[ಹದಿನೇಳನೆಯ ಅಧ್ಯಾಯ]
ಭಾಗಸೂಚನಾ
ಪೃಥು ಮಹಾರಾಜನು ಭೂದೇವಿಯ ಮೇಲೆ ಕೋಪಗೊಂಡುದು; ಭೂದೇವಿಯು ಆತನನ್ನು ಸ್ತುತಿಸಿದುದು
(ಶ್ಲೋಕ - 1)
ಮೂಲಮ್ (ವಾಚನಮ್)
ಮೈತ್ರೇಯ ಉವಾಚ
ಮೂಲಮ್
ಏವಂ ಸ ಭಗವಾನ್ವೈನ್ಯಃ ಖ್ಯಾಪಿತೋ ಗುಣಕರ್ಮಭಿಃ ।
ಛಂದಯಾಮಾಸ ತಾನ್ಕಾಮೈಃ ಪ್ರತಿಪೂಜ್ಯಾಭಿನಂದ್ಯ ಚ ॥
ಅನುವಾದ
ಶ್ರೀಮೈತ್ರೇಯರು ಹೇಳುತ್ತಾರೆ — ಹೀಗೆ ವಂದಿ-ಮಾಗಧರು ತನ್ನ ಗುಣ ಮತ್ತು ಕರ್ಮಗಳೆಲ್ಲವನ್ನು ವರ್ಣಿಸಿ ಸ್ತೋತ್ರಮಾಡಿದಾಗ ಆ ಪೃಥುಮಹಾರಾಜನೂ ಅವರನ್ನು ಅಭಿನಂದಿಸಿ, ಇಷ್ಟವಾದ ವಸ್ತುಗಳನ್ನು ಕೊಟ್ಟು ಸಂತೋಷ ಪಡಿಸಿದನು. ॥1॥
(ಶ್ಲೋಕ - 2)
ಮೂಲಮ್
ಬ್ರಾಹ್ಮಣಪ್ರಮುಖಾನ್ ವರ್ಣಾನ್ ಭೃತ್ಯಾಮಾತ್ಯ ಪುರೋಧಸಃ ।
ಪೌರಾಂಜಾನಪದಾನ್ ಶ್ರೇಣೀಃ ಪ್ರಕೃತೀಃ ಸಮಪೂಜಯತ್ ॥
ಅನುವಾದ
ಹಾಗೆಯೇ ಬ್ರಾಹ್ಮಣರೇ ಮುಂತಾದ ನಾಲ್ಕುವರ್ಣದವರನ್ನೂ, ಸೇವಕರನ್ನೂ, ಮಂತ್ರಿಗಳನ್ನೂ, ಪುರೋಹಿತರನ್ನೂ, ಪುರಜನರನ್ನೂ, ದೇಶವಾಸಿಗಳನ್ನೂ, ಬೇರೆ-ಬೇರೆ ವ್ಯವಸಾಯದವರನ್ನೂ, ಇತರ ಪ್ರಜೆಗಳನ್ನೂ ಸತ್ಕರಿಸಿದನು. ॥2॥
(ಶ್ಲೋಕ - 3)
ಮೂಲಮ್ (ವಾಚನಮ್)
ವಿದುರ ಉವಾಚ
ಮೂಲಮ್
ಕಸ್ಮಾದ್ದಧಾರ ಗೋರೂಪಂ ಧರಿತ್ರೀ ಬಹುರೂಪಿಣೀ ।
ಯಾಂ ದುದೋಹ ಪೃಥುಸ್ತತ್ರ ಕೋ ವತ್ಸೋ ದೋಹನಂ ಚ ಕಿಮ್ ॥
ಅನುವಾದ
ವಿದುರನು ಕೇಳಿದನು — ಪೂಜ್ಯರೇ! ಪೃಥ್ವಿಯಾದರೋ ಅನೇಕ ರೂಪಗಳನ್ನು ತಾಳಬಲ್ಲವಳು. ಆಕೆಯು ಏತಕ್ಕಾಗಿ ಗೋವಿನ ರೂಪವನ್ನೇ ಧರಿಸಿದುದು? ಪೃಥು ಮಹಾರಾಜನು ಆಕೆಯನ್ನು ಕರೆದಾಗ ಕರು ಯಾರು ಆದರು? ಹಾಲು ಕರೆಯುವ ಪಾತ್ರೆ ಯಾವುದಿತ್ತು? ॥3॥
(ಶ್ಲೋಕ - 4)
ಮೂಲಮ್
ಪ್ರಕೃತ್ಯಾ ವಿಷಮಾ ದೇವೀ ಕೃತಾ ತೇನ ಸಮಾ ಕಥಮ್ ।
ತಸ್ಯ ಮೇಧ್ಯಂ ಹಯಂ ದೇವಃ ಕಸ್ಯ ಹೇತೋರಪಾಹರತ್ ॥
ಅನುವಾದ
ಪೃಥ್ವಿ ಯಾದರೋ ಮೊದಲಿನಿಂದಲೇ ಸ್ವಭಾವತಃ ಎತ್ತರ-ತಗ್ಗುಗಳಿಂದ ಕೂಡಿರುವುದೇ ಆಗಿತ್ತು. ಅವನು ಸಮತಲವಾಗಿ ಹೇಗೆ ಮಾಡಿದನು? ಇಂದ್ರನು ಅವನ ಯಜ್ಞಾಶ್ವವನ್ನು ಏಕೆ ಅಪಹರಿಸಿದನು? ॥4॥
(ಶ್ಲೋಕ - 5)
ಮೂಲಮ್
ಸನತ್ಕುಮಾರಾದ್ಭಗವತೋ ಬ್ರಹ್ಮನ್ ಬ್ರಹ್ಮವಿದುತ್ತಮಾತ್ ।
ಲಬ್ಧ್ವಾ ಜ್ಞಾನಂ ಸವಿಜ್ಞಾನಂ ರಾಜರ್ಷಿಃ ಕಾಂ ಗತಿಂ ಗತಃ ॥
ಅನುವಾದ
ಬ್ರಹ್ಮಜ್ಞಾನಿಗಳಲ್ಲಿ ಶ್ರೇಷ್ಠರಾದ ಸನತ್ಕುಮಾರರಿಂದ ಜ್ಞಾನ ಮತ್ತು ವಿಜ್ಞಾನವನ್ನು ಪಡೆದು ಆ ರಾಜರ್ಷಿಯು ಯಾವ ಗತಿಯನ್ನು ಹೊಂದಿದನು? ॥5॥
(ಶ್ಲೋಕ - 6)
ಮೂಲಮ್
ಯಚ್ಚಾನ್ಯದಪಿ ಕೃಷ್ಣಸ್ಯ ಭವಾನ್ ಭಗವತಃ ಪ್ರಭೋಃ ।
ಶ್ರವಃ ಸುಶ್ರವಸಃ ಪುಣ್ಯಂ ಪೂರ್ವದೇಹಕಥಾಶ್ರಯಮ್ ॥
(ಶ್ಲೋಕ - 7)
ಮೂಲಮ್
ಭಕ್ತಾಯ ಮೇನುರಕ್ತಾಯ ತವ ಚಾಧೋಕ್ಷಜಸ್ಯ ಚ ।
ವಕ್ತುಮರ್ಹಸಿ ಯೋದುಹ್ಯದ್ವೈನ್ಯರೂಪೇಣ ಗಾಮಿಮಾಮ್ ॥
ಅನುವಾದ
ಪೃಥುರಾಜನ ರೂಪದಲ್ಲಿ ಸರ್ವೇಶ್ವರ ಭಗವಾನ್ ಶ್ರೀಕೃಷ್ಣನೇ ಅವತರಿಸಿದ್ದನು; ಆದ್ದರಿಂದ ಪುಣ್ಯಕೀರ್ತಿಯಾದ ಶ್ರೀಹರಿಯು ಅವತರಿಸಿದ ಆ ಪೃಥುವಿಗೆ ಸಂಬಂಧಪಟ್ಟ ಇನ್ನೂ ಪವಿತ್ರ ಚರಿತ್ರೆಗಳಿದ್ದರೆ ಅದನ್ನೂ ನನಗೆ ಹೇಳಿರಿ. ನಾನು ತಮ್ಮ ಮತ್ತು ಶ್ರೀಕೃಷ್ಣಚಂದ್ರನ ಅತ್ಯಂತ ಅನುರಾಗವುಳ್ಳ ಭಕ್ತನಾಗಿರುವೆನು. ದಯಮಾಡಿ ಆ ವೃತ್ತಾಂತವೆಲ್ಲವನ್ನು ಹೇಳುವವರಾಗಿರಿ. ॥6-7॥
(ಶ್ಲೋಕ - 8)
ಮೂಲಮ್ (ವಾಚನಮ್)
ಸೂತ ಉವಾಚ
ಮೂಲಮ್
ಚೋದಿತೋ ವಿದುರೇಣೈವಂ ವಾಸುದೇವಕಥಾಂ ಪ್ರತಿ ।
ಪ್ರಶಸ್ಯ ತಂ ಪ್ರೀತಮನಾ ಮೈತ್ರೇಯಃ ಪ್ರತ್ಯಭಾಷತ ॥
ಅನುವಾದ
ಶ್ರೀಸೂತಪುರಾಣಿಕರು ಹೇಳುತ್ತಾರೆ — ಋಷಿಗಳಿರಾ! ವಿದುರನು ಭಗವಾನ್ ಶ್ರೀವಾಸುದೇವನ ಕಥೆಯನ್ನು ಹೇಳಬೇಕೆಂದು ಪ್ರೇರೇಪಿಸಿದಾಗ ಶ್ರೀಮೈತ್ರೇಯರು ಮನಸ್ಸಿನಲ್ಲಿ ಸಂತೋಷಗೊಂಡು ಅವನನ್ನು ಪ್ರಶಂಸಿಸುತ್ತಾ ಹೇಳತೊಡಗಿದರು. ॥8॥
(ಶ್ಲೋಕ - 9)
ಮೂಲಮ್ (ವಾಚನಮ್)
ಮೈತ್ರೇಯ ಉವಾಚ
ಮೂಲಮ್
ಯದಾಭಿಷಿಕ್ತಃ ಪೃಥುರಂಗ ವಿಪ್ರೈ-
ರಾಮನಿತೋ ಜನತಾಯಾಶ್ಚ ಪಾಲಃ ।
ಪ್ರಜಾ ನಿರನ್ನೇ ಕ್ಷಿತಿಪೃಷ್ಠ ಏತ್ಯ
ಕ್ಷುತ್ಕ್ಷಾಮದೇಹಾಃ ಪತಿಮಭ್ಯವೋಚನ್ ॥
ಅನುವಾದ
ಶ್ರೀಮೈತ್ರೇಯರು ಹೇಳಿದರು — ಎಲೈ ವಿದುರನೇ! ಬ್ರಾಹ್ಮಣರು ಮಹಾರಾಜಾ ಪೃಥುವಿಗೆ ಪಟ್ಟಾಭಿಷೇಕ ಮಾಡಿ ಅವನನ್ನು ಪ್ರಜಾಪಾಲಕನನ್ನಾಗಿ ಘೋಷಿಸಿದರು. ಆಗ ಭೂಮಿಯಲ್ಲಿ ಅನ್ನವೇ ಇಲ್ಲದಿರಲು ಪ್ರಜೆಗಳು ಹಸಿವಿನಿಂದ ಕೃಶಕಾಯರಾಗಿ ತಮ್ಮ ಸ್ವಾಮಿಯಾದ ಪೃಥುವಿನ ಬಳಿಗೆ ಬಂದು ಹೇಳಿದರು. ॥9॥
(ಶ್ಲೋಕ - 10)
ಮೂಲಮ್
ವಯಂ ರಾಜಂಜಾಠರೇಣಾಭಿತಪ್ತಾ
ಯಥಾಗ್ನಿನಾ ಕೋಟರಸ್ಥೇನ ವೃಕ್ಷಾಃ ।
ತ್ವಾಮದ್ಯ ಯಾತಾಃ ಶರಣಂ ಶರಣ್ಯಂ
ಯಃ ಸಾಧಿತೋ ವೃತ್ತಿಕರಃ ಪತಿರ್ನಃ ॥
ಅನುವಾದ
ಮಹಾರಾಜರೇ! ಪೊಟರೆಯಲ್ಲಿರುವ ಬೆಂಕಿಯಿಂದ ಮರಗಳು ಕರಕಾಗಿ ಸುಟ್ಟುಹೋಗುವಂತೆ, ನಾವು ಭಯಂಕರವಾದ ಜಠರಾಗ್ನಿಯಿಂದ ಬೆಂದುಹೋಗುತ್ತಿದ್ದೇವೆ. ನೀನು ಶರಣಾಗತವತ್ಸಲನು ಮತ್ತು ನಮಗೆ ಅನ್ನದಾತನಾಗಿ, ಪ್ರಭುವಾಗಿ ಮಹರ್ಷಿಗಳು ನಿನ್ನನ್ನು ನೇಮಿಸಿದ್ದಾರೆ. ಅದಕ್ಕಾಗಿ ನಾವು ನಿನಗೆ ಶರಣಾಗಿದ್ದೇವೆ. ॥10॥
(ಶ್ಲೋಕ - 11)
ಮೂಲಮ್
ತನ್ನೋ ಭವಾನೀಹತು ರಾತವೇನ್ನಂ
ಕ್ಷುಧಾರ್ದಿತಾನಾಂ ನರದೇವದೇವ ।
ಯಾವನ್ನ ನಂಕ್ಷ್ಯಾಮಹ ಉಜ್ಝಿತೋರ್ಜಾ
ವಾರ್ತಾಪತಿಸ್ತ್ವಂ ಕಿಲ ಲೋಕಪಾಲಃ ॥
ಅನುವಾದ
ನೀನು ಸಮಸ್ತ ಲೋಕಗಳನ್ನು ರಕ್ಷಿಸುವವನಾಗಿರುವೆ. ನೀನೇ ನಮ್ಮ ಜೀವನೋಪಾಯಕ್ಕೆ ಒಡೆಯನಾಗಿರುವೆ. ಆದ್ದರಿಂದ ರಾಜೇಶ್ವರನೇ! ಹಸಿವಿನಿಂದ ಬಳಲಿದ ನಮಗೆ ನೀನು ಬೇಗನೆ ಅನ್ನ ಕೊಡುವ ವ್ಯವಸ್ಥೆ ಮಾಡು. ಅನ್ನ ಸಿಗುವ ಮೊದಲೇ ನಾಶವಾಗದಂತೆ ಪ್ರಜಾಪಾಲಕನಾದ ನೀನು ಪ್ರಜೆಗಳಾದ ನಮ್ಮನ್ನು ಕಾಪಾಡು. ॥11॥
(ಶ್ಲೋಕ - 12)
ಮೂಲಮ್ (ವಾಚನಮ್)
ಮೈತ್ರೇಯ ಉವಾಚ
ಮೂಲಮ್
ಪೃಥುಃ ಪ್ರಜಾನಾಂ ಕರುಣಂ ನಿಶಮ್ಯ ಪರಿದೇವಿತಮ್ ।
ದೀರ್ಘಂ ದಧ್ಯೌ ಕುರುಶ್ರೇಷ್ಠ ನಿಮಿತ್ತಂ ಸೋನ್ವಪದ್ಯತ ॥
ಅನುವಾದ
ಶ್ರೀಮೈತ್ರೇಯರು ಹೇಳುತ್ತಾರೆ — ಕುರುಶ್ರೇಷ್ಠನೇ! ಪ್ರಜೆಗಳ ಕರುಣಕ್ರಂದನವನ್ನು ಕೇಳಿ ಪೃಥುಮಹಾರಾಜನು ಬಹಳ ಹೊತ್ತು ಚಿಂತಿಸಿ, ಕೊನೆಗೆ ಆ ಅನ್ನಕ್ಷಾಮದ ಕಾರಣ ವನ್ನು ಕಂಡುಕೊಂಡನು. ॥12॥
(ಶ್ಲೋಕ - 13)
ಮೂಲಮ್
ಇತಿ ವ್ಯವಸಿತೋ ಬುದ್ಧ್ಯಾ ಪ್ರಗೃಹೀತಶರಾಸನಃ ।
ಸಂದಧೇ ವಿಶಿಖಂ ಭೂಮೇಃ ಕ್ರುದ್ಧಸಿಪುರಹಾ ಯಥಾ ॥
ಅನುವಾದ
ಭೂಮಿಯು ಅನ್ನ-ಔಷಧಿ ಗಳನ್ನು ತನ್ನೊಳಗೇ ಅಡಗಿಸಿಕೊಳ್ಳುತ್ತಿದೆ. ಮೊಳೆಯಲು ಬಿಡುವುದಿಲ್ಲ ಎಂಬುದನ್ನು ಬುದ್ಧಿಯಿಂದ ನಿಶ್ಚಯಿಸಿ, ಅವನು ತ್ರಿಪುರಸಂಹಾರಿಯಾದ ರುದ್ರದೇವರಂತೆ ಕಡುಕೋಪದಿಂದ ಬಿಲ್ಲನ್ನೆತ್ತಿಕೊಂಡು ಭೂಮಿಯನ್ನು ಗುರಿಯಾಗಿಸಿ ಬಾಣವೊಂದನ್ನು ಹೂಡಿದನು. ॥13॥
(ಶ್ಲೋಕ - 14)
ಮೂಲಮ್
ಪ್ರವೇಪಮಾನಾ ಧರಣೀ ನಿಶಾಮ್ಯೋದಾಯುಧಂ ಚ ತಮ್ ।
ಗೌಃ ಸತ್ಯಪಾದ್ರವದ್ಭೀತಾ ಮೃಗೀವ ಮೃಗಯುದ್ರುತಾ ॥
ಅನುವಾದ
ಅದನ್ನು ಕಂಡು ಭೂದೇವಿಯು ಭಯಗೊಂಡು ಗಡ-ಗಡನೆ ನಡುಗುತ್ತಾ ಹಸುವಿನ ರೂಪವನ್ನು ತಾಳಿ, ಬೇಡನು ಬೆನ್ನಟ್ಟಿದ ಜಿಂಕೆಯಂತೆ ಓಡ ತೊಡಗಿದಳು. ॥14॥
(ಶ್ಲೋಕ - 15)
ಮೂಲಮ್
ತಾಮನ್ವಧಾವತ್ತದ್ವೈನ್ಯಃ ಕುಪಿತೋತ್ಯರುಣೇಕ್ಷಣಃ ।
ಶರಂ ಧನುಷಿ ಸಂಧಾಯ ಯತ್ರ ಯತ್ರ ಪಲಾಯತೇ ॥
ಅನುವಾದ
ಇದನ್ನು ನೋಡಿದ ಮಹಾರಾಜಾ ಪೃಥುವಿನ ಕಣ್ಣುಗಳು ಕ್ರೋಧದಿಂದ ಕೆಂಪೇರಿದವು. ಆತನು ಬಿಲ್ಲಿನಲ್ಲಿ ಬಾಣವನ್ನು ಹೂಡಿ ಭೂದೇವಿಯು ಓಡಿದಲ್ಲೆಲ್ಲ ಅಟ್ಟಿಸಿಕೊಂಡು ಹೋದನು. ॥15॥
(ಶ್ಲೋಕ - 16)
ಮೂಲಮ್
ಸಾ ದಿಶೋ ವಿದಿಶೋ ದೇವೀ ರೋದಸೀ ಚಾಂತರಂ ತಯೋಃ ।
ಧಾವಂತೀ ತತ್ರ ತತ್ರೈನಂ ದದರ್ಶಾನೂದ್ಯತಾಯುಧಮ್ ॥
ಅನುವಾದ
ದಿಕ್ಕು-ದಿಕ್ಕುಗಳಲ್ಲಿ ಸ್ವರ್ಗದಲ್ಲಿ, ಆಕಾಶದಲ್ಲಿ ಹೀಗೆ ಭೂದೇವಿಯು ಓಡಿದಲ್ಲೆಲ್ಲಕಡೆ ಪೃಥು ಮಹಾರಾಜನು ಆಯುಧಗಳನ್ನು ಕೈಯಲ್ಲೆತ್ತಿಕೊಂಡು ಆಕೆಯ ಹಿಂದೆ ಕಾಣಿಸಿಕೊಳ್ಳುತ್ತಿದ್ದನು. ॥16॥
(ಶ್ಲೋಕ - 17)
ಮೂಲಮ್
ಲೋಕೇ ನಾವಿಂದತ ತ್ರಾಣಂ ವೈನ್ಯಾನ್ಮೃತ್ಯೋರಿವ ಪ್ರಜಾಃ ।
ತ್ರಸ್ತಾ ತದಾ ನಿವವೃತೇ ಹೃದಯೇನ ವಿದೂಯತಾ ॥
ಅನುವಾದ
ಮನುಷ್ಯ ನನ್ನು ಮೃತ್ಯುವಿನ ದವಡೆಯಿಂದ ಯಾರೂ ರಕ್ಷಿಸಲಾರದಂತೆ ಆಕೆಯು ಅತ್ಯಂತ ಭಯಭೀತಳಾಗಿ ಅತಿದುಃಖಗೊಂಡ ಮನಸ್ಸಿನಿಂದ ಹಿಂದಿರುಗಿದಳು. ॥17॥
(ಶ್ಲೋಕ - 18)
ಮೂಲಮ್
ಉವಾಚ ಚ ಮಹಾಭಾಗಂ ದರ್ಮಜ್ಞಾಪನ್ನವತ್ಸಲ ।
ತ್ರಾಹಿ ಮಾಮಪಿ ಭೂತಾನಾಂ ಪಾಲನೇವಸ್ಥಿತೋ ಭವಾನ್ ॥
ಅನುವಾದ
ಮತ್ತು ಮಹಾಭಾಗನಾದ ಪೃಥುವಿನಲ್ಲಿ ಮೊರೆಯಿಟ್ಟಳು ‘ಧರ್ಮಜ್ಞನೂ ಶರಣಾಗತವತ್ಸಲನೂ ಆದ ಎಲೈ ರಾಜೇಂದ್ರನೇ! ಸಮಸ್ತ ಪ್ರಾಣಿಗಳನ್ನು ರಕ್ಷಿಸುವುದರಲ್ಲಿ ತತ್ಪರನಾದ ನೀನು ನನ್ನನ್ನೂ ರಕ್ಷಿಸು. ॥18॥
(ಶ್ಲೋಕ - 19)
ಮೂಲಮ್
ಸ ತ್ವಂ ಜಿಘಾಂಸಸೇ ಕಸ್ಮಾದ್ದೀನಾಮಕೃತಕಿಲ್ಬಿಷಾಮ್ ।
ಅಹನಿಷ್ಯತ್ಕಥಂ ಯೋಷಾಂ ಧರ್ಮಜ್ಞ ಇತಿ ಯೋ ಮತಃ ॥
ಅನುವಾದ
ಹಾಗಿರುವಾಗ ಅತ್ಯಂತ ದೀನಳೂ, ನಿರಪರಾಧಿಯೂ ಆದ ನನ್ನನ್ನು ನೀನು ಏಕೆ ಕೊಲ್ಲಲು ಬಯಸುತ್ತಿರುವೆ. ಇದಲ್ಲದೆ ನೀನು ಧರ್ಮಜ್ಞನೆಂದು ತಿಳಿಯಲಾಗುತ್ತದೆ ಎಂದಾಗ ಸ್ತ್ರೀಯಾದ ನನ್ನನ್ನು ಹೇಗೆ ಕೊಲ್ಲಬಲ್ಲೆ? ॥19॥
(ಶ್ಲೋಕ - 20)
ಮೂಲಮ್
ಪ್ರಹರಂತಿ ನ ವೈ ಸೀಷು ಕೃತಾಗಃಸ್ವಪಿ ಜಂತವಃ ।
ಕಿಮುತ ತ್ವದ್ವಿಧಾ ರಾಜನ್ ಕರುಣಾ ದೀನವತ್ಸಲಾಃ ॥
ಅನುವಾದ
ಸ್ತ್ರೀಯರು ಅಪರಾಧ ಮಾಡಿದರೂ ಸಾಮಾನ್ಯ ಮನುಷ್ಯನೂ ಅವಳ ಮೇಲೆ ಕೈ ಎತ್ತುವುದಿಲ್ಲ. ಹಾಗಿರುವಾಗ ಕರುಣಾಳುವೂ, ದೀನವತ್ಸಲನೂ ಆದ ನಿನ್ನಂತಹವನು ಇದನ್ನು ಹೇಗೆ ಮಾಡಬಲ್ಲನು? ॥20॥
(ಶ್ಲೋಕ - 21)
ಮೂಲಮ್
ಮಾಂ ವಿಪಾಟ್ಯಾಜರಾಂ ನಾವಂ ಯತ್ರ ವಿಶ್ವಂ ಪ್ರತಿಷ್ಠಿತಮ್ ।
ಆತ್ಮಾನಂ ಚ ಪ್ರಜಾಶ್ಚೇಮಾಃ ಕಥಮಂಭಸಿ ಧಾಸ್ಯಸಿ ॥
ಅನುವಾದ
ನಾನಾದರೋ ಒಂದು ದೃಢವಾದ ಹಡಗಿನಂತಿದ್ದು, ಇಡೀ ಜಗತ್ತು ನನ್ನ ಆಧಾರದಲ್ಲಿ ನಿಂತಿದೆ. ಇಂತಹ ನನ್ನನ್ನು ಕೊಂದು ನೀನು ಪ್ರಜೆಗಳನ್ನು ನೀರಿನಮೇಲೆ ಹೇಗೆ ತಾನೇ ನೆಲೆಗೊಳಿಸುವೆ? ॥21॥
(ಶ್ಲೋಕ - 22)
ಮೂಲಮ್ (ವಾಚನಮ್)
ಪೃಥುರುವಾಚ
ಮೂಲಮ್
ವಸುಧೇ ತ್ವಾಂ ವಧಿಷ್ಯಾಮಿ ಮಚ್ಛಾಸನಪರಾಙ್ಮುಖೀಮ್ ।
ಭಾಗಂ ಬರ್ಹಿಷಿ ಯಾ ವೃಂಕ್ತೇ ನ ತನೋತಿ ಚ ನೋ ವಸು ॥
ಅನುವಾದ
ಪೃಥುಮಹಾರಾಜನು ಹೇಳಿದನು — ಎಲೈ ಭೂಮಿಯೇ! ನೀನುಘಿ ಪ್ರಜಾಪಾಲಕನಾದ ನನ್ನ ಆಜ್ಞೆಯನ್ನು ಉಲ್ಲಂಘಿಸಿರುವೆ. ನೀನು ಯಜ್ಞದಲ್ಲಿ ಹವಿರ್ಭಾಗವನ್ನು ದೇವತಾರೂಪದಿಂದ ಸ್ವೀಕರಿಸಿದ್ದರೂ ಅನ್ನ-ಧಾನ್ಯಾದಿಗಳನ್ನು ನಮಗೆ ಕೊಡುತ್ತಿಲ್ಲ. ಆದ್ದರಿಂದ ಇಂದು ನಾನು ನಿನ್ನನ್ನು ಕೊಂದು ಹಾಕುವೆನು. ॥22॥
(ಶ್ಲೋಕ - 23)
ಮೂಲಮ್
ಯವಸಂ ಜಗ್ಧ್ಯನುದಿನಂ ನೈವ ದೋಗ್ಧ್ಯೌಧಸಂ ಪಯಃ ।
ತಸ್ಯಾಮೇವಂ ಹಿ ದುಷ್ಟಾಯಾಂ ದಂಡೋ ನಾತ್ರ ನ ಶಸ್ಯತೇ ॥
ಅನುವಾದ
ಹಸಿರು ಹುಲ್ಲನ್ನು ಪ್ರತಿದಿನವು ತೃಪ್ತಿಯಾಗಿ ಮೇಯುತ್ತಿದ್ದರೂ ನೀನು ಹಾಲನ್ನು ಮಾತ್ರ ಕೊಡದೆ ವಂಚನೆ ಮಾಡುತ್ತಿರುವ ಗೋವು. ಇಂತಹ ದುಷ್ಟತನವನ್ನು ಮಾಡುವ ನಿನ್ನನ್ನು ಶಿಕ್ಷಿಸಿದರೆ ಅನುಚಿತವಾಗಲಾರದು. ॥23॥
(ಶ್ಲೋಕ - 24)
ಮೂಲಮ್
ತ್ವಂ ಖಲ್ವೋಷಧಿಬೀಜಾನಿ ಪ್ರಾಕ್ಸೃಷ್ಟಾನಿ ಸ್ವಯಂಭುವಾ ।
ನ ಮುಂಚಸ್ಯಾತ್ಮರುದ್ಧಾನಿ ಮಾಮವಜ್ಞಾಯ ಮಂದಧೀಃ ॥
ಅನುವಾದ
ಹಿಂದೆ ಬ್ರಹ್ಮದೇವರು ಲೋಕರಕ್ಷಣೆಗಾಗಿ ಉತ್ಪಾದನೆ ಮಾಡಿದ ಅನ್ನಾದಿ ಬೀಜಗಳನ್ನು ನೀನು ನಿನ್ನಲ್ಲಿ ಲೀನಗೊಳಿಸಿಕೊಂಡು ಬಿಟ್ಟಿರುವೆ. ಈಗ ನನ್ನನ್ನೂ ತಿರಸ್ಕರಿಸಿ ಸಸ್ಯಗಳನ್ನು ಮೊಳೆಯಿಸದೆ ನೀನು ಅಪರಾಧಿನಿಯೂ, ಮೂರ್ಖಳೂ ಆಗಿರುವೆ. ॥24॥
(ಶ್ಲೋಕ - 25)
ಮೂಲಮ್
ಅಮೂಷಾಂ ಕ್ಷುತ್ಪರೀತಾನಾಮಾರ್ತಾನಾಂ ಪರಿದೇವಿತಮ್ ।
ಶಮಯಿಷ್ಯಾಮಿ ಮದ್ಬಾಣೈರ್ಭಿನ್ನಾಯಾಸ್ತವ ಮೇದಸಾ ॥
ಅನುವಾದ
ನಿನ್ನನ್ನು ನನ್ನ ಬಾಣ ಗಳಿಂದ ತುಂಡರಿಸಿ ಹಸಿವಿನಿಂದ ಕಂಗೆಟ್ಟಿರುವ ನನ್ನ ಪ್ರಜೆ ಗಳಿಗೆ ನಿನ್ನ ಕೊಬ್ಬಿನಿಂದಲೇ ಅನ್ನ ಆಹಾರಗಳ ತೃಪ್ತಿಯನ್ನು ಉಂಟುಮಾಡುವೆನು. ॥25॥
(ಶ್ಲೋಕ - 26)
ಮೂಲಮ್
ಪುಮಾನ್ಯೋಷಿದುತ ಕ್ಲೀಬ ಆತ್ಮಸಂಭಾವನೋಧಮಃ ।
ಭೂತೇಷು ನಿರನುಕ್ರೋಶೋ ನೃಪಾಣಾಂ ತದ್ವಧೋವಧಃ ॥
ಅನುವಾದ
ಅಧಮನಾದ ಮನುಷ್ಯನು ಪ್ರಾಣಿಗಳಲ್ಲಿ ದಯೆಯನ್ನು ತೊರೆದು ಕೇವಲ ತನ್ನ ಪೋಷಣೆ ಯನ್ನೇ ಮಾಡಿಕೊಳ್ಳುವವನು ಪುರುಷನಾಗಲೀ, ಸ್ತ್ರೀಯಾಗಲಿ, ನಪುಂಸಕನಾಗಲಿ ಅಂತಹವನನ್ನು ಕೊಲ್ಲುವುದು ರಾಜರಿಗಾಗಿ ಕೊಂದಂತೆಯೇ ಅಲ್ಲ. ॥26॥
(ಶ್ಲೋಕ - 27)
ಮೂಲಮ್
ತ್ವಾಂ ಸ್ತಬ್ಧಾಂ ದುರ್ಮದಾಂ ನೀತ್ವಾ ಮಾಯಾಗಾಂ ತಿಲಶಃ ಶರೈಃ ।
ಆತ್ಮಯೋಗಬಲೇನೇಮಾ ಧಾರಯಿಷ್ಯಾಮ್ಯಹಂ ಪ್ರಜಾಃ ॥
ಅನುವಾದ
ನೀನು ಅತಿಗರ್ವಿಷ್ಠೆಯಾಗಿ, ಮದದಿಂದ ಕೊಬ್ಬಿದವಳಾಗಿ ಮಾಯೆಯಿಂದ ಗೋರೂಪ ವನ್ನು ತಾಳಿರುವ ನಿನ್ನನ್ನು ನನ್ನ ಬಾಣಗಳಿಂದ ತುಂಡು-ತುಂಡಾಗಿಸಿ ಈ ಪ್ರಜೆಗಳನ್ನು ನನ್ನ ಯೋಗಬಲದಿಂದಲೇ ಧರಿಸಿ ಕಾಪಾಡುವೆನು. ॥27॥
(ಶ್ಲೋಕ - 28)
ಮೂಲಮ್
ಏವಂ ಮನ್ಯುಮಯೀಂ ಮೂರ್ತಿಂ ಕೃತಾಂತಮಿವ ಬಿಭ್ರತಮ್ ।
ಪ್ರಣತಾ ಪ್ರಾಂಜಲಿಃ ಪ್ರಾಹ ಮಹೀ ಸಂಜಾತವೇಪಥುಃ ॥
ಅನುವಾದ
ಹೀಗೆ ಮೃತ್ಯುವಿನಂತೆ, ಕ್ರೋಧಮಯ ಮೂರ್ತಿ ಯಾಗಿದ್ದ ಆ ಭೂಪತಿಯನ್ನು ಕಂಡು ಭೂದೇವಿಯು ಆತನಿಗೆ ನಮಸ್ಕರಿಸಿ ಕೈಜೋಡಿಸಿಕೊಂಡು ನಡುಗುತ್ತಾ ಅತ್ಯಂತ ವಿನಮ್ರಭಾವದಿಂದ ಹೀಗೆಂದಳು. ॥28॥
(ಶ್ಲೋಕ - 29)
ಮೂಲಮ್ (ವಾಚನಮ್)
ಧರೋವಾಚ
ಮೂಲಮ್
ನಮಃ ಪರಸ್ಮೈ ಪುರುಷಾಯ ಮಾಯಯಾ
ವಿನ್ಯಸ್ತನಾನಾತನವೇ ಗುಣಾತ್ಮನೇ ।
ನಮಃ ಸ್ವರೂಪಾನುಭವೇನ ನಿರ್ಧುತ-
ದ್ರವ್ಯಕ್ರಿಯಾಕಾರಕವಿಭ್ರಮೋರ್ಮಯೇ ॥
ಅನುವಾದ
ಪೃಥಿವಿಯು ಹೇಳಿದಳು — ನೀನು ಸಾಕ್ಷಾತ್ ಪರಮ ಪುರುಷನು. ಮಾಯೆಯಿಂದ ಬಗೆ-ಬಗೆಯ ದೇಹಗಳನ್ನು ಧರಿಸಿ ಗುಣಮಯನಂತೆ ಕಾಣುತ್ತಿದ್ದರೂ ವಾಸ್ತವವಾಗಿ ತ್ರಿಗುಣಾತೀತನೂ, ಆತ್ಮಾನುಭಾವದಿಂದ ಅಧಿಭೂತ, ಅಧ್ಯಾತ್ಮ, ಅಧಿದೈವ ಸಂಬಂಧವಾದ ಅಭಿಮಾನ ಮತ್ತು ಅದರಿಂದ ಉಂಟಾದ ರಾಗ-ದ್ವೇಷಾದಿಗಳಿಂದ ಸರ್ವಥಾ ರಹಿತನಾಗಿರುವೆ. ಅಂತಹ ನಿನಗೆ ನಾನು ಪದೇ-ಪದೇ ನಮಸ್ಕರಿಸುತ್ತಿದ್ದೇನೆ. ॥29॥
(ಶ್ಲೋಕ - 30)
ಮೂಲಮ್
ಯೇನಾಹಮಾತ್ಮಾಯತನಂ ವಿನಿರ್ಮಿತಾ
ಧಾತ್ರಾ ಯತೋಯಂ ಗುಣಸರ್ಗಸಂಗ್ರಹಃ ।
ಸ ಏವ ಮಾಂ ಹಂತು ಮುದಾಯುಧಃ ಸ್ವರಾ-
ಡುಪಸ್ಥಿತೋನ್ಯಂ ಶರಣಂ ಕಮಾಶ್ರಯೇ ॥
ಅನುವಾದ
ನೀನು ಇಡೀ ಜಗತ್ತನ್ನು ನಿರ್ಮಾಣಮಾಡಿದವನು. ಈ ತ್ರಿಗುಣಾತ್ಮಕವಾದ ಸೃಷ್ಟಿಯನ್ನು ರಚಿಸಿ, ನನ್ನನ್ನು ಸಮಸ್ತ ಜೀವಿಗಳಿಗೂ ಆಶ್ರಯ ವಾಗಿರುವಂತೆ ಮಾಡಿದವನೂ ನೀನೆ. ಹೀಗೆ ಸರ್ವಸ್ವತಂತ್ರ ನಾಗಿ, ಸರ್ವೇಶ್ವರನಾಗಿ, ನಿಯಾಮಕನಾಗಿರುವ ನೀನೇ ಆಯುಧಧಾರಿಯಾಗಿ ನನ್ನನ್ನು ಕೊಲ್ಲಲು ಬರುವಾಗ ನಾನು ಬೇರೆ ಯಾರನ್ನು ಶರಣು ಹೋಗಲಿ? ॥30॥
(ಶ್ಲೋಕ - 31)
ಮೂಲಮ್
ಯ ಏತದಾದಾವಸೃಜಚ್ಚರಾಚರಂ
ಸ್ವಮಾಯಯಾತ್ಮಾಶ್ರಯಯಾವಿತರ್ಕ್ಯಯಾ ।
ತಯೈವ ಸೋಯಂ ಕಿಲ ಗೋಪ್ತುಮುದ್ಯತಃ
ಕಥಂ ನು ಮಾಂ ಧರ್ಮಪರೋ ಜಿಘಾಂಸತಿ ॥
ಅನುವಾದ
ಕಲ್ಪದ ಪ್ರಾರಂಭದಲ್ಲಿ ನೀನೇ ನಿನಗೆ ಆಶ್ರಿತವಾಗಿರುವ ಅನಿರ್ವಚ ನೀಯ ಮಾಯೆಯಿಂದಲೇ ಈ ಚರಾಚರ ಜಗತ್ತನ್ನು ರಚಿಸಿದ್ದೆ. ಆ ಮಾಯೆಯ ಮೂಲಕವೇ ನೀನು ಇದನ್ನು ಪಾಲಿಸಲು ಸಿದ್ಧನಾಗಿರುವೆ. ನೀನು ಧರ್ಮಪರಾಯಣನಾಗಿರುವೆ. ಹಾಗಿರುವಾಗ ಗೋರೂಪಧಾರಿಣಿಯಾದ ನನ್ನನ್ನು ಏಕೆ ಕೊಲ್ಲಲು ಬಯಸುವೆ? ॥31॥
(ಶ್ಲೋಕ - 32)
ಮೂಲಮ್
ನೂನಂ ಬತೇಶಸ್ಯ ಸಮೀಹಿತಂ ಜನೈ-
ಸ್ತನ್ಮಾಯಯಾ ದುರ್ಜಯಯಾಕೃತಾತ್ಮಭಿಃ ।
ನ ಲಕ್ಷ್ಯತೇ ಯಸ್ತ್ವಕರೋದಕಾರಯದ್
ಯೋನೇಕ ಏಕಃ ಪರತಶ್ಚ ಈಶ್ವರಃ ॥
ಅನುವಾದ
ನೀನು ಒಬ್ಬನೇ ಆಗಿದ್ದರೂ ಮಾಯಾವಶದಿಂದ ಅನೇಕರೂಪಿ ಯಾಗಿ ಕಾಣಿಸುತ್ತಿದ್ದೀಯೇ. ನೀನೇ ಬ್ರಹ್ಮ ದೇವರನ್ನು ಸೃಷ್ಟಿಸಿ ಅವರಿಂದ ವಿಶ್ವದ ರಚನೆಯನ್ನು ಮಾಡಿಸಿದ್ದೀಯೆ. ನೀನು ಸಾಕ್ಷಾತ್ ಸರ್ವೇಶ್ವರನಾಗಿರುವೆ. ನಿನ್ನ ಲೀಲೆಗಳನ್ನು ಜಿತೇಂದ್ರಿಯರಲ್ಲದವರು ಹೇಗೆ ತಾನೇ ತಿಳಿಯ ಬಲ್ಲರು? ಅವರ ಬುದ್ಧಿಯಾದರೋ ದಾಟಲಶಕ್ಯವಾದ ಮಾಯೆಯಿಂದ ವಿಕ್ಷಿಪ್ತವಾಗಿದೆ. ॥32॥
(ಶ್ಲೋಕ - 33)
ಮೂಲಮ್
ಸರ್ಗಾದಿ ಯೋಸ್ಯಾನುರುಣದ್ಧಿ ಶಕ್ತಿಭಿ-
ರ್ದ್ರವ್ಯಕ್ರಿಯಾಕಾರಕಚೇತನಾತ್ಮಭಿಃ ।
ತಸ್ಮೈ ಸಮುನ್ನದ್ಧ ನಿರುದ್ಧ ಶಕ್ತಯೇ
ನಮಃ ಪರಸ್ಮೈ ಪುರುಷಾಯ ವೇಧಸೇ ॥
ಅನುವಾದ
ಪಂಚಭೂತಗಳು, ಇಂದ್ರಿಯಗಳು, ಅವುಗಳ ಅಧಿಷ್ಠಾತೃ ದೇವತೆಗಳು, ಬುದ್ಧಿ ಮತ್ತು ಅಹಂಕಾರರೂಪವಾದ ಸ್ವಶಕ್ತಿಗಳಿಂದ ಜಗತ್ತಿನ ಸೃಷ್ಟಿ, ಸ್ಥಿತಿ, ಸಂಹಾರಗಳನ್ನು ಕ್ರಮವಾಗಿ ಮಾಡುವ ಪರಮೇಶ್ವರನು ನೀನೇ. ನಿನ್ನ ಈ ಶಕ್ತಿಗಳು ಬೇರೆ-ಬೇರೆ ಕಾರ್ಯಗಳಿಗಾಗಿ ಬೇರೆ-ಬೇರೆ ಸಮಯಗಳಲ್ಲಿ ಪ್ರಕಟವಾಗಿ, ಮರೆಯಾಗುತ್ತವೆ. ನೀನು ಸಾಕ್ಷಾತ್ ಪರಮಪುರುಷನಾಗಿದ್ದು, ಜಗದ್ವಿಧಾತನಾದ ನಿನಗೆ ನಾನು ನಮಸ್ಕರಿಸುತ್ತೇನೆ. ॥33॥
(ಶ್ಲೋಕ - 34)
ಮೂಲಮ್
ಸ ವೈ ಭವಾನಾತ್ಮವಿನಿರ್ಮಿತಂ ಜಗದ್
ಭೂತೇಂದ್ರಿಯಾಂತಃಕರಣಾತ್ಮಕಂ ವಿಭೋ ।
ಸಂಸ್ಥಾಪಯಿಷ್ಯನ್ನಜ ಮಾಂ ರಸಾತಲಾ-
ದಭ್ಯುಜ್ಜಹಾರಾಮ್ಭಸ ಆದಿಸೂಕರಃ ॥
ಅನುವಾದ
ಓ ಜನ್ಮ ರಹಿತನಾದ ಪ್ರಭುವೇ! ನೀನು ರಚಿಸಿದ ಭೂತಗಳು, ಇಂದ್ರಿಯಗಳು, ಅಂತಃಕರಣ ರೂಪವಾದ ಜಗತ್ತಿನ ಸ್ಥಿತಿಗಾಗಿ ಆದಿವರಾಹ ರೂಪವನ್ನು ಧರಿಸಿ ನನ್ನನ್ನು ರಸಾತಲದ ನೀರಿನಿಂದ ಹೊರಗೆ ತಂದು ಕಾಪಾಡಿದವನು. ॥34॥
(ಶ್ಲೋಕ - 35)
ಮೂಲಮ್
ಅಪಾಮುಪಸ್ಥೇ ಮಯಿ ನಾವ್ಯವಸ್ಥಿತಾಃ
ಪ್ರಜಾ ಭವಾನದ್ಯ ರಿರಕ್ಷಿಷುಃ ಕಿಲ ।
ಸ ವೀರಮೂರ್ತಿಃ ಸಮಭೂದ್ಧರಾಧರೋ
ಯೋ ಮಾಂ ಪಯಸ್ಯುಗ್ರಶರೋ ಜಿಘಾಂಸಸಿ ॥
ಅನುವಾದ
ಹೀಗೆ ಒಂದು ಬಾರಿ ನನ್ನನ್ನು ಉದ್ಧಾರ ಮಾಡಿ ‘ಧರಾಧರ’ ಎಂಬ ಹೆಸರು ಪಡೆದ ನೀನೇ ವೀರಮೂರ್ತಿಯಾಗಿ ಜಲದ ಮೇಲೆ ಹಡಗಿನಂತೆ ನಿಂತಿರುವ ನನ್ನನ್ನು ಆಶ್ರಯಿಸಿರುವ ಪ್ರಜೆಗಳನ್ನು ರಕ್ಷಿಸುವುದಕ್ಕಾಗಿ, ಅತಿ ತೀಕ್ಷ್ಣವಾದ ಬಾಣಗಳನ್ನು ಹೂಡಿ, ಹಾಲುಕೊಡಲಿಲ್ಲ ಎಂಬ ತಪ್ಪಿಗಾಗಿ ನನ್ನನ್ನು ಕೊಲ್ಲಲು ಬಯಸುತ್ತಿರುವೆಯಲ್ಲ. ॥35॥
(ಶ್ಲೋಕ - 36)
ಮೂಲಮ್
ನೂನಂ ಜನೈರೀಹಿತಮೀಶ್ವರಾಣಾ-
ಮಸ್ಮದ್ವಿಧೈಸ್ತದ್ಗುಣಸರ್ಗಮಾಯಯಾ ।
ನ ಜ್ಞಾಯತೇ ಮೋಹಿತಚಿತ್ತ ವರ್ತ್ಮಭಿ-
ಸ್ತೇಭ್ಯೋ ನಮೋ ವೀರಯಶಸ್ಕರೇಭ್ಯಃ ॥
ಅನುವಾದ
ಈ ತ್ರಿಗುಣಾತ್ಮಕ ಸೃಷ್ಟಿಯನ್ನು ರಚಿಸಿರುವ ನಿನ್ನ ಮಾಯೆಯಿಂದ ನನ್ನಂತಹ ಸಾಧಾರಣ ಜನರ ಚಿತ್ತವು ಮೋಹಿತ ವಾಗಿದೆ. ನನ್ನಂತಹವರಾದರೋ ನಿನ್ನ ಭಕ್ತರ ಲೀಲೆಗಳನ್ನೂ ಕೂಡ ಖಂಡಿತವಾಗಿ ತಿಳಿಯಲಾರರು. ಹಾಗಿರುವಾಗ ನಿನ್ನ ಯಾವುದೇ ಕ್ರಿಯೆಯ ಉದ್ದೇಶವನ್ನು ತಿಳಿಯದಿರುವುದರಲ್ಲಿ ಆಶ್ಚರ್ಯವೇನಿದೆ? ಆದ್ದರಿಂದ ಇಂದ್ರಿಯ ಸಂಯಮಾದಿಗಳ ಮೂಲಕ ವೀರೋಚಿತ ಕಾರ್ಯಗಳನ್ನು ಮಾಡುವ ನಿನ್ನ ಭಕ್ತರನ್ನೂ ಕೂಡ ನಮಸ್ಕರಿಸುತ್ತೇನೆ. ॥36॥
ಅನುವಾದ (ಸಮಾಪ್ತಿಃ)
ಹದಿನೇಳನೆಯ ಅಧ್ಯಾಯವು ಮುಗಿಯಿತು. ॥17॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಚತುರ್ಥಸ್ಕಂಧೇ ಪೃಥುವಿಜಯೇ ಧರಿತ್ರೀನಿಗ್ರಹೋ ನಾಮ ಸಪ್ತದಶೋಽಧ್ಯಾಯಃ ॥17॥