[ಹನ್ನೆರಡನೆಯ ಅಧ್ಯಾಯ]
ಭಾಗಸೂಚನಾ
ಧ್ರುವನಿಗೆ ಕುಬೇರನಿಂದ ವರಪ್ರದಾನ ಧ್ರುವನು ವಿಷ್ಣುಲೋಕವನ್ನು ಸೇರಿದುದು
(ಶ್ಲೋಕ - 1)
ಮೂಲಮ್ (ವಾಚನಮ್)
ಮೈತ್ರೇಯ ಉವಾಚ
ಮೂಲಮ್
ಧ್ರುವಂ ನಿವೃತ್ತಂ ಪ್ರತಿಬುದ್ಧ್ಯ ವೈಶಸಾತ್
ಅಪೇತಮನ್ಯುಂ ಭಗವಾನ್ಧನೇಶ್ವರಃ ।
ತತ್ರಾಗತಶ್ಚಾರಣಯಕ್ಷಕಿನ್ನರೈಃ
ಸಂಸ್ತೂಯಮಾನೋಭ್ಯವದತ್ಕೃತಾಂಜಲಿಮ್ ॥
ಅನುವಾದ
ಶ್ರೀಮೈತ್ರೇಯರು ಹೇಳುತ್ತಾರೆ — ಎಲೈ ವಿದುರನೇ! ಧ್ರುವನ ಕೋಪವು ಶಾಂತವಾಗಿದೆ ಮತ್ತು ಯಕ್ಷವಧೆಯನ್ನು ನಿಲ್ಲಿಸಿರುವನೆಂದು ತಿಳಿದ ಭಗವಾನ್ ಕುಬೇರನು ಅಲ್ಲಿಗೆ ಬಂದನು. ಆಗ ಯಕ್ಷರು, ಚಾರಣರು, ಕಿನ್ನರರು ವೈಶ್ರವಣ ನನ್ನು ಸ್ತೋತ್ರ ಮಾಡುತ್ತಿದ್ದರು. ಅವನನ್ನು ನೋಡುತ್ತಲೇ ಧ್ರುವನು ಕೈಜೋಡಿಸಿ ನಿಂತುಕೊಂಡನು. ಆಗ ಕುಬೇರನು ಇಂತೆಂದನು ॥1॥
(ಶ್ಲೋಕ - 2)
ಮೂಲಮ್ (ವಾಚನಮ್)
ಧನದ ಉವಾಚ
ಮೂಲಮ್
ಭೋ ಭೋಃ ಕ್ಷತ್ರಿಯದಾಯಾದ ಪರಿತುಷ್ಟೋಸ್ಮಿ ತೇನಘ ।
ಯಸ್ತ್ವಂ ಪಿತಾಮಹಾದೇಶಾದ್ವೈರಂ ದುಸ್ತ್ಯಜಮತ್ಯಜಃ ॥
ಅನುವಾದ
ಶ್ರೀಕುಬೇರನು ಹೇಳಿದನು — ಎಲೈ ಶುದ್ಧಾತ್ಮನಾದ ಕ್ಷತ್ರಿಯ ಶ್ರೇಷ್ಠನೇ! ನೀನು ನಿನ್ನ ತಾತನ ಉಪದೇಶದಂತೆ ಬಿಡಲು ಕಷ್ಟಕರವಾದ ವೈರವನ್ನು ಬಿಟ್ಟಿರುವೆ. ಇದರಿಂದ ನಾನು ನಿನ್ನ ಮೇಲೆ ತುಂಬಾ ಪ್ರಸನ್ನನಾಗಿರುವೆನು. ॥2॥
(ಶ್ಲೋಕ - 3)
ಮೂಲಮ್
ನ ಭವಾನವಧೀದ್ಯಕ್ಷಾನ್ನ ಯಕ್ಷಾ ಭ್ರಾತರಂ ತವ ।
ಕಾಲ ಏವ ಹಿ ಭೂತಾನಾಂ ಪ್ರಭುರಪ್ಯಯಭಾವಯೋಃ ॥
ಅನುವಾದ
ವಾಸ್ತವದಲ್ಲಿ ನೀನು ಯಕ್ಷರನ್ನು ಕೊಂದಿಲ್ಲ. ಯಕ್ಷರು ನಿನ್ನ ತಮ್ಮನನ್ನೂ ಕೊಂದಿಲ್ಲ. ಸಮಸ್ತ ಜೀವಿಗಳ ಉತ್ಪತ್ತಿ ಮತ್ತು ವಿನಾಶದ ಕಾರಣವಾದರೋ ಕಾಲವೊಂದೇ ಆಗಿದೆ. ॥3॥
(ಶ್ಲೋಕ - 4)
ಮೂಲಮ್
ಅಹಂ ತ್ವಮಿತ್ಯಪಾರ್ಥಾ ಧೀರಜ್ಞಾನಾತ್ಪುರುಷಸ್ಯ ಹಿ ।
ಸ್ವಾಪ್ನೀವಾಭಾತ್ಯತದ್ಧ್ಯಾನಾದ್ಯಯಾ ಬಂಧವಿಪರ್ಯಯೌ ॥
ಅನುವಾದ
ಈ ನಾನು-ನೀನು ಮುಂತಾದ ಮಿಥ್ಯಾಬುದ್ಧಿಯಾದರೋ ಜೀವಿಗೆ ಅಜ್ಞಾನವಶದಿಂದ ಸ್ವಪ್ನದಂತೆ ಶರೀರಾದಿಗಳನ್ನೇ ಆತ್ಮನೆಂದು ತಿಳಿಯುವುದರಿಂದ ಉಂಟಾಗುತ್ತದೆ. ಇದರಿಂದ ಮನುಷ್ಯನಿಗೆ ಬಂಧನ ಹಾಗೂ ಸುಖ-ದುಃಖಾದಿ ವಿಪರೀತ ಅವಸ್ಥೆಗಳು ಉಂಟಾಗುವವು. ॥4॥
(ಶ್ಲೋಕ - 5)
ಮೂಲಮ್
ತದ್ಗಚ್ಛ ಧ್ರುವ ಭದ್ರಂ ತೇ ಭಗವಂತಮಧೋಕ್ಷಜಮ್ ।
ಸರ್ವಭೂತಾತ್ಮಭಾವೇನ ಸರ್ವಭೂತಾತ್ಮ ವಿಗ್ರಹಮ್ ॥
(ಶ್ಲೋಕ - 6)
ಮೂಲಮ್
ಭಜಸ್ವ ಭಜನೀಯಾಂಘ್ರಿಮಭವಾಯ ಭವಚ್ಛಿದಮ್ ।
ಯುಕ್ತಂ ವಿರಹಿತಂ ಶಕ್ತ್ಯಾ ಗುಣಮಯ್ಯಾತ್ಮಮಾಯಯಾ ॥
ಅನುವಾದ
ಧ್ರುವನೇ! ನೀನಿನ್ನು ಹೋಗು. ಭಗವಂತನು ನಿನಗೆ ಮಂಗಳವನ್ನು ಉಂಟು ಮಾಡಲಿ. ಸಂಸಾರಬಂಧನದಿಂದ ಬಿಡುಗಡೆಹೊಂದಲು ನೀನು ಸರ್ವಜೀವಿಗಳಲ್ಲಿಯೂ ಸಮದೃಷ್ಟಿಯನ್ನಿಟ್ಟು ಸರ್ವ ಭೂತಾತ್ಮನಾದ ಭಗವಾನ್ ಶ್ರೀಹರಿಯನ್ನು ಭಜಿಸು. ಅವನೇ ಭವಬಂಧನವನ್ನು, ಕತ್ತರಿಸುವವನು. ಜಗತ್ತಿನ ಉತ್ಪತ್ತಿ ಮುಂತಾದವುಗಳಿಗೆ ತನ್ನ ತ್ರಿಗುಣಾತ್ಮಕವಾದ ಮಾಯಾಶಕ್ತಿ ಯಿಂದ ಕೂಡಿಕೊಂಡಿದ್ದರೂ ವಾಸ್ತವವಾಗಿ ಅದರಿಂದ ರಹಿತನೇ ಆಗಿದ್ದಾನೆ. ಅವನ ಚರಣ ಕಮಲಗಳೇ ಎಲ್ಲರಿಗಾಗಿ ಭಜಿಸಲು ಯೋಗ್ಯವಾಗಿವೆ. ॥ 5-6 ॥
(ಶ್ಲೋಕ - 7)
ಮೂಲಮ್
ವೃಣೀಹಿ ಕಾಮಂ ನೃಪ ಯನ್ಮನೋಗತಂ
ಮತ್ತಸ್ತ್ವ ವೌತ್ತಾನಪದೇವಿಶಂಕಿತಃ ।
ವರಂ ವರಾರ್ಹೋಂಬುಜನಾಭಪಾದಯೋ-
ರನಂತರಂ ತ್ವಾಂ ವಯಮಂಗ ಶುಶ್ರುಮ ॥
ಅನುವಾದ
ಪ್ರಿಯ ನೃಪಾಲನೇ! ನೀನು ಸದಾ ಭಗವಾನ್ ಪದ್ಮನಾಭನ ಚರಣ ಕಮಲದ ಬಳಿಯೇ ಇರುವವನೆಂದು ನಾನು ಕೇಳಿರುವೆನು. ಆದ್ದರಿಂದ ನೀನು ಅವಶ್ಯವಾಗಿ ವರವನ್ನು ಪಡೆಯಲು ಯೋಗ್ಯನಾಗಿರುವೆ. ಯಾವ ಸಂಕೋಚವೂ ಇಲ್ಲದೆ, ನಿಃಶಂಕನಾಗಿ ನಿನಗೆ ಇಷ್ಟವಾದ ವರವನ್ನು ಕೇಳಿಕೊ. ॥7॥
(ಶ್ಲೋಕ - 8)
ಮೂಲಮ್
ಮೈತ್ರೇಯ ಉವಾಚ
ಸ ರಾಜರಾಜೇನ ವರಾಯ ಚೋದಿತೋ
ಧ್ರುವೋ ಮಹಾಭಾಗವತೋ ಮಹಾಮತಿಃ ।
ಹರೌ ಸ ವವ್ರೇಚಲಿತಾಂ ಸ್ಮೃತಿಂ ಯಯಾ
ತರತ್ಯಯತ್ನೇನ ದುರತ್ಯಯಂ ತಮಃ ॥
ಅನುವಾದ
ಶ್ರೀಮೈತ್ರೇಯರು ಹೇಳುತ್ತಾರೆ — ಎಲೈ ವಿದುರನೇ! ರಾಜ ರಾಜನಾದ ಕುಬೇರನು ವರವನ್ನು ಕೇಳುವಂತೆ ಧ್ರುವ ನನ್ನು ಒತ್ತಾಯಿಸಿದಾಗ ಮಹಾಭಾಗವತೋತ್ತಮನೂ, ಮಹಾ ಬುದ್ಧಿಶಾಲಿಯೂ ಆದಧ್ರುವನು ‘ಶ್ರೀಹರಿಯ ಸ್ಮರಣೆಯು ನನಗೆ ಸದಾ ಸ್ಥಿರವಾಗಿರಲಿ’ ಎಂಬ ವರವನ್ನು ಬೇಡಿದನು. ಅದರಿಂದಲೇ ಜನರು ದಾಟಲಶಕ್ಯವಾದ ಸಂಸಾರಸಾಗರವನ್ನು ಆಯಾಸವಿಲ್ಲದೆ ದಾಟಿಹೋಗುತ್ತಾರೆ. ॥8॥
(ಶ್ಲೋಕ - 9)
ಮೂಲಮ್
ತಸ್ಯ ಪ್ರೀತೇನ ಮನಸಾ ತಾಂ ದತ್ತ್ವೆ ಡವಿಡಸ್ತತಃ ।
ಪಶ್ಯತೋಂತರ್ದಧೇ ಸೋಪಿ ಸ್ವಪುರಂ ಪ್ರತ್ಯಪದ್ಯತ ॥
ಅನುವಾದ
ಇಡವಿಡಾದೇವಿಯ ಪುತ್ರನಾದ ಕುಬೇರನು ಮನಸ್ಸಿನಲ್ಲಿ ತುಂಬಾ ಸಂತೋಷಗೊಂಡು ಧ್ರುವನಿಗೆ ಆತನು ಬೇಡಿದ್ದ ವರವನ್ನು ಅನುಗ್ರಹಿಸಿ ಅವನು ನೋಡುತ್ತಿರುವಂತೆ ಅಂತರ್ಧಾನನಾದನು. ಇದಾದ ಬಳಿಕ ಧ್ರುವನು ತನ್ನ ರಾಜಧಾನಿಗೆ ಮರಳಿದನು. ॥9॥
(ಶ್ಲೋಕ - 10)
ಮೂಲಮ್
ಅಥಾಯಜತ ಯಜ್ಞೇಶಂ ಕ್ರತುಭಿರ್ಭೂರಿದಕ್ಷಿಣೈಃ ।
ದ್ರವ್ಯಕ್ರಿಯಾದೇವತಾನಾಂ ಕರ್ಮ ಕರ್ಮಲಪ್ರದಮ್ ॥
ಅನುವಾದ
ತನ್ನ ನಗರಿಯಲ್ಲಿರುತ್ತಾ ಧ್ರುವ ಸಾರ್ವಭೌಮನು ಬಹುದಕ್ಷಿಣೆಗಳುಳ್ಳ ಅನೇಕ ಯಜ್ಞಗಳಿಂದ ಭಗವಾನ್ ಯಜ್ಞಪುರುಷನನ್ನು ಆರಾಧಿಸಿದನು. ಭಗವಂತನೇ ದ್ರವ್ಯ, ಕ್ರಿಯೆ, ದೇವತಾಸಂಬಂಧೀ ಸಮಸ್ತ ಕರ್ಮಗಳು, ಅವುಗಳ ಫಲವೂ ಆಗಿರುವನು ಹಾಗೂ ಕರ್ಮಫಲವನ್ನು ಕೊಡುವವನೂ ಅವನೇ ಆಗಿದ್ದಾನೆ. ॥10॥
(ಶ್ಲೋಕ - 11)
ಮೂಲಮ್
ಸರ್ವಾತ್ಮನ್ಯಚ್ಯುತೇಸರ್ವೇ ತೀವ್ರೌಘಾಂ ಭಕ್ತಿಮುದ್ವಹನ್ ।
ದದರ್ಶಾತ್ಮನಿ ಭೂತೇಷು ತಮೇವಾವಸ್ಥಿತಂ ವಿಭುಮ್ ॥
ಅನುವಾದ
ಸರ್ವಾತ್ಮನೂ, ಸರ್ವೋಪಾಧಿರಹಿತನೂ ಆದ ಅಚ್ಯುತನಲ್ಲಿ ತೀವ್ರವಾಗಿ ಪ್ರವಹಿಸುವ ಭಕ್ತಿಯನ್ನಿಟ್ಟು ಆ ಭಕ್ತಶ್ರೇಷ್ಠನು ತನ್ನಲ್ಲಿಯೂ ಮತ್ತು ಸಮಸ್ತ ಪ್ರಾಣಿಗಳಲ್ಲಿಯೂ ಸರ್ವವ್ಯಾಪಕನಾದ ಶ್ರೀಹರಿಯೇ ವಿರಾಜ ಮಾನನಾಗಿರುವುದನ್ನು ನೋಡತೊಡಗಿದನು. ॥11॥
(ಶ್ಲೋಕ - 12)
ಮೂಲಮ್
ತಮೇವಂ ಶೀಲಸಂಪನ್ನಂ ಬ್ರಹ್ಮಣ್ಯಂ ದೀನವತ್ಸಲಮ್ ।
ಗೋಪ್ತಾರಂ ಧರ್ಮಸೇತೂನಾಂ ಮೇನಿರೇ ಪಿತರಂ ಪ್ರಜಾಃ ॥
ಅನುವಾದ
ಧ್ರುವ ರಾಜನು ಅತ್ಯಂತ ವಿನಯಶೀಲನೂ, ಬ್ರಾಹ್ಮಣ ಭಕ್ತನೂ, ದೀನವತ್ಸಲನೂ, ಧರ್ಮಮರ್ಯಾದೆಯ ಸಂರಕ್ಷಕನೂ ಆಗಿದ್ದನು. ಅವನ ಪ್ರಜೆಗಳು ಆತನನ್ನು ಸಾಕ್ಷಾತ್ ತಮ್ಮ ತಂದೆಯಂತೆಯೇ ಭಾವಿಸುತ್ತಿದ್ದರು. ॥12॥
(ಶ್ಲೋಕ - 13)
ಮೂಲಮ್
ಷಟ್ತ್ರಿಂಶದ್ವರ್ಷಸಾಹಸ್ರಂ ಶಶಾಸ ಕ್ಷಿತಿಮಂಡಲಮ್ ।
ಭೋಗೈಃ ಪುಣ್ಯಕ್ಷಯಂ ಕುರ್ವನ್ನ ಭೋಗೈರಶುಭಕ್ಷಯಮ್ ॥
ಅನುವಾದ
ಹೀಗೆ ಅವನು ಬಗೆ-ಬಗೆಯಾದ ಐಶ್ವರ್ಯಭೋಗಗಳಿಂದ ಪುಣ್ಯವನ್ನೂ ಮತ್ತು ಫಲತ್ಯಾಗಪೂರ್ವಕವಾದ ಯಜ್ಞಾದಿ ಕರ್ಮಗಳ ಅನುಷ್ಠಾನದಿಂದ ಪಾಪವನ್ನೂ ಕಳೆದುಕೊಳ್ಳುತ್ತಾ, ಮೂವತ್ತಾರುಸಾವಿರ ವರ್ಷಗಳ ಕಾಲ ಭೂಮಂಡಲವನ್ನು ಆಳಿದನು. ॥13॥
(ಶ್ಲೋಕ - 14)
ಮೂಲಮ್
ಏವಂ ಬಹುಸವಂ ಕಾಲಂ ಮಹಾತ್ಮಾ ವಿಚಲೇಂದ್ರಿಯಃ ।
ತ್ರಿವರ್ಗೌಪಯಿಕಂ ನೀತ್ವಾ ಪುತ್ರಾಯಾದಾನ್ನೃಪಾಸನಮ್ ॥
ಅನುವಾದ
ಜಿತೆಂದ್ರಿಯನಾದ ಆ ಮಹಾಪುರುಷ ಧ್ರುವನು ಇದೇ ರೀತಿಯಲ್ಲಿ ಧರ್ಮ, ಅರ್ಥ ಮತ್ತು ಕಾಮಗಳ ಸಂಗ್ರಹದಲ್ಲಿ ಬಹಳ ವರ್ಷಗಳು ಕಳೆದ ಬಳಿಕ ತನ್ನ ಪುತ್ರನಾದ ಉತ್ಕಲನಿಗೆ ರಾಜಸಿಂಹಾಸನವನ್ನು ಒಪ್ಪಿಸಿದನು. ॥14॥
(ಶ್ಲೋಕ - 15)
ಮೂಲಮ್
ಮನ್ಯಮಾನ ಇದಂ ವಿಶ್ವಂ ಮಾಯಾರಚಿತಮಾತ್ಮನಿ ।
ಅವಿದ್ಯಾರಚಿತಸ್ವಪ್ನಗಂಧರ್ವನಗರೋಪಮಮ್ ॥
(ಶ್ಲೋಕ - 16)
ಮೂಲಮ್
ಆತ್ಮಸ್ಯಪತ್ಯಸುಹೃದೋ ಬಲಮೃದ್ಧಕೋಶ-
ಮಂತಃಪುರಂ ಪರಿವಿಹಾರಭುವಶ್ಚ ರಮ್ಯಾಃ ।
ಭೂಮಂಡಲಂ ಜಲಧಿಮೇಖಲಮಾಕಲಯ್ಯ
ಕಾಲೋಪಸೃಷ್ಟಮಿತಿ ಸ ಪ್ರಯಯೌ ವಿಶಾಲಾಮ್ ॥
ಅನುವಾದ
ಈ ಸಮಸ್ತ ದೃಶ್ಯಪ್ರಪಂಚವನ್ನು ಅವಿದ್ಯೆಯಿಂದ ಉಂಟಾಗಿ ಸ್ವಪ್ನ ಮತ್ತು ಗಂಧರ್ವನಗರಿಯಂತೆ ಮಾಯೆಯಿಂದ ತನ್ನಲ್ಲೇ ಕಲ್ಪಿತವಾಗಿದೆ ಎಂದು ತಿಳಿದುಕೊಂಡು ಹಾಗೂ ಶರೀರ, ಪತ್ನೀ, ಪುತ್ರ, ಮಿತ್ರ, ಸೇನೆ, ತುಂಬಿದ ಭಂಡಾರ, ಅಂತಃಪುರ, ರಮಣೀಯ ಕ್ರೀಡಾಪ್ರದೇಶಗಳು ಮತ್ತು ಸಮುದ್ರಪರ್ಯಂತವಾದ ಭೂಮಂಡಲದ ಸಾಮ್ರಾಜ್ಯ ಇವೆಲ್ಲವೂ ಕಾಲದ ದವಡೆಯಲ್ಲಿ ಸಿಕ್ಕಿಕೊಂಡಿದೆ ಎಂದು ಭಾವಿಸಿಕೊಂಡು ಆತನು ಎಲ್ಲವನ್ನು ತ್ಯಜಿಸಿ ಬದರಿಕಾಶ್ರಮಕ್ಕೆ ಹೊರಟುಹೋದನು. ॥15-16॥
(ಶ್ಲೋಕ - 17)
ಮೂಲಮ್
ತಸ್ಯಾಂ ವಿಶುದ್ಧಕರಣಃ ಶಿವವಾರ್ವಿಗಾಹ್ಯ
ಬದ್ಧ್ವಾಸನಂ ಜಿತಮರುನ್ಮನಸಾಹೃತಾಕ್ಷಃ ।
ಸ್ಥೂಲೇ ದಧಾರ ಭಗವತ್ಪ್ರತಿರೂಪ ಏತ-
ದ್ಧ್ಯಾಯಂಸ್ತದವ್ಯವಹಿತೋ ವ್ಯಸೃಜತ್ಸಮಾಧೌ ॥
ಅನುವಾದ
ಅಲ್ಲಿ ಅವನು ಪವಿತ್ರ ಜಲದಲ್ಲಿ ಸ್ನಾನಮಾಡಿ ಇಂದ್ರಿಯ ಗಳನ್ನು ಪರಿಶುದ್ಧವಾಗಿಸಿಕೊಂಡನು. ಮತ್ತೆ ಸ್ಥಿರ-ಸುಖ ಆಸನದಲ್ಲಿ ಕುಳಿತು ಪ್ರಾಣಾಯಾಮದ ಮೂಲಕ ವಾಯುವನ್ನು ವಶಪಡಿಸಿಕೊಂಡನು. ಅನಂತರ ಮನಸ್ಸಿನಿಂದ ಇಂದ್ರಿಯಗಳನ್ನು ಬಾಹ್ಯ ವಿಷಯಗಳ ಕಡೆಯಿಂದ ಸೆಳೆದುಕೊಂಡು ಮನಸ್ಸನ್ನು ಭಗವಂತನ ಸ್ಥೂಲ ರೂಪದಲ್ಲಿ ಸ್ಥಿರಗೊಳಿಸಿದನು. ಆ ಸ್ಥೂಲರೂಪವನ್ನೇ ಚಿಂತನೆ ಮಾಡುತ್ತಾ ಸಮಾಧಿಸಿದ್ಧಿಯನ್ನು ಪಡೆಯಲು ಆಗ ಆ ಸ್ಥೂಲ ರೂಪವೂ ಚಿಂತನೆಯಿಂದ ಹೊರಟುಹೋಯಿತು. ॥17॥
(ಶ್ಲೋಕ - 18)
ಮೂಲಮ್
ಭಕ್ತಿಂ ಹರೌ ಭಗವತಿ ಪ್ರವಹನ್ನಜಸ್ರ-
ಮಾನಂದಬಾಷ್ಪಕಲಯಾ ಮುಹುರರ್ದ್ಯಮಾನಃ ।
ವಿಕ್ಲಿದ್ಯಮಾನಹೃದಯಃ ಪುಲಕಾಚಿತಾಂಗೋ
ನಾತ್ಮಾನಮಸ್ಮರದಸಾವಿತಿ ಮುಕ್ತಲಿಂಗಃ ॥
ಅನುವಾದ
ಹೀಗೆ ಆತ ನೊಳಗೆ ಭಗವಂತನಾದ ಶ್ರೀಹರಿಯ ನಿರಂತರವಾದ ಭಕ್ತಿ ಪ್ರವಾಹವು ಹರಿಯುತ್ತಿದ್ದುದರಿಂದ ಆತನ ಕಣ್ಣುಗಳಿಂದ ಮತ್ತೆ-ಮತ್ತೆ ಆನಂದಬಾಷ್ಪಗಳು ಧಾರೆ-ಧಾರೆಯಾಗಿ ಸುರಿಯ ತೊಡಗಿದುವು. ಅದರಿಂದ ಅವನ ಹೃದಯ ಕರಗಿ ಶರೀರದಲ್ಲಿ ರೋಮಾಂಚನವುಂಟಾಯಿತು. ದೇಹಾಭಿಮಾನವು ಪೂರ್ಣವಾಗಿ ಕರಗಿ ಹೋದುದರಿಂದ ಅವನಿಗೆ ‘ನಾನು ಧ್ರುವನಾಗಿದ್ದೇನೆ’ ಎನ್ನುವ ಸ್ಮೃತಿಯೂ ಉಳಿಯಲಿಲ್ಲ. ॥18॥
(ಶ್ಲೋಕ - 19)
ಮೂಲಮ್
ಸ ದದರ್ಶ ವಿಮಾನಾಗ್ರ್ಯಂ ನಭಸೋವತರದ್ಧ್ರುವಃ ।
ವಿಭ್ರಾಜಯದ್ದಶ ದಿಶೋ ರಾಕಾಪತಿಮಿವೋದಿತಮ್ ॥
ಅನುವಾದ
ಅದೇ ಸಮಯದಲ್ಲಿ ಆಕಾಶದಿಂದ ಒಂದು ಅತಿಸುಂದರವಾದ ವಿಮಾನವು ಇಳಿದುಬರುತ್ತಿರುವುದನ್ನು ಅವನು ನೋಡಿದನು. ಅದು ಹುಣ್ಣಿಮೆಯ ಚಂದ್ರನು ಆಗತಾನೇ ಉದಯಿಸಿದಂತೆ ತನ್ನ ಪ್ರಕಾಶದಿಂದ ಹತ್ತು ದಿಕ್ಕುಗಳನ್ನೂ ಬೆಳಗಿಸುತ್ತಿತ್ತು. ॥19॥
(ಶ್ಲೋಕ - 20)
ಮೂಲಮ್
ತತ್ರಾನು ದೇವಪ್ರವರೌ ಚತುರ್ಭುಜೌ
ಶ್ಯಾವೌ ಕಿಶೋರಾವರುಣಾಂಬುಜೇಕ್ಷಣೌ ।
ಸ್ಥಿತಾವವಷ್ಟಭ್ಯ ಗದಾಂ ಸುವಾಸಸೌ
ಕಿರೀಟಹಾರಾಂಗದಚಾರುಕುಂಡಲೌ ॥
ಅನುವಾದ
ಅದರಲ್ಲಿ ಭಗವಂತನ ಪಾರ್ಷದರಿಬ್ಬರು ಗದೆಯನ್ನು ಊರಿಕೊಂಡು ನಿಂತಿದ್ದರು. ಅವರಿಗೆ ನಾಲ್ಕು ಭುಜಗಳಿದ್ದು, ಸುಂದರ ಶ್ಯಾಮಲ ಶರೀರವಿತ್ತು. ತರುಣಾವಸ್ಥೆಯಲ್ಲಿದ್ದ ಅವರ ಕಣ್ಣುಗಳು ಕೆಂದಾವರೆಯಂತೆ ಹೊಳೆಯುತ್ತಿದ್ದುವು. ಅವರು ಸುಂದರ ವಸ್ತ್ರಗಳನ್ನುಟ್ಟುಕೊಂಡು, ಕಿರೀಟ, ಹಾರ, ತೋಳುಬಂದಿಗಳಿಂದ ಅಲಂಕೃತರಾಗಿದ್ದರು. ಕಿವಿಗಳಲ್ಲಿ ಮನೋಹರವಾದ ಕುಂಡಲಗಳನ್ನು ಧರಿಸಿದ್ದರು. ॥20॥
(ಶ್ಲೋಕ - 21)
ಮೂಲಮ್
ವಿಜ್ಞಾಯ ತಾವುತ್ತಮಗಾಯಕಿಂಕರಾ-
ವಭ್ಯುತ್ಥಿತಃ ಸಾಧ್ವಸವಿಸ್ಮೃತಕ್ರಮಃ ।
ನನಾಮ ನಾಮಾನಿ ಗೃಣನ್ಮಧುದ್ವಿಷಃ
ಪಾರ್ಷತ್ಪ್ರಧಾನಾವಿತಿ ಸಂಹತಾಂಜಲಿಃ ॥
ಅನುವಾದ
ಅವರನ್ನು ಪುಣ್ಯಶ್ಲೋಕನಾದ ಶ್ರೀಹರಿಯ ಸೇವಕರೆಂದು ಅರಿತು ಧ್ರುವನು ಒಡನೆಯೇ ಎದ್ದು ನಿಂತು, ಅವರಿಗೆ ಸಲ್ಲಿಸಬೇಕಾಗಿದ್ದ ಪೂಜೆ ಮುಂತಾದವುಗಳನ್ನು ಆ ಸಂಭ್ರಮದಲ್ಲಿ ಮರೆತುಬಿಟ್ಟನು. ಅವರು ಶ್ರೀಭಗವಂತನ ಪಾರ್ಷದರಲ್ಲಿ ಮುಖ್ಯರಾದವರು ಎಂದು ತಿಳಿದು ಅವರ ಮುಂದೆ ಶ್ರೀಮಧುಸೂದನನ ದಿವ್ಯನಾಮಗಳನ್ನು ಸಂಕೀರ್ತನೆ ಮಾಡುತ್ತಾ ಕೈಜೋಡಿಸಿ ನಮಸ್ಕಾರ ಮಾಡಿದನು. ॥21॥
(ಶ್ಲೋಕ - 22)
ಮೂಲಮ್
ತಂ ಕೃಷ್ಣಪಾದಾಭಿನಿವಿಷ್ಟಚೇತಸಂ
ಬದ್ಧಾಂಜಲಿಂ ಪ್ರಶ್ರಯನಮ್ರಕಂಧರಮ್ ।
ಸುನಂದನಂದಾವುಪಸೃತ್ಯ ಸಸ್ಮಿತಂ
ಪ್ರತ್ಯೂಚತುಃ ಪುಷ್ಕರನಾಭಸಮ್ಮತೌ ॥
ಅನುವಾದ
ಧ್ರುವನ ಮನಸ್ಸು ಭಗವಂತನ ಚರಣಕಮಲಗಳಲ್ಲಿ ತಲ್ಲೀನವಾಗಿ ಬಿಟ್ಟಿರಲು ಆತನು ಅವರ ಮುಂದೆ ಕೈ ಜೋಡಿಸಿಕೊಂಡು ವಿನಯದಿಂದ ತಲೆಬಾಗಿ ಸುಮ್ಮನೇ ನಿಂತುಕೊಂಡನು. ಆಗ ಶ್ರೀಹರಿಯ ಪ್ರಿಯಪಾರ್ಷದರಾದ ಸುನಂದ ಮತ್ತು ನಂದ ಇವರು ಆತನ ಬಳಿಗೆ ಬಂದು ಮುಗುಳ್ನಗೆ ಬೀರುತ್ತಾ ಹೀಗೆಂದರು ॥22॥
(ಶ್ಲೋಕ - 23)
ಮೂಲಮ್ (ವಾಚನಮ್)
ಸುನಂದನಂದಾವೂಚತುಃ
ಮೂಲಮ್
ಭೋ ಭೋ ರಾಜನ್ಸುಭದ್ರಂ ತೇ ವಾಚಂ ನೋವಹಿತಃ ಶೃಣು ।
ಯಃ ಪಂಚವರ್ಷಸ್ತಪಸಾ ಭವಾಂದೇವಮತೀತೃಪತ್ ॥
ಅನುವಾದ
ಸುನಂದ ಮತ್ತು ನಂದರು ಹೇಳತೊಡಗಿದರು ರಾಜನೇ! ನಿನಗೆ ಮಂಗಳವಾಗಲಿ. ನಮ್ಮ ಮಾತನ್ನು ಸಾವಕಾಶವಾಗಿ ಕೇಳು. ನೀನು ಐದು ವರ್ಷದವನಾಗಿದ್ದಾಗಲೇ ತಪಸ್ಸ ನ್ನಾಚರಿಸಿ ಸರ್ವೇಶ್ವರನಾದ ಭಗವಂತನನ್ನು ಒಲಿಸಿಕೊಂಡಿದ್ದೆ. ॥23॥
(ಶ್ಲೋಕ - 24)
ಮೂಲಮ್
ತಸ್ಯಾಖಿಲಜಗದ್ಧಾತುರಾವಾಂ ದೇವಸ್ಯ ಶಾರ್ಙ್ಗೆಣಃ ।
ಪಾರ್ಷದಾವಿಹ ಸಂಪ್ರಾಪ್ತೌ ನೇತುಂ ತ್ವಾಂ ಭಗವತ್ಪದಮ್ ॥
ಅನುವಾದ
ನಾವು ಅದೇ ಸರ್ವಲೋಕ ನಿಯಾಮಕನಾದ ಶಾರ್ಙ್ಗಪಾಣಿಯಾದ ಶ್ರೀಮನ್ನಾರಾಯಣನ ಸೇವಕರು. ನಿನ್ನನ್ನು ಆ ಭಗವಂತನ ಧಾಮಕ್ಕೆ ಕರೆದೊಯ್ಯಲು ಬಂದಿದ್ದೇವೆ. ॥24॥
(ಶ್ಲೋಕ - 25)
ಮೂಲಮ್
ಸುದುರ್ಜಯಂ ವಿಷ್ಣುಪದಂ ಜಿತಂ ತ್ವಯಾ
ಯತ್ಸೂರಯೋಪ್ರಾಪ್ಯ ವಿಚಕ್ಷತೇ ಪರಮ್ ।
ಆತಿಷ್ಠತಚ್ಚಂದ್ರದಿವಾಕರಾದಯೋ
ಗ್ರಹರ್ಕ್ಷತಾರಾಃ ಪರಿಯಂತಿ ದಕ್ಷಿಣಮ್ ॥
ಅನುವಾದ
ನೀನು ನಿನ್ನ ಭಕ್ತಿಯ ಪ್ರಭಾವದಿಂದ ಇತರರಿಗೆ ಅತಿದುರ್ಲಭವಾದ ವಿಷ್ಣು ಲೋಕವನ್ನುಗಳಿಸಿರುವೆ. ಪರಮ ಜ್ಞಾನಿಗಳಾದ ಸಪ್ತರ್ಷಿಗಳೂ ಕೂಡ ಅಲ್ಲಿಯವರೆಗೆ ತಲುಪಲಾರದೆ, ಕೇವಲ ಕೆಳಗಡೆಯಿಂದ ನೋಡುತ್ತಾ ಇರುತ್ತಾರೆ. ಸೂರ್ಯ-ಚಂದ್ರರೂ, ಇತರ ಗ್ರಹ-ನಕ್ಷತ್ರ- ತಾರಾಗಣಗಳೂ ಅದರ ಪ್ರದಕ್ಷಿಣೆ ಮಾಡುತ್ತಾ ಇರುತ್ತಾರೆ. ನಡೆಯಿರಿ! ನೀವು ಅದೇ ವಿಷ್ಣುಧಾಮದಲ್ಲಿ ವಾಸಮಾಡಿರಿ. ॥25॥
(ಶ್ಲೋಕ - 26)
ಮೂಲಮ್
ಅನಾಸ್ಥಿತಂ ತೇ ಪಿತೃಭಿರನ್ಯೈರಪ್ಯಂಗ ಕರ್ಹಿಚಿತ್ ।
ಆತಿಷ್ಠ ಜಗತಾಂ ವಂದ್ಯಂ ತದ್ವಿಷ್ಣೋಃ ಪರಮಂ ಪದಮ್ ॥
ಅನುವಾದ
ಪ್ರಿಯತಮನೇ! ಇಲ್ಲಿಯವರೆಗೆ ನಿನ್ನ ಪೂರ್ವಿಕ ರಾಗಲೀ ಅಥವಾ ಇತರ ಯಾರೇ ಆಗಲೀ ಆ ಪದವನ್ನು ತಲುಪಲು ಸಾಧ್ಯವಾಗಲಿಲ್ಲ. ಸಮಸ್ತ ಲೋಕಗಳಿಗೂ ವಂದ ನೀಯವಾದ ಆ ವಿಷ್ಣುವಿನ ಪರಮಧಾಮಕ್ಕೆ ಬಂದು ನೀನು ವಿರಾಜಿಸುವವನಾಗು. ॥26॥
(ಶ್ಲೋಕ - 27)
ಮೂಲಮ್
ಏತದ್ವಿಮಾನಪ್ರವರಮುತ್ತಮಶ್ಲೋಕವೌಲಿನಾ ।
ಉಪಸ್ಥಾಪಿತಮಾಯುಷ್ಮನ್ನಧಿರೋಢುಂ ತ್ವಮರ್ಹಸಿ ॥
ಅನುವಾದ
ಆಯುಷ್ಮಂತನೇ! ಈ ಶ್ರೇಷ್ಠವಾದ ವಿಮಾನವನ್ನು ಪುಣ್ಯಶ್ಲೋಕ ಶಿಖಾಮಣಿಯಾದ ಶ್ರೀಹರಿಯು ನಿನಗೋಸ್ಕರವೇ ಕಳಿಸಿಕೊಟ್ಟಿರುವನು. ಇದನ್ನು ಹತ್ತಲು ನೀನೇ ಯೋಗ್ಯವಾಗಿದ್ದೀಯೇ. ॥27॥
(ಶ್ಲೋಕ - 28)
ಮೂಲಮ್ (ವಾಚನಮ್)
ಮೈತ್ರೇಯ ಉವಾಚ
ಮೂಲಮ್
ನಿಶಮ್ಯ ವೈಕುಂಠ ನಿಯೋಜ್ಯ ಮುಖ್ಯಯೋ-
ರ್ಮಧುಚ್ಯುತಂ ವಾಚಮುರುಕ್ರಮಪ್ರಿಯಃ ।
ಕೃತಾಭಿಷೇಕಃ ಕೃತನಿತ್ಯಮಂಗಲೋ
ಮುನೀನ್ ಪ್ರಣಮ್ಯಾಶಿಷಮಭ್ಯವಾದಯತ್ ॥
ಅನುವಾದ
ಶ್ರೀಮೈತ್ರೇಯರು ಹೇಳುತ್ತಾರೆ — ವೈಕುಂಠಪತಿಯ ಶ್ರೇಷ್ಠರಾದ ಪಾರ್ಷದರು ನುಡಿದ ಅಮೃತಮಯ ಮಾತನ್ನು ಕೇಳಿ ಪ್ರಭು ತ್ರಿವಿಕ್ರಮನಿಗೆ ಪ್ರಿಯನಾದ ಪರಮ ಭಾಗವತೋತ್ತಮ ಧ್ರುವನು ಸ್ನಾನಮಾಡಿ, ನಿತ್ಯಕರ್ಮಗಳನ್ನೂ, ಮಂಗಳಕಾರ್ಯಗಳನ್ನೂ ನೆರವೇರಿಸಿ, ಬದರಿ ಕಾಶ್ರಮದಲ್ಲಿದ್ದ ಮುನಿಗಳಿಗೆ ನಮಸ್ಕಾರ ಮಾಡಿ ಅವರಿಂದ ಆಶೀರ್ವಾದವನ್ನು ಪಡೆದುಕೊಂಡನು. ॥28॥
(ಶ್ಲೋಕ - 29)
ಮೂಲಮ್
ಪರೀತ್ಯಾಭ್ಯರ್ಚ್ಯ ಧಿಷ್ಣ್ಯಾಗ್ರ್ಯಂ ಪಾರ್ಷದಾವಭಿವಂದ್ಯ ಚ ।
ಇಯೇಷ ತದಧಿಷ್ಠಾತುಂ ಬಿಭ್ರದ್ರೂಪಂ ಹಿರಣ್ಮಯಮ್ ॥
ಅನುವಾದ
ಇದಾದ ಬಳಿಕ ಆ ಶ್ರೇಷ್ಠ ವಿಮಾನವನ್ನು ಪೂಜಿಸಿ, ಪ್ರದಕ್ಷಿಣೆ ಬಂದು, ಶ್ರೀವಿಷ್ಣುಪಾರ್ಷದರಿಗೆ ಪ್ರಣಾಮ ಮಾಡಿ, ಚಿನ್ನದಂತೆ ಥಳ-ಥಳಿಸುತ್ತಿದ್ದ ದಿವ್ಯರೂಪವನ್ನುತಾಳಿ ಅದನ್ನು ಹತ್ತಲು ಸಿದ್ಧನಾದನು. ॥29॥
(ಶ್ಲೋಕ - 30)
ಮೂಲಮ್
ತದೋತ್ತಾನಪದಃ ಪುತ್ರೋ ದದರ್ಶಾಂತಕಮಾಗತಮ್ ।
ಮೃತ್ಯೋರ್ಮೂರ್ಧ್ನಿ ಪದಂ ದತ್ತ್ವಾ ಆರುರೋಹಾದ್ಭುತಂ ಗೃಹಮ್ ॥
ಅನುವಾದ
ಅಷ್ಟರಲ್ಲಿ ಮೃತ್ಯುದೇವನು ಬಂದು ಧ್ರುವನಿಗೆ ವಂದಿಸಿಕೊಂಡನು. ಆಗ ಧ್ರುವನು ಮೃತ್ಯುವಿನ ತಲೆಯ ಮೇಲೆ ಕಾಲಿಟ್ಟು ಆ ಅದ್ಭುತವಾದ ವಿಮಾನವನ್ನು ಏರಿದನು. ॥30॥
(ಶ್ಲೋಕ - 31)
ಮೂಲಮ್
ತದಾ ದುಂದುಭಯೋ ನೇದುರ್ಮೃದಂಗಪಣವಾದಯಃ ।
ಗಂಧರ್ವಮುಖ್ಯಾಃ ಪ್ರಜಗುಃ ಪೇತುಃ ಕುಸುಮವೃಷ್ಟಯಃ ॥
ಅನುವಾದ
ಆಗ ಆಕಾಶದಲ್ಲಿ ದುಂದುಭಿಗಳು, ಮೃದಂಗ, ಮದ್ದಲೆ ಮುಂತಾದ ವಾದ್ಯಗಳು ಮೊಳಗಿದವು. ಗಂಧರ್ವಶ್ರೇಷ್ಠರು ಗಾನಮಾಡತೊಡಗಿದರು. ಪುಷ್ಪಗಳ ಮಳೆ ಸುರಿಯತೊಡಗಿತು. ॥31॥
(ಶ್ಲೋಕ - 32)
ಮೂಲಮ್
ಸ ಚ ಸ್ವರ್ಲೋಕಮಾರೋಕ್ಷ್ಯನ್ ಸುನೀತಿಂ ಜನನೀಂ ಧ್ರುವಃ ।
ಅನ್ವಸ್ಮರದಗಂ ಹಿತ್ವಾ ದೀನಾಂ ಯಾಸ್ಯೇ ತ್ರಿವಿಷ್ಟಪಮ್ ॥
ಅನುವಾದ
ಹೀಗೆ ವಿಮಾನದಲ್ಲಿ ಕುಳಿತು ಭಗವಂತನ ಧಾಮಕ್ಕೆ ಹೋಗಲು ಸಿದ್ಧನಾಗುತ್ತಿದ್ದಾಗ ಧ್ರುವನಿಗೆ ಇದ್ದಕ್ಕಿದ್ದಂತೆ ತನ್ನ ತಾಯಿಯಾದ ಸುನೀತಿಯ ನೆನಪಾಯಿತು. ‘ದೀನಳಾಗಿರುವ ನನ್ನ ತಾಯಿಯನ್ನು ಬಿಟ್ಟು ನಾನೊಬ್ಬನೇ ದುರ್ಲಭವಾದ ವಿಷ್ಣುಧಾಮಕ್ಕೆ ಹೇಗೆ ಹೋಗಲಿ?’ ಎಂದು ಯೋಚಿಸ ತೊಡಗಿದನು. ॥32॥
(ಶ್ಲೋಕ - 33)
ಮೂಲಮ್
ಇತಿ ವ್ಯವಸಿತಂ ತಸ್ಯ ವ್ಯವಸಾಯ ಸುರೋತ್ತವೌ ।
ದರ್ಶಯಾಮಾಸತುರ್ದೇವೀಂ ಪುರೋ ಯಾನೇನ ಗಚ್ಛತೀಮ್ ॥
ಅನುವಾದ
ಧ್ರುವನ ಮನಸ್ಸಿನ ಮಾತನ್ನು ಅರಿತ ನಂದ-ಸುನಂದರು ಆತನಿಗೆ ‘ಅದೋ ನೋಡು! ನಿನ್ನ ತಾಯಿ ಸುನೀತಿದೇವಿಯು ಬೇರೊಂದು ವಿಮಾನದಲ್ಲಿ ಕುಳಿತು ಮುಂದೆ-ಮುಂದೆ ಹೋಗುತ್ತಿದ್ದಾಳೆ’ ಎಂದು ತೋರಿಸಿದರು. ॥33॥
(ಶ್ಲೋಕ - 34)
ಮೂಲಮ್
ತತ್ರ ತತ್ರ ಪ್ರಶಂಸದ್ಭಿಃ ಪಥಿ ವೈಮಾನಿಕೈಃ ಸುರೈಃ ।
ಅವಕೀರ್ಯಮಾಣೋ ದದೃಶೇ ಕುಸುಮೈಃ ಕ್ರಮಶೋ ಗ್ರಹಾನ್ ॥
ಅನುವಾದ
ಅವನು ಕ್ರಮವಾಗಿ ಸೂರ್ಯನೇ ಮುಂತಾದ ಗ್ರಹರನ್ನು ನೋಡಿದನು. ಮಾರ್ಗದಲ್ಲಿ ಅಲ್ಲಲ್ಲಿ ವಿಮಾನಗಳಲ್ಲಿ ಕುಳಿತಿದ್ದ ದೇವತೆಗಳು ಅವನನ್ನು ಪ್ರಶಂಸಿಸುತ್ತಾ ಹೂವಿನ ಮಳೆಯನ್ನು ಸುರಿಸುತ್ತಾ ಹೋಗುತ್ತಿದ್ದರು. ॥34॥
(ಶ್ಲೋಕ - 35)
ಮೂಲಮ್
ತ್ರಿಲೋಕೀಂ ದೇವಯಾನೇನ ಸೋತಿವ್ರಜ್ಯ ಮುನೀನಪಿ ।
ಪರಸ್ತಾದ್ಯದ್ಧ್ರುವಗತಿರ್ವಿಷ್ಣೋಃ ಪದಮಥಾಭ್ಯಗಾತ್ ॥
ಅನುವಾದ
ಆ ದಿವ್ಯವಾದ ವಿಮಾನದಲ್ಲಿ ಕುಳಿತ ಧ್ರುವನು ಮೂರು ಲೋಕಗಳನ್ನೂ ದಾಟಿ, ಸಪ್ತರ್ಷಿ ಮಂಡಲದಿಂದಲೂ ಮೇಲಿರುವ ಭಗವಾನ್ ಶ್ರೀವಿಷ್ಣುವಿನ ಧ್ರುವವಾದ ಧಾಮವನ್ನು ತಲುಪಿ, ಸ್ಥಿರವಾದ ಗತಿಯನ್ನು ಪಡೆದನು. ॥35॥
(ಶ್ಲೋಕ - 36)
ಮೂಲಮ್
ಯದ್ಭ್ರಾಜಮಾನಂ ಸ್ವರುಚೈವ ಸರ್ವತೋ
ಲೋಕಾಸಯೋ ಹ್ಯನು ವಿಭ್ರಾಜಂತ ಏತೇ ।
ಯನ್ನಾವ್ರಜಂಜಂತುಷು ಯೇನನುಗ್ರಹಾ
ವ್ರಜಂತಿ ಭದ್ರಾಣಿ ಚರಂತಿ ಯೇನಿಶಮ್ ॥
ಅನುವಾದ
ಈ ದಿವ್ಯಧಾಮವು ತನ್ನ ಪ್ರಕಾಶ ದಿಂದಲೇ ಬೆಳಗುತ್ತಿದೆ. ಇದರ ಪ್ರಕಾಶದಿಂದಲೇ ಮೂರೂ ಲೋಕಗಳು ಬೆಳಗುತ್ತಿವೆ. ಜೀವಿಗಳ ಮೇಲೆ ದಯಾರಹಿತ ರಾದ ಜನರು ಅಲ್ಲಿಗೆ ತಲುಪರಾರರು. ಪ್ರತಿದಿನವೂ ಪ್ರಾಣಿಗಳ ಕಲ್ಯಾಣಕ್ಕಾಗಿ ಶುಭಕರ್ಮಗಳನ್ನು ಮಾಡುವಂತಹ ಸುಕೃತಿಗಳೇ ಅಲ್ಲಿಗೆ ಹೋಗಬಲ್ಲರು. ॥36॥
(ಶ್ಲೋಕ - 37)
ಮೂಲಮ್
ಶಾಂತಾಃ ಸಮದೃಶಃ ಶುದ್ಧಾಃ ಸರ್ವಭೂತಾನುರಂಜನಾಃ ।
ಯಾಂತ್ಯಂಜಸಾಚ್ಯುತಪದಮಚ್ಯುತಪ್ರಿಯಬಾಂಧವಾಃ ॥
ಅನುವಾದ
ಶಾಂತರಾಗಿ, ಸಮದರ್ಶಿಗಳಾಗಿ, ಶುದ್ಧರಾಗಿ, ಎಲ್ಲ ಪ್ರಾಣಿಗಳನ್ನೂ ಪ್ರಸನ್ನಗೊಳಿಸುವವರಾದ, ಭಗವದ್ಭಕ್ತರನ್ನು ಮಾತ್ರವೇ ತಮ್ಮ ಏಕಮಾತ್ರ ಬಂಧು-ಮಿತ್ರರನ್ನಾಗಿ ತಿಳಿಯುವಂತಹ ಮಹಾತ್ಮರು ಮಾತ್ರ ಸುಲಭವಾಗಿ ಈ ಭಗವದ್ಧಾಮವನ್ನು ಪಡೆಯಬಲ್ಲರು. ॥37॥
(ಶ್ಲೋಕ - 38)
ಮೂಲಮ್
ಇತ್ಯುತ್ತಾನಪದಃ ಪುತ್ರೋ ಧ್ರುವಃ ಕೃಷ್ಣಪರಾಯಣಃ ।
ಅಭೂತಯಾಣಾಂ ಲೋಕಾನಾಂ ಚೂಡಾಮಣಿರಿವಾಮಲಃ ॥
ಅನುವಾದ
ಈ ರೀತಿಯಲ್ಲಿ ಭಾಗವತೋತ್ತಮನಾದ ಉತ್ತಾನ ಪಾದನ ಪುತ್ರ ಧ್ರುವನು ಮೂರೂ ಲೋಕಗಳಿಗೂ ಮೇಲ್ಗಡೆ ಅವುಗಳ ನಿರ್ಮಲ ಶಿರೋಭೂಷಣನಾಗಿ ವಿರಾಜಿಸ ತೊಡಗಿದನು. ॥38॥
(ಶ್ಲೋಕ - 39)
ಮೂಲಮ್
ಗಂಭೀರವೇಗೋನಿಮಿಷಂ ಜ್ಯೋತಿಷಾಂ ಚಕ್ರಮಾಹಿತಮ್ ।
ಯಸ್ಮಿನ್ ಭ್ರಮತಿ ಕೌರವ್ಯ ಮೇಢ್ಯಾಮಿವ ಗವಾಂ ಗಣಃ ॥
ಅನುವಾದ
ಕುರುಕುಲನಂದನಾ! ಮೇಟಿಯ ಕಂಭವನ್ನು ಎತ್ತುಗಳು ಸುತ್ತಲೂ ಸುತ್ತುವಂತೆ ಗಂಭೀರವಾದ ವೇಗವುಳ್ಳ ಜ್ಯೋತಿಶ್ಚಕ್ರವು ಆ ಅವಿನಾಶಿಯಾದ ಧ್ರುವ ಧಾಮವನ್ನೇ ಆಶ್ರಯಿಸಿ ಅದನ್ನು ಸದಾಸುತ್ತುತ್ತಿರುತ್ತದೆ. ॥39॥
(ಶ್ಲೋಕ - 40)
ಮೂಲಮ್
ಮಹಿಮಾನಂ ವಿಲೋಕ್ಯಾಸ್ಯ ನಾರದೋ ಭಗವಾನೃಷಿಃ ।
ಆತೋದ್ಯಂ ವಿತುದನ್ ಶ್ಲೋಕಾನ್ಸತ್ರೇಗಾಯತ್ಪ್ರಚೇತಸಾಮ್ ॥
ಅನುವಾದ
ಅದರ ಮಹಿಮೆಯನ್ನು ನೋಡಿ ದೇವಋಷಿ ನಾರದರು ಪ್ರಚೇತಸರ ಯಜ್ಞಶಾಲೆಯಲ್ಲಿ ವೀಣೆಯನ್ನು ನುಡಿಸುತ್ತಾ ಈ ಮೂರು ಶ್ಲೋಕಗಳನ್ನು ಹಾಡಿದರು. ॥40॥
(ಶ್ಲೋಕ - 41)
ಮೂಲಮ್ (ವಾಚನಮ್)
ನಾರದ ಉವಾಚ
ಮೂಲಮ್
ನೂನಂ ಸುನೀತೇಃ ಪತಿದೇವತಾಯಾ-
ಸ್ತಪಃಪ್ರಭಾವಸ್ಯ ಸುತಸ್ಯ ತಾಂ ಗತಿಮ್ ।
ದೃಷ್ಟ್ವಾಭ್ಯುಪಾಯಾನಪಿ ವೇದವಾದಿನೋ
ನೈವಾಧಿಗಂತುಂ ಪ್ರಭವಂತಿ ಕಿಂ ನೃಪಾಃ ॥
ಅನುವಾದ
ಶ್ರೀನಾರದರು ಹೇಳಿದ್ದರು — ಪತಿಪರಾಯಣಳಾದ ಸುನೀತಿಯ ಪುತ್ರನಾದ ಧ್ರುವನು ತಪಸ್ಸನ್ನಾಚರಿಸಿ ಅದರ ಪ್ರಭಾವದಿಂದ ಅದ್ಭುತವಾದ ಗತಿಯನ್ನು ಗಳಿಸಿದ್ದನು. ಅದನ್ನು ಭಾಗವತ ಧರ್ಮಗಳನ್ನು ವಿಮರ್ಶೆಮಾಡಿ ವೇದವಾದಿಗಳಾದ ಮುನಿಗಳೂ ಕೂಡ ಪಡೆಯಲಾರರು. ಇದರಲ್ಲಿ ಸಂದೇಹವೇ ಇಲ್ಲ. ಹೀಗಿರುವಾಗ ಸಾಧಾರಣ ಉಳಿದ ರಾಜರ ಮಾತೇನು! ॥41॥
(ಶ್ಲೋಕ - 42)
ಮೂಲಮ್
ಯಃ ಪಂಚವರ್ಷೋ ಗುರುದಾರವಾಕ್ಶರೈ-
ರ್ಭಿನ್ನೇನ ಯಾತೋ ಹೃದಯೇನ ದೂಯತಾ ।
ವನಂ ಮದಾದೇಶಕರೋಜಿತಂ ಪ್ರಭುಂ
ಜಿಗಾಯ ತದ್ಭಕ್ತಗುಣೈಃ ಪರಾಜಿತಮ್ ॥
ಅನುವಾದ
ಆಹಾ! ಅವನು ಕೇವಲ ಐದು ವರ್ಷದ ವಯಸ್ಸಿನಲ್ಲಿಯೇ ಮಲತಾಯಿಯ ವಾಗ್ಬಾಣಗಳಿಂದ ನೊಂದು ದುಃಖತುಂಬಿದ ಹೃದಯದಿಂದ ಕಾಡಿಗೆ ತೆರಳಿದನು. ಅಲ್ಲಿ ನನ್ನ ಉಪದೇಶಕ್ಕನುಸಾರವಾಗಿ ಆಚರಣೆಗೈದು ಭಕ್ತರ ಗುಣಗಳಿಂದ ಮಾತ್ರವೇ ವಶನಾಗುವ ‘ಅಜಿತ’ (ಯಾರಿಂದಲೂ ಜಯಿಸಲ್ಪಡದವನು)ನಾದ ಶ್ರೀಹರಿಯನ್ನು ಜಯಿಸಿಕೊಂಡಿದ್ದನು. ॥42॥
(ಶ್ಲೋಕ - 43)
ಮೂಲಮ್
ಯಃ ಕ್ಷತ್ರಬಂಧುರ್ಭುವಿ ತಸ್ಯಾಧಿರೂಢ-
ಮನ್ವಾರುರುಕ್ಷೇದಪಿ ವರ್ಷಪೂಗೈಃ ।
ಷಟ್ಪಂಚವರ್ಷೋ ಯದಹೋಭಿರಲ್ಪೈಃ
ಪ್ರಸಾದ್ಯ ವೈಕುಂಠಮವಾಪ ತತ್ಪದಮ್ ॥
ಅನುವಾದ
ನಮ್ಮ ಈ ಧ್ರುವಸಾರ್ವಭೌಮನು ಐದಾರು ವರ್ಷದ ಬಾಲಕನಿರುವಾಗಲೇ ಕೆಲವೇ ದಿನಗಳ ತಪಸ್ಸಿನಿಂದ ಶ್ರೀಭಗವಂತನನ್ನು ಒಲಿಸಿ ಪರಮಪದವನ್ನು ಪಡೆದುಕೊಂಡನು. ಅಂತಹ ಪರಮ ಪದವನ್ನು ಅನೇಕ ವರ್ಷಗಳ ಕಾಲ ತಪಶ್ಚರಣೆ ಮಾಡಿದರೂ ಬೇರಾವ ಕ್ಷತ್ರಿಯನು ಪಡೆಯ ಬಲ್ಲನು? ॥43॥
(ಶ್ಲೋಕ - 44)
ಮೂಲಮ್ (ವಾಚನಮ್)
ಮೈತ್ರೇಯ ಉವಾಚ
ಮೂಲಮ್
ಏತತ್ತೇಭಿಹಿತಂ ಸರ್ವಂ ಯತ್ಪೃಷ್ಟೋಹಮಿಹ ತ್ವಯಾ ।
ಧ್ರುವಸ್ಯೋದ್ದಾಮಯಶಸಶ್ಚರಿತಂ ಸಮ್ಮತಂ ಸತಾಮ್ ॥
ಅನುವಾದ
ಶ್ರೀಮೈತ್ರೇಯರು ಹೇಳುತ್ತಾರೆ — ಎಲೈ ವಿದುರನೇ! ನೀನು ಕೇಳಿಕೊಂಡಂತೆ ನಾನು ಉದಾರ ಕೀರ್ತಿಯುಳ್ಳ ಧ್ರುವನ ಚರಿತ್ರೆಯನ್ನು ಪೂರ್ಣವಾಗಿ ತಿಳಿಸಿರುವೆನು. ಸಾಧು-ಸಜ್ಜನರು ಈ ಚರಿತ್ರವನ್ನು ತುಂಬಾ ಪ್ರಶಂಸಿಸುತ್ತಾರೆ. ॥44॥
(ಶ್ಲೋಕ - 45)
ಮೂಲಮ್
ಧನ್ಯಂ ಯಶಸ್ಯಮಾಯುಷ್ಯಂ ಪುಣ್ಯಂ ಸ್ವಸ್ತ್ಯಯನಂ ಮಹತ್ ।
ಸ್ವರ್ಗ್ಯಂ ಧ್ರೌವ್ಯಂ ಸೌಮನಸ್ಯಂ ಪ್ರಶಸ್ಯಮಘಮರ್ಷಣಮ್ ॥
ಅನುವಾದ
ಇದು ಸಂಪತ್ತನ್ನೂ, ಯಶಸ್ಸನ್ನೂ, ಆಯುಸ್ಸನ್ನೂ, ವೃದ್ಧಿಪಡಿಸುವ ಪರಮ ಪವಿತ್ರ ಮಂಗಳಕರವಾದ ಕಥೆಯಾಗಿದೆ. ಇದರಿಂದ ಸ್ವರ್ಗ ಮತ್ತು ಅವಿನಾಶಿಯಾದ ಪದವೂ ದೊರೆಯಬಲ್ಲದು. ದೇವತ್ವವನ್ನೂ ನೀಡಬಲ್ಲದು. ಬಹಳ ಪ್ರಶಂಸನೀಯವಾಗಿದ್ದು ಸಮಸ್ತ ಪಾಪಗಳನ್ನು ನಾಶ ಮಾಡುವಂತಹುದು. ॥45॥
(ಶ್ಲೋಕ - 46)
ಮೂಲಮ್
ಶ್ರುತ್ವೈತಚ್ಛ್ರದ್ಧಯಾಭೀಕ್ಷ್ಣಮಚ್ಯುತಪ್ರಿಯಚೇಷ್ಟಿತಮ್ ।
ಭವೇದ್ಭಕ್ತಿರ್ಭಗವತಿ ಯಯಾ ಸ್ಯಾತ್ ಕ್ಲೇಶಸಂಕ್ಷಯಃ ॥
ಅನುವಾದ
ಭಗವದ್ಭಕ್ತನಾದ ಧ್ರುವನ ಈ ಪವಿತ್ರ ಚರಿತ್ರವನ್ನು ಶ್ರದ್ಧೆಯಿಂದ ಪದೇ-ಪದೇ ಕೇಳುವವನಿಗೆ ಶ್ರೀಭಗವಂತನ ಭಕ್ತಿಯು ಪ್ರಾಪ್ತವಾಗುತ್ತದೆ. ಅದರಿಂದ ಅವನ ಎಲ್ಲ ದುಃಖಗಳು ನಾಶವಾಗಿ ಹೋಗುತ್ತವೆ. ॥46॥
(ಶ್ಲೋಕ - 47)
ಮೂಲಮ್
ಮಹತ್ತ್ವಮಿಚ್ಛತಾಂ ತೀರ್ಥಂ ಶ್ರೋತುಃ ಶೀಲಾದಯೋ ಗುಣಾಃ ।
ಯತ್ರ ತೇಜಸ್ತದಿಚ್ಛೂನಾಂ ಮಾನೋ ಯತ್ರ ಮನಸ್ವಿನಾಮ್ ॥
ಅನುವಾದ
ಇದನ್ನು ಶ್ರವಣಿಸುವವನಿಗೆ ಶೀಲವೇ ಮುಂತಾದ ಗುಣಗಳು ಲಭಿಸುವುವು. ಮಹತ್ತ್ವವನ್ನು ಬಯಸುವವರಿಗೆ ಅತಿ ಮಹತ್ವದ ಸ್ಥಾನವು ದೊರೆಯುವುದು. ತೇಜಸ್ಸನ್ನು ಬಯಸುವವರಿಗೆ ತೇಜಸ್ಸು, ಮಾನವನ್ನು ಅಪೇಕ್ಷಿಸುವ ಮನಸ್ವಿಗಳಿಗೆ ಒಳ್ಳೆಯ ಮಾನವೂ ಸಿಗುವುದು. ॥47॥
(ಶ್ಲೋಕ - 48)
ಮೂಲಮ್
ಪ್ರಯತಃ ಕೀರ್ತಯೇತ್ಪ್ರಾತಃ ಸಮವಾಯೇ ದ್ವಿಜನ್ಮನಾಮ್ ।
ಸಾಯಂ ಚ ಪುಣ್ಯಶ್ಲೋಕಸ್ಯ ಧ್ರುವಸ್ಯ ಚರಿತಂ ಮಹತ್ ॥
ಅನುವಾದ
ಪವಿತ್ರಕೀರ್ತಿ ಧ್ರುವನ ಈ ಮಹಾನ್ ಚರಿತ್ರವನ್ನು ಪ್ರಾತಃಕಾಲ ಮತ್ತು ಸಾಯಂಕಾಲಗಳಲ್ಲಿ ಸತ್ಪುರುಷರ ಸಮಾಜದಲ್ಲಿ ಏಕಾಗ್ರವಾದ ಮನಸ್ಸಿನಿಂದ ಕೀರ್ತನೆ ಮಾಡಬೇಕು. ॥48॥
(ಶ್ಲೋಕ - 49)
ಮೂಲಮ್
ಪೌರ್ಣಮಾಸ್ಯಾಂ ಸಿನೀವಾಲ್ಯಾಂ ದ್ವಾದಶ್ಯಾಂ ಶ್ರವಣೇಥವಾ ।
ದಿನಕ್ಷಯೇ ವ್ಯತೀಪಾತೇ ಸಂಕ್ರಮೇರ್ಕ ದಿನೇಪಿ ವಾ ॥
(ಶ್ಲೋಕ - 50)
ಮೂಲಮ್
ಶ್ರಾವಯೇಚ್ಛ್ರದ್ದಧಾನಾನಾಂ ತೀರ್ಥಪಾದಪದಾಶ್ರಯಃ ।
ನೇಚ್ಛಂಸ್ತತ್ರಾತ್ಮನಾತ್ಮಾನಂ ಸಂತುಷ್ಟ ಇತಿ ಸಿಧ್ಯತಿ ॥
ಅನುವಾದ
ಶ್ರೀಭಗವಂತನ ಪವಿತ್ರವಾದ ಪಾದಾರವಿಂದಗಳನ್ನು ಆಶ್ರಯಿಸಿರುವ ಭಕ್ತನು ಇದನ್ನು ನಿಷ್ಕಾಮಭಾವದಿಂದ ಪೂರ್ಣಿಮೆ, ಅಮಾವಾಸ್ಯೆ, ದ್ವಾದಶೀ, ಶ್ರವಣಾನಕ್ಷತ್ರ, ತಿಥಿಕ್ಷಯ, ವ್ಯತೀಪಾತ, ಸಂಕ್ರಾಂತಿ ಅಥವಾ ಭಾನುವಾರಗಳಂದು ಶ್ರದ್ಧಾಳುಗಳಾದ ಸಜ್ಜನರಿಗೆ ಶ್ರವಣ ಮಾಡಿಸಿ ಸ್ವತಃ ಆತ್ಮನಲ್ಲೇ ಸಂತುಷ್ಟನಾಗಿ, ಸಿದ್ಧನಾಗಿ ಹೋಗುತ್ತಾನೆ. ॥49-50॥
(ಶ್ಲೋಕ - 51)
ಮೂಲಮ್
ಜ್ಞಾನಮಜ್ಞಾತತತ್ತ್ವಾಯ ಯೋ ದದ್ಯಾತ್ಸತ್ಪಥೇಮೃತಮ್ ।
ಕೃಪಾಲೋರ್ದೀನನಾಥಸ್ಯ ದೇವಾಸ್ತಸ್ಯಾನುಗೃಹ್ಣತೇ ॥
ಅನುವಾದ
ತತ್ತ್ವವನ್ನು ಅರಿಯದ ಅಜ್ಞಾನಿಗಳಿಗೆ ಈ ಜ್ಞಾನಾಮೃತವನ್ನು ದಾನಮಾಡುವಂತಹ ಕರುಣಾಳುವೂ, ದೀನವತ್ಸಲನೂ ಆದ ಸುಕೃತಿಯ ಮೇಲೆ ದೇವತೆಗಳು ಅನುಗ್ರಹವನ್ನು ಮಾಡುವರು. ॥51॥
(ಶ್ಲೋಕ - 52)
ಮೂಲಮ್
ಇದಂ ಮಯಾ ತೇಭಿಹಿತಂ ಕುರೂದ್ವಹ
ಧ್ರುವಸ್ಯ ವಿಖ್ಯಾತವಿಶುದ್ಧಕರ್ಮಣಃ ।
ಹಿತ್ವಾರ್ಭಕಃ ಕ್ರೀಡನಕಾನಿ ಮಾತು-
ರ್ಗೃಹಂ ಚ ವಿಷ್ಣುಂ ಶರಣಂ ಯೋ ಜಗಾಮ ॥
ಅನುವಾದ
ಕುರುಕುಲಶಿಖಾಮಣಿಯಾದ ವಿದುರನೇ! ಧ್ರುವನು ಮಾಡಿದ ಪರಮಪರಿಶುದ್ಧವಾದ ಕರ್ಮವು ಎಲ್ಲೆಡೆಗಳಲ್ಲಿಯೂ ಪ್ರಸಿದ್ಧವಾಗಿದೆ. ಅತಿಬಾಲ್ಯದಲ್ಲಿಯೇ ಅವನು ತಾಯಿ, ಮನೆ, ಆಟಿಕೆ ಮುಂತಾದವುಗಳ ಮೋಹವನ್ನು ತೊರೆದು ಭಗವಾನ್ ಮಹಾವಿಷ್ಣುವನ್ನು ಶರಣುಹೊಂದಿದ್ದನು. ಅವನ ಈ ಪವಿತ್ರವಾದ ಚರಿತ್ರವನ್ನು ನಾನು ನಿನಗೆ ತಿಳಿಸಿರುವೆನು. ॥52॥
ಅನುವಾದ (ಸಮಾಪ್ತಿಃ)
ಹನ್ನೆರಡನೆಯ ಅಧ್ಯಾಯವು ಮುಗಿಯಿತು. ॥12॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಚತುರ್ಥಸ್ಕಂಧೇ ಧ್ರುವಚರಿತಂ ನಾಮ ದ್ವಾದಶೋಽಧ್ಯಾಯಃ ॥12॥