[ಹದಿಮೂರನೆಯ ಅಧ್ಯಾಯ]
ಭಾಗಸೂಚನಾ
ಧ್ರುವನ ವಂಶದ ವರ್ಣನೆ ಅಂಗಮಹಾರಾಜನ ಚರಿತ್ರೆ
(ಶ್ಲೋಕ - 1)
ಮೂಲಮ್ (ವಾಚನಮ್)
ಸೂತ ಉವಾಚ
ಮೂಲಮ್
ನಿಶಮ್ಯ ಕೌಷಾರವಿಣೋಪವರ್ಣಿತಂ
ಧ್ರುವಸ್ಯ ವೈಕುಂಠ ಪದಾಧಿರೋಹಣಮ್ ।
ಪ್ರರೂಢಭಾವೋ ಭಗವತ್ಯಧೋಕ್ಷಜೇ
ಪ್ರಷ್ಟುಂ ಪುನಸ್ತಂ ವಿದುರಃ ಪ್ರಚಕ್ರಮೇ ॥
ಅನುವಾದ
ಸೂತಪುರಾಣಿಕರು ಹೇಳುತ್ತಾರೆ — ಶೌನಕಾದಿ ಮಹರ್ಷಿಗಳೇ! ಪರಮಭಾಗವತೋತ್ತಮನಾದ ಧ್ರುವನು ವಿಷ್ಣುಪದವನ್ನು ಆರೂಢನಾದ ವೃತ್ತಾಂತವನ್ನು ಕೇಳಿ ವಿದುರನ ಹೃದಯದಲ್ಲಿ ಭಗವಾನ್ ಶ್ರೀವಿಷ್ಣುವಿನ ವಿಷಯದಲ್ಲಿ ಭಕ್ತಿಯು ಬೇರೂರಿತು. ಅವನು ಮತ್ತೆ ಶ್ರೀಮೈತ್ರೇಯರಲ್ಲಿ ಪ್ರಶ್ನಿಸತೊಡಗಿದನು. ॥1॥
(ಶ್ಲೋಕ - 2)
ಮೂಲಮ್ (ವಾಚನಮ್)
ವಿದುರ ಉವಾಚ
ಮೂಲಮ್
ಕೇ ತೇ ಪ್ರಚೇತಸೋ ನಾಮ ಕಸ್ಯಾಪತ್ಯಾನಿ ಸುವ್ರತ ।
ಕಸ್ಯಾನ್ವವಾಯೇ ಪ್ರಖ್ಯಾತಾಃ ಕುತ್ರ ವಾ ಸತ್ರಮಾಸತ್ ॥
ಅನುವಾದ
ವಿದುರನು ಕೇಳಿದನು — ಭಗವತ್ಪರಾಯಣರಾದ ಮುನಿಶ್ರೇಷ್ಠರೇ! ಈ ಪ್ರಚೇತಸರೆಂಬುವರು ಯಾರು? ಯಾರ ಪುತ್ರರು? ಯಾರ ವಂಶದಲ್ಲಿ ಪ್ರಸಿದ್ಧರಾಗಿದ್ದರು? ಅವರು ಎಲ್ಲಿ ಯಜ್ಞವನ್ನು ಮಾಡಿದ್ದರು? ॥2॥
(ಶ್ಲೋಕ - 3)
ಮೂಲಮ್
ಮನ್ಯೇ ಮಹಾಭಾಗವತಂ ನಾರದಂ ದೇವದರ್ಶನಮ್ ।
ಯೇನ ಪ್ರೋಕ್ತಃ ಕ್ರಿಯಾಯೋಗಃ ಪರಿಚರ್ಯಾವಿಧಿರ್ಹರೇಃ ॥
ಅನುವಾದ
ಶ್ರೀಹರಿಯ ಆರಾಧನೆಯ ವಿಧಿಯಾಗಿರುವ ಪಾಂಚರಾತ್ರ ಆಗಮದ ಮೂಲಕ ಉಪದೇಶ ಮಾಡಿದ ದೇವರ್ಷಿನಾರದರು ದೇವದೇವನ ದರ್ಶನದಿಂದ ಕೃತಾರ್ಥರಾದ ಮಹಾಭಾಗವ ತೋತ್ತಮರು. ॥3॥
(ಶ್ಲೋಕ - 4)
ಮೂಲಮ್
ಸ್ವಧರ್ಮಶೀಲೈಃ ಪುರುಷೈರ್ಭಗವಾನ್ಯಜ್ಞ ಪೂರುಷಃ ।
ಇಜ್ಯಮಾನೋ ಭಕ್ತಿಮತಾ ನಾರದೇನೇರಿತಃ ಕಿಲ ॥
ಅನುವಾದ
ಪ್ರಚೇತಸರು ಸ್ವಧರ್ಮವನ್ನು ಆಚರಿಸುತ್ತಾ ಭಗವಂತನಾದ ಯಜ್ಞಪುರುಷನನ್ನು ಆರಾಧನೆ ಮಾಡುತ್ತಿದ್ದ ಸಮಯದಲ್ಲಿ ಭಕ್ತವರೇಣ್ಯರಾದ ಶ್ರೀನಾರದರು ಧ್ರುವನ ಗುಣಗಳನ್ನು ಗಾನ ಮಾಡಿದರೆಂದು ಹೇಳಿದರಲ್ಲ! ॥4॥
(ಶ್ಲೋಕ - 5)
ಮೂಲಮ್
ಯಾಸ್ತಾ ದೇವರ್ಷಿಣಾ ತತ್ರ ವರ್ಣಿತಾ ಭಗವತ್ಕಥಾಃ ।
ಮಹ್ಯಂ ಶುಶ್ರೂಷವೇ ಬ್ರಹ್ಮನ್ಕಾರ್ತ್ಸ್ನ್ಯೇನಾಚಷ್ಟುಮರ್ಹಸಿ ॥
ಅನುವಾದ
ಬ್ರಾಹ್ಮಣಶ್ರೇಷ್ಠರೇ! ಆ ದೇವರ್ಷಿಗಳು ಅಲ್ಲಿ ಯಾವ-ಯಾವ ಭಗವತ್ಕಥೆಗಳನ್ನು ವರ್ಣಿಸಿದರು? ಎಂಬುದನ್ನು ನನಗೆ ಪೂರ್ಣವಾಗಿ ತಿಳಿಸಿರಿ. ಅವುಗಳನ್ನು ಕೇಳಬೇಕೆಂದು ನಾನು ಉತ್ಸುಕನಾಗಿದ್ದೇನೆ. ॥5॥
(ಶ್ಲೋಕ - 6)
ಮೂಲಮ್ (ವಾಚನಮ್)
ಮೈತ್ರೇಯ ಉವಾಚ
ಮೂಲಮ್
ಧ್ರುವಸ್ಯ ಚೋತ್ಕಲಃ ಪುತ್ರಃ ಪಿತರಿ ಪ್ರಸ್ಥಿತೇ ವನಮ್ ।
ಸಾರ್ವಭೌಮಶ್ರಿಯಂ ನೈಚ್ಛದಧಿರಾಜಾಸನಂ ಪಿತುಃ ॥
ಅನುವಾದ
ಶ್ರೀಮೈತ್ರೇಯರು ಹೇಳಿದರು — ಎಲೈ ವಿದುರನೇ! ಮಹಾರಾಜಾ ಧ್ರುವನು ವನಕ್ಕೆ ಹೊರಟುಹೋದ ಬಳಿಕ ಅವನ ಪುತ್ರ ಉತ್ಕಲನು ತನ್ನ ತಂದೆಯ ಸಾರ್ವಭೌಮ ಸಂಪತ್ತನ್ನೂ, ರಾಜ್ಯ ಸಿಂಹಾಸನವನ್ನೂ ಸ್ವೀಕರಿಸಲಿಲ್ಲ. ॥6॥
(ಶ್ಲೋಕ - 7)
ಮೂಲಮ್
ಸ ಜನ್ಮನೋಪಶಾಂತಾತ್ಮಾ ನಿಃಸಂಗಃ ಸಮದರ್ಶನಃ ।
ದದರ್ಶ ಲೋಕೇ ವಿತತಮಾತ್ಮಾನಂ ಲೋಕಮಾತ್ಮನಿ ॥
ಅನುವಾದ
ಅವನು ಹುಟ್ಟಿನಿಂದಲೇ ಪ್ರಶಾಂತಸ್ವಭಾವದವನೂ, ಆಸಕ್ತಿ ಶೂನ್ಯನೂ, ಸಮದರ್ಶಿಯೂ ಆಗಿದ್ದು, ಸಮಸ್ತ ಲೋಕಗಳನ್ನು ತನ್ನ ಆತ್ಮನಲ್ಲಿಯೂ, ತನ್ನ ಆತ್ಮವನ್ನು ಸಮಸ್ತಲೋಕ ಗಳಲ್ಲಿಯೂ ಸ್ಥಿತವೆಂದು ನೋಡುತ್ತಿದ್ದನು. ॥7॥
(ಶ್ಲೋಕ - 8)
ಮೂಲಮ್
ಆತ್ಮಾನಂ ಬ್ರಹ್ಮ ನಿರ್ವಾಣಂ ಪ್ರತ್ಯಸ್ತಮಿತವಿಗ್ರಹಮ್ ।
ಅವಬೋಧರಸೈಕಾತ್ಮ್ಯಮಾನಂದಮನುಸಂತತಮ್ ॥
(ಶ್ಲೋಕ - 9)
ಮೂಲಮ್
ಅವ್ಯವಚ್ಛಿನ್ನಯೋಗಾಗ್ನಿದಗ್ಧಕರ್ಮಮಲಾಶಯಃ ।
ಸ್ವರೂಪಮವರುಂಧಾನೋ ನಾತ್ಮನೋನ್ಯಂ ತದೈಕ್ಷತ ॥
ಅನುವಾದ
ಅವನ ಅಂತಃಕರಣದ ವಾಸನಾರೂಪವಾದ ಮಲವು ಅಖಂಡ ಯೋಗಾಗ್ನಿಯಿಂದ ಸುಟ್ಟುಹೋಗಿತ್ತು. ಅದಕ್ಕಾಗಿ ಅವನು ತನ್ನ ಆತ್ಮವನ್ನು ವಿಶುದ್ಧ ಜ್ಞಾನರಸದೊಂದಿಗೆ ಆನಂದ ಮಯನೂ, ಸರ್ವತ್ರವ್ಯಾಪ್ತನೂ ಆಗಿರುವನೆಂದು ಅಭಿನ್ನ ವಾಗಿ ನೋಡುತ್ತಿದ್ದನು. ಎಲ್ಲ ವಿಧದ ಭೇದಗಳಿಂದ ರಹಿತನಾದ ಪ್ರಶಾಂತಬ್ರಹ್ಮವೇ ತನ್ನ ಸ್ವರೂಪವೆಂದು ಅವನು ತಿಳಿಯುತ್ತಿದ್ದನು ಹಾಗೂ ತನ್ನ ಆತ್ಮನಿಗಿಂತ ಬೇರೆ ಏನೂ ಇಲ್ಲವೆಂದು ನೋಡುತ್ತಿದ್ದನು. ॥8-9॥
(ಶ್ಲೋಕ - 10)
ಮೂಲಮ್
ಜಡಾಂಧಬಧಿರೋನ್ಮತ್ತಮೂಕಾಕೃತಿರತನ್ಮತಿಃ ।
ಲಕ್ಷಿತಃ ಪಥಿ ಬಾಲಾನಾಂ ಪ್ರಶಾಂತಾರ್ಚಿರಿವಾನಲಃ ॥
ಅನುವಾದ
ಅವನು ಪೂರ್ಣ ಜ್ಞಾನಿಯಾಗಿದ್ದರೂ ಬೀದಿಗಳಲ್ಲಿ ಅಜ್ಞಾನಿಗಳಿಗೆ ಮೂರ್ಖ ನಂತೆಯೂ, ಕುರುಡನಂತೆಯೂ, ಕಿವುಡನಂತೆಯೂ, ಹುಚ್ಚ ನಂತೆಯೂ, ಮೂಗನಂತೆಯೂ ಕಂಡುಬರುತ್ತಿದ್ದನು. ॥10॥
(ಶ್ಲೋಕ - 11)
ಮೂಲಮ್
ಮತ್ವಾ ತಂ ಜಡಮುನ್ಮತ್ತಂ ಕುಲವೃದ್ಧಾಃ ಸಮಂತ್ರಿಣಃ ।
ವತ್ಸರಂ ಭೂಪತಿಂ ಚಕ್ರುರ್ಯವೀಯಾಂಸಂ ಭ್ರಮೇಃ ಸುತಮ್ ॥
ಅನುವಾದ
ಆದ್ದರಿಂದ ರಾಜಕುಲದ ಹಿರಿಯರೂ, ಮಂತ್ರಿಗಳೂ ಆತ ನನ್ನು ಮೂರ್ಖನೆಂದೂ, ಹುಚ್ಚನೆಂದೂ ತಿಳಿದು ಆತನ ತಮ್ಮನಾದ ಭ್ರಮಿಪುತ್ರ ವತ್ಸರನನ್ನು ರಾಜನನ್ನಾಗಿಸಿದರು.॥11॥
(ಶ್ಲೋಕ - 12)
ಮೂಲಮ್
ಸ್ವರ್ವೀಥಿರ್ವತ್ಸರಸ್ಯೇಷ್ಟಾ ಭಾರ್ಯಾಸೂತ ಷಡಾತ್ಮಜಾನ್ ।
ಪುಷ್ಪಾರ್ಣಂ ತಿಗ್ಮಕೇತುಂ ಚ ಇಷಮೂರ್ಜಂ ವಸುಂ ಜಯಮ್ ॥
ಅನುವಾದ
ಮಹಾರಾಜಾ ವತ್ಸರನು ಪತ್ನಿಯಾದ ಸ್ವರ್ವೀಥಿಯಿಂದ ಪುಷ್ಪಾರ್ಣ, ತಿಗ್ಮಕೇತು, ಇಷ, ಊರ್ಜ, ವಸು ಮತ್ತು ಜಯ ಎಂಬ ಆರು ಪುತ್ರರನ್ನು ಪಡೆದನು. ॥12॥
(ಶ್ಲೋಕ - 13)
ಮೂಲಮ್
ಪುಷ್ಪಾರ್ಣಸ್ಯ ಪ್ರಭಾ ಭಾರ್ಯಾ ದೋಷಾ ಚ ದ್ವೇ ಬಭೂವತುಃ ।
ಪ್ರಾತರ್ಮಧ್ಯಂದಿನಂ ಸಾಯಮಿತಿ ಹ್ಯಾಸನ್ ಪ್ರಭಾಸುತಾಃ ॥
ಅನುವಾದ
ಅವರಲ್ಲಿ ಪುಷ್ಪಾರ್ಣನಿಗೆ ಪ್ರಭಾ ಮತ್ತು ದೋಷಾ ಎಂಬ ಇಬ್ಬರು ಭಾರ್ಯೆಯರಿದ್ದರು. ಅವರಲ್ಲಿ ಪ್ರಭಾಳಿಗೆ ಪ್ರಾತಃ, ಮಧ್ಯಂದಿನ, ಸಾಯಂ ಎಂಬ ಮೂವರು ಪುತ್ರರು ಹುಟ್ಟಿದರು. ॥13॥
(ಶ್ಲೋಕ - 14)
ಮೂಲಮ್
ಪ್ರದೋಷೋ ನಿಷಿಥೋ ವ್ಯಷ್ಟ ಇತಿ ದೋಷಾಸುತಾಸಯಃ ।
ವ್ಯಷ್ಟಃ ಸುತಂ ಪುಷ್ಕರಿಣ್ಯಾಂ ಸರ್ವತೇಜಸಮಾದಧೇ ॥
ಅನುವಾದ
ದೋಷಾಳಲ್ಲಿ ಪ್ರದೋಷ, ನಿಶಿಥ ಮತ್ತು ವ್ಯಷ್ಟ ಎಂಬ ಮೂರು ಪುತ್ರರಾದರು. ಅವರಲ್ಲಿ ವ್ಯಷ್ಟನು ತನ್ನ ಭಾರ್ಯೆಯಾದ ಪುಷ್ಕರಣಿಯಲ್ಲಿ ಸರ್ವ ತೇಜಸನೆಂಬ ಪುತ್ರನನ್ನು ಪಡೆದನು. ॥14॥
(ಶ್ಲೋಕ - 15)
ಮೂಲಮ್
ಸ ಚಕ್ಷುಃ ಸುತಮಾಕೂತ್ಯಾಂ ಪತ್ನ್ಯಾಂ ಮನುಮವಾಪ ಹ ।
ಮನೋರಸೂತ ಮಹಿಷೀ ವಿರಜಾನ್ನಡ್ವಲಾ ಸುತಾನ್ ॥
(ಶ್ಲೋಕ - 16)
ಮೂಲಮ್
ಪುರುಂ ಕುತ್ಸಂ ತ್ರಿತಂ ದ್ಯುಮ್ನಂ ಸತ್ಯವಂತಮೃತಂ ವ್ರತಮ್ ।
ಅಗ್ನಿಷ್ಟೋಮಮತೀರಾತ್ರಂ ಪ್ರದ್ಯುಮ್ನಂ ಶಿಬಿಮುಲ್ಮುಕಮ್ ॥
ಅನುವಾದ
ಆತನ ಪತ್ನಿ ಯಾದ ಆಕೂತಿಯಲ್ಲಿ ಚಕ್ಷುವೆಂಬ ಪುತ್ರನು ಹುಟ್ಟಿದನು. ಅವನೇ ಚಾಕ್ಷುಷ ಮನ್ವಂತರದಲ್ಲಿ ಮನು ಆದನು. ಚಕ್ಷುಮನುವಿನ ಪತ್ನೀ ನಡ್ವಲಾ ದೇವಿಯಲ್ಲಿ ಪುರು, ಕುತ್ಸ, ತ್ರಿತ, ದ್ಯುಮ್ನ, ಸತ್ಯವಾನ್, ಋತ, ವ್ರತ, ಅಗ್ನಿಷ್ಟೋಮ, ಅತಿರಾತ್ರ, ಪ್ರದ್ಯುಮ್ನ, ಶಿಬಿ ಮತ್ತು ಉಲ್ಮುಖ ಎಂಬ ಹನ್ನೆರಡು ಸತ್ತ್ವಗುಣೀ ಪುತ್ರರು ಜನಿಸಿದರು. ॥15-16॥
(ಶ್ಲೋಕ - 17)
ಮೂಲಮ್
ಉಲ್ಮುಕೋಜನಯತ್ಪುತ್ರಾನ್ಪುಷ್ಕರಿಣ್ಯಾಂ ಷಡುತ್ತಮಾನ್ ।
ಅಂಗಂ ಸುಮನಸಂ ಖ್ಯಾತಿಂ ಕ್ರತುಮಂಗಿರಸಂ ಗಯಮ್ ॥
ಅನುವಾದ
ಅವರಲ್ಲಿ ಉಲ್ಮುಕನು ತನ್ನ ಪತ್ನಿ ಪುಷ್ಕರಿಣಿಯಲ್ಲಿ ಅಂಗ, ಸುಮನಾ, ಖ್ಯಾತಿ, ಕ್ರತು, ಅಂಗಿರಾ, ಗಯ ಈ ಆರು ಉತ್ತಮ ಪುತ್ರರನ್ನು ಪಡೆದನು. ॥17॥
(ಶ್ಲೋಕ - 18)
ಮೂಲಮ್
ಸುನೀಥಾಂಗಸ್ಯ ಯಾ ಪತ್ನೀ ಸುಷುವೇ ವೇನಮುಲ್ಬಣಮ್ ।
ಯದ್ದೌಃಶೀಲ್ಯಾತ್ಸ ರಾಜರ್ಷಿರ್ನಿರ್ವಿಣ್ಣೋ ನಿರಗಾತ್ಪುರಾತ್ ॥
ಅನುವಾದ
ಅಂಗನ ಪತ್ನೀ ಸುನೀಥಾದೇವಿಯಲ್ಲಿ ವೇನನೆಂಬ ಅತಿದುಷ್ಟನಾದ ಪುತ್ರನು ಜನಿಸಿದನು. ಅವನ ದುಷ್ಟತೆಯಿಂದ ಉದ್ವಿಗ್ನನಾಗಿ ರಾಜರ್ಷಿ ಅಂಗನು ನಗರವನ್ನು ಬಿಟ್ಟು ಹೊರಟುಹೋಗಿದ್ದನು. ॥18॥
(ಶ್ಲೋಕ - 19)
ಮೂಲಮ್
ಯಮಂಗ ಶೇಪುಃ ಕುಪಿತಾ ವಾಗ್ವಜ್ರಾ ಮುನಯಃ ಕಿಲ ।
ಗತಾಸೋಸ್ತಸ್ಯ ಭೂಯಸ್ತೇ ಮಮಂಥುರ್ದಕ್ಷಿಣಂ ಕರಮ್ ॥
(ಶ್ಲೋಕ - 20)
ಮೂಲಮ್
ಅರಾಜಕೇ ತದಾ ಲೋಕೇ ದಸ್ಯುಭಿಃ ಪೀಡಿತಾಃ ಪ್ರಜಾಃ ।
ಜಾತೋ ನಾರಾಯಣಾಂಶೇನ ಪೃಥುರಾದ್ಯಃ ಕ್ಷಿತೀಶ್ವರಃ ॥
ಅನುವಾದ
ಪ್ರಿಯ ವಿದುರನೇ! ಮುನಿಗಳ ಮಾತುಗಳು ವಜ್ರದಂತೆ ಅಮೋಘವಾಗಿರುತ್ತವೆ. ಅವರು ಕುಪಿತರಾಗಿ ವೇನನನ್ನು ಶಪಿಸಿದ್ದರು. ವೇನನು ಸತ್ತುಹೋದಾಗ ಅರಾಜಕ ವಾದ ಆ ರಾಜ್ಯದಲ್ಲಿ ದರೋಡೆಕೋರರಿಂದ ಪ್ರಜೆಗಳಿಗೆ ತುಂಬಾ ಕಷ್ಟಗಳು ಆಗತೊಡಗಿದವು. ಇದನ್ನು ನೋಡಿ ಮುನಿಗಳು ವೇನನ ಬಲಗೈಯನ್ನು ಕಡೆದರು. ಅದರಿಂದ ಭಗವಾನ್ ವಿಷ್ಣುವಿನ ಅಂಶಾವತಾರವಾದ ಆದಿ ಸಾಮ್ರಾಟ ಮಹಾರಾಜಾ ಪೃಥು ಪ್ರಗಟಗೊಂಡನು. ॥19-20॥
(ಶ್ಲೋಕ - 21)
ಮೂಲಮ್ (ವಾಚನಮ್)
ವಿದುರ ಉವಾಚ
ಮೂಲಮ್
ತಸ್ಯ ಶೀಲನಿಧೇಃ ಸಾಧೋರ್ಬ್ರಹ್ಮಣ್ಯಸ್ಯ ಮಹಾತ್ಮನಃ ।
ರಾಜ್ಞಃ ಕಥಮಭೂದ್ದುಷ್ಟಾ ಪ್ರಜಾ ಯದ್ವಿಮನಾ ಯಯೌ ॥
ಅನುವಾದ
ವಿದುರನು ಕೇಳಿದನು — ಮಹರ್ಷಿಗಳೇ! ಅಂಗ ಮಹಾರಾಜನಾದರೋ ಶೀಲಸಂಪನ್ನನೂ, ಸಾಧು ಸ್ವಭಾವ ದವನೂ, ಬ್ರಾಹ್ಮಣ ಭಕ್ತನೂ, ಮಹಾತ್ಮನೂ ಆಗಿದ್ದನು. ಅಂತಹವನಿಗೆ ಕಾಟವನ್ನು ಕೊಟ್ಟು ಆತನು ದುಃಖದಿಂದ ಕಾಡಿಗೆ ಹೋಗುವಂತೆ ಮಾಡಿದ ದುಷ್ಟಪುತ್ರನು ಹೇಗೆ ಹುಟ್ಟಿದನು? ॥21॥
(ಶ್ಲೋಕ - 22)
ಮೂಲಮ್
ಕಿಂ ವಾಂಹೋ ವೇನ ಉದ್ದಿಶ್ಯ ಬ್ರಹ್ಮದಂಡಮಯೂಯುಜನ್ ।
ದಂಡ ವ್ರತಧರೇ ರಾಜ್ಞಿ ಮುನಯೋ ಧರ್ಮಕೋವಿದಾಃ ॥
ಅನುವಾದ
ತಪ್ಪಿತಸ್ಥರಿಗೆ ಶಿಕ್ಷೆಯನ್ನು ಕೊಡುವ ಅಧಿಕಾರದಲ್ಲಿದ್ದ ದಂಡಧಾರಿ ವೇನನಾದರೂ ಧರ್ಮಜ್ಞರಾದ ಮುನಿಶ್ರೇಷ್ಠರಿಂದ ಶಾಪರೂಪವಾದ ಬ್ರಹ್ಮದಂಡವನ್ನು ಪಡೆಯುವಂತಹ ಯಾವ ಅಪರಾಧವನ್ನು ಮಾಡಿದ್ದನು? ॥22॥
(ಶ್ಲೋಕ - 23)
ಮೂಲಮ್
ನಾವಧ್ಯೇಯಃ ಪ್ರಜಾಪಾಲಃ ಪ್ರಜಾಭಿರಘವಾನಪಿ ।
ಯದಸೌ ಲೋಕಪಾಲಾನಾಂ ಬಿಭರ್ತ್ಯೋಜಃ ಸ್ವತೇಜಸಾ ॥
ಅನುವಾದ
ಪ್ರಜಾಪಾಲಕ ರಾಜನಿಂದ ಯಾವುದಾದರೂ ಪಾಪವು ಘಟಿಸಿದರೂ ಅವನನ್ನು ತಿರಸ್ಕರಿಸಬಾರದು ಎಂಬುದು ಪ್ರಜೆಯ ಧರ್ಮವಾಗಿದೆ. ಏಕಂದರೆ, ರಾಜನು ತನ್ನ ಪ್ರಭಾವದಿಂದ ಅಷ್ಟ ದಿಕ್ಪಾಲಕರ ತೇಜಸ್ಸನ್ನೇ ಧರಿಸುತ್ತಾನೆ. ॥23॥
(ಶ್ಲೋಕ - 24)
ಮೂಲಮ್
ಏತದಾಖ್ಯಾಹಿ ಮೇ ಬ್ರಹ್ಮನ್ ಸುನೀಥಾತ್ಮಜಚೇಷ್ಟಿತಮ್ ।
ಶ್ರದ್ಧಧಾನಾಯ ಭಕ್ತಾಯ ತ್ವಂ ಪರಾವರವಿತ್ತಮಃ ॥
ಅನುವಾದ
ಬ್ರಾಹ್ಮಣೋತ್ತಮರೇ! ನೀವು ಭೂತ-ಭವಿಷ್ಯದ ಮಾತುಗಳನ್ನು ತಿಳಿಯುವಂತಹ ಸರ್ವಶ್ರೇಷ್ಠರಾಗಿದ್ದೀರಿ. ಅದಕ್ಕಾಗಿ ನೀವು ಸುನೀಥಿಯ ಪುತ್ರನಾದ ವೇನನ ಎಲ್ಲ ವೃತ್ತಾಂತವನ್ನು ತಿಳಿಸಿರಿ. ನಾನು ನಿಮ್ಮ ಭಕ್ತನೂ, ಶ್ರದ್ಧಾಳುವೂ ಆಗಿರುವೆನು. ॥24॥
(ಶ್ಲೋಕ - 25)
ಮೂಲಮ್ (ವಾಚನಮ್)
ಮೈತ್ರೇಯ ಉವಾಚ
ಮೂಲಮ್
ಅಂಗೋಶ್ವಮೇಧಂ ರಾಜರ್ಷಿರಾಜಹಾರ ಮಹಾಕ್ರತುಮ್ ।
ನಾಜಗ್ಮುರ್ದೇವತಾಸ್ತಸ್ಮಿನ್ನಾಹೂತಾ ಬ್ರಹ್ಮವಾದಿಭಿಃ ॥
ಅನುವಾದ
ಶ್ರೀಮೈತ್ರೇಯರು ಹೇಳುತ್ತಾರೆ — ವಿದುರನೇ! ಒಮ್ಮೆ ರಾಜರ್ಷಿ ಅಂಗನು ಅಶ್ವಮೇಧ ಮಹಾಯಜ್ಞದ ಅನುಷ್ಠಾನ ಮಾಡಿದನು. ಅದರಲ್ಲಿ ವೇದವಾದಿಗಳಾದ ಬ್ರಾಹ್ಮಣರು ದೇವತೆಗಳನ್ನು ಆಹ್ವಾನಿಸಿದರೂ ಅವರು ತಮ್ಮ ಭಾಗವನ್ನು ಸ್ವೀಕರಿಸಲು ಬರಲಿಲ್ಲ. ॥25॥
(ಶ್ಲೋಕ - 26)
ಮೂಲಮ್
ತಮೂಚುರ್ವಿಸ್ಮಿತಾಸ್ತತ್ರ ಯಜಮಾನಮಥರ್ತ್ವಿಜಃ ।
ಹವೀಂಷಿ ಹೂಯಮಾನಾನಿ ನ ತೇ ಗೃಹ್ಣಂತಿ ದೇವತಾಃ ॥
ಅನುವಾದ
ಆಗ ಋತ್ವಿಜರು ಆಶ್ಚರ್ಯ ಚಕಿತರಾಗಿ ಯಜಮಾನನಾದ ಅಂಗಮಹಾರಾಜನನ್ನು ಕೇಳಿದರು ‘ರಾಜನೇ! ನಾವು ಆಹುತಿಗಳ ರೂಪದಲ್ಲಿ ಹೋಮ ಮಾಡುತ್ತಿರುವ ತುಪ್ಪವೇ ಮುಂತಾದ ನಿನ್ನ ಪದಾರ್ಥಗಳನ್ನು ದೇವತೆಗಳು ಸ್ವೀಕರಿಸುತ್ತಿಲ್ಲ. ॥26॥
(ಶ್ಲೋಕ - 27)
ಮೂಲಮ್
ರಾಜನ್ ಹವೀಂಷ್ಯದುಷ್ಟಾನಿ ಶ್ರದ್ಧಯಾಸಾದಿತಾನಿ ತೇ ।
ಛಂದಾಂಸ್ಯ ಯಾತಯಾಮಾನಿ ಯೋಜಿತಾನಿ ಧೃತವ್ರತೈಃ ॥
ಅನುವಾದ
ನಿನ್ನ ಹೋಮಸಾಮಗ್ರಿಯು ದೂಷಿತವಾಗಿಲ್ಲವೆಂಬುದನ್ನು ನಾವು ತಿಳಿದಿರುವೆವು. ನೀನು ಅದನ್ನು ಬಹು ಶ್ರದ್ಧೆಯಿಂದಲೇ ಸಂಗ್ರಹಿಸಿರುವೆ. ವೇದಮಂತ್ರಗಳು ಯಾವ ರೀತಿಯಿಂದಲೂ ಬಲಹೀನವಾಗಿಲ್ಲ. ಏಕೆಂದರೆ, ಅವುಗಳನ್ನು ಪ್ರಯೋಗಿಸುವ ಋತ್ವಿಜರು ಎಲ್ಲ ವ್ರತ-ನಿಯಮಗಳನ್ನು ಪಾಲಿಸುತ್ತಿದ್ದಾರೆ. ॥27॥
(ಶ್ಲೋಕ - 28)
ಮೂಲಮ್
ನ ವಿದಾಮೇಹ ದೇವಾನಾಂ ಹೇಲನಂ ವಯಮಣ್ವಪಿ ।
ಯನ್ನ ಗೃಹ್ಣಂತಿ ಭಾಗಾನ್ಸ್ವಾನ್ಯೇ ದೇವಾಃ ಕರ್ಮಸಾಕ್ಷಿಣಃ ॥
ಅನುವಾದ
ಈ ಯಜ್ಞದಲ್ಲಿ ದೇವತೆಗಳ ತಿರಸ್ಕಾರವು ಕಿಂಚಿತ್ತಾದರೂ ಆದಂತೆ ಕಂಡುಬರುವುದಿಲ್ಲ. ಹೀಗಿದ್ದರೂ ಕರ್ಮಾಧ್ಯಕ್ಷರಾದ ದೇವತೆಗಳು ಏಕೆ ತಮ್ಮ ಭಾಗವನ್ನು ಸ್ವೀಕರಿಸದೆ ಹೋಗಿದ್ದಾರೆ?’ ॥28॥
(ಶ್ಲೋಕ - 29)
ಮೂಲಮ್ (ವಾಚನಮ್)
ಮೈತ್ರೇಯ ಉವಾಚ
ಮೂಲಮ್
ಅಂಗೋ ದ್ವಿಜವಚಃ ಶ್ರುತ್ವಾ ಯಜಮಾನಃ ಸುದುರ್ಮನಾಃ ।
ತತ್ಪ್ರಷ್ಟುಂ ವ್ಯಸೃಜದ್ವಾಚಂ ಸದಸ್ಯಾಂಸ್ತದನುಜ್ಞಯಾ ॥
ಅನುವಾದ
ಶ್ರೀಮೈತ್ರೇಯರು ಹೇಳುತ್ತಾರೆ — ಋತ್ವಿಜರ ಮಾತುಗಳನ್ನು ಕೇಳಿ ಅಂಗರಾಜನ ಮನಸ್ಸು ಖಿನ್ನವಾಯಿತು. ಆಗ ಅವನು ಯಾಜಕರ ಅನುಮತಿಯನ್ನು ಪಡೆದು ಮೌನವನ್ನು ಮುರಿದು ಸದಸ್ಯರಲ್ಲಿ ಕೇಳಿದನು. ॥29॥
(ಶ್ಲೋಕ - 30)
ಮೂಲಮ್
ನಾಗಚ್ಛಂತ್ಯಾಹುತಾ ದೇವಾ ನ ಗೃಹ್ಣಂತಿ ಗ್ರಹಾನಿಹ ।
ಸದಸಸ್ಪತಯೋ ಬ್ರೂತ ಕಿಮವದ್ಯಂ ಮಯಾ ಕೃತಮ್ ॥
ಅನುವಾದ
‘ಎಲೈ ಸದಸ್ಯರೇ! ದೇವತೆಗಳು ಆವಾಹನೆ ಮಾಡಿದರೂ ಯಜ್ಞದಲ್ಲಿ ಏಕೆ ಬರುತ್ತಿಲ್ಲ! ತಮ್ಮ ಸೋಮಪಾತ್ರೆಗಳನ್ನೂ ಏಕೆ ಗ್ರಹಿಸುವುದಿಲ್ಲ! ನಾನು ಮಾಡಿದ ಅಪರಾಧವಾದರೂ ಏನಿದೆ? ತಿಳಿಸಿರಿ.’ ॥30॥
(ಶ್ಲೋಕ - 31)
ಮೂಲಮ್ (ವಾಚನಮ್)
ಸದಸಸ್ಪತಯ ಊಚುಃ
ಮೂಲಮ್
ನರದೇವೇಹ ಭವತೋ ನಾಘಂ ತಾವನ್ಮನಾಕ್ ಸ್ಥಿತಮ್ ।
ಅಸ್ತ್ಯೇಕಂ ಪ್ರಾಕ್ತನಮಘಂ ಯದಿಹೇದೃಕ್ತ್ವಮಪ್ರಜಃ ॥
ಅನುವಾದ
ಸದಸ್ಯರು ಹೇಳಿದರು — ‘ಎಲೈ ರಾಜನೇ! ಈ ಜನ್ಮದಲ್ಲಾದರೋ ನಿನ್ನಿಂದ ಯಾವ ಅಪರಾಧವೂ ನಡೆದಿಲ್ಲ. ಆದರೆ ಹಿಂದಿನ ಜನ್ಮದಲ್ಲಿ ನಿನ್ನಿಂದ ಒಂದು ಅಪರಾಧ ನಡೆದಿದೆ. ಅದರಿಂದಾಗಿ ನಿನ್ನಂತಹ ಸರ್ವಗುಣಸಂಪನ್ನನಾಗಿದ್ದರೂ ಪುತ್ರಹೀನನಾಗಿರುವೆ. ॥31॥
(ಶ್ಲೋಕ - 32)
ಮೂಲಮ್
ತಥಾ ಸಾಧಯ ಭದ್ರಂ ತೇ ಆತ್ಮಾನಂ ಸುಪ್ರಜಂ ನೃಪ ।
ಇಷ್ಟಸ್ತೇ ಪುತ್ರಕಾಮಸ್ಯ ಪುತ್ರಂ ದಾಸ್ಯತಿ ಯಜ್ಞಭುಕ್ ॥
ಅನುವಾದ
ನಿನಗೆ ಮಂಗಳವಾಗಲಿ. ಅದಕ್ಕಾಗಿ ಚಿಂತಿಸಬೇಡ. ಮೊದಲಿಗೆ ನೀನು ಸತ್ಪುತ್ರನನ್ನು ಪಡೆಯುವ ಉಪಾಯವನ್ನು ಮಾಡು. ನೀನು ಪುತ್ರ ಪ್ರಾಪ್ತಿಯ ಬಯಕೆಯಿಂದ ಯಜ್ಞಮಾಡಿದರೆ ಭಗವಾನ್ ಯಜ್ಞೇಶ್ವರನು ನಿನಗೆ ಖಂಡಿತವಾಗಿ ಪುತ್ರನನ್ನು ಅನುಗ್ರಹಿಸುವನು. ॥32॥
(ಶ್ಲೋಕ - 33)
ಮೂಲಮ್
ತಥಾ ಸ್ವಭಾಗಧೇಯಾನಿ ಗ್ರಹೀಷ್ಯಂತಿ ದಿವೌಕಸಃ ।
ಯದ್ಯಜ್ಞ ಪುರುಷಃ ಸಾಕ್ಷಾದಪತ್ಯಾಯ ಹರಿರ್ವೃತಃ ॥
ಅನುವಾದ
ಸಂತಾನಕ್ಕಾಗಿ ಸಾಕ್ಷಾತ್ ಯಜ್ಞ ಪುರುಷ ಶ್ರೀಹರಿಯನ್ನು ಆವಾಹನೆ ಮಾಡಿದಾಗ ದೇವತೆಗಳೂ ಕೂಡ ತಮ್ಮ-ತಮ್ಮ ಯಜ್ಞಭಾಗವನ್ನು ಸ್ವೀಕಾರ ಮಾಡುವರು. ॥33॥
(ಶ್ಲೋಕ - 34)
ಮೂಲಮ್
ತಾಂಸ್ತಾನ್ಕಾಮಾನ್ ಹರಿರ್ದದ್ಯಾದ್ಯಾನ್ಯಾನ್ಕಾಮಯತೇ ಜನಃ ।
ಆರಾಧಿತೋ ಯಥೈವೈಷ ತಥಾ ಪುಂಸಾಂ ಲೋದಯಃ ॥
ಅನುವಾದ
ಭಕ್ತರು ಬಯಸಿದ ವಸ್ತುವನ್ನು ಶ್ರೀಹರಿಯು ಕೊಡುತ್ತಾನೆ. ಯಾವ ವಿಧದಿಂದ ಅವನ ಆರಾಧನೆ ಮಾಡಲಾಗುತ್ತದೋ ಉಪಾಸಕನಿಗೆ ಅದೇ ಫಲವು ಸಿಗುವುದು.’ ॥34॥
(ಶ್ಲೋಕ - 35)
ಮೂಲಮ್
ಇತಿ ವ್ಯವಸಿತಾ ವಿಪ್ರಾಸ್ತಸ್ಯ ರಾಜ್ಞಃ ಪ್ರಜಾತಯೇ ।
ಪುರೋಡಾಶಂ ನಿರವಪನ್ ಶಿಪಿವಿಷ್ಟಾಯ ವಿಷ್ಣವೇ ॥
ಅನುವಾದ
ಹೀಗೆ ಅಂಗರಾಜನಿಗೆ ಪುತ್ರನನ್ನು ದೊರಕಿಸಿಕೊಡುವ ನಿಶ್ಚಯ ಮಾಡಿ ಋತ್ವಿಜರು ಪಶುಗಳಲ್ಲಿ ಯಜ್ಞ ರೂಪದಲ್ಲಿ ನೆಲೆಗೊಂಡಿರುವ ಭಗವಾನ್ ಶ್ರೀವಿಷ್ಣುವಿನ ತೃಪ್ತಿಗಾಗಿ ಪುರೋಡಾಶವೆಂಬ ಚರುವನ್ನು ಸಮರ್ಪಣೆ ಮಾಡಿದರು. ॥35॥
(ಶ್ಲೋಕ - 36)
ಮೂಲಮ್
ತಸ್ಮಾತ್ಪುರುಷ ಉತ್ತಸ್ಥೌ ಹೇಮಮಾಲ್ಯ ಮಲಾಂಬರಃ ।
ಹಿರಣ್ಮಯೇನ ಪಾತ್ರೇಣ ಸಿದ್ಧಮಾದಾಯ ಪಾಯಸಮ್ ॥
ಅನುವಾದ
ಅಗ್ನಿಯಲ್ಲಿ ಆಹುತಿಯನ್ನು ಕೊಡುತ್ತಲೇ ಅಗ್ನಿಕುಂಡದಿಂದ ಸುವರ್ಣದ ಹಾರಗಳಿಂದಲೂ, ಶುಭ್ರವಾದ ವಸ್ತ್ರಗಳಿಂದಲೂ ವಿಭೂಷಿತನಾದ ಓರ್ವ ದಿವ್ಯ ಪುರುಷನು ಪ್ರಕಟಗೊಂಡನು. ಅವನು ಸಿದ್ಧವಾದ ಪಾಯಸವನ್ನು ಸ್ವರ್ಣಪಾತ್ರೆಯಲ್ಲಿ ಹಿಡಿದುಕೊಂಡಿದ್ದನು. ॥36॥
(ಶ್ಲೋಕ - 37)
ಮೂಲಮ್
ಸ ವಿಪ್ರಾನುಮತೋ ರಾಜಾ ಗೃಹೀತ್ವಾಂಜಲಿನೌದನಮ್ ।
ಅವಘ್ರಾಯ ಮುದಾ ಯುಕ್ತಃ ಪ್ರಾದಾತ್ಪತ್ನ್ಯಾ ಉದಾರಧೀಃ ॥
ಅನುವಾದ
ಉದಾರಬುದ್ಧಿಯುಳ್ಳ ಅಂಗರಾಜನು ಯಾಜಕರ ಅನುಮತಿಯಿಂದ ತನ್ನ ಅಂಜಲಿಯಲ್ಲಿ ಆ ಪಾಯಸವನ್ನು ಸ್ವೀಕರಿಸಿ, ಸಂತೋಷದಿಂದ ಮೂಸಿನೋಡಿ ಅನಂತರ ಅದನ್ನು ತನ್ನ ಪತ್ನಿಗೆ ಕೊಟ್ಟನು. ॥37॥
(ಶ್ಲೋಕ - 38)
ಮೂಲಮ್
ಸಾ ತತ್ಪುಂಸವನಂ ರಾಜ್ಞೀ ಪ್ರಾಶ್ಯ ವೈ ಪತ್ಯುರಾದಧೇ ।
ಗರ್ಭಂ ಕಾಲ ಉಪಾವೃತ್ತೇ ಕುಮಾರಂ ಸುಷುವೇಪ್ರಜಾ ॥
ಅನುವಾದ
ಪುತ್ರಹೀನಳಾಗಿದ್ದ ಮಹಾರಾಣಿಯು ಆ ಪುತ್ರ ಪ್ರದಾಯಕವಾದ ಪಾಯಸವನ್ನು ತಿಂದು, ಗರ್ಭವನ್ನು ಧರಿಸಿದಳು. ಸಕಾಲದಲ್ಲಿ ಆಕೆಗೆ ಒಬ್ಬ ಪುತ್ರನು ಜನಿಸಿದನು. ॥38॥
(ಶ್ಲೋಕ - 39)
ಮೂಲಮ್
ಸ ಬಾಲ ಏವ ಪುರುಷೋ ಮಾತಾಮಹಮನುವ್ರತಃ ।
ಅಧರ್ಮಾಂಶೋದ್ಭವಂ ಮೃತ್ಯುಂ ತೇನಾಭವದಧಾರ್ಮಿಕಃ ॥
ಅನುವಾದ
ಆ ಬಾಲಕನು ಅಧರ್ಮವಂಶದಲ್ಲಿ ಜನಿಸಿದ್ದರಿಂದ ತನ್ನ ಅಜ್ಜನಾದ ಮೃತ್ಯುವನ್ನೇ ಅನುಸರಿಸಿದ್ದರಿಂದ ತಾನೂ ಅಧಾರ್ಮಿಕನಾಗಿಯೇ ಬೆಳೆದನು. (ಸುನೀಥೆಯು ಮೃತ್ಯುವಿನ ಮಗಳಾಗಿದ್ದಳು.) ॥39॥
(ಶ್ಲೋಕ - 40)
ಮೂಲಮ್
ಸ ಶರಾಸನಮುದ್ಯಮ್ಯ ಮೃಗಯುರ್ವನಗೋಚರಃ ।
ಹಂತ್ಯಸಾಧುರ್ಮೃಗಾನ್ ದೀನಾನ್ವೇನೋಸಾವಿತ್ಯರೌಜ್ಜನಃ ॥
ಅನುವಾದ
ಆ ದುಷ್ಟನು ಧನುಷ್ಯ-ಬಾಣಗಳನ್ನು ಧರಿಸಿಕೊಂಡು ಕಾಡಿಗೆ ಹೋಗುತ್ತಿದ್ದನು. ಅಲ್ಲಿ ಬೇಡನಂತೆ ಬಡಪಾಯಿ ಸಾಧುಪ್ರಾಣಿಗಳಾದ ಜಿಂಕೆಗಳನ್ನು ಕೊಲ್ಲುತ್ತಿದ್ದನು. ಅವನನ್ನು ಕಂಡೊಡನೆ ಪುರಜನರು ವೇನ ಬಂದನು! ವೇನ ಬಂದನು! ಎಂದು ಕೂಗಿಕೊಳ್ಳುತ್ತಿದ್ದರು. ॥40॥
(ಶ್ಲೋಕ - 41)
ಮೂಲಮ್
ಆಕ್ರೀಡೇ ಕ್ರೀಡತೋ ಬಾಲಾನ್ವಯಸ್ಯಾನತಿದಾರುಣಃ ।
ಪ್ರಸಹ್ಯ ನಿರನುಕ್ರೋಶಃ ಪಶುಮಾರಮಮಾರಯತ್ ॥
ಅನುವಾದ
ಅವನು ತನ್ನ ಜೊತೆಯಲ್ಲಿ ಆಟವಾಡುತ್ತಿದ್ದ ಸಮವಯಸ್ಸಿನ ಹುಡುಗರನ್ನು ಪಶುಗಳಂತೆ ಬಲಾತ್ಕಾರವಾಗಿ ಪೀಡಿಸಿ ಕೊಂದುಬಿಡುವಷ್ಟು ಕ್ರೂರಿಯಾಗಿದ್ದನು. ॥41॥
(ಶ್ಲೋಕ - 42)
ಮೂಲಮ್
ತಂ ವಿಚಕ್ಷ್ಯ ಖಲಂ ಪುತ್ರಂ ಶಾಸನೈರ್ವಿವಿಧೈರ್ನೃಪಃ ।
ಯದಾ ನ ಶಾಸಿತುಂ ಕಲ್ಪೋ ಭೃಶಮಾಸೀತ್ಸುದುರ್ಮನಾಃ ॥
ಅನುವಾದ
ತನ್ನ ಪುತ್ರನ ಈ ದುಷ್ಟ ಸ್ವಭಾವವನ್ನು ಕಂಡು ಅಂಗ ಮಹಾರಾಜನು ಆತನನ್ನು ಸರಿದಾರಿಗೆ ತರಲು ಬಗೆ-ಬಗೆಯ ಪ್ರಯತ್ನ ಮಾಡಿದನು. ಆದರೆ ಆತನನ್ನು ಹತೋಟಿಗೆ ತರಲು ಅಸಮರ್ಥನಾದಾಗ ಅವನಿಗೆ ತಡೆಯಲಾರದ ಸಂಕಟ ವಾಯಿತು. ॥42॥
(ಶ್ಲೋಕ - 43)
ಮೂಲಮ್
ಪ್ರಾಯೇಣಾಭ್ಯರ್ಚಿತೋ ದೇವೋ ಯೇಪ್ರಜಾ ಗೃಹಮೇಧಿನಃ ।
ಕದಪತ್ಯ ಭೃತಂ ದುಃಖಂ ಯೇ ನ ವಿಂದಂತಿ ದುರ್ಭರಮ್ ॥
ಅನುವಾದ
(ಅವನು ಮನಸ್ಸಿನಲ್ಲೇ ಹೀಗೆ ಅಂದುಕೊಂಡನು.) ಪುತ್ರಹೀನರಾದ ಗೃಹಸ್ಥರೇ ಬಹುಶಃ ಪುಣ್ಯಶಾಲಿಗಳು. ಅವರು ಹಿಂದಿನ ಜನ್ಮದಲ್ಲಿ ಶ್ರೀಹರಿಯನ್ನು ಆರಾಧನೆ ಮಾಡಿರಬೇಕು. ಅದರಿಂದಲೇ ಅವರಿಗೆ ಕುಪುತ್ರನು ಮಾಡುವ ಕುಕರ್ಮಗಳಿಂದುಂಟಾಗುವ ಅಸಹ್ಯ ಕ್ಲೇಶಗಳು ಅನುಭವಿಸುವ ಸಂದರ್ಭ ಬಂದಿಲ್ಲ. ॥43॥
(ಶ್ಲೋಕ - 44)
ಮೂಲಮ್
ಯತಃ ಪಾಪೀಯಸೀ ಕೀರ್ತಿರಧರ್ಮಶ್ಚ ಮಹಾನ್ನೃಣಾಮ್ ।
ಯತೋ ವಿರೋಧಃ ಸರ್ವೇಷಾಂ ಯತ ಆಧಿರನಂತಕಃ ॥
(ಶ್ಲೋಕ - 45)
ಮೂಲಮ್
ಕಸ್ತಂ ಪ್ರಜಾಪದೇಶಂ ವೈ ಮೋಹಬಂಧನಮಾತ್ಮನಃ ।
ಪಂಡಿತೋ ಬಹು ಮನ್ಯೇತ ಯದರ್ಥಾಃ ಕ್ಲೇಶದಾ ಗೃಹಾಃ ॥
ಅನುವಾದ
ಯಾರು ಮಾಡುವ ಕುಕರ್ಮಗಳಿಂದ ತಂದೆ-ತಾಯಿಗಳ ಕೀರ್ತಿಯು ಮಣ್ಣುಪಾಲಾಗಿ, ಅವರು ಅಧರ್ಮಕ್ಕೆ ಗುರಿಯಾಗಿ, ಎಲ್ಲರೊಡನೆಯೂ ವಿರೋಧವುಂಟಾಗಿ ಎಂದಿಗೂ ತೊಲಗದಿರುವ ಮನೋವ್ಯಾಧಿಗೆ ತುತ್ತಾಗಿ, ಮನೆಯೆಲ್ಲ ದುಃಖದಿಂದ ತುಂಬಿಹೋಗುವುದೋ, ಅಂತಹ ಹೆಸರಿಗಷ್ಟೇ ಇರುವ ಸಂತಾನಕ್ಕಾಗಿ ಯಾವ ವಿವೇಕಿಯು ಹಂಬಲಿಸಿಯಾನು? ಅಂತಹ ಸಂತಾನವು ಆತ್ಮನಿಗಾಗಿ ಒಂದು ರೀತಿಯ ಮೋಹಮಯ ಬಂಧನವೇ ಆಗಿದೆ. ॥44-45॥
(ಶ್ಲೋಕ - 46)
ಮೂಲಮ್
ಕದಪತ್ಯಂ ವರಂ ಮನ್ಯೇ ಸದಪತ್ಯಾಚ್ಛುಚಾಂ ಪದಾತ್ ।
ನಿರ್ವಿದ್ಯೇತ ಗೃಹಾನ್ಮರ್ತ್ಯೋ ಯತ್ಕ್ಲೇಶನಿವಹಾ ಗೃಹಾಃ ॥
ಅನುವಾದ
ಈ ದೃಷ್ಟಿಯಿಂದ ನಾನು ಕುಪುತ್ರನೇ ಒಳ್ಳೆಯವನೆಂದು ತಿಳಿಯುತ್ತೇನೆ. ಏಕೆಂದರೆ, ಸತ್ಪುತ್ರನನ್ನು ಬಿಡಲು ತುಂಬಾ ದುಃಖವಾಗುತ್ತದೆ. ಕುಪುತ್ರನು ಮನೆಯನ್ನೇ ನರಕವಾಗಿಸುತ್ತಾನೆ. ಆದ್ದರಿಂದ ಅವನಿಂದ ಸಹಜ ವಾಗಿಯೇ ಬಿಡುಗಡೆ ಆಗಿ ಹೋಗುತ್ತದೆ. ॥46॥
(ಶ್ಲೋಕ - 47)
ಮೂಲಮ್
ಏವಂ ಸ ನಿರ್ವಿಣ್ಣ ಮನಾ ನೃಪೋ ಗೃಹಾನ್
ನಿಶೀಥ ಉತ್ಥಾಯ ಮಹೋದಯೋದಯಾತ್ ।
ಅಲಬ್ಧ ನಿದ್ರೋನುಪಲಕ್ಷಿತೋ ನೃಭಿ-
ರ್ಹಿತ್ವಾ ಗತೋ ವೇನಸುವಂ ಪ್ರಸುಪ್ತಾಮ್ ॥
ಅನುವಾದ
ಈ ಪ್ರಕಾರ ಯೋಚಿಸುತ್ತಾ ಚಿಂತೆಯಿಂದ ಅಂಗಮಹಾ ರಾಜನಿಗೆ ರಾತ್ರಿಯಲ್ಲಿ ನಿದ್ದೆ ಬಂದಿಲ್ಲ. ಅವನಿಗೆ ಗೃಹಸ್ಥ ಜೀವನದಲ್ಲೇ ಬೇಸರವುಂಟಾಯಿತು. ಅರ್ಧರಾತ್ರಿಯಲ್ಲಿ ವೇನನ ತಾಯಿಯು ನಿದ್ದೆಯಲ್ಲಿ ಮುಳುಗಿದ್ದಾಗ ಆತನು ಹಾಸಿಗೆಯಿಂದೆದ್ದು ವೈರಾಗ್ಯದಿಂದ ಎಲ್ಲ ಮೋಹ-ಪಾಶಗಳನ್ನು ಕಿತ್ತೊಗೆದು ಯಾರಿಗೂ ಸುಳಿವು ಕೊಡದೆ ಸುಮ್ಮನೆ ಐಶ್ವರ್ಯ ಶಾಲಿಯಾದ ಅರಮನೆಯನ್ನು ತೊರೆದು ಅರಣ್ಯಕ್ಕೆ ಹೊರಟು ಹೋದನು. ॥47॥
(ಶ್ಲೋಕ - 48)
ಮೂಲಮ್
ವಿಜ್ಞಾಯ ನಿರ್ವಿದ್ಯ ಗತಂ ಪತಿಂ ಪ್ರಜಾಃ
ಪುರೋಹಿತಾಮಾತ್ಯ ಸುಹೃದ್ಗಣಾದಯಃ ।
ವಿಚಿಕ್ಯುರುರ್ವ್ಯಾಮತಿಶೋಕಕಾತರಾ
ಯಥಾ ನಿಗೂಢಂ ಪುರುಷಂ ಕುಯೋಗಿನಃ ॥
ಅನುವಾದ
ಮಹಾರಾಜರು ವಿರಕ್ತರಾಗಿ ಮನೆಯಿಂದ ಹೊರಟುಹೋದರೆಂದು ತಿಳಿದು ಎಲ್ಲ ಪ್ರಜೆಗಳೂ, ಪುರೋಹಿತರೂ, ಮಂತ್ರಿಗಳೂ, ಸ್ನೇಹಿತರೂ ಎಲ್ಲರೂ ತುಂಬಾ ಕಳವಳಗೊಂಡು ಪೃಥ್ವಿಯಲ್ಲೆಲ್ಲ ಹುಡುಕ ತೊಡಗಿದರು. ಯೋಗದ ಪರಮಾರ್ಥವನ್ನು ತಿಳಿಯದಿರುವ ಜನರು ತಮ್ಮ ಹೃದಯದಲ್ಲಿ ಅಡಗಿರುವ ಭಗವಂತನನ್ನು ಹೊರಗೆ ಹುಡುಕುವಂತೆ ಅವರೆಲ್ಲಾ ಹುಡುಕುತ್ತಿದ್ದರು. ॥48॥
(ಶ್ಲೋಕ - 49)
ಮೂಲಮ್
ಅಲಕ್ಷಯಂತಃ ಪದವೀಂ ಪ್ರಜಾಪತೇ-
ರ್ಹತೋದ್ಯಮಾಃ ಪ್ರತ್ಯುಪಸೃತ್ಯ ತೇ ಪುರೀಮ್ ।
ಋಷೀನ್ಸಮೇತಾನಭಿವಂದ್ಯ ಸಾಶ್ರವೋ
ನ್ಯವೇದಯನ್ಪೌರವ ಭರ್ತೃವಿಪ್ಲವಮ್ ॥ 49 ॥
ಅನುವಾದ
ಅವರಿಗೆ ಒಡೆಯನ ಸುಳಿವು ಎಲ್ಲಿಯೂ ಸಿಕ್ಕದಿದ್ದಾಗ ಅವರು ನಿರಾಶರಾಗಿ ನಗರಕ್ಕೆ ಮರಳಿದರು. ಅಲ್ಲಿ ನೆರೆದಿದ್ದ ಮುನಿಗಳಿಗೆ ನಮಸ್ಕರಿಸಿ, ಕಣ್ಣೀರನ್ನು ತುಂಬಿಕೊಂಡು ಮಹಾರಾಜರು ಸಿಕ್ಕದಿರುವ ವೃತ್ತಾಂತವನ್ನು ತಿಳಿಸಿದರು. ॥49॥
ಅನುವಾದ (ಸಮಾಪ್ತಿಃ)
ಹದಿಮೂರನೆಯ ಅಧ್ಯಾಯವು ಮುಗಿಯಿತು. ॥13॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಚತುರ್ಥಸ್ಕಂಧೇ ತ್ರಯೋದಶೋಽಧ್ಯಾಯಃ ॥13॥