೨೩

[ಇಪ್ಪತ್ತಮೂರನೆಯ ಅಧ್ಯಾಯ]

ಭಾಗಸೂಚನಾ

ಪೃಥುಮಹಾರಾಜನ ತಪಸ್ಸು ಮತ್ತು ಪರಮಪದದ ಪ್ರಾಪ್ತಿ

(ಶ್ಲೋಕ - 1)

ಮೂಲಮ್ (ವಾಚನಮ್)

ಮೈತ್ರೇಯ ಉವಾಚ

ಮೂಲಮ್

ದೃಷ್ಟ್ವಾತ್ಮಾನಂ ಪ್ರವಯಸಮೇಕದಾ ವೈನ ಆತ್ಮವಾನ್ ।
ಆತ್ಮನಾ ವರ್ಧಿತಾಶೇಷಸ್ವಾನುಸರ್ಗಃ ಪ್ರಜಾಪತಿಃ ॥

(ಶ್ಲೋಕ - 2)

ಮೂಲಮ್

ಜಗತಸ್ತಸ್ಥುಷಶ್ಚಾಪಿ ವೃತ್ತಿದೋ ಧರ್ಮಭೃತ್ಸತಾಮ್ ।
ನಿಷ್ಪಾದಿತೇಶ್ವರಾದೇಶೋ ಯದರ್ಥಮಿಹ ಜಜ್ಞಿವಾನ್ ॥

(ಶ್ಲೋಕ - 3)

ಮೂಲಮ್

ಆತ್ಮಜೇಷ್ವಾತ್ಮಜಾಂ ನ್ಯಸ್ಯ ವಿರಹಾದ್ರುದತೀಮಿವ ।
ಪ್ರಜಾಸು ವಿಮನಃಸ್ವೇಕಃ ಸದಾರೋಗಾತ್ತಪೋವನಮ್ ॥

ಅನುವಾದ

ಶ್ರೀಮೈತ್ರೇಯರು ಹೇಳುತ್ತಾರೆ — ಪ್ರಜಾಪಾಲಕನಾದ ಪೃಥುವು ಹೀಗೆ ತನ್ನ ಪ್ರಜೆಗಳಿಗಾಗಿ ನಗರ ಗ್ರಾಮಾದಿ ಸರ್ವವ್ಯವಸ್ಥೆಗಳನ್ನೂ ತಾನೇ ಮಾಡಿಕೊಟ್ಟು, ಸ್ಥಾವರ-ಜಂಗಮರೂಪವಾದ ಎಲ್ಲ ಪ್ರಾಣಿಗಳಿಗೂ ಜೀವನವೃತ್ತಿಗಳನ್ನು ಕಲ್ಪಿಸಿ ಸತ್ಪುರುಷರ ಧರ್ಮವನ್ನು ಪಾಲಿಸಿದನು. ತಾನು ಯಾವ ಕಾರಣಕ್ಕಾಗಿ ಜನಿಸಿದ್ದೇನೋ ಆ ಭಗವದಾಜ್ಞೆಯನ್ನು ನೆರವೇರಿಸಿದಂತಾಯಿತು ಎಂದು ಮನಗಂಡನು. ತನಗೆ ವೃದ್ಧಾಪ್ಯವು ಬಂದಿದೆ; ಇನ್ನು ನನಗೆ ರಾಜ್ಯದ ಕರ್ತವ್ಯವಿಲ್ಲ ಎಂಬುದನ್ನೂ ಅರಿತು ಅವನು ತನ್ನ ವಿರಹದಲ್ಲಿ ಅಳುತ್ತಿರುವ ಪುತ್ರಿಯ ಸ್ಥಾನದಲ್ಲಿದ್ದ ಪೃಥಿವಿಯನ್ನು ಪುತ್ರರಿಗೆ ಒಪ್ಪಿಸಿ, ಪ್ರಜಾಜನರು ದುಃಖದಿಂದ ಮರುಗುತ್ತಿರುವಾಗಲೇ ಅವರನ್ನು ಬಿಟ್ಟು ಪತ್ನೀಸಹಿತನಾಗಿ ತಾನೊಬ್ಬನೇ ತಪೋವನಕ್ಕೆ ತೆರಳಿದನು. ॥1-3॥

(ಶ್ಲೋಕ - 4)

ಮೂಲಮ್

ತತ್ರಾಪ್ಯದಾಭ್ಯನಿಯಮೋ ವೈಖಾನಸಸುಸಮ್ಮತೇ ।
ಆರಬ್ಧ ಉಗ್ರತಪಸಿ ಯಥಾ ಸ್ವವಿಜಯೇ ಪುರಾ ॥

ಅನುವಾದ

ಹಿಂದೆ ಗೃಹಸ್ಥಾಶ್ರಮದಲ್ಲಿದ್ದಾಗ ವ್ರತನಿಷ್ಠನಾಗಿ ಭೂಮಿಯನ್ನು ಜಯಿಸುವುದರಲ್ಲಿ ತೊಡಗಿದ್ದನೋ, ಹಾಗೆಯೇ ಈಗಲೂ ವಾನಪ್ರಸ್ಥಾಶ್ರಮದ ನಿಯಮಾನುಸಾರ ಕಠೋರ ತಪಸ್ಸಿನಲ್ಲಿ ತೊಡಗಿದನು. ॥4॥

(ಶ್ಲೋಕ - 5)

ಮೂಲಮ್

ಕಂದಮೂಲಲಾಹಾರಃ ಶುಷ್ಕಪರ್ಣಾಶನಃ ಕ್ವಚಿತ್ ।
ಅಬ್ಭಕ್ಷಃ ಕತಿಚಿತ್ಪಕ್ಷಾನ್ವಾಯುಭಕ್ಷಸ್ತತಃ ಪರಮ್ ॥

ಅನುವಾದ

ಆ ತಪಸ್ಸಿನಲ್ಲಿ ಕೆಲವು ದಿನಗಳ ಕಾಲ ಗೆಡ್ಡೆ-ಗೆಣಸು, ಹಣ್ಣು-ಹಂಪಲುಗಳನ್ನು ಮಾತ್ರವೇ ತಿನ್ನುತ್ತಿದ್ದನು. ಕೆಲವು ದಿನಗಳು ಒಣಗಿದ ಎಲೆಗಳನ್ನು ತಿನ್ನುತ್ತಾ, ಮತ್ತೆ ಕೆಲವುದಿನ ಕೇವಲ ನೀರನ್ನು ಕುಡಿಯುತ್ತಲೂ, ಕೆಲವು ದಿವಸಗಳ ಕಾಲ ಕೇವಲ ಗಾಳಿಯನ್ನೇ ಸೇವಿಸಿ ತಪಸ್ಸು ಮಾಡುತ್ತಿದ್ದನು. ॥5॥

(ಶ್ಲೋಕ - 6)

ಮೂಲಮ್

ಗ್ರೀಷ್ಮೇ ಪಂಚತಪಾ ವೀರೋ ವರ್ಷಾಸ್ವಾಸಾರಷಾಣ್ಮುನಿಃ ।
ಆಕಂಠಮಗ್ನಃ ಶಿಶಿರೇ ಉದಕೇ ಸ್ಥಂಡಿಲೇಶಯಃ ॥

ಅನುವಾದ

ಮುನಿವೃತ್ತಿಯಲ್ಲಿದ್ದ ವೀರವರನು ಬೇಸಿಗೆಯಲ್ಲಿ ನಾಲ್ಕು ದಿಕ್ಕುಗಳಲ್ಲಿ ಅಗ್ನಿಗಳು ಮತ್ತು ಮೇಲ್ಗಡೆಯಲ್ಲಿ ಸುಡುತ್ತಿರುವ ಸೂರ್ಯ ಹೀಗೆ ಪಂಚಾಗ್ನಿಗಳನ್ನು ಸೇವಿಸುತ್ತಿದ್ದನು. ಮಳೆಗಾಲದಲ್ಲಿ ಬಯಲಿನಲ್ಲಿದ್ದು ತನ್ನ ಮೇಲೆ ಸುರಿಯುತ್ತಿದ್ದ ಮಳೆಯ ನೀರನ್ನು ಸಹಿಸುತ್ತಿದ್ದನು. ಚಳಿಗಾಲದಲ್ಲಿ ಕತ್ತಿನವರೆಗೆ ನೀರಿನಲ್ಲಿ ನಿಂತು ತಪಸ್ಸು ಮಾಡುತ್ತಿದ್ದನು. ಅವನು ಪ್ರತಿದಿನವೂ ಮಣ್ಣಿನ ವೇದಿಕೆಯಲ್ಲೇ ಮಲಗುತ್ತಿದ್ದನು. ॥6॥

(ಶ್ಲೋಕ - 7)

ಮೂಲಮ್

ತಿತಿಕ್ಷುರ್ಯತವಾಗ್ದಾಂತ ಊರ್ಧ್ವರೇತಾ ಜಿತಾನಿಲಃ ।
ಅರಿರಾಧಯಿಷುಃ ಕೃಷ್ಣಮಚರತ್ತಪ ಉತ್ತಮಮ್ ॥

ಅನುವಾದ

ಅವನು ಚಳಿ-ಸೆಕೆಗಳೇ ಮುಂತಾದ ದ್ವಂದ್ವಗಳನ್ನು ಸಹಿಸುತ್ತಾ ಮಾತು-ಮನಸ್ಸುಗಳನ್ನು ಸಂಯಮಿಸಿಕೊಂಡು ಬ್ರಹ್ಮ ಚರ್ಯವನ್ನು ಪಾಲಿಸುತ್ತಾ, ಪ್ರಾಣಗಳನ್ನು ತನ್ನ ಅಧೀನಪಡಿಸಿಕೊಂಡನು. ಹೀಗೆ ಶ್ರೀಕೃಷ್ಣನನ್ನು ಆರಾಧಿಸುವುದಕ್ಕಾಗಿ ಅವನು ಉತ್ತಮವಾದ ತಪಸ್ಸನ್ನು ಮಾಡಿದನು. ॥7॥

(ಶ್ಲೋಕ - 8)

ಮೂಲಮ್

ತೇನ ಕ್ರಮಾನುಸಿದ್ಧೇನ ಧ್ವಸ್ತಕರ್ಮಾಮಲಾಶಯಃ ।
ಪ್ರಾಣಾಯಾಮೈಃ ಸಂನಿರುದ್ಧಷಡ್ವರ್ಗಶ್ಛಿನ್ನಬಂಧನಃ ॥

ಅನುವಾದ

ಈ ಕ್ರಮದಿಂದ ಅವನ ತಪಸ್ಸು ಬೆಳವಣಿಗೆ ಹೊಂದಿ ಸಿದ್ಧಿಸುತ್ತಿರಲಾಗಿ, ಆತನ ಚಿತ್ತವು ಸಂಪೂರ್ಣವಾಗಿ ಶುದ್ಧಿ ಹೊಂದಿತು. ಪ್ರಾಣಾಯಾಮಗಳ ಮೂಲಕ ಮನಸ್ಸು ಮತ್ತು ಇಂದ್ರಿಯಗಳು ನಿರುದ್ಧವಾಗಿ ಕರ್ಮವಾಸನೆಗಳಿಂದ ಉಂಟಾದ ಕಟ್ಟುಗಳು ಬಿಟ್ಟುಹೋದುವು. ॥8॥

(ಶ್ಲೋಕ - 9)

ಮೂಲಮ್

ಸನತ್ಕುಮಾರೋ ಭಗವಾನ್ಯದಾಹಾಧ್ಯಾತ್ಮಿಕಂ ಪರಮ್ ।
ಯೋಗಂ ತೇನೈವ ಪುರುಷಮಭಜತ್ಪುರುಷರ್ಷಭಃ ॥

ಅನುವಾದ

ಆಗ ಭಗವಾನ್ ಸನತ್ಕುಮಾರರು ಉಪದೇಶಿಸಿದ್ದ ಶ್ರೇಷ್ಠತಮವಾದ ಅಧ್ಯಾತ್ಮ ಯೋಗದ ಶಿಕ್ಷಣದಂತೆಯೇ ಪೃಥುವು ಪುರುಷೋತ್ತಮನಾದ ಶ್ರೀಹರಿಯನ್ನು ಆರಾಧಿಸತೊಡಗಿದನು. ॥9॥

(ಶ್ಲೋಕ - 10)

ಮೂಲಮ್

ಭಗವದ್ಧರ್ಮಿಣಃ ಸಾಧೋಃ ಶ್ರದ್ಧಯಾ ಯತತಃ ಸದಾ ।
ಭಕ್ತಿರ್ಭಗವತಿ ಬ್ರಹ್ಮಣ್ಯನನ್ಯವಿಷಯಾಭವತ್ ॥

ಅನುವಾದ

ಹೀಗೆ ಭಗವತ್ಪರಾಯಣನಾಗಿ ಶ್ರದ್ಧೆಯಿಂದ ಸದಾಚಾರವನ್ನು ಪಾಲಿಸುತ್ತಾ ನಿರಂತರವಾಗಿ ಸಾಧನೆಮಾಡಿದ್ದರಿಂದ ಅವನಿಗೆ ಪರಬ್ರಹ್ಮ ಪರಮಾತ್ಮನಲ್ಲಿ ಅನನ್ಯಭಕ್ತಿಯು ಬೇರೂರಿತು. ॥10॥

(ಶ್ಲೋಕ - 11)

ಮೂಲಮ್

ತಸ್ಯಾನಯಾ ಭಗವತಃ ಪರಿಕರ್ಮಶುದ್ಧ-
ಸತ್ತ್ವಾತ್ಮನಸ್ತದನು ಸಂಸ್ಮರಣಾನುಪೂರ್ತ್ತ್ಯಾ ।
ಜ್ಞಾನಂ ವಿರಕ್ತಿಮದಭೂನ್ನಿಶಿತೇನ ಯೇನ
ಚಿಚ್ಛೇದ ಸಂಶಯಪದಂ ನಿಜಜೀವಕೋಶಮ್ ॥

ಅನುವಾದ

ಈ ವಿಧವಾದ ಭಗವದುಪಾಸನೆಯಿಂದ ಅವನ ಅಂತಃ ಕರಣವು ಶುದ್ಧ ಸತ್ತ್ವಮಯವಾಯಿತು. ನಿರಂತರ ಭಗವಚ್ಚಿಂತನದ ಪ್ರಭಾವದಿಂದ ಉಂಟಾದ ಆ ಅನನ್ಯಭಕ್ತಿಯಿಂದ ಅವನಿಗೆ ವೈರಾಗ್ಯಸಹಿತ ಜ್ಞಾನವು ಸಿದ್ಧಿಸಿತು. ಮತ್ತೆ ತೀವ್ರವಾದ ಜ್ಞಾನದ ಮೂಲಕ ಸಂಶಯ-ವಿಪರ್ಯಯಗಳಿಗೆ ಆಸರೆಯಾದ ಜೀವಿಯ ಉಪಾಧಿಭೂತ ಅಹಂಕಾರವನ್ನು ನಾಶಪಡಿಸಿದನು. ॥11॥

(ಶ್ಲೋಕ - 12)

ಮೂಲಮ್

ಛಿನ್ನಾನ್ಯಧೀರಧಿಗತಾತ್ಮಗತಿರ್ನಿರೀಹ-
ಸ್ತತ್ತತ್ಯಜೇಚ್ಛಿನದಿದಂ ವಯುನೇನ ಯೇನ ।
ತಾವನ್ನ ಯೋಗಗತಿಭಿರ್ಯತಿರಪ್ರಮತ್ತೋ
ಯಾವದ್ಗದಾಗ್ರಜಕಥಾಸು ರತಿಂ ನ ಕುರ್ಯಾತ್ ॥

ಅನುವಾದ

ಅನಂತರ ದೇಹಾತ್ಮ ಬುದ್ಧಿಯು ತೊಲಗಿ ಪರಮಾತ್ಮನಾದ ಶ್ರೀಕೃಷ್ಣನಲ್ಲಿ ಅನುಭೂತಿ ಉಂಟಾದಾಗ ಎಲ್ಲ ಬಗೆಯ ಸಿದ್ಧಿ ಮುಂತಾದವುಗಳ ವಿಷಯಗಳಲ್ಲಿಯೂ ಉದಾಸೀನತೆ ಉಂಟಾದ ಕಾರಣ ತನ್ನ ಜೀವಕ್ಕೆ ಆವರಣವಾಗಿದ್ದ ಉಪಾಧಿಯನ್ನು ನಾಶಪಡಿಸುವಂತಹ ಜ್ಞಾನದ ಸಾಧನೆಯನ್ನು ಅವನು ನಿಲ್ಲಿಸಿಬಿಟ್ಟನು. ಏಕೆಂದರೆ, ಸಾಧಕನಿಗೆ ಯೋಗಮಾರ್ಗದ ಮೂಲಕ ಶ್ರೀಕೃಷ್ಣ ಕಥಾಮೃತದಲ್ಲಿ ಅನುರಾಗ ಉಂಟಾಗುವವರೆಗೆ ಕೇವಲ ಯೋಗ ಸಾಧನದಿಂದ ಮೋಹಜನಿತ ಪ್ರಮಾದವು ದೂರವಾಗುವುದಿಲ್ಲ; ಭ್ರಮೆಯು ಅಳಿಯುವುದಿಲ್ಲ. ॥12॥

(ಶ್ಲೋಕ - 13)

ಮೂಲಮ್

ಏವಂ ಸ ವೀರಪ್ರವರಃ ಸಂಯೋಜ್ಯಾತ್ಮಾನಮಾತ್ಮನಿ ।
ಬ್ರಹ್ಮಭೂತೋ ದೃಢಂ ಕಾಲೇ ತತ್ಯಾಜ ಸ್ವಂ ಕಲೇವರಮ್ ॥

ಅನುವಾದ

ಮತ್ತೆ ಅಂತ್ಯಕಾಲವು ಸಮೀಪಿಸಿದಾಗ ವೀರವರನಾದ ಪೃಥುವು ತನ್ನ ಚಿತ್ತವನ್ನು ಪರಮಾತ್ಮನಲ್ಲಿ ದೃಢವಾಗಿ ನೆಲೆಗೊಳಿಸಿ, ಬ್ರಹ್ಮಸ್ಥಿತಿಯಲ್ಲಿ ಬ್ರಹ್ಮಭೂತನಾಗಿ ತನ್ನ ಶರೀರವನ್ನು ತೊರೆದುಬಿಟ್ಟನು. ॥13॥

(ಶ್ಲೋಕ - 14)

ಮೂಲಮ್

ಸಂಪೀಡ್ಯ ಪಾಯುಂ ಪಾರ್ಷ್ಣಿಭ್ಯಾಂ
ವಾಯುಮುತ್ಸಾರಯನ್ಛನೈಃ ।
ನಾಭ್ಯಾಂ ಕೋಷ್ಠೇಷ್ವವಸ್ಥಾಪ್ಯ
ಹೃದುರಃಕಂಠಶೀರ್ಷಣಿ ॥

ಅನುವಾದ

ಅವನು ಹಿಮ್ಮಡಿಯಿಂದ ಗುದದ್ವಾರವನ್ನು ತಡೆದು, ಮೂಲಾಧಾರದಲ್ಲಿರುವ ಪ್ರಾಣವಾಯುವನ್ನು ನಿಧಾನವಾಗಿ ಮೇಲಕ್ಕೆ ಏರಿಸುತ್ತಾ ಕ್ರಮವಾಗಿ ನಾಭಿ, ಹೃದಯ, ಕಂಠ ಮತ್ತು ಭ್ರೂಮಧ್ಯದಲ್ಲಿ ನಿಲ್ಲಿಸಿದನು.॥14॥

(ಶ್ಲೋಕ - 15)

ಮೂಲಮ್

ಉತ್ಸರ್ಪಯಂಸ್ತು ತಂ ಮೂರ್ಧ್ನಿ
ಕ್ರಮೇಣಾವೇಶ್ಯ ನಿಃಸ್ಪೃಹಃ ।
ವಾಯುಂ ವಾಯೌ ಕ್ಷಿತೌ ಕಾಯಂ
ತೇಜಸ್ತೇಜಸ್ಯಯೂಯುಜತ್ ॥

ಅನುವಾದ

ಅಲ್ಲಿಂದ ಅದನ್ನು ಮೇಲಕ್ಕೆ ಸೆಳೆದು ಬ್ರಹ್ಮರಂಧ್ರದಲ್ಲಿ ಸ್ಥಾಪಿಸಿದನು. ಈಗ ಅವನಿಗೆ ಯಾವ ಸಾಂಸಾರಿಕ ಭೋಗಗಳ ಆಸೆಯೂ ಉಳಿಯಲಿಲ್ಲ. ಮತ್ತೆ ಆ ವಾಯುವನ್ನು ಸಮಷ್ಟಿ ವಾಯುವಿನಲ್ಲಿಯೂ ಪಾರ್ಥಿವ ಶರೀರವನ್ನು ಪೃಥಿವಿಯಲ್ಲಿಯೂ, ಶರೀರದ ತೇಜವನ್ನು ಸಮಷ್ಟಿತೇಜದಲ್ಲಿಯೂ ಲೀನಗೊಳಿಸಿಬಿಟ್ಟನು. ॥15॥

(ಶ್ಲೋಕ - 16)

ಮೂಲಮ್

ಖಾನ್ಯಾಕಾಶೇ ದ್ರವಂ ತೋಯೇ ಯಥಾಸ್ಥಾನಂ ವಿಭಾಗಶಃ ।
ಕ್ಷಿತಿಮಂಭಸಿ ತತ್ತೇತಜಸ್ಯದೋ ವಾಯೌ ನಭಸ್ಯಮುಮ್ ॥

ಅನುವಾದ

ಹೃದಯಾಕಾಶಾದಿ ದೇಹಾವಚ್ಛಿನ್ನ ಆಕಾಶವನ್ನು ಮಹಾಕಾಶದಲ್ಲಿಯೂ, ರುಧಿರಾದಿ ನೀರಿನ ಅಂಶವನ್ನು ಸಮಷ್ಟಿ ಜಲದಲ್ಲಿ ಲೀನಗೊಳಿಸಿದನು. ಹೀಗೆಯೇ ಮತ್ತೆ ಪೃಥಿವಿ ಯನ್ನು ಜಲದಲ್ಲಿಯೂ, ಜಲವನ್ನು ತೇಜದಲ್ಲಿಯೂ, ತೇಜವನ್ನು ವಾಯುವಿನಲ್ಲಿಯೂ, ವಾಯುವನ್ನು ಆಕಾಶದಲ್ಲಿಯೂ ಲೀನಗೊಳಿಸಿದನು. ॥16॥

(ಶ್ಲೋಕ - 17)

ಮೂಲಮ್

ಇಂದ್ರಿಯೇಷು ಮನಸ್ತಾನಿ ತನ್ಮಾತ್ರೇಷು ಯಥೋದ್ಭವಮ್ ।
ಭೂತಾದಿನಾಮೂನ್ಯುತ್ಕೃಷ್ಯ ಮಹತ್ಯಾತ್ಮನಿ ಸಂದಧೇ ॥

ಅನುವಾದ

ಅನಂತರ ಮನ ಸ್ಸನ್ನು (ಸವಿಕಲ್ಪ ಜ್ಞಾನವನ್ನು) ಇಂದ್ರಿಯಗಳಲ್ಲಿಯೂ, ಇಂದ್ರಿಯಗಳನ್ನು ಅವುಗಳ ಕಾರಣವಾಗಿರುವ ತನ್ಮಾತ್ರೆಗಳಲ್ಲಿಯೂ, ತನ್ಮಾತ್ರೆಗಳಿಗೆ ಕಾರಣವಾದ ಅಹಂಕಾರದ ಮೂಲಕ ಆಕಾಶ, ಇಂದ್ರಿಯಗಳು ಮತ್ತು ತನ್ಮಾತ್ರೆಗಳನ್ನು ಅದೇ ಅಹಂಕಾರದಲ್ಲಿ ಲಯಗೊಳಿಸಿ, ಅಹಂಕಾರವನ್ನೂ, ಮಹತ್ತತ್ತ್ವದಲ್ಲಿ ಲೀನಗೊಳಿಸಿದನು. ॥17॥

(ಶ್ಲೋಕ - 18)

ಮೂಲಮ್

ತಂ ಸರ್ವಗುಣವಿನ್ಯಾಸಂ ಜೀವೇ ಮಾಯಾಮಯೇ ನ್ಯಧಾತ್ ।
ತಂ ಚಾನುಶಯಮಾತ್ಮಸ್ಥಮಸಾವನುಶಯೀ ಪುಮಾನ್ ।
ಜ್ಞಾನವೈರಾಗ್ಯವಿರ್ಯೇಣ ಸ್ವರೂಪಸ್ಥೋಜಹಾತ್ಪ್ರಭುಃ ॥

ಅನುವಾದ

ಮತ್ತೆ ಸಮಸ್ತ ಗುಣಗಳನ್ನು ಅಭಿವ್ಯಕ್ತಗೊಳಿಸುವ ಆ ಮಹತ್ತತ್ತ್ವ ವನ್ನು ಮಾಯೋಪಾಧಿಕ ಜೀವದಲ್ಲಿ ಸ್ಥಿರಗೊಳಿಸಿದನು. ಅನಂತರ ಆ ಮಯಾರೂಪವಾದ ಉಪಾಧಿಯನ್ನೂ ಕೂಡ ಅವನು ಜ್ಞಾನ-ವೈರಾಗ್ಯದ ಪ್ರಭಾವದಿಂದ ತನ್ನ ಶುದ್ಧ ಬ್ರಹ್ಮ ಸ್ವರೂಪದಲ್ಲಿ ಸ್ಥಿತನಾಗಿ ಆನಂದಸ್ವರೂಪನಾದನು. ॥18॥

(ಶ್ಲೋಕ - 19)

ಮೂಲಮ್

ಅರ್ಚಿರ್ನಾಮ ಮಹಾರಾಜ್ಞೀ ತತ್ಪತ್ನ್ಯನುಗತಾ ವನಮ್ ।
ಸುಕುಮಾರ್ಯತದರ್ಹಾ ಚ ಯತ್ಪದ್ಭ್ಯಾಂ ಸ್ಪರ್ಶನಂ ಭುವಃ ॥

ಅನುವಾದ

ಪೃಥುಮಹಾರಾಜನ ಪತ್ನಿಯಾದ ಅರ್ಚಿಯೂ ಕೂಡ ಆತನೊಡನೆ ತಪೋವನಕ್ಕೆ ಹೋಗಿದ್ದಳಷ್ಟೇ! ಆಕೆಯು ಪಾದಗಳನ್ನು ನೆಲಕ್ಕೆ ಸೋಕಿದರೂ ತೊಂದರೆಪಡುವಷ್ಟು ಸುಕುಮಾರಿಯಾಗಿದ್ದಳು. ॥19॥

(ಶ್ಲೋಕ - 20)

ಮೂಲಮ್

ಅತೀವ ಭರ್ತುರ್ವ್ರತಧರ್ಮನಿಷ್ಠಯಾ
ಶುಶ್ರೂಷಯಾ ಚಾರಷದೇಹಯಾತ್ರಯಾ ।
ನಾವಿಂದತಾರ್ತಿಂ ಪರಿಕರ್ಶಿತಾಪಿ ಸಾ
ಪ್ರೇಯಸ್ಕರಸ್ಪರ್ಶನಮಾನನಿರ್ವೃತಿಃ ॥

ಅನುವಾದ

ಹೀಗಿರುವಾಗಲೂ ಆಕೆಯು ತನ್ನ ಪತಿಯು ಕೈಗೊಂಡಿದ್ದ ವ್ರತ-ನಿಯಮಗಳನ್ನು ಪಾಲಿಸುತ್ತಾ ಅವನ ತುಂಬು ಸೇವೆ ಮಾಡಿದಳು. ಮುನಿ ವೃತ್ತಿಗನುಸಾರ ಕಂದ-ಮೂಲಾದಿಗಳಿಂದಲೇ ತನ್ನ ಜೀವನ ನಿರ್ವಾಹಮಾಡಿದಳು. ಇದರಿಂದ ಅವಳು ಬಹಳ ದುರ್ಬಲ ಳಾಗಿದ್ದರೂ ಪ್ರಿಯತಮನ ಕರಸ್ಪರ್ಶದಿಂದ ಸಮ್ಮಾನಿತಳಾಗಿ ಅದರಲ್ಲೇ ಆನಂದವನ್ನು ತಿಳಿದ ಕಾರಣ ಅವಳಿಗೆ ಯಾವುದೇ ಕಷ್ಟಗಳಾಗುತ್ತಿರಲಿಲ್ಲ. ॥20॥

(ಶ್ಲೋಕ - 21)

ಮೂಲಮ್

ದೇಹಂ ವಿಪನ್ನಾಖಿಲಚೇತನಾದಿಕಂ
ಪತ್ಯುಃ ಪೃಥಿವ್ಯಾ ದಯಿತಸ್ಯ ಚಾತ್ಮನಃ ।
ಆಲಕ್ಷ್ಯ ಕಿಂಚಿಚ್ಚ ವಿಲಪ್ಯ ಸಾ ಸತೀ
ಚಿತಾಮಥಾರೋಪಯದದ್ರಿಸಾನುನಿ ॥

ಅನುವಾದ

ಪೃಥಿವಿಗೆ ಪತಿಯಾಗಿ, ತನಗೂ ಪ್ರಿಯತಮನಾದ ಮಹಾರಾಜನ ದೇಹವು ಚೇತನಧರ್ಮಗಳೆಲ್ಲವನ್ನೂ ಕಳೆದುಕೊಂಡಿದ್ದರಿಂದ ಆ ಸಾಧ್ವಿಯು ಸ್ವಲ್ಪಹೊತ್ತು ವಿಲಾಪಿಸಿದಳು. ಮತ್ತೆ ಪರ್ವತದ ಮೇಲೆ ಚಿತೆಯನ್ನು ರಚಿಸಿ ಪತಿಯ ಪವಿತ್ರವಾದ ದೇಹವನ್ನು ಅದರ ಮೇಲೆ ಇರಿಸಿದಳು. ॥21॥

(ಶ್ಲೋಕ - 22)

ಮೂಲಮ್

ವಿಧಾಯ ಕೃತ್ಯಂ ಹ್ರದಿನೀಜಲಾಪ್ಲುತಾ
ದತ್ತ್ವೋದಕಂ ಭರ್ತುರುದಾರಕರ್ಮಣಃ ।
ನತ್ವಾ ದಿವಿಸ್ಥಾಂಸಿ ದಶಾಂಸಿಃ ಪರೀತ್ಯ
ವಿವೇಶ ವಹ್ನಿಂ ಧ್ಯಾಯತೀ ಭರ್ತೃಪಾದೌ ॥

ಅನುವಾದ

ಇದಾದ ಬಳಿಕ ಆ ಸಮಯದಲ್ಲಿ ಮಾಡಬೇಕಾದ ಎಲ್ಲ ವಿಧಿಗಳನ್ನು ಮುಗಿಸಿ ನದಿಯಲ್ಲಿ ಸ್ನಾನಮಾಡಿದಳು. ತನ್ನ ಆ ಪರಾಕ್ರಮಿಯಾದ ಪತಿಗೆ ಜಲಾಂಜಲಿಯನ್ನು ಸಮರ್ಪಿಸಿದಳು. ಆಕಾಶದಲ್ಲಿರುವ ದೇವತೆಗಳಿಗೆ ಪ್ರಣಾಮವನ್ನು ಸಲ್ಲಿಸಿ, ಮೂರುಬಾರಿ ಚಿತೆಗೆ ಪ್ರದಕ್ಷಿಣೆ ಬಂದು ಪತಿದೇವರ ಚರಣಗಳನ್ನು ಧ್ಯಾನಿಸುತ್ತಾ ಅಗ್ನಿಯಲ್ಲಿ ಪ್ರವೇಶಿಸಿದಳು. ॥22॥

(ಶ್ಲೋಕ - 23)

ಮೂಲಮ್

ವಿಲೋಕ್ಯಾನುಗತಾಂ ಸಾಧ್ವೀಂ ಪೃಥುಂ ವೀರವರಂ ಪತಿಮ್ ।
ತುಷ್ಟುವುರ್ವರದಾ ದೇವೈರ್ದೇವಪತ್ನ್ಯಃ ಸಹಸ್ರಶಃ ॥

ಅನುವಾದ

ಪರಮಸಾಧ್ವಿಯಾದ ಅರ್ಚಿಯು ಈ ರೀತಿಯಾಗಿ ತನ್ನ ಪತಿಯಾದ ವೀರವರೇಣ್ಯನಾದ ಪೃಥುವಿನೊಡನೆ ಸಹಗಮನ ಮಾಡುತ್ತಿದ್ದುದನ್ನು ನೋಡಿ ಸಾವಿರಾರು ಮಂದಿ ವರಪ್ರದಾಯಕ ದೇವಿಯರು ತಮ್ಮ-ತಮ್ಮ ಪತಿಗಳೊಡನೆ ಅವಳನ್ನು ಸ್ತುತಿಸಿದರು. ॥23॥

(ಶ್ಲೋಕ - 24)

ಮೂಲಮ್

ಕುರ್ವತ್ಯಃ ಕುಸುಮಾಸಾರಂ ತಸ್ಮಿನ್ಮಂದರಸಾನುನಿ ।
ನದತ್ಸ್ವಮರತೂರ್ಯೇಷು ಗೃಣಂತಿ ಸ್ಮ ಪರಸ್ಪರಮ್ ॥

ಅನುವಾದ

ಅಲ್ಲಿ ದೇವತೆಗಳ ವಾದ್ಯಗಳು ಮೊಳಗಿದವು. ಆಗ ಆ ಮಂದರಾಚಲದ ಶಿಖರದಲ್ಲಿ ಆ ದೇವಾಂಗನೆಯರು ಪುಷ್ಪಗಳ ಮಳೆಯನ್ನೇ ಸುರಿಸುತ್ತಾ ತಮ್ಮ-ತಮ್ಮಲ್ಲಿ ಹೀಗೆ ಮಾತಾಡಿಕೊಳ್ಳತೊಡಗಿದರು.॥24॥

(ಶ್ಲೋಕ - 25)

ಮೂಲಮ್ (ವಾಚನಮ್)

ದೇವ್ಯ ಊಚುಃ

ಮೂಲಮ್

ಅಹೋ ಇಯಂ ವಧೂರ್ಧನ್ಯಾ
ಯಾ ಚೈವಂ ಭೂಭುಜಾಂ ಪತಿಮ್ ।
ಸರ್ವಾತ್ಮನಾ ಪತಿಂ ಭೇಜೇ
ಯಜ್ಞೇಶಂ ಶ್ರೀರ್ವಧೂರಿವ ॥

ಅನುವಾದ

ದೇವಾಂಗನೆಯರು ಹೇಳಿದರು — ಆಹಾ! ಎಂತಹ ಧನ್ಯಳು ಈಕೆ! ಶ್ರೀಲಕ್ಷ್ಮೀದೇವಿಯು ಯಜ್ಞೇಶ್ವರನಾದ ಶ್ರೀಮಹಾವಿಷ್ಣುವಿನ ಸೇವೆಮಾಡುವಂತೆಯೇ ಇವಳು ತನ್ನ ಪತಿಯಾದ ರಾಜರಾಜೇಶ್ವರ ಪೃಥುವಿನ ಮನ, ವಚನ, ಶರೀರದಿಂದ ಹಾಗೆಯೇ ಸೇವೆಯನ್ನು ಮಾಡಿದಳು. ॥25॥

(ಶ್ಲೋಕ - 26)

ಮೂಲಮ್

ಸೈಷಾ ನೂನಂ ವ್ರಜತ್ಯೂರ್ಧ್ವಮನು ವೈನ್ಯಂ ಪತಿಂ ಸತೀ ।
ಪಶ್ಯತಾಸ್ಮಾನತೀತ್ಯಾರ್ಚಿರ್ದುರ್ವಿಭಾವ್ಯೇನ ಕರ್ಮಣಾ ॥

ಅನುವಾದ

ಅವಶ್ಯವಾಗಿಯೂ ಈ ಸಾಧ್ವಿಮಣಿಯು ಚಿಂತಿಸಲೂ ಅಸದಳವಾದ ತನ್ನ ಪುಣ್ಯಕರ್ಮದ ಪ್ರಭಾವದಿಂದ ನಮ್ಮ ಸ್ಥಾನವನ್ನೂ ದಾಟಿ ತನ್ನ ಪತಿಯೊಡನೆ ಉತ್ತಮೋತ್ತಮ ಲೋಕಗಳಿಗೆ ಹೋಗುತ್ತಿದ್ದಾಳೆ. ॥26॥

(ಶ್ಲೋಕ - 27)

ಮೂಲಮ್

ತೇಷಾಂ ದುರಾಪಂ ಕಿಂ ತ್ವನ್ಯನ್
ಮರ್ತ್ಯಾನಾಂ ಭಗವತ್ಪದಮ್ ।
ಭುವಿ ಲೋಲಾಯುಷೋ ಯೇ ವೈ
ನೈಷ್ಕರ್ಮ್ಯಂ ಸಾಧಯಂತ್ಯುತ ॥

ಅನುವಾದ

ಈ ಲೋಕದಲ್ಲಿ ಕೆಲವೇ ದಿನಗಳ ಕಾಲ ಬದುಕಿದ್ದರೂ, ಭಗವಂತನ ಪರಮ ಪದಕ್ಕೆ ಒಯ್ಯುವಂತಹ ಆತ್ಮಜ್ಞಾನವನ್ನು ಪಡೆದಂತಹ ಧನ್ಯಾತ್ಮರಿಗೆ ಪ್ರಪಂಚದಲ್ಲಿ ಯಾವುದೂ ದುರ್ಲಭವಿಲ್ಲ. ॥27॥

(ಶ್ಲೋಕ - 28)

ಮೂಲಮ್

ಸ ವಂಚಿತೋ ಬತಾತ್ಮಧ್ರುಕ್ಕೃಚ್ಛ್ರೇಣ ಮಹತಾ ಭುವಿ ।
ಲಬ್ಧ್ವಾಪವರ್ಗ್ಯಂ ಮಾನುಷ್ಯಂ ವಿಷಯೇಷು ವಿಷಜ್ಜತೇ ॥

ಅನುವಾದ

ಆದ್ದರಿಂದ ಮನುಷ್ಯದೇಹವನ್ನು ಅತಿಪ್ರಯಾಸ ದಿಂದ ಪಡೆದ ನಂತರವೂ ಮೋಕ್ಷಕ್ಕಾಗಿ ಪ್ರಯತ್ನಿಸದೆ ವಿಷಯ ಸುಖಗಳಲ್ಲಿ ಆಸಕ್ತರಾದ ಮನುಷ್ಯರು ನಿಜ ವಾಗಿಯೂ ಆತ್ಮಘಾತಿಗಳೆಂದೇ ತಿಳಿಯಬೇಕು. ‘ಅಯ್ಯೋ ಪಾಪ! ಅವರು ಮೋಸಹೋದರಲ್ಲ!’ ಎಂದು ಮಾತಾಡಿ ಕೊಳ್ಳುತ್ತಿದ್ದರು. ॥28॥

(ಶ್ಲೋಕ - 29)

ಮೂಲಮ್ (ವಾಚನಮ್)

ಮೈತ್ರೇಯ ಉವಾಚ

ಮೂಲಮ್

ಸ್ತುವತೀಷ್ವಮರಸೀಷು ಪತಿಲೋಕಂ ಗತಾ ವಧೂಃ ।
ಯಂ ವಾ ಆತ್ಮವಿದಾಂ ಧುರ್ಯೋ ವೈನ್ಯಃ ಪ್ರಾಪಾಚ್ಯುತಾಶಯಃ ॥

ಅನುವಾದ

ಶ್ರೀಮೈತ್ರೇಯರು ಹೇಳುತ್ತಾರೆ — ಎಲೈ ವಿದುರನೇ! ದೇವಾಂಗನೆಯರು ಹೀಗೆ ಸ್ತುತಿಸುತ್ತಿರುವಾಗಲೇ ಆತ್ಮಜ್ಞಾನಿ ಗಳಲ್ಲಿ ಶ್ರೇಷ್ಠನಾದ ಭಗವದ್ಭಕ್ತ ಶಿರೋಮಣಿಯಾಗಿದ್ದ ಪೃಥು ಮಹಾರಾಜನು ಸೇರಿದ ಭಗವಂತನ ಪರಮಧಾಮವನ್ನೇ ಮಹಾರಾಣಿ ಅರ್ಚಿಯು ಅದೇ ಪತಿಲೋಕಕ್ಕೆ ಹೊರಟು ಹೋದಳು. ॥29॥

(ಶ್ಲೋಕ - 30)

ಮೂಲಮ್

ಇತ್ಥಂ ಭೂತಾನುಭಾವೋಸೌ ಪೃಥುಃ ಸ ಭಗವತ್ತಮಃ ।
ಕೀರ್ತಿತಂ ತಸ್ಯ ಚರಿತಮುದ್ದಾಮಚರಿತಸ್ಯ ತೇ ॥

ಅನುವಾದ

ಪ್ರಭಾವಶಾಲಿಯಾದ ಪರಮ ಭಾಗವತೋತ್ತಮ ಪೃಥುವಿನ ಚರಿತ್ರೆಯು ಅತ್ಯಂತ ಉದಾರವಾದುದು. ಅದನ್ನು ನಾನು ನಿನಗೆ ವರ್ಣಿಸಿರುವೆನು. ॥30॥

(ಶ್ಲೋಕ - 31)

ಮೂಲಮ್

ಯ ಇದಂ ಸುಮಹತ್ಪುಣ್ಯಂ ಶ್ರದ್ಧಯಾವಹಿತಃ ಪಠೇತ್ ।
ಶ್ರಾವಯೇಚ್ಛಣುಯಾದ್ವಾಪಿ ಸ ಪೃಥೋಃ ಪದವೀಮಿಯಾತ್ ॥

ಅನುವಾದ

ಆ ಪರಮಪವಿತ್ರ ಚರಿತ್ರವನ್ನು ಶ್ರದ್ಧೆಯಿಂದ (ನಿಷ್ಕಾಮಭಾವದಿಂದ) ಏಕಾಗ್ರತೆಯಿಂದ ಓದುವವನೂ, ಕೇಳುವವನೂ ಕೂಡ ಪೃಥು ಮಹಾರಾಜನ ಪದವನ್ನೇ ಅಂದರೆ ಭಗವಂತನ ಪರಮಧಾಮವನ್ನು ಪಡೆಯುವನು. ॥31॥

(ಶ್ಲೋಕ - 32)

ಮೂಲಮ್

ಬ್ರಾಹ್ಮಣೋ ಬ್ರಹ್ಮವರ್ಚಸ್ವೀ ರಾಜನ್ಯೋ ಜಗತೀಪತಿಃ ।
ವೈಶ್ಯಃ ಪಠನ್ವಿಟ್ಪತಿಃ ಸ್ಯಾಚ್ಛೂದ್ರಃ ಸತ್ತಮತಾಮಿಯಾತ್ ॥

ಅನುವಾದ

ಇದನ್ನು ಸಕಾಮಭಾವದಿಂದ ಪಠಿಸಿದರೆ ಬ್ರಾಹ್ಮಣನು ಬ್ರಹ್ಮ ತೇಜಸ್ಸನ್ನು ಪಡೆಯುತ್ತಾನೆ. ಕ್ಷತ್ರಿಯನು ಪೃಥಿವೀಪತಿಯಾಗುತ್ತಾನೆ. ವೈಶ್ಯನು ವ್ಯಾಪಾರಿಗಳಲ್ಲಿ ಪ್ರಧಾನನಾಗುತ್ತಾನೆ. ಶೂದ್ರನು ಶ್ರೇಷ್ಠತಮ ಸಾಧುವಾಗುತ್ತಾನೆ. ॥32॥

(ಶ್ಲೋಕ - 33)

ಮೂಲಮ್

ತ್ರಿಕೃತ್ವ ಇದಮಾಕರ್ಣ್ಯ ನರೋ ನಾರ್ಯಥವಾದೃತಾ ।
ಅಪ್ರಜಃ ಸುಪ್ರಜತಮೋ ನಿರ್ಧನೋ ಧನವತ್ತಮಃ ॥

(ಶ್ಲೋಕ - 34)

ಮೂಲಮ್

ಅಸ್ಪಷ್ಟಕೀರ್ತಿಃ ಸುಯಶಾ ಮೂರ್ಖೋ ಭವತಿ ಪಂಡಿತಃ ।
ಇದಂ ಸ್ವಸ್ತ್ಯಯನಂ ಪುಂಸಾಮಮಂಗಲ್ಯನಿವಾರಣಮ್ ॥

ಅನುವಾದ

ಸ್ತ್ರೀಯಾಗಿರಲಿ ಅಥವಾ ಪುರುಷನಾಗಿರಲಿ ಇದನ್ನು ಆದರದಿಂದ ಮೂರುಬಾರಿ ಕೇಳಿದರೆ ಅವರು ಸಂತಾನ ಹೀನರಾಗಿದ್ದರೆ ಸಂತತಿಯನ್ನು, ಧನಹೀನನಾಗಿದ್ದರೆ ಐಶ್ವರ್ಯವನ್ನು, ಕೀರ್ತಿಹೀನನಾಗಿದ್ದರೆ ಕೀರ್ತಿಯನ್ನು, ಮೂರ್ಖನಾಗಿದ್ದರೆ ಪಾಂಡಿತ್ಯವನ್ನು ಹೊಂದುತ್ತಾನೆ. ಈ ಚರಿತೆಯು ಎಲ್ಲ ಮನುಷ್ಯರ ಶ್ರೇಯಸ್ಸು ಮಾಡುವುದಾಗಿಯೂ, ಅಮಂಗಳವನ್ನು ಕಳೆಯುವಂತಹದೂ ಆಗಿದೆ. ॥33-34॥

(ಶ್ಲೋಕ - 35)

ಮೂಲಮ್

ಧನ್ಯಂ ಯಶಸ್ಯಮಾಯುಷ್ಯಂ ಸ್ವರ್ಗ್ಯಂ ಕಲಿಮಲಾಪಹಮ್ ।
ಧರ್ಮಾರ್ಥಕಾಮಮೋಕ್ಷಾಣಾಂ ಸಮ್ಯಕ್ಸಿದ್ಧಿಮಭೀಪ್ಸುಭಿಃ ।
ಶ್ರದ್ಧಯೈತದನುಶ್ರಾವ್ಯಂ ಚತುರ್ಣಾಂ ಕಾರಣಂ ಪರಮ್ ॥

ಅನುವಾದ

ಇದು ಧನ, ಕೀರ್ತಿ ಮತ್ತು ಆಯುಸ್ಸು ಇವುಗಳನ್ನು ವೃದ್ಧಿಪಡಿಸುವುದು. ಸ್ವರ್ಗವನ್ನು ದೊರಕಿಸಿಕೊಡುವಂತಹುದು ಹಾಗೂ ಕಲಿಯುಗದ ದೋಷಗಳನ್ನು ನಾಶಮಾಡುವುದೂ ಆಗಿದೆ. ಧರ್ಮವೇ ಮುಂತಾದ ನಾಲ್ಕೂ ಪುರುಷಾರ್ಥಗಳ ಉತ್ತಮಸಿದ್ಧಿಯನ್ನು ಪಡೆಯಲು ಬಯಸುವವರು ಇದನ್ನು ಶ್ರದ್ಧಾಪೂರ್ವಕ ವಾಗಿ ಶ್ರವಣಿಸಬೇಕು. ॥35॥

(ಶ್ಲೋಕ - 36)

ಮೂಲಮ್

ವಿಜಯಾಭಿಮುಖೋ ರಾಜಾ ಶ್ರುತ್ವೈತದಭಿಯಾತಿ ಯಾನ್ ।
ಬಲಿಂ ತಸ್ಮೈ ಹರಂತ್ಯಗ್ರೇ ರಾಜಾನಃ ಪೃಥವೇ ಯಥಾ ॥

ಅನುವಾದ

ವಿಜಯಕ್ಕಾಗಿ ಪ್ರಸ್ಥಾನ ಮಾಡುವಾಗ ಇದನ್ನು ಕೇಳಿ ಹೊರಟ ರಾಜನ ಮುಂದೆ ಪೃಥುಮಹಾರಾಜನಿಗೆ ರಾಜರು ಕಾಣಿಕೆಗಳನ್ನು ಒಪ್ಪಿಸುತ್ತಿದ್ದಂತೆ ಈತನಿಗೂ ಒಪ್ಪಿಸುವರು. ॥36॥

(ಶ್ಲೋಕ - 37)

ಮೂಲಮ್

ಮುಕ್ತಾನ್ಯಸಂಗೋ ಭಗವತ್ಯಮಲಾಂ ಭಕ್ತಿಮುದ್ವಹನ್ ।
ವೈನ್ಯಸ್ಯ ಚರಿತಂ ಪುಣ್ಯಂ ಶೃಣುಯಾಚ್ಛ್ರಾವಯೇತ್ಪಠೇತ್ ॥

ಅನುವಾದ

ಮನುಷ್ಯನು ಬೇರೆ ಎಲ್ಲ ರೀತಿಯ ಆಸಕ್ತಿಯನ್ನು ಬಿಟ್ಟು, ಭಗವಂತನಲ್ಲಿ ಶುದ್ಧವಾದ ನಿಷ್ಕಾಮ ಭಾವವನ್ನಿಟ್ಟು ಪೃಥುಮಹಾರಾಜನ ಈ ನಿರ್ಮಲ ಚರಿತ್ರವನ್ನು ಕೇಳಬೇಕು, ಹೇಳಬೇಕು ಮತ್ತು ಓದಬೇಕು. ॥37॥

(ಶ್ಲೋಕ - 38)

ಮೂಲಮ್

ವೈಚಿತ್ರವೀರ್ಯಾಭಿಹಿತಂ ಮಹನ್ಮಾಹಾತ್ಮ್ಯಸೂಚಕಮ್ ।
ಅಸ್ಮಿನ್ಕೃತಮತಿರ್ಮರ್ತ್ಯಃ ಪಾರ್ಥವೀಂ ಗತಿಮಾಪ್ನುಯಾತ್ ॥

ಅನುವಾದ

ವಿದುರನೇ! ಭಗವಂತನ ಮಹಿಮೆಯನ್ನು ಪ್ರಕಟಪಡಿಸುವ ಈ ಪವಿತ್ರವಾದ ಚರಿತ್ರೆಯನ್ನು ನಾನು ನಿನಗೆ ಹೇಳಿದೆ. ಇದರಲ್ಲಿ ಪೂರ್ಣವಾದ ಭಕ್ತಿ-ಶ್ರದ್ಧೆಯನ್ನಿಡುವವನು ಪೃಥುಮಹಾರಾಜನು ಪಡೆದ ಗತಿಯನ್ನೇ ಪಡೆಯುವನು. ॥38॥

(ಶ್ಲೋಕ - 39)

ಮೂಲಮ್

ಅನುದಿನಮಿದಮಾದರೇಣ ಶೃಣ್ವನ್
ಪೃಥುಚರಿತಂ ಪ್ರಥಯನ್ವಿಮುಕ್ತಸಂಗಃ ।
ಭಗವತಿ ಭವಸಿಂಧುಪೋತಪಾದೇ
ಸ ಚ ನಿಪುಣಾಂ ಲಭತೇ ರತಿಂ ಮನುಷ್ಯಃ ॥

ಅನುವಾದ

ಈ ಪೃಥುಚರಿತ್ರೆಯನ್ನು ಪ್ರತಿ ದಿನವೂ ಆದರದಿಂದ ನಿಷ್ಕಾಮಭಾವದೊಂದಿಗೆ ಶ್ರವಣ-ಕೀರ್ತನೆಮಾಡುವ ಮನುಷ್ಯನು ಸಂಸಾರಸಾಗರವನ್ನು ಪಾರಾಗಿಸಲು ನೌಕೆಯಂತಿರುವ ಪಾದಗಳುಳ್ಳ, ಶ್ರೀಹರಿಯಲ್ಲಿ ದೃಢವಾದ ಅನುರಾಗವನ್ನು ಹೊಂದುವನು. ॥39॥

ಅನುವಾದ (ಸಮಾಪ್ತಿಃ)

ಇಪ್ಪತ್ತಮೂರನೆಯ ಅಧ್ಯಾಯವು ಮುಗಿಯಿತು. ॥23॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಚತುರ್ಥಸ್ಕಂಧೇ ತ್ರಯೋವಿಂಶೋಽಧ್ಯಾಯಃ ॥23॥