[ಇಪ್ಪತ್ತೇಳನೆಯ ಅಧ್ಯಾಯ]
ಭಾಗಸೂಚನಾ
ಪುರಂಜನನ ಪುರಿಯಮೇಲೆ ಚಂಡವೇಗನ ಧಾಳಿ, ಕಾಲಕನ್ಯೆಯ ಚರಿತ್ರೆ
ಮೂಲಮ್
(ಶ್ಲೋಕ - 1)
ಮೂಲಮ್ (ವಾಚನಮ್)
ನಾರದ ಉವಾಚ
ಮೂಲಮ್
ಇತ್ಥಂ ಪುರಂಜನಂ ಸಮ್ಯಗ್ವಶಮಾನೀಯ ವಿಭ್ರಮೈಃ ।
ಪುರಂಜನೀ ಮಹಾರಾಜ ರೇಮೇ ರಮಯತೀ ಪತಿಮ್ ॥
ಅನುವಾದ
ಶ್ರೀನಾರದರು ಹೇಳುತ್ತಾರೆ — ಎಲೈ ರಾಜೇಂದ್ರನೇ! ಹೀಗೆ ಪುರಂಜನನ ಮಡದಿಯು ತನ್ನ ಪತಿಯನ್ನು ಬಗೆ-ಬಗೆಯ ವಿಲಾಸಗಳಿಂದ ಸಂಪೂರ್ಣವಾಗಿ ವಶಪಡಿಸಿಕೊಂಡು ಆತನನ್ನು ಆನಂದಗೊಳಿಸುತ್ತಾ ವಿಹರಿಸ ತೊಡಗಿದಳು. ॥1॥
ಮೂಲಮ್
(ಶ್ಲೋಕ - 2)
ಸ ರಾಜಾ ಮಹಿಷೀಂ ರಾಜನ್ಸುಸ್ನಾತಾಂ ರುಚಿರಾನನಾಮ್ ।
ಕೃತಸ್ವಸ್ತ್ಯಯನಾಂ ತೃಪ್ತಾಮಭ್ಯನಂದದುಪಾಗತಾಮ್ ॥
ಅನುವಾದ
ಅವಳು ಸ್ನಾನ ಮಾಡಿ ಚೆನ್ನಾಗಿ ಸಿಂಗರಿಸಿಕೊಂಡು, ಭೋಜನಾದಿಗಳಿಂದ ತೃಪ್ತಳಾಗಿ ರಾಜನ ಬಳಿಗೆ ಬಂದಳು. ರಾಜನು ಆ ಮನೋಹರ ಮುಖವುಳ್ಳ ರಾಣಿಯನ್ನು ಆದರದಿಂದ ಅಭಿನಂದಿಸಿದನು. ॥2॥
ಮೂಲಮ್
(ಶ್ಲೋಕ - 3)
ತಯೋಪಗೂಢಃ ಪರಿರಬ್ಧಕಂಧರೋ
ರಹೋನುಮಂತ್ರೈರಪಕೃಷ್ಟಚೇತನಃ ।
ನ ಕಾಲರಂಹೋ ಬುಬುಧೇ ದುರತ್ಯಯಂ
ದಿವಾ ನಿಶೇತಿ ಪ್ರಮದಾಪರಿಗ್ರಹಃ ॥
ಅನುವಾದ
ಪುರಂಜನಿಯು ರಾಜನನ್ನು ಆಲಿಂಗಿಸಿಕೊಳ್ಳಲು ಆವನೂ ಆಕೆಯನ್ನು ಅಪ್ಪಿಕೊಂಡನು. ಮತ್ತೆ ಏಕಾಂತದಲ್ಲಿ ಮನಸ್ಸಿಗೆ ಅಕೂಲವಾದ ರಹಸ್ಯವಾದ ಮಾತುಗಳನ್ನಾಡುತ್ತಾ ಆಕೆಯಲ್ಲಿ ಮಿತಿಮೀರಿ ಮೋಹಗೊಂಡನು. ಆ ಕಾಮಿನಿಯಲ್ಲಿ ಚಿತ್ತವು ನೆಟ್ಟುಹೋಗಿ ಹಗಲು-ರಾತ್ರಿ ಎಂಬ ವ್ಯತ್ಯಾಸದಿಂದ ನಿರಂತರ ಕಳೆದುಹೋಗುತ್ತಿರುವ ದುಸ್ತರವಾದ ಕಾಲಗತಿಯು ಅವನ ಗಮನಕ್ಕೆ ಬಾರದಷ್ಟು ಮೋಹ ವುಂಟಾಯಿತು. ॥3॥
ಮೂಲಮ್
(ಶ್ಲೋಕ - 4)
ಶಯಾನ ಉನ್ನದ್ಧಮದೋ ಮಹಾಮನಾ
ಮಹಾರ್ಹತಲ್ಪೇ ಮಹಿಷೀಭುಜೋಪಧಿಃ ।
ತಾಮೇವ ವೀರೋ ಮನುತೇ ಪರಂ ಯತ-
ಸ್ತಮೋಭಿಭೂತೋ ನ ನಿಜಂ ಪರಂ ಚ ಯತ್ ॥
ಅನುವಾದ
ಮತ್ತೇರಿದ ಮನಸ್ವಿಯಾದ ಪುರಂಜನನು ತನ್ನ ಪ್ರಿಯೆಯ ಭುಜದ ಮೇಲೆ ತಲೆಯನ್ನಿಟ್ಟುಕೊಂಡು ಅಮೂಲ್ಯವಾದ ಹಂಸತೂಲಿಕಾತಲ್ಪದಲ್ಲಿ ಬಿದ್ದಿರುತ್ತಿದ್ದನು. ಅವನಿಗಾದರೋ ಆ ರಮಣಿಯೇ ಜೀವನದ ಪರಮಫಲವೆಂದು ತೋರುತ್ತಿತ್ತು. ಅಜ್ಞಾನದಿಂದ ಆವೃತನಾಗಿದ್ದ ಕಾರಣ ಅವನಿಗೆ ಆತ್ಮಾ ಅಥವಾ ಪರಮಾತ್ಮನ ಯಾವ ಜ್ಞಾನವೂ ಉಳಿಯಲಿಲ್ಲ. ॥4॥
ಮೂಲಮ್
(ಶ್ಲೋಕ - 5)
ತಯೈವಂ ರಮಮಾಣಸ್ಯ ಕಾಮಕಶ್ಮಲಚೇತಸಃ ।
ಕ್ಷಣಾರ್ಧಮಿವ ರಾಜೇಂದ್ರ ವ್ಯತಿಕ್ರಾಂತಂ ನವಂ ವಯಃ ॥
ಅನುವಾದ
ಎಲೈ ರಾಜನೇ! ಹೀಗೆ ಕಾಮಾತುರವಾದ ಚಿತ್ತದಿಂದ ಆಕೆಯೊಡನೆ ವಿಹರಿಸುತ್ತಾ ಇದ್ದ ಪುರಂಜನನ ಯೌವನವು ಅರ್ಧ ಕ್ಷಣದಂತೆ ಕಳೆದುಹೋಯಿತು. ॥5॥
ಮೂಲಮ್
(ಶ್ಲೋಕ - 6)
ತಸ್ಯಾಮಜನಯತ್ಪುತ್ರಾನ್ಪುರಂಜನ್ಯಾಂ ಪುರಂಜನಃ ।
ಶತಾನ್ಯೇಕಾದಶ ವಿರಾಡಾಯುಷೋರ್ಧಮಥಾತ್ಯಗಾತ್ ॥
(ಶ್ಲೋಕ - 7)
ದುಹಿತೃರ್ದಶೋತ್ತರಶತಂ ಪಿತೃಮಾತೃಯಶಸ್ಕರೀಃ ।
ಶೀಲೌದಾರ್ಯಗುಣೋಪೇತಾಃ ಪೌರಂಜನ್ಯಃ ಪ್ರಜಾಪತೇ ॥
ಅನುವಾದ
ಪ್ರಜಾಪತಿಯೇ! ಆ ಪುರಂಜನಿಯಲ್ಲಿ ರಾಜನಿಗೆ ಸಾವಿರದ ನೂರು ಮಂದಿ ಪುತ್ರರೂ, ಒಂದುನೂರಹತ್ತು ಪುತ್ರಿಯರೂ ಜನಿಸಿದರು. ಅವರೆಲ್ಲರೂ ತಂದೆ-ತಾಯಿಗಳ ಕೀರ್ತಿಯನ್ನು ವೃದ್ಧಿಪಡಿಸುವ ಹಾಗೂ ಸೌಶೀಲ್ಯ-ಔದಾರ್ಯಗಳೇ ಮುಂತಾದ ಉತ್ತಮಗುಣಗಳಿಂದ ಸಂಪನ್ನರಾಗಿದ್ದರು. ಅವರು ಪೌರಂಜನಿಯರೆಂದೇ ವಿಖ್ಯಾತರಾದರು. ಇಷ್ಟರಲ್ಲಿ ಆ ಸಾಮ್ರಾಟನ ದೀರ್ಘವಾದ ಆಯುಸ್ಸಿನ ಅರ್ಧಭಾಗ ಕಳೆದುಹೋಗಿತ್ತು. ॥6-7॥
ಮೂಲಮ್
(ಶ್ಲೋಕ - 8)
ಸ ಪಂಚಾಲಪತಿಃ ಪುತ್ರಾನ್ಪಿತೃವಂಶವಿವರ್ಧನಾನ್ ।
ದಾರೈಃ ಸಂಯೋಜಯಾಮಾಸ ದುಹಿತೃಃ ಸದೃಶೈರ್ವರೈಃ ॥
ಅನುವಾದ
ಮತ್ತೆ ಪಾಂಚಾಲನರೇಶ ಪುರಂಜನನು ಪಿತೃವಂಶವನ್ನು ವೃದ್ಧಿಪಡಿಸುವ ಪುತ್ರರ ಯೋಗ್ಯವಧುಗಳೊಂದಿಗೂ ಮತ್ತು ಕನ್ಯೆಯರನ್ನು ಅವರಿಗೆ ತಕ್ಕವರಾದವರೊಂದಿಗೂ ವಿವಾಹ ಮಾಡಿದನು. ॥8॥
ಮೂಲಮ್
(ಶ್ಲೋಕ - 9)
ಪುತ್ರಾಣಾಂ ಚಾಭವನ್ ಪುತ್ರಾ ಏಕೈಕಸ್ಯ ಶತಂ ಶತಮ್ ।
ಯೈರ್ವೈ ಪೌರಂಜನೋ ವಂಶಃ ಪಂಚಾಲೇಷು ಸಮೇಧಿತಃ ॥
ಅನುವಾದ
ಅವನ ಪುತ್ರರಲ್ಲಿ ಒಬ್ಬೊಬ್ಬರಿಗೆ ನೂರು-ನೂರು ಪುತ್ರರು ಹುಟ್ಟಿದರು. ಅವರಿಂದ ವಂಶವು ವೃದ್ಧಿಯನ್ನು ಹೊಂದಿ ಇಡೀ ಪಾಂಚಾಲದೇಶದಲ್ಲಿ ಪುರಂಜನನವಂಶ ಹರಡಿ ಹೋಯಿತು. ॥9॥
ಮೂಲಮ್
(ಶ್ಲೋಕ - 10)
ತೇಷು ತದ್ರಿಕ್ಥಹಾರೇಷು ಗೃಹಕೋಶಾನುಜೀವಿಷು ।
ನಿರೂಢೇನ ಮಮತ್ವೇನ ವಿಷಯೇಷ್ವನ್ವಬಧ್ಯತ ॥
ಅನುವಾದ
ಈ ಮಕ್ಕಳು, ಮೊಮ್ಮಕ್ಕಳು, ಮನೆ, ಕೋಶ, ಸೇವಕರು, ಮಂತ್ರಿಗಳು ಮುಂತಾದವುಗಳಲ್ಲಿ ದೃಢವಾದ ಮಮತೆ ಉಂಟಾದ್ದರಿಂದ ಅವನು ಈ ವಿಷಯಗಳಲ್ಲೇ ಬಂಧಿತನಾದನು. ॥10॥
ಮೂಲಮ್
(ಶ್ಲೋಕ - 11)
ಈಜೇ ಚ ಕ್ರತುಭಿರ್ಘೋರೈರ್ದೀಕ್ಷಿತಃ ಪಶುಮಾರಕೈಃ ।
ದೇವಾನ್ಪಿತೃನ್ಭೂತಪತೀನ್ನಾನಾಕಾಮೋ ಯಥಾ ಭವಾನ್ ॥
ಅನುವಾದ
ಮತ್ತೆ ನಿನ್ನಂತೆಯೇ ಅವನೂ ಕೂಡ ಅನೇಕ ಪ್ರಕಾರದ ಭೋಗಗಳ ಕಾಮನೆಯಿಂದ ಯಜ್ಞದೀಕ್ಷೆಯನ್ನು ಕೈಗೊಂಡು ಹಲವಾರು ಬಗೆಯ ಪಶುಹಿಂಸಾ ಮಯವಾದ ಘೋರ ಯಜ್ಞಗಳಿಂದ ದೇವತೆಗಳನ್ನು, ಪಿತೃಗಳನ್ನು, ಭೂತಪತಿಗಳನ್ನು ಆರಾಧಿಸಿದನು. ॥11॥
ಮೂಲಮ್
(ಶ್ಲೋಕ - 12)
ಯುಕ್ತೇಷ್ವೇವಂ ಪ್ರಮತ್ತಸ್ಯ ಕುಟುಂಬಾಸಕ್ತಚೇತಸಃ ।
ಆಸಸಾದ ಸ ವೈ ಕಾಲೋ ಯೋಪ್ರಿಯಃ ಪ್ರಿಯಯೋಷಿತಾಮ್ ॥
ಅನುವಾದ
ಹೀಗೆ ಅವನು ತನ್ನ ಆಯುಷ್ಯವಿಡೀ ಆತ್ಮಕಲ್ಯಾಣವನ್ನುಂಟುಮಾಡುವ ಕರ್ಮಗಳ ಕಡೆಗೆ ಗಮನಕೊಡದೆ ಕುಟುಂಬಪಾಲನೆಯಲ್ಲೇ ಆಸಕ್ತನಾದನು. ಕೊನೆಗೆ ಸ್ತ್ರೀಲಂಪಟರಿಗೆ ಅತ್ಯಂತ ಅಪ್ರಿಯವಾದ ವೃದ್ಧಾಪ್ಯವು ಬಂದೊದಗಿತು. ॥12॥
ಮೂಲಮ್
(ಶ್ಲೋಕ - 13)
ಚಂಡವೇಗ ಇತಿ ಖ್ಯಾತೋ ಗಂಧರ್ವಾಧಿಪತಿರ್ನೃಪ ।
ಗಂಧರ್ವಾಸ್ತಸ್ಯ ಬಲಿನಃ ಷಷ್ಟ್ಯುತ್ತರಶತತ್ರಯಮ್ ॥
ಅನುವಾದ
ರಾಜನೇ! ಚಂಡವೇಗನೆಂಬ ಒಬ್ಬ ಗಂಧರ್ವ ರಾಜನಿದ್ದನು. ಮುನ್ನೂರ ಅರವತ್ತು ಮಂದಿ ಮಹಾಶೂರರಾದ ಗಂಧರ್ವರು ಅವನ ಅಧೀನದಲ್ಲಿದ್ದರು. ॥13॥
ಮೂಲಮ್
(ಶ್ಲೋಕ - 14)
ಗಂಧರ್ವ್ಯಸ್ತಾದೃಶೀರಸ್ಯ ಮೈಥುನ್ಯಶ್ಚ ಸಿತಾಸಿತಾಃ ।
ಪರಿವೃತ್ತ್ಯಾ ವಿಲುಂಪಂತಿ ಸರ್ವಕಾಮವಿನಿರ್ಮಿತಾಮ್ ॥
ಅನುವಾದ
ಕಪ್ಪು ಮತ್ತು ಬಿಳುಪು ಬಣ್ಣಗಳಿಂದ ಕೂಡಿದ ಅಷ್ಟೆ ಸಂಖ್ಯೆಯ ಗಂಧರ್ವ ಸ್ತ್ರೀಯರು ಅವರೊಡನೆ ಮಡದಿಯರಂತೆ ಇದ್ದರು. ಅವರು ಒಬ್ಬರಾದ ಬಳಿಕ ಮತ್ತೊಬ್ಬರಂತೆ ಸುತ್ತಾಡುತ್ತಾ ಭೋಗ-ವಿಲಾಸ ಗಳಿಂದ ತುಂಬಿ ತುಳುಕುವ ನಗರಗಳನ್ನು ಸೂರೆಮಾಡುತ್ತಿದ್ದರು. ॥14॥
ಮೂಲಮ್
(ಶ್ಲೋಕ - 15)
ತೇ ಚಂಡ ವೇಗಾನುಚರಾಃ ಪುರಂಜನಪುರಂ ಯದಾ ।
ಹರ್ತುಮಾರೇಭಿರೇ ತತ್ರ ಪ್ರತ್ಯಷೇಧತ್ಪ್ರಜಾಗರಃ ॥
ಅನುವಾದ
ಗಂಧರ್ವರಾಜ ಚಂಡವೇಗನ ಆ ಅನುಚರರು ಪುರಂಜನನ ನಗರವನ್ನು ಲೂಟಿಮಾಡಲು ಪ್ರಾರಂಭಿಸಿದಾಗ ಅವರನ್ನು ಐದು ಹೆಡೆಯುಳ್ಳ ಪ್ರಜಾಗರ ಸರ್ಪವು ತಡೆಯಿತು. ॥15॥
ಮೂಲಮ್
(ಶ್ಲೋಕ - 16)
ಸ ಸಪ್ತಭಿಃ ಶತೈರೇಕೋ ವಿಂಶತ್ಯಾ ಚ ಶತಂ ಸಮಾಃ ।
ಪುರಂಜನಪುರಾಧ್ಯಕ್ಷೋ ಗಂಧರ್ವೈರ್ಯುಯುಧೇ ಬಲೀ ॥
ಅನುವಾದ
ಈ ಪುರಂಜನಪುರಿಯನ್ನು ಕಾವಲು ಕಾಯುತ್ತಿದ್ದ ಮಹಾ ಬಲಶಾಲಿಯಾದ ಸರ್ಪವು ನೂರು ವರ್ಷಗಳ ಕಾಲ ಒಬ್ಬಂಟಿಗನಾಗಿ ಆ ಏಳೂನೂರಇಪ್ಪತ್ತು ಗಂಧವ-ಗಂಧರ್ವಿಯರೊಡನೆ ಯುದ್ಧ ಮಾಡುತ್ತಲೇ ಇತ್ತು. ॥16॥
ಮೂಲಮ್
(ಶ್ಲೋಕ - 17)
ಕ್ಷೀಯಮಾಣೇ ಸ್ವಸಂಬಂಧೇ ಏಕಸ್ಮಿನ್ಬಹುಭಿರ್ಯುಧಾ ।
ಚಿಂತಾಂ ಪರಾಂ ಜಗಾಮಾರ್ತಃ ಸರಾಷ್ಟ್ರ ಪುರಬಾಂಧವಃ ॥
ಅನುವಾದ
ಅನೇಕ ವೀರರೊಂದಿಗೆ ಒಬ್ಬನೇ ಯುದ್ಧಮಾಡಿದ್ದರಿಂದ ತನ್ನ ಏಕಮಾತ್ರ ಬಂಧುವಾಗಿದ್ದ ಪ್ರಜಾಗರನು ಬಲಹೀನ ನಾದುದನ್ನು ನೋಡಿ ಪುರಂಜನರಾಜನಿಗೆ ತನ್ನ ರಾಷ್ಟ್ರ ಮತ್ತು ನಗರದಲ್ಲಿ ವಾಸಿಸುವ ಇತರ ಬಂಧುಗಳೊಡನೆ ಬಹಳ ಚಿಂತೆ ಇಟ್ಟುಕೊಂಡಿತು. ॥17॥
ಮೂಲಮ್
(ಶ್ಲೋಕ - 18)
ಸ ಏವ ಪುರ್ಯಾಂ ಮಧುಭುಕ್ಪಂಚಾಲೇಷು ಸ್ವಪಾರ್ಷದೈಃ ।
ಉಪನೀತಂ ಬಲಿಂ ಗೃಹ್ಣನ್ ಸೀಜಿತೋನಾವಿದದ್ಭಯಮ್ ॥
ಅನುವಾದ
ಅವನು ಇಷ್ಟು ದಿನಗಳವರೆಗೆ ಪಾಂಚಾಲದೇಶದ ಆ ನಗರದಲ್ಲಿ ತನ್ನ ದೂತರು ತಂದು ಕೊಡುತ್ತಿದ್ದ ಕಂದಾಯವನ್ನು ಪಡೆದು ವಿಷಯ ಭೋಗಗಳಲ್ಲಿ ಮುಳುಗಿದ್ದನು. ಸ್ತ್ರೀಯಳಿಗೆ ವಶೀಭೂತನಾದ್ದರಿಂದ ಮುಂದೆ ಅವಶ್ಯವಾಗಿ ಬಂದೊದಗುವ ಇಂತಹ ಭಯದ ಸುಳಿವೇ ಅವನಿಗೆ ಹತ್ತಲಿಲ್ಲ. ॥18॥
ಮೂಲಮ್
(ಶ್ಲೋಕ - 19)
ಕಾಲಸ್ಯ ದುಹಿತಾ ಕಾಚಿತಿಲೋಕೀಂ ವರಮಿಚ್ಛತೀ ।
ಪರ್ಯಟಂತೀ ನ ಬರ್ಹಿಷ್ಮನ್ಪ್ರತ್ಯನಂದತ ಕಶ್ಚನ ॥
ಅನುವಾದ
ಬರ್ಹಿಷ್ಮಂತನೇ! ಅದೇ ದಿನಗಳಲ್ಲಿ ಕಾಲಪುರುಷನ ಕನ್ಯೆ ಯೊಬ್ಬಳು ತನಗಾಗಿ ವರನನ್ನು ಹುಡುಕುತ್ತಾ ಮೂರು ಲೋಕಗಳಲ್ಲಿಯೂ ಅಲೆಯುತ್ತಿದ್ದಳು. ಆದರೆ ಆಕೆಯನ್ನು ಯಾರೂ ಸ್ವೀಕರಿಸಲಿಲ್ಲ. ॥19॥
ಮೂಲಮ್
(ಶ್ಲೋಕ - 20)
ದೌರ್ಭಾಗ್ಯೇನಾತ್ಮನೋ ಲೋಕೇ ವಿಶ್ರುತಾ ದುರ್ಭಗೇತಿ ಸಾ ।
ಯಾ ತುಷ್ಟಾ ರಾಜರ್ಷಯೇ ತು ವೃತಾದಾತ್ಪೂರವೇ ವರಮ್ ॥
ಅನುವಾದ
ಆ ಜರಾ(ಮುಪ್ಪು)ಎಂಬ ಕಾಲಕನ್ಯೆಯು ಅತ್ಯಂತ ಭಾಗ್ಯಹೀನಳಾದ್ದರಿಂದ ಆಕೆಯನ್ನು ಜನರು ದುರ್ಭಗಾ ಎಂದೇ ಕರೆಯುತ್ತಿದ್ದರು. ಒಮ್ಮೆ ರಾಜರ್ಷಿ ಪುರುವು ತಂದೆಗೆ ತನ್ನ ಯೌವನವನ್ನು ಕೊಡು ವುದಕ್ಕಾಗಿ ತನ್ನಿಚ್ಛೆಯಂತೆ ಅವಳನ್ನು ವರಿಸಿದ್ದನು. ಇದರಿಂದ ಪ್ರಸನ್ನಳಾಗಿ ಅವಳು ರಾಜನಿಗೆ ರಾಜ್ಯ ಪ್ರಾಪ್ತಿಯ ವರವನ್ನು ಕೊಟ್ಟಿದ್ದಳು. ॥20॥
ಮೂಲಮ್
(ಶ್ಲೋಕ - 21)
ಕದಾಚಿದಟಮಾನಾ ಸಾ ಬ್ರಹ್ಮಲೋಕಾನ್ಮಹೀಂ ಗತಮ್ ।
ವವ್ರೇ ಬೃಹದ್ವ್ರತಂ ಮಾಂ ತು ಜಾನತೀ ಕಾಮಮೋಹಿತಾ ॥
ಅನುವಾದ
ಒಮ್ಮೆ ನಾನು ಬ್ರಹ್ಮ ಲೋಕದಿಂದ ಭೂಮಿಗೆ ಬರುತ್ತಿದ್ದಾಗ ಆ ಕನ್ಯೆಯು ಅಲ್ಲಲ್ಲಿ ಸುತ್ತಾಡುತ್ತಾ ನನ್ನನ್ನೂ ಸಂಧಿಸಿದ್ದಳು. ನಾನು ನೈಷ್ಠಿಕಬ್ರಹ್ಮಚಾರಿ ಎಂದು ತಿಳಿದಿದ್ದರೂ ಆಕೆಯು ಕಾಮಮೋಹಿತಳಾಗಿ ನನ್ನನ್ನು ವರಿಸಲು ಬಯಸಿದಳು. ॥21॥
ಮೂಲಮ್
(ಶ್ಲೋಕ - 22)
ಮಯಿ ಸಂರಭ್ಯ ವಿಪುಲಮದಾಚ್ಛಾಪಂ ಸುದುಃಸಹಮ್ ।
ಸ್ಥಾತುಮರ್ಹಸಿ ನೈಕತ್ರ ಮದ್ಯಾಚ್ಞಾವಿಮುಖೋ ಮುನೇ ॥
ಅನುವಾದ
ನಾನು ಅವಳ ಬಯಕೆಯನ್ನು ತಿರಸ್ಕರಿಸಲು ಅವಳು ಅತ್ಯಂತ ಕುಪಿತಳಾಗಿ ನನ್ನನ್ನು ‘ಎಲೈ ಮುನಿಯೇ! ನನ್ನ ಬೇಡಿಕೆಯನ್ನು ತಿರಸ್ಕರಿಸಿದ್ದೀಯೆ. ಆದ್ದರಿಂದ ನೀನು ಒಂದೇ ಜಾಗದಲ್ಲಿ ಹೆಚ್ಚುಕಾಲ ನಿಲ್ಲದಿರುವಂತಾಗಲಿ’ ಎಂದು ಸಹಿಸಲು ಕಷ್ಟ ವಾದ ಶಾಪವನ್ನು ಕೊಟ್ಟಳು. ॥22॥
ಮೂಲಮ್
(ಶ್ಲೋಕ - 23)
ತತೋ ವಿಹತಸಂಕಲ್ಪಾ ಕನ್ಯಕಾ ಯವನೇಶ್ವರಮ್ ।
ಮಯೋಪದಿಷ್ಟಮಾಸಾದ್ಯ ವವ್ರೇ ನಾಮ್ನಾ ಭಯಂ ಪತಿಮ್ ॥
ಅನುವಾದ
ಹೀಗೆ ನನ್ನಿಂದ ನಿರಾಶಳಾದ ಅವಳು ನನ್ನ ಸಲಹೆಯನ್ನು ಪಡೆದು ಯವನರಾಜನಾದ ಭಯ ಎಂಬುವನ ಬಳಿಗೆ ಹೋಗಿ ಅವನನ್ನು ಪತಿಯನ್ನಾಗಿ ವರಿಸಿಕೊಂಡಳು ಹಾಗೂ ಹೇಳಿದಳು - ॥23॥
ಮೂಲಮ್
(ಶ್ಲೋಕ - 24)
ಋಷಭಂ ಯವನಾನಾಂ ತ್ವಾಂ ವೃಣೇ ವೀರೇಪ್ಸಿತಂ ಪತಿಮ್ ।
ಸಂಕಲ್ಪಸ್ತ್ವಯಿ ಭೂತಾನಾಂ ಕೃತಃ ಕಿಲ ನ ರಿಷ್ಯತಿ ॥
ಅನುವಾದ
ಎಲೈ ವೀರವರನೇ! ನೀನು ಯವನರಲ್ಲಿ ಶ್ರೇಷ್ಠನು. ಇಂತಹ ನಿನ್ನನ್ನು ನಾನು ಪ್ರೇಮಿಸಿ ಪತಿಯನ್ನಾಗಿ ಪಡೆಯಲು ಬಯಸಿದ್ದೇನೆ. ನಿನ್ನ ಕುರಿತು ಜೀವಿಗಳು ಮಾಡಿದ ಸಂಕಲ್ಪವು ಎಂದಿಗೂ ವ್ಯರ್ಥವಾಗುವುದಿಲ್ಲ. ॥24॥
ಮೂಲಮ್
(ಶ್ಲೋಕ - 25)
ದ್ವಾವಿಮಾವನುಶೋಚಂತಿ ಬಾಲಾವಸದವಗ್ರಹೌ ।
ಯಲ್ಲೋಕಶಾಸೋಪನತಂ ನ ರಾತಿ ನ ತದಿಚ್ಛತಿ ॥
ಅನುವಾದ
ಯಾವ ಮನುಷ್ಯನು ಲೋಕದ ದೃಷ್ಟಿಯಿಂದ ಅಥವಾ ಶಾಸ್ತ್ರ ದೃಷ್ಟಿಯಿಂದ ದಾನಮಾಡಲು ಯೋಗ್ಯವಾದ ವಸ್ತುವನ್ನು ದಾನಮಾಡುವುದಿಲ್ಲವೋ, ಯಾರು ಶಾಸ್ತ್ರದೃಷ್ಟಿಯಿಂದ ಆ ದಾನವನ್ನು ತೆಗೆದು ಕೊಳ್ಳಲು ಯೋಗ್ಯನಾಗಿದ್ದರೂ ತೆಗೆದುಕೊಳ್ಳುವುದಿಲ್ಲವೋ, ಅವರಿಬ್ಬರೂ ದುರಾಗ್ರಹಿಗಳು ಮತ್ತು ಮೂಢರು. ಆದ್ದರಿಂದ ಶೋಚನೀಯರು. ॥25॥
ಮೂಲಮ್
(ಶ್ಲೋಕ - 26)
ಅಥೋ ಭಜಸ್ವ ಮಾಂ ಭದ್ರ ಭಜಂತೀಂ ಮೇ ದಯಾಂ ಕುರು ।
ಏತಾವಾನ್ಪೌರುಷೋ ಧರ್ಮೋ ಯದಾರ್ತಾನನುಕಂಪತೇ ॥
ಅನುವಾದ
ಮಂಗಳಾಂಗನೇ! ಈಗ ನಾನು ನಿನ್ನ ಸೇವೆಗಾಗಿ ಸಿದ್ಧಳಾಗಿ ಬಂದಿದ್ದೇನೆ. ನನ್ನನ್ನು ಸ್ವೀಕರಿಸಿ ಅನುಗ್ರಹಿಸು. ದೀನರ ಮೇಲೆ ದಯೆತೋರುವುದೇ ಮನುಷ್ಯರ ಶ್ರೇಷ್ಠ ಧರ್ಮವಾಗಿದೆ. ॥26॥
ಮೂಲಮ್
(ಶ್ಲೋಕ - 27)
ಕಾಲಕನ್ಯೋದಿತವಚೋ ನಿಶಮ್ಯ ಯವನೇಶ್ವರಃ
ಚಿಕೀರ್ಷುರ್ದೇವಗುಹ್ಯಂ ಸ ಸಸ್ಮಿತಂ ತಾಮಭಾಷತ ॥
ಅನುವಾದ
ಕಾಲಕನ್ಯೆಯ ಮಾತನ್ನು ಕೇಳಿ ಯವನರಾಜನು ದೈವಸಂಕಲ್ಪದಲ್ಲಿದ್ದ ಒಂದು ಗುಟ್ಟಾದ ಕಾರ್ಯವನ್ನು ಆಕೆಯಿಂದ ನೆರವೇರಿಸಲು ಇಚ್ಛಿಸುತ್ತಾ ನಸುನಗುತ್ತಾ ಆಕೆಗೆ ಹೀಗೆಂದನು ॥27॥
ಮೂಲಮ್
(ಶ್ಲೋಕ - 28)
ಮಯಾ ನಿರೂಪಿತಸ್ತುಭ್ಯಂ ಪತಿರಾತ್ಮಸಮಾಧಿನಾ ।
ನಾಭಿನಂದತಿ ಲೋಕೋಯಂ ತ್ವಾಮಭದ್ರಾಮಸಮ್ಮತಾಮ್ ॥
(ಶ್ಲೋಕ - 29)
ತ್ವಮವ್ಯಕ್ತಗತಿರ್ಭುಂಕ್ಷ್ವ ಲೋಕಂ ಕರ್ಮವಿನಿರ್ಮಿತಮ್ ।
ಯಾಹಿ ಮೇ ಪೃತನಾಯುಕ್ತಾ ಪ್ರಜಾನಾಶಂ ಪ್ರಣೇಷ್ಯಸಿ ॥
ಅನುವಾದ
ನಾನು ಯೋಗದೃಷ್ಟಿಯಿಂದ ನಿನಗೆ ಒಬ್ಬ ವರನನ್ನು ನಿಶ್ಚಯಿಸಿರುವೆನು. ನೀನು ಎಲ್ಲರಿಗೆ ಅನಿಷ್ಟ ವನ್ನು ಉಂಟುಮಾಡುವುದರಿಂದ ಯಾರಿಗೂ ಬೇಕೆನಿಸು ವುದಿಲ್ಲ. ಅದಕ್ಕಾಗಿಯೇ ಯಾರೂ ನಿನ್ನನ್ನು ಸ್ವೀಕರಿಸುವುದಿಲ್ಲ. ಆದುದರಿಂದ ನೀನು ಕರ್ಮದಿಂದ ಉಂಟಾದ ಈ ಲೋಕವನ್ನು ಗುಪ್ತಳಾಗಿ ಬಲಾತ್ಕಾರದಿಂದ ಭೋಗಿಸು. ಜೊತೆಗೆ ನನ್ನ ಸೈನ್ಯವನ್ನೂ ಕರೆದುಕೊಂಡು ಹೋಗು. ಅದರ ಸಹಾಯದಿಂದ ನೀನು ಎಲ್ಲ ಪ್ರಜೆಗಳನ್ನು ನಾಶಮಾಡಲು ಸಮರ್ಥಳಾಗುವೆ. ನಿನ್ನನ್ನು ಯಾರೂ ಎದುರಿಸಲಾರರು. ॥28-29॥
ಮೂಲಮ್
(ಶ್ಲೋಕ - 30)
ಪ್ರಜ್ವಾರೋಯಂ ಮಮ ಭ್ರಾತಾ ತ್ವಂ ಚ ಮೇ ಭಗಿನೀ ಭವ ।
ಚರಾಮ್ಯುಭಾಭ್ಯಾಂ ಲೋಕೇಸ್ಮಿನ್ನವ್ಯಕ್ತೋ ಭೀಮಸೈನಿಕಃ ॥
ಅನುವಾದ
ನೋಡು! ಈ ‘ಪ್ರಜ್ವಾರ’ ಎಂಬುವನು ನನ್ನ ಸೋದರನು. ನೀನು ನನ್ನ ಸೋದರಿಯಾಗು. ನಿಮ್ಮಿಬ್ಬರೊಡಗೂಡಿ ನಾನು ನನ್ನ ಅವ್ಯಕ್ತಗತಿಯಿಂದ ಭಯಂಕರವಾದ ಸೈನ್ಯವನ್ನು ಜೊತೆಯಲ್ಲಿ ಕರೆದುಕೊಂಡು ಈ ಲೋಕದಲ್ಲೆಲ್ಲ ಸಂಚರಿಸುವೆನು. ॥30॥
ಮೂಲಮ್
ಇಪ್ಪತ್ತೇಳನೆಯ ಅಧ್ಯಾಯವು ಮುಗಿಯಿತು. ॥27॥
ಅನುವಾದ (ಸಮಾಪ್ತಿಃ)
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಚತುರ್ಥಸ್ಕಂಧೇ ಪುರಂಜನೋಪಾಖ್ಯಾನೇ ಸಪ್ತವಿಂಶೋಽಧ್ಯಾಯಃ ॥27॥