೦೨

[ಎರಡನೆಯ ಅಧ್ಯಾಯ]

ಭಾಗಸೂಚನಾ

ಆಗ್ನೀಧ್ರನ ಚರಿತ್ರೆ

(ಶ್ಲೋಕ - 1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಏವಂ ಪಿತರಿ ಸಂಪ್ರವೃತ್ತೇ ತದನುಶಾಸನೇ ವರ್ತಮಾನ ಆಗ್ನೀಧ್ರೋ ಜಂಬೂದ್ವೀಪೌಕಸಃ ಪ್ರಜಾ ಔರಸವದ್ಧರ್ಮಾವೇಕ್ಷಮಾಣಃ ಪರ್ಯಗೋಪಾಯತ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತ ರಾಜನೇ! ತಂದೆಯಾದ ಪ್ರಿಯವ್ರತ ಮಹಾರಾಜನು ತಪೋನಿಷ್ಠನಾದ ಬಳಿಕ ಮಹಾರಾಜಾ ಆಗ್ನೀಧ್ರನು ಆತನ ಆಜ್ಞೆಗನುಸಾರವಾಗಿ ಜಂಬೂದ್ವೀಪದ ಪ್ರಜೆಗಳನ್ನು ಧರ್ಮಾನುಸಾರವಾಗಿ ಔರಸಪುತ್ರರಂತೆ ಪಾಲಿಸತೊಡಗಿದನು. ॥1॥

(ಶ್ಲೋಕ - 2)

ಮೂಲಮ್

ಸ ಚ ಕದಾಚಿತ್ಪಿತೃಲೋಕಕಾಮಃ ಸುರವರವನಿತಾಕ್ರೀಡಾಚಲದ್ರೋಣ್ಯಾಂ ಭಗವಂತಂ ವಿಶ್ವಸೃಜಾಂ ಪತಿಮಾಭೃತಪರಿಚರ್ಯೋಪಕರಣ ಆತ್ಮೈಕಾಗ್ರ್ಯೇಣ ತಪಸ್ವ್ಯಾರಾಧಯಾಂ ಬಭೂವ ॥

ಅನುವಾದ

ಒಮ್ಮೆ ಅವನು ಪಿತೃಲೋಕದ ಕಾಮನೆಗಾಗಿ ಸತ್ಪುತ್ರನನ್ನು ಪಡೆಯಲಿಕ್ಕಾಗಿ ಪೂಜೆಯ ಎಲ್ಲ ಸಾಮಗ್ರಿಗಳನ್ನು ಜೊತೆ ಸೇರಿಸಿಕೊಂಡು ಸುರಸುಂದರಿಯರ ಕ್ರೀಡಾಸ್ಥಳವಾದ ಮಂದರ ಪರ್ವತದ ತಪ್ಪಲಿಗೆ ಹೋಗಿ, ತಪಸ್ಸಿನಲ್ಲಿ ತತ್ಪರನಾಗಿ, ಏಕಾಗ್ರ ಚಿತ್ತದಿಂದ ಪ್ರಜಾಪತಿಗಳ ಅಧಿಪತಿಯಾದ ಬ್ರಹ್ಮದೇವರನ್ನು ಆರಾಧಿಸತೊಡಗಿದನು. ॥2॥

(ಶ್ಲೋಕ - 3)

ಮೂಲಮ್

ತದುಪಲಭ್ಯ ಭಗವಾನಾದಿ ಪುರುಷಃ ಸದಸಿ ಗಾಯಂತೀಂ ಪೂರ್ವಚಿತ್ತಿಂ ನಾಮಾಪ್ಸರ ಸಮಭಿಯಾಪಯಾಮಾಸ ॥

ಅನುವಾದ

ಆದಿದೇವರಾದ ಭಗವಾನ್ ಶ್ರೀಬ್ರಹ್ಮದೇವರು ಆತನ ಅಭಿಲಾಷೆಯನ್ನು ತಿಳಿದುಕೊಂಡರು. ಆದ್ದರಿಂದ ತಮ್ಮ ಸಭೆಯ ಗಾಯಕಿಯಾದ ಪೂರ್ವಚಿತ್ತಿ ಎಂಬ ಅಪ್ಸರೆಯನ್ನು ಅವನ ಬಳಿಗೆ ಕಳಿಸಿದರು. ॥3॥

(ಶ್ಲೋಕ - 4)

ಮೂಲಮ್

ಸಾ ಚ ತದಾಶ್ರಮೋಪವನಮತಿರಮಣೀಯಂ ವಿವಿಧನಿಬಿಡವಿಟಪಿವಿಟಪನಿಕರ ಸಂಶ್ಲಿಷ್ಟಪುರಟಲತಾರೂಢಸ್ಥಲವಿಹಂಗಮಮಿಥುನೈಃ ಪ್ರೋಚ್ಯಮಾನಶ್ರುತಿಭಿಃ ಪ್ರತಿಬೋಧ್ಯಮಾನಸಲಿಲ ಕುಕ್ಕುಟಕಾರಂಡವಕಲಹಂಸಾದಿ ಭಿರ್ವಿಚಿತ್ರಮುಪಕೂಜಿತಾಮಲಜಲಾಶಯಕಮಲಾಕರಮುಪ ಬಭ್ರಾಮ ॥

ಅನುವಾದ

ಆಗ್ನೀಧ್ರನ ಆಶ್ರಮದ ಬಳಿ ಒಂದು ಅತಿರಮಣೀಯವಾದ ಉಪವನವಿತ್ತು. ಆ ಅಪ್ಸರೆಯು ಅದರಲ್ಲಿ ಸಂಚರಿಸ ತೊಡಗಿದಳು. ಆ ಉಪವನದಲ್ಲಿ ನಾನಾ ರೀತಿಯ ದಟ್ಟ ವಾದ ಮರಗಳ ಕೊಂಬೆಗಳಲ್ಲಿ ಹೊಂಬಣ್ಣದ ಬಳ್ಳಿಗಳು ಹಬ್ಬಿಕೊಂಡಿದ್ದುವು. ಅವುಗಳ ಮೇಲೆ ನವಿಲುಗಳು ಗಿಳಿಗಳು ಮುಂತಾದ ಪಕ್ಷಿದಂಪತಿಗಳು ಕುಳಿತು ಇಂಪಾಗಿ ಧ್ವನಿ ಮಾಡುತ್ತಿದ್ದುವು. ಅವುಗಳ ಷಡ್ಜವೇ ಮುಂತಾದ ಧ್ವನಿಗಳನ್ನು ಕೇಳಿ ಸ್ಫೂರ್ತಿಗೊಂಡ ನೀರ್ಕೋಳಿ, ಕಾರಂಡವ, ಕಲಹಂಸಗಳೇ ಮುಂತಾದ ನೀರುಹಕ್ಕಿಗಳು ಬಗೆ- ಬಗೆಯಾಗಿ ಕಲ-ಕಲನಿನಾದವನ್ನು ಮಾಡುತ್ತಿದ್ದವು. ಇದರಿಂದ ಅಲ್ಲಿಯ ಕಮಲಪುಷ್ಪಗಳಿಂದ ರಮಣೀಯವಾದ ನಿರ್ಮಲ ಸರೋವರವು ಪ್ರತಿಧ್ವನಿಸುತ್ತಿತ್ತು. ॥4॥

(ಶ್ಲೋಕ - 5)

ಮೂಲಮ್

ತಸ್ಯಾಃ ಸುಲಲಿತಗಮನಪದವಿನ್ಯಾಸಗತಿವಿಲಾಸಾಯಾಶ್ಚಾನುಪದಂ ಖಣಖಣಾಯಮಾನರುಚಿರ ಚರಣಾಭರಣ ಸ್ವನಮುಪಾಕರ್ಣ್ಯ ನರದೇವಕುಮಾರಃ ಸಮಾಧಿಯೋಗೇನಾಮೀಲಿತನಯನ ನಲಿನಮುಕುಲಯುಗಲಮೀಷದ್ವಿಕಚಯ್ಯ ವ್ಯಚಷ್ಟ ॥

(ಶ್ಲೋಕ - 6)

ಮೂಲಮ್

ತಾಮೇವಾವಿದೂರೇ ಮಧುಕರೀಮಿವ ಸುಮನಸ ಉಪಜಿಘ್ರಂತೀಂ ದಿವಿಜ ಮನುಜಮನೋನಯನಾಹ್ಲಾದದುಘೈಃರ್ಗತಿವಿಹಾರವ್ರೀಡಾವಿನಯಾವಲೋಕಸುಸ್ವರಾಕ್ಷರಾವಯವೈರ್ಮನಸಿ ನೃಣಾಂ ಕುಸುಮಾಯುಧಸ್ಯ ವಿದಧತೀಂ ವಿವರಂ ನಿಜಮುಖವಿಗಲಿತಾಮೃತಾಸವಸಹಾಸಭಾಷಣಾಮೋದಮದಾಂಧಮಧುಕರನಿಕರೋಪರೋಧೇನ ದ್ರುತಪದವಿನ್ಯಾಸೇನ ವಲ್ಲ್ಗುಸ್ಪಂದನಸ್ತನಕಲಶಕಬರಭಾರರಶನಾಂ ದೇವೀಂ ತದವಲೋಕನೇನ ವಿವೃತಾವಸರಸ್ಯ ಭಗವತೋ ಮಕರಧ್ವಜಸ್ಯ ವಶಮುಪನೀತೋ ಜಡವದಿತಿ ಹೋವಾಚ ॥

ಅನುವಾದ

ಆ ಪೂರ್ವಚಿತ್ತಿಯು ಸುಂದರವಾದ ಮಂದಗಮನದಿಂದ ಹೆಜ್ಜೆಹಾಕುತ್ತಾ ವೈಯ್ಯಾರದಿಂದ ಸಂಚರಿಸುತ್ತಿರುವಾಗ ಹೆಜ್ಜೆ- ಹೆಜ್ಜೆಗೆ ಅವಳ ನೂಪುರಗಳು ಝಣ-ಝಣಿಸುತ್ತಿದ್ದವು. ಅವುಗಳ ಇಂಪಾದ ನಾದವನ್ನು ಕೇಳಿ ರಾಜಕುಮಾರ ಆಗ್ನೀಧ್ರನು ಸಮಾಧಿಯೋಗದಿಂದ ಮುಚ್ಚಿ ಕೊಂಡಿದ್ದ ತನ್ನ ಕಮಲದ ಮೊಗ್ಗಿನಂತಿರುವ ಸುಂದರ ಕಣ್ಣುಗಳನ್ನು ಸ್ವಲ್ವ ತೆರೆದು ನೋಡಿದರೆ ಬಳಿಯಲ್ಲೇ ಆ ಅಪ್ಸರೆಯು ಅವನಿಗೆ ಕಾಣಿಸಿದಳು. ಆ ರಮಣಿಯು ಹೆಣ್ಣು ದುಂಬಿಯಂತೆ ಒಂದೊಂದು ಹೂವಿನ ಬಳಿಗೂ ಹೋಗಿ ಅದನ್ನು ಮೂಸಿನೋಡುತ್ತಾ ದೇವತೆಗಳ ಮತ್ತು ಮನುಷ್ಯರ ಮನಸ್ಸನ್ನು ಹಾಗೂ ನಯನಗಳನ್ನು ಆಹ್ಲಾದಪಡಿಸುತ್ತಿದ್ದ ತನ್ನ ವಿಲಾಸಪೂರ್ಣವಾದ ನಡಿಗೆಯಿಂದಲೂ, ಕ್ರೀಡೆಯ ಚಾಪಲ್ಯದಿಂದಲೂ, ಲಜ್ಜೆಯಿಂದಲೂ, ವಿನಯದಿಂದಲೂ, ಓರೆನೋಟದಿಂದಲೂ, ಸುಮಧುರ ವಾಣಿಯಿಂದಲೂ, ಚೆಲುವಿನ ನೆಲೆಯಾದ ಸರ್ವಾವಯವಗಳಿಂದಲೂ ಮನುಷ್ಯರ ಮನಸ್ಸಿನಲ್ಲಿ ಮನ್ಮಥನ ಪ್ರವೇಶಕ್ಕೆ ದ್ವಾರದಂತೆ ಎಡೆಮಾಡಿ ಕೊಡುತ್ತಿದ್ದಳು. ಅವಳು ನಗು-ನಗುತ್ತಾ ಮಾತಾಡತೊಡಗಿ ದಾಗ ಆಕೆಯ ಮುಖದಿಂದ ಅಮೃತಮಯವಾದ ಮದ ವನ್ನುಂಟುಮಾಡುವ ಜೇನು ಒಸರುವಂತಿತ್ತು. ಮುಖಕಮಲದ ಪರಿಮಳದಿಂದ ಮತ್ತೇರಿದ ದುಂಬಿಗಳು ಆ ಮುಖ ಕಮಲ ವನ್ನು ಮುತ್ತುತ್ತಿರಲು ತನ್ನನ್ನು ಅವುಗಳಿಂದ ರಕ್ಷಿಸಿಕೊಳ್ಳಲು ಬೇಗೆ-ಬೇಗನೇ ಹೆಜ್ಜಹಾಕುತ್ತಿರುವಾಗ ಅವಳ ಸ್ತನಕಲಶಗಳೂ, ಕೇಶಪಾಶಗಳೂ, ನಡುವಿನ ಒಡ್ಯಾಣವೂ ಚಲಿಸುವುದರಿಂದ ಆಕರ್ಷಕವಾಗಿ ಕಾಣುತ್ತಿದ್ದವು. ಇಂತಹ ಸೊಬಗಿನಿಂದ ಕೂಡಿದ್ದ ಆಕೆಯನ್ನು ಕಂಡೊಡನೆ ಮನ್ಮಥನಿಗೆ ಆಗ್ನೀಧ್ರನ ಹೃದಯವನ್ನು ಪ್ರವೇಶಿಸಲು ಅವಕಾಶ ದೊರೆತಂತಾಯಿತು. ಆಗ್ನೀಧ್ರನು ಕಾಮಕ್ಕೆ ಅಧೀನವಾಗಿ ಆಕೆಯನ್ನು ಪ್ರಸನ್ನಗೊಳಿಸಲು ಹುಚ್ಚನಂತಾಗಿ ಹೀಗೆ ಹೇಳಲುಪಕ್ರಮಿಸಿದನು. ॥5-6॥

(ಶ್ಲೋಕ - 7)

ಮೂಲಮ್

ಕಾ ತ್ವಂ ಚಿಕೀರ್ಷಸಿ ಚ ಕಿಂ ಮುನಿವರ್ಯ ಶೈಲೇ
ಮಾಯಾಸಿ ಕಾಪಿ ಭಗವತ್ಪರದೇವತಾಯಾಃ ವಿಜ್ಯೇ ।
ಬಿಭರ್ಷಿ ಧನುಷೀ ಸುಹೃದಾತ್ಮನೋರ್ಥೇ
ಕಿಂ ವಾ ಮೃಗಾನ್ಮೃಗಯಸೇ ವಿಪಿನೇ ಪ್ರಮತ್ತಾನ್ ॥

ಅನುವಾದ

ಓ ಮುನಿವರ್ಯನೇ! ನೀನು ಯಾರು? ಈ ಪರ್ವತದ ಮೇಲೆ ಏನು ಮಾಡಬೇಕೆಂದಿರುವೆ? ನೀನು ಪರಮ ಪುರುಷ ಶ್ರೀನಾರಾಯಣನ ಮಾಯೆಯಲ್ಲ ತಾನೇ! ಸ್ನೇಹಿತನೇ! ನೀನು (ಈ ಹುಬ್ಬುಗಳ ರೂಪದಲ್ಲಿ) ನಾಣೇ ಇಲ್ಲದ ಎರಡು ಧನುಸ್ಸುಗಳನ್ನು ಏಕೆ ಧರಿಸಿದ್ದೀಯೇ? ಇದರಿಂದ ನಿನಗೆ ಏನಾದರೂ ಪ್ರಯೋಜನವುಂಟೇ? ಅಥವಾ ಈ ಸಂಸಾರವೆಂಬ ಅರಣ್ಯದಲ್ಲಿ ನನ್ನಂತಹ ಉನ್ಮತ್ತ ಮೃಗಗಳನ್ನು ಬೇಟೆಯಾಡಲು ಬಯುಸುತ್ತಿರುವೆಯಾ? ॥7॥

(ಶ್ಲೋಕ - 8)

ಮೂಲಮ್

ಬಾಣಾವಿವೌ ಭಗವತಃ ಶತಪತ್ರಪತ್ರೌ
ಶಾಂತಾವಪುಂಖರುಚಿರಾವತಿತಿಗ್ಮದಂತೌ ।
ಕಸ್ಮೈಯುಯುಂಕ್ಕ್ಷಸಿ ವನೇ ವಿಚರನ್ನ ವಿದ್ಮಃ
ಕ್ಷೇಮಾಯ ನೋ ಜಡಧಿಯಾಂ ತವ ವಿಕ್ರಮೋಸ್ತು ॥

ಅನುವಾದ

ನಿನ್ನ ಈ (ಕಡೆಗಣ್ಣುಗಳ ನೋಟವೆಂಬ) ಎರಡು ಬಾಣಗಳು ಎಷ್ಟು ಚೂಪಾಗಿ ಚೆಲುವಾಗಿವೆ! ಆಹಾ! ಇವುಗಳಿಗೆ ಕಮಲದಳಗಳಂತೆ ಪಂಖಗಳಿವೆ. ನೋಡಲೂ ಶಾಂತವಾಗಿವೆ ಮತ್ತು ಹಿಂದಿನ ಭಾಗವು ಪಂಖಹೀನ ವಾಗಿದೆ. ಇಲ್ಲಿ ಕಾಡಿನಲ್ಲಿ ಸಂಚರಿಸುತ್ತಾ ನೀನು ಇದನ್ನು ಯಾರ ಮೇಲೆ ಪ್ರಯೋಗಿಸಲು ಬಯಸುತ್ತಿರುವೆ? ಇಲ್ಲಿ ನಿನ್ನನ್ನು ಇದಿರಿಸುವವರು ಯಾರೂ ಕಾಣುತ್ತಿಲ್ಲವಲ್ಲ! ನಿನ್ನ ಈ ಪರಾಕ್ರಮವು ನಮ್ಮಂತಹ ಜಡ ಬುದ್ಧಿಯುಳ್ಳವರಿಗೆ ಕಲ್ಯಾಣಕಾರಿಯಾಗಲೀ. ॥8॥

(ಶ್ಲೋಕ - 9)

ಮೂಲಮ್

ಶಿಷ್ಯಾ ಇಮೇ ಭಗವತಃ ಪರಿತಃ ಪಠಂತಿ
ಗಾಯಂತಿ ಸಾಮ ಸರಹಸ್ಯಮಜಸ್ರಮೀಶಮ್ ।
ಯುಷ್ಮಚ್ಛಿಖಾವಿಲುಲಿತಾಃ ಸುಮನೋಭಿವೃಷ್ಟೀಃ
ಸರ್ವೇ ಭಜಂತ್ಯೃಷಿಗಣಾ ಇವ ವೇದಶಾಖಾಃ ॥

ಅನುವಾದ

(ದುಂಬಿಗಳ ಕಡೆಗೆ ನಿರ್ದೇಶಿಸಿ) ಪೂಜ್ಯರೇ! ನಿಮ್ಮ ಸುತ್ತಲೂ ಅಧ್ಯಯನ ಮಾಡುತ್ತಿರುವ ಈ ಶಿಷ್ಯರು ನಿರಂತರವಾಗಿ ರಹಸ್ಯಪೂರ್ಣ ವಾದ ಸಾಮವೇದವನ್ನು ಗಾನಮಾಡುತ್ತಾ ಶ್ರೀಭಗವಂತ ನನ್ನು ಸ್ತುತಿಸುತ್ತಿರುವರಲ್ಲ! ಋಷಿಗುಣಗಳು ವೇದಗಳ ಶಾಖೆಗಳನ್ನು ಅನುಸರಿಸುತ್ತಿರುವಂತೆಯೇ, ಇವರೆಲ್ಲರೂ ನಿನ್ನ ತುರುಬಿನಿಂದ ಜಾರುತ್ತಿರುವ ಹೂವುಗಳನ್ನು ಸೇವಿಸುತ್ತಾ ಆನಂದಪಡುತ್ತಿರುವರು. ॥9॥

(ಶ್ಲೋಕ - 10)

ಮೂಲಮ್

ವಾಚಂ ಪರಂ ಚರಣಪಂಜರತಿತ್ತೀರೀಣಾಂ
ಬ್ರಹ್ಮನ್ನರೂಪಮುಖರಾಂ ಶೃಣವಾಮ ತುಭ್ಯಮ್ ।
ಲಬ್ಧಾ ಕದಂಬರುಚಿರಂಕವಿಟಂಕಬಿಂಬೇ
ಯಸ್ಯಾಮಲಾತಪರಿಧಿಃ ಕ್ವ ಚ ವಲ್ಕಲಂ ತೇ ॥

ಅನುವಾದ

(ಆಕೆಯ ಕಾಲಂದುಗೆಗಳ ಕಡೆಗೆ ಕೈತೋರಿಸಿ) ಎಲೈ ಬ್ರಾಹ್ಮ ಣೋತ್ತಮನೇ! ನಿನ್ನ ಪಾದಗಳೆಂಬ ಪಂಜರದಲ್ಲಿ ತಿತ್ತಿರಿ ಪಕ್ಷಿಗಳಂತೆ ಅಡಗಿಕೊಂಡಿರುವ ಈ ರತ್ನಗಳ ನೂಪುರಗಳು ಹೊರತೋರದೆ ಶಬ್ದಮಾತ್ರ ಕೇಳಿಬರುತ್ತಿದೆಯಲ್ಲ! (ಆಕೆಯ ಓಡ್ಯಾಣಸಹಿತವಾದ ಪೀತಾಂಬರದಲ್ಲಿ ಅಂಗದ ಕಾಂತಿಯನ್ನು ಉತ್ಪ್ರೇಕ್ಷಿಸುತ್ತಾ) ನಿನ್ನ ನಿತಂಬಗಳ ಮೇಲೆ ಈ ಕದಂಬ ಕುಸುಮದ ಕಾಂತಿಯು ಎಲ್ಲಿಂದ ಬಂದಿದೆ? ಇವುಗಳ ಮೇಲಂತೂ (ರತ್ನದ ಒಡ್ಯಾಣವೆಂಬ) ಜ್ವಾಲೆಗಳ ಮಂಡಲವೇ ತೊಳ-ತೊಳಗಿ ಬೆಳಗುತ್ತಿದೆಯಲ್ಲ! ಆದರೆ ನಿನ್ನ ನಾರುಮಡಿಯ ಉಡಿಗೆ ಎಲ್ಲಿ? ॥10॥

(ಶ್ಲೋಕ - 11)

ಮೂಲಮ್

ಕಿಂ ಸಂಭೃತಂ ರುಚಿರಯೋರ್ದ್ವಿಜ ಶೃಂಗಯೋಸ್ತೇ
ಮಧ್ಯೇ ಕೃಶೋ ವಹಸಿ ಯತ್ರ ದೃಶಿಃ ಶ್ರಿತಾ ಮೇ ।
ಪಂಕೋರುಣಃ ಸುರಭಿರಾತ್ಮವಿಷಾಣ ಈದೃಗ್
ಯೇನಾಶ್ರಮಂ ಸುಭಗ ಮೇ ಸುರಭೀಕರೋಷಿ ॥

ಅನುವಾದ

(ಕುಂಕುಮ ಮಂಡಿತ ಕುಚಗಳನ್ನು ನಿರ್ದೇಶಿಸುತ್ತಾ) ದ್ವಿಜ ವರ್ಯನೇ! ಅತಿ ಸುಂದರವಾಗಿ ನಿನ್ನ ಎದೆಯಲ್ಲಿ ಕಂಗೊಳಿಸುತ್ತಿರುವ ಈ ಕೊಂಬುಗಳಲ್ಲಿ ಏನು ತುಂಬಿದೆ? ಅವಶ್ಯವಾಗಿಯೂ ಇವುಗಳಲ್ಲಿ ಬಹಳ ಅಮೂಲ್ಯವಾದ ರತ್ನಗಳೇ ತುಂಬಿರಬೇಕು. ಅದಕ್ಕೆ ನಿನ್ನ ನಡುವು ಕೃಶವಾಗಿದ್ದರೂ ನೀನು ಇವುಗಳ ಭಾರವನ್ನು ಹೊತ್ತುಕೊಂಡಿರುವೆ. ಇವುಗಳನ್ನು ನೋಡಿ ನನ್ನ ದೃಷ್ಟಿಯು ಅಲ್ಲೇ ನೆಟ್ಟುಹೋಗಿದೆ. ಎಲೈ ಸುಭಗನೇ! ಈ ಕೊಂಬುಗಳ ಮೇಲೆ ನೀನು ಕೆಂಪಾದ ಲೇಪವನ್ನು ಹಚ್ಚಿಕೊಂಡಿರುವೆಯಲ್ಲ! ಅದು ಏನು? ಅದರ ಸುಗಂಧದಿಂದ ನನ್ನ ಆಶ್ರಮವೆಲ್ಲ ಘಮ-ಘಮಿಸುತ್ತಿದೆಯಲ್ಲ! ॥11॥

(ಶ್ಲೋಕ - 12)

ಮೂಲಮ್

ಲೋಕಂ ಪ್ರದರ್ಶಯ ಸುಹೃತ್ತಮ ತಾವಕಂ ಮೇ
ಯತ್ರತ್ಯ ಇತ್ಥಮುರಸಾವಯವಾವಪೂರ್ವೌ ।
ಅಸ್ಮದ್ವಿಧಸ್ಯ ಮನಉನ್ನಯನೌ ಬಿಭರ್ತಿ
ಬಹ್ವದ್ಭುತಂ ಸರಸರಾಸಸುಧಾದಿ ವಕೇ ॥

ಅನುವಾದ

ಮಿತ್ರನೇ! ನಿನ್ನ ಸ್ವಂತ ದೇಶ ಯಾವುದೆಂಬುದನ್ನು ನನಗೆ ತೋರಿಸು. ಅಲ್ಲಿಯ ನಿವಾಸಿಗಳು ತಮ್ಮ ವಕ್ಷಃಸ್ಥಳದ ಮೇಲೆ ನಮ್ಮಂತಹ ಪ್ರಾಣಿಗಳ ಚಿತ್ತವನ್ನು ಕಲಕುವ ಅದ್ಭುತವಾದ ಅವಯವಗಳನ್ನು ಧರಿಸಿರುತ್ತಾರೆ ಹಾಗೂ ಮುಖದಲ್ಲಿ ವಿಚಿತ್ರವಾದ ಹಾವ-ಭಾವ, ವಿಲಾಸ, ಸವಿ ಮಾತು ಮತ್ತು ಅಧರಾಮೃತದಂತಹ ಅದ್ಭುತವಾದ ವಸ್ತುಗಳನ್ನು ಧರಿಸುತ್ತಿರಬೇಕು. ॥12॥

(ಶ್ಲೋಕ - 13)

ಮೂಲಮ್

ಕಾ ವಾತ್ಮವೃತ್ತಿರದನಾದ್ಧವಿರಂಗ ವಾತಿ
ವಿಷ್ಣೋಃ ಕಲಾಸ್ಯನಿಮಿಷೋನ್ಮಕರೌ ಚ ಕರ್ಣೌ ।
ಉದ್ವಿಗ್ನಮೀನಯುಗಲಂ ದ್ವಿಜಪಂಕ್ತಿಶೋಚಿ-
ರಾಸನ್ನಭೃಂಗನಿಕರಂ ಸರ ಇನ್ಮುಖಂ ತೇ ॥

ಅನುವಾದ

ಪ್ರಿಯನೇ! ಯಾವ ವಸ್ತುವನ್ನು ತಿನ್ನುವುದರಿಂದ ನಿನ್ನ ಮುಖದಿಂದ ಈ ಸುವಾಸನೆಯು ಹೊರಹೊಮ್ಮುತ್ತಿದೆ? ನಿನ್ನ ಆಹಾರವು ಯಾವುದು? ನೀನು ಮಹಾವಿಷ್ಣುವಿನ ಕಲೆಯೇ ಆಗಿರಬೇಕೆಂದು ಅನಿಸುತ್ತದೆ. ಅದಕ್ಕಾಗಿ ನಿನ್ನ ಕಿವಿಗಳಲ್ಲಿ ಮಿನುಗುವಂತಹ ಎರಡು ಮಕರಾಕೃತಿಯ ಕುಂಡಲಗಳು ಥಳಥಳಿಸುತ್ತಿವೆ. ನಿನ್ನ ಮುಖವು ಒಂದು ಸುಂದರ ಸರೋವರದಂತೆ ಇದೆ. ಅದರಲ್ಲಿ ನಿನ್ನ ಚಂಚಲ ವಾದ ಕಣ್ಣುಗಳೇ ಭಯದಿಂದ ಚಲಿಸುತ್ತಿರುವ ಎರಡು ಮೀನುಗಳು. ದಂತಪಂಕ್ತಿಗಳೇ ಹಂಸಗಳು. ಕಪ್ಪಾದ ಮುಂಗರುಳುಗಳೇ ಭ್ರಮರದಂತೆ ಶೋಭಿಸುತ್ತಿವೆ.॥13॥

(ಶ್ಲೋಕ - 14)

ಮೂಲಮ್

ಯೋಸೌ ತ್ವಯಾ ಕರಸರೋಜಹತಃ ಪತಂಗೋ
ದಿಕ್ಷು ಭ್ರಮನ್ ಭ್ರಮತ ಏಜಯತೇಕ್ಷಿಣೀ ಮೇ ।
ಮುಕ್ತಂ ನ ತೇ ಸ್ಮರಸಿ ವಕ್ರಜಟಾವರೂಥಂ
ಕಷ್ಟೋನಿಲೋ ಹರತಿ ಲಂಪಟ ಏಷ ನೀವೀಮ್ ॥

ಅನುವಾದ

ನೀನು ಕರಕಮಲಗಳಿಂದ ಹೊಡೆದು ಪುಟಹಾರಿಸುತ್ತಿರುವ ಆ ಆಟದ ಚೆಂಡು ದಿಕ್ಕು-ದಿಕ್ಕುಗಳಲ್ಲಿ ಒಡಾಡುತ್ತಾ ನನ್ನ ಕಣ್ಣುಗಳನ್ನು ಚಂಚಲಗೊಳಿಸುತ್ತಿದೆ. ಜೊತೆಗೆ ನನ್ನ ಮನಸ್ಸಿನಲ್ಲಿಯೂ ಗಲಿಬಿಲಿಯನ್ನು ಉಂಟುಮಾಡುತ್ತದೆ. ಕೊಂಕಾದ ಜಡೆಕೂದಲು ಬಿಚ್ಚಿಹೋಗಿರುವುದನ್ನು ನೀನು ಗಮನಿಸುತ್ತಿಲ್ಲವಲ್ಲ. ಅರೇ! ಈ ಧೂರ್ತನಾದ ವಾಯುವು ಬಾರಿ-ಬಾರಿಗೂ ನಿನ್ನ ಮೇಲುವಸ್ತ್ರವನ್ನು ಹಾರಿಸುತ್ತಿದೆಯಲ್ಲ! ॥14॥

(ಶ್ಲೋಕ - 15)

ಮೂಲಮ್

ರೂಪಂ ತಪೋಧನ ತಪಶ್ಚರತಾಂ ತಪೋಘ್ನಂ
ಹ್ಯೇತತ್ತು ಕೇನ ತಪಸಾ ಭವತೋಪಲಬ್ಧಮ್ ।
ಚರ್ತುಂ ತಪೋರ್ಹಸಿ ಮಯಾ ಸಹ ಮಿತ್ರ ಮಹ್ಯಂ
ಕಿಂ ವಾ ಪ್ರಸೀದತಿ ಸ ವೈ ಭವಭಾವನೋ ಮೇ ॥

ಅನುವಾದ

ತಪೋಧನನೇ! ತಪಸ್ವಿಗಳ ತಪಸ್ಸನ್ನು ಭ್ರಷ್ಟ ಗೊಳಿಸುವ ಈ ಅನುಪಮವಾದ ರೂಪ-ಲಾವಣ್ಯಗಳನ್ನು ನೀನು ಯಾವ ತಪಸ್ಸಿನ ಪ್ರಭಾವದಿಂದ ಪಡೆದಿರುವೆ? ಮಿತ್ರನೇ! ಇಲ್ಲಿಗೆ ಬಾ! ಕೆಲವು ದಿನಗಳವರೆಗೆ ನನ್ನೊಡನೆ ಇದ್ದು ತಪಸ್ಸುಮಾಡು. ಅಥವಾ ವಿಶ್ವವನ್ನು ವಿಸ್ತರಿಸುವ ಇಚ್ಛೆಯಿಂದ ಎಲ್ಲಾದರೂ ಬ್ರಹ್ಮದೇವರೇ ನನ್ನ ಮೇಲೆ ಕೃಪೆ ಮಾಡಿರಬಹುದೇ? ॥15॥

(ಶ್ಲೋಕ - 16)

ಮೂಲಮ್

ನ ತ್ವಾಂ ತ್ಯಜಾಮಿ ದಯಿತಂ ದ್ವಿಜದೇವದತ್ತಂ
ಯಸ್ಮಿನ್ಮನೋ ದೃಗಪಿ ನೋ ನ ವಿಯಾತಿ ಲಗ್ನಮ್ ।
ಮಾಂ ಚಾರುಶೃಂಗ್ಯರ್ಹಸಿ ನೇತುಮನುವ್ರತಂ ತೇ
ಚಿತ್ತಂ ಯತಃ ಪ್ರತಿಸರಂತು ಶಿವಾಃ ಸಚಿವ್ಯಃ ॥

ಅನುವಾದ

ನಿಜವಾಗಿ ನೀನು ಬ್ರಹ್ಮ ದೇವರು ಕರುಣಿಸಿದ ಪ್ರಿಯ ಕೊಡುಗೆಯೇ ಆಗಿರುವೆ. ಈಗ ನಾನು ನಿನ್ನನ್ನು ಬಿಟ್ಟಿರಲಾರೆ. ನಿನ್ನಲ್ಲಿ ನನ್ನ ಮನಸ್ಸು ಮತ್ತು ಕಣ್ಣುಗಳು ಬೇರೆಲ್ಲಿಗೂ ಹೋಗಲು ಬಯಸದಷ್ಟು ನೆಟ್ಟುಹೋಗಿವೆ. ಮನೋಹರವಾದ ಕೊಂಬುಗಳುಳ್ಳವಳೇ! ನಿನಗೆ ಮನಸ್ಸು ಬಂದಲ್ಲಿಗೆ ನನ್ನನ್ನು ಕರಕೊಂಡುಹೋಗು. ನಾನಾದರೋ ನಿನ್ನ ಅನುಚರನು. ನಿನ್ನ ಈ ಮಂಗಳಮಯರಾದ ಸಖಿಯರೂ ನಮ್ಮೊಡನೆ ಇರಲಿ. ॥16॥

(ಗದ್ಯ - 17)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಇತಿ ಲಲನಾನುನಯಾತಿವಿಶಾರದೋ ಗ್ರಾಮ್ಯವೈದಗ್ಧ್ಯಯಾ ಪರಿಭಾಷಯಾ ತಾಂ ವಿಬುಧವಧೂಂ ವಿಬುಧಮತಿರಧಿಸಭಾಜಯಾಮಾಸ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ರಾಜೇಂದ್ರಾ! ಆಗ್ನೀಧ್ರನು ದೇವತೆಗಳಂತೆ ಬುದ್ಧಿವಂತನೂ, ಸ್ತ್ರೀಯರನ್ನು ಪ್ರಸನ್ನಗೊಳಿಸುವುದರಲ್ಲಿ ಅತಿಕುಶಲನೂ ಆಗಿದ್ದನು. ಅವನು ಈ ರೀತಿಯಲ್ಲಿ ರತಿಚಾತುರ್ಯದಿಂದ ಕೂಡಿದ ಸವಿಮಾತುಗಳಿಂದ ಆ ಅಪ್ಸರೆಯನ್ನು ಒಲಿಸಿಕೊಂಡನು. ॥17॥

(ಗದ್ಯ - 18)

ಮೂಲಮ್

ಸಾ ಚ ತತಸ್ತಸ್ಯ ವೀರಯೂಥಪತೇರ್ಬುದ್ಧಿಶೀಲರೂಪವಯಃಶ್ರಿಯೌದಾರ್ಯೇಣ ಪರಾಕ್ಷಿಪ್ತಮನಾಸ್ತೇನ ಸಹಾಯುತಾಯುತ ಪರಿವತ್ಸರೋಪಲಕ್ಷಣಂ ಕಾಲಂ ಜಂಬೂದ್ವೀಪಪತಿನಾ ಭೌಮಸ್ವರ್ಗಭೋಗಾನ್ ಬುಭುಜೇ ॥

ಅನುವಾದ

ವೀರಾಧಿವೀರರಲ್ಲಿ ಅಗ್ರಗಣ್ಯನಾದ ಆಗ್ನೀಧ್ರನ ಬುದ್ಧಿ, ಶೀಲ, ರೂಪ, ವಯಸ್ಸು, ಕಾಂತಿ ಔದಾರ್ಯಗಳಿಗೆ ಆಕರ್ಷಿತಳಾದ ಆ ಪೂರ್ವಚಿತ್ತಿಯು ಜಂಬೂದ್ವಿಪಾಧಿಪತಿಯೊಡನೆ ಅನೇಕ ಸಾವಿರವರ್ಷಗಳವರೆಗೆ ಪೃಥ್ವಿ ಮತ್ತು ಸ್ವರ್ಗದ ಭೋಗಗಳನ್ನು ಅನುಭವಿಸುತ್ತಿದ್ದಳು. ॥18॥

(ಗದ್ಯ - 19)

ಮೂಲಮ್

ತಸ್ಯಾ ಮು ಹ ವಾ ಆತ್ಮಜಾನ್ ಸ ರಾಜವರ ಆಗ್ನೀಧ್ರೋ ನಾಭಿ ಕಿಂಪುರುಷಹರಿವರ್ಷೇಲಾವೃತರಮ್ಯಕ ಹಿರಣ್ಮಯಕುರು ಭದ್ರಾಶ್ವಕೇತುಮಾಲಸಂಜ್ಞಾನ್ನವ ಪುತ್ರಾನಜನಯತ್ ॥

ಅನುವಾದ

ಅನಂತರ ಆಗ್ನೀಧ್ರನು ಆಕೆಯ ಗರ್ಭದಿಂದ ನಾಭಿ, ಕಿಂಪುರುಷ, ಹರಿವರ್ಷ, ಇಲಾವೃತ, ರಮ್ಯಕ, ಹಿರಣ್ಮಯ, ಕುರು, ಭದ್ರಾಶ್ವ ಮತ್ತು ಕೇತುಮಾಲ ಎಂಬ ಒಂಭತ್ತು ಪುತ್ರರನ್ನು ಪಡೆದನು. ॥19॥

(ಗದ್ಯ - 20)

ಮೂಲಮ್

ಸಾ ಸೂತ್ವಾಥ ಸುತಾನ್ನವಾನುವತ್ಸರಂ ಗೃಹ ಏವಾಪಹಾಯ ಪೂರ್ವಚಿತ್ತಿರ್ಭೂಯ ಏವಾಜಂ ದೇವಮುಪ ತಸ್ಥೇ ॥

ಅನುವಾದ

ಪೂರ್ವಚಿತ್ತಿಯು ಹೀಗೆ ವರ್ಷಕ್ಕೆ ಒಬ್ಬರಂತೆ ಒಂಭತ್ತು ಮಂದಿ ಪುತ್ರರನ್ನು ಪಡೆದು, ಅವರನ್ನು ಆಗ್ನೀಧ್ರನ ಅರಮನೆಯಲ್ಲೇ ಬಿಟ್ಟು ತಾನು ಬ್ರಹ್ಮಲೋಕಕ್ಕೆ ತೆರಳಿ ಅಲ್ಲಿ ಬ್ರಹ್ಮ ದೇವರ ಸೇವೆಯಲ್ಲಿ ತೊಡಗಿದಳು. ॥20॥

(ಗದ್ಯ - 21)

ಮೂಲಮ್

ಆಗ್ನೀಧ್ರಸುತಾಸ್ತೆ ಮಾತುರನುಗ್ರಹಾದೌ ತ್ಪತ್ತಿಕೇನೈವ ಸಂಹನನಬಲೋಪೇತಾಃ ಪಿತ್ರಾ ವಿಭಕ್ತಾ ಆತ್ಮತುಲ್ಯನಾಮಾನಿ ಯಥಾಭಾಗಂ ಜಂಬೂದ್ವೀಪವರ್ಷಾಣಿ ಬುಭುಜುಃ ॥

ಅನುವಾದ

ಆಗ್ನೀಧ್ರನ ಆ ಪುತ್ರರು ತಾಯಿಯ ಅನುಗ್ರಹದಿಂದ ಸ್ವಾಭಾವಿಕ ವಾಗಿಯೇ ಸುಂದರ ಸುದೃಢ ದೇಹ-ಪರಾಕ್ರಮಗಳಿಂದ ಸಂಪನ್ನರಾಗಿದ್ದರು. ಆಗ್ನೀಧ್ರನು ಜಂಬೂದ್ವೀಪವನ್ನು ವಿಂಗಡಿಸಿ, ಆಯಾಪುತ್ರರ ಹೆಸರಿನಿಂದಲೇ ಕರೆಯಲ್ಪಡುವ ಒಂಭತ್ತು ವರ್ಷ (ಭೂಖಂಡ)ಗಳನ್ನಾಗಿ ಮಾಡಿ ಅವುಗಳನ್ನು ಆಯಾಪುತ್ರರಿಗೆ ಒಪ್ಪಿಸಿದನು. ಅವರೆಲ್ಲರೂ ತಮ್ಮ-ತಮ್ಮ ವರ್ಷಗಳಲ್ಲಿ ಆಧಿಪತ್ಯವನ್ನು ಅನುಭವಿಸ ತೊಡಗಿದರು. ॥21॥

(ಗದ್ಯ - 22)

ಮೂಲಮ್

ಆಗ್ನೀಧ್ರೋ ರಾಜಾತೃಪ್ತಃ ಕಾಮಾ ನಾಮಪ್ಸರಸಮೇವಾನುದಿನಮಧಿಮನ್ಯಮಾನಸ್ತಸ್ಯಾಃ ಸಲೋಕತಾಂ ಶ್ರುತಿಭಿರವಾರುಂಧ ಯತ್ರ ಪಿತರೋ ಮಾದಯಂತೇ ॥

ಅನುವಾದ

ಮಹಾರಾಜಾ ಆಗ್ನೀಧ್ರನಿಗೆ ಪ್ರತಿದಿನವೂ ಭೋಗಗಳನ್ನು ಅನುಭವಿಸುತ್ತಿದ್ದರೂ ಅವುಗಳಿಂದ ತೃಪ್ತಿಯುಂಟಾಗಲಿಲ್ಲ. ಆತನು ಆ ಅಪ್ಸರೆಯನ್ನೇ ಪರಮಪುರುಷಾರ್ಥ ವೆಂದು ಭಾವಿಸಿಕೊಂಡಿದ್ದನು. ಅದಕ್ಕಾಗಿ ಅವನು ವೈದಿಕ ಕರ್ಮಗಳ ಮೂಲಕ ಪಿತೃಗಣಗಳು ತಮ್ಮ ಸುಕೃತಗಳಿಗೆ ಅನುಸಾರವಾಗಿ ಬಗೆ-ಬಗೆಯ ಸುಖ-ಭೋಗಗಳನ್ನು ಅನುಭವಿಸುತ್ತಿರುವ ದಿವ್ಯಲೋಕವನ್ನು ಪಡೆದುಕೊಂಡನು. ॥22॥

(ಗದ್ಯ - 23)

ಮೂಲಮ್

ಸಂಪರೇತೇ ಪಿತರಿ ನವ ಭ್ರಾತರೋ ಮೇರುದುಹಿತೃರ್ಮೇರುದೇವೀಂ ಪ್ರತಿರೂಪಾಮುಗ್ರದಂಷ್ಟ್ರೀಂ ಲತಾಂ ರಮ್ಯಾಂ ಶ್ಯಾಮಾಂ ನಾರೀಂ ಭದ್ರಾಂ ದೇವವೀತಿಮಿತಿಸಂಜ್ಞಾ ನವೋದವಹನ್ ॥

ಅನುವಾದ

ತಂದೆಯು ಪರಲೋಕಕ್ಕೆ ತೆರಳಿದನಂತರ ನಾಭಿಯೇ ಮುಂತಾದ ಒಂಭತ್ತುಮಂದಿ ಸೋದರರು ಮೇರುವಿನ ಪುತ್ರಿಯರಾಗಿದ್ದ ಮೇರುದೇವೀ, ಪ್ರತಿರೂಪಾ, ಉಗ್ರದಂಷ್ಟ್ರೀ, ಲತಾ, ರಮ್ಯಾ, ಶ್ಯಾಮಾ, ನಾರೀ, ಭದ್ರಾ ಮತ್ತು ದೇವವೀತಿ ಎಂಬ ಒಂಭತ್ತು ಮಂದಿ ಕನ್ಯೆಯರನ್ನು ವಿವಾಹವಾದರು. ॥23॥

ಅನುವಾದ (ಸಮಾಪ್ತಿಃ)

ಎರಡನೆಯ ಅಧ್ಯಾಯವು ಮುಗಿಯಿತು. ॥2॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಪಂಚಮಸ್ಕಂಧೇ ಆಗ್ನೀಧ್ರವರ್ಣನಂ ನಾಮ ದ್ವಿತೀಯೋಽಧ್ಯಾಯಃ ॥2॥