[ಮೊದಲನೆಯ ಅಧ್ಯಾಯ]
ಭಾಗಸೂಚನಾ
ಪ್ರಿಯವ್ರತ ಚರಿತ್ರೆ
(ಶ್ಲೋಕ - 1)
ಮೂಲಮ್ (ವಾಚನಮ್)
ರಾಜೋವಾಚ
ಮೂಲಮ್
ಪ್ರಿಯವ್ರತೋ ಭಾಗವತಃ ಆತ್ಮಾರಾಮಃ ಕಥಂ ಮುನೇ ।
ಗೃಹೇರಮತ ಯನ್ಮೂಲಃ ಕರ್ಮಬಂಧಃ ಪರಾಭವಃ ॥
ಅನುವಾದ
ಪರೀಕ್ಷಿದ್ರಾಜನು ಕೇಳಿದನು — ಮುನಿವರ್ಯರೇ! ಪ್ರಿಯವ್ರತ ಮಹಾರಾಜನಾದರೋ ದೊಡ್ಡ ಭಗವದ್ಭಕ್ತನಾಗಿದ್ದನು; ಆತ್ಮಾರಾಮನಾಗಿದ್ದನು. ಅವನಿಗೆ ಗೃಹಸ್ಥಾಶ್ರಮದಲ್ಲಿ ಅಭಿರುಚಿಯು ಹೇಗೆ ಉಂಟಾಯಿತು? ಅದರಲ್ಲಿ ಸಿಕ್ಕಿಹಾಕಿಕೊಂಡ ಮನುಷ್ಯನಿಗೆ ತನ್ನ ಸ್ವರೂಪದ ವಿಸ್ಮೃತಿ ಉಂಟಾಗಿ ಅವನು ಕರ್ಮಗಳಲ್ಲಿ ಬಂಧಿತನಾಗುವನಲ್ಲ? ॥1॥
(ಶ್ಲೋಕ - 2)
ಮೂಲಮ್
ನ ನೂನಂ ಮುಕ್ತಸಂಗಾನಾಂ ತಾದೃಶಾನಾಂ ದ್ವಿಜರ್ಷಭ ।
ಗೃಹೇಷ್ವಭಿನಿವೇಶೋಯಂ ಪುಂಸಾಂ ಭವಿತುಮರ್ಹತಿ ॥
ಅನುವಾದ
ಬ್ರಹ್ಮರ್ಷಿಶ್ರೇಷ್ಠರೇ! ನಿಶ್ಚಯವಾಗಿಯೂ ಇಂತಹ ನಿಃಸಂಗ ಮಹಾಪುರುಷರು ಹೀಗೆ ಗೃಹಸ್ಥಾಶ್ರಮದಲ್ಲಿ ಆಸಕ್ತ ರಾಗುವುದು ಉಚಿತವಲ್ಲ. ॥2॥
(ಶ್ಲೋಕ - 3)
ಮೂಲಮ್
ಮಹತಾಂ ಖಲು ವಿಪ್ರರ್ಷೇ ಉತ್ತಮಶ್ಲೋಕಪಾದಯೋಃ ।
ಛಾಯಾನಿರ್ವೃತಚಿತ್ತಾನಾಂ ನ ಕುಟುಂಬೇ ಸ್ಪೃಹಾಮತಿಃ ॥
ಅನುವಾದ
ಯಾರ ಚಿತ್ತವು ಪುಣ್ಯ ಕೀರ್ತಿಯಾದ ಶ್ರೀಹರಿಯ ಚರಣಾರವಿಂದಗಳ ಶೀತಲ ಛಾಯೆಯ ಆಶ್ರಯಪಡೆದು ಪ್ರಶಾಂತವಾಗಿದೆಯೋ, ಆ ಮಹಾಪುರುಷರಿಗೆ ಕುಟುಂಬವೇ ಮುಂತಾದವುಗಳಲ್ಲಿ ಆಸಕ್ತಿ ಉಂಟಾಗಲಾರದು. ॥3॥
(ಶ್ಲೋಕ - 4)
ಮೂಲಮ್
ಸಂಶಯೋಯಂ ಮಹಾನ್ ಬ್ರಹ್ಮನ್ ದಾರಾಗಾರಸುತಾದಿಷು ।
ಸಕ್ತಸ್ಯ ಯತ್ಸಿದ್ಧಿರಭೂತ್ಕೃಷ್ಣೇ ಚ ಮತಿರಚ್ಯುತಾ ॥
ಅನುವಾದ
ಬ್ರಾಹ್ಮಣೋತ್ತಮರೇ! ಮಹಾರಾಜಾ ಪ್ರಿಯವ್ರತನು ಪತ್ನೀ, ಗೃಹ, ಪುತ್ರಾದಿಗಳಲ್ಲಿ ಆಸಕ್ತನಾಗಿದ್ದರೂ ಹೇಗೆ ಸಿದ್ಧಿಯನ್ನು ಪಡೆದನು? ಆತನಿಗೆ ಶ್ರೀಕೃಷ್ಣಪರಮಾತ್ಮನಲ್ಲಿ ನಿಶ್ಚಲವಾದ ಭಕ್ತಿಯು ಹೇಗೆ ಉಂಟಾಯಿತು? ಇವೆಲ್ಲ ವಿಷಯದಲ್ಲಿ ನನಗೆ ಸಂದೇಹವುಂಟಾಗಿದೆ. ॥4॥
(ಗದ್ಯ - 5)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಬಾಢಮುಕ್ತಂ ಭಗವತ ಉತ್ತಮಶ್ಲೋಕಸ್ಯ ಶ್ರೀಮಚ್ಚರಣಾರವಿಂದಮಕರಂದರಸ ಆವೇಶಿತಚೇತಸೋ ಭಾಗವತಪರಮಹಂಸದಯಿತಕಥಾಂ ಕಿಂಚಿದಂತರಾಯವಿಹತಾಂ ಸ್ವಾಂ ಶಿವತಮಾಂ ಪದವೀಂ ನ ಪ್ರಾಯೇಣ ಹಿನ್ವಂತಿ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಮಹಾರಾಜನೇ! ನೀನು ಹೇಳಿದುದು ಸರಿಯೇ ಆಗಿದೆ. ಯಾರ ಚಿತ್ತವು ಪುಣ್ಯಕೀರ್ತಿಯಾದ ಶ್ರೀಹರಿಯ ಪರಮಮಧುರವಾದ ಚರಣಕಮಲಗಳ ಮಕರಂದ ರಸವನ್ನು ಸವಿಯುವುದರಲ್ಲಿ ತತ್ಪರವಾಗಿದೆಯೋ ಅವರು ಯಾವುದಾದರೂ ಅಡ್ಡಿ-ಆತಂಕಗಳಿಂದ ತಡೆಯುಂಟಾದರೂ ಕೂಡ ಭಗವದ್ಭಕ್ತ ಶಿರೋಮಣಿಗಳಾದ ಪರಮಹಂಸರಿಗೆ ಪ್ರಿಯನಾದ ಭಗವಾನ್ ಶ್ರೀವಾಸುದೇವನ ಕಥಾಶ್ರವಣವೆಂಬ ಪರಮ ಕಲ್ಯಾಣಮಯವಾದ ಮಾರ್ಗವನ್ನು ಸಾಮಾನ್ಯವಾಗಿ ಬಿಡಲಾರರು.॥5॥
(ಗದ್ಯ - 6)
ಮೂಲಮ್
ಯರ್ಹಿ ವಾವ ಹ ರಾಜನ್ ಸ ರಾಜಪುತ್ರಃ ಪ್ರಿಯವ್ರತಃ ಪರಮಭಾಗವತೋ ನಾರದಸ್ಯ ಚರಣೋಪ ಸೇವಯಾಂ ಜಸಾವಗತಪರಮಾರ್ಥಸತತ್ತ್ವೋ ಬ್ರಹ್ಮಸತ್ರೇಣ ದೀಕ್ಷಿಷ್ಯಮಾಣೋವನಿತಲ ಪರಿಪಾಲನಾಯಾಮ್ನಾತಪ್ರವರಗುಣಗಣೈಕಾಂತಭಾಜನತಯಾ ಸ್ವಪಿತ್ರೋಪಾಮನಿತೋ ಭಗವತಿ ವಾಸುದೇವ ಏವಾವ್ಯವಧಾನಸಮಾಧಿಯೋಗೇನ ಸಮಾವೇಶಿತಸಕಲಕಾರಕಕ್ರಿಯಾಕಲಾಪೋ ನೈವಾಭ್ಯನಂದದ್ಯದ್ಯಪಿ ತದಪ್ರತ್ಯಾಮ್ನಾತವ್ಯಂ ತದಧಿಕರಣ ಆತ್ಮನೋನ್ಯಸ್ಮಾದಸತೋಪಿ ಪರಾಭವಮನ್ವೀಕ್ಷಮಾಣಃ ॥
ಅನುವಾದ
ಎಲೈ ರಾಜನೇ! ಆ ರಾಜಕುಮಾರನಾದ ಪ್ರಿಯವ್ರತನು ಪರಮಭಾಗವತೋತ್ತಮನಾಗಿದ್ದನು. ಶ್ರೀನಾರದ ಮಹರ್ಷಿಗಳ ಅಡಿದಾವರೆಗಳ ಸೇವೆಮಾಡಿದ್ದರಿಂದ ಅವನಿಗೆ ಸಹಜವಾಗಿಯೇ ಪರಮಾರ್ಥತತ್ತ್ವದ ಬೋಧ ಉಂಟಾಗಿತ್ತು. ಅವನು ನಿರಂತರವಾಗಿ ಬ್ರಹ್ಮಾಭ್ಯಾಸದಲ್ಲಿ ಜೀವನವನ್ನು ಕಳೆಯುವ ನಿಯಮವುಳ್ಳ ಬ್ರಹ್ಮಸತ್ರವೆಂಬ ಅಧ್ಯಾತ್ಮದೀಕ್ಷೆಯನ್ನು ಇನ್ನೇನು ತೆಗೆದಕೊಳ್ಳಬೇಕು ಎನ್ನುವಷ್ಟರಲ್ಲಿ ಆತನ ತಂದೆ ಸ್ವಾಯಂಭುವ ಮನುವು ಆತನಲ್ಲಿ ಭೂಮಂಡಲವನ್ನು ಪಾಲಿಸಲು ಬೇಕಾದ ಎಲ್ಲ ಶ್ರೇಷ್ಠಗುಣಗಳೂ ಇರು ವುದನ್ನು ಗಮನಿಸಿ ‘ನೀನು ರಾಜನಾಗಿ ರಾಜ್ಯವನ್ನಾಳು’ ಎಂದು ಅಪ್ಪಣೆಯನ್ನಿತ್ತನು. ಆದರೆ ಪ್ರಿಯವ್ರತನು ಆಗಲೇ ಅಖಂಡವಾದ ಸಮಾಧಿಯೋಗದ ಮೂಲಕ ತನ್ನ ಎಲ್ಲ ಇಂದ್ರಿಯಗಳನ್ನು ಮತ್ತು ಕ್ರಿಯೆಗಳನ್ನು ಭಗವಾನ್ ಶ್ರೀವಾಸುದೇವನ ಚರಣಗಳಲ್ಲಿ ಸಮರ್ಪಿಸಿ ಬಿಟ್ಟಿದ್ದನು. ಆದುದರಿಂದ ಆತನು ತಂದೆಯ ಆಜ್ಞೆಯನ್ನು ಉಲ್ಲಂಘಿಸುವುದು ಅನುಚಿತವಾಗಿದ್ದರೂ ರಾಜಪದವಿಯನ್ನು ಸ್ವೀಕರಿಸಲಿಲ್ಲ. ‘ರಾಜ್ಯಾಧಿಕಾರವು ಬಂದೊಡನೆ ಪತ್ನೀ-ಪುತ್ರರೇ ಮುಂತಾದ ಅಸತ್ಪ್ರಪಂಚವು ಆತ್ಮ ಸ್ವರೂಪವನ್ನು ಮುಚ್ಚಿಬಿಡುವುದು; ಆ ಚಿಂತೆಯಲ್ಲೇ ಪರಮಾರ್ಥ ತತ್ತ್ವವು ಮರೆತುಹೋಗುವುದು’ ಎಂದು ಭಾವಿಸಿ ಆ ಪದವಿಯನ್ನು ಸ್ವೀಕರಿಸಲಿಲ್ಲ.॥6॥
(ಗದ್ಯ - 7)
ಮೂಲಮ್
ಅಥ ಹ ಭಗವಾನಾದಿದೇವ ಏತಸ್ಯ ಗುಣವಿಸರ್ಗಸ್ಯ ಪರಿಬೃಂಹಣಾನುಧ್ಯಾನವ್ಯವಸಿತ ಸಕಲಜಗದಭಿಪ್ರಾಯ ಆತ್ಮಯೋನಿರಖಿಲನಿಗಮನಿಜಗಣಪರಿವೇಷ್ಟಿತಃ ಸ್ವಭವನಾದ್ ಅವತತಾರ ॥
ಅನುವಾದ
ಆದಿದೇವ ಸ್ವಯಂಭೂ ಭಗವಾನ್ಬ್ರಹ್ಮದೇವರಿಗೆ ನಿರಂತರವಾಗಿ ಈ ಗುಣಮಯ ಪ್ರಪಂಚವನ್ನು ವೃದ್ಧಿಪಡಿಸುವ ವಿಚಾರವೇ ಇರುತ್ತದೆ. ಅವರು ಇಡೀ ಪ್ರಪಂಚದ ಜನರ ಅಭಿಪ್ರಾಯವನ್ನು ತಿಳಿಯುತ್ತಾ ಇರುತ್ತಾರೆ. ಪ್ರಿಯವ್ರತನ ಇಂತಹ ಸ್ಥಿತಿಯನ್ನು ನೋಡಿದಾಗ ಅವರು ಮೂರ್ತಿಮಂತ ನಾಲ್ಕು ವೇದಗಳನ್ನು ಮತ್ತು ಮರೀಚಿಯೇ ಮುಂತಾದ ಪಾರ್ಷದರನ್ನು ಜೊತೆಸೇರಿಸಿಕೊಂಡು ತನ್ನ ಲೋಕದಿಂದ ಕೆಳಗಿಳಿದರು.॥7॥
(ಗದ್ಯ - 8)
ಮೂಲಮ್
ಸ ತತ್ರ ತತ್ರ ಗಗನತಲ ಉಡುಪತಿರಿವ ವಿಮಾನಾವಲಿಭಿರನುಪಥಮಮರಪರಿವೃಢೈರಭಿ ಪೂಜ್ಯಮಾನಃ ಪಥಿ ಪಥಿ ಚ ವರೂಥಶಃ ಸಿದ್ಧಗಂಧರ್ವಸಾಧ್ಯಚಾರಣಮುನಿಗಣೈರುಪಗೀಯಮಾನೋ ಗಂಧಮಾದನ ದ್ರೋಣೀಮವ ಭಾಸಯನ್ನುಪಸಸರ್ಪ ॥
ಅನುವಾದ
ಆಕಾಶದಲ್ಲಿ ಅಲ್ಲಲ್ಲಿ ವಿಮಾನಗಳನ್ನೇರಿದ್ದ ಇಂದ್ರಾದಿ ದೇವತೆಗಳು ಅವರನ್ನು ಪೂಜಿಸಿದರು. ಮಾರ್ಗದಲ್ಲಿ ಗುಂಪು-ಗುಂಪಾಗಿ ಬಂದಿದ್ದ ಸಿದ್ಧರೂ, ಗಂಧರ್ವರೂ, ಸಾಧ್ಯರೂ, ಚಾರಣರೂ, ಮುನಿಗಳೂ ಅವರನ್ನು ಸ್ತೋತ್ರಮಾಡಿದರು. ಹೀಗೆ ಹೆಜ್ಜೆ-ಹೆಜ್ಜೆಗೂ ಆದರ ಸನ್ಮಾನಗಳನ್ನು ಪಡೆಯುತ್ತಾ ಅವರು ಸಾಕ್ಷಾತ್ ತಾರಾನಾಥನಾದ ಚಂದ್ರನಂತೆ ಗಂಧಮಾದನದ ತಪ್ಪಲನ್ನು ಪ್ರಕಾಶಪಡಿಸುತ್ತಾ ಪ್ರಿಯವ್ರತನ ಬಳಿಗೆ ತಲುಪಿದರು.॥8॥
(ಗದ್ಯ - 9)
ಮೂಲಮ್
ತತ್ರ ಹ ವಾ ಏನಂ ದೇವರ್ಷಿಃಹಂಸಯಾನೇನ ಪಿತರಂ ಭಗವಂತಂ ಹಿರಣ್ಯಗರ್ಭಮುಪಲಭಮಾನಃ ಸಹಸೈವೋತ್ಥಾಯಾರ್ಹಣೇನ ಸಹ ಪಿತಾಪುತ್ರಾಭ್ಯಾಮವಹಿತಾಂಜಲಿಃ ಉಪತಸ್ಥೇ ॥
ಅನುವಾದ
ಪ್ರಿಯವ್ರತನಿಗೆ ಆತ್ಮವಿದ್ಯೆಯನ್ನು ಉಪದೇಶ ಮಾಡಲು ಶ್ರೀನಾರದಮಹರ್ಷಿಗಳು ಅಲ್ಲಿಗೆ ದಯಮಾಡಿಸಿದ್ದರು. ಬ್ರಹ್ಮದೇವರು ಅಲ್ಲಿಗೆ ತಲುಪಿದಾಗ ಹಂಸವಾಹನವನ್ನು ಕಂಡು ತಂದೆಯಾದ ಬ್ರಹ್ಮದೇವರೇ ಬಂದಿದ್ದಾರೆ ಎಂದು ತಿಳಿದುಕೊಂಡು ನಾರದರು ಸ್ವಾಯಂಭುವಮನು ಮತ್ತು ಪ್ರಿಯವ್ರತರೊಡನೆ ಒಡನೆಯೇ ಎದ್ದುನಿಂತರು. ಎಲ್ಲರೂ ಅವರಿಗೆ ಕೈಜೋಡಿಸಿ ನಮಸ್ಕರಿಸಿದರು. ॥9॥
(ಗದ್ಯ - 10)
ಮೂಲಮ್
ಭಗವಾನಪಿ ಭಾರತ ತದುಪನೀತಾರ್ಹಣಃ ಸೂಕ್ತವಾಕೇನಾತಿತರಾಮುದಿತಗುಣಗಣಾವತಾರಸುಜಯಃ ಪ್ರಿಯವ್ರತಮಾದಿಪುರುಷಸ್ತಂ ಸದಯಹಾಸಾವಲೋಕ ಇತಿ ಹೋವಾಚ ॥
ಅನುವಾದ
ಪರೀಕ್ಷಿದ್ರಾಜನೇ! ನಾರದರು ಅವರನ್ನು ಅನೇಕ ವಿಧದಿಂದ ಪೂಜೆಗೈದು, ಮಧುರ ವಚನಗಳಿಂದ ಅವರ ಗುಣಗಳನ್ನು, ಅವತಾರದ ಮಹಿಮೆಯನ್ನು ಅಗ್ಗಳಿಕೆಯನ್ನು ವೇದಸೂಕ್ತಗಳಿಂದ ಹೊಗಳುತ್ತಿರಲು ಆದಿಪುರುಷ ಬ್ರಹ್ಮದೇವರು ಪ್ರಿಯ ವ್ರತನನ್ನು ವಾತ್ಸಲ್ಯದಿಂದ ನೋಡಿ ಮುಗುಳ್ನಗೆಯಿಂದ ಹೀಗೆ ನುಡಿದರು. ॥10॥
(ಶ್ಲೋಕ - 11)
ಮೂಲಮ್ (ವಾಚನಮ್)
ಶ್ರೀ ಭಗವಾನುವಾಚ
ಮೂಲಮ್
ನಿಬೋಧ ತಾತೇದಮೃತಂ ಬ್ರವೀಮಿ
ಮಾಸೂಯಿತುಂ ದೇವಮರ್ಹಸ್ಯಪ್ರಮೇಯಮ್ ।
ವಯಂ ಭವಸ್ತೇ ತತ ಏಷ ಮಹರ್ಷಿ-
ರ್ವಹಾಮ ಸರ್ವೇ ವಿವಶಾ ಯಸ್ಯ ದಿಷ್ಟಮ್ ॥
ಅನುವಾದ
ಬ್ರಹ್ಮದೇವರು ಹೇಳಿದರು — ಮಗು ಪ್ರಿಯವ್ರತನೇ! ನಾನು ನಿನಗೆ ಸತ್ಯವಾದ ಸಿದ್ಧಾಂತದ ಮಾತನ್ನು ಹೇಳುವೆನು. ಲಕ್ಷ್ಯಕೊಟ್ಟು ಕೇಳು. ಅಪ್ರಮೇಯ ಶ್ರೀಹರಿಯ ಕುರಿತು ನೀನು ಯಾವ ವಿಧದಿಂದಲೂ ದೋಷದೃಷ್ಟಿಯನ್ನು ಇರಿಸ ಬಾರದು. ನೀನು ಮಾತ್ರವೇನು ನಾನೂ, ಶ್ರೀಮಹಾದೇವನೂ, ನಿನ್ನ ತಂದೆ ಸ್ವಾಯಂಭುವಮನು ಮತ್ತು ನಿನ್ನ ಗುರುಗಳಾದ ಈ ನಾರದಮಹರ್ಷಿಗಳೂ ಕೂಡ ಪರವಶರಾಗಿ ಅವನ ಆಜ್ಞೆಯನ್ನೇ ಪಾಲಿಸುತ್ತಿದ್ದಾರೆ.॥11॥
(ಶ್ಲೋಕ - 12)
ಮೂಲಮ್
ನ ತಸ್ಯ ಕಶ್ಚಿತ್ತಪಸಾ ವಿದ್ಯಯಾ ವಾ
ನ ಯೋಗವೀರ್ಯೇಣ ಮನೀಷಯಾ ವಾ ।
ನೈವಾರ್ಥಧರ್ಮೈಃ ಪರತಃ ಸ್ವತೋ ವಾ
ಕೃತಂ ವಿಹಂತುಂ ತನುಭೃದ್ವಿಭೂಯಾತ್ ॥
ಅನುವಾದ
ಆ ಭಗವಂತನ ವಿಧಾನವನ್ನು ದೇಹಧಾರಿಯಾದ ಯಾವನೂ ಕೂಡ ತಪಸ್ಸಿನಿಂದಾಗಲೀ, ವಿದ್ಯೆಯಿಂದಾಗಲೀ, ಯೋಗಬಲದಿಂದಾಗಲೀ, ಬುದ್ದಿಬಲದಿಂದಾಗಲೀ, ಅರ್ಥದಿಂದಾಗಲೀ ಅಥವಾ ಧರ್ಮಶಕ್ತಿಯಿಂದಾಗಲೀ, ಸ್ವತಃ ತನ್ನಿಂದಾಗಲೀ, ಬೇರೆಯವರ ಸಹಾಯದಿಂದಾಗಲೀ ಮೀರುವುದಕ್ಕೆ ಆಗುವುದಿಲ್ಲ. ॥12॥
(ಶ್ಲೋಕ - 13)
ಮೂಲಮ್
ಭವಾಯ ನಾಶಾಯ ಚ ಕರ್ಮ ಕರ್ತುಂ
ಶೋಕಾಯ ಮೋಹಾಯ ಸದಾ ಭಯಾಯ ।
ಸುಖಾಯ ದುಃಖಾಯ ಚ ದೇಹಯೋಗ-
ಮವ್ಯಕ್ತದಿಷ್ಟಂ ಜನತಾಂಗ ಧತ್ತೇ ॥
ಅನುವಾದ
ಪ್ರಿಯವ್ರತ! ಆ ಅವ್ಯಕ್ತ ಈಶ್ವರನು ದಯಪಾಲಿಸಿದ ಶರೀರವನ್ನು ಧರಿಸಿಯೇ ಎಲ್ಲ ಜೀವಿಗಳು ಸದಾಕಾಲ ಹುಟ್ಟು, ಸಾವು, ಶೋಕ, ಮೋಹ, ಭಯ, ಸುಖ-ದುಃಖಗಳನ್ನು ಅನುಭವಿಸುತ್ತಾರೆ. ಈ ಶರೀರದ ಮೂಲಕವಾಗಿಯೇ ಕರ್ಮಗಳನ್ನು ಮಾಡುತ್ತಿರುತ್ತಾರೆ ಮತ್ತೂ ಮೋಕ್ಷವನ್ನೂ ಸಾಧಿಸುತ್ತಾರೆ. ॥13॥
(ಶ್ಲೋಕ - 14)
ಮೂಲಮ್
ಯದ್ವಾಚಿ ತಂತ್ಯಾಂ ಗುಣಕರ್ಮದಾಮಭಿಃ
ಸುದುಸ್ತರೈರ್ವತ್ಸ ವಯಂ ಸುಯೋಜಿತಾಃ ।
ಸರ್ವೇ ವಹಾಮೋ ಬಲಿಮೀಶ್ವರಾಯ
ಪ್ರೋತಾ ನಸೀವ ದ್ವಿಪದೇ ಚತುಷ್ಪದಃ ॥
ಅನುವಾದ
ವತ್ಸ! ಮೂಗುದಾರ ಹಾಕಲ್ಪಟ್ಟ ಪಶುಗಳು ಮನುಷ್ಯರ ಭಾರವನ್ನು ಹೊರುವಂತೆಯೇ ನಾವೆಲ್ಲರೂ ಆತನ ವಾಣಿಯಾದ ವೇದವೆಂಬ ಹಗ್ಗದಲ್ಲಿರುವ ತ್ರಿಗುಣಗಳು, ಅವುಗಳಿಗೆ ತಕ್ಕ ಕರ್ಮಗಳು, ಬ್ರಾಹ್ಮಣಾದಿ ವಾಕ್ಯಗಳು ಎಂಬ ಮುಪ್ಪುರಿಯಿಂದ ಬಲವಾಗಿ ಕಟ್ಟಲ್ಪಟ್ಟು ಆತನ ಇಚ್ಛೆಗನುಗುಣನಾಗಿಯೇ ಕರ್ಮಗಳಲ್ಲಿ ತೊಡಗಿ ಅವುಗಳ ಮೂಲಕ ಅವನ ಪೂಜೆ ಯನ್ನು ಮಾಡುತ್ತಾ ಇದ್ದೇವೆ.॥14॥
(ಶ್ಲೋಕ - 15)
ಮೂಲಮ್
ಈಶಾಭಿಸೃಷ್ಟಂ ಹ್ಯವರುನ್ಧ್ಮಹೇಂಗ
ದುಃಖಂ ಸುಖಂ ವಾ ಗುಣಕರ್ಮಸಂಗಾತ್ ।
ಆಸ್ಥಾಯ ತತ್ತದ್ಯದಯುಂಕ್ತ ನಾಥ-
ಶ್ಚಕ್ಷುಷ್ಮತಾಂಧಾ ಇವ ನೀಯಮಾನಾಃ ॥
ಅನುವಾದ
ಮಗು! ನಮ್ಮ ಗುಣ ಮತ್ತು ಕರ್ಮಗಳಿಗೆ ಅನುಸಾರ ಪ್ರಭುವು ನಮ್ಮನ್ನು ಯಾವ ಯೋನಿಯಲ್ಲಿ ಹಾಕಿರುವನೋ, ಅದನ್ನೇ ಸ್ವೀಕರಿಸಿ, ಅವನು ಮಾಡಿದ ವ್ಯವಸ್ಥೆಗನುಸಾರವಾಗಿ ನಾವು ಸುಖ ಅಥವಾ ದುಃಖಗಳನ್ನು ಅನುಭವಿಸುತ್ತಿದ್ದೇವೆ. ಕುರುಡನು ಕಣ್ಣುಳ್ಳವನಿಂದ ನಡೆಸಲ್ಪಡುವಂತೆ ನಾವುಗಳೂ ಕೂಡ ಅವನ ಇಚ್ಛೆಯನ್ನೇ ಅನುಸರಿಸಬೇಕಾಗುತ್ತದೆ. ॥15॥
(ಶ್ಲೋಕ - 16)
ಮೂಲಮ್
ಮುಕ್ತೋಪಿ ತಾವದ್ಬಿಭೃಯಾತ್ಸ್ವದೇಹ-
ಮಾರಬ್ಧಮಶ್ನನ್ನಭಿಮಾನಶೂನ್ಯಃ ।
ಯಥಾನುಭೂತಂ ಪ್ರತಿಯಾತನಿದ್ರಃ
ಕಿಂ ತ್ವನ್ಯದೇಹಾಯ ಗುಣಾನ್ನ ವೃಂಕ್ತೇ ॥
ಅನುವಾದ
ಜೀವನ್ಮುಕ್ತರೂ ಕೂಡ ಶರೀರ ಧರಿಸಿಕೊಂಡು ಪ್ರಾರಬ್ಧ ಕರ್ಮಗಳನ್ನು ಭೋಗಿಸುತ್ತಾರೆ. ಅವರ ಶರೀರದಿಂದ ಕರ್ಮಗಳು ಜರುಗಿತ್ತಿದ್ದರೂ ಕೂಡ ಕರ್ಮಗಳ ಬಂಧನದಲ್ಲಿ ಬೀಳುವುದಿಲ್ಲ. ಹೇಗೆ ಕನಸಿನಲ್ಲಿ ಅನುಭವಿಸಿದ ವಸ್ತುಗಳಿಗೆ ಜಗತ್ತಿನಲ್ಲಿ ಮಹತ್ವವಿರುವುದಿಲ್ಲವೋ ಹಾಗೆಯೇ ಜ್ಞಾನವಾದ ನಂತರ ಅವರಿಗೆ ಎಲ್ಲವೂ ಮಿಥ್ಯೆಯೇ ॥16॥
(ಶ್ಲೋಕ - 17)
ಮೂಲಮ್
ಭಯಂ ಪ್ರಮತ್ತಸ್ಯ ವನೇಷ್ವಪಿ ಸ್ಯಾ-
ದ್ಯತಃ ಸ ಆಸ್ತೇ ಸಹಷಟ್ಸಪತ್ನಃ ।
ಜಿತೇಂದ್ರಿಯಸ್ಯಾತ್ಮರತೇರ್ಬುಧಸ್ಯ
ಗೃಹಾಶ್ರಮಃ ಕಿಂ ನು ಕರೋತ್ಯವದ್ಯಮ್ ॥
ಅನುವಾದ
ಇಂದ್ರಿಯಗಳಿಗೆ ವಶೀಭೂತನಾಗಿ ವನ-ವನಗಳಲ್ಲಿ ಸಂಚರಿಸುತ್ತಿದ್ದರೂ ಅವನಿಗೆ ಜನ್ಮ-ಮರಣದ ಭಯ ಇದ್ದೇ ಇರುತ್ತದೆ. ಏಕೆಂದರೆ, ವಶವಲ್ಲದ ಮನಸ್ಸು ಮತ್ತು ಇಂದ್ರಿಯಗಳೆಂಬ ಆರು ಶತ್ರುಗಳು ಎಂದೂ ಅವನ ಬೆನ್ನುಬಿಡುವುದಿಲ್ಲ. ಬುದ್ಧಿವಂತ ನಾದವನು ಇಂದ್ರಿಯಗಳನ್ನು ಜಯಿಸಿ, ತನ್ನ ಆತ್ಮದಲ್ಲೇ ರಮಮಾಣನಾಗಿರುತ್ತಾನೆ. ಅಂತಹ ಜ್ಞಾನಿಗೆ ಗೃಹಸ್ಥಾಶ್ರ ಮವು ಯಾವ ಕೆಡುಕನ್ನೂ ಮಾಡುವುದಿಲ್ಲ. ॥17॥
(ಶ್ಲೋಕ - 18)
ಮೂಲಮ್
ಯಃ ಷಟ್ ಸಪತ್ನಾನ್ ವಿಜಿಗೀಷಮಾಣೋ
ಗೃಹೇಷು ನಿರ್ವಿಶ್ಯ ಯತೇತ ಪೂರ್ವಮ್ ।
ಅತ್ಯೇತಿ ದುರ್ಗಾಶ್ರಿತ ಊರ್ಜಿತಾರೀನ್
ಕ್ಷೀಣೇಷು ಕಾಮಂ ವಿಚರೇದ್ವಿಪಶ್ಚಿತ್ ॥
ಅನುವಾದ
ಆ ಆರು ಶತ್ರುಗಳನ್ನು ಜಯಿಸಲು ಬಯಸುವವನು ದುರ್ಗವನ್ನು ಆಶ್ರಯಿಸಿ ಶತ್ರುಗಳನ್ನು ಜಯಿಸುವ ರಾಜ ನಂತೆ ಮೊದಲು ಗೃಹಸ್ಥಾಶ್ರಮದಲ್ಲಿ ನೆಲೆಸಿ ಅದರ ರಕ್ಷಣೆ ಯಲ್ಲಿದ್ದು ಆ ಒಳ ಶತ್ರುಗಳನ್ನು ಗೆಲ್ಲಬೇಕು. ಆ ಶತ್ರುಗಳು ಬಲಗುಂದಿದ ಬಳಿಕ ಜ್ಞಾನಿಯು ತನ್ನ ಇಷ್ಟಬಂದಂತೆ ಸಂಚರಿಸಬಹುದು. ॥18॥
(ಶ್ಲೋಕ - 19)
ಮೂಲಮ್
ತ್ವಂ ತ್ವಬ್ಜನಾಭಾಂಘ್ರಿಸರೋಜಕೋಶ-
ದುರ್ಗಾಶ್ರಿತೋ ನಿರ್ಜಿತಷಟ್ಸಪತ್ನಃ ।
ಭುಂಕ್ಷ್ವೇಹ ಭೋಗಾನ್ ಪುರುಷಾತಿದಿಷ್ಟಾನ್
ವಿಮುಕ್ತಸಂಗಃ ಪ್ರಕೃತಿಂ ಭಜಸ್ವ ॥
ಅನುವಾದ
ನೀನು ಸ್ವಾಮಿಯಾದ ಪದ್ಮನಾಭನ ಅಡಿದಾವರೆಗಳೆಂಬ ದುರ್ಗವನ್ನು ಆಶ್ರಯಿಸಿ ಈಗಾಗಲೇ ಆ ಶತ್ರುಗಳನ್ನು ಜಯಿಸಿ ಬಿಟ್ಟಿರುವೆ. ಹೀಗಿದ್ದರೂ ಆ ಪುರಾಣಪುರುಷನು ದಯಪಾಲಿಸಿರುವ ಭೋಗಗಳನ್ನು ಅನುಭವಿಸು. ಅನಂತರ ನಿಃಸಂಗನಾಗಿ ನಿನ್ನ ಸ್ವರೂಪದಲ್ಲಿ ನೆಲೆಗೊಳ್ಳುವೆಯಂತೆ.॥19॥
(ಗದ್ಯ - 20)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಇತಿ ಸಮಭಿಹಿತೋ ಮಹಾಭಾಗವತೋ ಭಗವತಸಿ ಭುವನಗುರೋರನುಶಾಸನಮಾತ್ಮನೋ ಲಘುತಯಾವನತ ಶಿರೋಧರೋ ಬಾಢಮಿತಿ ಸಬಹುಮಾನಮುವಾಹ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ರಾಜನೇ! ತ್ರಿಲೋಕಗಳ ಗುರುಗಳಾದ ಬ್ರಹ್ಮದೇವರು ಹೀಗೆ ಹೇಳಲು ಪರಮ ಭಾಗವತ ಪ್ರಿಯವ್ರತನು ಆ ದೇವದೇವನ ಮುಂದೆ ತಾನು ಅತಿ ಚಿಕ್ಕವನು ಎಂದು ಅರಿತು ವಿನಯದಿಂದ ತಲೆ ಬಾಗಿಸಿ ‘ಹಾಗೆಯೇ ಆಗಲಿ’ ಎಂದು ಅತ್ಯಂತ ಗೌರವದಿಂದ ಅವರ ಆಜ್ಞೆಯನ್ನು ಶಿರಸಾವಹಿಸಿದನು. ॥20॥
ಮೂಲಮ್
(ಗದ್ಯ - 21)
ಭಗವಾನಪಿ ಮನುನಾ ಯಥಾವದುಪಕಲ್ಪಿತಾಪಚಿತಿಃ ಪ್ರಿಯವ್ರತನಾರದಯೋರವಿಷಮಮಭಿ ಸಮೀಕ್ಷ- ಮಾಣಯೋರಾತ್ಮಸಮವಸ್ಥಾನಮವಾಙ್ಮನಸಂ ಕ್ಷಯಮವ್ಯವಹೃತಂ ಪ್ರವರ್ತಯನ್ನಗಮತ್ ॥
ಅನುವಾದ
ಆಗ ಸ್ವಾಯಂಭುವ ಮನುವು ಪ್ರಸನ್ನನಾಗಿ ಭಗವಾನ್ ಬ್ರಹ್ಮ ದೇವರನ್ನು ಯಥಾವಿಧಿಯಾಗಿ ಪೂಜಿಸಿದನು. ಇದಾದ ಬಳಿಕ ಮನಸ್ಸು ಮತ್ತು ವಾಣಿಗೂ ವಿಷಯನಲ್ಲದ, ತನಗೆ ಆಶ್ರಯನಾದ, ಸರ್ವವ್ಯವಹಾರ ಅತೀತನಾದ ಪರಬ್ರಹ್ಮ ನನ್ನು ಚಿಂತಿಸುತ್ತಾ ಅವರು ತನ್ನ ಲೋಕಕ್ಕೆ ಹೊರಟು ಹೋದರು. ಆಗ ಪ್ರಿಯವ್ರತ ಮತ್ತು ನಾರದರು ಮುಗ್ಧರಾಗಿ ಅವರ ಕಡೆಗೆ ನೋಡುತ್ತಲೇ ಇದ್ದರು.॥21॥
(ಗದ್ಯ - 22)
ಮೂಲಮ್
ಮನುರಪಿ ಪರೇಣೈವಂ ಪ್ರತಿಸಂಧಿತಮನೋರಥಃ ಸುರರ್ಷಿವರಾನುಮತೇನಾತ್ಮಜಮಖಿಲಧರಾಮಂಡಲ- ಸ್ಥಿತಿಗುಪ್ತಯ ಆಸ್ಥಾಪ್ಯ ಸ್ವಯಮತಿವಿಷಮವಿಷಯವಿಷಜ- ಲಾಶಯಾಶಾಯಾ ಉಪರರಾಮ ॥
ಅನುವಾದ
ಹೀಗೆ ಬ್ರಹ್ಮದೇವರ ದಯೆಯಿಂದ ತಮ್ಮ ಮನೋರಥವು ಈಡೇರಲು ಸ್ವಾಯಂಭುವಮನುವು ಶ್ರೀನಾರದರ ಅಪ್ಪಣೆಯಂತೆ ಪ್ರಿಯವ್ರತನಿಗೆ ಸಮಸ್ತ ಭೂಮಂಡಲದ ಆಧಿಪತ್ಯವನ್ನು ವಹಿಸಿಕೊಟ್ಟು, ತಾನು ಇಂದ್ರಿಯವಿಷಯಗಳೆಂಬ ವಿಷಜಲದಿಂದ ತುಂಬಿರುವ ಗೃಹಸ್ಥಾಶ್ರಮರೂಪವಾದ ದುಸ್ತರವಾದ ಭವಾಬ್ಧಿಯ ಆಸೆಯನ್ನು ಬಿಟ್ಟು ನಿವೃತ್ತನಾದನು.॥22॥
(ಗದ್ಯ - 23)
ಮೂಲಮ್
ಇತಿ ಹ ವಾವ ಸ ಜಗತೀಪತಿರೀಶ್ವರೇಚ್ಛಯಾಧಿನಿವೇಶಿತ ಕರ್ಮಾಧಿಕಾರೋಖಿಲ ಜಗದ್ಬಂಧಧ್ವಂಸನಪರಾನುಭಾವಸ್ಯ ಭಗವತ ಆದಿಪುರುಷಸ್ಯಾಂಘ್ರಿಯುಗಲಾನವರತಧ್ಯಾನಾನುಭಾವೇನ- ಪರಿರಂಧಿತಕಷಾಯಾಶಯೋವದಾತೋಪಿ ಮಾನವರ್ಧನೋ ಮಹತಾಂ ಮಹೀತಲಮನುಶಶಾಸ ॥
ಅನುವಾದ
ಈಗ ಆ ಪ್ರಿಯವ್ರತ ಭೂಪತಿಯು ಭಗವಂತನ ಇಚ್ಛೆಯಂತೆ ರಾಜ್ಯವನ್ನಾಳುವ ಕಾರ್ಯದಲ್ಲಿ ನಿಯುಕ್ತನಾದನು. ಸಮಸ್ತ ಜಗತ್ತನ್ನು ಬಂಧನದಿಂದ ಮುಕ್ತಗೊಳಿಸಲು ಪರಮಸಮರ್ಥನಾದ ಆದಿಪುರುಷನಾದ ಶ್ರೀಭಗವಂತನ ಅಡಿದಾವರೆಗಳನ್ನು ನಿರಂತರವಾಗಿ ಧ್ಯಾನ ಮಾಡುತ್ತಿದ್ದುದರಿಂದ ರಾಗಾದಿ ಕಲ್ಮಶಗಳೆಲ್ಲವೂ ನಾಶವಾಗಿ ಹೋಗಿ ಆತನ ಹೃದಯವು ಅತ್ಯಂತ ಶುದ್ಧವಾಗಿ ಹೋಗಿತ್ತು. ಆದರೂ ಅವನು ಹಿರಿಯರ ಮಾತನ್ನು ನಡೆಸಿ ಕೊಡುವುದಕ್ಕಾಗಿ ಭೂಮಿಯನ್ನು ಆಳತೊಡಗಿದನು. ॥23॥
(ಗದ್ಯ - 24)
ಮೂಲಮ್
ಅಥ ಚ ದುಹಿತರಂ ಪ್ರಜಾಪತೇರ್ವಿಶ್ವಕರ್ಮಣ ಉಪಯೇಮೇ ಬರ್ಹಿಷ್ಮತೀಂ ನಾಮ ತಸ್ಯಾಮು ಹ ವಾವ ಆತ್ಮಜಾನಾತ್ಮಸಮಾನಶೀಲಗುಣಕರ್ಮರೂಪವೀರ್ಯೋ ದಾರಾಂದಶ ಭಾವಯಾಂ ಬಭೂವ ಕನ್ಯಾಂ ಚ ಯವೀ ಯಸೀಮೂರ್ಜಸ್ವತೀಂ ನಾಮ ॥
ಅನುವಾದ
ಅನಂತರ ಅವನು ಪ್ರಜಾಪತಿ ವಿಶ್ವಕರ್ಮನ ಮಗಳಾದ ಬರ್ಹಿಷ್ಮತಿಯನ್ನು ವಿವಾಹವಾಗಿ ಅವಳಲ್ಲಿ ಹತ್ತುಮಂದಿ ಪುತ್ರರನ್ನು ಪಡೆದನು. ಅವರೆಲ್ಲರೂ ಶೀಲ, ಗುಣ, ಕರ್ಮನಿಷ್ಠೆ ಮತ್ತು ಪರಾಕ್ರಮಗಳಲ್ಲಿ ತಂದೆಗೆ ಸಮಾನರಾಗಿದ್ದರು. ಆ ಪುತ್ರರ ನಂತರ ಅವರಿಗೆ ತಂಗಿಯಾಗಿ ‘ಊರ್ಜಸ್ವತಿ’ ಎಂಬ ಕನ್ಯೆಯನ್ನು ಪಡೆದುಕೊಂಡನು. ॥24॥
(ಗದ್ಯ - 25)
ಮೂಲಮ್
ಆಗ್ನೀಧ್ರೇಧ್ಮಜಿಹ್ವಯಜ್ಞಬಾಹುಮಹಾವೀರಹಿರಣ್ಯರೇತೋಘೃತಪೃಷ್ಠ ಸವನಮೇಧಾತಿಥಿವೀತಿಹೋತ್ರಕವಯ ಇತಿ ಸರ್ವ ಏವಾಗ್ನಿನಾಮಾನಃ ॥
ಅನುವಾದ
ಆಗ್ನಿಧ್ರ, ಇಧ್ಮಜಿಹ್ವ, ಯಜ್ಞಬಾಹು, ಮಹಾವೀರ, ಹಿರಣ್ಯರೇತಸ, ಘೃತಪೃಷ್ಠ, ಸವನ ಮೇಧಾತಿಥಿ, ವೀತಿ ಹೋತ್ರ ಮತ್ತು ಕವಿ ಎಂಬುವರೇ ಪ್ರಿಯವ್ರತನ ಅಗ್ನಿನಾಮಕ ಹತ್ತುಮಂದಿ ಪುತ್ರರು. ॥25॥
(ಗದ್ಯ - 26)
ಮೂಲಮ್
ಏತೇಷಾಂ ಕವಿರ್ಮಹಾವೀರಃ ಸವನ ಇತಿ ತ್ರಯ ಆಸನ್ನೂರ್ಧ್ವರೇತಸಸ್ತ ಆತ್ಮವಿದ್ಯಾಯಾಮ್ ಅರ್ಭಭಾವಾದಾರಭ್ಯ ಕೃತಪರಿಚಯಾಃ ಪಾರಮಹಂಸ್ಯಮೇವಾಶ್ರಮಮಭಜನ್ ॥
ಅನುವಾದ
ಇವರಲ್ಲಿ ಕವಿ, ಮಹಾವೀರ, ಸವನ ಎಂಬ ಮೂವರು ನೈಷ್ಠಿಕ ಬ್ರಹ್ಮಚಾರಿಗಳಾದರು. ಇವರು ಬಾಲ್ಯದಿಂದಲೇ ಆತ್ಮವಿದ್ಯೆಯನ್ನು ಅಭ್ಯಾಸ ಮಾಡುತ್ತಾ ಕೊನೆಗೆ ಸಂನ್ಯಾಸಾಶ್ರಮವನ್ನು ಸ್ವೀಕರಿಸಿದರು.॥26॥
(ಗದ್ಯ - 27)
ಮೂಲಮ್
ತಸ್ಮಿನ್ನು ಹ ವಾ ಉಪಶಮಶೀಲಾಃ ಪರಮರ್ಷಯಃ ಸಕಲಜೀವನಿಕಾಯಾವಾಸಸ್ಯ ಭಗವತೋ ವಾಸುದೇವಸ್ಯ ಭೀತಾನಾಂ ಶರಣಭೂತಸ್ಯ ಶ್ರೀಮಚ್ಚರಣಾರವಿಂದಾವಿರತಸ್ಮರಣಾವಿಗಲಿತಪರಮಭಕ್ತಿಯೋಗಾನುಭಾವೇನ ಪರಿಭಾವಿತಾಂ ತರ್ಹೃದಯಾಧಿಗತೇ ಭಗವತಿ ಸರ್ವೇಷಾಂ ಭೂತಾನಾಮಾತ್ಮಭೂತೇ ಪ್ರತ್ಯಗಾತ್ಮನ್ಯೇವಾತ್ಮನಸ್ತಾದಾತ್ಮ್ಯಮವಿಶೇಷೇಣ ಸಮೀಯುಃ ॥
ಅನುವಾದ
ನಿವೃತ್ತಿ ಧರ್ಮನಿಷ್ಠರಾದ ಆ ಮಹರ್ಷಿಗಳು ಸಂನ್ಯಾಸಾಶ್ರಮದಲ್ಲೇ ಇದ್ದುಕೊಂಡು ಸಮಸ್ತ ಜೀವರಿಗೆ ಅಧಿಷ್ಠಾನ ಮತ್ತು ಭವ ಬಂಧನದಿಂದ ಹೆದರಿದ ಜನರಿಗೆ ಆಸರೆ ನೀಡುವ ಭಗವಾನ್ ಶ್ರೀವಾಸುದೇವನ ಪರಮಸುಂದರ ಚರಣಾರವಿಂದಗಳನ್ನು ನಿರಂತರವಾಗಿ ಧ್ಯಾನಮಾಡುತ್ತಿದ್ದರು. ಅದರಿಂದ ಪ್ರಾಪ್ತವಾದ ಶ್ರೇಷ್ಠವಾದ ಅಖಂಡಭಕ್ತಿಯೋಗದಿಂದ ಅವರ ಅಂತಃಕರಣವು ಪೂರ್ಣವಾಗಿ ಶುದ್ಧವಾಯಿತು. ಅದರಲ್ಲಿ ಶ್ರೀಭಗವಂತನು ಆವಿರ್ಭವಿಸಿದನು. ಆಗ ದೇಹವೇ ಮುಂತಾದ ಉಪಾಧಿಗಳು ತೊಲಗಿ ಹೋಯಿತು. ಅವರು ಎಲ್ಲ ಜೀವಿಗಳಿಗೂ ಆತ್ಮಭೂತನಾದ ಶ್ರೀಪರಮಾತ್ಮನಲ್ಲಿ ತಾದಾತ್ಮ್ಯವನ್ನು ಪಡೆದುಕೊಂಡರು. ॥27॥
(ಗದ್ಯ - 28)
ಮೂಲಮ್
ಅನ್ಯಸ್ಯಾಮಪಿ ಜಾಯಾಯಾಂ ತ್ರಯಃ ಪುತ್ರಾ ಆಸನ್ನುತ್ತಮಸ್ತಾಮಸೋ ರೈವತ ಇತಿ ಮನ್ವಂತರಾಧಿಪತಯಃ ॥
ಅನುವಾದ
ಪ್ರಿಯವ್ರತನ ಮತ್ತೊಬ್ಬ ಮಡದಿಯಲ್ಲಿ ಉತ್ತಮ, ತಾಮಸ, ರೈವತ ಎಂಬ ಮೂವರು ಪುತ್ರರು ಜನಿಸಿದರು. ಅವರು ತಮ್ಮ ಹೆಸರಿನ ಮನ್ವಂತರಗಳಿಗೆ ಅಧಿಪತಿಗಳಾದರು.॥28॥
(ಗದ್ಯ - 29)
ಮೂಲಮ್
ಏವಮುಪಶಮಾಯನೇಷು ಸ್ವತನಯೇಷ್ವಥ ಜಗತೀಪತಿರ್ಜಗತಿಮರ್ಬುದಾನ್ಯೇಕಾದಶ ಪರಿವತ್ಸರಾಣಾಮ ವ್ಯಾಹತಾಖಿಲಪುರುಷಕಾರಸಾರಸಂಭೃತದೋರ್ದಂಡಯುಗಲಾಪೀಡಿತವೌರ್ವೀಗುಣಸ್ತನಿತವಿರಮಿತ ಧರ್ಮಪ್ರತಿ ಪಕ್ಷೋ ಬರ್ಹಿಷ್ಮತ್ಯಾಶ್ಚಾನುದಿನಮೇಧಮಾನಪ್ರಮೋದಪ್ರಸರಣಯೌಷಿಣ್ಯವ್ರೀಡಾಪ್ರಮುಷಿತಹಾಸಾವಲೋಕರುಚಿರಕ್ಷ್ವೇಲ್ಯಾದಿಭಿಃ ಪರಾಭೂಯಮಾನ ವಿವೇಕ ಇವಾನವಬುಧ್ಯಮಾನ ಇವ ಮಹಾಮನಾ ಬುಭುಜೇ ॥
ಅನುವಾದ
ಹೀಗೆ ಕವಿಯೇ ಮುಂತಾದ ಮೂವರು ಪುತ್ರರು ನಿವೃತ್ತಿ ಪರಾಯಣರಾದ ಬಳಿಕ ಪ್ರಿಯವ್ರತ ಮಹಾರಾಜನು ಹನ್ನೊಂದು ಅರ್ಬುದವರ್ಷಗಳವರೆಗೆ ರಾಜ್ಯಶಾಸನವನ್ನು ಮಾಡಿದನು. ಅಖಂಡಪುರುಷಾರ್ಥಮಯವೂ, ಪರಾಕ್ರಮ ನಿಧಿಯೂ ಆದ ಅವನು ತನ್ನ ಭುಜಗಳಿಂದ ಬಿಲ್ಲಿನ ನಾಣನ್ನೆಳೆದು ಟಂಕಾರ ಮಾಡಿದೊಡನೆಯೇ ಧರ್ಮ ದ್ರೋಹಿಗಳು ಗಡ-ಗಡನೆ ನಡುಗಿ ಎಲ್ಲಿಯೋ ಅವಿತು ಕೊಂಡು ಬಿಡುತ್ತಿದ್ದರು. ಪ್ರಾಣವಲ್ಲಭೆಯಾದ ಬರ್ಹಿಷ್ಮತಿಯ ಪ್ರತಿ ದಿನವು ಹೆಚ್ಚುತ್ತಿರುವ ಆಮೋದ-ಪ್ರಮೋದ, ಇದಿರ್ಗೊಳ್ಳುವಿಕೆ ಮುಂತಾದ ಕ್ರೀಡೆಗಳಿಂದಾಗಿ ಹಾಗೂ ಸ್ತ್ರೀಸಹಜವಾದ ಹಾವ-ಭಾವಗಳನ್ನು ತೋರುವುದು, ಲಜ್ಜೆಯಿಂದ ಸಂಕೋಚಗೊಂಡು ಕಿರುನಗೆಯಿಂದ ಕೂಡಿದ ದೃಷ್ಟಿಯನ್ನು ಬೀರುವುದು, ಮನಸ್ಸಿಗೆ ರುಚಿಸುವ ವಿನೋದಗಳನ್ನು ಮಾಡುವುದು ಇವೇ ಮುಂತಾದವುಗಳಿಂದ ಆಕೆಗೆ ವಶನಾಗಿ ವಿವೇಕಹೀನನಾದವನಂತೆ ಆತ್ಮಸ್ವರೂಪವನ್ನು ಮರೆತವನಂತೆ ಭೋಗಗಳನ್ನು ಅನುಭವಿಸುತ್ತಿದ್ದರೂ ವಾಸ್ತವವಾಗಿ ಆತನು ಅದರಲ್ಲಿ ಆಸಕ್ತನಾಗಿರಲಿಲ್ಲ.॥29॥
(ಗದ್ಯ - 30)
ಮೂಲಮ್
ಯಾವದವಭಾಸಯತಿ ಸುರಗಿರಿಮನುಪರಿಕ್ರಾಮನ್ ಭಗವಾನಾದಿತ್ಯೋ ವಸುಧಾತಲಮರ್ಧೇನೈವ ಪ್ರತಪತ್ಯರ್ಧೇನಾ ವಚ್ಛಾದಯತಿ ತದಾ ಹಿ ಭಗವದುಪಾಸನೋ ಪಚಿತಾತಿಪುರುಷಪ್ರಭಾವಸ್ತದನಭಿನಂದನ್ ಸಮಜವೇನ ರಥೇನ ಜ್ಯೋತಿರ್ಮಯೇನ ರಜನೀಮಪಿ ದಿನಂ ಕರಿಷ್ಯಾಮೀತಿ ಸಪ್ತಕೃತ್ವಸ್ತರಣಿ ಮನುಪರ್ಯಕ್ರಾಮದ್ವತೀಯ ಇವ ಪತಂಗಃ ॥
ಅನುವಾದ
ಒಮ್ಮೆ ಅವನು ಸೂರ್ಯನು ಸುಮೇರು ಪರ್ವತವನ್ನು ಪ್ರದಕ್ಷಿಣೆ ಮಾಡುತ್ತಾ ಲೋಕಾಲೋಕದವರೆಗೆ ಭೂಮಿಯ ಒಂದು ಭಾಗವನ್ನು ನೋಡಿದಾಗ ಅದರಲ್ಲಿ ಅರ್ಧಭಾಗಕ್ಕೆ ಮಾತ್ರ ಪ್ರಕಾಶ ಬೀಳುತ್ತಿದ್ದು, ಉಳಿದ ಅರ್ಧಭಾಗದಲ್ಲಿ ಕತ್ತಲೆಯು ಕವಿಯುತ್ತಿರುವುದನ್ನು ನೋಡಿ ಅವನಿಗೆ ಸರಿ ಬೀಳಲಿಲ್ಲ. ‘ನಾನು ರಾತ್ರಿಯನ್ನು ಹಗಲನ್ನಾಗಿ ಮಾಡುವೆನು’ ಎಂದು ಸಂಕಲ್ಪಿಸಿ, ಒಂದು ಜ್ಯೋತಿರ್ಮಯ ರಥವನ್ನು ಏರಿ ಇನ್ನೊಬ್ಬ ಸೂರ್ಯನಂತೆ ಆತನ ಹಿಂದೆ-ಹಿಂದೆಯೇ ಹೋಗುತ್ತಾ ಭೂಮಿಯನ್ನು ಏಳು ಬಾರಿ ಪ್ರದಕ್ಷಿಣೆ ಮಾಡಿದನು. ಭಗವಂತನ ಉಪಾಸನೆ ಮಾಡಿದ್ದರಿಂದ ಅವನಿಗೆ ಇಂತಹ ಅಲೌಕಿಕ ಪ್ರಭಾವವು ಹೆಚ್ಚಾಗಿ ಉಂಟಾಗಿತ್ತು. ॥30॥
(ಗದ್ಯ - 31)
ಮೂಲಮ್
ಯೇ ವಾ ಉ ಹ ತದ್ರಥಚರಣನೇಮಿಕೃತಪರಿಖಾತಾಸ್ತೇ ಸಪ್ತ ಸಿಂಧವ ಆಸನ್ಯತ ಏವ ಕೃತಾಃ ಸಪ್ತ ಭುವೋ ದ್ವೀಪಾಃ ॥
ಅನುವಾದ
ಆ ಸಮಯದಲ್ಲಿ ಅವನ ರಥದ ಚಕ್ರಗಳು ಮಾಡಿದ ಗೆರೆಗಳ ಗುರುತುಗಳೇ ಏಳು ಸಮುದ್ರಗಳಾದವು. ಅವುಗಳಿಂದ ಪೃಥ್ವಿಯಲ್ಲಿ ಏಳು ದ್ವೀಪಗಳು ಉಂಟಾದವು. ॥31॥
(ಗದ್ಯ - 32)
ಮೂಲಮ್
ಜಂಬೂಪ್ಲಕ್ಷಶಾಲ್ಮಲಿ- ಕುಶಕ್ರೌಂಚಶಾಕಪುಷ್ಕರಸಂಜ್ಞಾಸ್ತೇಷಾಂ ಪರಿಮಾಣಂ ಪೂರ್ವಸ್ಮಾತ್ಪೂರ್ವಸ್ಮಾದುತ್ತರ ಉತ್ತರೋ ಯಥಾಸಂಖ್ಯಂ ದ್ವಿಗುಣಮಾನೇನ ಬಹಿಃ ಸಮಂತತ ಉಪಕ್ಲೃಪ್ತಾಃ ॥
ಅನುವಾದ
ಅವುಗಳ ಹೆಸರು ಕ್ರಮವಾಗಿ ಜಂಬೂ, ಪ್ಲಕ್ಷ, ಶಾಲ್ಮಲಿ, ಕುಶ, ಕ್ರೌಂಚ, ಶಾಕ ಮತ್ತು ಪುಷ್ಕರವೆಂದಾಯಿತು. ಅವುಗಳಲ್ಲಿ ಮುಂದು-ಮುಂದಿನ ದ್ವೀಪಗಳು ಹಿಂದು-ಹಿಂದಿನ ದ್ವೀಪಕ್ಕೆ ಎರಡರಷ್ಟು ವಿಸ್ತಾರವಾಗಿದ್ದು, ಅವು ಸಮುದ್ರದ ಹೊರಭಾಗದಲ್ಲಿ ಭೂಮಿಯ ನಾಲ್ಕೂ ಕಡೆಗಳಲ್ಲಿಯೂ ಹರಡಿಕೊಂಡಿವೆ.॥32॥
(ಗದ್ಯ - 33)
ಮೂಲಮ್
ಕ್ಷಾರೋದೇಕ್ಷುರಸೋದಸುರೋದಘೃತೋದಕ್ಷೀರೋ- ದದಧಿಮಂಡೋದಶುದ್ಧೋದಾಃ ಸಪ್ತ ಜಲಧಯಃ ಸಪ್ತ ದ್ವೀಪಪರಿಖಾ ಇವಾಭ್ಯಂತರದ್ವೀಪಸಮಾನಾ ಏಕೈಕಶ್ಯೇನ ಯಥಾನುಪೂರ್ವಂ ಸಪ್ತಸ್ವಪಿ ಬಹಿರ್ದ್ವೀಪೇಷು ಪೃಥಕ್ಪರಿತ ಉಪಕಲ್ಪಿತಾಸ್ತೇಷು ಜಂಬ್ವಾದಿಷು ಬರ್ಹಿಷ್ಮತೀಪತಿರನುವ್ರತಾನಾತ್ಮಜಾನಾಗ್ನೀಧ್ರೇಧ್ಮಜಿಹ್ವಯಜ್ಞಬಾಹುಹಿರಣ್ಯರೇ- ತೋಘೃತಪೃಷ್ಠಮೇಧಾತಿಥಿವೀತಿಹೋತ್ರಸಂಜ್ಞಾನ್ ಯಥಾ ಸಂಖ್ಯೇನೈಕೈಕಸ್ಮಿನ್ನೇಕಮೇವಾಧಿಪತಿಂ ವಿದಧೇ ॥
ಅನುವಾದ
ಸಪ್ತ ಸಮುದ್ರಗಳು ಕ್ರಮವಾಗಿ ಉಪ್ಪುನೀರು, ಕಬ್ಬಿನರಸ, ಮದ್ಯರಸ, ತುಪ್ಪ, ಹಾಲು, ಮೊಸರು ಮತ್ತು ಶುದ್ಧೋದಕಗಳಿಂದ ತುಂಬಿವೆ. ಇವು ಏಳೂ ದ್ವೀಪಗಳಿಗೂ ಕಂದಕದಂತಿದ್ದು ತಮ್ಮೊಳಗೆ ಇರುವ ದ್ವೀಪಕ್ಕೆ ಸಮವಾಗಿ ವಿಸ್ತಾರಹೊಂದಿವೆ. ಇವುಗಳಲ್ಲಿ ಒಂದೊಂದು ಕ್ರಮವಾಗಿ ಬೇರೆ-ಬೇರೆ ಏಳೂ ದ್ವೀಪಗಳನ್ನು ಹೊರಗಿನಿಂದ ಸುತ್ತುವರಿದಿದೆ. ಬರ್ಹಿಷ್ಮತಿಪತಿಯಾದ ಪ್ರಿಯವ್ರತನು ತನಗೆ ವಿಧೇಯರಾಗಿದ್ದ ಆಗ್ನೀಧ್ರ, ಇಧ್ಮಜಿಹ್ವ, ಯಜ್ಞಬಾಹು, ಹಿರಣ್ಯರೇತಸ, ಘೃತಪೃಷ್ಠ, ಮೇಧಾತಿಥಿ ಮತ್ತು ವೀತಿಹೋತ್ರರೆಂಬ ಏಳು ಮಂದಿ ಪುತ್ರರನ್ನು ಕ್ರಮವಾಗಿ ಆ ಏಳು ದ್ವೀಪಗಳಲ್ಲಿ ಒಂದೊಂದಕ್ಕೆ ಒಬ್ಬೊಬ್ಬನನ್ನು ರಾಜನನ್ನಾಗಿ ನೇಮಿಸಿದನು. ॥33॥
(ಗದ್ಯ - 34)
ಮೂಲಮ್
ದುಹಿತರಂ ಚೋರ್ಜಸ್ವತೀಂ ನಾಮೋಶನಸೇ ಪ್ರಾಯಚ್ಛದ್ಯಸ್ಯಾಮಾಸೀದ್ದೇವಯಾನೀ ನಾಮ ಕಾವ್ಯಸುತಾ ॥
ಅನುವಾದ
ತನ್ನ ಕನ್ಯೆಯಾಗಿದ್ದ ಊರ್ಜಸ್ವತಿಯನ್ನು ಶುಕ್ರಾಚಾರ್ಯರಿಗೆ ವಿವಾಹಮಾಡಿಕೊಟ್ಟನು. ಅವಳಿಂದ ಶುಕ್ರಕನ್ಯೆ ದೇವಯಾನಿಯು ಜನಿಸಿದಳು. ॥34॥
(ಶ್ಲೋಕ - 35)
ಮೂಲಮ್
ನೈವಂವಿಧಃ ಪುರುಷಕಾರ ಉರುಕ್ರಮಸ್ಯ
ಪುಂಸಾಂ ತದಂಘ್ರಿರಜಸಾ ಜಿತಷಡ್ಗುಣಾನಾಮ್ ।
ಚಿತ್ರಂ ವಿದೂರವಿಗತಃ ಸಕೃದಾದದೀತ
ಯನ್ನಾಮಧೇಯಮಧುನಾ ಸ ಜಹಾತಿ ಬಂಧಮ್ ॥
ಅನುವಾದ
ರಾಜನೇ! ಯಾರು ಭಗವಚ್ಚರ ಣಾರವಿಂದಗಳ ರಜದ ಪ್ರಭಾವದಿಂದ ಶರೀರದ ಹಸಿವು-ಬಾಯಾರಿಕೆ, ಶೋಕ-ಮೋಹ, ಮುಪ್ಪು-ಮರಣ ಎಂಬ ಆರು ಗುಣಗಳನ್ನು ಅಥವಾ ಮನಸ್ಸಿನಿಂದೊಡಗೂಡಿದ ಆರು ಇಂದ್ರಿಯಗಳನ್ನು ಗೆದ್ದುಕೊಂಡಿರುವನೋ, ಅಂತಹ ಭಗವದ್ಭಕ್ತರಿಗೆ ಇಂತಹ ಪುರುಷಾರ್ಥವು ಸಿದ್ದಿಸುವುದರಲ್ಲಿ ಅಚ್ಚರಿಯೇನೂ ಇಲ್ಲ. ಏಕೆಂದರೆ, ಎಲ್ಲ ವರ್ಣಗಳಿಂದಲೂ ಹೊರಗಾದ ಚಾಂಡಾಲರೇ ಆದಿ ನೀಚಯೋನಿಯ ಮನು ಷ್ಯರೂ ಕೂಡ ಭಗವಂತನ ದಿವ್ಯನಾಮವನ್ನು ಕೇವಲ ಒಂದೇ ಬಾರಿ ಉಚ್ಚರಿಸಿದರೂ ಒಡನೆಯೇ ಸಂಸಾರಬಂಧನದಿಂದ ಬಿಡುಗಡೆ ಹೊಂದುತ್ತಾರೆ. ॥35॥
(ಶ್ಲೋಕ - 36)
ಮೂಲಮ್
ಸ ಏವಮಪರಿಮಿತಬಲಪರಾಕ್ರಮ ಏಕದಾ ತು ದೇವರ್ಷಿಚರಣಾನುಶಯನಾನುಪತಿತಗುಣ ವಿಸರ್ಗಸಂಸರ್ಗೇಣಾನಿರ್ವೃತಮಿವಾತ್ಮಾನಂ ಮನ್ಯಮಾನ ಆತ್ಮನಿರ್ವೇದ ಇದಮಾಹ ॥
ಅನುವಾದ
ಇಂತಹ ಎಣೆಯಿಲ್ಲದ ಬಲ-ಪರಾಕ್ರಮದಿಂದ ಸಂಪನ್ನನಾಗಿದ್ದ ಪ್ರಿಯವ್ರತ ಮಹಾರಾಜನು ತಾನು ದೇವರ್ಷಿ ನಾರದರ ಅಡಿದಾವರೆಗಳಲ್ಲಿ ಶರಣಾಗತನಾಗಿ ಪರಮಾತ್ಮ ತತ್ತ್ವವನ್ನು ಅರಿತಿದ್ದರೂ ಮತ್ತೆ ದೈವವಶದಿಂದ ಪ್ರಪಂಚದಲ್ಲಿ ಸಿಕ್ಕಿಹಾಕಿಕೊಂಡಿದ್ದರಿಂದ ನೆಮ್ಮದಿ ಕಳೆದುಕೊಂಡವನಂತೆ ಆಗಿದ್ದುದನ್ನು ಒಮ್ಮೆ ಗಮನಿಸಿ ಮನಸ್ಸಿನಲ್ಲೇ ವಿರಕ್ತನಾಗಿ ಹೀಗೆ ಅಂದುಕೊಂಡನು. ॥36॥
(ಶ್ಲೋಕ - 37)
ಮೂಲಮ್
ಅಹೋ ಅಸಾಧ್ವನುಷ್ಠಿತಂ ಯದಭಿನಿವೇಶಿತೋಹಮಿಂದ್ರಿಯೈರವಿದ್ಯಾರಚಿತವಿಷಮ ವಿಷಯಾಂಧಕೂಪೇ ತದಲಮಲಮಮುಷ್ಯಾ ವನಿತಾಯಾ ವಿನೋದಮೃಗಂ ಮಾಂ ಧಿಗ್ಧಿಗಿತಿ ಗರ್ಹಯಾಂ ಚಕಾರ ॥
ಅನುವಾದ
ಅಯ್ಯೋ! ನಾನು ಎಂತಹ ತಪ್ಪು ಮಾಡಿದೆ! ವಿಷಯಾಸಕ್ತವಾದ ಇಂದ್ರಿಯಗಳು ನನ್ನನ್ನು ಅವಿದ್ಯೆಯಿಂದುಂಟಾದ ವಿಷಮಯವಾದ ವಿಷಯಗಳೆಂಬ ಹಾಳುಬಾವಿಯಲ್ಲಿ ತಳ್ಳಿಬಿಟ್ಟಿವೆಯಲ್ಲ! ಸಾಕು! ಸಾಕು! ಇದು ತುಂಬಾ ಹೆಚ್ಚಾಯಿತು. ಅಕಟಾ! ನಾನು ಹೆಂಗಸಿನ ಆಟದ ಮೃಗವಾಗಿಬಿಟ್ಟೆನು. ಆಕೆಯು ನನ್ನನ್ನು ಕಪಿಯಂತೆ ಕುಣಿಸಿದಳು. ನನಗೆ ಧಿಕ್ಕಾರವಿರಲಿ! ಎಂದು ತನ್ನನ್ನು ನಿಂದಿಸಿಕೊಂಡನು. ॥37॥
(ಶ್ಲೋಕ - 38)
ಮೂಲಮ್
ಪರದೇವತಾಪ್ರಸಾದಾಧಿಗತಾತ್ಮಪ್ರತ್ಯವಮರ್ಶೇನಾನುಪ್ರವೃತ್ತೇಭ್ಯಃ ಪುತ್ರೇಭ್ಯ ಇಮಾಂ ಯಥಾದಾಯಂ ವಿಭಜ್ಯ ಭುಕ್ತಭೋಗಾಂ ಚ ಮಹಿಷೀಂ ಮೃತಕಮಿವ ಸಹಮಹಾವಿಭೂತಿಮಪಹಾಯ ಸ್ವಯಂ ನಿಹಿತ ನಿರ್ವೇದೋ ಹೃದಿ ಗೃಹೀತಹರಿವಿಹಾರಾನುಭಾವೋ ಭಗವತೋ ನಾರದಸ್ಯ ಪದವೀಂ ಪುನರೇವಾನುಸಸಾರ ॥
ಅನುವಾದ
ಪರಮಾರಾಧ್ಯನಾದ ಶ್ರೀಹರಿಯ ಕೃಪೆಯಿಂದ ಅವನ ವಿವೇಕ ವೃತ್ತಿಯು ಎಚ್ಚರಗೊಂಡಿತು. ಅವನು ಇಡೀ ಭೂಮಂಡಲವನ್ನು ವಿಧೇಯರಾಗಿದ್ದ ತನ್ನ ಪುತ್ರರಿಗೆ ಯಥಾಯೋಗ್ಯ ವಾಗಿ ಹಂಚಿಬಿಟ್ಟನು. ಯಾರೊಡನೆ ಅವನು ಬಗೆ-ಬಗೆಯ ಭೋಗಗಳನ್ನು ಅನುಭವಿಸಿದ್ದನೋ ಆ ಪಟ್ಟದರಾಣಿಯನ್ನು, ಅಂತೆಯೇ ಸಾಮ್ರಾಜ್ಯ ಲಕ್ಷ್ಮಿಯನ್ನು ಮೃತದೇಹದಂತೆ ತ್ಯಜಿಸಿ, ಹೃದಯದಲ್ಲಿ ವೈರಾಗ್ಯವನ್ನು ತಾಳಿ ಭಗವಂತನ ದಿವ್ಯಕಥೆಗಳನ್ನು ಚಿಂತಿಸುತ್ತಾ ಅದರ ಪ್ರಭಾವದಿಂದ ಶ್ರೀನಾರದರು ತೋರಿದ ಮಾರ್ಗವನ್ನು ಪುನಃ ಅನುಸರಿಸ ತೊಡಗಿದನು. ॥38॥
(ಶ್ಲೋಕ - 39)
ಮೂಲಮ್
ತಸ್ಯ ಹ ವಾ ಏತೇ ಶ್ಲೋಕಾಃ
ಪ್ರಿಯವ್ರತಕೃತಂ ಕರ್ಮ ಕೋ ನು ಕುರ್ಯಾದ್ವಿನೇಶ್ವರಮ್ ।
ಯೋ ನೇಮಿನಿಮ್ನೈರಕರೋಚ್ಛಾಯಾಂ ಘ್ನನ್ಸಪ್ತ ವಾರಿಧೀನ್ ॥
ಅನುವಾದ
ಮಹಾರಾಜಾ ಪ್ರಿಯವ್ರತನ ವಿಷಯದಲ್ಲಿ ಈ ಪ್ರಶಂಸಾರ್ಹವಾದ ಶ್ಲೋಕಗಳು ಪ್ರಸಿದ್ಧ ವಾಗಿವೆ. ಪ್ರಿಯವ್ರತ ಮಹಾರಾಜನು ಮಾಡಿದ ಕರ್ಮಗಳನ್ನು ಸರ್ವಶಕ್ತಿ ಶಾಲಿಯಾದ ಈಶ್ವರನ ಹೊರತು ಬೇರೆ ಯಾರು ಮಾಡಬಲ್ಲರು? ಅವನು ರಾತ್ರಿಯ ಅಂಧಕಾರವನ್ನು ಇಲ್ಲವಾಗಿಸಲು ಪ್ರಯತ್ನಿಸುತ್ತಾ ತನ್ನ ರಥದ ಗಾಲಿಗಳಿಂದ ಉಂಟಾದ ಗೆರೆಗಳಿಂದಲೇ ಏಳು ಸಮುದ್ರಗಳನ್ನು ನಿರ್ಮಿಸಿದನಲ್ಲವೇ! ॥39॥
(ಶ್ಲೋಕ - 40)
ಮೂಲಮ್
ಭೂಸಂಸ್ಥಾನಂ ಕೃತಂ ಯೇನ ಸರಿದ್ಗಿರಿವನಾದಿಭಿಃ ।
ಸೀಮಾ ಚ ಭೂತನಿರ್ವೃತ್ಯೈ ದ್ವೀಪೇ ದ್ವೀಪೇ ವಿಭಾಗಶಃ ॥
ಅನುವಾದ
ಪ್ರಾಣಿಗಳ ಸಂರಕ್ಷಣೆಗಾಗಿ ಇಡೀ ಭೂಮಂಡಲವನ್ನು ದ್ವೀಪಗಳಾಗಿ ವಿಭಾಗಿಸಿ ಪ್ರತಿಯೊಂದು ದ್ವೀಪದಲ್ಲಿಯೂ ಬೇರೆ-ಬೇರೆ ನದಿಗಳೂ ಅರಣ್ಯಗಳೂ, ಪರ್ವತಗಳೂ ಮುಂತಾದವುಗಳಿಂದ ಎಲ್ಲೆಯನ್ನು ನಿಶ್ಚಿತಗೊಳಿಸಿದನು. ॥40॥
(ಶ್ಲೋಕ - 41)
ಮೂಲಮ್
ಭೌಮಂ ದಿವ್ಯಂ ಮಾನುಷಂ ಚ ಮಹಿತ್ವಂ ಕರ್ಮಯೋಗಜಮ್ ।
ಯಶ್ಚಕ್ರೇ ನಿರಯೌಪಮ್ಯಂ ಪುರುಷಾನುಜನಪ್ರಿಯಃ ॥
ಅನುವಾದ
ಅವನು ಭಗವದ್ಭಕ್ತನಾರ ದಾದಿಗಳ ಪ್ರೇಮೀ ಭಕ್ತನಾಗಿದ್ದನು. ಅವನು ಪಾತಾಳಲೋಕದ, ದೇವಲೋಕದ, ಭೂಲೋಕದ ಸಂಪತ್ತನ್ನು ಮತ್ತು ಕರ್ಮಗಳಿಂದಲೂ, ಯೋಗದಿಂದಲೂ ಸಂಪಾದಿಸಿದ್ದ ಐಶ್ವರ್ಯವನ್ನು ನರಕಸಮಾನವೆಂದು ತಿಳಿಸಿದ್ದನು.॥41॥
ಅನುವಾದ (ಸಮಾಪ್ತಿಃ)
ಮೊದಲನೆಯ ಅಧ್ಯಾಯವು ಮುಗಿಯಿತು. ॥1॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಪಂಚಮಸ್ಕಂಧೇ ಪ್ರಿಯವ್ರತವಿಜಯೇ ಪ್ರಥಮೋಽಧ್ಯಾಯಃ ॥1॥