೧೫

[ಹದಿನೈದನೆಯ ಅಧ್ಯಾಯ]

ಭಾಗಸೂಚನಾ

ಪೃಥು ಚಕ್ರವರ್ತಿಯ ಆವಿರ್ಭಾವ ಮತ್ತು ರಾಜ್ಯಾಭಿಷೇಕ

(ಶ್ಲೋಕ - 1)

ಮೂಲಮ್ (ವಾಚನಮ್)

ಮೈತ್ರೇಯ ಉವಾಚ

ಮೂಲಮ್

ಅಥ ತಸ್ಯ ಪುನರ್ವಿಪ್ರೈರಪುತ್ರಸ್ಯ ಮಹೀಪತೇಃ ।
ಬಾಹುಭ್ಯಾಂ ಮಥ್ಯಮಾನಾಭ್ಯಾಂ ಮಿಥುನಂ ಸಮಪದ್ಯತ ॥

ಅನುವಾದ

ಶ್ರೀಮೈತ್ರೇಯರು ಹೇಳುತ್ತಾರೆ — ಎಲೈ ವಿದುರನೇ! ಅನಂತರ ಆ ಮಹರ್ಷಿಗಳು ಪುತ್ರಹೀನನಾದ ವೇನರಾಜನ ಭುಜಗಳನ್ನು ಕಡೆದಾಗ ಅವುಗಳಿಂದ ಒಂದು ಗಂಡುಮಗು, ಒಂದು ಹೆಣ್ಣುಮಗುವಿನ ಜೋಡಿಯು ಪ್ರಕಟವಾಯಿತು. ॥1॥

(ಶ್ಲೋಕ - 2)

ಮೂಲಮ್

ತದ್ ವೃಷ್ಟ್ವಾ ಮಿಥುನಂ ಜಾತಮೃಷಯೋ ಬ್ರಹ್ಮವಾದಿನಃ ।
ಊಚುಃ ಪರಮಸಂತುಷ್ಟಾ ವಿದಿತ್ವಾ ಭಗವತ್ಕಲಾಮ್ ॥

ಅನುವಾದ

ಆ ಜೋಡಿಯು ಉತ್ಪನ್ನವಾಗಿರುವುದನ್ನು ನೋಡಿ ಬ್ರಹ್ಮವಾದಿಗಳಾದ ಮಹರ್ಷಿಗಳು ‘ಇದು ಭಗವಂತನ ಅಂಶಾವತಾರ’ ಎಂದು ತಿಳಿದು ಅತ್ಯಂತ ಸಂತುಷ್ಟರಾಗಿ ಹೀಗೆಂದರು. ॥2॥

(ಶ್ಲೋಕ - 3)

ಮೂಲಮ್ (ವಾಚನಮ್)

ಋಷಯ ಊಚುಃ

ಮೂಲಮ್

ಏಷ ವಿಷ್ಣೋರ್ಭಗವತಃ ಕಲಾ ಭುವನಪಾಲಿನೀ ।
ಇಯಂ ಚ ಲಕ್ಷ್ಮ್ಯಾಃ ಸಂಭೂತಿಃ ಪುರುಷಸ್ಯಾನಪಾಯಿನೀ ॥

ಅನುವಾದ

ಋಷಿಗಳು ಹೇಳಿದರು — ಈ ಗಂಡುಮಗುವು ಭಗವಾನ್ ಶ್ರೀವಿಷ್ಣುವಿನ ಭುವನಪಾಲಿನಿಯಾದ ಕಲೆಯಿಂದ (ಅಂಶದಿಂದ) ಪ್ರಕಟವಾಗಿದೆ. ಹಾಗೆಯೇ ಈ ಹೆಣ್ಣು ಮಗುವು ಆ ಪರಮಪುರುಷನನ್ನು ಎಂದೂ ಅಗಲದೇ ಇರುವ ಶ್ರೀಲಕ್ಷ್ಮೀದೇವಿಯ ಅಂಶಾವತಾರವಾಗಿದೆ. ॥3॥

(ಶ್ಲೋಕ - 4)

ಮೂಲಮ್

ಅಯಂ ತು ಪ್ರಥಮೋ ರಾಜ್ಞಾಂ ಪುಮಾನ್ ಪ್ರಥಯಿತಾ ಯಶಃ ।
ಪೃಥುರ್ನಾಮ ಮಹಾರಾಜೋ ಭವಿಷ್ಯತಿ ಪೃಥುಶ್ರವಾಃ ॥

ಅನುವಾದ

ಈ ಪುರುಷಶಿಶುವು ರಾಜರಿಗೆಲ್ಲ ಮೊದಲಿಗನಾಗಿ ತನ್ನ ಸುಕೀರ್ತಿಯನ್ನು ಎಲ್ಲೆಲ್ಲಿಯೂ ಪ್ರಥನ (ವಿಸ್ತಾರ) ಪಡಿಸುವುದರಿಂದ ‘ಪೃಥು’ ಎಂಬ ನಾಮಧೇಯದಿಂದ ಪ್ರಖ್ಯಾತನಾಗುವನು. ॥4॥

(ಶ್ಲೋಕ - 5)

ಮೂಲಮ್

ಇಯಂ ಚ ಸುದತೀ ದೇವೀ ಗುಣಭೂಷಣಭೂಷಣಾ ।
ಅರ್ಚಿರ್ನಾಮ ವರಾರೋಹಾ ಪೃಥುಮೇವಾವರುಂಧತೀ ॥

ಅನುವಾದ

ಅಂತೆಯೇ ಸುಂದರವಾದ ಹಲ್ಲುಗಳಿಂದ ಕೂಡಿ, ಸದ್ಗುಣಗಳಿಂದ ಭೂಷಿತೆಯಾಗಿ ದಿವ್ಯ ಪ್ರಕಾಶದಿಂದ ಬೆಳಗುತ್ತಿರುವ ಈ ಹೆಣ್ಣುಮಗುವು ‘ಅರ್ಚಿ’ (ಪ್ರಕಾಶ) ಎಂಬ ಹೆಸರಿನಿಂದ ಪ್ರಸಿದ್ಧಳಾಗಿ ಈ ಪೃಥು ಚಕ್ರವರ್ತಿಯನ್ನೇ ತನ್ನ ಪತಿಯನ್ನಾಗಿ ವರಿಸುವಳು. ॥5॥

(ಶ್ಲೋಕ - 6)

ಮೂಲಮ್

ಏಷ ಸಾಕ್ಷಾದ್ಧರೇರಂಶೋ ಜಾತೋ ಲೋಕರಿರಕ್ಷಯಾ ।
ಇಯಂ ಚ ತತ್ಪರಾ ಹಿ ಶ್ರೀರನುಜಜ್ಞೇನಪಾಯಿನೀ ॥

ಅನುವಾದ

ಪೃಥುವಿನ ರೂಪದಲ್ಲಿ ಸಾಕ್ಷಾತ್ ಶ್ರೀಮನ್ನಾರಾಯಣನ ಅಂಶವೇ ಲೋಕರಕ್ಷಣೆಗಾಗಿ ಅವತರಿಸಿದೆ. ಹಾಗೆಯೇ ಅರ್ಚಿಯ ರೂಪದಲ್ಲಿ ನಿರಂತರವಾಗಿ ಶ್ರೀಹರಿಯ ಸೇವೆಯಲ್ಲಿ ಸದಾ ನಿರತಳಾಗಿ, ಆತನ ಸಹಚರಿಯಾದ ಶ್ರೀಲಕ್ಷ್ಮೀದೇವಿಯೇ ಆವಿರ್ಭವಿಸಿದ್ದಾಳೆ.॥6॥

(ಶ್ಲೋಕ - 7)

ಮೂಲಮ್ (ವಾಚನಮ್)

ಮೈತ್ರೇಯ ಉವಾಚ

ಮೂಲಮ್

ಪ್ರಶಂಸಂತಿ ಸ್ಮ ತಂ ವಿಪ್ರಾ ಗಂಧರ್ವಪ್ರವರಾ ಜಗುಃ ।
ಮುಮುಚುಃ ಸುಮನೋಧಾರಾಃ ಸಿದ್ಧಾ ನೃತ್ಯಂತಿ ಸ್ವಃಸಿಯಃ ॥

ಅನುವಾದ

ಶ್ರೀಮೈತ್ರೇಯರು ಹೇಳುತ್ತಾರೆ — ವಿದುರನೇ! ಆಗ ಬ್ರಾಹ್ಮಣರು ಪೃಥುವನ್ನು ಸ್ತುತಿಸತೊಡಗಿದರು. ಗಂಧರ್ವ ಶ್ರೇಷ್ಠರು ಆತನ ಗುಣಗಾನ ಮಾಡಿದರು. ಸಿದ್ಧರು ಪುಷ್ಪವೃಷ್ಟಿಯನ್ನು ಗೈದರು. ಅಪ್ಸರೆಯರು ನಾಟ್ಯವಾಡ ತೊಡಗಿದರು. ॥7॥

(ಶ್ಲೋಕ - 8)

ಮೂಲಮ್

ಶಂಖತೂರ್ಯಮೃದಂಗಾದ್ಯಾ ನೇದುರ್ದುಂದುಭಯೋ ದಿವಿ ।
ತತ್ರ ಸರ್ವ ಉಪಾಜಗ್ಮುರ್ದೇವರ್ಷಿಪಿತೃಣಾಂ ಗಣಾಃ ॥

ಅನುವಾದ

ಆಕಾಶದಲ್ಲಿ ಶಂಖ, ತೂರ್ಯ, ಮೃದಂಗ, ದುಂದುಭಿ ಮುಂತಾದ ವಾದ್ಯಗಳು ಮೊಳಗಿದವು. ಸಮಸ್ತ ದೇವತೆಗಳೂ, ಋಷಿಗಳೂ, ಪಿತೃಗಳೂ ತಮ್ಮ-ತಮ್ಮ ಲೋಕ ಗಳಿಂದ ಅಲ್ಲಿಗೆ ಆಗಮಿಸಿದರು. ॥8॥

(ಶ್ಲೋಕ - 9)

ಮೂಲಮ್

ಬ್ರಹ್ಮಾ ಜಗದ್ಗುರುರ್ದೇವೈಃ ಸಹಾಸೃತ್ಯ ಸುರೇಶ್ವರೈಃ ।
ವೈನ್ಯಸ್ಯ ದಕ್ಷಿಣೇ ಹಸ್ತೇ ದೃಷ್ಟ್ವಾ ಚಿಹ್ನಂ ಗದಾಭೃತಃ ॥

(ಶ್ಲೋಕ - 10)

ಮೂಲಮ್

ಪಾದಯೋರರವಿಂದಂ ಚ ತಂ ವೈ ಮೇನೇ ಹರೇಃ ಕಲಾಮ್ ।
ಯಸ್ಯಾಪ್ರತಿಹತಂ ಚಕ್ರಮಂಶಃ ಸ ಪರಮೇಷ್ಠಿನಃ ॥

ಅನುವಾದ

ಜಗತ್ತಿಗೆ ಗುರುವಾದ ಬ್ರಹ್ಮದೇವರೂ ಇತರ ದೇವತಾ ಮುಖ್ಯರೊಂದಿಗೆ ದಯಮಾಡಿಸಿದರು. ಅವರು ಆ ವೇನಪುತ್ರ ಪೃಥುವಿನ ಬಲಗೈಯಲ್ಲಿ ಭಗವಾನ್ ಶ್ರೀವಿಷ್ಣುವಿನ ಹಸ್ತರೇಖೆಗಳನ್ನೂ, ಕಾಲುಗಳಲ್ಲಿ ಕಮಲದ ಚಿಹ್ನೆಗಳನ್ನು ಕಂಡು ಅವನು ಶ್ರೀಹರಿಯ ಅಂಶವೆಂದೇ ತಿಳಿದರು. ಏಕೆಂದರೆ ಯಾರ ಕೈಯಲ್ಲಿ ಇತರ ರೇಖೆಗಳ ಮಿಶ್ರಣವಿಲ್ಲದೆ ಚಕ್ರದ ಚಿಹ್ನೆಯು ಇರುತ್ತದೋ ಅವನು ಭಗವಂತನ ಅಂಶನೇ ಆಗಿರುತ್ತಾನೆ. ॥9-10॥

(ಶ್ಲೋಕ - 11)

ಮೂಲಮ್

ತಸ್ಯಾಭಿಷೇಕ ಆರಬ್ಧೋ ಬ್ರಾಹ್ಮಣೈರ್ಬ್ರಹ್ಮವಾದಿಭಿಃ ।
ಆಭಿಷೇಚನಿಕಾನ್ಯಸ್ಮೈ ಆಜಹ್ರುಃ ಸರ್ವತೋ ಜನಾಃ ॥

ಅನುವಾದ

ವೇದವಾದಿಗಳಾದ ಬ್ರಾಹ್ಮಣರು ಮಹಾರಾಜಾ ಪೃಥುವಿನ ಪಟ್ಟಾಭಿಷೇಕ ಮಾಡಬೇಕೆಂದು ಸಿದ್ಧತೆ ನಡೆಸಿದರು. ಎಲ್ಲ ಜನರೂ ಅದಕ್ಕಾಗಿ ಸಾಮಗ್ರಿಗಳನ್ನು ಸಂಗ್ರಹಿಸ ತೊಡಗಿದರು. ॥11॥

(ಶ್ಲೋಕ - 12)

ಮೂಲಮ್

ಸರಿತ್ಸಮುದ್ರಾ ಗಿರಯೋ ನಾಗಾ ಗಾವಃ ಖಗಾ ಮೃಗಾಃ ।
ದ್ಯೌಃ ಕ್ಷಿತಿಃ ಸರ್ವಭೂತಾನಿ ಸಮಾಜಹ್ರುರುಪಾಯನಮ್ ॥

ಅನುವಾದ

ಆಗ ನದಿಗಳು, ಸಮುದ್ರಗಳು, ಪರ್ವತಗಳು, ಸರ್ಪಗಳು, ಗೋವುಗಳು, ಪಕ್ಷಿಗಳು, ಮೃಗಗಳು, ಸ್ವರ್ಗಲೋಕ, ಭೂಲೋಕಗಳು, ಇತರ ಪ್ರಾಣಿಗಳೂ ಆ ರಾಜನಿಗೆ ನಾನಾಬಗೆಯ ಕಾಣಿಕೆಗಳನ್ನು ಅರ್ಪಿಸಿದರು. ॥12॥

(ಶ್ಲೋಕ - 13)

ಮೂಲಮ್

ಸೋಭಿಷಿಕ್ತೋ ಮಹಾರಾಜಃ ಸುವಾಸಾಃ ಸಾಧ್ವಲಂಕೃತಃ ।
ಪತ್ನ್ಯಾರ್ಚಿಷಾಲಂಕೃತಯಾ ವಿರೇಜೇಗ್ನಿರಿವಾಪರಃ ॥

ಅನುವಾದ

ಸುಂದರವಾದ ಉಡಿಗೆ-ತೊಡಿಗೆಗಳಿಂದ ಅಲಂಕೃತನಾಗಿದ್ದ ಪೃಥುಮಹಾರಾಜನಿಗೆ ವಿಧಿವತ್ತಾಗಿ ಪಟ್ಟಾಭಿಷೇಕ ನಡೆಯಿತು. ಆಗ ದಿವ್ಯ ವಸ್ತ್ರಾಭರಣಗಳಿಂದ ಅಲಂಕೃತೆಯಾದ ಮಹಾರಾಣಿ ಅರ್ಚಿಯಿಂದೊಡಗೂಡಿದ ಪೃಥುವು ಮತ್ತೊಬ್ಬ ಅಗ್ನಿದೇವನಂತೆ ಬೆಳಗುತ್ತಿದ್ದನು. ॥13॥

(ಶ್ಲೋಕ - 14)

ಮೂಲಮ್

ತಸ್ಮೈ ಜಹಾರ ಧನದೋ ಹೈಮಂ ವೀರ ವರಾಸನಮ್ ।
ವರುಣಃ ಸಲಿಲಸ್ರಾವಮಾತಪತ್ರಂ ಶಶಿಪ್ರಭಮ್ ॥

ಅನುವಾದ

ವೀರವರ ವಿದುರನೇ! ಆಗ ಕುಬೇರನು ಆತನಿಗೆ ಅತಿ ಸುಂದರವಾದ ಸಿಂಹಾಸನವನ್ನು ಸಮರ್ಪಿಸಿದನು. ವರುಣನು ನೀರಿನ ಹನಿಗಳು ತೊಟ್ಟಿಕ್ಕುತ್ತಿದ್ದ ಚಂದ್ರನಂತೆ ಪ್ರಕಾಶಮಯ ಶ್ವೇತಛತ್ರವನ್ನು ಅರ್ಪಣೆ ಮಾಡಿದನು. ॥14॥

(ಶ್ಲೋಕ - 15)

ಮೂಲಮ್

ವಾಯುಶ್ಚ ವಾಲವ್ಯಜನೇ ಧರ್ಮಃ ಕೀರ್ತಿಮಯೀಂ ಸ್ರಜಮ್ ।
ಇಂದ್ರಃ ಕಿರೀಟಮುತ್ಕೃಷ್ಟಂ ದಂಡಂ ಸಂಯಮನಂ ಯಮಃ ॥

(ಶ್ಲೋಕ - 16)

ಮೂಲಮ್

ಬ್ರಹ್ಮಾ ಬ್ರಹ್ಮಮಯಂ ವರ್ಮ ಭಾರತೀ ಹಾರಮುತ್ತಮಮ್ ।
ಹರಿಃ ಸುದರ್ಶನಂ ಚಕ್ರಂ ತತ್ಪತ್ನ್ಯವ್ಯಾಹತಾಂ ಶ್ರಿಯಮ್ ॥

(ಶ್ಲೋಕ - 17)

ಮೂಲಮ್

ದಶಚಂದ್ರಮಸಿಂ ರುದ್ರಃ ಶತಚಂದ್ರಂ ತಥಾಂಬಿಕಾ ।
ಸೋಮೋಮೃತಮಯಾನಶ್ವಾಂಸ್ತ್ವಷ್ಟಾ ರೂಪಾಶ್ರಯಂ ರಥಮ್ ॥

(ಶ್ಲೋಕ - 18)

ಮೂಲಮ್

ಅಗ್ನಿರಾಜಗವಂ ಚಾಪಂ ಸೂರ್ಯೋ ರಶ್ಮಿಮಯಾನಿಷೂನ್ ।
ಭೂಃ ಪಾದುಕೇ ಯೋಗಮಯ್ಯೌ ದ್ಯೌಃ ಪುಷ್ಪಾವಲಿಮನ್ವಹಮ್ ॥

(ಶ್ಲೋಕ - 19)

ಮೂಲಮ್

ನಾಟ್ಯಂ ಸುಗೀತಂ ವಾದಿತ್ರಮಂತರ್ಧಾನಂ ಚ ಖೇಚರಾಃ ।
ಋಷಯಶ್ಚಾಶಿಷಃ ಸತ್ಯಾಃ ಸಮುದ್ರಃ ಶಂಖಮಾತ್ಮಜಮ್ ॥

(ಶ್ಲೋಕ - 20)

ಮೂಲಮ್

ಸಿಂಧವಃ ಪರ್ವತಾ ನದ್ಯೋ ರಥವೀಥೀರ್ಮಹಾತ್ಮನಃ ।
ಸೂತೋಥ ಮಾಗಧೋ ವಂದೀ ತಂ ಸ್ತೋತುಮುಪತಸ್ಥಿರೇ ॥

ಅನುವಾದ

ವಾಯುವು ಎರಡು ದಿವ್ಯವಾದ ಚಾಮರಗಳನ್ನು, ಧರ್ಮ ದೇವತೆಯು ಕೀರ್ತಿಮಯವಾದ ಮಾಲೆಯನ್ನು ಇಂದ್ರನು ಮನೋಹರ ಕಿರೀಟವನ್ನೂ, ಯಮನು ದುಷ್ಟರನ್ನು ದಮನಗೊಳಿಸುವ ದಂಡವನ್ನೂ, ಬ್ರಹ್ಮದೇವರು ವೇದಮಯ ಕವಚವನ್ನು, ಸರಸ್ವತಿಯು ಸುಂದರವಾದ ಹಾರವನ್ನು, ಭಗವಾನ್ ಮಹಾವಿಷ್ಣುವು ಸುದರ್ಶನಚಕ್ರವನ್ನು, ಆತನ ಮನದನ್ನೆಯಾದ ಲಕ್ಷ್ಮೀದೇವಿಯು ಶಾಶ್ವತವಾದ ಐಶ್ವರ್ಯವನ್ನು, ರುದ್ರದೇವರು ಹತ್ತು ಚಂದ್ರಾಕಾರದ ಚಿಹ್ನೆಗಳಿಂದ ಬೆಳಗುತ್ತಿದ್ದ ಒರೆಸಹಿತ ಖಡ್ಗವನ್ನು, ಅಂಬಿಕಾದೇವಿಯು ನೂರು ಚಂದ್ರಾಕಾರ ಚಿಹ್ನೆಗಳಿಂದ ಶೋಭಿಸುವ ಗುರಾಣಿಯನ್ನು, ಚಂದ್ರನು ಅಮೃತಮಯವಾದ ಅಶ್ವಗಳನ್ನು, ವಿಶ್ವ ಕರ್ಮನು ಸುಂದರವಾದ ರಥವನ್ನು, ಅಗ್ನಿಯು ಆಜಗವ ಎಂಬ ದೃಢವಾದ ಧನುಸ್ಸನ್ನು, ಸೂರ್ಯನು ತೇಜೋ ಮಯವಾದ ಬಾಣಗಳನ್ನು, ಭೂದೇವಿಯು ಇಷ್ಟಬಂದ ಕಡೆಗೆ ಕೊಂಡೊಯ್ಯುವ ಯೋಗಶಕ್ತಿಯಿಂದ ಕೂಡಿದ ಪಾದುಕೆಗಳನ್ನು, ಸ್ವರ್ಗಾಭಿಮಾನಿ ದ್ಯುದೇವತೆಯು ಎಂದೆಂದಿಗೂ ಬಾಡದಿರುವ ಪುಷ್ಪಮಾಲೆಯನ್ನು, ಆಕಾಶ ವಿಹಾರಿಗಳಾದ ಸಿದ್ಧ-ಗಂಧರ್ವಾದಿಗಳು ನೃತ್ಯ-ಗಾನ-ವಾದ್ಯವಾದನ ಮಾಡುವ ಕಲೆಯನ್ನು ಮತ್ತು ಇಷ್ಟ ಬಂದಾಗ ಅಂತರ್ಧಾನ ಹೊಂದುವ ಶಕ್ತಿಗಳನ್ನು ಬಳುವಳಿಯಾಗಿ ಕೊಟ್ಟರು. ಋಷಿಗಳು ಅಮೋಘವಾದ ಆಶೀರ್ವಾದಗಳನ್ನು ಅನುಗ್ರಹಿಸಿದರು. ಸಮುದ್ರರಾಜನು ತನ್ನಲ್ಲಿ ದೊರೆತ ದಿವ್ಯ ಶಂಖವನ್ನು ಸಮರ್ಪಿಸಿದನು. ಸಪ್ತಸಾಗರಗಳೂ, ಪರ್ವತಗಳೂ, ನದಿಗಳೂ ಆತನ ರಥಕ್ಕೆ ಅಡೆ-ತಡೆಯಿಲ್ಲದ ಮಾರ್ಗವನ್ನು ಕಾಣಿಕೆಯಾಗಿ ಕೊಟ್ಟವು. ಇದಾದ ಬಳಿಕ ಸೂತರು, ವಂದಿಗಳು, ಮಾಗಧರೆಂಬ ಹೊಗಳುಭಟ್ಟರು ಆತನಿಗೆ ಸ್ತೋತ್ರ ಸೇವೆಯನ್ನು ಸಮರ್ಪಿಸಲು ಮುಂದೆ ಬಂದರು. ॥15-20॥

(ಶ್ಲೋಕ - 21)

ಮೂಲಮ್

ಸ್ತಾವಕಾಂಸ್ತಾನಭಿಪ್ರೇತ್ಯ ಪೃಥುರ್ವೈನ್ಯಃ ಪ್ರತಾಪವಾನ್ ।
ಮೇಘನಿರ್ಹ್ರಾದಯಾ ವಾಚಾ ಪ್ರಹಸನ್ನಿದಮಬ್ರವೀತ್ ॥

ಅನುವಾದ

ಆಗ ಆ ಪ್ರತಾಪಶಾಲಿಯಾದ ಪೃಥು ಚಕ್ರವರ್ತಿಯು ಅವರ ಆಶಯವನ್ನು ಅರಿತು, ನಗುತ್ತಾ ಮೇಘದಂತೆ ಗಂಭೀರವಾದ ಮಾತುಗಳಿಂದ ಹೀಗೆಂದನು. ॥21॥

(ಶ್ಲೋಕ - 22)

ಮೂಲಮ್ (ವಾಚನಮ್)

ಪೃಥುರುವಾಚ

ಮೂಲಮ್

ಭೋಃ ಸೂತ ಹೇ ಮಾಗಧ ಸೌಮ್ಯ ವಂದಿ-
ಲ್ಲೋಕೇಧುನಾಸ್ಪಷ್ಟಗುಣಸ್ಯ ಮೇ ಸ್ಯಾತ್ ।
ಕಿಮಾಶ್ರಯೋ ಮೇ ಸ್ತವ ಏಷ ಯೋಜ್ಯತಾಂ
ಮಾ ಮಯ್ಯಭೂವನ್ವಿತಥಾ ಗಿರೋ ವಃ ॥

ಅನುವಾದ

ಪೃಥುವು ಹೇಳಿದನು — ಸೌಮ್ಯರಾದ ಸೂತ-ಮಾಗಧ-ವಂದಿಗಳೇ! ನನ್ನ ಯಾವ ಗುಣವೂ ಇಲ್ಲಿಯವರೆಗೆ ಲೋಕದಲ್ಲಿ ಪ್ರಕಟವಾಗಿಲ್ಲ. ಹೀಗಿರುವಾಗ ನನ್ನ ಯಾವ ಗುಣಗಳನ್ನು ಸ್ತೋತ್ರ ಮಾಡುವಿರಿ? ನಿಮ್ಮ ಮಾತುಗಳು ವ್ಯರ್ಥವಾಗಬಾರದು. ನನ್ನ ಬಗೆಗೆ ಸುಳ್ಳುಹೊಗಳಿಕೆಯಾಗಬಾರದು. ಆದ್ದರಿಂದ ನನ್ನಿಂದ ಬೇರೆ ಯಾರನ್ನಾದರೂ ಸ್ತುತಿಮಾಡಿರಿ. ॥22॥

(ಶ್ಲೋಕ - 23)

ಮೂಲಮ್

ತಸ್ಮಾತ್ಪರೋಕ್ಷೇಸ್ಮ ದುಪಶ್ರುತಾನ್ಯಲಂ-
ಕರಿಷ್ಯಥ ಸ್ತೋತ್ರಮಪೀಚ್ಯವಾಚಃ ।
ಸತ್ಯುತ್ತಮಶ್ಲೋಕಗುಣಾನುವಾದೇ
ಜುಗುಪ್ಸಿತಂ ನ ಸ್ತವಯಂತಿ ಸಭ್ಯಾಃ ॥

ಅನುವಾದ

ಎಲೈ ಮೃದುಭಾಷಿಗಳೇ! ಕಾಲಾಂತರದಲ್ಲಿ ನನ್ನ ಗುಣಗಳು ಪ್ರಕಟವಾದಾಗ ಅವುಗಳನ್ನು ಬಾಯಿ ತುಂಬಾ ಸವಿಮಾತುಗಳಿಂದ ಸ್ತುತಿಸುವಿರಂತೆ. ಪವಿತ್ರಕೀರ್ತಿಯುಳ್ಳ ಶ್ರೀಭಗವಂತನ ಗುಣಗಳನ್ನು ಸ್ತೋತ್ರಮಾಡಬಹುದಾಗಿರುವಾಗ ಅದನ್ನು ಬಿಟ್ಟು ಶಿಷ್ಟರಾದವರು ತುಚ್ಛವಾದ ನರಸ್ತುತಿಯನ್ನು ಮಾಡುವುದಿಲ್ಲ. ॥23॥

(ಶ್ಲೋಕ - 24)

ಮೂಲಮ್

ಮಹದ್ಗುಣಾನಾತ್ಮನಿ ಕರ್ತುಮೀಶಃ
ಕಃ ಸ್ತಾವಕೈಃ ಸ್ತಾವಯತೇಸತೋಪಿ ।
ತೇಸ್ಯಾಭವಿಷ್ಯನ್ನಿತಿ ವಿಪ್ರಲಬ್ಧೋ
ಜನಾವಹಾಸಂ ಕುಮತಿರ್ನ ವೇದ ॥

ಅನುವಾದ

ಮಹಾನ್ ಗುಣಗಳನ್ನು ಧಾರಣೆ ಮಾಡಲು ಸಾಮರ್ಥ್ಯವಿದ್ದರೂ, ಯಾವುದು ತನ್ನಲ್ಲಿ ಇಲ್ಲದಿದ್ದರೂ ಕೇವಲ ಊಹಾಮಾತ್ರದಿಂದ ಸ್ತುತಿಮಾಡುವವರ ಮೂಲಕ ಯಾವ ಬುದ್ಧಿವಂತ ಮನುಷ್ಯನು ತನ್ನನ್ನು ಹೊಗಳಿಸಿಕೊಳ್ಳಬಲ್ಲನು? ಏಕೆಂದರೆ ಗುಣಗಳು ಪ್ರಕಟಗೊಳ್ಳುವ ಮೊದಲೇ ಸ್ತುತಿಸುವುದು ವಂಚನೆಯೇ ಆಗಿದೆ. ಜನರು ಈ ರೀತಿ ತನ್ನನ್ನು ಅಪ ಹಾಸ್ಯ ಮಾಡುತ್ತಿದ್ದಾರೆ ಎಂಬುದನ್ನು ಆ ತಿಳಿಗೇಡಿಯು ತಿಳಿಯುವುದಿಲ್ಲ. ॥24॥

(ಶ್ಲೋಕ - 25)

ಮೂಲಮ್

ಪ್ರಭವೋ ಹ್ಯಾತ್ಮನಃ ಸ್ತೋತ್ರಂ ಜುಗುಪ್ಸಂತ್ಯಪಿ ವಿಶ್ರುತಾಃ ।
ಹ್ರೀಮಂತಃ ಪರಮೋದಾರಾಃ ಪೌರುಷಂ ವಾ ವಿಗರ್ಹಿತಮ್ ॥

ಅನುವಾದ

ಲಜ್ಜೆಯುಳ್ಳ ಉದಾರ ಪುರುಷನು ತನ್ನ ಯಾವುದೋ ನಿಂದಿತ ಪರಾಕ್ರಮದ ಚರ್ಚೆ ನಡೆದರೆ ಅದರ ಕುರಿತು ಜುಗುಪ್ಸೆ ಪಡುತ್ತಾರೆ. ಹೀಗೆಯೇ ಲೋಕವಿಖ್ಯಾತ ಸಮರ್ಥ ಮನುಷ್ಯರು ತನ್ನ ಸ್ತುತಿಯನ್ನೂ ನಿಂದೆಯೆಂದೇ ತಿಳಿಯುತ್ತಾರೆ. ॥25॥

(ಶ್ಲೋಕ - 25)

ಮೂಲಮ್

ವಯಂ ತ್ವವಿದಿತಾ ಲೋಕೇ ಸೂತಾದ್ಯಾಪಿ ವರೀಮಭಿಃ ।
ಕರ್ಮಭಿಃ ಕಥಮಾತ್ಮಾನಂ ಗಾಪಯಿಷ್ಯಾಮ ಬಾಲವತ್ ॥

ಅನುವಾದ

ಎಲೈ ಸೂತರೇ! ಇನ್ನೂ ನಾವು ನಮ್ಮ ಶ್ರೇಷ್ಠವಾದ ಕರ್ಮಗಳಿಂದ ಲೋಕದಲ್ಲಿ ಪ್ರಸಿದ್ಧಿಗೆ ಬರಲಿಲ್ಲ. ಪ್ರಶಂಸೆಗೆ ಯೋಗ್ಯವಾದ ಯಾವ ಕರ್ಮವನ್ನೂ ಮಾಡಿಲ್ಲ. ಹೀಗಿರುವಾಗ ಬಾಲಕರಂತೆ ನಿಮ್ಮಿಂದ ಹೇಗೆ ಹೊಗಳಿಸಿಕೊಳ್ಳಲಿ? ॥26॥

ಅನುವಾದ (ಸಮಾಪ್ತಿಃ)

ಹದಿನೈದನೆಯ ಅಧ್ಯಾಯವು ಮುಗಿಯಿತು. ॥15॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಚತುರ್ಥಸ್ಕಂಧೇ ಪೃಥುಚರಿತೇ ಪಂಚದಶೋಽಧ್ಯಾಯಃ ॥15॥