೨೯

[ಇಪ್ಪತ್ತೊಂಭತ್ತನೆಯ ಅಧ್ಯಾಯ]

ಭಾಗಸೂಚನಾ

ಪುರಂಜನೋಪಾಖ್ಯಾನದ ತಾತ್ಪರ್ಯ

ಮೂಲಮ್

(ಶ್ಲೋಕ - 1)

ಮೂಲಮ್ (ವಾಚನಮ್)

ಪ್ರಾಚೀನಬರ್ಹಿರುವಾಚ

ಮೂಲಮ್

ಭಗವಂಸ್ತೇ ವಚೋಸ್ಮಾಭಿರ್ನ ಸಮ್ಯಗವಗಮ್ಯತೇ ।
ಕವಯಸ್ತದ್ವಿಜಾನಂತಿ ನ ವಯಂ ಕರ್ಮಮೋಹಿತಾಃ ॥

ಅನುವಾದ

ರಾಜಾ ಪ್ರಾಚೀನಬರ್ಹಿಯು ಹೇಳಿದನು — ಪೂಜ್ಯರಾದ ಮುನಿಗಳೇ! ತಮ್ಮ ನುಡಿಗಳ ಅಭಿಪ್ರಾಯವೇನೆಂಬುದು ಪೂರ್ಣವಾಗಿ ನನ್ನ ಮನಸ್ಸಿಗೆ ಬರಲಿಲ್ಲ. ವಿವೇಕಿಗಳೇ ಇದರ ತಾತ್ಪರ್ಯವನ್ನು ಅರಿಯಬಲ್ಲರು. ಕರ್ಮ ಮೋಹಿತರಾದ ನಮ್ಮಂತಹ ಜೀವರು ತಿಳಿಯಲಾರರು. ॥1॥

ಮೂಲಮ್

(ಶ್ಲೋಕ - 2)

ಮೂಲಮ್ (ವಾಚನಮ್)

ನಾರದ ಉವಾಚ

ಮೂಲಮ್

ಪುರುಷಂ ಪುರಂಜನಂ ವಿದ್ಯಾದ್ಯದ್ವ್ಯನಕ್ತ್ಯಾತ್ಮನಃ ಪುರಮ್ ।
ಏಕದ್ವಿತ್ರಿಚತುಷ್ಪಾದಂ ಬಹುಪಾದಮಪಾದಕಮ್ ॥

ಅನುವಾದ

ನಾರದರೆಂದರು — ರಾಜನೇ! ಪುರಂಜನ (ನಗರದ ನಿರ್ಮಾತೃನು) ಜೀವನಾಗಿದ್ದಾನೆ. ಅವನು ತನಗಾಗಿ ಒಂದು, ಎರಡು, ಮೂರು, ನಾಲ್ಕು ಅಥವಾ ಅನೇಕ ಕಾಲುಗಳುಳ್ಳ ಅಥವಾ ಕಾಲುಗಳೇ ಇಲ್ಲದಿರುವ ಶರೀರರೂಪೀ ಪುರವನ್ನು ನಿರ್ಮಿಸಿಕೊಳ್ಳುವನು. ॥2॥

ಮೂಲಮ್

(ಶ್ಲೋಕ - 3)
ಯೋವಿಜ್ಞಾತಾಹೃತಸ್ತಸ್ಯ ಪುರುಷಸ್ಯ ಸಖೇಶ್ವರಃ ।
ಯನ್ನ ವಿಜ್ಞಾಯತೇ ಪುಂಭಿರ್ನಾಮಭಿರ್ವಾ ಕ್ರಿಯಾಗುಣೈಃ ॥

ಅನುವಾದ

ಆತನ ಗೆಳೆಯ ಅವಿಜ್ಞಾತನೆಂದು ಹೇಳಿರುವವನೇ ಈಶ್ವರನಾಗಿರುವನು. ಏಕೆಂದರೆ, ಯಾವುದೇ ವಿಧವಾದ ಹೆಸರುಗಳಿಂದಾಗಲೀ, ಗುಣಗಳಿಂದಾಗಲೀ, ಕರ್ಮಗಳಿಂದಾಗಲೀ ಜೀವರಿಗೆ ಅವನ ಸುಳಿವು ಹತ್ತುವುದಿಲ್ಲ. ॥3॥

ಮೂಲಮ್

(ಶ್ಲೋಕ - 4)
ಯದಾ ಜಿಘೃಕ್ಷನ್ಪುರುಷಃ ಕಾರ್ತ್ಸ್ಯೇನ ಪ್ರಕೃತೇರ್ಗುಣಾನ್ ।
ನವದ್ವಾರಂ ದ್ವಿಹಸ್ತಾಂಘ್ರಿ ತತ್ರಾಮನುತ ಸಾಧ್ವಿತಿ ॥

ಅನುವಾದ

ಜೀವನು ಸುಖ-ದುಃಖ ರೂಪವಾದ ಎಲ್ಲ ಪ್ರಾಕೃತ ವಿಷಯಗಳನ್ನು ಅನುಭವಿಸಲು ಇಚ್ಛಿಸಿದಾಗ, ಅವನು ಬೇರೆ ಶರೀರಗಳಿಗಿಂತ ಒಂಭತ್ತು ಬಾಗಿಲುಗಳುಳ್ಳ ಎರಡು ಕೈಗಳು, ಎರಡು ಕಾಲುಗಳುಳ್ಳ ಮಾನವ ದೇಹವನ್ನೇ ಮೆಚ್ಚಿಕೊಂಡನು. ॥4॥

ಮೂಲಮ್

(ಶ್ಲೋಕ - 5)
ಬುದ್ಧಿಂ ತು ಪ್ರಮದಾಂ ವಿದ್ಯಾನ್ಮಮಾಹಮಿತಿ ಯತ್ಕೃತಮ್ ।
ಯಾಮಧಿಷ್ಠಾಯ ದೇಹೇಸ್ಮಿನ್ಪುಮಾನ್ಭುಂಕ್ತೇಕ್ಷಭಿರ್ಗುಣಾನ್ ॥

ಅನುವಾದ

ಬುದ್ಧಿ ಅಥವಾ ಅವಿದ್ಯೆಯನ್ನೇ ನೀನು ಪುರಂಜನಿ ಎಂಬ ಸ್ತ್ರೀಯೆಂದು ತಿಳಿ. ಇವಳಿಂದಾಗಿಯೇ ದೇಹ ಮತ್ತು ಇಂದ್ರಿಯಗಳಲ್ಲಿ ‘ನಾನು-ನನ್ನದು’ ಎಂಬ ಭಾವ ಉಂಟಾಗುತ್ತದೆ. ಪುರುಷನು ಇದನ್ನು ಆಶ್ರಯಿಸಿಯೇ ಶರೀರದಲ್ಲಿ ಇಂದ್ರಿಯಗಳ ಮೂಲಕ ವಿಷಯಗಳನ್ನು ಅನುಭವಿಸುತ್ತಾನೆ. ॥5॥

ಮೂಲಮ್

(ಶ್ಲೋಕ - 6)
ಸಖಾಯ ಇಂದ್ರಿಯಗಣಾ ಜ್ಞಾನಂ ಕರ್ಮ ಚ ಯತ್ಕೃತಮ್ ।
ಸಖ್ಯಸ್ತದ್ ವೃತ್ತಯಃ ಪ್ರಾಣಃ ಪಂಚ ವೃತ್ತಿರ್ಯಥೋರಗಃ ॥

ಅನುವಾದ

ಹತ್ತು ಇಂದ್ರಿಯಗಳೇ ಅವನ ಮಿತ್ರರು. ಇವುಗಳಿಂದಲೇ ಎಲ್ಲ ರೀತಿಯ ಜ್ಞಾನ ಮತ್ತು ಕರ್ಮಗಳು ಆಗುತ್ತವೆ. ಇಂದ್ರಿಯಗಳ ವೃತ್ತಿಗಳೇ ಅವನ ಸಖಿಯರು. ಪ್ರಾಣ - ಅಪಾನ - ವ್ಯಾನ - ಉದಾನ - ಸಮಾನಗಳೆಂಬ ಐದು ವೃತ್ತಿಗಳುಳ್ಳ ಪ್ರಾಣವಾಯುವೇ ನಗರವನ್ನು ರಕ್ಷಿಸುವ ಐದು ಹೆಡೆಯ ಸರ್ಪವು. ॥6॥

ಮೂಲಮ್

(ಶ್ಲೋಕ - 7)
ಬೃಹದ್ಬಲಂ ಮನೋ ವಿದ್ಯಾದುಭಯೇಂದ್ರಿಯನಾಯಕಮ್ ।
ಪಂಚಾಲಾಃ ಪಂಚ ವಿಷಯಾ ಯನ್ಮಧ್ಯೇ ನವಖಂ ಪುರಮ್ ॥

ಅನುವಾದ

ಜ್ಞಾನೇಂದ್ರಿಯ ಮತ್ತು ಕರ್ಮೇಂದ್ರಿಯಗಳೆಂಬ ಎರಡು ರೀತಿಯ ಇಂದ್ರಿಯಗಳಿಗೆ ನಾಯಕವಾದ ಮನಸ್ಸನ್ನೇ ಹನ್ನೊಂದನೆಯದಾಗಿರುವ ಮಹಾಬಲಶಾಲಿಯಾದ ಭಟನೆಂದು ತಿಳಿಯಬೇಕು. ಶಬ್ದಾದಿ ಐದು ವಿಷಯಗಳೇ ಪಾಂಚಾಲದೇಶ. ಅದರ ನಡುವೆ ಆ ಒಂಭತ್ತು ಬಾಗಿಲುಗಳುಳ್ಳನಗರ ನೆಲೆಸಿದೆ. ॥7॥

ಮೂಲಮ್

(ಶ್ಲೋಕ - 8)
ಅಕ್ಷಿಣೀ ನಾಸಿಕೇ ಕರ್ಣೌ ಮುಖಂ ಶಿಶ್ನಗುದಾವಿತಿ ।
ದ್ವೇ ದ್ವೇ ದ್ವಾರೌ ಬಹಿರ್ಯಾತಿ ಯಸ್ತದಿಂದ್ರಿಯಸಂಯುತಃ ॥

ಅನುವಾದ

ಆ ನಗರದಲ್ಲಿ ಒಂದೇ ಜಾಗದಲ್ಲಿ ಎರಡೆರಡು ದ್ವಾರಗಳು ಹೇಳಿವೆಯೋ, ಅದು ಎರಡು ಕಣ್ಣುಗಳು, ಎರಡು ಮೂಗಿನ ಹೊಳ್ಳೆಗಳು ಮತ್ತು ಎರಡು ಕರ್ಣರಂಧ್ರಗಳಿವೆ. ಇವುಗಳೊಂದಿಗೆ ಮುಖ, ಲಿಂಗ, ಗುದ ಇವುಗಳು ಮೂರು, ಹೀಗೆ ಒಟ್ಟಿಗೆ ಸೇರಿ ಒಂಭತ್ತು ದ್ವಾರಗಳಿವೆ. ಇವುಗಳ ಮೂಲಕವೇ ಜೀವನು ಇಂದ್ರಿಯಗಳೊಂದಿಗೆ ಹೊರಗಿನ ವಿಷಯಗಳಲ್ಲಿ ಸಂಚರಿಸುತ್ತಾನೆ. ॥8॥

ಮೂಲಮ್

(ಶ್ಲೋಕ - 9)
ಅಕ್ಷಿಣೀ ನಾಸಿಕೇ ಆಸ್ಯಮಿತಿ ಪಂಚ ಪುರಃ ಕೃತಾಃ ।
ದಕ್ಷಿಣಾ ದಕ್ಷಿಣಃ ಕರ್ಣ ಉತ್ತರಾ ಚೋತ್ತರಃ ಸ್ಮೃತಃ ॥

ಅನುವಾದ

ಇವುಗಳಲ್ಲಿ ಎರಡು ಕಣ್ಣುಗಳು, ಎರಡು ಮೂಗಿನ ಹೊಳ್ಳೆಗಳು, ಒಂದು ಬಾಯಿ ಹೀಗೆ ಐದು ಪೂರ್ವದ ದ್ವಾರಗಳು. ಬಲಕಿವಿಯು ದಕ್ಷಿಣದ ದ್ವಾರ, ಎಡಕಿವಿಯು ಉತ್ತರದ ದ್ವಾರವೆಂದು ತಿಳಿಯಬೇಕು. ॥9॥

ಮೂಲಮ್

(ಶ್ಲೋಕ - 10)
ಪಶ್ಚಿಮೇ ಇತ್ಯಧೋದ್ವಾರೌಗುದಂ ಶಿಶ್ನಮಿಹೋಚ್ಯತೇ ।
ಖದ್ಯೋತಾವಿರ್ಮುಖೀ ಚಾತ್ರ ನೇತ್ರೇ ಏಕತ್ರ ನಿರ್ಮಿತೇ ।
ರೂಪಂ ವಿಭ್ರಾಜಿತಂ ತಾಭ್ಯಾಂ ವಿಚಷ್ಟೇ ಚಕ್ಷುಷೇಶ್ವರಃ ॥

ಅನುವಾದ

ಗುದ ಮತ್ತು ಲಿಂಗ ಇವು ಕೆಳಗಿನ ಎರಡು ರಂಧ್ರಗಳು ಪಶ್ಚಿಮದ ದ್ವಾರಗಳು. ಖದ್ಯೋತಾ ಮತ್ತು ಆವಿರ್ಮುಖ ಎಂಬ ಎರಡು ದ್ವಾರಗಳು ಒಂದೇ ಸ್ಥಾನದಲ್ಲಿ ಹೇಳಿರುವುದು ಎರಡು ಕಣ್ಣುಗಳು. ರೂಪ, ವಿಭ್ರಾಜಿತ ಎಂಬ ದೇಶಗಳನ್ನು ಈ ದ್ವಾರಗಳಿಂದ ಜೀವನು ಚಕ್ಷುರಿಂದ್ರಿಯದ ಸಹಾಯ ದಿಂದ ಅನುಭವಿಸುತ್ತಾನೆ (ಚಕ್ಷು-ಇಂದ್ರಿಯವನ್ನೇ ಮೊದಲು ದ್ಯುಮಾನ್ ಎಂಬ ಮಿತ್ರನೆಂದುಹೇಳಿತ್ತು). ॥10॥

ಮೂಲಮ್

(ಶ್ಲೋಕ - 11)
ನಲಿನೀ ನಾಲಿನೀ ನಾಸೇ ಗಂಧಃ ಸೌರಭ ಉಚ್ಯತೇ ।
ಘ್ರಾಣೋವಧೂತೋ ಮುಖ್ಯಾಸ್ಯಂ ವಿಪಣೋ ವಾಗ್ರಸವಿದ್ರಸಃ ॥

ಅನುವಾದ

ಎರಡು ಮೂಗುಹೊಳ್ಳೆಗಳೇ ನಲಿನೀ ಮತ್ತು ನಾಲಿನೀ ಎಂಬ ದ್ವಾರಗಳು ಮತ್ತು ಮೂಗಿನ ವಿಷಯ ಗಂಧವೇ ಸೌರಭದೇಶ. ಘ್ರಾಣೇಂದ್ರಿಯವೇ ಅವಧೂತ ನೆಂಬ ಮಿತ್ರನು. ಮುಖವು ಮುಖ್ಯವೆಂಬ ದ್ವಾರವಾಗಿದೆ. ಅವರಲ್ಲಿ ಇರುವ ವಾಗಿಂದ್ರಿಯವೇ ವಿಪಣವು ಮತ್ತು ರಸನೇಂದ್ರಿಯವೇ ರಸವಿದ್ (ರಸಜ್ಞ) ಎಂಬ ಮಿತ್ರನಾಗಿದ್ದಾನೆ. ॥11॥

ಮೂಲಮ್

(ಶ್ಲೋಕ - 12)
ಆಪಣೋ ವ್ಯವಹಾರೋತ್ರ ಚಿತ್ರಮಂಧೋ ಬಹೂದನಮ್ ।
ಪಿತೃಹೂರ್ದಕ್ಷಿಣಃ ಕರ್ಣ ಉತ್ತರೋ ದೇವಹೂಃ ಸ್ಮೃತಃ ॥

ಅನುವಾದ

ವಾಣಿಯ ವ್ಯವಹಾರಕ್ಕೆ ಆಪಣವೆಂದೂ, ಬಗೆ-ಬಗೆಯ ಅನ್ನಗಳಿಗೆ ಬಹೂದನವೆಂದೂ ಹಾಗೂ ಬಲಕಿವಿಗೆ ಪಿತೃಹೂ ಮತ್ತು ಎಡಕಿವಿಗೆ ದೇವಹೂ ಎಂದು ಹೇಳಲಾಗಿದೆ. ॥12॥

ಮೂಲಮ್

(ಶ್ಲೋಕ - 13)
ಪ್ರವೃತ್ತಂ ಚ ನಿವೃತ್ತಂ ಚ ಶಾಸಂ ಪಂಚಾಲಸಂಜ್ಞಿತಮ್ ।
ಪಿತೃಯಾನಂ ದೇವಯಾನಂ ಶ್ರೋತ್ರಾಚ್ಛ್ರುತಧರಾದ್ವ್ರಜೇತ್ ॥

ಅನುವಾದ

ಕರ್ಮಕಾಂಡರೂಪವಾದ ಪ್ರವೃತ್ತಿ ಮಾರ್ಗದ ಶಾಸ್ತ್ರ ಮತ್ತು ಉಪಾಸನಾರೂಪವಾದ ನಿವೃತ್ತಿ ಮಾರ್ಗದ ಶಾಸ್ತ್ರಗಳೇ ಕ್ರಮವಾಗಿ ದಕ್ಷಿಣ ಹಾಗೂ ಉತ್ತರ ಪಾಂಚಾಲ ದೇಶಗಳು. ಇವುಗಳನ್ನು ಶ್ರವಣೇಂದ್ರಿಯ ರೂಪವಾದ ಶ್ರುತಧರನ ಸಹಾಯದಿಂದ ಕೇಳಿಕೊಂಡು ಜೀವನು ಕ್ರಮವಾಗಿ ಪಿತೃಯಾನ ಮತ್ತು ದೇವಯಾನ ಮಾರ್ಗಗಳಲ್ಲಿ ಹೋಗುತ್ತಾನೆ. ॥13॥

ಮೂಲಮ್

(ಶ್ಲೋಕ - 14)
ಆಸುರೀ ಮೇಢ್ರಮರ್ವಾಗ್ದ್ವಾರ್ವ್ಯವಾಯೋ ಗ್ರಾಮೀಣಾಂ ರತಿಃ ।
ಉಪಸ್ಥೋ ದುರ್ಮದಃ ಪ್ರೋಕ್ತೋ ನಿರ್ಋತಿರ್ಗುದ ಉಚ್ಯತೇ ॥

ಅನುವಾದ

ಲಿಂಗವೇ ಆಸರೀ ಎಂಬ ಪಶ್ಚಿಮದ ದ್ವಾರವಾಗಿದೆ. ಸ್ತ್ರೀ ಪ್ರಸಂಗವೇ ಗ್ರಾಮಕವೆಂಬ ದೇಶವು. ಲಿಂಗದಲ್ಲಿರುವ ಉಪಸ್ಥೇಂದ್ರಿಯವೇ ದುರ್ಮದ ಎಂಬ ಮಿತ್ರನು. ಗುದವು ನಿರ್ಋತಿ ಎಂಬ ಪಶ್ಚಿಮದ ದ್ವಾರವಾಗಿದೆ. ॥14॥

ಮೂಲಮ್

(ಶ್ಲೋಕ - 15)
ವೈಶಸಂ ನರಕಂ ಪಾಯುರ್ಲುಬ್ಧಕೋಂಧೌತು ಮೇ ಶೃಣು ।
ಹಸ್ತಪಾದೌ ಪುಮಾಂಸ್ತಾಭ್ಯಾಂ ಯುಕ್ತೋ ಯಾತಿ ಕರೋತಿ ಚ ॥

ಅನುವಾದ

ನರಕ ವೈಶಸ ಎಂಬ ದೇಶ, ಗುದದಲ್ಲಿರುವ ಪಾಯು ಇಂದ್ರಿಯವೇ ಲುಬ್ಧಕನೆಂಬ ಮಿತ್ರನು. ಇವರಲ್ಲದೆ ಇಬ್ಬರು ಕುರುಡರು ಹೇಳ ಲಾಗಿತ್ತು. ಅವರ ರಹಸ್ಯವನ್ನು ಕೇಳು. ಅವು ಕೈ ಮತ್ತು ಕಾಲುಗಳಾಗಿವೆ. ಇವುಗಳ ಸಹಾಯದಿಂದಲೇ ಜೀವಿಯು ಕ್ರಮ ವಾಗಿ ಎಲ್ಲ ಕೆಲಸವನ್ನು ಮಾಡುತ್ತಾನೆ ಮತ್ತು ಅಲ್ಲಲ್ಲಿಗೆ ಹೋಗುತ್ತಾನೆ. ॥15॥

ಮೂಲಮ್

(ಶ್ಲೋಕ - 16)
ಅಂತಃಪುರಂ ಚ ಹೃದಯಂ ವಿಷೂಚಿರ್ಮನ ಉಚ್ಯತೇ ।
ತತ್ರ ಮೋಹಂ ಪ್ರಸಾದಂ ವಾ ಹರ್ಷಂ ಪ್ರಾಪ್ನೋತಿ ತದ್ಗುಣೈಃ ॥

ಅನುವಾದ

ಹೃದಯವೇ ಅಂತಃಪುರವು. ಅದರಲ್ಲಿ ವಾಸಿಸುವ ಮನಸ್ಸೇ ವಿಷೂಚಿ (ವಿಷೂಚೀನ್) ಎಂಬ ಪ್ರಧಾನ ಸೇವಕನು. ಜೀವನು ಆ ಮನಸ್ಸಿನ ಸತ್ತ್ವಾದಿ ಗುಣಗಳಿಂದಾಗಿಯೇ ಪ್ರಸನ್ನತೆ, ಹರ್ಷ ಮುಂತಾದ ವಿಕಾರಗಳನ್ನು ಅಥವಾ ಮೋಹವನ್ನು ಪಡೆಯುತ್ತಾನೆ. ॥16॥

ಮೂಲಮ್

(ಶ್ಲೋಕ - 17)
ಯಥಾ ಯಥಾ ವಿಕ್ರಿಯತೇ ಗುಣಾಕ್ತೋ ವಿಕರೋತಿ ವಾ ।
ತಥಾ ತಥೋಪದ್ರಷ್ಟಾತ್ಮಾ ತದ್ವ ತ್ತೀರನುಕಾರ್ಯತೇ ॥

ಅನುವಾದ

ಜೀವನು ಸ್ವತಃ ವಿಕಾರ ರಹಿತನಾಗಿದ್ದರೂ, ಸಾಕ್ಷಿಮಾತ್ರನೇ ಆಗಿದ್ದರೂ ಬುದ್ಧಿಗೆ (ಮಹಾರಾಣಿ ಪುರಂಜನಿ) ಅಡಿಯಾಳಿನಂತೆ ಇರುತ್ತಾನೆ. ಬುದ್ಧಿಯ ಗುಣಗಳಿಂದ ಲೇಪಿಸಲ್ಪಟ್ಟು ಬುದ್ಧಿಯು ಕನಸಿನ ಸ್ಥಿತಿಯಲ್ಲಿ ವಿಕಾರಹೊಂದುತ್ತದೋ, ಎಚ್ಚರದ ಸ್ಥಿತಿಯಲ್ಲಿ ಇಂದ್ರಿಯಗಳೇ ಮುಂತಾದವುಗಳನ್ನು ವಿಕಾರಗೊಳಿಸುತ್ತದೆಯೋ ಹಾಗೆಯೇ ಅವನು ಅದರ ವೃತ್ತಿಗಳನ್ನು ಅನುಸರಿಸಬೇಕಾಗುತ್ತದೆ. ॥17॥

ಮೂಲಮ್

(ಶ್ಲೋಕ - 18)
ದೇಹೋ ರಥಸ್ತ್ವಿಂದ್ರಿಯಾಶ್ವಃ ಸಂವತ್ಸರರಯೋಗತಿಃ ।
ದ್ವಿಕರ್ಮಚಕ್ರಸಿ ಗುಣಧ್ವಜಃ ಪಂಚಾಸುಬಂಧುರಃ ॥

ಅನುವಾದ

ಶರೀರವೇ ರಥವಾಗಿದೆ. ಅದರಲ್ಲಿ ಜ್ಞಾನೇಂದ್ರಿಯ ರೂಪೀ ಐದು ಕುದುರೆಗಳು ಹೂಡಲ್ಪಟ್ಟಿವೆ. ವಾಸ್ತವವಾಗಿ ಅವು ಗತಿಹೀನವಾಗಿದ್ದರೂ ನೋಡುವುದಕ್ಕೆ ಸಂವತ್ಸರ ರೂಪವಾದ ಕಾಲದಂತೆಯೇ ಅಡೆ-ತಡೆಗಳಿಲ್ಲದ ವೇಗವನ್ನು ಹೊಂದಿರುವುದು. ಪುಣ್ಯ ಮತ್ತು ಪಾಪಗಳೆಂಬ ಎರಡು ರೀತಿಯ ಕರ್ಮಗಳೇ ಆ ರಥದ ಎರಡು ಗಾಲಿಗಳು. ತ್ರಿಗುಣಗಳೇ ಆ ರಥದ ಧ್ವಜಗಳು. ಪಂಚಪ್ರಾಣಗಳೇ ಹಗ್ಗಗಳಾಗಿವೆ. ॥18॥

ಮೂಲಮ್

(ಶ್ಲೋಕ - 19)
ಮನೋರಶ್ಮಿರ್ಬುದ್ಧಿ ಸೂತೋ ಹೃನ್ನೀಡೋ ದ್ವಂದ್ವಕೂಬರಃ ।
ಪಂಚೇಂದ್ರಿಯಾರ್ಥಪ್ರಕ್ಷೇಪಃ ಸಪ್ತಧಾತುವರೂಥಕಃ ॥

ಅನುವಾದ

ಮನಸ್ಸೇ ಲಗಾಮು, ಬುದ್ಧಿಯೇ ಸಾರಥಿ. ಹೃದಯವೇ ಕುಳಿತುಕೊಳ್ಳುವ ಸ್ಥಾನ. ಸುಖ-ದುಃಖಾದಿ ದ್ವಂದ್ವಗಳೇ ಅದರ ನೊಗ. ಶಬ್ದ-ಸ್ಪರ್ಶಾದಿ ವಿಷಯಗಳೇ ಅದರಲ್ಲಿರಿಸಿದ ಆಯುಧಗಳು. ಚರ್ಮವೇ ಮುಂತಾದ ಸಪ್ತಧಾತುಗಳು ಅದರ ಆವರಣಗಳು. ॥19॥

ಮೂಲಮ್

(ಶ್ಲೋಕ - 20)
ಆಕೂತಿರ್ವಿಕ್ರಮೋ ಬಾಹ್ಯೋ ಮೃಗತೃಷ್ಣಾಂ ಪ್ರಧಾವತಿ ।
ಏಕಾದಶೇಂದ್ರಿಯಚಮೂಃ ಪಂಚಸೂನಾವಿನೋದಕೃತ್ ॥

ಅನುವಾದ

ಐದು ಕರ್ಮೇಂದ್ರಿಯಗಳೇ ಅದರ ಐದು ಬಗೆಯ ಗತಿಗಳಾಗಿವೆ. ಇಂತಹ ರಥವನ್ನೇರಿ ರಥಿಯಾಗಿರುವ ಜೀವನು ಬಿಸಿಲ್ಗುದುರೆಯಂತಿರುವ ಮಿಥ್ಯಾ ವಿಷಯಗಳ ಕಡೆಗೆ ವೇಗದಿಂದ ಓಡುತ್ತಾನೆ. ಹನ್ನೊಂದು ಇಂದ್ರಿಯಗಳೇ ಆತನ ಸೇನೆಯಾಗಿದೆ. ಐದೂ ಜ್ಞಾನೇಂದ್ರಿಯಗಳ ಮೂಲಕ ಅಯಾ ಇಂದ್ರಿಯ ವಿಷಯಗಳನ್ನು ಅನ್ಯಾಯದಿಂದ ಗ್ರಹಣಮಾಡುವುದೇ ಬೇಟೆಯಾಡುವುದು. ॥20॥

ಮೂಲಮ್

(ಶ್ಲೋಕ - 21)
ಸಂವತ್ಸರಶ್ಚಂಡವೇಗಃ ಕಾಲೋ ಯೇನೋಪಲಕ್ಷಿತಃ ।
ತಸ್ಯಾಹಾನೀಹ ಗಂಧರ್ವಾ ಗಂಧರ್ವ್ಯೋ ರಾತ್ರಯಃ ಸ್ಮೃತಾಃ ।
ಹರಂತ್ಯಾಯುಃ ಪರಿಕ್ರಾಂತ್ಯಾ ಷಷ್ಟ್ಯುತ್ತರಶತತ್ರಯಮ್ ॥

ಅನುವಾದ

ಕಾಲದ ಜ್ಞಾನವನ್ನುಂಟುಮಾಡುವ ಸಂವತ್ಸರವೇ ಚಂಡ ವೇಗನೆಂಬ ಗಂಧರ್ವರಾಜನು. ಆತನ ಅಧೀನದಲ್ಲಿ ಮುನ್ನೂರ ಅರವತ್ತು ಮಂದಿ ಗಂಧರ್ವರಿದ್ದಾರೆಂದು ಹೇಳಿತ್ತಲ್ಲ, ಅವರೇ ಹಗಲುಗಳು. ಮೂನ್ನೂರ ಅರವತ್ತು ಮಂದಿ ಗಂಧರ್ವಸ್ತ್ರೀಯರು ರಾತ್ರಿಗಳು. ಅವರು ಮೇಲಿಂದಮೇಲೆ ಸುತ್ತುತ್ತಾ ಮನುಷ್ಯರ ಆಯುಸ್ಸನ್ನು ಅಪಹರಿಸುತ್ತಿರುವರು. ॥21॥

ಮೂಲಮ್

(ಶ್ಲೋಕ - 22)
ಕಾಲಕನ್ಯಾ ಜರಾ ಸಾಕ್ಷಾಲ್ಲೋಕಸ್ತಾಂ ನಾಭಿನಂದತಿ ।
ಸ್ವಸಾರಂ ಜಗೃಹೇ ಮೃತ್ಯುಃ ಕ್ಷಯಾಯ ಯವನೇಶ್ವರಃ ॥

ಅನುವಾದ

ವೃದ್ಧಾವಸ್ಥೆಯೇ ಸಾಕ್ಷಾತ್ ಕಾಲಕನ್ಯೆಯು. ಆಕೆಯನ್ನು ಯಾವ ಮನುಷ್ಯನೂ ಮೆಚ್ಚುವುದಿಲ್ಲ. ಮೃತ್ಯುವೆಂಬ ಯವನರಾಜನು ಲೋಕವನ್ನು ಸಂಹರಿಸು ವುದಕ್ಕೋಸ್ಕರ ಆಕೆಯನ್ನು ತನ್ನ ತಂಗಿಯಾಗಿ ಸ್ವೀಕರಿಸಿದನು. ॥22॥

ಮೂಲಮ್

(ಶ್ಲೋಕ - 23)
ಆಧಯೋ ವ್ಯಾಧಯಸ್ತಸ್ಯ ಸೈನಿಕಾ ಯವನಾಶ್ಚರಾಃ ।
ಭೂತೋಪಸರ್ಗಾಶುರಯಃ ಪ್ರಜ್ವಾರೋ ದ್ವಿವಿಧೋ ಜ್ವರಃ ॥

ಅನುವಾದ

ಆಧಿ(ಮಾನಸಿಕ) ಮತ್ತು ವ್ಯಾಧಿ (ದೈಹಿಕ) ರೋಗಗಳೇ ಆತನ ಕಾಲಾಳು ಪಡೆಗಳು. ಪ್ರಾಣಿಗಳಿಗೆ ಪೀಡೆ ಯನ್ನುಂಟು ಮಾಡಿ ಮೃತ್ಯುವಿನ ಮುಖಕ್ಕೆ ಒಯ್ಯುವ ಶೀತ ಜ್ವರ ಮತ್ತು ಉಷ್ಣಜ್ವರಗಳೆಂಬ ಎರಡೂ ಆತನ ಸೋದರ ನೆಂದು ಹೇಳಿದ ಪ್ರಜ್ವಾರನು. ॥23॥

ಮೂಲಮ್

(ಶ್ಲೋಕ - 24)
ಏವಂ ಬಹುವಿಧೈರ್ದುಃಖೈರ್ದೈವಭೂತಾತ್ಮ ಸಂಭವೈಃ ।
ಕ್ಲಿಶ್ಯಮಾನಃ ಶತಂ ವರ್ಷಂ ದೇಹೇ ದೇಹೀ ತಮೋವೃತಃ ॥

ಅನುವಾದ

ಈ ಪ್ರಕಾರ ದೇಹಾಭಿಮಾನಿಯಾದ ಜೀವನು ಅಜ್ಞಾನದಿಂದ ಆಚ್ಛಾದಿತನಾಗಿ ಬಗೆ-ಬಗೆಯ ಆಧಿಭೌತಿಕ, ಆಧ್ಯಾತ್ಮಿಕ, ಆಧಿದೈವಿಕ ಕ್ಲೇಶಗಳನ್ನು ಅನುಭವಿಸುತ್ತಾ ನೂರು ವರ್ಷಗಳವರೆಗೆ ಮನುಷ್ಯಶರೀರದಲ್ಲಿರುತ್ತಾನೆ. ॥24॥

ಮೂಲಮ್

(ಶ್ಲೋಕ - 25)
ಪ್ರಾಣೇಂದ್ರಿಯ ಮನೋಧರ್ಮಾನಾತ್ಮನ್ಯಧ್ಯಸ್ಯ ನಿರ್ಗುಣಃ ।
ಶೇತೇ ಕಾಮಲವಾನ್ಧ್ಯಾಯನ್ಮಮಾಹಮಿತಿ ಕರ್ಮಕೃತ್ ॥

ಅನುವಾದ

ವಾಸ್ತವವಾಗಿ ಈತನು ತ್ರಿಗುಣರಹಿತನು. ಆದರೆ ಪ್ರಾಣ, ಇಂದ್ರಿಯ ಗಳು ಮತ್ತು ಮನಸ್ಸಿನ ಧರ್ಮಗಳನ್ನು ತನ್ನಲ್ಲಿ ಆರೋಪಿಸಿ ಕೊಂಡು ‘ನಾನು-ನನ್ನದು’ ಎಂಬ ಅಭಿಮಾನದಿಂದ ಬಂಧಿತನಾಗಿ ಕ್ಷುದ್ರ ವಿಷಯಗಳನ್ನು ಚಿಂತಿಸುತ್ತಾ, ಬಗೆ-ಬಗೆಯ ಕರ್ಮಗಳನ್ನು ಮಾಡುತ್ತಿರುತ್ತಾನೆ. ॥25॥

ಮೂಲಮ್

(ಶ್ಲೋಕ - 26)
ಯದಾತ್ಮಾನಮವಿಜ್ಞಾಯ ಭಗವಂತಂ ಪರಂ ಗುರುಮ್ ।
ಪುರುಷಸ್ತು ವಿಷಜ್ಜೇತ ಗುಣೇಷು ಪ್ರಕೃತೇಃ ಸ್ವದೃಕ್ ॥

ಅನುವಾದ

ಈ ಜೀವನು ಸ್ವಯಂಪ್ರಕಾಶನಾಗಿದ್ದರೂ ಎಲ್ಲರ ಪರಮಗುರು ಆತ್ಮ ಸ್ವರೂಪವಾದ ಶ್ರೀಭಗವಂತನ ಸ್ವರೂಪವನ್ನು ತಿಳಿದು ಕೊಳ್ಳುವವರೆಗೆ ಪ್ರಕೃತಿಯ ಗುಣಗಳಲ್ಲೇ ಬಂಧಿತನಾಗಿರುತ್ತಾನೆ. ॥26॥

ಮೂಲಮ್

(ಶ್ಲೋಕ - 27)
ಗುಣಾಭಿಮಾನೀ ಸ ತದಾ ಕರ್ಮಾಣಿ ಕುರುತೇವಶಃ ।
ಶುಕ್ಲಂ ಕೃಷ್ಣಂ ಲೋಹಿತಂ ವಾ ಯಥಾಕರ್ಮಾಭಿಜಾಯತೇ ॥

ಅನುವಾದ

ಈ ಗುಣಗಳಲ್ಲಿ ಅಭಿಮಾನಪರವಶನಾಗಿ ಈತನು ಸಾತ್ತ್ವಿಕ, ರಾಜಸ, ತಾಮಸ ಕರ್ಮಗಳನ್ನು ಆಚರಿಸುತ್ತಾ, ಅವುಗಳಿಗೆ ತಕ್ಕಂತೆ ಬೇರೆ-ಬೇರೆ ಯೋನಿಗಳಲ್ಲಿ ಜನ್ಮತಾಳುತ್ತಿರುತ್ತಾನೆ. ॥27॥

ಮೂಲಮ್

(ಶ್ಲೋಕ - 28)
ಶುಕ್ಲಾತ್ಪ್ರಕಾಶಭೂಯಿಷ್ಠಾಲ್ಲೋಕಾನಾಪ್ನೋತಿ ಕರ್ಹಿಚಿತ್ ।
ದುಃಖೋದರ್ಕಾನ್ ಕ್ರಿಯಾಯಾಸಾಂಸ್ತಮಃ ಶೋಕೋತ್ಕಟಾನ್ ಕ್ವಚಿತ್ ॥

ಅನುವಾದ

ಕೆಲವೊಮ್ಮೆ ಸಾತ್ತ್ವಿಕ ಕರ್ಮಗಳ ಮೂಲಕ ಅವನು ಪ್ರಕಾಶವೇ ಹೆಚ್ಚಾಗಿರುವ ಸ್ವರ್ಗಾದಿ ಲೋಕಗಳನ್ನು ಹೊಂದುವನು. ಕೆಲವೊಮ್ಮೆ ರಾಜಸ ಕರ್ಮಗಳ ಮೂಲಕ ದುಃಖಮಯ ರಾಜಸೀ ಲೋಕಗಳನ್ನು ಪಡೆದು, ಬಗೆ-ಬಗೆಯ ಕರ್ಮಗಳ ಕ್ಲೇಶಗಳನ್ನು ಅನು ಭವಿಸುವನು ಮತ್ತು ಕೆಲವೊಮ್ಮೆ ತಮೋಗುಣದ ಕರ್ಮಗಳ ಮೂಲಕ ಅತ್ಯಧಿಕ ಶೋಕದಿಂದ ತುಂಬಿದ ಯೋನಿಗಳಲ್ಲಿ ಹುಟ್ಟುವನು. ॥28॥

ಮೂಲಮ್

(ಶ್ಲೋಕ - 29)
ಕ್ವಚಿತ್ಪುಮಾನ್ಕ್ವಚಿಚ್ಚ ಸೀ ಕ್ವಚಿನ್ನೋಭಯಮಂಧಧೀಃ ।
ದೇವೋ ಮನುಷ್ಯಸ್ತಿರ್ಯಗ್ವಾ ಯಥಾಕರ್ಮಗುಣಂ ಭವಃ ॥

ಅನುವಾದ

ಹೀಗೆ ತನ್ನ ಕರ್ಮ ಮತ್ತು ಗುಣಗಳನುಸಾರವಾಗಿ ದೇವಯೋನಿ, ಮನುಷ್ಯಯೋನಿ ಅಥವಾ ಪಶು-ಪಕ್ಷಿ ಯೋನಿಗಳಲ್ಲಿ ಹುಟ್ಟಿ, ಅಜ್ಞಾನದಿಂದ ಕುರುಡನಾದ ಈ ಜೀವಿಯು ಕೆಲವೊಮ್ಮೆ ಪುರುಷನಾಗಿ, ಕೆಲವೊಮ್ಮೆ ಸ್ತ್ರೀಯಾಗಿ, ಕೆಲವೊಮ್ಮೆ ನಪುಂಸಕನಾಗುತ್ತಾನೆ. ॥29॥

ಮೂಲಮ್

(ಶ್ಲೋಕ - 30)
ಕ್ಷುತ್ಪರೀತೋ ಯಥಾ ದೀನಃ ಸಾರಮೇಯೋ ಗೃಹಂ ಗೃಹಮ್ ।
ಚರನ್ವಿಂದತಿ ಯದ್ದಿಷ್ಟಂ ದಂಡ ಮೋದನಮೇವ ವಾ ॥
(ಶ್ಲೋಕ - 31)
ತಥಾ ಕಾಮಾಶಯೋ ಜೀವ ಉಚ್ಚಾವಚಪಥಾ ಭ್ರಮನ್ ।
ಉಪರ್ಯಧೋ ವಾ ಮಧ್ಯೇ ವಾ ಯಾತಿ ದಿಷ್ಟಂ ಪ್ರಿಯಾಪ್ರಿಯಮ್ ॥

ಅನುವಾದ

ಬಡಪಾಯಿಯಾದ ನಾಯಿಯು ಹಸಿವಿಗೆ ತುತ್ತಾಗಿ ಮನೆ-ಮನೆಗೆ ಅಲೆಯುತ್ತಾ ತನ್ನ ಅದೃಷ್ಟದಂತೆ ಕೆಲವೊಮ್ಮೆ ಜನರಿಂದ ಏಟು ತಿನ್ನುವುದು, ಕೆಲವೊಮ್ಮೆ ಅನ್ನವನು ತಿನ್ನುವಂತೆಯೇ ಈ ಜೀವನು ಚಿತ್ತದಲ್ಲಿ ಬಗೆ-ಬಗೆಯ ವಾಸನೆಗಳನ್ನು ತುಂಬಿಕೊಂಡು ಮೇಲಿನ ಮತ್ತು ಕೆಳಗಿನ ಮಾರ್ಗಗಳಿಂದ ಮೇಲಿನ ಲೋಕಗಳಿಗೋ, ಕೆಳಗಿನ ಲೋಕ ಗಳಿಗೋ ಅಥವಾ ಮಧ್ಯದ ಲೋಕಗಳಿಗೋ ಹೋಗಿ ಅಲೆಯುತ್ತಾ ತನ್ನ ಕರ್ಮಗಳಿಗೆ ಅನುಸಾರವಾಗಿ ಸುಖ-ದುಃಖಗಳನ್ನು ಅನುಭವಿಸುವನು. ॥30-31॥

ಮೂಲಮ್

(ಶ್ಲೋಕ - 32)
ದುಃಖೇಷ್ವೇಕತರೇಣಾಪಿ ದೈವಭೂತಾತ್ಮಹೇತುಷು ।
ಜೀವಸ್ಯ ನ ವ್ಯವಚ್ಛೇದಃ ಸ್ಯಾಚ್ಚೇತ್ತತ್ತತ್ಪ್ರತಿಕ್ರಿಯಾ ॥

ಅನುವಾದ

ಅಜ್ಞಾನಿಯಾದ ಜೀವನು ಆಧಿದೈವಿಕ, ಆಧಿಭೌತಿಕ ಮತ್ತು ಆಧ್ಯಾತ್ಮಿಕ ಈ ಮೂರು ಪ್ರಕಾರದ ದುಃಖಗಳಲ್ಲಿ ಯಾವುದರಿಂದಲೂ ಪೂರ್ಣವಾಗಿ ಬಿಡುಗಡೆ ಹೊಂದಲಾರನು. ಎಂದಾದರೂ ಏನಾದರೂ ಸ್ವಲ್ಪ ಬಿಡುಗಡೆಯಾದಂತೆ ತೋರಿದರೂ ಅದು ಕೇವಲ ತಾತ್ಕಾಲಿಕವಾದ ನಿವೃತ್ತಿಯೇ ಆಗಿದೆ. ॥32॥

ಮೂಲಮ್

(ಶ್ಲೋಕ - 33)
ಯಥಾ ಹಿ ಪುರುಷೋ ಭಾರಂ ಶಿರಸಾ ಗುರುಮುದ್ವಹನ್ ।
ತಂ ಸ್ಕಂಧೇನ ಸ ಆಧತ್ತೇ ತಥಾ ಸರ್ವಾಃ ಪ್ರತಿಕ್ರಿಯಾಃ ॥

ಅನುವಾದ

ತಲೆಯ ಮೇಲೆ ದೊಡ್ಡ ಭಾರವನ್ನು ಹೊತ್ತುಕೊಂಡು ಹೋಗುವವನು ಅದನ್ನು ಹೆಗಲಮೇಲೆ ಇರಿಸಿಕೊಂಡಂತೆಯೇ ಇದು ಆಗಿದೆ. ಹೀಗೆಯೇ ಎಲ್ಲ ಪ್ರತಿಕ್ರಿಯೆ (ದುಃಖ-ನಿವೃತ್ತಿ) ಎಂದು ತಿಳಿಯಬೇಕು. ಯಾವುದೇ ಉಪಾಯದಿಂದ ಮನುಷ್ಯನು ಒಂದು ರೀತಿಯ ದುಃಖದಿಂದ ಬಿಡುಗಡೆ ಹೊಂದಿದರೆ ಮತ್ತೊಂದು ದುಃಖವು ಅವನ ತಲೆಗಡರುತ್ತದೆ. ॥33॥

ಮೂಲಮ್

(ಶ್ಲೋಕ - 34)
ನೈಕಾಂತತಃ ಪ್ರತೀಕಾರಃ ಕರ್ಮಣಾಂ ಕರ್ಮ ಕೇವಲಮ್ ।
ದ್ವಯಂ ಹ್ಯವಿದ್ಯೋಪಸೃತಂ ಸ್ವಪ್ನೇ ಸ್ವಪ್ನ ಇವಾನಘ ॥

ಅನುವಾದ

ಎಲೈ ಪಾಪರಹಿತನಾದ ರಾಜೇಂದ್ರನೇ! ಸ್ವಪ್ನದಲ್ಲಿ ಉಂಟಾಗುವ ಸ್ವಪ್ನಾಂತರವು ಆ ಸ್ವಪ್ನದಿಂದ ಪೂರ್ಣವಾಗಿ ಬಿಡುಗಡೆಯಲ್ಲ ತಾನೇ! ಹಾಗೆಯೇ ಕೇವಲ ಕರ್ಮವೇ ಕರ್ಮಫಲ ಭೋಗದಿಂದ ಪೂರ್ಣವಾಗಿ ಪಾರಾಗುವುದಕ್ಕೆ ಉಪಾಯವಾಗಲಾರದು. ಏಕೆಂದರೆ, ಕರ್ಮ ಮತ್ತು ಕರ್ಮಫಲ ಇವೆರಡೂ ಅವಿದ್ಯೆಯಿಂದಲೇ ಕೂಡಿವೆ. ॥34॥

ಮೂಲಮ್

(ಶ್ಲೋಕ - 35)
ಅರ್ಥೇ ಹ್ಯವಿದ್ಯಮಾನೇಪಿ ಸಂಸೃತಿರ್ನ ನಿರ್ವರ್ತತೇ ।
ಮನಸಾ ಲಿಂಗರೂಪೇಣ ಸ್ವಪ್ನೇ ವಿಚರತೋ ಯಥಾ ॥

ಅನುವಾದ

ಸ್ವಪ್ನಾವಸ್ಥೆಯಲ್ಲಿ ತನ್ನ ಮನೋಮಯವಾದ ಲಿಂಗಶರೀರದಿಂದ ಸಂಚರಿಸುವ ಪ್ರಾಣಿಗೆ ಕನಸಿನಲ್ಲಿ ಪದಾರ್ಥಗಳಿಲ್ಲದೆಯೇ ಕಾಣುತ್ತವೆ. ಹಾಗೆಯೇ ಅಜ್ಞಾನ ನಿದ್ರೆಯು ಕಳೆದು ಹೋಗುವವರೆಗೂ ಈ ದೃಶ್ಯ ಪದಾರ್ಥಗಳೂ ಕಂಡೇ ಕಾಣುತ್ತವೆ. ಹುಟ್ಟು ಸಾವುಗಳ ರೂಪವಾದ ಸಂಸಾರದಿಂದ ಬಿಡುಗಡೆ ಯುಂಟಾಗುವುದೇ ಇಲ್ಲ. ಆತ್ಮಜ್ಞಾನವೊಂದೇ ಇವುಗಳನ್ನು ಅವಶ್ಯವಾಗಿ ತೊಲಗಿಸುವ ಉಪಾಯವಾಗಿದೆ. ॥35॥

ಮೂಲಮ್

(ಶ್ಲೋಕ - 36)
ಅಥಾತ್ಮನೋರ್ಥಭೂತಸ್ಯ ಯತೋನರ್ಥಪರಂಪರಾ ।
ಸಂಸೃತಿಸ್ತದ್ವ್ಯವಚ್ಛೇದೋಭಕ್ತ್ಯಾ ಪರಮಯಾ ಗುರೌ ॥

ಅನುವಾದ

ಎಲೈ ರಾಜನೇ! ಪರಮಾರ್ಥಸ್ವರೂಪನಾದ ಆತ್ಮನ ಹುಟ್ಟು ಸಾವುಗಳ ರೂಪವಾದ ಈ ಅನರ್ಥಪರಂಪರೆಗೆ ಕಾರಣವಾದ ಅವಿದ್ಯೆಯು ಗುರುಸ್ವರೂಪನಾದ ಶ್ರೀಹರಿಯಲ್ಲಿ ದೃಢವಾದ ಭಕ್ತಿಯುಂಟಾದಾಗಲೇ ತೊಲಗುವುದು. ॥36॥

ಮೂಲಮ್

(ಶ್ಲೋಕ - 37)
ವಾಸುದೇವೇಭಗವತಿ ಭಕ್ತಿಯೋಗಃ ಸಮಾಹಿತಃ ।
ಸಧ್ರೀಚೀನೇನ ವೈರಾಗ್ಯಂ ಜ್ಞಾನಂ ಚ ಜನಯಿಷ್ಯತಿ ॥

ಅನುವಾದ

ಭಗವಾನ್ ವಾಸುದೇವನಲ್ಲಿ ಭಕ್ತಿಯೋಗವು ಚೆನ್ನಾಗಿ ನೆಲೆಗೊಂಡರೆ ಅದರಿಂದ ಜ್ಞಾನ-ವೈರಾಗ್ಯಗಳು ಉಂಟಾಗುವುವು. ॥37॥

ಮೂಲಮ್

(ಶ್ಲೋಕ - 38)
ಸೋಚಿರಾದೇವ ರಾಜರ್ಷೇ ಸ್ಯಾದಚ್ಯುತಕಥಾಶ್ರಯಃ ।
ಶೃಣ್ವತಃ ಶ್ರದ್ಧಧಾನಸ್ಯ ನಿತ್ಯದಾ ಸ್ಯಾದಧೀಯತಃ ॥

ಅನುವಾದ

ರಾಜರ್ಷಿಯೇ! ಈ ಭಕ್ತಿ ಭಾವವು ಭಗವಂತನ ಕಥೆಗಳಲ್ಲಿ ಆಶ್ರಿತವಾಗಿರುತ್ತದೆ. ಅದಕ್ಕಾಗಿ ಶ್ರದ್ಧೆಯಿಂದ ಅವನ್ನು ಕೇಳುವವನು ಅಥವಾ ಓದುವವನು ಅದನ್ನು ಬೇಗನೇ ಪಡೆದುಕೊಳ್ಳುವನು. ॥38॥

ಮೂಲಮ್

(ಶ್ಲೋಕ - 39)
ಯತ್ರ ಭಾಗವತಾ ರಾಜನ್ಸಾಧವೋ ವಿಶದಾಶಯಾಃ ।
ಭಗವದ್ಗುಣಾನುಕಥನಶ್ರವಣವ್ಯಗ್ರಚೇತಸಃ ॥
(ಶ್ಲೋಕ - 40)
ತಸ್ಮಿನ್ಮಹನ್ಮುಖರಿತಾ ಮಧುಭಿಚ್ಚರಿತ್ರ-
ಪೀಯೂಷಶೇಷಸರಿತಃ ಪರಿತಃ ಸ್ರವಂತಿ ।
ತಾ ಯೇ ಪಿಬಂತ್ಯವಿತೃಷೋ ನೃಪ ಗಾಢಕರ್ಣೈಃ
ತಾನ್ನ ಸ್ಪೃಶಂತ್ಯ ಶನತೃಡ್ಭಯಶೋಕಮೋಹಾಃ ॥

ಅನುವಾದ

ರಾಜನೇ! ಶ್ರೀಭಗವಂತನ ಗುಣಗಳನ್ನು ಹೇಳುವುದರಲ್ಲಿಯೂ, ಕೇಳು ವುದರಲ್ಲಿಯೂ ಆಸಕ್ತರಾಗಿರುವ ಪರಿಶುದ್ದ ಚಿತ್ತವುಳ್ಳ ಭಕ್ತ ಜನರು ಇರುವ ಸಾಧುಸಮಾಜದಲ್ಲಿ ಎಲ್ಲ ಕಡೆಗಳಲ್ಲಿಯೂ ಮಹಾಪುರುಷರ ಮುಖದಿಂದ ಹೊರಟ ಭಗವಾನ್ ಮಧುಸೂದನನ ಚರಿತ್ರವೆಂಬ ಶುದ್ಧ ಅಮೃತದ ನದಿಗಳು ಹರಿಯುತ್ತಿರುತ್ತವೆ. ಯಾರು ಎಷ್ಟು ಕೇಳಿದರೂ ತೃಪ್ತಿ ಹೊಂದದಿರುವ ಮನಸ್ಸಿನಿಂದ ಆ ಶ್ರೀಭಗವಂತನ ಚರಿತ್ರೆಯ ಶ್ರವಣದಲ್ಲಿ ತತ್ಪರರಾಗಿ ತಮ್ಮ ಕಿವಿಗಳೆಂಬ ಪಾತ್ರೆಯಗಳಿಂದ ಆ ಅಮೃತವನ್ನು ಕುಡಿಯುತ್ತಾರೋ, ಅವರನ್ನು ಹಸಿವು, ಬಾಯಾರಿಕೆ, ಭಯ, ಶೋಕ, ಮೋಹ ಮುಂತಾದ ಯಾವುದೂ ಪೀಡಿಸಲಾರವು. ॥39-40॥

ಮೂಲಮ್

(ಶ್ಲೋಕ - 41)
ಏತೈರುಪದ್ರುತೋ ನಿತ್ಯಂ ಜೀವಲೋಕಃ ಸ್ವಭಾವಜೈಃ ।
ನ ಕರೋತಿ ಹರೇರ್ನೂನಂ ಕಥಾಮೃತನಿಧೌ ರತಿಮ್ ॥

ಅನುವಾದ

ಅಕಟಾ! ಸ್ವಭಾವದಿಂದಲೇ ಉಂಟಾಗುವ ಈ ಹಸಿವು-ಬಾಯಾರಿಕೆ ಮುಂತಾದ ವಿಘ್ನಗಳಿಂದ ಸುತ್ತುವರಿಯಲ್ಪಟ್ಟ ಜೀವ ಸಮುದಾಯವು ಶ್ರೀಹರಿಯ ಕಥಾಮೃತಸಿಂಧುವನ್ನು ಪ್ರೀತಿಸುವುದಿಲ್ಲವಲ್ಲ! ॥41॥

ಮೂಲಮ್

(ಶ್ಲೋಕ - 42)
ಪ್ರಜಾಪತಿಪತಿಃ ಸಾಕ್ಷಾದ್ಭಗವಾನ್ಗಿರಿಶೋ ಮನುಃ ।
ದಕ್ಷಾದಯಃ ಪ್ರಜಾಧ್ಯಕ್ಷಾ ನೈಷ್ಠಿಕಾಃ ಸನಕಾದಯಃ ॥
(ಶ್ಲೋಕ - 43)
ಮರೀಚಿರತ್ರ್ಯಂಗಿರಸೌ ಪುಲಸ್ತ್ಯಃ ಪುಲಹಃ ಕ್ರತುಃ ।
ಭೃಗುರ್ವಸಿಷ್ಠ ಇತ್ಯೇತೇ ಮದಂತಾ ಬ್ರಹ್ಮವಾದಿನಃ ॥
(ಶ್ಲೋಕ - 44)
ಅದ್ಯಾಪಿ ವಾಚಸ್ಪತಯಸ್ತಪೋವಿದ್ಯಾ ಸಮಾಧಿಭಿಃ ।
ಪಶ್ಯಂತೋಪಿ ನ ಪಶ್ಯಂತಿ ಪಶ್ಯಂತಂ ಪರಮೇಶ್ವರಮ್ ॥

ಅನುವಾದ

ಎಲ್ಲ ಪ್ರಜಾಪತಿಗಳಿಗೆ ಅಧಿಪತಿಯಾದ ಸಾಕ್ಷಾತ್ ಬ್ರಹ್ಮದೇವರು, ಶ್ರೀರುದ್ರದೇವರು, ಸ್ವಾಯಂಭುವ ಮನು, ದಕ್ಷನೇ ಮುಂತಾದ ಪ್ರಜಾಪತಿಗಳು, ಸನಕಾದಿ ನೈಷ್ಠಿಕ ಬ್ರಹ್ಮಚಾರಿಗಳು, ಮರೀಚಿ, ಅತ್ರಿ, ಅಂಗಿರಾ, ಪುಲ್ತಸ್ಯ, ಪುಲಹ, ಕ್ರತು, ಭೃಗು, ವಸಿಷ್ಠ ಮತ್ತು ನನ್ನವರೆಗಿನ ಬ್ರಹ್ಮಜ್ಞರಾದ ಈ ಮುನಿಗಳ ಸಮೂಹವು ಸಮಸ್ತ ವಾಙ್ಮಯಕ್ಕೆ ಅಧಿಪತಿಗಳಾಗಿದ್ದರೂ ಕೂಡ ತಪಸ್ಸು, ಉಪಾಸನೆ ಮತ್ತು ಸಮಾಧಿಗಳ ಮೂಲಕ ಈತನನ್ನು ಹುಡುಕಿ-ಹುಡುಕಿ ಸೋತರು. ಆದರೂ ಅವರು ಇಂದಿನವರೆಗೆ ಸರ್ವಸಾಕ್ಷಿ ಯಾಗಿರುವ ಆ ಪರಮೇಶ್ವರನನ್ನು ನೋಡಲಾಗಲಿಲ್ಲ. ॥42-44॥

ಮೂಲಮ್

(ಶ್ಲೋಕ - 45)
ಶಬ್ದಬ್ರಹ್ಮಣಿ ದುಷ್ಪಾರೇ ಚರಂತ ಉರುವಿಸ್ತರೇ ।
ಮಂತ್ರಲಿಂಗೈರ್ವ್ಯವಚ್ಛಿನ್ನಂ ಭಜಂತೋ ನ ವಿದುಃ ಪರಮ್ ॥

ಅನುವಾದ

ವೇದಗಳು ಅನಂತವಾಗಿವೆ. ಅಪಾರವಾಗಿವೆ. ಅನೇಕ ಮಹಾನುಭಾವರು ಆ ವೇದವನ್ನು ವಿಚಾರ ಮಾಡಿ ಮಂತ್ರಗಳಲ್ಲಿ ಹೇಳಿರುವ ಲಕ್ಷಣಗಳಿಂದ ಕೂಡಿರುವ ಇಂದ್ರನೇ ಮುಂತಾದ ದೇವತೆಗಳ ರೂಪದಲ್ಲಿ ಬೇರೆ-ಬೇರೆ ಕರ್ಮ ಗಳ ಮೂಲಕ ಆ ಪರಮಾತ್ಮನೊಬ್ಬನನ್ನೇ ಆರಾಧಿಸುತ್ತಾರೆ. ಆದರೂ ಆತನ ಸ್ವರೂಪವನ್ನು ಅವರೂ ಅರಿತಿಲ್ಲ. ॥45॥

ಮೂಲಮ್

(ಶ್ಲೋಕ - 46)
ಯದಾ ಯಮನುಗೃಹ್ಣಾತಿ ಭಗವಾನಾತ್ಮಭಾವಿತಃ ।
ಸ ಜಹಾತಿ ಮತಿಂ ಲೋಕೇ ವೇದೇ ಚ ಪರಿನಿಷ್ಠಿತಾಮ್ ॥

ಅನುವಾದ

ನಿರಂತರವಾಗಿ ಹೃದಯದಲ್ಲಿ ಚಿಂತನೆಮಾಡುತ್ತಿರುವ ಯಾವುದಾದರೂ ಜೀವಿಯ ಮೇಲೆ ಭಗವಂತನು ಅನುಗ್ರಹ ವನ್ನು ಹರಿಸಿದಾಗಲೇ ಅವನು ಲೌಕಿಕ ವ್ಯವಹಾರದಿಂದಲೂ, ವೈದಿಕಕರ್ಮಮಾರ್ಗದಲ್ಲಿ ಬೇರೂರಿದ್ದ ಆಸೆಗಳಿಂದಲೂ ಬಿಡುಗಡೆ ಹೊಂದುವನು. ॥46॥

ಮೂಲಮ್

(ಶ್ಲೋಕ - 47)
ತಸ್ಮಾತ್ಕರ್ಮಸು ಬರ್ಹಿಷ್ಮನ್ನಜ್ಞಾನಾದರ್ಥಕಾಶಿಷು ।
ಮಾರ್ಥದೃಷ್ಟಿಂ ಕೃಥಾಃ ಶ್ರೋತ್ರಸ್ಪರ್ಶಿಷ್ವಸ್ಪೃಷ್ಟವಸ್ತುಷು ॥

ಅನುವಾದ

ಬರ್ಹಿಷ್ಮ ರಾಜನೇ! ನೀನು ಈ ಕರ್ಮಗಳಲ್ಲಿ ಪರಮಾರ್ಥ ಬುದ್ಧಿಯನ್ನಿರಿಸಬೇಡ. ಇವು ಕೇಳುವುದಕ್ಕೆ ಪ್ರಿಯವಾಗಿ ಕಂಡು ಬರುತ್ತಿದ್ದರೂ ಪರಮಾರ್ಥವನ್ನು ಮುಟ್ಟುವುದಿಲ್ಲ. ಈ ಕರ್ಮ ಕಾಂಡವು ಪರಮಾರ್ಥವೆಂದು ಕಂಡುಬರುವುದಕ್ಕೆ ಕಾರಣ ಅಜ್ಞಾನವೊಂದೇ. ॥47॥

ಮೂಲಮ್

(ಶ್ಲೋಕ - 48)
ಸ್ವಂ ಲೋಕಂ ನ ವಿದುಸ್ತೇ ವೈ ಯತ್ರ ದೇವೋ ಜನಾರ್ದನಃ ।
ಆಹುರ್ಧೂಮ್ರಧಿಯೋ ವೇದಂ ಸಕರ್ಮಕಮತದ್ವಿದಃ ॥

ಅನುವಾದ

ಮಲಿನಮತಿಗಳಾದ ಕರ್ಮವಾದಿ ಜನರು ವೇದವನ್ನು ಕರ್ಮಪರವೆಂದೇ ಹೇಳುವವರು ವಾಸ್ತವವಾಗಿ ಅದರ ಮರ್ಮವನ್ನು ತಿಳಿದವರಲ್ಲ. ಅವರು ಸಾಕ್ಷಾತ್ ಭಗವಾನ್ ಶ್ರೀಜನಾರ್ದನನು ವಿರಾಜಮಾನನಾಗಿರುವ ತಮ್ಮ ಸ್ವರೂಪ ಭೂತಲೋಕ (ಆತ್ಮತತ್ತ್ವ) ವನ್ನು ತಿಳಿಯದೇ ಇರುವ ಕಾರಣವೂ ಇದೇ ಆಗಿದೆ. ॥48॥

ಮೂಲಮ್

(ಶ್ಲೋಕ - 49)
ಆಸ್ತೀರ್ಯ ದರ್ಭೈಃ ಪ್ರಾಗಗ್ರೈಃ ಕಾರ್ತ್ಸ್ನ್ಯೇನ ಕ್ಷಿತಿಮಂಡಲಮ್ ।
ಸ್ತಬ್ಧೋ ಬೃಹದ್ವಧಾನ್ಮಾ ನೀ ಕರ್ಮ ನಾವೈಷಿ ಯತ್ಪರಮ್ ।
ತತ್ಕರ್ಮ ಹರಿತೋಷಂ ಯತ್ಸಾ ವಿದ್ಯಾ ತನ್ಮತಿರ್ಯಯಾ ॥

ಅನುವಾದ

ಪೂರ್ವಾಗ್ರವಾಗಿ ದರ್ಭೆಗಳನ್ನು ಇಡೀ ಭೂ ಮಂಡಲದ ಮೇಲೆ ಹರಡಿ ಅನೇಕ ಪಶುಗಳನ್ನು ಯಜ್ಞಗಳಲ್ಲಿ ವಧೆಮಾಡಿರುವುದರಿಂದ ನಿನಗೆ ಮದ ಉಂಟಾಗಿಬಿಟ್ಟಿದೆ. ಆದರೆ ವಸ್ತುತಃ ನಿನಗೆ ಕರ್ಮದ ರಹಸ್ಯವಾಗಲೀ, ಉಪಾಸನೆಯ ರಹಸ್ಯವಾಗಲೀ ಯಾವುದೂ ತಿಳಿಯದು. ವಾಸ್ತವವಾಗಿ ಶ್ರೀಹರಿಯನ್ನು ಪ್ರಸನ್ನಗೊಳಿಸುವಂತಹ ಕರ್ಮವೇ ಕರ್ಮವಾಗಿದೆ. ಭಗವಂತನಲ್ಲಿ ಚಿತ್ತವು ನೆಲಸುವಂತಹ ವಿದ್ಯೆಯೇ ವಿದ್ಯೆಯಾಗಿದೆ. ॥49॥

ಮೂಲಮ್

(ಶ್ಲೋಕ - 50)
ಹರಿರ್ದೇಹಭೃತಾಮಾತ್ಮಾ ಸ್ವಯಂ ಪ್ರಕೃತಿರೀಶ್ವರಃ ।
ತತ್ಪಾದಮೂಲಂ ಶರಣಂ ಯತಃ ಕ್ಷೇಮೋ ನೃಣಾಮಿಹ ॥

ಅನುವಾದ

ಶ್ರೀಹರಿಯು ಸಮಸ್ತ ದೇಹಧಾರಿಗಳ ಆತ್ಮನೂ, ನಿಯಾಮಕನೂ, ಸ್ವತಂತ್ರ ಕಾರಣನೂ ಆಗಿದ್ದಾನೆ. ಆದ್ದರಿಂದ ಅವನ ಅಡಿದಾವರೆಗಳೇ ಮನುಷ್ಯರಿಗೆ ಏಕಮಾತ್ರ ಆಶ್ರಯವಾಗಿವೆ. ಅವುಗಳಿಂದಲೇ ಪ್ರಪಂಚದಲ್ಲಿ ಎಲ್ಲರ ಶ್ರೇಯಸ್ಸು ಆಗಬಲ್ಲದು. ॥50॥

ಮೂಲಮ್

(ಶ್ಲೋಕ - 51)
ಸ ವೈ ಪ್ರಿಯತಮಶ್ಚಾತ್ಮಾ ಯತೋ ನ ಭಯಮಣ್ವಪಿ ।
ಇತಿ ವೇದ ಸ ವೈ ವಿದ್ವಾನ್ಯೋ ವಿದ್ವಾನ್ಸ ಗುರುರ್ಹರಿಃ ॥

ಅನುವಾದ

‘ಯಾವುದರಿಂದ ಯಾರಿಗೂ ಎಳ್ಳಷ್ಟು ಭಯವುಂಟಾಗುವುದಿಲ್ಲವೋ ಅದೇ ಅವನ ಪ್ರಿಯತಮ ಆತ್ಮವಾಗಿದೆ’ ಎಂದು ತಿಳಿಯುವವನೇ ಜ್ಞಾನಿಯು. ಆ ಜ್ಞಾನಿಯೇ ಗುರುವು ಮತ್ತು ಸಾಕ್ಷಾತ್ ಶ್ರೀಹರಿಯು ಆತನೇ. ॥51॥

ಮೂಲಮ್

(ಶ್ಲೋಕ - 52)

ಮೂಲಮ್ (ವಾಚನಮ್)

ನಾರದ ಉವಾಚ

ಮೂಲಮ್

ಪ್ರಶ್ನ ಏವಂ ಹಿ ಸಂಛಿನ್ನೋ ಭವತಃ ಪುರುಷರ್ಷಭ ।
ಅತ್ರ ಮೇ ವದತೋ ಗುಹ್ಯಂ ನಿಶಾಮಯ ಸುನಿಶ್ಚಿತಮ್ ॥

ಅನುವಾದ

ಶ್ರೀನಾರದರು ಹೇಳುತ್ತಾರೆ — ಎಲೈ ಪುರುಷಶ್ರೇಷ್ಠನೇ! ಇಲ್ಲಿಯವರೆಗೆ ನಿನ್ನ ಪ್ರಶ್ನೆಯ ಉತ್ತರ ಸಂಕ್ಷಿಪ್ತವಾಗಿ ಹೇಳಿ ಯಾಯಿತು. ಈಗ ನಾನು ನಿನಗೆ ಒಂದು ಅತ್ಯಂತ ರಹಸ್ಯ ವಾದ, ಚೆನ್ನಾಗಿ ನಿಶ್ಚಯಿಸಿರುವ ಸಾಧನೆಯನ್ನು ಹೇಳುವೆನು. ಲಕ್ಷ್ಯಕೊಟ್ಟು ಕೇಳು. ॥52॥

ಮೂಲಮ್

(ಶ್ಲೋಕ - 53)
ಕ್ಷುದ್ರಂಚರಂ ಸುಮನಸಾಂ ಶರಣೇ ಮಿಥಿತ್ವಾ
ರಕ್ತಂ ಷಡಂಘ್ರಿಗಣಸಾಮಸು ಲುಬ್ಧಕರ್ಣಮ್ ।
ಅಗ್ರೇ ವೃಕಾನಸುತೃಪೋವಿಗಣಯ್ಯ ಯಾಂತಂ
ಪೃಷ್ಟೇ ಮೃಗಂ ಮೃಗಯ ಲುಬ್ಧಕಬಾಣಭಿನ್ನಮ್ ॥

ಅನುವಾದ

ಹೂದೋಟವೊಂದರಲ್ಲಿ ಒಂದು ಗಂಡು ಹುಲ್ಲೆಯು ಹೆಣ್ಣುಹುಲ್ಲೆಯೊಡನೆ ವಿಹರಿಸುತ್ತಾ ಮತ್ತೇರಿ ಅಲೆದಾಡುತ್ತಾ ಎಳೆಗರಿಕೆಯೇ ಮುಂತಾದ ಸಣ್ಣ ಚಿಗುರುಗಳನ್ನು ಮೇಯುತ್ತಿದೆ. ಅದರ ಕಿವಿಗಳು ದುಂಬಿಗಳ ಮಧುರ ಝೇಂಕಾರವನ್ನು ಆಲಿಸುತ್ತಿದೆ. ಆ ಹುಲ್ಲೆಯ ಮುಂದೆಯೇ ಇತರ ಜೀವಿಗಳನ್ನು ತಿಂದು ಹೊಟ್ಟೆತುಂಬಿಸಿ ಕೊಳ್ಳುವ ತೋಳಗಳು ಹೊಂಚುಹಾಕುತ್ತಾ ನಿಂತಿವೆ. ಹಿಂದುಗಡೆಯಿಂದ ಒಬ್ಬ ಬೇಟೆಗಾರನು ಹುಲ್ಲೆಯಮೇಲೆ ಬಾಣವನ್ನು ಬಿಟ್ಟು ಘಾಸಿಗೊಳಿಸುತ್ತಾನೆ. ಆದರೆ ಹುಲ್ಲೆಯು ಇವಾವುದನ್ನೂ ಗಮನಿಸದಷ್ಟು ಅಜಾಗರೂಕವಾಗಿದೆ. ಆ ಜಿಂಕೆಯ ಸ್ಥಿತಿಯನ್ನು ಕುರಿತು ಒಮ್ಮೆ ವಿಚಾರಮಾಡು. ॥53॥

ಮೂಲಮ್

(ಶ್ಲೋಕ - 54)
(ಅಸ್ಯಾರ್ಥಃ)
ಸುಮನಃ ಸಧರ್ಮಣಾಂ ಸೀಣಾಂ ಶರಣ ಆಶ್ರಮೇ ಪುಷ್ಪಮಧುಗಂಧವತ್ಕ್ಷುದ್ರತಮಂ
ಕಾಮ್ಯಕರ್ಮ ವಿಪಾ- ಕಜಂ ಕಾಮಸುಖಲವಂ ಜೈಹ್ವ್ಯೌಪಸ್ಥ್ಯಾದಿವಿಚಿನ್ವಂತಂ ಮಿಥುನೀಭೂಯ ತದಭಿನಿವೇಶಿತಮನಸಂ ಷಡಂಘ್ರಿಗಣ- ಸಾಮಗೀತವದತಿಮನೋಹರವನಿತಾದಿ
ಜನಾಲಾಪೇಷ್ವ- ತಿತರಾಮತಿಪ್ರಲೋಭಿತಕರ್ಣಮಗ್ರೇ ವೃಕಯೂಥವದಾತ್ಮನ
ಆಯುರ್ಹರತೋಹೋರಾತ್ರಾಂತಾನ್ಕಾಲಲವವಿಶೇ- ಷಾನವಿಗಣಯ್ಯ ಗೃಹೇಷು ವಿಹರಂತಂ
ಪೃಷ್ಠತ ಏವ ಪರೋಕ್ಷಮನುಪ್ರವೃತ್ತೋ ಲುಬ್ಧಕಃ ಕೃತಾಂತೋಂತಃ- ಶರೇಣ ಯಮಿಹಪರಾವಿಧ್ಯತಿ ತಮಿಮಮಾತ್ಮಾನಮಹೋ ರಾಜನ್ ಭಿನ್ನ ಹೃದಯಂ ದ್ರಷ್ಟುಮರ್ಹಸೀತಿ ॥

ಅನುವಾದ

ಎಲೈ ರಾಜನೇ! ಈ ರೂಪಕದ ಅಭಿಪ್ರಾಯವನ್ನು ಕೇಳು ಈ ಮೃತಪ್ರಾಯವಾದ ಜಿಂಕೆಯೇ ನೀನಾಗಿರುವೆ. ನೀನು ನಿನ್ನ ಸ್ಥಿತಿಯ ಬಗ್ಗೆ ವಿಚಾರಮಾಡು. ಹೂವುಗಳಂತಿರುವ ಈ ಸ್ತ್ರೀಯರು ಕೇವಲ ನೋಡಲಷ್ಟೇ ಸುಂದರರಾಗಿದ್ದಾರೆ. ಈ ಸ್ತ್ರೀಯರು ಇರುವ ಮನೆಯೇ ಹೂದೋಟವು. ಇದರಲ್ಲಿದ್ದು ಕೊಂಡು ನೀನು ಹೂವುಗಳ ಮಧುವಿಗೂ, ಪರಿಮಳಕ್ಕೂ ಸಮಾನವಾದ ಕ್ಷುದ್ರವಾದ ಸಕಾಮಕರ್ಮಗಳ ಫಲರೂಪವಾಗಿ ನಾಲಿಗೆಗೂ ಜನನೇಂದ್ರಿಯಕ್ಕೂ ಪ್ರಿಯವೆನಿಸುವ ಭೋಜನ, ಸ್ತ್ರೀಪ್ರಸಂಗಗಳೇ ಮುಂತಾದ ತುಚ್ಛ-ಭೋಗಗಳನ್ನು ಹುಡುಕುತ್ತಿರುವೆ. ಸ್ತ್ರೀಯರಿಂದ ಸುತ್ತುವರಿಯಲ್ಪಟ್ಟು, ತನ್ನ ಮನಸ್ಸನ್ನು ಅವರಲ್ಲೇ ನೆಟ್ಟಿರುವೆ. ಹೆಂಡಿರು-ಮಕ್ಕಳ ಸವಿಮಾತುಗಳೇ ದುಂಬಿಗಳ ಮಧುರ ಗುಂಜಾರವವಾಗಿದೆ. ನಿನ್ನ ಕಿವಿಗಳು ಅದರಲ್ಲೇ ಅತ್ಯಂತ ಆಸಕ್ತವಾಗಿವೆ. ಇದಿರ್ಗಡೆಯೇ ತೋಳಗಳ ಹಿಂಡಿನಂತೆ ಕಾಲದ ಅಂಶವಾದ ಹಗಲು-ರಾತ್ರಿಗಳು ನಿನ್ನ ಆಯುಸ್ಸನ್ನು ಕಸಿದುಕೊಳ್ಳುತ್ತಿವೆ. ಆದರೆ ನೀನು ಅದಾವುದನ್ನೂ ಗಮನಿಸದೆ ಗೃಹಸ್ಥಸುಖ ಗಳಲ್ಲೇ ರಮಿಸುತ್ತಿದ್ದೀಯೆ. ನಿನ್ನ ಹಿಂದುಗಡೆ ಕಾಲಪುರುಷನೆಂಬ ಬೇಟೆಗಾರನು ಸದ್ದಿಲ್ಲದೆ ನಿಂತುಕೊಂಡು ಬಾಣದಿಂದ ನಿನ್ನ ಹೃದಯವನ್ನು ದೂರದಿಂದಲೇ ಸೀಳಿಹಾಕಲು ಬಯಸುತ್ತಿದ್ದಾನೆ. ॥54॥

ಮೂಲಮ್

(ಶ್ಲೋಕ - 55)
ಸ ತ್ವಂ ವಿಚಕ್ಷ್ಯ ಮೃಗಚೇಷ್ಟಿತಮಾತ್ಮನೋಂತ-
ಶ್ಚಿತ್ತಂ ನಿಯಚ್ಛ ಹೃದಿ ಕರ್ಣಧುನೀಂ ಚ ಚಿತ್ತೇ ।
ಜಹ್ಯಂಗನಾಶ್ರಮಮಸತ್ತಮಯೂಥಗಾಥಂ
ಪ್ರೀಣೀಹಿ ಹಂಸಶರಣಂ ವಿರಮ ಕ್ರಮೇಣ ॥

ಅನುವಾದ

ಹೀಗೆ ನಿನ್ನ ಸ್ಥಿತಿಯು ಆ ಮೃಗದ ಸ್ಥಿತಿಯಂತೆಯೇ ಇರುವುದನ್ನು ಗಮನಿಸಿ, ನೀನು ಚಿತ್ತವನ್ನು ಹೃದಯದೊಳಗೆ ಸ್ಥಿರಗೊಳಿಸು. ನದಿಯಂತೆ ಹರಿಯುತ್ತಿರುವ ಶ್ರವಣೇಂದ್ರಿಯದ ಬಾಹ್ಯವೃತ್ತಿಯನ್ನು ಚಿತ್ತದಲ್ಲಿ ನೆಲೆಗೊಳಿಸು (ಅಂತರ್ಮುಖಿಯಾಗು). ಕಾಮಿಗಳ ಚರ್ಚೆ ನಡೆಯುತ್ತಿರುವ ಗೃಹಸ್ಥಾಶ್ರಮವನ್ನು ಬಿಟ್ಟು ಪರಮಹಂಸರಿಗೆ ಆಶ್ರಯನಾದ ಶ್ರೀಹರಿಯನ್ನು ಪ್ರಸನ್ನಗೊಳಿಸು ಮತ್ತು ಕ್ರಮವಾಗಿ ಎಲ್ಲ ವಿಷಯಗಳಿಂದ ದೂರವಾಗಿರು. ॥55॥

ಮೂಲಮ್

(ಶ್ಲೋಕ - 56)

ಮೂಲಮ್ (ವಾಚನಮ್)

ರಾಜೋವಾಚ

ಮೂಲಮ್

ಶ್ರುತಮನ್ವೀಕ್ಷಿತಂ ಬ್ರಹ್ಮನ್ ಭಗವಾನ್ ಯದಭಾಷತ ।
ನೈತಜ್ಜಾನಂತ್ಯುಪಾಧ್ಯಾಯಾಃ ಕಿಂ ನ ಬ್ರೂಯುರ್ವಿದುರ್ಯದಿ ॥

ಅನುವಾದ

ಪ್ರಾಚೀನ ಬರ್ಹಿರಾಜನು ಹೇಳಿದನು ಭಗವಾನ್ ದೇವರ್ಷಿಗಳೇ! ತಾವು ಕರುಣೆಯಿಂದ ನನಗೆ ಅನುಗ್ರಹಿಸಿರುವ ಉಪದೇಶವನ್ನು ಆಲಿಸಿ ಅದರ ಬಗೆಗೆ ವಿಶೇಷವಾಗಿ ವಿಚಾರ ಮಾಡಿದೆನು. ನನಗೆ ಕರ್ಮವನ್ನೇ ಉಪದೇಶ ಮಾಡಿದ ಆ ಉಪಾಧ್ಯಾಯರಿಗೆ ನಿಶ್ಚಯವಾಗಿಯೂ ಈ ಜ್ಞಾನವಿಲ್ಲ. ಇದನ್ನು ಅವರು ತಿಳಿದಿದ್ದರೆ ನನಗೆ ಇಂತಹ ಉಪದೇಶವನ್ನು ಕೊಡುತ್ತಿರಲಿಲ್ಲವೇ? ॥56॥

ಮೂಲಮ್

(ಶ್ಲೋಕ - 57)
ಸಂಶಯೋತ್ರ ತು ಮೇ ವಿಪ್ರ ಸಂಛಿನ್ನಸ್ತತ್ಕೃತೋ ಮಹಾನ್ ।
ಋಷಯೋಪಿ ಹಿ ಮುಹ್ಯಂತಿ ಯತ್ರ ನೇಂದ್ರಿಯವೃತ್ತಯಃ ॥

ಅನುವಾದ

ವಿಪ್ರವರ್ಯರೇ! ನನ್ನ ಉಪಾಧ್ಯಾಯರ ಉಪದೇಶದಿಂದ ಆತ್ಮತತ್ತ್ವದ ವಿಷಯದಲ್ಲಿ ನನ್ನ ಹೃದಯದಲ್ಲಿ ಉಂಟಾದ ದೊಡ್ಡ ಸಂಶಯವನ್ನು ತಾವು ತೊಲಗಿಸಿದಿರಿ. ಇದು ಅತೀಂದ್ರಿಯವಾದ ವಿಷಯವಾದ್ದರಿಂದ ಋಷಿಗಳಿಗೂ ಇದರಲ್ಲಿ ಕೆಲವೊಮ್ಮೆ ಮೋಹ ಉಂಟಾಗುತ್ತದೆ. ॥57॥

ಮೂಲಮ್

(ಶ್ಲೋಕ - 58)
ಕರ್ಮಾಣ್ಯಾರಭತೇ ಯೇನ ಪುಮಾನಿಹ ವಿಹಾಯ ತಮ್ ।
ಅಮುತ್ರಾನ್ಯೇನ ದೇಹೇನ ಜುಷ್ಟಾನಿ ಸ ಯದಶ್ನುತೇ ॥
(ಶ್ಲೋಕ - 59)
ಇತಿ ವೇದವಿದಾಂ ವಾದಃ ಶ್ರೂಯತೇ ತತ್ರ ತತ್ರ ಹ ।
ಕರ್ಮ ಯತ್ಕ್ರಿಯತೇ ಪ್ರೋಕ್ತಂ ಪರೋಕ್ಷಂ ನ ಪ್ರಕಾಶತೇ ॥

ಅನುವಾದ

‘‘ಮನುಷ್ಯನು ಈ ಲೋಕದಲ್ಲಿ ಯಾವ ದೇಹದಿಂದ ಕರ್ಮಗಳನ್ನು ಆಚರಿಸುತ್ತಾನೆಯೋ, ಆ ಸ್ಥೂಲದೇಹವನ್ನು ಇಲ್ಲೇ ಬಿಟ್ಟು ಪರಲೋಕದಲ್ಲಿ ಕರ್ಮಗಳಿಂದಲೇ ನಿರ್ಮಿತವಾದ ಬೇರೊಂದು ಶರೀರವನ್ನು ಪಡೆದು ಅದರಿಂದ ಕರ್ಮಫಲವನ್ನು ಅನುಭವಿಸುವನು’’ ಎಂದು ವೇದವಾದಿಗಳು ಹೇಳುವುದು ಅಲ್ಲಲ್ಲಿ ಕೇಳಿಬರುತ್ತಿದೆ. ಆದರೆ ಈ ಮಾತು ಹೇಗಾಗಬಲ್ಲದು? (ಏಕೆಂದರೆ ಆ ಕರ್ಮಗಳ ಕರ್ತೃವಾದ ಸ್ಥೂಲಶರೀರವು ಇಲ್ಲೇ ನಷ್ಟವಾಗಿ ಹೋಗುತ್ತದೆ.) ಇದಲ್ಲದೆ ಯಾವ-ಯಾವ ಕರ್ಮಗಳನ್ನು ಇಲ್ಲಿ ಮಾಡಲಾಗುತ್ತದೋ ಅವುಗಳಾದರೋ ಮರುಕ್ಷಣದಲ್ಲೇ ಅದೃಶ್ಯವಾಗುತ್ತವೆ. ಅವು ಪರಲೋಕದಲ್ಲಿ ಫಲಕೊಡಲು ಹೇಗೆ ಪುನಃ ಪ್ರಕಟಗೊಳ್ಳಬಲ್ಲವು? ॥58-59॥

ಮೂಲಮ್

(ಶ್ಲೋಕ - 60)

ಮೂಲಮ್ (ವಾಚನಮ್)

ನಾರದ ಉವಾಚ

ಮೂಲಮ್

ಯೇನೈವಾರಭತೇ ಕರ್ಮ ತೇನೈವಾಮುತ್ರ ತತ್ಪುಮಾನ್ ।
ಭುಂಕ್ತೇ ಹ್ಯವ್ಯವಧಾನೇನ ಲಿಂಗೇನ ಮನಸಾ ಸ್ವಯಮ್ ॥

ಅನುವಾದ

ಶ್ರೀನಾರದರು ಹೇಳಿದರು — ಎಲೈ ರಾಜನೇ! (ಸ್ಥೂಲ ಶರೀರವಾದರೋ ಲಿಂಗಶರೀರದ ಅಧೀನವಾಗಿದೆ. ಆದ್ದರಿಂದ ಕರ್ಮಗಳ ಹೊಣೆಗಾರಿಕೆ ಅದರ ಮೇಲೆಯೇ ಇದೆ.) ಮನಃ ಪ್ರಧಾನವಾದ ಲಿಂಗಶರೀರದ ಸಹಾಯದಿಂದಲೇ ಮನುಷ್ಯನು ಕರ್ಮವನ್ನು ಮಾಡುತ್ತಾನೆ. ಅದಾದರೋ ಸತ್ತಬಳಿಕವೂ ಅವ ನೊಂದಿಗೆ ಇರುತ್ತದೆ. ಆದ್ದರಿಂದ ಅವನು ಪರಲೋಕದಲ್ಲಿ ಅಪರೋಕ್ಷವಾಗಿ ಸ್ವತಃ ಅದರ ಮೂಲಕವೇ ಲವನ್ನು ಅನುಭವಿಸುತ್ತಾನೆ. ॥60॥

ಮೂಲಮ್

(ಶ್ಲೋಕ - 61)
ಶಯಾನಮಿಮಮುತ್ಸೃಜ್ಯ ಶ್ವಸಂತಂ ಪುರುಷೋ ಯಥಾ ।
ಕರ್ಮಾತ್ಮನ್ಯಾಹಿತಂ ಭುಂಕ್ತೇ ತಾದೃಶೇನೇತರೇಣ ವಾ ॥

ಅನುವಾದ

ಸ್ವಪ್ನಾವಸ್ಥೆಯಲ್ಲಿ ಮನುಷ್ಯನು ಈ ಜೀವಿತ ಶರೀರದ ಅಭಿಮಾನವನ್ನಾದರೋ ಬಿಟ್ಟು ಬಿಡುತ್ತಾನೆ. ಆದರೆ ಅದರಂತೆ ಇರುವ ಅಥವಾ ಇದರಿಂದ ಭಿನ್ನವಾದ ಪಶು-ಪಕ್ಷಿ ಮುಂತಾದ ಶರೀರದಿಂದ ಅವನು ಮನಸ್ಸಿನಲ್ಲಿರುವ ಸಂಸ್ಕಾರ ರೂಪದಿಂದ ಇರುವ ಕರ್ಮಗಳ ಫಲವನ್ನು ಅನುಭವಿಸುತ್ತಾ ಇರುತ್ತಾನೆ. ॥61॥

ಮೂಲಮ್

(ಶ್ಲೋಕ - 62)
ಮಮೈತೇ ಮನಸಾ ಯದ್ಯದಸಾವಹಮಿತಿ ಬ್ರುವನ್ ।
ಗೃಹ್ಣೀಯಾತ್ತತ್ಪುಮಾನ್ರಾದ್ಧಂ ಕರ್ಮ ಯೇನ ಪುನರ್ಭವಃ ॥

ಅನುವಾದ

ಈ ಮನಸ್ಸಿನ ಮೂಲಕ ಜೀವನು ಪತ್ನೀ-ಪುತ್ರಾದಿಗಳನ್ನು ‘ಇವರು ನನ್ನವರು’ ಮತ್ತು ದೇಹಾದಿಗಳನ್ನು ‘ಇದು ನಾನು’ ಎಂದು ಹೇಳಿಕೊಂಡು ಒಪ್ಪಿಕೊಳ್ಳುವನು. ಅವರು ಮಾಡಿರುವ ಪಾಪ-ಪುಣ್ಯ ಮುಂತಾದ ಕರ್ಮಗಳನ್ನೂ ಕೂಡ ತಾನು ಪರಿಗ್ರಹಿಸಿ, ಅವುಗಳಿಂದಾಗಿ ಇವನಿಗೆ ವ್ಯರ್ಥವಾಗಿಯೇ ಪುನಃ ಹುಟ್ಟಬೇಕಾಗುತ್ತದೆ. ॥62॥

ಮೂಲಮ್

(ಶ್ಲೋಕ - 63)
ಯಥಾನುಮೀಯತೇ ಚಿತ್ತಮುಭಯೈರಿಂದ್ರಿಯೇಹಿತೈಃ ।
ಏವಂ ಪ್ರಾಗ್ದೇಹಜಂ ಕರ್ಮ ಲಕ್ಷ್ಯತೇ ಚಿತ್ತವೃತ್ತಿಭಿಃ ॥

ಅನುವಾದ

ಜ್ಞಾನೇಂದ್ರಿಯ ಮತ್ತು ಕರ್ಮೇಂದ್ರಿಯ ಎರಡರ ಚೇಷ್ಟೆಗಳಿಂದ ಅವುಗಳಿಗೆ ಪ್ರೇರಕವಾದ ಚಿತ್ತದ ಅನುಮಾನ ಮಾಡಲಾಗುತ್ತದೆ. ಹಾಗೆಯೇ ಚಿತ್ತದ ಬೇರೆ-ಬೇರೆ ರೀತಿಯ ವೃತ್ತಿಗಳಿಂದ ಹಿಂದಿನ ಜನ್ಮದ ಕರ್ಮಗಳನ್ನೂ ಅನುಮಾನಿಸಬೇಕಾಗುತ್ತದೆ. (ಆದ್ದರಿಂದ ಕರ್ಮವು ಅದೃಷ್ಟರೂಪದಿಂದ ಫಲವನ್ನು ಕೊಡಲಿಕ್ಕಾಗಿ ಕಾಲಾಂತರದಲ್ಲಿಯೂ ಇರುವುದೆಂದು ತಿಳಿಯಬೇಕು.) ॥63॥

ಮೂಲಮ್

(ಶ್ಲೋಕ - 64)
ನಾನುಭೂತಂ ಕ್ವ ಚಾನೇನ ದೇಹೇನಾದೃಷ್ಟಮಶ್ರುತಮ್ ।
ಕದಾಚಿದುಪಲಭ್ಯೇತ ಯದ್ರೂಪಂ ಯಾದೃಗಾತ್ಮನಿ ॥

ಅನುವಾದ

ಕೆಲವೊಮ್ಮೆ ನಾವು ಈಗ ಇರುವ ದೇಹದಿಂದ ಎಲ್ಲಿಯೂ ಯಾವಾಗಲೂ ಕಾಣದಿರುವ ಮತ್ತು ಕೇಳದಿರುವ ಸಂಗತಿಗಳನ್ನು ಸ್ವಪ್ನದಲ್ಲಿ ಸ್ಪಷ್ಟವಾಗಿ ನಿಜವಾಗಿ ನಡೆದಂತೆ ಅನುಭವಿಸುತ್ತೇವೆ. (ಇದರಿಂದ ಪೂರ್ವಜನ್ಮದ ಕರ್ಮಗಳು ಇರುವುದೆಂದು ಊಹಿಸಬಹುದು.) ॥64॥

ಮೂಲಮ್

(ಶ್ಲೋಕ - 65)
ತೇನಾಸ್ಯ ತಾದೃಶಂ ರಾಜಲ್ಲಿಂಗಿನೋ ದೇಹಸಂಭವಮ್ ।
ಶ್ರದ್ಧತ್ಸ್ವಾನನುಭೂತೋರ್ಥೋ ನ ಮನಃ ಸ್ಪ್ರಷ್ಟುಮರ್ಹತಿ ॥

ಅನುವಾದ

ಎಲೈ ರಾಜನೇ! ಲಿಂಗದೇಹದ ಅಭಿಮಾನೀ ಜೀವನಿಗೆ ಅವುಗಳ ಅನುಭವ ಹಿಂದಿನ ಜನ್ಮದಲ್ಲಿ ಆಗಿಹೋಗಿವೆ ಎಂದು ನೀನು ನಿಶ್ಚಯವಾಗಿ ತಿಳಿದುಕೋ. ಏಕೆಂದರೆ, ಮೊದಲು ಅನುಭವಿಸದೆ ಇರುವ ವಸ್ತುವಿನ ವಾಸನೆಯು ಮನಸ್ಸಿನಲ್ಲಿ ಬರಲು ಸಾಧ್ಯವೇ ಇಲ್ಲ. ॥65॥

ಮೂಲಮ್

(ಶ್ಲೋಕ - 66)
ಮನ ಏವ ಮನುಷ್ಯಸ್ಯಪೂರ್ವರೂಪಾಣಿ ಶಂಸತಿ ।
ಭವಿಷ್ಯತಶ್ಚ ಭದ್ರಂ ತೇ ತಥೈವ ನ ಭವಿಷ್ಯತಃ ॥

ಅನುವಾದ

ಎಲೈ ರಾಜನೇ! ನಿನಗೆ ಮಂಗಳವಾಗಲಿ. ಮನುಷ್ಯನ ಹಿಂದಿನ ರೂಪಗಳನ್ನು ಹಾಗೂ ಮುಂದಿನ ಶರೀರಾದಿಗಳನ್ನೂ ಕೂಡ ಮನಸ್ಸೇ ತಿಳಿಸುತ್ತದೆ ಮತ್ತು ಮುಂದೆ ಜನ್ಮವೇ ಆಗದಿರುವ ತತ್ತ್ವವೇತ್ತರಾದವರ ವಿದೇಹಮುಕ್ತಿಯ ಸ್ಥಿತಿಯನ್ನು ಅವರ ಮನಸ್ಸಿನಿಂದಲೇ ತಿಳಿಯುತ್ತದೆ. ॥66॥

ಮೂಲಮ್

(ಶ್ಲೋಕ - 67)
ಅದೃಷ್ಟಮಶ್ರುತಂ ಚಾತ್ರ ಕ್ವಚಿನ್ಮನಸಿ ದೃಶ್ಯತೇ ।
ಯಥಾ ತಥಾನುಮಂತವ್ಯಂ ದೇಶಕಾಲಕ್ರಿಯಾಶ್ರಯಮ್ ॥

ಅನುವಾದ

ಕೆಲವೊಮ್ಮೆ ಸ್ವಪ್ನದಲ್ಲಿ ದೇಶ, ಕಾಲ ಅಥವಾ ಕ್ರಿಯೆಯ ಸಂಬಂಧೀ ಮಾತುಗಳೂ ಮೊದಲೂ ಎಂದೂ ನೋಡದೆ ಇದ್ದ ಅಥವಾ ಕೇಳದೇ ಇದ್ದುದನ್ನು (ಪರ್ವತದ ತುದಿಯಲ್ಲಿ ಸಮುದ್ರವನ್ನು, ಹಗಲಿನಲ್ಲಿ ನಕ್ಷತ್ರಗಳು ಅಥವಾ ತನ್ನ ತಲೆಯೇ ತುಂಡಾದಂತೆ) ನೋಡಲಾಗುತ್ತದೆ. ಇವುಗಳನ್ನು ನೋಡುವುದರಲ್ಲಿ ನಿದ್ರಾದೋಷವನ್ನೇ ಕಾರಣವೆಂದು ತಿಳಿಯಬೇಕು. ॥67॥

ಮೂಲಮ್

(ಶ್ಲೋಕ - 68)
ಸರ್ವೇ ಕ್ರಮಾನುರೋಧೇನ ಮನಸೀಂದ್ರಿಯಗೋಚರಾಃ ।
ಆಯಾಂತಿ ವರ್ಗಶೋ ಯಾಂತಿ ಸರ್ವೇ ಸಮನಸೋ ಜನಾಃ ॥

ಅನುವಾದ

ಮನಸ್ಸಿನ ಮುಂದೆ ಇಂದ್ರಿಯಗಳಿಂದ ಅನುಭವಿಸಲು ಯೋಗ್ಯವಾದ ಪದಾರ್ಥಗಳೇ ಭೋಗರೂಪದಿಂದ ಪದೇ-ಪದೇ ಬರುತ್ತಿರುತ್ತವೆ ಮತ್ತು ಭೋಗವು ಸಮಾಪ್ತವಾದ ಮೇಲೆ ಹೊರಟುಹೋಗುತ್ತವೆ. ಇಂದ್ರಿಯಗಳಿಂದ ಅನುಭವಿಸಲಾರದ ಯಾವುದೇ ಪದಾರ್ಥಗಳು ಬರುವುದಿಲ್ಲ. ಇದರ ಕಾರಣ ಎಲ್ಲ ಜೀವರೂ ಮನಸಹಿತರೇ ಆಗಿದ್ದಾರೆ. ॥68॥

ಮೂಲಮ್

(ಶ್ಲೋಕ - 69)
ಸತ್ತ್ವೆ ಕನಿಷ್ಠೇ ಮನಸಿ ಭಗವತ್ಪಾರ್ಶ್ವವರ್ತಿನಿ ।
ತಮಶ್ಚಂದ್ರಮಸೀವೇದಮುಪರಜ್ಯಾವಭಾಸತೇ ॥

ಅನುವಾದ

ಸಾಮಾನ್ಯವಾಗಿ ವಿಷಯಗಳು ಎಲ್ಲರಿಗೂ ಕ್ರಮವಾಗಿ ಅನುಭವಕ್ಕೆ ಬರುತ್ತವೆ. ಆದರೆ ಮನಸ್ಸು ಶುದ್ಧ ಸತ್ತ್ವದಲ್ಲಿ ನೆಲೆಸಿ ಶ್ರೀಭಗವಂತನಲ್ಲಿ ತೊಡಗಿದಾಗ ರಾಹುವು ದೃಷ್ಟಿಯ ವಿಷಯನಲ್ಲದಿದ್ದರೂ ಚಂದ್ರಬಿಂಬ ದಲ್ಲಿ ತೋರುವಂತೆ ಕೆಲವೊಮ್ಮೆ ಭಗವಂತನ ಸಂಸರ್ಗದಿಂದ ಸಮಸ್ತ ವಿಶ್ವವೂ, ಸಮಸ್ತ ವಾಸನೆಗಳೂ ಏಕಕಾಲದಲ್ಲಿ ತೋರುವುದೂ ಉಂಟು. ॥69॥

ಮೂಲಮ್

(ಶ್ಲೋಕ - 70)
ನಾಹಂ ಮಮೇತಿ ಭಾವೋಯಂ ಪುರುಷೇ ವ್ಯವಧೀಯತೇ ।
ಯಾವದ್ಬುದ್ಧಿಮನೋಕ್ಷಾರ್ಥ-ಗುಣವ್ಯೆಹೋ ಹ್ಯನಾದಿಮಾನ್ ॥

ಅನುವಾದ

ಬುದ್ಧಿ, ಮನಸ್ಸು, ಇಂದ್ರಿಯಗಳು ಮತ್ತು ಇಂದ್ರಿಯಗಳ ವಿಷಯಗಳು ಈ ಗುಣಗಳ ಪರಿಣಾಮವಾದ ಅನಾದಿ ಲಿಂಗಶರೀರವು ಇರುವಲ್ಲಿಯವರೆಗೂ ಜೀವನಲ್ಲಿ ಸ್ಥೂಲದೇಹದ ಕುರಿತು ‘ನಾನು-ನನ್ನದು’ ಎಂಬ ಭಾವವು ನಾಶಹೊಂದುವುದಿಲ್ಲ. ॥70॥

ಮೂಲಮ್

(ಶ್ಲೋಕ - 71)
ಸುಪ್ತಿಮೂರ್ಚ್ಛೋಪತಾಪೇಷು ಪ್ರಾಣಾಯನವಿಘಾತತಃ ।
ನೇಹತೇಹಮಿತಿ ಜ್ಞಾನಂ ಮೃತ್ಯುಪ್ರಜ್ವಾರಯೋರಪಿ ॥

ಅನುವಾದ

ಗಾಢನಿದ್ದೆ, ಮೂರ್ಛೆ, ಅತ್ಯಂತ ದುಃಖ ಹಾಗೂ ಮೃತ್ಯು ತೀವ್ರವಾದ ಸನ್ನಿಪಾತ ಜ್ವರವೇ ಮುಂತಾದ ಸ್ಥಿತಿಯಲ್ಲಿ ಇಂದ್ರಿಯಗಳ ವ್ಯಾಕುಲತೆಯ ಕಾರಣ ‘ನಾನು- ನನ್ನದು’ ಇದರ ಸ್ಪಷ್ಟ ಅನುಭೂತಿ ಆಗದಿದ್ದರೂ ಆಗಲೂ ಅವುಗಳ ಅಭಿಮಾನ ಇದ್ದೇ ಇರುತ್ತದೆ. ॥71॥

ಮೂಲಮ್

(ಶ್ಲೋಕ - 72)
ಗರ್ಭೇಬಾಲ್ಯೇಪ್ಯಪೌಷ್ಕಲ್ಯಾದೇಕಾದಶವಿಧಂ ತದಾ ।
ಲಿಂಗಂ ನ ದೃಶ್ಯತೇ ಯೂನಃ ಕುಹ್ವಾಂ ಚಂದ್ರಮಸೋ ಯಥಾ ॥

ಅನುವಾದ

ಅಮಾವಾಸ್ಯೆಯ ರಾತ್ರಿಯಲ್ಲಿ ಚಂದ್ರನು ಇದ್ದೇ ಇದ್ದರೂ ನಮಗೆ ಗೋಚರಿಸುವುದಿಲ್ಲ. ಹಾಗೆಯೇ ಗರ್ಭದಶೆ ಮತ್ತು ಬಾಲ್ಯಾವಸ್ಥೆಗಳಲ್ಲಿ ಇಂದ್ರಿಯಗಳ ಪೂರ್ಣವಿಕಾಸವಾಗ ದಿದ್ದರಿಂದ ಈ ಹನ್ನೊಂದು ಇಂದ್ರಿಯಗಳಿಂದ ಕೂಡಿದ ಲಿಂಗದೇಹವು ತೋರಿಬರದಿದ್ದರೂ, ಯೌವನಾವಸ್ಥೆಯಲ್ಲಿರುವ ಮನುಷ್ಯನಲ್ಲಿ ಸ್ಪಷ್ಟ ತೋರಿಬರುವುದು. ॥72॥

ಮೂಲಮ್

(ಶ್ಲೋಕ - 73)
ಅರ್ಥೇ ಹ್ಯವಿದ್ಯಮಾನೇಪಿ ಸಂಸೃತಿರ್ನ ನಿವರ್ತತೇ ।
ಧ್ಯಾಯತೋ ವಿಷಯಾನಸ್ಯ ಸ್ವಪ್ನೇನರ್ಥಾಗಮೋ ಯಥಾ ॥

ಅನುವಾದ

ಕನಸಿನಲ್ಲಿ ಯಾವ ವಸ್ತುವೂ ಇಲ್ಲದಿದ್ದರೂ ಕನಸಿನ ಅನರ್ಥವು ಎಚ್ಚರಿಕೆಯಾಗುವವರೆಗೆ ತೊಲಗುವುದಿಲ್ಲ. ಹಾಗೆಯೇ ಈ ಪ್ರಪಂಚದ ವಸ್ತುಗಳು ವಾಸ್ತವವಾಗಿ ಅಸತ್ತಾಗಿದ್ದರೂ ಅವಿದ್ಯೆಗೆ ವಶನಾದ ಜೀವನು ಅವುಗಳನ್ನು ಚಿಂತಿಸುತ್ತಿರುವನು. ಆದ್ದರಿಂದ ಅವನಿಗೆ ಹುಟ್ಟು-ಸಾವುಗಳ ರೂಪವಾದ ಈ ಸಂಸಾರವು ತೊಲಗುವುದಿಲ್ಲ. ॥73॥

ಮೂಲಮ್

(ಶ್ಲೋಕ - 74)
ಏವಂ ಪಂಚವಿಧಂ ಲಿಂಗಂ ತ್ರಿವೃತ್ಷೋಡಶವಿಸ್ತೃತಮ್ ।
ಏಷ ಚೇತನಯಾ ಯುಕ್ತೋ ಜೀವ ಇತ್ಯಭಿಧೀಯತೇ ॥

ಅನುವಾದ

ಹೀಗೆ ಪಂಚತನ್ಮಾತ್ರೆಗಳಿಂದ ಉಂಟಾದ ಹಾಗೂ ಹದಿನಾರು ತತ್ತ್ವಗಳ ರೂಪದಲ್ಲಿ ವಿಕಸಿತವಾದ ಈ ತ್ರಿಗುಣಮಯ ಸಂಘಾತವೇ ಲಿಂಗಶರೀರವು. ಇದು ಚೇತನದಿಂದ ಕೂಡಿದಾಗ ‘ಜೀವ’ ಎನಿಸಿಕೊಳ್ಳುವುದು. ॥74॥

ಮೂಲಮ್

(ಶ್ಲೋಕ - 75)
ಅನೇನ ಪುರುಷೋ ದೇಹಾನುಪಾದತ್ತೇ ವಿಮುಂಚತಿ ।
ಹರ್ಷಂ ಶೋಕಂ ಭಯಂ ದುಃಖಂ ಸುಖಂ ಚಾನೇನ ವಿಂದತಿ ॥

ಅನುವಾದ

ಇವನ ಮೂಲಕವೇ ಪುರುಷನು ಬೇರೆ-ಬೇರೆ ದೇಹಗಳನ್ನು ಗ್ರಹಿಸುತ್ತಾ, ತ್ಯಜಿಸುತ್ತಾ ಇರುವನು, ಹಾಗೂ ಇದರಿಂದಲೇ ಅವನಿಗೆ ಹರ್ಷ, ಶೋಕ, ಭಯ, ದುಃಖ ಮತ್ತು ಸುಖ ಮುಂತಾದ ಅನುಭವಗಳು ಉಂಟಾಗುತ್ತವೆ. ॥75॥

ಮೂಲಮ್

(ಶ್ಲೋಕ - 76)
ಯಥಾ ತೃಣಜಲೂಕೇಯಂ ನಾಪಯಾತ್ಯಪಯಾತಿ ಚ ।
ನ ತ್ಯಜೇನ್ಮ್ರಿಯಮಾಣೋಪಿ ಪ್ರಾಗ್ದೇಹಾಭಿಮತಿಂ ಜನಃ ॥
(ಶ್ಲೋಕ - 77)
ಯಾವದನ್ಯಂ ನ ವಿಂದೇತ ವ್ಯವಧಾನೇನ ಕರ್ಮಣಾಮ್ ।
ಮನ ಏವ ಮನುಷ್ಯೇಂದ್ರ ಭೂತಾನಾಂ ಭವಭಾವನಮ್ ॥

ಅನುವಾದ

ಜಿಗಣೆಯ ಹುಳುವು ಒಂದು ಹುಲ್ಲಿನಿಂದ ಮತ್ತೊಂದು ಹುಲ್ಲಿಗೆ ಹತ್ತುವಾಗ ಮುಂದಿನ ಹುಲ್ಲನ್ನು ಗಟ್ಟಿಯಾಗಿ ಹಿಡಿದುಕೊಳ್ಳುವ ವರೆಗೂ ಹಿಂದಿನ ಹುಲ್ಲನ್ನು ಬಿಡುವುದಿಲ್ಲ. ಹಾಗೆಯೇ ಜೀವನು ಮರಣಕಾಲವು ಒದಗಿದರೂ ದೇಹಾ ರಂಭದ ಕರ್ಮಗಳು ಮುಗಿದುಹೋದರೂ ಮತ್ತೊಂದು ಶರೀರವು ದೊರೆಯುವ ತನಕ ಹಿಂದಿನ ಶರೀರದ ಅಭಿಮಾನವನ್ನು ಬಿಡುವುದಿಲ್ಲ. ರಾಜೇಂದ್ರನೇ! ಈ ಮನಃ ಪ್ರಧಾನವಾದ ಲಿಂಗ ಶರೀರವೇ ಜೀವಿಯ ಜನ್ಮಾದಿಗಳಿಗೆ ಕಾರಣವಾಗಿದೆ. ॥76-77॥

ಮೂಲಮ್

(ಶ್ಲೋಕ - 78)
ಯದಾಕ್ಷೈಶ್ಚರಿತಾಂಧ್ಯಾಯನ್ಕರ್ಮಾಣ್ಯಾಚಿನುತೇಸಕೃತ್ ।
ಸತಿ ಕರ್ಮಣ್ಯವಿದ್ಯಾಯಾಂ ಬಂಧಃ ಕರ್ಮಣ್ಯನಾತ್ಮನಃ ॥

ಅನುವಾದ

ಜೀವನು ಇಂದ್ರಿಯಜನಿತ ಭೋಗಗಳನ್ನು ಚಿಂತಿಸುತ್ತಾ ಪದೇ-ಪದೇ ಅವುಗಳಿಗಾಗಿಯೇ ಕರ್ಮ ಮಾಡುತ್ತಿರುವಾಗ, ಆ ಕರ್ಮಗಳು ಆಗುತ್ತಾ ಇರುವುದರಿಂದ ಅವಿದ್ಯಾವಶನಾಗಿ ಅವನು ದೇಹಾದಿಗಳ ಕರ್ಮಗಳಲ್ಲಿ ಬಂಧಿತನಾಗುತ್ತಾನೆ. ॥78॥

ಮೂಲಮ್

(ಶ್ಲೋಕ - 79)
ಅತಸ್ತದಪವಾದಾರ್ಥಂ ಭಜ ಸರ್ವಾತ್ಮನಾ ಹರಿಮ್ ।
ಪಶ್ಯಂಸ್ತದಾತ್ಮಕಂ ವಿಶ್ವಂ ಸ್ಥಿತ್ಯುತ್ಪತ್ತ್ಯಪ್ಯಯಾ ಯತಃ ॥

ಅನುವಾದ

ಆದುದರಿಂದ ಆ ಕರ್ಮಬಂಧನದಿಂದ ಬಿಡುಗಡೆ ಹೊಂದಲಿಕ್ಕಾಗಿ ಸಮಸ್ತ ವಿಶ್ವವನ್ನು ಭಗವದ್ರೂಪವಾಗಿ ನೋಡುತ್ತಾ ಎಲ್ಲ ರೀತಿಯಿಂದ ಶ್ರೀಹರಿಯನ್ನು ಭಜಿಸು. ಅವನಿಂದಲೇ ಈ ವಿಶ್ವದ ಉತ್ಪತ್ತಿ, ಸ್ಥಿತಿ ಆಗುತ್ತದೆ ಹಾಗೂ ಅವನಲ್ಲೇ ಲಯ ಹೊಂದುತ್ತದೆ. ॥79॥

ಮೂಲಮ್

(ಶ್ಲೋಕ - 80)

ಮೂಲಮ್ (ವಾಚನಮ್)

ಮೈತ್ರೇಯ ಉವಾಚ

ಮೂಲಮ್

ಭಾಗವತಮುಖ್ಯೋ ಭಗವಾನ್ನಾರದೋ ಹಂಸಯೋರ್ಗತಿಮ್ ।
ಪ್ರದರ್ಶ್ಯ ಹ್ಯಮುಮಾಮಂತ್ರ್ಯಸಿದ್ಧಲೋಕಂ ತತೋಗಮತ್ ॥

ಅನುವಾದ

ಶ್ರೀಮೈತ್ರೇಯರು ಹೇಳುತ್ತಾರೆ — ಎಲೈ ವಿದುರನೇ! ಭಾಗವತೋತ್ತಮರಾದ ಶ್ರೀನಾರದಮಹರ್ಷಿಗಳು ಹೀಗೆ ಪ್ರಾಚೀನ ಬರ್ಹಿರಾಜನಿಗೆ ಜೀವ ಮತ್ತು ಈಶ್ವರರ ಸ್ವರೂಪದ ದಿಗ್ದರ್ಶನ ಮಾಡಿದರು. ಬಳಿಕ ಅವರು ಅವ ನಿಂದ ಬೀಳ್ಕೊಂಡು ಸಿದ್ಧಲೋಕಕ್ಕೆ ಹೊರಟುಹೋದರು. ॥80॥

ಮೂಲಮ್

(ಶ್ಲೋಕ - 81)
ಪ್ರಾಚೀನಬರ್ಹೀ ರಾಜರ್ಷಿಃ ಪ್ರಜಾಸರ್ಗಾಭಿರಕ್ಷಣೇ ।
ಆದಿಶ್ಯ ಪುತ್ರಾನಗಮತ್ತಪಸೇ ಕಪಿಲಾಶ್ರಮಮ್ ॥

ಅನುವಾದ

ಅನಂತರ ಆ ರಾಜರ್ಷಿ ಪ್ರಾಚೀನ ಬರ್ಹಿಯೂ ಪ್ರಜಾಪಾಲನೆಯ ಹೊಣೆಯನ್ನು ತನ್ನ ಪುತ್ರನಿಗೆ ಒಪ್ಪಿಸಿ, ತಪಸ್ಸನ್ನಾಚರಿಸಲಿಕ್ಕಾಗಿ ಕಪಿಲಾಶ್ರಮಕ್ಕೆ ಹೊರಟು ಹೋದನು. ॥81॥

ಮೂಲಮ್

(ಶ್ಲೋಕ - 82)
ತತ್ರೈಕಾಗ್ರಮನಾ ವೀರೋ ಗೋವಿಂದ ಚರಣಾಂಬುಜಮ್ ।
ವಿಮುಕ್ತಸಂಗೋನುಭಜನ್ಭಕ್ತ್ಯಾ ತತ್ಸಾಮ್ಯತಾಮಗಾತ್ ॥

ಅನುವಾದ

ಅಲ್ಲಿ ಆ ವೀರವರನು ಸಮಸ್ತ ವಿಷಯಗಳ ಆಸಕ್ತಿಯನ್ನು ಬಿಟ್ಟು ಏಕಾಗ್ರ ಮನಸ್ಸಿನಿಂದ ಭಕ್ತಿಯಿಂದ ಶ್ರೀಹರಿಯ ಚರಣಕಮಲಗಳನ್ನು ಧ್ಯಾನಿಸುತ್ತಾ ಭಗವಂತನ ಸಾರೂಪ್ಯಪದವನ್ನು ಪಡೆದುಕೊಂಡನು. ॥82॥

ಮೂಲಮ್

(ಶ್ಲೋಕ - 83)
ಏತದಧ್ಯಾತ್ಮ ಪಾರೋಕ್ಷ್ಯಂ ಗೀತಂ ದೇವರ್ಷಿಣಾನಘ ।
ಯಃ ಶ್ರಾವಯೇದ್ಯಃ ಶೃಣುಯಾತ್ಸ ಲಿಂಗೇನ ವಿಮುಚ್ಯತೇ ॥

ಅನುವಾದ

ಎಲೈ ಪುಣ್ಯಶಾಲಿಯಾದ ವಿದುರನೇ! ದೇವರ್ಷಿಗಳಾದ ನಾರದರು ಹಾಡಿದ ಈ ಪರೋಕ್ಷರೂಪವಾದ ಆತ್ಮಜ್ಞಾನವನ್ನು ಕೇಳುವ ಅಥವಾ ಹೇಳುವವನು ಶೀಘ್ರವಾಗಿ ಲಿಂಗದೇಹದ ಬಂಧನದಿಂದ ಬಿಡುಗಡೆ ಹೊಂದುವನು. ॥83॥

ಮೂಲಮ್

(ಶ್ಲೋಕ - 84)
ಏತನ್ಮುಕುಂದ ಯಶಸಾ ಭುವನಂ ಪುನಾನಂ
ದೇವರ್ಷಿವರ್ಯಮುಖನಿಃಸೃತಮಾತ್ಮಶೌಚಮ್ ।
ಯಃ ಕೀರ್ತ್ಯಮಾನಮಧಿಗಚ್ಛತಿ ಪಾರಮೇಷ್ಠ್ಯಂ
ನಾಸ್ಮಿನ್ ಭವೇ ಭ್ರಮತಿ ಮುಕ್ತಸಮಸ್ತಬಂಧಃ ॥

ಅನುವಾದ

ದೇವರ್ಷಿ ನಾರದರ ಮುಖದಿಂದ ಹೊರಬಿದ್ದ ಈ ಆತ್ಮಜ್ಞಾನವು ಭಗವಾನ್ ಮುಕುಂದನ ಕೀರ್ತಿಯಿಂದ ಕೂಡಿರುವ ಕಾರಣದಿಂದ ಮೂರುಲೋಕಗಳನ್ನು ಪವಿತ್ರಗೊಳಿಸುವ, ಅಂತಃಕರಣವನ್ನು ಶುದ್ಧಗೊಳಿಸುವ ಮತ್ತು ಪರಮಾತ್ಮಪದವನ್ನು ಪ್ರಕಾಶಗೊಳಿಸುವುದು. ಈ ಕಥಾಮೃತವನ್ನು ಕೇಳುವವನು ಹೇಳುವವನು ಎಲ್ಲ ಬಂಧನಗಳಿಂದ ಮುಕ್ತನಾಗುವನು ಮತ್ತು ಅವನಿಗೆ ಈ ಸಂಸಾರ ಚಕ್ರದಲ್ಲಿ ಸುತ್ತಾಟವಿರುವುದಿಲ್ಲ. ॥84॥

ಮೂಲಮ್

(ಶ್ಲೋಕ - 85)
ಅಧ್ಯಾತ್ಮ ಪಾರೋಕ್ಷ್ಯಮಿದಂ ಮಯಾಧಿಗತಮದ್ಭುತಮ್ ।
ಏವಂ ಸಿಯಾಶ್ರಮಃ ಪುಂಸಶ್ಛಿನ್ನೋಮುತ್ರ ಚ ಸಂಶಯಃ ॥

ಅನುವಾದ

ಎಲೈ ವಿದುರನೇ! ಗೃಹಸ್ಥಾಶ್ರಮಿ ಪುರಂಜನನ ರೂಪಕದಿಂದ ಪರೋಕ್ಷರೂಪದಿಂದ ಹೇಳಿರುವ ಈ ಅದ್ಭುತವಾದ ಆತ್ಮ ಜ್ಞಾನವನ್ನು ನಾನು ಗುರುಗಳ ಕೃಪೆಯಿಂದ ಪಡೆದಿದ್ದೆನು. ಇದರ ತಾತ್ಪರ್ಯವನ್ನು ಅರಿಯುವುದರಿಂದ ಬುದ್ಧಿಯಿಂದ ಕೂಡಿದ ಜೀವಿಯ ದೇಹಾಭಿಮಾನವು ತೊಲಗುವುದು ಮತ್ತು ಪರಲೋಕದಲ್ಲಿ ಜೀವನಿಗೆ ಕರ್ಮಲಭೋಗವು ಹೇಗೆ ಆಗುವುದು ಎಂಬ ಸಂಶಯವೂ ಪರಿಹಾರವಾಗುವುದು. ॥85॥

ಅನುವಾದ (ಸಮಾಪ್ತಿಃ)

ಇಪ್ಪತ್ತೊಂಭತ್ತನೆಯ ಅಧ್ಯಾಯವು ಮುಗಿಯಿತು. ॥29॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಚತುರ್ಥಸ್ಕಂಧೇ ವಿದುರ-ಮೈತ್ರೇಯಸಂವಾದೇ ಪ್ರಾಚೀನಬರ್ಹಿರ್ನಾರದಸಂವಾದೋ ನಾಮೈಕೋನತ್ರಿಂಶೋಽಧ್ಯಾಯಃ ॥2॥

ಮೂಲಮ್