೨೨

[ಇಪ್ಪತ್ತೆರಡನೆಯ ಅಧ್ಯಾಯ]

ಭಾಗಸೂಚನಾ

ಪೃಥು ಮಹಾರಾಜನಿಗೆ ಸನಕಾದಿಗಳ ಉಪದೇಶ

(ಶ್ಲೋಕ - 1)

ಮೂಲಮ್ (ವಾಚನಮ್)

ಮೈತ್ರೇಯ ಉವಾಚ

ಮೂಲಮ್

ಜನೇಷು ಪ್ರಗೃಣತ್ಸ್ವೇವಂ ಪೃಥುಂ ಪೃಥುಲವಿಕ್ರಮಮ್ ।
ತತ್ರೋಪಜಗ್ಮುರ್ಮುನಯಶ್ಚತ್ವಾರಃ ಸೂರ್ಯವರ್ಚಸಃ ॥

ಅನುವಾದ

ಶ್ರೀಮೈತ್ರೇಯರು ಹೇಳುತ್ತಾರೆ — ವಿಪುಲ ಪರಾಕ್ರಮಿ ಯಾದ ಪೃಥುಸಾರ್ವಭೌಮನನ್ನು ಜನರು ಹೀಗೆ ಅಭಿನಂದಿ ಸುತ್ತಿರುವಾಗಲೇ ಸೂರ್ಯನಂತೇ ದೇದೀಪ್ಯಮಾನರಾಗಿದ್ದ ಸನಕರೇ ಮುಂತಾದ ನಾಲ್ವರು ಮುನಿಶ್ರೇಷ್ಠರು ಅಲ್ಲಿಗೆ ದಯಮಾಡಿಸಿದರು. ॥1॥

(ಶ್ಲೋಕ - 2)

ಮೂಲಮ್

ತಾಂಸ್ತು ಸಿದ್ಧೇಶ್ವರಾನ್ ರಾಜಾ ವ್ಯೋಮ್ನೋವತರತೋರ್ಚಿಷಾ ।
ಲೋಕಾನಪಾಪಾನ್ಕುರ್ವತ್ಯಾ ಸಾನುಗೋಚಷ್ಟ ಲಕ್ಷಿತಾನ್ ॥

ಅನುವಾದ

ತಮ್ಮ ದಿವ್ಯವಾದ ಕಾಂತಿಯಿಂದ ಲೋಕಗಳ ಪಾಪಗಳನ್ನು ಕಳೆಯುತ್ತಾ ಆಕಾಶದಿಂದ ಇಳಿದು ಬರುತ್ತಿದ್ದ ಆ ಸಿದ್ಧೇಶ್ವರರನ್ನು ಪೃಥುವೂ, ಅವನ ಅನುಚರರೂ ಗುರುತಿಸಿದರು. ॥2॥

(ಶ್ಲೋಕ - 3)

ಮೂಲಮ್

ತದ್ದರ್ಶನೋದ್ಗತಾನ್ ಪ್ರಾಣಾನ್ ಪ್ರತ್ಯಾದಿತ್ಸುರಿವೋತ್ಥಿತಃ ।
ಸಸದಸ್ಯಾನುಗೋ ವೈನ್ಯ ಇಂದ್ರಿಯೇಶೋ ಗುಣಾನಿವ ॥

ಅನುವಾದ

ಅವರನ್ನು ದರ್ಶಿಸುತ್ತಲೇ ರಾಜನ ಪ್ರಾಣಗಳು ವಿಷಯಾಸಕ್ತ ಜೀವರು ವಿಷಯಗಳ ಕಡೆಗೆ ಓಡುವಂತೆ ಅವರ ಕಡೆಗೆ ಧಾವಿಸಿದವು. ಅವುಗಳನ್ನು ಹಿಂದಕ್ಕೆ ಬರಮಾಡಿಕೊಳ್ಳುವುದ ಕ್ಕಾಗಿಯೋ ಎಂಬಂತೆ ಅವನು ತನ್ನ ಸದಸ್ಯರು ಮತ್ತು ಅನು ಯಾಯಿಗಳೊಂದಿಗೆ ತಟ್ಟನೆ ಎದ್ದುನಿಂತನು. ॥3॥

(ಶ್ಲೋಕ - 4)

ಮೂಲಮ್

ಗೌರವಾದ್ಯನಿತಃ ಸಭ್ಯಃ ಪ್ರಶ್ರಯಾನತಕಂಧರಃ ।
ವಿಧಿವತ್ಪೂಜಯಾನ್ ಚಕ್ರೇ ಗೃಹೀತಾಧ್ಯರ್ಹಣಾಸನಾನ್ ॥

ಅನುವಾದ

ಆ ಮುನೀಶ್ವರರು ಅರ್ಘ್ಯವನ್ನು ಸ್ವೀಕರಿಸಿ ಆಸೀನರಾದಾಗ ಶಿಷ್ಟಾ ಗ್ರೇಸರನಾದ ಪೃಥುಮಹಾರಾಜನು ಅವರ ಗೌರವದಿಂದ ಪ್ರಭಾವಿತನಾಗಿ ವಿನಯದಿಂದ ತಲೆಯನ್ನು ತಗ್ಗಿಸಿ ಅವರನ್ನು ವಿಧಿಪೂರ್ವಕವಾಗಿ ಪೂಜಿಸಿದನು. ॥4॥

(ಶ್ಲೋಕ - 5)

ಮೂಲಮ್

ತತ್ಪಾದಶೌಚಸಲಿಲೈರ್ಮಾರ್ಜಿತಾಲಕಬಂಧನಃ ।
ತತ್ರ ಶೀಲವತಾಂ ವೃತ್ತಮಾಚರನ್ಮಾನಯನ್ನಿವ ॥

ಅನುವಾದ

ಅನಂತರ ಅವರ ಚರಣೋದಕವನ್ನು ತನ್ನ ತಲೆಯ ಮೇಲೆ ಪ್ರೋಕ್ಷಿಸಿಕೊಂಡು ಶೀಲವಂತರಾದ ಶಿಷ್ಟಜನರ ಆಚರಣೆಯು ಅಂತಹ ಸಮಯದಲ್ಲಿ ಹೇಗಿರಬೇಕು ಎಂಬುದಕ್ಕೆ ಆದರ್ಶನಾದನು. ॥5॥

(ಶ್ಲೋಕ - 6)

ಮೂಲಮ್

ಹಾಟಕಾಸನ ಆಸೀನಾನ್ ಸ್ವಧಿಷ್ಣ್ಯೇಷ್ವಿವ ಪಾವಕಾನ್ ।
ಶ್ರದ್ಧಾ ಸಂಯಮಸಂಯುಕ್ತಃ ಪ್ರೀತಃ ಪ್ರಾಹ ಭವಾಗ್ರಜಾನ್ ॥

ಅನುವಾದ

ಭಗವಾನ್ ಶಂಕರ ನಿಗೂ ಅಣ್ಣಂದಿರಾಗಿದ್ದ ಆ ಮುನೀಶ್ವರರು ತಮ್ಮ-ತಮ್ಮ ಸ್ಥಾನಗಳಲ್ಲಿ ಬೆಳಗುತ್ತಿರುವ ಅಗ್ನಿಗಳಂತೆ ಸ್ವರ್ಣಸಿಂಹಾಸನ ಗಳಲ್ಲಿ ಶೋಭಿಸಿದರು. ಪೃಥು ಮಹಾರಾಜನು ಅತ್ಯಂತ ಶ್ರದ್ಧಾ-ಸಂಯಮಗಳೊಡನೆ ಪ್ರೇಮ ಪೂರ್ವಕ ಅವರಲ್ಲಿ ಹೀಗೆ ವಿಜ್ಞಾಪಿಸಿಕೊಂಡನು. ॥6॥

(ಶ್ಲೋಕ - 7)

ಮೂಲಮ್ (ವಾಚನಮ್)

ಪೃಥುರುವಾಚ

ಮೂಲಮ್

ಅಹೋ ಆಚರಿತಂ ಕಿಂ ಮೇ ಮಂಗಲಂ ಮಂಗಲಾಯನಾಃ ।
ಯಸ್ಯ ವೋ ದರ್ಶನಂ ಹ್ಯಾಸೀದ್ದುರ್ದರ್ಶಾನಾಂ ಚ ಯೋಗಿಭಿಃ ॥

ಅನುವಾದ

ಪೃಥು ಮಹಾರಾಜನು ಕೇಳಿದನು ಮಂಗಳಮೂರ್ತಿಗಳಾದ ಮುನೀಶ್ವರರೇ! ಯೋಗಿಗಳಿಗೂ ದುರ್ಲಭವಾದ ನಿಮ್ಮ ದರ್ಶನವು ನನಗೆ ತಾನಾಗಿಯೇ ಒದಗಿ ಬಂದಿತಲ್ಲ! ನಾನು ಎಂತಹ ಪುಣ್ಯವನ್ನು ಆಚರಿಸಿರಬೇಕು! ಆಹಾ! ಎಂತಹ ಭಾಗ್ಯವು ನನ್ನದು! ॥7॥

(ಶ್ಲೋಕ - 8)

ಮೂಲಮ್

ಕಿಂ ತಸ್ಯ ದುರ್ಲಭತರಮಿಹ ಲೋಕೇ ಪರತ್ರ ಚ ।
ಯಸ್ಯ ವಿಪ್ರಾಃ ಪ್ರಸೀದಂತಿ ಶಿವೋ ವಿಷ್ಣುಶ್ಚ ಸಾನುಗಃ ॥

ಅನುವಾದ

ಜ್ಞಾನಿಗಳಾದ ಬ್ರಾಹ್ಮಣ ರಾಗಲೀ, ಅನುಚರ ಸಹಿತನಾದ ಶಿವನಾಗಲೀ, ಶ್ರೀವಿಷ್ಣುವಾಗಲೀ ಯಾರ ಮೇಲೆ ಪ್ರಸನ್ನರಾಗುವರೋ ಅವರಿಗೆ ಇಹಲೋಕದಲ್ಲಾಗಲೀ ಪರಲೋಕದಲ್ಲಾಗಲೀ ದುರ್ಲಭವಾದ ವಸ್ತು ಯಾವುದಿದೆ? ॥8॥

(ಶ್ಲೋಕ - 9)

ಮೂಲಮ್

ನೈವ ಲಕ್ಷಯತೇ ಲೋಕೋ
ಲೋಕಾನ್ ಪರ್ಯಟತೋಪಿ ಯಾನ್ ।
ಯಥಾ ಸರ್ವದೃಶಂ ಸರ್ವ
ಆತ್ಮಾನಂ ಯೇಸ್ಯಹೇತವಃ ॥

ಅನುವಾದ

ದೃಶ್ಯ ಪ್ರಪಂಚದ ಕಾರಣವಾಗಿರುವ ಮಹತತ್ತ್ವವೇ ಮುಂತಾದವುಗಳು ಆತ್ಮನು ಸರ್ವಸಾಕ್ಷಿಯಾಗಿ ಸರ್ವಗತವಾಗಿದ್ದರೂ ಆತನನ್ನು ನೋಡಲಾಗುವುದಿಲ್ಲವೋ, ಹಾಗೆಯೇ ನೀವು ಸಮಸ್ತ ಲೋಕಗಳಲ್ಲಿಯೂ ಸದಾಸಂಚರಿಸುತ್ತಿದ್ದರೂ ಸಾಧಾರಣ ಮನುಷ್ಯರು ನಿಮ್ಮನ್ನು ನೋಡಲಾರರು. ॥9॥

(ಶ್ಲೋಕ - 10)

ಮೂಲಮ್

ಅಧನಾ ಅಪಿ ತೇ ಧನ್ಯಾಃ ಸಾಧವೋ ಗೃಹಮೇಧಿನಃ ।
ಯದ್ಗೃಹಾ ಹ್ಯರ್ಹವರ್ಯಾಂಬುತೃಣಭೂಮೀಶ್ವರಾವರಾಃ ॥

ಅನುವಾದ

ನಿಮ್ಮಂತಹ ಪೂಜ್ಯತಮರಾದ ಮಹಾಪುರುಷರು ಯಾವನಾದರೂ ಗೃಹಸ್ಥನ ಮನೆಯಲ್ಲಿ ನೀರು, ನೆಲ, ಹುಲ್ಲು, ಮನೆಯ ಯಜಮಾನನ ಅಥವಾ ಸೇವಕರ ಸೇವೆ ಯನ್ನು ಸ್ವೀಕರಿಸಿದರೆ ಅವನು ಧನಹೀನನಾಗಿದ್ದರೂ ಧನ್ಯತ ಮನೇ ಆಗುವನು. ॥10॥

(ಶ್ಲೋಕ - 11)

ಮೂಲಮ್

ವ್ಯಾಲಾಲಯದ್ರುಮಾವೈ ತೇಪ್ಯರಿಕ್ತಾಖಿಲಸಂಪದಃ ।
ಯದ್ಗೃಹಾಸ್ತೀರ್ಥಪಾದೀಯಪಾದತೀರ್ಥವಿವರ್ಜಿತಾಃ ॥

ಅನುವಾದ

ಹಾಗೆಯೇ ಭಗವದ್ಭಕ್ತರ ಪರಮ ಪವಿತ್ರವಾದ ಪಾದೋದಕದ ಬಿಂದುಗಳು ಯಾರ ಮನೆಯಲ್ಲಿ ಎಂದಿಗೂ ಬಿದ್ದಿಲ್ಲವೋ, ಆ ಮನೆಗಳು ಎಲ್ಲ ರೀತಿಯ ಸಿರಿ-ಸಂಪತ್ತುಗಳಿಂದ ತುಂಬಿದ್ದರೂ ಹಾವುಗಳು ವಾಸಿಸುವ ವೃಕ್ಷಗಳಂತೆ ಆಗಿವೆ. ॥11॥

(ಶ್ಲೋಕ - 12)

ಮೂಲಮ್

ಸ್ವಾಗತಂ ವೋ ದ್ವಿಜಶ್ರೇಷ್ಠಾ ಯದ್ವ್ರತಾನಿ ಮುಮುಕ್ಷವಃ ।
ಚರಂತಿ ಶ್ರದ್ಧಯಾ ಧೀರಾ ಬಾಲಾ ಏವ ಬೃಹಂತಿ ಚ ॥

ಅನುವಾದ

ಮುನೀಶ್ವರರೇ! ನಿಮಗೆ ಸ್ವಾಗತವು. ನೀವುಗಳಾದರೋ ಬಾಲ್ಯದಿಂದಲೇ ಮುಮುಕ್ಷುಗಳ ಮಾರ್ಗವನ್ನು ಅನುಸರಿಸುತ್ತಾ ಏಕಾಗ್ರ ವಾದ ಚಿತ್ತದಿಂದ ಬ್ರಹ್ಮಚರ್ಯವೇ ಮುಂತಾದ ಮಹಾನ್ ವ್ರತಗಳನ್ನು ಅತಿ ಶ್ರದ್ಧೆಯಿಂದ ಆಚರಿಸುತ್ತಿರುವಿರಿ. ॥12॥

(ಶ್ಲೋಕ - 13)

ಮೂಲಮ್

ಕಚ್ಚಿನ್ನಃ ಕುಶಲಂ ನಾಥಾ ಇಂದ್ರಿಯಾರ್ಥಾರ್ಥವೇದಿನಾಮ್ ।
ವ್ಯಸನಾವಾಪ ಏತಸ್ಮಿನ್ ಪತಿತಾನಾಂ ಸ್ವಕರ್ಮಭಿಃ ॥

ಅನುವಾದ

ಸ್ವಾಮಿಗಳೇ! ನಾವುಗಳು ಕರ್ಮವಶರಾಗಿ ವಿಪತ್ತುಗಳಿಗೆ ಕ್ಷೇತ್ರರೂಪವಾದ ಈ ಸಂಸಾರದಲ್ಲಿ ಬಿದ್ದುಕೊಂಡು ಕೇವಲ ಇಂದ್ರಿಯಸಂಬಂಧವಾದ ಭೋಗಗಳನ್ನೇ ಪರಮಪುರು ಷಾರ್ಥವೆಂದು ತಿಳಿಯುತ್ತಿದ್ದೇವೆ. ಇಂತಹ ನಮಗೆ ಶ್ರೇಯಸ್ಸಿನ ದಾರಿ ನೀವೇ ತೋರಬೇಕು. ॥13॥

(ಶ್ಲೋಕ - 14)

ಮೂಲಮ್

ಭವತ್ಸು ಕುಶಲಪ್ರಶ್ನ ಆತ್ಮಾರಾಮೇಷು ನೇಷ್ಯತೇ ।
ಕುಶಲಾಕುಶಲಾ ಯತ್ರ ನ ಸಂತಿ ಮತಿವೃತ್ತಯಃ ॥

ಅನುವಾದ

ನಿಮ್ಮಲ್ಲಿ ಕುಶಲದ ಬಗ್ಗೆ ಪ್ರಶ್ನಿಸುವುದು ಉಚಿತವಲ್ಲ. ಏಕೆಂದರೆ, ನೀವು ನಿರಂತರ ಆತ್ಮನಲ್ಲೇ ರಮಿಸುತ್ತಿರುವವರು. ಕುಶಲಾಕುಶಲಗಳೆಂಬ ವೃತ್ತಿಗಳೇ ನಿಮ್ಮಲ್ಲಿ ಎಂದಿಗೂ ಇರುವುದಿಲ್ಲ. ॥14॥

(ಶ್ಲೋಕ - 15)

ಮೂಲಮ್

ತದಹಂ ಕೃತವಿಶ್ರಂಭಃ ಸುಹೃದೋ ವಸ್ತಪಸ್ವಿನಾಮ್ ।
ಸಂಪೃಚ್ಛೇ ಭವ ಏತಸ್ಮಿನ್ ಕ್ಷೇಮಃ ಕೇನಾಂಜಸಾ ಭವೇತ್ ॥

ಅನುವಾದ

ನೀವು ಸಂಸಾರದಲ್ಲಿ ನೊಂದು-ಬೆಂದ ಜೀವಿಗಳಿಗೆಲ್ಲ ಪರಮಮಿತ್ರರಾಗಿದ್ದೀರಿ. ಆದ್ದರಿಂದ ನಿಮ್ಮಲ್ಲಿ ನಂಬಿಕೆಯನ್ನಿಟ್ಟು ಈ ಸಂಸಾರದಲ್ಲಿ ಮನುಷ್ಯನಿಗೆ ಅತಿ ಶೀಘ್ರವಾಗಿ ಮತ್ತು ಸುಲಭವಾಗಿ ಶ್ರೇಯಸ್ಸು ಯಾವುದರಿಂದ ಉಂಟಾಗ ಬಲ್ಲದು? ಎಂದು ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ. ॥15॥

(ಶ್ಲೋಕ - 16)

ಮೂಲಮ್

ವ್ಯಕ್ತಮಾತ್ಮವತಾಮಾತ್ಮಾ ಭಗವಾನಾತ್ಮಭಾವನಃ ।
ಸ್ವಾನಾಮನುಗ್ರಹಾಯೇಮಾಂ ಸಿದ್ಧರೂಪೀ ಚರತ್ಯಜಃ ॥

ಅನುವಾದ

ಆತ್ಮಜ್ಞಾನಿಗಳಾದ ಧೀರರಿಗೆಲ್ಲ ‘ಆತ್ಮ’ನಾಗಿ ಪ್ರಕಾಶಿಸುತ್ತಾ, ಉಪಾಸಕರ ಹೃದಯದಲ್ಲಿ ತನ್ನ ಸ್ವರೂಪವನ್ನು ಪ್ರಕಟ ಪಡಿಸುವಂತಹ ಜನ್ಮರಹಿತನಾದ ಭಗವಾನ್ ನಾರಾಯಣನೇ ತನ್ನ ಭಕ್ತರನ್ನು ಅನುಗ್ರಹಿಸಲಿಕ್ಕಾಗಿ ನಿಮ್ಮಂತಹ ಸಿದ್ಧರ ರೂಪದಲ್ಲಿ ಭೂಮಿಯಲ್ಲಿ ಸಂಚರಿಸುತ್ತಾನೆಂಬುದರಲ್ಲಿ ಸಂದೇಹವೇ ಇಲ್ಲ. ॥16॥

(ಶ್ಲೋಕ - 17)

ಮೂಲಮ್ (ವಾಚನಮ್)

ಮೈತ್ರೇಯ ಉವಾಚ

ಮೂಲಮ್

ಪೃಥೋಸ್ತತ್ಸೂಕ್ತಮಾಕರ್ಣ್ಯ ಸಾರಂ ಸುಷ್ಠು ಮಿತಂ ಮಧು ।
ಸ್ಮಯಮಾನ ಇವ ಪ್ರೀತ್ಯಾ ಕುಮಾರಃ ಪ್ರತ್ಯುವಾಚ ಹ ॥

ಅನುವಾದ

ಶ್ರೀಮೈತ್ರೇಯರು ಹೇಳುತ್ತಾರೆ — ಪೃಥು ಮಹಾರಾಜನ ಯುಕ್ತಿಯುಕ್ತವೂ, ಗಂಭೀರವೂ, ಸಂಕ್ಷಿಪ್ತವೂ ಆದ ಮಧುರ ವಚನಗಳನ್ನು ಕೇಳಿ ಸನತ್ಕುಮಾರರಿಗೆ ಅತೀವ ಸಂತೋಷವಾಗಿ ನಗುನಗುತ್ತಾ ರಾಜನಲ್ಲಿ ಇಂತೆಂದರು. ॥17॥

(ಶ್ಲೋಕ - 18)

ಮೂಲಮ್ (ವಾಚನಮ್)

ಸನತ್ಕುಮಾರ ಉವಾಚ

ಮೂಲಮ್

ಸಾಧು ಪೃಷ್ಟಂ ಮಹಾರಾಜ ಸರ್ವಭೂತಹಿತಾತ್ಮನಾ ।
ಭವತಾ ವಿದುಷಾ ಚಾಪಿ ಸಾಧೂನಾಂ ಮತಿರೀದೃಶೀ ॥

ಅನುವಾದ

ಶ್ರೀಸನತ್ಕುಮಾರರು ಹೇಳುತ್ತಾರೆ — ಎಲೈ ಮಹಾರಾಜಾ! ನೀನು ಸ್ವತಃ ಇವೆಲ್ಲವನ್ನು ತಿಳಿದುಕೊಂಡಿದ್ದರೂ ಸಮಸ್ತ ಪ್ರಾಣಿಗಳಿಗೂ ಒಳ್ಳೆಯದಾಗಲಿ ಎಂಬ ದೃಷ್ಟಿಯಿಂದ ಇಂತಹ ಒಳ್ಳೆಯ ಪ್ರಶ್ನೆಯನ್ನೇ ಕೇಳಿರುವೆ. ನಿಜವಾಗಿ ಸಾಧು- ಸತ್ಪುರುಷರ ಬುದ್ಧಿಯು ಹೀಗೆಯೇ ಇರುವುದಲ್ಲ! ॥18॥

(ಶ್ಲೋಕ - 19)

ಮೂಲಮ್

ಸಂಗಮಃ ಖಲು ಸಾಧೂನಾಮುಭಯೇಷಾಂ ಚ ಸಮ್ಮತಃ ।
ಯತ್ಸಂಭಾಷಣಸಂಪ್ರಶ್ನಃ ಸರ್ವೇಷಾಂ ವಿತನೋತಿ ಶಮ್ ॥

ಅನುವಾದ

ಸತ್ಪುರುಷರ ಸಮಾಗಮವು ಕೇಳುವವರಿಗೆ ಮತ್ತು ಹೇಳು ವವರಿಬ್ಬರಿಗೂ ಸಮ್ಮತವೇ ಆಗಿರುತ್ತದೆ. ಏಕೆಂದರೆ, ಅವರ ಪ್ರಶ್ನೋತ್ತರಗಳು ಎಲ್ಲರ ಶ್ರೇಯಸ್ಸನ್ನೇ ಮಾಡುವುವು.॥19॥

(ಶ್ಲೋಕ - 20)

ಮೂಲಮ್

ಅಸ್ತ್ಯೇವ ರಾಜನ್ ಭವತೋ ಮಧುದ್ವಿಷಃ
ಪಾದಾರವಿಂದಸ್ಯ ಗುಣಾನುವಾದನೇ ।
ರತಿರ್ದುರಾಪಾ ವಿಧುನೋತಿ ನೈಷ್ಠಿಕೀ
ಕಾಮಂ ಕಷಾಯಂ ಮಲಮಂತರಾತ್ಮನಃ ॥

ಅನುವಾದ

ರಾಜನೇ! ನಿನಗೆ ಭಗವಾನ್ ಮಧುಸೂದನನ ಅಡಿದಾವರೆಗಳ ಗುಣಗಳನ್ನು ವರ್ಣಿಸುವುದರಲ್ಲೇ ಸ್ಥಿರವಾದ ಪ್ರೀತಿಯಿದೆ. ಎಲ್ಲರಿಗೆ ಈ ಪ್ರೀತಿಯು ಸುಲಭವಾಗಿ ಸಾಧ್ಯವಾಗುವುದಿಲ್ಲ. ಅದು ಭಾಗ್ಯವಶದಿಂದ ದೊರಕಿದ್ದೇ ಆದರೆ ಬೇರಾವ ಉಪಾಯದಿಂದಲೂ ಬಿಟ್ಟುಹೋಗದಿರುವ ಹೃದಯಸ್ಥ ವಾಸನಾರೂಪವಾದ ಮಲವನ್ನು ಪೂರ್ಣವಾಗಿ ನಾಶ ಮಾಡಿಬಿಡುತ್ತದೆ. ॥20॥

(ಶ್ಲೋಕ - 21)

ಮೂಲಮ್

ಶಾಸೇಷ್ವಿಯಾನೇವ ಸುನಿಶ್ಚಿತೋ ನೃಣಾಂ
ಕ್ಷೇಮಸ್ಯ ಸಧ್ರ್ಯಗ್ವಿಮೃಶೇಷು ಹೇತುಃ ।
ಅಸಂಗ ಆತ್ಮವ್ಯತಿರಿಕ್ತ ಆತ್ಮನಿ
ದೃಢಾ ರತಿರ್ಬ್ರಹ್ಮಣಿ ನಿರ್ಗುಣೇ ಚ ಯಾ ॥

ಅನುವಾದ

ಶಾಸ್ತ್ರಗಳು ಜೀವಿಗಳ ಶ್ರೇಯಸ್ಸಿಗಾಗಿಯೇ ಚೆನ್ನಾಗಿ ವಿಚಾರಮಾಡಿ, ಆತ್ಮನಿಂದ ಬೇರೆಯಾದ ದೇಹಾದಿಗಳ ಕುರಿತು ವೈರಾಗ್ಯ ಉಂಟಾಗುವುದೇ ಶ್ರೇಯಸ್ಸಿನ ಸಾಧನೆಯೆಂದು ನಿಶ್ಚಿತಗೊಳಿಸಿವೆ. ॥21॥

(ಶ್ಲೋಕ - 22)

ಮೂಲಮ್

ಸಾ ಶ್ರದ್ಧಯಾ ಭಗವದ್ಧರ್ಮಚರ್ಯಯಾ
ಜಿಜ್ಞಾಸಯಾಧ್ಯಾತ್ಮಿಕಯೋಗನಿಷ್ಠಯಾ ।
ಯೋಗೇಶ್ವರೋಪಾಸನಯಾ ಚ ನಿತ್ಯಂ
ಪುಣ್ಯಶ್ರವಃ ಕಥಯಾ ಪುಣ್ಯಯಾ ಚ ॥

(ಶ್ಲೋಕ - 23)

ಮೂಲಮ್

ಅರ್ಥೇಂದ್ರಿಯಾರಾಮಸಗೋಷ್ಠ್ಯ ತೃಷ್ಣಯಾ
ತತ್ಸಮ್ಮತಾನಾಮಪರಿಗ್ರಹೇಣ ಚ ।
ವಿವಿಕ್ತರುಚ್ಯಾ ಪರಿತೋಷ ಆತ್ಮನ್
ವಿನಾ ಹರೇರ್ಗುಣಪೀಯೂಷಪಾನಾತ್ ॥

(ಶ್ಲೋಕ - 24)

ಮೂಲಮ್

ಅಹಿಂಸಯಾ ಪಾರಮಹಂಸ್ಯ ಚರ್ಯಯಾ
ಸ್ಮೃತ್ಯಾ ಮುಕುಂದಾ ಚರಿತಾಗ್ರ್ಯಸೀಧುನಾ ।
ಯಮೈರಕಾಮೈರ್ನಿಯಮೈಶ್ಚಾಪ್ಯ ನಿಂದಯಾ
ನಿರೀಹಯಾ ದ್ವಂದ್ವ ತಿತಿಕ್ಷಯಾ ಚ ॥

(ಶ್ಲೋಕ - 25)

ಮೂಲಮ್

ಹರೇರ್ಮುಹುಸ್ತತ್ಪರಕರ್ಣಪೂರ-
ಗುಣಾಭಿಧಾನೇನ ವಿಜೃಂಭಮಾಣಯಾ ।
ಭಕ್ತ್ಯಾ ಹ್ಯಸಂಗಃ ಸದಸತ್ಯನಾತ್ಮನಿ
ಸ್ಯಾನ್ನಿರ್ಗುಣೇ ಬ್ರಹ್ಮಣಿ ಚಾಂಜಸಾ ರತಿಃ ॥

ಅನುವಾದ

ಗುರುಗಳ ಮತ್ತು ಶಾಸ್ತ್ರಗಳ ವಚನಗಳಲ್ಲಿ ವಿಶ್ವಾಸವಿರಿಸುವುದರಿಂದ, ಭಾಗವತ ಧರ್ಮಗಳನ್ನು ಆಚರಿಸುವುದರಿಂದ, ತತ್ತ್ವಜಿಜ್ಞಾಸೆಯಿಂದ, ಜ್ಞಾನಯೋಗದ ನಿಷ್ಠೆಯಿಂದ, ಯೋಗೇಶ್ವರ ಶ್ರೀಹರಿಯ ಉಪಾಸನೆ ಯಿಂದ, ಪ್ರತಿದಿನವೂ ಪುಣ್ಯಕೀರ್ತಿಯುಳ್ಳ ಶ್ರೀಭಗವಂತನ ಪಾವನ ಕಥೆಗಳನ್ನು ಶ್ರವಣಿಸುವುದರಿಂದ, ಧನ, ಇಂದ್ರಿಯಗಳ ಭೋಗದಲ್ಲಿ ತೊಡಗಿರುವ ಮನುಷ್ಯರ ಗೋಷ್ಠಿ ಯನ್ನು ಪ್ರೀತಿಸದೆ ಇರುವುದರಿಂದ, ಅವರಿಗೆ ಪ್ರಿಯವಾದ ಪದಾರ್ಥ ಗಳನ್ನು ಆಸಕ್ತಿಯಿಂದ ಸಂಗ್ರಹಿಸದೇ ಇರುವುದರಿಂದ, ಭಗವದ್ಗುಣಾಮೃತವನ್ನು ಪಾನಮಾಡುವ ಕಾಲವನ್ನು ಬಿಟ್ಟು ಉಳಿದ ಎಲ್ಲ ಸಮಯಗಳಲ್ಲಿಯೂ ಆತ್ಮನಲ್ಲೇ ಸಂತೋಷಿ ಸುತ್ತಾ ಏಕಾಂತಸೇವನೆಯಲ್ಲಿ ಪ್ರೀತಿಯನ್ನಿಡುವುದರಿಂದ, ಯಾವುದೇ ಜೀವಿಗೆ ಕಷ್ಟವನ್ನು ಕೊಡದಿರುವುದರಿಂದ, ನಿವೃತ್ತಿನಿಷ್ಠೆಯಿಂದ, ಆತ್ಮಹಿತವನ್ನೇ ಅನುಸಂಧಾನ ಮಾಡು ವುದರಿಂದ, ಶ್ರೀಹರಿಯ ಪವಿತ್ರಚರಿತ್ರರೂಪವಾದ ಶ್ರೇಷ್ಠ ಅಮೃತವನ್ನು ಸವಿಯುವುದರಿಂದ, ನಿಷ್ಕಾಮಭಾವದಿಂದ ಯಮ-ನಿಯಮಗಳನ್ನು ಪಾಲಿಸುವುದರಿಂದ, ಎಂದೂ ಯಾರನ್ನೂ ನಿಂದಿಸದೆ ಇರುವುದರಿಂದ, ಯೋಗಕ್ಷೇಮಕ್ಕಾಗಿ ಪ್ರಯತ್ನಿಸದೇ ಇರುವುದರಿಂದ, ಶೀತೋಷ್ಣಗಳೇ ಮುಂತಾದ ದ್ವಂದ್ವಗಳನ್ನು ಸಹಿಸುವುದರಿಂದ, ಭಕ್ತರಿಗೆ ಕರ್ಣಾನಂದಕರವಾದ ಶ್ರೀಹರಿಯ ಗುಣಗಳನ್ನು ಪದೇ-ಪದೇ ವರ್ಣಿಸುವುದರಿಂದ ಮತ್ತು ಭಕ್ತಿಭಾವವನ್ನು ವೃದ್ಧಿ ಪಡಿಸುವುದರಿಂದ ಮನುಷ್ಯನಿಗೆ ಕಾರ್ಯ-ಕಾರಣರೂಪ ವಾದ ಇಡೀ ಜಡ-ಜಗತ್ತಿನ ಕುರಿತು ವೈರಾಗ್ಯ ಉಂಟಾ ಗುವುದು ಮತ್ತು ಆತ್ಮಸ್ವರೂಪೀ ನಿರ್ಗುಣ ಪರಬ್ರಹ್ಮನಲ್ಲಿ ಆಯಾಸವಿಲ್ಲದೆ ಅವನಿಗೆ ಪ್ರೀತಿ ಉಂಟಾಗುತ್ತದೆ ಎಂಬು ದಾಗಿಯೂ ಶಾಸ್ತ್ರಗಳು ಹೇಳುತ್ತವೆ. ॥22-25॥

(ಶ್ಲೋಕ - 26)

ಮೂಲಮ್

ಯದಾ ರತಿರ್ಬ್ರಹ್ಮಣಿ ನೈಷ್ಠಿಕೀ ಪುಮಾ-
ನಾಚಾರ್ಯವಾನ್ ಜ್ಞಾನವಿರಾಗರಂಹಸಾ ।
ದಹತ್ಯವೀರ್ಯಂ ಹೃದಯಂ ಜೀವಕೋಶಂ
ಪಂಚಾತ್ಮಕಂ ಯೋನಿಮಿವೋತ್ಥಿತೋಗ್ನಿಃ ॥

ಅನುವಾದ

ಪರಬ್ರಹ್ಮನಲ್ಲಿ ದೃಢವಾದ ಪ್ರೀತಿಯುಂಟಾದಾಗ ಮನುಷ್ಯನು ಸದ್ಗುರುವಿಗೆ ಶರಣು ಹೋಗುತ್ತಾನೆ. ಮತ್ತೆ ಜ್ಞಾನ ಮತ್ತು ವೈರಾಗ್ಯದ ಪ್ರಬಲವಾದ ವೇಗದಿಂದ ವಾಸನಾಶೂನ್ಯನಾಗಿ, ಅವಿದ್ಯೆಯೇ ಮುಂತಾದ ಐದು ಕ್ಲೇಶಗಳಿಂದ ಕೂಡಿದ ಅಹಂಕಾರಾತ್ಮಕವಾದ ತನ್ನ ಲಿಂಗಶರೀರವನ್ನು ಅಗ್ನಿಯು ಕಟ್ಟಿಗೆಯಿಂದ ಪ್ರಕಟವಾಗಿ ಆ ಕಟ್ಟಿಗೆಯನ್ನೇ ಸುಟ್ಟುಹಾಕುವಂತೆ ಸುಟ್ಟು ಬೂದಿ ಮಾಡಿಬಿಡುತ್ತಾನೆ. ॥26॥

(ಶ್ಲೋಕ - 27)

ಮೂಲಮ್

ದಗ್ಧಾಶಯೋ ಮುಕ್ತ ಸಮಸ್ತ ತದ್ಗುಣೋ
ನೈವಾತ್ಮನೋ ಬಹಿರಂತರ್ವಿಚಷ್ಟೇ ।
ಪರಾತ್ಮನೋರ್ಯದ್ವ್ಯವಧಾನಂ ಪುರಸ್ತಾತ್
ಸ್ವಪ್ನೇ ಯಥಾ ಪುರುಷಸ್ತದ್ವಿನಾಶೇ ॥

ಅನುವಾದ

ಹೀಗೆ ಲಿಂಗಶರೀರವು ನಾಶವಾದ ಬಳಿಕ ಅವನು ಕರ್ತೃತ್ವಾದಿ ಎಲ್ಲ ಗುಣಗಳಿಂದ ಮುಕ್ತನಾಗುತ್ತಾನೆ. ಮತ್ತೆ ಸ್ವಪ್ನಾವಸ್ಥೆಯಲ್ಲಿ ಕಂಡುಬರುವ ನಾನಾಪದಾರ್ಥಗಳು ಎಚ್ಚರವಾದಾಗ ಯಾವುದೂ ಕಂಡುಬಾರದಿರುವಂತೆಯೇ ಅವನಿಗೆ ಶರೀರದ ಹೊರಗೆ ಕಂಡುಬರುವ ಘಟ-ಪಟಾದಿಗಳು ಮತ್ತು ಒಳಗೆ ಅನುಭವಕ್ಕೆ ಬರುವ ಸುಖ-ದುಃಖಾದಿಗಳೂ ಕಂಡು ಬರುವುದಿಲ್ಲ. ಈ ಸ್ಥಿತಿಯು ಪ್ರಾಪ್ತವಾಗುವ ಮೊದಲು ಈ ಪದಾರ್ಥಗಳೇ ಜೀವಾತ್ಮಾ ಮತ್ತು ಪರಮಾತ್ಮರ ನಡುವೆ ಇದ್ದುಕೊಂಡು ಅವುಗಳ ಭೇದವನ್ನು ಉಂಟುಮಾಡುತ್ತಿದ್ದವು. ॥27॥

(ಶ್ಲೋಕ - 28)

ಮೂಲಮ್

ಆತ್ಮಾನಮಿಂದ್ರಿಯಾರ್ಥಂ ಚ ಪರಂ ಯದುಭಯೋರಪಿ ।
ಸತ್ಯಾಶಯ ಉಪಾಧೌ ವೈ ಪುಮಾನ್ ಪಶ್ಯತಿ ನಾನ್ಯದಾ ॥

ಅನುವಾದ

ಅಂತಃಕರಣರೂಪವಾದ ಉಪಾಧಿಯು ಇರುವ ತನಕ ಪುರುಷನಿಗೆ ಜೀವಾತ್ಮಾ, ಇಂದ್ರಿಯಗಳ ವಿಷಯಗಳು ಮತ್ತು ಇವೆರಡರ ಸಂಬಂಧವನ್ನುಂಟುಮಾಡುವ ಅಹಂಕಾರದ ಅನುಭವವಾಗುತ್ತದೆ. ಅದರ ನಂತರ ಇರುವುದಿಲ್ಲ. ॥28॥

(ಶ್ಲೋಕ - 29)

ಮೂಲಮ್

ನಿಮಿತ್ತೇ ಸತಿ ಸರ್ವತ್ರ ಜಲಾದಾವಪಿ ಪೂರುಷಃ ।
ಆತ್ಮನಶ್ಚ ಪರಸ್ಯಾಪಿ ಭಿದಾಂ ಪಶ್ಯತಿ ನಾನ್ಯದಾ ॥

ಅನುವಾದ

ಬಾಹ್ಯಜಗತ್ತಿನಲ್ಲಿಯೂ ನೀರು, ಕನ್ನಡಿ ಮುಂತಾದ ನಿಮಿತ್ತಗಳು ಇರುವಾಗಲೇ ಬಿಂಬ-ಪ್ರತಿಬಿಂಬಗಳ ಭೇದವು ಕಾಣಿಸುತ್ತದೆ. ಅವುಗಳು ಇಲ್ಲವಾದಾಗ ಕಾಣುವುದಿಲ್ಲ. ॥29॥

(ಶ್ಲೋಕ - 30)

ಮೂಲಮ್

ಇಂದ್ರಿಯೈರ್ವಿಷಯಾಕೃಷ್ಟೈರಾಕ್ಷಿಪ್ತಂ ಧ್ಯಾಯತಾಂ ಮನಃ ।
ಚೇತನಾಂ ಹರತೇ ಬುದ್ಧೇಃ ಸ್ತಂಬಸ್ತೋಯಮಿವ ಹ್ರದಾತ್ ॥

ಅನುವಾದ

ವಿಷಯ ಚಿಂತನದಲ್ಲೇ ತೊಡಗಿರುವ ಮನುಷ್ಯರ ಇಂದ್ರಿಯಗಳು ವಿಷಯಗಳಲ್ಲಿ ಸಿಕ್ಕಿಕೊಳ್ಳುವವು ಹಾಗೂ ಮನಸ್ಸನ್ನೂ ಅವುಗಳತ್ತ ಸೆಳೆಯುತ್ತಿರುತ್ತದೆ. ಹಾಗೆಯೇ ಆ ವಿಷಯಾಸಕ್ತ ಮನಸ್ಸು-ಬೇರುಗಳು ಜಲಾಶಯದ ನೀರನ್ನು ಸೆಳೆದುಕೊಳ್ಳುವಂತೆ ಬುದ್ಧಿಯ ವಿಚಾರಶಕ್ತಿಯನ್ನು ಕ್ರಮವಾಗಿ ಕಸಿದುಕೊಳ್ಳುತ್ತದೆ. ॥30॥

(ಶ್ಲೋಕ - 31)

ಮೂಲಮ್

ಭ್ರಶ್ಯತ್ಯನು ಸ್ಮೃತಿಶ್ಚಿತ್ತಂ ಜ್ಞಾನಭ್ರಂಶಃ ಸ್ಮೃತಿಕ್ಷಯೇ ।
ತದ್ರೋಧಂ ಕವಯಃ ಪ್ರಾಹುರಾತ್ಮಾಪಹ್ನವಮಾತ್ಮನಃ ॥

ಅನುವಾದ

ವಿಚಾರಶಕ್ತಿಯು ನಾಶ ವಾದಮೇಲೆ ಹಿಂದು-ಮುಂದಿನ ಸ್ಮೃತಿಯು ಹೊರಟು ಹೋಗುತ್ತದೆ. ಸ್ಮೃತಿಯ ನಾಶವಾದ ಬಳಿಕ ಜ್ಞಾನವು ಉಳಿಯುವುದಿಲ್ಲ. ಈ ಜ್ಞಾನದ ನಾಶವನ್ನೇ ಪಂಡಿತರು ‘ತಾನೇ ತನ್ನನ್ನು ಹತ್ಯೆ ಮಾಡಿಕೊಳ್ಳುವುದು’ ಎಂದು ಹೇಳುತ್ತಾರೆ. ॥31॥

(ಶ್ಲೋಕ - 32)

ಮೂಲಮ್

ನಾತಃ ಪರತರೋ ಲೋಕೇ ಪುಂಸಃ ಸ್ವಾರ್ಥವ್ಯತಿಕ್ರಮಃ ।
ಯದಧ್ಯನ್ಯಸ್ಯ ಪ್ರೇಯಸ್ತ್ವಮಾತ್ಮನಃ ಸ್ವವ್ಯತಿಕ್ರಮಾತ್ ॥

ಅನುವಾದ

ಯಾವುದರ ಉದ್ದೇಶದಿಂದ ಬೇರೆ ಎಲ್ಲ ಪದಾರ್ಥಗಳಲ್ಲಿ ‘ಇದು ಪ್ರಿಯ’ ಎಂಬ ಭಾವ ಉಂಟಾಗುತ್ತದೋ ಆ ಆತ್ಮನು ತನ್ನ ಮೂಲಕವೇ ನಾಶ ವಾಗುವುದರಿಂದ ಸ್ವಾರ್ಥ ಹಾನಿಯುಂಟಾಗುತ್ತದೆ. ಜಗತ್ತಿ ನಲ್ಲಿ ಇದಕ್ಕಿಂತ ಮಿಗಿಲಾದ ಬೇರೆ ಯಾವ ಹಾನಿಯೂ ಇಲ್ಲ. ॥32॥

(ಶ್ಲೋಕ - 33)

ಮೂಲಮ್

ಅರ್ಥೇಂದ್ರಿಯಾರ್ಥಾಭಿಧ್ಯಾನಂ
ಸರ್ವಾರ್ಥಾಪಹ್ನವೋ ನೃಣಾಮ್ ।
ಭ್ರಂಶಿತೋ ಜ್ಞಾನವಿಜ್ಞಾನಾ-
ದ್ಯೇನಾವಿಶತಿ ಮುಖ್ಯತಾಮ್ ॥

ಅನುವಾದ

ಧನ ಮತ್ತು ಇಂದ್ರಿಯಗಳ ವಿಷಯಗಳನ್ನು ಚಿಂತಿಸುತ್ತಿದ್ದರೆ ಮನುಷ್ಯನ ಎಲ್ಲ ಪುರುಷಾರ್ಥಗಳು ನಾಶ ಹೊಂದುವವು. ಏಕೆಂದರೆ, ಇವುಗಳ ಚಿಂತನೆಯಿಂದ ಅವನು ಜ್ಞಾನ-ವಿಜ್ಞಾನಗಳಿಂದ ಭ್ರಷ್ಟನಾಗಿ ಮರ-ಬಳ್ಳಿಗಳೇ ಮುಂತಾದ ಸ್ಥಾವರ ಯೋನಿಯಲ್ಲಿ ಹುಟ್ಟುತ್ತಾನೆ. ॥33॥

(ಶ್ಲೋಕ - 34)

ಮೂಲಮ್

ನ ಕುರ್ಯಾತ್ಕರ್ಹಿಚಿತ್ಸಂಗಂ ತಮಸ್ತೀವ್ರಂ ತಿತೀರಿಷುಃ ।
ಧರ್ಮಾರ್ಥಕಾಮಮೋಕ್ಷಾಣಾಂ ಯದತ್ಯಂತವಿಘಾತಕಮ್ ॥

ಅನುವಾದ

ಅದಕ್ಕಾಗಿ ಅಜ್ಞಾನಾಂಧಕಾರದಿಂದ ದಾಟಿಹೋಗುವ ಇಚ್ಛೆ ಯುಳ್ಳವನು ವಿಷಯಗಳಲ್ಲಿ ಎಂದಿಗೂ ಆಸಕ್ತನಾಗಬಾರದು. ಏಕೆಂದರೆ, ಇದು ಧರ್ಮ, ಅರ್ಥ, ಕಾಮ, ಮೋಕ್ಷ ಇವುಗಳ ಪ್ರಾಪ್ತಿಯಲ್ಲಿ ದೊಡ್ಡ ಬಾಧಕವಾಗಿದೆ. ॥34॥

(ಶ್ಲೋಕ - 35)

ಮೂಲಮ್

ತತ್ರಾಪಿ ಮೋಕ್ಷ ಏವಾರ್ಥ ಆತ್ಯಂತಿಕತಯೇಷ್ಯತೇ ।
ತ್ರೈವರ್ಗ್ಯೋರ್ಥೋ ಯತೋ ನಿತ್ಯಂ ಕೃತಾಂತ ಭಯಸಂಯುತಃ ॥

ಅನುವಾದ

ಈ ನಾಲ್ಕು ಪುರುಷಾರ್ಥಗಳಲ್ಲಿ ಎಲ್ಲಕ್ಕಿಂತ ಶ್ರೇಷ್ಠವಾದುದು ಮೋಕ್ಷವಾಗಿದೆ. ಏಕೆಂದರೆ ಉಳಿದ ಮೂರು ಪುರುಷಾರ್ಥಗಳಲ್ಲಿಯೂ ಕಾಲದ ಭಯ ಅಂಟಿಕೊಂಡೇ ಇರುವುದು. ॥35॥

(ಶ್ಲೋಕ - 36)

ಮೂಲಮ್

ಪರೇವರೇ ಚ ಯೇ ಭಾವಾ ಗುಣವ್ಯತಿಕರಾದನು ।
ನ ತೇಷಾಂ ವಿದ್ಯತೇ ಕ್ಷೇಮಮೀಶವಿಧ್ವಂಸಿತಾಶಿಷಾಮ್ ॥

ಅನುವಾದ

ಪ್ರಕೃತಿಯಲ್ಲಿ ಗುಣಗಳ ಕ್ಷೋಭೆಯುಂಟಾದ ನಂತರ ಪ್ರಕಟವಾದ ಎಲ್ಲ ಉತ್ತಮ ಮತ್ತು ಅಧಮ ಭಾವ ಪದಾರ್ಥಗಳಲ್ಲಿ ಸದಾ ಕ್ಷೇಮವಾಗಿಯೇ ಇರುವುದು ಯಾವುದೂ ಇಲ್ಲ. ಭಗವಂತನಾದ ಕಾಲನು ಆ ಎಲ್ಲ ಕುಶಲಗಳನ್ನು ತುಳಿದು ಹಾಕುತ್ತಾ ಇರುತ್ತಾನೆ. ॥36॥

ಮೂಲಮ್

(ಶ್ಲೋಕ - 37)
ತತ್ತ್ವಂ ನರೇಂದ್ರಜಗತಾಮಥ ತಸ್ಥುಷಾಂ ಚ
ದೇಹೇಂದ್ರಿಯಾಸುಧಿಷಣಾತ್ಮಭಿರಾವೃತಾನಾಮ್ ।
ಯಃ ಕ್ಷೇತ್ರವಿತ್ತಪತಯಾ ಹೃದಿ ವಿಷ್ವಗಾವಿಃ
ಪ್ರತ್ಯಕ್ಚಕಾಸ್ತಿ ಭಗವಾಂಸ್ತಮವೇಹಿ ಸೋಸ್ಮಿ ॥

ಅನುವಾದ

ಆದುದರಿಂದ ಎಲೈ ರಾಜನೇ! ದೇಹ, ಇಂದ್ರಿಯ, ಪ್ರಾಣ, ಬುದ್ಧಿ ಮತ್ತು ಅಹಂಕಾರ ಇವುಗಳಿಂದ ಆವರಿಸಲ್ಪಡುವ ಎಲ್ಲ ಸ್ಥಾವರ-ಜಂಗಮ ಪ್ರಾಣಿಗಳ ಹೃದಯದಲ್ಲಿ ಜೀವಕ್ಕೆ ನಿಯಾಮಕನಾಗಿ, ಅಂತರ್ಯಾಮಿಯಾಗಿ ಆತ್ಮರೂಪದಿಂದ ಎಲ್ಲೆಲ್ಲಿಯೂ ಬೆಳಗುತ್ತಿರುವ ಪರಮಾತ್ಮನನ್ನು ‘ಸೋಹಮಸ್ಮಿ’ ‘ನಾನೇ ಆಗಿದ್ದೇನೆ’ ಎಂದು ನೀನು ತಿಳಿ. ॥37॥

(ಶ್ಲೋಕ - 38)

ಮೂಲಮ್

ಯಸ್ಮಿನ್ನಿದಂ ಸದಸದಾತ್ಮತಯಾ ವಿಭಾತಿ
ಮಾಯಾವಿವೇಕವಿಧುತಿ ಸ್ರಜಿ ವಾಹಿಬುದ್ಧಿಃ ।
ತಂ ನಿತ್ಯಮುಕ್ತಪರಿಶುದ್ಧವಿಬುದ್ಧತತ್ತ್ವಂ
ಪ್ರತ್ಯೂಢಕರ್ಮಕಲಿಲಪ್ರಕೃತಿಂ ಪ್ರಪದ್ಯೇ ॥

ಅನುವಾದ

ಅಜ್ಞಾನ ವಶದಿಂದ ಹೂಮಾಲೆಯಲ್ಲಿ ಸರ್ಪವೆಂಬ ಬುದ್ಧಿಯುಂಟಾ ದರೂ ಅದು ಹೂಮಾಲೆಯೆಂಬ ಜ್ಞಾನ ಉಂಟಾದಾಗ ತೊಲಗಿಹೋಗುವಂತೆ ವಿವೇಕವುಂಟಾದಾಗ ತೊಲಗಿ ಹೋಗುವಂತಹ ಈ ಮಾಯಾಮಯವಾದ ಪ್ರಪಂಚವು ಯಾವನಲ್ಲಿ ಕಾರ್ಯಕಾರಣ ರೂಪದಲ್ಲಿ ಕಾಣಿಸುತ್ತದೆಯೋ, ಯಾರು ಕರ್ಮಫಲಗಳಿಂದ ಕಲುಷಿತವಾದ ಪ್ರಕೃತಿಯಿಂದ ಹೊರಗಿರುತ್ತಾನೋ, ಆ ನಿತ್ಯಮುಕ್ತನೂ, ನಿರ್ಮಲನೂ, ಜ್ಞಾನರೂಪನೂ ಆದ ಪರಮಾತ್ಮನನ್ನು ನೀನು ಹೊಂದುತ್ತಿರುವೆ. ॥38॥

(ಶ್ಲೋಕ - 39)

ಮೂಲಮ್

ಯತ್ಪಾದಪಂಕಜಪಲಾಶವಿಲಾಸಭಕ್ತ್ಯಾ
ಕರ್ಮಾಶಯಂ ಗ್ರಥಿತಮುದ್ಗ್ರಥಯಂತಿ ಸಂತಃ ।
ತದ್ವನ್ನ ರಿಕ್ತಮತಯೋ ಯತಯೋಪಿ ರುದ್ಧ-
ಸ್ರೋತೋಗಣಾಸ್ತ ಮರಣಂ ಭಜ ವಾಸುದೇವಮ್ ॥

ಅನುವಾದ

ಸಂತರಾದ ಮಹಾತ್ಮರು ಅವನ ಚರಣ ಕಮಲಗಳ ಬೆರಳುಗಳ ದಳಗಳಿಂದ ಹೊರಹೊಮ್ಮುವ ಕಾಂತಿಯನ್ನು ಸ್ಮರಿಸುತ್ತಾ ಕರ್ಮಗಳಿಂದ ಕಟ್ಟಲ್ಪಟ್ಟ ಅಹಂಕಾರವೆಂಬ ಹೃದಯಗ್ರಂಥಿಯನ್ನು ಛಿನ್ನ-ಭಿನ್ನಗೊಳಿಸುತ್ತಾರೆ. ಎಲ್ಲ ಇಂದ್ರಿಯಗಳನ್ನು ಪ್ರತ್ಯಾಹಾರದಿಂದ ಹಿಂದಕ್ಕೆ ಸೆಳೆದುಕೊಂಡು ವಿಷಯ ಶೂನ್ಯವನ್ನಾಗಿ ಮಾಡುವ ಸಂನ್ಯಾಸಿಗಳೂ ಕತ್ತರಿಸಿಹಾಕಲು ಅತಿಕಷ್ಟ ಸಾಧ್ಯವಾಗಿರುವ ಆ ಹೃದಯದ ಗಂಟನ್ನು ಅದರಿಂದ ಸುಲಭವಾಗಿ ಕತ್ತರಿಸಿಹಾಕುವರು. ಆದುದರಿಂದ ನೀನು ಸರ್ವಾಶ್ರಯನಾದ ಭಗವಾನ್ ವಾಸುದೇವನನ್ನು ಭಜಿಸು. ॥39॥

(ಶ್ಲೋಕ - 40)

ಮೂಲಮ್

ಕೃಚ್ಛ್ರೋ ಮಹಾನಿಹ ಭವಾರ್ಣವಮಪ್ಲವೇಶಾಂ
ಷಡ್ವರ್ಗನಕ್ರಮಸುಖೇನ ತಿತೀರಷಂತಿ ।
ತತ್ತ್ವಂ ಹರೇರ್ಭಗವತೋ ಭಜನೀಯಮಂಘ್ರಿಂ
ಕೃತ್ವೋಡುಪಂ ವ್ಯಸನಮುತ್ತರ ದುಸ್ತರಾರ್ಣಮ್ ॥

ಅನುವಾದ

ಮನಸ್ಸು ಮತ್ತು ಇಂದ್ರಿಯಗಳೆಂಬ ಮೊಸಳೆಗಳಿಂದ ತುಂಬಿರುವ ಈ ಸಂಸಾರಸಾಗರವನ್ನು ಯೋಗವೇ ಮುಂತಾದ ದುಷ್ಕರವಾದ ಸಾಧನೆಗಳಿಂದ ದಾಟಲು ಕೆಲವರು ಬಯಸುತ್ತಾರೆ. ಅವರು ಅದನ್ನು ದಾಟುವುದು ಕಠಿಣವೇ ಆಗಿದೆ. ಏಕೆಂದರೆ, ಅವರಿಗೆ ಶ್ರೀಹರಿಯೆಂಬ ಅಂಬಿಗನ ಆಶ್ರಯವಿರುವುದಿಲ್ಲ. ಆದುದರಿಂದ ಎಲೈ ರಾಜನೇ! ನೀನು ಆರಾಧಿಸಲು ಯೋಗ್ಯವಾದ ಭಗವಂತನ ಚರಣಕಮಲಗಳನ್ನು ಹಡಗನ್ನಾಗಿಸಿಕೊಂಡು ಅನಾಯಾಸವಾಗಿ ಈ ದುಸ್ತರವಾದ ಸಮುದ್ರವನ್ನು ದಾಟಿಬಿಡು. ॥40॥

(ಶ್ಲೋಕ - 41)

ಮೂಲಮ್ (ವಾಚನಮ್)

ಮೈತ್ರೇಯ ಉವಾಚ

ಮೂಲಮ್

ಸ ಏವಂ ಬ್ರಹ್ಮಪುತ್ರೇಣ ಕುಮಾರೇಣಾತ್ಮಮೇಧಸಾ ।
ದರ್ಶಿತಾತ್ಮಗತಿಃ ಸಮ್ಯಕ್ಪ್ರಶಸ್ಯೋವಾಚ ತಂ ನೃಪಃ ॥

ಅನುವಾದ

ಶ್ರೀಮೈತ್ರೇಯರು ಹೇಳುತ್ತಾರೆ — ಎಲೈ ವಿದುರನೇ! ಬ್ರಹ್ಮದೇವರ ಪುತ್ರರಾದ ಆತ್ಮಜ್ಞಾನಿ ಸನತ್ಕುಮಾರರಿಂದ ಈ ವಿಧವಾಗಿ ಆತ್ಮತತ್ತ್ವವನ್ನು ಉಪದೇಶಪಡೆದ ಪೃಥು ಮಹಾರಾಜನು ಅವರನ್ನು ಬಹಳವಾಗಿ ಪ್ರಶಂಸಿಸುತ್ತಾ ಇಂತೆಂದನು.॥41॥

(ಶ್ಲೋಕ - 42)

ಮೂಲಮ್ (ವಾಚನಮ್)

ರಾಜೋವಾಚ

ಮೂಲಮ್

ಕೃತೋ ಮೇನುಗ್ರಹಃ ಪೂರ್ವಂ ಹರಿಣಾರ್ತಾನುಕಂಪಿನಾ ।
ತಮಾಪಾದಯಿತುಂ ಬ್ರಹ್ಮನ್ ಭಗವನ್ಯೂಯಮಾಗತಾಃ ॥

ಅನುವಾದ

ಪೃಥುರಾಜನು ಹೇಳಿದನು — ಪೂಜ್ಯರೇ! ದೀನ ದಯಾಳುವಾದ ಶ್ರೀಹರಿಯು ಮೊದಲೇ ನನ್ನ ಮೇಲೆ ಕೃಪೆದೋರಿದ್ದನು. ಅದನ್ನು ಪೂರ್ಣಗೊಳಿಸಲೆಂದೇ ತಾವು ದಯಮಾಡಿಸಿರುವಿರಿ. ॥42॥

(ಶ್ಲೋಕ - 43)

ಮೂಲಮ್

ನಿಷ್ಪಾದಿತಶ್ಚ ಕಾರ್ತ್ಸ್ನ್ಯೇನ ಭಗವದ್ಭಿರ್ಘೃಣಾಲುಭಿಃ ।
ಸಾಧೂಚ್ಛಿಷ್ಟಂ ಹಿ ಮೇ ಸರ್ವಮಾತ್ಮನಾ ಸಹ ಕಿಂ ದದೇ ॥

ಅನುವಾದ

ನೀವು ಅತ್ಯಂತ ಕರುಣಾಳುಗಳು. ಇಲ್ಲಿಗೆ ನೀವು ಬಂದಿರುವ ಉದ್ದೇಶವನ್ನು ಚೆನ್ನಾಗಿ ಸಂಪನ್ನವಾಗಿಸಿರುವಿರಿ. ಇದರ ಬದಲಿಗೆ ಈಗ ನಾನು ನಿಮಗೆ ಏನನ್ನು ಸಮರ್ಪಿಸಲಿ? ನನ್ನ ಬಳಿ ನನ್ನ ದೇಹ ಮತ್ತು ಅದರೊಡನೆ ಇರುವುದೆಲ್ಲವೂ ಮಹಾ ಪುರುಷರ ಪ್ರಸಾದವೇ ಆಗಿದೆ. ॥43॥

(ಶ್ಲೋಕ - 44)

ಮೂಲಮ್

ಪ್ರಾಣಾ ದಾರಾಃ ಸುತಾ ಬ್ರಹ್ಮನ್ಗೃಹಾಶ್ಚ ಸಪರಿಚ್ಛದಾಃ ।
ರಾಜ್ಯಂ ಬಲಂ ಮಹೀ ಕೋಶ ಇತಿ ಸರ್ವಂ ನಿವೇದಿತಮ್ ॥

ಅನುವಾದ

ಬ್ರಾಹ್ಮಣೋತ್ತಮರೇ! ನನ್ನ ಬಳಿ ಇರುವ ಪ್ರಾಣ, ಪತ್ನೀ, ಪುತ್ರರು, ಎಲ್ಲ ಬಗೆಯ ಸಾಮಗ್ರಿಗಳಿಂದ ತುಂಬಿರುವ ಅರಮನೆ, ರಾಜ್ಯ, ಸೇನೆ, ಪೃಥಿವಿ, ಭಂಡಾರ ಇವೆಲ್ಲವೂ ನಿಮ್ಮದೇ ಆಗಿವೆ. ಆದ್ದರಿಂದ ಇವೆಲ್ಲವನ್ನು ನಿಮ್ಮ ಅಡಿದಾವರೆಗಳಲ್ಲೇ ಸಮರ್ಪಿಸುತ್ತಿದ್ದೇವೆ.॥44॥

(ಶ್ಲೋಕ - 45)

ಮೂಲಮ್

ಸೈನಾಪತ್ಯಂ ಚ ರಾಜ್ಯಂ ಚ ದಂಡನೇತೃತ್ವಮೇವ ಚ ।
ಸರ್ವಲೋಕಾಧಿಪತ್ಯಂ ಚ ವೇದಶಾಸವಿದರ್ಹತಿ ॥

ಅನುವಾದ

ವಾಸ್ತವವಾಗಿಯಾದರೋ ಸೇನಾಪತಿತ್ವ, ರಾಜ್ಯದ ಪಟ್ಟ, ದಂಡವನ್ನು ವಿಧಿಸುವ ಅಧಿಕಾರ, ಎಲ್ಲ ಲೋಕಗಳ ಆಧಿಪತ್ಯವನ್ನು ಪಡೆದು ನಿರ್ವಹಿಸುವ ಅಧಿಕಾರ, ವೇದ-ಶಾಸ್ತ್ರಗಳನ್ನರಿತ ಬ್ರಾಹ್ಮಣನಿಗೇ ಇದೆ. ॥45॥

(ಶ್ಲೋಕ - 46)

ಮೂಲಮ್

ಸ್ವಮೇವ ಬ್ರಾಹ್ಮಣೋ ಭುಂಕ್ತೇ ಸ್ವಂ ವಸ್ತೇ ಸ್ವಂ ದದಾತಿ ಚ ।
ತಸ್ಯೈವಾನುಗ್ರಹೇಣಾನ್ನಂ ಭುಂಜತೇ ಕ್ಷತ್ರಿಯಾದಯಃ ॥

ಅನುವಾದ

ಬ್ರಾಹ್ಮಣನು ತನ್ನದಾದುದನ್ನೇ ಉಣ್ಣುವನು, ತನ್ನದನ್ನೇ ಉಡುವನು, ತನ್ನದನ್ನೇ ದಾನಮಾಡುವನು. ಬೇರೆ ಕ್ಷತ್ರಿಯರೇ ಮುಂತಾ ದವರಾದರೋ ಅವರ ಕೃಪೆಯಿಂದಲೇ ತಿನ್ನಲು ಅನ್ನವನ್ನು ಪಡೆಯುತ್ತಾರೆ. ॥46॥

(ಶ್ಲೋಕ - 47)

ಮೂಲಮ್

ಯೈರೀದೃಶೀ ಭಗವತೋ ಗತಿರಾತ್ಮವಾದೇ
ಏಕಾಂತತೋ ನಿಗಮಿಭಿಃ ಪ್ರತಿಪಾದಿತಾ ನಃ ।
ತುಷ್ಯಂತ್ವ ದಭ್ರ ಕರುಣಾಃ ಸ್ವಕೃತೇನ ನಿತ್ಯಂ
ಕೋ ನಾಮ ತತ್ಪ್ರತಿಕರೋತಿ ವಿನೋದಪಾತ್ರಮ್ ॥

ಅನುವಾದ

ವೇದಪಾರಂಗತರಾದ ನೀವು ಅಧ್ಯಾತ್ಮ ತತ್ತ್ವವನ್ನು ವಿಚಾರಪೂರ್ವಕವಾಗಿ ತಿಳಿಸುತ್ತಾ ‘ಶ್ರೀಭಗವಂತನಲ್ಲಿ ಏಕಾಂತಭಕ್ತಿಯನ್ನು ಇರಿಸುವುದೇ ಆತನನ್ನು ಪಡೆಯಲು ಪ್ರಧಾನವಾದ ಸಾಧನೆ’ ಎಂಬುದನ್ನು ನಮಗೆ ನಿಶ್ಚಿತವಾಗಿ ತಿಳಿಸಿರುವಿರಿ. ನೀವು ಪರಮ ಕೃಪಾಳುಗಳು. ಈ ದೀನೋದ್ಧಾರ ಕಾರ್ಯವನ್ನು ಮಾಡು ವುದರಿಂದಲೇ ನೀವು ಸಂತುಷ್ಟರಾಗಿರುವಿರಿ. ಈ ಉಪಕಾರಕ್ಕೆ ಬದಲಾಗಿ ಯಾರಾದರೂ ಏನನ್ನಾದರೂ ಕೊಡ ಬಲ್ಲರೇ? ಅದಕ್ಕಾಗಿ ಪ್ರತ್ಯುಪಕಾರ ಮಾಡುವೆನೆಂದು ಪ್ರಯತ್ನಿಸುವುದೂ ಹಾಸ್ಯಾಸ್ಪದವೇ ಆಗಿದೆ. ॥47॥

(ಶ್ಲೋಕ - 48)

ಮೂಲಮ್ (ವಾಚನಮ್)

ಮೈತ್ರೇಯ ಉವಾಚ

ಮೂಲಮ್

ತ ಆತ್ಮಯೋಗಪತಯ ಆದಿರಾಜೇನ ಪೂಜಿತಾಃ ।
ಶೀಲಂ ತದೀಯಂ ಶಂಸಂತಃ ಖೇಭೂವನ್ಮಿಷತಾಂ ನೃಣಾಮ್ ॥

ಅನುವಾದ

ಶ್ರೀಮೈತ್ರೇಯರು ಹೇಳುತ್ತಾರೆ — ಎಲೈ ವಿದುರನೇ! ಮತ್ತೆ ಆದಿರಾಜನಾದ ಪೃಥುವು ಆತ್ಮಜ್ಞಾನಿಗಳಲ್ಲಿ ಶ್ರೇಷ್ಠರಾದ ಸನಕಾದಿಗಳನ್ನು ಪೂಜಿಸಿದನು. ಅವರು ರಾಜನ ಶೀಲವನ್ನು ಕೊಂಡಾಡುತ್ತಾ ಎಲ್ಲರೂ ನೋಡುತ್ತಿರುವಂತೆ ಆಕಾಶಮಾರ್ಗವಾಗಿ ಹೊರಟು ಹೋದರು. ॥48॥

(ಶ್ಲೋಕ - 49)

ಮೂಲಮ್

ವೈನ್ಯಸ್ತು ಧುರ್ಯೋ ಮಹತಾಂ ಸಂಸ್ಥಿತ್ಯಾಧ್ಯಾತ್ಮಶಿಕ್ಷಯಾ ।
ಆಪ್ತಕಾಮಮಿವಾತ್ಮಾನಂ ಮೇನ ಆತ್ಮನ್ಯವಸ್ಥಿತಃ ॥

ಅನುವಾದ

ಮಹಾತ್ಮರಲ್ಲಿ ಅಗ್ರಗಣ್ಯನಾದ ಪೃಥುವು ಅವರಿಂದ ಆತ್ಮೋಪದೇಶವನ್ನು ಪಡೆದು ಚಿತ್ತದ ಏಕಾಗ್ರತೆಯಿಂದ ಆತ್ಮ ನಲ್ಲೇ ನೆಲೆಸಿದ ಕಾರಣ ತನ್ನನ್ನು ಕೃತಕೃತ್ಯನೆಂದೇ ಭಾವಿಸಿದನು. ॥49॥

(ಶ್ಲೋಕ - 50)

ಮೂಲಮ್

ಕರ್ಮಾಣಿ ಚ ಯಥಾಕಾಲಂ ಯಥಾದೇಶಂ ಯಥಾಬಲಮ್ ।
ಯಥೋಚಿತಂ ಯಥಾವಿತ್ತಮಕರೋದ್ಬ್ರಹ್ಮಸಾತ್ಕೃತಮ್ ॥

ಅನುವಾದ

ಅವನು ಬ್ರಹ್ಮಾರ್ಪಣ ಬುದ್ಧಿಯಿಂದ ಸಮಯ, ಸ್ಥಾನ, ಶಕ್ತಿ, ನ್ಯಾಯ, ಧನ ಇವುಗಳನುಸಾರ ಎಲ್ಲ ಕರ್ಮಗಳನ್ನು ಮಾಡುತ್ತಿದ್ದನು. ॥50॥

(ಶ್ಲೋಕ - 51)

ಮೂಲಮ್

ಲಂ ಬ್ರಹ್ಮಣಿ ವಿನ್ಯಸ್ಯ ನಿರ್ವಿಷಂಗಃ ಸಮಾಹಿತಃ ।
ಕರ್ಮಾಧ್ಯಕ್ಷಂ ಚ ಮನ್ವಾನ ಆತ್ಮಾನಂ ಪ್ರಕೃತೇಃ ಪರಮ್ ॥

ಅನುವಾದ

ಹೀಗೆ ಏಕಾಗ್ರಚಿತ್ತದಿಂದ ಸಮಸ್ತ ಕರ್ಮಗಳ ಫಲವನ್ನು ಪರಮಾತ್ಮನಿಗೆ ಅರ್ಪಿಸಿ, ಆತ್ಮವನ್ನು ಕರ್ಮಗಳ ಸಾಕ್ಷಿ ಹಾಗೂ ಪ್ರಕೃತಿಗಿಂತ ಅತೀತ ವೆಂದು ನೋಡುವುದರಿಂದ ಸಂಪೂರ್ಣವಾಗಿ ನಿರ್ಲಿಪ್ತ ನಾಗಿದ್ದನು. ॥51॥

(ಶ್ಲೋಕ - 52)

ಮೂಲಮ್

ಗೃಹೇಷು ವರ್ತಮಾನೋಪಿ ಸ ಸಾಮ್ರಾಜ್ಯಶ್ರಿಯಾನ್ವಿತಃ ।
ನಾಸಜ್ಜತೇಂದ್ರಿಯಾರ್ಥೇಷು ನಿರಹಂಮತಿರರ್ಕವತ್ ॥

ಅನುವಾದ

ಭಗವಾನ್ ಸೂರ್ಯನು ಎಲ್ಲೆಡೆ ಗಳಲ್ಲಿ ಪ್ರಕಾಶವನ್ನು ಚೆಲ್ಲಿದರೂ ವಸ್ತುಗಳ ಗುಣ-ದೋಷಗಳಿಂದ ನಿರ್ಲಿಪ್ತನಾಗಿರುವಂತೆ, ಪೃಥುಸಾರ್ವಭೌಮನು ಸಾಮ್ರಾಜ್ಯಲಕ್ಷ್ಮಿಯಿಂದ ಸಂಪನ್ನನಾಗಿ ಗೃಹಸ್ಥಾಶ್ರಮದಲ್ಲಿಯೇ ಇದ್ದರೂ ಅಹಂಕಾರಶೂನ್ಯನಾಗಿದ್ದುದರಿಂದ ಅವನು ಇಂದ್ರಿಯಗಳ ವಿಷಯದಲ್ಲಿ ಆಸಕ್ತನಾಗಲಿಲ್ಲ. ॥52॥

(ಶ್ಲೋಕ - 53)

ಮೂಲಮ್

ಏವಮಧ್ಯಾತ್ಮಯೋಗೇನ ಕರ್ಮಾಣ್ಯನುಸಮಾಚರನ್ ।
ಪುತ್ರಾನುತ್ಪಾದಯಾಮಾಸ ಪಂಚಾರ್ಚಿಷ್ಯಾತ್ಮಸಮ್ಮತಾನ್ ॥

ಅನುವಾದ

ಪೃಥುಮಹಾರಾಜನು ಹೀಗೆ ಆತ್ಮನಿಷ್ಠನಾಗಿ ಎಲ್ಲ ಕರ್ತವ್ಯ-ಕರ್ಮಗಳನ್ನು ಯಥೋಚಿತವಾಗಿ ಮಾಡುತ್ತಾ ತನ್ನ, ಮಡದಿಯಾದ ಅರ್ಚಿಯಲ್ಲಿ ತನಗೆ ಅನುರೂಪರಾದ ಐದು ಪುತ್ರರನ್ನು ಪಡೆದನು. ॥53॥

(ಶ್ಲೋಕ - 54)

ಮೂಲಮ್

ವಿಜಿತಾಶ್ವಂ ಧೂಮ್ರಕೇಶಂ ಹರ್ಯಕ್ಷಂ ದ್ರವಿಣಂ ವೃಕಮ್ ।
ಸರ್ವೇಷಾಂ ಲೋಕಪಾಲಾನಾಂ ದಧಾರೈಕಃ ಪೃಥುರ್ಗುಣಾನ್ ॥

(ಶ್ಲೋಕ - 55)

ಮೂಲಮ್

ಗೋಪೀಥಾಯ ಜಗತ್ ಸೃಷ್ಟೇಃ
ಕಾಲೇ ಸ್ವೇ ಸ್ವೇಚ್ಯುತಾತ್ಮಕಃ ।
ಮನೋವಾಗ್ ವೃತ್ತಿಭಿಃ ಸೌಮ್ಯೈ-
ರ್ಗುಣೈಃ ಸಂರಂಜಯನ್ ಪ್ರಜಾಃ ॥

(ಶ್ಲೋಕ - 56)

ಮೂಲಮ್

ರಾಜೇತ್ಯಧಾನ್ನಾಮಧೇಯಂ ಸೋಮರಾಜ ಇವಾಪರಃ ।
ಸೂರ್ಯವದ್ವಿಸೃಜನ್ಗೃಹ್ಣನ್ ಪ್ರತಪಂಶ್ಚ ಭುವೋ ವಸು ॥

ಅನುವಾದ

ವಿಜಿತಾಶ್ವ, ಧೂಮ್ರ ಕೇಶ, ಹರ್ಯಕ್ಷ, ದ್ರವಿಣ, ವೃಕ ಎಂಬ ಹೆಸರು ಅವರದಾಗಿತ್ತು. ಮಹಾರಾಜನಾದ ಪೃಥುವು ಭಗವಂತನ ಅಂಶನೇ ಆಗಿದ್ದನು. ಅವನು ಕಾಲ-ಕಾಲಗಳಲ್ಲಿ ಆವಶ್ಯಕತೆಗೆ ಅನು ಗುಣವಾಗಿ ಜಗತ್ತಿನ ಪ್ರಾಣಿಗಳನ್ನು ರಕ್ಷಿಸುವುದಕ್ಕಾಗಿ ತಾನೊಬ್ಬನೇ ಎಲ್ಲ ಲೋಕಪಾಲಕರ ಗುಣಗಳನ್ನು ಧರಿಸಿದ್ದನು. ತನ್ನ ಉದಾರವಾದ ಮನಸ್ಸು, ಪ್ರಿಯವೂ-ಹಿತಕರವೂ ಆದ ಸವಿಮಾತು, ಮನೋಹರವಾದ ಮೂರ್ತಿ ಮತ್ತು ಸೌಮ್ಯವಾದ ಗುಣಗಳಿಂದ ಪ್ರಜಾರಂಜನೆಯನ್ನು ಮಾಡುತ್ತಿದ್ದುದರಿಂದ ಮತ್ತೊಬ್ಬ ಚಂದ್ರನಂತೆ ‘ರಾಜಾ’ ಎಂಬ ಹೆಸರನ್ನು ಅನ್ವರ್ಥಗೊಳಿಸಿದ್ದನು. ಸೂರ್ಯನು ಬೇಸಿಗೆಯ ಕಾಲದಲ್ಲಿ ಪೃಥಿವಿಯಿಂದ ನೀರನ್ನು ಸೆಳೆದುಕೊಂಡು ಮಳೆಗಾಲದಲ್ಲಿ ಅದನ್ನು ಮಳೆಯರೂಪದಲ್ಲಿ ಭೂಮಿಗೆ ಸುರಿಸುವನು ಹಾಗೂ ತನ್ನ ಕಿರಣಗಳಿಂದ ಎಲ್ಲರಿಗೆ ಬಿಸಿಲನ್ನು ಉಂಟು ಮಾಡುತ್ತಾನೆ. ಹಾಗೆಯೇ ಪೃಥುಚಕ್ರವರ್ತಿಯು ಪ್ರಜೆಗಳಿಂದ ಕಪ್ಪ-ಕಾಣಿಕೆಗಳನ್ನು ತೆಗೆದುಕೊಂಡು ಅದನ್ನು ದುರ್ಭಿಕ್ಷವೇ ಮುಂತಾದ ಕಷ್ಟಕಾಲದಲ್ಲಿ ಕೊಡುಗೈಯಿಂದ ಪ್ರಜೆಗಳ ಹಿತದಲ್ಲಿ ತೊಡಗಿಸುತ್ತಿದ್ದನು. ಹೀಗೆ ಎಲ್ಲರ ಮೇಲೆಯೂ ತನ್ನ ಪ್ರಭಾವವನ್ನು ಬೀರುತ್ತಿದ್ದನು. ॥54-56॥

(ಶ್ಲೋಕ - 57)

ಮೂಲಮ್

ದುರ್ಧರ್ಷಸ್ತೇಜಸೇವಾಗ್ನಿರ್ಮಹೇಂದ್ರ ಇವ ದುರ್ಜಯಃ ।
ತಿತಿಕ್ಷಯಾ ಧರಿತ್ರೀವ ದ್ಯೌರಿವಾಭೀಷ್ಟದೋ ನೃಣಾಮ್ ॥

ಅನುವಾದ

ಅವನು ಅಗ್ನಿಯಂತೆ ದುರ್ಧರ್ಷನೂ, ಇಂದ್ರನಂತೆ ಅಜೇಯನೂ, ಪೃಥಿವಿಯಂತೆ ಕ್ಷಮಾಶೀಲನೂ, ಸ್ವರ್ಗದಂತೆ ಸಮಸ್ತ ಮನುಷ್ಯರ ಎಲ್ಲ ಕಾಮನೆಗಳನ್ನು ಪೂರೈಸುತ್ತಿದ್ದನು. ॥57॥

(ಶ್ಲೋಕ - 58)

ಮೂಲಮ್

ವರ್ಷತಿ ಸ್ಮ ಯಥಾಕಾಮಂ ಪರ್ಜನ್ಯ ಇವ ತರ್ಪಯನ್ ।
ಸಮುದ್ರ ಇವ ದುರ್ಬೋಧಃ ಸತ್ತ್ವೇನಾಚಲರಾಡಿವ ॥

ಅನುವಾದ

ಕಾಲ-ಕಾಲಗಳಲ್ಲಿ ಪ್ರಜೆಗಳನ್ನು, ತೃಪ್ತಿ ಪಡಿಸಲಿಕ್ಕಾಗಿ ಮೇಘದಂತೆ ಧಾರಾಳವಾಗಿ ಅವರೆಲ್ಲರ ಅಭೀಷ್ಟಪದಾರ್ಥಗಳನ್ನು ಮುಕ್ತಹಸ್ತದಿಂದ ಸೂರೆಗೊಳಿಸುತ್ತಿದ್ದನು. ಅವನು ಸಮುದ್ರದಂತೆ ಗಂಭೀರನೂ, ಪರ್ವತರಾಜ ಸುಮೇರುವಿನಂತೆ ಧೈರ್ಯಶಾಲಿಯೂ ಆಗಿದ್ದನು. ॥58॥

(ಶ್ಲೋಕ - 59)

ಮೂಲಮ್

ಧರ್ಮರಾಡಿವ ಶಿಕ್ಷಾಯಾಮಾಶ್ಚರ್ಯೇ ಹಿಮವಾನಿವ ।
ಕುಬೇರ ಇವ ಕೋಶಾಢ್ಯೋ ಗುಪ್ತಾರ್ಥೋ ವರುಣೋ ಯಥಾ ॥

ಅನುವಾದ

ಪೃಥುಮಹಾರಾಜನು ದುಷ್ಟರನ್ನು ದಮನಮಾಡುವುದರಲ್ಲಿ ಯಮಧರ್ಮನಂತೆಯೂ, ಆಶ್ಚರ್ಯಪೂರ್ಣವಾದ ವಸ್ತುಗಳ ಸಂಗ್ರಹದಲ್ಲಿ ಹಿಮಾಲಯದಂತೆಯೂ, ಭಂಡಾರದ ಸಮೃದ್ಧಿಯಲ್ಲಿ ಕುಬೇರನಂತೆಯೂ, ಧನವನ್ನು ಗುಪ್ತವಾಗಿಡುವುದರಲ್ಲಿ ವರುಣನಂತೆಯೂ ಆಗಿದ್ದನು. ॥59॥

(ಶ್ಲೋಕ - 60)

ಮೂಲಮ್

ಮಾತರಿಶ್ವೇವ ಸರ್ವಾತ್ಮಾ ಬಲೇನ ಸಹಸೌಜಸಾ ।
ಅವಿಷಹ್ಯತಯಾ ದೇವೋ ಭಗವಾನ್ ಭೂತರಾಡಿವ ॥

ಅನುವಾದ

ಶಾರೀರಿಕ ಬಲದಲ್ಲಿ, ಇಂದ್ರಿಯಗಳ ಪಾಟವದಲ್ಲಿ, ಪರಾಕ್ರಮದಲ್ಲಿ, ಎಲ್ಲೆಡೆ ಸಂಚರಿಸುವ ವಾಯುವಿನಂತೆಯೂ, ಸಹಿಸಲಸದಳವಾದ ತೇಜಸ್ಸಿನಲ್ಲಿ ಭಗವಾನ್ ಶಂಕರ ನಂತೆಯೇ ಆಗ್ದಿದನು. ॥60॥

(ಶ್ಲೋಕ - 61)

ಮೂಲಮ್

ಕಂದರ್ಪ ಇವ ಸೌಂದರ್ಯೇ ಮನಸ್ವೀ ಮೃಗರಾಡಿವ ।
ವಾತ್ಸಲ್ಯೇ ಮನುವನ್ನೃಣಾಂ ಪ್ರಭುತ್ವೇ ಭಗವಾನಜಃ ॥

ಅನುವಾದ

ಸೌಂದರ್ಯದಲ್ಲಿ ಮನ್ಮಥ ನಂತೆಯೂ, ಉತ್ಸಾಹದಲ್ಲಿ ಸಿಂಹದಂತೆಯೂ, ವಾತ್ಸಲ್ಯದಲ್ಲಿ ಮನುವಿನಂತೆಯೂ, ಮನುಷ್ಯರ ಆಧಿಪತ್ಯದಲ್ಲಿ ಸರ್ವಸಮರ್ಥ ಬ್ರಹ್ಮದೇವರಿಗೆ ಸಮಾನನಾಗಿದ್ದನು. ॥61॥

(ಶ್ಲೋಕ - 62)

ಮೂಲಮ್

ಬೃಹಸ್ಪತಿರ್ಬ್ರಹ್ಮವಾದೇ ಆತ್ಮವತ್ತ್ವೇ ಸ್ವಯಂ ಹರಿಃ ।
ಭಕ್ತ್ಯಾ ಗೋಗುರುವಿಪ್ರೇಷು ವಿಷ್ವಕ್ಸೇನಾನುವರ್ತಿಷು ।
ಹ್ರಿಯಾ ಪ್ರಶ್ರಯಶೀಲಾಭ್ಯಾಮಾತ್ಮತುಲ್ಯಃ ಪರೋದ್ಯಮೇ ॥

ಅನುವಾದ

ಬ್ರಹ್ಮವಿಚಾರದಲ್ಲಿ ಬೃಹಸ್ಪತಿಯಂತೆಯೂ, ಇಂದ್ರಿಯ ವಿಜಯದಲ್ಲಿ ಸಾಕ್ಷಾತ್ ಶ್ರೀಹರಿಯನ್ನು ಹೋಲುತ್ತಿದ್ದನು. ಗೋವುಗಳು, ಬ್ರಾಹ್ಮಣರು, ಗುರುಹಿರಿಯರು ಮತ್ತು ಭಗವದ್ಭಕ್ತರ ವಿಷಯದಲ್ಲಿ ಭಕ್ತಿ, ಲಜ್ಜೆ, ವಿನಯಶೀಲತೆ, ಪರೋಪಕಾರಗಳೇ ಮುಂತಾದ ಗುಣಸಂಪತ್ತಿನಲ್ಲಿ ತನಗೆ-ತಾನೇ ಸಮಾನನಾಗಿದ್ದನು ; ಅನುಪಮನಾಗಿದ್ದನು.॥62॥

(ಶ್ಲೋಕ - 63)

ಮೂಲಮ್

ಕೀರ್ತ್ಯೋರ್ಧ್ವಗೀತಯಾ ಪುಂಭಿಸೈಲೋಕ್ಯೇ ತತ್ರ ತತ್ರ ಹ ।
ಪ್ರವಿಷ್ಟ ಃ ಕರ್ಣರಂಧ್ರೇಷು ಸೀಣಾಂ ರಾಮಃ ಸತಾಮಿವ ॥

ಅನುವಾದ

ಮೂರು ಲೋಕಗಳಲ್ಲಿಯೂ ಅವನ ಕೀರ್ತಿಯು ಉಚ್ಚ ಸ್ವರದಲ್ಲಿ ಹಾಡಲ್ಪಡುತ್ತಿತ್ತು. ಇದರಿಂದ ಅವನು ಸತ್ಪುರುಷರ ಹೃದಯಗಳಲ್ಲಿ ಶ್ರೀರಾಮನು ಹೇಗೋ ಹಾಗೆಯೇ ಸ್ತ್ರೀ ಪುರುಷರೆಲ್ಲರ ಕಿವಿಗಳಲ್ಲಿ ಪ್ರವೇಶ ಪಡೆದುಕೊಂಡಿದ್ದನು. (ಅಂದರೆ ಎಲ್ಲೆಡೆ ಅವನ ಕೀರ್ತಿ ಕರ್ಣಾಕರ್ಣಿಯಾಗಿತ್ತು.) ॥63॥

ಅನುವಾದ (ಸಮಾಪ್ತಿಃ)

ಇಪ್ಪತ್ತೆರಡನೆಯ ಅಧ್ಯಾಯವು ಮುಗಿಯಿತು. ॥22॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಚತುರ್ಥಸ್ಕಂಧೇ ಪೃಥುಚರಿತೇ ದ್ವಾವಿಂಶೋಽಧ್ಯಾಯಃ ॥22॥

ಮೂಲಮ್