[ಇಪ್ಪತ್ತಾರನೆಯ ಅಧ್ಯಾಯ]
ಭಾಗಸೂಚನಾ
ಪುರಂಜನನ ಬೇಟೆಯ ವರ್ಣನೆ ರಾಣಿಯ ಪ್ರಣಯಕೋಪ
(ಶ್ಲೋಕ - 1)
ಮೂಲಮ್ (ವಾಚನಮ್)
ನಾರದ ಉವಾಚ
ಮೂಲಮ್
ಸ ಏಕದಾ ಮಹೇಷ್ವಾಸೋ ರಥಂ ಪಂಚಾಶ್ವಮಾಶುಗಮ್ ।
ದ್ವೀಷಂ ದ್ವಿಚಕ್ರಮೇಕಾಕ್ಷಂ ತ್ರಿವೇಣುಂ ಪಂಚಬಂಧುರಮ್ ॥
(ಶ್ಲೋಕ - 2)
ಏಕರಶ್ಮ್ಯೇಕದಮನಮೇಕನೀಡಂ ದ್ವಿಕೂಬರಮ್ ।
ಪಂಚಪ್ರಹರಣಂ ಸಪ್ತವರೂಥಂ ಪಂಚವಿಕ್ರಮಮ್ ॥
(ಶ್ಲೋಕ - 3)
ಮೂಲಮ್
ಹೈಮೋಪಸ್ಕರಮಾರುಹ್ಯ ಸ್ವರ್ಣವರ್ಮಾಕ್ಷಯೇಷುಧಿಃ ।
ಏಕಾದಶಚಮೂನಾಥಃ ಪಂಚಪ್ರಸ್ಥಮಗಾದ್ವನಮ್ ॥
ಅನುವಾದ
ಶ್ರೀನಾರದರು ಹೇಳುತ್ತಾರೆ — ಎಲೈ ರಾಜನೇ! ಒಮ್ಮೆ ಮಹಾಧನುರ್ಧರನಾದ ಪುರಂಜನರಾಜನು ತನ್ನ ಧನುಸ್ಸನ್ನು ಎತ್ತಿಕೊಂಡು, ಚಿನ್ನದ ಕವಚವನ್ನು ತೊಟ್ಟು, ಅಕ್ಷಯ ಬಾಣ ಗಳಿರುವ ಬತ್ತಳಿಕೆಯನ್ನು ಧರಿಸಿ, ತನ್ನ ಹನ್ನೊಂದನೆಯ ಸೇನಾಪತಿಯೊಡನೆ ಭಂಗಾರದ ಒಂದು ರಥದಲ್ಲಿ ಕುಳಿತು ಬೇಟೆಯಾಡಲು ಪಂಚ ಪ್ರಸ್ಥವೆಂಬ ಕಾಡಿಗೆ ಹೊರಟನು. ಆ ರಥವು ಐದು ಕುದುರೆಗಳಿಂದಲೂ, ಎರಡು ಪಕ್ಕೆಗಳಲ್ಲಿರುವ ಬೊಂಬುಗಳು, ಎರಡು ಗಾಲಿಗಳಿಂದಲೂ, ಒಂದು ಅಚ್ಚು ಮರದಿಂದಲೂ, ಮೂರು ಧ್ವಜಗಳಿಂದಲೂ, ಐದು ಕಟ್ಟುಗಳಿಂದಲೂ, ಒಂದೇ ಹಗ್ಗವನ್ನು ಹಿಡಿದುಕೊಂಡಿದ್ದ ಒಬ್ಬ ಸಾರಥಿಯಿಂದಲೂ, ಒಂದು ಸಾರಥಿಯ ಸ್ಥಾನ ಎರಡು ಯುಗಸ್ಥಾನಗಳಿಂದಲೂ, ಏಳು ಆವರಣಗಳಿಂದಲೂ, ಐದು ಆಯುಧಗಳಿಂದಲೂ, ಐದು ಪ್ರಕಾರದ ಗತಿಗಳಿಂದಲೂ ಕೂಡಿ ಅತ್ಯಂತ ಶೋಭಾಯಮಾನವಾಗಿದ್ದಿತು. ॥1-3॥
ಮೂಲಮ್
(ಶ್ಲೋಕ - 4)
ಚಚಾರ ಮೃಗಯಾಂ ತತ್ರ ದೃಪ್ತ ಆತ್ತೇಷುಕಾರ್ಮುಕಃ ।
ವಿಹಾಯ ಜಾಯಾಮತದರ್ಹಾಂ ಮೃಗವ್ಯಸನಲಾಲಸಃ ॥
ಅನುವಾದ
ರಾಜನಿಗೆ ತನ್ನ ಪ್ರಿಯತಮೆಯನ್ನು ಕ್ಷಣವಾದರೂ ಬಿಟ್ಟಿರುವುದು ಕಷ್ಟವಾಗಿದ್ದರೂ ಅಂದು ಅವನಿಗೆ ಬೇಟೆಯ ಮದವು ಏರಿದ್ದರಿಂದ ಆಕೆಯ ಪರಿವೆಯಿಲ್ಲದೆ ಗರ್ವದಿಂದ ಕಾಡಿಗೆ ಬಂದು ಧನುರ್ಬಾಣಗಳನ್ನು ಎತ್ತಿಕೊಂಡು ಬೇಟೆ ಯಾಡತೊಡಗಿದನು. ॥4॥
ಮೂಲಮ್
(ಶ್ಲೋಕ - 5)
ಆಸುರೀಂ ವೃತ್ತಿಮಾಶ್ರಿತ್ಯ ಘೋರಾತ್ಮಾ ನಿರನುಗ್ರಹಃ ।
ನ್ಯಹನನ್ನಿಶಿತೈರ್ಬಾಣೈರ್ವನೇಷು ವನಗೋಚರಾನ್ ॥
ಅನುವಾದ
ಆಗ ಆಸುರೀವೃತ್ತಿಯು ಅವನನ್ನು ಆವರಿಸಿದ್ದರಿಂದ ಕಠೋರ ಚಿತ್ತದಿಂದ, ನಿರ್ದಯನಾಗಿ ಅವನು ತನ್ನ ತೀಕ್ಷ್ಣವಾದ ಬಾಣಗಳಿಂದ ಅರಣ್ಯದ ಮೃಗಗಳನ್ನು ಕೊಂದುಹಾಕಿದನು. ದೋಷರಹಿತವಾಗಿದ್ದ ಸಾಧುಮೃಗಗಳನ್ನೂ ಸಂಹರಿಸಿದನು. ॥5॥
ಮೂಲಮ್
(ಶ್ಲೋಕ - 6)
ತೀರ್ಥೇಷು ಪ್ರತಿದೃಷ್ಟೇಷು ರಾಜಾ ಮೇಧ್ಯಾನ್ಪಶೂನ್ವನೇ ।
ಯಾವದರ್ಥಮಲಂ ಲುಬ್ಧೋ ಹನ್ಯಾದಿತಿ ನಿಯಮ್ಯತೇ ॥
ಅನುವಾದ
ಮಾಂಸದಲ್ಲಿ ಅತ್ಯಂತ ಆಸಕ್ತಿ ಉಂಟಾದ ರಾಜನು ಕೇವಲ ಶಾಸ್ತ್ರದಲ್ಲಿ ಹೇಳಿದ ಕರ್ಮಗಳಿಗಾಗಿಯೇ ಕಾಡಿಗೆ ಹೋಗಿ ಆವಶ್ಯಕತೆಗೆ ತಕ್ಕಂತೆ ನಿಷಿದ್ಧವಲ್ಲದ ಪಶುಗಳನ್ನು ಮಾತ್ರ ವಧಿಸಬೇಕು. ವ್ಯರ್ಥವಾಗಿ ಪಶುಹಿಂಸೆಯನ್ನು ಮಾಡಬಾರದು. ಈ ರೀತಿಯ ಉಚ್ಛಂಖಲ ಪ್ರವೃತ್ತಿಯನ್ನು ಶಾಸ್ತ್ರವು ನಿಯಂತ್ರಿಸುತ್ತಿದೆ. ॥6॥
ಮೂಲಮ್
(ಶ್ಲೋಕ - 7)
ಯ ಏವಂ ಕರ್ಮ ನಿಯತಂ ವಿದ್ವಾನ್ಕುರ್ವೀತ ಮಾನವಃ ।
ಕರ್ಮಣಾ ತೇನ ರಾಜೇಂದ್ರ ಜ್ಞಾನೇನ ನ ಸ ಲಿಪ್ಯತೇ ॥
ಅನುವಾದ
ರಾಜನೇ! ಹೀಗೆ ಶಾಸವು ನಿಯತ ಮಾಡಿರುವ ಕರ್ಮಗಳನ್ನು ಆಚರಿಸುವ ವಿದ್ವಾನ್ ಮನುಷ್ಯ ನಿಗೆ ಆ ಕರ್ಮಾನುಷ್ಠಾನದಿಂದ ದೊರೆತ ಜ್ಞಾನದಿಂದ ಕರ್ಮದ ಲೇಪವುಂಟಾಗುವುದಿಲ್ಲ. ॥7॥
ಮೂಲಮ್
(ಶ್ಲೋಕ - 8)
ಅನ್ಯಥಾ ಕರ್ಮ ಕುರ್ವಾಣೋ ಮಾನಾರೂಢೋ ನಿಬಧ್ಯತೇ ।
ಗುಣಪ್ರವಾಹಪತಿತೋ ನಷ್ಟಪ್ರಜ್ಞೋ ವ್ರಜತ್ಯಧಃ ॥
ಅನುವಾದ
ಇಲ್ಲದಿದ್ದರೆ ಮನಸ್ಸಿಗೆ ಬಂದಂತೆ ಕರ್ಮಮಾಡುವುದರಿಂದ ಮನುಷ್ಯನು ಅಭಿಮಾನಕ್ಕೆ ವಶನಾಗಿ ಕರ್ಮಗಳಲ್ಲಿ ಬಂಧಿತನಾಗುತ್ತಾನೆ ಹಾಗೂ ಗುಣಪ್ರವಾಹ ರೂಪವಾದ ಸಂಸಾರಚಕ್ರದಲ್ಲಿ ಸಿಲುಕಿ, ವಿವೇಕಬುದ್ಧಿಯು ನಾಶವಾದ್ದರಿಂದ ಅವನು ಅಧಮ ಯೋನಿಗಳಲ್ಲಿ ಹುಟ್ಟುತ್ತಾನೆ. ॥8॥
ಮೂಲಮ್
(ಶ್ಲೋಕ - 9)
ತತ್ರ ನಿರ್ಭಿನ್ನ ಗಾತ್ರಾಣಾಂ ಚಿತ್ರವಾಜೈಃ ಶಿಲೀಮುಖೈಃ ।
ವಿಪ್ಲವೋಭೂದ್ದುಃಖಿತಾನಾಂ ದುಃಸಹಃ ಕರುಣಾತ್ಮನಾಮ್ ॥
ಅನುವಾದ
ಪುರಂಜನನ ಬಗೆ-ಬಗೆಯ ಗರಿಗಳುಳ್ಳ ಬಾಣಗಳಿಂದ ಕತ್ತರಿಸಲ್ಪಟ್ಟು ಅನೇಕ ಜೀವರುಗಳು ಅತೀವ ಕಷ್ಟದಿಂದ ಪ್ರಾಣತ್ಯಾಗ ಮಾಡತೊಡಗಿದವು. ಅವನ ಆ ನಿರ್ದಯ ವಾದ ಪ್ರಾಣಿಸಂಹಾರವನ್ನು ನೋಡಿ ಎಲ್ಲ ದಯಾಳುಗಳು ಬಹಳ ದುಃಖಿತರಾದರು. ಅವರು ಇದನ್ನು ಸಹಿಸದಾದರು. ॥9॥
ಮೂಲಮ್
(ಶ್ಲೋಕ - 10)
ಶಶಾನ್ವರಾಹಾನ್ಮಹಿಷಾನ್ಗವಯಾನ್ರುರುಶಲ್ಯಕಾನ್ ।
ಮೇಧ್ಯಾನನ್ಯಾಂಶ್ಚ ವಿವಿಧಾನ್ವಿನಿಘ್ನನ್ ಶ್ರಮಮಧ್ಯಗಾತ್ ॥
ಅನುವಾದ
ಹೀಗೆ ಅಲ್ಲಿ ಮೊಲಗಳು, ಹಂದಿಗಳೂ, ಕಾಡುಕೋಣಗಳೂ, ಕಾಡುಹಸುಗಳೂ, ಕೃಷ್ಣಮೃಗಗಳೂ, ಜಿಂಕೆಗಳೂ ಹಾಗೂ ಇನ್ನೂ ಅನೇಕಜಾತಿಯ ನೂರಾರು ನಿರ್ದೋಷ ಮೃಗಗಳನ್ನು ಕೊಂದುದರಿಂದ ಪುರಂಜನರಾಜನು ತುಂಬಾ ಆಯಾಸಗೊಂಡನು. ॥10॥
ಮೂಲಮ್
(ಶ್ಲೋಕ - 11)
ತತಃ ಕ್ಷುತ್ತೃಟ್ಪರಿಶ್ರಾಂತೋ ನಿವೃತ್ತೋ ಗೃಹಮೇಯಿವಾನ್ ।
ಕೃತಸ್ನಾನೋಚಿತಾಹಾರಃ ಸಂವಿವೇಶ ಗತಕ್ಲಮಃ ॥
ಅನುವಾದ
ಆಗ ಹಸಿವು-ಬಾಯಾರಿಕೆಯಿಂದ ಬಳಲಿದ ಅವನು ವನದಿಂದ ಮರಳಿ ಅರಮನೆಗೆ ಬಂದಿದ್ದನು. ಅಲ್ಲಿ ಅವನು ಯಥಾ-ಯೋಗ್ಯರೀತಿಯಿಂದ ಸ್ನಾನ-ಭೋಜನಾದಿಗಳನ್ನು ಮಾಡಿ, ಕೊಂಚ ವಿಶ್ರಾಂತಿ ಪಡೆದು ಆಯಾಸವನ್ನು ಪರಿಹರಿಸಿಕೊಂಡನು. ॥11॥
ಮೂಲಮ್
(ಶ್ಲೋಕ - 12)
ಆತ್ಮಾನಮರ್ಹಯಾಂಚಕ್ರೇ ಧೂಪಾಲೇಪಸ್ರಗಾದಿಭಿಃ ।
ಸಾಧ್ವಲಂಕೃತಸರ್ವಾಂಗೋ ಮಹಿಷ್ಯಾಮಾದಧೇ ಮನಃ ॥
ಅನುವಾದ
ಮತ್ತೆ ಗಂಧ-ಚಂದನ, ಮಾಲೆ ಮುಂತಾದವುಗಳಿಂದ ಸುಸಜ್ಜಿತ ವಾಗಿ ಅಂಗಾಂಗಗಳಲ್ಲೆಲ್ಲ ಸುಂದರವಾದ ಆಭೂಷಣಗಳನ್ನು ತೊಟ್ಟುಕೊಂಡನು. ಆಗ ಅವನಿಗೆ ತನ್ನ ಪ್ರಿಯೆಯ ನೆನ ಪಾಯಿತು. ॥12॥
ಮೂಲಮ್
(ಶ್ಲೋಕ - 13)
ತೃಪ್ತೋ ಹೃಷ್ಟಃ ಸುದೃಪ್ತಶ್ಚ ಕಂದರ್ಪಾಕೃಷ್ಟಮಾನಸಃ ।
ನ ವ್ಯಚಷ್ಟ ವರಾರೋಹಾಂ ಗೃಹಿಣೀಂ ಗೃಹಮೇಧಿನೀಮ್ ॥
ಅನುವಾದ
ಅವನು ಭೋಜನಾದಿಗಳಿಂದ ತೃಪ್ತ ನಾಗಿ, ಸಂತೋಷಭರಿತನಾಗಿ ಮದವೇರಿ ಕಾಮಪೀಡಿತನಾಗಿ, ತನ್ನ ಸುಂದರಿಯಾದ ಭಾರ್ಯೆಯನ್ನು ಹುಡುಕ ತೊಡಗಿದನು. ಆದರೆ ಅವನಿಗೆ ಆಕೆಯು ಎಲ್ಲಿಯೂ ಕಂಡು ಬಂದಿಲ್ಲ. ॥13॥
ಮೂಲಮ್
(ಶ್ಲೋಕ - 14)
ಅಂತಃಪುರಸಿಯೋಪೃಚ್ಛದ್ವಿಮನಾ ಇವ ವೇದಿಷತ್ ।
ಅಪಿ ವಃ ಕುಶಲಂ ರಾಮಾಃ ಸೇಶ್ವರೀಣಾಂ ಯಥಾ ಪುರಾ ॥
ಅನುವಾದ
ಪ್ರಾಚೀನಬರ್ಹಿರಾಜನೇ! ಆಗ ಅವನು ಮನಸ್ಸಿನಲ್ಲಿ ಬೇಸರಗೊಂಡು ಅಂತಃಪುರದ ಸ್ತ್ರೀಯರಲ್ಲಿ ಕೇಳಿದನು ‘ಸುಂದರಿಯರೇ! ನಿಮ್ಮ ಒಡತಿಯೊಂದಿಗೆ ನೀವೆಲ್ಲರೂ ಮೊದಲಿನಂತೆ ಕುಶಲರಾಗಿದ್ದೀರಿ ತಾನೇ? ॥14॥
ಮೂಲಮ್
(ಶ್ಲೋಕ - 15)
ನ ತಥೈತರ್ಹಿ ರೋಚಂತೇ ಗೃಹೇಷು ಗೃಹಸಂಪದಃ ।
ಯದಿ ನ ಸ್ಯಾದ್ಗೃಹೇ ಮಾತಾ ಪತ್ನೀ ವಾ ಪತಿದೇವತಾ ।
ವ್ಯಂಗೇ ರಥ ಇವ ಪ್ರಾಜ್ಞಃ ಕೋ ನಾಮಾಸೀತ ದೀನವತ್ ॥
ಅನುವಾದ
ಇಂದು ಈ ಮನೆಯ ಸಂಪತ್ತು ಹಿಂದಿನಂತೆ ಸುಂದರವಾಗಿ ಕಾಣುತ್ತಿಲ್ಲವಲ್ಲ! ಮನೆಯಲ್ಲಿ ತಾಯಿಯಾಗಲೀ ಅಥವಾ ಪತಿನಿಷ್ಠಳಾದ ಹೆಂಡತಿಯಾಗಲೀ ಇಲ್ಲದಿದ್ದಾಗ ಆ ಮನೆಯು ಚಕ್ರವಿಲ್ಲದ ರಥದಂತೆ ಆಗಿಬಿಡುವುದು. ಅಂತಹ ಮನೆಯಲ್ಲಿ ಯಾವ ಬುದ್ಧಿವಂತನು ದೀನಜನರಂತೆ ವಾಸಿ ಸಲು ಇಷ್ಟಪಡುವನು? ॥15॥
ಮೂಲಮ್
(ಶ್ಲೋಕ - 16)
ಕ್ವ ವರ್ತತೇ ಸಾ ಲಲನಾ ಮಜ್ಜಂತಂ ವ್ಯಸನಾರ್ಣವೇ ।
ಯಾ ಮಾಮುದ್ಧರತೇ ಪ್ರಜ್ಞಾಂ ದೀಪಯಂತೀ ಪದೇ ಪದೇ ॥
ಅನುವಾದ
ಆದ್ದರಿಂದ ನಾನು, ದುಃಖಸಮುದ್ರದಲ್ಲಿ ಮುಳುಗಿದಾಗಲೆಲ್ಲ ನನ್ನ ವಿವೇಕ ಬುದ್ಧಿಯನ್ನು ಹೆಜ್ಜೆ-ಹೆಜ್ಜೆಗೆ ಎಚ್ಚರಗೊಳಿಸುತ್ತಾ, ಆ ಸಂಕಟ ದಿಂದ ಉದ್ಧರಿಸುವ ಸುಂದರಿಯಾದ ಆ ಪ್ರಿಯತಮೆಯು ಎಲ್ಲಿದ್ದಾಳೆ?’ ಎಂದು ಪ್ರಶ್ನಿಸಿದನು. ॥16॥
ಮೂಲಮ್
(ಶ್ಲೋಕ - 17)
ಮೂಲಮ್ (ವಾಚನಮ್)
ರಾಮಾ ಊಚುಃ
ಮೂಲಮ್
ನರನಾಥ ನ ಜಾನೀಮಸ್ತ್ವತ್ಪ್ರಿಯಾ ಯದ್ವ್ಯವಸ್ಯತಿ ।
ಭೂತಲೇ ನಿರವಸ್ತಾರೇ ಶಯಾನಾಂ ಪಶ್ಯ ಶತ್ರುಹನ್ ॥
ಅನುವಾದ
ಸ್ತ್ರೀಯರೆಂದರು — ನರೇಂದ್ರನೇ! ನಿಮ್ಮ ಆ ಇನಿಯಳು ಇಂದು ಏನು ಮಾಡಲು ನಿಶ್ಚಯಿಸಿರುವಳು ಎಂಬುದು ನಮಗೆ ತಿಳಿಯದು. ಶತ್ರುಸಂಹಾರಕನೇ! ನೋಡು, ಅವಳು ಹಾಸಿಗೆಯಿಲ್ಲದೆ ಬರಿ ನೆಲದಮೇಲೆ ಮಲಗಿ ಕೊಂಡಿರುವಳು. ॥17॥
ಮೂಲಮ್
(ಶ್ಲೋಕ - 18)
ಮೂಲಮ್ (ವಾಚನಮ್)
ನಾರದ ಉವಾಚ
ಮೂಲಮ್
ಪುರಂಜನಃ ಸ್ವಮಹಿಷೀಂ ನಿರೀಕ್ಷ್ಯಾವಧುತಾಂ ಭುವಿ ।
ತತ್ಸಂಗೋನ್ಮಥಿತಜ್ಞಾನೋ ವೈಕ್ಲವ್ಯಂ ಪರಮಂ ಯಯೌ ॥
ಅನುವಾದ
ಶ್ರೀನಾರದರು ಹೇಳುತ್ತಾರೆ — ಮಹಾರಾಜಾ! ಆ ಸ್ತ್ರೀಯ ಸಂಗದಿಂದ ಪುರಂಜನರಾಜನ ವಿವೇಕವು ನಾಶವಾಗಿ ಬಿಟ್ಟಿತ್ತು. ಅದರಿಂದ ತನ್ನ ರಾಣಿಯು ನೆಲದ ಮೇಲೆ ಅಸ್ತವ್ಯಸ್ತವಾಗಿ ಬಿದ್ದುಕೊಂಡಿರುವುದನ್ನು ನೋಡಿ ಅವನಿಗೆ ತಡೆಯಲಾರದ ಶೋಕ ಉಂಟಾಯಿತು. ॥18॥
ಮೂಲಮ್
(ಶ್ಲೋಕ - 19)
ಸಾಂತ್ವಯನ್ ಶ್ಲಕ್ಷ್ಣಯಾ ವಾಚಾ ಹೃದಯೇನ ವಿದೂಯತಾ ।
ಪ್ರೇಯಸ್ಯಾಃ ಸ್ನೇಹಸಂರಂಭಲಿಂಗಮಾತ್ಮನಿ ನಾಭ್ಯಗಾತ್ ॥
ಅನುವಾದ
ಅವನು ನೊಂದ ಹೃದಯದಿಂದ ಆಕೆಯನ್ನು ಸವಿಮಾತುಗಳಿಂದ ಸಂತೈಸಿದನು. ಆದರೆ ಆಕೆಗೆ ತನ್ನಲ್ಲಿ ಪ್ರೀತಿ ಯುಂಟಾಗುವ ಯಾವ ಚಿಹ್ನೆಯೂ ಅವನಿಗೆ ಕಂಡು ಬರಲಿಲ್ಲ. ॥19॥
ಮೂಲಮ್
(ಶ್ಲೋಕ - 20)
ಅನುನಿನ್ಯೇಥ ಶನಕೈರ್ವೀರೋನುನಯಕೋವಿದಃ ।
ಪಸ್ಪರ್ಶ ಪಾದಯುಗಲಮಾಹ ಚೋತ್ಸಂಗ ಲಾಲಿತಾಮ್ ॥
ಅನುವಾದ
ಪುರಂಜನನು ಸಂತೈಸುವ ಕಲೆಯಲ್ಲಿ ತುಂಬಾ ಕುಶಲನಾಗಿ ದ್ದನು. ಅವನು ಆಕೆಯನ್ನು ಮೆಲ್ಲ-ಮೆಲ್ಲನೆ ಅನುನಯ ವಿನಯಗಳಿಂದ ಸಾಂತ್ವನಗೊಳಿಸಲು ಪ್ರಾರಂಭಿಸಿದನು. ಮೊದಲಿಗೆ ಆಕೆಯ ಪಾದಗಳನ್ನು ತನ್ನ ತೊಡೆಯಮೇಲಿಟ್ಟು ಕೊಂಡು ಪ್ರೀತಿಯಿಂದ ಆಕೆಯನ್ನು ಮುದ್ದಿಸುತ್ತಾ ಹೀಗೆಂದನು. ॥20॥
ಮೂಲಮ್
(ಶ್ಲೋಕ - 21)
ಮೂಲಮ್ (ವಾಚನಮ್)
ಪುರಂಜನ ಉವಾಚ
ಮೂಲಮ್
ನೂನಂ ತ್ವಕೃತಪುಣ್ಯಾಸ್ತೇ ಭೃತ್ಯಾ ಯೇಷ್ವೀಶ್ವರಾಃ ಶುಭೇ ।
ಕೃತಾಗಸ್ಸ್ವಾತ್ಮಸಾತ್ಕೃತ್ವಾ ಶಿಕ್ಷಾದಂಡಂ ನ ಯುಂಜತೇ ॥
ಅನುವಾದ
ಪುರಂಜನನು ಹೇಳುತ್ತಾನೆ — ಸುಂದರೀ! ಯಾವ ಸೇವಕರು ಅಪರಾಧವನ್ನು ಮಾಡಿದಾಗ ಒಡೆಯನಿಂದ ಅದಕ್ಕೆ ತಕ್ಕ ದಂಡನೆಯನ್ನು ಪಡೆಯುವುದಿಲ್ಲವೋ ಅವರು ನಿಜವಾಗಿಯೂ ಮಂದ ಭಾಗ್ಯರು. ॥21॥
ಮೂಲಮ್
(ಶ್ಲೋಕ - 22)
ಪರಮೋನುಗ್ರಹೋ ದಂಡೋ ಭೃತ್ಯೇಷು ಪ್ರಭುಣಾರ್ಪಿತಃ ।
ಬಾಲೋ ನ ವೇದ ತತ್ತನ್ವಿ ಬಂಧುಕೃತ್ಯಮಮರ್ಷಣಃ ॥
ಅನುವಾದ
ಸ್ವಾಮಿಯು ಸೇವಕರಿಗೆ ದಂಡನೆಯನ್ನು ಕೊಟ್ಟರೆ ಅವರ ಮೇಲೆ ದೊಡ್ಡ ಅನುಗ್ರಹವನ್ನು ತೋರಿದಂತೆ ಆಗುತ್ತದೆ. ಹಿತಕಾರಿಯಾದ ತನ್ನ ಪ್ರಭುವು ಬಂಧುವಿನಂತೆ ಮಾಡಿದ ಆ ದಂಡನೆಯೆಂಬ ಉಪಕಾರವನ್ನು ಸೈರಿಸದೆ ಇರುವವನು ನಿಜವಾಗಿಯೂ ಮೂರ್ಖನು. ॥22॥
ಮೂಲಮ್
(ಶ್ಲೋಕ - 23)
ಸಾ ತ್ವಂ ಮುಖಂ ಸುದತಿ ಸುಭ್ರವನುರಾಗಭಾರ-
ವ್ರೀಡಾವಿಲಂಬವಿಲಸದ್ಧಸಿತಾವಲೋಕಮ್ ।
ನೀಲಾಲಕಾಲಿಭಿರುಪಸ್ಕೃತಮುನ್ನಸಂ ನಃ
ಸ್ವಾನಾಂ ಪ್ರದರ್ಶಯ ಮನಸ್ವಿನಿ ವಲ್ಗುವಾಕ್ಯಮ್ ॥
ಅನುವಾದ
ಸುಂದರವಾದ ಸುಲಿ ಹಲ್ಲುಗಳಿಂದಲೂ, ರಮಣೀಯವಾದ ಹುಬ್ಬುಗಳಿಂದಲೂ ಶೋಭಿಸುತ್ತಿರುವ ಶುಭಾಂಗಿಯೇ! ಈಗ ಈ ಕೋಪವನ್ನು ತೊರೆದು ‘ನಾನು ನಿನ್ನವನು’ ಎಂಬುದನ್ನು ನೆನೆದು ಪ್ರೇಮಾತಿಶಯದಿಂದ ಕೂಡಿದ, ನಾಚಿಕೆಯಿಂದ ತಗ್ಗಿ ಮಧುರವಾದ ಕಿರುನಗೆಯಿಂದ ಮೆರೆಯುವ ನಿನ್ನ ಮನೋಹರವಾದ ಮುಖವನ್ನು ತೋರಿಸುವವಳಾಗು. ಆಹಾ! ದುಂಬಿಗಳ ಸಾಲಿನಂತೆ ನೀಲಿಯ ಬಣ್ಣದಿಂದ ಕಂಗೊಳಿಸುತ್ತಿರುವ ಮುಂಗುರುಳು, ಉನ್ನತವಾದ ಮೂಗು ಮತ್ತು ಸವಿನುಡಿ ಗಳಿಂದ ನಿನ್ನ ಮುಖಾರವಿಂದವು ಎಷ್ಟು ಮನಮೋಹಕ ವಾಗಿದೆ? ॥23॥
ಮೂಲಮ್
(ಶ್ಲೋಕ - 24)
ತಸ್ಮಿನ್ದಧೇ ದಮಮಹಂ ತವ ವೀರಪತ್ನಿ
ಯೋನ್ಯತ್ರ ಭೂಸುರಕುಲಾತ್ಕೃತಕಿಲ್ಬಿಷಸ್ತಮ್ ।
ಪಶ್ಯೇ ನ ವೀತಭಯಮುನ್ಮುದಿತಂ ತ್ರಿಲೋಕ್ಯಾ-
ಮನ್ಯತ್ರ ವೈ ಮುರರಿಪೋರಿತರತ್ರ ದಾಸಾತ್ ॥
ಅನುವಾದ
ವೀರಪತ್ನಿಯೇ! ಬೇರೆ ಯಾರಾದರೂ ನಿನಗೆ ಅಪರಾಧವೆಸಗಿದ್ದರೆ ಅದನ್ನು ಒಡನೆಯೇ ತಿಳಿಸು. ಆ ಅಪರಾಧಿಯು ಬ್ರಾಹ್ಮಣ ಕುಲದವನಲ್ಲದೇ ಇದ್ದರೆ ನಾನು ಅವನಿಗೆ ಈಗಲೇ ಉಗ್ರಶಿಕ್ಷೆಯನ್ನು ವಿಧಿಸುತ್ತೇನೆ. ಮೂರು ಲೋಕಗಳಲ್ಲಾಗಲೀ, ಅಥವಾ ಅವುಗಳ ಹೊರಗಾಗಲೀ ಶ್ರೀಭಗವಂತನ ಭಕ್ತರನ್ನು ಬಿಟ್ಟು ಬೇರೆ ಯಾರೂ ನಿನ್ನಲ್ಲಿ ಅಪರಾಧಮಾಡಿ ನಿರ್ಭಯನಾಗಿಯೂ, ಸುಖಿಯಾಗಿಯೂ ಇರಲಾರನು. ॥24॥
ಮೂಲಮ್
(ಶ್ಲೋಕ - 25)
ವಕಂ ನ ತೇ ವಿತಿಲಕಂ ಮಲಿನಂ ವಿಹರ್ಷಂ
ಸಂರಂಭಭೀಮಮವಿಮೃಷ್ಟಮಪೇತರಾಗಮ್ ।
ಪಶ್ಯೇ ಸ್ತನಾವಪಿ ಶುಚೋಪಹತೌ ಸುಜಾತೌ
ಬಿಂಬಾಧರಂ ವಿಗತಕುಂಕುಮಪಂಕರಾಗಮ್ ॥
ಅನುವಾದ
ಪ್ರಿಯೇ! ನಿನ್ನ ಮುಖವು ತಿಲಕ ವಿಲ್ಲದೆ, ಕಾಂತಿಹೀನವಾಗಿ, ಬಾಡಿ-ಬಸವಳಿದು ಕೋಪದಿಂದ ಭೀಕರವಾಗಿ ಇದ್ದುದನ್ನು ನಾನು ಇಂದಿನವರೆಗೂ ಎಂದೂ ಕಂಡಿರಲಿಲ್ಲ. ಹಾಗೆಯೇ ನಿನ್ನ ಸುಂದರವಾದ ಸ್ತನಗಳು ಕಣ್ಣೀರಿನಿಂದ ನೆನೆದಿರುವುದಾಗಲೀ, ತೊಂಡೆ ಹಣ್ಣಿ ನಂತಿರುವ ತುಟಿಗಳು ಕೇಸರಿಯ ಲೇಪದಿಂದ ಕೆಂಪಾಗದೆ ಇರುವುದನ್ನು ನಾನು ಎಂದೂ ನೋಡಲಿಲ್ಲ. ॥25॥
ಮೂಲಮ್
(ಶ್ಲೋಕ - 26)
ತನ್ಮೇ ಪ್ರಸೀದ ಸುಹೃದಃ ಕೃತಕಿಲ್ಬಿಷಸ್ಯ
ಸ್ವೈರಂ ಗತಸ್ಯ ಮೃಗಯಾಂ ವ್ಯಸನಾತುರಸ್ಯ ।
ಕಾ ದೇವರಂ ವಶಗತಂ ಕುಸುಮಾಸ ವೇಗ-
ವಿಸ್ರಸ್ತಪೌಂಸ್ನ ಮುಶತೀ ನ ಭಜೇತ ಕೃತ್ಯೇ ॥
ಅನುವಾದ
ನಾನು ಬೇಟೆಯ ವ್ಯಸನದಿಂದ ನಿನ್ನನ್ನು ಕೇಳದೆಯೇ ಬೇಟೆಯಾಡಲು ಹೋಗಿ ನಿಜವಾಗಿಯೂ ಅಪರಾಧವನ್ನು ಮಾಡಿರುವೆನು. ಆದರೂ ನಾನು ನಿನ್ನವನೆಂದು ತಿಳಿದು ನನ್ನಲ್ಲಿ ಪ್ರಸನ್ನಳಾಗು. ಮನ್ಮಥನ ವಿಷಮ ಬಾಣಗಳಿಂದ ಪೀಡಿತನಾಗಿ, ಸದಾ ತನಗೆ ಅಧೀನನಾಗಿ ಬೇಡಿಕೊಳ್ಳುತ್ತಿರುವ ತನ್ನ ಪ್ರಿಯನಾದ ಪತಿಯನ್ನು ಯಾವ ಕಾಮಿನಿಯು ತಾನೇ ಉಚಿತವಾದ ಕಾರ್ಯಕ್ಕಾಗಿ ಸ್ವೀಕರಿಸುವುದಿಲ್ಲ? ಹೀಗೆ ಸವಿಮಾತು-ವರ್ತನೆಗಳಿಂದ ಪುರಂಜನನು ತನ್ನ ಕಾಮಿನಿಯನ್ನು ಸಂತೈಸಿದನು. ॥26॥
ಅನುವಾದ (ಸಮಾಪ್ತಿಃ)
ಇಪ್ಪತ್ತಾರನೆಯ ಅಧ್ಯಾಯವು ಮುಗಿಯಿತು. ॥26॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಚತುರ್ಥಸ್ಕಂಧೇ ಪುರಂಜನೋಪಾಖ್ಯಾನೇ ಷಡ್ವಿಂಶೋಽಧ್ಯಾಯಃ ॥26॥