೩೦

[ಮೂವತ್ತನೆಯ ಅಧ್ಯಾಯ]

ಭಾಗಸೂಚನಾ

ಪ್ರಚೇತಸರಿಗೆ ಭಗವಾನ್ ಮಹಾವಿಷ್ಣುವಿನಿಂದ ವರಪ್ರದಾನ

ಮೂಲಮ್

(ಶ್ಲೋಕ - 1)

ಮೂಲಮ್ (ವಾಚನಮ್)

ವಿದುರ ಉವಾಚ

ಮೂಲಮ್

ಯೇ ತ್ವಯಾಭಿಹಿತಾ ಬ್ರಹ್ಮನ್ ಸುತಾ ಪ್ರಾಚೀನಬರ್ಹಿಷಃ ।
ತೇ ರುದ್ರಗೀತೇನ ಹರಿಂ ಸಿದ್ಧಿಮಾಪುಃ ಪ್ರತೋಷ್ಯ ಕಾಮ್ ॥

ಅನುವಾದ

ವಿದುರನು ಕೇಳಿದನು — ಮುನಿಶ್ರೇಷ್ಠರೇ! ತಾವು ಈವರೆಗೆ ವರ್ಣನೆಮಾಡಿದ ಪ್ರಾಚೀನಬರ್ಹಿ ಮಹಾರಾಜನ ಪುತ್ರರಾದ ಪ್ರಚೇತಸರು ರುದ್ರಗೀತೆಯ ಮೂಲಕ ಶ್ರೀಹರಿಯನ್ನು ಸ್ತುತಿಸಿ ಯಾವ ಸಿದ್ಧಿಯನ್ನು ಪಡೆದರು? ॥1॥

ಮೂಲಮ್

(ಶ್ಲೋಕ - 2)
ಕಿಂ ಬಾರ್ಹಸ್ಪತ್ಯೇಹ ಪರತ್ರ ವಾಥ
ಕೈವಲ್ಯನಾಥಪ್ರಿಯಪಾರ್ಶ್ವವರ್ತಿನಃ ।
ಆಸಾದ್ಯ ದೇವಂ ಗಿರಿಶಂ ಯದೃಚ್ಛಯಾ
ಪ್ರಾಪುಃ ಪರಂ ನೂನಮಥ ಪ್ರಚೇತಸಃ ॥

ಅನುವಾದ

ಬೃಹಸ್ಪತಿಶಿಷ್ಯರೇ! ಮೋಕ್ಷಾಧಿಪತಿಯಾದ ಶ್ರೀನಾರಾಯಣನಿಗೆ ಅತ್ಯಂತ ಪ್ರಿಯರಾದ ಭಗವಾನ್ ಶಂಕರನ ಸಾನ್ನಿಧ್ಯವನ್ನು ಅಕಸ್ಮಾತ್ತಾಗಿ ಪಡೆದ ಪ್ರಚೇತಸರು ಮುಕ್ತಿಯನ್ನೇನೋ ಪಡೆದಿರಬಹುದು. ಅದಕ್ಕೆ ಮೊದಲು ಈ ಲೋಕದಲ್ಲಿ ಅಥವಾ ಪರಲೋಕದಲ್ಲಿಯೂ ಅವರು ಏನನ್ನು ಪಡೆದರು? ಎಂಬುದನ್ನು ಹೇಳುವ ಕೃಪೆಮಾಡಬೇಕು. ॥2॥

ಮೂಲಮ್

(ಶ್ಲೋಕ - 3)

ಮೂಲಮ್ (ವಾಚನಮ್)

ಮೈತ್ರೇಯ ಉವಾಚ

ಮೂಲಮ್

ಪ್ರಚೇತಸೋಂತರುದಧೌ ಪಿತುರಾದೇಶಕಾರಿಣಃ ।
ಜಪಯಜ್ಞೇನ ತಪಸಾ ಪುರಂಜನಮತೋಷಯನ್ ॥

ಅನುವಾದ

ಶ್ರೀಮೈತ್ರೇಯರು ಹೇಳಿದರು — ಎಲೈ ವಿದುರನೇ! ತಂದೆಯ ಆಜ್ಞಾಕಾರಿಗಳಾದ ಪ್ರಚೇತಸರು ಸಮುದ್ರದ ಒಳಗೆ ನಿಂತುಕೊಂಡೇ ರುದ್ರಗೀತೆಯನ್ನು ಜಪಿಸುತ್ತಾ, ಜಪಯಜ್ಞದಿಂದಲೂ, ತಪಸ್ಸಿನಿಂದಲೂ ಸಮಸ್ತ ಶರೀರಗಳ ಉತ್ಪಾದಕನಾದ ಭಗವಾನ್ ಶ್ರೀಹರಿಯನ್ನು ಪ್ರಸನ್ನಗೊಳಿಸಿದರು. ॥3॥

ಮೂಲಮ್

(ಶ್ಲೋಕ - 4)
ದಶವರ್ಷಸಹಸ್ರಾಂತೇ ಪುರುಷಸ್ತು ಸನಾತನಃ ।
ತೇಷಾಮಾವಿರಭೂತ್ಕೃಚ್ಛ್ರಂ ಶಾಂತೇನ ಶಮಯನ್ರುಚಾ ॥

ಅನುವಾದ

ತಪಸ್ಸು ಮಾಡುತ್ತಾ-ಮಾಡುತ್ತಾ ಹತ್ತುಸಾವಿರ ವರ್ಷಗಳು ಕಳೆದುಹೋಗಲಾಗಿ ಪುರಾಣ ಪುರುಷನಾದ ಶ್ರೀನಾರಾಯಣನು ತನ್ನ ಮನೋಹರ ಕಾಂತಿಯಿಂದ ಅವರ ತಪಸ್ಸಿನಿಂದುಂಟಾದ ಕ್ಲೇಶವನ್ನು ಶಾಂತಗೊಳಿಸುತ್ತಾ ಸೌಮ್ಯವಾದ ದಿವ್ಯವಿಗ್ರಹದಿಂದ ಅವರ ಎದುರಿಗೆ ಪ್ರಕಟನಾದನು. ॥4॥

ಮೂಲಮ್

(ಶ್ಲೋಕ - 5)
ಸುಪರ್ಣಸ್ಕಂಧಮಾರೂಢೋ ಮೇರುಶೃಂಗಮಿವಾಂಬುದಃ ।
ಪೀತವಾಸಾ ಮಣಿಗ್ರೀವಃ ಕುರ್ವನ್ವಿತಿಮಿರಾ ದಿಶಃ ॥

ಅನುವಾದ

ಗರುತ್ಮಂತನ ಹೆಗಲಿನ ಮೇಲೆ ಕುಳಿತಿರುವ ಶ್ಯಾಮಸುಂದರನಾದ ಸ್ವಾಮಿಯು ಮೇರುಪರ್ವತದ ಶಿಖರದಲ್ಲಿ ಕಂಗೊಳಿಸುವ ಮುಗಿಲಿನಂತೆ ಮೆರೆಯುತ್ತಿದ್ದನು. ಪರಮಾತ್ಮನ ಪ್ರಭಾಪುಂಜವು ಎಲ್ಲ ದಿಕ್ಕುಗಳ ಕತ್ತಲೆಯನ್ನು ಹೊಡೆದಟ್ಟುವಂತಿತ್ತು. ಅವನ ಶ್ರೀದೇಹದಲ್ಲಿ ಮನೋಹರ ಪೀತಾಂಬರವೂ, ಕಂಠದಲ್ಲಿ ಕೌಸ್ತುಭಮಣಿಯೂ ಶೋಭಿಸುತ್ತಿತ್ತು. ॥5॥

ಮೂಲಮ್

(ಶ್ಲೋಕ - 6)
ಕಾಶಿಷ್ಣುನಾ ಕನಕವರ್ಣವಿಭೂಷಣೇನ
ಭ್ರಾಜತ್ಕಪೋಲವದನೋ ವಿಲಸತ್ಕಿರೀಟಃ ।
ಅಷ್ಟಾಯುಧೈರನುಚರೈರ್ಮುನಿಭಿಃ ಸುರೇಂದ್ರೈ-
ರಾಸೇವಿತೋ ಗರುಡಕಿನ್ನರಗೀತಕೀರ್ತಿಃ ॥

ಅನುವಾದ

ಥಳ-ಥಳಿಸುತ್ತಿದ್ದ ಸ್ವರ್ಣರತ್ನಾಭರಣಗಳ ಕಾಂತಿಯಿಂದ ಕೆನ್ನೆ-ಕದಪುಗಳೂ, ಮುಖಕಮಲವೂ ತೊಳತೊಳಗಿ ಬೆಳಗುತ್ತಿದ್ದವು. ತಲೆಯ ಮೇಲೆ ರತ್ನ ಕಿರೀಟವೂ, ಎಂಟು ಭುಜಗಳಲ್ಲಿಯೂ ಎಂಟು ದಿವ್ಯಾಯುಧಗಳು ಹೊಳೆಯುತ್ತಿದ್ದವು. ದೇವತೆಗಳೂ, ಮುನಿಗಳೂ, ಪಾರ್ಷದರೂ ಸ್ವಾಮಿಯನ್ನು ಸೇವಿಸುತ್ತಿದ್ದರು. ಗರುಡದೇವರು ಕಿನ್ನರರಂತೆ ತಮ್ಮ ಸಾಮವೇದ ಮಯವಾದ ರೆಕ್ಕೆಗಳ ಧ್ವನಿಯಿಂದ ದೇವದೇವನ ಕೀರ್ತಿಯನ್ನು ಗಾನಮಾಡುತ್ತಿದ್ದರು. ॥6॥

ಮೂಲಮ್

(ಶ್ಲೋಕ - 7)
ಪೀನಾಯತಾಷ್ಟಭುಜಮಂಡಲಮಧ್ಯಲಕ್ಷ್ಮ್ಯಾ
ಸ್ಪರ್ಧಚ್ಛ್ರಿಯಾ ಪರಿವೃತೋ ವನಮಾಲಯಾದ್ಯಃ ।
ಬರ್ಹಿಷ್ಮತಃ ಪುರುಷ ಆಹ ಸುತಾನ್ಪ್ರಪನ್ನಾನ್
ಪರ್ಜನ್ಯನಾದರುತಯಾ ಸಘೃಣಾವಲೋಕಃ ॥

ಅನುವಾದ

ಅವನ ಎಂಟು ನೀಳವಾದ ಸ್ಥೂಲಭುಜಗಳ ನಡುವೆ ಶ್ರೀಲಕ್ಷ್ಮೀದೇವಿಯೊಡನೆ ಸ್ಪರ್ಧಿಸುತ್ತಿದ್ದ ವನಮಾಲೆಯು ಮೆರೆಯುತ್ತಿತ್ತು. ಆದಿಪುರುಷ ಶ್ರೀಮನ್ನಾರಾಯಣನು ತನ್ನಲ್ಲಿ ಶರಣಾಗತರಾಗಿದ್ದ ಪ್ರಚೇತಸರ ಮೇಲೆ ದಯಾದೃಷ್ಟಿಯನ್ನು ಬೀರುತ್ತಾ ಮೇಘಗಂಭೀರವಾಣಿಯಿಂದ ಇಂತೆಂದನು ॥7॥

ಮೂಲಮ್

(ಶ್ಲೋಕ - 8)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ವರಂ ವೃಣೀಧ್ವಂ ಭದ್ರಂ ವೋ ಯೂಯಂ ಮೇ ನೃಪನಂದನಾಃ ।
ಸೌಹಾರ್ದೇನಾಪೃಥಗ್ಧರ್ಮಾಸ್ತುಷ್ಟೋಹಂ ಸೌಹೃದೇನ ವಃ ॥

ಅನುವಾದ

ಶ್ರೀಭಗವಂತನು ಹೇಳಿದನು — ರಾಜಪುತ್ರರೇ! ನಿಮಗೆ ಮಂಗಳವಾಗಲಿ. ನಿಮಗಿಷ್ಟವಾದ ವರವನ್ನು ಬೇಡಿರಿ. ನಿಮ್ಮೆಲ್ಲರಲ್ಲಿ ಪರಸ್ಪರ ಪ್ರೀತಿಯಿದ್ದು, ಏಕಧರ್ಮವನ್ನು ಪಾಲಿಸುತ್ತಿರುವ ನಿಮ್ಮ ಈ ಸೌಹಾರ್ದವು ನನಗೆ ಸಂತೋಷ ವನ್ನುಂಟುಮಾಡಿದೆ. ॥8॥

ಮೂಲಮ್

(ಶ್ಲೋಕ - 9)
ಯೋನುಸ್ಮರತಿ ಸಂಧ್ಯಾಯಾಂ ಯುಷ್ಮಾನನುದಿನಂ ನರಃ ।
ತಸ್ಯ ಭ್ರಾತೃಷ್ವಾತ್ಮಸಾಮ್ಯಂ ತಥಾ ಭೂತೇಷು ಸೌಹೃದಮ್ ॥

ಅನುವಾದ

ಪ್ರತಿದಿನವು ಸಾಯಂಕಾಲದಲ್ಲಿ ನಿಮ್ಮನ್ನು ಸ್ಮರಿಸುವವನಿಗೆ ಅಣ್ಣ ತಮ್ಮಂದಿರಲ್ಲಿ ನಿಮ್ಮಂತೆಯೇ ಪ್ರೇಮ ಉಂಟಾದೀತು ಹಾಗೂ ಸಮಸ್ತ ಜೀವರ ಕುರಿತು ಮೈತ್ರಿಯ ಭಾವ ಉಂಟಾಗುವುದು. ॥9॥

ಮೂಲಮ್

(ಶ್ಲೋಕ - 10)
ಯೇ ತು ಮಾಂ ರುದ್ರಗೀತೇನ ಸಾಯಂ ಪ್ರಾತಃ ಸಮಾಹಿತಾಃ ।
ಸ್ತುವಂತ್ಯಹಂ ಕಾಮವರಾನ್ ದಾಸ್ಯೇ ಪ್ರಜ್ಞಾಂ ಚ ಶೋಭನಾಮ್ ॥

ಅನುವಾದ

ಸಾಯಂ ಕಾಲ ಮತ್ತು ಪ್ರಾತಃಕಾಲಗಳಲ್ಲಿ ಏಕಾಗ್ರ ಚಿತ್ತದಿಂದ ರುದ್ರಗೀತೆಯ ಮೂಲಕ ನನ್ನನ್ನು ಸ್ತುತಿಸುವವನಿಗೆ ನಾನು ಇಷ್ಟವಾದ ವರವನ್ನು ಮತ್ತು ಶುದ್ಧವಾದ ಬುದ್ಧಿಯನ್ನು ಕರುಣಿಸುವೆನು. ॥10॥

ಮೂಲಮ್

(ಶ್ಲೋಕ - 11)
ಯದ್ಯೂಯಂ ಪಿತುರಾದೇಶಮಗ್ರಹೀಷ್ಟ ಮುದಾನ್ವಿತಾಃ ।
ಅಥೋ ವ ಉಶತೀ ಕೀರ್ತಿರ್ಲೋಕಾನನು ಭವಿಷ್ಯತಿ ॥

ಅನುವಾದ

ನೀವು ಸಂತೋಷದಿಂದ ತಂದೆಯ ಅಪ್ಪಣೆಯನ್ನು ಶಿರಸಾವಹಿಸಿದ್ದೀರಿ. ಅದರಿಂದ ನಿಮ್ಮ ಕಮನೀಯ ಕೀರ್ತಿಯು ಸಮಸ್ತ ಲೋಕಗಳಲ್ಲಿಯೂ ಹರಡುವುದು. ॥11॥

ಮೂಲಮ್

(ಶ್ಲೋಕ - 12)
ಭವಿತಾ ವಿಶ್ರುತಃ ಪುತ್ರೋನವಮೋ ಬ್ರಹ್ಮಣೋ ಗುಣೈಃ ।
ಯ ಏತಾಮಾತ್ಮವಿರ್ಯೇಣ ತ್ರಿಲೋಕೀಂ ಪೂರಯಿಷ್ಯತಿ ॥

ಅನುವಾದ

ನಿಮಗೆ ಅತ್ಯಂತ ವಿಖ್ಯಾತವಾದ ಒಬ್ಬ ಸುಪುತ್ರನು ಜನಿಸುವನು. ಅವನು ಬ್ರಹ್ಮದೇವರಿಗೆ ಸ್ವಲ್ಪವೂ ಕಡಿಮೆಯಿಲ್ಲದ ಗುಣಗಳಿಂದ ಬೆಳಗುತ್ತಾ ತನ್ನ ಸಂತಾನದಿಂದ ಮೂರುಲೋಕಗಳನ್ನೂ ತುಂಬುವನು.॥12॥

ಮೂಲಮ್

(ಶ್ಲೋಕ - 13)
ಕಂಡೋಃ ಪ್ರಮ್ಲೋಚಯಾ ಲಬ್ಧಾ ಕನ್ಯಾ ಕಮಲಲೋಚನಾ ।
ತಾಂ ಚಾಪವಿದ್ಧಾಂ ಜಗೃಹುರ್ಭೂರುಹಾ ನೃಪನಂದನಾಃ ॥

ಅನುವಾದ

ರಾಜಕುಮಾರರೇ! ತಪೋನಿಷ್ಠನಾಗಿದ್ದ ಕಂಡು ಮಹರ್ಷಿಯ ತಪಸ್ಸನ್ನು ಕೆಡಿಸಲು ಇಂದ್ರನು ‘ಪ್ರಮ್ಲೋಚಾ’ ಎಂಬ ಅಪ್ಸರೆಯನ್ನು ಕಳುಹಿಸಿದಾಗ ಅವಳಲ್ಲಿ ಮಹರ್ಷಿಗೆ ಕಮಲಲೋಚನೆಯಾದ ಒಂದು ಕನ್ಯಾರತ್ನವು ಜನಿಸಿತು. ಆ ಮಗುವನ್ನು ಅಲ್ಲಿಯೇ ಬಿಟ್ಟು ಆಕೆಯು ಸ್ವರ್ಗಕ್ಕೆ ಹೊರಟು ಹೋದಳು. ಆಗ ಅಲ್ಲಿದ್ದ ವೃಕ್ಷಗಳೇ ಆ ಮಗುವನ್ನು ಪಾಲಿಸಿ-ಪೋಷಿಸಿದರು. ॥13॥

ಮೂಲಮ್

(ಶ್ಲೋಕ - 14)
ಕ್ಷುತ್ಕ್ಷಾಮಾಯಾ ಮುಖೇ ರಾಜಾ ಸೋಮಃ ಪೀಯೂಷವರ್ಷಿಣೀಮ್ ।
ದೇಶಿನೀಂ ರೋದಮಾನಾಯಾ ನಿದಧೇ ಸ ದಯಾನ್ವಿತಃ ॥

ಅನುವಾದ

ಆ ಮಗುವು ಹಸಿವಿನಿಂದ ಪೀಡಿತವಾಗಿ ಅಳತೊಡಗಿದಾಗ ಔಷಧಿಗಳ ಅರಸನಾದ ಚಂದ್ರನು ಕರುಣೆಯಿಂದ ಅದರ ಬಾಯಲ್ಲಿ ಅಮೃತವನ್ನು ಸುರಿಸುವ ತನ್ನ ತೋರುಬೆರಳನ್ನು ಇರಿಸಿದನು. ॥14॥

ಮೂಲಮ್

(ಶ್ಲೋಕ - 15)
ಪ್ರಜಾವಿಸರ್ಗ ಆದಿಷ್ಟಾಃ ಪಿತ್ರಾ ಮಾಮನುವರ್ತತಾ ।
ತತ್ರ ಕನ್ಯಾಂ ವರಾರೋಹಾಂ ತಾಮುದ್ವಹತ ಮಾಚಿರಮ್ ॥

ಅನುವಾದ

ನಿಮ್ಮ ತಂದೆಯು ಈಗ ನನ್ನ ಆರಾಧನೆಯಲ್ಲಿ ತೊಡಗಿರುವನು. ನಿಮಗೆ ಸಂತಾನವನ್ನು ಪಡೆಯಬೇಕೆಂಬ ಆಜ್ಞೆಯನ್ನು ಕೊಟ್ಟಿರುವನು. ಆದ್ದರಿಂದ ನೀವು ಬೇಗನೇ ದೇವತೋಪಮಳಾದ ಆ ಕನ್ಯಾಮಣಿಯನ್ನು ವಿವಾಹವಾಗಿರಿ. ॥15॥

ಮೂಲಮ್

(ಶ್ಲೋಕ - 16)
ಅಪೃಥಗ್ಧರ್ಮಶೀಲಾನಾಂ ಸರ್ವೇಷಾಂ ವಃ ಸುಮಧ್ಯಮಾ ।
ಅಪೃಥಗ್ಧರ್ಮಶೀಲೇಯಂ ಭೂಯಾತ್ಪತ್ನ್ಯರ್ಪಿತಾಶಯಾ ॥

ಅನುವಾದ

ನೀವೆಲ್ಲರೂ ಒಂದೇ ಧರ್ಮಲ್ಲಿ ತತ್ಪರ ರಾಗಿರುವಿರಿ ಮತ್ತು ನಿಮ್ಮ ಸ್ವಭಾವವೂ ಒಂದೇ ರೀತಿಯಾಗಿದೆ. ಅದಕ್ಕಾಗಿ ನಿಮ್ಮಂತೆಯೇ ಸಮಾನಧರ್ಮ-ಸ್ವಭಾವವುಳ್ಳ ಆ ಸುಂದರಕನ್ಯೆಯು ನಿಮ್ಮೆಲ್ಲರ ಪತ್ನಿಯಾಗುವಳು. ನಿಮ್ಮೆಲ್ಲರಲ್ಲಿ ಅವಳಿಗೆ ಸಮಾನವಾದ ಅನುರಾಗವಿದ್ದೀತು. ॥16॥

ಮೂಲಮ್

(ಶ್ಲೋಕ - 17)
ದಿವ್ಯವರ್ಷಸಹಸ್ರಾಣಾಂ ಸಹಸ್ರಮಹತೌಜಸಃ ।
ಭೌಮಾನ್ಭೋಕ್ಷ್ಯಥ ಭೋಗಾನ್ವೈ ದಿವ್ಯಾಂಶ್ಚಾನುಗ್ರಹಾನ್ಮಮ ॥

ಅನುವಾದ

ನೀವು ನನ್ನ ಕೃಪೆಯಿಂದ ಹತ್ತುಲಕ್ಷ ವರ್ಷಗಳ ಕಾಲಪೂರ್ಣ ಬಲಶಾಲಿಗಳಾಗಿದ್ದು ನಾನಾ ರೀತಿಯ ಭೂಲೋಕದ ಭೋಗಗಳನ್ನು ಹಾಗೂ ಸ್ವರ್ಗಲೋಕದ ದಿವ್ಯಭೋಗಗಳನ್ನೂ ಅನುಭವಿಸುವಿರಿ. ॥17॥

ಮೂಲಮ್

(ಶ್ಲೋಕ - 18)
ಅಥ ಮಯ್ಯನಪಾಯಿನ್ಯಾ ಭಕ್ತ್ಯಾ ಪಕ್ವಗುಣಾಶಯಾಃ ।
ಉಪಯಾಸ್ಯಥ ಮದ್ಧಾಮ ನಿರ್ವಿದ್ಯ ನಿರಯಾದತಃ ॥

ಅನುವಾದ

ಕೊನೆಯಲ್ಲಿ ನನ್ನ ನಿಶ್ಚಲವಾದ ಭಕ್ತಿಯಿಂದ ಹೃದಯದ ಸಮಸ್ತ ವಾಸನಾರೂಪವಾದ ದೋಷಗಳು ದಗ್ಧವಾದ ಬಳಿಕ ನೀವುಗಳು ಈ ಲೋಕ ಮತ್ತು ಪರಲೋಕದ ನರಕ ಸದೃಶವಾದ ಎಲ್ಲ ಭೋಗಗಳಿಂದಲೂ ವಿರಕ್ತರಾಗಿ ನನ್ನ ಪರಮ ಧಾಮಕ್ಕೆ ತೆರಳುವಿರಿ. ॥18॥

ಮೂಲಮ್

(ಶ್ಲೋಕ - 19)
ಗೃಹೇಷ್ವಾವಿಶತಾಂ ಚಾಪಿ ಪುಂಸಾಂ ಕುಶಲಕರ್ಮಣಾಮ್ ।
ಮದ್ವಾರ್ತಾಯಾತಯಾಮಾನಾಂ ನ ಬಂಧಾಯ ಗೃಹಾ ಮತಾಃ ॥

ಅನುವಾದ

ಭಗವದರ್ಪಣ ಬುದ್ಧಿಯಿಂದ ಕರ್ಮಗಳನ್ನು ಆಚರಿಸುತ್ತಾ, ತಮ್ಮ ಎಲ್ಲ ಕಾಲವನ್ನು ನನ್ನ ಕಥಾ-ಕೀರ್ತನೆಯಲ್ಲೇ ಕಳೆಯುವವರು ಗೃಹಸ್ಥಾಶ್ರಮದಲ್ಲೇ ಇದ್ದರೂ ಅವರಿಗೆ ಗೃಹವು ಬಂಧನಕಾರಕವಾಗುವುದಿಲ್ಲ. ॥19॥

ಮೂಲಮ್

(ಶ್ಲೋಕ - 20)
ನವ್ಯವದ್ಧೃದಯೇ ಯಜ್ಞೋ ಬ್ರಹ್ಮೈತದ್ಬ್ರಹ್ಮವಾದಿಭಿಃ ।
ನ ಮುಹ್ಯಂತಿ ನ ಶೋಚಂತಿ ನ ಹೃಷ್ಯಂತಿ ಯತೋ ಗತಾಃ ॥

ಅನುವಾದ

ಅವರು ಪ್ರತಿದಿನವೂ ನನ್ನ ಲೀಲೆಗಳನ್ನೇ ಕೇಳುತ್ತಿರುತ್ತಾರೆ. ಆದುದರಿಂದ ಬ್ರಹ್ಮವಾದಿಗಳಾದ ಜ್ಞಾನೋಪದೇಶಕರ ಮೂಲಕ ಆ ಶ್ರೋತೃಗಳ ಹೃದಯದಲ್ಲಿ ಜ್ಞಾನಸ್ವರೂಪನಾದ ಪರಬ್ರಹ್ಮನಾದ ನಾನು ಪ್ರತಿದಿನವೂ ಹೊಸಬನಂತೆ ಬೆಳಗುತ್ತಿರುತ್ತೇನೆ. ನನ್ನನ್ನು ಹೊಂದಿದ ಬಳಿಕ ಜೀವಿಗಳಿಗೆ ಶೋಕವಾಗಲೀ, ಮೋಹವಾಗಲೀ, ಹರ್ಷವಾಗಲೀ ಇರುವುದಿಲ್ಲ. ॥20॥

ಮೂಲಮ್

(ಶ್ಲೋಕ - 21)

ಮೂಲಮ್ (ವಾಚನಮ್)

ಮೈತ್ರೇಯ ಉವಾಚ

ಮೂಲಮ್

ಏವಂ ಬ್ರುವಾಣಂ ಪುರುಷಾರ್ಥಭಾಜನಂ
ಜನಾರ್ದನಂ ಪ್ರಾಂಜಲಯಃ ಪ್ರಚೇತಸಃ ।
ತದ್ದರ್ಶನಧ್ವಸ್ತತಮೋರಜೋಮಲಾ
ಗಿರಾಗೃಣನ್ಗದ್ಗದಯಾ ಸುಹೃತ್ತಮಮ್ ॥

ಅನುವಾದ

ಶ್ರೀಮೈತ್ರೇಯರು ಹೇಳುತ್ತಾರೆ — ಸಕಲ ಪುರುಷಾರ್ಥಗಳಿಗೂ ಆಶ್ರಯನಾಗಿ, ಸರ್ವರಿಗೂ ಪರಮಸುಹೃದನೂ ಆದ ಶ್ರೀಹರಿಯು ಹೀಗೆ ಅಪ್ಪಣೆಕೊಡಿಸಲು, ಆತನ ದರ್ಶನದಿಂದಲೇ ರಜೋಗುಣ-ತಮೋಗುಣಗಳ ಮಲವನ್ನು ಕಳಕೊಂಡಿದ್ದ ಪ್ರಚೇತಸರು ಕೈಗಳನ್ನು ಜೋಡಿಸಿಕೊಂಡು ಗದ್ಗದವಾದ ವಾಣಿಯಿಂದ ಆತನನ್ನು ಸ್ತುತಿಸ ತೊಡಗಿದರು. ॥21॥

ಮೂಲಮ್

(ಶ್ಲೋಕ - 22)

ಮೂಲಮ್ (ವಾಚನಮ್)

ಪ್ರಚೇತಸ ಊಚುಃ

ಮೂಲಮ್

ನಮೋ ನಮಃ ಕ್ಲೇಶವಿನಾಶನಾಯ
ನಿರೂಪಿತೋದಾರಗುಣಾಹ್ವಯಾಯ ।
ಮನೋವಚೋವೇಗಪುರೋಜವಾಯ
ಸರ್ವಾಕ್ಷಮಾರ್ಗೈರಗತಾಧ್ವನೇ ನಮಃ ॥

ಅನುವಾದ

ಪ್ರಚೇತಸರು ಹೇಳುತ್ತಾರೆ — ಭಕ್ತರ ಕ್ಲೇಶಗಳನ್ನು ದೂರಮಾಡುವ ಭಗವಂತನೇ ನಿನಗೆ ನಮೋ ನಮಃ. ವೇದಗಳಿಂದ ಹೊಗಳಲ್ಪಟ್ಟ ಉದಾರವಾದ ಗುಣಗಳಿಂದಲೂ, ನಾಮಗಳಿಂದಲೂ ಭೂಷಿತನಾದ ನಿನಗೆ ನಮಸ್ಕಾರವು. ಮನಸ್ಸು ಮತ್ತು ಮಾತುಗಳ ವೇಗಗಳನ್ನು ಮೀರಿದ ವೇಗವುಳ್ಳವನಾಗಿ ಎಲ್ಲ ಇಂದ್ರಿಯಗಳ ಗತಿಗಳಿಂದಲೂ ಹೊರಗೆ ಬೆಳಗುತ್ತಿರುವ ಸ್ವರೂಪವುಳ್ಳ ನಿನಗೆ ಮತ್ತೆ-ಮತ್ತೆ ನಮಸ್ಕಾರಗಳು. ॥22॥

ಮೂಲಮ್

(ಶ್ಲೋಕ - 23)
ಶುದ್ಧಾಯ ಶಾಂತಾಯ ನಮಃ ಸ್ವನಿಷ್ಠಯಾ
ಮನಸ್ಯಪಾರ್ಥಂ ವಿಲಸದ್ದ್ವಯಾಯ ।
ನಮೋ ಜಗತ್ಸ್ಥಾನಲಯೋದಯೇಷು
ಗೃಹೀತಮಾಯಾಗುಣವಿಗ್ರಹಾಯ ॥

ಅನುವಾದ

ಸ್ವಸ್ವರೂಪದಲ್ಲಿ ನೆಲೆಗೊಂಡಿರುವುದರಿಂದ ಸದಾಶುದ್ಧನಾಗಿ ಶಾಂತನಾಗಿರುವವನೂ, ಪರಮಾರ್ಥವಲ್ಲದಿರುವ ದ್ವೈತವನ್ನು ಮನಸ್ಸಿನಲ್ಲಿ ತೋರುತ್ತಿರುವವನೂ, ಸೃಷ್ಟಿ, ಸ್ಥಿತಿ, ಲಯಗಳಿಗಾಗಿ ಮಾಯೆಯ ಗುಣಗಳನ್ನು ಸ್ವೀಕರಿಸಿ ತ್ರಿಮೂರ್ತಿ ಸ್ವರೂಪದಿಂದ ಬೆಳಗುತ್ತಿರುವವನೂ ಆದ ನಿನಗೆ ನಮೋ ನಮಃ ॥23॥

ಮೂಲಮ್

(ಶ್ಲೋಕ - 24)
ನಮೋ ವಿಶುದ್ಧಸತ್ತ್ವಾಯ ಹರಯೇ ಹರಿಮೇಧಸೇ ।
ವಾಸುದೇವಾಯ ಕೃಷ್ಣಾಯ ಪ್ರಭವೇ ಸರ್ವಸಾತ್ವತಾಮ್ ॥

ಅನುವಾದ

ಶುದ್ಧ ಸತ್ತ್ವಸ್ವರೂಪನೂ, ಸಂಸಾರವನ್ನು ದೂರ ಮಾಡುವ ಜ್ಞಾನವುಳ್ಳವನೂ, ವಸುದೇವನಂದನನೂ, ಸಮಸ್ತ ಭಾಗವತರ ಪ್ರಭುವೂ ಆಗಿರುವ ಭಗವಾನ್ ಶ್ರೀಹರಿ-ಕೃಷ್ಣನಿಗೆ ನಮಸ್ಕಾರವು. ॥24॥

ಮೂಲಮ್

(ಶ್ಲೋಕ - 25)
ನಮಃ ಕಮಲನಾಭಾಯ ನಮಃ ಕಮಲಮಾಲಿನೇ ।
ನಮಃ ಕಮಲಪಾದಾಯ ನಮಸ್ತೇ ಕಮಲೇಕ್ಷಣ ॥

ಅನುವಾದ

ನಾಭಿಯಲ್ಲಿ (ಜಗತ್ಕಾರಣವಾದ) ಕಮಲವುಳ್ಳವನೂ, ಕೊರಳಲ್ಲಿ ಕಮಲ ಕುಸುಮಗಳ ಮಾಲೆಯುಳ್ಳವನೂ, ಕಮಲವನ್ನು ಹೋಲುವ ಕೋಮಲ ಚರಣವುಳ್ಳವನೂ, ಕಮಲದಂತೆ ಕಣ್ಣುಗಳುಳ್ಳವನೂ ಆದ ನಿನಗೆ ನಮಸ್ಕಾರವು. ॥25॥

ಮೂಲಮ್

(ಶ್ಲೋಕ - 26)
ನಮಃ ಕಮಲಕಿಂಜಲ್ಕಪಿಶಂಗಾಮಲವಾಸಸೇ ।
ಸರ್ವಭೂತನಿವಾಸಾಯ ನಮೋಯುಂಕ್ಷ್ಮಹಿ ಸಾಕ್ಷಿಣೇ ॥

ಅನುವಾದ

ನೀನು ಕಮಲ ಕೇಸರದಂತೆ ಇರುವ ಸ್ವಚ್ಛ ಪೀತಾಂಬರವನ್ನು ಧರಿಸಿರುವೆ. ಸಮಸ್ತ ಪ್ರಾಣಿಗಳ ಆಶ್ರಯನೂ, ಎಲ್ಲರ ಸಾಕ್ಷಿಯೂ ಆದ ನಿನಗೆ ನಾವು ನಮಸ್ಕರಿಸುತ್ತೇವೆ. ॥26॥

ಮೂಲಮ್

(ಶ್ಲೋಕ - 27)
ರೂಪಂ ಭಗವತಾ ತ್ವೇತದಶೇಷಕ್ಲೇಶಸಂಕ್ಷಯಮ್ ।
ಆವಿಷ್ಕೃತಂ ನಃ ಕ್ಲಿಷ್ಟಾನಾಂ ಕಿಮನ್ಯದನುಕಂಪಿತಮ್ ॥

ಅನುವಾದ

ಭಗವಂತನೇ! ನಿನ್ನ ಈ ಸ್ವರೂಪವು ಸಮಸ್ತ ಕ್ಲೇಶಗಳನ್ನು ದೂರಮಾಡುವುದಾಗಿದೆ. ಅವಿದ್ಯೆ, ಅಸ್ಮಿತೆ, ರಾಗ-ದ್ವೇಷ ಮುಂತಾದ ಕ್ಲೇಶಗಳಿಂದ ಪೀಡಿತರಾದ ನಮ್ಮ ಮುಂದೆ ಇದನ್ನು ಪ್ರಕಟಿಸಿರುವೆ. ಇದಕ್ಕಿಂತಲೂ ಮಿಗಿಲಾದ ಕೃಪೆಯು ಬೇರೇನಿರಬಹುದು? ॥27॥

ಮೂಲಮ್

(ಶ್ಲೋಕ - 28)
ಏತಾವತ್ತ್ವಂ ಹಿ ವಿಭುಭಿರ್ಭಾವ್ಯಂ ದೀನೇಷು ವತ್ಸಲೈಃ ।
ಯದನುಸ್ಮರ್ಯತೇ ಕಾಲೇ ಸ್ವಬುದ್ಧ್ಯಾಭದ್ರರಂಧನ ॥

ಅನುವಾದ

ಅಮಂಗಳವನ್ನು ತೊಡೆದು ಹಾಕುವ ಮಂಗಳ ಸ್ವರೂಪನೇ! ದೀನರಲ್ಲಿ ವಾತ್ಸಲ್ಯವುಳ್ಳ ಪ್ರಭುವು ದೀನಜನರನ್ನು ‘ಇವರು ನಮ್ಮವರು’ ಎಂದು ಸದಾಕಾಲ ಸ್ಮರಿಸಿಕೊಳ್ಳುವುದೇ ಪರಮಾನುಗ್ರಹವು. ॥28॥

ಮೂಲಮ್

(ಶ್ಲೋಕ - 29)
ಯೇನೋಪಶಾಂತಿರ್ಭೂತಾನಾಂ ಕ್ಷುಲ್ಲಕಾನಾಮಪೀಹತಾಮ್ ।
ಅಂತರ್ಹಿತೋಂತರ್ಹೃದಯೇ ಕಸ್ಮಾನ್ನೋ ವೇದ ನಾಶಿಷಃ ॥

ಅನುವಾದ

ಅದರಿಂದಲೇ ಅವರಿಗೆ ಶಾಂತಿ ಸಿಗುತ್ತದೆ. ನೀನಾದರೋ ಅತಿಕ್ಷುದ್ರ ಪ್ರಾಣಿಗಳ ಅಂತಃಕರಣದಲ್ಲಿ ಅಂತರ್ಯಾಮಿಯಾಗಿ ವಿರಾಜಿಸುತ್ತಿರುವೆ. ಮತ್ತೆ ನಿನ್ನ ಉಪಾಸಕರಾದ ನಾವುಗಳು ಮಾಡುವ ಕಾಮನೆಗಳು ನಿನಗೆ ತಿಳಿಯದೇ ಇರುವುದೇ? ॥29॥

ಮೂಲಮ್

(ಶ್ಲೋಕ - 30)
ಅಸಾವೇವ ವರೋಸ್ಮಾಕಮೀಪ್ಸಿತೋ ಜಗತಃ ಪತೇ ।
ಪ್ರಸನ್ನೋ ಭಗವಾನ್ಯೇಷಾಮಪವರ್ಗಗುರುರ್ಗತಿಃ ॥

ಅನುವಾದ

ಜಗದೀಶ್ವರನೇ! ನೀನು ಮೋಕ್ಷ ಮಾರ್ಗವನ್ನು ತೋರುವವನೂ, ಸ್ವತಃ ಪುರುಷಾರ್ಥ ಸ್ವರೂಪನೂ ಆಗಿರುವೆ. ನೀನು ನಮ್ಮ ಮೇಲೆ ಪ್ರಸನ್ನನಾಗಿರುವೆ. ಇದಕ್ಕಿಂತ ಬೇರೆ ಏನು ನಮಗೆ ಬೇಕು? ನಿನ್ನ ಪ್ರಸನ್ನತೆಯೇ ನಮ್ಮ ಇಷ್ಟವಾದ ವರವಲ್ಲವೇ! ॥30॥

ಮೂಲಮ್

(ಶ್ಲೋಕ - 31)
ವರಂ ವೃಣೀಮಹೇಥಾಪಿ ನಾಥ ತ್ವತ್ಪರತಃ ಪರಾತ್ ।
ನ ಹ್ಯಂತಸ್ತ್ವದ್ವಿಭೂತೀನಾಂ ಸೋನಂತ ಇತಿ ಗೀಯಸೇ ॥

ಅನುವಾದ

ಆದರೂ ಸ್ವಾಮಿ! ನಾವು ಒಂದು ವರವನ್ನು ನಿನ್ನಲ್ಲಿ ಅವಶ್ಯವಾಗಿ ಕೇಳುತ್ತೇವೆ. ಪ್ರಭೋ! ನೀನು ಪ್ರಕೃತಿಯಿಂದ ಅತೀತನಾಗಿರುವೆ. ನಿನ್ನ ವಿಭೂತಿಗಳಿಗೂ ಯಾವುದೇ ಕೊನೆಯಿಲ್ಲ. ಅದಕ್ಕಾಗಿ ನೀನು ‘ಅನಂತ’ನೆಂದು ಹೇಳಿಸಿಕೊಳ್ಳುವೆ. ॥31॥

ಮೂಲಮ್

(ಶ್ಲೋಕ - 32)
ಪಾರಿಜಾತೇಂಜಸಾ ಲಬ್ಧೇ ಸಾರಂಗೋನ್ಯನ್ನ ಸೇವತೇ ।
ತ್ವದಂಘ್ರಿಮೂಲಮಾಸಾದ್ಯ ಸಾಕ್ಷಾತ್ಕಿಂ ಕಿಂ ವೃಣೀಮಹಿ ॥

ಅನುವಾದ

ಭ್ರಮರಕ್ಕೆ ಆಯಾಸವಿಲ್ಲದೆಯೇ ಪಾರಿಜಾತ ವೃಕ್ಷವು ದೊರೆತರೆ, ಅದು ಯಾವುದೇ ಬೇರೆ ವೃಕ್ಷವನ್ನು ಆಶ್ರಯಿಸಿತೇ? ಹೀಗಿರುವಾಗ ನಿನ್ನಲ್ಲಿ ಶರಣಾಗತರಾಗಿ ಬಂದ ನಾವು ಈಗ ಏನನ್ನು ಬೇಡಲಿ? ॥32॥

ಮೂಲಮ್

(ಶ್ಲೋಕ - 33)
ಯಾವತ್ತೇ ಮಾಯಯಾ ಸ್ಪೃಷ್ಟಾ ಭ್ರಮಾಮ ಇಹ ಕರ್ಮಭಿಃ ।
ತಾವದ್ಭವತ್ಪ್ರಸಂಗಾನಾಂ ಸಂಗಃ ಸ್ಯಾನ್ನೋ ಭವೇ ಭವೇ ॥

ಅನುವಾದ

ನಿನ್ನ ಮಾಯೆಯಿಂದ ಮೋಹಿತರಾಗಿ ನಾವು ನಮ್ಮ ಕರ್ಮಾನುಸಾರ ಪ್ರಪಂಚದಲ್ಲಿ ಅಲೆದಾಡುತ್ತಿರುವವರೆಗೆ ಜನ್ಮ-ಜನ್ಮಗಳಲ್ಲಿಯೂ ನಮಗೆ ನಿನ್ನ ಪ್ರೇಮಿಭಕ್ತರ ಸಂಗವು ದೊರೆಯುತ್ತಿರಲಿ’ ಇಷ್ಟು ಮಾತ್ರ ನಿನ್ನಲ್ಲಿ ಬೇಡಿಕೊಳ್ಳುತ್ತೇವೆ. ॥33॥

ಮೂಲಮ್

(ಶ್ಲೋಕ - 34)
ತುಲಯಾಮ ಲವೇನಾಪಿ ನ ಸ್ವರ್ಗಂ ನಾಪುನರ್ಭವಮ್ ।
ಭಗವತ್ಸಂಗಿಸಂಗಸ್ಯ ಮರ್ತ್ಯಾನಾಂ ಕಿಮುತಾಶಿಷಃ ॥

ಅನುವಾದ

ನಾವಾದರೋ ಭಗವದ್ಭಕ್ತರ ಕ್ಷಣಕಾಲದ ಸಂಗಕ್ಕೆ ಸಮಾನವಾಗಿ ಸ್ವರ್ಗ ಮತ್ತು ಮೋಕ್ಷವೂ ಕೂಡ ಏನೂ ಇಲ್ಲವೆಂದೇ ಭಾವಿಸುತ್ತೇವೆ. ಹಾಗಿರುವಾಗ ಮಾನುಷ ಭೋಗಗಳ ಬಗ್ಗೆ ಹೇಳುವುದಾದರೂ ಏನಿದೆ? ॥34॥

ಮೂಲಮ್

(ಶ್ಲೋಕ - 35)
ಯತ್ರೇಡ್ಯಂತೇ ಕಥಾ ಮೃಷ್ಟಾಸ್ತೃಷ್ಣಾಯಾಃ ಪ್ರಶಮೋ ಯತಃ ।
ನಿರ್ವೈರಂ ಯತ್ರ ಭೂತೇಷು ನೋದ್ವೇಗೋ ಯತ್ರ ಕಶ್ಚನ ॥

ಅನುವಾದ

ಭಗವದ್ಭಕ್ತರ ಸಮಾಜದಲ್ಲಿ ಸದಾಕಾಲವೂ ಭಗವಂತನ ಮಧುರವಾದ ಕಥೆಗಳ ಕೀರ್ತನೆ ಆಗುತ್ತಾ ಇರುತ್ತವೆ. ಅದರ ಶ್ರವಣಮಾತ್ರದಿಂದ ಭೋಗತೃಷ್ಣೆಯು ಶಾಂತವಾಗಿ ಹೋಗುತ್ತದೆ. ಅಲ್ಲಿ ಪ್ರಾಣಿಗಳಲ್ಲಿ ಯಾವುದೇ ರೀತಿಯ ವೈರ-ವಿರೋಧ, ಉದ್ವೇಗಗಳು ಉಳಿಯುವುದಿಲ್ಲ. ॥35॥

ಮೂಲಮ್

(ಶ್ಲೋಕ - 36)
ಯತ್ರ ನಾರಾಯಣಃ ಸಾಕ್ಷಾದ್ಭಗವಾನ್ನ್ಯಾಸಿನಾಂ ಗತಿಃ ।
ಸಂಸ್ತೂಯತೇ ಸತ್ಕಥಾಸು ಮುಕ್ತಸಂಗೈಃ ಪುನಃ ಪುನಃ ॥

ಅನುವಾದ

ಒಳ್ಳೊಳ್ಳೆಯ ಕಥಾಪ್ರಸಂಗಗಳ ಮೂಲಕ ಸಂನ್ಯಾಸಿಗಳ ಏಕಮಾತ್ರ ಆಶ್ರಯನಾದ ಸಾಕ್ಷಾತ್ ಶ್ರೀಮನ್ನಾರಾಯಣನ ಗುಣಗಾನವು ಪದೇ-ಪದೇ ನಿಷ್ಕಾಮಭಾವದಿಂದ ನಡೆಯುತ್ತಾ ಇರುತ್ತದೆ. ॥36॥

ಮೂಲಮ್

(ಶ್ಲೋಕ - 37)
ತೇಷಾಂ ವಿಚರತಾಂ ಪದ್ಭ್ಯಾಂ ತೀರ್ಥಾನಾಂ ಪಾವನೇಚ್ಛಯಾ ।
ಭೀತಸ್ಯ ಕಿಂ ನ ರೋಚೇತ ತಾವಕಾನಾಂ ಸಮಾಗಮಃ ॥

ಅನುವಾದ

ನಿನ್ನ ಆ ಭಕ್ತಶ್ರೇಷ್ಠರು ತೀರ್ಥಗಳನ್ನು ಪವಿತ್ರಗೊಳಿಸುವ ಉದ್ದೇಶದಿಂದಲೇ ಭೂಮಿಯಮೇಲೆ ಕಾಲ್ನಡಿಗೆಯಿಂದ ಸಂಚರಿಸುತ್ತಿರುತ್ತಾರೆ. ಅಂತಹ ಮಹಾತ್ಮರ ಸಮಾಗಮವು ಸಂಸಾರಭೀತರಾದ ಯಾವ ಮನುಷ್ಯನಿಗೆ ತಾನೇ ರುಚಿಸದು? ॥37॥

ಮೂಲಮ್

(ಶ್ಲೋಕ - 38)
ವಯಂ ತು ಸಾಕ್ಷಾದ್ಭಗವನ್ಭವಸ್ಯ
ಪ್ರಿಯಸ್ಯ ಸಖ್ಯುಃ ಕ್ಷಣಸಂಗಮೇನ ।
ಸುದುಶ್ಚಿಕಿತ್ಸ್ಯಸ್ಯ ಭವಸ್ಯ ಮೃತ್ಯೋ-
ರ್ಭಿಷಕ್ತಮಂ ತ್ವಾದ್ಯ ಗತಿಂ ಗತಾಃ ಸ್ಮಃ ॥

ಅನುವಾದ

ಭಗವಂತನೇ! ನಿನಗೆ ಪ್ರಿಯನಾದ ಭಗವಾನ್ ಶಂಕರನ ಕ್ಷಣಕಾಲದ ಸಮಾಗಮದಿಂದಲೇ ಇಂದು ನಮಗೆ ನಿನ್ನ ಸಾಕ್ಷಾತ್ತಾದ ದರ್ಶನದ ಭಾಗ್ಯವು ಒದಗಿದೆ. ದುಃಸಾಧ್ಯವಾದ ಹುಟ್ಟು-ಸಾವುಗಳೆಂಬ ರೋಗಕ್ಕೆ ಶ್ರೇಷ್ಠತಮ ವೈದ್ಯನು ನೀನೇ. ಆದ್ದರಿಂದ ನಾವು ನಿನ್ನನ್ನೇ ಆಶ್ರಯಿಸಿರುವೆವು. ॥38॥

ಮೂಲಮ್

(ಶ್ಲೋಕ - 39)
ಯನ್ನಃ ಸ್ವಧೀತಂ ಗುರವಃ ಪ್ರಸಾದಿತಾ
ವಿಪ್ರಾಶ್ಚ ವೃದ್ಧಾಶ್ಚ ಸದಾನುವೃತ್ತ್ಯಾ ।
ಆರ್ಯಾ ನತಾಃ ಸುಹೃದೋ ಭ್ರಾತರಶ್ಚ
ಸರ್ವಾಣಿ ಭೂತಾನ್ಯನಸೂಯಯೈವ ॥
(ಶ್ಲೋಕ - 40)
ಯನ್ನಃ ಸುತಪ್ತಂ ತಪ ಏತದೀಶ
ನಿರಂಧಸಾಂ ಕಾಲಮದಭ್ರಮಪ್ಸು ।
ಸರ್ವಂ ತದೇತತ್ಪುರುಷಸ್ಯ ಭೂಮ್ನೋ
ವೃಣೀಮಹೇ ತೇ ಪರಿತೋಷಣಾಯ ॥

ಅನುವಾದ

ಪ್ರಭೋ! ನಾವು ವೇದ-ಶಾಸ್ತ್ರಾದಿಗಳನ್ನು ಚೆನ್ನಾಗಿ ಅಧ್ಯಯನ ಮಾಡಿರುವುದು; ನಿರಂತರವಾಗಿ ಸೇವಾ-ಶುಶ್ರೂಷೆಗಳಿಂದ ಗುರುಗಳನ್ನೂ, ಬ್ರಾಹ್ಮಣರನ್ನೂ, ವೃದ್ಧರನ್ನು ಪ್ರಸನ್ನಗೊಳಿಸಿರುವುದು; ಅಸೂಯೆಯನ್ನು ಬಿಟ್ಟು ಶ್ರೇಷ್ಠ ಪುರುಷರನ್ನೂ, ಸ್ನೇಹಿತವರ್ಗವನ್ನು, ಬಂಧುವರ್ಗವನ್ನೂ ಹಾಗೂ ಸಮಸ್ತ ಪ್ರಾಣಿಗಳನ್ನೂ ನಮಸ್ಕರಿಸುವುದು ಮತ್ತು ಅನ್ನಾಹಾರಾದಿಗಳನ್ನು ಬಿಟ್ಟು ದೀರ್ಘಕಾಲದವರೆಗೆ ನೀರಿನಲ್ಲಿ ನಿಂತು ತಪಸ್ಸು ಮಾಡಿರುವುದು ಇವೆಲ್ಲವೂ ಸರ್ವ ವ್ಯಾಪಕನೂ, ಪುರುಷೋತ್ತಮನೂ ಆದ ನಿನ್ನ ಸಂತೋಷಕ್ಕೆ ಕಾರಣವಾಗಲಿ ಎಂದಿಷ್ಟೇ ವರವನ್ನು ನಿನ್ನಲ್ಲಿ ಬೇಡುತ್ತೇವೆ. ॥39-40॥

ಮೂಲಮ್

(ಶ್ಲೋಕ - 41)
ಮನುಃ ಸ್ವಯಂಭೂರ್ಭಗವಾನ್ ಭವಶ್ಚ
ಯೇನ್ಯೇ ತಪೋಜ್ಞಾನವಿಶುದ್ಧಸತ್ತ್ವಾಃ ।
ಅದೃಷ್ಟ ಪಾರಾ ಅಪಿ ಯನ್ಮಹಿಮ್ನಃ
ಸ್ತುವಂತ್ಯಥೋಕ್ತ್ವಾತ್ಮಸಮಂ ಗೃಣೀಮಃ ॥

ಅನುವಾದ

ಸ್ವಾಮಿ! ಸ್ವಾಯಂಭುವ ಮನು, ಸಾಕ್ಷಾತ್ ಬ್ರಹ್ಮದೇವರು, ಭಗವಾನ್ ಶ್ರೀಶಂಕರ ಮತ್ತು ತಪಸ್ಸು-ಜ್ಞಾನಗಳಿಂದ ಶುದ್ಧಚಿತ್ತರಾದ ಇತರ ಮಹಾಪುರುಷರು ನಿನ್ನ ಮಹಿಮೆಯ ಪಾರವನ್ನು ಹೊಂದದೇ ಇದ್ದರೂ-ನಿರಂತರವಾಗಿ ನಿನ್ನ ಸ್ತುತಿಯನ್ನು ಮಾಡುತ್ತಾ ಬಂದಿದ್ದಾರೆ. ಆದುದರಿಂದ ನಾವೂ ಕೂಡ ನಮ್ಮ ಬುದ್ಧಿಗೆ ತಕ್ಕಂತೆ ನಿನ್ನ ಕೀರ್ತಿಗಾನವನ್ನು ಮಾಡುತ್ತೇವೆ. ॥41॥

ಮೂಲಮ್

(ಶ್ಲೋಕ - 42)
ನಮಃ ಸಮಾಯ ಶುದ್ಧಾಯ ಪುರುಷಾಯ ಪರಾಯ ಚ ।
ವಾಸುದೇವಾಯ ಸತ್ತ್ವಾಯ ತುಭ್ಯಂ ಭಗವತೇ ನಮಃ ॥

ಅನುವಾದ

ನೀನು ಸರ್ವಸಮನೂ, ಶುದ್ಧ ಸ್ವರೂಪನೂ ಪರಮಪುರುಷನಾಗಿರುವೆ. ಇಂತಹ ಸತ್ತ್ವ ಮೂರ್ತಿಯಾದ ಭಗವಾನ್ ವಾಸುದೇವನೇ ನಿನಗೆ ನಮೋ ನಮಃ ॥42॥

ಮೂಲಮ್

(ಶ್ಲೋಕ - 43)

ಮೂಲಮ್ (ವಾಚನಮ್)

ಮೈತ್ರೇಯ ಉವಾಚ

ಮೂಲಮ್

ಇತಿ ಪ್ರಚೇತೋಭಿರಭಿಷ್ಟುತೋ ಹರಿಃ
ಪ್ರೀತಸ್ತಥೇತ್ಯಾಹ ಶರಣ್ಯವತ್ಸಲಃ ।
ಅನಿಚ್ಛತಾಂ ಯಾನಮತೃಪ್ತಚಕ್ಷುಷಾಂ
ಯಯೌ ಸ್ವಧಾಮಾನಪವರ್ಗವೀರ್ಯಃ ॥

ಅನುವಾದ

ಶ್ರೀಮೈತ್ರೇಯರು ಹೇಳುತ್ತಾರೆ — ಎಲೈ ವಿದುರನೇ! ಪ್ರಚೇತಸರು ಹೀಗೆ ಭಗವಂತನನ್ನು ಸ್ತೋತ್ರಮಾಡಲು ಶರಣಾಗತ ವತ್ಸಲನಾದ ಶ್ರೀಭಗವಂತನು ಪ್ರಸನ್ನನಾಗಿ ‘ತಥಾಸ್ತು’ ಎಂದು ಹೇಳಿ ಅನುಗ್ರಹ ಮಾಡಿದನು. ಅಪ್ರತಿಹತವಾದ ಪ್ರಭಾವವುಳ್ಳ ಶ್ರೀಹರಿಯ ಆ ಮಧುರವಾದ ಮೂರ್ತಿಯ ದರ್ಶನದಿಂದ ಪ್ರಚೇತಸರ ಕಣ್ಣುಗಳಿಗೆ ಇನ್ನು ತೃಪ್ತಿಯಾಗಿರಲೇ ಇಲ್ಲ. ಅದಕ್ಕಾಗಿ ಆತನನ್ನು ಕಳುಹಿಸಿಕೊಡಲು ಇಷ್ಟವೇ ಇರಲಿಲ್ಲ. ಆದರೂ ಶ್ರೀಭಗವಂತನು ತನ್ನ ಪರಮಧಾಮಕ್ಕೆ ಹೊರಟು ಹೋದನು. ॥43॥

ಮೂಲಮ್

(ಶ್ಲೋಕ - 44)
ಅಥ ನಿರ್ಯಾಯ ಸಲಿಲಾತ್ಪ್ರಚೇತಸ ಉದನ್ವತಃ ।
ವೀಕ್ಷ್ಯಾಕುಪ್ಯಂದ್ರುಮೈಶ್ಛನ್ನಾಂ ಗಾಂ ಗಾಂ ರೋದ್ಧುಮಿವೋಚ್ಛ್ರಿತೈಃ ॥

ಅನುವಾದ

ಅದಾದ ನಂತರ ಪ್ರಚೇತಸರು ಸಮುದ್ರಜಲದಿಂದ ಹೊರಗೆ ಬಂದು ನೋಡಲು, ಇಡೀ ಭೂಮಂಡಲವನ್ನು ಸ್ವರ್ಗದ ಮಾರ್ಗವನ್ನು ತಡೆಯುತ್ತಿವೆಯೋ ಎಂಬಂತೆ ಮಿತಿಮೀರಿ ಎತ್ತರವಾಗಿ ಬೆಳೆದ ವೃಕ್ಷಗಳು ಮುಚ್ಚಿಬಿಟ್ಟಿರುವುದನ್ನು ಕಂಡರು. ಅದನ್ನು ನೋಡಿ ಅವರಿಗೆ ವೃಕ್ಷಗಳ ಮೇಲೆ ಭಾರೀ ಕೋಪ ವುಂಟಾಯಿತು. ॥44॥

ಮೂಲಮ್

(ಶ್ಲೋಕ - 45)
ತತೋಗ್ನಿ ಮಾರುತೌ ರಾಜನ್ನಮುಂಚನ್ಮುಖತೋ ರುಷಾ ।
ಮಹೀಂ ನಿರ್ವೀರುಧಂ ಕರ್ತುಂ ಸಂವರ್ತಕ ಇವಾತ್ಯಯೇ ॥

ಅನುವಾದ

ಆಗ ಅವರು ಭೂಮಿಯನ್ನು ಮರಬಳ್ಳಿಗಳಿಂದ ಶೂನ್ಯವನ್ನಾಗಿ ಮಾಡಬೇಕೆಂದು ಸಂಕಲ್ಪಿಸಿ, ಪ್ರಳಯಕಾಲದ ಕಾಲಾಗ್ನಿರುದ್ರನಂತೆ ತಮ್ಮ ಬಾಯಿಂದ ಪ್ರಚಂಡವಾದ ವಾಯುವನ್ನು ಮತ್ತು ಅಗ್ನಿಯನ್ನೂ ಹೊರಗೆ ಬಿಟ್ಟರು. ॥45॥

ಮೂಲಮ್

(ಶ್ಲೋಕ - 46)
ಭಸ್ಮಸಾತ್ಕ್ರಿಯಮಾಣಾಂಸ್ತಾಂದ್ರುಮಾನ್ವೀಕ್ಷ್ಯ ಪಿತಾಮಹಃ ।
ಆಗತಃ ಶಮಯಾಮಾಸ ಪುತ್ರಾನ್ಬರ್ಹಿಷ್ಮತೋ ನಯೈಃ ॥

ಅನುವಾದ

ಅವರು ಹೀಗೆ ಸಮಸ್ತ ವೃಕ್ಷಗಳನ್ನೂ ಸುಟ್ಟು ಭಸ್ಮಮಾಡುತ್ತಿರುವುದನ್ನು ಕಂಡು ಬ್ರಹ್ಮದೇವರು ಅಲ್ಲಿಗೆ ಬಂದು ಪ್ರಾಚೀನಬರ್ಹಿ ಪುತ್ರರಿಗೆ ಯುಕ್ತಿ ಪೂರ್ವಕ ವಾಗಿ ತಿಳಿವಳಿಕೆ ನೀಡಿ ಅವರ ಕೋಪವನ್ನು ಶಾಂತಗೊಳಿಸಿದರು. ॥46॥

ಮೂಲಮ್

(ಶ್ಲೋಕ - 47)
ತತ್ರಾವಶಿಷ್ಟಾ ಯೇ ವೃಕ್ಷಾ ಭೀತಾ ದುಹಿತರಂ ತದಾ ।
ಉಜ್ಜಹ್ರುಸ್ತೇ ಪ್ರಚೇತೋಭ್ಯ ಉಪದಿಷ್ಟಾಃ ಸ್ವಯಂಭುವಾ ॥

ಅನುವಾದ

ಆಗ ಅಲ್ಲಿ ಅಳಿದುಳಿದಿದ್ದ ವೃಕ್ಷಗಳು ಹೆದರಿಕೊಂಡು ಬ್ರಹ್ಮದೇವರ ಆಣತಿಯಂತೆ ತಮ್ಮಲ್ಲಿದ್ದ ಆ ಕನ್ಯೆಯನ್ನು ತಂದು ಪ್ರಚೇತಸರಿಗೆ ಒಪ್ಪಿಸಿದವು. ॥47॥

ಮೂಲಮ್

(ಶ್ಲೋಕ - 48)
ತೇ ಚ ಬ್ರಹ್ಮಣ ಆದೇಶಾನ್ಮಾರಿಷಾಮುಪಯೇಮಿರೇ ।
ಯಸ್ಯಾಂ ಮಹದವಜ್ಞಾನಾದಜನ್ಯಜನಯೋನಿಜಃ ॥

ಅನುವಾದ

ಪ್ರಚೇತಸರೂ ಕೂಡ ಬ್ರಹ್ಮದೇವರ ಆದೇಶದಂತೆ ಆ ಮಾರಿಷಾ ಎಂಬ ಕನ್ಯೆಯೊಡನೆ ವಿವಾಹಿತರಾದರು. ಶ್ರೀಮಹಾದೇವನನ್ನು ತಿರಸ್ಕರಿಸಿದ ಕಾರಣ ತನ್ನ ದೇಹವನ್ನು ತ್ಯಜಿಸಿದ್ದ ಬ್ರಹ್ಮಪುತ್ರನಾದ ದಕ್ಷನು ಆಕೆಯ ಗರ್ಭದಲ್ಲಿ ಜನಿಸಿದನು. ॥48॥

ಮೂಲಮ್

(ಶ್ಲೋಕ - 49)
ಚಾಕ್ಷುಷೇ ತ್ವಂತರೇ ಪ್ರಾಪ್ತೇ ಪ್ರಾಕ್ಸರ್ಗೇ ಕಾಲವಿದ್ರುತೇ ।
ಯಃ ಸಸರ್ಜ ಪ್ರಜಾ ಇಷ್ಟಾಃ ಸ ದಕ್ಷೋ ದೈವಚೋದಿತಃ ॥

ಅನುವಾದ

ಆ ದಕ್ಷನೇ ಕಾಲಕ್ರಮದಲ್ಲಿ ಹಿಂದಿದ್ದ ಸೃಷ್ಟಿಯು ನಶಿಸಿಹೋಗಿ ಚಾಕ್ಷುಷ ಮನ್ವಂತರವು ಬಂದಾಗ ಶ್ರೀಭಗವಂತನ ಪ್ರೇರಣೆಯಂತೆ ಹೊಸ ಪ್ರಜೆಗಳನ್ನು ಸೃಷ್ಟಿಸಿದನು. ॥49॥

ಮೂಲಮ್

(ಶ್ಲೋಕ - 50)
ಯೋ ಜಾಯಮಾನಃ ಸರ್ವೆಷಾಂ ತೇಜಸ್ತೇಜಸ್ವಿನಾಂ ರುಚಾ ।
ಸ್ವಯೋಪಾದತ್ತ ದಾಕ್ಷ್ಯಾಚ್ಚ ಕರ್ಮಣಾಂ ದಕ್ಷಮಬ್ರುವನ್ ॥

ಅನುವಾದ

ಇವನು ಹುಟ್ಟುವಾಗಲೇ ತನ್ನ ತೇಜಸ್ಸಿನಿಂದ ಎಲ್ಲ ತೇಜಸ್ವಿಗಳ ತೇಜಸ್ಸನ್ನು ಸೆಳೆದುಕೊಂಡನು. ಕರ್ಮಗಳನ್ನು ಆಚರಿಸುವುದರಲ್ಲಿ ಅತ್ಯಂತ ದಕ್ಷ(ಕುಶಲ)ನಾಗಿದ್ದುದರಿಂದ ‘ದಕ್ಷ’ನೆಂದೇ ಆತನ ಹೆಸರಾಯಿತು. ॥50॥

ಮೂಲಮ್

(ಶ್ಲೋಕ - 51)
ತಂ ಪ್ರಜಾಸರ್ಗರಕ್ಷಾಯಾ ಮನಾದಿರಭಿಷಿಚ್ಯ ಚ ।
ಯುಯೋಜ ಯುಯುಜೇನ್ಯಾಂಶ್ಚ ಸ ವೈ ಸರ್ವಪ್ರಜಾಪತೀನ್ ॥

ಅನುವಾದ

ಬ್ರಹ್ಮದೇವರು ಆತನನ್ನು ಪ್ರಜಾಪತಿಗಳಿಗೆಲ್ಲ ಅಧಿಪತಿಯನ್ನಾಗಿ ಪಟ್ಟವನ್ನು ಕಟ್ಟಿ ಸೃಷ್ಟಿಯನ್ನು ರಕ್ಷಿಸಲು ಆದೇಶವನ್ನಿತ್ತರು. ಆಗ ಅವನು ಮರೀಚಿಯೇ ಮುಂತಾದ ಇತರ ಎಲ್ಲ ಪ್ರಜಾಪತಿಗಳನ್ನೂ ಅವರವರ ಕಾರ್ಯದಲ್ಲಿ ನೇಮಕಮಾಡಿದನು. ॥51॥

ಅನುವಾದ (ಸಮಾಪ್ತಿಃ)

ಮೂವತ್ತನೆಯ ಅಧ್ಯಾಯವು ಮುಗಿಯಿತು. ॥30॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಚತುರ್ಥಸ್ಕಂಧೇ ತ್ರಿಂಶೋಽಧ್ಯಾಯಃ ॥30॥