವರತಪರಿಗುಣಿತಗುಣಗಣ ಪರಮಮಂಗಲಾಯನಗುಣಗಣಕಥನೋಸಿ ॥

ಅನುವಾದ

ಪ್ರಭೋ! ನಿನ್ನ ಗುಣಗಣಗಳ ಗಾನವು ಪರಮ ಮಂಗಳ ಮಯವಾದುದು. ವೈರಾಗ್ಯದಿಂದ ಪ್ರಜ್ವಲಿತವಾದ ಜ್ಞಾನಾಗ್ನಿಯ ಮೂಲಕ ತಮ್ಮ ಅಂತಃಕರಣದ ರಾಗ-ದ್ವೇಷಾದಿ ಎಲ್ಲ ದೋಷಗಳನ್ನು ಸುಟ್ಟುಹಾಕಿಕೊಂಡು, ನಿನ್ನಂತೆಯೇ ಪ್ರಶಾಂತ ಸ್ವಭಾವವಾಗಿರುವ ಆತ್ಮಾರಾಮ ಮುನಿಗಳೂ ಕೂಡ ನಿರಂತರವಾಗಿ ನಿನ್ನ ಗುಣಗಳನ್ನು ಗಾನಮಾಡುತ್ತಿರುತ್ತಾರೆ. ॥11॥

(ಶ್ಲೋಕ - 12)

ಮೂಲಮ್

ಅಥ ಕಥಂಚಿತ್ಸ್ಖಲನಕ್ಷುತ್ಪ ತನಜೃಂಭಣದುರವಸ್ಥಾನಾದಿಷು ವಿವಶಾನಾಂ ನಃ ಸ್ಮರಣಾಯ ಜ್ವರಮರಣದಶಾಯಾಮಪಿ ಸಕಲಕಶ್ಮಲನಿರಸನಾನಿ ತವ ಗುಣ ಕೃತ ನಾಮಧೇಯಾನಿ ವಚನಗೋಚರಾಣಿ ಭವಂತು ॥

ಅನುವಾದ

ಆದ್ದರಿಂದ ಕೆಳಗೆ ಬೀಳುವುದು, ಎಡವುದು, ಸೀನುವುದು, ಆಕಳಿಸುವುದು, ಮಹಾ ಸಂಕಟಕ್ಕೆ ಒಳಗಾಗು ವುದು, ಜ್ವರಕ್ಕೆ ತುತ್ತಾಗುವುದು, ಮರಣಕ್ಕೆ ಗುರಿಯಾಗು ವುದು ಇವೇ ಮುಂತಾದ ಸಮಯಗಳಲ್ಲಿ ನಿನ್ನ ಸ್ಮರಣೆ ಆಗದಿದ್ದರೂ ಯಾವುದೇ ರೀತಿಯಿಂದ ಸಕಲಕಲಿಮಲ ನಾಶಕವಾದ ‘ಭಕ್ತವತ್ಸಲಾ’, ‘ದೀನಬಂಧು’ ಮುಂತಾದ ಗುಣದ್ಯೋತಕ ನಾಮಗಳನ್ನು ನಾವು ಉಚ್ಚರಿಸುವಂತಾಗಲಿ ಎಂಬುದೇ ನಿನ್ನಲ್ಲಿ ನಾವು ವರವನ್ನು ಬೇಡುತ್ತೇವೆ. ॥12॥

(ಶ್ಲೋಕ - 13)

ಮೂಲಮ್

ಕಿಂಚಾಯಂ ರಾಜರ್ಷಿರಪತ್ಯಕಾಮಃ ಪ್ರಜಾಂ ಭವಾ ದೃಶೀಮಾಶಾಸಾನ ಈಶ್ವರಮಾಶಿಷಾಂ ಸ್ವರ್ಗಾಪವರ್ಗಯೋರಪಿ ಭವಂತಮುಪಧಾವತಿ ಪ್ರಜಾಯಾಮರ್ಥಪ್ರತ್ಯಯೋ ಧನದಮಿವಾಧನಃ ಲೀಕರಣಮ್ ॥

ಅನುವಾದ

ಇದಲ್ಲದೆ ನಮ್ಮದು ಇನ್ನೂ ಒಂದು ಪ್ರಾರ್ಥನೆ ಯುಂಟು. ಪ್ರಭುವೇ! ಈ ರಾಜರ್ಷಿನಾಭಿಯು ಸಂತಾನವನ್ನು ಬಯಸುತ್ತಾ ನಿನ್ನಂತಹ ಪುತ್ರನೇಬೇಕು ಎಂಬುದಾಗಿ ಆಸೆಪಡುತ್ತಿದ್ದಾನೆ. ನೀನು ಸರ್ವಲಪ್ರದನೂ, ಸ್ವರ್ಗ-ಮೋಕ್ಷಗಳನ್ನು ಕೊಡಬಲ್ಲವನೂ ಆಗಿದ್ದೀಯೆ. ಆದರೆ ಕಡುಬಡವನಾದವನು ಕೊಡುಗೈಯುಳ್ಳ ಧನಿಕನ ಬಳಿಗೆ ಹೋದರೂ ಆತನಿಂದ ಹೊಟ್ಟು, ನುಚ್ಚುಗಳನ್ನೇ ಬೇಡಿ ಕೊಳ್ಳುವಂತೆ ಈ ರಾಜರ್ಷಿಯು ಸಂತಾನವೇ ಪರಮ ಪುರುಷಾರ್ಥವೆಂದು ತಿಳಿದು ಸರ್ವೇಶ್ವರನಾದ ನಿನ್ನನ್ನು ಅದಕ್ಕೋಸ್ಕರವೇ ಆರಾಧನೆ ಮಾಡುತ್ತಿದ್ದಾನೆ. ॥13॥

(ಶ್ಲೋಕ - 14)

ಮೂಲಮ್

ಕೋ ವಾ ಇಹ ತೇಪರಾಜಿತೋಪರಾಜಿತಯಾ ಮಾಯಯಾನವಸಿತಪದವ್ಯಾನಾವೃತಮತಿರ್ವಿಷಯ ವಿಷರಯಾನಾವೃತಪ್ರಕೃತಿರನುಪಾಸಿತಮಹಚ್ಚರಣಃ ॥

ಅನುವಾದ

ಇದರಲ್ಲಿ ಅಚ್ಚರಿಯೇನೂ ಇಲ್ಲ. ನಿನ್ನ ಮಾಯೆಯ ಅಂತ ವನ್ನು ಯಾರೂ ಕಾಣಲಾರರು. ಅದು ಯಾರ ವಶಕ್ಕೂ ಸಿಗುವುದಿಲ್ಲ. ಮಹಾಪುರುಷರ ಪಾದಾರವಿಂದಗಳ ಆಶ್ರಯವನ್ನು ಪಡೆಯದೇ ಇದ್ದ ಯಾವನೂ ಅದಕ್ಕೆ ವಶ ನಾಗದೆ ಇರಲಾರನು. ತನ್ನ ಬುದ್ಧಿಯ ಮೇಲೆ ಅದರ ತೆರೆಯು ಬೀಳದಂತೆ ಮಾಡಲಾರನು. ವಿಷಯವೆಂಬ ವಿಷದ ವೇಗದಿಂದ ತನ್ನ ಸ್ವಭಾವವು ದೂಷಿತವಾಗದಂತೆ ಮಾಡಿಕೊಳ್ಳಲಾರನು.॥14॥

(ಶ್ಲೋಕ - 15)

ಮೂಲಮ್

ಯದು ಹ ವಾವ ತವ ಪುನರದಭ್ರಕರ್ತರಿಹ ಸಮಾಹೂತ- ಸ್ತತ್ರಾರ್ಥಧಿಯಾಂ ಮಂದಾನಾಂ ನಸ್ತದ್ಯದ್ದೇವಹೇಲನಂ ದೇವದೇವಾರ್ಹಸಿ ಸಾಮ್ಯೇನ ಸರ್ವಾನ್ ಪ್ರತಿವೋಢುಮವಿದುಷಾಮ್ ॥

ಅನುವಾದ

ಓ ದೇವದೇವನೇ! ನೀನು ಭಕ್ತರ ಮಹಾ-ಮಹಾ ಕಾರ್ಯಗಳನ್ನೂ ಮಾಡಿಕೊಡುವ ಸರ್ವಶಕ್ತನು. ಮಂದಮತಿಗಳಾದ ನಾವು ಕಾಮನೆಗೆ ವಶರಾಗಿ ಈ ಅಲ್ಪಕಾರ್ಯಕ್ಕಾಗಿ ನಿನ್ನನ್ನು ಆವಾಹನೆಮಾಡಿ ನಿನಗೆ ಅಗೌರವ ತೋರಿದ್ದೇವೆ. ಆದರೆ ನೀನು ಸಮದರ್ಶಿ ಯಾದುದರಿಂದ ಅಜ್ಞಾನಿಗಳಾದ ನಮ್ಮ ಈ ದಿಟ್ಟತನವನ್ನು ಕ್ಷಮಿಸಬೇಕು, ಭಗವಂತನೇ! ॥15॥

(ಶ್ಲೋಕ - 16)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಇತಿ ನಿಗದೇನಾಭಿಷ್ಟೂಯಮಾನೋ ಭಗವಾನನಿಮಿಷರ್ಷಭೋ ವರ್ಷಧರಾಭಿವಾದಿತಾಭಿ ವಂದಿತಚರಣಃ ಸದಯಮಿದಮಾಹ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ರಾಜನೇ! ವರ್ಷಾಧಿಪತಿಯಾದ ನಾಭಿಮಹಾರಾಜನ ಪೂಜ್ಯರಾದ ಋತ್ವಿಜರು ಪ್ರಭುವಿನ ಅಡಿಗಳಿಗೆ ಎರಗಿ ಹೀಗೆ ಪ್ರಾರ್ಥನೆ ಮಾಡಲು ದೇವದೇವೋತ್ತಮನಾದ ಶ್ರೀಭಗವಂತನು ಕರುಣೆಯಿಂದ ಹೀಗೆ ಅಪ್ಪಣೆ ಕೊಡಿಸಿದನು.॥16॥

(ಶ್ಲೋಕ - 17)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ಅಹೋ ಬತಾಹಮೃಷಯೋ ಭವದ್ಭಿರವಿತಥಗೀರ್ಭಿರ್ವರಮಸುಲಭಮಭಿಯಾಚಿತೋ ಯದಮುಷ್ಯಾತ್ಮಜೋಮಯಾ ಸದೃಶೋ ಭೂಯಾದಿತಿ ಮಮಾಹಮೇವಾಭಿರೂಪಃ ಕೈವಲ್ಯಾದಥಾಪಿ ಬ್ರಹ್ಮವಾದೋ ನ ಮೃಷಾ ಭವಿತುಮರ್ಹತಿ ಮಮೈವ ಹಿ ಮುಖಂ ಯದ್ ದ್ವಿಜದೇವಕುಲಮ್ ॥

ಅನುವಾದ

ಶ್ರೀಭಗವಂತನು ಹೇಳಿದನು — ಎಲೈ ಋಷಿಗಳೇ! ನೀವು ಸತ್ಯವಾದಿಗಳಾದ ಮಹಾತ್ಮರು. ಆದರೆ ರಾಜರ್ಷಿ ನಾಭಿಗೆ ನನ್ನಂತಹ ಪುತ್ರನು ಹುಟ್ಟಬೇಕು ಎಂಬ ದುರ್ಲಭವಾದ ವರವನ್ನು ಬೇಡಿದಿರಲ್ಲ. ಮುನಿಗಳೇ! ನನಗೆ ಸಮಾನನಾದರೋ ನಾನೇ ಆಗಿದ್ದೇನೆ. ಏಕೆಂದರೆ, ನಾನು ಅದ್ವಿತೀಯನಾಗಿದ್ದೇನೆ. ಆದರೂ ಬ್ರಾಹ್ಮಣರ ವಚನವು ಸುಳ್ಳಾಗಬಾರದು. ದ್ವಿಜಕುಲವು ನನ್ನದೇ ಮುಖವಾಗಿದ್ದಾರಲ್ಲ. ॥17॥

(ಶ್ಲೋಕ - 18)

ಮೂಲಮ್

ತತ ಆಗ್ನೀಧ್ರೀಯೇಂ ಶಕಲಯಾ ವತರೀಷ್ಯಾಮ್ಯಾತ್ಮತುಲ್ಯ ಮನುಪಲಭಮಾನಃ ॥

ಅನುವಾದ

ಅದಕ್ಕಾಗಿ ನಾನು ಸ್ವತಃ ನನ್ನ ಅಂಶ ಕಲೆಯಿಂದ ಆಗ್ನೀಧ್ರ ನಂದನ ನಾಭಿಯ ಮನೆಯಲ್ಲಿ ಅವತರಿಸುವೆನು. ಏಕೆಂದರೆ, ನನಗೆ ಸಮಾನರಾದವರು ಬೇರಾರೂ ಇಲ್ಲ. ॥18॥

(ಶ್ಲೋಕ - 19)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಇತಿ ನಿಶಾಮಯಂತ್ಯಾ ಮೇರುದೇವ್ಯಾಃ ಪತಿಮಭಿಧಾಯಾಂತರ್ದಧೇ ಭಗವಾನ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಶ್ರೀಭಗವಂತನು ಮೇರುದೇವಿಯು ಕೇಳುವಂತೆ ಆಕೆಯ ಪತಿಗೆ ಹೀಗೆ ಹೇಳಿ ಅಂತರ್ಧಾನ ಹೊಂದಿದನು.॥19॥

(ಶ್ಲೋಕ - 20)

ಮೂಲಮ್

ಬರ್ಹಿಷಿ ತಸ್ಮಿನ್ನೇವ ವಿಷ್ಣುದತ್ತ ಭಗವಾನ್ಪರಮರ್ಷಿಭಿಃ ಪ್ರಸಾದಿತೋ ನಾಭೇಃ ಪ್ರಿಯಚಿಕೀರ್ಷಯಾ ತದವರೋಧಾಯನೇ ಮೇರುದೇ- ವ್ಯಾಂ ಧರ್ಮಾಂದರ್ಶಯಿತುಕಾಮೋ ವಾತರಶನಾನಾಂ ಶ್ರಮಣಾನಾಮೃಷೀಣಾಮೂರ್ಧ್ವ ಮಂಥಿನಾಂ ಶುಕ್ಲಯಾ ತನುವಾವತತಾರ ॥

ಅನುವಾದ

ವಿಷ್ಣುದತ್ತ ಪರೀಕ್ಷಿತನೇ! ಹೀಗೆ ಯಜ್ಞದಲ್ಲಿ ಮಹರ್ಷಿಗಳಿಂದ ಪ್ರಸನ್ನಗೊಳಿಸಲ್ಪಟ್ಟ ಶ್ರೀಭಗವಂತನು ನಾಭಿಮಹಾರಾಜನಿಗೆ ಪ್ರಿಯವನ್ನುಂಟುಮಾಡಲು ಆತನ ಮಹಾರಾಣಿ ಮೇರುದೇವಿಯ ಗರ್ಭದಲ್ಲಿ ಶ್ರಮಣ (ದಿಗಂಬರ) ಸಂನ್ಯಾಸಿಗಳ ಮತ್ತು ನೈಷ್ಠಿಕ ಬ್ರಹ್ಮಚರ್ಯವುಳ್ಳ ಮುನಿಗಳ ಧರ್ಮವನ್ನು ಪ್ರಕಟಪಡಿಸಲಿಕ್ಕಾಗಿ ತನ್ನ ಶುದ್ಧ ಸತ್ತ್ವಮಯವಾದ ವಿಗ್ರಹದಿಂದ ಆವಿರ್ಭವಿಸಿದನು. ॥20॥

ಅನುವಾದ (ಸಮಾಪ್ತಿಃ)

ಮೂರನೆಯ ಅಧ್ಯಾಯವು ಮುಗಿಯಿತು. ॥3॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಪಂಚಮಸ್ಕಂಧೇ ನಾಭಿಚರಿತೇ ಋಷಭಾವತಾರೋ ನಾಮ ತೃತೀಯೋಽಧ್ಯಾಯಃ ॥3॥