[ಇಪ್ಪತ್ತೈದನೆಯ ಅಧ್ಯಾಯ]
ಭಾಗಸೂಚನಾ
ಪುರಂಜನೋಪಾಖ್ಯಾನದ ಪ್ರಾರಂಭ
(ಶ್ಲೋಕ - 1)
ಮೂಲಮ್ (ವಾಚನಮ್)
ಮೈತ್ರೇಯ ಉವಾಚ
ಮೂಲಮ್
ಇತಿ ಸಂದಿಶ್ಯ ಭಗವಾನ್ ಬಾರ್ಹಿಷದೈರಭಿಪೂಜಿತಃ ।
ಪಶ್ಯತಾಂ ರಾಜಪುತ್ರಾಣಾಂ ತತ್ರೈವಾಂತರ್ದಧೇ ಹರಃ ॥
ಅನುವಾದ
ಶ್ರೀಮೈತ್ರೇಯರು ಹೇಳುತ್ತಾರೆ — ಎಲೈ ವಿದುರನೇ! ಭಗವಾನ್ ಶಂಕರನು ಹೀಗೆ ಪ್ರಚೇತಸರಿಗೆ ಉಪದೇಶಿಸಿದ ಬಳಿಕ ಪ್ರಚೇತಸರು ಶಂಕರನನ್ನು ತುಂಬು ಭಕ್ತಿಯಿಂದ ಪೂಜಿಸಿದರು. ಅನಂತರ ಆ ರಾಜಕುಮಾರರು ನೋಡುತ್ತಿರು ವಂತೆ ಶಿವನು ಅಂತರ್ಧಾನನಾದನು. ॥1॥
(ಶ್ಲೋಕ - 2)
ಮೂಲಮ್
ರುದ್ರಗೀತಂ ಭಗವತಃ ಸ್ತೋತ್ರಂ ಸರ್ವೇ ಪ್ರಚೇತಸಃ ।
ಜಪಂತಸ್ತೇ ತಪಸ್ತೇಪುರ್ವರ್ಷಾಣಾಮಯುತಂ ಜಲೇ ॥
ಅನುವಾದ
ಮತ್ತೆ ಪ್ರಾಚೇತಸರೆಲ್ಲರೂ ರುದ್ರದೇವರು ಉಪದೇಶಿಸಿದ ಸ್ತೋತ್ರ ವನ್ನು ಜಪಿಸುತ್ತಾ, ನೀರಿನಲ್ಲಿ ನಿಂತುಕೊಂಡು ಹತ್ತುಸಾವಿರ ವರ್ಷಗಳವರೆಗೆ ತಪಸ್ಸನ್ನು ಆಚರಿಸುತ್ತಿದ್ದರು. ॥2॥
(ಶ್ಲೋಕ - 3)
ಮೂಲಮ್
ಪ್ರಾಚೀನಬರ್ಹಿಷಂ ಕ್ಷತ್ತಃ ಕರ್ಮಸ್ವಾಸಕ್ತಮಾನಸಮ್ ।
ನಾರದೋಧ್ಯಾತ್ಮತತ್ತ್ವಜ್ಞಃ ಕೃಪಾಲುಃ ಪ್ರತ್ಯಬೋಧಯತ್ ॥
ಅನುವಾದ
ಇತ್ತ ಕಡೆ ಪ್ರಾಚೀನಬರ್ಹಿಯ ಚಿತ್ತವು ಕರ್ಮಕಾಂಡದಲ್ಲಿ ಅತ್ಯಂತ ಆಸಕ್ತವಾಗಿ ಅಧ್ಯಾತ್ಮದ ವಿಷಯದಲ್ಲಿ ಪ್ರೀತಿಯಿಲ್ಲದೇ ಇರುವುದನ್ನು ಗಮನಿಸಿ, ಅಧ್ಯಾತ್ಮವಿದ್ಯಾವಿಶಾರದರಾದ ಪರಮದಯಾಳುಗಳಾದ ನಾರದರು ಅವನ ಬಳಿಗೆ ಬಂದು ಹೀಗೆ ಉಪದೇಶಿಸಿದರು. ॥3॥
(ಶ್ಲೋಕ - 4)
ಮೂಲಮ್
ಶ್ರೇಯಸ್ತ್ವಂ ಕತಮದ್ರಾಜನ್ ಕರ್ಮಣಾತ್ಮನ ಈಹಸೇ ।
ದುಃಖಹಾನಿಃ ಸುಖಾವಾಪ್ತಿಃ ಶ್ರೇಯಸ್ತನ್ನೇಹ ಚೇಷ್ಯತೇ ॥
ಅನುವಾದ
ಎಲೈ ರಾಜನೇ! ಈ ಕರ್ಮಗಳ ಮೂಲಕ ನೀನು ತನ್ನ ಯಾವ ಶ್ರೇಯಸ್ಸನ್ನು ಪಡೆಯಲು ಇಚ್ಛಿಸುತ್ತಿರುವೆ? ದುಃಖದ ಆತ್ಯಂತಿಕನಾಶ ಮತ್ತು ಪರಮಾನಂದದ ಪ್ರಾಪ್ತಿಯ ಹೆಸರೇ ಶ್ರೇಯಸ್ಸಾಗಿದೆ. ಇದಾದರೋ ಕರ್ಮಗಳಿಂದಾಗುವುದಿಲ್ಲ. ॥4॥
(ಶ್ಲೋಕ - 5)
ಮೂಲಮ್ (ವಾಚನಮ್)
ರಾಜೋವಾಚ
ಮೂಲಮ್
ನ ಜಾನಾಮಿ ಮಹಾಭಾಗ ಪರಂ ಕರ್ಮಾಪವಿದ್ಧಧೀಃ ।
ಬ್ರೂಹಿ ಮೇ ವಿಮಲಂ ಜ್ಞಾನಂ ಯೇನ ಮುಚ್ಯೇಯ ಕರ್ಮಭಿಃ ॥
ಅನುವಾದ
ರಾಜನು ಹೇಳಿದನು — ಮಹಾಭಾಗವತರಾದ ನಾರದರೇ! ನನ್ನ ಬುದ್ಧಿಯು ಕರ್ಮದಲ್ಲೇ ಸಿಕ್ಕಿಹಾಕಿಕೊಂಡಿದೆ. ಅದರಿಂದ ಪರಮ ಶ್ರೇಯಸ್ಸೇನೆಂಬುದು ನನಗೆ ತಿಳಿಯದಾಗಿದೆ. ಈ ಕರ್ಮಬಂಧನದಿಂದ ನಾನು ಬಿಡುಗಡೆ ಹೊಂದುವಂತಹ ವಿಶುದ್ಧ ಜ್ಞಾನವನ್ನು ನೀವು ನನಗೆ ಉಪದೇಶಿಸಿರಿ. ॥5॥
(ಶ್ಲೋಕ - 6)
ಮೂಲಮ್
ಗೃಹೇಷು ಕೂಟಧರ್ಮೇಷು ಪುತ್ರದಾರಧನಾರ್ಥಧೀಃ ।
ನ ಪರಂ ವಿಂದತೇ ಮೂಢೋ ಭ್ರಾಮ್ಯನ್ಸಂಸಾರವರ್ತ್ಮಸು ॥
ಅನುವಾದ
ಕಪಟಧರ್ಮಮಯ ಗೃಹಸ್ಥಾಶ್ರಮದಲ್ಲೇ ಇದ್ದುಕೊಂಡು ಪತ್ನೀ, ಪುತ್ರ, ಧನ ಇವುಗಳನ್ನೇ ಪರಮ ಪುರುಷಾರ್ಥವೆಂದು ತಿಳಿಯುವವನಿಗೆ ಮತ್ತು ಅಜ್ಞಾನವಶದಿಂದ ಸಂಸಾರಾರಣ್ಯದಲ್ಲೇ ಅಲೆಯುತ್ತಾ ಇರುವುದರಿಂದ ಅವನಿಗೆ ಪರಮ ಶ್ರೇಯಸ್ಸು ದೊರೆಯುವುದಿಲ್ಲ. ॥6॥
(ಶ್ಲೋಕ - 7)
ಮೂಲಮ್ (ವಾಚನಮ್)
ನಾರದ ಉವಾಚ
ಮೂಲಮ್
ಭೋ ಭೋಃ ಪ್ರಜಾಪತೇ ರಾಜನ್ ಪಶೂನ್ಪಶ್ಯ ತ್ವಯಾಧ್ವರೇ ।
ಸಂಜ್ಞಾಪಿತಾಂಜೀವಸಂಘಾನ್ನಿರ್ಘೃಣೇನ ಸಹಸ್ರಶಃ ॥
ಅನುವಾದ
ಶ್ರೀನಾರದರು ಹೇಳಿದರು — ಎಲೈ ರಾಜೇಂದ್ರನೇ! ನೀನು ಯಜ್ಞದಲ್ಲಿ ನಿರ್ದಯೆಯಿಂದ ಸಾವಿರಾರು ಪಶು ಗಳನ್ನು ಬಲಿ ಕೊಟ್ಟಿರುವೆ. ಅವೆಲ್ಲವನ್ನು ಇದೋ ಆಕಾಶದಲ್ಲಿ ನೋಡು, ಎಂದು ತೋರಿಸಿದರು. ॥7॥
(ಶ್ಲೋಕ - 8)
ಮೂಲಮ್
ಏತೇ ತ್ವಾಂ ಸಂಪ್ರತೀಕ್ಷಂತೇ ಸ್ಮರಂತೋ ವೈಶಸಂ ತವ ।
ಸಂಪರೇತಮಯಃ ಕೂಟೈಶ್ಛಿಂದಂತ್ಯುತ್ಥಿತಮನ್ಯವಃ ॥
ಅನುವಾದ
ಅವೆಲ್ಲವೂ ನೀನು ಅವರಿಗೆ ಕೊಟ್ಟ ಹಿಂಸೆಯನ್ನು ನೆನಪಿಸಿಕೊಂಡು ಸೇಡು ತೀರಿಸಿಕೊಳ್ಳುವುದಕ್ಕಾಗಿ ನಿನ್ನ ದಾರಿಯನ್ನು ನೋಡುತ್ತಿವೆ. ನೀನು ಸತ್ತು ಪರಲೋಕಕ್ಕೆ ಹೋದಾಗ ಅವು ಅತ್ಯಂತ ಕ್ರೋಧದಿಂದ ತಮ್ಮ ಕಬ್ಬಿಣದಂತಹ ಕೊಂಬುಗಳಿಂದ ತಿವಿಯುವರು. ॥8॥
(ಶ್ಲೋಕ - 9)
ಮೂಲಮ್
ಅತ್ರ ತೇ ಕಥಯಿಷ್ಯೇಮುಮಿತಿಹಾಸಂ ಪುರಾತನಮ್ ।
ಪುರಂಜನಸ್ಯ ಚರಿತಂ ನಿಬೋಧ ಗದತೋ ಮಮ ॥
ಅನುವಾದ
ಇರಲಿ. ಈ ವಿಷಯದಲ್ಲಿ ನಾನು ನಿನಗೆ ಒಂದು ಪ್ರಾಚೀನ ಉಪಾಖ್ಯಾನವನ್ನು ಹೇಳುವೆನು. ಅದು ರಾಜಾ ಪುರಂಜನನ ಚರಿತ್ರೆ. ನೀನು ಸಾವಧಾನವಾಗಿ ಕೇಳುವವನಾಗು. ॥9॥
(ಶ್ಲೋಕ - 10)
ಮೂಲಮ್
ಆಸೀತ್ಪುರಂಜನೋ ನಾಮ ರಾಜಾ ರಾಜನ್ ಬೃಹಚ್ಛ್ರವಾಃ ।
ತಸ್ಯಾ ವಿಜ್ಞಾತನಾಮಾಸೀತ್ಸಖಾವಿಜ್ಞಾತಚೇಷ್ಟಿತಃ ॥
ಅನುವಾದ
ಎಲೈ ರಾಜನೇ! ಹಿಂದೆ ಪುರಂಜನ ನೆಂಬ ಓರ್ವ ಮಹಾಯಶಸ್ವಿಯಾದ ರಾಜನಿದ್ದನು. ಅವನಿಗೆ ಅವಿಜ್ಞಾತನೆಂಬ ಒಬ್ಬ ಸ್ನೇಹಿತನಿದ್ದನು. ಆ ಸ್ನೇಹಿತನ ಯಾವುದೇ ಕೆಲಸ-ಕಾರ್ಯಗಳು ಯಾರಿಗೂ ತಿಳಿಯುತ್ತಿರಲಿಲ್ಲ. ॥10॥
(ಶ್ಲೋಕ - 11)
ಮೂಲಮ್
ಸೋನ್ವೇಷಮಾಣಃ ಶರಣಂ ಬಭ್ರಾಮ ಪೃಥಿವೀಂ ಪ್ರಭುಃ ।
ನಾನುರೂಪಂ ಯದಾವಿಂದದಭೂತ್ಸ ವಿಮನಾ ಇವ ॥
ಅನುವಾದ
ರಾಜನು ತಾನು ವಾಸಮಾಡಲು ಯೋಗ್ಯವಾದ ಸ್ಥಾನವನ್ನು ಹುಡುಕುತ್ತಾ ಪೃಥಿವಿಯಲ್ಲೆಲ್ಲ ಅಡ್ಡಾಡಿದನು. ಆದರೂ ಅವನಿಗೆ ಯಾವುದೇ ಅನುಕೂಲಕರ ಸ್ಥಾನ ದೊರೆಯದಿದ್ದಾಗ ಅವನು ಬೇಸರಗೊಂಡನು. ॥11॥
(ಶ್ಲೋಕ - 12)
ಮೂಲಮ್
ನ ಸಾಧು ಮೇನೇ ತಾಃ ಸರ್ವಾ ಭೂತಲೇ ಯಾವತೀಃ ಪುರಃ ।
ಕಾಮಾನ್ ಕಾಮಯಮಾನೋಸೌ ತಸ್ಯ ತಸ್ಯೋಪಪತ್ತಯೇ ॥
ಅನುವಾದ
ಅವನಿಗೆ ನಾನಾ ಭೋಗಗಳ ಬಯಕೆ ಉತ್ಕಟವಾಗಿತ್ತು. ಅವುಗಳನ್ನು ಭೋಗಿಸಲಿಕ್ಕಾಗಿ ಅವನು ಜಗತ್ತಿನಲ್ಲಿ ನೋಡಿದ ಯಾವುದೇ ನಗರವು ಅವನಿಗೆ ಸರಿಬೀಳಲಿಲ್ಲ. ॥12॥
(ಶ್ಲೋಕ - 13)
ಮೂಲಮ್
ಸ ಏಕದಾ ಹಿಮವತೋ ದಕ್ಷಿಣೇಷ್ವಥ ಸಾನುಷು ।
ದದರ್ಶ ನವಭಿರ್ದ್ವಾರ್ಭಿಃ ಪುರಂ ಲಕ್ಷಿತಲಕ್ಷಣಾಮ್ ॥
ಅನುವಾದ
ಒಂದು ದಿನ ಅವನು ಹಿಮಾಲಯದ ದಕ್ಷಿಣದ ತಪ್ಪಲಿನ ಕರ್ಮಭೂಮಿಲ್ಲಿ ಒಂದು ಒಂಭತ್ತು ಬಾಗಿಲುಗಳುಳ್ಳ ನಗರವನ್ನು ನೋಡಿದನು. ಅದು ಎಲ್ಲ ಸುಲಕ್ಷಣಗಳಿಂದ ಸಂಪನ್ನವಾಗಿತ್ತು. ॥13॥
(ಶ್ಲೋಕ - 14)
ಮೂಲಮ್
ಪ್ರಾಕಾರೋಪವನಾಟ್ಟಾಲಪರಿಖೈರಕ್ಷತೋರಣೈಃ ।
ಸ್ವರ್ಣರೌಪ್ಯಾಯಸೈಃ ಶೃಂಗೈಃ ಸಂಕುಲಾಂ ಸರ್ವತೋ ಗೃಹೈಃ ॥
ಅನುವಾದ
ಅದರ ಸುತ್ತಲೂ ಎತ್ತರವಾದ ಕೋಟೆ-ಕೊತ್ತಲಗಳೂ, ಕಂದಕಗಳೂ ಶೋಭಿಸುತ್ತಿದ್ದವು. ಉದ್ಯಾನವನಗಳೂ, ಗವಾಕ್ಷಗಳೂ, ತೋರಣದ್ವಾರಗಳೂ, ಚಿನ್ನ, ಬೆಳ್ಳಿ, ಕಬ್ಬಿಣಗಳ ಕಲಶಗಳಿಂದ ರಮಣೀಯವಾಗಿದ್ದ ವಿಶಾಲವಾದ ಭವನಗಳೂ ಅದನ್ನು ಅಲಂಕರಿ ಸಿದ್ದವು. ॥14॥
(ಶ್ಲೋಕ - 15)
ಮೂಲಮ್
ನೀಲಸ್ಫಟಿಕವೈದೂರ್ಯಮುಕ್ತಾಮರಕತಾರುಣೈಃ ।
ಕ್ಲೃಪ್ತಹರ್ಮ್ಯಸ್ಥಲೀಂ ದೀಪ್ತಾಂ ಶ್ರಿಯಾ ಭೋಗವತೀಮಿವ ॥
ಅನುವಾದ
ಅಲ್ಲಿಯ ಭವನಗಳು ನೆಲಗಳು ಇಂದ್ರ ನೀಲಮಣಿ, ಸ್ಫಟಿಕ, ವಜ್ರ-ವೈಡೂರ್ಯ, ಮುತ್ತು, ಮರಕತ ಮಣಿ, ಕೆಂಪು ರತ್ನಗಳಿಂದ ಖಚಿತವಾಗಿದ್ದವು. ತನ್ನ ಕಾಂತಿಯಿಂದ ಅದು ನಾಗಗಳ ರಾಜಧಾನಿ ಯಾದ ಭೋಗವತಿ ನಗರದಂತೆ ಕಂಡು ಬರುತ್ತಿತ್ತು. ॥15॥
(ಶ್ಲೋಕ - 16)
ಮೂಲಮ್
ಸಭಾಚತ್ವರರಥ್ಯಾಭಿರಾಕ್ರೀಡಾಯತನಾಪಣೈಃ ।
ಚೈತ್ಯಧ್ವಜಪತಾಕಾಭಿರ್ಯುಕ್ತಾಂ ವಿದ್ರುಮವೇದಿಭಿಃ ॥
ಅನುವಾದ
ಅದರಲ್ಲಿ ಅಲ್ಲಲ್ಲಿ ಅನೇಕಸಭಾಭವನಗಳೂ, ಚೌಕಗಳೂ, ರಸ್ತೆಗಳೂ, ಕ್ರೀಡಾ ಗೃಹಗಳೂ, ಅಂಗಡಿಬೀದಿಗಳೂ, ವಿಶ್ರಾಂತಿಧಾಮಗಳೂ, ಬಾವುಟ ಪತಾಕೆಗಳೂ, ಹವಳದ ಜಗುಲಿಗಳೂ ರಾರಾಜಿಸುತ್ತಿದ್ದವು. ॥16॥
(ಶ್ಲೋಕ - 17)
ಮೂಲಮ್
ಪುರ್ಯಾಸ್ತು ಬಾಹ್ಯೋಪವನೇ ದಿವ್ಯದ್ರುಮಲತಾಕುಲೇ ।
ನದದ್ವಿಹಂಗಾಲಿಕುಲಕೋಲಾಹಲಜಲಾಶಯೇ ॥
ಅನುವಾದ
ಆ ನಗರದ ಹೊರಗೆ ದಿವ್ಯವಾದ ಮರ-ಬಳ್ಳಿಗಳಿಂದ ಕೂಡಿದ ಒಂದು ಸುಂದರವಾದ ಉದ್ಯಾನವನವೂ, ಅದರ ಮಧ್ಯದಲ್ಲಿ ಒಂದು ಸರೋವರವೂ ಶೋಭಿಸುತ್ತಿತ್ತು. ಅದರ ಅಕ್ಕ-ಪಕ್ಕಗಳಲ್ಲಿ ಬಗೆ-ಬಗೆಯ ಹಕ್ಕಿಗಳು ಚಿಲಿಪಿಲಿ ಗುಟ್ಟುತ್ತಿದ್ದವು. ದುಂಬಿಗಳು ಝೇಂಕರಿಸುತ್ತಿದ್ದವು. ॥17॥
(ಶ್ಲೋಕ - 18)
ಮೂಲಮ್
ಹಿಮನಿರ್ಝರವಿಪ್ರುಷ್ಮತ್ಕುಸುಮಾಕರವಾಯುನಾ ।
ಚಲತ್ಪ್ರವಾಲವಿಟಪನಲಿನೀತಟಸಂಪದಿ ॥
ಅನುವಾದ
ಸರೋವರದ ಪಕ್ಕದಲ್ಲಿದ್ದ ವೃಕ್ಷಗಳ ಕೊಂಬೆಗಳೂ ಮತ್ತು ಎಲೆಗಳೂ ಶೀತಲವಾದ ಝರಿಗಳು ನೀರಿನ ಹನಿಗಳು ಬೆರೆತಿದ್ದ ವಸಂತಮಾರುತದಿಂದ ಮೆಲ್ಲಗೆ ಅಲುಗಾಡುತ್ತಾ ದಡದಲ್ಲಿದ್ದ ನೆಲದ ಶೋಭೆಯನ್ನು ಹೆಚ್ಚಿಸಿದ್ದವು. ॥18॥
(ಶ್ಲೋಕ - 19)
ಮೂಲಮ್
ನಾನಾರಣ್ಯಮೃಗವ್ರಾತೈರನಾಬಾಧೇ ಮುನಿವ್ರತೈಃ ।
ಆಹೂತಂ ಮನ್ಯತೇ ಪಾಂಥೋ ಯತ್ರ ಕೋಕಿಲಕೂಜಿತೈಃ ॥
ಅನುವಾದ
ಅಲ್ಲಿಯ ಕಾಡುಮೃಗಗಳೂ ಕೂಡ ಮುನಿಗಳಿಗುಚಿತವಾದ ಅಹಿಂಸಾದಿ ವ್ರತಗಳನ್ನು ಪಾಲಿಸುತ್ತಿದ್ದವು. ಅದರಿಂದ ಅಲ್ಲಿ ಯಾರಿಗೂ ಯಾವ ವಿಧವಾದ ತೊಂದರೆಯೂ ಆಗುತ್ತಿರಲಿಲ್ಲ. ಆ ಉದ್ಯಾನ ವನದಲ್ಲಿ ಕೋಗಿಲೆಗಳು ಕುಹೂ-ಕುಹೂ ಎಂದು ಇಂಪಾದ ದನಿಗೈಯುತ್ತಾ ದಾರಿಹೋಕರಿಗೆ ‘ವಿಶ್ರಾಂತಿ ಪಡೆಯಲು ಇಲ್ಲಿಗೆ ಬನ್ನಿರಿ’ ಎಂದು ಸ್ವಾಗತಿಸು ತ್ತವೋ ಎಂಬ ಭ್ರಮೆಯುಂಟಾಗುತ್ತಿತ್ತು. ॥19॥
(ಶ್ಲೋಕ - 20)
ಮೂಲಮ್
ಯದೃಚ್ಛಯಾಗತಾಂ ತತ್ರ ದದರ್ಶ ಪ್ರಮದೋತ್ತಮಾಮ್ ।
ಭೃತ್ಯೈರ್ದಶಭಿರಾಯಾಂತೀಮೇಕೈಕಶತನಾಯಕೈಃ ॥
ಅನುವಾದ
ಆ ಅದ್ಭುತವಾದ ಉದ್ಯಾನವನದಲ್ಲಿ ಸಂಚರಿಸುತ್ತಿದ್ದ ಪುರಂಜನರಾಜನಿಗೆ ಆಗ ಅಕಸ್ಮಾತ್ತಾಗಿ ಅಲ್ಲಿಗೆ ಬರುತ್ತಿದ್ದ ಒಬ್ಬ ಸುಂದರಿಯು ಕಾಣಿಸಿದಳು. ಆಕೆಗೆ ಹತ್ತುಮಂದಿ ಸೇವಕರು ಬೆಂಗಾವಲಾಗಿದ್ದರು. ಆ ಸೇವಕರಲ್ಲಿ ಒಬ್ಬೊಬ್ಬನೂ ನೂರು ಮಂದಿ ಸ್ತ್ರೀಯರಿಗೆ ನಾಯಕರಾಗಿದ್ದರು.॥20॥
(ಶ್ಲೋಕ - 21)
ಮೂಲಮ್
ಪಂಚಶೀರ್ಷಾಹಿನಾ ಗುಪ್ತಾಂ ಪ್ರತೀಹಾರೇಣ ಸರ್ವತಃ ।
ಅನ್ವೇಷಮಾಣಾಮೃಷಭಮಪ್ರೌಢಾಂ ಕಾಮರೂಪಿಣೀಮ್ ॥
ಅನುವಾದ
ಐದು ಹೆಡೆಯ ಹಾವೊಂದು ಅವಳ ದ್ವಾರಪಾಲಕನಾಗಿದ್ದು, ಅಂಗರಕ್ಷಕನಾಗಿ ಅವಳನ್ನು ಎಲ್ಲೆಡೆಗಳಿಂದಲೂ ಕಾಪಾಡುತ್ತಿತ್ತು. ಮುಗ್ಧೆಯಾಗಿ ಇಷ್ಟಬಂದ ರೂಪವನ್ನು ಧರಿಸಬಲ್ಲವಳಾಗಿದ್ದ ಆ ರಮಣಿಯು ತನಗೆ ಅನುರೂಪನಾದ ರಮಣನನ್ನು ಅರಸುತ್ತಿದ್ದಳು. ॥21॥
(ಶ್ಲೋಕ - 22)
ಮೂಲಮ್
ಸುನಾಸಾಂ ಸುದತೀಂ ಬಾಲಾಂ ಸುಕಪೋಲಾಂ ವರಾನನಾಮ್ ।
ಸಮವಿನ್ಯಸ್ತಕರ್ಣಾಭ್ಯಾಂ ಬಿಭ್ರತೀಂ ಕುಂಡಲಶ್ರಿಯಮ್ ॥
ಅನುವಾದ
ಅವಳ ನೀಳವಾದ ಮೂಗು, ದಂತಪಂಕ್ತಿಗಳು, ಕಮನೀಯ ಕಪೋಲಗಳಿಂದ ಕೂಡಿದ ಮುಖವು ಬಹಳ ಸುಂದರವಾಗಿತ್ತು. ಅವಳಿಗೆ ತಕ್ಕುದಾದ ಕುಂಡಲಗಳು ಕಿವಿಗಳಲ್ಲಿ ಥಳ-ಥಳಿಸುತ್ತಿದ್ದುವು. ॥22॥
(ಶ್ಲೋಕ - 23)
ಮೂಲಮ್
ಪಿಶಂಗನೀವೀಂ ಸುಶ್ರೋಣೀಂ ಶ್ಯಾಮಾಂ ಕನಕಮೇಖಲಾಮ್ ।
ಪದ್ಭ್ಯಾಂ ಕ್ವಣದ್ಭ್ಯಾಂ ಚಲತೀಂ ನೂಪುರೈರ್ದೇವತಾಮಿವ ॥
ಅನುವಾದ
ಅವಳ ಮೈಬಣ್ಣ ಶ್ಯಾಮಲವಾಗಿದ್ದು, ನಡುವು ಸುಂದರ ವಾಗಿತ್ತು. ಹಳದಿಯ ಸೀರೆಯನ್ನುಟ್ಟು ಚಿನ್ನದ ಡಾಬನ್ನು ಧರಿಸಿ, ಕಾಲಂದುಗೆಗಳು ಝಣ-ಝಣಿಸುವಂತೆ ವೈಯ್ಯಾರ ದಿಂದ ನಡೆದುಬರುತ್ತಿದ್ದ ಆ ರಮಣಿಯು ಧರೆಗೆ ಇಳಿದು ಬಂದ ಓರ್ವದೇವಿಯಂತೆ ಕಾಣುತ್ತಿದ್ದಳು. ॥23॥
(ಶ್ಲೋಕ - 24)
ಮೂಲಮ್
ಸ್ತನೌ ವ್ಯಂಜಿತಕೈಶೋರೌ ಸಮವೃತ್ತೌ ನಿರಂತರೌ ।
ವಸಾಂತೇನ ನಿಗೂಹಂತೀಂ ವ್ರೀಡಯಾ ಗಜಗಾಮಿನೀಮ್ ॥
ಅನುವಾದ
ಆ ಗಜಗಾಮಿನಿಯು ತಾರುಣ್ಯವನ್ನು ಸೂಚಿಸುತ್ತಿರುವ ದುಂಡಾಗಿ ಒಂದಕ್ಕೊಂದು ಸೇರಿಕೊಂಡಿದ್ದ ತನ್ನ ಸ್ತನಗಳನ್ನು ಲಜ್ಜೆಯಿಂದ ಬಾರಿ-ಬಾರಿಗೂ ಸೆರಗಿನಿಂದ ಮುಚ್ಚಿಕೊಳ್ಳುತ್ತಿದ್ದಳು. ॥24॥
(ಶ್ಲೋಕ - 25)
ಮೂಲಮ್
ತಾಮಾಹ ಲಲಿತಂ ವೀರಃ ಸವ್ರೀಡಸ್ಮಿತಶೋಭನಾಮ್ ।
ಸ್ನಿಗ್ಧೇನಾಪಾಂಗಪುಂಖೇನ ಸ್ಪೃಷ್ಟಃ ಪ್ರೇಮೋದ್ಭ್ರಮದ್ಭ್ರುವಾ ॥
ಅನುವಾದ
ಲಜ್ಜೆಯಿಂದ ಕೂಡಿದ್ದ ಮುಗುಳು ನಗೆಯಿಂದ ಶೋಭಿಸುತ್ತಾ, ಪ್ರೇಮದಿಂದ ಕೂಡಿದ ಭ್ರೂಮಾಟದಿಂದಲೂ, ಮನೋ ಹರವಾದ ಕಡೆಗಣ್ಣ ನೋಟ ವೆಂಬ ಬಾಣದಿಂದಲೂ ಘಾಸಿಯಾದ ವೀರ ಪುರಂಜನ ರಾಜನು ಪರವಶನಾಗಿ ಧೈರ್ಯವನ್ನು ಕಳೆದು ಕೊಂಡು ಸವಿಮಾತುಗಳಿಂದ ಆಕೆಯನ್ನು ಹೀಗೆ ಪ್ರಶ್ನಿಸಿದನು. ॥25॥
(ಶ್ಲೋಕ - 26)
ಮೂಲಮ್
ಕಾ ತ್ವಂ ಕಂಜಪಲಾಶಾಕ್ಷಿ ಕಸ್ಯಾಸೀಹ ಕುತಃ ಸತಿ ।
ಇಮಾಮುಪಪುರೀಂ ಭೀರು ಕಿಂ ಚಿಕೀರ್ಷಸಿ ಶಂಸ ಮೇ ॥
ಅನುವಾದ
ಎಲೈ ಕಮಲಾಕ್ಷಿಯೇ! ನೀನು ಯಾರು? ಯಾರ ಮಗಳು? ಎಲ್ಲಿಂದ ಬರುತ್ತಿರುವೆ? ಸಾಧ್ವಿಯೇ! ಈ ಪುರಿಯ ಬಳಿ ಏನು ಮಾಡಬೇಕೆಂದಿರುವೆ? ॥26॥
(ಶ್ಲೋಕ - 27)
ಮೂಲಮ್
ಕ ಏತೇನುಪಥಾ ಯೇ ತ ಏಕಾದಶ ಮಹಾಭಟಾಃ ।
ಏತಾ ವಾ ಲಲನಾಃ ಸುಭ್ರು ಕೋಯಂ ತೇಹಿಃ ಪುರಃಸರಃ ॥
ಅನುವಾದ
ಎಲೈ ಭೀರುವೇ! ಬೆಂಗಾವಲಾಗಿ ನಿನ್ನನ್ನು ಹಿಂಬಾಲಿಸುತ್ತಿರುವ ಈ ಹನ್ನೊಂದು ಮಂದಿ ವೀರಭಟರು ಯಾರು? ಈ ಸ್ತ್ರೀಯರು ಯಾರು? ನಿನ್ನ ಮುಂದೆ ಕಾವಲಾಗಿ ಬರುತ್ತಿರುವ ಈ ಸರ್ಪವು ಯಾರು? ॥27॥
(ಶ್ಲೋಕ - 28)
ಮೂಲಮ್
ತ್ವಂ ಹ್ರೀರ್ಭವಾನ್ಯಸ್ಯಥ ವಾಗ್ರಮಾ ಪತಿಂ
ವಿಚಿನ್ವತೀ ಕಿಂ ಮುನಿವದ್ರಹೋವನೇ ।
ತ್ವದಂಘ್ರಿಕಾಮಾಪ್ತಸಮಸ್ತಕಾಮಂ
ಕ್ವ ಪದ್ಮಕೋಶಃ ಪತಿತಃ ಕರಾಗ್ರಾತ್ ॥
ಅನುವಾದ
ಸುಂದರಿಯೇ! ನೀನು ಪತಿಯನ್ನು ಅರಸುತ್ತಾ ಬಂದಿರುವ ಸಾಕ್ಷಾತ್ ಲಜ್ಜಾದೇವಿಯೋ, ಉಮಾ ದೇವಿಯೋ, ಸರಸ್ವತಿಯೋ ಅಥವಾ ರಮಾದೇವಿಯೋ? ನೀನು ಮುನಿಗಳಂತೆ ಈ ವನದಲ್ಲಿ ಏಕಾಂತವಾಸವನ್ನು ಏಕೆ ಮಾಡುತ್ತಿರುವೆ? ನಿನ್ನ ಚರಣಾನುಗ್ರಹದಿಂದಲೇ ಪತಿಯ ಎಲ್ಲ ಕಾಮನೆಗಳು ಈಡೇರಿದಂತಾಗುವುವು. ನೀನು ಲಕ್ಷ್ಮೀದೇವಿಯೇ ಆಗಿದ್ದರೆ ನಿನ್ನ ಕೈಯಲ್ಲಿದ್ದ ಲೀಲಾಕಮಲವು ಎಲ್ಲಿ ಬಿದ್ದು ಹೋಯಿತು? ॥28॥
(ಶ್ಲೋಕ - 29)
ಮೂಲಮ್
ನಾಸಾಂ ವರೋರ್ವನ್ಯತಮಾ ಭುವಿಸ್ಪೃಕ್
ಪುರೀಮಿಮಾಂ ವೀರವರೇಣ ಸಾಕಮ್ ।
ಅರ್ಹಸ್ಯಲಂಕರ್ತುಮದಭ್ರ ಕರ್ಮಣಾ
ಲೋಕಂ ಪರಂ ಶ್ರೀರಿವ ಯಜ್ಞಪುಂಸಾ ॥
ಅನುವಾದ
ಆದರೆ ನೀನು ಅವರಲ್ಲಿ ಯಾರೂ ಆಗಿರಲಾರೆ. ಏಕೆಂದರೆ, ನಿನ್ನ ಪಾದಗಳು ಭೂಮಿಯನ್ನು ಮುಟ್ಟುತ್ತಿವೆ. ನೀನು ಮನುಷ್ಯ ಸ್ತ್ರೀಯೇ ಆಗಿರಬೇಕು. ಒಳ್ಳೆಯದು, ಹಾಗಾದರೆ ಲಕ್ಷ್ಮೀದೇವಿಯು ಭಗವಾನ್ ವಿಷ್ಣುವಿನೊಡನೆ ವೈಕುಂಠವನ್ನು ಬೆಳಗುತ್ತಿರುವಂತೆ ನೀನು ವೀರವರನಾದ ನನ್ನೊಡನೆ ಈ ನಗರಿಯನ್ನು ಅಲಂಕರಿಸುವವಳಾಗು. ॥29॥
(ಶ್ಲೋಕ - 30)
ಮೂಲಮ್
ಯದೇಷ ಮಾಪಾಂಗವಿಖಂಡಿತೇಂದ್ರಿಯಂ
ಸವ್ರೀಡಭಾವಸ್ಮಿತವಿಭ್ರಮದ್ಭ್ರುವಾ ।
ತ್ವಯೋಪಸೃಷ್ಟೋ ಭಗವಾನ್ಮನೋಭವಃ
ಪ್ರಬಾಧತೇಥಾನುಗೃಹಾಣ ಶೋಭನೇ ॥
ಅನುವಾದ
ನಾನು ಮಹಾಪರಾ ಕ್ರಮಿಯೇ ಆಗಿದ್ದರೂ ಈಗ ನಿನ್ನ ಕಟಾಕ್ಷಗಳು ನನ್ನ ಮನಸ್ಸನ್ನು ಸೂರೆಗೊಂಡುಬಿಟ್ಟಿವೆ. ಲಜ್ಜೆಯಿಂದ ಕೂಡಿ ರತಿಭಾವದಿಂದ ತುಂಬಿರುವ ಕಿರುನಗೆಯಿಂದ ಕೂಡಿರುವ ನಿನ್ನ ಈ ಹುಬ್ಬುಗಳ ಪ್ರೇರಣೆಪಡೆದು ಕಡುಗಲಿಯಾದ ಕಾಮದೇವನು ನನ್ನನ್ನು ಪೀಡಿಸುತ್ತಿದ್ದಾನೆ. ಆದುದರಿಂದ ಸುಂದರಿಯೇ ನನ್ನಲ್ಲಿ ಕೃಪೆದೋರು. ॥30॥
(ಶ್ಲೋಕ - 31)
ಮೂಲಮ್
ತ್ವದಾನನಂ ಸುಭ್ರು ಸುತಾರಲೋಚನಂ
ವ್ಯಾಲಂಬಿನೀಲಾಲಕವೃಂದಸಂವೃತಮ್ ।
ಉನ್ನೀಯ ಮೇ ದರ್ಶಯ ವಲ್ಗುವಾಚಕಂ
ಯದ್ವ್ರೀಡಯಾ ನಾಭಿಮುಖಂ ಶುಚಿಸ್ಮಿತೇ ॥
ಅನುವಾದ
ಶುಚಿಯಾದ ಮುಗುಳ್ನಗೆಯುಳ್ಳ ಮೋಹಿನಿಯೇ! ಸುಮಧುರವಾದ ವಾಣಿಯನ್ನು ಸುರಿಸುವ ನಿನ್ನ ಮುಖಾರವಿಂದವನ್ನು ನಾಚಿಕೆಯಿಂದ ಏಕೆ ಹಿಂದಿರುಗಿಸಿಕೊಂಡಿರುವೆ? ಮುಖವನ್ನು ಮೇಲಕ್ಕೆತ್ತಿ ನನಗೆ ತೋರಿಸು. ಸುಂದರವಾದ ಹುಬ್ಬುಗಳಿಂದ ಕೂಡಿದ ವಿಶಾಲ ಕಣ್ಣುಗಳಿಂದ ಶೋಭಿಸುತ್ತಿರುವ ನಿನ್ನ ಈ ಮುಖಕಮಲವನ್ನು ಕಮನೀಯವಾದ ಕರಿಯ ಮುಂಗುರುಳುಗಳು ಆವರಿಸಿಕೊಂಡಿವೆ. ॥31॥
(ಶ್ಲೋಕ - 32)
ಮೂಲಮ್ (ವಾಚನಮ್)
ನಾರದ ಉವಾಚ
ಮೂಲಮ್
ಇತ್ಥಂ ಪುರಂಜನಂ ನಾರೀ ಯಾಚಮಾನಮಧೀರವತ್ ।
ಅಭ್ಯನಂದತ ತಂ ವೀರಂ ಹಸಂತೀ ವೀರ ಮೋಹಿತಾ ॥
ಅನುವಾದ
ಶ್ರೀನಾರದರು ಹೇಳುತ್ತಾರೆ — ಎಲೈ ರಾಜನೇ! ಪುರಂಜನ ರಾಜನು ದೈನ್ಯದಿಂದ ಬೇಡುತ್ತಿರುವುದನ್ನು ಕಂಡು ಆತನಲ್ಲಿ ಮೋಹಗೊಂಡ ಆ ರಮಣಿಯು ನಸುನಗುತ್ತಾ, ಅನುಮೋದಿ ಸುತ್ತಾ ಹೇಳತೊಡಗಿದಳು. ॥32॥
(ಶ್ಲೋಕ - 33)
ಮೂಲಮ್
ನ ವಿದಾಮ ವಯಂ ಸಮ್ಯಕ್ಕರ್ತಾರಂ ಪುರುಷರ್ಷಭ ।
ಆತ್ಮನಶ್ಚ ಪರಸ್ಯಾಪಿ ಗೋತ್ರಂ ನಾಮ ಚ ಯತ್ಕೃತಮ್ ॥
ಅನುವಾದ
ಎಲೈ ನರಪುಂಗವನೇ! ನಮ್ಮನ್ನು ಉಂಟುಮಾಡಿದವರು ಯಾರು ಎಂಬುದು ನಮಗೆ ಸರಿಯಾಗಿ ತಿಳಿಯದು. ನಮ್ಮ ಅಥವಾ ಬೇರೆಯವರ ಹೆಸರು ಕುಲಗೋತ್ರಗಳೂ ನಮಗೆ ತಿಳಿಯದು. ॥33॥
(ಶ್ಲೋಕ - 34)
ಮೂಲಮ್
ಇಹಾದ್ಯ ಸಂತಮಾತ್ಮಾನಂ ವಿದಾಮ ನ ತತಃ ಪರಮ್ ।
ಯೇನೇಯಂ ನಿರ್ಮಿತಾ ವೀರ ಪುರೀ ಶರಣಮಾತ್ಮನಃ ॥
ಅನುವಾದ
ವೀರವರನೇ! ಇಂದು ನಾವೆಲ್ಲರೂ ಈ ನಗರದಲ್ಲಿದ್ದೇವೆ ಇದನ್ನು ಬಿಟ್ಟು ನಾನು ಬೇರೇನೂ ತಿಳಿಯಲಾರೆ. ನಮಗೆ ವಾಸಿಸಲು ಈ ಪುರವನ್ನು ಯಾರು ರಚಿಸಿದರು? ಇದೂ ಕೂಡ ನನಗೆ ತಿಳಿಯದು. ॥34॥
(ಶ್ಲೋಕ - 35)
ಮೂಲಮ್
ಏತೇ ಸಖಾಯಃ ಸಖ್ಯೋ ಮೇ ನರಾ ನಾರ್ಯಶ್ಚ ಮಾನದ ।
ಸುಪ್ತಾಯಾಂ ಮಯಿ ಜಾಗರ್ತಿ ನಾಗೋಯಂ ಪಾಲಯನ್ ಪುರೀಮ್ ॥
ಅನುವಾದ
ಪ್ರಿಯನೇ! ಈ ಪುರುಷರು ನನ್ನ ಸ್ನೇಹಿತರು ಹಾಗೂ ಈ ಸ್ತ್ರೀಯರು ನನ್ನ ಗೆಳತಿಯರು. ಈ ಸರ್ಪವು ನನ್ನ ರಕ್ಷಕನು. ನಾನು ಮಲಗಿದಾಗಲೂ ಇದು ಎಚ್ಚರವಾಗಿದ್ದು ಈ ಪುರಿಯನ್ನು ರಕ್ಷಿಸುತ್ತಿದೆ. ॥35॥
(ಶ್ಲೋಕ - 36)
ಮೂಲಮ್
ದಿಷ್ಟ್ಯಾಗತೋಸಿ ಭದ್ರಂ ತೇ ಗ್ರಾಮ್ಯಾನ್ಕಾಮಾನಭೀಪ್ಸಸೇ ।
ಉದ್ವಹಿಷ್ಯಾಮಿ ತಾಂಸ್ತೇಹಂ ಸ್ವಬಂಧುಭಿರರಿಂದಮ ॥
ಅನುವಾದ
ಎಲೈ ಶತ್ರುಸೂದನನೇ! ನೀನು ಭಾಗ್ಯವಶದಿಂದ ಇಲ್ಲಿಗೆ ದಯಮಾಡಿಸಿರುವೆ. ಗ್ರಾಮ್ಯಸುಖಗಳನ್ನು ಬಯಸುತ್ತಿರುವೆ. ನಿನಗೆ ಮಂಗಳವಾಗಲೀ. ನಾನು ನನ್ನ ಗೆಳೆಯ-ಗೆಳತಿಯ ರೊಡನೆ ನಿನಗೆ ಎಲ್ಲ ವಿಷಯಸುಖಗಳನ್ನು ಒದಗಿಸಿಕೊಡುತ್ತಾ ಇರುವೆನು. ॥36॥
(ಶ್ಲೋಕ - 37)
ಮೂಲಮ್
ಇಮಾಂ ತ್ವಮಧಿತಿಷ್ಠಸ್ವ ಪುರೀಂ ನವಮುಖೀಂ ವಿಭೋ ।
ಮಯೋಪನೀತಾನ್ಗೃಹ್ಣಾನಃ ಕಾಮಭೋಗಾನ್ ಶತಂ ಸಮಾಃ ॥
ಅನುವಾದ
ಪ್ರಭೋ! ಒಂಭತ್ತು ಬಾಗಿಲುಗಳುಳ್ಳ ಈ ನಗರಿಯಲ್ಲಿ ಇಷ್ಟಬಂದ ಭೋಗಗಳನ್ನು ಅನುಭವಿಸುತ್ತಾ ನೀನು ನೂರಾರು ವರ್ಷಗಳ ಕಾಲ ಇಲ್ಲಿ ವಾಸಿಸುತ್ತಿರು. ॥37॥
(ಶ್ಲೋಕ - 38)
ಮೂಲಮ್
ಕಂ ನು ತ್ವದನ್ಯಂ ರಮಯೇ ಹ್ಯರತಿಜ್ಞಮಕೋವಿದಮ್ ।
ಅಸಂಪರಾಯಾಭಿಮುಖಮಶ್ವಸ್ತನವಿದಂ ಪಶುಮ್ ॥
ಅನುವಾದ
ನಾನು ನಿನ್ನನ್ನು ಬಿಟ್ಟು ಬೇರೆ ಯಾರ ಜೊತೆಯಲ್ಲಿ ರಮಿಸಲಿ? ಇತರ ಜನರಿಗೆ ರತಿಸುಖವೂ ಗೊತ್ತಿಲ್ಲ. ಭೋಗಗಳು ಯಾವುವು ಎಂಬುದನ್ನೂ ಅವರು ಅರಿಯರು. ಪರಲೋಕದ ವಿಚಾರವನ್ನೂ, ನಾಳೆ ಏನಾಗುವುದು ಎಂಬುದನ್ನೂ ತಿಳಿಯರು. ಅವರು ಪಶುಗಳಿಗೆ ಸಮಾನರು. ॥38॥
(ಶ್ಲೋಕ - 39)
ಮೂಲಮ್
ಧರ್ಮೋ ಹ್ಯತ್ರಾರ್ಥಕಾವೌ ಚ ಪ್ರಜಾನಂದೋಮೃತಂ ಯಶಃ ।
ಲೋಕಾ ವಿಶೋಕಾ ವಿರಜಾಯಾನ್ ನ ಕೇವಲಿನೋ ವಿದುಃ ॥
ಅನುವಾದ
ಆಹಾ! ಈ ಲೋಕದಲ್ಲಿ ಗೃಹಸ್ಥಾಶ್ರಮದಲ್ಲೇ ಧರ್ಮ, ಅರ್ಥ, ಕಾಮ, ಸಂತಾನ-ಸುಖ, ಮೋಕ್ಷ, ಸತ್ಕೀರ್ತಿ ಮತ್ತು ಸ್ವರ್ಗಾದಿ ದಿವ್ಯ ಲೋಕಗಳ ಪ್ರಾಪ್ತಿಯೂ ಆಗಬಲ್ಲದು. ಸಂಸಾರವನ್ನು ತೊರೆದ ಯತಿಗಳಾದರೋ ಇವೆಲ್ಲದರ ಕಲ್ಪನೆಯೇ ಮಾಡಲಾರರು. ॥39॥
ಮೂಲಮ್
(ಶ್ಲೋಕ - 40)
ಪಿತೃದೇವರ್ಷಿಮರ್ತ್ಯಾನಾಂ ಭೂತಾನಾಮಾತ್ಮನಶ್ಚ ಹ ।
ಕ್ಷೇಮ್ಯಂ ವದಂತಿ ಶರಣಂ ಭವೇಸ್ಮಿನ್ ಯದ್ ಗೃಹಾಶ್ರಮಃ ॥
ಅನುವಾದ
ಈ ಲೋಕದಲ್ಲಿ ಪಿತೃಗಳು, ದೇವತೆಗಳು, ಋಷಿಗಳು, ಮನುಷ್ಯರು ಇವರೆಲ್ಲರ ಹಾಗೂ ಸಮಸ್ತ ಪ್ರಾಣಿಗಳ ಮತ್ತು ತನ್ನದೂ ಕೂಡ ಶ್ರೇಯಸ್ಸಿನ ಏಕಮಾತ್ರ ಆಶ್ರಯ ಗೃಹಸ್ಥಾಶ್ರಮವೇ ಆಗಿದೆ ಎಂದು ಮಹಾ ಪುರುಷರು ಹೇಳಿರುವರು. ॥40॥
(ಶ್ಲೋಕ - 41)
ಮೂಲಮ್
ಕಾ ನಾಮ ವೀರ ವಿಖ್ಯಾತಂ ವದಾನ್ಯಂ ಪ್ರಿಯದರ್ಶನಮ್ ।
ನ ವೃಣೀತ ಪ್ರಿಯಂ ಪ್ರಾಪ್ತಂ ಮಾದೃಶೀ ತ್ವಾದೃಶಂ ಪತಿಮ್ ॥
ಅನುವಾದ
ಎಲೈ ವೀರಶಿರೋಮಣಿಯೇ! ತಾನಾಗಿಯೇ ಕಾಮಿಸಿ ಬಂದಿರುವ ನಿನ್ನಂತಹ ಸುಪ್ರಸಿದ್ಧನೂ, ಉದಾರಚಿತ್ತನೂ, ಸುಂದರನೂ ಆದ ಪತಿಯನ್ನು ಈ ಲೋಕದಲ್ಲಿ ನನ್ನಂತಹ ಯಾವ ಹೆಂಗಸು ತಾನೇ ವರಿಸುವುದಿಲ್ಲ? ॥41॥
(ಶ್ಲೋಕ - 42)
ಮೂಲಮ್
ಕಸ್ಯಾ ಮನಸ್ತೇ ಭುವಿ ಭೋಗಿಭೋಗಯೋಃ
ಸಿಯಾ ನ ಸಜ್ಜೇದ್ಭುಜಯೋರ್ಮಹಾಭುಜ ।
ಯೋನಾಥವರ್ಗಾಧಿಮಲಂ ಘೃಣೋದ್ಧತ-
ಸ್ಮಿತಾವಲೋಕೇನ ಚರತ್ಯಪೋಹಿತುಮ್ ॥
ಅನುವಾದ
ಮಹಾಬಾಹುವೇ! ಸರ್ಪದಂತೆ ದುಂಡಾಗಿ ಕೋಮಲ ವಾಗಿರುವ ನಿನ್ನ ಭುಜಗಳಲ್ಲಿ ಸ್ಥಾನವನ್ನು ಪಡೆಯಲು ಯಾವ ಕಾಮಿನಿಯ ಚಿತ್ತವು ತಾನೇ ಆಸೆಪಡುವುದಿಲ್ಲ! ನೀನು ಸುಂದರವಾದ ಮುಗುಳುನಗೆಯಿಂದ ಕೂಡಿದ ಕರುಣಾ ಪೂರ್ಣವಾದ ದೃಷ್ಟಿಯಿಂದ ನಮ್ಮಂತಹ ಅನಾಥೆಯರ ಮನಸ್ಸಿನ ಸಂತಾಪವನ್ನು ಶಮನಗೊಳಿಸುವುದಕ್ಕಾಗಿಯೇ ಭೂಮಿಯಲ್ಲಿ ಸಂಚರಿಸುತ್ತಿದ್ದೀಯೆ. ॥42॥
(ಶ್ಲೋಕ - 43)
ಮೂಲಮ್ (ವಾಚನಮ್)
ನಾರದ ಉವಾಚ
ಮೂಲಮ್
ಇತಿ ತೌ ದಂಪತೀ ತತ್ರ ಸಮುದ್ಯ ಸಮಯಂ ಮಿಥಃ ।
ತಾಂ ಪ್ರವಿಶ್ಯ ಪುರೀಂ ರಾಜನ್ಮುಮುದಾತೇ ಶತಂ ಸಮಾಃ ॥
ಅನುವಾದ
ಶ್ರೀನಾರದಮಹರ್ಷಿಗಳು ಹೇಳುತ್ತಾರೆ — ಎಲೈ ಪ್ರಾಚೀನ ಬರ್ಹಿನೃಪತಿಯೇ! ಹೀಗೆ ಆ ದಂಪತಿಗಳು ಪರಸ್ಪರ ಒಪ್ಪಂದ ಮಾಡಿಕೊಂಡು ಆ ನಗರಿಯನ್ನು ಪ್ರವೇಶಿಸಿ ನೂರುವರ್ಷಗಳ ಕಾಲ ಅಲ್ಲಿ ಆನಂದವನ್ನು ಅನುಭವಿಸಿದರು. ॥43॥
(ಶ್ಲೋಕ - 44)
ಮೂಲಮ್
ಉಪಗೀಯಮಾನೋ ಲಲಿತಂ ತತ್ರ ತತ್ರ ಚ ಗಾಯಕೈಃ ।
ಕ್ರೀಡನ್ಪರಿವೃತಃ ಸೀಭಿರ್ಹ್ರದಿನೀಮಾವಿಶಚ್ಛುಚೌ ॥
ಅನುವಾದ
ಸಂಗೀತಗಾರರು ಅಲ್ಲಲ್ಲಿ ಆ ರಾಜನ ಕೀರ್ತಿಯನ್ನು ಸುಮಧುರವಾಗಿ ಹಾಡುತ್ತಿದ್ದರು. ಬೇಸಿಗೆಯಕಾಲ ಬಂದಾಗ ಹಲವಾರು ಲಲನೆಯರೊಡನೆ ಕೂಡಿ ಅವರು ನದೀ ಸರೋವರಗಳಲ್ಲಿ ಜಲಕ್ರೀಡೆಯನ್ನಾಡುತ್ತಿದ್ದರು. ॥44॥
(ಶ್ಲೋಕ - 45)
ಮೂಲಮ್
ಸಪ್ತೋಪರಿ ಕೃತಾ ದ್ವಾರಃ ಪುರಸ್ತಸ್ಯಾಸ್ತು ದ್ವೇ ಅಧಃ ।
ಪೃಥಗ್ವಿಷಯಗತ್ಯರ್ಥಂ ತಸ್ಯಾಂ ಯಃ ಕಶ್ಚನೇಶ್ವರಃ ॥
ಅನುವಾದ
ಆ ನಗರಕ್ಕೆ ಇದ್ದ ಒಂಭತ್ತು ಬಾಗಿಲುಗಳಲ್ಲಿ ಏಳು ನಗರಿಯ ಮೇಲ್ಭಾಗದಲ್ಲಿದ್ದುವು. ಎರಡು ಕೆಳಭಾಗಕ್ಕೆ ಸೇರಿದ್ದವು. ಆ ನಗರಕ್ಕೆ ಯಾರೇ ರಾಜನಾಗಿ ಬಂದರೂ ಅವನಿಗೆ ಬೇರೆ- ಬೇರೆ ದೇಶಗಳಿಗೆ ಹೋಗುವುದಕ್ಕಾಗಿ ಆ ಬಾಗಿಲುಗಳು ನಿರ್ಮಿತವಾಗಿದ್ದವು. ॥45॥
(ಶ್ಲೋಕ - 46)
ಮೂಲಮ್
ಪಂಚ ದ್ವಾರಸ್ತು ಪೌರಸ್ತ್ಯಾ ದಕ್ಷಿಣೈಕಾ ತಥೋತ್ತರಾ ।
ಪಶ್ಚಿಮೇ ದ್ವೇ ಅಮೂಷಾಂ ತೇ ನಾಮಾನಿ ನೃಪ ವರ್ಣಯೇ ॥
ಅನುವಾದ
ರಾಜೇಂದ್ರನೇ! ಇವುಗಳಲ್ಲಿ ಐದು ಬಾಗಿಲುಗಳು ಪೂರ್ವದ ಕಡೆಗೂ, ಒಂದು ದಕ್ಷಿಣದ ಕಡೆಗೂ, ಒಂದು ಉತ್ತರದ ಕಡೆಗೂ, ಎರಡು ಪಶ್ಚಿಮದ ಕಡೆಗೂ ಇದ್ದವು. ಅವುಗಳ ಹೆಸರುಗಳನ್ನು ಹೇಳುವೆನು ಕೇಳು. ॥46॥
(ಶ್ಲೋಕ - 47)
ಮೂಲಮ್
ಖದ್ಯೋತಾವಿರ್ಮುಖೀ ಚ ಪ್ರಾಗ್ದ್ವಾರಾವೇಕತ್ರ ನಿರ್ಮಿತೇ ।
ವಿಭ್ರಾಜಿತಂ ಜನಪದಂ ಯಾತಿ ತಾಭ್ಯಾಂ ದ್ಯುಮತ್ಸಖಃ ॥
ಅನುವಾದ
ಪೂರ್ವದ ಕಡೆಗಿದ್ದ ಖದ್ಯೋತಾ ಮತ್ತು ಆವಿರ್ಮುಖೀ ಎಂಬ ಎರಡು ದ್ವಾರಗಳು ಒಂದೇ ಕಡೆ ನಿರ್ಮಿತವಾಗಿದ್ದವು. ಇವುಗಳ ಮೂಲಕ ಪುರಂಜನನು ತನ್ನ ಮಿತ್ರನಾದ ದ್ಯುಮಂತನೊಡನೆ ವಿಭ್ರಾಜಿತವೆಂಬ ದೇಶಕ್ಕೆ ಹೋಗುತ್ತಿದ್ದನು. ॥47॥
(ಶ್ಲೋಕ - 48)
ಮೂಲಮ್
ನಲಿನೀ ನಾಲಿನೀ ಚ ಪ್ರಾಗ್ದ್ವಾರಾವೇಕತ್ರ ನಿರ್ಮಿತೇ ।
ಅವಧೂತಸಖಸ್ತಾಭ್ಯಾಂ ವಿಷಯಂ ಯಾತಿ ಸೌರಭಮ್ ॥
ಅನುವಾದ
ಹಾಗೆಯೇ ಪೂರ್ವಕ್ಕಿದ್ದ ನಲಿನೀ ಮತ್ತು ನಾಲಿನೀ ಎಂಬ ಇನ್ನೆರಡು ದ್ವಾರಗಳೂ ಕೂಡ ಒಂದೇ ಕಡೆ ನಿರ್ಮಿತವಾಗಿದ್ದವು. ಅವುಗಳ ಮೂಲಕ ರಾಜನು ಅವಧೂತ ಎಂಬಾತನೊಡನೆ ಸೌರಭದೇಶಕ್ಕೆ ಹೋಗುತ್ತಿದ್ದನು. ॥48॥
(ಶ್ಲೋಕ - 49)
ಮೂಲಮ್
ಮುಖ್ಯಾ ನಾಮ ಪುರಸ್ತಾದ್ವಾಸ್ತಯಾಣಬಹೂದನೌ ।
ವಿಷಯೌ ಯಾತಿ ಪುರರಾಡ್ರಸಜ್ಞ ವಿಪಣಾನ್ವಿತಃ ॥
ಅನುವಾದ
ಪೂರ್ವದಿಕ್ಕಿಗಿದ್ದ ಮುಖ್ಯಾ ಎಂಬ ಐದನೆಯ ದ್ವಾರದ ಮೂಲಕ ರಾಜನು ರಸಜ್ಞ ಮತ್ತು ವಿಪಣ ಎಂಬುವರೊಡನೆ ಕ್ರಮವಾಗಿ ಬಹೂದನ ಹಾಗೂ ಆಪಣ ಎಂಬ ದೇಶಗಳಿಗೆ ಹೋಗುತ್ತಿದ್ದನು. ॥49॥
(ಶ್ಲೋಕ - 50)
ಮೂಲಮ್
ಪಿತೃಹೂರ್ನೃಪ ಪುರ್ಯಾ ದ್ವಾರ್ದಕ್ಷಿಣೇನ ಪುರಂಜನಃ ।
ರಾಷ್ಟ್ರಂ ದಕ್ಷಿಣಪಂಚಾಲಂ ಯಾತಿ ಶ್ರುತಧರಾನ್ವಿತಃ ॥
ಅನುವಾದ
ನಗರಿಯ ದಕ್ಷಿಣಕ್ಕಿದ್ದ ಪಿತೃಹೂ ಎಂಬ ದ್ವಾರದಿಂದ ಅವನು ಶ್ರುತಧರ ಎಂಬುವನೊಡನೆ ದಕ್ಷಿಣಪಾಂಚಾಲ ದೇಶಕ್ಕೆ ಹೋಗುತ್ತಿದ್ದನು. ॥50॥
(ಶ್ಲೋಕ - 51)
ಮೂಲಮ್
ದೇವಹೂರ್ನಾಮ ಪುರ್ಯಾ ದ್ವಾ ಉತ್ತರೇಣ ಪುರಂಜನಃ ।
ರಾಷ್ಟ್ರಮುತ್ತರಪಂಚಾಲಂ ಯಾತಿ ಶ್ರುತಧರಾನ್ವಿತಃ ॥
ಅನುವಾದ
ಹಾಗೆಯೇ ಉತ್ತರಕ್ಕಿದ್ದ ದೇವಹೂ ಎಂಬ ಬಾಗಿಲಿನಿಂದ ರಾಜನು ಶ್ರುತಧರ ನೊಡನೆ ಉತ್ತರ ಪಾಂಚಾಲ ದೇಶಕ್ಕೆ ಹೋಗುತ್ತಿದ್ದನು. ॥51॥
(ಶ್ಲೋಕ - 52)
ಮೂಲಮ್
ಆಸುರೀ ನಾಮ ಪಶ್ಚಾದ್ದ್ವಾಸ್ತಯಾ ಯಾತಿ ಪುರಂಜನಃ ।
ಗ್ರಾಮಕಂ ನಾಮ ವಿಷಯಂ ದುರ್ಮದೇನ ಸಮನ್ವಿತಃ ॥
ಅನುವಾದ
ಪಶ್ಚಿಮ ದಿಕ್ಕಿ ನಲ್ಲಿದ್ದ ಆಸುರೀ ಎಂಬ ದ್ವಾರದ ಮೂಲಕ ಅವನು ದುರ್ಮದನೊಂದಿಗೆ ಗ್ರಾಮಕವೆಂಬ ದೇಶಕ್ಕೆ ಹೋಗುತ್ತಿದ್ದನು. ॥52॥
(ಶ್ಲೋಕ - 53)
ಮೂಲಮ್
ನಿರ್ಋತಿರ್ನಾಮ ಪಶ್ಚಾದ್ದ್ವಾಸ್ತಯಾ ಯಾತಿ ಪುರಂಜನಃ ।
ವೈಶಸಂ ನಾಮ ವಿಷಯಂ ಲುಬ್ಧಕೇನ ಸಮನ್ವಿತಃ ॥
ಅನುವಾದ
ಹಾಗೆಯೇ ನಿರ್ಋತಿ ಎಂಬ ಹೆಸರಿನ ಮತ್ತೊಂದು ಪಶ್ಚಿಮದ ಬಾಗಿಲಿನಿಂದ ಲುಬ್ಧಕನೆಂಬುವನೊಡನೆ ಅವನು ವೈಶಸವೆಂಬ ದೇಶಕ್ಕೆ ಹೋಗುತ್ತಿದ್ದನು. ॥53॥
(ಶ್ಲೋಕ - 54)
ಮೂಲಮ್
ಅಂಧಾವಮೀಷಾಂ ಪೌರಾಣಾಂ ನಿರ್ವಾಕ್ಪೇಶಸ್ಕೃತಾವುಭೌ ।
ಅಕ್ಷಣ್ವತಾಮಧಿಪತಿಸ್ತಾಭ್ಯಾಂ ಯಾತಿ ಕರೋತಿ ಚ ॥
ಅನುವಾದ
ಆ ನಗರದ ನಿವಾಸಿಗಳಲ್ಲಿ ನಿರ್ವಾಕ್ ಮತ್ತು ಪೇಶಸ್ಕೃತ್ ಎಂಬ ಇಬ್ಬರು ಪೌರರು ಕುರುಡರಾಗಿದ್ದರು. ಪುರಂಜನರಾಜನು ಕಣ್ಣು ಗಳುಳ್ಳ ಪೌರರಿಗೆ ಅಧಿಪತಿಯಾಗಿದ್ದರೂ ಆ ಇಬ್ಬರು ಕುರುಡರ ಸಹಾಯದಿಂದಲೇ ಅಲ್ಲಲ್ಲಿಗೆ ಹೋಗಿ ಎಲ್ಲ ಬಗೆಯ ಕಾರ್ಯಗಳನ್ನು ಮಾಡುತ್ತಿದ್ದನು. ॥54॥
(ಶ್ಲೋಕ - 55)
ಮೂಲಮ್
ಸ ಯರ್ಹ್ಯಂತಃ ಪುರಗತೋ ವಿಷೂಚೀನಸಮನ್ವಿತಃ ।
ಮೋಹಂ ಪ್ರಸಾದಂ ಹರ್ಷಂ ವಾ ಯಾತಿ ಜಾಯಾತ್ಮಜೋದ್ಭವಮ್ ॥
ಅನುವಾದ
ರಾಜನು ಎಂದಾದರೂ ತನ್ನ ಪ್ರಧಾನ ಸೇವಕ ವಿಷೂಚೀನ ನೊಡನೆ ಅಂತಃಪುರಕ್ಕೆ ಹೋದಾಗ ಅವನಿಗೆ ಹೆಂಡತಿ, ಮಕ್ಕಳ ಕಾರಣದಿಂದ ಉಂಟಾಗುವ ಮೋಹ, ಪ್ರಸನ್ನತೆ, ಹರ್ಷ ಮುಂತಾದ ವಿಕಾರಗಳ ಅನುಭವವಾಗುತ್ತಿತ್ತು. ॥55॥
(ಶ್ಲೋಕ - 56)
ಮೂಲಮ್
ಏವಂ ಕರ್ಮಸು ಸಂಸಕ್ತಃ ಕಾಮಾತ್ಮಾ ವಂಚಿತೋಬುಧಃ ।
ಮಹಿಷೀ ಯದ್ಯದೀಹೇತ ತತ್ತದೇವಾನ್ವವರ್ತತ ॥
ಅನುವಾದ
ಆತನ ಚಿತ್ತವು ಕೆಲವೊಮ್ಮೆ ಪ್ರಸನ್ನವಾದರೆ, ಕೆಲವು ವೇಳೆ ಸಂತೋಷದಿಂದ ಹಿಗ್ಗುತ್ತಿತ್ತು. ಹೀಗೆ ಬಗೆ-ಬಗೆಯ ಕರ್ಮಗಳ ಬಲೆಯಲ್ಲಿ ಸಿಕ್ಕಿಹಾಕಿ ಕೊಂಡು ಕಾಮಪರವಶನಾಗಿ ರಾಜನು ಮೂಢನಾಗಿ ದೈವದ ವಂಚನೆಗೊಳಗಾಗಿದ್ದನು. ರಮಣಿಯ ಮೋಹಕ್ಕೆ ತುತ್ತಾಗಿ ಅವಳು ಏನೇನು ಮಾಡುತ್ತಿದ್ದಳೋ ಅವನ್ನೇ ಇವನೂ ಮಾಡತೊಡಗುತ್ತಿದ್ದನು. ॥56॥
(ಶ್ಲೋಕ - 57)
ಮೂಲಮ್
ಕ್ವಚಿತ್ಪಿಬಂತ್ಯಾಂ ಪಿಬತಿ ಮದಿರಾಂ ಮದವಿಹ್ವಲಃ ।
ಅಶ್ನಂತ್ಯಾಂ ಕ್ವಚಿದಶ್ನಾತಿ ಜಕ್ಷತ್ಯಾಂ ಸಹ ಜಕ್ಷತಿ ॥
ಅನುವಾದ
ಆಕೆಯು ಮದ್ಯಪಾನ ಮಾಡಿದಾಗ ಅವನೂ ಮದ್ಯವನ್ನು ಕುಡಿದು ಮತ್ತೇರುತ್ತಿದ್ದನು. ಅವಳು ಊಟ ಮಾಡಿದಾಗ ತಾನೂ ಊಟಮಾಡುತ್ತಿದ್ದನು. ಆಕೆಯು ಏನನ್ನಾದರೂ ಅಗಿಯುತ್ತಿದ್ದರೆ ತಾನೂ ಅಗಿಯುತ್ತಿದ್ದನು. ॥57॥
(ಶ್ಲೋಕ - 58)
ಮೂಲಮ್
ಕ್ವಚಿದ್ಗಾಯತಿ ಗಾಯಂತ್ಯಾಂ ರುದತ್ಯಾಂ ರುದತಿ ಕ್ವಚಿತ್ ।
ಕ್ವಚಿದ್ಧಸಂತ್ಯಾಂ ಹಸದಿ ಜಲ್ಪಂತ್ಯಾಮನು ಜಲ್ಪತಿ ॥
ಅನುವಾದ
ಹೀಗೆಯೇ ಆಕೆಯು ಹಾಡಿದರೆ ತಾನೂ ಹಾಡುವನು. ಅತ್ತಾಗ ಅಳುವನು. ನಗುವಾಗ ನಗುತ್ತಿದ್ದನು. ಅವಳು ಮಾತನಾಡಿದರೆ ಇವನೂ ಮಾತನಾಡುವನು. ॥58॥
(ಶ್ಲೋಕ - 59)
ಮೂಲಮ್
ಕ್ವಚಿದ್ಧಾವತಿ ಧಾವಂತ್ಯಾಂ ತಿಷ್ಠಂತ್ಯಾಮನು ತಿಷ್ಠತಿ ।
ಅನು ಶೇತೇ ಶಯಾನಾಯಾಮನ್ವಾಸ್ತೇ ಕ್ವಚಿದಾಸತೀಮ್ ॥
ಅನುವಾದ
ಅವಳು ಓಡಿದರೆ ತಾನೂ ಓಡುವನು. ನಿಂತರೆ ನಿಲ್ಲುವನು. ಮಲಗಿದರೆ ಅವಳೊಡನೆ ತಾನೂ ಮಲಗುತ್ತಿದ್ದನು. ಆಕೆಯು ಕುಳಿತುಕೊಂಡರೆ ತಾನೂ ಕುಳಿತುಕೊಳ್ಳುವನು. ॥59॥
(ಶ್ಲೋಕ - 60)
ಮೂಲಮ್
ಕ್ವಚಿಚ್ಛಣೋತಿ ಶೃಣ್ವಂತ್ಯಾಂ ಪಶ್ಯಂತ್ಯಾಮನು ಪಶ್ಯತಿ ।
ಕ್ವಚಿಜ್ಜಿಘ್ರತಿ ಜಿಘ್ರಂತ್ಯಾಂ ಸ್ಪೃಶಂತ್ಯಾಂ ಸ್ಪೃಶತಿ ಕ್ವಚಿತ್ ॥
ಅನುವಾದ
ಎಂದಾದರೂ ಅವಳು ಕೇಳತೊಡಗಿದರೆ ತಾನೂ ಕೇಳುತ್ತಿದ್ದನು. ನೋಡಿದರೆ ನೋಡು ತ್ತಿದ್ದನು. ಯಾವುದನ್ನಾದರೂ ಮೂಸಿದರೆ ಮೂಸುತ್ತಿದ್ದನು. ಏನನ್ನಾದರೂ ಮುಟ್ಟಿದರೆ ಮುಟ್ಟುತ್ತಿದ್ದನು. ॥60॥
(ಶ್ಲೋಕ - 61)
ಮೂಲಮ್
ಕ್ವಚಿಚ್ಚ ಶೋಚತೀಂ ಜಾಯಾಮನುಶೋಚತಿ ದೀನವತ್ ।
ಅನು ಹೃಷ್ಯತಿ ಹೃಷ್ಯಂತ್ಯಾಂ ಮುದಿತಾಮನು ಮೋದತೇ ॥
ಅನುವಾದ
ಎಂದಾ ದರೂ ಅವನ ಪ್ರಿಯೆಯು ಶೋಕಾಕುಲೆಯಾದರೆ ತಾನೂ ಅತ್ಯಂತ ದೀನನಂತೆ ವ್ಯಾಕುಲನಾಗುತ್ತಿದ್ದನು. ಆಕೆಯು ಪ್ರಸನ್ನವಾದರೆ ತಾನೂ ಸಂತೋಷ ಗೊಳ್ಳುವನು. ಅವಳು ಆನಂದಿತಳಾದರೆ ಇವನೂ ಆನಂದಿತನಾಗಿ ಹೋಗುತ್ತಿದ್ದನು. ॥61॥
(ಶ್ಲೋಕ - 62)
ಮೂಲಮ್
ವಿಪ್ರಲಬ್ಧೋ ಮಹಿಷ್ಯೈವಂ ಸರ್ವಪ್ರಕೃತಿವಂಚಿತಃ ।
ನೇಚ್ಛನ್ನನುಕರೋತ್ಯಜ್ಞಃ ಕ್ಲೈಬ್ಯಾತ್ಕ್ರೀಡಾಮೃಗೋ ಯಥಾ ॥
ಅನುವಾದ
ಹೀಗೆ ಪುರಂಜನ ರಾಜನು ತನ್ನ ಸುಂದರ ರಾಣಿಯಿಂದ ವಂಚನೆಗೊಳಗಾದನು. ಇಡೀ ಪ್ರಕೃತಿವರ್ಗ-ಪರಿಕರಗಳೇ ಅವನನ್ನು ವಂಚಿಸಿದವು. ಆ ಮೂರ್ಖನು ವಿವಶನಾಗಿ ಇಚ್ಛೆ ಇಲ್ಲದಿದ್ದರೂ, ಆಟದ ಕೋತಿಯು ಯಜಮಾನನ ಸಂಕೇತದಂತೆ ಕುಣಿಯುತ್ತದೆ. ಹಾಗೆಯೇ ಪ್ರಿಯೆಯ ಕೈಗೊಂಬೆಯಾಗಿ ಅವಳನ್ನೇ ಅನುಕರಣೆ ಮಾಡುತ್ತಿದ್ದನು.॥62॥
ಮೂಲಮ್
ಇಪ್ಪತ್ತೈದನೆಯ ಅಧ್ಯಾಯವು ಮುಗಿಯಿತು. ॥25॥
ಅನುವಾದ (ಸಮಾಪ್ತಿಃ)
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಚತುರ್ಥಸ್ಕಂಧೇ ಪುರಂಜನೋಪಾಖ್ಯಾನೇ ಪಂಚವಿಂಶೋಽಧ್ಯಾಯಃ ॥25॥