[ಇಪ್ಪತ್ತೊಂದನೆಯ ಅಧ್ಯಾಯ]
ಭಾಗಸೂಚನಾ
ಪೃಥುಮಹಾರಾಜನು ತನ್ನ ಪ್ರಜೆಗಳಿಗೆ ಮಾಡಿದ ಉಪದೇಶ
(ಶ್ಲೋಕ - 1)
ಮೂಲಮ್ (ವಾಚನಮ್)
ಮೈತ್ರೇಯ ಉವಾಚ
ಮೂಲಮ್
ವೌಕ್ತಿಕೈಃ ಕುಸುಮಸ್ರಗ್ಭಿರ್ದುಕೂಲೈಃ ಸ್ವರ್ಣತೋರಣೈಃ ।
ಮಹಾಸುರಭಿಭಿರ್ಧೂಪೈರ್ಮಂಡಿತಂ ತತ್ರ ತತ್ರ ವೈ ॥
ಅನುವಾದ
ಶ್ರೀಮೈತ್ರೇಯರು ಹೇಳುತ್ತಾರೆ — ಎಲೈ ವಿದುರನೇ! ಆ ಪೃಥುಮಹಾರಾಜನ ರಾಜಧಾನಿಯು ಎಲ್ಲ ಕಡೆಗಳಲ್ಲಿಯೂ ಮುತ್ತಿನ ಸರಗಳಿಂದಲೂ, ಹೂಮಾಲೆಗಳಿಂದಲೂ, ರೇಶ್ಮೆಬಟ್ಟೆಗಳಿಂದಲೂ, ಚಿನ್ನದ ತೋರಣಗಳಿಂದಲೂ, ಸುವಾಸಿತ ಘಮ-ಘಮಿಸುತ್ತಿದ್ದ ಧೂಪಗಳಿಂದಲೂ ಅಲಂಕೃತವಾಗಿತ್ತು. ॥1॥
(ಶ್ಲೋಕ - 2)
ಮೂಲಮ್
ಚಂದನಾಗುರುತೋಯಾರ್ದ್ರಾರಥ್ಯಾಚತ್ವರಮಾರ್ಗವತ್ ।
ಪುಷ್ಪಾಕ್ಷತಲೈಸ್ತೋಕ್ಮೈರ್ಲಾಜೈರರ್ಚಿರ್ಭಿರರ್ಚಿತಮ್ ॥
ಅನುವಾದ
ರಾಜಮಾರ್ಗಗಳಲ್ಲಿಯೂ, ಚೌಕಗಳಲ್ಲಿಯೂ, ಬೀದಿ-ಬೀದಿಗಳಲ್ಲಿಯೂ ಚಂದನ-ಅಗರುಮಿಶ್ರಿತ ನೀರನ್ನು ಸಿಂಪಡಿಸಿ ಹೂವು, ಅಕ್ಷತೆ, ಹಣ್ಣು, ಎಳೆಗರಿಕೆ, ಅರಳು, ದೀಪಗಳೇ ಮುಂತಾದ ಮಂಗಳ ದ್ರವ್ಯಗಳಿಂದ ಅವುಗಳನ್ನು ಸಿಂಗರಿಸಲಾಗಿತ್ತು. ॥2॥
(ಶ್ಲೋಕ - 3)
ಮೂಲಮ್
ಸವೃಂದೈಃ ಕದಲೀಸ್ತಂಭೈಃ ಪೂಗಪೋತೈಃ ಪರಿಷ್ಕೃತಮ್ ।
ತರುಪಲ್ಲವಮಾಲಾಭಿಃ ಸರ್ವತಃ ಸಮಲಂಕೃತಮ್ ॥
ಅನುವಾದ
ಆ ರಾಜನಗರಿಯಲ್ಲಿ ಅಲ್ಲಲ್ಲಿ ಇರಿಸಿದ್ದ ಹಣ್ಣು-ಹೂವುಗಳ ಗೊಂಚಲುಗಳಿಂದ ಕೂಡಿದ ಬಾಳೆಯ ಕಂಬಗಳಿಂದಲೂ, ಅಡಿಕೆಯ ಮರಗಳಿಂದಲೂ ಅತಿ ಮನೋಹರವಾಗಿತ್ತು. ಎಲ್ಲೆಡೆಗಳಲ್ಲಿಯೂ ಮಾವಿನಮರದ ಚಿಗುರೆಲೆಗಳ ತೋರಣಗಳಿಂದ ವಿಭೂಷಿತವಾಗಿತ್ತು. ॥3॥
(ಶ್ಲೋಕ - 4)
ಮೂಲಮ್
ಪ್ರಜಾಸ್ತಂ ದೀಪಬಲಿಭಿಃ ಸಂಭೃತಾಶೇಷಮಂಗಲೈಃ ।
ಅಭೀಯುರ್ಮೃಷ್ಟಕನ್ಯಾಶ್ಚ ಮೃಷ್ಟಕುಂಡಲಮಂಡಿತಾಃ ॥
ಅನುವಾದ
ಚಕ್ರವರ್ತಿಯು ಆ ನಗರವನ್ನು ಪ್ರವೇಶಿಸಿದಾಗ ದೀಪಗಳನ್ನೂ, ಕಾಣಿಕೆಗಳನ್ನೂ, ಅನೇಕ ಮಂಗಳ ದ್ರವ್ಯಗಳನ್ನೂ ತೆಗೆದುಕೊಂಡು ಪ್ರಜೆಗಳೂ ಮತ್ತು ಮನೋಹರವಾದ ಕುಂಡಲಗಳಿಂದ ಶೋಭಿಸುವ ಚೆಲುವೆಯರಾದ ಕನ್ಯೆಯರೂ ಆತನನ್ನು ಇದಿರ್ಗೊಂಡು ಸ್ವಾಗತಿಸಿದರು.॥4॥
(ಶ್ಲೋಕ - 5)
ಮೂಲಮ್
ಶಂಖದುಂದುಭಿಘೋಷೇಣ ಬ್ರಹ್ಮಘೋಷೇಣ ಚರ್ತ್ವಿಜಾಮ್ ।
ವಿವೇಶ ಭವನಂ ವೀರಃ ಸ್ತೂಯಮಾನೋ ಗತಸ್ಮಯಃ ॥
ಅನುವಾದ
ಆಗ ಶಂಖ, ದುಂದುಭಿಗಳೇ ಮುಂತಾದ ವಾದ್ಯಗಳು ಮೊಳಗತೊಡಗಿದವು. ಋತ್ವಿಜರು ವೇದಮಂತ್ರಗಳನ್ನು ಪಠಿಸತೊಡಗಿದರು. ವಂದಿ-ಮಾಗಧರು ಸ್ತೋತ್ರಗಾನವನ್ನು ಪ್ರಾರಂಭಿಸಿದರು. ಇವೆಲ್ಲವನ್ನು ನೋಡುತ್ತಿದ್ದರೂ ಪೃಥುಮಹಾ ರಾಜನಿಗೆ ಸ್ವಲ್ಪವೂ ಅಹಂಕಾರ ಉಂಟಾಗಲಿಲ್ಲ. ॥5॥
(ಶ್ಲೋಕ - 6)
ಮೂಲಮ್
ಪೂಜಿತಃ ಪೂಜಯಾಮಾಸ ತತ್ರ ತತ್ರ ಮಹಾಯಶಾಃ ।
ಪೌರಾಂಜಾನಪದಾಂಸ್ತಾನ್ ಸ್ತಾನ್ ಪ್ರೀತಃ ಪ್ರಿಯವರಪ್ರದಃ ॥
ಅನುವಾದ
ಮಾರ್ಗದಲ್ಲಿ ಅಲ್ಲಲ್ಲಿ ಪುರವಾಸಿಗಳೂ, ದೇಶವಾಸಿಗಳೂ, ಆತನನ್ನು ಅಭಿನಂದಿಸಿದರು. ಮಹಾಯಶಸ್ವಿಯಾದ ಮಹಾರಾಜನೂ ಅವರಲ್ಲಿ ಪ್ರಸನ್ನತೆಯಿಂದ ಕೂಡಿ ಅವರಿಗೆ ಇಷ್ಟವಾದ ವರಗಳನ್ನಿತ್ತು, ಅವರನ್ನು ಸಂತೋಷಪಡಿಸುತ್ತಾ ತನ್ನ ಅರಮನೆಯನ್ನು ಪ್ರವೇಶಿಸಿದನು. ॥6॥
(ಶ್ಲೋಕ - 7)
ಮೂಲಮ್
ಸ ಏವಮಾದೀನ್ಯನವದ್ಯಚೇಷ್ಟಿತಃ
ಕರ್ಮಾಣಿ ಭೂಯಾಂಸಿ ಮಹಾನ್ಮಹತ್ತಮಃ ।
ಕುರ್ವನ್ ಶಶಾಸಾವನಿಮಂಡಲಂ ಯಶಃ
ಸ್ಫೀತಂ ನಿಧಾಯಾರುರುಹೇ ಪರಂ ಪದಮ್ ॥
ಅನುವಾದ
ಆ ಪೃಥು ಮಹಾರಾಜನು ಶ್ರೇಷ್ಠತಮನಾದ ಮಹಾಪುರುಷನಾಗಿ ಸರ್ವರಿಗೂ ಪೂಜನೀಯನಾಗಿದ್ದನು. ಇಂತಹ ಅನೇಕ ಉದಾರವಾದ ಕಾರ್ಯಗಳನ್ನು ಮಾಡುತ್ತಾ ಭೂಮಿಯನ್ನು ಆಳಿದನು. ತನ್ನ ವಿಸ್ತಾರವಾದ ಕೀರ್ತಿಯನ್ನು ಎಲ್ಲೆಡೆ ಹರಡಿ ದವನಾಗಿ ಕೊನೆಗೆ ಶ್ರೀಭಗವಂತನ ಪರಮಪದವನ್ನು ಪಡೆದುಕೊಂಡನು. ॥7॥
(ಶ್ಲೋಕ - 8)
ಮೂಲಮ್ (ವಾಚನಮ್)
ಸೂತ ಉವಾಚ
ಮೂಲಮ್
ತದಾದಿರಾಜಸ್ಯ ಯಶೋ ವಿಜೃಂಭಿತಂ
ಗುಣೈರಶೇಷೈರ್ಗುಣವತ್ಸಭಾಜಿತಮ್ ।
ಕ್ಷತ್ತಾ ಮಹಾಭಾಗವತಃ ಸದಸ್ಪತೇ
ಕೌಷಾರವಿಂ ಪ್ರಾಹ ಗೃಣಂತಮರ್ಚಯನ್ ॥
ಅನುವಾದ
ಸೂತಪುರಾಣಿಕರು ಹೇಳುತ್ತಾರೆ — ಮುನಿವರ ಶೌನಕರೇ! ಈ ರೀತಿಯಲ್ಲಿ ಪೂಜ್ಯರಾದ ಶ್ರೀಮೈತ್ರೇಯರ ಬಾಯಿಂದ ನಾನಾ ಗುಣಸಂಪನ್ನನಾಗಿ, ಗುಣಶಾಲಿಗಳಿಂದ ಹೊಗಳಲ್ಪಟ್ಟ ವಿಸ್ತಾರಗೊಂಡ ಆದಿರಾಜ ಪೃಥುವಿನ ಯಶಸ್ಸನ್ನು ಕೇಳಿ ಪರಮಭಾಗವತೋತ್ತಮನಾದ ವಿದುರನು ಅವರನ್ನು ಅಭಿನಂದಿಸುತ್ತಾ ಕೇಳಿದನು. ॥8॥
(ಶ್ಲೋಕ - 9)
ಮೂಲಮ್ (ವಾಚನಮ್)
ವಿದುರ ಉವಾಚ
ಮೂಲಮ್
ಸೋಭಿಷಿಕ್ತಃ ಪೃಥುರ್ವಿಪ್ರೈ-
ರ್ಲಬ್ಧಾ ಶೇಷಸುರಾರ್ಹಣಃ ।
ಬಿಭ್ರತ್ಸ ವೈಷ್ಣವಂ ತೇಜೋ
ಬಾಹ್ವೋರ್ಯಾಭ್ಯಾಂ ದುದೋಹ ಗಾಮ್ ॥
ಅನುವಾದ
ವಿದುರನು ಕೇಳಿದನು ಬ್ರಾಹ್ಮಣೋತ್ತಮರೇ! ಬ್ರಾಹ್ಮಣರು ಪೃಥುಮಹಾರಾಜನಿಗೆ ಅಭಿಷೇಕಮಾಡಿದ್ದು, ಸಮಸ್ತದೇವತೆಗಳೂ ಆತನಿಗೆ ಕಾಣಿಕೆಗಳನ್ನು ಸಮರ್ಪಿಸಿದುದು, ತನ್ನ ಭುಜಗಳಲ್ಲಿ ವೈಷ್ಣವತೇಜಸ್ಸನ್ನು ಧರಿಸಿ, ಗೋರೂಪೀ ಪೃಥ್ವಿಯನ್ನು ಕರೆದುದು ಹೀಗೆ ಇದೆಲ್ಲವನ್ನು ನೀವು ನನಗೆ ತಿಳಿಸಿದಿರಿ. ॥9॥
(ಶ್ಲೋಕ - 10)
ಮೂಲಮ್
ಕೋ ನ್ವಸ್ಯ ಕೀರ್ತಿಂ ನ ಶೃಣೋತ್ಯಭಿಜ್ಞೋ
ಯದ್ವಿಕ್ರಮೋಚ್ಛಿಷ್ಟಮಶೇಷಭೂಪಾಃ ।
ಲೋಕಾಃ ಸಪಾಲಾ ಉಪಜೀವಂತಿ ಕಾಮ-
ಮದ್ಯಾಪಿ ತನ್ಮೇ ವದ ಕರ್ಮ ಶುದ್ಧಮ್ ॥
ಅನುವಾದ
ಆತನು ಅನುಭವಿಸಿ ಮಿಕ್ಕಿರುವ ಈ ಪರಾಕ್ರಮದ ವಿಷಯಭೋಗಗಳಿಂದಲೇ ಇಂದಿಗೂ ಸಮಸ್ತರಾಜರೂ ಹಾಗೂ ಲೋಕಪಾಲಕರಿಂದೊಡ ಗೂಡಿದ ಸಮಸ್ತ ಲೋಕಗಳು ತಮ್ಮ ಇಷ್ಟಾನುಸಾರ ಜೀವನವನ್ನು ನಡೆಸುತ್ತಿದ್ದಾರೆ. ಆತನ ಪವಿತ್ರವಾದ ಕೀರ್ತಿಯನ್ನು ಕೇಳಲು ವಿವೇಕಿಗಳಾದವರು ಸದಾ ಬಯಸುತ್ತಾರೆ. ಆದ್ದರಿಂದ ತಾವು ಕೃಪೆಯಿಟ್ಟು ಆ ಮಹಾತ್ಮನ ಇನ್ನೂ ಪವಿತ್ರವಾದ ಚರಿತ್ರೆಗಳನ್ನು ನನಗೆ ಹೇಳಿರಿ ಎಂದು ಪ್ರಾರ್ಥಿಸಿದನು. ॥10॥
(ಶ್ಲೋಕ - 11)
ಮೂಲಮ್ (ವಾಚನಮ್)
ಮೈತ್ರೇಯ ಉವಾಚ
ಮೂಲಮ್
ಗಂಗಾಯಮುನಯೋರ್ನದ್ಯೋರಂತರಾಕ್ಷೇತ್ರಮಾವಸನ್ ।
ಆರಬ್ಧಾನೇವ ಬುಭುಜೇ ಭೋಗಾನ್ ಪುಣ್ಯಜಿಹಾಸಯಾ ॥
ಅನುವಾದ
ಶ್ರೀಮೈತ್ರೇಯರು ಹೇಳುತ್ತಾರೆ — ಎಲೈ ವಿದುರನೇ! ಪೃಥುಮಹಾರಾಜನು ಗಂಗಾ-ಯಮುನೆಗಳ ಮಧ್ಯದಲ್ಲಿರುವ ಬ್ರಹ್ಮಾವರ್ತದೇಶದಲ್ಲಿ ವಾಸಿಸುತ್ತಾ, ತನ್ನ ಪುಣ್ಯ ಕರ್ಮಗಳನ್ನೂ ಕ್ಷಯಿಸುವುದಕ್ಕಾಗಿ ಪ್ರಾರಬ್ಧವಶದಿಂದ ಬಂದ ಸುಖೋಪಭೋಗಗಳನ್ನು ಅನುಭವಿಸುತ್ತಿದ್ದನು. ॥11॥
(ಶ್ಲೋಕ - 12)
ಮೂಲಮ್
ಸರ್ವತ್ರಾಸ್ಖಲಿತಾದೇಶಃ ಸಪ್ತದ್ವೀಪೈಕದಂಡಧೃಕ್ ।
ಅನ್ಯತ್ರ ಬ್ರಾಹ್ಮಣಕುಲಾದನ್ಯತ್ರಾಚ್ಯುತಗೋತ್ರತಃ ॥
ಅನುವಾದ
ಬ್ರಾಹ್ಮಣಕುಲಗಳನ್ನೂ ಮತ್ತು ಭಗವದ್ಭಕ್ತರನ್ನು ಬಿಟ್ಟು ಸಪ್ತ ದ್ವೀಪಗಳಲ್ಲಿರುವ ಉಳಿದ ಎಲ್ಲ ಜನರ ಮೇಲೂ ಅಖಂಡವೂ, ನಿಷ್ಕಂಟಕವೂ ಆದ ಅಧಿಕಾರವನ್ನು ನಡೆಸಿದನು. ॥12॥
(ಶ್ಲೋಕ - 13)
ಮೂಲಮ್
ಏಕದಾಸೀನ್ಮಹಾಸತ್ರದೀಕ್ಷಾ ತತ್ರ ದಿವೌಕಸಾಮ್ ।
ಸಮಾಜೋ ಬ್ರಹ್ಮರ್ಷೀಣಾಂ ಚ ರಾಜರ್ಷೀಣಾಂ ಚ ಸತ್ತಮ ॥
ಅನುವಾದ
ಒಮ್ಮೆ ಅವನು ಒಂದು ಮಹಾಸತ್ರದ ದೀಕ್ಷೆಯನ್ನು ಕೈಗೊಂಡನು. ಆಗ ಅಲ್ಲಿ ದೇವತೆಗಳ, ಬ್ರಹ್ಮರ್ಷಿಗಳ, ರಾಜರ್ಷಿಗಳ ದೊಡ್ಡ ಸಭೆಯೇ ನೆರೆದಿತ್ತು. ॥13॥
(ಶ್ಲೋಕ - 14)
ಮೂಲಮ್
ತಸ್ಮಿನ್ನರ್ಹತ್ಸು ಸರ್ವೇಷು ಸ್ವರ್ಚಿತೇಷು ಯಥಾರ್ಹತಃ ।
ಉತ್ಥಿತಃ ಸದಸೋ ಮಧ್ಯೇ ತಾರಾಣಾಮುಡುರಾಡಿವ ॥
ಅನುವಾದ
ಪೃಥುಮಹಾರಾಜನು ಆ ಸಭೆಯಲ್ಲಿ ಸೇರಿದ್ದ ಪೂಜ ನೀಯರಾದ ಅತಿಥಿಗಳನ್ನು ಯಥೋಚಿತವಾಗಿ ಸತ್ಕಾರ ಮಾಡಿ ಅಲ್ಲಿ ನಕ್ಷತ್ರಮಂಡಲದ ನಡುವೆ ಶೋಭಿಸುವ ಚಂದ್ರನಂತೆ ನಿಂತಿದ್ದನು. ॥14॥
(ಶ್ಲೋಕ - 15)
ಮೂಲಮ್
ಪ್ರಾಂಶುಃ ಪೀನಾಯತಭುಜೋ ಗೌರಃ ಕಂಜಾರುಣೇಕ್ಷಣಃ ।
ಸುನಾಸಃ ಸುಮುಖಃ ಸೌಮ್ಯಃ ಪೀನಾಂಸಃ ಸುದ್ವಿಜಸ್ಮಿತಃ ॥
(ಶ್ಲೋಕ - 16)
ಮೂಲಮ್
ವ್ಯೆಢವಕ್ಷಾಬೃಹಚ್ಛ್ರೋಣಿರ್ವಲಿವಲ್ಗುದಲೋದರಃ ।
ಆವರ್ತನಾಭಿರೋಜಸ್ವೀ ಕಾಂಚನೋರುರುದಗ್ರಪಾತ್ ॥
(ಶ್ಲೋಕ - 17)
ಮೂಲಮ್
ಸೂಕ್ಷ್ಮವಕ್ರಾಸಿತಸ್ನಿಗ್ಧಮೂರ್ಧಜಃ ಕಂಬುಕಂಧರಃ ।
ಮಹಾಧನೇ ದುಕೂಲಾಗ್ರ್ಯೇ ಪರಿಧಾಯೋಪವೀಯ ಚ ॥
ಅನುವಾದ
ಹಾಗೆ ನಿಂತುಕೊಂಡಿದ್ದ ಅವನ ಸೌಂದರ್ಯ, ಗಾಂಭೀರ್ಯಗಳನ್ನು ಹೇಗೆ ತಾನೇ ವರ್ಣಿಸೋಣ! ಉನ್ನತವಾದ ದೇಹ, ತುಂಬಿಕೊಂಡ ವಿಶಾಲವಾದ ಭುಜಗಳು, ಗೌರವರ್ಣದ ಅಂಗಕಾಂತಿ, ಕೆಂದಾವರೆಯಂತೆ ಕಂಗೊಳಿಸುತ್ತಿದ್ದ ಕಣ್ಣುಗಳು, ಸುಂದರ ವಾದ ಮೂಗು-ಮುಖ, ಸೌಮ್ಯವಾದ ಆಕೃತಿ, ಎತ್ತರವಾದ ಹೆಗಲು, ಕಿರುನಗೆಯಿಂದ ಕೂಡಿದ ಸುಂದರ ದಂತಪಂಕ್ತಿ, ವಿಶಾಲವಾದ ಎದೆ, ಸ್ಥೂಲವಾದ ನಡುವಿನ ಹಿಂಭಾಗ, ಅರಳಿಯ ಎಲೆಯಂತೆ ರಮಣೀಯವಾದ ತ್ರಿವಳಿರೇಖೆಗಳಿಂದ ಒಪ್ಪುತ್ತಿದ್ದ ಹೊಟ್ಟೆ, ಸುಳಿಯಂತೆ ಆಳವಾಗಿದ್ದ ಹೊಕ್ಕುಳು, ತೇಜಸ್ವಿಯಾದ ದೇಹ, ಚಿನ್ನದಂತೆ ಹೊಳೆಯುತ್ತಿದ್ದ ತೊಡೆಗಳು ಮತ್ತು ಎತ್ತರವಾಗಿ ಒಪ್ಪುತ್ತಿದ್ದ ಪಾದಗಳು, ಗುಂಗುರು-ಗುಂಗುರಾಗಿ ನುಣುಪಾಗಿದ್ದ ತಲೆಗೂದಲು, ಶಂಖದಂತೆ ಸುಳಿಗೊಂಡಿದ್ದ ಕಂಠ ಇವುಗಳಿಂದ ಅತ್ಯಂತ ಕಮನೀಯವಾಗಿದ್ದ ದೇಹದಿಂದ ಆ ಮಹಾಪುರುಷನು ಎಣೆಯಿಲ್ಲದ ಸೊಬಗಿನಿಂದ ವಿರಾಜಿಸುತ್ತಿದ್ದನು. ಆತನು ಬಹುಮೂಲ್ಯ ಧೋತ್ರವನ್ನುಟ್ಟು, ಅಂತಹುದೇ ಉತ್ತರೀಯ ವನ್ನು ಹೊದ್ದುಕೊಂಡಿದ್ದನು. ॥15-17॥
(ಶ್ಲೋಕ - 18)
ಮೂಲಮ್
ವ್ಯಂಜಿತಾಶೇಷಗಾತ್ರಶ್ರೀರ್ನಿಯಮೇ ನ್ಯಸ್ತಭೂಷಣಃ ।
ಕೃಷ್ಣಾಜಿನಧರಃ ಶ್ರೀಮಾನ್ ಕುಶಪಾಣಿಃ ಕೃತೋಚಿತಃ ॥
ಅನುವಾದ
ದೀಕ್ಷೆಯ ನಿಯಮಕ್ಕನು ಸಾರವಾಗಿ ಎಲ್ಲ ಆಭರಣಗಳನ್ನು ಕಳಚಿಟ್ಟಿದ್ದರಿಂದ ಆತನ ಶರೀರದ ಅಂಗ-ಪ್ರತ್ಯಂಗಗಳು ಸ್ವಾಭಾವಿಕ ಕಾಂತಿ-ಸೌಂದರ್ಯಗಳಿಂದ ಒಪ್ಪುತ್ತಿದ್ದವು. ದೇಹದಲ್ಲಿ ಕೃಷ್ಣಾಜಿನವನ್ನು ಧರಿಸಿ, ಕೈಯಲ್ಲಿ ದರ್ಭೆಗಳನ್ನು ಹಿಡಿದಿದ್ದನು. ಇವುಗಳಿಂದ ಆತನ ದೇಹದ ಕಾಂತಿಯು ಮತ್ತೂ ಮಿಗಿಲೇರಿತ್ತು. ಅವನು ತನ್ನ ಎಲ್ಲ ನಿತ್ಯಕರ್ಮಗಳನ್ನು ಯಥಾವಿಧಿಯಾಗಿ ಮುಗಿಸಿ ಅಲ್ಲಿ ನಿಂತುಕೊಂಡಿದ್ದನು. ॥18॥
(ಶ್ಲೋಕ - 19)
ಮೂಲಮ್
ಶಿಶಿರಸ್ನಿಗ್ಧತಾರಾಕ್ಷಃ ಸಮೈಕ್ಷತ ಸಮಂತತಃ ।
ಊಚಿವಾನಿದಮುರ್ವೀಶಃ ಸದಃ ಸಂಹರ್ಷಯನ್ನಿವ ॥
ಅನುವಾದ
ಆ ಪೃಥು ಮಹಾರಾಜನು ಇಡೀಸಭೆಯನ್ನು ಆನಂದದಿಂದ ನೆನೆಸುತ್ತಾ ಸ್ನೇಹಪೂರ್ಣವಾದ ಕಣ್ಣುಗಳಿಂದ ನಾಲ್ಕು ಕಡೆಗಳಲ್ಲಿಯೂ ದೃಷ್ಟಿಯನ್ನು ಹರಿಸಿ ಸಭೆಯನ್ನು ದ್ದೇಶಿಸಿ ಒಂದು ಭಾಷಣವನ್ನು ಮಾಡಿದನು. ॥19॥
(ಶ್ಲೋಕ - 20)
ಮೂಲಮ್
ಚಾರು ಚಿತ್ರಪದಂ ಶ್ಲಕ್ಷ್ಣಂ ಮೃಷ್ಟಂ ಗೂಢಮವಿಕ್ಲವಮ್ ।
ಸರ್ವೇಷಾಮುಪಕಾರಾರ್ಥಂ ತದಾ ಅನುವದನ್ನಿವ ॥
ಅನುವಾದ
ಆ ಭಾಷಣವು ಅತ್ಯಂತ ಸುಂದರವಾಗಿ, ವಿಚಿತ್ರಪದಗಳಿಂದ ಕೂಡಿದ್ದು, ಸ್ಪಷ್ಟವೂ, ಮಧುರವೂ, ಗಂಭೀರವೂ, ಶಂಕಾ ರಹಿತವೂ ಆದ ಶಬ್ದಗಳಿಂದ ಶೋಭಾಯಮಾನವಾಗಿತ್ತು. ಎಲ್ಲರಿಗೂ ಉಪಕಾರ ಮಾಡುವುದಕ್ಕಾಗಿ ತನ್ನ ಅನುಭವ ವನ್ನೇ ವ್ಯಕ್ತ ಮಾಡುತ್ತಿರುವನೋ ಎಂಬಂತಿತ್ತು. ॥20॥
(ಶ್ಲೋಕ - 21)
ಮೂಲಮ್ (ವಾಚನಮ್)
ರಾಜೋವಾಚ
ಮೂಲಮ್
ಸಭ್ಯಾಃ ಶೃಣುತ ಭದ್ರಂ ವಃ ಸಾಧವೋ ಯ ಇಹಾಗತಾಃ ।
ಸತ್ಸು ಜಿಜ್ಞಾಸುಭಿರ್ಧರ್ಮಮಾವೇದ್ಯಂ ಸ್ವಮನೀಷಿತಮ್ ॥
ಅನುವಾದ
ರಾಜಾಪೃಥುವು ಹೇಳಿದನು — ಎಲೈ ಸಜ್ಜನರೇ! ನಿಮಗೆ ಮಂಗಳವಾಗಲಿ. ಇಲ್ಲಿಗೆ ಆಗಮಿಸಿದ ಮಹಾನುಭಾವರೆಲ್ಲರೂ ನನ್ನ ಪ್ರಾರ್ಥನೆಯನ್ನು ಕೇಳಿರಿ. ಜಿಜ್ಞಾಸುವಾದ ಪುರುಷನು ಸಂತ-ಸಜ್ಜನರ ಸಮಾಜದಲ್ಲಿ ತನ್ನ ನಿಶ್ಚಯವನ್ನು ನಿವೇದಿಸಿಕೊಳ್ಳ ಬೇಕು. ॥21॥
(ಶ್ಲೋಕ - 22)
ಮೂಲಮ್
ಅಹಂ ದಂಡಧರೋ ರಾಜಾ ಪ್ರಜಾನಾಮಿಹ ಯೋಜಿತಃ ।
ರಕ್ಷಿತಾ ವೃತ್ತಿದಃ ಸ್ವೇಷು ಸೇತುಷು ಸ್ಥಾಪಿತಾ ಪೃಥಕ್ ॥
ಅನುವಾದ
ಈ ಲೋಕದಲ್ಲಿ ನನ್ನನ್ನು ಪ್ರಜೆಗಳ ಆಳ್ವಿಕೆ, ಅವರ ರಕ್ಷಣೆ, ಅವರಿಗೆ ವೃತ್ತಿ-ಉದ್ಯೋಗ ಗಳನ್ನು ಒದಗಿಸಿಕೊಡುವುದು, ಅವರನ್ನು ಬೇರೆ-ಬೇರೆ ಮರ್ಯಾದೆಗಳಲ್ಲಿ ಸ್ಥಾಪಿಸುವುದಕ್ಕಾಗಿ ರಾಜನನ್ನಾಗಿ ಮಾಡಿದ್ದಾರೆ. ॥22॥
(ಶ್ಲೋಕ - 23)
ಮೂಲಮ್
ತಸ್ಯ ಮೇ ತದನುಷ್ಠಾನಾದ್ಯಾನಾಹುರ್ಬ್ರಹ್ಮವಾದಿನಃ ।
ಲೋಕಾಃ ಸ್ಯುಃ ಕಾಮಸಂದೋಹಾ ಯಸ್ಯ ತುಷ್ಯತಿ ದಿಷ್ಟದೃಕ್ ॥
ಅನುವಾದ
ಆದ್ದರಿಂದ ಇವುಗಳನ್ನು ಪಾಲಿಸುವುದರಿಂದ ನನಗೆ ವೇದಜ್ಞರಾದ ಮುನಿಗಳ ಸಿದ್ಧಾಂತದಂತೆ ಸರ್ವಕರ್ಮಗಳಿಗೂ ಸಾಕ್ಷಿಯಾಗಿರುವ ಶ್ರೀಹರಿಯು ಪ್ರಸನ್ನನಾದಾಗ ದೊರೆಯುವ ಲೋಕಗಳು ದೊರೆಯುತ್ತವೆ. ॥23॥
(ಶ್ಲೋಕ - 24)
ಮೂಲಮ್
ಯ ಉದ್ಧರೇತ್ಕರಂ ರಾಜಾ ಪ್ರಜಾ ಧರ್ಮೇಷ್ವಶಿಕ್ಷಯನ್ ।
ಪ್ರಜಾನಾಂ ಶಮಲಂ ಭುಂಕ್ತೇ ಭಗಂ ಚ ಸ್ವಂ ಜಹಾತಿ ಸಃ ॥
ಅನುವಾದ
ಪ್ರಜೆಗಳಿಗೆ ಧರ್ಮ ಮಾರ್ಗದ ಶಿಕ್ಷಣನೀಡದೆ ಕೇವಲ ಅವರಿಂದ ತೆರಿಗೆಯನ್ನು ಸಂಗ್ರಹಿಸುವುದರಲ್ಲೇ ತತ್ಪರನಾದ ರಾಜನು ಪ್ರಜೆಗಳ ಪಾಪಕ್ಕೆ ಭಾಗಿಯಾಗಬೇಕಾಗುತ್ತದೆ. ಅಲ್ಲದೆ ಐಶ್ವರ್ಯವನ್ನು ಕಳಕೊಳ್ಳಬೇಕಾಗುತ್ತದೆ. ॥24॥
(ಶ್ಲೋಕ - 25)
ಮೂಲಮ್
ತತ್ಪ್ರಜಾ ಭರ್ತೃಪಿಂಡಾರ್ಥಂ ಸ್ವಾರ್ಥಮೇವಾನಸೂಯವಃ ।
ಕುರುತಾಧೋಕ್ಷಜಧಿಯಸ್ತರ್ಹಿ ಮೇನುಗ್ರಹಃ ಕೃತಃ ॥
ಅನುವಾದ
ಆದುದರಿಂದ ಪ್ರಿಯಪ್ರಜೆಗಳೇ! ನೀವು ನಿಮ್ಮ ಈ ರಾಜನಿಗೆ ಪರಲೋಕದಲ್ಲಿ ಹಿತವನ್ನುಂಟುಮಾಡುವುದಕ್ಕಾಗಿ ಪರಸ್ಪರ ದೋಷದೃಷ್ಟಿಯನ್ನು ಬಿಟ್ಟು ಹೃದಯದಲ್ಲಿ ಶ್ರೀಭಗವಂತ ನನ್ನು ನೆನೆಯುತ್ತಾ ನಿಮ್ಮ-ನಿಮ್ಮ ಕರ್ತವ್ಯಗಳನ್ನು ಪಾಲಿಸುತ್ತಿರಬೇಕು. ಹೀಗೆ ಮಾಡಿದರೆ ನಿಮ್ಮ ಸ್ವಾರ್ಥವು ಸಿದ್ಧಿಸುವುದು ಮತ್ತು ನನ್ನ ಮೇಲೆಯೂ ದೊಡ್ಡ ಅನುಗ್ರಹ ಮಾಡಿದಂತಾದೀತು. ॥25॥
(ಶ್ಲೋಕ - 26)
ಮೂಲಮ್
ಯೂಯಂ ತದನುಮೋದಧ್ವಂ ಪಿತೃದೇವರ್ಷಯೋಮಲಾಃ ।
ಕರ್ತುಃ ಶಾಸ್ತುರನುಜ್ಞಾತುಸ್ತುಲ್ಯಂ ಯತ್ಪ್ರೇತ್ಯ ತತ್ಫಲಮ್ ॥
ಅನುವಾದ
ಪರಿಶುದ್ಧರಾದ ಪಿತೃದೇವತೆಗಳೇ! ದೇವತೆಗಳೇ! ಮಹರ್ಷಿಗಳೇ! ನೀವೆಲ್ಲರೂ ನನ್ನ ಪ್ರಾರ್ಥನೆಯನ್ನು ಅನುಮೋದಿಸಿರಿ. ಏಕೆಂದರೆ, ಕರ್ಮಗಳ ಫಲವು ಮರಣಾನಂತರ ಅವುಗಳ ಕರ್ತೃವಿಗೆ, ಅವುಗಳನ್ನು ಉಪ ದೇಶಿಸಿದವನಿಗೆ ಮತ್ತು ಅನುಮೋದಿಸಿದವನಿಗೆ ಸಮಾನ ವಾಗಿಯೇ ದೊರೆಯುತ್ತದೆ. ॥26॥
(ಶ್ಲೋಕ - 27)
ಮೂಲಮ್
ಅಸ್ತಿ ಯಜ್ಞಪತಿರ್ನಾಮ ಕೇಷಾಂಚಿದರ್ಹಸತ್ತಮಾಃ ।
ಇಹಾಮುತ್ರ ಚ ಲಕ್ಷ್ಯಂತೇ ಜ್ಯೋತ್ಸ್ನಾವತ್ಯಃ ಕ್ವಚಿದ್ಭುವಃ ॥
ಅನುವಾದ
ಪೂಜ್ಯರಾದ ಸಜ್ಜನರೇ! ‘ಕರ್ಮಗಳ ಫಲವನ್ನು ಕೊಡುವವನು ಯಜ್ಞಪತಿಯಾದ ಭಗವಂತನೇ ಆಗಿದ್ದಾನೆ ’ ಎಂಬುದು ಮಹಾನುಭಾವರ ಮತವಾಗಿದೆ. ಏಕೆಂದರೆ, ಇಹಲೋಕ ಮತ್ತು ಪರಲೋಕವೆರಡರಲ್ಲಿಯೂ ಕೆಲ-ಕೆಲವು ಭಾರೀ ತೇಜೋಮಯ ಶರೀರಗಳು ಕಾಣಸಿಗುತ್ತವೆ. ॥27॥
(ಶ್ಲೋಕ - 28)
ಮೂಲಮ್
ಮನೋರುತ್ತಾನಪಾದಸ್ಯ ಧ್ರುವಸ್ಯಾಪಿ ಮಹೀಪತೇಃ ।
ಪ್ರಿಯವ್ರತಸ್ಯ ರಾಜರ್ಷೇರಂಗಸ್ಯಾತ್ಮತ್ಪಿತುಃ ಪಿತುಃ ॥
(ಶ್ಲೋಕ - 29)
ಮೂಲಮ್
ಈದೃಶಾನಾಮಥಾನ್ಯೇಷಾಮಜಸ್ಯ ಚ ಭವಸ್ಯ ಚ ।
ಪ್ರಹ್ರಾದಸ್ಯ ಬಲೇಶ್ಚಾಪಿ ಕೃತ್ಯಮಸ್ತಿ ಗದಾಭೃತಾ ॥
(ಶ್ಲೋಕ - 30)
ಮೂಲಮ್
ದೌಹಿತ್ರಾದೀನೃತೇ ಮೃತ್ಯೋಃ
ಶೋಚ್ಯಾಂಧರ್ಮವಿಮೋಹಿತಾನ್ ।
ವರ್ಗಸ್ವರ್ಗಾಪವರ್ಗಾಣಾಂ
ಪ್ರಾಯೇಣೈಕಾತ್ಮ್ಯಹೇತುನಾ ॥
ಅನುವಾದ
ಮನು, ಉತ್ತಾನಪಾದ, ಧ್ರುವ, ರಾಜರ್ಷಿಯಾದ ಪ್ರಿಯವ್ರತ, ನಮ್ಮ ಅಜ್ಜ ಅಂಗಮಹಾರಾಜರು ಹಾಗೂ ಬ್ರಹ್ಮಾ, ರುದ್ರ, ಪ್ರಹ್ಲಾದ, ಬಲಿ ಹಾಗೂ ಇದೇ ವರ್ಗಕ್ಕೆ ಸೇರಿದ ಇತರ ಮಹಾನುಭಾವರ ಮತದಲ್ಲಾದರೋ ಧರ್ಮ-ಅರ್ಥ-ಕಾಮ-ಮೋಕ್ಷರೂಪವಾದ ಚತುರ್ವರ್ಗ ಮತ್ತು ಸ್ವರ್ಗ-ಮೋಕ್ಷಗಳಿಗೂ ನಿಯಾಮಕನಾದ, ಕರ್ಮ ಫಲಪ್ರದನಾದ ಭಗವಾನ್ ಗದಾಧರನ ಆವಶ್ಯಕತೆ ಇದ್ದೇ ಇದೆ. ಈ ವಿಷಯದಲ್ಲಾದರೋ ಕೇವಲ ಮೃತ್ಯುವಿನ ದೌಹಿತ್ರನಾದ ವೇನನೇ ಮುಂತಾದ ಕೆಲವುಮಂದಿ ಶೋಚನೀಯರಾದ ಧರ್ಮವಿಮೂಢ ಜನರಲ್ಲೇ ಮತಭೇದವಿದೆ. ಆದ್ದರಿಂದ ಅದರ ವಿಶೇಷ ಮಹತ್ವವೇನೂ ಇಲ್ಲ. ॥28-30॥
(ಶ್ಲೋಕ - 31)
ಮೂಲಮ್
ಯತ್ಪಾದಸೇವಾಭಿರುಚಿಸ್ತಪಸ್ವಿನಾ-
ಮಶೇಷಜನ್ಮೋಪಚಿತಂ ಮಲಂ ಧಿಯಃ ।
ಸದ್ಯಃ ಕ್ಷಿಣೋತ್ಯನ್ವಹಮೇಧತೀ ಸತೀ
ಯಥಾ ಪದಾಂಗುಷ್ಠವಿನಿಃಸೃತಾ ಸರಿತ್ ॥
(ಶ್ಲೋಕ - 32)
ಮೂಲಮ್
ವಿನಿರ್ಧುತಾಶೇಷಮನೋಮಲಃ ಪುಮಾನ್
ಅಸಂಗವಿಜ್ಞಾನವಿಶೇಷವೀರ್ಯವಾನ್ ।
ಯದಂಘ್ರಿಮೂಲೇ ಕೃತಕೇತನಃ ಪುನಃ
ನ ಸಂಸೃತಿಂ ಕ್ಲೇಶವಹಾಂ ಪ್ರಪದ್ಯತೇ ॥
(ಶ್ಲೋಕ - 33)
ಮೂಲಮ್
ತಮೇವ ಯೂಯಂ ಭಜತಾತ್ಮವೃತ್ತಿಭಿ-
ರ್ಮನೋವಚಃಕಾಯಗುಣೈಃ ಸ್ವಕರ್ಮಭಿಃ ।
ಅಮಾಯಿನಃ ಕಾಮದುಘಾಂಘ್ರಿಪಂಕಜಂ
ಯಥಾಧಿಕಾರಾವಸಿತಾರ್ಥಸಿದ್ಧಯಃ ॥
ಅನುವಾದ
‘ಶ್ರೀಭಗವಂತನ ಚರಣಕಮಲಗಳನ್ನು ಸೇವಿಸಬೇಕು’ ಎಂಬ ಅಭಿಲಾಷೆಯೂ ಆತನ ಪಾದನಖದಿಂದ ಉದ್ಭವಿಸಿದ ಗಂಗೆಯಂತೆ ಸಂಸಾರತಾಪಗಳಿಂದ ಸಂತಪ್ತ ರಾದ ಜೀವರ ಜನ್ಮ-ಜನ್ಮಾಂತರಗಳ ಕೊಳೆಗಳನ್ನು ಒಡನೆಯೇ ತೊಳೆದು ಹಾಕುವುದು. ಆತನ ಚರಣತಲವನ್ನು ಆಶ್ರಯಿಸಿದ ಮನುಷ್ಯನು ಎಲ್ಲ ಮನೋದೋಷಗಳನ್ನು ತೊಳೆದುಕೊಳ್ಳುವನು. ವೈರಾಗ್ಯವನ್ನೂ, ತತ್ತ್ವಸಾಕ್ಷಾತ್ಕಾರ ಬಲವನ್ನೂ ಪಡೆದುಕೊಳ್ಳುವನು. ಈ ದುಃಖಮಯವಾದ ಸಂಸಾರಚಕ್ರದಲ್ಲಿ ಮತ್ತೆ ಬೀಳುವುದಿಲ್ಲ. ಆತನ ಅಡಿದಾವರೆ ಎಲ್ಲ ಪುರುಷಾರ್ಥಗಳನ್ನೂ ಈಡೇರಿಸುವುವು. ಇಂತಹ ಪ್ರಭುವನ್ನು ನೀವು ನಿಮ್ಮ ಜೀವನವೃತ್ತಿಗೆ ಉಪಯೋಗ ವಾಗುವ ವರ್ಣಾಶ್ರ ಮೋಚಿತವಾದ ಅಧ್ಯಯನ, ಅಧ್ಯಾಪನಗಳೇ ಮುಂತಾದ ಕರ್ಮಗಳಿಂದಲೂ, ಧ್ಯಾನ-ಸ್ತೋತ್ರ-ಪೂಜೆ ಮುಂತಾದ ಮನ, ವಚನ, ದೇಹಗಳ ಕರ್ಮಗಳಿಂದಲೂ ಆರಾಧಿಸಿರಿ. ಮನಸ್ಸಿನಲ್ಲಿ ಯಾವ ಕಪಟವನ್ನೂ ಇರಿಸಿಕೊಳ್ಳಬೇಡಿರಿ. ನಮಗೆ ನಮ್ಮ-ನಮ್ಮ ಕರ್ಮಾನುಸಾರವಾಗಿ ಫಲವು ದೊರೆತೇ ದೊರೆಯುವುದು ಎಂದು ನಿಶ್ಚಯಿಸಿಕೊಳ್ಳಿ. ॥31-33॥
(ಶ್ಲೋಕ - 34)
ಮೂಲಮ್
ಅಸಾವಿಹಾನೇಕಗುಣೋಗುಣೋಧ್ವರಃ
ಪೃಥಗ್ವಿಧದ್ರವ್ಯಗುಣಕ್ರಿಯೋಕ್ತಿಭಿಃ ।
ಸಂಪದ್ಯತೇರ್ಥಾಶಯಲಿಂಗನಾಮಭಿ-
ರ್ವಿಶುದ್ಧವಿಜ್ಞಾನಘನಃ ಸ್ವರೂಪತಃ ॥
ಅನುವಾದ
ಶ್ರೀಭಗವಂತನು ಸ್ವರೂಪತಃ ವಿಶುದ್ಧ ವಿಜ್ಞಾನಘನ ಮತ್ತು ಸಮಸ್ತ ವಿಶೇಷಣಗಳಿಂದ ರಹಿತನಾಗಿದ್ದಾನೆ. ಆದರೂ ಯಜ್ಞದಲ್ಲಿ ಬಳಸುವ ಅಕ್ಕಿಯೇ ಮುಂತಾದ ದ್ರವ್ಯಗಳು, ಶುಕ್ಲಾದಿ ಗುಣಗಳು, ಕುಟ್ಟುವುದು ಮುಂತಾದ ಕ್ರಿಯೆಗಳು, ಮಂತ್ರಗಳ ಮೂಲಕವೂ ಬಗೆ-ಬಗೆಯ ಅರ್ಥ, ಆಶಯ, ಸಂಕಲ್ಪ, ಪದಾರ್ಥಶಕ್ತಿಗಳು ಹಾಗೂ ಅಗ್ನಿಷ್ಟೋಮಾದಿ ಹೆಸರುಗಳಿಂದ ಸಂಪನ್ನವಾಗುವ ಅನೇಕ ವಿಶೇಷಣಗಳಿಂದ ಕೂಡಿದ ಯಜ್ಞಗಳ ರೂಪದಲ್ಲಿ ಪ್ರಕಾಶಗೊಳ್ಳುತ್ತಾನೆ. ॥34॥
(ಶ್ಲೋಕ - 35)
ಮೂಲಮ್
ಪ್ರಧಾನಕಾಲಾಶಯಧರ್ಮಸಂಗ್ರಹೇ
ಶರೀರ ಏಷ ಪ್ರತಿಪದ್ಯ ಚೇತನಾಮ್ ।
ಕ್ರಿಯಾಲತ್ವೇನ ವಿಭುರ್ವಿಭಾವ್ಯತೇ
ಯಥಾನಲೋ ದಾರುಷು ತದ್ಗುಣಾತ್ಮಕಃ ॥
ಅನುವಾದ
ಒಂದೇ ಅಗ್ನಿಯು ಬೇರೆ-ಬೇರೆ ಕಟ್ಟಿಗೆಗಳಲ್ಲಿ ಅವುಗಳ ಆಕಾರದಂತೆ ಕಂಡುಬರುತ್ತದೋ ಹಾಗೆಯೇ ಆ ಸರ್ವವ್ಯಾಪಕ ಪ್ರಭುವು ಪರಮಾನಂದೈಕ ಸ್ವರೂಪನಾಗಿದ್ದರೂ ಪ್ರಕೃತಿ, ಕಾಲ, ವಾಸನೆ ಮತ್ತು ಅದೃಷ್ಟಗಳಿಂದ ಉತ್ಪನ್ನವಾದ ಶರೀರದಲ್ಲಿ ವಿಷಯಾಕಾರವನ್ನು ತಳೆದಿರುವ ಬುದ್ಧಿಯಲ್ಲಿ ಸ್ಥಿತನಾಗಿದ್ದು ಆ ಯಜ್ಞ-ಯಾಗಾದಿ ಕ್ರಿಯಗಳ ಫಲರೂಪದಲ್ಲಿ ಅನೇಕ ಪ್ರಕಾರನಾಗಿರುವಂತೆ ಕಂಡುಬರುತ್ತಾನೆ. ॥35॥
(ಶ್ಲೋಕ - 36)
ಮೂಲಮ್
ಅಹೋ ಮಮಾಮೀ ವಿತರಂತ್ಯನುಗ್ರಹಂ
ಹರಿಂ ಗುರುಂ ಯಜ್ಞ ಭುಜಾಮಧೀಶ್ವರಮ್ ।
ಸ್ವಧರ್ಮಯೋಗೇನ ಯಜಂತಿ ಮಾಮಕಾ
ನಿರಂತರಂ ಕ್ಷೋಣಿತಲೇ ದೃಢವ್ರತಾಃ ॥
ಅನುವಾದ
ಈ ಭೂ ಮಂಡಲದಲ್ಲಿರುವ ನನ್ನ ಪ್ರಜೆಗಳು ಯಜ್ಞವನ್ನು ಭೋಗಿಸುವ ದೇವತೆಗಳಿಗೂ ಅಧೀಶ್ವರನಾದ ಸರ್ವಗುರು ವಾದ ಶ್ರೀಹರಿಯನ್ನು ದೃಢವಾದ ವ್ರತನಿಷ್ಠೆಗಳಿಂದ ತಮ್ಮ-ತಮ್ಮ ಧರ್ಮಗಳ ಮೂಲಕ ನಿರಂತರವಾಗಿ ಸೇವಿಸಿದರೆ ಅವರು ನನ್ನ ಮೇಲೆ ದೊಡ್ಡ ಕೃಪೆಮಾಡಿದಂತಾಗುವುದು. ॥36॥
(ಶ್ಲೋಕ - 37)
ಮೂಲಮ್
ಮಾ ಜಾತು ತೇಜಃ ಪ್ರಭವೇನ್ಮಹರ್ಧಿಭಿಃ
ತಿತಿಕ್ಷಯಾ ತಪಸಾ ವಿದ್ಯಯಾ ಚ ।
ದೇದೀಪ್ಯಮಾನೇಜಿತದೇವತಾನಾಂ
ಕುಲೇ ಸ್ವಯಂ ರಾಜಕುಲಾದ್ವಜಾನಾಮ್ ॥
ಅನುವಾದ
ಸಹನಶೀಲತೆ, ತಪಸ್ಸು ಮತ್ತು ಜ್ಞಾನಗಳೆಂಬ ಐಶ್ವರ್ಯಗಳ ಕಾರಣದಿಂದ ವಿಷ್ಣುಭಕ್ತರೂ, ಬ್ರಾಹ್ಮಣರೂ ಇವರ ವಂಶಗಳು ಸ್ವಾಭಾವಿಕವಾಗಿಯೇ ಉಜ್ವಲವಾಗಿರುತ್ತವೆ. ಅವರ ಮೇಲೆ ರಾಜಕುಲಗಳು ತಮ್ಮ ತೇಜಸ್ಸು, ಧನ-ಸಂಪತ್ತುಗಳೇ ಮುಂತಾದ ಸಮೃದ್ಧಿಯ ಪ್ರಭಾವವನ್ನು ಬೀರಬಾರದು. ॥37॥
(ಶ್ಲೋಕ - 38)
ಮೂಲಮ್
ಬ್ರಹ್ಮಣ್ಯದೇವಃ ಪುರುಷಃ ಪುರಾತನೋ
ನಿತ್ಯಂ ಹರಿರ್ಯಚ್ಚರಣಾಭಿವಂದನಾತ್ ।
ಅವಾಪ ಲಕ್ಷ್ಮೀಮನಪಾಯಿನೀಂ ಯಶೋ
ಜಗತ್ಪವಿತ್ರಂ ಚ ಮಹತ್ತಮಾಗ್ರಣೀಃ ॥
ಅನುವಾದ
ಬ್ರಹ್ಮದೇವರೇ ಮುಂತಾದ ಸಮಸ್ತ ದೇವತೆಗಳಿಗೆ ಅಗ್ರಗಣ್ಯನೂ, ಬ್ರಾಹ್ಮಣಭಕ್ತನೂ ಆದ ಪುರಾಣಪುರುಷ ಶ್ರೀಹರಿಯೂ ಕೂಡ ನಿರಂತರ ಅವರ ಚರಣಗಳನ್ನು ನಮಸ್ಕರಿಸಿದ್ದರಿಂದಲೇ ಸ್ಥಿರವಾದ ಲಕ್ಷ್ಮಿ ಯನ್ನೂ ಹಾಗೂ ಜಗತ್ತನ್ನು ಪವಿತ್ರಗೊಳಿಸುವಂತಹ ಕೀರ್ತಿಯನ್ನು ಗಳಿಸಿದ್ದಾನೆ. ॥38॥
(ಶ್ಲೋಕ - 39)
ಮೂಲಮ್
ಯತ್ಸೇವಯಾಶೇಷಗುಹಾಶಯಃ ಸ್ವರಾಡ್
ವಿಪ್ರಪ್ರಿಯಸ್ತುಷ್ಯತಿ ಕಾಮಮೀಶ್ವರಃ ।
ತದೇವ ತದ್ಧರ್ಮಪರೈರ್ವಿನೀತೈಃ
ಸರ್ವಾತ್ಮನಾ ಬ್ರಹ್ಮಕುಲಂ ನಿಷೇವ್ಯತಾಮ್ ॥
ಅನುವಾದ
ನೀವೆಲ್ಲರೂ ಭಗವಂತನ ಲೋಕಸಂಗ್ರಹ ರೂಪವಾದ ಧರ್ಮವನ್ನು ಪಾಲಿಸುವವರಾಗಿದ್ದೀರಿ. ಸರ್ವಾಂತರ್ಯಾಮಿ ಸ್ವಯಂಪ್ರಕಾಶ, ಬ್ರಾಹ್ಮಣ ಪ್ರಿಯ ಶ್ರೀಹರಿಯು ಬ್ರಾಹ್ಮಣವಂಶವನ್ನು ಸೇವಿಸುವುದರಿಂದಲೇ ಪರಮ ಸಂತುಷ್ಟನಾಗುತ್ತಾನೆ. ಆದ್ದರಿಂದ ನೀವೆಲ್ಲರೂ ಎಲ್ಲ ವಿಧದಿಂದ ವಿನಯಪೂರ್ವಕ ಬ್ರಾಹ್ಮಣ ಕುಲದ ಸೇವೆ ಮಾಡಬೇಕು. ॥39॥
(ಶ್ಲೋಕ - 40)
ಮೂಲಮ್
ಪುಮಾಲ್ಲಭೇತಾನತಿವೇಲಮಾತ್ಮನಃ
ಪ್ರಸೀದತೋತ್ಯಂತಶಮಂ ಸ್ವತಃ ಸ್ವಯಮ್ ।
ಯನ್ನಿತ್ಯಸಂಬಂಧನಿಷೇವಯಾ ತತಃ
ಪರಂ ಕಿಮತ್ರಾಸ್ತಿ ಮುಖಂ ಹವಿರ್ಭುಜಾಮ್ ॥
ಅನುವಾದ
ಅವರನ್ನು ನಿತ್ಯ ಸೇವೆ ಮಾಡುವುದರಿಂದ ಶೀಘ್ರವಾಗಿಯೇ ಚಿತ್ತಶುದ್ಧವಾಗಿ ಮನುಷ್ಯನು ಸ್ವಯಂ (ಜ್ಞಾನ ಮತ್ತು ಅಭ್ಯಾಸವಿಲ್ಲದೆಯೇ) ಪರಮ ಶಾಂತಿರೂಪವಾದ ಮೋಕ್ಷವನ್ನು ಪಡೆದುಕೊಳ್ಳು ವನು. ಹವಿಸ್ಸನ್ನು ಸ್ವೀಕರಿಸುವ ದೇವತೆಗಳಿಗೆ ಮುಖ್ಯವಾಗುವ ಶಕ್ತಿಯು ಇಂತಹ ಮಹಾತ್ಮರಾದ ಬ್ರಾಹ್ಮಣರಿಗಲ್ಲದೆ ಬೇರಾರಿಗುಂಟು? ॥40॥
(ಶ್ಲೋಕ - 41)
ಮೂಲಮ್
ಅಶ್ನಾತ್ಯನಂತಃ ಖಲು ತತ್ತ್ವಕೋವಿದೈಃ
ಶ್ರದ್ಧಾಹುತಂ ಯನ್ಮುಖ ಇಜ್ಯನಾಮಭಿಃ ।
ನ ವೈ ತಥಾ ಚೇತನಯಾ ಬಹಿಷ್ಕೃತೇ
ಹುತಾಶನೇ ಪಾರಮಹಂಸ್ಯಪರ್ಯಗುಃ ॥
ಅನುವಾದ
ಇಂತಹ ಜ್ಞಾನಿಗಳು ಅಗ್ನಿಗೆ ಮಾತ್ರವಲ್ಲದೆ ಭಗವಾನ್ ಶ್ರೀಹರಿಗೂ ಮುಖವಾಗಿದ್ದಾರೆ. ಏಕೆಂದರೆ, ಪರಮಹಂಸರಿಂದ ಹೊಂದಲ್ಪಡುವವನೂ, ಜ್ಞಾನಪರವಾದ ಉಪನಿಷತ್ತಿನ ವಾಕ್ಯಗಳಿಂದ ಪ್ರತಿಪಾದಿಸಲ್ಪಡುವವನೂ ಆದ ಭಗವಾನ್ ಶ್ರೀಅನಂತನು ಇಂದ್ರಾದಿಯಜ್ಞದ ದೇವತೆಗಳ ಹೆಸರನ್ನು ಹೇಳುತ್ತಾ ತತ್ತ್ವ ಜ್ಞಾನಿಗಳು ಬ್ರಾಹ್ಮಣರ ಮುಖದಲ್ಲಿ ಶ್ರದ್ಧೆಯಿಂದ ಹೋಮ ಮಾಡುವ ಪದಾರ್ಥಗಳನ್ನು ಅತ್ಯಂತ ಪ್ರೀತಿಯಿಂದ ಆಸ್ವಾದಿಸುತ್ತಾನೆ. ಅಗ್ನಿಯಲ್ಲಿ ಹೋಮಮಾಡುವ ದ್ರವ್ಯಗಳನ್ನೂ ಕೂಡ ಶ್ರೀಭಗವಂತನು ಅಷ್ಟು ಪ್ರೀತಿಯಿಂದ ಗ್ರಹಿಸುವುದಿಲ್ಲ. ॥41॥
(ಶ್ಲೋಕ - 42)
ಮೂಲಮ್
ಯದ್ಬ್ರಹ್ಮ ನಿತ್ಯಂ ವಿರಜಂ ಸನಾತನಂ
ಶ್ರದ್ಧಾತಪೋಮಂಗಲವೌನಸಂಯಮೈಃ ।
ಸಮಾಧಿನಾ ಬಿಭ್ರತಿ ಹಾರ್ಥದೃಷ್ಟಯೇ
ಯತ್ರೇದಮಾದರ್ಶ ಇವಾವಭಾಸತೇ ॥
(ಶ್ಲೋಕ - 43)
ಮೂಲಮ್
ತೇಷಾಮಹಂ ಪಾದಸರೋಜರೇಣುಂ
ಆರ್ಯಾ ವಹೇಯಾಧಿಕಿರೀಟಮಾಯುಃ ।
ಯಂ ನಿತ್ಯದಾ ಬಿಭ್ರತ ಆಶು ಪಾಪಂ
ನಶ್ಯತ್ಯಮುಂ ಸರ್ವಗುಣಾ ಭಜಂತಿ ॥
ಅನುವಾದ
ಓ ಸಭ್ಯಮಹಾಶಯರೇ! ಸ್ವಚ್ಛವಾದ ಕನ್ನಡಿಯಲ್ಲಿ ಪ್ರತಿಬಿಂಬವು ಶುದ್ಧವಾಗಿ ತೋರುವಂತೆ ಇಡೀ ವಿಶ್ವದ ಅರಿವನ್ನು ಚೆನ್ನಾಗಿ ಮಾಡಿಸಿಕೊಡುವಂತಹ ನಿತ್ಯವೂ, ಶುದ್ಧವೂ, ಸನಾತನವೂ ಆದ ವೇದವೆಂಬ ಬ್ರಹ್ಮವನ್ನು ಪರಮಾರ್ಥತತ್ತ್ವದ ಪ್ರಾಪ್ತಿಗಾಗಿ ಶ್ರದ್ಧೆ, ತಪಸ್ಸು, ಮಂಗಳಕರವಾದ ಆಚರಣೆ, ಮೌನ, ಸಂಯಮ ಸಮಾಧಿಗಳಿಂದ ಯಾರೂ ಆ ಪರಬ್ರಹ್ಮನನ್ನು ಸಾಕ್ಷಾತ್ಕರಿಸಿ ಕೊಂಡಿ ದ್ದಾರೆಯೋ ಅಂತಹ ಬ್ರಾಹ್ಮಣರ ಚರಣ ಕಮಲಗಳ ಧೂಳಿಯನ್ನು ನಾನು ಆಯುಸ್ಸು ಇರುವ ತನಕ ನನ್ನ ಕಿರೀಟದಲ್ಲಿ ಧರಿಸುವೆನು. ಏಕೆಂದರೆ, ಅದನ್ನು ಸದಾ ತಲೆಯಲ್ಲಿ ಧರಿಸುತ್ತಿದ್ದರೆ ಮನುಷ್ಯನ ಸಮಸ್ತ ಪಾಪಗಳು ಆಗಲೇ ನಾಶಹೊಂದುವವು ಮತ್ತು ಸಮಸ್ತ ಸದ್ಗುಣಗಳೂ ಆತನನ್ನು ಆಶ್ರಯಿಸುವುವು. ॥42-43॥
(ಶ್ಲೋಕ - 44)
ಮೂಲಮ್
ಗುಣಾಯನಂ ಶೀಲಧನಂ ಕೃತಜ್ಞಂ
ವೃದ್ಧಾಶ್ರಯಂ ಸಂವೃಣತೇನು ಸಂಪದಃ ।
ಪ್ರಸೀದತಾಂ ಬ್ರಹ್ಮಕುಲಂ ಗವಾಂ ಚ
ಜನಾರ್ದನಃ ಸಾನುಚರಶ್ಚ ಮಹ್ಯಮ್ ॥
ಅನುವಾದ
ಅಂತಹ ಗುಣಶಾಲಿಯೂ, ಶೀಲಸಂಪನ್ನನೂ, ಕೃತಜ್ಞನೂ, ಗುರು-ಹಿರಿಯರ ಸೇವೆ ಮಾಡುವವನೂ ಆದವನ ಬಳಿಗೆ ಸಮಸ್ತ ಸಂಪತ್ತುಗಳು ತಾವಾಗಿಯೇ ಬಂದು ಸೇರುವವು. ಆದುದರಿಂದ ಅಂತಹ ಬ್ರಾಹ್ಮಣಕುಲಗಳೂ, ಗೋವಂಶವೂ ಮತ್ತು ಭಕ್ತರಿಂದೊಡ ಗೂಡಿದ ಶ್ರೀಭಗವಂತನೂ ನನ್ನಲ್ಲಿ ಸದಾ ಪ್ರಸನ್ನನಾಗಿರಲಿ ಎಂದು ಆಶಿಸುತ್ತೇನೆ. ॥44॥
(ಶ್ಲೋಕ - 45)
ಮೂಲಮ್ (ವಾಚನಮ್)
ಮೈತ್ರೇಯ ಉವಾಚ
ಮೂಲಮ್
ಇತಿ ಬ್ರುವಾಣಂ ನೃಪತಿಂ ಪಿತೃದೇವದ್ವಿಜಾತಯಃ ।
ತುಷ್ಟುವುರ್ಹೃಷ್ಟಮನಸಃ ಸಾಧುವಾದೇನ ಸಾಧವಃ ॥
ಅನುವಾದ
ಶ್ರೀಮೈತ್ರೇಯರು ಹೇಳುತ್ತಾರೆ — ಪೃಥುಮಹಾರಾಜನ ಈ ಭಾಷಣವನ್ನು ಕೇಳಿ ದೇವತೆಗಳೂ, ಪಿತೃಗಳೂ, ಬ್ರಾಹ್ಮಣರೇ ಮುಂತಾದ ಸಮಸ್ತ ಸಜ್ಜನರು ಅತ್ಯಂತ ಪ್ರಸನ್ನರಾಗಿ ಭಲೇ! ಭಲೇ! ಎಂದು ಆತನನ್ನು ತಮ್ಮ-ತಮ್ಮಲ್ಲೇ ಪ್ರಶಂಸೆ ಮಾಡ ತೊಡಗಿದರು. ॥45॥
(ಶ್ಲೋಕ - 46)
ಮೂಲಮ್
ಪುತ್ರೇಣ ಜಯತೇ ಲೋಕಾನಿತಿ ಸತ್ಯವತೀ ಶ್ರುತಿಃ ।
ಬ್ರಹ್ಮದಂಡಹತಃ ಪಾಪೋ ಯದ್ವೇನೋತ್ಯತರತ್ತಮಃ ॥
ಅನುವಾದ
ಎಲೈ ಪುಣ್ಯಾತ್ಮನೇ! ಪುತ್ರರ ಮೂಲಕ ತಂದೆಯು ಪುಣ್ಯಲೋಕವನ್ನು ಪಡೆಯುತ್ತಾನೆ ಎಂಬ ಶ್ರುತಿವಾಕ್ಯವು ಸಾರ್ಥಕವಾಯಿತು. ಏಕೆಂದರೆ ಪಾಪಿ ಯಾದ ವೇನನು ಬ್ರಾಹ್ಮಣರ ಶಾಪದಿಂದ ದಗ್ಧನಾಗಿದ್ದರೂ ಸತ್ಪುತ್ರನಾದ ಈ ಪೃಥುವಿನ ಪುಣ್ಯಬಲದಿಂದ ನರಕವನ್ನು ದಾಟಿಬಿಟ್ಟನು. ॥46॥
(ಶ್ಲೋಕ - 47)
ಮೂಲಮ್
ಹಿರಣ್ಯಕಶಿಪುಶ್ಚಾಪಿ ಭಗವನ್ನಿಂದಯಾ ತಮಃ ।
ವಿವಿಕ್ಷುರತ್ಯಗಾತ್ಸೂನೋಃ ಪ್ರಹ್ಲಾದಸ್ಯಾನುಭಾವತಃ ॥
ಅನುವಾದ
ಹೀಗೆಯೇ ಹಿರಣ್ಯಕಶಿಪುವೂ ಭಗವನ್ನಿಂದೆಯಿಂದ ನರಕದಲ್ಲಿ ಬೀಳುವವನಿದ್ದರೂ ತನ್ನ ಸುಪುತ್ರನಾದ ಪ್ರಹ್ಲಾದನ ಮಹಿಮೆಯಿಂದ ಉದ್ಧಾರವಾಗಿ ಹೋದನು. ॥47॥
(ಶ್ಲೋಕ - 48)
ಮೂಲಮ್
ವೀರವರ್ಯ ಪಿತಃ ಪೃಥ್ವ್ಯಾಃ ಸಮಾಃ ಸಂಜೀವ ಶಾಶ್ವತೀಃ ।
ಯಸ್ಯೇದೃಶ್ಯಚ್ಯುತೇ ಭಕ್ತಿಃ ಸರ್ವಲೋಕೈಕಭರ್ತರಿ ॥
ಅನುವಾದ
ಎಲೈ ವೀರವರನಾದ ಪೃಥುಸಾರ್ವ ಭೌಮನೇ! ನೀನು ಪೃಥಿವಿಗೆಲ್ಲ ತಂದೆಯಾಗಿರುವುದಲ್ಲದೆ ಸಮಸ್ತ ಲೋಕಗಳಿಗೂ ಏಕೈಕಸ್ವಾಮಿಯಾಗಿರುವ ಶ್ರೀಹರಿಯಲ್ಲಿ ನಿಶ್ಚಲವಾದ ಭಕ್ತಿಯಿಂದ ಸಂಪನ್ನನೂ ಆಗಿರುವೆ. ಅಂತಹ ನೀನು ಅನಂತವರ್ಷಗಳ ಕಾಲ ಸುಖವಾಗಿ ಬಾಳು. ॥48॥
(ಶ್ಲೋಕ - 49)
ಮೂಲಮ್
ಅಹೋ ವಯಂ ಹ್ಯದ್ಯ ಪವಿತ್ರಕೀರ್ತೇ
ತ್ವಯೈವ ನಾಥೇನ ಮುಕುಂದನಾಥಾಃ ।
ಯ ಉತ್ತಮಶ್ಲೋಕತಮಸ್ಯ ವಿಷ್ಣೋ-
ರ್ಬ್ರಹ್ಮಣ್ಯದೇವಸ್ಯ ಕಥಾಂ ವ್ಯನಕ್ತಿ ॥
ಅನುವಾದ
ನಿನ್ನ ಸತ್ಕೀರ್ತಿಯು ಅತ್ಯಂತ ಪವಿತ್ರವಾದುದು. ನೀನು ಉದಾರಕೀರ್ತಿಯುಳ್ಳ ಬ್ರಹ್ಮಣ್ಯದೇವನಾದ ಶ್ರೀಹರಿಯ ಕಥೆಗಳನ್ನು ಪ್ರಚಾರಗೊಳಿಸುತ್ತಿರುವೆ. ಇದು ನಮ್ಮ ಸೌಭಾಗ್ಯವೇ ಆಗಿದೆ. ಇಂತಹ ನಿನ್ನನ್ನು ರಾಜನನ್ನಾಗಿ ಪಡೆದ ನಾವುಗಳು ನಮ್ಮನ್ನು ಭಗವಂತನ ರಾಜ್ಯದಲ್ಲಿಯೇ ಇರುವವರನ್ನಾಗಿ ತಿಳಿಯುತ್ತಿದ್ದೇವೆ. ॥49॥
(ಶ್ಲೋಕ - 50)
ಮೂಲಮ್
ನಾತ್ಯದ್ಭುತಮಿದಂ ನಾಥ ತವಾಜೀವ್ಯಾನುಶಾಸನಮ್ ।
ಪ್ರಜಾನುರಾಗೋ ಮಹತಾಂ ಪ್ರಕೃತಿಃ ಕರುಣಾತ್ಮನಾಮ್ ॥
ಅನುವಾದ
ಪ್ರಭುವೇ! ನೀನು ಆಶ್ರಿತ ಜನರಿಗೆ ಹೀಗೆ ಶ್ರೇಷ್ಠವಾದ ಉಪದೇಶ ನೀಡುತ್ತಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಏಕೆಂದರೆ, ತನ್ನ ಪ್ರಜೆಗಳಲ್ಲಿ ಅನುರಾಗವನ್ನು ಹೊಂದುವುದು ಕರುಣಾಳುಗಳಾದ ಮಹಾತ್ಮರ ಸ್ವಭಾವವೇ ಆಗಿದೆ. ॥50॥
(ಶ್ಲೋಕ - 51)
ಮೂಲಮ್
ಅದ್ಯ ನಸ್ತಮಸಃ ಪಾರಸ್ತ್ವಯೋಪಾಸಾದಿತಃ ಪ್ರಭೋ ।
ಭ್ರಾಮ್ಯತಾಂ ನಷ್ಟದೃಷ್ಟೀನಾಂ ಕರ್ಮಭಿರ್ದೈವಸಂಜ್ಞಿತೈಃ ॥
ಅನುವಾದ
ದುರದೃಷ್ಟವಶದಿಂದ ವಿವೇಕಹೀನರಾಗಿ ಸಂಸಾರವೆಂಬ ಅರಣ್ಯದಲ್ಲಿ ಅಲೆದಾಡುತ್ತಿದ್ದ ನಮ್ಮನ್ನು ನೀನು ಇಂದು ಅಜ್ಞಾನಾಂಧಕಾರದಿಂದ ದಾಟಿಸಿಬಿಟ್ಟಿರುವೆ. ॥51॥
(ಶ್ಲೋಕ - 52)
ಮೂಲಮ್
ನಮೋ ವಿವೃದ್ಧಸತ್ತ್ವಾಯ ಪುರುಷಾಯ ಮಹೀಯಸೇ ।
ಯೋ ಬ್ರಹ್ಮ ಕ್ಷತ್ರಮಾವಿಶ್ಯ ಬಿಭರ್ತೀದಂ ಸ್ವತೇಜಸಾ ॥
ಅನುವಾದ
ನೀನು ಶುದ್ಧಸತ್ತ್ವಮಯ ಪರಮಪುರುಷನಾಗಿರುವೆ.ಬ್ರಾಹ್ಮಣ ಜಾತಿ ಮತ್ತು ಕ್ಷತ್ರಿಯಜಾತಿಗಳೆರಡನ್ನೂ ಒಳಹೊಕ್ಕು ಬ್ರಾಹ್ಮಣರ ಮತ್ತು ಈ ಎರಡೂ ಜಾತಿಗಳಲ್ಲಿಯೂ ಪ್ರವಿಷ್ಟನಾಗಿ ಇಡೀ ಜಗತ್ತನ್ನು ತನ್ನ ತೇಜಸ್ಸಿ ನಿಂದ ಸಂರಕ್ಷಿಸುತ್ತಿರುವ ಪರಮಪುರುಷನಾದ ನಿನಗೆ ನಮಸ್ಕಾರವು. ॥52॥
ಅನುವಾದ (ಸಮಾಪ್ತಿಃ)
ಇಪ್ಪತ್ತೊಂದನೆಯ ಅಧ್ಯಾಯವು ಮುಗಿಯಿತು. ॥21॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಚತುರ್ಥಸ್ಕಂಧೇ ಏಕವಿಂಶೋಽಧ್ಯಾಯಃ ॥21॥