[ಇಪ್ಪತ್ತೆಂಟನೆಯ ಅಧ್ಯಾಯ]
ಭಾಗಸೂಚನಾ
ಪುರಂಜನನು ಜನ್ಮಾಂತರದಲ್ಲಿ ಹೆಂಗಸಾಗಿ ಹುಟ್ಟಿದುದು, ಅವಿಜ್ಞಾತನ ಉಪದೇಶದಿಂದ ಮುಕ್ತನಾದುದು
ಮೂಲಮ್
(ಶ್ಲೋಕ - 1)
ಮೂಲಮ್ (ವಾಚನಮ್)
ನಾರದ ಉವಾಚ
ಮೂಲಮ್
ಸೈನಿಕಾ ಭಯನಾಮ್ನೋ ಏ ಬರ್ಹಿಷ್ಮಂದಿಷ್ಟಕಾರಿಣಃ ।
ಪ್ರಜ್ವಾರಕಾಲಕನ್ಯಾಭ್ಯಾಂ ವಿಚೇರುರವನೀಮಿಮಾಮ್ ॥
ಅನುವಾದ
ಶ್ರೀನಾರದಮಹರ್ಷಿಗಳು ಹೇಳುತ್ತಾರೆ — ಬರ್ಹಿಷ್ಮಂತನೇ! ಕೇಳು. ಅನಂತರ ಆ ಭಯನೆಂಬ ಯವನರಾಜನ ಸೈನಿಕರು ಪ್ರಜ್ವಾರ ಮತ್ತು ಕಾಲಕನ್ಯೆ ಜರೆಯೊಡನೆ ಈ ಭೂಮಿಯಲ್ಲಿ ಎಲ್ಲೆಲ್ಲೂ ಸಂಚರಿಸತೊಡಗಿದರು. ॥1॥
ಮೂಲಮ್
(ಶ್ಲೋಕ - 2)
ತ ಏಕದಾ ತು ರಭಸಾ ಪುರಂಜನಪುರೀಂ ನೃಪ ।
ರುರುಧುರ್ಭೌಮಭೋಗಾಢ್ಯಾಂ ಜರತ್ಪನ್ನಗಪಾಲಿತಾಮ್ ॥
ಅನುವಾದ
ಒಮ್ಮೆ ಅವರು ಮುದಿ ಸರ್ಪದಿಂದ ಸಂರಕ್ಷಿತವಾದ ಎಲ್ಲ ರೀತಿಯ ಸುಖ-ಸಾಮಗ್ರಿಗಳಿಂದಲೂ ಸಂಪನ್ನವಾಗಿದ್ದ ಪುರಂಜನಪುರಿಗೆ ರಭಸದಿಂದ ಧಾಳಿಯಿಟ್ಟರು. ॥2॥
ಮೂಲಮ್
(ಶ್ಲೋಕ - 3)
ಕಾಲಕನ್ಯಾಪಿ ಬುಭುಜೇ ಪುರಂಜನಪುರಂ ಬಲಾತ್ ।
ಯಯಾಭಿಭೂತಃ ಪುರುಷಃ ಸದ್ಯೋ ನಿಃಸಾರತಾಮಿಯಾತ್ ॥
ಅನುವಾದ
ಆಗ ಕಾಲಕನ್ಯೆಯು ಆ ಪುರಿಯ ಪ್ರಜೆಗಳನ್ನು ಬಲಾತ್ಕಾರವಾಗಿ ಭೋಗಿಸತೊಡಗಿದಳು., ಆಕೆಯ ಹಿಡಿತಕ್ಕೆ ಸಿಕ್ಕಿದ ಮನುಷ್ಯರು ಬೇಗನೇ ಸತ್ವಹೀನರಾಗಿ ಬಿಡುವರು. ॥3॥
ಮೂಲಮ್
(ಶ್ಲೋಕ - 4)
ತಯೋಪಭುಜ್ಯಮಾನಾಂ ವೈ ಯವನಾಃ ಸರ್ವತೋದಿಶಮ್ ।
ದ್ವಾರ್ಭಿಃ ಪ್ರವಿಶ್ಯ ಸುಭೃಶಂ ಪ್ರಾರ್ದಯನ್ಸಕಲಾಂ ಪುರೀಮ್ ॥
ಅನುವಾದ
ಅದೇ ಸಮಯದಲ್ಲಿ ಆ ಯವನರಾಜನೂ ಕಾಲಕನ್ಯೆಯಿಂದ ಭೋಗಿಸಲ್ಪಡುತ್ತಿದ್ದ ಆ ಪುರದೊಳಗೆ ನಾಲ್ಕೂ ಕಡೆಗಳಿಂದಲೂ ಬೇರೆ-ಬೇರೆ ದ್ವಾರಗಳಿಂದ ನುಗ್ಗಿ ಅದನ್ನು ನಾಶಪಡಿಸತೊಡಗಿದನು. ॥4॥
ಮೂಲಮ್
(ಶ್ಲೋಕ - 5)
ತಸ್ಯಾಂ ಪ್ರಪೀಡ್ಯಮಾನಾಯಾಮಭಿಮಾನೀ ಪುರಂಜನಃ ।
ಅವಾಪೋರುವಿಧಾಂಸ್ತಾಪಾನ್ಕುಟುಂಬೀ ಮಮತಾಕುಲಃ ॥
ಅನುವಾದ
ಹೀಗೆ ತನ್ನ ಪುರಿಯು ಪೀಡಿತವಾಗುತ್ತಿದ್ದಾಗ ‘ತಾನು ಆ ಪುರಕ್ಕೆ ಒಡೆಯನು, ಅದು ತನಗೆ ಸೇರಿದ್ದು’ ಎಂಬ ಅಭಿಮಾನದಿಂದ ಕೂಡಿ ಮಮತೆಗೆ ವಶನಾಗಿದ್ದ ದೊಡ್ಡ ಕುಟುಂಬಿಯಾದ ಪುರಂಜನರಾಜನನ್ನೂ ನಾನಾ ರೀತಿಯ ಸಂಕಷ್ಟಗಳು ಪೀಡಿಸತೊಡಗಿದವು. ॥5॥
ಮೂಲಮ್
(ಶ್ಲೋಕ - 6)
ಕನ್ಯೋಪಗೂಢೋ ನಷ್ಟಶ್ರೀಃ ಕೃಪಣೋ ವಿಷಯಾತ್ಮಕಃ ।
ನಷ್ಟಪ್ರಜ್ಞೋ ಹೃತೈಶ್ವರ್ಯೋ ಗಂಧರ್ವಯವನೈರ್ಬಲಾತ್ ॥
ಅನುವಾದ
ಕಾಲಕನ್ಯೆಯ ಆಲಿಂಗನದಿಂದ ಅವನ ಎಲ್ಲ ಸಂಪತ್ತು ನಾಶವಾಯಿತು. ಅತ್ಯಂತ ವಿಷಯಾಸಕ್ತನಾದ್ದರಿಂದ ಅವನು ದೀನನಾಗಿ ವಿವೇಕಶಕ್ತಿಯನ್ನು ಕಳಕೊಂಡನು. ಗಂಧರ್ವರೂ ಮತ್ತು ಯವನರೂ ಬಲಾತ್ಕಾರವಾಗಿ ಆತನ ಸಂಪತ್ತೆಲ್ಲವನ್ನು ಲೂಟಿ ಮಾಡಿದರು. ॥6॥
ಮೂಲಮ್
(ಶ್ಲೋಕ - 7)
ವಿಶೀರ್ಣಾಂ ಸ್ವಪುರೀಂ ವೀಕ್ಷ್ಯ ಪ್ರತಿಕೂಲಾನನಾದೃತಾನ್ ।
ಪುತ್ರಾನ್ಪೌತ್ರಾನುಗಾಮಾತ್ಯಾಂಜಾಯಾಂ ಚ ಗತಸೌಹೃದಾಮ್ ॥
(ಶ್ಲೋಕ - 8)
ಆತ್ಮಾನಂ ಕನ್ಯಯಾ ಗ್ರಸ್ತಂ ಪಂಚಾಲಾನರಿದೂಷಿತಾನ್ ।
ದುರಂತಚಿಂತಾಮಾಪನ್ನೋ ನ ಲೇಭೇ ತತ್ಪ್ರತಿಕ್ರಿಯಾಮ್ ॥
ಅನುವಾದ
‘ನಗರವೆಲ್ಲ ಧ್ವಂಸವಾಗಿ ಬಿಟ್ಟಿದೆ. ಮಕ್ಕಳು-ಮೊಮ್ಮಕ್ಕಳು, ಸೇವಕರು, ಮಂತ್ರಿವರ್ಗದವರೆಲ್ಲರೂ ತನಗೆ ಪ್ರತಿಕೂಲರಾಗಿ ತನ್ನನ್ನು ತಿರಸ್ಕರಿಸುತ್ತಿದ್ದಾರೆ. ಹೆಂಡತಿಯೂ ಸ್ನೇಹಶೂನ್ಯಳಾಗಿಬಿಟ್ಟಿದ್ದಾಳೆ. ಕಾಲ ಕನ್ಯೆಯು ದೇಹವನ್ನು ವಶಪಡಿಸಿಕೊಂಡಿರುವಳು. ಪಾಂಚಾಲದೇಶವು ಶತ್ರುಗಳ ಕೈವಶವಾಗಿ ವಿನಾಶ ಹೊಂದಿದೆ’ ಎಂಬುದನ್ನು ಗಮನಿಸಿ ಆತನು ಚಿಂತಾಸಾಗರದಲ್ಲಿ ಮುಳುಗಿಹೋದನು. ಈ ವಿಪತ್ತಿನಿಂದ ಪಾರಾಗುವ ಯಾವ ಉಪಾಯವೂ ಆತನಿಗೆ ತೋಚದೆ ಹೋಯಿತು. ॥7-8॥
ಮೂಲಮ್
(ಶ್ಲೋಕ - 9)
ಕಾಮಾನಭಿಲಷಂದೀನೋ ಯಾತಯಾಮಾಂಶ್ಚ ಕನ್ಯಯಾ ।
ವಿಗತಾತ್ಮಗತಿಸ್ನೇಹಃ ಪುತ್ರದಾರಾಂಶ್ಚ ಲಾಲಯನ್ ॥
ಅನುವಾದ
ಕಾಲಕನ್ಯೆಯು ಸಾರಹೀನವನ್ನಾಗಿ ಮಾಡಿ ಬಿಟ್ಟಿದ್ದ ಆ ಭೋಗಗಳಿಗೆ ಆಸೆ ಪಡುತ್ತಾ ಅವನು ದೀನನಾಗಿದ್ದನು. ತನ್ನ ಪರಲೋಕಗತಿಯನ್ನೂ, ಪರಮಾತ್ಮಸ್ನೇಹವನ್ನೂ ಮರೆತು ಅವನ ಚಿತ್ತವು ಕೇವಲ ಹೆಂಡತಿ-ಮಕ್ಕಳನ್ನು ಸಾಕುವುದರಲ್ಲೇ ತೊಡಗಿಹೋಗಿತ್ತು. ॥9॥
ಮೂಲಮ್
(ಶ್ಲೋಕ - 10)
ಗಂಧರ್ವಯವನಾಕ್ರಾಂತಾಂ ಕಾಲಕನ್ಯೋಪಮರ್ದಿತಾಮ್ ।
ಹಾತುಂ ಪ್ರಚಕ್ರಮೇ ರಾಜಾ ತಾಂ ಪುರೀಮನಿಕಾಮತಃ ॥
ಅನುವಾದ
ಇಂತಹ ಸ್ಥಿತಿಯಲ್ಲಿ ಅವರಿಂದ ಅಗಲಿರಲು ಇಷ್ಟವಿಲ್ಲದಿದ್ದರೂ, ಅವನು ಆ ನಗರವನ್ನು ಬಿಟ್ಟುಹೋಗಲೇಬೇಕಾಯಿತು. ಏಕೆಂದರೆ, ಅದನ್ನು ಗಂಧರ್ವರೂ, ಯವನರೂ ಮುತ್ತಿ ಲೂಟಿಮಾಡಿ ಬಿಟ್ಟಿದ್ದರು ಮತ್ತು ಕಾಲಕನ್ಯೆಯು ತುಳಿದುಹಾಕಿಬಿಟ್ಟಿದ್ದಳು. ॥10॥
ಮೂಲಮ್
(ಶ್ಲೋಕ - 11)
ಭಯನಾಮ್ನೋಗ್ರಜೋ ಭ್ರಾತಾ ಪ್ರಜ್ವಾರಃ ಪ್ರತ್ಯುಪಸ್ಥಿತಃ ।
ದದಾಹ ತಾಂ ಪುರೀಂ ಕೃತ್ಸ್ನಾಂ ಭ್ರಾತುಃ ಪ್ರಿಯಚಿಕೀರ್ಷಯಾ ॥
ಅನುವಾದ
ಇಷ್ಟರಲ್ಲೇ ಯವನರಾಜನ ಅಣ್ಣನಾದ ಪ್ರಜ್ವಾರನು ತಮ್ಮನಿಗೆ ಪ್ರಿಯವನ್ನುಂಟುಮಾಡುವ ಸಲುವಾಗಿ ಆ ಇಡೀ ನಗರಿಗೆ ಬೆಂಕಿಯನ್ನು ಹಚ್ಚಿಬಿಟ್ಟನು. ॥11॥
ಮೂಲಮ್
(ಶ್ಲೋಕ - 12)
ತಸ್ಯಾಂ ಸಂದಹ್ಯಮಾನಾಯಾಂ ಸಪೌರಃ ಸಪರಿಚ್ಛದಃ ।
ಕೌಟುಂಬಿಕಃ ಕುಟುಂಬಿನ್ಯಾ ಉಪಾತಪ್ಯತ ಸಾನ್ವಯಃ ॥
ಅನುವಾದ
ಆ ನಗರಿಯು ಹೊತ್ತಿ ಉರಿಯುತ್ತಿದ್ದಾಗ ಪುರವಾಸಿಗಳೂ, ಸೇವಕ ವೃಂದಕ್ಕೂ, ಸಂತಾನ ಸಮೂಹಕ್ಕೂ, ಕುಟುಂಬದ ಯಜಮಾನಿಯಿಂದೊಡಗೂಡಿದ ಕುಟುಂಬವತ್ಸಲ ಪುರಂಜನನಿಗೂ ಅತೀವ ದುಃಖವಾಯಿತು. ॥12॥
ಮೂಲಮ್
(ಶ್ಲೋಕ - 13)
ಯವನೋಪರುದ್ಧಾಯತನೋ ಗ್ರಸ್ತಾಯಾಂ ಕಾಲಕನ್ಯಯಾ ।
ಪುರ್ಯಾಂ ಪ್ರಜ್ವಾರಸಂಸೃಷ್ಟಃ ಪುರಪಾಲೋನ್ವತಪ್ಯತ ॥
ಅನುವಾದ
ನಗರವು ಕಾಲಕನ್ಯೆಯ ಕೈವಶವಾದುದನ್ನು ಕಂಡು ನಗರವನ್ನು ರಕ್ಷಿಸುತ್ತಿದ್ದ ಸರ್ಪಕ್ಕೂ ಬಹಳ ಪೀಡೆ ಉಂಟಾಯಿತು. ಏಕೆಂದರೆ, ಯವನರು ಅವನ ವಾಸಸ್ಥಾನದ ಮೇಲೂ ಅಧಿಕಾರ ಪಡೆದುಕೊಂಡಿದ್ದರು ಮತ್ತು ಪ್ರಜ್ವಾರನು ಅದರ ಮೇಲೂ ಆಕ್ರಮಣ ನಡೆಸಿದ್ದನು. ॥13॥
ಮೂಲಮ್
(ಶ್ಲೋಕ - 14)
ನ ಶೇಕೇ ಸೋವಿತುಂ ತತ್ರ ಪುರುಕೃಚ್ಛ್ರೋರುವೇಪಥುಃ ।
ಗಂತುಮೈಚ್ಛತ್ತತೋ ವೃಕ್ಷಕೋಟರಾದಿವ ಸಾನಲಾತ್ ॥
ಅನುವಾದ
ಆ ನಗರವನ್ನು ರಕ್ಷಿಸುವ ಸಾಮರ್ಥ್ಯವು ತನಗೆ ಇಲ್ಲದೇ ಹೋಗಲಾಗಿ ಆ ಮಹಾಸರ್ಪವು ಉರಿಯುತ್ತಿರುವ ಮರದ ಪೊಟರೆಯಲ್ಲಿರುವ ಸರ್ಪವು ಅಲ್ಲಿಂದ ಹೊರಟುಹೋಗುವಂತೆ ಅತಿ ಕಷ್ಟದಿಂದ ನಡುಗುತ್ತಾ ಅಲ್ಲಿಂದ ಓಡಿಹೋಗಲು ಬಯಸಿತು. ॥14॥
ಮೂಲಮ್
(ಶ್ಲೋಕ - 15)
ಶಿಥಿಲಾವಯವೋ ಯರ್ಹಿ ಗಂಧರ್ವೈರ್ಹೃತಪೌರುಷಃ ।
ಯವನೈರರಿಭೀ ರಾಜನ್ನುಪರುದ್ಧೋ ರುರೋದ ಹ ॥
ಅನುವಾದ
ಅದರ ಅಂಗಾಂಗಗಳು ಶಿಥಿಲವಾಗಿ ಹೋಗಿದ್ದವು. ಗಂಧರ್ವರು ಅದರ ಎಲ್ಲ ಶಕ್ತಿಯನ್ನು ನಾಶಪಡಿಸಿ ಬಿಟ್ಟಿದ್ದರು. ಆದುದರಿಂದ ಯವನ ಶತ್ರುಗಳು ತಡೆದಾಗ ಅದು ದುಃಖದಿಂದ ಗೋಳಾಡ ತೊಡಗಿತು. ॥15॥
ಮೂಲಮ್
(ಶ್ಲೋಕ - 16)
ದುಹಿತೃಃ ಪುತ್ರಪೌತ್ರಾಂಶ್ಚ ಜಾಮಿಜಾಮಾತೃಪಾರ್ಷದಾನ್ ।
ಸ್ವತ್ವಾವಶಿಷ್ಟಂ ಯತ್ಕಿಂಚಿದ್ಗೃಹಕೋಶಪರಿಚ್ಛದಮ್ ॥
(ಶ್ಲೋಕ - 17)
ಅಹಂ ಮಮೇತಿ ಸ್ವೀಕೃತ್ಯ ಗೃಹೇಷು ಕುಮತಿರ್ಗೃಹೀ ।
ದಧ್ಯೌ ಪ್ರಮದಯಾ ದೀನೋ ವಿಪ್ರಯೋಗ ಉಪಸ್ಥಿತೇ ॥
ಅನುವಾದ
ಮನೆ, ಒಡಲು ಮೊದಲಾದುವುಗಳಲ್ಲಿ ‘ನಾನು-ನನ್ನದು’ ಎಂಬ ಭಾವವನ್ನು ಇಟ್ಟುಕೊಂಡಿದ್ದರಿಂದ ಪುರಂಜನನು ಬುದ್ಧಿ ಹೀನನಾಗಿಬಿಟ್ಟಿದ್ದನು. ಪತ್ನಿಯ ಪ್ರೇಮಪಾಶದಲ್ಲಿ ಸಿಲುಕಿ ಅವನು ಅತ್ಯಂತ ದೀನನಾಗಿದ್ದನು. ಇವೆಲ್ಲವುಗಳನ್ನು ಅಗಲಿ ಹೋಗುವ ಕಾಲವು ಬಂದಾಗ ಅವನು ತನ್ನ ಮಕ್ಕಳು, ಮೊಮ್ಮಕ್ಕಳು, ಸೊಸೆಯರು, ಅಳಿಯಂದಿರು, ಸೇವಕರು, ಮನೆ, ಭಂಡಾರ, ಮತ್ತು ಇತರ ಪದಾರ್ಥಗಳಲ್ಲಿ ಆತನಿಗೆ ಮಮತೆಯು ಇನ್ನೂ ಉಳಿದು ಕೊಂಡಿತ್ತು (ಅವುಗಳ ಭೋಗವಾದರೋ ಎಂದೋ ಬಿಟ್ಟು ಹೋಗಿತ್ತು). ಅವ ರೆಲ್ಲರಿಗಾಗಿ ಹೀಗೆ ಚಿಂತಿಸತೊಡಗಿದನು. ॥16-17॥
ಮೂಲಮ್
(ಶ್ಲೋಕ - 18)
ಲೋಕಾಂತರಂ ಗತವತಿ ಮಯ್ಯನಾಥಾ ಕುಟುಂಬಿನೀ ।
ವರ್ತಿಷ್ಯತೇ ಕಥಂ ತ್ವೇಷಾ ಬಾಲಕಾನನುಶೋಚತೀ ॥
ಅನುವಾದ
ಅಯ್ಯೋ! ನಾನು ಪರಲೋಕಕ್ಕೆ ಹೋದ ಬಳಿಕ ದೊಡ್ಡ ಕುಟುಂಬಕ್ಕೆ ಒಡತಿಯಾದ ನನ್ನ ಆ ಹೆಂಡತಿಯು ಅಸಹಾಯಕಳಾಗಿ ಹೇಗೆ ತಾನೇ ತನ್ನನ್ನು ನಿರ್ವಹಿಸಿಕೊಳ್ಳ ಬಲ್ಲಳು? ಈ ಮಕ್ಕಳು ಮರಿಮಕ್ಕಳನ್ನು ಕುರಿತು ಚಿಂತೆಯೇ ಈಕೆಯನ್ನು ತಿಂದುಬಿಡುವುದಲ್ಲ! ॥18॥
ಮೂಲಮ್
(ಶ್ಲೋಕ - 19)
ನ ಮಯ್ಯನಾಶಿತೇ ಭುಂಕ್ತೇನಾಸ್ನಾತೇ ಸ್ನಾತಿ ಮತ್ಪರಾ ।
ಮಯಿ ರುಷ್ಟೇ ಸುಸಂತ್ರಸ್ತಾ ಭರ್ತ್ಸಿತೇ ಯತವಾಗ್ಭಯಾತ್ ॥
ಅನುವಾದ
ಈಕೆಗೆ ನನ್ನ ಮೇಲೆ ಅದೆಷ್ಟು ಪ್ರೀತಿ! ನಾನು ಊಟಮಾಡಿದ ಹೊರತು ತಾನು ಊಟ ಮಾಡುತ್ತಿರಲಿಲ್ಲ. ನಾನು ಸ್ನಾನ ಮಾಡಿದ ಹೊರತು ಸ್ನಾನ ಮಾಡುತ್ತಿರಲಿಲ್ಲ. ಸದಾ ನನ್ನ ಸೇವೆಯಲ್ಲೇ ಆಸಕ್ತಳಾಗಿರು ತ್ತಿದ್ದಳು. ನಾನೇನಾದರೂ ಮುನಿದರೆ ಭಯದಿಂದ ನಡುಗುತ್ತಿದ್ದಳು. ನಾನು ಗದರಿಸಿದರೆ ಹೆದರಿಕೆಯಿಂದ ಬಾಯಿ ಮುಚ್ಚಿಕೊಂಡು ಬಿಡುತ್ತಿದ್ದಳು. ॥19॥
ಮೂಲಮ್
(ಶ್ಲೋಕ - 20)
ಪ್ರಭೋಧಯತಿ ಮಾವಿಜ್ಞಂ ವ್ಯಷಿತೇ ಶೋಕಕರ್ಶಿತಾ ।
ವರ್ತ್ಮೈ ತದ್ಗೃಹಮೇಧೀಯಂ ವೀರಸೂರಪಿ ನೇಷ್ಯತಿ ॥
ಅನುವಾದ
ನನ್ನಿಂದ ಏನಾದರೂ ತಪ್ಪುಗಳಾದರೆ ಎಚ್ಚರಿಕೆ ನೀಡುತ್ತಿದ್ದಳು. ಈಕೆಗೆ ನನ್ನ ಮೇಲೆ ಎಷ್ಟು ಪ್ರೀತಿ ಇತ್ತೆಂದರೆ, ನಾನೇನಾದರೂ ಪರದೇಶಕ್ಕೆ ಹೋದರೆ ಆಗ ಈಕೆಯು ಅಗಲಿಕೆಯ ದುಃಖದಿಂದ ಒಣಗಿ ಹೋಗುತ್ತಿದ್ದಳು. ಈಕೆಯು ವೀರಮಾತೆಯೇನೋ ಹೌದು. ಆದರೂ ನನ್ನ ಬಳಿಕ ಈ ಗೃಹಸ್ಥಾಶ್ರಮದ ವ್ಯವಹಾರವನ್ನು ಹೇಗೆ ನಿಭಾಯಿಸಬಲ್ಲಳು? ॥20॥
ಮೂಲಮ್
(ಶ್ಲೋಕ - 21)
ಕಥಂ ನು ದಾರಕಾ ದೀನಾ ದಾರಕೀರ್ವಾಪರಾಯಣಾಃ ।
ವರ್ತಿಷ್ಯಂತೇ ಮಯಿ ಗತೇ ಭಿನ್ನನಾವ ಇವೋದಧೌ ॥
ಅನುವಾದ
ನನ್ನನ್ನೇ ಏಕಮಾತ್ರ ಆಧಾರವನ್ನಾಗಿ ಹೊಂದಿ ಇಲ್ಲಿರುವ ನನ್ನ ಪುತ್ರ-ಪುತ್ರಿಯರು ನಾನು ಹೊರಟುಹೋದ ಬಳಿಕ ಹೇಗೆ ತಾನೇ ಜೀವನವನ್ನು ಧರಿಸಿ ಯಾರು? ಸಮುದ್ರ ಮಧ್ಯದಲ್ಲಿ ಹಡಗು ಒಡೆದು ಹೋಗಲಾಗಿ ಕಳವಳಪಡುವ ಪ್ರಯಾಣಿಕರಂತೆ ಒದ್ದಾಡುವರಲ್ಲ! ಮುಂತಾಗಿ ಪುರಂಜನನು ಚಿಂತಿಸತೊಡಗಿದನು. ॥21॥
ಮೂಲಮ್
(ಶ್ಲೋಕ - 22)
ಏವಂ ಕೃಪಣಯಾ ಬುದ್ಧ್ಯಾ ಶೋಚಂತಮತದರ್ಹಣಮ್ ।
ಗ್ರಹೀತುಂ ಕೃತಧೀರೇನಂ ಭಯನಾಮಾಭ್ಯಪದ್ಯತ ॥
ಅನುವಾದ
ಜ್ಞಾನದೃಷ್ಟಿಯಿಂದ ಹೀಗೆಲ್ಲ ಶೋಕಪಡುವುದು ಅನುಚಿತ ವಾಗಿದ್ದರೂ, ಪುರಂಜನನು ಅಜ್ಞಾನಕ್ಕೆ ಒಳಪಟ್ಟು ಹೀಗೆ ದೀನ ಬುದ್ಧಿಯಿಂದ ತನ್ನ ಹೆಂಡತಿ-ಮಕ್ಕಳಿಗಾಗಿ ದುಃಖದಿಂದ ಕಳವಳ ಪಡುತ್ತಿದ್ದನು. ಆಗಲೇ ಆ ಬಡಪಾಯಿ ಯನ್ನು ಹಿಡಿಯುವುದಕ್ಕಾಗಿ ಭಯನೆಂಬ ಯವನರಾಜನು ಅಲ್ಲಿಗೆ ಬಂದನು. ॥22॥
ಮೂಲಮ್
(ಶ್ಲೋಕ - 23)
ಪಶುವದ್ಯವನೈರೇಷ ನೀಯಮಾನಃ ಸ್ವಕಂ ಕ್ಷಯಮ್ ।
ಅನ್ವದ್ರವನ್ನನುಪಥಾಃ ಶೋಚಂತೋ ಭೃಶಮಾತುರಾಃ ॥
ಅನುವಾದ
ಯವನರು ಪಶುವನ್ನು ಎಳೆದುಕೊಂಡು ಹೋಗುವಂತೆ ರಾಜನನ್ನು ಕಟ್ಟಿಕೊಂಡು ತಮ್ಮ ಸ್ಥಾನಕ್ಕೆ ಸೆಳೆದೊಯ್ಯ ತೊಡಗಿದರು. ಆಗ ಆತನ ಅನುಚರರೂ ಕಡುಶೋಕದಿಂದ ಪೀಡಿತರಾಗಿ ದುಗುಡದಿಂದ ಆತನನ್ನು ಹಿಂಬಾಲಿಸಿದರು. ॥23॥
ಮೂಲಮ್
(ಶ್ಲೋಕ - 24)
ಪುರೀಂ ವಿಹಾಯೋಪಗತ ಉಪರುದ್ಧೋ ಭುಜಂಗಮಃ ।
ಯದಾ ತಮೇವಾನು ಪುರೀ ವಿಶೀರ್ಣಾ ಪ್ರಕೃತಿಂ ಗತಾ ॥
ಅನುವಾದ
ಯವನರಿಂದ ತಡೆಯಲ್ಪಟ್ಟ ಸರ್ಪವೂ ಆಗ ಆ ಪುರಿಯನ್ನು ಬಿಟ್ಟು ಇವರೊಂದಿಗೆ ಹೊರಟಿತು. ಅದು ಹೊರಟು ಹೋಗುತ್ತಲೇ ಇಡೀ ನಗರವು ಛಿನ್ನ-ಭಿನ್ನವಾಗಿ ತನ್ನ ಕಾರಣದಲ್ಲಿ ಲೀನವಾಗಿ ಹೋಯಿತು. ॥24॥
ಮೂಲಮ್
(ಶ್ಲೋಕ - 25)
ವಿಕೃಷ್ಯಮಾಣಃ ಪ್ರಸಭಂ ಯವನೇನ ಬಲೀಯಸಾ ।
ನಾವಿಂದತ್ತಮಸಾವಿಷ್ಟಃ ಸಖಾಯಂ ಸುಹೃದಂ ಪುರಃ ॥
ಅನುವಾದ
ಹೀಗೆ ಮಹಾ ಬಲಶಾಲಿಯಾದ ಯವನ ರಾಜನು ಬಲಾತ್ಕಾರದಿಂದ ಸೆಳೆದೊಯ್ಯುತ್ತಿದ್ದರೂ ಅಜ್ಞಾನದಲ್ಲಿ ಮುಳುಗಿಹೋಗಿದ್ದ ಪುರಂಜನನು ತನ್ನ ಹಿತೈಷಿಯೂ, ಹಳೆಯಮಿತ್ರನೂ ಆದ ಅವಿಜ್ಞಾತನನ್ನು ಸ್ಮರಿಸಲಿಲ್ಲ. ॥25॥
ಮೂಲಮ್
(ಶ್ಲೋಕ - 26)
ತಂ ಯಜ್ಞಪಶವೋನೇನ ಸಂಜ್ಞಪ್ತಾ ಯೇದಯಾಲುನಾ ।
ಕುಠಾರೈಶ್ಚಿಚ್ಛಿದುಃ ಕ್ರುದ್ಧಾಃ ಸ್ಮರಂತೋಮೀವಮಸ್ಯ ತತ್ ॥
ಅನುವಾದ
ಹಿಂದೆ ಪುರಂಜನನು ಯಜ್ಞದಲ್ಲಿ ಬಲಿ ಕೊಟ್ಟಿದ್ದ ಪಶುಗಳೇ ಈಗ ಅವನು ಕೊಟ್ಟಿದ್ದ ಪೀಡೆಯನ್ನು ನೆನೆಸಿಕೊಂಡು ಕ್ರೋಧದಿಂದ ಅವನನ್ನು ಕೊಡಲಿಗಳಿಂದ ಕತ್ತರಿಸತೊಡಗಿದವು. ॥26॥
ಮೂಲಮ್
(ಶ್ಲೋಕ - 27)
ಅನಂತಪಾರೇ ತಮಸಿ ಮಗ್ನೋ ನಷ್ಟಸ್ಮೃತಿಃ ಸಮಾಃ ।
ಶಾಶ್ವತೀರನುಭೂಯಾರ್ತಿಂ ಪ್ರಮದಾಸಂಗ ದೂಷಿತಃ ॥
ಅನುವಾದ
ಅನೇಕ ವರ್ಷಗಳ ಕಾಲ ಅವಿವೇಕದ ಸ್ಥಿತಿಯಲ್ಲೇ ಬಿದ್ದು ಆತನು ನಿರಂತರವಾಗಿ ಕಷ್ಟಗಳನ್ನು ಅನುಭವಿಸುತ್ತಿದ್ದನು. ಸ್ತ್ರೀಯಲ್ಲಿ ಇಟ್ಟಿದ್ದ ಆಸಕ್ತಿಯಿಂದಲೇ ಅವನಿಗೆ ಇಂತಹ ದುರ್ಗತಿಯು ಉಂಟಾಗಿತ್ತು. ॥27॥
ಮೂಲಮ್
(ಶ್ಲೋಕ - 28)
ತಾಮೇವ ಮನಸಾ ಗೃಹ್ಣನ್ಬಭೂವ ಪ್ರಮದೋತ್ತಮಾ ।
ಅನಂತರಂ ವಿದರ್ಭಸ್ಯ ರಾಜಸಿಂಹಸ್ಯ ವೇಶ್ಮನಿ ॥
ಅನುವಾದ
ತನ್ನ ಕೊನೆಯ ಕಾಲದಲ್ಲಿಯೂ ಸ್ತ್ರೀಚಿಂತನೆಯನ್ನೇ ಮಾಡುತ್ತಿದ್ದುದರಿಂದ ಪುರಂಜನನು ಮುಂದಿನ ಜನ್ಮದಲ್ಲಿ ನೃಪ ಶ್ರೇಷ್ಠನಾದ ವಿದರ್ಭರಾಜನ ಮನೆಯಲ್ಲಿ ಓರ್ವ ಸುಂದರಿಯಾಗಿ ಹುಟ್ಟಿದನು. ॥28॥
ಮೂಲಮ್
(ಶ್ಲೋಕ - 29)
ಉಪಯೇಮೇ ವೀರ್ಯಪಣಾಂ ವೈದರ್ಭೀಂ ಮಲಯಧ್ವಜಃ ।
ಯುಧಿ ನಿರ್ಜಿತ್ಯ ರಾಜನ್ಯಾನ್ಪಾಂಡ್ಯಃ ಪರಪುರಂಜಯಃ ॥
ಅನುವಾದ
ಆ ವಿದರ್ಭ ಪುತ್ರಿಯ ವಿವಾಹಕಾಲವು ಒದಗಿದಾಗ ತಂದೆ ವಿದರ್ಭಭೂಪತಿಯು ‘ಸರ್ವಶ್ರೇಷ್ಠನಾದ ವೀರ ಪರಾ ಕ್ರಮಿಯು ಮಾತ್ರವೇ ನನ್ನ ಈ ಪುತ್ರಿಯ ಕೈಹಿಡಿಯ ಬಲ್ಲನು’ ಎಂದು ಘೋಷಿಸಿದನು. ಆಗ ಶತ್ರು ಪುರಗಳನ್ನು ಗೆಲ್ಲುವುದರಲ್ಲಿ ಸಮರ್ಥನಾದ ಪಾಂಡ್ಯನರೇಶ ಮಲಯ ಧ್ವಜನು ಯುದ್ಧಭೂಮಿಯಲ್ಲಿ ಎಲ್ಲ ರಾಜರನ್ನೂ ಸೋಲಿಸಿ ವಿದರ್ಭಪುತ್ರಿಯನ್ನು ಮದುವೆಯಾದನು. ॥29॥
ಮೂಲಮ್
(ಶ್ಲೋಕ - 30)
ತಸ್ಯಾಂ ಸ ಜನಯಾಂಚಕ್ರ ಆತ್ಮಜಾಮಸಿತೇಕ್ಷಣಾಮ್ ।
ಯವೀಯಸಃ ಸಪ್ತ ಸುತಾನ್ ಸಪ್ತ ದ್ರವಿಡಭೂಭೃತಃ ॥
ಅನುವಾದ
ಆಕೆಯಲ್ಲಿ ಆ ಮಲಯ ಧ್ವಜನು ಸುಂದರಿಯಾಗಿದ್ದ ಒಬ್ಬ ಕನ್ಯೆಯನ್ನೂ ಮತ್ತು ಆಕೆಯ ತಮ್ಮಂದಿರನ್ನಾಗಿ ಏಳು ಮಂದಿ ಪುತ್ರರನ್ನೂ ಪಡೆದನು. ಆ ಪುತ್ರರೇ ಮುಂದೆ ದ್ರವಿಡದೇಶದ ಏಳು ಮಂದಿ ರಾಜರಾದರು. ॥30॥
ಮೂಲಮ್
(ಶ್ಲೋಕ - 31)
ಏಕೈಕಸ್ಯಾಭವತ್ತೇಷಾಂ ರಾಜನ್ನರ್ಬುದಮರ್ಬುದಮ್ ।
ಭೋಕ್ಷ್ಯತೇ ಯದ್ವಂಶಧರೈರ್ಮಹೀ ಮನ್ವಂತರಂ ಪರಮ್ ॥
ಅನುವಾದ
ಎಲೈ ರಾಜನೇ! ಮತ್ತೆ ಅವರಲ್ಲಿ ಪ್ರತಿಯೋರ್ವ ಪುತ್ರರಿಗೂ ಬಹುಮಂದಿ ಪುತ್ರರು ಹುಟ್ಟಿದರು. ಆ ವಂಶದವರು ಈ ಭೂಮಿಯನ್ನು ಮನ್ವಂತರದ ಕೊನೆಯವರೆಗೂ ಮತ್ತು ಅನಂತರವು ಅನು ಭವಿಸುವರು. ॥31॥
ಮೂಲಮ್
(ಶ್ಲೋಕ - 32)
ಅಗಸ್ತ್ಯಃ ಪ್ರಾಗ್ದುಹಿತರಮುಪಯೇಮೇ ಧೃತವ್ರತಾಮ್ ।
ಯಸ್ಯಾಂ ದೃಢಚ್ಯುತೋ ಜಾತ ಇಧ್ಮವಾಹಾತ್ಮಜೋ ಮುನಿಃ ॥
ಅನುವಾದ
ಮಲಯಧ್ವಜ ರಾಜನ ಮೊದಲನೆಯ ಪುತ್ರಿಯು ತುಂಬಾ ವ್ರತನಿಷ್ಠನಾಗಿದ್ದಳು. ಅಗಸ್ತ್ಯಮಹರ್ಷಿಗಳು ಆಕೆಯನ್ನು ವಿವಾಹವಾಗಿ ದೃಢಚ್ಯುತ ನೆಂಬ ಪುತ್ರನನ್ನು ಆಕೆಯಿಂದ ಪಡೆದರು. ದೃಢಚ್ಯುತನ ಸುಪುತ್ರನೇ ಇಧ್ಮವಾಹನೆನಿಸಿದನು. ॥32॥
ಮೂಲಮ್
(ಶ್ಲೋಕ - 33)
ವಿಭಜ್ಯ ತನಯೇಭ್ಯಃ ಕ್ಷ್ಮಾಂ ರಾಜರ್ಷಿರ್ಮಲಯಧ್ವಜಃ ।
ಆರಿರಾಧಯಿಷುಃ ಕೃಷ್ಣಂ ಸ ಜಗಾಮ ಕುಲಾಚಲಮ್ ॥
ಅನುವಾದ
ಕೊನೆಗೆ ಆ ರಾಜರ್ಷಿ ಮಲಯಧ್ವಜನು ಭೂಮಿಯನ್ನು ತನ್ನ ಪುತ್ರರಿಗೆ ಹಂಚಿಕೊಟ್ಟು ಭಗವಾನ್ ಶ್ರೀಕೃಷ್ಣನನ್ನು ಆರಾಧಿಸಬೇಕೆಂಬ ಇಚ್ಛೆಯಿಂದ ಮಲಯಪರ್ವತಕ್ಕೆ ತೆರಳಿದನು. ॥33॥
ಮೂಲಮ್
(ಶ್ಲೋಕ - 34)
ಹಿತ್ವಾ ಗೃಹಾನ್ಸುತಾನ್ಭೋಗಾನ್ವೈದರ್ಭೀ ಮದಿರೇಕ್ಷಣಾ ।
ಅನ್ವಧಾವತ ಪಾಂಡ್ಯೇಶಂ ಜ್ಯೋತ್ಸ್ನೇವ ರಜನೀಕರಮ್ ॥
ಅನುವಾದ
ಆಗ ಚಂದ್ರಿಕೆಯು ಚಂದ್ರನನ್ನು ಅನುಸರಿಸುವಂತೆ ಸುಂದರಿಯಾದ ವೈದರ್ಭಿಯು ತನ್ನ ಮನೆ, ಮಕ್ಕಳು ಮತ್ತು ಭೋಗಗಳೆಲ್ಲವನ್ನೂ ತೊರೆದು ತನ್ನ ಪತಿಯಾದ ಪಾಂಡ್ಯನರೇಶನನ್ನು ಅನುಸರಿಸಿ ಹೋದಳು. ॥34॥
ಮೂಲಮ್
(ಶ್ಲೋಕ - 35)
ತತ್ರ ಚಂದ್ರವಸಾ ನಾಮ ತಾಮ್ರಪರ್ಣೀ ವಟೋದಕಾ ।
ತತ್ಪುಣ್ಯಸಲಿಲೈರ್ನಿತ್ಯಮುಭಯತ್ರಾತ್ಮನೋ ಮೃಜನ್ ॥
ಅನುವಾದ
ಪಾಂಡ್ಯಭೂಪತಿಯು ಬಂದ ಆ ತಪೋವನದಲ್ಲಿ ಚಂದ್ರವಸಾ, ತಾಮ್ರಪರ್ಣೀ ಮತ್ತು ವಟೋದಕಾ ಎಂಬ ಮೂರು ನದಿಗಳಿದ್ದವು. ರಾಜನು ಪವಿತ್ರವಾದ ಆ ತೀರ್ಥಗಳಲ್ಲಿ ಸ್ನಾನಮಾಡಿ ಪ್ರತಿದಿನವೂ ತನ್ನ ದೇಹವನ್ನೂ, ಮನಸ್ಸನ್ನೂ ಶುಚಿಪಡಿಸಿಕೊಳ್ಳುತ್ತಿದ್ದನು. ॥35॥
ಮೂಲಮ್
(ಶ್ಲೋಕ - 36)
ಕಂದಾಷ್ಟಿಭಿರ್ಮೂಲಲೈಃ ಪುಷ್ಪಪರ್ಣೈಸ್ತೃಣೋದಕೈಃ ।
ವರ್ತಮಾನಃ ಶನೈರ್ಗಾತ್ರಕರ್ಶನಂ ತಪ ಆಸ್ಥಿತಃ ॥
ಅನುವಾದ
ಅಲ್ಲಿ ಇದ್ದುಕೊಂಡು ಅವನು ಕಂದ-ಮೂಲ, ಬೀಜ, ಫಲ-ಪುಷ್ಪ, ಎಲೆ, ಹುಲ್ಲು ಮತ್ತು ನೀರು ಇವುಗಳಿಂದಲೇ ದೇಹಯಾತ್ರೆಯನ್ನು ನಡೆಸುತ್ತಾ ಬಹು ಕಠೋರವಾದ ತಪಸ್ಸನ್ನಾಚರಿಸಿದನು. ಇದರಿಂದ ದಿನಗಳೆದಂತೆ ಅವನ ಶರೀರವು ತುಂಬಾ ಸೊರಗಿಹೋಯಿತು. ॥36॥
ಮೂಲಮ್
(ಶ್ಲೋಕ - 37)
ಶೀತೋಷ್ಣವಾತವರ್ಷಾಣಿ ಕ್ಷುತ್ಪಿಪಾಸೇ ಪ್ರಿಯಾಪ್ರಿಯೇ ।
ಸುಖದುಃಖೇ ಇತಿ ದ್ವಂದ್ವಾನ್ಯಜಯತ್ಸಮದರ್ಶನಃ ॥
ಅನುವಾದ
ಅವನು ಎಲ್ಲರಲ್ಲೂ ಸಮದೃಷ್ಟಿಯನ್ನಿಟ್ಟುಕೊಂಡು ಶೀತೋಷ್ಣ, ಮಳೆ-ಗಾಳಿ, ಹಸಿವು-ಬಾಯಾರಿಕೆ, ಪ್ರಿಯ-ಅಪ್ರಿಯ, ಸುಖ-ದುಃಖಗಳೇ ಮುಂತಾದ ಎಲ್ಲ ದ್ವಂದ್ವಗಳನ್ನು ಗೆದ್ದುಕೊಂಡನು. ॥37॥
ಮೂಲಮ್
(ಶ್ಲೋಕ - 38)
ತಪಸಾ ವಿದ್ಯಯಾ ಪಕ್ವ ಕಷಾಯೋ ನಿಯಮೈರ್ಯಮೈಃ ।
ಯುಯುಜೇ ಬ್ರಹ್ಮಣ್ಯಾತ್ಮಾನಂ ವಿಜಿತಾಕ್ಷಾನಿಲಾಶಯಃ ॥
ಅನುವಾದ
ತಪಸ್ಸು ಮತ್ತು ಉಪಾಸನೆಗಳಿಂದ ವಾಸನೆಗಳನ್ನು ನಿರ್ಮೂಲನೆಗೊಳಿಸಿ, ಯಮ-ನಿಯಮಾದಿಗಳ ಮೂಲಕ ಇಂದ್ರಿಯಗಳನ್ನು ಪ್ರಾಣಗಳನ್ನು ಮತ್ತು ಮನವನ್ನು ವಶಪಡಿಸಿಕೊಂಡು ಅವನು ಆತ್ಮವನ್ನು ಪರಬ್ರಹ್ಮನಲ್ಲಿ ಒಂದಾಗಿಸಿದನು. ॥38॥
ಮೂಲಮ್
(ಶ್ಲೋಕ - 39)
ಆಸ್ತೇ ಸ್ಥಾಣುರಿವೈಕತ್ರ ದಿವ್ಯಂ ವರ್ಷಶತಂ ಸ್ಥಿರಃ ।
ವಾಸುದೇವೇ ಭಗವತಿ ನಾನ್ಯದ್ವೇದೋದ್ವಹನ್ರತಿಮ್ ॥
ಅನುವಾದ
ಹೀಗೆ ನೂರು ದಿವ್ಯವರ್ಷಗಳವರೆಗೆ ಕಂಬದಂತೆ ನಿಶ್ಚಲಭಾವದಿಂದ ಒಂದೇ ಸ್ಥಾನದಲ್ಲಿ ಕುಳಿತಿದ್ದನು. ಭಗವಾನ್ ವಾಸುದೇವನಲ್ಲಿ ದೃಢವಾದ ಪ್ರೇಮಾಭಕ್ತಿ ಉಂಟಾದಕಾರಣ ಇಷ್ಟು ಸಮಯದವರೆಗೆ ಅವನಿಗೆ ಶರೀರಾದಿಗಳಲ್ಲಿ ಎಚ್ಚರವೇ ಇರಲಿಲ್ಲ. ॥39॥
ಮೂಲಮ್
(ಶ್ಲೋಕ - 40)
ಸ ವ್ಯಾಪಕತಯಾತ್ಮಾನಂ ವ್ಯತಿರಿಕ್ತತಯಾತ್ಮನಿ ।
ವಿದ್ವಾನ್ಸ್ವಪ್ನ ಇವಾಮರ್ಶಸಾಕ್ಷಿಣಂ ವಿರರಾಮ ಹ ॥
(ಶ್ಲೋಕ - 41)
ಸಾಕ್ಷಾದ್ಭಗವತೋಕ್ತೇನ ಗುರುಣಾ ಹರಿಣಾ ನೃಪ ।
ವಿಶುದ್ಧ ಜ್ಞಾನದೀಪೇನ ಸ್ಫುರತಾ ವಿಶ್ವತೋಮುಖಮ್ ॥
ಅನುವಾದ
ರಾಜನೇ! ಗುರುಸ್ವರೂಪಿಯಾದ ಸಾಕ್ಷಾತ್ ಶ್ರೀಹರಿಯು ಉಪದೇಶಿಸಿರುವ ಹಾಗೂ ತನ್ನ ಅಂತಃ ಕರಣದಲ್ಲಿ ಎಲ್ಲಕಡೆಗೆ ಸ್ಫುರಣೆಗೊಳ್ಳುವ ವಿಶುದ್ಧ ವಿಜ್ಞಾನ ದೀಪದಿಂದ ಅಂತಃಕರಣದ ಪ್ರವೃತ್ತಿಯ ಪ್ರಕಾಶಕನಾದ ಆತ್ಮನು ಸ್ವಪ್ನಾವಸ್ಥೆಯಂತೆ ದೇಹಾದಿ ಸಮಸ್ತ ಉಪಾಧಿಗಳಲ್ಲಿ ವ್ಯಾಪ್ತವೂ ಹಾಗೂ ಅದರಿಂದ ಬೇರೆಯೂ ಆಗಿದ್ದಾನೆ ಎಂದು ಅವನು ನೋಡಿದನು. ಹೀಗೆ ಅನುಭವ ಪಡೆದು ಎಲ್ಲರಲ್ಲಿ ಉದಾಸೀನನಾದನು. ॥40-41॥
ಮೂಲಮ್
(ಶ್ಲೋಕ - 42)
ಪರೇ ಬ್ರಹ್ಮಣಿ ಚಾತ್ಮಾನಂ ಪರಂ ಬ್ರಹ್ಮ ತಥಾತ್ಮನಿ ।
ವೀಕ್ಷಮಾಣೋ ವಿಹಾಯೇಕ್ಷಾಮಸ್ಮಾದುಪರರಾಮ ಹ ॥
ಅನುವಾದ
ಮತ್ತೆ ತನ್ನ ಆತ್ಮನನ್ನು ಪರಬ್ರಹ್ಮನಲ್ಲಿಯೂ ಮತ್ತು ಪರಬ್ರಹ್ಮನನ್ನು ತನ್ನಾತ್ಮನಲ್ಲೂ ಅಭಿನ್ನರೂಪದಿಂದ ನೋಡಿದನು ಮತ್ತು ಕೊನೆಗೆ ಈ ಅಭೇದ ಚಿಂತನೆಯನ್ನೂ ತ್ಯಜಿಸಿ ಪೂರ್ಣವಾಗಿ ಶಾಂತನಾದನು. ॥42॥
ಮೂಲಮ್
(ಶ್ಲೋಕ - 43)
ಪತಿಂ ಪರಮಧರ್ಮಜ್ಞಂ ವೈದರ್ಭೀ ಮಲಯಧ್ವಜಮ್ ।
ಪ್ರೇಮ್ಣಾ ಪರ್ಯಚರದ್ಧಿತ್ವಾ ಭೋಗಾನ್ ಸಾ ಪತಿದೇವತಾ ॥
ಅನುವಾದ
ರಾಜೇಂದ್ರನೇ! ಪತಿವ್ರತಾಶಿರೋಮಣಿಯಾದ ವಿದರ್ಭರಾಜನ ಪುತ್ರಿಯು ಅಲ್ಲಿ ಎಲ್ಲ ಭೋಗಗಳನ್ನು ತೊರೆದು ಪ್ರೇಮದಿಂದ ಪರಮಧರ್ಮಜ್ಞನಾದ ತನ್ನ ಪತಿ ಮಲಯಧ್ವಜನ ಸೇವೆಯನ್ನು ಮಾಡುತ್ತಿದ್ದಳು. ॥43॥
ಮೂಲಮ್
(ಶ್ಲೋಕ - 44)
ಚೀರವಾಸಾ ವ್ರತಕ್ಷಾಮಾ ವೇಣೀಭೂತಶಿರೋರುಹಾ ।
ಬಭಾವುಪ ಪತಿಂ ಶಾಂತಾ ಶಿಖಾ ಶಾಂತಮಿವಾನಲಮ್ ॥
ಅನುವಾದ
ಆಕೆಯು ನಾರುಮಡಿಯನ್ನುಟ್ಟು ವ್ರತ-ಉಪವಾಸಾದಿಗಳನ್ನು ಮಾಡುತ್ತಿದ್ದುದರಿಂದ ಆಕೆಯ ಶರೀರವು ತುಂಬಾ ಕೃಶವಾಗಿಬಿಟ್ಟಿತ್ತು. ತಲೆಗೂದಲು ಸಂಸ್ಕಾರವಿಲ್ಲದೆ ಜಟೆಯಾಗಿಬಿಟ್ಟಿತ್ತು. ಆಗ ಆಕೆಯು ತನ್ನ ಪತಿದೇವನ ಪಕ್ಕದಲ್ಲಿ ಶಾಂತವಾದ ಅಗ್ನಿಜ್ಞಾಲೆಯಂತೆ ಪ್ರಶಾಂತವಾದ ಮುಖಮುದ್ರೆಗಳಿಂದ ಶೋಭಿಸುತ್ತಿದ್ದಳು. ॥44॥
ಮೂಲಮ್
(ಶ್ಲೋಕ - 45)
ಅಜಾನತೀ ಪ್ರಿಯತಮಂ ಯದೋಪರತಮಂಗನಾ ।
ಸುಸ್ಥಿರಾಸನಮಾಸಾದ್ಯ ಯಥಾಪೂರ್ವಮುಪಾಚರತ್ ॥
ಅನುವಾದ
ಆ ವೇಳೆಗಾಗಲೇ ಪತಿದೇವನು ಪರಮಪದವನ್ನು ಸೇರಿಕೊಂಡು ಬಿಟ್ಟಿದ್ದನು. ಆದರೂ ಆತನ ಆಸನ ಬಂಧವು ಹಾಗೆಯೇ ಸ್ಥಿರವಾಗಿತ್ತು. ಈ ರಹಸ್ಯವನ್ನರಿಯದೆ ಆ ಮುಗ್ಧೆಯು ಆತನ ದೇಹದ ಬಳಿಗೆ ಹೋಗಿ ಹಿಂದಿನಂತೆಯೇ ಸೇವೆ ಮಾಡ ತೊಡಗಿದಳು. ॥45॥
ಮೂಲಮ್
(ಶ್ಲೋಕ - 46)
ಯದಾ ನೋಪಲಭೇತಾಂಘ್ರಾವೂಷ್ಮಾಣಂ ಪತ್ಯುರರ್ಚತೀ ।
ಆಸೀತ್ಸಂವಿಗ್ನಹೃದಯಾ ಯೂಥಭ್ರಷ್ಟಾ ಮೃಗೀ ಯಥಾ ॥
ಅನುವಾದ
ಪಾದಸೇವೆ ಮಾಡುತ್ತಿದ್ದಾಗ ಪತಿಯ ಚರಣಗಳಲ್ಲಿ ಸ್ವಲ್ಪವೂ ಶಾಖ ಕಾಣದೆ ಹೋಗಲು ಆಕೆಯು ಹಿಂಡನ್ನು ಅಗಲಿದ ಹೆಣ್ಣು ಹುಲ್ಲೆಯಂತೆ ಮನಸ್ಸಿನಲ್ಲಿ ಅತ್ಯಂತ ಕಳವಳ ಗೊಂಡಳು. ॥46॥
ಮೂಲಮ್
(ಶ್ಲೋಕ - 47)
ಆತ್ಮಾನಂ ಶೋಚತೀ ದೀನಮಬಂಧುಂ ವಿಕ್ಲವಾಶ್ರುಭಿಃ ।
ಸ್ತನಾವಾಸಿಚ್ಯ ವಿಪಿನೇ ಸುಸ್ವರಂ ಪ್ರರುರೋದ ಸಾ ॥
ಅನುವಾದ
ಆ ನಿಬಿಡವಾದ ಕಾಡಿನಲ್ಲಿ ತನ್ನನ್ನು ಒಬ್ಬಂಟಿಗಳೆಂದು ನೋಡಿ ದೀನಾವಸ್ಥೆಯನ್ನು ಹೊಂದಿ ಅವಳು ಶೋಕಿಸುತ್ತಾ ಕಣ್ಣೀರಧಾರೆಯಿಂದ ಸ್ತನಗಳು ನೆನೆದುಹೋಗಲು ಗಟ್ಟಿಯಾಗಿ ಅಳತೊಡಗಿದಳು. ॥47॥
ಮೂಲಮ್
(ಶ್ಲೋಕ - 48)
ಉತ್ತಿಷ್ಠೋತ್ತಿಷ್ಠ ರಾಜರ್ಷೇ ಇಮಾಮುದಧಿಮೇಖಲಾಮ್ ।
ದಸ್ಯುಭ್ಯಃ ಕ್ಷತ್ರಬಂಧುಭ್ಯೋ ಬಿಭ್ಯತೀಂ ಪಾತುಮರ್ಹಸಿ ॥
ಅನುವಾದ
ಓ ರಾಜರ್ಷಿಯೇ ಏಳು! ಏಳು! ಸಮುದ್ರದಿಂದ ಸುತ್ತು ವರಿಯಲ್ಪಟ್ಟಿರುವ ಈ ಭೂದೇವಿಯು ದರೋಡೆಗಾರ ರಿಂದಲೂ, ಅಧಾರ್ಮಿಕರಾದ ರಾಜರಿಂದಲೂ ಭಯ ಪಡುತ್ತಿರುವಳು. ನೀನು ಈಕೆಯನ್ನು ರಕ್ಷಿಸು ಎಂದು ವಿಲಪಿಸಿದಳು. ॥48॥
ಮೂಲಮ್
(ಶ್ಲೋಕ - 49)
ಏವಂ ವಿಲಪತೀ ಬಾಲಾ ವಿಪಿನೇನುಗತಾ ಪತಿಮ್ ।
ಪತಿತಾ ಪಾದಯೋರ್ಭರ್ತೂ ರುದತ್ಯಶ್ರೂಣ್ಯವರ್ತಯತ್ ॥
ಅನುವಾದ
ಪತಿಯೊಡನೆ ಅರಣ್ಯಕ್ಕೆ ತೆರಳಿದ್ದ ಆ ಅಬಲೆಯು ಹೀಗೆ ಗೋಳಿಡುತ್ತಾ ಪತಿಯ ಪಾದಗಳ ಮೇಲೆ ಬಿದ್ದು ಅಳುತ್ತಾ ಕಣ್ಣೀರು ಸುರಿಸುತ್ತಿದ್ದಳು. ॥49॥
ಮೂಲಮ್
(ಶ್ಲೋಕ - 50)
ಚಿತಿಂ ದಾರುಮಯೀಂ ಚಿತ್ವಾ ತಸ್ಯಾಂ ಪತ್ಯುಃ ಕಲೇವರಮ್ ।
ಆದೀಪ್ಯ ಚಾನುಮರಣೇ ವಿಲಪಂತೀ ಮನೋ ದಧೇ ॥
ಅನುವಾದ
ಆಕೆಯು ಕಟ್ಟಿಗೆಗಳಿಂದ ಚಿತೆಯನ್ನು ರಚಿಸಿ ಅದರ ಮೇಲೆ ಪತಿಯ ಶವವನ್ನಿರಿಸಿ, ಬೆಂಕಿಯನ್ನಿಟ್ಟು ರೋದಿಸುತ್ತಾ ತಾನೂ ಸಹಗಮನ ಮಾಡಲು ನಿಶ್ಚಯಿಸಿದಳು. ॥50॥
ಮೂಲಮ್
(ಶ್ಲೋಕ - 51)
ತತ್ರ ಪೂರ್ವತರಃ ಕಶ್ಚಿತ್ಸಖಾ ಬ್ರಾಹ್ಮಣ ಆತ್ಮವಾನ್ ।
ಸಾಂತ್ವಯನ್ವಲ್ಗುನಾ ಸಾಮ್ನಾ ತಾಮಾಹ ರುದತೀಂ ಪ್ರಭೋ ॥
ಅನುವಾದ
ರಾಜೇಂದ್ರನೇ! ಆಗಲೇ ಆಕೆಯ ಯಾರೋ ಹಳೆಯ ಗೆಳೆಯನಾದ ಓರ್ವ ಆತ್ಮಜ್ಞಾನಿ ಬ್ರಾಹ್ಮಣನು ಅಲ್ಲಿಗೆ ಬಂದನು. ಅವನು ಅಳುತ್ತಿದ್ದ ಆ ಅಬಲೆಯನ್ನು ಸವಿಮಾತು ಗಳಿಂದ ಸಂತೈಸುತ್ತಾ ಹೀಗೆಂದನು. ॥51॥
ಮೂಲಮ್
(ಶ್ಲೋಕ - 52)
ಮೂಲಮ್ (ವಾಚನಮ್)
ಬ್ರಾಹ್ಮಣ ಉವಾಚ
ಮೂಲಮ್
ಕಾ ತ್ವಂ ಕಸ್ಯಾಸಿ ಕೋ ವಾಯಂ ಶಯಾನೋ ಯಸ್ಯ ಶೋಚಸಿ ।
ಜಾನಾಸಿ ಕಿಂ ಸಖಾಯಂ ಮಾಂ ಯೇನಾಗ್ರೇ ವಿಚಚರ್ಥ ಹ ॥
ಅನುವಾದ
ಬ್ರಾಹ್ಮಣನು ಹೇಳಿದನು — ‘‘ಯಾರಮ್ಮ ನೀನು? ಯಾರ ಮಗಳು? ಮಲಗಿಕೊಂಡಿರುವ ಯಾವನೋ ಪುರುಷನನ್ನು ಕುರಿತು ಅಳುತ್ತಿರುವೆಯಲ್ಲ! ಈತನು ಯಾರು? ನಾನು ಯಾರೆಂಬುದು ನಿನಗೆ ಗೊತ್ತಿಲ್ಲವೇ? ನೀನು ಹಿಂದೆ ನನ್ನೊಡನೆ ಓಡಾಡುತ್ತಿದ್ದೆಯಲ್ಲ ಆ ಮಿತ್ರನೇ ನಾನಮ್ಮ.’’ ॥52॥
ಮೂಲಮ್
(ಶ್ಲೋಕ - 53)
ಅಪಿ ಸ್ಮರಸಿ ಚಾತ್ಮಾನಮವಿಜ್ಞಾತಸಖಂ ಸಖೇ ।
ಹಿತ್ವಾ ಮಾಂ ಪದಮನ್ವಿಚ್ಛನ್ಭೌಮ ಭೋಗರತೋ ಗತಃ ॥
ಅನುವಾದ
ಸ್ನೇಹಿತನೇ! ನಿನಗೆ ಅವಿಜ್ಞಾತವನೆಂಬ ಒಬ್ಬ ಗೆಳೆಯನಿದ್ದನೆಂಬುದು ನೆನಪಿದೆಯೇ? ಆ ಅವಿಜ್ಞಾತನೇ ನಾನು. ನೀನು ಭೂಮಿಯ ಭೋಗಗಳನ್ನು ಅನುಭವಿಸುವುದಕ್ಕಾಗಿ ವಾಸಸ್ಥಾನವನ್ನು ಹುಡುಕುತ್ತಾ ನನ್ನನ್ನು ಬಿಟ್ಟು ಹೊರಟುಬಿಟ್ಟೆ. ॥53॥
ಮೂಲಮ್
(ಶ್ಲೋಕ - 54)
ಹಂಸಾವಹಂ ಚ ತ್ವಂ ಚಾರ್ಯ ಸಖಾಯೌ ಮಾನಸಾಯನೌ ।
ಅಭೂತಾಮಂತರಾ ವೌಕಃ ಸಹಸ್ರಪರಿವತ್ಸರಾನ್ ॥
ಅನುವಾದ
ಆರ್ಯನೇ! ನೀನು ಮತ್ತು ನಾನು ಇಬ್ಬರೂ ಹಿಂದೆ ಪರಸ್ಪರ ಮಿತ್ರರಾಗಿದ್ದು ಮಾನಸ ಸರೋವರ ನಿವಾಸಿ ಹಂಸಗಳಾಗಿದ್ದೆವು. ನಾವಿಬ್ಬರೂ ಸಾವಿರಾರು ವರ್ಷಗಳವರೆಗೆ ಯಾವುದೇ ವಾಸಸ್ಥಾನವಿಲ್ಲದೆ ಇರುತ್ತಿದ್ದೆವು. ॥54॥
ಮೂಲಮ್
(ಶ್ಲೋಕ - 55)
ಸ ತ್ವಂ ವಿಹಾಯ ಮಾಂ ಬಂಧೋ ಗತೋ ಗ್ರಾಮ್ಯಮತಿರ್ಮಹೀಮ್ ।
ವಿಚರನ್ಪದಮದ್ರಾಕ್ಷೀಃ ಕಯಾಚಿನ್ನಿರ್ಮಿತಂ ಸಿಯಾ ॥
ಅನುವಾದ
ಆದರೆ ಗೆಳೆಯನೇ! ನೀನು ವಿಷಯಗಳನ್ನು ಭೋಗಿಸುವ ಇಚ್ಛೆಯಿಂದ ನನ್ನನ್ನು ಬಿಟ್ಟು ಈ ಭೂಮಿಗೆ ಬಂದೆ. ಇಲ್ಲಿ ಅಲೆದಾಡುತ್ತಾ ಇರುವಾಗ ಓರ್ವ ಹೆಂಗಸು ನಿರ್ಮಿಸಿದ್ದ ಜಾಗವನ್ನು ನೋಡಿದೆ.॥55॥
ಮೂಲಮ್
(ಶ್ಲೋಕ - 56)
ಪಂಚಾರಾಮಂ ನವದ್ವಾರಮೇಕಪಾಲಂ ತ್ರಿಕೋಷ್ಠಕಮ್ ।
ಷಟ್ಕುಲಂ ಪಂಚವಿಪಣಂ ಪಂಚಪ್ರಕೃತಿ ಸೀಧವಮ್ ॥
ಅನುವಾದ
ಅದರಲ್ಲಿ ಐದು ಉದ್ಯಾನಗಳೂ, ಒಂಭತ್ತು ಬಾಗಿಲುಗಳೂ, ಒಬ್ಬ ದ್ವಾರಪಾಲನೂ, ಮೂರು ಕೋಟೆಗಳೂ, ಆರುಮಂದಿ ವರ್ತಕರು, ಐದು ಅಂಗಡಿಗಳೂ ಇದ್ದುವು. ಅದು ಐದು ಉಪಾದಾನ ಕಾರಣಗಳಿಂದ ರಚಿತವಾಗಿದ್ದು, ಅದರ ಒಡತಿ ಒಬ್ಬಳು ಸ್ತ್ರೀಯಾಗಿದ್ದಳು. ॥56॥
ಮೂಲಮ್
(ಶ್ಲೋಕ - 57)
ಪಂಚೇಂದ್ರಿಯಾರ್ಥಾ ಆರಾಮಾ ದ್ವಾರಃ ಪ್ರಾಣಾ ನವಪ್ರಭೋ ।
ತೇಜೋಬನ್ನಾನಿ ಕೋಷ್ಠಾನಿ ಕುಲಮಿಂದ್ರಿಯಸಂಗ್ರಹಃ ॥
(ಶ್ಲೋಕ - 58)
ವಿಪಣಸ್ತು ಕ್ರಿಯಾಶಕ್ತಿರ್ಭೂತಪ್ರಕೃತಿರವ್ಯಯಾ ।
ಶಕ್ತ್ಯಧೀಶಃ ಪುಮಾಂಸ್ತ್ವತ್ರ ಪ್ರವಿಷ್ಟೋ ನಾವಬುಧ್ಯತೇ ॥
ಅನುವಾದ
ಮಹಾರಾಜನೇ! ಇಂದ್ರಿಯಗಳ ಐದು ವಿಷಯಗಳು ಅದರ ಉದ್ಯಾನಗಳು. ಒಂಭತ್ತು ಇಂದ್ರಿಯಗಳು ಅದರ ಬಾಗಿಲುಗಳಿದ್ದವು. ತೇಜಸ್ಸು, ಜಲ ಮತ್ತು ಅನ್ನ ಇವು ಮೂರು ಕೋಟೆಗಳು. ಮನಸ್ಸು ಮತ್ತು ಐದು ಜ್ಞಾನೇಂದ್ರಿಯಗಳು ಸೇರಿ ಒಟ್ಟಿಗೆ ಆರು ಮಂದಿ ಅಲ್ಲಿಯ ವರ್ತಕರಾಗಿದ್ದರು. ಕ್ರಿಯಾಶಕ್ತಿರೂಪವಾದ ಕರ್ಮೇಂದ್ರಿಯಗಳೇ ಅಲ್ಲಿಯ ಅಂಗಡಿಗಳು. ಪಂಚಮಹಾ ಭೂತಗಳೇ ಎಂದಿಗೂ ಕ್ಷಿಣಿಸದೇ ಇರುವ ಅದರ ಉಪಾದಾನ ಕಾರಣಗಳಾಗಿದ್ದವು ಮತ್ತು ಬುದ್ಧಿಶಕ್ತಿಯೇ ಅದರ ಒಡತಿಯು. ಅದರಲ್ಲಿ ಪ್ರವೇಶಿಸಿದಾಗ ಪುರುಷನು ಜ್ಞಾನಶೂನ್ಯನಾಗಿ, ತನ್ನ ಸ್ವರೂಪವನ್ನು ಮರೆತು ಹೋಗುವಂತಹ ವಿಚಿತ್ರವಾದ ಆ ನಗರಿಯು. ॥57-58॥
ಮೂಲಮ್
(ಶ್ಲೋಕ - 59)
ತಸ್ಮಿಂಸ್ತ್ವಂ ರಾಮಯಾ ಸ್ಪೃಷ್ಟೋ ರಮಮಾಣೋಶ್ರುತಸ್ಮೃತಿಃ ।
ತತ್ಸಂಗಾದೀದೃಶೀಂ ಪ್ರಾಪ್ತೋ ದಶಾಂ ಪಾಪೀಯಸೀಂ ಪ್ರಭೋ ॥
ಅನುವಾದ
ಅಯ್ಯಾ! ಆ ನಗರದಲ್ಲಿ ಅದರ ಒಡತಿಯ ಹಿಡಿತದಲ್ಲಿ ಸಿಕ್ಕಿಕೊಂಡು, ಅವಳೊಂದಿಗೆ ವಿಹಾರಮಾಡುತ್ತಾ ನೀನೂ ನಿನ್ನ ಸ್ವರೂಪವನ್ನು ಮರೆತುಬಿಟ್ಟೆ. ಅವಳ ಸಹವಾಸದಿಂದಲೇ ನಿನಗೆ ಇಂತಹ ದುರ್ದಶೆ ಉಂಟಾಯಿತು. ॥59॥
ಮೂಲಮ್
(ಶ್ಲೋಕ - 60)
ನ ತ್ವಂ ವಿದರ್ಭದುಹಿತಾ ನಾಯಂ ವೀರಃ ಸುಹೃತ್ತವ ।
ನ ಪತಿಸ್ತ್ವಂ ಪುರಂಜನ್ಯಾ ರುದ್ಧೋ ನವಮುಖೇ ಯಯಾ ॥
ಅನುವಾದ
ನೋಡು, ನೀನಾದರೋ ವಿದರ್ಭರಾಜನ ಪುತ್ರಿಯೂ ಅಲ್ಲ. ಈ ವೀರ ಮಲಯಧ್ವಜನು ನಿನ್ನ ಪತಿಯೂ ಅಲ್ಲ. ಒಂಭತ್ತು ದ್ವಾರಗಳ ನಗರದಲ್ಲಿ ನಿನ್ನನ್ನು ಸೆರೆಹಿಡಿದಿಟ್ಟಿದ್ದ ಆ ಪುರಂಜನಿಯ ಪತಿಯೂ ನೀನಲ್ಲ. ॥60॥
ಮೂಲಮ್
(ಶ್ಲೋಕ - 61)
ಮಾಯಾ ಹ್ಯೇಷಾ ಮಯಾ ಸೃಷ್ಟಾ ಯತ್ಪುಮಾಂಸಂ ಸಿಯಂ ಸತೀಮ್ ।
ಮನ್ಯಸೇ ನೋಭಯಂ ಯದ್ವೈ ಹಂಸೌ ಪಶ್ಯಾವಯೋರ್ಗತಿಮ್ ॥
ಅನುವಾದ
ನೀನು ಕಳೆದ ಜನ್ಮದಲ್ಲಿ ತನ್ನನ್ನು ಪುರುಷನೆಂದು ತಿಳಿದುಕೊಂಡಿದ್ದೆ. ಈಗ ಸಾಧ್ವಿಯಾದ ಸ್ತ್ರೀಯೆಂದು ಭಾವಿಸಿಕೊಂಡಿರುವೆ. ಇವೆಲ್ಲವೂ ನಾನೇ ಹರಡಿದ ಮಾಯೆಯಾಗಿದೆ. ವಾಸ್ತವವಾಗಿ ನೀನು ಪುರುಷನಲ್ಲ, ಸ್ತ್ರೀಯಲ್ಲ. ನಾವಿಬ್ಬರೂ ಹಂಸಗಳು. ನಮ್ಮ ವಾಸ್ತವಿಕವಾಗಿರುವ ಸ್ವರೂಪ ವನ್ನು ಅನುಭವಕ್ಕೆ ತಂದುಕೋ. ॥61॥
ಮೂಲಮ್
(ಶ್ಲೋಕ - 62)
ಅಹಂ ಭವಾನ್ನ ಚಾನ್ಯಸ್ತ್ವಂ ತ್ವಮೇವಾಹಂ ವಿಚಕ್ಷ್ವ ಭೋಃ ।
ನ ನೌ ಪಶ್ಯಂತಿ ಕವಯಶ್ಛಿದ್ರಂ ಜಾತು ಮನಾಗಪಿ ॥
ಅನುವಾದ
ಮಿತ್ರನೇ! ನಾನು ಈಶ್ವರನಾಗಿದ್ದೇನೆ, ನೀನು ಜೀವನಾಗಿರುವೆ. ನೀನು ನನ್ನಿಂದ ಬೇರೆಯಲ್ಲ. ವಿಚಾರಪೂರ್ವಕವಾಗಿ ನೋಡು. ನಾನು ಏನಾಗಿರುವೆನೋ ನೀನೂ ಅವನೇ ಆಗಿರುವೆ. ಜ್ಞಾನಿಗಳು ನಮ್ಮಿಬ್ಬರಲ್ಲಿ ಎಂದೂ ಸ್ವಲ್ಪವೂ ಭೇದವನ್ನು ನೋಡುವುದಿಲ್ಲ. ॥62॥
ಮೂಲಮ್
(ಶ್ಲೋಕ - 63)
ಯಥಾ ಪುರುಷ ಆತ್ಮಾನಮೇಕಮಾದರ್ಶಚಕ್ಷುಷೋಃ ।
ದ್ವಿಧಾಭೂತಮವೇಕ್ಷೇತ ತಥೈವಾಂತರಮಾವಯೋಃ ॥
ಅನುವಾದ
ಮನುಷ್ಯನು ತನ್ನ ಶರೀರದ ಪ್ರತಿಬಿಂಬವನ್ನು ಕನ್ನಡಿಯಲ್ಲಿ ನೋಡಬಹುದು. ಅದನ್ನೇ ಯಾರೋ ಮನುಷ್ಯನ ಕಣ್ಣಿನಲ್ಲೂ ಕಾಣಬಹುದು. ಹಾಗೆಯೇ ಒಂದೇ ಆತ್ಮನು ವಿದ್ಯೆ ಮತ್ತು ಅವಿದ್ಯೆ ಎಂಬ ಉಪಾಧಿಯ ಭೇದದಿಂದ ತನ್ನನ್ನು ಈಶ್ವರ ಮತ್ತು ಜೀವನಾಗಿ ಎರಡು ರೀತಿಯಿಂದ ನೋಡುತ್ತಿದ್ದಾನೆ. ॥63॥
ಮೂಲಮ್
(ಶ್ಲೋಕ - 64)
ಏವಂ ಸ ಮಾನಸೋ ಹಂಸೋ ಹಂಸೇನ ಪ್ರತಿಬೋಧಿತಃ ।
ಸ್ವಸ್ಥಸ್ತದ್ವ್ಯಭಿಚಾರೇಣ ನಷ್ಟಾಮಾಪ ಪುನಃ ಸ್ಮೃತಿಮ್ ॥
ಅನುವಾದ
ಹೀಗೆ ಹಂಸ (ಈಶ್ವರ)ನು ಅದನ್ನು ಎಚ್ಚರಿಸಿದಾಗ ಆ ಮಾನಸ ಸರೋವರದ ಹಂಸವು (ಜೀವ) ತನ್ನ ಸ್ವರೂಪದಲ್ಲಿ ಸ್ಥಿತನಾಗಿ, ತನ್ನ ಮಿತ್ರನಿಂದ ಉಂಟಾದ ಅಗಲಿಕೆಯಿಂದ ಮರೆತಿರುವ ಆತ್ಮಜ್ಞಾನವನ್ನು ಪುನಃ ಪಡೆದುಕೊಂಡಿತು. ॥64॥
ಮೂಲಮ್
(ಶ್ಲೋಕ - 65)
ಬರ್ಹಿಷ್ಮನ್ನೇತದಧ್ಯಾತ್ಮಂ ಪಾರೋಕ್ಷ್ಯೇಣ ಪ್ರದರ್ಶಿತಮ್ ।
ಯತ್ಪರೋಕ್ಷಪ್ರಿಯೋ ದೇವೋಭಗವಾನ್ವಿಶ್ವಭಾವನಃ ॥
ಅನುವಾದ
ಪ್ರಾಚೀನಬರ್ಹಿಯೇ! ನಾನು ನಿನಗೆ ಪರೋಕ್ಷ ರೂಪದಿಂದ ಈ ಆತ್ಮಜ್ಞಾನದ ದಿಗ್ದರ್ಶನ ಮಾಡಿರುವೆನು. ಏಕೆಂದರೆ ಜಗತ್ಕರ್ತೃವಾದ ಜಗದೀಶ್ವರನಿಗೆ ಪರೋಕ್ಷ ವರ್ಣನೆಯೇ ಹೆಚ್ಟು ಪ್ರಿಯವಾದುದು. ॥65॥
ಅನುವಾದ (ಸಮಾಪ್ತಿಃ)
ಇಪ್ಪತ್ತೆಂಟನೆಯ ಅಧ್ಯಾಯವು ಮುಗಿಯಿತು. ॥28॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಚತುರ್ಥಸ್ಕಂಧೇ ಪುರಂಜನೋಪಾಖ್ಯಾನೇಷ್ಟಾವಿಂಶೋಽಧ್ಯಾಯಃ ॥28॥