[ಮೂವತ್ತೊಂದನೆಯ ಅಧ್ಯಾಯ]
ಭಾಗಸೂಚನಾ
ನಾರದರ ಉಪದೇಶದಿಂದ ಪ್ರಚೇತಸರಿಗೆ ಪರಮಪದ ಪ್ರಾಪ್ತಿ
ಮೂಲಮ್
(ಶ್ಲೋಕ - 1)
ಮೂಲಮ್ (ವಾಚನಮ್)
ಮೈತ್ರೇಯ ಉವಾಚ
ಮೂಲಮ್
ತತ ಉತ್ಪನ್ನವಿಜ್ಞಾನಾ ಆಶ್ವಧೋಕ್ಷಜಭಾಷಿತಮ್ ।
ಸ್ಮರಂತ ಆತ್ಮಜೇ ಭಾರ್ಯಾಂ ವಿಸೃಜ್ಯ ಪ್ರಾವ್ರಜನ್ಗೃಹಾತ್ ॥
ಅನುವಾದ
ಶ್ರೀಮೈತ್ರೇಯರು ಹೇಳುತ್ತಾರೆ — ಎಲೈ ಭಾಗವತ ಶ್ರೇಷ್ಠನೇ! ಹತ್ತು ಲಕ್ಷ ದಿವ್ಯವರ್ಷಗಳು ಕಳೆದುಹೋಗಲಾಗಿ ಪ್ರಚೇತಸರಿಗೆ ವಿವೇಕ ಉಂಟಾಯಿತು. ಆಗ ಅವರಿಗೆ ಭಗವಂತನ ಮಾತುಗಳು ನೆನಪಾದವು ಮತ್ತು ಅವರು ತಮ್ಮ ಭಾರ್ಯೆಯಾದ ಮಾರಿಷಾಳನ್ನು ಮಗನ ಬಳಿಯಲ್ಲಿ ಬಿಟ್ಟು ಕೂಡಲೇ ಮನೆಯಿಂದ ಹೊರಬಿದ್ದರು. ॥1॥
ಮೂಲಮ್
(ಶ್ಲೋಕ - 2)
ದೀಕ್ಷಿತಾ ಬ್ರಹ್ಮಸತ್ರೇಣ ಸರ್ವಭೂತಾತ್ಮಮೇಧಸಾ ।
ಪ್ರತೀಚ್ಯಾಂ ದಿಶಿ ವೇಲಾಯಾಂ ಸಿದ್ಧೋಭೂದ್ಯತ್ರ ಜಾಜಲಿಃ ॥
ಅನುವಾದ
ಅವರು ಪಶ್ಚಿಮದಿಕ್ಕಿನಲ್ಲಿ ಜಾಜಲಿ ಮಹರ್ಷಿಯು ಸಿದ್ಧಿಯನ್ನು ಪಡೆದಿದ್ದ ಸಮುದ್ರ ತಟಕ್ಕೆ ತಲುಪಿ ‘ಸಮಸ್ತ ಭೂತಗಳಲ್ಲಿಯೂ ಒಂದೇ ಆತ್ಮತತ್ತ್ವವು ಬೆಳಗುತ್ತಿದೆ’ ಎಂಬ ಜ್ಞಾನವನ್ನು ಉಂಟುಮಾಡುವ ಆತ್ಮವಿಚಾರರೂಪವಾದ ಬ್ರಹ್ಮಸತ್ರದ ಸಂಕಲ್ಪ ಗೈದು ಕುಳಿತುಬಿಟ್ಟರು. ॥2॥
ಮೂಲಮ್
(ಶ್ಲೋಕ - 3)
ತಾನ್ನಿರ್ಜಿತಪ್ರಾಣಮನೋವಚೋದೃಶೋ
ಜಿತಾಸನಾನ್ ಶಾಂತಸಮಾನವಿಗ್ರಹಾನ್ ।
ಪರೇಮಲೇ ಬ್ರಹ್ಮಣಿ ಯೋಜಿತಾತ್ಮನಃ
ಸುರಾಸುರೇಡ್ಯೋದದೃಶೇ ಸ್ಮ ನಾರದಃ ॥
ಅನುವಾದ
ಅವರು ಪ್ರಾಣ, ಮನಸ್ಸು, ವಾಣಿ ಮತ್ತು ದೃಷ್ಟಿಯನ್ನು ವಶಪಡಿಸಿ ಕೊಂಡು, ಶರೀರವನ್ನು ಅಲುಗಾಡದಂತೆ ಸ್ಥಿರವಾಗಿಯೂ, ನೇರವಾಗಿಯೂ ಇರಿಸಿಕೊಂಡು, ಆಸನ ಜಯವನ್ನು ಸಾಧಿಸಿ ಚಿತ್ತವನ್ನು ವಿಶುದ್ಧವಾದ ಪರಬ್ರಹ್ಮನಲ್ಲಿ ಒಂದು ಗೂಡಿಸಿದರು. ಇಂತಹ ಸ್ಥಿತಿಯಲ್ಲಿ ಅವರಿಗೆ ದೇವಾಸುರರಿಗೂ ವಂದನೀಯರಾದ ಶ್ರೀನಾರದರ ದರ್ಶನವಾಯಿತು. ॥3॥
ಮೂಲಮ್
(ಶ್ಲೋಕ - 4)
ತಮಾಗತಂ ತ ಉತ್ಥಾಯ ಪ್ರಣಿಪತ್ಯಾಭಿನಂದ್ಯ ಚ ।
ಪೂಜಯಿತ್ವಾ ಯಥಾದೇಶಂ ಸುಖಾಸೀನಮಥಾಬ್ರುವನ್ ॥
ಅನುವಾದ
ನಾರದರು ಬಂದಿರುವುದನ್ನು ನೋಡಿ ಪ್ರಚೇತಸರು ಎದ್ದು ನಿಂತು, ಪ್ರಣಾಮಮಾಡಿ ಆದರ ಸತ್ಕಾರಪೂರ್ವಕ ದೇಶ-ಕಾಲಕ್ಕನು ಸಾರವಾಗಿ ಅವರನ್ನು ವಿಧಿವತ್ತಾಗಿ ಪೂಜಿಸಿದರು. ನಾರದರು ಸುಖಾಸೀನರಾಗಲು ಪ್ರಚೇತಸರು ಅವರಲ್ಲಿ ವಿಜ್ಞಾಪಿಸಿಕೊಂಡರು. ॥4॥
ಮೂಲಮ್
(ಶ್ಲೋಕ - 5)
ಮೂಲಮ್ (ವಾಚನಮ್)
ಪ್ರಚೇತಸ ಊಚುಃ
ಮೂಲಮ್
ಸ್ವಾಗತಂ ತೇ ಸುರರ್ಷೇದ್ಯ ದಿಷ್ಟ್ಯಾ ನೋ ದರ್ಶನಂ ಗತಃ ।
ತವ ಚಂಕ್ರಮಣಂ ಬ್ರಹ್ಮನ್ನಭಯಾಯ ಯಥಾ ರವೇಃ ॥
ಅನುವಾದ
ಪ್ರಚೇತಸರು ಹೇಳಿದರು — ದೇವರ್ಷಿಗಳೇ! ತಮಗೆ ಸ್ವಾಗತವು. ಮಹಾಭಾಗ್ಯ ವಿಶೇಷದಿಂದಲೇ ನಮಗೆ ತಮ್ಮ ದರ್ಶನ ಭಾಗ್ಯವು ಲಭಿಸಿತು. ತಮ್ಮ ಲೋಕಸಂಚಾರವು ಸೂರ್ಯ ದೇವರಂತೆ ಸಮಸ್ತ ಜೀವಿಗಳಿಗೆ ಜ್ಞಾನಪ್ರಕಾಶವನ್ನೂ, ಅಭಯ ದಾನವನ್ನೂ ಕೊಡುವುದಕ್ಕಾಗಿಯೇ ಆಗಿದೆ. ॥5॥
ಮೂಲಮ್
(ಶ್ಲೋಕ - 6)
ಯದಾದಿಷ್ಟಂ ಭಗವತಾ ಶಿವೇನಾಧೋಕ್ಷಜೇನ ಚ ।
ತದ್ಗೃಹೇಷು ಪ್ರಸಕ್ತಾನಾಂ ಪ್ರಾಯಶಃ ಕ್ಷಪಿತಂ ಪ್ರಭೋ ॥
ಅನುವಾದ
ಸ್ವಾಮಿ! ಭಗವಂತನಾದ ಶ್ರೀಶಂಕರನೂ, ಭಗವಾನ್ ಶ್ರೀವಿಷ್ಣುವೂ ನಮಗೆ ಉಪದೇಶ ಮಾಡಿದ್ದ ಜ್ಞಾನವನ್ನು ನಾವು ಗೃಹಸ್ಥಾಶ್ರಮದಲ್ಲೇ ಆಸಕ್ತರಾಗಿದ್ದ ಕಾರಣದಿಂದ ಮರೆತುಬಿಟ್ಟಂತಾಗಿದೆ. ॥6॥
ಮೂಲಮ್
(ಶ್ಲೋಕ - 7)
ತನ್ನಃ ಪ್ರದ್ಯೋತಯಾಧ್ಯಾತ್ಮಜ್ಞಾನಂ ತತ್ತ್ವಾರ್ಥದರ್ಶನಮ್ ।
ಯೇನಾಂಜಸಾ ತರಿಷ್ಯಾಮೋ ದುಸ್ತರಂ ಭವಸಾಗರಮ್ ॥
ಅನುವಾದ
ಆದ್ದರಿಂದ ನೀವು ನಮ್ಮ ಹೃದಯದಲ್ಲಿ ಪರಮಾರ್ಥತತ್ತ್ವದ ಸಾಕ್ಷಾತ್ಕಾರ ವಾಗಿಸುವಂತಹ ಅಧ್ಯಾತ್ಮಜ್ಞಾನವನ್ನು ಪುನಃ ಪ್ರಕಾಶಿತಗೊಳಿಸಿರಿ. ಅದರಿಂದ ನಾವು ಈ ದುಸ್ತರವಾದ ಸಂಸಾರ ಸಾಗರವನ್ನು ಸುಲಭವಾಗಿ ದಾಟ ಬಲ್ಲೆವು. ॥7॥
ಮೂಲಮ್
(ಶ್ಲೋಕ - 8)
ಮೂಲಮ್ (ವಾಚನಮ್)
ಮೈತ್ರೇಯ ಉವಾಚ
ಮೂಲಮ್
ಇತಿ ಪ್ರಚೇತಸಾಂ ಪೃಷ್ಟೋ ಭಗವಾನ್ನಾರದೋ ಮುನಿಃ ।
ಭಗವತ್ಯುತ್ತಮಶ್ಲೋಕ ಆವಿಷ್ಟಾತ್ಮಾಬ್ರವೀನ್ನೃಪಾನ್ ॥
ಅನುವಾದ
ಶ್ರೀಮೈತ್ರೇಯರು ಹೇಳುತ್ತಾರೆ — ಭಗವನ್ಮಯ ಶ್ರೀನಾರದರ ಚಿತ್ತವು ಸದಾಕಾಲ ಭಗವಾನ್ ಶ್ರೀಕೃಷ್ಣನಲ್ಲೇ ನೆಲೆಸಿರುತ್ತದೆ. ಅವರು ಪ್ರಚೇತಸರ ವಿಜ್ಞಾಪನೆಯನ್ನು ಕೇಳಿ ಹೀಗೆಂದರು. ॥8॥
ಮೂಲಮ್
(ಶ್ಲೋಕ - 9)
ಮೂಲಮ್ (ವಾಚನಮ್)
ನಾರದ ಉವಾಚ
ಮೂಲಮ್
ತಜ್ಜನ್ಮ ತಾನಿ ಕರ್ಮಾಣಿ ತದಾಯುಸ್ತನ್ಮನೋ ವಚಃ ।
ನೃಣಾಂ ಯೇನೇಹ ವಿಶ್ವಾತ್ಮಾ ಸೇವ್ಯತೇ ಹರಿರೀಶ್ವರಃ ॥
ಅನುವಾದ
ಶ್ರೀನಾರದರು ಹೇಳಿದರು — ಎಲೈ ರಾಜರುಗಳೇ! ಈ ಲೋಕದಲ್ಲಿ ಯಾವುದರಿಂದ ಸರ್ವಾತ್ಮನೂ, ಸರ್ವೇಶ್ವರನೂ ಆದ ಶ್ರೀಹರಿಯ ಸೇವೆಯಾಗುವುದೋ ಆ ಜನ್ಮ, ಕರ್ಮ, ಆಯುಸ್ಸು, ಮನಸ್ಸು, ಮಾತುಗಳು ಸಫಲವಾದುವುಗಳು. ॥9॥
ಮೂಲಮ್
(ಶ್ಲೋಕ - 10)
ಕಿಂ ಜನ್ಮಭಿಸಿ ಭಿರ್ವೇಹ ಶೌಕ್ಲ ಸಾವಿತ್ರಯಾಜ್ಞಿಕೈಃ ।
ಕರ್ಮಭಿರ್ವಾ ತ್ರಯೀಪ್ರೋಕ್ತೈಃ ಪುಂಸೋಪಿ ವಿಬುಧಾಯುಷಾ ॥
(ಶ್ಲೋಕ - 11)
ಶ್ರುತೇನ ತಪಸಾ ವಾ ಕಿಂ ವಚೋಭಿಶ್ಚಿತ್ತವೃತ್ತಿಭಿಃ ।
ಬುದ್ಧ್ಯಾ ವಾ ಕಿಂ ನಿಪುಣಯಾ ಬಲೇನೇಂದ್ರಿಯರಾಧಸಾ ॥
(ಶ್ಲೋಕ - 12)
ಕಿಂ ವಾ ಯೋಗೇನ ಸಾಂಖ್ಯೇನ ನ್ಯಾಸಸ್ವಾಧ್ಯಾಯಯೋರಪಿ ।
ಕಿಂ ವಾ ಶ್ರೇಯೋಭಿರನ್ಯೆಶ್ಚ ನ ಯತ್ರಾತ್ಮಪ್ರದೋ ಹರಿಃ ॥
ಅನುವಾದ
ಆತ್ಮಾನುಭವವನ್ನು ಕರುಣಿಸುವ ಶ್ರೀಹರಿಯು ಯಾವುದರಿಂದ ದೊರಕುವುದಿಲ್ಲವೋ ಅಂತಹ ಜನ್ಮದಿಂದಾಗಲೀ, ಯಜ್ಞೋಪವೀತ ಸಂಸ್ಕಾರ, ಗಾಯತ್ರಿ ಉಪದೇಶ, ಯಜ್ಞದೀಕ್ಷೆಗಳೆಂಬ ಮೂರು ಸಂಸ್ಕಾರಗಳಿಂದಾಗಲೀ, ವೇದೋಕ್ತ ಕರ್ಮಗಳಿಂದಾಗಲೀ, ದೇವಮಾನದ ಪೂರ್ಣಾಯುಷ್ಯದಿಂದಾಗಲೀ, ಶಾಸ್ತ್ರಜ್ಞಾನದಿಂದಾಗಲೀ, ತಪಸ್ಸಿನಿಂದಾಗಲೀ, ಮಾತಿನ ಚಾತುರ್ಯದಿಂದಾಗಲೀ, ಅದ್ಭುತವಾದ ಚಿತ್ತವೃತ್ತಿಗಳಿಂದಾಗಲೀ, ಸ್ಮರಣಶಕ್ತಿಯಿಂದಾಗಲೀ, ಸೂಕ್ಷ್ಮವಾದ ಬುದ್ಧಿಯಿಂದಾಗಲೀ, ಬಲದಿಂದಾಗಲೀ, ಇಂದ್ರಿಯ ಪಾಟವದಿಂದಾಗಲೀ, ಯೋಗದಿಂದಾಗಲೀ, ಸಾಂಖ್ಯ (ಆತ್ಮಾನಾತ್ಮಾವಿವೇಕ)ದಿಂದಾಗಲೀ, ಸಂನ್ಯಾಸದಿಂದಾಗಲೀ, ವೇದಾಧ್ಯಯನ, ವ್ರತ, ವೈರಾಗ್ಯಗಳೇ ಮುಂತಾದ ಇತರ ಶ್ರೇಯಃ ಸಾಧನೆಯ ಉಪಾಯಗಳಿಂದಾಗಲೀ ಮನುಷ್ಯನಿಗೆ ಆಗುವ ಪ್ರಯೋಜನವಾದರೂ ಏನು? ॥10-12॥
ಮೂಲಮ್
(ಶ್ಲೋಕ - 13)
ಶ್ರೇಯಸಾಮಪಿ ಸರ್ವೇಷಾಮಾತ್ಮಾ ಹ್ಯವಧಿರರ್ಥತಃ ।
ಸರ್ವೇಷಾಮಪಿ ಭೂತಾನಾಂ ಹರಿರಾತ್ಮಾತ್ಮದಃ ಪ್ರಿಯಃ ॥
ಅನುವಾದ
ವಾಸ್ತವವಾಗಿ ಎಲ್ಲ ಶ್ರೇಯಸ್ಸುಗಳಿಗೂ ಆತ್ಮನೇ ಅವಧಿಯು. ಆತ್ಮಜ್ಞಾನವನ್ನು ಕರುಣಿಸುವ ಶ್ರೀಹರಿಯೇ ಎಲ್ಲ ಪ್ರಾಣಿಗಳಿಗೂ ಪ್ರಿಯತಮನಾದ ಆತ್ಮನಾಗಿದ್ದಾನೆ. ॥13॥
ಮೂಲಮ್
(ಶ್ಲೋಕ - 14)
ಯಥಾ ತರೋರ್ಮೂಲನಿಷೇಚನೇನ
ತೃಪ್ಯಂತಿ ತತ್ಸ್ಕಂಧಭುಜೋಪಶಾಖಾಃ ।
ಪ್ರಾಣೋಪಹಾರಾಚ್ಚ ಯಥೇಂದ್ರಿಯಾಣಾಂ
ತಥೈವ ಸರ್ವಾರ್ಹಣಮಚ್ಯುತೇಜ್ಯಾ ॥
ಅನುವಾದ
ವೃಕ್ಷದ ಬುಡಕ್ಕೆ ನೀರು ಹಾಯಿಸಿದರೆ ಅದರ ಕಾಂಡ, ಶಾಖೆ, ಉಪಶಾಖೆಗಳೆಲ್ಲಕ್ಕೂ ತೃಪ್ತಿಯುಂಟಾಗುವಂತೆಯೇ, ಊಟದ ಮೂಲಕ ಪ್ರಾಣಗಳನ್ನು ತೃಪ್ತಿಪಡಿಸಿದರೆ ಎಲ್ಲ ಇಂದ್ರಿಯಗಳೂ ಪುಷ್ಟವಾಗುವಂತೆಯೇ, (ಸರ್ವಮೂಲನಾಗಿರುವ) ಅಚ್ಯುತನನ್ನು ಪೂಜಿಸಿದರೆ ಅದರಿಂದ ಸರ್ವರ ಆರಾಧನೆಯು ಆಗುವುದು. ॥14॥
ಮೂಲಮ್
(ಶ್ಲೋಕ - 15)
ಯಥೈವ ಸೂರ್ಯಾತ್ಪ್ರಭವಂತಿ ವಾರಃ
ಪುನಶ್ಚ ತಸ್ಮಿನ್ಪ್ರವಿಶಂತಿ ಕಾಲೇ ।
ಭೂತಾನಿ ಭೂವೌ ಸ್ಥಿರಜಂಗಮಾನಿ
ತಥಾ ಹರಾವೇವ ಗುಣಪ್ರವಾಹಃ ॥
ಅನುವಾದ
ನೀರೆಲ್ಲವೂ ಮಳೆಗಾಲದಲ್ಲಿ ಸೂರ್ಯನಿಂದಲೇ ಉಂಟಾಗಿ ಬೇಸಗೆಯಲ್ಲಿ ಆತನ ಕಿರಣಗಳಲ್ಲಿಯೇ ಸೇರಿಕೊಳ್ಳುವುದೋ, ಚರಾಚರವಾದ ಸಮಸ್ತ ಪ್ರಾಣಿಗಳೂ ಭೂಮಿಯಿಂದಲೇ ಉತ್ಪನ್ನವಾಗಿ ಕಡೆಗೆ ಅದರಲ್ಲೇ ಸೇರಿಹೋಗುವಂತೆಯೇ ಗುಣಪ್ರವಾಹಕ್ಕೆ ಸೇರಿದ ಈ ಚೇತನಾ ಚೇತನಾತ್ಮಕವಾದ ಸಮಸ್ತ ಪ್ರಪಂಚವು ಶ್ರೀಹರಿಯಿಂದಲೇ ಉತ್ಪನ್ನವಾಗಿ ಕೊನೆಗೆ ಅವನಲ್ಲೇ ಲಯ ಹೊಂದುವುದು. ॥15॥
ಮೂಲಮ್
(ಶ್ಲೋಕ - 16)
ಏತತ್ಪದಂ ತಜ್ಜಗದಾತ್ಮನಃ ಪರಂ
ಸಕೃದ್ವಿಭಾತಂ ಸವಿತುರ್ಯಥಾ ಪ್ರಭಾ ।
ಯಥಾಸವೋ ಜಾಗ್ರತಿ ಸುಪ್ತಶಕ್ತಯೋ
ದ್ರವ್ಯಕ್ರಿಯಾಜ್ಞಾನಭಿದಾಭ್ರಮಾತ್ಯಯಃ ॥
ಅನುವಾದ
ವಸ್ತುತಃ ಈ ಜಗತ್ತು ಭಗವಾನ್ ವಿಶ್ವಾತ್ಮನ ಶಾಸ್ತ್ರಪ್ರಸಿದ್ಧವಾದ ಸರ್ವ ಉಪಾಧಿರಹಿತವಾದ ಸ್ವರೂಪವೇ ಆಗಿದೆ. ಸೂರ್ಯನ ಪ್ರಭೆಯು ಅವನಿಂದ ಹೇಗೆ ಬೇರೆಯಾಗುವುದಿಲ್ಲವೋ ಹಾಗೆಯೇ ಗಂಧರ್ವ ನಗರದಂತೆ ಕೆಲವೊಮ್ಮೆ ಸ್ಫುರಿತವಾಗುವ ಈ ಜಗತ್ತು ಭಗವಂತನಿಂದ ಭಿನ್ನವಾಗಿಲ್ಲ. ಜಾಗ್ರತದಲ್ಲಿ ಇಂದ್ರಿಯಗಳು ಕ್ರಿಯಾಶೀಲವಾಗಿರುತ್ತವೆ, ಆದರೆ ಸುಷುಪ್ತಿಯಲ್ಲಿ ಅವುಗಳ ಶಕ್ತಿ ಲೀನವಾಗಿ ಹೋಗುತ್ತದೆ, ಹಾಗೆಯೇ ಈ ಜಗತ್ತು ಸೃಷ್ಟಿಯಕಾಲದಲ್ಲಿ ಭಗವಂತನಿಂದ ಪ್ರಕಟವಾಗುತ್ತದೆ ಮತ್ತು ಕಲ್ಪಾಂತ್ಯದಲ್ಲಿ ಅವನಲ್ಲೇ ಲೀನವಾಗಿ ಹೋಗುತ್ತದೆ. ಸ್ವರೂಪತಃ ಭಗವಂತನಲ್ಲಿ ದ್ರವ್ಯ, ಕ್ರಿಯೆ ಮತ್ತು ಜ್ಞಾನರೂಪೀ ತ್ರಿವಿಧ ಅಹಂಕಾರದ ಹಾಗೂ ಅವುಗಳ ನಿಮಿತ್ತದಿಂದಾಗುವ ಭೇದ ಭ್ರಮೆಯು ಇರುವುದೇ ಇಲ್ಲ. ॥16॥
ಮೂಲಮ್
(ಶ್ಲೋಕ - 17)
ಯಥಾ ನಭಸ್ಯಭ್ರತಮಃಪ್ರಕಾಶಾ
ಭವಂತಿ ಭೂಪಾ ನ ಭವಂತ್ಯನುಕ್ರಮಾತ್ ।
ಏವಂ ಪರೇ ಬ್ರಹ್ಮಣಿ ಶಕ್ತಯಸ್ತ್ವಮೂ
ರಜಸ್ತಮಃಸತ್ತ್ವಮಿತಿ ಪ್ರವಾಹಃ ॥
ಅನುವಾದ
ಎಲೈ ನೃಪತಿಗಳೇ! ಬೆಳಕು, ಮೋಡ ಮತ್ತು ಕತ್ತಲೆ ಇವು ಮೂರೂ ಕ್ರಮವಾಗಿ ಆಕಾಶದಲ್ಲಿಯೇ ಪ್ರಕಟಗೊಂಡು ಅದರಲ್ಲೇ ಲೀನವಾಗುವುವು, ಆದರೆ ಆಕಾಶವು ಇವುಗಳಿಂದ ಲಿಪ್ತವಾಗುವುದಿಲ್ಲ. ಹಾಗೆಯೇ ಈ ಸತ್ತ್ವ, ರಜ, ತಮ ಎಂಬ ಶಕ್ತಿಗಳು ಕೆಲವೊಮ್ಮೆ ಪರಮಾತ್ಮನಿಂದಲೇ ಉತ್ಪನ್ನವಾಗುತ್ತವೆ ಹಾಗೂ ಕೆಲವೊಮ್ಮೆ ಅವನಲ್ಲೇ ಲೀನವಾಗಿ ಹೋಗುತ್ತವೆ. ಹೀಗೆಯೇ ಇವುಗಳ ಪ್ರವಾಹ ನಡೆಯುತ್ತಾ ಇರುತ್ತದೆ. ಆದರೆ ಇದರಿಂದ ಆಕಾಶದಂತೆ ಅಸಂಗ ಪರಮಾತ್ಮನಲ್ಲಿ ಯಾವ ವಿಕಾರವೂ ಉಂಟಾಗುವುದಿಲ್ಲ. ॥17॥
ಮೂಲಮ್
(ಶ್ಲೋಕ - 18)
ತೇನೈಕಮಾತ್ಮಾನಮಶೇಷದೇಹಿನಾಂ
ಕಾಲಂ ಪ್ರಧಾನಂ ಪುರುಷಂ ಪರೇಶಮ್ ।
ಸ್ವತೇಜಸಾ ಧ್ವಸ್ತಗುಣಪ್ರವಾಹ-
ಮಾತ್ಮೈಕಭಾವೇನ ಭಜಧ್ವಮದ್ಧಾ ॥
ಅನುವಾದ
ಆದ್ದರಿಂದ ಬ್ರಹ್ಮಾದಿ ಸಮಸ್ತ ಲೋಕಪಾಲಕರಿಗೂ ಅಧೀಶ್ವರನಾದ ಶ್ರೀಹರಿಯನ್ನು ತನ್ನಿಂದ ಅಭಿನ್ನನೆಂದು ತಿಳಿದು ನೀವು ಭಜಿಸಿರಿ. ಏಕೆಂದರೆ, ಅವನೇ ಸಮಸ್ತ ದೇಹಧಾರಿಗಳ ಆತ್ಮನಾಗಿರುವನು. ಅವನೇ ಜಗತ್ತಿನ ನಿಮಿತ್ತಕಾರಣನಾದ ಕಾಲ, ಉಪಾದಾನಕಾರಣನಾದ ಪ್ರಧಾನ ಮತ್ತು ನಿಯಾಮಕ ಪುರುಷೋತ್ತಮನಾಗಿದ್ದಾನೆ ಹಾಗೂ ತನ್ನ ಕಾಲಶಕ್ತಿಯಿಂದಲೇ ಈ ಗುಣಗಳ ಪ್ರವಾಹರೂಪವಾದ ಪ್ರಪಂಚವನ್ನು ಸಂಹಾರಮಾಡುತ್ತಾನೆ. ॥18॥
ಮೂಲಮ್
(ಶ್ಲೋಕ - 19)
ದಯಯಾ ಸರ್ವಭೂತೇಷು ಸಂತುಷ್ಟ್ಯಾಯೇನ ಕೇನ ವಾ ।
ಸರ್ವೇಂದ್ರಿಯೋಪಶಾಂತ್ಯಾ ಚ ತುಷ್ಯತ್ಯಾಶು ಜನಾರ್ದನಃ ॥
ಅನುವಾದ
ಸಮಸ್ತ ಪ್ರಾಣಿಗಳಲ್ಲಿ ದಯೆಯನ್ನು ತೋರುವಿಕೆ, ಏನು ದೊರೆಯುವುದೋ ಅದರಲ್ಲೇ ಸಂತುಷ್ಟನಾಗಿರುವುದು, ಸರ್ವೇಂದ್ರಿಯಗಳನ್ನು ವಿಷಯಗಳಿಂದ ಹಿಂದಿರುಗಿಸಿ ಶಾಂತಗೊಳಿಸುವುದು ಈ ಮೂರರಿಂದ ಭಕ್ತವತ್ಸಲನಾದ ಭಗವಂತನು ಬೇಗನೇ ಪ್ರಸನ್ನನಾಗುತ್ತಾನೆ. ॥19॥
ಮೂಲಮ್
(ಶ್ಲೋಕ - 20)
ಅಪಹತಸಕಲೈಷಣಾಮಲಾತ್ಮನ್ಯವಿರತಮೇಧಿತಭಾವನೋಪಹೂತಃ ।
ನಿಜಜನವಶಗತ್ವಮಾತ್ಮ ನೋಯನ್ನ ಸರತಿ ಛಿದ್ರವದಕ್ಷರಃ ಸತಾಂ ಹಿ ॥
ಅನುವಾದ
ಪುತ್ರೈಷಣಾ ಮುಂತಾದ ಎಲ್ಲ ವಿಧದ ವಾಸನೆಗಳು ಹೊರಟುಹೋದ್ದರಿಂದ ನಿರಂತರವಾಗಿ ವೃದ್ಧಿಹೊಂದುತ್ತಿರುವ ಧ್ಯಾನದಿಂದ ಸೆಳೆಯಲ್ಪಟ್ಟವನಾಗಿ ಅವಿನಾಶಿಯಾದ ಶ್ರೀಹರಿಯು ಶುದ್ಧಾಂತಃ ಕರಣರಾದ ಸಂತರ ಹೃದಯಕ್ಕೆ ಬಂದುಬಿಡುತ್ತಾನೆ. ತನ್ನ ಭಕ್ತಪರಾಧೀನತೆಯನ್ನು ಅನ್ವರ್ಥಗೊಳಿಸಿ ಹೃದಯಾಕಾಶದಂತೆ ಅಲ್ಲಿಂದ ಸರಿಯದೆ ಅಲ್ಲಿಯೇ ನೆಲೆಗೊಳ್ಳುವನು. ॥20॥
ಮೂಲಮ್
(ಶ್ಲೋಕ - 21)
ನ ಭಜತಿ ಕುಮನೀಷಿಣಾಂ ಸ ಇಜ್ಯಾಂ
ಹರಿರಧನಾತ್ಮಧನಪ್ರಿಯೋ ರಸಜ್ಞಃ ।
ಶ್ರುತಧನಕುಲಕರ್ಮಣಾಂ ಮದೈರ್ಯೇ
ವಿದಧತಿ ಪಾಪಮಕಿಂಚನೇಷು ಸತ್ಸು ॥
ಅನುವಾದ
ಭಗವಂತನೇ ಸರ್ವಸ್ವವೆಂದು ಭಾವಿಸುವ, ಭೌತಿಕ ಶ್ರೀಮಂತಿಕೆಯಿಲ್ಲದ ಮನುಷ್ಯರ ಮೇಲೆಯೇ ಪರಮಾತ್ಮನು ಪ್ರೇಮವನ್ನಿಡುತ್ತಾನೆ. ಏಕೆಂದರೆ, ಆತನು ಪರಮರಸಜ್ಞನು. ನಿರ್ವ್ಯಾಜ್ಯಭಕ್ತಿಯುಳ್ಳ ಅನನ್ಯ ಭಕ್ತರ ಭಕ್ತಿಯಲ್ಲಿ ಎಷ್ಟು ಮಾಧುರ್ಯವಿದೆಯೆಂಬುದನ್ನು ಆತನು ಚೆನ್ನಾಗಿ ಬಲ್ಲನು. ವಿದ್ಯಾಮದ, ಧನಮದ, ಕುಲಮದ, ಕರ್ಮಮದ ಇವುಗಳಿಂದ ಕೊಬ್ಬಿ, ಅಕಿಂಚನ ಸಾಧುಜನರನ್ನು ತಿರಸ್ಕಾರ ಮಾಡುವ ಆ ದುರ್ಬುದ್ದಿಯುಳ್ಳವರ ಪೂಜೆಯನ್ನು ಅವನು ಸ್ವೀಕರಿಸುವುದೇ ಇಲ್ಲ. ॥21॥
ಮೂಲಮ್
(ಶ್ಲೋಕ - 22)
ಶ್ರಿಯಮನುಚರತೀಂ ತದರ್ಥಿನಶ್ಚ
ದ್ವಿಪದಪತೀನ್ವಿಬುಧಾಂಶ್ಚ ಯತ್ಸ್ವಪೂರ್ಣಃ ।
ನ ಭಜತಿ ನಿಜಭೃತ್ಯವರ್ಗತಂತ್ರಃ
ಕಥಮಮುಮುದ್ವಿಸೃಜೇತ್ಪುಮಾನ್ ಕೃತಜ್ಞಃ ॥
ಅನುವಾದ
ಭಗವಂತನಾದ ಶ್ರೀಹರಿಯು ಆಪ್ತಕಾಮನೂ, ಸ್ವಾನಂದ ಪೂರ್ಣನೂ ಆಗಿರುವುದರಿಂದ ಆತನು ತನ್ನನ್ನು ನಿರಂತರವಾಗಿ ಸೇವಿಸುತ್ತಿರುವ ಶ್ರೀಲಕ್ಷ್ಮೀದೇವಿಯನ್ನಾಗಲೀ, ಆ ಸಂಪತ್ತನ್ನು ಬಯಸುವ ರಾಜರನ್ನಾಗಲೀ, ಅಥವಾ ದೇವತೆಗಳನ್ನಾಗಲೀ ಯಾರನ್ನೂ ಅಪೇಕ್ಷಿಸುವುದಿಲ್ಲ. ಆದರೂ ಅವನು ತನ್ನ ಭಕ್ತರಿಗೆ ಅಧೀನನಾಗಿರುತ್ತಾನೆ. ಆಹಾ! ಇಂತಹ ಕರುಣಾಸಾಗರನಾದ ಸ್ವಾಮಿಯನ್ನು ಕೃತಜ್ಞನಾದ ಯಾರೇ ಮನುಷ್ಯನು ಸ್ವಲ್ಪ ಹೊತ್ತಾದರೂ ಬಿಟ್ಟಿರಲು ಸಾಧ್ಯವೇ? ॥22॥
ಮೂಲಮ್
(ಶ್ಲೋಕ - 23)
ಮೂಲಮ್ (ವಾಚನಮ್)
ಮೈತ್ರೇಯ ಉವಾಚ
ಮೂಲಮ್
ಇತಿ ಪ್ರಚೇತಸೋ ರಾಜನ್ ಅನ್ಯಾಶ್ಚ ಭಗವತ್ಕಥಾಃ ।
ಶ್ರಾವಯಿತ್ವಾ ಬ್ರಹ್ಮಲೋಕಂ ಯಯೌ ಸ್ವಾಯಂಭುವೋ ಮುನಿಃ ॥
ಅನುವಾದ
ಶ್ರೀಮೈತ್ರೇಯರು ಹೇಳುತ್ತಾರೆ — ಎಲೈ ವಿದುರನೇ! ಪೂಜ್ಯರಾದ ನಾರದಮಹರ್ಷಿಗಳು ಪ್ರಚೇತಸರಿಗೆ ಹೀಗೆ ಉಪದೇಶ ಮಾಡಿ, ಇನ್ನೂ ಅನೇಕ ಭಗವತ್ಕಥೆಗಳನ್ನೂ ಅವರಿಗೆ ಹೇಳಿದರು. ಅನಂತರ ಅವರು ಬ್ರಹ್ಮಲೋಕಕ್ಕೆ ಹೊರಟುಹೋದರು. ॥23॥
ಮೂಲಮ್
(ಶ್ಲೋಕ - 24)
ತೇಪಿ ತನ್ಮುಖನಿರ್ಯಾತಂ ಯಶೋ ಲೋಕಮಲಾಪಹಮ್ ।
ಹರೇರ್ನಿಶಮ್ಯ ತತ್ಪಾದಂ ಧ್ಯಾಯಂತಸ್ತದ್ಗತಿಂ ಯಯುಃ ॥
ಅನುವಾದ
ಪ್ರಚೇತಸರೂ ಕೂಡ ಜಗತ್ತಿನ ಸರ್ವಪಾಪಗಳನ್ನು ತೊಳೆದು ಹಾಕುವ ಭಗವಚ್ಚರಿತ್ರೆಗಳನ್ನು ಆ ಮಹರ್ಷಿಗಳ ಮುಖಕಮಲದಿಂದ ಕೇಳಿ ಶ್ರೀಭಗವಂತನ ಅಡಿದಾವರೆಗಳನ್ನು ಚಿಂತಿಸುತ್ತಾ ಕೊನೆಗೆ ಅವರು ಭಗವಂತನ ಧಾಮವನ್ನೂ ಸೇರಿದರು. ॥24॥
ಮೂಲಮ್
(ಶ್ಲೋಕ - 25)
ಏತತ್ತೇಭಿಹಿತಂ ಕ್ಷತ್ತರ್ಯನ್ಮಾಂ ತ್ವಂ ಪರಿಪೃಷ್ಟವಾನ್ ।
ಪ್ರಚೇತಸಾಂ ನಾರದಸ್ಯ ಸಂವಾದಂ ಹರಿಕೀರ್ತನಮ್ ॥
ಅನುವಾದ
ಹೀಗೆ ಶ್ರೀನಾರದರಿಗೂ ಮತ್ತು ಪ್ರಚೇತಸರಿಗೂ ನಡೆದ ಭಗವತ್ಕಥಾ ರೂಪವಾದ ಸಂಭಾಷಣೆಯು ಹೇಗೆ ನಡೆಯಿ ತೆಂದು ನೀನು ಕೇಳಿದೆಯಲ್ಲ. ಅದನ್ನು ನಾನು ನಿನಗೆ ತಿಳಿಸಿರುವೆನು. ॥25॥
ಮೂಲಮ್
(ಶ್ಲೋಕ - 26)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಯ ಏಷ ಉತ್ತಾನಪದೋ ಮಾನವಸ್ಯಾನುವರ್ಣಿತಃ ।
ವಂಶಃ ಪ್ರಿಯವ್ರತಸ್ಯಾಪಿ ನಿಬೋಧ ನೃಪಸತ್ತಮ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿದ್ರಾಜನೇ! ಇಲ್ಲಿಯವರೆಗೆ ನಾನು ಸ್ವಾಯಂಭುವ ಮನುನಿವ ಪುತ್ರ ನಾದ ಉತ್ತಾನಪಾದನ ವಂಶವನ್ನು ವರ್ಣಿಸಿದೆ. ಇನ್ನು ಪ್ರಿಯವ್ರತನ ವಂಶವನ್ನೂ ವರ್ಣಿಸುವೆನು ಕೇಳು. ॥26॥
ಮೂಲಮ್
(ಶ್ಲೋಕ - 27)
ಯೋ ನಾರದಾದಾತ್ಮವಿದ್ಯಾಮಧಿಗಮ್ಯ ಪುನರ್ಮಹೀಮ್ ।
ಭುಕ್ತ್ವಾ ವಿಭಜ್ಯ ಪುತ್ರೇಭ್ಯ ಐಶ್ವರಂ ಸಮಗಾತ್ಪದಮ್ ॥
(ಶ್ಲೋಕ - 28)
ಇಮಾಂ ತು ಕೌಷಾರವಿಣೋಪವರ್ಣಿತಾಂ
ಕ್ಷತ್ತಾ ನಿಶಮ್ಯಾಜಿತವಾದಸತ್ಕಥಾಮ್ ।
ಪ್ರವೃದ್ಧಭಾವೋಶ್ರುಕಲಾಕುಲೋ ಮುನೇ-
ರ್ದಧಾರ ಮೂರ್ಧ್ನಾ ಚರಣಂ ಹೃದಾ ಹರೇಃ ॥
ಅನುವಾದ
ರಾಜೇಂದ್ರನೇ! ಇತ್ತ ಮೈತ್ರೇಯ ಮಹರ್ಷಿಗಳ ಬಾಯಿಂದ ಶ್ರೀಭಗವಂತನ ಅನಂತಕಲ್ಯಾಣಗುಣಗಳಿಂದ ಕೂಡಿದ ಪವಿತ್ರ ತಮವಾದ ಭಗವತ್ಕಥೆಯನ್ನು ಕೇಳಿ ವಿದುರನು ಪ್ರೇಮ ಮಗ್ನನಾಗಿ, ಭಕ್ತಿಭಾವದ ಉದ್ರೇಕ ಉಂಟಾದ್ದರಿಂದ ಅವನ ಕಣ್ಣುಗಳಿಂದ ಪ್ರೇಮಾಶ್ರುಗಳು ಹರಿಯತೊಡಗಿದವು ಹಾಗೂ ಅವನು ಹೃದಯದಲ್ಲಿ ಭಗವಚ್ಚರಣಗಳನ್ನು ಸ್ಮರಿಸುತ್ತಾ ತನ್ನ ತಲೆಯನ್ನು ಮೈತ್ರೇಯ ಮುನಿವರ್ಯರ ಅಡಿದಾವರೆಗಳಲ್ಲಿರಿಸಿ ಹಿಗೆ ವಿಜ್ಞಾಪಿಸಿಕೊಂಡರು. ॥28॥
ಮೂಲಮ್
(ಶ್ಲೋಕ - 29)
ಮೂಲಮ್ (ವಾಚನಮ್)
ವಿದುರ ಉವಾಚ
ಮೂಲಮ್
ಸೋಯಮದ್ಯ ಮಹಾಯೋಗಿನ್ಭವತಾ ಕರುಣಾತ್ಮನಾ ।
ದರ್ಶಿತಸ್ತಮಸಃ ಪಾರೋ ಯತ್ರಾಕಿಂಚನಗೋ ಹರಿಃ ॥
ಅನುವಾದ
ವಿದುರನು ಹೇಳತೊಡಗಿದನು — ಮಹಾಯೋಗಿವರ್ಯರೇ! ತಾವು ಎಂತಹ ಕರುಣಾಮಯರು. ಇಂದು ತಾವು ನನ್ನನ್ನು ಅಜ್ಞಾನಾಂಧಕಾರದಿಂದ ದಾಟಿಸಿ ಅಕಿಂಚನರಿಗೆ ಸರ್ವಸ್ವನಾಗಿರುವ ಶ್ರೀಹರಿಯು ಬೆಳಗುತ್ತಿರುವಲ್ಲಿಗೆ ಮುಟ್ಟಿಸಿದಿರಿ. ॥29॥
ಮೂಲಮ್
(ಶ್ಲೋಕ - 30)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಇತ್ಯಾನಮ್ಯ ತಮಾಮಂತ್ರ್ಯ ವಿದುರೋ ಗಜಸಾಹ್ವಯಮ್ ।
ಸ್ವಾನಾಂ ದಿದೃಕ್ಷುಃ ಪ್ರಯಯೌ ಜ್ಞಾತೀನಾಂ ನಿರ್ವೃತಾಶಯಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಭಾಗವತೋತ್ತಮನಾದ ವಿದುರನು ಮೈತ್ರೇಯರಲ್ಲಿ ಹೀಗೆ ಕೃತಜ್ಞತಾಪೂರ್ಣವಾದ ಮಾತುಗಳನ್ನು ಅರಿಕೆಮಾಡಿಕೊಂಡು ಅವರಿಗೆ ನಮಸ್ಕರಿಸಿ, ಅವರಿಂದ ಅಪ್ಪಣೆಪಡೆದು ಪ್ರಶಾಂತಚಿತ್ತರಾಗಿ ಬಂಧುಜನರನ್ನು ನೋಡಲು ಹಸ್ತಿನಾಪುರಕ್ಕೆ ಹೊರಟುಹೋದನು. ॥30॥
ಮೂಲಮ್
(ಶ್ಲೋಕ - 31)
ಏತದ್ಯಃ ಶೃಣುಯಾದ್ರಾಜನ್-
ರಾಜ್ಞಾಂ ಹರ್ಯರ್ಪಿತಾತ್ಮನಾಮ್ ।
ಆಯುರ್ಧನಂ ಯಶಃ ಸ್ವಸ್ತಿ
ಗತಿಮೈಶ್ವರ್ಯಮಾಪ್ನುಯಾತ್ ॥
ಅನುವಾದ
ನೃಪಶ್ರೇಷ್ಠನೇ! ಭಗವಂತನ ಶರಣಾಗತ ಪರಮಭಾಗವತರಾದ ರಾಜರ ಈ ಪವಿತ್ರ ಚರಿತ್ರವನ್ನು ಕೇಳುವವರು ದೀರ್ಘಾಯುಷ್ಯ, ಧನ, ಕೀರ್ತಿ, ಕ್ಷೇಮ, ಸದ್ಗತಿ ಮತ್ತು ಐಶ್ವರ್ಯವನ್ನು ಪಡೆಯುವರು. ॥31॥
ಅನುವಾದ (ಸಮಾಪ್ತಿಃ)
ಮೂವತ್ತೊಂದನೆಯ ಅಧ್ಯಾಯವು ಮುಗಿಯಿತು. ॥31॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಚತುರ್ಥಸ್ಕಂಧೇ ಪ್ರಚೇತಉಪಾಖ್ಯಾನಂ ನಾಮೈಕತ್ರಿಂಶೋಧ್ಯಾಯಃ ॥31॥
ನಾಲ್ಕನೆಯ ಸ್ಕಂಧವು ಸಂಪೂರ್ಣವಾಯಿತು.