೧೪

[ಹದಿನಾಲ್ಕನೆಯ ಅಧ್ಯಾಯ]

ಭಾಗಸೂಚನಾ

ವೇನರಾಜನ ಚರಿತ್ರೆ

(ಶ್ಲೋಕ - 1)

ಮೂಲಮ್ (ವಾಚನಮ್)

ಮೈತ್ರೇಯ ಉವಾಚ

ಮೂಲಮ್

ಭೃಗ್ವಾದಯಸ್ತೇ ಮುನಯೋ ಲೋಕಾನಾಂ ಕ್ಷೇಮದರ್ಶಿನಃ ।
ಗೋಪ್ತರ್ಯಸತಿ ವೈ ನೃಣಾಂ ಪಶ್ಯಂತಃ ಪಶುಸಾಮ್ಯತಾಮ್ ॥

ಅನುವಾದ

ಶ್ರೀಮೈತ್ರೇಯರು ಹೇಳುತ್ತಾರೆ — ಎಲೈ ವಿದುರನೇ! ಅಲ್ಲಿ ನೆರೆದಿದ್ದ ಭೃಗುವೇ ಮುಂತಾದ ಮಹರ್ಷಿಗಳು ಎಲ್ಲ ಲೋಕಗಳಿಗೆ ಕ್ಷೇಮವಾಗಿರಬೇಕಾದರೆ ಏನು ಮಾಡ ಬಹುದೆಂದು ಚಿಂತಿಸಿದರು. ಅಂಗರಾಜನು ಹೊರಟು ಹೋದ ಬಳಿಕ ಪ್ರಜಾಪಾಲಕನಾದ ರಾಜನಿಲ್ಲದಿದ್ದರೆ ಎಲ್ಲರೂ ಪಶುಗಳಂತೆ ಸ್ವೇಚ್ಛಾಚಾರಿಗಳಾಗಿ ನಾಶವಾಗುವರು. ॥1॥

(ಶ್ಲೋಕ - 2)

ಮೂಲಮ್

ವೀರಮಾತರಮಾಹೂಯ ಸುನೀಥಾಂ ಬ್ರಹ್ಮವಾದಿನಃ ।
ಪ್ರಕೃತ್ಯಸಮ್ಮತಂ ವೇನಮಭ್ಯಷಿಂಚನ್ ಪತಿಂ ಭುವಃ ॥

ಅನುವಾದ

ಆಗ ಅವರು ವೀರನಾದ ರಾಜಪುತ್ರನ ತಾಯಿಯಾದ ಸುನೀಥಾದೇವಿಯ ಸಮ್ಮತಿಯನ್ನು ಪಡೆದು, ಮಂತ್ರಿಗಳಿಗೆ ಸಹಮತವಿಲ್ಲದಿದ್ದರೂ ವೇನನನ್ನು ಭೂಮಂಡಲದ ರಾಜ್ಯಕ್ಕೆ ಪಟ್ಟಾಭಿಷೇಕ ಮಾಡಿದರು. ॥2॥

(ಶ್ಲೋಕ - 3)

ಮೂಲಮ್

ಶ್ರುತ್ವಾ ನೃಪಾಸನಗತಂ ವೇನಮತ್ಯುಗ್ರಶಾಸನಮ್ ।
ನಿಲಿಲ್ಯುರ್ದಸ್ಯವಃ ಸದ್ಯಃ ಸರ್ಪತ್ರಸ್ತಾ ಇವಾಖವಃ ॥

ಅನುವಾದ

ವೇನನು ತುಂಬಾ ಕಠೋರ ಶಾಸಕನಾಗಿದ್ದನು. ಅವನೇ ಸಿಂಹಾಸನಾಧಿಪತಿ ಯಾಗಿದ್ದಾನೆಂದು ಕೇಳಿದ ಕಳ್ಳ-ಕಾಕರು ಹಾವಿಗೆ ಹೆದರಿದ ಇಲಿಗಳಂತೆ ಒಡನೆಯೇ ಅಲ್ಲಲ್ಲೇ ಅಡಗಿಕೊಂಡರು. ॥3॥

(ಶ್ಲೋಕ - 4)

ಮೂಲಮ್

ಸ ಆರುಢ ನೃಪಸ್ಥಾನ ಉನ್ನದ್ಧೋಷ್ಟ ವಿಭೂತಿಭಿಃ ।
ಅವಮೇನೇ ಮಹಾಭಾಗಾನ್ ಸ್ತಬ್ಧಃ ಸಂಭಾವಿತಃ ಸ್ವತಃ ॥

ಅನುವಾದ

ಸಿಂಹಾಸನವು ದೊರೆತಾಗ ವೇನನು ಅಷ್ಟದಿಕ್ಪಾಲಕರ ಐಶ್ವರ್ಯದ ಕಲೆಯ ಕಾರಣದಿಂದ ಉನ್ಮತ್ತನಾದನು. ಅವನು ದುರಭಿಮಾನದಿಂದ ತನ್ನನ್ನೇ ಸರ್ವಶ್ರೇಷ್ಠನೆಂದು ಭಾವಿಸಿ ಕೊಂಡು ಮಹಾಪುರುಷರನ್ನು ಅವಮಾನಿಸತೊಡಗಿದನು. ॥4॥

(ಶ್ಲೋಕ - 5)

ಮೂಲಮ್

ಏವಂ ಮದಾಂಧ ಉತ್ಸಿಕ್ತೋ ನಿರಂಕುಶ ಇವ ದ್ವಿಪಃ ।
ಪರ್ಯಟನ್ರಥಮಾಸ್ಥಾಯ ಕಂಪಯನ್ನಿವ ರೋದಸೀ ॥

ಅನುವಾದ

ಅವನು ಐಶ್ವರ್ಯಮದದಿಂದ ಕುರುಡನಾಗಿ ರಥವನ್ನು ಏರಿ ನಿರಂಕುಶವಾದ ಗಜರಾಜನಂತೆ ಭೂಮಿ ಮತ್ತು ಆಕಾಶಗಳನ್ನು ನಡುಗಿಸುತ್ತಾ ಎಲ್ಲೆಡೆ ಸಂಚರಿಸತೊಡಗಿದನು.॥5॥

(ಶ್ಲೋಕ - 6)

ಮೂಲಮ್

ನ ಯಷ್ಟವ್ಯಂ ನ ದಾತವ್ಯಂ ನ ಹೋತವ್ಯಂ ದ್ವಿಜಾಃ ಕ್ವಚಿತ್ ।
ಇತಿ ನ್ಯವಾರಯದ್ಧರ್ಮಂ ಭೇರೀಘೋಷೇಣ ಸರ್ವಶಃ ॥

ಅನುವಾದ

ಇನ್ನು ಮುಂದೆ ಯಾವ ದ್ವಿಜರು ಯಾವುದೇ ರೀತಿಯ ಯಜ್ಞವನ್ನಾಗಲೀ, ದಾನವನ್ನಾಗಲೀ, ಹವನವನ್ನಾಗಲೀ ಮಾಡಕೂಡದೆಂದು ರಾಜ್ಯದಲ್ಲಿ ಡಂಗುರ ಹೊಡೆಸಿದನು. ಎಲ್ಲ ಧರ್ಮ-ಕರ್ಮಗಳನ್ನು ತಡೆದು ನಿಲ್ಲಿಸಿ ಬಿಟ್ಟನು. ॥6॥

ಮೂಲಮ್

(ಶ್ಲೋಕ - 7)
ವೇನಸ್ಯಾವೇಕ್ಷ್ಯ ಮುನಯೋ ದುರ್ವೃತ್ತಸ್ಯ ವಿಚೇಷ್ಟಿತಮ್ ।
ವಿಮೃಶ್ಯ ಲೋಕವ್ಯಸನಂ ಕೃಪಯೋಚುಃ ಸ್ಮ ಸತ್ರಿಣಃ ॥

ಅನುವಾದ

ದುಷ್ಟ ವೇನನ ಇಂತಹ ಅತ್ಯಾಚಾರವನ್ನು ನೋಡಿ ಋಷಿ-ಮುನಿಗಳು ಒಂದೆಡೆ ಸೇರಿ, ಪ್ರಪಂಚಕ್ಕೆ ಮಹಾ ಸಂಕಟ ಬಂದೊದಗಿದೆ ಎಂದು ತಿಳಿದು ಕನಿಕರದಿಂದ ತಮ್ಮಲ್ಲೇ ಮಾತನಾಡಿಕೊಂಡರು. ॥7॥

(ಶ್ಲೋಕ - 8)

ಮೂಲಮ್

ಅಹೋ ಉಭಯತಃ ಪ್ರಾಪ್ತಂ ಲೋಕಸ್ಯ ವ್ಯಸನಂ ಮಹತ್ ।
ದಾರುಣ್ಯುಭಯತೋ ದೀಪ್ತೇ ಇವ ತಸ್ಕರಪಾಲಯೋಃ ॥

ಅನುವಾದ

‘‘ಅಯ್ಯೋ! ಯಾವುದಾ ದರೂ ಮರವು ಎರಡೂ ಕಡೆಯಿಂದ ಉರಿಯುತ್ತಿರುವಾಗ ಅದರ ನಡುವೆ ಸಿಕ್ಕಿದ ಇರುವೆಯೇ ಮುಂತಾದ ಪ್ರಾಣಿಗಳು ಸಂಕಟಪಡುವಂತೆ ಈಗ ಸಮಸ್ತ ಪ್ರಜೆಯು ಒಂದೆಡೆ ರಾಜನ ಅತ್ಯಾಚಾರಗಳಿಂದ ಉಂಟಾದ ವಿಪತ್ತು, ಮತ್ತೊಂದೆಡೆ ಕಳ್ಳ- ಕಾಕರಿಂದ ಒದಗಿಬಂದ ವಿಪತ್ತುಗಳಿಂದ ಮಹಾ ಸಂಕಟಕ್ಕೆ ಸಿಲುಕಿದೆ. ॥8॥

(ಶ್ಲೋಕ - 9)

ಮೂಲಮ್

ಅರಾಜಕಭಯಾದೇಷ ಕೃತೋ ರಾಜಾತದರ್ಹಣಃ ।
ತತೋಪ್ಯಾಸೀದ್ಭಯಂ ತ್ವದ್ಯ ಕಥಂ ಸ್ಯಾತ್ಸ್ವಸ್ತಿ ದೇಹಿನಾಮ್ ॥

ಅನುವಾದ

ಈ ವೇನನು ಅಯೋಗ್ಯನೆಂದು ತಿಳಿದಿದ್ದರೂ ಅರಾಜಕತೆಯು ಬರದಿರಲೆಂದು ನಾವು ಈತನನ್ನು ರಾಜನನ್ನಾಗಿ ಮಾಡಿದೆವು. ಆದರೆ ಈ ರಾಜನಿಂದಲೇ ಪ್ರಜೆಗಳಿಗೆ ಭಯಉಂಟಾಗಿದೆ. ಇಂತಹ ಸ್ಥಿತಿಯಲ್ಲಿ ಪ್ರಜೆಗಳಿಗೆ ಹೇಗೆ ತಾನೇ ಸುಖಶಾಂತಿಗಳು ದೊರಕುವುವು? ॥9॥

(ಶ್ಲೋಕ - 10)

ಮೂಲಮ್

ಅಹೇರಿವ ಪಯಃಪೋಷಃ ಪೋಷಕಸ್ಯಾಪ್ಯನರ್ಥಭೃತ್ ।
ವೇನಃ ಪ್ರಕೃತ್ಯೈವ ಖಲಃ ಸುನೀಥಾಗರ್ಭಸಂಭವಃ ॥

ಅನುವಾದ

ಸುನೀಥಾಳ ಗರ್ಭದಲ್ಲಿ ಹುಟ್ಟಿರುವ ಈ ವೇನನು ಸ್ವಭಾವದಿಂದಲೇ ದುಷ್ಟನು. ಈತನನ್ನು ನಾವು ರಕ್ಷಿಸಿದುದು ಹಾವಿಗೆ ಹಾಲೆರೆದಂತೆ ಅನರ್ಥಕ್ಕೆ ಕಾರಣವಾಯಿತು. ॥10॥

(ಶ್ಲೋಕ - 11)

ಮೂಲಮ್

ನಿರೂಪಿತಃ ಪ್ರಜಾಪಾಲಃ ಸ ಜಿಘಾಂಸತಿ ವೈ ಪ್ರಜಾಃ ।
ತಥಾಪಿ ಸಾಂತ್ವಯೇಮಾಮುಂ ನಾಸ್ಮಾಂಸ್ತತ್ಪಾತಕಂ ಸ್ಪೃಶೇತ್ ॥

ಅನುವಾದ

ಪ್ರಜೆಗಳನ್ನು ರಕ್ಷಿಸುವ ಸಲುವಾಗಿ ನಾವು ಈತನನ್ನು ನೇಮಕ ಮಾಡಿದೆವು. ಆದರೆ ಇವನು ಪ್ರಜೆಗಳನ್ನೇ ನಾಶ ಮಾಡುವುದಕ್ಕಾಗಿ ಬಯಸುತ್ತಿದ್ದಾನೆ. ಆದರೂ ನಾವು ಈತನಿಗೆ ಸಮಾಧಾನದಿಂದ ತಿಳಿವಳಿಕೆ ನೀಡೋಣ. ಹೀಗೆ ಮಾಡಿದರೆ ನಮಗೆ ಈತನ ಪಾಪಗಳು ಅಂಟಿಕೊಳ್ಳುವುದಿಲ್ಲ. ॥11॥

(ಶ್ಲೋಕ - 12)

ಮೂಲಮ್

ತದ್ವಿದ್ವದ್ಭಿರಸದ್ ವೃತ್ತೋ ವೇನೋಸ್ಮಾಭಿಃ ಕೃತೋ ನೃಪಃ ।
ಸಾಂತ್ವಿತೋ ಯದಿ ನೋ ವಾಚಂ ನ ಗ್ರಹೀಷ್ಯತ್ಯಧರ್ಮಕೃತ್ ॥

(ಶ್ಲೋಕ - 13)

ಮೂಲಮ್

ಲೋಕಧಿಕ್ಕಾರಸಂದಗ್ಧಂ ದಹಿಷ್ಯಾಮಃ ಸ್ವತೇಜಸಾ ।
ಏವಮಧ್ಯವಸಾಯೈನಂ ಮುನಯೋ ಗೂಢಮನ್ಯವಃ ।
ಉಪವ್ರಜ್ಯಾಬ್ರುವನ್ವೇನಂ ಸಾಂತ್ವಯಿತ್ವಾ ಚ ಸಾಮಭಿಃ ॥

ಅನುವಾದ

ನಾವು ತಿಳಿದು-ತಿಳಿದು ಈ ದುರಾಚಾರಿಯನ್ನು ರಾಜನನ್ನಾಗಿ ಮಾಡಿದೆವು. ಆದರೆ ತಿಳಿವಳಿಕೆ ನೀಡಿದರೂ ಈತನು ನಮ್ಮ ಮಾತನ್ನು ಕೇಳದೆಹೋದರೆ, ಲೋಕದ ಧಿಕ್ಕಾರದಿಂದ ಈಗಾಗಲೇ ಸುಟ್ಟುಹೋಗಿರುವ ಈತನನ್ನು ನಮ್ಮ ತೇಜಸ್ಸಿ ನಿಂದ ಸುಟ್ಟುಹಾಕಿಬಿಡೋಣ.’’ ಹೀಗೆ ವಿಚಾರ ಮಾಡಿದ ಮಹರ್ಷಿಗಳು ವೇನನ ಬಳಿಗೆ ಹೋಗಿ ತಮ್ಮ ಕೋಪವನ್ನು ಪ್ರಕಟಿಸದೆ ಅಡಗಿಸಿಕೊಂಡು ಅವನನ್ನು ಸವಿನುಡಿಗಳಿಂದ ಸಂತೈಸುತ್ತಾ ಹೀಗೆ ಹೇಳತೊಡಗಿದರು. ॥12-13॥

(ಶ್ಲೋಕ - 14)

ಮೂಲಮ್ (ವಾಚನಮ್)

ಮುನಯ ಊಚುಃ

ಮೂಲಮ್

ನೃಪವರ್ಯ ನಿಬೋಧೈತದ್ಯತ್ತೇ ವಿಜ್ಞಾಪಯಾಮ ಭೋಃ ।
ಆಯುಃಶ್ರೀಬಲಕೀರ್ತೀನಾಂ ತವ ತಾತ ವಿವರ್ಧನಮ್ ॥

ಅನುವಾದ

ಮುನಿಗಳು ಹೇಳಿದರು — ರಾಜನೇ! ನಾವು ನಿನ್ನಲ್ಲಿ ಹೇಳುವ ಮಾತುಗಳ ಕುರಿತು ಗಮನಕೊಟ್ಟು ಕೇಳು. ಇದರಿಂದ ನಿನ್ನ ಆಯುಸ್ಸು, ಸಂಪತ್ತು, ಬಲ, ಕೀರ್ತಿಗಳು ವೃದ್ಧಿ ಹೊಂದುವವು. ॥14॥

(ಶ್ಲೋಕ - 15)

ಮೂಲಮ್

ಧರ್ಮ ಆಚರಿತಃ ಪುಂಸಾಂ ವಾಙ್ಮನಃಕಾಯಬುದ್ಧಿಭಿಃ ।
ಲೋಕಾನ್ವಿಶೋಕಾನ್ವಿತರತ್ಯಥಾನಂತ್ಯಮಸಂಗಿನಾಮ್ ॥

ಅನುವಾದ

ಅಯ್ಯಾ! ಮನುಷ್ಯನು ಮನಸ್ಸು, ಮಾತು, ಶರೀರ ಮತ್ತು ಬುದ್ಧಿ ಇವುಗಳಿಂದ ಧರ್ಮವನ್ನು ಆಚರಿಸಿದರೆ ಅವನಿಗೆ ಸ್ವರ್ಗಾದಿ ಶೋಕರಹಿತವಾದ ಲೋಕಗಳು ದೊರೆಯುವುವು. ಅದನ್ನೇ ಅವನು ನಿಷ್ಕಾಮಭಾವದಿಂದ ಆಚರಿಸಿದರೆ ಆ ಧರ್ಮವು ಅವನನ್ನು ಮೋಕ್ಷಪದಕ್ಕೆ ಒಯ್ಯುವುದು. ॥15॥

(ಶ್ಲೋಕ - 16)

ಮೂಲಮ್

ಸ ತೇ ಮಾ ವಿನಶೇದ್ವೀರ ಪ್ರಜಾನಾಂ ಕ್ಷೇಮಲಕ್ಷಣಃ ।
ಯಸ್ಮಿನ್ವಿನಷ್ಟೇ ನೃಪತಿರೈಶ್ವರ್ಯಾದವರೋಹತಿ ॥

ಅನುವಾದ

ಆದುದರಿಂದ ಎಲೈ ವೀರವರನೇ! ಪ್ರಜೆಗಳ ಕಲ್ಯಾಣ ರೂಪವಾದ ಈ ಧರ್ಮವು ನಿನ್ನ ಕಾರಣದಿಂದ ನಾಶವಾಗ ಬಾರದು. ಧರ್ಮವು ನಷ್ಟವಾದದ್ದೇ ಆದರೆ ಅದರಿಂದ ರಾಜನೂ ಐಶ್ವರ್ಯದಿಂದ ಚ್ಯುತನಾಗುವನು. ॥16॥

(ಶ್ಲೋಕ - 17)

ಮೂಲಮ್

ರಾಜನ್ನಸಾಧ್ವಮಾತ್ಯೇಭ್ಯಶ್ಚೋರಾದಿಭ್ಯಃ ಪ್ರಜಾ ನೃಪಃ ।
ರಕ್ಷನ್ ಯಥಾ ಬಲಿಂ ಗೃಹ್ಣನ್ನಿಹ ಪ್ರೇತ್ಯ ಚ ಮೋದತೇ ॥

ಅನುವಾದ

ದುಷ್ಟರಾದ ಮಂತ್ರಿಗಳಿಂದ ಮತ್ತು ಕಳ್ಳ-ಕಾಕರೇ ಮುಂತಾದವರಿಂದ ತನ್ನ ಪ್ರಜೆಗಳನ್ನು ರಕ್ಷಿಸುತ್ತಾ, ನ್ಯಾಯಕ್ಕನುಗುಣವಾದ ಕಂದಾಯ, ಕಪ್ಪ-ಕಾಣಿಕೆಗಳನ್ನು ಪ್ರಜೆಗಳಿಂದ ಸ್ವೀಕರಿಸುವ ರಾಜನು ಇಹಲೋಕ ಮತ್ತು ಪರಲೋಕಗಳೆರಡರಲ್ಲಿಯೂ ಸುಖವನ್ನು ಪಡೆಯುವನು. ॥17॥

(ಶ್ಲೋಕ - 18)

ಮೂಲಮ್

ಯಸ್ಯ ರಾಷ್ಟ್ರೇ ಪುರೇ ಚೈವ ಭಗವಾನ್ಯಜ್ಞಪೂರುಷಃ ।
ಇಜ್ಯತೇ ಸ್ವೇನ ಧರ್ಮೇಣ ಜನೈರ್ವರ್ಣಾಶ್ರಮಾನ್ವಿತೈಃ ॥

(ಶ್ಲೋಕ - 19)

ಮೂಲಮ್

ತಸ್ಯ ರಾಜ್ಞೋ ಮಹಾಭಾಗ ಭಗವಾನ್ ಭೂತಭಾವನಃ ।
ಪರಿತುಷ್ಯತಿ ವಿಶ್ವಾತ್ಮಾ ತಿಷ್ಠತೋ ನಿಜಶಾಸನೇ ॥

ಅನುವಾದ

ಎಲೈ ಮಹಾಭಾಗನೇ! ಯಾವ ರಾಜನ ರಾಜ್ಯದಲ್ಲಿ ಅಥವಾ ನಗರದಲ್ಲಿ ಜನರು ವರ್ಣಾಶ್ರಮ ಧರ್ಮವನ್ನು ಪಾಲಿಸುವರೋ, ಸ್ವಧರ್ಮಪಾಲನೆಯ ಮೂಲಕ ಭಗವಾನ್ ಯಜ್ಞಪುರುಷನನ್ನು ಆರಾಧಿಸುತ್ತಾರೆಯೋ, ಅಂತಹ ತನ್ನ ಆಜ್ಞೆಯನ್ನು ಪಾಲಿಸುವ ರಾಜನ ವಿಷಯದಲ್ಲಿ ಶ್ರೀಭಗ ವಂತನು ಪ್ರಸನ್ನನಾಗಿರುತ್ತಾನೆ. ಏಕೆಂದರೆ, ಆ ಭಗವಂತನೇ ಇಡೀ ವಿಶ್ವಕ್ಕೆ ಆತ್ಮಸ್ವರೂಪನಾಗಿ, ಸಮಸ್ತ ಪ್ರಾಣಿಗಳನ್ನು ಸಂರಕ್ಷಿಸುತ್ತಿರುವನು. ॥18-19॥

(ಶ್ಲೋಕ - 20)

ಮೂಲಮ್

ತಸ್ಮಿಂಸ್ತುಷ್ಟೇ ಕಿಮಪ್ರಾಪ್ಯಂ ಜಗತಾಮೀಶ್ವರೇಶ್ವರೇ ।
ಲೋಕಾಃ ಸಪಾಲಾ ಹ್ಯೇತಸ್ಮೈ ಹರಂತಿ ಬಲಿಮಾದೃತಾಃ ॥

ಅನುವಾದ

ಶ್ರೀಭಗವಂತನೇ ಬ್ರಹ್ಮಾದಿ ಜಗದೀಶ್ವರರಿಗೂ ಈಶ್ವರನಾಗಿದ್ದಾನೆ. ಆತನ ಪ್ರಸನ್ನತೆಯನ್ನು ಸಂಪಾದಿಸಿದರೆ ಯಾವ ವಸ್ತುವೂ ದುರ್ಲಭ ವಾಗುವುದಿಲ್ಲ. ಅದಕ್ಕಾಗಿಯೇ ಇಂದ್ರನೇ ಮುಂತಾದ ಲೋಕ ಪಾಲಕರಿಂದೊಡಗೂಡಿದ ಸಮಸ್ತ ಲೋಕಗಳು ಆತನಿಗೆ ಅತ್ಯಂತ ಆದರದಿಂದ ಪೂಜೆ-ಉಪಹಾರಗಳನ್ನು ಸಮರ್ಪಿಸುತ್ತವೆ. ॥20॥

(ಶ್ಲೋಕ - 21)

ಮೂಲಮ್

ತಂ ಸರ್ವಲೋಕಾಮರಯಜ್ಞ ಸಂಗ್ರಹಂ
ತ್ರಯೀಮಯಂ ದ್ರವ್ಯಮಯಂ ತಪೋಮಯಮ್ ।
ಯಜ್ಞೈರ್ವಿಚಿತ್ರೈರ್ಯಜತೋ ಭವಾಯ ತೇ
ರಾಜನ್ ಸ್ವದೇಶಾನನುರೋದ್ಧು ಮರ್ಹಸಿ ॥

ಅನುವಾದ

ಎಲೈ ರಾಜನೇ! ಭಗವಾನ್ ಶ್ರೀಹರಿಯು ಸಮಸ್ತಲೋಕಗಳಿಗೂ, ಲೋಕಪಾಲಕರಿಗೂ, ಯಜ್ಞಗಳಿಗೂ ನಿಯಾಮಕನಾಗಿದ್ದಾನೆ. ವೇದತ್ರಯರೂಪನೂ, ದ್ರವ್ಯರೂಪನೂ, ತಪೋರೂಪನೂ ಆಗಿರುವನು. ಆದುದ ರಿಂದ ನಿನ್ನ ದೇಶದಲ್ಲಿ ವಾಸಿಸುವ ಜನರು ನಿನ್ನ ಏಳಿಗೆಗಾಗಿ ಹಲವಾರು ಯಜ್ಞಗಳ ಮೂಲಕ ಶ್ರೀಭಗವಂತನ ಆರಾಧನೆ ಯನ್ನು ಮಾಡಿದಾಗ ನೀನು ಅದಕ್ಕೆ ಅನುಕೂಲವಾಗಿಯೇ ವರ್ತಿಸಬೇಕು. ॥21॥

(ಶ್ಲೋಕ - 22)

ಮೂಲಮ್

ಯಜ್ಞೇನ ಯುಷ್ಮದ್ವಿಷಯೇ ದ್ವಿಜಾತಿಭಿ-
ರ್ವಿತಾಯಮಾನೇನ ಸುರಾಃ ಕಲಾ ಹರೇಃ ।
ಸ್ವಿಷ್ಟಾಃ ಸುತುಷ್ಟಾಃ ಪ್ರದಿಶಂತಿ ವಾಂಛಿತಂ
ತದ್ಧೇಲನಂ ನಾರ್ಹಸಿ ವೀರ ಚೇಷ್ಟಿತುಮ್ ॥

ಅನುವಾದ

ನಿನ್ನ ರಾಜ್ಯದಲ್ಲಿ ಬ್ರಾಹ್ಮಣರು ಯಜ್ಞಗಳನ್ನು ಆಚರಿಸಿದಾಗ ಶ್ರೀಭಗವಂತನ ಅಂಶರೂಪವಾದ ದೇವತೆಗಳು ಅವರ ಪೂಜೆಯಿಂದ ಪ್ರಸನ್ನರಾಗಿ ನಿನ್ನ ಮನಸ್ಸಿಗೆ ಇಷ್ಟವಾದ ಫಲವನ್ನು ಅನುಗ್ರಹಿಸುವರು. ಆದುದರಿಂದ ಎಲೈ ವೀರನೇ! ನೀನು ಯಜ್ಞವೇ ಮುಂತಾದ ಧರ್ಮಾನುಷ್ಠಾನಗಳನ್ನು ನಿಲ್ಲಿಸಿ ದೇವತೆಗಳನ್ನು ತಿರಸ್ಕರಿಸು ವುದು ಉಚಿತವಲ್ಲ. ॥22॥

(ಶ್ಲೋಕ - 23)

ಮೂಲಮ್ (ವಾಚನಮ್)

ವೇನ ಉವಾಚ

ಮೂಲಮ್

ಬಾಲಿಶಾ ಬತ ಯೂಯಂ ವಾ ಅಧರ್ಮೇ ಧರ್ಮಮಾನಿನಃ ।
ಯೇ ವೃತ್ತಿದಂ ಪತಿಂ ಹಿತ್ವಾ ಜಾರಂ ಪತಿಮುಪಾಸತೇ ॥

ಅನುವಾದ

ವೇನನು ಹೇಳಿದನು — ಮುನಿಜನರೇ! ನೀವು ತುಂಬಾ ಮೂರ್ಖರಿದ್ದೀರಿ. ಅಯ್ಯೋ! ನೀವು ಅಧರ್ಮದಲ್ಲೇ ಧರ್ಮ ಬುದ್ಧಿಯನ್ನಿರಿಸಿದ್ದೀರಿ. ಅದರಿಂದಲೇ ನಿಮಗೆ ಜೀವನವೃತ್ತಿ ಯನ್ನು ಕೊಡುವ ಸಾಕ್ಷಾತ್ ಪತಿಯಾಗಿರುವ ನನ್ನನ್ನು ಬಿಟ್ಟು ಬೇರೆ ಯಾವನೋ ಜಾರನಾದ ಪತಿಯನ್ನು ಉಪಾಸನೆ ಮಾಡುತ್ತಿದ್ದೀರಿ. ॥23॥

(ಶ್ಲೋಕ - 24)

ಮೂಲಮ್

ಅವಜಾನಂತ್ಯಮೀ ಮೂಢಾ ನೃಪರೂಪಿಣಮೀಶ್ವರಮ್ ।
ನಾನುವಿಂದಂತಿ ತೇ ಭದ್ರಮಿಹ ಲೋಕೇ ಪರತ್ರ ಚ ॥

ಅನುವಾದ

ರಾಜನ ರೂಪದಲ್ಲಿರುವ ಈಶ್ವರ ನನ್ನು ಮೂರ್ಖತನದಿಂದಾಗಿ ಅನಾದರಿಸುವ ಜನರಿಗೆ ಈ ಲೋಕದಲ್ಲಿಯೂ ಸುಖಸಿಗುವುದಿಲ್ಲ; ಪರಲೋಕದಲ್ಲಿಯೂ ಸುಖದೊರೆಯುವುದಿಲ್ಲ. ॥24॥

(ಶ್ಲೋಕ - 25)

ಮೂಲಮ್

ಕೋ ಯಜ್ಞ ಪುರುಷೋ ನಾಮ ಯತ್ರ ವೋ ಭಕ್ತಿರೀದೃಶೀ ।
ಭರ್ತೃಸ್ನೇಹವಿದೂರಾಣಾಂ ಯಥಾ ಜಾರೇ ಕುಯೋಷಿತಾಮ್ ॥

ಅನುವಾದ

ನೀವೆಲ್ಲ ಇಷ್ಟು ಭಕ್ತಿಯನ್ನು ಯಾರಲ್ಲಿ ತೋರಿಸುತ್ತಿರುವಿರೋ ಆ ಯಜ್ಞಪುರುಷನು ಯಾರು? ಕೈಹಿಡಿದ ಗಂಡನಲ್ಲಿ ಪ್ರೀತಿಯನ್ನು ತೋರದೆ ಮಿಂಡನಲ್ಲಿ ಆಸಕ್ತರಾಗಿರುವ ಹೆಂಗಸರಂತೆ ಆಯಿತು ಇದು. ॥25॥

(ಶ್ಲೋಕ - 26)

ಮೂಲಮ್

ವಿಷ್ಣುರ್ವಿರಿಂಚೋ ಗಿರಿಶ ಇಂದ್ರೋ ವಾಯುರ್ಯಮೋ ರವಿಃ ।
ಪರ್ಜನ್ಯೋ ಧನದಃ ಸೋಮಃ ಕ್ಷಿತಿರಗ್ನಿರಪಾಂಪತಿಃ ॥

(ಶ್ಲೋಕ - 27)

ಮೂಲಮ್

ಏತೇ ಚಾನ್ಯೇ ಚ ವಿಬುಧಾಃ ಪ್ರಭವೋ ವರಶಾಪಯೋಃ ।
ದೇಹೇ ಭವಂತಿ ನೃಪತೇಃ ಸರ್ವದೇವಮಯೋ ನೃಪಃ ॥

ಅನುವಾದ

ವಿಷ್ಣು, ಬ್ರಹ್ಮ, ಶಿವ, ಇಂದ್ರ, ವಾಯು, ಯಮ, ಸೂರ್ಯ, ಪರ್ಜನ್ಯ, ಕುಬೇರ, ಚಂದ್ರ, ಪೃಥಿವಿ, ಅಗ್ನಿ, ವರುಣ ಇವರಲ್ಲದೆ ವರವನ್ನೂ, ಶಾಪವನ್ನೂ ಕೊಡುವ ಸಾಮರ್ಥ್ಯವುಳ್ಳ ಇತರ ದೇವತೆಗಳೆಲ್ಲರೂ ರಾಜನ ಶರೀರದಲ್ಲಿ ವಾಸಮಾಡುತ್ತಿರುವುದರಿಂದ ರಾಜನೇ ಸರ್ವದೇವಮಯನು. ಎಲ್ಲ ದೇವತೆಗಳೂ ಆತನ ಅಂಶಗಳು ಮಾತ್ರ ಆಗಿದ್ದಾರೆ. ॥26-27॥

(ಶ್ಲೋಕ - 28)

ಮೂಲಮ್

ತಸ್ಮಾನ್ಮಾಂ ಕರ್ಮಭಿರ್ವಿಪ್ರಾ ಯಜಧ್ವಂ ಗತಮತ್ಸರಾಃ ।
ಬಲಿಂ ಚ ಮಹ್ಯಂ ಹರತ ಮತ್ತೋನ್ಯಃ ಕೋಗ್ರಭುಕ್ಪುಮಾನ್ ॥

ಅನುವಾದ

ಅದಕ್ಕಾಗಿ ಎಲೈ ಬ್ರಾಹ್ಮಣರೇ! ನೀವು ಮಾತ್ಸರ್ಯವನ್ನು ಬಿಟ್ಟು ನಿಮ್ಮ ಎಲ್ಲ ಕರ್ಮಗಳ ಮೂಲಕ ನನ್ನನ್ನೇ ಪೂಜಿಸಿರಿ. ನನಗೇ ಕಪ್ಪ-ಕಾಣಿಕೆಗಳನ್ನು ಸಮರ್ಪಿಸಿರಿ. ಅಗ್ರಪೂಜೆಯ ಅಧಿಕಾರ ನನಗಲ್ಲದೆ ಬೇರೆ ಯಾರಿಗೆ ತಾನೇ ಇದೆ? ॥28॥

(ಶ್ಲೋಕ - 29)

ಮೂಲಮ್ (ವಾಚನಮ್)

ಮೈತ್ರೇಯ ಉವಾಚ

ಮೂಲಮ್

ಇತ್ಥಂ ವಿಪರ್ಯಯಮತಿಃ ಪಾಪೀಯಾನುತ್ಪಥಂ ಗತಃ ।
ಅನುನೀಯಮಾನಸ್ತದ್ಯಾಂಚಾಂ ನ ಚಕ್ರೇ ಭ್ರಷ್ಟಮಂಗಲಃ ॥

ಅನುವಾದ

ಶ್ರೀಮೈತ್ರೇಯರು ಹೇಳುತ್ತಾರೆ — ವಿದುರನೇ! ಈ ರೀತಿಯಲ್ಲಿ ವಿಪರೀತ ಬುದ್ಧಿಯಿಂದ ಕೂಡಿ ಕಡುಪಾಪಿಯಾಗಿ, ದುರ್ಮಾರ್ಗವನ್ನು ಹಿಡಿದಿದ್ದ ವೇನನಿಗೆ ಪುಣ್ಯವು ಕ್ಷೀಣಿಸಿದ್ದರಿಂದ ಅವನು ಮುನಿಗಳ ವಿನಯಪೂರ್ವಕ ವಿಜ್ಞಾಪನೆಗೂ ಕಿವಿಗೊಡಲಿಲ್ಲ. ॥29॥

(ಶ್ಲೋಕ - 30)

ಮೂಲಮ್

ಇತಿ ತೇಸತ್ಕೃತಾಸ್ತೇನ ದ್ವಿಜಾಃ ಪಂಡಿತಮಾನಿನಾ ।
ಭಗ್ನಾಯಾಂ ಭವ್ಯಯಾಂಚ್ಯಾಯಾಂ ತಸ್ಮೈ ವಿದುರ ಚುಕ್ರುಧುಃ ॥

ಅನುವಾದ

ವಿದುರನೇ! ದುರಹಂಕಾರದಿಂದ ತನ್ನನ್ನು ಅತ್ಯಂತ ಬುದ್ಧಿಶಾಲಿಯೆಂದು ತಿಳಿದುಕೊಂಡು ವೇನನು ಹೀಗೆ ಆ ಮುನಿಗಳ ಅಪಮಾನ ಮಾಡಿದಾಗ ತಮ್ಮ ಬೇಡಿಕೆಯು ವ್ಯರ್ಥವಾದುದನ್ನು ಕಂಡು ಅವರಿಗೆ ಮಿತಿಮೀರಿದ ಕೋಪ ಉಂಟಾಯಿತು. ॥30॥

(ಶ್ಲೋಕ - 31)

ಮೂಲಮ್

ಹನ್ಯತಾಂ ಹನ್ಯತಾಮೇಷ ಪಾಪಃ ಪ್ರಕೃತಿದಾರುಣಃ ।
ಜೀವಂಜಗದಸಾವಾಶು ಕುರುತೇ ಭಸ್ಮಸಾದ್ಧ್ರುವಮ್ ॥

ಅನುವಾದ

ಸ್ವಭಾವ ದಿಂದಲೇ ದುಷ್ಟ ಪಾಪಿಯಾದ ಇವನನ್ನು ಸಾಯಿಸಿ ಬಿಡ ಬೇಕು. ಕೊಂದುಹಾಕಲೇಬೇಕು. ಈತನೇನಾದರೂ ಬದುಕಿದ್ದರೆ ಕೆಲವೇ ದಿನಗಳಲ್ಲಿ ಜಗತ್ತನ್ನೇ ಸುಟ್ಟು ಬೂದಿ ಮಾಡಿ ಬಿಡುವನು. ॥31॥

(ಶ್ಲೋಕ - 32)

ಮೂಲಮ್

ನಾಯಮರ್ಹತ್ಯಸದ್ವೃತ್ತೋ ನರದೇವವರಾಸನಮ್ ।
ಯೋಧಿಯಜ್ಞಪತಿಂ ವಿಷ್ಣುಂ ವಿನಿಂದತ್ಯನಪತ್ರಪಃ ॥

ಅನುವಾದ

ಈ ದುರಾಚಾರಿಯೂ ಯಾವ ರೀತಿಯಿಂದಲೂ ರಾಜಸಿಂಹಾಸನಕ್ಕೆ ಯೋಗ್ಯನಾಗಿಲ್ಲ. ಏಕೆಂದರೆ, ಈ ನಿರ್ಲಜ್ಜನು ಯಜ್ಞಪತಿಯಾದ ಸಾಕ್ಷಾತ್ ಮಹಾವಿಷ್ಣುವನ್ನೇ ನಿಂದೆ ಮಾಡುತ್ತಿರುವನು. ॥32॥

(ಶ್ಲೋಕ - 33)

ಮೂಲಮ್

ಕೋ ವೈನಂ ಪರಿಚಕ್ಷೀತ ವೇನಮೇಕಮೃತೇಶುಭಮ್ ।
ಪ್ರಾಪ್ತ ಈದೃಶಮೈಶ್ವರ್ಯಂ ಯದನುಗ್ರಹಭಾಜನಃ ॥

ಅನುವಾದ

ಯಾರ ಅನುಗ್ರಹದಿಂದ ಇಷ್ಟೆಲ್ಲಾ ಐಶ್ವರ್ಯವು ದೊರೆತಿದೆಯೋ, ಅಂತಹ ಶ್ರೀಹರಿಯನ್ನು ಅಶುಭ ಸ್ವಭಾವದ ವೇನನನ್ನು ಬಿಟ್ಟು ಬೇರೆ ಯಾರು ತಾನೇ ನಿಂದಿಸಿಯಾರು? ॥33॥

(ಶ್ಲೋಕ - 34)

ಮೂಲಮ್

ಇತ್ಥಂ ವ್ಯವಸಿತಾ ಹಂತುಮೃಷಯೋ ರೂಢಮನ್ಯವಃ ।
ನಿಜಘ್ನುರ್ಹುಂಕೃತೈರ್ವೇನಂ ಹತಮಚ್ಯುತನಿಂದಯಾ ॥

ಅನುವಾದ

ತಾವು ಅಡಗಿಸಿಕೊಂಡಿದ್ದ ಕೋಪವನ್ನು ಹೀಗೆ ಪ್ರಕಟ ಪಡಿಸಿದ ಆ ಮುನಿಗಳು ಅವನನ್ನು ಕೊಂದುಬಿಡಲು ನಿಶ್ಚಯಿಸಿದರು. ಅವನಾದರೋ ಭಗವಂತನನ್ನು ನಿಂದಿಸಿದ ಕಾರಣದಿಂದ ಮೊದಲೇ ಸತ್ತಿದ್ದನು. ಅದಕ್ಕಾಗಿ ಅವರು ಕೇವಲ ಹುಂಕಾರ ದಿಂದಲೇ ಆತನ ಕತೆಯನ್ನು ಮುಗಿಸಿ ಬಿಟ್ಟರು. ॥34॥

(ಶ್ಲೋಕ - 35)

ಮೂಲಮ್

ಋಷಿಭಿಃ ಸ್ವಾಶ್ರಮಪದಂ ಗತೇ ಪುತ್ರಕಲೇವರಮ್ ।
ಸುನೀಥಾ ಪಾಲಯಾಮಾಸ ವಿದ್ಯಾಯೋಗೇನ ಶೋಚತೀ ॥

ಅನುವಾದ

ಮುನಿಗಳು ತಮ್ಮ-ತಮ್ಮ ಆಶ್ರಮಗಳಿಗೆ ಹೊರಟುಹೋದ ಬಳಿಕ ಇತ್ತ ವೇನನ ಶೋಕಾಕುಲ ತಾಯಿ ಸುನೀಥೆಯು ಮಾತ್ರ ಮಂತ್ರಾದಿಗಳ ಬಲದಿಂದ ಹಾಗೂ ಇತರ ಯುಕ್ತಿಗಳಿಂದ ತನ್ನ ಪುತ್ರನ ಕಳೇಬರವನ್ನು ರಕ್ಷಿಸಿದಳು. ॥35॥

(ಶ್ಲೋಕ - 36)

ಮೂಲಮ್

ಏಕದಾ ಮುನಯಸ್ತೇ ತು ಸರಸ್ವತ್ಸಲಿಲಾಪ್ಲುತಾಃ ।
ಹುತ್ವಾಗ್ನೀನ್ ಸತ್ಕಥಾಶ್ಚಕ್ರುರುಪವಿಷ್ಟಾಃ ಸರಿತ್ತಟೇ ॥

ಅನುವಾದ

ಒಂದು ದಿನ ಆ ಮುನಿಗಳು ಸರಸ್ವತಿಯ ಪವಿತ್ರ ಜಲದಲ್ಲಿ ಸ್ನಾನಮಾಡಿ, ಅಗ್ನಿಹೋತ್ರಾದಿಗಳಿಂದ ನಿವೃತ್ತರಾಗಿ ನದೀತೀರದಲ್ಲಿ ಕುಳಿತು ಶ್ರೀಹರಿಯ ಕುರಿತು ಚರ್ಚೆಮಾಡುತ್ತಿದ್ದರು. ॥36॥

(ಶ್ಲೋಕ - 37)

ಮೂಲಮ್

ವೀಕ್ಷ್ಯೋತ್ಥಿತಾಂಸ್ತದೋತ್ಪಾತಾ-
ನಾಹುರ್ಲೋಕಭಯಂಕರಾನ್ ।
ಅಪ್ಯಭದ್ರಮನಾಥಾಯಾ
ದಸ್ಯುಭ್ಯೋ ನ ಭವೇದ್ಭುವಃ ॥

ಅನುವಾದ

ಆಗ ಲೋಕಗಳಲ್ಲೆಲ್ಲ ಆತಂಕವನ್ನು ಹರಡುವ ಅನೇಕ ಉಪದ್ರವಗಳು ಆಗುತ್ತಿರುವುದನ್ನು ನೋಡಿ ತಮ್ಮ-ತಮ್ಮಲ್ಲೇ ಹೇಳಿ ಕೊಂಡರು. ‘ಇಂದು ಪೃಥ್ವಿಯ ರಕ್ಷಕರು ಯಾರೂ ಇಲ್ಲ. ಅದರಿಂದ ಕಳ್ಳ-ಕಾಕರ ಕಾರಣದಿಂದ ಇಡೀ ಭೂಮಿಗೆ ಕೇಡು ಉಂಟಾದರೆ ಏನು ಗತಿ? ॥37॥

(ಶ್ಲೋಕ - 38)

ಮೂಲಮ್

ಏವಂ ಮೃಶಂತ ಋಷಯೋ
ಧಾವತಾಂ ಸರ್ವತೋದಿಶಮ್ ।
ಪಾಂಸುಃ ಸಮುತ್ಥಿತೋ ಭೂರಿಶ್ಚೋ-
ರಾಣಾಮಭಿಲುಂಪತಾಮ್ ॥

ಅನುವಾದ

ಋಷಿಗಳು ಹೀಗೆ ವಿಚಾರ ಮಾಡುತ್ತಿರುವಾಗಲೇ ಎಲ್ಲ ದಿಕ್ಕುಗಳಲ್ಲಿಯೂ ಧಾಳಿ ಮಾಡಲು ಬರುತ್ತಿದ್ದ ಕಳ್ಳರ ಮತ್ತು ದರೋಡೆಕೋರರ ಕಡೆಯಿಂದ ಧೂಳಿನ ರಾಶಿಯು ಏಳುತ್ತಿದ್ದುದು ಅವರಿಗೆ ಕಾಣಿಸಿತು. ॥38॥

(ಶ್ಲೋಕ - 39)

ಮೂಲಮ್

ತದುಪದ್ರವಮಾಜ್ಞಾಯ ಲೋಕಸ್ಯ ವಸು ಲುಂಪತಾಮ್ ।
ಭರ್ತರ್ಯುಪರತೇ ತಸ್ಮಿನ್ನನ್ಯೋನ್ಯಂ ಚ ಜಿಘಾಂಸತಾಮ್ ॥

(ಶ್ಲೋಕ - 40)

ಮೂಲಮ್

ಚೋರಪ್ರಾಯಂಜನಪದಂ ಹೀನಸತ್ವಮರಾಜಕಮ್ ।
ಲೋಕಾನ್ನಾವಾರಯಂಛಕ್ತಾ ಅಪಿ ತದ್ದೋಷದರ್ಶಿನಃ ॥

ಅನುವಾದ

ರಾಜನಾದ ವೇನನು ಮೃತನಾದುದ ರಿಂದ ದೇಶದಲ್ಲಿ ಅರಾಜಕತೆಯು ಹರಡಿದೆ. ರಾಜ್ಯವು ಶಕ್ತಿಹೀನವಾಗಿ ಬಿಟ್ಟಿದೆ. ಕಳ್ಳ-ಕಾಕರ ಸಂಖ್ಯೆ ಹೆಚ್ಚಿದೆ. ಹಣವನ್ನು ಲೂಟಿಮಾಡುವ ಮತ್ತು ಒಬ್ಬರನ್ನೊಬ್ಬರು ತಿಂದುಹಾಕುವ ದರೋಡೆಗಾರರಿಂದಲೇ ಈ ಹಾವಳಿಯು ಉಂಟಾಗಿದೆ’ ಎಂಬುದು ಅವರಿಗೆ ತಿಳಿಯಿತು. ತಮ್ಮ ತೇಜಸ್ಸಿನಿಂದ ಅಥವಾ ತಪೋಬಲದಿಂದ ಜನರನ್ನು ಕುತ್ಸಿತವಾದ ಪ್ರವೃತ್ತಿಯಿಂದ ತಡೆಯುವ ಸಾಮರ್ಥ್ಯವು ತಮ್ಮಲ್ಲಿದ್ದರೂ, ಹೀಗೆ ಮಾಡುವುದರಲ್ಲಿ ಹಿಂಸಾದಿ ದೋಷಗಳನ್ನು ಕಂಡು ಅವರು ಅದನ್ನು ನಿವಾರಣೆ ಮಾಡಲಿಲ್ಲ. ॥39-40॥

(ಶ್ಲೋಕ - 41)

ಮೂಲಮ್

ಬ್ರಾಹ್ಮಣಃ ಸಮದೃಕ್ ಶಾಂತೋ ದೀನಾನಾಂ ಸಮುಪೇಕ್ಷಕಃ ।
ಸ್ರವತೇ ಬ್ರಹ್ಮ ತಸ್ಯಾಪಿ ಭಿನ್ನಭಾಂಡಾತ್ಪಯೋ ಯಥಾ ॥

ಅನುವಾದ

ಮತ್ತೆ ಯೋಚಿಸಿದರು ಬ್ರಾಹ್ಮಣರು ಸಮದರ್ಶಿ, ಶಾಂತಸ್ವಭಾವದವರಾಗಿದ್ದರೂ ದೀನರನ್ನು ಉಪೇಕ್ಷೆ ಮಾಡಿದರೆ ಒಡೆದುಹೋದ ಮಡಕೆಯಿಂದ ನೀರು ಸೋರಿ ಹೋಗುವಂತೆ ಅವರ ತಪಸ್ಸು ನಾಶವಾಗಿ ಹೋಗುತ್ತದೆ. ॥41॥

(ಶ್ಲೋಕ - 42)

ಮೂಲಮ್

ನಾಂಗಸ್ಯ ವಂಶೋ ರಾಜರ್ಷೇರೇಷ ಸಂಸ್ಥಾತುಮರ್ಹತಿ ।
ಅಮೋಘವೀರ್ಯಾ ಹಿ ನೃಪಾ ವಂಶೇಸ್ಮಿನ್ಕೇಶವಾಶ್ರಯಾಃ ॥

ಅನುವಾದ

ಇದಲ್ಲದೆ ರಾಜರ್ಷಿಯಾದ ಅಂಗಮಹಾ ರಾಜನ ವಂಶವೂ ನಾಶವಾಗಬಾರದು. ಏಕೆಂದರೆ, ಇದರಲ್ಲಿ ಅನೇಕರು ಅಮೋಘಶಕ್ತಿ ಸಂಪನ್ನರೂ, ಭಗವತ್ಪರಾಯಣ ರಾಜರೂ ಆಗಿಹೋಗಿದ್ದಾರೆ. ॥42॥

(ಶ್ಲೋಕ - 43)

ಮೂಲಮ್

ವಿನಿಶ್ಚಿತ್ಯೈವಮೃಷಯೋ ವಿಪನ್ನಸ್ಯ ಮಹೀಪತೇಃ ।
ಮಮಂಥುರೂರುಂ ತರಸಾ ತತ್ರಾಸೀದ್ಬಾಹುಕೋ ನರಃ ॥

ಅನುವಾದ

ಹೀಗೆ ನಿಶ್ಚಯಿಸಿ ಅವರು ಮೃತನಾಗಿದ್ದ ವೇನರಾಜನ ತೊಡೆಯನ್ನು ಬಲವಾಗಿ ಕಡೆದರು. ಆಗ ಅದರಿಂದ ಒಬ್ಬ ಕುಬ್ಜ ಮನುಷ್ಯನು ಆವಿರ್ಭವಿಸಿದನು. ॥43॥

(ಶ್ಲೋಕ - 44)

ಮೂಲಮ್

ಕಾಕಕೃಷ್ಣೋತಿಹ್ರಸ್ವಾಂಗೋ ಹ್ರಸ್ವಬಾಹುರ್ಮಹಾಹನುಃ ।
ಹ್ರಸ್ವಪಾನ್ನಿಮ್ನನಾಸಾಗ್ರೋ ರಕ್ತಾಕ್ಷಸ್ತಾಮ್ರಮೂರ್ಧಜಃ ॥

ಅನುವಾದ

ಅವನು ಕಾಗೆಯಂತೆ ಕಪ್ಪಾಗಿದ್ದು, ಅವನ ಎಲ್ಲ ಅವಯವಗಳು ಮತ್ತು ವಿಶೇಷವಾಗಿ ತೋಳುಗಳು ತುಂಬಾ ಗಿಡ್ಡವಾಗಿದ್ದವು. ಅವನ ಗಲ್ಲವು ಮಾತ್ರ ಉದ್ದವಾಗಿತ್ತು. ಅತಿ ಚಿಕ್ಕ ಕಾಲುಗಳು, ಹಳ್ಳವಾದ ಮೂಗು, ಕೆಂಪು ಕಣ್ಣುಗಳು, ತಾಮ್ರದಂತೆ ಕಡುಕೆಂಪಾದ ಕೂದಲುಗಳಿದ್ದವು. ॥44॥

(ಶ್ಲೋಕ - 45)

ಮೂಲಮ್

ತಂ ತು ತೇವನತಂ ದೀನಂ ಕಿಂ ಕರೋಮೀತಿ ವಾದಿನಮ್ ।
ನಿಷೀದೇತ್ಯಬ್ರುವನ್ಸ್ತಾತ ಸ ನಿಷಾದಸ್ತತೋಭವತ್ ॥

ಅನುವಾದ

ಅವನು ಬಹಳ ದೈನ್ಯದಿಂದಲೂ, ವಿನಯದಿಂದಲೂ ಮಹರ್ಷಿಗಳನ್ನು ‘ನಾನೇನು ಮಾಡಲಿ’? ಎಂದು ಕೇಳಿದಾಗ, ಅವರು ‘ನಿಷೀದ (ಕುಳಿತುಕೋ) ಎಂದು ಹೇಳಿದರು. ಇದರಿಂದ ಅವನಿಗೆ ನಿಷಾದನೆಂಬ ಹೆಸರಾಯಿತು. ॥45॥

(ಶ್ಲೋಕ - 46)

ಮೂಲಮ್

ತಸ್ಯ ವಂಶ್ಯಾಸ್ತು ನೈಷಾದಾ ಗಿರಿಕಾನನಗೋಚರಾಃ ।
ಯೇನಾಹರಜ್ಜಾಯಮಾನೋ ವೇನಕಲ್ಮಷಮುಲ್ಬಣಮ್ ॥

ಅನುವಾದ

ಅವನು ಹುಟ್ಟು ವಾಗಲೇ ರಾಜಾವೇನನ ಭಯಂಕರ ಪಾಪಗಳನ್ನು ಹೊತ್ತು ಬಂದಿದ್ದರಿಂದ ಅವನ ವಂಶದವರಾದ ನಿಷಾದರೂ ಕೂಡ ಹಿಂಸೆ, ಲೂಟಿ, ದರೋಡೆಗಳೇ ಮುಂತಾದ ಪಾಪಕರ್ಮಗಳಲ್ಲಿ ನಿರತರಾದರು. ಅವರು ಊರು-ನಗರಗಳಲ್ಲಿ ವಾಸಿಸದೆ ವನ-ಪರ್ವತಗಳಲ್ಲೇ ವಾಸಮಾಡುತ್ತಾರೆ. ॥46॥

ಅನುವಾದ (ಸಮಾಪ್ತಿಃ)

ಹದಿನಾಲ್ಕನೆಯ ಅಧ್ಯಾಯವು ಮುಗಿಯಿತು. ॥14॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಚತುರ್ಥಸ್ಕಂಧೇ ಪೃಥುಚರಿತೇ ನಿಷಾದೋತ್ಪತ್ತಿರ್ನಾಮ ಚತುರ್ದಶೋಽಧ್ಯಾಯಃ ॥14॥