[ಇಪ್ಪತ್ತನೆಯ ಅಧ್ಯಾಯ]
ಭಾಗಸೂಚನಾ
ಪೃಥು ಚಕ್ರವರ್ತಿಯ ಯಜ್ಞಶಾಲೆಯಲ್ಲಿ ಶ್ರೀಭಗವಂತನು ಆವಿರ್ಭವಿಸಿ ಆತನನ್ನು ಅನುಗ್ರಹಿಸಿದುದು
(ಶ್ಲೋಕ - 1)
ಮೂಲಮ್ (ವಾಚನಮ್)
ಮೈತ್ರೇಯ ಉವಾಚ
ಮೂಲಮ್
ಭಗವಾನಪಿ ವೈಕುಂಠಃ ಸಾಕಂ ಮಘವತಾ ವಿಭುಃ ।
ಯಜ್ಞೈರ್ಯಜ್ಞಪತಿಸ್ತುಷ್ಟೋ ಯಜ್ಞ ಭುಕ್ತಮಭಾಷತ ॥
ಅನುವಾದ
ಶ್ರೀಮೈತ್ರೇಯರು ಹೇಳುತ್ತಾರೆ — ಎಲೈ ವಿದುರನೇ! ಯಜ್ಞಪತಿಯೂ, ಯಜ್ಞಭೋಕ್ತೃವೂ ಆದ ಭಗವಾನ್ ಶ್ರೀವಿಷ್ಣುವು ಪೃಥುಮಹಾರಾಜನ ಯಜ್ಞಗಳಿಂದ ಸಂತುಷ್ಟ ನಾಗಿ ಇಂದ್ರನೊಡನೆ ಅಲ್ಲಿಗೆ ದಯಮಾಡಿಸಿ ರಾಜನಲ್ಲಿ ಹೀಗೆಂದನು. ॥1॥
(ಶ್ಲೋಕ - 2)
ಮೂಲಮ್ (ವಾಚನಮ್)
ಶ್ರೀಭಗವಾನುವಾಚ
ಮೂಲಮ್
ಏಷ ತೇಕಾರಷೀದ್ಭಂಗಂ ಹಯಮೇಧಶತಸ್ಯ ಹ ।
ಕ್ಷಮಾಪಯತ ಆತ್ಮಾನಮಮುಷ್ಯ ಕ್ಷಂತುಮರ್ಹಸಿ ॥
ಅನುವಾದ
ಶ್ರೀಭಗವಂತನು ಹೇಳಿದನು — ಎಲೈ ರಾಜೇಂದ್ರನೇ! ನೂರು ಅಶ್ವಮೇಧಯಜ್ಞಗಳನ್ನು ಪೂರ್ಣಗೊಳಿಸಬೇಕೆಂಬ ನಿನ್ನ ಸಂಕಲ್ಪಕ್ಕೆ ಈ ಇಂದ್ರನು ವಿಘ್ನವನ್ನುಂಟುಮಾಡಿದ್ದಕ್ಕಾಗಿ ನಿನ್ನಲ್ಲಿ ಕ್ಷಮೆಯಾಚಿಸುತ್ತಿದ್ದಾನೆ. ನೀನು ಈತನನ್ನು ಕ್ಷಮಿಸು. ॥2॥
(ಶ್ಲೋಕ - 3)
ಮೂಲಮ್
ಸುಧಿಯಃ ಸಾಧವೋ ಲೋಕೇ ನರದೇವ ನರೋತ್ತಮಾಃ ।
ನಾಭಿದ್ರುಹ್ಯಂತಿ ಭೂತೇಭ್ಯೋ ಯರ್ಹಿ ನಾತ್ಮಾ ಕಲೇವರಮ್ ॥
ಅನುವಾದ
ಜ್ಞಾನಿಗಳೂ, ಸಾಧುಗಳೂ ಆದ ನರಶ್ರೇಷ್ಠರು ಯಾವ ಜೀವಿಗಳಿಗೂ ದ್ರೋಹವನ್ನೆಸಗುವುದಿಲ್ಲ. ಏಕೆಂದರೆ ‘ಈ ಶರೀರವು ಆತ್ಮನಲ್ಲ’ ಎಂಬುದು ಅವರಿಗೆ ತಿಳಿದಿರುತ್ತದೆ. ॥3॥
(ಶ್ಲೋಕ - 4)
ಮೂಲಮ್
ಪುರುಷಾ ಯದಿ ಮುಹ್ಯಂತಿ ತ್ವಾದೃಶಾ ದೇವಮಾಯಯಾ ।
ಶ್ರಮ ಏವ ಪರಂ ಜಾತೋ ದೀರ್ಘಯಾ ವೃದ್ಧಸೇವಯಾ ॥
ಅನುವಾದ
ನಿನ್ನಂತಹ ನರಶ್ರೇಷ್ಠರು ನನ್ನ ಮಾಯೆಗೆ ಮರುಳಾಗಬಾರದು. ಹಾಗೆ ಮರುಳಾದರೆ ಬಹುದಿನಗಳವರೆಗೂ ಮಾಡಿದ ಜ್ಞಾನೀಜನರ ಸೇವೆಯು ಕೇವಲ ಶ್ರಮವೆಂದೇ ತಿಳಿಯಲಾಗುತ್ತದೆ. ॥4॥
(ಶ್ಲೋಕ - 5)
ಮೂಲಮ್
ಅತಃ ಕಾಯಮಿಮಂ ವಿದ್ವಾನವಿದ್ಯಾಕಾಮಕರ್ಮಭಿಃ ।
ಆರಬ್ಧ ಇತಿ ನೈವಾಸ್ಮಿನ್ ಪ್ರತಿಬುದ್ಧೋನುಷಜ್ಜತೇ ॥
ಅನುವಾದ
ಜ್ಞಾನದಿಂದ ಎಚ್ಚರಗೊಂಡವನು ಈ ಶರೀರವನ್ನು ಅವಿದ್ಯೆ, ವಾಸನೆ ಮತ್ತು ಕರ್ಮಗಳಿಂದ ನಿರ್ಮಿತವಾಗಿರುವ ಬೊಂಬೆಯೆಂದು ತಿಳಿದಿರುತ್ತಾನೆ. ಆದ್ದರಿಂದ ಆತನು ಇದರಲ್ಲಿ ಆಸಕ್ತನಾಗುವುದಿಲ್ಲ. ॥5॥
(ಶ್ಲೋಕ - 6)
ಮೂಲಮ್
ಅಸಂಸಕ್ತಃ ಶರೀರೇಸ್ಮಿನ್ನಮುನೋತ್ಪಾದಿತೇ ಗೃಹೇ ।
ಅಪತ್ಯೇ ದ್ರವಿಣೇ ವಾಪಿ ಕಃ ಕುರ್ಯಾನ್ಮಮತಾಂ ಬುಧಃ ॥
ಅನುವಾದ
ಹೀಗೆ ಶರೀರದಲ್ಲಿಯೇ ಅನಾಸಕ್ತನಾಗಿರುವುದರಿಂದ ಆ ವಿವೇಕಿಯು ಈ ಶರೀರ ಸಂಬಂಧದಿಂದ ಉಂಟಾದ ಮನೆ, ಮಡದಿ, ಮಕ್ಕಳು ಮತ್ತು ಹಣ ಮುಂತಾದವುಗಳಲ್ಲಿ ಹೇಗೆ ತಾನೇ ಮಮತೆಯಿಂದ ಇರಬಲ್ಲನು? ॥6॥
(ಶ್ಲೋಕ - 7)
ಮೂಲಮ್
ಏಕಃ ಶುದ್ಧಃ ಸ್ವಯಂಜ್ಯೋತಿರ್ನಿರ್ಗುಣೋಸೌ ಗುಣಾಶ್ರಯಃ ।
ಸರ್ವಗೋನಾವೃತಃ ಸಾಕ್ಷೀ ನಿರಾತ್ಮಾತ್ಮಾತ್ಮನಃ ಪರಃ ॥
ಅನುವಾದ
ಈ ಆತ್ಮನು ಶರೀರದಿಂದ ಭಿನ್ನನಾದವನು. ಏಕೆಂದರೆ, ಈತನು ಕೇವಲನೂ, ಶುದ್ಧನೂ, ಸ್ವಯಂಪ್ರಕಾಶವುಳ್ಳವನೂ, ತ್ರಿಗುಣರಹಿತನಾಗಿ ತ್ರಿಗುಣಗಳಿಗೆ ಆಶ್ರಯಸ್ಥಾನನೂ, ಸರ್ವ ವ್ಯಾಪಕನೂ, ಆವರಣಶೂನ್ಯನೂ ಎಲ್ಲಕ್ಕೂ ಸಾಕ್ಷಿಯೂ ಹಾಗೂ ಬೇರೊಂದು ಆತ್ಮವಿಲ್ಲದವನೂ ಆಗಿರುತ್ತಾನೆ. ॥7॥
(ಶ್ಲೋಕ - 8)
ಮೂಲಮ್
ಯ ಏವಂ ಸಂತಮಾತ್ಮಾನಮಾತ್ಮಸ್ಥಂ ವೇದ ಪೂರುಷಃ ।
ನಾಜ್ಯತೇ ಪ್ರಕೃತಿಸ್ಥೋಪಿ ತದ್ಗುಣೈಃ ಸ ಮಯಿ ಸ್ಥಿತಃ ॥
ಅನುವಾದ
ಈ ದೇಹದಲ್ಲಿರುವ ಆತ್ಮನು ಹೀಗೆ ಶರೀರವಲ್ಲ; ಶರೀರದಿಂದ ಭಿನ್ನನಾದವನು ಎಂದು ತಿಳಿದಿರುವ ಜ್ಞಾನೀ ಮನುಷ್ಯನು ಪ್ರಕೃತಿಯಲ್ಲೇ ಇದ್ದರೂ ಅದರ ಗುಣಗಳಿಂದ ಲಿಪ್ತನಾಗುವುದಿಲ್ಲ. ಏಕೆಂದರೆ, ಅವನ ಸ್ಥಿತಿ ಪರಮಾತ್ಮನಾದ ನನ್ನಲ್ಲೇ ಇರುತ್ತದೆ. ॥8॥
(ಶ್ಲೋಕ - 9)
ಮೂಲಮ್
ಯಃ ಸ್ವಧರ್ಮೇಣ ಮಾಂ ನಿತ್ಯಂ ನಿರಾಶೀಃ ಶ್ರದ್ಧಯಾನ್ವಿತಃ ।
ಭಜತೇ ಶನಕೈಸ್ತಸ್ಯ ಮನೋ ರಾಜನ್ಪ್ರಸೀದತಿ ॥
ಅನುವಾದ
ಎಲೈ ರಾಜೇಂದ್ರನೇ! ಯಾವ ರೀತಿಯ ಕಾಮನೆಯನ್ನು ಇರಿಸಿಕೊಳ್ಳದೆ ತನ್ನ ವರ್ಣಾಶ್ರಮದ ಧರ್ಮಗಳ ಮೂಲಕ ಪ್ರತಿದಿನವೂ ಶ್ರದ್ಧೆಯಿಂದ ನನ್ನನ್ನು ಆರಾಧಿಸುವವನ ಚಿತ್ತವು ನಿಧಾನವಾಗಿ ಶುದ್ಧವಾಗಿಬಿಡುವುದು. ॥9॥
(ಶ್ಲೋಕ - 10)
ಮೂಲಮ್
ಪರಿತ್ಯಕ್ತಗುಣಃ ಸಮ್ಯಗ್ದರ್ಶನೋ ವಿಶದಾಶಯಃ ।
ಶಾಂತಿಂ ಮೇ ಸಮವಸ್ಥಾನಂ ಬ್ರಹ್ಮ ಕೈವಲ್ಯಮಶ್ನುತೇ ॥
ಅನುವಾದ
ಚಿತ್ತವು ಶುದ್ಧವಾದ ಮೇಲೆ ಅವನಿಗೆ ವಿಷಯಗಳೊಂದಿಗೆ ಸಂಬಂಧ ಉಳಿಯುವುದಿಲ್ಲ ಮತ್ತು ಅವನಿಗೆ ತತ್ತ್ವಜ್ಞಾನ ಉಂಟಾಗುತ್ತದೆ. ಮತ್ತೆ ಅವನು ನನ್ನ ಸಮತಾರೂಪವಾದ ಸ್ಥಿತಿಯನ್ನು ಪಡೆದುಕೊಳ್ಳುವನು. ಇದೇ ಪರಮಶಾಂತಿಯು, ಬ್ರಹ್ಮವು ಅಥವಾ ಕೈವಲ್ಯವೆನಿಸುವುದು. ॥10॥
(ಶ್ಲೋಕ - 11)
ಮೂಲಮ್
ಉದಾಸೀನಮಿವಾಧ್ಯಕ್ಷಂ ದ್ರವ್ಯಜ್ಞಾನಕ್ರಿಯಾತ್ಮನಾಮ್ ।
ಕೂಟಸ್ಥಮಿಮಮಾತ್ಮಾನಂ ಯೋ ವೇದಾಪ್ನೋತಿ ಶೋಭನಮ್ ॥
ಅನುವಾದ
ಈ ಶರೀರ, ಜ್ಞಾನ, ಕ್ರಿಯೆ ಮತ್ತು ಮನಸ್ಸಿನ ಸಾಕ್ಷಿಯಾಗ್ದಿದರೂ ಈ ಕೂಟಸ್ಥ ಆತ್ಮನು ಇವುಗಳಿಂದ ನಿರ್ಲಿಪ್ತನೇ ಆಗಿರುತ್ತಾನೆ. ಹೀಗೆ ತಿಳಿದುಕೊಂಡು ಮನುಷ್ಯನು ಪರಮ ಮಂಗಳಮಯ ಮೋಕ್ಷಪದವನ್ನು ಪಡೆದುಕೊಳ್ಳುವನು. ॥11॥
(ಶ್ಲೋಕ - 12)
ಮೂಲಮ್
ಭಿನ್ನಸ್ಯ ಲಿಂಗಸ್ಯ ಗುಣಪ್ರವಾಹೋ
ದ್ರವ್ಯಕ್ರಿಯಾಕಾರಕಚೇತನಾತ್ಮನಃ ।
ದೃಷ್ಟಾಸು ಸಂಪತ್ಸು ವಿಪತ್ಸು ಸೂರಯೋ
ನ ವಿಕ್ರಿಯಂತೇ ಮಯಿ ಬದ್ಧಸೌಹೃದಾಃ ॥
ಅನುವಾದ
ರಾಜನೇ! ಗುಣಪ್ರವಾಹರೂಪವಾದ ಆವಾಗಮನ ವಾದರೋ ಪಂಚಭೂತಗಳು, ಇಂದ್ರಿಯಗಳು, ಇಂದ್ರಿಯಾಭಿಮಾನಿ ದೇವತೆಗಳು ಮತ್ತು ಚಿದಾಭಾಸ ಇವೆಲ್ಲವುಗಳ ಸಮಷ್ಟಿರೂಪವಾದ ಪರಿಚ್ಛಿನ್ನ ಲಿಂಗಶರೀರಕ್ಕೆ ಆಗುವುದಲ್ಲದೆ, ಇದರ ಸಾಕ್ಷಿಯಾದ ಆತ್ಮನಿಗೆ ಯಾವ ಸಂಬಂಧವೂ ಇಲ್ಲ. ನನ್ನಲ್ಲೇ ದೃಢವಾದ ಅನುರಾಗವುಳ್ಳ ಬುದ್ಧಿವಂತನಾದ ಮನುಷ್ಯನು ಸಂಪತ್ತು-ವಿಪತ್ತುಗಳು ಪ್ರಾಪ್ತವಾದರೂ ಎಂದಿಗೂ ಹರ್ಷ-ಶೋಕ ಮುಂತಾದ ವಿಕಾರಗಳಿಗೆ ಒಳಗಾಗುವುದಿಲ್ಲ. ॥12॥
(ಶ್ಲೋಕ - 13)
ಮೂಲಮ್
ಸಮಃ ಸಮಾನೋತ್ತಮಮಧ್ಯಮಾಧಮಃ
ಸುಖೇ ಚ ದುಃಖೇ ಚ ಜಿತೇಂದ್ರಿಯಾಶಯಃ ।
ಮಯೋಪಕ್ಲೃಪ್ತಾಖಿಲಲೋಕಸಂಯುತೋ
ವಿಧತ್ಸ್ವ ವೀರಾಖಿಲಲೋಕರಕ್ಷಣಮ್ ॥
ಅನುವಾದ
ಆದುದರಿಂದ ಎಲೈ ವೀರವರನೇ! ನೀನು ಉತ್ತಮ, ಮಧ್ಯಮ, ಅಧಮರೆಂಬ ಎಲ್ಲ ಪುರುಷರಲ್ಲಿಯೂ ಸಮಾನಭಾವವನ್ನು ಇಟ್ಟುಕೊಂಡು, ಸುಖ-ದುಃಖಗಳನ್ನು ಸಮಾನವಾಗಿ ತಿಳಿಯಬೇಕು. ಮನಸ್ಸು, ಇಂದ್ರಿಯಗಳನ್ನು ಗೆದ್ದು, ನಾನು ಒದಗಿಸಿಕೊಟ್ಟಿರುವ ಮಂತ್ರಿಗಳೇ ಮುಂತಾದ ಪರಿವಾರದ ಸಹಾಯದಿಂದ ಸಮಸ್ತ ಲೋಕಗಳನ್ನು ರಕ್ಷಿಸುತ್ತಿರು. ॥13॥
(ಶ್ಲೋಕ - 14)
ಮೂಲಮ್
ಶ್ರೇಯಃ ಪ್ರಜಾಪಾಲನಮೇವ ರಾಜ್ಞೋ
ಯತ್ಸಾಂಪರಾಯೇ ಸುಕೃತಾತ್ ಷಷ್ಠಮಂಶಮ್ ।
ಹರ್ತಾನ್ಯಥಾ ಹೃತಪುಣ್ಯಃ ಪ್ರಜಾನಾ-
ಮರಕ್ಷಿತಾ ಕರಹಾರೋಘಮತ್ತಿ ॥
ಅನುವಾದ
ಪ್ರಜೆಗಳ ರಕ್ಷಣೆಯಲ್ಲೇ ರಾಜನಿಗೆ ಕಲ್ಯಾಣವುಂಟಾಗುವುದು. ಹೀಗೆ ಅವರನ್ನು ರಕ್ಷಿಸಿದರೆ ಆತನಿಗೆ ಪರಲೋಕದಲ್ಲಿ ಪ್ರಜೆಗಳ ಪುಣ್ಯದಲ್ಲಿ ಆರನೆಯ ಒಂದು ಭಾಗವು ಸಿಗುತ್ತದೆ. ಇದಕ್ಕೆ ವಿಪರೀತವಾಗಿ ಪ್ರಜೆಗಳನ್ನು ರಕ್ಷಿಸದೆ ಅವರಿಂದ ಕಂದಾಯವನ್ನು ಮಾತ್ರ ತೆಗೆದುಕೊಳ್ಳುವಂತಹ ರಾಜನ ಇಡೀ ಪುಣ್ಯವನ್ನು ಪ್ರಜೆಗಳು ಕಿತ್ತುಕೊಳ್ಳುವರು. ಇಷ್ಟೇ ಅಲ್ಲ, ಪ್ರಜೆಗಳ ಪಾಪಕ್ಕೂ ಭಾಗಿಯಾಗಬೇಕಾಗುತ್ತದೆ. ॥14॥
(ಶ್ಲೋಕ - 15)
ಮೂಲಮ್
ಏವಂ ದ್ವಿಜಾಗ್ರ್ಯಾನುಮತಾನುವೃತ್ತ-
ಧರ್ಮಪ್ರಧಾನೋನ್ಯ ತಮೋವಿತಾಸ್ಯಾಃ ।
ಹ್ರಸ್ವೇನ ಕಾಲೇನ ಗೃಹೋಪಯಾತಾನ್
ದ್ರಷ್ಟಾಸಿ ಸಿದ್ಧಾನನುರಕ್ತಲೋಕಃ ॥
ಅನುವಾದ
ಇದನ್ನರಿತು ನೀನು ಶ್ರೇಷ್ಠರಾದ ಬ್ರಾಹ್ಮಣರ ಸಮ್ಮತಿಪಡೆದು, ಪರಂಪರೆಯಿಂದ ಪ್ರಾಪ್ತವಾದ ಧರ್ಮವನ್ನೇ ಪ್ರಧಾನವಾಗಿಟ್ಟು ಕೊಂಡು ಎಲ್ಲದರಲ್ಲೂ ಅನಾಸಕ್ತನಾಗಿ ಈ ಪೃಥಿವಿಯನ್ನು ನ್ಯಾಯವಾಗಿ ಆಳುತ್ತಿದ್ದರೆ ಪ್ರಜೆಗಳು ನಿನ್ನನ್ನು ಪ್ರೀತಿಸುವರು. ಮತ್ತೆ ಕೆಲವೇ ದಿನಗಳಲ್ಲಿ ಸನಕಾದಿ ಸಿದ್ಧರು ನಿನ್ನ ಮನೆಗೇ ಬಂದು ದರ್ಶನ ಕೊಡುವರು. ॥15॥
(ಶ್ಲೋಕ - 16)
ಮೂಲಮ್
ವರಂ ಚ ಮತ್ ಕಂಚನ ಮಾನವೇಂದ್ರ
ವೃಣೀಷ್ವ ತೇಹಂ ಗುಣಶೀಲಯಂತ್ರಿತಃ ।
ನಾಹಂ ಮಖೈರ್ವೈ ಸುಲಭಸ್ತಪೋಭಿ-
ರ್ಯೋಗೇನ ವಾ ಯತ್ಸಮಚಿತ್ತವರ್ತೀ ॥
ಅನುವಾದ
ರಾಜೇಂದ್ರನೇ! ನಾನು ನಿನ್ನ ಗುಣ-ಶೀಲಗಳಿಗೆ ವಶನಾಗಿಬಿಟ್ಟಿದ್ದೇನೆ. ಆದುದರಿಂದ ನಿನಗೆ ಇಷ್ಟವಾದ ವರವನ್ನು ಬೇಡಿಕೋ. ನಾನು ಯಜ್ಞಗಳಿಂದಾಗಲೀ, ತಪಸ್ಸಿನಿಂದಾಗಲೀ, ಯೋಗದಿಂದಾಗಲೀ ಸುಲಭಾಗಿ ದೊರೆಯುವವನಲ್ಲ. ಯಾರಲ್ಲಿ ಸಮಭಾವವಿರುವುದೋ ಅಂತಹವರ ಚಿತ್ತದಲ್ಲಿ ಮಾತ್ರ ಇರುವವನು. ॥16॥
(ಶ್ಲೋಕ - 17)
ಮೂಲಮ್ (ವಾಚನಮ್)
ಮೈತ್ರೇಯ ಉವಾಚ
ಮೂಲಮ್
ಸ ಇತ್ಥಂ ಲೋಕಗುರುಣಾ ವಿಷ್ವಕ್ಸೇನೇನ ವಿಶ್ವಜಿತ್ ।
ಅನುಶಾಸಿತ ಆದೇಶಂ ಶಿರಸಾ ಜಗೃಹೇ ಹರೇಃ ॥
ಅನುವಾದ
ಶ್ರೀಮೈತ್ರೇಯರು ಹೇಳುತ್ತಾರೆ — ಎಲೈ ವಿದುರನೇ! ಸರ್ವ ಲೋಕಗುರುವಾದ ವಿಶ್ವಕ್ಸೇನನು ಹೀಗೆ ಆದೇಶ ನೀಡಲು ಸರ್ವಲೋಕ ವಿಜಯಿಯಾದ ಆ ರಾಜೇಂದ್ರನು ಅದನ್ನು ಶಿರಸಾ ವಹಿಸಿದನು. ॥17॥
(ಶ್ಲೋಕ - 18)
ಮೂಲಮ್
ಸ್ಪೃಶಂತಂ ಪಾದಯೋಃ ಪ್ರೇಮ್ಣಾ ವ್ರೀಡಿತಂ ಸ್ವೇನ ಕರ್ಮಣಾ ।
ಶತಕ್ರತುಂ ಪರಿಷ್ವಜ್ಯ ವಿದ್ವೇಷಂ ವಿಸಸರ್ಜ ಹ ॥
ಅನುವಾದ
ಆಗ ದೇವರಾಜ ಇಂದ್ರನು ತನ್ನ ದುಷ್ಕಾರ್ಯಕ್ಕಾಗಿ ತಾನೇ ನಾಚಿಕೆಪಟ್ಟು ಪೃಥುವಿನ ಪಾದಗಳಿಗೆ ಬೀಳುವಷ್ಟರಲ್ಲಿ ರಾಜನು ಆತನನ್ನು ಪ್ರೇಮದಿಂದ ಆಲಿಂಗಿಸಿಕೊಂಡು ಮನೋಮಾಲಿನ್ಯವನ್ನು ದೂರಮಾಡಿದನು. ॥18॥
(ಶ್ಲೋಕ - 19)
ಮೂಲಮ್
ಭಗವಾನಥ ವಿಶ್ವಾತ್ಮಾ ಪೃಥುನೋಪಹೃತಾರ್ಹಣಃ ।
ಸಮುಜ್ಜಿಹಾನಯಾ ಭಕ್ತ್ಯಾ ಗೃಹೀತಚರಣಾಂಬುಜಃ ॥
ಅನುವಾದ
ಮತ್ತೆ ಪೃಥು ಮಹಾರಾಜನು ವಿಶ್ವಾತ್ಮನಾದ ಭಕ್ತವತ್ಸಲ ಭಗವಂತನನ್ನು ಪೂಜಿಸಿ, ಅಡಿಗಡಿಗೆ ಉಕ್ಕಿಬರುತ್ತಿದ್ದ ಭಕ್ತಿ ಯಿಂದ ಆತನ ಅಡಿದಾವರೆಗಳನ್ನು ಹಿಡಿದುಕೊಂಡನು.॥19॥
(ಶ್ಲೋಕ - 20)
ಮೂಲಮ್
ಪ್ರಸ್ಥಾನಾಭಿಮುಖೋಪ್ಯೇನಮನುಗ್ರಹವಿಲಂಬಿತಃ ।
ಪಶ್ಯನ್ಪದ್ಮಪಲಾಶಾಕ್ಷೋ ನ ಪ್ರತಸ್ಥೇ ಸುಹೃತ್ಸತಾಮ್ ॥
ಅನುವಾದ
ಶ್ರೀಹರಿಯು ಅಲ್ಲಿಂದ ಹೊರಡಬೇಕೆಂದು ಬಯಸುತ್ತಿದ್ದರೂ ಪೃಥುವಿನ ಕುರಿತು ಇದ್ದ ವಾತ್ಸಲ್ಯಭಾವವು ಅವನನ್ನು ತಡೆಯಿತು. ಅವನು ತನ್ನ ಕಮಲದಂತಿರುವ ಕಣ್ಣುಗಳಿಂದ ರಾಜನ ಕಡೆಗೆ ನೋಡುತ್ತಲೇ ಇದ್ದನು. ಅಲ್ಲಿಂದ ಹೊರಡಲೇ ಇಲ್ಲ. ॥20॥
(ಶ್ಲೋಕ - 21)
ಮೂಲಮ್
ಸ ಆದಿರಾಜೋ ರಚಿತಾಂಜಲಿರ್ಹರಿಂ
ವಿಲೋಕಿತುಂ ನಾಶಕದಶ್ರುಲೋಚನಃ ।
ನ ಕಿಂಚನೋವಾಚ ಸ ಬಾಷ್ಪವಿಕ್ಲವೋ
ಹೃದೋಪಗುಹ್ಯಾಮುಮಧಾದವಸ್ಥಿತಃ ॥
ಅನುವಾದ
ಆದಿರಾಜನಾದ ಪೃಥುಮಹಾರಾಜನೂ ಕೂಡ ಕಣ್ಣುಗಳಲ್ಲಿ ಕಂಬನಿಯು ತುಂಬಿದ್ದರಿಂದ ಶ್ರೀಭಗವಂತ ನನ್ನು ನೋಡುವುದಕ್ಕೂ ಸಮರ್ಥನಾಗಲಿಲ್ಲ. ಗಂಟಲು ಗದ್ಗದವಾಗಿದ್ದರಿಂದ ಏನನ್ನೂ ಆಡುವುದಕ್ಕೂ ಸಮರ್ಥನಾಗಲಿಲ್ಲ. ಆತನನ್ನು ಹೃದಯದಲ್ಲಿ ಆಲಿಂಗಿಸಿಕೊಂಡು, ಕೈಜೋಡಿಸಿಕೊಂಡು ಹಾಗೆಯೇ ನಿಂತು ಬಿಟ್ಟನು. ॥21॥
(ಶ್ಲೋಕ - 22)
ಮೂಲಮ್
ಅಥಾವಮೃಜ್ಯಾಶ್ರುಕಲಾ ವಿಲೋಕಯನ್
ಅತೃಪ್ತದೃಗ್ಗೋಚರಮಾಹ ಪೂರುಷಮ್ ।
ಪದಾ ಸ್ಪೃಶಂತಂ ಕ್ಷಿತಿಮಂಸ ಉನ್ನತೇ
ವಿನ್ಯಸ್ತಹಸ್ತಾಗ್ರಮುರಂಗವಿದ್ವಿಷಃ ॥
ಅನುವಾದ
ಪ್ರಭುವು ತನ್ನ ಚರಣಕಮಲಗಳಿಂದ ಪೃಥಿವಿಯನ್ನು ಸ್ಪರ್ಶಿಸುತ್ತಾ ನಿಂತಿದ್ದು, ಅವನ ಕೈತುದಿಯನ್ನು ಉನ್ನತವಾದ ಗರುಡನ ಹೆಗಲಮೇಲೆ ಇರಿಸಿಕೊಂಡಿದ್ದನು. ಮಹಾರಾಜಾ ಪೃಥುವು ಕಂಬನಿಯನ್ನು ಒರೆಸಿಕೊಂಡು ಅತೃಪ್ತನಯನಗಳಿಂದ ಅವನ ಕಡೆಗೆ ನೋಡುತ್ತಾ ಹೀಗೆ ವಿನಂತಿಸಿಕೊಂಡನು. ॥22॥
(ಶ್ಲೋಕ - 23)
ಮೂಲಮ್ (ವಾಚನಮ್)
ಪೃಥುರುವಾಚ
ಮೂಲಮ್
ವರಾನ್ ವಿಭೋ ತ್ವದ್ವರದೇಶ್ವರಾದ್ ಬುಧಃ
ಕಥಂ ವೃಣೀತೇ ಗುಣವಿಕ್ರಿಯಾತ್ಮನಾಮ್ ।
ಯೇ ನಾರಕಾಣಾಮಪಿ ಸಂತಿ ದೇಹಿನಾಂ
ತಾನೀಶ ಕೈವಲ್ಯಪತೇ ವೃಣೇ ನ ಚ ॥
ಅನುವಾದ
ಪೃಥುಮಹಾರಾಜನು ಹೇಳಿದನು — ಓ ಕೈವಲ್ಯಪತಿಯಾದ ಪ್ರಭುವೇ! ವರವನ್ನು ಕೊಡುವ ಬ್ರಹ್ಮಾದಿ ದೇವತೆಗಳಿಗೂ ವರವನ್ನು ಕೊಡುವುದರಲ್ಲಿ ಸಮರ್ಥನು ನೀನು. ದೇಹಾಭಿ ಮಾನಿಗಳು ಭೋಗಿಸಲು ಯೋಗ್ಯವಾದ ವಿಷಯಗಳನ್ನು ವಿವೇಕಿಗಳು ನಿನ್ನಿಂದ ಹೇಗೆ ತಾನೇ ಬೇಡಿಯಾರು? ಅವುಗಳಾದರೋ ನರಕಕ್ಕೆ ಯೋಗ್ಯರಾದ ಸಂಸಾರಿಗಳಿಗೂ ದೊರೆಯುವುವು. ಆದರೆ ನಾನು ಅವುಗಳನ್ನು ಬೇಡುವುದಿಲ್ಲ. ॥23॥
(ಶ್ಲೋಕ - 24)
ಮೂಲಮ್
ನ ಕಾಮಯೇ ನಾಥ ತದಪ್ಯಹಂ ಕ್ವಚಿನ್
ನ ಯತ್ರ ಯುಷ್ಮಚ್ಚರಣಾಂಬುಜಾಸವಃ ।
ಮಹತ್ತಮಾಂತರ್ಹೃದಯಾನ್ಮುಖಚ್ಯುತೋ
ವಿಧತ್ಸ್ವ ಕರ್ಣಾಯುತಮೇಷ ಮೇ ವರಃ ॥
ಅನುವಾದ
ಮಹಾಪುರುಷರ ಹೃದಯದಿಂದ ಅವರ ಬಾಯಿಯ ಮೂಲಕ ಹರಿದುಬರುವ ನಿನ್ನ ಚರಣಾರ ವಿಂದಗಳ ಮಕರಂದವು ಇಲ್ಲದಿರುವ, ನಿನ್ನ ಕೀರ್ತಿಕಥೆ ಗಳನ್ನು ಕೇಳುವ ಸುಖವು ಸಿಗದಿರುವ ಆ ಮೋಕ್ಷಪದವನ್ನು ನಾನು ಇಚ್ಛಿಸುವುದಿಲ್ಲ. ಆದುದರಿಂದ ನೀನು ನನಗೆ ಹತ್ತುಸಾವಿರ ಕಿವಿಗಳನ್ನು ಕೊಡು. ಅದರಿಂದ ನಾನು ನಿನ್ನ ದಿವ್ಯಲೀಲಾಕಥೆಗಳನ್ನು ಕೇಳುತ್ತಲೇ ಇರುವೆನು. ಇಷ್ಟೇ ನನ್ನ ಪ್ರಾರ್ಥನೆಯಾಗಿದೆ. ॥24॥
(ಶ್ಲೋಕ - 25)
ಮೂಲಮ್
ಸ ಉತ್ತಮಶ್ಲೋಕ ಮಹನ್ಮುಖಚ್ಯುತೋ
ಭವತ್ಪದಾಂಭೋಜಸುಧಾಕಣಾನಿಲಃ ।
ಸ್ಮೃತಿಂ ಪುನರ್ವಿಸ್ಮೃತತತ್ತ್ವವರ್ತ್ಮನಾಂ
ಕುಯೋಗಿನಾಂ ನೋ ವಿತರತ್ಯಲಂ ವರೈಃ ॥
ಅನುವಾದ
ಪುಣ್ಯಕೀರ್ತಿ ಯಾದ ಪ್ರಭುವೇ! ನಿಮ್ಮ ಅಡಿದಾವರೆಗಳ ರಸಾಮೃತದ ಕಣಗಳನ್ನು ಹೊತ್ತುತರುತ್ತಾ ಮಹಾತ್ಮರ ಮುಖಾರವಿಂದಗಳಿಂದ ಯಾವ ಗಾಳಿಯು ಹೊರಹೊಮ್ಮುವುದೋ ಅದಕ್ಕೆ ತತ್ತ್ವವನ್ನು ಮರೆತಿರುವ ನಮ್ಮಂತಹ ಕುಯೋಗಿಗಳಿಗೂ ಪುನಃ ತತ್ತ್ವದ ಅರಿವನ್ನುಂಟು ಮಾಡುವ ಅದ್ಭುತವಾದ ಶಕ್ತಿಯಿದೆ. ಆದುದರಿಂದ ಆ ಕಥಾಮೃತ ಶ್ರವಣವನ್ನು ಬಿಟ್ಟು ಬೇರಾವ ವರವೂ ಬೇಡ. ॥25॥
(ಶ್ಲೋಕ - 26)
ಮೂಲಮ್
ಯಶಃ ಶಿವಂ ಸುಶ್ರವ ಆರ್ಯಸಂಗಮೇ
ಯದೃಚ್ಛಯಾ ಚೋಪಶೃಣೋತಿ ತೇ ಸಕೃತ್ ।
ಕಥಂ ಗುಣಜ್ಞೋ ವಿರಮೇದ್ವಿನಾ ಪಶುಂ
ಶ್ರೀರ್ಯತ್ಪ್ರವವ್ರೇ ಗುಣಸಂಗ್ರಹೇಚ್ಛಯಾ ॥
ಅನುವಾದ
ಪುಣ್ಯ ಶ್ಲೋಕನಾದ ಪರಮಾತ್ಮನೇ! ಸತ್ಸಂಗದಲ್ಲಿ ನಿನ್ನ ಮಂಗಳಮಯವಾದ ಕೀರ್ತಿಯನ್ನು ಅಕಸ್ಮಾತ್ತಾಗಿ ಒಮ್ಮೆ ಕಿವಿಗೆ ಬಿದ್ದಾಗ ಅಷ್ಟರಲ್ಲೇ ತೃಪ್ತಿಯಾಯಿತು ಎನ್ನುವವನು ಪಶುವಲ್ಲದೆ ಮತ್ತೇನು? ಗುಣ ಗ್ರಾಹಿಗಳಾದ ಧನ್ಯಜೀವಿಗಳು ಅದನ್ನು ಸದಾ ಕೇಳುತ್ತಿರಬೇಕೆಂದು ಬಯಸುತ್ತಾರೆ. ಎಲ್ಲ ರೀತಿಯ ಪುರುಷಾರ್ಥಗಳ ಸಿದ್ಧಿಗಾಗಿ ಜಗನ್ಮಾತೆಯಾದ ಶ್ರೀಲಕ್ಷ್ಮೀದೇವಿಯೂ ನಿನ್ನ ದಿವ್ಯಕಥೆಗಳನ್ನು ನಿರಂತರವಾಗಿ ಶ್ರವಣಿಸಲು ಬಯಸುತ್ತಿರುವಳು. ॥26॥
(ಶ್ಲೋಕ - 27)
ಮೂಲಮ್
ಅಥಾಭಜೇ ತ್ವಾಖಿಲಪೂರುಷೋತ್ತಮಂ
ಗುಣಾಲಯಂ ಪದ್ಮಕರೇವ ಲಾಲಸಃ ।
ಅಪ್ಯಾವಯೋರೇಕಪತಿಸ್ಪೃಧೋಃ ಕಲಿ-
ರ್ನ ಸ್ಯಾತ್ಕೃತತ್ವಚ್ಚರಣೈಕತಾನಯೋಃ ॥
ಅನುವಾದ
ಆ ಲಕ್ಷ್ಮೀದೇವಿಯಂತೆ ನಾನೂ ಕೂಡ ಪುರು ಷೋತ್ತಮನೂ, ಕಲ್ಯಾಣಗುಣ ಪರಿಪೂರ್ಣನೂ ಆಗಿರುವ ನಿನ್ನ ಸೇವೆಯನ್ನು ಮಾಡಲು ಬಯಸುತ್ತೇನೆ. ಆದರೆ ನಿನ್ನ ಅಡಿದಾವರೆಗಳಲ್ಲೇ ಮನಸ್ಸನ್ನು ಏಕಾಗ್ರಗೊಳಿಸಿ ನಿನ್ನೊಬ್ಬನನ್ನೇ ಪತಿಯನ್ನಾಗಿ ಭಾವಿಸಿ ಸೇವೆಮಾಡುತ್ತಿರುವ ಜಗನ್ಮಾತೆ ಮಹಾಲಕ್ಷ್ಮಿಗೂ ನನಗೂ ಈ ನಿನ್ನ ಸೇವೆಯೆಂಬ ಸ್ಪರ್ಧೆಯಲ್ಲಿ ಕಲಹವುಂಟಾಗಬಾರದು ಅಷ್ಟೇ. ॥27॥
(ಶ್ಲೋಕ - 28)
ಮೂಲಮ್
ಜಗಜ್ಜನನ್ಯಾಂ ಜಗದೀಶ ವೈಶಸಂ
ಸ್ಯಾದೇವ ಯತ್ಕರ್ಮಣಿ ನಃ ಸಮೀಹಿತಮ್ ।
ಕರೋಷಿ ಲ್ಗ್ವಪ್ಯುರು ದೀನವತ್ಸಲಃ
ಸ್ವ ಏವ ಧಿಷ್ಣ್ಯೇಭಿರತಸ್ಯ ಕಿಂ ತಯಾ ॥
ಅನುವಾದ
ಓ ಜಗತ್ಪತಿಯೇ! ಆದರೆ ಆ ಜಗನ್ಮಾತೆ ಲಕ್ಷ್ಮಿಯ ಹೃದಯದಲ್ಲಿ ನನ್ನ ಕುರಿತು ವಿರೋಧವು ಉಂಟಾಗುವ ಸಂಭವವು ಇದ್ದೇ ಇದೆ. ಏಕೆಂದರೆ, ನಾವಿಬ್ಬರೂ ಒಂದೇ ಸೇವಾ ಕೈಂಕರ್ಯಕ್ಕೆ ಆಸೆಪಡು ತ್ತಿದ್ದೇವೆ. ಆದರೆ ನೀನು ದೀನವತ್ಸಲನು. ದೀನರಾದ ಭಕ್ತರು ಮಾಡುವ ಅತ್ಯಲ್ಪ ಸೇವೆಯನ್ನು ಬಲುದೊಡ್ಡದೆಂದು ಭಾವಿಸುವವನು. ಆದುದರಿಂದ ನಮ್ಮಿಬ್ಬರ ಜಗಳದಲ್ಲಿ ನೀನು ನನ್ನ ಪಕ್ಷವನ್ನೇ ವಹಿಸುವೆಯೆಂದು ಆಶಿಸುತ್ತೇನೆ. ಸ್ವಸ್ವರೂಪದಲ್ಲಿಯೇ ವಿಹರಿಸುತ್ತಿರುವ ನಿನಗೆ ಆಕೆಯಿಂದಾದರೂ ಆಗಬೇಕಾದುದೇನು? ॥28॥
(ಶ್ಲೋಕ - 29)
ಮೂಲಮ್
ಭಜಂತ್ಯಥತ್ವಾಮತ ಏವ ಸಾಧವೋ
ವ್ಯದಸ್ತಮಾಯಾಗುಣವಿಭ್ರಮೋದಯಮ್ ।
ಭವತ್ಪದಾನುಸ್ಮರಣಾದೃತೇ ಸತಾಂ
ನಿಮಿತ್ತಮನ್ಯದ್ಭಗವನ್ನ ವಿದ್ಮಹೇ ॥
ಅನುವಾದ
ಹೀಗೆ ನೀನು ದೀನವತ್ಸಲನಾಗಿರುವುದ ರಿಂದಲೇ ಮಾಯಾಗುಣವಿಲಾಸವನ್ನು ಮೀರಿದ, ಮಾಯಾ ತೀತನಾದ ನಿನ್ನನ್ನು ಸಾಧುಗಳು ನಿರಂತ ರವೂ ಧ್ಯಾನಿಸುವರು. ಸತ್ಪುರುಷರಿಗೆ ನಿನ್ನ ಚರಣಾರವಿಂದಗಳ ಸೇವೆಯ ಹೊರತು ಬೇರಾವ ಪ್ರಯೋಜನವೂ ಇಲ್ಲವೆಂದೇ ನಾನು ತಿಳಿದಿದ್ದೇನೆ. ॥29॥
(ಶ್ಲೋಕ - 30)
ಮೂಲಮ್
ಮನ್ಯೇ ಗಿರಂ ತೇ ಜಗತಾಂ ವಿಮೋಹಿನೀಂ
ವರಂ ವೃಣೀಷ್ವೇತಿ ಭಜಂತಮಾತ್ಥ ಯತ್ ।
ವಾಚಾ ನು ತಂತ್ಯಾ ಯದಿ ತೇ ಜನೋಸಿತಃ
ಕಥಂ ಪುನಃ ಕರ್ಮ ಕರೋತಿ ಮೋಹಿತಃ ॥
ಅನುವಾದ
ಶ್ರೀಭಗವಂತನೇ! ಹೀಗೆ ನಿನ್ನ ಭಜನೆಯೇ ಅನನ್ಯ ಪ್ರಯೋಜನವೆಂದು ತಿಳಿದ ಭಕ್ತನಾದ ನನ್ನನ್ನು ಕುರಿತು ನೀನು ‘ಯಾವುದಾದರೂ ವರವನ್ನು ಕೇಳಿಕೋ’ ಎಂದು ಮೋಹಕವಾದ ಮಾತನ್ನಾಡಿದೆಯಲ್ಲ! ಇದು ಲೋಕವನ್ನು ಮರಳುಮಾಡುವ ಮಾತಲ್ಲವೇ? ನಿನ್ನ ವಾಣಿಯೇ ಆದ ವೈದಿಕಕರ್ಮಕಾಂಡವೂ ಕೂಡ ಇಂತಹ ಪಾಶಗಳಿಂದ ಜನರನ್ನು ಕಟ್ಟಿಹಾಕಿದೆ. ಹಾಗಿಲ್ಲದಿದ್ದರೆ ಜನರು ಮೋಹವಶರಾಗಿ ಸಕಾಮಕರ್ಮಗಳನ್ನು ಏಕೆ ಆಚರಿಸುತ್ತಿದ್ದರು? ॥30॥
(ಶ್ಲೋಕ - 31)
ಮೂಲಮ್
ತ್ವನ್ಮಾಯಯಾದ್ಧಾ ಜನ ಈಶ ಖಂಡಿತೋ
ಯದನ್ಯದಾಶಾಸ್ತ ಋತಾತ್ಮನೋಬುಧಃ ।
ಯಥಾ ಚರೇದ್ಬಾಲಹಿತಂ ಪಿತಾ ಸ್ವಯಂ
ತಥಾ ತ್ವಮೇವಾರ್ಹಸಿ ನಃ ಸಮೀಹಿತುಮ್ ॥
ಅನುವಾದ
ಪ್ರಭೋ! ನಿನ್ನ ಮಾಯೆಯಿಂದಲೇ ಮನುಷ್ಯನು ತನ್ನ ವಾಸ್ತವಿಕ ಸ್ವರೂಪನಾದ ನಿನ್ನಿಂದ ವಿಮುಖನಾಗಿ ಅಜ್ಞಾನಕ್ಕೆ ವಶನಾಗಿ ಬೇರೆ ಪತ್ನೀ, ಪುತ್ರಾದಿಗಳನ್ನು ಬಯಸುತ್ತಾರೆ. ಆದರೂ ತನ್ನ ಬೇಡಿಕೆಗಳನ್ನು ಸಲ್ಲಿಸದೇ ಇದ್ದರೂ ತಂದೆಯು ತಾನೇ ಅವರ ಕಲ್ಯಾಣವನ್ನು ಮಾಡುವಂತೆ, ನೀನೂ ಸಹ ನಾವು ಪ್ರಾರ್ಥಿಸದೇ ಇದ್ದರೂ ನಮಗೆ ಯಾವುದು ಹಿತಕರವೋ ಅದನ್ನೇ ಮಾಡು ಎಂದು ಬೇಡಿಕೊಂಡನು. ॥31॥
(ಶ್ಲೋಕ - 32)
ಮೂಲಮ್ (ವಾಚನಮ್)
ಮೈತ್ರೇಯ ಉವಾಚ
ಮೂಲಮ್
ಇತ್ಯಾದಿರಾಜೇನ ನುತಃ ಸ ವಿಶ್ವದೃಕ್
ತಮಾಹ ರಾಜನ್ಮಯಿ ಭಕ್ತಿರಸ್ತು ತೇ ।
ದಿಷ್ಟ್ಯೇದೃಶೀ ಧೀರ್ಮಯಿ ತೇ ಕೃತಾ ಯಯಾ
ಮಾಯಾಂ ಮದೀಯಾಂ ತರತಿ ಸ್ಮ ದುಸ್ತ್ಯಜಾಮ್ ॥
(ಶ್ಲೋಕ - 33)
ಮೂಲಮ್
ತತ್ತ್ವಂ ಕುರು ಮಯಾದಿಷ್ಟಮಪ್ರಮತ್ತಃ ಪ್ರಜಾಪತೇ ।
ಮದಾದೇಶಕರೋ ಲೋಕಃ ಸರ್ವತ್ರಾಪ್ನೋತಿ ಶೋಭನಮ್ ॥
ಅನುವಾದ
ಶ್ರೀಮೈತ್ರೇಯರು ಹೇಳುತ್ತಾರೆ — ಆದಿರಾಜನಾದ ಪೃಥುವು ಹೀಗೆ ಸ್ತುತಿಸಿದಾಗ ಸರ್ವಸಾಕ್ಷಿ ಶ್ರೀಹರಿಯು ಅವನಲ್ಲಿ ಹೇಳಿದನು ರಾಜನೇ! ನಿನಗೆ ನನ್ನಲ್ಲಿ ಭಕ್ತಿ ಉಂಟಾಗಲಿ. ನಿನ್ನ ಚಿತ್ತವು ಹೀಗೆ ನನ್ನಲ್ಲಿ ಲೀನವಾಗಿರುವುದು ಅದೃಷ್ಟವಿಶೇಷವೇ. ಹೀಗಾದರೆ ಮನುಷ್ಯನು ಸಹಜವಾಗಿ ತೊರೆಯಲು ಅತಿಕಷ್ಟವಾದ ನನ್ನ ಆ ಮಾಯೆಯಿಂದ ಬಿಡುಗಡೆಹೊಂದವನು. ಈಗ ನೀನು ಜಾಗರೂಕನಾಗಿ ನನ್ನ ಆಜ್ಞೆಯನ್ನು ಪಾಲಿಸುತ್ತಾ ಇರು. ಪ್ರಜಾಪಾಲಕನೇ! ನನ್ನ ಆಣತಿಯನ್ನು ಪಾಲಿಸುವವನಿಗೆ ಎಲ್ಲೆಡೆ ಮಂಗಳವೇ ಉಂಟಾಗುತ್ತದೆ. ॥32-33॥
(ಶ್ಲೋಕ - 34)
ಮೂಲಮ್ (ವಾಚನಮ್)
ಮೈತ್ರೇಯ ಉವಾಚ
ಮೂಲಮ್
ಇತಿ ವೈನ್ಯಸ್ಯ ರಾಜರ್ಷೇಃ ಪ್ರತಿನಂದ್ಯಾರ್ಥವದ್ವಚಃ ।
ಪೂಜಿತೋನುಗೃಹಿತ್ವೈನಂ ಗಂತುಂ ಚಕ್ರೇಚ್ಯುತೋ ಮತಿಮ್ ॥
ಅನುವಾದ
ಶ್ರೀಮೈತ್ರೇಯರು ಹೇಳುತ್ತಾರೆ — ಎಲೈ ವಿದುರನೇ! ಹೀಗೆ ಭಗವಂತನು ಪೃಥುವಿನ ಅರ್ಥಪೂರ್ಣವಾದ ವಚನಗಳನ್ನು ಆದರಿಸಿದನು. ಮತ್ತೆ ಪೃಥುವು ಅವನನ್ನು ಪೂಜಿಸಿದನು. ಪ್ರಭುವು ಆತನನ್ನು ಎಲ್ಲ ರೀತಿಯಿಂದ ಅನುಗ್ರಹಿಸಿ ಅಲ್ಲಿಂದ ಹೊರಡಲನುವಾದನು. ॥34॥
(ಶ್ಲೋಕ - 35)
ಮೂಲಮ್
ದೇವರ್ಷಿಪಿತೃಗಂಧರ್ವಸಿದ್ಧಚಾರಣಪನ್ನಗಾಃ ।
ಕಿನ್ನರಾಪ್ಸರಸೋ ಮರ್ತ್ಯಾಃ ಖಗಾ ಭೂತಾನ್ಯನೇಕಶಃ ॥
(ಶ್ಲೋಕ - 36)
ಮೂಲಮ್
ಯಜ್ಞೇಶ್ವರಧಿಯಾ ರಾಜ್ಞಾ ವಾಗ್ವಿತ್ತಾಂಜಲಿಭಕ್ತಿತಃ ।
ಸಭಾಜಿತಾ ಯಯುಃ ಸರ್ವೇ ವೈಕುಂಠಾನುಗತಾಸ್ತತಃ ॥
ಅನುವಾದ
ಪೃಥುಮಹಾರಾಜನು ಅಲ್ಲಿಗೆ ಬಂದಿದ್ದ ದೇವತೆಗಳು, ಋಷಿಗಳು, ಪಿತೃಗಳು, ಗಂಧರ್ವರು, ಸಿದ್ಧರು, ಚಾರಣರು, ನಾಗರು, ಕಿನ್ನರರು, ಅಪ್ಸರೆಯರು, ಮನುಷ್ಯರು ಮತ್ತು ಪಕ್ಷಿಗಳು ಮುಂತಾದ ಅನೇಕ ಬಗೆಯ ಪ್ರಾಣಿಗಳಿಗೂ ಹಾಗೂ ಭಗವಂತನ ಪಾರ್ಷದರಿಗೂ ಹೀಗೆ ಎಲ್ಲರಿಗೂ ಭಗವದ್ಬುದ್ಧಿಯಿಂದ ಭಕ್ತಿಪೂರ್ವಕವಾಗಿ ಮಾತು, ಮನಸ್ಸು ಮತ್ತು ಧನದ ಮೂಲಕ ಕೈಜೋಡಿಸಿ ಪೂಜಿಸಿದನು. ಇದಾದ ಬಳಿಕ ಅವರೆಲ್ಲರೂ ತಮ್ಮ-ತಮ್ಮ ಸ್ಥಾನಗಳಿಗೆ ಹೊರಟು ಹೋದರು. ॥35-36॥
(ಶ್ಲೋಕ - 37)
ಮೂಲಮ್
ಭಗವಾನಪಿ ರಾಜರ್ಷೇಃ ಸೋಪಾಧ್ಯಾಯಸ್ಯ ಚಾಚ್ಯುತಃ ।
ಹರನ್ನಿವ ಮನೋಮುಷ್ಯ ಸ್ವಧಾಮ ಪ್ರತ್ಯಪದ್ಯತ ॥
ಅನುವಾದ
ಭಗವಂತನಾದ ಅಚ್ಯುತನೂ ಪೃಥುರಾಜನ ಮತ್ತು ಪುರೋಹಿತರ ಚಿತ್ತವನ್ನು ಸೆಳೆದುಕೊಂಡು ತನ್ನ ಧಾಮಕ್ಕೆ ಬಿಜಯಂಗೈದನು. ॥37॥
(ಶ್ಲೋಕ - 38)
ಮೂಲಮ್
ಅದೃಷ್ಟಾಯ ನಮಸ್ಕೃತ್ಯ ನೃಪಃ ಸಂದರ್ಶಿತಾತ್ಮನೇ ।
ಅವ್ಯಕ್ತಾಯ ಚ ದೇವಾನಾಂ ದೇವಾಯ ಸ್ವಪುರಂ ಯಯೌ ॥
ಅನುವಾದ
ಅನಂತರ ತನ್ನ ಸ್ವರೂಪವನ್ನು ತೋರಿ ಅಂತರ್ಧಾನವಾದ ಅವ್ಯಕ್ತಸ್ವರೂಪೀ ದೇವಾಧಿದೇವ ಭಗವಂತನನ್ನು ನಮಸ್ಕರಿಸುತ್ತಾ ಪೃಥುರಾಜನೂ ತನ್ನ ರಾಜಧಾನಿಗೆ ತೆರಳಿದನು. ॥38॥
ಅನುವಾದ (ಸಮಾಪ್ತಿಃ)
ಇಪ್ಪತ್ತನೆಯ ಅಧ್ಯಾಯವು ಮುಗಿಯಿತು. ॥20॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಚತುರ್ಥಸ್ಕಂಧೇ ಪೃಥುಚರಿತೇ ವಿಂಶೋಽಧ್ಯಾಯಃ ॥20॥