[ಹದಿನೆಂಟನೆಯ ಅಧ್ಯಾಯ]
ಭಾಗಸೂಚನಾ
ಗೋರೂಪವಾದ ಭೂದೇವಿಯಿಂದ ಹಾಲನ್ನು ಕರೆದುದು
(ಶ್ಲೋಕ - 1)
ಮೂಲಮ್ (ವಾಚನಮ್)
ಮೈತ್ರೇಯ ಉವಾಚ
ಮೂಲಮ್
ಇತ್ಥಂ ಪೃಥುಮಭಿಷ್ಟೂಯ ರುಷಾ ಪ್ರಸ್ಫುರಿತಾಧರಮ್ ।
ಪುನರಾಹಾವನಿರ್ಭೀತಾ ಸಂಸ್ತಭ್ಯಾತ್ಮಾನಮಾತ್ಮನಾ ॥
ಅನುವಾದ
ಶ್ರೀಮೈತ್ರೇಯರು ಹೇಳುತ್ತಾರೆ — ಎಲೈ ವಿದುರನೇ! ಕೋಪದಿಂದ ತುಟಿಗಳು ಅದುರುತ್ತಿದ್ದ ಪೃಥುರಾಜನನ್ನು ಭೂದೇವಿಯು ಹೀಗೆ ಸ್ತೋತ್ರಮಾಡಿದರೂ ಭಯವು ಹೋಗದಿರಲು ತನ್ನನ್ನು ತಾನೇ ಸಮಾಧಾನಮಾಡಿಕೊಂಡು ಪುನಃ ಅವನಲ್ಲಿ ಹೀಗೆಂದಳು- ॥1॥
(ಶ್ಲೋಕ - 2)
ಮೂಲಮ್
ಸಂನಿಯಚ್ಛಾಭಿಭೋ ಮನ್ಯುಂ ನಿಬೋಧ ಶ್ರಾವಿತಂ ಚ ಮೇ ।
ಸರ್ವತಃ ಸಾರಮಾದತ್ತೇ ಯಥಾ ಮಧುಕರೋ ಬುಧಃ ॥
ಅನುವಾದ
ರಾಜೇಂದ್ರನೇ! ಕೋಪವನ್ನು ಉಪಸಂಹಾರಮಾಡು. ನನ್ನ ವಿಜ್ಞಾಪನೆಯನ್ನು ಲಾಲಿಸು. ಬುದ್ಧಿವಂತರಾದವರು ದುಂಬಿಯಂತೆ ಎಲ್ಲ ಕಡೆಗಳಿಂದಲೂ ಸಾರವನ್ನು ಗ್ರಹಿಸಿಕೊಳ್ಳಬಲ್ಲರು. ॥2॥
(ಶ್ಲೋಕ - 3)
ಮೂಲಮ್
ಅಸ್ಮಿಲ್ಲೋಕೇಥವಾಮುಷ್ಮಿನ್ಮುನಿಭಿಸ್ತತ್ತ್ವದರ್ಶಿಭಿಃ ।
ದೃಷ್ಟಾ ಯೋಗಾಃ ಪ್ರಯುಕ್ತಾಶ್ಚ ಪುಂಸಾಂ ಶ್ರೇಯಃಪ್ರಸಿದ್ಧಯೇ ॥
ಅನುವಾದ
ತತ್ತ್ವದರ್ಶಿಗಳಾದ ಮುನಿಗಳು ಈ ಲೋಕದಲ್ಲೂ ಮತ್ತು ಪರಲೋಕದಲ್ಲೂ ಮನುಷ್ಯರಿಗೆ ಶ್ರೇಯಸ್ಸನ್ನುಂಟು ಮಾಡಲು ಕೃಷಿ, ಅಗ್ನಿಹೋತ್ರ ಮುಂತಾದ ಅನೇಕ ಉಪಾಯಗಳನ್ನು ಕಂಡುಹಿಡಿದಿರುವರು. ಅವು ಉಪಯೋಗಿಯಾಗಿವೆ.॥3॥
(ಶ್ಲೋಕ - 4)
ಮೂಲಮ್
ತಾನಾತಿಷ್ಠತಿ ಯಃ ಸಮ್ಯಗುಪಾಯಾನ್ಪೂರ್ವದರ್ಶಿತಾನ್ ।
ಅವರಃ ಶ್ರದ್ಧಯೋಪೇತ ಉಪೇಯಾನ್ವಿಂದತೇಂಜಸಾ ॥
ಆ ಪ್ರಾಚೀನ ಋಷಿಗಳು ತೋರಿಸಿಕೊಟ್ಟ ಉಪಾಯಗಳನ್ನು ಈಗಲೂ ಶ್ರದ್ಧೆಯಿಂದ ಚೆನ್ನಾಗಿ ಆಚರಿಸಿದ ಮನುಷ್ಯರು ಸುಲಭವಾಗಿ ಇಷ್ಟಾರ್ಥ ಸಿದ್ಧಿಯನ್ನು ಪಡೆದುಕೊಳ್ಳುವರು. ॥4॥
(ಶ್ಲೋಕ - 5)
ಮೂಲಮ್
ತಾನನಾದೃತ್ಯ ಯೋವಿದ್ವಾನರ್ಥಾನಾರಭತೇ ಸ್ವಯಮ್ ।
ತಸ್ಯ ವ್ಯಭಿಚರಂತ್ಯರ್ಥಾ ಆರಬ್ಧಾಶ್ಚ ಪುನಃ ಪುನಃ ॥
ಅನುವಾದ
ಆದರೆ ಅಜ್ಞಾನಿಯಾದವನು ಅವನ್ನು ಆದರಿಸದೆಯೇ ತನ್ನ ಮನಸ್ಸಿಗೆ ತೋಚಿದ ಉಪಾಯಗಳನ್ನು ಆಶ್ರಯಿಸುತ್ತಾನೆಯೋ ಅವನ ಎಲ್ಲ ಉಪಾಯಗಳು, ಪ್ರಯತ್ನಗಳು ಪದೇ-ಪದೇ ನಿಷ್ಪಲವಾಗುತ್ತಾ ಇರುತ್ತವೆ. ॥5॥
(ಶ್ಲೋಕ - 6)
ಮೂಲಮ್
ಪುರಾ ಸೃಷ್ಟಾ ಹ್ಯೋಷಧಯೋ ಬ್ರಹ್ಮಣಾ ಯಾ ವಿಶಾಂಪತೇ ।
ಭುಜ್ಯಮಾನಾ ಮಯಾ ದೃಷ್ಟಾ ಅಸದ್ಭಿರಧೃತವ್ರತೈಃ ॥
ಅನುವಾದ
ಎಲೈ ರಾಜನೇ! ಹಿಂದೆ ಬ್ರಹ್ಮದೇವರು ಪ್ರಾಣಿಗಳ ಆಹಾರಕ್ಕಾಗಿ ಸೃಷ್ಟಿಮಾಡಿದ ಧಾನ್ಯಗಳನ್ನು ಯಮ-ನಿಯಮಾದಿ ವ್ರತ ಗಳನ್ನು ಆಚರಿಸದ ದುರಾಚಾರಿಗಳು ತಿನ್ನುತ್ತಾ ಇರುವುದನ್ನು ನಾನು ನೋಡಿದ್ದೇನೆ. ॥6॥
(ಶ್ಲೋಕ - 7)
ಮೂಲಮ್
ಅಪಾಲಿತಾನಾದೃತಾ ಚ
ಭವದ್ಭಿರ್ಲೋಕಪಾಲಕೈಃ ।
ಚೋರೀಭೂತೇಥ ಲೋಕೇಹಂ
ಯಜ್ಞಾರ್ಥೇಗ್ರಸಮೋಷಧೀಃ ॥
ಅನುವಾದ
ಲೋಕಪಾಲನೆಯ ಹೊಣೆಯನ್ನು ಹೊತ್ತಿರುವ ನಿಮ್ಮಂತಹ ರಾಜರು ನನ್ನನ್ನು ಪಾಲಿಸುವುದನ್ನು, ಆದರಿಸುವುದನ್ನು ಬಿಟ್ಟುಬಿಟ್ಟರು. ಅದರಿಂದ ಎಲ್ಲ ಜನರು ಕಳ್ಳರಂತೆ ಆಗಿದ್ದಾರೆ. ಅದರಿಂದಲೇ ನಾನು ಮುಂದೆ ಯಜ್ಞಾದಿಗಳಿಗೆ ಒದಗಿಬರಲೆಂದು ಉಳಿದ ಔಷಧಿ-ಬೀಜಗಳನ್ನು ಅಡಗಿಸಿಬಿಟ್ಟಿರುವೆನು. ॥7॥
(ಶ್ಲೋಕ - 8)
ಮೂಲಮ್
ನೂನಂ ತಾ ವೀರುಧಃ ಕ್ಷೀಣಾ ಮಯಿ ಕಾಲೇನ ಭೂಯಸಾ ।
ತತ್ರ ಯೋಗೇನ ದೃಷ್ಟೇನ ಭವಾನಾದಾತುಮರ್ಹತಿ ॥
ಅನುವಾದ
ಈಗ ಬಹಳ ಕಾಲವು ಕಳೆದುಹೋದುದರಿಂದ ಆ ಧಾನ್ಯಗಳೆಲ್ಲ ನನ್ನ ಹೊಟ್ಟೆಯಲ್ಲೇ ಜೀರ್ಣವಾಗಿಹೋಗಿವೆ. ಅವುಗಳನ್ನು ನೀನೀಗ ಹಿಂದಿನ ಆಚಾರ್ಯರು ಹೇಳಿದ ಉಪಾಯಗಳಿಂದ ಪಡೆದುಕೊಳ್ಳಬಹುದು. ॥8॥
(ಶ್ಲೋಕ - 9)
ಮೂಲಮ್
ವತ್ಸಂ ಕಲ್ಪಯ ಮೇ ವೀರ
ಯೇನಾಹಂ ವತ್ಸಲಾ ತವ ।
ಧೋಕ್ಷ್ಯೇ ಕ್ಷೀರಮಯಾನ್ ಕಾಮಾ-
ನನುರೂಪಂ ಚ ದೋಹನಮ್ ॥
(ಶ್ಲೋಕ - 10)
ಮೂಲಮ್
ದೋಗ್ಧಾರಂ ಚ ಮಹಾಬಾಹೋ ಭೂತಾನಾಂ ಭೂತಭಾವನ ।
ಅನ್ನಮೀಪ್ಸಿತಮೂರ್ಜಸ್ವದ್ಭಗವಾನ್ ವಾಂಛತೇ ಯದಿ ॥
ಅನುವಾದ
ಎಲೈ ಲೋಕಪಾಲನಾದ ವೀರನೇ! ಈಗ ನಿನಗೆ ಸಕಲಲೋಕಗಳಿಗೂ ಇಷ್ಟವಾಗಿ ಹಿತಕರವಾಗಿರುವ ಅನ್ನವನ್ನು ದೊರಕಿಸಿಕೊಡುವ ಬಯಕೆಯಿದ್ದರೆ ನನಗೆ ಯೋಗ್ಯವಾದ ಕರುವನ್ನು, ಹಾಲುಕರೆಯುವ ಪಾತ್ರೆ ಯನ್ನು, ಹಾಲುಕರೆಯುವವರನ್ನು ಏರ್ಪಡಿಸು. ಆ ಕರುವಿನ ಮೇಲಿನ ವಾತ್ಸಲ್ಯದಿಂದಾಗಿ ನಾನು ಹಾಲಿನ ರೂಪದಲ್ಲಿ ನಿನಗೆ ನಿನ್ನ ಎಲ್ಲ ಇಷ್ಟಾರ್ಥವನ್ನು ಈಡೇರಿಸಿಕೊಡುವೆನು. ॥9-10॥
(ಶ್ಲೋಕ - 11)
ಮೂಲಮ್
ಸಮಾಂ ಚ ಕುರು ಮಾಂ ರಾಜನ್ದೇವವೃಷ್ಟಂ ಯಥಾ ಪಯಃ ।
ಅಪರ್ತಾವಪಿ ಭದ್ರಂ ತೇ ಉಪಾವರ್ತೇತ ಮೇ ವಿಭೋ ॥
ಅನುವಾದ
ರಾಜನೇ! ಇನ್ನೊಂದು ಮಾತಿದೆ. ನೀನು ನನ್ನನ್ನು ಹಳ್ಳ-ತಿಟ್ಟುಗಳಿಲ್ಲದೆ ಸಮತಲವಾಗಿಸಬೇಕು. ಅದರಿಂದ ಇಂದ್ರನು ಸುರಿಸಿದ ಮಳೆಯ ನೀರು ವರ್ಷಾಕಾಲವು ಕಳೆದಹೋದ ಬಳಿಕವು ಎಲ್ಲ ಕಡೆಗಳಲ್ಲಿ ಉಳಿಯುವುದು. ನನ್ನೊಳಗಿನ ತೇವವು ಒಣಗಿಹೋಗದು. ನೀನು ಹೀಗೆ ಮಾಡಿದರೆ ನಿನಗೆ ತುಂಬಾ ಒಳ್ಳೆಯದಾಗಬಹುದು. ॥11॥
(ಶ್ಲೋಕ - 12)
ಮೂಲಮ್
ಇತಿ ಪ್ರಿಯಂ ಹಿತಂ ವಾಕ್ಯಂ ಭುವ ಆದಾಯ ಭೂಪತಿಃ ।
ವತ್ಸಂ ಕೃತ್ವಾ ಮನುಂ ಪಾಣಾವದುಹತ್ಸಕಲೌಷಧೀಃ ॥
ಅನುವಾದ
ಭೂದೇವಿಯು ಹೇಳಿದ ಪ್ರಿಯವೂ, ಹಿತಕರವೂ ಆದ ಮಾತನ್ನು ಪೃಥುಮಹಾರಾಜನು ಸ್ವೀಕರಿಸಿ, ಸ್ವಾಯಂಭುವ ಮನುವನ್ನೇ ಕರುವಾಗಿಸಿಕೊಂಡು ಗೋರೂಪಿಣಿಯಾಗಿದ್ದ ಭೂದೇವಿಯಿಂದ ತನ್ನ ಕೈಗಳಲ್ಲೇ ಎಲ್ಲ ಧಾನ್ಯಗಳನ್ನು ಕರೆದುಕೊಂಡನು. ॥12॥
(ಶ್ಲೋಕ - 13)
ಮೂಲಮ್
ತಥಾ ಪರೇ ಚ ಸರ್ವತ್ರ ಸಾರಮಾದದತೇ ಬುಧಾಃ ।
ತತೋನ್ಯೇಚ ಯಥಾಕಾಮಂ ದುದುಹುಃ ಪೃಥುಭಾವಿತಾಮ್ ॥
ಅನುವಾದ
ಹಾಗೆಯೇ ಪೃಥುವಿನಂತೆ ತಿಳಿವಳಿಕೆಯುಳ್ಳ ಇತರ ಎಲ್ಲ ಜನರೂ ಎಲ್ಲ ಕಡೆಗಳಿಂದ ಸಾರವನ್ನು ಪರಿಗ್ರಹಿಸಿದರು. ಅವರು ಪೃಥು ರಾಜನ ಮೂಲಕ ವಶಪಡಿಸಿ ಕೊಂಡ ಭೂಮಿಯಿಂದ ತಮ್ಮ-ತಮ್ಮ ಇಷ್ಟಾರ್ಥಗಳನ್ನು ಕರೆದುಕೊಂಡರು. ॥13॥
(ಶ್ಲೋಕ - 14)
ಮೂಲಮ್
ಋಷಯೋ ದುದುಹುರ್ದೇವೀಮಿಂದ್ರಿಯೇಷ್ವಥ ಸತ್ತಮ ।
ವತ್ಸಂ ಬೃಹಸ್ಪತಿಂ ಕೃತ್ವಾ ಪಯಶ್ಛಂದೋಮಯಂ ಶುಚಿ ॥
ಅನುವಾದ
ಋಷಿಗಳು ಬೃಹಸ್ಪತಿಯನ್ನು ಕರುವನ್ನಾಗಿ ಮಾಡಿಕೊಂಡು ಇಂದ್ರಿಯ (ವಾಣಿ, ಮನಸ್ಸು, ಶ್ರೋತೃ) ರೂಪವಾದ ಪಾತ್ರೆಯಲ್ಲಿ ವೇದರೂಪವಾದ, ಪವಿತ್ರವಾದ ಕ್ಷೀರವನ್ನು ಕರೆದುಕೊಂಡರು. ॥14॥
(ಶ್ಲೋಕ - 15)
ಮೂಲಮ್
ಕೃತ್ವಾ ವತ್ಸಂ ಸುರಗಣಾ ಇಂದ್ರಂ ಸೋಮಮದೂದುಹನ್ ।
ಹಿರಣ್ಮಯೇನ ಪಾತ್ರೇಣ ವೀರ್ಯಮೋಜೋ ಬಲಂ ಪಯಃ ॥
ಅನುವಾದ
ದೇವತೆಗಳು ಇಂದ್ರನನ್ನು ಕರುವನ್ನಾಗಿಸಿ ಸುವರ್ಣಮಯ ಪಾತ್ರದಲ್ಲಿ ಸೋಮರಸ (ಅಮೃತ), ವೀರ್ಯ (ಮನೋಬಲ), ಓಜ (ಇಂದ್ರಿಯ ಬಲ) ಮತ್ತು ಶಾರೀರಿಕ ಬಲರೂಪವಾದ ಹಾಲನ್ನು ಕರೆದುಕೊಂಡರು. ॥15॥
(ಶ್ಲೋಕ - 16)
ಮೂಲಮ್
ದೈತೇಯಾ ದಾನವಾ ವತ್ಸಂ ಪ್ರಹ್ಲಾದಮಸುರರ್ಷಭಮ್ ।
ವಿಧಾಯಾದೂದುಹನ್ ಕ್ಷೀರಮಯಃಪಾತ್ರೇ ಸುರಾಸವಮ್ ॥
ಅನುವಾದ
ದೈತ್ಯರು ಮತ್ತು ದಾನವರು ಅಸುರಶ್ರೇಷ್ಠನಾದ ಪ್ರಹ್ಲಾದನನ್ನು ಕರುವಾಗಿಸಿ ಕೊಂಡು ಕಬ್ಬಿಣದ ಪಾತ್ರೆಯಲ್ಲಿ ಮದಿರಾ ಮತ್ತು ಆಸವ(ಸುರೆ) ಮುಂತಾದ ಮದ್ಯಗಳನ್ನು ಹಾಲನ್ನಾಗಿ ಕರೆದುಕೊಂಡರು. ॥16॥
(ಶ್ಲೋಕ - 17)
ಮೂಲಮ್
ಗಂಧರ್ವಾಪ್ಸರಸೋಧುಕ್ಷನ್ಪಾತ್ರೇ ಪದ್ಮಮಯೇ ಪಯಃ ।
ವತ್ಸಂ ವಿಶ್ವಾವಸುಂ ಕೃತ್ವಾ ಗಾಂಧರ್ವಂ ಮಧು ಸೌಭಗಮ್ ॥
ಅನುವಾದ
ಗಂಧರ್ವರು ಮತ್ತು ಅಪ್ಸರೆಯರು ವಿಶ್ವಾವಸುವನ್ನು ಕರುವಾಗಿಸಿಕೊಂಡು ಕಮಲರೂಪವಾದ ಪಾತ್ರೆಯಲ್ಲಿ ಸಂಗೀತಮಾಧುರ್ಯ ಹಾಗೂ ಸೌಂದರ್ಯ ರೂಪವಾದ ಹಾಲನ್ನು ಕರೆದುಕೊಂಡರು. ॥17॥
(ಶ್ಲೋಕ - 18)
ಮೂಲಮ್
ವತ್ಸೇನ ಪಿತರೋರ್ಯಮ್ಣಾ ಕವ್ಯಂ ಕ್ಷೀರಮಧುಕ್ಷತ ।
ಆಮಪಾತ್ರೇ ಮಹಾಭಾಗಾಃ ಶ್ರದ್ಧಯಾ ಶ್ರಾದ್ಧದೇವತಾಃ ॥
ಅನುವಾದ
ಶ್ರಾದ್ಧದ ಅಧಿಷ್ಠಾತೃದೇವತೆಗಳಾದ ಪಿತೃದೇವತೆಗಳು ಅರ್ಯಮನನ್ನು ಕರುವನ್ನಾಗಿಸಿಕೊಂಡು ಮಣ್ಣಿನ ಮಡಕೆಯಲ್ಲಿ ಕವ್ಯರೂಪವಾದ ಹಾಲನ್ನು ಹಿಂಡಿಕೊಂಡರು. ॥18॥
(ಶ್ಲೋಕ - 19)
ಮೂಲಮ್
ಪ್ರಕಲ್ಪ್ಯ ವತ್ಸಂ ಕಪಿಲಂ ಸಿದ್ಧಾಃ ಸಂಕಲ್ಪನಾಮಯೀಮ್ ।
ಸಿದ್ಧಿಂ ನಭಸಿ ವಿದ್ಯಾಂ ಚ ಯೇ ಚ ವಿದ್ಯಾಧರಾದಯಃ ॥
ಅನುವಾದ
ಅನಂತರ ಸಿದ್ಧರು ಕಪಿಲ ಮಹರ್ಷಿಗಳನ್ನು ಕರು ವನ್ನಾಗಿಸಿಕೊಂಡು ಆಕಾಶವೆಂಬ ಪಾತ್ರೆಯಲ್ಲಿ ಅಣಿಮಾದಿ ಅಷ್ಟಸಿದ್ಧಿಗಳನ್ನೂ ಹಾಗೆಯೇ ವಿದ್ಯಾಧರರು ಆಕಾಶ ಗಮನವೇ ಮುಂತಾದ ಸಿದ್ಧಿಗಳನ್ನು ಹಾಲನ್ನಾಗಿ ಪಡೆದುಕೊಂಡರು. ॥19॥
(ಶ್ಲೋಕ - 20)
ಮೂಲಮ್
ಅನ್ಯೇ ಚ ಮಾಯಿನೋ ಮಾಯಾ-
ಮಂತರ್ಧಾನಾದ್ಭುತಾತ್ಮನಾಮ್ ।
ಮಯಂ ಪ್ರಕಲ್ಪ್ಯ ವತ್ಸಂ ತೇ
ದುದುಹುರ್ಧಾರಣಾಮಯೀಮ್ ॥
ಅನುವಾದ
ಕಿಂಪುರುಷರೇ ಮುಂತಾದ ಇತರ ಮಾಯಾವಿಗಳು ಮಯ ದಾನವನನ್ನು ಕರುವನ್ನಾಗಿಸಿಕೊಂಡು ಅಂತರ್ಧಾನ ಹೊಂದುವಿಕೆ, ವಿಚಿತ್ರರೂಪವನ್ನು ಧರಿಸುವುದು ಮುಂತಾದ ಧಾರಣಾಶಕ್ತಿಯನ್ನು ಹಾಲನ್ನಾಗಿ ಗಳಿಸಿಕೊಂಡರು. ॥20॥
(ಶ್ಲೋಕ - 21)
ಮೂಲಮ್
ಯಕ್ಷರಕ್ಷಾಂಸಿ ಭೂತಾನಿ ಪಿಶಾಚಾಃ ಪಿಶಿತಾಶನಾಃ ।
ಭೂತೇಶವತ್ಸಾ ದುದುಹುಃ ಕಪಾಲೇ ಕ್ಷತಜಾಸವಮ್ ॥
ಅನುವಾದ
ಹೀಗೆಯೇ ಯಕ್ಷ-ರಾಕ್ಷಸ ಹಾಗೂ ಭೂತ-ಪಿಶಾಚಾದಿ ಮಾಂಸಾಹಾರಿಗಳು ಭೂತ ನಾಥನಾದ ರುದ್ರನನ್ನು ಕರುವನ್ನಾಗಿಸಿಕೊಂಡು ಕಪಾಲ (ತಲೆಬುರುಡೆ)ವೆಂಬ ಪಾತ್ರೆಯಲ್ಲಿ ರುಧಿರಾಸವರೂಪವಾದ ಹಾಲನ್ನು ಕರೆದುಕೊಂಡರು. ॥21॥
(ಶ್ಲೋಕ - 22)
ಮೂಲಮ್
ತಥಾಹಯೋ ದಂದಶೂಕಾಃ ಸರ್ಪಾ ನಾಗಾಶ್ಚ ತಕ್ಷಕಮ್ ।
ವಿಧಾಯ ವತ್ಸಂ ದುದುಹುರ್ಬಿಲಪಾತ್ರೇ ವಿಷಂ ಪಯಃ ॥
ಅನುವಾದ
ಹೆಡೆಯಿಲ್ಲದ ಹಾವುಗಳು, ಹೆಡೆಯುಳ್ಳ ಸರ್ಪಗಳು, ನಾಗಗಳು ಮತ್ತು ಚೇಳುಗಳು ಮುಂತಾದ ವಿಷಧರ ಪ್ರಾಣಿಗಳು ತಕ್ಷಕ ನನ್ನು ಕರುವನ್ನಾಗಿಸಿಕೊಂಡು ತಮ್ಮ-ತಮ್ಮ ಬಾಯಿಯೆಂಬ ಪಾತ್ರೆಯಲ್ಲಿ ವಿಷರೂಪವಾದ ಹಾಲನ್ನು ಹಿಂಡಿಕೊಂಡವು. ॥22॥
(ಶ್ಲೋಕ - 23)
ಮೂಲಮ್
ಪಶವೋ ಯವಸಂ ಕ್ಷೀರಂ ವತ್ಸಂ ಕೃತ್ವಾ ಚ ಗೋವೃಷಮ್ ।
ಅರಣ್ಯಪಾತ್ರೇ ಚಾಧುಕ್ಷನ್ಮೃಗೇಂದ್ರೇಣ ಚ ದಂಷ್ಟ್ರಿಣಃ ॥
(ಶ್ಲೋಕ - 24)
ಮೂಲಮ್
ಕ್ರವ್ಯಾದಾಃ ಪ್ರಾಣಿನಃ ಕ್ರವ್ಯಂ ದುದುಹುಃ ಸ್ವೇ ಕಲೇವರೇ ।
ಸುಪರ್ಣವತ್ಸಾ ವಿಹಗಾಶ್ಚರಂ ಚಾಚರಮೇವ ಚ ॥
ಅನುವಾದ
ಪಶುಗಳು ಭಗವಾನ್ ರುದ್ರದೇವರ ವಾಹನವಾದ ವೃಷಭನನ್ನು ಕರುವನ್ನಾಗಿ ಮಾಡಿಕೊಂಡು ಅರಣ್ಯವೆಂಬ ಪಾತ್ರೆಯಲ್ಲಿ ಹುಲ್ಲಿನ ರೂಪವಾದ ಹಾಲನ್ನು ಪಡೆದುಕೊಂಡರು. ದೊಡ್ಡ-ದೊಡ್ಡ ಕೋರೆದಾಡೆಗಳುಳ್ಳ ಮಾಂಸ ಭಕ್ಷಕ ಮೃಗಗಳು ಸಿಂಹವೆಂಬ ಕರುವನ್ನು ಮುಂದಿಟ್ಟುಕೊಂಡು ತಮ್ಮ ಶರೀರವೆಂಬ ಪಾತ್ರೆಯಲ್ಲಿ ಹಸಿಯ ಮಾಂಸವೆಂಬ ಹಾಲನ್ನು ಪಡೆದುಕೊಂಡರು. ಹಾಗೆಯೇ ಹಕ್ಕಿಗಳು ಗರುಡನನ್ನು ಕರುವಾಗಿಸಿಕೊಂಡು ಹುಳು-ಹುಪ್ಪಟೆ ಮುಂತಾದ ಚರಪದಾರ್ಥಗಳನ್ನು, ಹಣ್ಣು ಮುಂತಾದ ಸ್ಥಿರಪದಾರ್ಥಗಳನ್ನು ಹಾಲಿನರೂಪದಲ್ಲಿ ಹಿಂಡಿಕೊಂಡವು. ॥23-24॥
(ಶ್ಲೋಕ - 25)
ಮೂಲಮ್
ವಟವತ್ಸಾ ವನಸ್ಪತಯಃ ಪೃಥಗ್ರಸಮಯಂ ಪಯಃ ।
ಗಿರಯೋ ಹಿಮವದ್ವತ್ಸಾ ನಾನಾಧಾತೂನ್ಸ್ವ ಸಾನುಷು ॥
ಅನುವಾದ
ವೃಕ್ಷಗಳು ಆಲದಮರವನ್ನು ಕರುವನ್ನಾಗಿಸಿಕೊಂಡು ನಾನಾರಸರೂಪವಾದ ಹಾಲನ್ನು ಕರೆದುಕೊಂಡವು. ಪರ್ವತಗಳು ಹಿಮಾಲಯವನ್ನು ಕರುವನ್ನಾಗಿ ಮಾಡಿಕೊಂಡು ತಮ್ಮ ಶಿಖರಗಳೆಂಬ ಪಾತ್ರೆಯಲ್ಲಿ ಅನೇಕ ಪ್ರಕಾರದ ಧಾತುಗಳನ್ನು ಪಡೆದುಕೊಂಡವು. ॥25॥
(ಶ್ಲೋಕ - 26)
ಮೂಲಮ್
ಸರ್ವೇ ಸ್ವಮುಖ್ಯವತ್ಸೇನ
ಸ್ವೇ ಸ್ವೇ ಪಾತ್ರೇ ಪೃಥಕ್ಪಯಃ ।
ಸರ್ವಕಾಮದುಘಾಂ ಪೃಥ್ವೀಂ
ದುದುಹುಃ ಪೃಥುಭಾವಿತಾಮ್ ॥
ಅನುವಾದ
ಪೃಥ್ವಿಯಾದರೋ ಬಯಸಿದ ವಸ್ತುಗಳನ್ನು ಕೊಡು ವಂತಹವಳು. ಈಗ ಅವಳು ಪೃಥುರಾಜನ ಅಧೀನದಲ್ಲಿ ದ್ದಳು. ಆದ್ದರಿಂದ ಅವಳಿಂದ ಎಲ್ಲರೂ ತಮ್ಮ-ತಮ್ಮ ವರ್ಗದ ಮುಖ್ಯನಾಯಕನನ್ನು ಕರುವನ್ನಾಗಿಸಿಕೊಂಡು ಬೇರೆ-ಬೇರೆ ಪಾತ್ರೆಗಳಲ್ಲಿ ಬಗೆ-ಬಗೆಯ ಪದಾರ್ಥಗಳನ್ನು ಹಾಲಿನ ರೂಪದಲ್ಲಿ ಹಿಂಡಿಕೊಂಡರು. ॥26॥
(ಶ್ಲೋಕ - 27)
ಮೂಲಮ್
ಏವಂ ಪೃಥ್ವಾದಯಃ ಪೃಥ್ವೀಮನ್ನಾದಾಃ ಸ್ವನ್ನಮಾತ್ಮನಃ ।
ದೋಹವತ್ಸಾದಿಭೇದೇನ ಕ್ಷೀರಭೇದಂ ಕುರೂದ್ವಹ ॥
ಅನುವಾದ
ಕುರುಶ್ರೇಷ್ಠ ವಿದುರನೇ! ಹೀಗೆ ಪೃಥುಮಹಾರಾಜನೇ ಮೊದಲ್ಗೊಂಡು ಅನ್ನವನ್ನು ತಿನ್ನುವ ಎಲ್ಲ ಜೀವಿಗಳು ನಾನಾಪ್ರಕಾರದ ಕರು ಮತ್ತು ಪಾತ್ರೆ ಇವುಗಳ ಮೂಲಕವಾಗಿ ತಮ್ಮ-ತಮ್ಮ ಬೇರೆ-ಬೇರೆ ಅನ್ನರೂಪವಾದ ಹಾಲನ್ನು ಭೂದೇವಿಯಿಂದ ಹಿಂಡಿಕೊಂಡರು. ॥27॥
(ಶ್ಲೋಕ - 28)
ಮೂಲಮ್
ತತೋ ಮಹೀಪತಿಃ ಪ್ರೀತಃ ಸರ್ವಕಾಮದುಘಾಂ ಪೃಥುಃ ।
ದುಹಿತೃತ್ವೇ ಚಕಾರೇಮಾಂ ಪ್ರೇಮ್ಣಾ ದುಹಿತೃವತ್ಸಲಃ ॥
ಅನುವಾದ
ಅದರಿಂದ ಮಹಾರಾಜಾ ಪೃಥುವಿಗೆ ಬಹಳ ಸಂತೋಷವಾಗಿ ಸರ್ವ ಕಾಮನೆಗಳನ್ನು ಕರೆಯುವ ಪೃಥಿವಿಯಲ್ಲಿ ಪುತ್ರಿಯಂತೆ ಪ್ರೀತಿ ಉಂಟಾಯಿತು. ಅವಳನ್ನು ತನ್ನ ಪುತ್ರಿಯಾಗಿಯೇ ಸ್ವೀಕರಿಸಿದನು. ॥28॥
(ಶ್ಲೋಕ - 29)
ಮೂಲಮ್
ಚೂರ್ಣಯನ್ ಸ್ವಧನುಷ್ಕೋಟ್ಯಾ ಗಿರಿಕೂಟಾನಿ ರಾಜರಾಟ್ ।
ಭೂಮಂಡಲಮಿದಂ ವೈನ್ಯಃ ಪ್ರಾಯಶ್ಚಕ್ರೇ ಸಮಂ ವಿಭುಃ ॥
ಅನುವಾದ
ಮತ್ತೆ ರಾಜಾಧಿರಾಜ ಪೃಥುವು ತನ್ನ ಧನುಷ್ಯದ ತುದಿಯಿಂದ ಪರ್ವತಗಳನ್ನು ಒಡೆದು ಈ ಇಡೀ ಭೂಮಂಡಲವನ್ನು ಬಹುಮಟ್ಟಿಗೆ ಸಮತಲವಾಗಿಸಿದನು. ॥29॥
(ಶ್ಲೋಕ - 30)
ಮೂಲಮ್
ಅಥಾಸ್ಮಿನ್ಭಗವಾನ್ ವೈನ್ಯಃ ಪ್ರಜಾನಾಂ ವೃತ್ತಿದಃ ಪಿತಾ ।
ನಿವಾಸಾನ್ ಕಲ್ಪಯಾಂಚಕ್ರೇ ತತ್ರ ತತ್ರ ಯಥಾರ್ಹತಃ ॥
ಅನುವಾದ
ಆ ವೇನಪುತ್ರನಾದ ಭಗವಾನ್ ಪೃಥುವು ತನ್ನ ಪ್ರಜೆಗಳಿಗೆ ತಂದೆಯಂತೆ ಇದ್ದು ಅವರ ಪಾಲನೆ- ಪೋಷಣೆಯ ವ್ಯವಸ್ಥೆಯಲ್ಲಿ ತೊಡಗಿದ್ದನು. ಅವನು ಸಮತಲವಾದ ಭೂಮಿಯಲ್ಲಿ ಪ್ರಜೆಗಳಿಗೆ ಅಲ್ಲಲ್ಲಿ ಯಥೋ ಚಿತವಾದ ವಾಸಸ್ಥಾನಗಳನ್ನು ವಿಭಾಗಿಸಿಕೊಟ್ಟನು. ॥30॥
(ಶ್ಲೋಕ - 31)
ಮೂಲಮ್
ಗ್ರಾಮಾನ್ ಪುರಃ ಪತ್ತನಾನಿ ದುರ್ಗಾಣಿ ವಿವಿಧಾನಿ ಚ ।
ಘೋಷಾನ್ವ್ರಜಾನ್ಸಶಿಬಿರಾನಾಕರಾನ್ಖೇಟಖರ್ವಟಾನ್ ॥
ಅನುವಾದ
ಅವರಿಗಾಗಿ ಅನೇಕ ಗ್ರಾಮಗಳು, ಪುರಗಳು, ಪಟ್ಟಣಗಳು, ದುರ್ಗಗಳು, ಗೊಲ್ಲರ ಊರು-ಕೇರಿಗಳು, ಗೋ ಶಾಲೆಗಳು, ಶಿಬಿರಗಳು, ಗಣಿಗಳು, ರೈತರ ಹಳ್ಳಿಗಳು, ಪರ್ವತ ತಪ್ಪಲುಗಳ ಹಳ್ಳಿಗಳು ಮುಂತಾದ ಬೇರೆ-ಬೇರೆ ವಾಸಸ್ಥಾನಗಳನ್ನು ಕಲ್ಪಿಸಿದನು. ॥31॥
(ಶ್ಲೋಕ - 32)
ಮೂಲಮ್
ಪ್ರಾಕ್ಪೃಥೋರಿಹ ನೈವೈಷಾ ಪುರಗ್ರಾಮಾದಿಕಲ್ಪನಾ ।
ಯಥಾಸುಖಂ ವಸಂತಿ ಸ್ಮ ತತ್ರ ತತ್ರಾಕುತೋಭಯಾಃ ॥
ಅನುವಾದ
ಮಹಾರಾಜಾ ಪೃಥುವಿನ ಆಳ್ವಿಕೆಗೆ ಮೊದಲು ಈ ಪೃಥಿವಿಯಲ್ಲಿ ಪುರ-ಗ್ರಾಮಾದಿಗಳ ವಿಭಾಗವಿರಲಿಲ್ಲ. ಎಲ್ಲ ಜನರೂ ತಮ್ಮ-ತಮ್ಮ ಅನುಕೂಲತೆ ಗನುಸಾರ ಅಡೆ-ತಡೆಯಿಲ್ಲದೆ ಅಲ್ಲಲ್ಲಿ ವಾಸಿಸುತ್ತಿದ್ದರು. (ಈಗ ಪೃಥುಮಹಾರಾಜನು ಏರ್ಪಡಿಸಿಕೊಟ್ಟ ವಾಸಸ್ಥಾನಗಳಲ್ಲಿ ಯಾವ ಭಯವೂ ಇಲ್ಲದೆ ಸಂತೋಷವಾಗಿ ವಾಸಿಸತೊಡಗಿದರು.) ॥32॥
ಅನುವಾದ (ಸಮಾಪ್ತಿಃ)
ಹದಿನೆಂಟನೆಯ ಅಧ್ಯಾಯವು ಮುಗಿಯಿತು. ॥18॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಚತುರ್ಥಸ್ಕಂಧೇ ಪೃಥುವಿಜಯೇಷ್ಟಾದಶೋಽಧ್ಯಾಯಃ ॥18॥