[ಹತ್ತೊಂಭತ್ತನೆಯ ಅಧ್ಯಾಯ]
ಭಾಗಸೂಚನಾ
ಪೃಥುಮಹಾರಾಜನಿಂದ ನೂರು ಅಶ್ವಮೇಧ ಯಜ್ಞಗಳ ಆಚರಣೆ
(ಶ್ಲೋಕ - 1)
ಮೂಲಮ್ (ವಾಚನಮ್)
ಮೈತ್ರೇಯ ಉವಾಚ
ಮೂಲಮ್
ಅಥಾದೀಕ್ಷತ ರಾಜಾ ತು ಹಯಮೇಧಶತೇನ ಸಃ ।
ಬ್ರಹ್ಮಾವರ್ತೇ ಮನೋಃ ಕ್ಷೇತ್ರೇ ಯತ್ರ ಪ್ರಾಚೀ ಸರಸ್ವತೀ ॥
ಅನುವಾದ
ಶ್ರೀಮೈತ್ರೇಯರು ಹೇಳುತ್ತಾರೆ — ಎಲೈ ವಿದುರನೇ! ಮನುಸಾರ್ವಭೌಮನಿಗೆ ಸೇರಿದ ಸರಸ್ವತೀ ನದಿಯು ಪೂರ್ವದಿಕ್ಕಿಗೆ ಹರಿಯುವ, ಬ್ರಹ್ಮಾವರ್ತವೆಂಬ ಕ್ಷೇತ್ರದಲ್ಲಿ ಆ ಪೃಥುಚಕ್ರವರ್ತಿಯು ನೂರು ಅಶ್ವಮೇಧ ಯಜ್ಞಗಳನ್ನು ಮಾಡಬೇಕೆಂದು ಸಂಕಲ್ಪಿಸಿ ದೀಕ್ಷೆಯನ್ನು ಕೈಗೊಂಡನು. ॥1॥
(ಶ್ಲೋಕ - 2)
ಮೂಲಮ್
ತದಭಿಪ್ರೇತ್ಯ ಭಗವಾನ್ ಕರ್ಮಾತಿಶಯಮಾತ್ಮನಃ ।
ಶತಕ್ರತುರ್ನ ಮಮೃಷೇ ಪೃಥೋರ್ಯಜ್ಞ ಮಹೋತ್ಸವಮ್ ॥
ಅನುವಾದ
ಇದನ್ನು ನೋಡಿ ಭಗವಾನ್ ಇಂದ್ರನಿಗೆ ಈ ಪೃಥುವಿನ ಕರ್ಮವು ನನ್ನ ಕರ್ಮಗಳಿಂದಲೂ ಹೆಚ್ಚಾಗುವುದು ಎಂದು ಅನಿಸಿತು. ಅದಕ್ಕಾಗಿ ಅವನು ರಾಜನ ಯಜ್ಞೋತ್ಸವವನ್ನು ಸಹಿಸದಾದನು. ॥2॥
(ಶ್ಲೋಕ - 3)
ಮೂಲಮ್
ಯತ್ರ ಯಜ್ಞಪತಿಃ ಸಾಕ್ಷಾದ್ಭಗವಾನ್ ಹರಿರೀಶ್ವರಃ ।
ಅನ್ವಭೂಯತ ಸರ್ವಾತ್ಮಾ ಸರ್ವಲೋಕಗುರುಃ ಪ್ರಭುಃ ॥
ಅನುವಾದ
ಪೃಥುಮಹಾರಾಜನ ಯಜ್ಞದಲ್ಲಿ ಎಲ್ಲರ ಅಂತರಾತ್ಮನೂ, ಸರ್ವಲೋಕಪೂಜ್ಯನೂ, ಜಗದೀಶ್ವರನೂ ಆದ ಭಗವಾನ್ ಶ್ರೀಹರಿಯು ಯಜ್ಞೇಶ್ವರನ ರೂಪದಿಂದ ಪ್ರತ್ಯಕ್ಷವಾಗಿ ದರ್ಶನವನ್ನು ಕೊಟ್ಟಿದ್ದನು. ॥3॥
(ಶ್ಲೋಕ - 4)
ಮೂಲಮ್
ಅನ್ವಿತೋ ಬ್ರಹ್ಮಶರ್ವಾಭ್ಯಾಂ ಲೋಕಪಾಲೈಃ ಸಹಾನುಗೈಃ ।
ಉಪಗೀಯಮಾನೋ ಗಂಧರ್ವೈರ್ಮುನಿಭಿಶ್ಚಾಪ್ಸರೋಗಣೈಃ ॥
ಅನುವಾದ
ಅವನೊಂದಿಗೆ ಬ್ರಹ್ಮದೇವರು, ರುದ್ರದೇವರು ಹಾಗೂ ತಮ್ಮ-ತಮ್ಮ ಅನುಚರರ ಸಹಿತ ಲೋಕಪಾಲಕರೂ ಕೂಡ ಆಗಮಿಸಿದ್ದರು. ಆಗ ಗಂಧರ್ವರು, ಮುನಿಗಳು, ಅಪ್ಸರೆಯರು ಪ್ರಭುವಿನ ಕೀರ್ತಿಯನ್ನು ಕೊಂಡಾಡುತ್ತಿದ್ದರು. ॥4॥
(ಶ್ಲೋಕ - 5)
ಮೂಲಮ್
ಸಿದ್ಧಾ ವಿದ್ಯಾಧರಾ ದೈತ್ಯಾ ದಾನವಾ ಗುಹ್ಯಕಾದಯಃ ।
ಸುನಂದನಂದಪ್ರಮುಖಾಃ ಪಾರ್ಷದಪ್ರವರಾ ಹರೇಃ ॥
(ಶ್ಲೋಕ - 6)
ಮೂಲಮ್
ಕಪಿಲೋ ನಾರದೋ ದತ್ತೋ ಯೋಗೇಶಾಃ ಸನಕಾದಯಃ ।
ತಮನ್ವೀಯುರ್ಭಾಗವತಾ ಯೇ ಚ ತತ್ಸೇವನೋತ್ಸುಕಾಃ ॥
ಅನುವಾದ
ಸಿದ್ಧರು, ವಿದ್ಯಾಧರರು, ದೈತ್ಯರು, ದಾನವರು, ಯಕ್ಷರು, ಸುನಂದ-ನಂದ ಮೊದಲಾದ ಭಗವಂತನ ಪಾರ್ಷದರು ಮತ್ತು ಸದಾ ಭಗವಂತನ ಸೇವೆಯಲ್ಲಿಯೇ ಉತ್ಸುಕರಾದ ಕಪಿಲರು, ನಾರದರು, ದತ್ತಾತ್ರೇಯರು, ಸನಕಾದಿ ಯೋಗೀಶ್ವರರು ಪ್ರಭುವನ್ನು ಹಿಂಬಾಲಿಸಿಬಂದಿದ್ದರು. ॥5-6॥
(ಶ್ಲೋಕ - 7)
ಮೂಲಮ್
ಯತ್ರ ಧರ್ಮದುಘಾ ಭೂಮಿಃ ಸರ್ವಕಾಮದುಘಾ ಸತೀ ।
ದೋಗ್ಧಿ ಸ್ಮಾಭೀಪ್ಸಿತಾನರ್ಥಾನ್ ಯಜಮಾನಸ್ಯ ಭಾರತ ॥
ಅನುವಾದ
ಎಲೈ ಭರತಕುಲಮಣಿಯೇ! ಆ ಯಜ್ಞದಲ್ಲಿ ಯಜ್ಞ ಸಾಮಗ್ರಿಗಳನ್ನು ಕೊಡುವಂತಹ ಭೂಮಿಯು ಕಾಮಧೇನು ರೂಪವನ್ನು ತಾಳಿ ಯಜಮಾನನ ಎಲ್ಲ ಇಷ್ಟಾರ್ಥಗಳನ್ನು ಪೂರ್ಣಮಾಡಿತ್ತು. ॥7॥
(ಶ್ಲೋಕ - 8)
ಮೂಲಮ್
ಊಹುಃ ಸರ್ವರಸಾನ್ನದ್ಯಃ ಕ್ಷೀರದಧ್ಯನ್ನಗೋರಸಾನ್ ।
ತರವೋ ಭೂರಿವರ್ಷ್ಮಾಣಃ ಪ್ರಾಸೂಯಂತ ಮಧುಚ್ಯುತಃ ॥
ಅನುವಾದ
ನದಿಗಳು ಹಾಲು-ಮೊಸರು-ತುಪ್ಪಗಳೇ ಮುಂತಾದ ಗೋರಸಗಳನ್ನು, ಇಕ್ಷು-ದ್ರಾಕ್ಷಾದಿ ಎಲ್ಲ ರೀತಿಯ ರಸಗಳನ್ನು ಹರಿಯಿಸುತ್ತಿದ್ದುವು. ಮಹಾವೃಕ್ಷಗಳು ಹೇರಳವಾಗಿ ಕಾಣಿಸಿಕೊಂಡು ಜೇನು ತುಪ್ಪವನ್ನು, ಜೇನಿನಂತಹ ಸವಿಯುಳ್ಳ ಹಣ್ಣುಗಳನ್ನು ಸಮರ್ಪಿಸುತ್ತಿದ್ದವು. ॥8॥
(ಶ್ಲೋಕ - 9)
ಮೂಲಮ್
ಸಿಂಧವೋ ರತ್ನನಿಕರಾನ್ ಗಿರಯೋನ್ನಂ ಚತುರ್ವಿಧಮ್ ।
ಉಪಾಯನಮುಪಾಜಹ್ರುಃ ಸರ್ವೇ ಲೋಕಾಃ ಸಪಾಲಕಾಃ ॥
ಅನುವಾದ
ಸಮುದ್ರಗಳು ರತ್ನರಾಶಿಗಳನ್ನೂ, ಪರ್ವತಗಳು ಭಕ್ಷ್ಯ, ಭೋಜ್ಯ-ಚೋಷ್ಯ-ಲೇಹ್ಯಗಳೆಂಬ ನಾಲ್ಕು ವಿಧದ ಅನ್ನಗಳನ್ನೂ ಮತ್ತು ಲೋಕಪಾಲರಿಂದ ಸಹಿತವಾದ ಸಮಸ್ತ ಲೋಕಗಳು ಬಗೆ-ಬಗೆಯ ಕಾಣಿಕೆಗಳನ್ನು ಪೃಥುವಿಗೆ ಸಮರ್ಪಿಸುತ್ತಿದ್ದವು.॥9॥
(ಶ್ಲೋಕ - 10)
ಮೂಲಮ್
ಇತಿ ಚಾಧೋಕ್ಷಜೇಶಸ್ಯ ಪೃಥೋಸ್ತು ಪರಮೋದಯಮ್ ।
ಅಸೂಯನ್ ಭಗವಾನಿಂದ್ರಃ ಪ್ರತಿಘಾತಮಚೀಕರತ್ ॥
ಅನುವಾದ
ಪೃಥುಮಹಾರಾಜನಾದರೋ ಏಕಮಾತ್ರ ಶ್ರೀಹರಿಯನ್ನೇ ತನ್ನ ಪ್ರಭುವೆಂದು ತಿಳಿಯುತ್ತಿದ್ದನು. ಅವನ ಕೃಪೆಯಿಂದ ಆ ಯಜ್ಞಾನುಷ್ಠಾನದಲ್ಲಿ ಅವನ ಬಹಳ ಉತ್ಕರ್ಷವಾಯಿತು. ಆದರೆ ಇದು ದೇವೇಂದ್ರನಿಗೆ ಸಹನೆಯಾಗಲಿಲ್ಲ. ಅವನು ಆ ಯಜ್ಞದಲ್ಲಿ ವಿಘ್ನವನ್ನೊಡ್ಡಲು ಪ್ರಯತ್ನಿಸಿದನು. ॥10॥
(ಶ್ಲೋಕ - 11)
ಮೂಲಮ್
ಚರಮೇಣಾಶ್ವಮೇಧೇನ ಯಜಮಾನೇ ಯಜುಷ್ಪತಿಮ್ ।
ವೈನ್ಯೇ ಯಜ್ಞಪಶುಂ ಸ್ಪರ್ಧನ್ನಪೋವಾಹ ತಿರೋಹಿತಃ ॥
ಅನುವಾದ
ಮಹಾರಾಜಾ ಪೃಥುವು ಕೊನೆಯ ಯಜ್ಞದ ಮೂಲಕ ಭಗವಾನ್ ಯಜ್ಞಪತಿಯ ಆರಾಧನೆ ಮಾಡುತ್ತಿರುವಾಗ ಇಂದ್ರನು ಅಸೂಯೆಯಿಂದ ಗುಟ್ಟಾಗಿ ಆತನ ಯಜ್ಞಾಶ್ವವನ್ನು ಅಪಹರಿಸಿದನು.॥11॥
(ಶ್ಲೋಕ - 12)
ಮೂಲಮ್
ತಮತ್ರಿರ್ಭಗವಾನೈಕ್ಷತ್ತ್ವರಮಾಣಂ ವಿಹಾಯಸಾ ।
ಆಮುಕ್ತಮಿವ ಪಾಖಂಡಂ ಯೋಧರ್ಮೇಧರ್ಮವಿಭ್ರಮಃ ॥
(ಶ್ಲೋಕ - 13)
ಮೂಲಮ್
ಅತ್ರಿಣಾ ಚೋದಿತೋ ಹಂತುಂ ಪೃಥುಪುತ್ರೋ ಮಹಾರಥಃ ।
ಅನ್ವಧಾವತ ಸಂಕ್ರುದ್ಧಸ್ತಿಷ್ಠ ತಿಷ್ಠೇತಿ ಚಾಬ್ರವೀತ್ ॥
ಅನುವಾದ
ಇಂದ್ರನು ತನ್ನ ರಕ್ಷಣೆಗಾಗಿ ಪಾಷಂಡವೇಷವನ್ನು ಧರಿಸಿದ್ದನು. ಅದು ಅಧರ್ಮದಲ್ಲಿ ಧರ್ಮದ ಭ್ರಮೆಯನ್ನು ಉಂಟುಮಾಡು ವಂತಹುದು. ಅದನ್ನು ಆಶ್ರಯಿಸಿದರೆ ಪಾಪೀ ಮನುಷ್ಯನೂ ಕೂಡ ಧರ್ಮಾತ್ಮನಂತೆ ಕಂಡುಬರುತ್ತಾನೆ. ಈ ವೇಷದಲ್ಲಿ ಇಂದ್ರನು ಕುದುರೆಯನ್ನು ಅಪಹರಿಸಿ ಶೀಘ್ರವಾಗಿ ಆಕಾಶ ಮಾರ್ಗವಾಗಿ ಹೋಗುತ್ತಿರುವಾಗ ಮಹಾತ್ಮರಾದ ಅತ್ರಿಮಹರ್ಷಿಗಳ ದೃಷ್ಟಿಗೆ ಬಿದ್ದನು. ಅವರ ಪ್ರೇರಣೆಯಿಂದ ಮಹಾರಾಜಾ ಪೃಥುವಿನ ಮಹಾರಥಿ ಪುತ್ರನು ಇಂದ್ರನನ್ನು ಕೊಲ್ಲಲು ಅವನನ್ನು ಬೆನ್ನಟ್ಟಿಕೊಂಡು ಹೋಗಿ ಮಿತಿಮೀರಿದ ಕೋಪದಿಂದ ‘ಎಲವೋ! ನಿಲ್ಲು, ನಿಲ್ಲು!’ ಎಂದು ಕೂಗಿದನು. ॥12-13॥
(ಶ್ಲೋಕ - 14)
ಮೂಲಮ್
ತಂ ತಾದೃಶಾಕೃತಿಂ ವೀಕ್ಷ್ಯ ಮೇನೇ ಧರ್ಮಂ ಶರೀರಿಣಮ್ ।
ಜಟಿಲಂ ಭಸ್ಮನಾಚ್ಛನ್ನಂ ತಸ್ಮೈ ಬಾಣಂ ನ ಮುಂಚತಿ ॥
ಅನುವಾದ
ಆಗ ಇಂದ್ರನ ತಲೆಯಲ್ಲಿ ಜಟಾಜೂಟವಿತ್ತು. ಮೈಗೆ ಭಸ್ಮವನ್ನು ಬಳಿದುಕೊಂಡಿದ್ದನು. ಅದನ್ನು ಕಂಡು ಪೃಥು ಪುತ್ರನು ಆತನನ್ನು ಧರ್ಮಮೂರ್ತಿ ಎಂದು ಭಾವಿಸಿ ಅವನ ಮೇಲೆ ಬಾಣವನ್ನು ಪ್ರಯೋಗಿಸಲಿಲ್ಲ.॥14॥
(ಶ್ಲೋಕ - 15)
ಮೂಲಮ್
ವಧಾನ್ನಿವೃತ್ತಂ ತಂ ಭೂಯೋ ಹಂತವೇತ್ರಿರಚೋದಯತ್ ।
ಜಹಿ ಯಜ್ಞಹನಂ ತಾತ ಮಹೇಂದ್ರಂ ವಿಬುಧಾಧಮಮ್ ॥
ಅನುವಾದ
ಅವನು ಇಂದ್ರನ ಮೇಲೆ ಆಕ್ರಮಣ ಮಾಡದೆ ಹಿಂದಿರುಗಿದಾಗ ಅತ್ರಿ ಮಹರ್ಷಿಗಳು ‘ವತ್ಸ! ಈತನು ಯಜ್ಞವನ್ನು ಕೆಡಿಸಲು ಬಂದ ದೇವತಾಧಮನಾದ ಇಂದ್ರನು. ಇವನನ್ನು ಸಂಹರಿಸು’ ಎಂದು ಆಣತಿ ನೀಡಿದರು.॥15॥
(ಶ್ಲೋಕ - 16)
ಮೂಲಮ್
ಏವಂ ವೈನ್ಯಸುತಃ ಪ್ರೋಕ್ತಸ್ತ್ವರಮಾಣಂ ವಿಹಾಯಸಾ ।
ಅನ್ವದ್ರವದಭಿಕ್ರುದ್ಧೋ ರಾವಣಂ ಗೃಧ್ರರಾಡಿವ ॥
ಅನುವಾದ
ಅತ್ರಿ ಮಹರ್ಷಿಗಳು ಹೀಗೆ ಪ್ರೋತ್ಸಾಹಿಸಿದಾಗ ಪೃಥುಕುಮಾರನಲ್ಲಿ ಕ್ರೋಧವು ಉಕ್ಕೇರಿ ಬಂತು. ಅವನು ರಾವಣನನ್ನು ಬೆನ್ನಟ್ಟಿಹೋದ ಜಟಾಯು ವಿನಂತೆ ಆಕಾಶದಲ್ಲಿ ವೇಗವಾಗಿ ಹೋಗುತ್ತಿದ್ದ ಇಂದ್ರನನ್ನು ಬೆನ್ನಟ್ಟಿದನು. ॥16॥
(ಶ್ಲೋಕ - 17)
ಮೂಲಮ್
ಸೋಶ್ವಂ ರೂಪಂ ಚ ತದ್ಧಿತ್ವಾ ತಸ್ಮಾ ಅಂತರ್ಹಿತಃ ಸ್ವರಾಟ್ ।
ವೀರಃ ಸ್ವಪಶುಮಾದಾಯ ಪಿತುರ್ಯಜ್ಞ ಮುಪೇಯಿವಾನ್ ॥
ಅನುವಾದ
ಇದನ್ನು ನೋಡಿದ ಇಂದ್ರನು ಹೆದರಿ ತನ್ನ ಆ ಪಾಷಂಡವೇಷವನ್ನೂ, ಯಜ್ಞದ ಕುದುರೆಯನ್ನು ಅಲ್ಲಿಯೇ ಬಿಟ್ಟು ಕಣ್ಮರೆಯಾದನು. ವೀರನಾದ ಪೃಥುಪುತ್ರನು ತನ್ನ ಯಜ್ಞಾಶ್ವವನ್ನು ತೆಗೆದುಕೊಂಡು ತಂದೆಯ ಯಜ್ಞಶಾಲೆಗೆ ಮರಳಿದನು. ॥17॥
(ಶ್ಲೋಕ - 18)
ಮೂಲಮ್
ತತ್ತಸ್ಯ ಚಾದ್ಭುತಂ ಕರ್ಮ ವಿಚಕ್ಷ್ಯ ಪರಮರ್ಷಯಃ ।
ನಾಮಧೇಯಂ ದದುಸ್ತಸ್ಮೈ ವಿಜಿತಾಶ್ವ ಇತಿ ಪ್ರಭೋ ॥
ಅನುವಾದ
ಶಕ್ತಿಶಾಲಿ ವಿದುರನೇ! ಅವನ ಆ ಅದ್ಭುತ ಪರಾಕ್ರಮವನ್ನು ಕಂಡು ಮಹರ್ಷಿಗಳು ಆತನಿಗೆ ‘ವಿಜಿತಾಶ್ವ’ ಎಂಬ ಬಿರುದಾಂಕಿತವನ್ನು ಕೊಟ್ಟರು. ॥18॥
(ಶ್ಲೋಕ - 19)
ಮೂಲಮ್
ಉಪಸೃಜ್ಯ ತಮಸ್ತೀವ್ರಂ ಜಹಾರಾಶ್ವಂ ಪುನರ್ಹರಿಃ ।
ಚಷಾಲಯೂಪತಶ್ಛನ್ನೋ ಹಿರಣ್ಯರಶನಂ ವಿಭುಃ ॥
ಅನುವಾದ
ಯಜ್ಞದ ಅಶ್ವವನ್ನು ಚಷಾಲ ಮತ್ತು ಯೂಪಸ್ತಂಭಗಳಿಗೆ ಕಟ್ಟಿಹಾಕಲಾಗಿತ್ತು. ಶಕ್ತಿಶಾಲಿಯಾದ ಇಂದ್ರನು ಅಲ್ಲಿ ಘೋರವಾದ ಅಂಧಕಾರವನ್ನು ಉಂಟುಮಾಡಿ ಆ ಕತ್ತಲೆಯಲ್ಲಿ ಅಡಗಿಕೊಂಡು ಯಜ್ಞಾಶ್ವವನ್ನು ಅದರ ಚಿನ್ನದ ಸರಪಣಿಯೊಡನೆ ಕದ್ದುಕೊಂಡು ಹೋದನು. ॥19॥
(ಶ್ಲೋಕ - 20)
ಮೂಲಮ್
ಅತ್ರಿಃ ಸಂದರ್ಶಯಾಮಾಸ ತ್ವರಮಾಣಂ ವಿಹಾಯಸಾ ।
ಕಪಾಲಖಟ್ವಾಂಗಧರಂ ವೀರೋ ನೈನಮಬಾಧತ ॥
ಅನುವಾದ
ಅತ್ರಿಮುನಿಗಳು ಪುನಃ ಆಕಾಶಮಾರ್ಗವಾಗಿ ಹೋಗುತ್ತಿರುವ ಇಂದ್ರನನ್ನು ರಾಜಕುಮಾರನಿಗೆ ತೋರಿಸಿದರು. ಆದರೆ ಇಂದ್ರನು ಕಪಾಲವನ್ನು, ಖಟ್ವಾಂಗವನ್ನು ಧರಿಸಿ ತಪಸ್ವಿಯಂತೆ ಕಾಣುತ್ತಿದ್ದುದರಿಂದ ಪೃಥುಪುತ್ರನು ಅವನ ದಾರಿಗೆ ಅಡ್ಡಿಪಡಿಸಲಿಲ್ಲ. ॥20॥
(ಶ್ಲೋಕ - 21)
ಮೂಲಮ್
ಅತ್ರಿಣಾ ಚೋದಿತಸ್ತಸ್ಮೈ ಸಂದಧೇ ವಿಶಿಖಂ ರುಷಾ ।
ಸೋಶ್ವಂ ರೂಪಂ ಚ ತದ್ಧಿತ್ವಾ ತಸ್ಥಾವಂತರ್ಹಿತಃ ಸ್ವರಾಟ್ ॥
ಅನುವಾದ
ಆಗ ಅತ್ರಿಮಹರ್ಷಿಯು ಮತ್ತೆ ಅವನಿಗೆ ಉತ್ಸಾಹತುಂಬಿ ಪ್ರೇರೇಪಿಸಲು ಪೃಥುಪುತ್ರನು ಕ್ರೋಧದಿಂದ ಇಂದ್ರನ ಮೇಲೆ ಬಾಣವನ್ನು ಗುರಿಯಿಟ್ಟು ಪ್ರಯೋಗಿಸಿದನು. ಅದನ್ನು ನೋಡಿದೊಡನೆಯೇ ದೇವರಾಜನು ತನ್ನ ಛದ್ಮ ವೇಷವನ್ನೂ, ಯಜ್ಞಾಶ್ವವನ್ನು ಅಲ್ಲಿಯೇ ಬಿಟ್ಟು ಅಂತರ್ಧಾನನಾದನು. ॥21॥
(ಶ್ಲೋಕ - 22)
ಮೂಲಮ್
ವೀರಶ್ಚಾಶ್ವಮುಪಾದಾಯ ಪಿತೃಯಜ್ಞಮಥಾವ್ರಜತ್ ।
ತದವದ್ಯಂ ಹರೇ ರೂಪಂ ಜಗೃಹುರ್ಜ್ಞಾನದುರ್ಬಲಾಃ ॥
ಅನುವಾದ
ವೀರನಾದ ವಿಜಿತಾಶ್ವನು ಕುದುರೆಯನ್ನು ಹಿಡಿದುಕೊಂಡು ತಂದೆಯ ಯಜ್ಞಶಾಲೆಗೆ ಹಿಂದಿರುಗಿದನು. ಇಂದ್ರನು ಬಿಟ್ಟುಹೋದ ಆ ನಿಂದನೀಯವಾದ ವೇಷವನ್ನು ಮಂದ ಮತಿಗಳಾದ ಜನರು ಸ್ವೀಕರಿಸಿದರು. ॥22॥
(ಶ್ಲೋಕ - 23)
ಮೂಲಮ್
ಯಾನಿ ರೂಪಾಣಿ ಜಗೃಹೇ ಇಂದ್ರೋಹಯಜಿಹೀರ್ಷಯಾ ।
ತಾನಿ ಪಾಪಸ್ಯ ಖಂಡಾನಿ ಲಿಂಗಂ ಖಂಡಮಿಹೋಚ್ಯತೇ ॥
ಅನುವಾದ
ಇಂದ್ರನು ಯಜ್ಞಾಶ್ವವನ್ನು ಅಪಹರಿಸುವ ದೃಷ್ಟಿಯಿಂದ ಧರಿಸಿದ ರೂಪಗಳೆಲ್ಲವೂ ಪಾಪದ ಖಂಡಗಳಾದುದರಿಂದ ‘ಪಾಖಂಡ’ ಎನಿಸಿದುವು. ಇಲ್ಲಿ ‘ಖಂಡ’ವೆಂದರೆ ಚಿಹ್ನೆಯ ವಾಚಕವಾಗಿದೆ. ॥23॥
(ಶ್ಲೋಕ - 24)
ಮೂಲಮ್
ಏವಮಿಂದ್ರೇ ಹರತ್ಯಶ್ವಂ ವೈನ್ಯಯಜ್ಞಜಿಘಾಂಸಯಾ ।
ತದ್ಗೃಹೀತವಿಸೃಷ್ಟೇಷು ಪಾಖಂಡೇಷು ಮತಿರ್ನೃಣಾಮ್ ॥
(ಶ್ಲೋಕ - 25)
ಮೂಲಮ್
ಧರ್ಮ ಇತ್ಯುಪಧರ್ಮೇಷು ನಗ್ನರಕ್ತಪಟಾದಿಷು ।
ಪ್ರಾಯೇಣ ಸಜ್ಜತೇ ಭ್ರಾಂತ್ಯಾ ಪೇಶಲೇಷು ಚ ವಾಗ್ಮಿಷು ॥
ಅನುವಾದ
ಹೀಗೆ ಪೃಥುವಿನ ಯಜ್ಞವನ್ನು ಧ್ವಂಸಮಾಡಲಿಕ್ಕಾಗಿ, ಯಜ್ಞ ಪಶುವನ್ನು ಕದಿಯುವಾಗ ಇಂದ್ರನು ಹಲವು ಬಾರಿಧರಿಸಿ ತ್ಯಾಗಮಾಡಿದ ದಿಗಂಬರತ್ವ, ಕೆಂಪುವಸ್ತ್ರಗಳ ಧಾರಣೆ, ಕಾಪಾಲಿಕ ಮುಂತಾದ ಪಾಖಂಡಪೂರ್ಣ ಆಚಾರಗಳಲ್ಲಿ ಮನುಷ್ಯರ ಬುದ್ಧಿಯು ಮೋಹಿತವಾಗುತ್ತದೆ. ಏಕೆಂದರೆ ಆ ನಾಸ್ತಿಕಮತಗಳು ನೋಡಲು ಸುಂದರವಾಗಿದ್ದು, ದೊಡ್ಡ-ದೊಡ್ಡ ಯುಕ್ತಿಗಳಿಂದ ತಮ್ಮ ಪಕ್ಷವನ್ನು ಸಮರ್ಥಿಸುತ್ತವೆ. ವಾಸ್ತವವಾಗಿ ಇವು ಧರ್ಮಗಳೇ ಅಲ್ಲ. ಧರ್ಮವೆಂಬ ಭ್ರಾಂತಿಯಿಂದ ಪಾಮರ ಜನರು ಇವುಗಳಲ್ಲಿ ಆಸಕ್ತರಾಗುತ್ತಾರೆ. ॥24-25॥
(ಶ್ಲೋಕ - 26)
ಮೂಲಮ್
ತದಭಿಜ್ಞಾಯ ಭಗವಾನ್ ಪೃಥುಃ ಪೃಥುಪರಾಕ್ರಮಃ ।
ಇಂದ್ರಾಯ ಕುಪಿತೋ ಬಾಣಮಾದತ್ತೋದ್ಯತಕಾರ್ಮುಕಃ ॥
ಅನುವಾದ
ಇಂದ್ರನ ಆ ಕುಕೃತ್ಯವನ್ನು ಕಂಡು ಪರಮ ಪರಾಕ್ರಮಿ ಯಾದ ಪೃಥುಮಹಾರಾಜನಿಗೆ ಆತನ ಮೇಲೆ ತುಂಬಾ ಕ್ರೋಧವು ಉಂಟಾಯಿತು. ಆತನು ತನ್ನ ಬಿಲ್ಲನ್ನೆತ್ತಿಕೊಂಡು ಬಾಣವನ್ನು ಹೂಡಿದನು. ॥26॥
(ಶ್ಲೋಕ - 27)
ಮೂಲಮ್
ತಮೃತ್ವಿಜಃ ಶಕ್ರವಧಾಭಿಸಂಧಿತಂ
ವಿಚಕ್ಷ್ಯ ದುಷ್ಪ್ರೇಕ್ಷ್ಯಮಸಹ್ಯರಂಹಸಮ್ ।
ನಿವಾರಯಾಮಾಸುರಹೋ ಮಹಾಮತೇ
ನ ಯುಜ್ಯತೇತ್ರಾನ್ಯವಧಃ ಪ್ರಚೋದಿತಾತ್ ॥
ಅನುವಾದ
ಆಗ ಕ್ರೋಧದಿಂದ ಕೆರಳಿದ್ದ ಆತನನ್ನು ನೋಡುವುದಕ್ಕೂ ಕಷ್ಟವಾಗಿತ್ತು. ಸಹಿಸಲಸ ದಳವಾದ ಪರಾಕ್ರಮವುಳ್ಳ ಪೃಥುವು ಇಂದ್ರನನ್ನು ವಧಿಸಲು ಸಿದ್ಧನಾಗಿಬಿಟ್ಟಿದ್ದಾನೆ ಎಂಬುದನ್ನು ತಿಳಿದು ಋತ್ವಿಜರು ಆತನನ್ನು ತಡೆಯುತ್ತಾ ಮಹಾರಾಜಾ! ನೀನು ಮಹಾಬುದ್ಧಿಶಾಲಿಯು. ಯಜ್ಞದೀಕ್ಷೆಯನ್ನು ವಹಿಸಿಕೊಂಡ ಮೇಲೆ ಶಾಸ್ತ್ರವಿಹಿತವಾದ ಯಜ್ಞಪಶುವನ್ನು ಬಿಟ್ಟು ಬೇರೆ ಯಾರನ್ನೂ ವಧಿಸಬಾರದು. ॥27॥
(ಶ್ಲೋಕ - 28)
ಮೂಲಮ್
ವಯಂ ಮರುತ್ವಂತಮಿಹಾರ್ಥನಾಶನಂ
ಹ್ವಯಾಮಹೇ ತ್ವಚ್ಛ್ರವಸಾ ಹತತ್ವಿಷಮ್ ।
ಅಯಾತಯಾಮೋಪಹವೈರನಂತರಂ
ಪ್ರಸಹ್ಯ ರಾಜನ್ ಜುಹವಾಮ ತೇಹಿತಮ್ ॥
ಅನುವಾದ
ಈ ಯಜ್ಞಕಾರ್ಯದಲ್ಲಿ ನಿನಗೆ ವಿಘ್ನವನ್ನುಂಟುಮಾಡುತ್ತಿರುವ ಇಂದ್ರನು ನಿನ್ನ ಕೀರ್ತಿಯಿಂದ ಅಸೂಯೆಗೊಂಡು ಈಗಾಗಲೇ ತೇಜೋ ಹೀನನಾಗಿದ್ದಾನೆ. ನಾವು ಅಮೋಘವಾದ ಮಂತ್ರಗಳಿಂದ ಆತನನ್ನು ಇಲ್ಲಿಯೇ ಆವಾಹನೆ ಮಾಡಿ ಬಲಾತ್ಕಾರವಾಗಿ ಅಗ್ನಿಯಲ್ಲಿ ಹೋಮಮಾಡಿಬಿಡುವೆವು ಎಂದು ಸಮಾಧಾನ ಪಡಿಸಿದರು. ॥28॥
(ಶ್ಲೋಕ - 29)
ಮೂಲಮ್
ಇತ್ಯಾಮಂತ್ರ್ಯ ಕ್ರತುಪತಿಂ ವಿದುರಾಸ್ಯರ್ತ್ವಿಜೋ ರುಷಾ ।
ಸ್ರುಗ್ಧಸ್ತಾಂಜುಹ್ವತೋಭ್ಯೇತ್ಯ ಸ್ವಯಂಭೂಃ ಪ್ರತ್ಯಷೇಧತ ॥
ಅನುವಾದ
ವಿದುರನೇ! ಯಜಮಾನನಲ್ಲಿ ಹೀಗೆ ಹೇಳಿ ಅವನ ಅನುಮತಿಯನ್ನು ಪಡೆದು ಯಾಜಕರು ಕ್ರೋಧದಿಂದ ಇಂದ್ರನನ್ನು ಆಹ್ವಾನಿಸಿದರು. ಅವರು ಸ್ರುವೆಯಿಂದ ಅಗ್ನಿಯಲ್ಲಿ ಆಹುತಿಯನ್ನು ಇನ್ನೇನು ಹಾಕಬೇಕು ಎನ್ನುವಷ್ಟರಲ್ಲಿ ಬ್ರಹ್ಮದೇವರು ಅಲ್ಲಿಗೆ ಬಂದು ಅವರನ್ನು ತಡೆದರು. ॥29॥
(ಶ್ಲೋಕ - 30)
ಮೂಲಮ್
ನ ವಧ್ಯೋ ಭವತಾಮಿಂದ್ರೋ ಯದ್ಯಜ್ಞೋ ಭಗವತ್ತನುಃ ।
ಯಂ ಜಿಘಾಂಸಥ ಯಜ್ಞೇನ ಯಸ್ಯೇಷ್ಟಾಸ್ತನವಃ ಸುರಾಃ ॥
ಅನುವಾದ
ಅವರು ಹೇಳಿದರು ಎಲೈ ಯಾಜಕರೇ! ನೀವು ಇಂದ್ರನನ್ನು ವಧಿಸುವುದು ಉಚಿತವಲ್ಲ. ಇವನು ಯಜ್ಞ ಸಂಜ್ಞಕ ಇಂದ್ರನಾದರೋ ಭಗವಂತನ ಮೂರ್ತಿಯೇ ಆಗಿದ್ದಾನೆ. ಯಜ್ಞದಲ್ಲಿ ನೀವು ಆರಾಧಿಸುವ ದೇವತೆಗಳೆಲ್ಲರೂ ಇಂದ್ರನಿಗೆ ಶರೀರದಂತೆ ಇದ್ದಾರೆ. ಇಂತಹವನನ್ನು ನೀವು ಯಜ್ಞದಮೂಲಕವೇ ಕೊಲ್ಲಲು ಬಯಸುತ್ತೀರಲ್ಲ! ॥30॥
ಮೂಲಮ್
(ಶ್ಲೋಕ - 31)
ತದಿದಂ ಪಶ್ಯತ ಮಹದ್ಧರ್ಮವ್ಯತಿಕರಂ ದ್ವಿಜಾಃ ।
ಇಂದ್ರೇಣಾನುಷ್ಠಿತಂ ರಾಜ್ಞಃ ಕರ್ಮೈತದ್ವಿಜಿಘಾಂಸತಾ ॥
ಅನುವಾದ
ಪೃಥುಮಹಾರಾಜನ ಯಜ್ಞಾನುಷ್ಠಾನದಲ್ಲಿ ವಿಘ್ನವನ್ನು ಉಂಟು ಮಾಡಲು ಇಂದ್ರನು ಹರಡಿರುವ ಪಾಖಂಡವು ಧರ್ಮದ ನಾಶಮಾಡುವಂತಹುದು. ಈ ಮಾತಿನ ಕಡೆಗೆ ಗಮನಕೊಡಿರಿ. ಈಗ ಅವನಲ್ಲಿ ಹೆಚ್ಚು ವಿರೋಧಮಾಡಬೇಡಿ. ಇಲ್ಲದಿದ್ದರೆ ಅವನು ಇನ್ನೂ ಪಾಖಂಡಮಾರ್ಗಗಳನ್ನು ಪ್ರಚಾರಮಾಡುವನು. ॥31॥
(ಶ್ಲೋಕ - 32)
ಮೂಲಮ್
ಪೃಥುಕೀರ್ತೇಃ ಪೃಥೋರ್ಭೂಯಾತ್ತರ್ಹ್ಯೇಕೋನಶತಕ್ರತುಃ ।
ಅಲಂ ತೇ ಕ್ರತುಭಿಃ ಸ್ವಿಷ್ಟೈರ್ಯದ್ಭವಾನ್ಮೋಕ್ಷಧರ್ಮವಿತ್ ॥
ಅನುವಾದ
ಈ ಪೃಥುವಿಗೂ ಇಂದ್ರನಿಗೂ ಯಜ್ಞದಲ್ಲಿ ಪೈಪೋಟಿಯೇ ಬೇಡ. ಪೃಥುಮಹಾರಾಜನ ಕೀರ್ತಿಯು ಈಗಾಗಲೇ ತುಂಬಾ ವಿಸ್ತಾರಗೊಂಡಿದೆ. ಈತನಿಗೆ ನೂರನೆಯ ಯಜ್ಞದ ಆವಶ್ಯಕತೆಯೇ ಇಲ್ಲ. ಆದ್ದರಿಂದ ಈ ಪೃಥುರಾಜನ ತೊಂಭತ್ತೊಂಭತ್ತು ಯಜ್ಞಗಳಲ್ಲೇ ಪರಿಸಮಾಪ್ತಿಯಾಗಲಿ. ಅನಂತರ ರಾಜರ್ಷಿ ಪೃಥುವಿನಲ್ಲಿ ಹೇಳಿದರು ರಾಜೇಂದ್ರನೇ! ನೀನಾದರೋ ಮೋಕ್ಷಧರ್ಮವನ್ನು ಬಲ್ಲವನು. ಆದ್ದರಿಂದ ನಿನಗೆ ಈ ಯಜ್ಞಾನುಷ್ಠಾನಗಳ ಆವಶ್ಯಕತೆಯೇ ಇಲ್ಲ. ॥32॥
(ಶ್ಲೋಕ - 33)
ಮೂಲಮ್
ನೈವಾತ್ಮನೇ ಮಹೇಂದ್ರಾಯ ರೋಷಮಾಹರ್ತುಮರ್ಹಸಿ ।
ಉಭಾವಪಿ ಹಿ ಭದ್ರಂ ತೇ ಉತ್ತಮಶ್ಲೋಕವಿಗ್ರಹೌ ॥
ಅನುವಾದ
ನಿನಗೆ ಮಂಗಳವಾಗಲಿ. ನೀನು ಮತ್ತು ಇಂದ್ರನು ಇಬ್ಬರೂ ಪವಿತ್ರವಾದ ಕೀರ್ತಿಯುಳ್ಳ ಭಗವಾನ್ ಶ್ರೀಹರಿಯ ಶರೀರವಾಗಿದ್ದೀರಿ,. ಅದಕ್ಕಾಗಿ ನಿನ್ನದೇ ಸ್ವರೂಪಭೂತ ನಾದ ಇಂದ್ರನ ಕುರಿತು ನೀನು ಕ್ರೋಧವನ್ನು ಮಾಡಬಾರದು.॥33॥
(ಶ್ಲೋಕ - 34)
ಮೂಲಮ್
ಮಾಸ್ಮಿನ್ಮಹಾರಾಜ ಕೃಥಾಃ ಸ್ಮ ಚಿಂತಾಂ
ನಿಶಾಮಯಾಸ್ಮದ್ವಚ ಆದೃತಾತ್ಮಾ ।
ಯದ್ಧ್ಯಾಯತೋ ದೈವಹತಂ ನು ಕರ್ತುಂ
ಮನೋತಿರುಷ್ಟಂ ವಿಶತೇ ತಮೋಂಧಮ್ ॥
ಅನುವಾದ
ನಿನ್ನ ಈ ಯಜ್ಞವು ನಿರ್ವಿಘ್ನವಾಗಿ ಸಮಾಪ್ತವಾಗಲಿಲ್ಲವೆಂದು ನೀನು ಚಿಂತಿಸಬೇಡ. ನನ್ನ ಮಾತನ್ನು ಆದರದಿಂದ ಸ್ವೀಕರಿಸು. ದೈವವು ತಪ್ಪಿಸಿದ ಕೆಲಸ ವನ್ನು ತಾನು ಮಾಡಬೇಕೆಂದು ವಿಚಾರಮಾಡುವವನ ಮನಸ್ಸು ಅತ್ಯಂತ ಕ್ರೋಧಗೊಂಡು ಭಯಂಕರ ಮೋಹದಲ್ಲಿ ಸಿಲುಕಿಕೊಳ್ಳುವದು. ॥34॥
(ಶ್ಲೋಕ - 35)
ಮೂಲಮ್
ಕ್ರತುರ್ವಿರಮತಾಮೇಷ ದೇವೇಷು ದುರವಗ್ರಹಃ ।
ಧರ್ಮವ್ಯತಿಕರೋ ಯತ್ರ ಪಾಖಂಡೈರಿಂದ್ರನಿರ್ಮಿತೈಃ ॥
ಅನುವಾದ
ರಾಜನೇ! ಈ ಯಜ್ಞವನ್ನು ಇಲ್ಲಿಗೆ ನಿಲ್ಲಿಸು. ಇದರ ಕಾರಣದಿಂದ ಇಂದ್ರನು ನಡೆಸಿದ ಪಾಖಂಡಗಳಿಂದ ಧರ್ಮದ ನಾಶವಾಗುತ್ತಾ ಇದೆ. ಏಕೆಂದರೆ, ದೇವತೆಗಳಲ್ಲಿ ತುಂಬಾ ದುರಾಗ್ರಹವಿರುತ್ತದೆ. ॥35॥
(ಶ್ಲೋಕ - 36)
ಮೂಲಮ್
ಏಭಿರಿಂದ್ರೋಪಸಂಸೃಷ್ಟೈಃ ಪಾಖಂಡೈರ್ಹಾರಿಭಿರ್ಜನಮ್ ।
ಹ್ರಿಯಮಾಣಂ ವಿಚಕ್ಷ್ವೈನಂ ಯಸ್ತೇ ಯಜ್ಞಧ್ರುಗಶ್ವಮುಟ್ ॥
ಅನುವಾದ
ಇಂದ್ರನು ಕುದುರೆಯನ್ನು ಅಪಹರಿಸಿ ನಿನ್ನ ಯಜ್ಞದಲ್ಲಿ ವಿಘ್ನವನ್ನು ಮಾಡುತ್ತಿದ್ದಾಗ ಅವನಿಂದ ರಚಿಸಲ್ಪಟ್ಟ ಮನೋಹರ ಪಾಖಂಡಗಳ ಕಡೆಗೆ ಜನರ ಮನಸ್ಸು ಸೆಳೆಯಲ್ಪಡುತ್ತಿದೆ ನೋಡು. ॥36॥
(ಶ್ಲೋಕ - 37)
ಮೂಲಮ್
ಭವಾನ್ಪರಿತ್ರಾತುಮಿಹಾವತೀರ್ಣೋ
ಧರ್ಮಂ ಜನಾನಾಂ ಸಮಯಾನುರೂಪಮ್ ।
ವೇನಾಪಚಾರಾದವಲುಪ್ತಮದ್ಯ
ತದ್ದೇಹತೋ ವಿಷ್ಣು ಕಲಾಸಿ ವೈನ್ಯ ॥
ಅನುವಾದ
ನೀನು ಸಾಕ್ಷಾತ್ ಮಹಾ ವಿಷ್ಣುವಿನ ಅಂಶನೇ ಆಗಿರುವೆ. ವೇನನ ದುರಾಚರಣೆಯಿಂದ ಧರ್ಮವು ಲೋಪವಾಗುತ್ತಿರುವಾಗ ಸಮಯೋಚಿತವಾದ ಧರ್ಮವನ್ನು ರಕ್ಷಿಸಲಿಕ್ಕಾಗಿಯೇ ನೀನು ಅವನ ಶರೀರದಿಂದ ಅವತರಿಸಿರುವೆ. ॥37॥
(ಶ್ಲೋಕ - 38)
ಮೂಲಮ್
ಸ ತ್ವಂ ವಿಮೃಶ್ಯಾಸ್ಯ ಭವಂ ಪ್ರಜಾಪತೇ
ಸಂಕಲ್ಪನಂ ವಿಶ್ವಸೃಜಾಂ ಪಿಪೀಪೃಹಿ ।
ಐಂದ್ರೀಂ ಚ ಮಾಯಾಮುಪಧರ್ಮಮಾತರಂ
ಪ್ರಚಂಡ ಪಾಖಂಡ ಪಥಂ ಪ್ರಭೋ ಜಹಿ ॥
ಅನುವಾದ
ಆದ್ದರಿಂದ ಪ್ರಜಾಪಾಲಕನಾದ ಪೃಥುವೇ! ಈ ನಿನ್ನ ಅವತಾರದ ಉದ್ದೇಶವನ್ನು ವಿಚಾರಮಾಡಿ ಭೃಗುವೇ ಮುಂತಾದ ವಿಶ್ವ ರಚಿತವಾದ ಮುನೀಶ್ವರರ ಸಂಕಲ್ಪವನ್ನು ಪೂರ್ಣಗೊಳಿಸು. ಈ ಪ್ರಚಂಡವಾದ ಪಾಖಂಡಮಾರ್ಗವೆಂಬ ಇಂದ್ರನ ಮಾಯೆಯು ಅಧರ್ಮದ ಜನನಿಯಾಗಿದೆ. ನೀನು ಅದನ್ನು ನಾಶಮಾಡಿಬಿಡು. ॥38॥
(ಶ್ಲೋಕ - 39)
ಮೂಲಮ್ (ವಾಚನಮ್)
ಮೈತ್ರೇಯ ಉವಾಚ
ಮೂಲಮ್
ಇತ್ಥಂ ಸ ಲೋಕಗುರುಣಾ ಸಮಾದಿಷ್ಟೋ ವಿಶಾಂಪತಿಃ ।
ತಥಾ ಚ ಕೃತ್ವಾ ವಾತ್ಸಲ್ಯಂ ಮಘೋನಾಪಿ ಚ ಸಂದಧೇ ॥
ಅನುವಾದ
ಶ್ರೀಮೈತ್ರೇಯರು ಹೇಳುತ್ತಾರೆ — ಲೋಕಗುರುವಾದ ಭಗವಾನ್ ಬ್ರಹ್ಮದೇವರು ಹೀಗೆ ತಿಳಿವಳಿಕೆ ನೀಡಿದ ಬಳಿಕ ಪ್ರಬಲ ಪರಾಕ್ರಮಿ ಮಹಾರಾಜ ಪೃಥುವು ಯಜ್ಞದ ಆಗ್ರಹವನ್ನು ಬಿಟ್ಟು ಬಿಟ್ಟನು ಮತ್ತು ಇಂದ್ರನೊಂದಿಗೆ ಪ್ರೀತಿಯಿಂದ ಸಂಧಿಮಾಡಿಕೊಂಡನು. ॥39॥
(ಶ್ಲೋಕ - 40)
ಮೂಲಮ್
ಕೃತಾವಭೃಥಸ್ನಾನಾಯ ಪೃಥವೇ ಭೂರಿಕರ್ಮಣೇ ।
ವರಾಂದದುಸ್ತೇ ವರದಾ ಯೇ ತದ್ಬರ್ಹಿಷಿ ತರ್ಪಿತಾಃ ॥
ಅನುವಾದ
ಇದಾದನಂತರ ರಾಜನು ಯಜ್ಞಾಂತ ಸ್ನಾನವನ್ನು ಮಾಡಿ ನಿವೃತ್ತನಾದಾಗ ಅವನ ಯಜ್ಞದಿಂದ ತೃಪ್ತರಾದ ದೇವತೆಗಳು ಅವನಿಗೆ ಅಭೀಷ್ಟವಾದ ವರಗಳನ್ನು ಅನುಗ್ರಹಿಸಿದರು. ॥40॥
(ಶ್ಲೋಕ - 41)
ಮೂಲಮ್
ವಿಪ್ರಾಃ ಸತ್ಯಾಶಿಷಸ್ತುಷ್ಟಾಃ ಶ್ರದ್ಧಯಾ ಲಬ್ಧ ದಕ್ಷಿಣಾಃ ।
ಆಶಿಷೋ ಯುಯುಜುಃ ಕ್ಷತ್ತರಾದಿರಾಜಾಯ ಸತ್ಕೃತಾಃ ॥
ಅನುವಾದ
ಆದಿ ರಾಜನಾದ ಪೃಥುವು ಅತ್ಯಂತ ಶ್ರದ್ಧೆಯಿಂದ ಬ್ರಾಹ್ಮಣರಿಗೆ ದಕ್ಷಿಣೆಗಳನ್ನು ಕೊಟ್ಟನು. ಬ್ರಾಹ್ಮಣರು ಆತನ ಸತ್ಕಾರಗಳಿಂದ ಸಂತೋಷಗೊಂಡು ಅವನಿಗೆ ಅಮೋಘವಾದ ಆಶೀರ್ವಾದಗಳನ್ನು ನೀಡಿದರು. ॥41॥
(ಶ್ಲೋಕ - 42)
ಮೂಲಮ್
ತ್ವಯಾಹೂತಾ ಮಹಾಬಾಹೋ ಸರ್ವ ಏವ ಸಮಾಗತಾಃ ।
ಪೂಜಿತಾ ದಾನಮಾನಾಭ್ಯಾಂ ಪಿತೃ ದೇವರ್ಷಿಮಾನವಾಃ ॥
ಅನುವಾದ
ಹಾಗೂ ಹೇಳಿದರು ‘‘ಓ ಮಹಾಬಾಹುವೇ! ನಿನ್ನ ಆಹ್ವಾನದಂತೆ ಆಗಮಿಸಿದ್ದ ಪಿತೃಗಳು, ದೇವತೆಗಳು, ಮನುಷ್ಯರು ಮುಂತಾದವರೆಲ್ಲರೂ ದಾನ-ಮಾನಗಳಿಂದ ಚೆನ್ನಾಗಿ ಸತ್ಕರಿಸಲ್ಪಟ್ಟರು’’ ಎಂದು ಆತನನ್ನು ಅಭಿನಂದಿಸಿದರು. ॥42॥
ಅನುವಾದ (ಸಮಾಪ್ತಿಃ)
ಹತ್ತೊಂಭತ್ತನೆಯ ಅಧ್ಯಾಯವು ಮುಗಿಯಿತು. ॥19॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಚತುರ್ಥಸ್ಕಂಧೇ ಪೃಥುವಿಜಯೇ ಏಕೋನವಿಂಶೋಽಧ್ಯಾಯಃ ॥19॥