[ಇಪ್ಪತ್ತನಾಲ್ಕನೆಯ ಅಧ್ಯಾಯ]
ಭಾಗಸೂಚನಾ
ಪೃಥುವಿನ ವಂಶಪರಂಪರೆ ಮತ್ತು ಪ್ರಾಚೇತಸರಿಗೆ ಭಗವಾನ್ ರುದ್ರನಿಂದ ಉಪದೇಶ
(ಶ್ಲೋಕ - 1)
ಮೂಲಮ್ (ವಾಚನಮ್)
ಮೈತ್ರೇಯ ಉವಾಚ
ಮೂಲಮ್
ವಿಜಿತಾಶ್ವೋಧಿರಾಜಾಸೀತ್-
ಪೃಥುಪುತ್ರಃ ಪೃಥುಶ್ರವಾಃ ।
ಯವೀಯೋಭ್ಯೋದದಾತ್ಕಾಷ್ಠಾ
ಭ್ರಾತೃಭ್ಯೋ ಭ್ರಾತೃವತ್ಸಲಃ ॥
ಅನುವಾದ
ಶ್ರೀಮೈತ್ರೇಯರು ಹೇಳುತ್ತಾರೆ — ಎಲೈ ವಿದುರನೇ! ಪೃಥುಮಹಾರಾಜನ ಬಳಿಕ ಪರಮ ಯಶಸ್ವೀಯಾದ ಅವನ ಪುತ್ರ ವಿಜಿತಾಶ್ವನು ರಾಜನಾದನು. ಅವನಿಗೆ ತನ್ನ ತಮ್ಮಂದಿರಲ್ಲಿ ತುಂಬಿದ ವಾತ್ಸಲ್ಯವಿತ್ತು. ಅದರಿಂದ ಅವನು ನಾಲ್ಕೂ ತಮ್ಮಂದಿರಿಗೆ ಒಂದೊಂದು ದಿಕ್ಕಿನ ರಾಜ್ಯಾಧಿಕಾರವನ್ನು ಕೊಟ್ಟನು. ॥1॥
(ಶ್ಲೋಕ - 2)
ಮೂಲಮ್
ಹರ್ಯಕ್ಷಾಯಾದಿಶತ್ಪ್ರಾಚೀಂ ಧೂಮ್ರಕೇಶಾಯ ದಕ್ಷಿಣಾಮ್ ।
ಪ್ರತೀಚೀಂ ವೃಕಸಂಜ್ಞಾಯ ತುರ್ಯಾಂ ದ್ರವಿಣಸೇ ವಿಭುಃ ॥
ಅನುವಾದ
ಅದರಲ್ಲಿ ಹರ್ಯಕ್ಷನಿಗೆ ಪೂರ್ವದಿಕ್ಕಿನ, ಧೂಮ್ರಕೇಶನಿಗೆ ದಕ್ಷಿಣ ದಿಕ್ಕಿನ, ವೃಕನಿಗೆ ಪಶ್ಚಿಮದ ಮತ್ತು ದ್ರವಿಣನಿಗೆ ಉತ್ತರದ ರಾಜ್ಯಾಧಿಕಾರವನ್ನು ಕೊಟ್ಟನು.॥2॥
(ಶ್ಲೋಕ - 3)
ಮೂಲಮ್
ಅಂತರ್ಧಾನಗತಿಂ ಶಕ್ರಾಲ್ಲಬ್ಧ್ವಾಂತರ್ಧಾನಸಂಜ್ಞಿತಃ ।
ಅಪತ್ಯತ್ರಯಮಾಧತ್ತ ಶಿಖಂಡಿನ್ಯಾಂ ಸುಸಮ್ಮತಮ್ ॥
ಅನುವಾದ
ವಿಜಿತಾಶ್ವನು ಇಂದ್ರನಿಂದ ಅಂತರ್ಧಾನನಾಗುವ ಶಕ್ತಿಯನ್ನು ಸಂಪಾದಿಸಿದ್ದನು. ಅದರಿಂದ ಅವನನ್ನು ‘ಅಂತರ್ಧಾನ’ ಎಂಬ ಹೆಸರಿನಿಂದಲೂ ಕರೆಯುತ್ತಿದ್ದರು. ಅವನು ತನ್ನ ಪತ್ನಿಯಾದ ಶಿಖಂಡಿನಿಯಲ್ಲಿ ಮೂರು ಸತ್ಪುತ್ರರನ್ನು ಪಡೆದನು. ॥3॥
(ಶ್ಲೋಕ - 4)
ಮೂಲಮ್
ಪಾವಕಃ ಪವಮಾನಶ್ಚ ಶುಚಿರಿತ್ಯಗ್ನಯಃ ಪುರಾ ।
ವಸಿಷ್ಠ ಶಾಪಾದುತ್ಪನ್ನಾಃ ಪುನರ್ಯೋಗಗತಿಂ ಗತಾಃ ॥
ಅನುವಾದ
ಅವರ ಹೆಸರು ಪಾವಕ, ಪವಮಾನ ಮತ್ತು ಶುಚಿ ಎಂದಿತ್ತು. ಹಿಂದೆ ವಸಿಷ್ಠರ ಶಾಪದಿಂದ ಈ ಹೆಸರುಗಳಿಂದ ಅಗ್ನಿಯೇ ಇವರ ರೂಪದಿಂದ ಹುಟ್ಟಿದ್ದನು. ಮುಂದೆ ಯೋಗಮಾರ್ಗದಿಂದ ಇವರು ಪುನಃ ಅಗ್ನಿರೂಪವನ್ನೇ ಪಡೆದುಕೊಂಡರು. ॥4॥
(ಶ್ಲೋಕ - 5)
ಮೂಲಮ್
ಅಂತರ್ಧಾನೋ ನಭಸ್ವತ್ಯಾಂ ಹವಿರ್ಧಾನಮವಿಂದತ ।
ಯ ಇಂದ್ರಮಶ್ವಹರ್ತಾರಂ ವಿದ್ವಾನಪಿ ನ ಜಘ್ನಿವಾನ್ ॥
ಅನುವಾದ
ಅಂತರ್ಧಾನನಿಗೆ ನಭಸ್ವತಿ ಎಂಬ ಪತ್ನಿಯಲ್ಲಿ ಹವಿರ್ಧಾನ ನೆಂಬ ಪುತ್ರಶ್ರೇಷ್ಠನು ಜನಿಸಿದನು. ಅಂತರ್ಧಾನ ಮಹಾರಾಜನು ತುಂಬಾ ಉದಾರಿಯಾಗಿದ್ದನು. ಇಂದ್ರನು ತನ್ನ ತಂದೆ ಪೃಥು ಚಕ್ರವರ್ತಿಯ ಯಜ್ಞಾಶ್ವವನ್ನು ಅಪಹರಿಸಿ ಸಿಕ್ಕಿಬಿದ್ದಾಗಲೂ ಅವನು ಇಂದ್ರನನ್ನು ವಧಿಸಲಿಲ್ಲ. ॥5॥
(ಶ್ಲೋಕ - 6)
ಮೂಲಮ್
ರಾಜ್ಞಾಂ ವೃತ್ತಿಂ ಕರಾದಾನದಂಡಶುಲ್ಕಾದಿದಾರುಣಾಮ್ ।
ಮನ್ಯಮಾನೋ ದೀರ್ಘಸತ್ರವ್ಯಾಜೇನ ವಿಸಸರ್ಜ ಹ ॥
ಅನುವಾದ
ಕಂದಾಯವನ್ನು ಸಂಗ್ರಹಿಸುವುದು, ದಂಡನೆಯನ್ನು ವಿಧಿಸುವುದು, ದಂಡಹಾಕುವುದು ಮುಂತಾದವುಗಳು ಕಠೋರವಾದ ಕರ್ತವ್ಯಗಳು, ಇವುಗಳಿಂದ ಇತರರಿಗೆ ಕಷ್ಟವುಂಟಾಗುತ್ತದೆ ಎಂದು ಭಾವಿಸಿ ಅವನು ಒಂದು ದೀರ್ಘ ಕಾಲದ ಯಜ್ಞದೀಕ್ಷೆಯನ್ನು ಕೈಗೊಂಡನು. ಯಜ್ಞದೀಕ್ಷಿತನು ಲೌಕಿಕ ರಾಜಕಾರ್ಯದಲ್ಲಿ ಭಾಗವಹಿಸಬಾರದು ಎಂಬ ನೆಪದಿಂದ ತನ್ನ ರಾಜವೃತ್ತಿಯನ್ನು ಬಿಟ್ಟುಬಿಟ್ಟನು. ॥6॥
(ಶ್ಲೋಕ - 7)
ಮೂಲಮ್
ತತ್ರಾಪಿ ಹಂಸಂ ಪುರುಷಂ ಪರಮಾತ್ಮಾನಮಾತ್ಮದೃಕ್ ।
ಯಜಂಸ್ತಲ್ಲೋಕತಾಮಾಪ ಕುಶಲೇನ ಸಮಾಧಿನಾ ॥
ಅನುವಾದ
ಆ ಆತ್ಮಜ್ಞಾನಿಯಾದ ರಾಜನು ಯಜ್ಞಕಾರ್ಯದಲ್ಲಿ ತೊಡಗಿರು ವಾಗಲೇ ಭಕ್ತಭಯಭಂಜಕನೂ, ಪರಿಪೂರ್ಣನೂ ಆದ ಪರಮಾತ್ಮನನ್ನು ಆರಾಧಿಸುತ್ತಾ ಸ್ಥಿರವಾದ ಸಮಾಧಿಯ ಮೂಲಕ ಶ್ರೀಭಗವಂತನ ದಿವ್ಯಲೋಕವನ್ನು ಪಡೆದುಕೊಂಡನು. ॥7॥
(ಶ್ಲೋಕ - 8)
ಮೂಲಮ್
ಹವಿರ್ಧಾನಾದ್ಧವಿರ್ಧಾನೀ ವಿದುರಾಸೂತ ಷಟ್ಸುತಾನ್ ।
ಬರ್ಹಿಷದಂ ಗಯಂ ಶುಕ್ಲಂ ಕೃಷ್ಣಂ ಸತ್ಯಂ ಜಿತವ್ರತಮ್ ॥
ಅನುವಾದ
ಎಲೈ ವಿದುರನೇ! ಮುಂದೆ ಹವಿರ್ಧಾನನು ತನ್ನ ಪತ್ನೀ ಹವಿರ್ಧಾನಿಯಲ್ಲಿ ಬರ್ಹಿಷದ, ಗಯ, ಶುಕ್ಲ, ಕೃಷ್ಣ, ಸತ್ಯ ಮತ್ತು ಜಿತವ್ರತ ಎಂಬ ಆರು ಪುತ್ರರನ್ನು ಪಡೆದನು. ॥8॥
(ಶ್ಲೋಕ - 9)
ಮೂಲಮ್
ಬರ್ಹಿಷತ್ ಸುಮಹಾಭಾಗೋ ಹಾವಿರ್ಧಾನಿಃ ಪ್ರಜಾಪತಿಃ ।
ಕ್ರಿಯಾಕಾಂಡೇಷು ನಿಷ್ಣಾತೋ ಯೋಗೇಷು ಚ ಕುರೂದ್ವಹ ॥
ಅನುವಾದ
ಕುರುಶ್ರೇಷ್ಠ ವಿದುರನೇ! ಇವರಲ್ಲಿ ಹವಿರ್ಧಾನನ ಪುತ್ರ ನಾದ ಮಹಾತ್ಮನಾದ ಬರ್ಹಿಷದನು ಯಜ್ಞಾದಿ ಕರ್ಮಕಾಂಡದಲ್ಲಿಯೂ, ಯೋಗಾಭ್ಯಾಸದಲ್ಲಿಯೂ ಕುಶಲನಾಗಿದ್ದನು. ಅವನು ಪ್ರಜಾಪತಿಯ ಪದವಿಯನ್ನು ಪಡೆದುಕೊಂಡನು. ॥9॥
(ಶ್ಲೋಕ - 10)
ಮೂಲಮ್
ಯಸ್ಯೇದಂ ದೇವಯಜನಮನುಯಜ್ಞಂ ವಿತನ್ವತಃ ।
ಪ್ರಾಚೀನಾಗ್ರೈಃ ಕುಶೈರಾಸೀದಾಸ್ತೃತಂ ವಸುಧಾತಲಮ್ ॥
ಅನುವಾದ
ಇವನು ನಾನಾ ಸ್ಥಾನಗಳಲ್ಲಿ ನಿರಂತರವಾಗಿ ಎಷ್ಟು ಯಜ್ಞಗಳನ್ನು ಮಾಡಿದ್ದನೆಂದರೆ, ಈ ಸಮಸ್ತ ಭೂ ಮಂಡಲವು ಆತನು ಯಜ್ಞದಲ್ಲಿ ಹರಡಿದ ಪೂರ್ವಾಗ್ರವಾದ ದರ್ಭೆಗಳಿಂದ ತುಂಬಿ ಹೋಯಿತು. ಆದ್ದರಿಂದ ಮುಂದೆ ಅವನು ‘ಪ್ರಾಚೀನಬರ್ಹಿ’ ಎಂಬ ಹೆಸರಿನಿಂದಲೇ ವಿಖ್ಯಾತನಾದನು. ॥10॥
(ಶ್ಲೋಕ - 11)
ಮೂಲಮ್
ಸಾಮುದ್ರೀಂ ದೇವದೇವೋಕ್ತಾಮುಪಯೇಮೇ ಶತದ್ರುತಿಮ್ ।
ಯಾಂ ವೀಕ್ಷ್ಯ ಚಾರುಸರ್ವಾಂಗೀಂ ಕಿಶೋರೀಂ ಸುಷ್ಠ್ವಲಂಕೃತಾಮ್ ।
ಪರಿಕ್ರಮಂತೀಮುದ್ವಾಹೇ ಚಕಮೇಗ್ನಿಃ ಶುಕೀಮಿವ ॥
ಅನುವಾದ
ಪ್ರಾಚೀನಬರ್ಹಿರಾಜನು ಬ್ರಹ್ಮದೇವರ ಮಾತಿನಂತೆ ಸಮುದ್ರನ ಕನ್ಯೆಯಾದ ಶತದ್ರುತಿಯೊಂದಿಗೆ ವಿವಾಹಿತ ನಾದನು. ಸರ್ವಾಂಗ ಸುಂದರಿಯಾದ ಆ ಶತದ್ರುತಿಯು ಸುಂದರವಾದ ಉಡಿಗೆ-ತೊಡಿಗೆಗಳಿಂದ ಅಲಂಕರಿಸಿಕೊಂಡು ವಿವಾಹಮಂಟಪಕ್ಕೆ ಬಂದು ಪತಿಯೊಡನೆ ಅಗ್ನಿಯನ್ನು ಪ್ರದಕ್ಷಿಣೆ ಮಾಡುತ್ತಿದ್ದಾಗ ಅಗ್ನಿದೇವನೇ ಹಿಂದೆ ಹೆಣ್ಣು ಗಿಳಿಯ ರೂಪವನ್ನು ಧರಿಸಿದ್ದ ಸ್ವಾಹಾದೇವಿಯನ್ನು ಕಾಮಿಸಿದಂತೆಯೇ ಆಕೆಯಲ್ಲಿ ಮೋಹಿತನಾದನು. ॥11॥
(ಶ್ಲೋಕ - 12)
ಮೂಲಮ್
ವಿಬುಧಾಸುರಗಂಧರ್ವಮುನಿಸಿದ್ಧನರೋರಗಾಃ ।
ವಿಜಿತಾಃ ಸೂರ್ಯಯಾ ದಿಕ್ಷು ಕ್ವಣಯಂತ್ಯೈವ ನೂಪುರೈಃ ॥
ಅನುವಾದ
ಮದುವಣಗಿತ್ತಿಯಾದ ಆಕೆಯು ಝಣ-ಝಣಿಸುವ ನೂಪುರಗಳನ್ನು ಧರಿಸಿ ಬಂದಾಗ ಆ ಕಾಲಂದುಗೆಗಳ ಧ್ವನಿಗೆ ದಶ-ದಿಕ್ಕುಗಳಲ್ಲಿರುವ ದೇವತೆಗಳು, ಅಸುರರು, ಗಂಧರ್ವರು, ಮುನಿಗಳು, ಸಿದ್ಧರು, ಮನುಷ್ಯರು, ನಾಗರು ಹೀಗೆ ಎಲ್ಲರೂ ಮನಸೋತು ಪರವಶರಾದರು. ॥12॥
(ಶ್ಲೋಕ - 13)
ಮೂಲಮ್
ಪ್ರಾಚೀನಬರ್ಹಿಷಃ ಪುತ್ರಾಃ ಶತದ್ರುತ್ಯಾಂ ದಶಾಭವನ್ ।
ತುಲ್ಯನಾಮವ್ರತಾಃ ಸರ್ವೇ ಧರ್ಮಸ್ನಾತಾಃ ಪ್ರಚೇತಸಃ ॥
ಅನುವಾದ
ಪ್ರಾಚೀನ ಬರ್ಹಿಯು ಶತದ್ರುತಿಯ ಗರ್ಭದಿಂದ ಪ್ರಚೇತಸರೆಂಬ ಹತ್ತು ಪುತ್ರರನ್ನು ಪಡೆದನು. ಅವರೆಲ್ಲರೂ ಅತ್ಯಂತ ಧರ್ಮ ಜ್ಞರಾಗಿದ್ದು, ಅವರ ಹೆಸರುಗಳು ಮತ್ತು ಆಚರಣೆಗಳು ಒಂದೇ ರೀತಿಯಲ್ಲಿದ್ದುವು. ॥13॥
(ಶ್ಲೋಕ - 14)
ಮೂಲಮ್
ಪಿತ್ರಾದಿಷ್ಟಾಃ ಪ್ರಜಾಸರ್ಗೇ ತಪಸೇರ್ಣವಮಾವಿಶನ್ ।
ದಶವರ್ಷಸಹಸ್ರಾಣಿ ತಪಸಾರ್ಚಂಸ್ತಪಸ್ಪತಿಮ್ ॥
ಅನುವಾದ
ತಂದೆಯು ಅವರಿಗೆ ಸಂತಾನವನ್ನು ಪಡೆಯಿರಿ ಎಂದು ಆದೇಶ ನೀಡಿದಾಗ ಅವರೆಲ್ಲರೂ ತಪಸ್ಸನ್ನಾಚರಿಸಲಿಕ್ಕಾಗಿ ಸಮುದ್ರವನ್ನು ಪ್ರವೇಶಿಸಿದರು. ಅಲ್ಲಿ ಹತ್ತುಸಾವಿರ ವರ್ಷಗಳ ಕಾಲ ತಪಸ್ಸನ್ನು ಮಾಡುತ್ತಾ ತಪಸ್ಸಿನ ಫಲವನ್ನು ನೀಡುವ ಶ್ರೀಹರಿಯನ್ನು ಆರಾಧಿಸಿದರು. ॥14॥
(ಶ್ಲೋಕ - 15)
ಮೂಲಮ್
ಯದುಕ್ತಂ ಪಥಿ ದೃಷ್ಟೇನ ಗಿರಿಶೇನ ಪ್ರಸೀದತಾ ।
ತದ್ಧ್ಯಾಯಂತೋ ಜಪಂತಶ್ಚ ಪೂಜಯಂತಶ್ಚ ಸಂಯತಾಃ ॥
ಅನುವಾದ
ಮನೆಯಿಂದ ತಪಸ್ಸಿಗೆ ಹೋಗುವಾಗ ದಾರಿಯಲ್ಲಿ ಶ್ರೀಮಹಾದೇವನು ಅವರಿಗೆ ದರ್ಶನವಿತ್ತು ಕರುಣೆಯಿಂದ ಉಪದೇಶ ಮಾಡಿದ ತತ್ತ್ವವನ್ನು ಕುರಿತು ಅವರು ಏಕಾಗ್ರತೆಯಿಂದ ಧ್ಯಾನ, ಜಪ, ಪೂಜೆಗಳನ್ನು ಆಚರಿಸುತ್ತಾ ಇದ್ದರು. ॥15॥
(ಶ್ಲೋಕ - 16)
ಮೂಲಮ್ (ವಾಚನಮ್)
ವಿದುರ ಉವಾಚ
ಮೂಲಮ್
ಪ್ರಚೇತಸಾಂ ಗಿರಿತ್ರೇಣ ಯಥಾಸೀತ್ಪಥಿ ಸಂಗಮಃ ।
ಯದುತಾಹ ಹರಃ ಪ್ರೀತಸ್ತನ್ನೋ ಬ್ರಹನ್ ವದಾರ್ಥವತ್ ॥
ಅನುವಾದ
ವಿದುರನು ಕೇಳಿದನು — ಮಹಾತ್ಮರೇ! ಪ್ರಚೇತಸರಿಗೆ ಮಾರ್ಗದಲ್ಲಿ ಶ್ರೀಮಹಾದೇವನ ಭೇಟಿ ಹೇಗಾಯಿತು? ಅವರ ಮೇಲೆ ಪ್ರಸನ್ನನಾಗಿ ಭಗವಾನ್ ಶಂಕರನು ಅವರಿಗೆ ಏನನ್ನು ಉಪದೇಶ ಮಾಡಿದನು? ಆ ಸಾರವತ್ತಾದ ಮಾತನ್ನು ನೀವು ಕೃಪೆಯಿಟ್ಟು ನನಗೆ ತಿಳಿಸಿರಿ. ॥16॥
(ಶ್ಲೋಕ - 17)
ಮೂಲಮ್
ಸಂಗಮಃ ಖಲು ವಿಪ್ರರ್ಷೇ ಶಿವೇನೇಹ ಶರೀರಿಣಾಮ್ ।
ದುರ್ಲಭೋ ಮುನಯೋ ದಧ್ಯುರಸಂಗಾದ್ಯಮಭೀಪ್ಸಿತಮ್ ॥
ಅನುವಾದ
ಬ್ರಹ್ಮರ್ಷಿಗಳೇ! ದೇಹಧಾರಿಗಳಾದ ಸಂಸಾರಿಗಳಿಗೆ ಶಿವನ ದರ್ಶನವಾಗುವುದು ಅತ್ಯಂತ ದುರ್ಲಭ. ಮುನಿಜನರೂ ಎಲ್ಲ ಬಗೆಯ ಆಸಕ್ತಿಯನ್ನು ಬಿಟ್ಟು ಅವನನ್ನು ಪಡೆಯುವುದಕ್ಕಾಗಿ ನಿರಂತರವಾಗಿ ಧ್ಯಾನಮಾಡಿದರೂ ಸುಲಭವಾಗಿ ಪಡೆಯಲಾಗುವುದಿಲ್ಲ. ಹೀಗಿರುವಾಗ ಇತರರ ವಿಷಯದಲ್ಲಿ ಹೇಳುವುದೇನಿದೆ? ॥17॥
(ಶ್ಲೋಕ - 18)
ಮೂಲಮ್
ಆತ್ಮಾರಾಮೋಪಿ ಯಸ್ತ್ವಸ್ಯ ಲೋಕಕಲ್ಪಸ್ಯ ರಾಧಸೇ ।
ಶಕ್ತ್ಯಾ ಯುಕ್ತೋ ವಿಚರತಿ ಘೋರಯಾ ಭಗವಾನ್ಭವಃ ॥
ಅನುವಾದ
ಭಗವಾನ್ ಶಂಕರನು ಆತ್ಮಾರಾಮನು. ತನಗಾಗಿ ಏನನ್ನೂ ಮಾಡಬೇಕಾಗಿಲ್ಲ. ಏನನ್ನೂ ಪಡೆಯ ಬೇಕಾಗಿಲ್ಲ; ಆದರೂ ಲೋಕರಕ್ಷಣೆಯ ದೃಷ್ಟಿಯಿಂದಲೇ ಅವನು ತನ್ನ ಘೋರರೂಪವಾದ ಶಕ್ತಿದೇವಿ ಯೊಡನೆ ಎಲ್ಲೆಲ್ಲಿಯೂ ಸಂಚರಿಸುತ್ತಿರುವನು.॥18॥
(ಶ್ಲೋಕ - 19)
ಮೂಲಮ್ (ವಾಚನಮ್)
ಮೈತ್ರೇಯ ಉವಾಚ
ಮೂಲಮ್
ಪ್ರಚೇತಸಃ ಪಿತುರ್ವಾಕ್ಯಂ ಶಿರಸಾದಾಯ ಸಾಧವಃ ।
ದಿಶಂ ಪ್ರತೀಚೀಂ ಪ್ರಯಯುಸ್ತಪಸ್ಯಾದೃತಚೇತಸಃ ॥
ಅನುವಾದ
ಶ್ರೀಮೈತ್ರೇಯರು ಹೇಳುತ್ತಾರೆ — ಎಲೈ ವಿದುರನೇ! ಸಾಧು ಸ್ವಭಾವವುಳ್ಳ ಪ್ರಚೇತಸರು ತಂದೆಯ ಮಾತನ್ನು ಶಿರಸಾವಹಿಸಿ ತಪಸ್ಸಿನಲ್ಲಿ ಚಿತ್ತವನ್ನು ನೆಟ್ಟು ಪಶ್ಚಿಮದಿಕ್ಕಿಗೆ ಹೊರಟರು. ॥19॥
(ಶ್ಲೋಕ - 20)
ಮೂಲಮ್
ಸಮುದ್ರಮುಪ ವಿಸ್ತೀರ್ಣಮಪಶ್ಯನ್ಸುಮಹತ್ಸರಃ ।
ಮಹನ್ಮನ ಇವ ಸ್ವಚ್ಛಂ ಪ್ರಸನ್ನಸಲಿಲಾಶಯಮ್ ॥
ಅನುವಾದ
ಹಾಗೇ ಹೋಗುತ್ತಿರುವಾಗ ಅವರಿಗೆ ಸಮುದ್ರದಂತೆ ವಿಶಾಲವಾದ ಒಂದು ಸರೋವರವು ಕಾಣಿಸಿತು. ಅದು ಮಹಾಪುರುಷರ ಮನಸ್ಸಿನಂತೆ ಸ್ವಚ್ಛ ವಾಗಿದ್ದು, ಅದರಲ್ಲಿದ್ದ ಮೀನುಗಳೇ ಮುಂತಾದ ಜಲಚರ ಪ್ರಾಣಿಗಳು ಪ್ರಸನ್ನವಾಗಿ ಕಾಣುತ್ತಿದ್ದುವು. ॥20॥
(ಶ್ಲೋಕ - 21)
ಮೂಲಮ್
ನೀಲರಕ್ತೋತ್ಪಲಾಂಭೋಜಕಹ್ಲಾರೇಂದೀವರಾಕರಮ್ ।
ಹಂಸಾಸಾರಸಚಕ್ರಾಹ್ವಕಾರಂಡವನಿಕೂಜಿತಮ್ ॥
ಅನುವಾದ
ಅದರಲ್ಲಿ ಕನ್ನೈದಿಲೆ, ಕೆಂದಾವರೆಗಳು ರಾತ್ರಿಯಲ್ಲಿ, ಹಗಲಿನಲ್ಲಿ, ಸಂಧ್ಯಾಸಮಯದಲ್ಲಿ ಅರಳುವ ಕಮಲಗಳು ಹಾಗೂ ಇಂದೀವರ ಮುಂತಾದ ಬೇರೆ ಅನೇಕ ಬಗೆಯ ಕಮಲಗಳು ಸುಶೋಭಿತವಾಗಿದ್ದವು. ಹಂಸ, ಸಾರಸ, ಚಕ್ರವಾಕ, ಕಾರಂಡ ವಗಳೇ ಮುಂತಾದ ನೀರುಹಕ್ಕಿಗಳು ಅದರ ದಡದಲ್ಲಿ ಕಲರವ ಮಾಡುತ್ತಿದ್ದವು.॥21॥
(ಶ್ಲೋಕ - 22)
ಮೂಲಮ್
ಮತ್ತಭ್ರಮರಸೌಸ್ವರ್ಯಹೃಷ್ಟರೋಮಲತಾಂಘ್ರಿಪಮ್ ।
ಪದ್ಮಕೋಶರಜೋ ದಿಕ್ಷು ವಿಕ್ಷಿಪತ್ಪವನೋತ್ಸವಮ್ ॥
ಅನುವಾದ
ಅದರ ಸುತ್ತಲೂ ಸೊಂಪಾಗಿ ಬೆಳೆದಿದ್ದ ಬಗೆ-ಬಗೆಯ ಮರ-ಬಳ್ಳಿಗಳ ಮೇಲೆ ಮತ್ತದುಂಬಿಗಳು ಝೇಂಕರಿಸುತ್ತಿದ್ದವು. ಅವುಗಳ ಮಧುರ ಧ್ವನಿಯಿಂದ ಗಿಡ-ಮರ-ಬಳ್ಳಿಗಳು ಹರ್ಷದಿಂದ ರೋಮಾಂಚಿತವಾಗಿವೆಯೋ ಎಂಬಂತೆ ಶೋಭಿಸುತ್ತಿದ್ದವು. ತಾವರೆಯ ಪೂಧೂಳಿಯನ್ನು ಗಾಳಿಯು ಎಲ್ಲೆಡೆ ಚೆಲ್ಲುತ್ತಾ ಜನರಿಗೆ ಆನಂದೋತ್ಸವವನ್ನು ಉಂಟುಮಾಡುವಂತಿತ್ತು.॥22॥
(ಶ್ಲೋಕ - 23)
ಮೂಲಮ್
ತತ್ರ ಗಾಂಧರ್ವಮಾಕರ್ಣ್ಯ ದಿವ್ಯಮಾರ್ಗಮನೋಹರಮ್ ।
ವಿಸಿಸ್ಮ್ಯೂ ರಾಜಪುತ್ರಾಸ್ತೇ ಮೃದಂಗಪಣವಾದ್ಯನು ॥
ಅನುವಾದ
ಅಲ್ಲಿ ಮೃದಂಗ, ಪಣವಗಳೇ ಮುಂತಾದ ವಾದ್ಯಗಳೊಂದಿಗೆ ಅನೇಕ ದಿವ್ಯ ರಾಗ-ರಾಗಿಣಿಯರ ಕ್ರಮದಿಂದ ಸಂಗೀತದ ಮಧುರ ಧ್ವನಿಯನ್ನು ಕೇಳಿ ಆ ರಾಜಕುಮಾರರಿಗೆ ತುಂಬಾ ಆಶ್ಚರ್ಯವಾಯಿತು. ॥23॥
(ಶ್ಲೋಕ - 24)
ಮೂಲಮ್
ತರ್ಹ್ಯೇವ ಸರಸಸ್ತಸ್ಮಾನ್ನಿಷ್ಕ್ರಾಮಂತಂ ಸಹಾನುಗಮ್ ।
ಉಪಗೀಯಮಾನಮಮರಪ್ರವರಂ ವಿಬುಧಾನುಗೈಃ ॥
(ಶ್ಲೋಕ - 25)
ಮೂಲಮ್
ತಪ್ತಹೇಮನಿಕಾಯಾಭಂ ಶಿತಿಕಂಠಂ ತ್ರಿಲೋಚನಮ್ ।
ಪ್ರಸಾದಸುಮುಖಂ ವೀಕ್ಷ್ಯ ಪ್ರಣೇಮುರ್ಜಾತಕೌತುಕಾಃ ॥
ಅನುವಾದ
ಅಷ್ಟರಲ್ಲೇ ಅವರಿಗೆ ಅಲ್ಲಿ ದೇವಾಧಿದೇವನಾದ ಭಗವಾನ್ ಶಂಕರನು ತನ್ನ ಅನುಚರರೊಂದಿಗೆ ಆ ಸರೋವರದಿಂದ ಹೊರಗೆ ಬರುತ್ತಿರುವುದು ಕಾಣಿಸಿತು. ಆ ಸ್ವಾಮಿಯ ದೇಹವು ಪುಟವಿಟ್ಟ ಭಂಗಾರದ ರಾಶಿಯಂತೆ ಥಳ-ಥಳಿಸುತ್ತಿತ್ತು. ನೀಲಿ ಬಣ್ಣದ ಕಂಠದಿಂದಲೂ, ವಿಶಾಲವಾದ ಮೂರು ಕಣ್ಣುಗಳಿಂದಲೂ ಒಪ್ಪುತ್ತಿದ್ದ ಶಂಕರನು ಪ್ರಸನ್ನಮುದ್ರೆಯಿಂದ ಭಕ್ತರ ಮೇಲೆ ಅನುಗ್ರಹವನ್ನು ಬೀರುತ್ತಿದ್ದನು. ಗಂಧರ್ವರು ಶ್ರುತಿ ಮಧುರವಾಗಿ ಆತನ ಗುಣಗಾನ ಮಾಡುತ್ತಿದ್ದರು. ಹೀಗೆ ಇದ್ದಕ್ಕಿದ್ದಂತೆ ಆತನ ದರ್ಶನ ಭಾಗ್ಯವನ್ನು ಪಡೆದ ಪ್ರಚೇತಸರಿಗೆ ತುಂಬಾ ಕುತೂಹಲವುಂಟಾಗಿ ಅವರು ಶಿವನ ಚರಣಗಳಲ್ಲಿ ಪ್ರಣಾಮಗಳನ್ನು ಸಲ್ಲಿಸಿದರು.॥24-25॥
(ಶ್ಲೋಕ - 26)
ಮೂಲಮ್
ಸ ತಾನ್ಪ್ರಪನ್ನಾರ್ತಿಹರೋ ಭಗವಾನ್ ಧರ್ಮವತ್ಸಲಃ ।
ಧರ್ಮಜ್ಞಾನ್ ಶೀಲಸಂಪನ್ನಾನ್ ಪ್ರೀತಃ ಪ್ರೀತಾನುವಾಚ ಹ ॥
ಅನುವಾದ
ಆಗ ಶರಣಾಗತರ ಭವಭಯಹಾರಿಯೂ, ಧರ್ಮ ವತ್ಸಲನೂ ಆದ ಭಗವಾನ್ ಶಂಕರನು ತನ್ನ ದರ್ಶನದಿಂದ ಸಂತಸಗೊಂಡ ಆ ಧರ್ಮಜ್ಞರೂ, ಶೀಲಸಂಪನ್ನರೂ ಆದ ರಾಜಕುಮಾರರಲ್ಲಿ ಪ್ರಸನ್ನನಾಗಿ ಇಂತೆಂದನು.॥26॥
(ಶ್ಲೋಕ - 27)
ಮೂಲಮ್ (ವಾಚನಮ್)
ಶ್ರೀರುದ್ರ ಉವಾಚ
ಮೂಲಮ್
ಯೂಯಂ ವೇದಿಷದಃ ಪುತ್ರಾ ವಿದಿತಂ ವಶ್ಚಿಕೀರ್ಷಿತಮ್ ।
ಅನುಗ್ರಹಾಯ ಭದ್ರಂ ವ ಏವಂ ಮೇ ದರ್ಶನಂ ಕೃತಮ್ ॥
ಅನುವಾದ
ಶ್ರೀಮಹಾದೇವನು ಹೇಳಿದನು — ನೀವು ಪ್ರಾಚೀನ ಬರ್ಹಿ ರಾಜನ ಸುಪುತ್ರರು. ನಿಮಗೆ ಮಂಗಳವಾಗಲಿ. ನೀವು ಏನು ಮಾಡಬೇಕೆಂಬುದನ್ನು ನಾನು ತಿಳಿದಿರುವೆ. ಈಗ ನಿಮ್ಮನ್ನು ಅನುಗ್ರಹಿಸುವುದಕ್ಕಾಗಿಯೇ ನಾನು ನಿಮಗೆ ದರ್ಶನವನ್ನು ನೀಡಿದ್ದೇನೆ. ॥27॥
(ಶ್ಲೋಕ - 28)
ಮೂಲಮ್
ಯಃ ಪರಂ ರಂಹಸಃ ಸಾಕ್ಷಾತಿಗುಣಾಜ್ಜೀವಸಂಜ್ಞಿತಾತ್ ।
ಭಗವಂತಂ ವಾಸುದೇವಂ ಪ್ರಪನ್ನಃ ಸ ಪ್ರಿಯೋ ಹಿ ಮೇ ॥
ಅನುವಾದ
ಯಾರು ಅವ್ಯಕ್ತ ಪ್ರಕೃತಿ ಹಾಗೂ ಜೀವಸಂಜ್ಞಕ ಪುರುಷ ಇವೆರಡರ ನಿಯಾಮಕನಾದ ಭಗವಾನ್ ವಾಸುದೇವನಲ್ಲಿ ಶರಣಾಗುತ್ತಾನೋ ಅವನು ನನಗೆ ಪರಮಪ್ರಿಯನು.॥28॥
(ಶ್ಲೋಕ - 29)
ಮೂಲಮ್
ಸ್ವಧರ್ಮನಿಷ್ಠಃ ಶತಜನ್ಮಭಿಃ ಪುಮಾನ್
ವಿರಿಂಚತಾಮೇತಿ ತತಃ ಪರಂ ಹಿ ಮಾಮ್ ।
ಅವ್ಯಾಕೃತಂ ಭಾಗವತೋಥ ವೈಷ್ಣವಂ
ಪದಂ ಯಥಾಹಂ ವಿಬುಧಾಃ ಕಲಾತ್ಯಯೇ ॥
ಅನುವಾದ
ತಮ್ಮ ವರ್ಣಾಶ್ರಮ ಧರ್ಮವನ್ನು ಚೆನ್ನಾಗಿ ಪಾಲಿಸುವ ಮನುಷ್ಯನು ನೂರುಜನ್ಮಗಳ ನಂತರ ಬ್ರಹ್ಮದೇವರ ಪದವನ್ನು ಪಡೆಯುತ್ತಾನೆ. ಅದಕ್ಕಿಂತಲೂ ಹೆಚ್ಚು ಪುಣ್ಯವನ್ನುಗಳಿಸಿದರೆ ಆತನು ನನ್ನನ್ನು ಹೊಂದುವನು. ಆದರೆ ಭಗವಂತನ ಅನನ್ಯ ಭಕ್ತನಾದರೋ ನೇರವಾಗಿ ಭಗವಾನ್ ವಿಷ್ಣುವಿನ ಆ ಪ್ರಪಂಚಾತೀತ ಪರಮಪದವನ್ನು ಪಡೆದುಕೊಳ್ಳುವನು. ನಾವು ಮತ್ತು ನಮ್ಮಂತಹ ಅಧಿಕಾರಿದೇವತೆಗಳೂ ನಮ್ಮ-ನಮ್ಮ ಅಧಿಕಾರದ ಕಾಲವು ಮುಗಿದ ನಂತರ ಹೋಗಿ ಸೇರುವ ಪರಮೋತ್ತಮ ಪದವದು.॥29॥
(ಶ್ಲೋಕ - 30)
ಮೂಲಮ್
ಅಥ ಭಾಗವತಾ ಯೂಯಂ ಪ್ರಿಯಾಃ ಸ್ಥ ಭಗವಾನ್ ಯಥಾ ।
ನ ಮದ್ಭಾಗವತಾನಾಂ ಚ ಪ್ರೇಯಾನನ್ಯೋಸ್ತಿ ಕರ್ಹಿಚಿತ್ ॥
ಅನುವಾದ
ನೀವು ಭಗವದ್ಭಕ್ತರಾಗಿರುವುದರಿಂದಲೇ ನನಗೂ ಶ್ರೀಭಗವಂತನಷ್ಟೇ ಪ್ರಿಯರಾಗಿದ್ದೀರಿ. ಅಂತೆಯೇ ಭಗವಂತನ ಭಕ್ತರಿಗೂ ಕೂಡ ನನಗಿಂತ ಮಿಗಿಲಾದ ಪ್ರಿಯನು ಯಾರು ಎಂದಿಗೂ ಇರುವುದಿಲ್ಲ. ॥30॥
(ಶ್ಲೋಕ - 31)
ಮೂಲಮ್
ಇದಂ ವಿವಿಕ್ತಂ ಜಪ್ತವ್ಯಂ ಪವಿತ್ರಂ ಮಂಗಲಂ ಪರಮ್ ।
ನಿಃಶ್ರೇಯಸಕರಂ ಚಾಪಿ ಶ್ರೂಯತಾಂ ತದ್ವದಾಮಿ ವಃ ॥
ಅನುವಾದ
ಈಗ ನಾನು ನಿಮಗೆ ಅತ್ಯಂತ ಪವಿತ್ರವೂ, ಮಂಗಳ ಕರವೂ, ಮೋಕ್ಷಪ್ರದವೂ ಆದ ಒಂದು ಸ್ತೋತ್ರವನ್ನು ಉಪದೇಶಿಸುತ್ತೇನೆ. ಇದನ್ನು ನೀವು ಶುದ್ಧವಾದ ಭಾವದಿಂದ ಜಪಿಸಬೇಕು.॥31॥
(ಶ್ಲೋಕ - 32)
ಮೂಲಮ್ (ವಾಚನಮ್)
ಮೈತ್ರೇಯ ಉವಾಚ
ಮೂಲಮ್
ಇತ್ಯನುಕ್ರೋಶಹೃದಯೋ ಭಗವಾನಾಹ ತಾಂಶಿವಃ ।
ಬದ್ಧಾಂಜಲೀನ್ರಾಜಪುತ್ರಾನ್ನಾರಾಯಣಪರೋ ವಚಃ ॥
ಅನುವಾದ
ಶ್ರೀಮೈತ್ರೇಯರು ಹೇಳುತ್ತಾರೆ — ಆಗ ಕರುಣಾರ್ದ್ರ ಹೃದಯನಾದ ನಾರಾಯಣಪರಾಯಣನಾದ ಭಗವಾನ್ ಶಿವನು ತನ್ನ ಮುಂದೆ ಕೈಜೋಡಿಸಿಕೊಂಡು ನಿಂತಿದ್ದ ರಾಜ ಪುತ್ರರಿಗೆ ಈ ಸ್ತೋತ್ರವನ್ನು ಉಪದೇಶಿಸಿದನು. ॥32॥
(ಶ್ಲೋಕ - 33)
ಮೂಲಮ್ (ವಾಚನಮ್)
ಶ್ರೀರುದ್ರ ಉವಾಚ
ಮೂಲಮ್
ಜಿತಂ ತ ಆತ್ಮವಿದ್ಧುರ್ಯಸ್ವಸ್ತಯೇ ಸ್ವಸ್ತಿರಸ್ತು ಮೇ ।
ಭವತಾ ರಾಧಸಾ ರಾದ್ಧಂ ಸರ್ವಸ್ಮಾ ಆತ್ಮನೇ ನಮಃ ॥
ಅನುವಾದ
ಭಗವಾನ್ ರುದ್ರನು ಸ್ತುತಿಮಾಡತೊಡಗಿದನು ಓ ಭಗವಂತಾ! ನಿನ್ನ ಜಯ(ಉತ್ಕರ್ಷ)ವು ಉಚ್ಚಕೋಟಿಯ ಆತ್ಮಜ್ಞಾನಿಗಳಿಗೆ ಶ್ರೇಯಸ್ಸಿಗಾಗಿಯೇ ನಿಜಾನಂದ ಲಾಭಕ್ಕಾಗಿಯೇ ಇದೆ. ಅದರಿಂದ ನನಗೂ ಕ್ಷೇಮ ಉಂಟಾಗಲಿ. ನೀನು ಸದಾ ನಿರತಿಶಯ ಪರಮಾನಂದ ಸ್ವರೂಪದಲ್ಲಿಯೇ ನೆಲೆಗೊಂಡಿರುವವನು. ಇಂತಹ ಸರ್ವಾತ್ಮಕ ಆತ್ಮಸ್ವರೂಪನಾದ ನಿನಗೆ ನಮಸ್ಕಾರವು.॥33॥
(ಶ್ಲೋಕ - 34)
ಮೂಲಮ್
ನಮಃ ಪಂಕಜನಾಭಾಯ ಭೂತಸೂಕ್ಷ್ಮೇಂದ್ರಿಯಾತ್ಮನೇ ।
ವಾಸುದೇವಾಯ ಶಾಂತಾಯ ಕೂಟಸ್ಥಾಯ ಸ್ವರೋಚಿಷೇ ॥
ಅನುವಾದ
ನೀನು ಪದ್ಮನಾಭ (ಸಮಸ್ತಲೋಕಗಳ ಆದಿಕಾರಣ)ನಾಗಿರುವೆ. ಭೂತಸೂಕ್ಷ್ಮ (ತನ್ಮಾತ್ರೆಗಳು) ಮತ್ತು ಇಂದ್ರಿಯಗಳ ನಿಯಾಮಕನೂ, ಶಾಂತನೂ, ವೃದ್ಧಿ ಕ್ಷಯಗಳನ್ನು ಹೊಂದದ ಏಕರಸನೂ ಹಾಗೂ ಸ್ವಯಂಪ್ರಕಾಶ ವಾಸುದೇವ (ಚಿತ್ತದ ಅಧಿಷ್ಠಾತೃ)ನೂ ನೀನೇ ಆಗಿರುವೆ. ಅಂತಹ ನಿನಗೆ ನಮಸ್ಕಾರವು.॥34॥
(ಶ್ಲೋಕ - 35)
ಮೂಲಮ್
ಸಂಕರ್ಷಣಾಯ ಸೂಕ್ಷ್ಮಾಯ ದುರಂತಾಯಾಂತಕಾಯ ಚ ।
ನಮೋ ವಿಶ್ವಪ್ರಬೋಧಾಯ ಪ್ರದ್ಯುಮ್ನಾಯಾಂತರಾತ್ಮನೇ ॥
ಅನುವಾದ
ಸೂಕ್ಷ್ಮ (ಅವ್ಯಕ್ತ)ರೂಪಿಯೂ, ಅಂತರಹಿತನೂ, ಸರ್ವ ಸಂಹಾರಕನೂ ಆಗಿರುವ ಸಂಕರ್ಷಣರೂಪಿಯಾದ ನಿನಗೆ ನಮಸ್ಕಾರವು. ವಿಶ್ವವನ್ನು ಎಚ್ಚರಗೊಳಿಸುವ, ವಿಶ್ವಕ್ಕೆ ಅಂತರಾತ್ಮನಾಗಿರುವ ಪ್ರದ್ಯುಮ್ನರೂಪಿಯಾದ ನಿನಗೆ ನಮಸ್ಕಾರವು.॥35॥
(ಶ್ಲೋಕ - 36)
ಮೂಲಮ್
ನಮೋ ನಮೋನಿರುದ್ಧಾಯ ಹೃಷೀಕೇಶೇಂದ್ರಿಯಾತ್ಮನೇ ।
ನಮಃ ಪರಮಹಂಸಾಯ ಪೂರ್ಣಾಯ ನಿಭೃತಾತ್ಮನೇ ॥
ಅನುವಾದ
ಇಂದ್ರಿಯಗಳಿಗೆ ಅಧಿಪತಿಯಾಗಿ, ಅವುಗಳ ಅಂತರಾತ್ಮನಾಗಿ ಮನೋತತ್ತ್ವಾಭಿಮಾನಿಯಾದ ಅನಿರುದ್ಧರೂಪಿಯಾದ ನಿನಗೆ ನಮಸ್ಕಾರವು. ನೀನೇ ನಿನ್ನ ತೇಜಸ್ಸಿನಿಂದ ಜಗತ್ತನ್ನು ತುಂಬಿರುವ ಸೂರ್ಯದೇವನಾಗಿರುವೆ. ಪೂರ್ಣನಾದ್ದರಿಂದ ವೃದ್ಧಿ-ಕ್ಷಯಗಳಿಲ್ಲದ ನಿನಗೆ ನಮಸ್ಕಾರವು. ॥36॥
(ಶ್ಲೋಕ - 37)
ಮೂಲಮ್
ಸ್ವರ್ಗಾಪವರ್ಗದ್ವಾರಾಯ ನಿತ್ಯಂ ಶುಚಿಷದೇ ನಮಃ ।
ನಮೋ ಹಿರಣ್ಯವೀರ್ಯಾಯ ಚಾತುರ್ಹೋತ್ರಾಯ ತಂತವೇ ॥
ಅನುವಾದ
ಸ್ವರ್ಗ ಮತ್ತು ಮೋಕ್ಷಗಳೆರಡಕ್ಕೂ ದ್ವಾರವಾಗಿರುವ ಹಾಗೂ ನಿರಂತರ ಅಂತಃ ಕರಣದಲ್ಲಿರುವ ನಿನಗೆ ನಮಸ್ಕಾರವು. ಸುವರ್ಣವನ್ನು ವೀರ್ಯವಾಗಿ ಉಳ್ಳವನೂ, ಚಾತುರ್ಹೋತ್ರ ಮುಂತಾದ ಯಜ್ಞಗಳಿಗೆ ಸಾಧನವಾಗಿ ಅವುಗಳನ್ನು ವಿಸ್ತರಿಸುವವನೂ ಆದ ಅಗ್ನಿದೇವ ಸ್ವರೂಪಿಯಾದ ನಿನಗೆ ನಮಸ್ಕಾರವು. ॥37॥
(ಶ್ಲೋಕ - 38)
ಮೂಲಮ್
ನಮ ಊರ್ಜ ಇಷೇ ತ್ರಯ್ಯಾಃ ಪತಯೇ ಯಜ್ಞರೇತಸೇ ।
ತೃಪ್ತಿದಾಯ ಚ ಜೀವಾನಾಂ ನಮಃ ಸರ್ವರಸಾತ್ಮನೇ ॥
ಅನುವಾದ
ದೇವತೆಗಳಿಗೂ, ಪಿತೃಗಳಿಗೂ ಪೋಷಕನಾದ ಸೋಮರೂಪಿಗೆ ನಮಸ್ಕಾರವು. ವೇದಗಳಿಗೆ ಪತಿಯಾದ ಯಜ್ಞೇಶ್ವರನಿಗೆ ನಮಸ್ಕಾರವು. ಎಲ್ಲ ಜೀವಿಗಳಿಗೂ ತೃಪ್ತಿ ಯನ್ನುಂಟುಮಾಡುವ ಸರ್ವರಸ (ಜಲ)ರೂಪನಾದ ನಿನಗೆ ನಮಸ್ಕಾರವು. ॥38॥
(ಶ್ಲೋಕ - 39)
ಮೂಲಮ್
ಸರ್ವಸತ್ತ್ವಾತ್ಮದೇಹಾಯ ವಿಶೇಷಾಯ ಸ್ಥವೀಯಸೇ ।
ನಮಸೈಲೋಕ್ಯಪಾಲಾಯ ಸಹ ಓಜೋಬಲಾಯ ಚ ॥
ಅನುವಾದ
ಎಲ್ಲ ಪ್ರಾಣಿಗಳಿಗೆ ನೆಲೆಯಾದ ಸ್ಥೂಲವಿರಾಟ್ ಪುರುಷರೂಪಿಗೆ, ಮೂರು ಲೋಕಗಳ ಪಾಲಕನಿಗೆ, ಮಾನಸಿಕ, ಐಂದ್ರಿಯಿಕ ಮತ್ತು ಶಾರೀರಿಕ ಶಕ್ತಿರೂಪಿಯಾದ ವಾಯು(ಪ್ರಾಣ)ರೂಪಿಗೆ ನಮೋ ನಮಃ ॥39॥
(ಶ್ಲೋಕ - 40)
ಮೂಲಮ್
ಅರ್ಥಲಿಂಗಾಯ ನಭಸೇ ನಮೋಂತರ್ಬಹಿರಾತ್ಮನೇ ।
ನಮಃ ಪುಣ್ಯಾಯ ಲೋಕಾಯ ಅಮುಷ್ಮೈ ಭೂರಿವರ್ಚಸೇ ॥
ಅನುವಾದ
ನೀನೇ ನಿನ್ನ ಗುಣ ಶಬ್ದದ ಮೂಲಕ ಸಮಸ್ತ ಪದಾರ್ಥಗಳ ಅರಿವನ್ನುಂಟುಮಾಡುತ್ತಾ ಒಳ-ಹೊರಗಿನ ಭೇದವನ್ನುಂಟುಮಾಡುವ ಆಕಾಶನಾಗಿರುವೆ. ನೀನೇ ಮಹಾನ್ ಪುಣ್ಯಗಳಿಂದ ದೊರೆಯುವಂತಹ ಪರಮ ತೇಜೋಮಯ ಸ್ವರ್ಗ-ವೈಕುಂಠವೇ ಮುಂತಾದ ಲೋಕಗಳೂ ಆಗಿರುವೆ. ಅಂತಹ ನಿನಗೆ ಪದೇ-ಪದೇ ನಮಸ್ಕಾರಗಳು. ॥40॥
(ಶ್ಲೋಕ - 41)
ಮೂಲಮ್
ಪ್ರವೃತ್ತಾಯ ನಿವೃತ್ತಾಯ ಪಿತೃದೇವಾಯ ಕರ್ಮಣೇ ।
ನಮೋಧರ್ಮವಿಪಾಕಾಯ ಮೃತ್ಯವೇ ದುಃಖದಾಯ ಚ ॥
ಅನುವಾದ
ಪಿತೃಲೋಕವನ್ನು ದೊರಕಿಸಿಕೊಡುವ ಪ್ರವೃತ್ತಿಕರ್ಮರೂಪಿಯೂ, ದೇವಲೋಕವನ್ನು ದೊರ ಕಿಸಿಕೊಡುವ ನಿವೃತ್ತಿಕರ್ಮರೂಪಿಯೂ ನೀನೇ ಆಗಿರುವೆ. ನೀನೇ ಅಧರ್ಮದ ಲಸ್ವರೂಪವಾದ ದುಃಖದಾಯಕ ಮೃತ್ಯುವೂ ಆಗಿರುವೆ. ಅಂತಹ ನಿನಗೆ ನಮಸ್ಕಾರವು. ॥41॥
(ಶ್ಲೋಕ - 42)
ಮೂಲಮ್
ನಮಸ್ತ ಆಶಿಷಾಮೀಶ ಮನವೇ ಕಾರಣಾತ್ಮನೇ ।
ನಮೋ ಧರ್ಮಾಯ ಬೃಹತೇ ಕೃಷ್ಣಾಯಾಕುಂಠಮೇಧಸೇ ।
ಪುರುಷಾಯ ಪುರಾಣಾಯ ಸಾಂಖ್ಯಯೋಗೇಶ್ವರಾಯ ಚ ॥
ಅನುವಾದ
ಸ್ವಾಮೀ! ನೀನೇ ಪುರಾಣಪುರುಷನೂ, ಸಾಂಖ್ಯ ಮತ್ತು ಯೋಗದ ಅಧೀಶ್ವರನಾದ ಭಗವಾನ್ ಶ್ರೀಕೃಷ್ಣನಾಗಿರುವೆ. ನೀನೇ ಎಲ್ಲ ರೀತಿಯ ಕಾಮನೆಗಳನ್ನು ಪೂರ್ಣಗೊಳಿಸುವ ಸಾಕ್ಷಾತ್ ಮಂತ್ರ ಸ್ವರೂಪಿಯೂ, ಮಹಾನ್ ಧರ್ಮಸ್ವರೂಪನೂ ಆಗಿರುವೆ. ನಿನ್ನ ಜ್ಞಾನಶಕ್ತಿಯು ಎಂದಿಗೂ ಕುಂಠಿತವಾಗುವಂತಹುದಲ್ಲ. ಅಂತಹ ನಿನಗೆ ನಮೋ ನಮಃ ॥42॥
(ಶ್ಲೋಕ - 43)
ಮೂಲಮ್
ಶಕ್ತಿತ್ರಯಸಮೇತಾಯ ಮೀಢುಷೇಹಂಕೃತಾತ್ಮನೇ ।
ಚೇತಆಕೂತಿರೂಪಾಯ ನಮೋ ವಾಚೋವಿಭೂತಯೇ ॥
ಅನುವಾದ
ನೀನೇ ಕರ್ತಾ-ಕರಣ-ಕರ್ಮ ಮೂರೂ ಶಕ್ತಿಗಳ ಏಕಮಾತ್ರ ಆಶ್ರಯನಾಗಿರುವೆ. ನೀನೇ ಅಹಂಕಾರತತ್ತ್ವಕ್ಕೆ ಅಧಿಪತಿಯಾದ ರುದ್ರರೂಪಿಯಾಗಿರುವೆ. ನೀನೇ ಜ್ಞಾನ ಮತ್ತು ಕ್ರಿಯಾಸ್ವರೂಪನಾಗಿರುವೆ ಹಾಗೂ ಪರಾ, ಪಶ್ಯಂತಿ, ಮಧ್ಯಮಾ, ವೈಖರಿ ಎಂಬ ನಾಲ್ಕು ಬಗೆಯ ವಾಣೀಪ್ರಕಾರನೂ ಆಗಿರುವ ನಿನಗೆ ನಮಸ್ಕಾರಗಳು.॥43॥
ಮೂಲಮ್
(ಶ್ಲೋಕ - 44)
ದರ್ಶನಂ ನೋ ದಿದೃಕ್ಷೂಣಾಂ ದೇಹಿ ಭಾಗವತಾರ್ಚಿತಮ್ ।
ರೂಪಂ ಪ್ರಿಯತಮಂ ಸ್ವಾನಾಂ ಸರ್ವೇಂದ್ರಿಯಗುಣಾಂಜನಮ್ ॥
ಅನುವಾದ
ಪ್ರಭುವೇ! ನಿನ್ನ ಮಂಗಳವಿಗ್ರಹವನ್ನು ನೋಡಬೇಕೆಂದು ಹಂಬಲಿಸುತ್ತಿರುವ ನಮಗೆಭಾಗವತ ಶ್ರೇಷ್ಠರಿಂದ ಪೂಜಿತನಾಗಿ, ಆತ್ಮೀಯಭಕ್ತರಿಗೆ ಅತ್ಯಂತ ಪ್ರಿಯತಮ ವಾಗಿ, ಎಲ್ಲ ಇಂದ್ರಿಯಗಳಿಗೂ ತೃಪ್ತಿಯನ್ನುಂಟುಮಾಡುವ ಗುಣಗಳಿಂದ ಸಂಪನ್ನನಾಗಿರುವ ಆ ದಿವ್ಯಮೂರ್ತಿಯ ದರ್ಶನವನ್ನು ದಯಪಾಲಿಸು. ॥44॥
(ಶ್ಲೋಕ - 45)
ಮೂಲಮ್
ಸ್ನಿಗ್ಧಪ್ರಾವೃಡ್ಘನಶ್ಯಾಮಂ ಸರ್ವಸೌಂದರ್ಯಸಂಗ್ರಹಮ್ ।
ಚಾರ್ವಾಯತಚತುರ್ಬಾಹುಂ ಸುಜಾತರುಚಿರಾನನಮ್ ॥
(ಶ್ಲೋಕ - 46)
ಮೂಲಮ್
ಪದ್ಮಕೋಶಪಲಾಶಾಕ್ಷಂ ಸುಂದರಭ್ರು ಸುನಾಸಿಕಮ್ ।
ಸುದ್ವಿಜಂ ಸುಕಪೋಲಾಸ್ಯಂ ಸಮಕರ್ಣವಿಭೂಷಣಮ್ ॥
ಅನುವಾದ
ಅದಾದರೋ ಕಾರ್ಮುಗಿಲಿನಂತೆ ಸ್ನಿಗ್ಧ ಶ್ಯಾಮಲವರ್ಣದಿಂದಿದ್ದು, ಸಮಸ್ತ ಸೌಂದರ್ಯದ ಸಾರ ಸಂಗ್ರಹವಾಗಿದೆ. ಸುಂದರವಾದ ನಾಲ್ಕು ವಿಶಾಲಭುಜಗಳು, ಮನೋಹರ ಮುಖಾರವಿಂದವು, ಕಮಲದ ಎಸಳಿನಂತಿರುವ ಕಣ್ಣುಗಳು, ಸುಂದರವಾದ ಹುಬ್ಬುಗಳು, ಎಳಸಾದ ಮೂಗು, ಮನೋಹರವಾದದಂತ ಪಂಕ್ತಿಗಳು, ಕಮನೀಯವಾದ ಕಪೋಲಗಳಿಂದ ಕೂಡಿದ ಸೊಗಸಾದ ಮುಖಮಂಡಲವು ಸಮವಾದ ಎರಡು ಕಿವಿಗಳಲ್ಲಿ ಆಭರಣಗಳು ಶೋಭಿಸುತ್ತಿವೆ. ॥45-46॥
(ಶ್ಲೋಕ - 47)
ಮೂಲಮ್
ಪ್ರೀತಿಪ್ರಹಸಿತಾಪಾಂಗಮಲಕೈರುಪಶೋಭಿತಮ್ ।
ಲಸತ್ಪಂಕಜಕಿಂಜಲ್ಕದುಕೂಲಂ ಮೃಷ್ಟಕುಂಡಲಮ್ ॥
(ಶ್ಲೋಕ - 48)
ಮೂಲಮ್
ಸ್ಫುರತ್ಕಿರೀಟವಲಯಹಾರನೂಪುರಮೇಖಲಮ್ ।
ಶಂಖಚಕ್ರಗದಾಪದ್ಮಮಾಲಾಮಣ್ಯುತ್ತಮರ್ಧಿಮತ್ ॥
ಅನುವಾದ
ಪ್ರೀತಿಯಿಂದ ನಗುವನ್ನು ಹೊರಸೂಸುವ ಕಡೆಗಣ್ಣುನೋಟ, ಕಪ್ಪಾದ ಮುಂಗುರುಳುಗಳು, ಕಮಲಪುಷ್ಪದ ಕೇಸರದಂತೆ ಕಾಂತಿಕಿರಣಗಳನ್ನು ಚೆಲ್ಲುತ್ತಿರುವ ಪೀತಾಂಬರ, ಥಳ-ಥಳಿಸುವ ಕುಂಡಲಗಳು, ಮಿರುಗುತ್ತಿರುವ ಕಿರೀಟ, ಕಂಕಣ, ಹಾರ, ಕಾಲಂದುಗೆ, ಓಡ್ಯಾಣಗಳೇ ಮುಂತಾದ ವಿಚಿತ್ರವಾದ ಆಭರಣಗಳು ಹಾಗೂ ಶಂಖ, ಚಕ್ರ, ಗದಾ, ಪದ್ಮ, ವನಮಾಲೆ, ಕೌಸ್ತುಭಮಣಿಯಿಂದಾಗಿ ಅವನ ರೂಪವು ಅಪೂರ್ವವಾದ ಕಾಂತಿಯಿಂದ ಕಂಗೊಳಿಸುತ್ತಿದೆ. ॥47-48॥
(ಶ್ಲೋಕ - 49)
ಮೂಲಮ್
ಸಿಂಹಸ್ಕಂಧತ್ವಿಷೋ ಬಿಭ್ರತ್ಸೌಭಗಗ್ರೀವಕೌಸ್ತುಭಮ್ ।
ಶ್ರಿಯಾನಪಾಯಿನ್ಯಾ ಕ್ಷಿಪ್ತನಿಕಷಾಶ್ಮೋರಸೋಲ್ಲಸತ್ ॥
ಅನುವಾದ
ಸಿಂಹದ ಹೆಗಲನ್ನು ಹೋಲುವ ಉಬ್ಬಿದ ಹೆಗಲಿನ ಸೊಗಸು, ಸುಂದರವಾದ ಕೊರಳಿನಲ್ಲಿ ಹೊಳೆಯುತ್ತಿರುವ ಹಾರ, ಕೇಯೂರ, ಕುಂಡಲಗಳ ಕಾಂತಿಯು, ಶ್ರೀಲಕ್ಷ್ಮೀದೇವಿಗೆ ನಿತ್ಯನಿವಾಸಮಂದಿರವಾಗಿ ಶ್ರೀವತ್ಸಚಿಹ್ನೆಯಿಂದ ಶೋಭಿತವಾದ ವಕ್ಷಃಸ್ಥಳವು ಕಣ್ಣುಗಳಿಗೆ ಹಬ್ಬವಾಗಿದೆ.॥49॥
(ಶ್ಲೋಕ - 50)
ಮೂಲಮ್
ಪೂರರೇಚಕಸಂವಿಗ್ನವಲಿವಲ್ಗುದಲೋದರಮ್ ।
ಪ್ರತಿಸಂಕ್ರಾಮಯದ್ವಿಶ್ವಂ ನಾಭ್ಯಾವರ್ತಗಭೀರಯಾ ॥
ಅನುವಾದ
ಉಚ್ಛ್ವಾಸ-ನಿಃಶ್ವಾಸಗಳ ಏರಿಳಿತದಿಂದ ಚಲಿಸುತ್ತಿರುವ ತ್ರಿವಳಿಗಳಿಂದ ಒಪ್ಪುತ್ತಿರುವ ತೆಳುವಾದ ಹೊಟ್ಟೆಯಲ್ಲಿ ತನ್ನಿಂದ ಹೊರಬಂದ ವಿಶ್ವವನ್ನು ತನ್ನಲ್ಲೇ ಲಯಗೊಳಿಸಿಕೊಂಡಿದೆಯೋ ಎಂಬಂತಿರುವ ಆಳವಾದ ಸುಳಿನಾಭಿಯು ಶೋಭಿಸುತ್ತಿದೆ.॥50॥
(ಶ್ಲೋಕ - 51)
ಮೂಲಮ್
ಶ್ಯಾಮಶ್ರೋಣ್ಯಧಿರೋಚಿಷ್ಣು ದುಕೂಲಸ್ವರ್ಣಮೇಖಲಮ್ ।
ಸಮಚಾರ್ವಂಘ್ರಿಜಂಘೋರುನಿಮ್ನಜಾನುಸುದರ್ಶನಮ್ ॥
ಅನುವಾದ
ಶ್ಯಾಮಲವಾದ ಕಟಿಭಾಗದಲ್ಲಿ ಪೀತಾಂಬರವೂ, ಉಡಿದಾರವೂ ರಾರಾಜಿಸುತ್ತಿವೆ. ಪರಸ್ಪರ ಸಮನಾಗಿರುವ ಪಾದಗಳು, ಮೇಗಾಲು, ಮೊಣ ಕಾಲು ಮತ್ತು ತೊಡೆಗಳಿಂದ ಕೂಡಿದ ನಿನ್ನ ದಿವ್ಯ ಶ್ರೀದೇಹವು ರಮಣೀಯವಾಗಿದೆ. ॥51॥
(ಶ್ಲೋಕ - 52)
ಮೂಲಮ್
ಪದಾ ಶರತ್ಪದ್ಮಪಲಾಶರೋಚಿಷಾ
ನಖದ್ಯುಭಿರ್ನೋಂತರಘಂ ವಿಧುನ್ವತಾ ।
ಪ್ರದರ್ಶಯ ಸ್ವೀಯಮಪಾಸ್ತ ಸಾಧ್ವಸಂ
ಪದಂ ಗುರೋ ಮಾರ್ಗಗುರುಸ್ತಮೋಜುಷಾಮ್ ॥
ಅನುವಾದ
ಶರತ್ಕಾಲದ ಕಮಲದಳದ ಕಾಂತಿಯನ್ನು ನಾಚಿಸುವ ಅಡಿದಾವರೆಗಳು, ಅದರಲ್ಲಿ ರಾರಾಜಿಸುತ್ತಿರುವ ಆ ಕಾಲು ಗುರುಗಳಿಂದ ಹೊರಹೊಮ್ಮುತ್ತಿರುವ ಪ್ರಕಾಶವು ಜೀವರ ಹೃದಯದ ಕತ್ತಲೆಯನ್ನು ತೊಡೆದುಹಾಕುತ್ತಿದೆ. ಭಕ್ತರ ಭಯವನ್ನು ನೀಗಿಸಿ ಅವರಿಗೆ ಆಶ್ರಯಸ್ವರೂಪವಾಗಿರುವ ನಿನ್ನ ದಿವ್ಯರೂಪದ ದರ್ಶನವನ್ನು ದಯಪಾಲಿಸು. ಜಗದ್ಗುರೋ! ಅಜ್ಞಾನದಿಂದೊಡಗೊಂಡ ನಮ್ಮಂತಹ ಬಡಜೀವಿಗಳಿಗೆ ದಾರಿ ತೋರುವ ಸದ್ಗುರುವು ನೀನೇ ಅಲ್ಲವೇ! ॥52॥
(ಶ್ಲೋಕ - 53)
ಮೂಲಮ್
ಏತದ್ರೂಪಮನುಧ್ಯೇಯಮಾತ್ಮಶುದ್ಧಿಮಭೀಪ್ಸತಾಮ್ ।
ಯದ್ಭಕ್ತಿಯೋಗೋಭಯದಃ ಸ್ವಧರ್ಮಮನುತಿಷ್ಠತಾಮ್ ॥
ಅನುವಾದ
ಪ್ರಭೋ! ಆತ್ಮಶುದ್ಧಿಯನ್ನು ಬಯಸುವವನು ಇಂತಹ ನಿನ್ನ ದಿವ್ಯಮೂರ್ತಿಯನ್ನೇ ಧ್ಯಾನಿಸಬೇಕು. ಇದರಲ್ಲಿ ನೆಲೆಗೊಂಡ ಭಕ್ತಿಯೋಗವೇ ಸ್ವಧರ್ಮಾಚರಣೆಯನ್ನು ಮಾಡುವವರಿಗೆ ಅಭಯವನ್ನು ನೀಡುವುದು. ॥53॥
(ಶ್ಲೋಕ - 54)
ಮೂಲಮ್
ಭವಾನ್ ಭಕ್ತಿಮತಾ ಲಭ್ಯೋ ದುರ್ಲಭಃ ಸರ್ವದೇಹಿನಾಮ್ ।
ಸ್ವಾರಾಜ್ಯಸ್ಯಾಪ್ಯಭಿಮತ ಏಕಾಂತೇನಾತ್ಮವಿದ್ಗತಿಃ ॥
ಅನುವಾದ
ಇತರ ಎಲ್ಲ ದೇಹಿಗಳಿಗೂ ದುರ್ಲಭನಾಗಿದ್ದರೂ, ಭಕ್ತರಿಗೆ ಸುಲಭವಾಗಿ ನೀನು ದೊರೆಯುವೆ. ಸ್ವರ್ಗದಲ್ಲಿರುವ ಇಂದ್ರಾದಿಗಳೂ ನಿನ್ನನ್ನೇ ಬಯಸುವರು. ಏಕಾಂತಭಾವವುಳ್ಳ ಆತ್ಮಜ್ಞರಿಗೆ ನೀನೇ ಗತಿಯಾಗಿರುವೆ. ॥54॥
(ಶ್ಲೋಕ - 55)
ಮೂಲಮ್
ತಂ ದುರಾರಾಧ್ಯಮಾರಾಧ್ಯ ಸತಾಮಪಿ ದುರಾಪಯಾ ।
ಏಕಾಂತಭಕ್ತ್ಯಾ ಕೋ ವಾಂಛೇತ್ಪಾದಮೂಲಂ ವಿನಾ ಬಹಿಃ ॥
ಅನುವಾದ
ಸತ್ಪುರುಷರಿಗೂ ದುರ್ಲಭವಾಗಿರುವ ಅನನ್ಯವಾದ ಮತ್ತು ದುಸ್ಸಾಧ್ಯವಾದ ಭಕ್ತಿಯೋಗದಿಂದ ನಿನ್ನನ್ನು ಪ್ರಸನ್ನಗೊಳಿಸಿದ ಬಳಿಕ ಆ ನಿನ್ನ ಪಾದಕಮಲಗಳನ್ನು ಬಿಟ್ಟು ಬೇರಾವುದನ್ನಾದರೂ ಯಾರು ತಾನೇ ಬಯಸಿಯಾರು? ॥55॥
(ಶ್ಲೋಕ - 56)
ಮೂಲಮ್
ಯತ್ರ ನಿರ್ವಿಷ್ಟಮರಣಂ ಕೃತಾಂತೋ ನಾಭಿಮನ್ಯತೇ ।
ವಿಶ್ವಂ ವಿಧ್ವಂಸಯನ್ ವೀರ್ಯಶೌರ್ಯವಿಸ್ಫೂರ್ಜಿತಭ್ರುವಾ ॥
ಅನುವಾದ
ವೀರ್ಯ-ಶೌರ್ಯಗಳಿಂದ ಅದುರುತ್ತಿರುವ ಹುಬ್ಬಿನಾಟಗಳಿಂದಲೇ ಇಡೀ ಜಗತ್ತನ್ನು ಸಂಹಾರಮಾಡುವ ಯಮನೂ ಕೂಡ ನಿನ್ನ ಚರಣಗಳಲ್ಲಿ ಶರಣಾದ ಪ್ರಾಣಿಗಳ ಮೇಲೆ ತನ್ನ ಅಧಿಕಾರವನ್ನು ನಡೆಸಲಾರನು.॥56॥
(ಶ್ಲೋಕ - 57)
ಮೂಲಮ್
ಕ್ಷಣಾರ್ಧೇನಾಪಿ ತುಲಯೇ ನ ಸ್ವರ್ಗಂ ನಾಪುನರ್ಭವಮ್ ।
ಭಗವತ್ಸಂಗಿಸಂಗಸ್ಯ ಮರ್ತ್ಯಾನಾಂ ಕಿಮುತಾಶಿಷಃ ॥
ಅನುವಾದ
ಭಗವಂತನ ಅಂತಹ ಪ್ರೇಮಿ ಭಕ್ತರ ಕ್ಷಣಾರ್ಧದ ಸತ್ಸಂಗ ಉಂಟಾದರೆ, ಅದಕ್ಕೆ ಸಮವಾಗಿ ಸ್ವರ್ಗವಾಗಲೀ, ಮೋಕ್ಷವಾಗಲೀ ನಾನು ಲೆಕ್ಕಿಸುವುದಿಲ್ಲ. ಹಾಗಿರುವಾಗ ಮರ್ತ್ಯ ಲೋಕದ ತುಚ್ಛ ಭೋಗಗಳ ಬಗ್ಗೆ ಹೇಳುವುದೇನಿದೆ?॥57॥
(ಶ್ಲೋಕ - 58)
ಮೂಲಮ್
ಅಥಾನಘಾಂಘ್ರೇಸ್ತವ ಕೀರ್ತಿತೀರ್ಥಯೋ-
ರಂತರ್ಬಹಿಃಸ್ನಾನವಿಧೂತಪಾಪ್ಮನಾಮ್ ।
ಭೂತೇಷ್ವನುಕ್ರೋಶಸುಸತ್ತ್ವಶೀಲಿನಾಂ
ಸ್ಯಾತ್ಸಂಗಮೋನುಗ್ರಹ ಏಷ ನಸ್ತವ ॥
ಅನುವಾದ
ಪ್ರಭೋ! ನಿನ್ನ ಚರಣಗಳು ಸಮಸ್ತ ಪಾಪರಾಶಿಯನ್ನು ಕಳೆಯುವಂತಹವುಗಳು. ನಿನ್ನ ಕೀರ್ತಿಯಲ್ಲಿಯೂ ಮತ್ತು ನಿನ್ನ ಶ್ರೀಪಾದತೀರ್ಥವಾದ ಗಂಗೆಯಲ್ಲಿ ಆಂತರಿಕ ಮತ್ತು ಬಾಹ್ಯ ಸ್ನಾನವನ್ನು ಮಾಡಿ ಮಾನಸಿಕ ಹಾಗೂ ಶಾರೀರಿಕ ಎರಡೂ ವಿಧದ ಪಾಪಗಳನ್ನು ತೊಳೆದುಕೊಳ್ಳುವರು. ಜೀವಿಗಳ ಕುರಿತು ದಯೆತೋರುವ, ರಾಗ-ದ್ವೇಷಾದಿ ರಹಿತ ಚಿತ್ತವುಳ್ಳ ಸರಳವಾದ ಸರ್ವಗುಣಗಳಿಂದ ಕೂಡಿದ ಆ ಭಾಗವತೋತ್ತಮರ ಸಂಗವು ನಮಗೆ ದೊರೆಯುತ್ತಿರಲಿ. ಇದೇ ಅನುಗ್ರಹವನ್ನು ನೀನು ನಮ್ಮ ಮೇಲೆ ತೋರಬೇಕು. ॥58॥
(ಶ್ಲೋಕ - 59)
ಮೂಲಮ್
ನ ಯಸ್ಯ ಚಿತ್ತಂ ಬಹಿರರ್ಥವಿಭ್ರಮಂ
ತಮೋಗುಹಾಯಾಂ ಚ ವಿಶುದ್ಧಮಾವಿಶತ್ ।
ಯದ್ಭಕ್ತಿಯೋಗಾನುಗೃಹೀತಮಂಜಸಾ
ಮುನಿರ್ವಿಚಷ್ಟೇ ನನು ತತ್ರ ತೇ ಗತಿಮ್ ॥
ಅನುವಾದ
ಯಾವ ಸಾಧಕನ ಚಿತ್ತವು ಭಕ್ತಿಯೋಗದಿಂದ ಅನುಗ್ರಹಿ ಸಲ್ಪಟ್ಟು ಪರಿಶುದ್ಧವಾಗಿ ಹೊರಗಿನ ವಿಷಯಗಳಲ್ಲಿ ಅಲೆ ದಾಡುವುದಿಲ್ಲವೋ, ಅವನು ಆಯಾಸವಿಲ್ಲದೆಯೇ ನಿನ್ನ ಸ್ವರೂಪದ ದರ್ಶನವನ್ನು ಪಡೆದುಕೊಳ್ಳುವನು. ॥59॥
(ಶ್ಲೋಕ - 60)
ಮೂಲಮ್
ಯತ್ರೇದಂ ವ್ಯಜ್ಯತೇ ವಿಶ್ವಂ ವಿಶ್ವಸ್ಮಿನ್ನವಭಾತಿ ಯತ್ ।
ತತ್ತ್ವಂ ಬ್ರಹ್ಮ ಪರಂ ಜ್ಯೋತಿರಾಕಾಶಮಿವ ವಿಸ್ತೃತಮ್ ॥
ಅನುವಾದ
ಈ ವಿಶ್ವವೆಲ್ಲವೂ ಯಾರಲ್ಲಿ ಅಭಿವ್ಯಕ್ತವಾಗಿದೆಯೋ, ಯಾವುದು ಈ ಇಡೀ ವಿಶ್ವದಲ್ಲಿ ಬೆಳಗುತ್ತಿದೆಯೋ, ಆ ಆಕಾಶದಂತೆ ಸರ್ವ ವ್ಯಾಪಕವು ಪರಮಪ್ರಕಾಶ ಮಯವೂ ಆದ ಪರಬ್ರಹ್ಮ ಪರಂಜ್ಯೋತಿಯು ನೀನೇ ಆಗಿರುವೆ.॥60॥
(ಶ್ಲೋಕ - 61)
ಮೂಲಮ್
ಯೋ ಮಾಯಯೇದಂ ಪುರುರೂಪಯಾಸೃಜತ್
ಬಿಭರ್ತಿ ಭೂಯಃ ಕ್ಷಪಯತ್ಯವಿಕ್ರಿಯಃ ।
ಯದ್ಭೇದಬುದ್ಧಿಃ ಸದಿವಾತ್ಮದುಃಸ್ಥಯಾ
ತಮಾತ್ಮತಂತ್ರಂ ಭಗವನ್ ಪ್ರತೀಮಹಿ ॥
ಅನುವಾದ
ಓ ಭಗವಂತಾ! ನೀನು ನಾನಾರೂಪಗಳನ್ನು ಧರಿಸಿರುವ ಮಾಯೆಯಿಂದ ಈ ಜಗತ್ತನ್ನು ಸೃಷ್ಟಿಸಿ, ಸಲಹಿ, ಸಂಹರಿಸುತ್ತಿದ್ದರೂ ಯಾವ ವಿಕಾರಕ್ಕೂ ಒಳಪಡದವನಾಗಿರುವೆ. ಭೇದಬುದ್ಧಿಯನ್ನುಂಟುಮಾಡುತ್ತಾ ಜಗತ್ತಿನಲ್ಲಿ ಎಲ್ಲರ ಮೇಲೂ ಪ್ರಭಾವವನ್ನು ಬೀರುತ್ತಿರುವ ಆ ಮಾಯೆಯು ಪರಮಾತ್ಮನಾದ ನಿನ್ನ ಮೇಲೆ ತನ್ನ ಯಾವುದೇ ಪ್ರಭಾವವನ್ನು ಬೀರಲು ಅಸಮರ್ಥವಾಗಿದ್ದಾಳೆ. ನೀನಾದರೋ ಪರಮ ಸ್ವತಂತ್ರನೆಂದೇ ನಾವು ತಿಳಿಯುತ್ತೇವೆ. ॥61॥
(ಶ್ಲೋಕ - 62)
ಮೂಲಮ್
ಕ್ರಿಯಾಕಲಾಪೈರಿದಮೇವ ಯೋಗಿನಃ
ಶ್ರದ್ಧಾನ್ವಿತಾಃ ಸಾಧು ಯಜಂತಿ ಸಿದ್ಧಯೇ ।
ಭೂತೇಂದ್ರಿಯಾಂತಃಕರಣೋಪಲಕ್ಷಿತಂ
ವೇದೇ ಚ ತಂತ್ರೇ ಚ ತ ಏವ ಕೋವಿದಾಃ ॥
ಅನುವಾದ
ಪಂಚಭೂತಗಳು, ಇಂದ್ರಿಯಗಳು, ಅಂತಃಕರಣ ಇವುಗಳ ಪ್ರೇರಕನು ನೀನೇ ಆಗಿರುವೆ ಮತ್ತು ಅವುಗಳ ಮೂಲಕವೇ ಸೂಚಿತನಾಗುತ್ತೀಯೆ. ಕರ್ಮಯೋಗಿಗಳು ಸಿದ್ಧಿಯನ್ನು ಹೊಂದಲಿಕ್ಕಾಗಿ ಬಗೆ-ಬಗೆಯ ಕರ್ಮಗಳ ಮೂಲಕ ನಿನ್ನ ಈ ಸಗುಣ ಸಾಕಾರ ಸ್ವರೂಪವನ್ನೇ ಶ್ರದ್ಧೆಯಿಂದ ಚೆನ್ನಾಗಿ ಪೂಜಿಸುತ್ತಾರೆ. ಅಂತಹ ಯೋಗಿಗಳೇ ವೇದ-ಶಾಸ್ತ್ರಗಳಲ್ಲಿ ಪ್ರವೀಣರೆಂದು ತಿಳಿಯಬೇಕು.॥62॥
(ಶ್ಲೋಕ - 63)
ಮೂಲಮ್
ತ್ವಮೇಕ ಆದ್ಯಃ ಪುರುಷಃ ಸುಪ್ತಶಕ್ತಿ-
ಸ್ತಯಾ ರಜಃಸತ್ತ್ವತಮೋ ವಿಭಿದ್ಯತೇ ।
ಮಹಾನಹಂ ಖಂ ಮರುದಗ್ನಿವಾರ್ಧರಾಃ
ಸುರರ್ಷಯೋ ಭೂತಗಣಾ ಇದಂ ಯತಃ ॥
ಅನುವಾದ
ಓ ಸರ್ವ ಮೂಲನಾದ ಸ್ವಾಮಿಯೇ! ನೀನೇ ಅದ್ವಿತೀಯನಾದ ಆದಿಪುರುಷನು. ಸೃಷ್ಟಿಗೆ ಮೊದಲು ಮಾಯಾಶಕ್ತಿಯು ನಿನ್ನಲ್ಲೇ ನಿದ್ರಿಸಿರುತ್ತದೆ. ಅನಂತರ ಸೃಷ್ಟಿಕಾಲದಲ್ಲಿ ಅದರಿಂದಲೇ ಸತ್ತ್ವ, ರಜ,ತಮ ಎಂಬ ಗುಣಗಳ ವಿಭಾಗವಾಗಿ ಮಹತ್ತತ್ತ್ವ, ಅಹಂಕಾರ, ಆಕಾಶ, ವಾಯು, ಅಗ್ನಿ, ಜಲ ಮತ್ತು ಪೃಥಿವಿಗಳೆಂಬ ತತ್ತ್ವಗಳೂ, ದೇವತೆಗಳೂ, ಋಷಿಗಳೂ ಹಾಗೂ ಸಮಸ್ತ ಪ್ರಾಣಿಗಳಿಂದ ಕೂಡಿದ ಈ ಜಗತ್ತಿನ ಉತ್ಪತ್ತಿಯಾಗುತ್ತದೆ. ॥63॥
(ಶ್ಲೋಕ - 64)
ಮೂಲಮ್
ಸೃಷ್ಟಂ ಸ್ವಶಕ್ತ್ತ್ಯೇದಮನುಪ್ರವಿಷ್ಟ-
ಶ್ಚತುರ್ವಿಧಂ ಪುರಮಾತ್ಮಾಂಶಕೇನ ।
ಅಥೋ ವಿದುಸ್ತಂ ಪುರುಷಂ ಸಂತಮಂತ-
ರ್ಭುಂಕ್ತೇ ಹೃಷೀಕೈರ್ಮಧು ಸಾರಘಂ ಯಃ ॥
ಅನುವಾದ
ಜೇನುಹುಳುಗಳು ತಾವೇ ತಯಾರಿಸಿದ ಜೇನನ್ನು ತಿನ್ನುವಂತೆ ಪುರುಷನು ನಿನ್ನ ಶಕ್ತಿಯಿಂದ ಸೃಷ್ಟಿಸಲ್ಪಟ್ಟ ಈ ಜರಾಯುಜ, ಅಂಡಜ, ಸ್ವೇದಜ, ಉದ್ಭಿಜ್ಜಗಳೆಂಬ ನಾಲ್ಕು ಬಗೆಯ ದೇಹಗಳಲ್ಲಿ ಒಳಹೊಕ್ಕು ಇಂದ್ರಿಯಗಳ ಮೂಲಕ ವಿಷಯಸುಖಗಳನ್ನು ಅನುಭವಿಸುತ್ತಾನೆ. ಈ ಪುರುಷನು ನಿನ್ನ ಅಂಗವೇ ಆಗಿದ್ದಾನೆ. ಇವನನ್ನೇ ಜೀವನೆಂದೂ ಹೇಳುತ್ತಾರೆ. ॥64॥
(ಶ್ಲೋಕ - 65)
ಮೂಲಮ್
ಸ ಏಷ ಲೋಕಾನತಿಚಂಡ ವೇಗೋ
ವಿಕರ್ಷಸಿ ತ್ವಂ ಖಲು ಕಾಲಯಾನಃ ।
ಭೂತಾನಿ ಭೂತೈರನುಮೇಯತತ್ತ್ವೋ
ಘನಾವಲೀರ್ವಾಯುರಿವಾವಿಷಹ್ಯಃ ॥
ಅನುವಾದ
ಸಹಿಸಲು ಅಶಕ್ಯವಾದ ಪ್ರಚಂಡ ವೇಗದಿಂದ ಬೀಸುವ ಗಾಳಿಯು ಮೋಡಗಳ ಸಮೂಹ ವನ್ನು ಚದುರಿಸುವಂತೆ ನೀನೇ ಕಾಲವೆಂಬ ರಥದಲ್ಲಿ ಕುಳಿತು ಸಹಿಸಲು ಅಸಾಧ್ಯವಾದ ಪ್ರಚಂಡವೇಗದಿಂದ ಭೂತಗಳನ್ನು ಚದುರಿಸಿ ಲಯಗೊಳಿಸುವೆ. ನಿನ್ನ ತತ್ತ್ವವನ್ನು ಅನುಮಾನ ಪ್ರಮಾಣದಿಂದ ಅರಿಯಬೇಕೇ ಹೊರತು ಪ್ರತ್ಯಕ್ಷದಿಂದ ತಿಳಿಯಲಾಗುವುದಿಲ್ಲ. ॥65॥
(ಶ್ಲೋಕ - 66)
ಮೂಲಮ್
ಪ್ರಮತ್ತ ಮುಚ್ಚೈರಿತಿಕೃತ್ಯಚಿಂತಯಾ
ಪ್ರವೃದ್ಧಲೋಭಂ ವಿಷಯೇಷು ಲಾಲಸಮ್ ।
ತ್ವಮಪ್ರಮತ್ತಃ ಸಹಸಾಭಿಪದ್ಯಸೇ
ಕ್ಷುಲ್ಲೇಲಿಹಾನೋಹಿರಿವಾಖುಮಂತಕಃ ॥
ಅನುವಾದ
‘ಇದನ್ನು ಮಾಡಬೇಕು, ಅದನ್ನು ಮಾಡಬೇಕು’ ಮುಂತಾದ ಚಿಂತಾಪರಂಪರೆಗಳಿಂದ ಲೋಭವು ಹೆಚ್ಚಿ ವಿಷಯಭೋಗಗಳಲ್ಲಿ ಆಸಕ್ತನಾದ ಮೈಮರೆತಿರುವ ಜೀವನನ್ನು ಎಂದೆಂದೂ ಎಚ್ಚರವಾಗಿರುವ ಕಾಲರೂಪಿಯಾದ ನೀನು ದಿಢೀರನೆ ಆಕ್ರಮಿಸಿಬಿಡುತ್ತೀಯೆ. ಹಸಿವಿನಿಂದ ನಾಲಿಗೆಯನ್ನು ಚಾಚಿರುವ ಸರ್ಪವು ಇಲಿಯನ್ನು ಕಬಳಿಸು ವಂತೆ ಮೈಮರೆತಿರುವ ಜೀವಿಯನ್ನು ಕಬಳಿಸಿಬಿಡುವೆ. ॥66॥
(ಶ್ಲೋಕ - 67)
ಮೂಲಮ್
ಕಸ್ತ್ವತ್ಪದಾಬ್ಜಂ ವಿಜಹಾತಿ ಪಂಡಿತೋ
ಯಸ್ತೇವಮಾನವ್ಯಯಮಾನಕೇತನಃ ।
ವಿಶಂಕಯಾಸ್ಮದ್ಗುರುರರ್ಚತಿ ಸ್ಮ ಯದ್
ವಿನೋಪಪತ್ತಿಂ ಮನವಶ್ಚತುರ್ದಶ ॥
ಅನುವಾದ
ಯಾವ ಪಂಡಿತನು ತಾನೇ ನಿನ್ನನ್ನು ಅನಾದರಿಸಿ ತನ್ನ ಆಯುಸ್ಸನ್ನು ವ್ಯರ್ಥಮಾಡಿಕೊಂಡು ನಿನ್ನ ಪಾದಾರವಿಂದವನ್ನು ತೊರೆದಾನು? ನಮ್ಮ ಗುರುಗಳಾದ ಬ್ರಹ್ಮದೇವರೂ, ಹದಿನಾಲ್ಕು ಮಂದಿ ಮನುಗಳೂ ಕೂಡ ಯಾವ ವಿಚಾರವೂ ಇಲ್ಲದೆ ಕೇವಲ ಶ್ರದ್ಧೆಯಿಂದಲೇ ಅದನ್ನು ಪೂಜಿಸಿದ್ದರು. ॥67॥
(ಶ್ಲೋಕ - 68)
ಮೂಲಮ್
ಅಥ ತ್ವಮಸಿ ನೋ ಬ್ರಹ್ಮನ್ಪರಮಾತ್ಮನ್ವಿಪಶ್ಚಿತಾಮ್ ।
ವಿಶ್ವಂ ರುದ್ರಭಯಧ್ವಸ್ತಮಕುತಶ್ಚಿದ್ಭಯಾ ಗತಿಃ ॥
ಅನುವಾದ
ಓ ಪರಬ್ರಹ್ಮವೇ! ಈ ಜಗತ್ತೆ ಲ್ಲವೂ ರುದ್ರರೂಪವಾದ ಕಾಲದ ಭಯದಿಂದ ವ್ಯಾಕುಲಗೊಂಡಿದೆ. ಆದ್ದರಿಂದ ಓ ಪರಮಾತ್ಮನೇ! ಈ ತತ್ತ್ವವನ್ನು ತಿಳಿದಿರುವ ನಮಗಾದರೋ ಈಗ ನೀನೇ ಪೂರ್ಣ ಭಯಶೂನ್ಯ ಆಶ್ರಯನಾಗಿರುವೆ.’’ ॥68॥
(ಶ್ಲೋಕ - 69)
ಮೂಲಮ್
ಇದಂ ಜಪತ ಭದ್ರಂ ವೋ ವಿಶುದ್ಧಾ ನೃಪನಂದನಾಃ ।
ಸ್ವಧರ್ಮಮನುತಿಷ್ಠಂತೋ ಭಗವತ್ಯರ್ಪಿತಾಶಯಾಃ ॥
ಅನುವಾದ
ರಾಜಕುಮಾರರೇ! ನೀವುಗಳು ವಿಶುದ್ಧಭಾವದಿಂದ ಸ್ವಧರ್ಮವನ್ನು ಆಚರಿಸುತ್ತಾ, ಭಗವಂತನಲ್ಲಿ ಚಿತ್ತವನ್ನು ನೆಟ್ಟು ನಾನು ಹೇಳಿರುವ ಈ ಸ್ತೋತ್ರವನ್ನು ಜಪಿಸುತ್ತಾ ಇರಿ. ಭಗವಂತನು ನಿಮಗೆ ಮಂಗಳವನ್ನು ಉಂಟುಮಾಡುವನು. ॥69॥
(ಶ್ಲೋಕ - 70)
ಮೂಲಮ್
ತಮೇವಾತ್ಮಾನಮಾತ್ಮಸ್ಥಂ ಸರ್ವಭೂತೇಷ್ವವಸ್ಥಿತಮ್ ।
ಪೂಜಯಧ್ವಂ ಗೃಣಂತಶ್ಚ ಧ್ಯಾಯಂತಶ್ಚಾಸಕೃದ್ಧರಿಮ್ ॥
ಅನುವಾದ
ನೀವು ನಿಮ್ಮ ಅಂತಃಕರಣದಲ್ಲಿ ನೆಲೆಸಿದ ಆ ಸರ್ವಾಂತರ್ಯಾಮಿ ಪರಮಾತ್ಮನಾದ ಶ್ರೀಹರಿಯನ್ನು ಪದೇ-ಪದೇ ಸ್ತುತಿಸುತ್ತಾ, ಚಿಂತಿಸುತ್ತಾ, ಪೂಜಿಸುತ್ತಿರಿ. ॥70॥
(ಶ್ಲೋಕ - 71)
ಮೂಲಮ್
ಯೋಗಾದೇಶಮುಪಾಸಾದ್ಯ ಧಾರಯಂತೋ ಮುನಿವ್ರತಾಃ ।
ಸಮಾಹಿತಧಿಯಃ ಸರ್ವ ಏತದಭ್ಯಸತಾದೃತಾಃ ॥
ಅನುವಾದ
ನಾನು ನಿಮಗೆ ಉಪದೇಶಿಸಿದ ಈ ಯೋಗಾ ದೇಶವೆಂಬ ಸ್ತೋತ್ರವನ್ನು ನೀವೆಲ್ಲರೂ ಮನಸ್ಸಿನಲ್ಲಿ ಧರಿಸಿ, ಮುನಿವ್ರತವನ್ನು ಆಚರಿಸುತ್ತಾ, ಅತ್ಯಂತ ಆದರದಿಂದ ಕೂಡಿ ಏಕಾಗ್ರಭಾವದಿಂದ ಅಭ್ಯಾಸಮಾಡುತ್ತಿರಿ. ॥71॥
(ಶ್ಲೋಕ - 72)
ಮೂಲಮ್
ಇದಮಾಹ ಪುರಾಸ್ಮಾಕಂ ಭಗವಾನ್ವಿಶ್ವಸೃಕ್ಪತಿಃ ।
ಭೃಗ್ವಾದೀನಾಮಾತ್ಮಜಾನಾಂ ಸಿಸೃಕ್ಷುಃ ಸಂಸಿಸೃಕ್ಷತಾಮ್ ॥
ಅನುವಾದ
ಈ ಸ್ತೋತ್ರವನ್ನು ಹಿಂದೆ ಜಗದ್ವಿಸ್ತಾರದ ಇಚ್ಛೆಯುಳ್ಳ ಪ್ರಜಾಪತಿಗಳ ಒಡೆಯನಾದ ಭಗವಾನ್ ಬ್ರಹ್ಮದೇವರು ಪ್ರಜೆಯನ್ನು ಉಂಟುಮಾಡಬೇಕೆಂಬ ಇಚ್ಛೆಯುಳ್ಳ ಭೃಗುವೇ ಮುಂತಾದ ತನ್ನ ಪುತ್ರರಿಗೆ ಉಪದೇಶಮಾಡಿದ್ದರು. ॥72॥
(ಶ್ಲೋಕ - 73)
ಮೂಲಮ್
ತೇ ವಯಂ ನೋದಿತಾಃ ಸರ್ವೇ ಪ್ರಜಾಸರ್ಗೇ ಪ್ರಜೇಶ್ವರಾಃ ।
ಅನೇನ ಧ್ವಸ್ತತಮಸಃ ಸಿಸೃಕ್ಷ್ಮೋ ವಿವಿಧಾಃ ಪ್ರಜಾಃ ॥
ಅನುವಾದ
ಪ್ರಜಾಪತಿಗಳಾದ ನಮಗೆ ಪ್ರಜೆಯನ್ನು ವಿಸ್ತರಿಸುವ ಆಜ್ಞೆಯು ಕೊಡಲ್ಪಟ್ಟಾಗ ಇದರ ಮೂಲಕವೇ ನಾವು ನಮ್ಮ ಅಜ್ಞಾನವನ್ನು ಕಳಕೊಂಡು ಅನೇಕ ಬಗೆಯ ಪ್ರಜೆಯನ್ನು ಉತ್ಪನ್ನ ಮಾಡಿದೆವು. ॥73॥
(ಶ್ಲೋಕ - 74)
ಮೂಲಮ್
ಅಥೇದಂ ನಿತ್ಯದಾ ಯುಕ್ತೋ ಜಪನ್ನವಹಿತಃ ಪುಮಾನ್ ।
ಅಚಿರಾಚ್ಛ್ರೇಯ ಆಪ್ನೋತಿ ವಾಸುದೇವಪರಾಯಣಃ ॥
ಅನುವಾದ
ಈಗಲೂ ಭಗವತ್ಪರಾಯಣನಾದ ಪುರುಷನು ಇದನ್ನು ಏಕಾಗ್ರಚಿತ್ತದಿಂದ ಪ್ರತಿದಿನವೂ ಜಪಿಸಿದರೆ ಅವನಿಗೆ ಶೀಘ್ರವಾಗಿಯೇ ಶ್ರೇಯಸ್ಸುಂಟಾಗುವುದು. ॥74॥
(ಶ್ಲೋಕ - 75)
ಮೂಲಮ್
ಶ್ರೇಯಸಾಮಿಹ ಸರ್ವೇಷಾಂ ಜ್ಞಾನಂ ನಿಃಶ್ರೇಯಸಂ ಪರಮ್ ।
ಸುಖಂ ತರತಿ ದುಷ್ಪಾರಂ ಜ್ಞಾನನೌರ್ವ್ಯಸನಾರ್ಣವಮ್ ॥
ಅನುವಾದ
ಈ ಲೋಕದಲ್ಲಿ ಎಲ್ಲ ರೀತಿಯ ಶ್ರೇಯಸ್ಕರ ಸಾಧನೆಗಳಲ್ಲಿ ಮೋಕ್ಷದಾಯಕವಾದ ಜ್ಞಾನವೇ ಸರ್ವಶ್ರೇಷ್ಠವಾಗಿದೆ. ಜ್ಞಾನನೌಕೆ ಯನ್ನು ಹತ್ತಿದವನು ಆಯಾಸವಿಲ್ಲದೆಯೇ ಈ ದಾಟಲಶಕ್ಯವಾದ ಸಂಸಾರಸಾಗರವನ್ನು ದಾಟಿಬಿಡುವನು. ॥75॥
(ಶ್ಲೋಕ - 76)
ಮೂಲಮ್
ಯ ಇಮಂ ಶ್ರದ್ಧಯಾ ಯುಕ್ತೋ ಮದ್ಗೀತಂ ಭಗವತ್ಸ್ತವಮ್ ।
ಅಧೀಯಾನೋ ದುರಾರಾಧ್ಯಂ ಹರಿಮಾರಾಧಯತ್ಯಸೌ ॥
ಅನುವಾದ
ಭಗವಂತನ ಆರಾಧನೆಯು ಬಹಳ ಕಷ್ಟವಾಗಿದ್ದರೂ ನಾನು ಹೇಳಿದ ಈ ಸ್ತೋತ್ರವನ್ನು ಶ್ರದ್ಧೆಯಿಂದ ಪಠಿಸುವವನು ಸುಲಭವಾಗಿಯೇ ಅವನ ಪ್ರಸನ್ನತೆಯನ್ನು ಪಡೆದುಕೊಳ್ಳುವನು. ॥76॥
(ಶ್ಲೋಕ - 77)
ಮೂಲಮ್
ವಿಂದತೇ ಪುರುಷೋಮುಷ್ಮಾದ್ಯದ್ಯದಿಚ್ಛತ್ಯಸತ್ವರಮ್ ।
ಮದ್ಗೀತಗೀತಾತ್ಸುಪ್ರೀತಾಚ್ಛ್ರೇಯಸಾಮೇಕವಲ್ಲಭಾತ್ ॥
ಅನುವಾದ
ಭಗವಂತನೇ ಎಲ್ಲ ಕಲ್ಯಾಣಸಾಧನೆಗಳ ಏಕಮಾತ್ರ ಧ್ಯೇಯವಾಗಿ ಪ್ರಿಯತಮನಾಗಿರುವನು. ಆದ್ದರಿಂದ ನಾನು ಹಾಡಿರುವ ಈ ಸ್ತೋತ್ರಗಾಯನದಿಂದ ಭಗವಂತನನ್ನು ಪ್ರಸನ್ನಗೊಳಿಸಿ, ಅವನು ಸ್ಥಿರಚಿತ್ತನಾಗಿ ಭಗವಂತನಿಂದ ಬೇಕಾದುದೆಲ್ಲವನ್ನು ಪಡೆದುಕೊಳ್ಳುವನು.॥77॥
(ಶ್ಲೋಕ - 78)
ಮೂಲಮ್
ಇದಂ ಯ ಕಲ್ಯ ಉತ್ಥಾಯ ಪ್ರಾಂಜಲಿಃ ಶ್ರದ್ಧಯಾನ್ವಿತಃ ।
ಶೃಣುಯಾಚ್ಛ್ರಾವಯೇನ್ಮರ್ತ್ಯೋ ಮುಚ್ಯತೇ ಕರ್ಮಬಂಧನೈಃ ॥
ಅನುವಾದ
ಉಷಃಕಾಲದಲ್ಲಿ ಎದ್ದು ಇದನ್ನು ಶ್ರದ್ಧೆಯಿಂದ ಕೈಜೋಡಿಸಿಕೊಂಡು ಕೇಳುವವನು ಎಲ್ಲ ಪ್ರಕಾರದ ಕರ್ಮಬಂಧನದಿಂದ ಮುಕ್ತನಾಗಿ ಹೋಗುವನು. ॥78॥
ಮೂಲಮ್
(ಶ್ಲೋಕ - 79)
ಗೀತಂ ಮಯೇದಂ ನರದೇವನಂದನಾಃ
ಪರಸ್ಯ ಪುಂಸಃ ಪರಮಾತ್ಮನಃ ಸ್ತವಮ್ ।
ಜಪಂತ ಏಕಾಗ್ರಧಿಯಸ್ತಪೋ
ಮಹಚ್ಚರಧ್ವಮಂತೇ ತತ ಆಪ್ಸ್ಯಥೇಪ್ಸಿತಮ್ ॥
ಅನುವಾದ
ರಾಜಕುಮಾರರೇ! ನಾನು ನಿಮಗೆ ಹೇಳಿರುವ ಈ ಪರಮಪುರುಷ ಪರಮಾತ್ಮನ ಸ್ತೋತ್ರವನ್ನು ಏಕಾಗ್ರಚಿತ್ತದಿಂದ ಜಪಿಸುತ್ತಾ ನೀವು ಮಹಾತಪಸ್ಸನ್ನು ಆಚರಿಸಿರಿ. ತಪಸ್ಸು ಪೂರ್ಣವಾದಾಗ ಇದರಿಂದಲೇ ನಿಮ್ಮ ಇಷ್ಟಾರ್ಥ ಫಲವು ಈಡೇರುವುದು.॥79॥
ಅನುವಾದ (ಸಮಾಪ್ತಿಃ)
ಇಪ್ಪತ್ತನಾಲ್ಕನೆಯ ಅಧ್ಯಾಯವು ಮುಗಿಯಿತು. ॥24॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಚತುರ್ಥಸ್ಕಂಧೇ ರುದ್ರಗೀತಂ ನಾಮ ಚತುರ್ವಿಂಶೋಽಧ್ಯಾಯಃ ॥24॥