೧೧

[ಹನ್ನೊಂದನೆಯ ಅಧ್ಯಾಯ]

ಭಾಗಸೂಚನಾ

ಸ್ವಾಯಂಭುವ ಮನುವು ಯುದ್ಧವನ್ನು ನಿಲ್ಲಿಸುವಂತೆ ಧ್ರುವನಿಗೆ ಆದೇಶ ನೀಡಿದುದು

(ಶ್ಲೋಕ - 1)

ಮೂಲಮ್ (ವಾಚನಮ್)

ವೆುತ್ರೇಯ ಉವಾಚ

ಮೂಲಮ್

ನಿಶಮ್ಯ ಗದತಾಮೇವಮೃಷೀಣಾಂ ಧನುಷಿ ಧ್ರುವಃ ।
ಸಂದಧೇಸಮುಪಸ್ಪೃಶ್ಯ ಯನ್ನಾರಾಯಣನಿರ್ಮಿತಮ್ ॥

ಅನುವಾದ

ಶ್ರೀಮೈತ್ರೇಯ ಮಹರ್ಷಿಗಳು ಹೇಳುತ್ತಾರೆ — ಎಲೈ ವಿದುರನೇ! ಋಷಿಗಳು ಹೀಗೆ ಹೇಳಿದುದನ್ನು ಕೇಳಿ ಮಹಾ ರಾಜಾ ಧ್ರುವನು ಶುದ್ಧಾಚಮನಮಾಡಿ ಶ್ರೀಮನ್ನಾರಾಯಣನು ನಿರ್ಮಿಸಿದ ನಾರಾಯಣಾಸ್ತ್ರವನ್ನು ಧನುಸ್ಸಿಗೆ ಹೂಡಿದನು. ॥1॥

(ಶ್ಲೋಕ - 2)

ಮೂಲಮ್

ಸಂಧೀಯಮಾನ ಏತಸ್ಮಿನ್ಮಾಯಾ ಗುಹ್ಯಕನಿರ್ಮಿತಾಃ ।
ಕ್ಷಿಪ್ರಂ ವಿನೇಶುರ್ವಿದುರ ಕ್ಲೇಶಾ ಜ್ಞಾನೋದಯೇ ಯಥಾ ॥

ಅನುವಾದ

ನಾರಾಯಣಾಸ್ತ್ರವನ್ನು ಸಂಧಾನಮಾಡುತ್ತಲೇ ಜ್ಞಾನೋದಯವಾಗುತ್ತಲೇ ಅವಿದ್ಯೆಯೇ ಮುಂತಾದ ಎಲ್ಲ ಕ್ಲೇಶಗಳು ನಾಶ ಹೊಂದುವಂತೆ ಯಕ್ಷರು ರಚಿಸಿದ ನಾನಾ ಮಾಯೆಗಳೆಲ್ಲ ಕಣ್ಮರೆಯಾದುವು. ॥2॥

(ಶ್ಲೋಕ - 3)

ಮೂಲಮ್

ತಸ್ಯಾರ್ಷಾಸಂ ಧನುಷಿ ಪ್ರಯುಂಜತಾ
ಸುವರ್ಣಪುಂಖಾಃ ಕಲಹಂಸವಾಸಸಃ ।
ವಿನಿಃಸೃತಾ ಆವಿವಿಶುರ್ದ್ವಿಷದ್ಬಲಂ
ಯಥಾ ವನಂ ಭೀಮರವಾಃ ಶಿಖಂಡಿನಃ ॥

ಅನುವಾದ

ನಾರಾಯಣ ಋಷಿಯಿಂದ ಆವಿಷ್ಕೃತವಾದ ಆ ಅಸ್ತ್ರವನ್ನು ಧನುಸ್ಸಿಗೆ ಸಂಧಾನಮಾಡಿದೊಡನೆಯೇ ಅದರಿಂದ ರಾಜಹಂಸದ ಗರಿಗಳಂತೆ ಚಿನ್ನದ ಗರಿಗಳಿಂದ ಕೂಡಿದ ತೀಕ್ಷ್ಣವಾದ ಬಾಣಗಳು ಹೊರಬಂದು ನವಿಲುಗಳು ಕೇಕೆಹಾಕುತ್ತಾ ಅರಣ್ಯಕ್ಕೆ ನುಗ್ಗುವಂತೆ ಭಯಂಕರವಾಗಿ ಶಬ್ದಮಾಡುತ್ತಾ ಶತ್ರುಸೈನ್ಯವನ್ನು ಹೊಕ್ಕವು. ॥3॥

(ಶ್ಲೋಕ - 4)

ಮೂಲಮ್

ತೈಸ್ತಿಗ್ಮಧಾರೈಃ ಪ್ರಧನೇ ಶಿಲೀಮುಖೈ-
ರಿತಸ್ತತಃ ಪುಣ್ಯಜನಾ ಉಪದ್ರುತಾಃ ।
ತಮಭ್ಯಧಾವನ್ಕುಪಿತಾ ಉದಾಯುಧಾಃ
ಸುಪರ್ಣಮುನ್ನದ್ಧಣಾ ಇವಾಹಯಃ ॥

ಅನುವಾದ

ಹರಿತವಾದ ಆ ಬಾಣಗಳು ಶತ್ರುಗಳನ್ನು ಬಹಳವಾಗಿ ಉಪದ್ರವಗೊಳಿಸಿದವು. ಆಗ ರಣಾಂಗಣದಲ್ಲಿ ಅನೇಕ ಯಕ್ಷರು ಕುಪಿತರಾಗಿ ಅಸ್ತ್ರ-ಶಸ್ತ್ರಗಳನ್ನು ಸಿದ್ಧಪಡಿಸಿಕೊಂಡು ಗರುಡನು ಕೆಣಕಿದಾಗ ದೊಡ್ಡ-ದೊಡ್ಡ ಸರ್ಪಗಳು ಹೆಡೆಗಳನ್ನು ಬಿಚ್ಚಿಕೊಂಡು ಅದರ ಕಡೆಗೆ ಓಡುವಂತೆ ನಾನಾಕಡೆ ಗಳಿಂದ ಧ್ರುವನ ಮೇಲೆ ಮುತ್ತಿಗೆ ಹಾಕಿದರು. ॥4॥

(ಶ್ಲೋಕ - 5)

ಮೂಲಮ್

ಸ ತಾನ್ಪೃಷತ್ಕೈರಭಿಧಾವತೋ ಮೃಧೇ
ನಿಕೃತ್ತಬಾಹೂರುಶಿರೋಧರೋದರಾನ್ ।
ನಿನಾಯ ಲೋಕಂ ಪರಮರ್ಕಮಂಡಲಂ
ವ್ರಜಂತಿ ನಿರ್ಭಿದ್ಯ ಯಮೂರ್ಧ್ವರೇತಸಃ ॥

ಅನುವಾದ

ಹೀಗೆ ಮುಂದಕ್ಕೆ ಬರುತ್ತಿರುವ ಯಕ್ಷರನ್ನು ನೋಡಿ ಧ್ರುವನು ತನ್ನ ಬಾಣಗಳಿಂದ ಅವರ ಭುಜಗಳನ್ನೂ, ಮೊಣಕಾಲು ಗಳನ್ನೂ, ಹೆಗಲು-ಹೊಟ್ಟೆಯೇ ಮುಂತಾದ ಅಂಗೋ ಪಾಂಗಗಳನ್ನು ಕತ್ತರಿಸಿ ಊರ್ಧ್ವರೇತಸ್ಕರಾದ ಮುನಿಗಳು ಸೂರ್ಯಮಂಡಲವನ್ನು ಭೇದಿಸಿಕೊಂಡು ಹೋಗುವಂತೆ ಅವರೆಲ್ಲರನ್ನು ಸರ್ವಶ್ರೇಷ್ಠಲೋಕ (ಸತ್ಯಲೋಕ)ಕ್ಕೆ ಕಳಿಸಿ ಕೊಟ್ಟನು. ॥5॥

(ಶ್ಲೋಕ - 6)

ಮೂಲಮ್

ತಾನ್ ಹನ್ಯಮಾನಾನಭಿವೀಕ್ಷ್ಯ ಗುಹ್ಯಕಾ-
ನನಾಗಸಶ್ಚಿತ್ರರಥೇನ ಭೂರಿಶಃ ।
ಔತ್ತಾನಪಾದಿಂ ಕೃಪಯಾ ಪಿತಾಮಹೋ
ಮನುರ್ಜಗಾದೋಪಗತಃ ಸಹರ್ಷಿಭಿಃ ॥

ಅನುವಾದ

ವಿಚಿತ್ರವಾದ ರಥವನ್ನು ಏರಿದ್ದ ಧ್ರುವನು ನಿರಪರಾಧಿಗಳಾದ ಯಕ್ಷರನ್ನು ಕೊಲ್ಲುತ್ತಿರುವುದನ್ನು ಕಂಡು ಆತನ ಪಿತಾಮಹನಾದ ಸ್ವಾಯಂಭುವಮನುವಿಗೆ ಅವರ ಮೇಲೆ ಕನಿಕರ ಉಂಟಾಯಿತು. ಅವನು ಅನೇಕ ಮಹರ್ಷಿ ಗಳೊಡನೆ ಅಲ್ಲಿಗೆ ಬಂದು ತನ್ನ ಮೊಮ್ಮಗನಿಗೆ ಹೀಗೆ ತಿಳುವಳಿಕೆ ನೀಡಿದರು. ॥6॥

(ಶ್ಲೋಕ - 7)

ಮೂಲಮ್ (ವಾಚನಮ್)

ಮನುರುವಾಚ

ಮೂಲಮ್

ಅಲಂ ವತ್ಸಾತಿರೋಷೇಣ ತಮೋದ್ವಾರೇಣ ಪಾಪ್ಮನಾ ।
ಯೇನ ಪುಣ್ಯಜನಾನೇತಾನವಧೀಸ್ತ್ವಮನಾಗಸಃ ॥

ಅನುವಾದ

ಮನುವು ಹೇಳಿದನು ಮಗು, ಧ್ರುವನೇ! ಸಾಕು-ಸಾಕು! ಹೀಗೆ ಹೆಚ್ಚಾದ ಕ್ರೋಧವನ್ನು ತೋರುವುದು ತರವಲ್ಲ. ಈ ಕೋಪವು ನರಕದ ಬಾಗಿಲು ಆಗಿದೆ. ಅದಕ್ಕೆ ವಶನಾಗಿ ನೀನು ಈ ನಿರಪರಾಧಿ ಯಕ್ಷರನ್ನು ವಧಿಸಿಬಿಟ್ಟೆ. ॥7॥

(ಶ್ಲೋಕ - 8)

ಮೂಲಮ್

ನಾಸ್ಮತ್ಕುಲೋಚಿತಂ ತಾತ ಕರ್ಮೈತತ್ಸದ್ವಿಗರ್ಹಿತಮ್ ।
ವಧೋ ಯದುಪದೇವಾನಾಮಾರಬ್ಧಸ್ತೇಕೃತೈನಸಾಮ್ ॥

ಅನುವಾದ

ವತ್ಸ! ನೀನು ಯಾವ ಅಪರಾಧವನ್ನು ಮಾಡದೇ ಇರುವ ಯಕ್ಷರ ಸಂಹಾರಕ್ಕೆ ತೊಡಗಿರುವುದು ನಮ್ಮ ವಂಶಕ್ಕೆ ತಕ್ಕುದಾದ ಕರ್ಮವಲ್ಲ. ಸಾಧುಗಳು ಇದನ್ನು ಮೆಚ್ಚುವುದಿಲ್ಲ. ॥8॥

(ಶ್ಲೋಕ - 9)

ಮೂಲಮ್

ನನ್ವೇಕಸ್ಯಾಪರಾಧೇನ ಪ್ರಸಂಗಾದ್ಬಹವೋ ಹತಾಃ ।
ಭ್ರಾತುರ್ವಧಾಭಿತಪ್ತೇನ ತ್ವಯಾಂಗ ಭ್ರಾತೃವತ್ಸಲ ॥

ಅನುವಾದ

ಮಗು! ನಿನಗೆ ತಮ್ಮನ ಮೇಲೆ ಅತಿಶಯವಾದ ಪ್ರೀತಿಯಿರುವುದು ಸರಿಯೆ. ಆದರೆ ಆತನ ವಧೆಯಿಂದ ಸಂತಾಪ ಗೊಂಡು ಒಬ್ಬ ಯಕ್ಷನು ಮಾಡಿದ ಅಪರಾಧಕ್ಕಾಗಿ ಬಹುಮಂದಿ ಯಕ್ಷರ ಹತ್ಯೆ ಮಾಡಿಬಿಟ್ಟೆಯಲ್ಲ! ॥9॥

(ಶ್ಲೋಕ - 10)

ಮೂಲಮ್

ನಾಯಂ ಮಾರ್ಗೋ ಹಿ ಸಾಧೂನಾಂ ಹೃಷೀಕೇಶಾನುವರ್ತಿನಾಮ್ ।
ಯದಾತ್ಮಾನಂ ಪರಾಗ್ಗೃಹ್ಯ ಪಶುವದ್ಭೂತವೈಶಸಮ್ ॥

ಅನುವಾದ

ಈ ಜಡವಾದ ದೇಹವನ್ನೇ ಆತ್ಮವೆಂದು ತಿಳಿದು ಇದಕ್ಕಾಗಿ ಪಶುಗಳಂತೆ ಪ್ರಾಣಿಹಿಂಸೆ ಮಾಡುವುದು ಭಗವದ್ಭಕ್ತರಾದ ಸಾಧುಗಳು ಅನುಸರಿಸುವ ಮಾರ್ಗವಲ್ಲ. ॥10॥

(ಶ್ಲೋಕ - 11)

ಮೂಲಮ್

ಸರ್ವಭೂತಾತ್ಮಭಾವೇನ ಭೂತಾವಾಸಂ ಹರಿಂ ಭವಾನ್ ।
ಆರಾಧ್ಯಾಪ ದುರಾರಾಧ್ಯಂ ವಿಷ್ಣೋಸ್ತತ್ಪರಮಂ ಪದಮ್ ॥

ಅನುವಾದ

ಶ್ರೀಭಗವಂತನನ್ನು ಆರಾಧಿಸಿ ಅವನನ್ನು ಒಲಿಸಿಕೊಳ್ಳುವುದು ಬಹಳ ಕಠಿಣವಾದ ಕೆಲಸ. ಆದರೆ ನೀನು ಬಾಲ್ಯದಲ್ಲಿಯೇ ಸಮಸ್ತ ಭೂತಗಳಿಗೆ ಆಶ್ರಯನಾದ ಶ್ರೀಹರಿಯನ್ನು ಸರ್ವಭೂತಾತ್ಮ ಭಾವನೆಯಿಂದ ಆರಾಧಿಸಿ ಪರಮಪದವನ್ನು ಪಡೆದು ಕೊಂಡಿರುವೆ. ॥11॥

(ಶ್ಲೋಕ - 12)

ಮೂಲಮ್

ಸ ತ್ವಂ ಹರೇರನುಧ್ಯಾತಸ್ತತ್ಪುಂಸಾಮಪಿ ಸಮ್ಮತಃ ।
ಕಥಂ ತ್ವವದ್ಯಂ ಕೃತವಾನನುಶಿಕ್ಷನ್ಸತಾಂ ವ್ರತಮ್ ॥

ಅನುವಾದ

ನಿನ್ನನ್ನಾದರೋ ಆ ಪ್ರಭುವು ತನ್ನ ಪ್ರಿಯ ಭಕ್ತನೆಂದು ತಿಳಿದಿರುವನು. ನಿನ್ನನ್ನು ಪ್ರಭುವಿನ ಭಕ್ತರಾದ ಸಾಧುಗಳು ಆದರಿಸುತ್ತಾರೆ ಹಾಗೂ ನೀನು ಅವರಿಗೆ ಮಾರ್ಗದರ್ಶಕನೂ ಆಗಿರುವೆ. ಹೀಗಿದ್ದರೂ ನೀನು ಇಂತಹ ನಿಂದನೀಯ ಕರ್ಮವನ್ನು ಹೇಗೆ ಮಾಡಿದೆ? ॥12॥

(ಶ್ಲೋಕ - 13)

ಮೂಲಮ್

ತಿತಿಕ್ಷಯಾ ಕರುಣಯಾ ಮೈತ್ರ್ಯಾ ಚಾಖಿಲಜಂತುಷು ।
ಸಮತ್ವೇನ ಚ ಸರ್ವಾತ್ಮಾ ಭಗವಾನ್ ಸಂಪ್ರಸೀದತಿ ॥

ಅನುವಾದ

ಸರ್ವಾತ್ಮನಾದ ಶ್ರೀಹರಿಯು ತನಗಿಂತ ಹಿರಿಯವರಲ್ಲಿ ಸಹನೆ ತೋರುವುದು, ಕಿರಿಯವರಲ್ಲಿ ದಯೆತೋರುವುದು, ಸರಿಸಮಾನರಲ್ಲಿ ಸ್ನೇಹವನ್ನು ಬೆಳೆಸುವುದು ಹಾಗೂ ಸಮಸ್ತ ಜೀವರೊಡನೆ ಸಮತೆಯ ವರ್ತನೆಯಿಂದಲೇ ಪ್ರಸನ್ನನಾಗುವನು. ॥13॥

(ಶ್ಲೋಕ - 14)

ಮೂಲಮ್

ಸಂಪ್ರಸನ್ನೇ ಭಗವತಿ ಪುರುಷಃ ಪ್ರಾಕೃತೈರ್ಗುಣೈಃ ।
ವಿಮುಕ್ತೋ ಜೀವನಿರ್ಮುಕ್ತೋ ಬ್ರಹ್ಮನಿರ್ವಾಣಮೃಚ್ಛತಿ ॥

ಅನುವಾದ

ಪ್ರಭುವು ಪ್ರಸನ್ನನಾದ ಪುರುಷನು ಪ್ರಾಕೃತಗುಣಗಳಿಂದ ಮತ್ತು ಅವುಗಳ ಕಾರ್ಯರೂಪವಾದ ಲಿಂಗಶರೀರದಿಂದ ಬಿಡುಗಡೆಹೊಂದಿ ಪರಮಾನಂದ ಸ್ವರೂಪನಾದ ಬ್ರಹ್ಮಪದವನ್ನು ಹೊಂದುವನು. ॥14॥

(ಶ್ಲೋಕ - 15)

ಮೂಲಮ್

ಭೂತೈಃ ಪಂಚಭಿರಾರಬ್ಧೈರ್ಯೋಷಿತ್ಪುರುಷ ಏವ ಹಿ ।
ತಯೋರ್ವ್ಯವಾಯಾತ್ ಸಂಭೂತಿರ್ಯೋಷಿತ್ಪುರುಷಯೋರಿಹ ॥

ಅನುವಾದ

ಮಗು ಧ್ರುವನೇ! ದೇಹವೇ ಮುಂತಾದ ರೂಪದಲ್ಲಿ ಪರಿಣಾಮಹೊಂದಿರುವ ಪಂಚಭೂತಗಳಿಂದಲೇ ಸ್ತ್ರೀ-ಪುರುಷರು ಹುಟ್ಟುತ್ತಾರೆ ಮತ್ತು ಅವರ ಪರಸ್ಪರ ಸೇರುವಿಕೆಯಿಂದ ಬೇರೆ ಸ್ತ್ರೀ-ಪುರುಷರು ಉತ್ಪನ್ನರಾಗುತ್ತಾರೆ. ॥15॥

(ಶ್ಲೋಕ - 16)

ಮೂಲಮ್

ಏವಂ ಪ್ರವರ್ತತೇ ಸರ್ಗಃ ಸ್ಥಿತಿಃ ಸಂಯಮ ಏವ ಚ ।
ಗುಣವ್ಯತಿಕರಾದ್ರಾಜನ್ಮಾಯಯಾ ಪರಮಾತ್ಮನಃ ॥

ಅನುವಾದ

ಹೀಗೆ ಶ್ರೀಭಗವಂತನ ಮಾಯೆಯಿಂದ ಸತ್ತ್ವಾದಿಗುಣಗಳಲ್ಲಿ ಉಂಟಾಗುವ ವೈಷಮ್ಯದಿಂದಲೇ ಭೂತಗಳಿಂದ ಶರೀರಗಳ ರಚನೆಯಾಗುವಂತೆಯೇ ಅವುಗಳ ಸ್ಥಿತಿ ಮತ್ತು ಲಯಗಳೂ ಆಗುತ್ತವೆ. ॥16॥

(ಶ್ಲೋಕ - 17)

ಮೂಲಮ್

ನಿಮಿತ್ತಮಾತ್ರಂ ತತ್ರಾಸೀನ್ನಿರ್ಗುಣಃ ಪುರುಷರ್ಷಭಃ ।
ವ್ಯಕ್ತಾವ್ಯಕ್ತಮಿದಂ ವಿಶ್ವಂ ಯತ್ರ ಭ್ರಮತಿ ಲೋಹವತ್ ॥

ಅನುವಾದ

ಎಲೈ ಪುರುಷಶ್ರೇಷ್ಠನೇ! ಗುಣಾತೀತನಾದ ಪರಮಾತ್ಮನಾದರೋ ಇದರಲ್ಲಿ ಕೇವಲ ನಿಮಿತ್ತಮಾತ್ರನಾಗಿದ್ದಾನೆ. ಅವನ ಆಶ್ರಯದಿಂದಲೇ ಈ ಕಾರ್ಯಕಾರಣಾತ್ಮಕವಾದ ಜಗತ್ತು ಸೂಜಿಗಲ್ಲಿನ ಆಶ್ರಯ ದಿಂದ ಕಬ್ಬಿಣವು ಚಲಿಸುವಂತೆ ಸುತ್ತುತ್ತಿರುವುದು. ॥17॥

(ಶ್ಲೋಕ - 18)

ಮೂಲಮ್

ಸ ಖಲ್ವಿದಂ ಭಗವಾನ್ ಕಾಲಶಕ್ತ್ಯಾ
ಗುಣಪ್ರವಾಹೇಣ ವಿಭಕ್ತವೀರ್ಯಃ ।
ಕರೋತ್ಯಕರ್ತೈವ ನಿಹಂತ್ಯಹಂತಾ
ಚೇಷ್ಟಾ ವಿಭೂಮ್ನಃ ಖಲು ದುರ್ವಿಭಾವ್ಯಾ ॥

ಅನುವಾದ

ಕಾಲಶಕ್ತಿಯ ಮೂಲಕ ಕ್ರಮವಾಗಿ ಸತ್ತ್ವಾದಿಗುಣಗಳಲ್ಲಿ ಕ್ಷೋಭೆಯುಂಟಾದ್ದರಿಂದ ಲೀಲಾಮಯ ಭಗವಂತನ ಶಕ್ತಿಯೂ ಸೃಷ್ಟಿಯೇ ಮುಂತಾದ ರೂಪಗಳಲ್ಲಿ ವಿಭಜನೆ ಹೊಂದುತ್ತದೆ. ಆದ್ದರಿಂದ ಭಗವಂತನು ವಾಸ್ತವವಾಗಿ ಅಕರ್ತನಾಗಿದ್ದರೂ ಜಗತ್ತನ್ನು ಸೃಷ್ಟಿಸುತ್ತಾನೆ. ಸಂಹಾರಕ ನಲ್ಲದಿದ್ದರೂ ಸಂಹಾರ ಮಾಡುತ್ತಾನೆ. ನಿಜವಾಗಿ ಅನಂತನಾದ ಆ ಪ್ರಭುವಿನ ಲೀಲೆಯು ಅತ್ಯಂತ ಅಚಿಂತ್ಯವಾಗಿದೆ.॥18॥

(ಶ್ಲೋಕ - 19)

ಮೂಲಮ್

ಸೋನಂತೋಂತಕರಃ ಕಾಲೋನಾದಿರಾದಿಕೃದವ್ಯಯಃ ।
ಜನಂ ಜನೇನ ಜನಯನ್ಮಾರಯನ್ಮೃತ್ಯುನಾಂತಕಮ್ ॥

ಅನುವಾದ

ಧ್ರುವನೇ! ಕಾಲಸ್ವರೂಪನಾದ ಅವ್ಯಯ ಪರಮಾತ್ಮನೇ ತಾನು ಅಂತರಹಿತನಾಗಿದ್ದರೂ ಜಗತ್ತನ್ನು ಅಂತ್ಯಗೊಳಿಸು ವವನಾಗಿದ್ದಾನೆ. ಅನಾದಿಯಾಗಿದ್ದರೂ ಎಲ್ಲರ ಆದಿಕರ್ತೃವಾಗಿದ್ದಾನೆ. ಆತನೇ ಒಂದು ಜೀವದಿಂದ ಮತ್ತೊಂದು ಜೀವವನ್ನು ಹುಟ್ಟಿಸಿ ಜಗತ್ತನ್ನು ಸೃಷ್ಟಿಸುತ್ತಾನೆ. ಮೃತ್ಯುವಿನ ಮೂಲಕ ಸಾಯುವವರನ್ನು ಸಂಹರಿಸುತ್ತಾನೆ. ॥19॥

(ಶ್ಲೋಕ - 20)

ಮೂಲಮ್

ನ ವೈ ಸ್ವಪಕ್ಷೋಸ್ಯ ವಿಪಕ್ಷ ಏವ ವಾ
ಪರಸ್ಯ ಮೃತ್ಯೋರ್ವಿಶತಃ ಸಮಂ ಪ್ರಜಾಃ ।
ತಂ ಧಾವಮಾನಮನುಧಾವಂತ್ಯನೀಶಾ
ಯಥಾ ರಜಾಂಸ್ಯನಿಲಂ ಭೂತಸಂಘಾಃ ॥

ಅನುವಾದ

ಆ ಕಾಲ ಸ್ವರೂಪನಾದ ಭಗವಂತನು ಸಮಸ್ತ ಸೃಷ್ಟಿಯಲ್ಲಿ ಸಮಾನ ರೂಪದಿಂದ ಒಳಹೊಕ್ಕಿರುವನು. ಅವನಿಗೆ ಸ್ವಪಕ್ಷವೂ ಇಲ್ಲ, ಶತ್ರುಪಕ್ಷವೂ ಇಲ್ಲ. ಗಾಳಿಗೆ ಎದ್ದಿರುವ ಧೂಳು ಗಾಳಿಗೆ ಅಧೀನನಾಗಿ ಅದರ ಜೊತೆಗೆ ಹಾರಿಹೋಗುವಂತೆ, ಸಮಸ್ತ ಜೀವಿಗಳು ತಮ್ಮ-ತಮ್ಮ ಕರ್ಮಗಳಿಗೆ ಅಧೀನವಾಗಿ ಸುಖ-ದುಃಖಾದಿ ಫಲಗಳನ್ನು ಅನುಭವಿಸುತ್ತವೆ. ॥20॥

(ಶ್ಲೋಕ - 21)

ಮೂಲಮ್

ಆಯುಷೋಪಚಯಂ ಜಂತೋಸ್ತಥೈವೋಪಚಯಂ ವಿಭುಃ ।
ಉಭಾಭ್ಯಾಂ ರಹಿತಃ ಸ್ವಸ್ಥೋ ದುಃಸ್ಥಸ್ಯ ವಿದಧಾತ್ಯಸೌ ॥

ಅನುವಾದ

ಸರ್ವ ಸಮರ್ಥನಾದ ಶ್ರೀಹರಿಯು ಕರ್ಮಬಂಧನದಿಂದ ಬಂಧಿತರಾದ ಜೀವಿಗಳ ಆಯುಸ್ಸಿನ ವೃದ್ಧಿ-ಕ್ಷಯದ ವಿಧಾನವನ್ನು ಮಾಡುತ್ತಾನೆ. ತಾನು ಇವೆರಡರಿಂದಲೂ ರಹಿತನಾಗಿ ಸ್ವಸ್ವರೂಪದಲ್ಲಿ ನೆಲೆಗೊಂಡಿದ್ದಾನೆ. ॥21॥

(ಶ್ಲೋಕ - 22)

ಮೂಲಮ್

ಕೇಚಿತ್ಕರ್ಮ ವದಂತ್ಯೇನಂ ಸ್ವಭಾವಮಪರೇ ನೃಪ ।
ಏಕೇ ಕಾಲಂ ಪರೇ ದೈವಂ ಪುಂಸಃ ಕಾಮಮುತಾಪರೇ ॥

ಅನುವಾದ

ರಾಜನೇ! ಈ ಪರಮಾತ್ಮನನ್ನೇ ಮೀಮಾಂಸಕರು ಕರ್ಮವೆಂದೂ, ಚಾರ್ವಾಕರು ಸ್ವಭಾವವೆಂದೂ, ವೈಶೇಷಿಕರು ಕಾಲನೆಂದು, ಜೋತಿಷ್ಕರು ಅದೃಷ್ಟ (ದೈವ)ವೆಂದೂ, ಕಾಮ ಶಾಸ್ತ್ರದವರು ಕಾಮವೆಂದೂ ಕರೆಯುತ್ತಾರೆ. ॥22॥

(ಶ್ಲೋಕ - 23)

ಮೂಲಮ್

ಅವ್ಯಕ್ತಸ್ಯಾಪ್ರಮೇಯಸ್ಯ ನಾನಾಶಕ್ತ್ಯುದಯಸ್ಯ ಚ ।
ನ ವೈ ಚಿಕೀರ್ಷಿತಂ ತಾತ ಕೋ ವೇದಾಥ ಸ್ವಸಂಭವಮ್ ॥

ಅನುವಾದ

ಅವನು ಯಾವುದೇ ಇಂದ್ರಿಯಕ್ಕೂ, ಪ್ರಮಾಣಕ್ಕೂ ವಿಷಯನಾಗಿರುವುದಿಲ್ಲ. ಮಹತ್ತೇ ಮುಂತಾದ ಶಕ್ತಿಗಳೂ ಕೂಡ ಅವನಿಂದಲೇ ಪ್ರಕಟಗೊಂಡಿವೆ. ಅವನು ಏನು ಮಾಡಲು ಬಯಸುತ್ತಿರು ವನೋ ಎಂಬುದನ್ನು ಜಗತ್ತಿನಲ್ಲಿ ಯಾರೂ ಅರಿಯರು. ಹೀಗಿರುವಾಗ ಎಲ್ಲಕ್ಕೂ ಮೂಲಕಾರಣನಾದ ಆ ಪ್ರಭುವನ್ನು ಹೇಗೆ ಅರಿಯ ಬಲ್ಲರು! ॥23॥

(ಶ್ಲೋಕ - 24)

ಮೂಲಮ್

ನ ಚೈತೇ ಪುತ್ರಕ ಭ್ರಾತುರ್ಹಂತಾರೋ ಧನದಾನುಗಾಃ ।
ವಿಸರ್ಗಾದಾನಯೋಸ್ತಾತ ಪುಂಸೋ ದೈವಂ ಹಿ ಕಾರಣಮ್ ॥

ಅನುವಾದ

ಮಗು! ಕುಬೇರನ ಈ ಅನುಚರರು ನಿನ್ನ ತಮ್ಮನನ್ನು ವಾಸ್ತವವಾಗಿ ಕೊಂದವರಲ್ಲ. ಏಕೆಂದರೆ, ಮನುಷ್ಯನ ಜನ್ಮ- ಮರಣದ ನಿಜವಾದ ಕಾರಣ ಈಶ್ವರನೇ ಆಗಿರುವನು. ॥24॥

(ಶ್ಲೋಕ - 25)

ಮೂಲಮ್

ಸ ಏವ ವಿಶ್ವಂ ಸೃಜತಿ ಸ ಏವಾವತಿ ಹಂತಿ ಚ ।
ಅಥಾಪಿ ಹ್ಯನಹಂಕಾರಾನ್ನಾಜ್ಯತೇ ಗುಣಕರ್ಮಭಿಃ ॥

ಅನುವಾದ

ಆತನೊಬ್ಬನೇ ಪ್ರಪಂಚವನ್ನು ಸೃಷ್ಟಿಸುತ್ತಾನೆ, ಪಾಲಿಸುತ್ತಾನೆ, ನಾಶಗೊಳಿಸುತ್ತಾನೆ ; ಆದರೆ ಅವನು ಅಹಂಕಾರರಹಿತನಾಗಿರುವುದರಿಂದ ಇದರ ಗುಣ-ಕರ್ಮ ಅವನಿಗೆ ಅಂಟುವುದಿಲ್ಲ. ॥25॥

(ಶ್ಲೋಕ - 26)

ಮೂಲಮ್

ಏಷ ಭೂತಾನಿ ಭೂತಾತ್ಮಾ ಭೂತೇಶೋ ಭೂತಭಾವನಃ ।
ಸ್ವಶಕ್ತ್ಯಾ ಮಾಯಯಾ ಯುಕ್ತಃ ಸೃಜತ್ಯತ್ತಿ ಚ ಪಾತಿ ಚ ॥

ಅನುವಾದ

ಅವನು ಸಮಸ್ತ ಪ್ರಾಣಿಗಳ ಅಂತರಾತ್ಮನೂ, ನಿಯಾಮಕನೂ, ರಕ್ಷಕನೂ ಆಗಿರುವ ಆ ಪ್ರಭುವೇ ತನ್ನ ಮಾಯಾಶಕ್ತಿಯಿಂದ ಕೂಡಿ ಕೊಂಡು ಸಮಸ್ತ ಜೀವಿಗಳ ಸೃಷ್ಟಿ, ಸ್ಥಿತಿ, ಸಂಹಾರಗಳನ್ನು ಮಾಡುತ್ತಾನೆ. ॥26॥

(ಶ್ಲೋಕ - 27)

ಮೂಲಮ್

ತಮೇವ ಮೃತ್ಯುಮಮೃತಂ ತಾತ ದೈವಂ
ಸರ್ವಾತ್ಮನೋಪೇಹಿ ಜಗತ್ಪರಾಯಣಮ್ ।
ಯಸ್ಮೈ ಬಲಿಂ ವಿಶ್ವಸೃಜೋ ಹರಂತಿ
ಗಾವೋ ಯಥಾ ವೈ ನಸಿ ದಾಮಯಂತ್ರಿತಾಃ ॥

ಅನುವಾದ

ಮೂಗುದಾರ ಹಾಕಿದ ಎತ್ತುಗಳು ತನ್ನ ಯಜಮಾನನ ಹೊರೆಯನ್ನು ಹೊರುವಂತೆ ಜಗತ್ತಿನ ಸೃಷ್ಟಿಮಾಡುವ ಬ್ರಹ್ಮಾದಿದೇವತೆಗಳು ನಾಮ-ರೂಪವೆಂಬ ಹಗ್ಗದಿಂದ ಬಂಧಿತರಾಗಿ ಅವನ ಆಜ್ಞೆಯನ್ನೇ ಪಾಲಿಸು ತ್ತಾರೆ. ಅವನು ಭಕ್ತರಲ್ಲದವರಿಗೆ ಮೃತ್ಯುರೂಪನೂ, ಭಕ್ತರಾದವರಿಗೆ ಅಮೃತರೂಪನೂ ಆಗಿರುವನು. ಇಡೀ ಜಗತ್ತಿಗೆ ಏಕಮಾತ್ರ ಆಶ್ರಯನೂ ಅವನೇ ಆಗಿರುವನು. ಮಗೂ! ನೀನು ಎಲ್ಲ ವಿಧದಿಂದ ಆ ಪರಮಾತ್ಮನನ್ನೇ ಶರಣುಹೊಂದು. ॥ 27 ॥

(ಶ್ಲೋಕ - 28)

ಮೂಲಮ್

ಯಃ ಪಂಚವರ್ಷೋ ಜನನೀಂ ತ್ವಂ ವಿಹಾಯ
ಮಾತುಃ ಸಪತ್ನ್ಯಾ ವಚಸಾ ಭಿನ್ನಮರ್ಮಾ ।
ವನಂ ಗತಸ್ತಪಸಾ ಪ್ರತ್ಯಗಕ್ಷ-
ಮಾರಾಧ್ಯ ಲೇಭೇ ಮೂರ್ಧ್ನಿ ಪದಂ ತ್ರಿಲೋಕ್ಯಾಃ ॥

(ಶ್ಲೋಕ - 29)

ಮೂಲಮ್

ತಮೇನಮಂಗಾತ್ಮನಿ ಮುಕ್ತವಿಗ್ರಹೇ
ವ್ಯಪಾಶ್ರಿತಂ ನಿರ್ಗುಣಮೇಕಮಕ್ಷರಮ್ ।
ಆತ್ಮಾನಮನ್ವಿಚ್ಛ ವಿಮುಕ್ತಮಾತ್ಮದೃಗ್
ಯಸ್ಮಿನ್ನಿದಂಭೇದಮಸತ್ಪ್ರತೀಯತೇ ॥

ಅನುವಾದ

ನೀನು ಐದನೇ ವಯಸ್ಸಿನಲ್ಲೇ ಮಲತಾಯಿಯ ವಾಗ್ಬಾಣಗಳಿಂದ ಮನನೊಂದು ತಾಯಿ ಯನ್ನು ಬಿಟ್ಟು ವನಕ್ಕೆ ಹೊರಟುಹೋದೆ. ಅಲ್ಲಿ ತಪಸ್ಸಿನ ಮೂಲಕ ಯಾವ ಹೃಷೀಕೇಶ ಭಗವಂತನನ್ನು ಆರಾಧಿಸಿ ನೀನು ತ್ರಿಲೋಕದಿಂದಲೂ ಮೇಲಿನ ಧ್ರುವಪದವನ್ನು ಪಡೆದು ಕೊಂಡೆಯೋ ಮತ್ತು ಯಾರು ನಿನ್ನ ವೈರ ಭಾವರಹಿತವಾದ ಸರಳ ಹೃದಯದಲ್ಲಿ ವಾತ್ಸಲ್ಯದಿಂದ ವಿಶೇಷವಾಗಿ ವಿರಾಜಿಸುತ್ತಿದ್ದಾನೋ ಅಂತಹ ಗುಣಾತೀತನೂ, ಅದ್ವಿತೀಯನೂ, ಅವಿನಾಶಿಯೂ, ನಿತ್ಯಮುಕ್ತನೂ ಆದ ಪರಮಾತ್ಮನನ್ನು ಅಧ್ಯಾತ್ಮದೃಷ್ಟಿಯಿಂದ ನಿನ್ನ ಅಂತಃಕರಣದಲ್ಲಿ ಹುಡುಕುವವನಾಗು. ಅವನಲ್ಲಿ ವಾಸ್ತವವಾಗಿ ಇಲ್ಲದಿದ್ದರೂ ಈ ಭೇದರೂಪವಾದ ಪ್ರಪಂಚವು ತೋರಿ ಬರುತ್ತಿದೆ. ॥28-29॥

(ಶ್ಲೋಕ - 30)

ಮೂಲಮ್

ತ್ವಂ ಪ್ರತ್ಯಗಾತ್ಮನಿ ತದಾ ಭಗವತ್ಯನಂತ
ಆನಂದಮಾತ್ರ ಉಪಪನ್ನ ಸಮಸ್ತಶಕ್ತೌ ।
ಭಕ್ತಿಂ ವಿಧಾಯ ಪರಮಾಂ ಶನಕೈರವಿದ್ಯಾ-
ಗ್ರಂಥಿಂ ವಿಭೇತ್ಸ್ಯಸಿ ಮಮಾಹಮಿತಿ ಪ್ರರೂಢಮ್ ॥

ಅನುವಾದ

ಹೀಗೆ ಮಾಡುವುದರಿಂದ ಸರ್ವ ಶಕ್ತಿ ಸಂಪನ್ನನೂ, ಪರಮಾನಂದ ಸ್ವರೂಪನೂ, ಸರ್ವಾಂತ ರ್ಯಾಮಿಯೂ ಆಗಿರುವ ಶ್ರೀಭಗವಂತನಾದ ಅನಂತನಲ್ಲಿ ನಿನಗೆ ದೃಢವಾದ ಭಕ್ತಿಯುಂಟಾಗುವುದು. ಅದರ ಪ್ರಭಾವದಿಂದ ನೀನು ಅಹಂಕಾರ-ಮಮಕಾರರೂಪದಲ್ಲಿರುವ ದೃಢವಾದ ಅವಿದ್ಯೆಯ ಗಂಟನ್ನು ಕತ್ತರಿಸಿಕೊಳ್ಳುವೆ. ॥30॥

(ಶ್ಲೋಕ - 31)

ಮೂಲಮ್

ಸಂಯಚ್ಛ ರೋಷಂ ಭದ್ರಂ ತೇ ಪ್ರತೀಪಂ ಶ್ರೇಯಸಾಂ ಪರಮ್ ।
ಶ್ರುತೇನ ಭೂಯಸಾ ರಾಜನ್ನಗದೇನ ಯಥಾಮಯಮ್ ॥

ಅನುವಾದ

ರಾಜನೇ! ಔಷಧಗಳಿಂದ ರೋಗವನ್ನು ಶಮನಗೊಳಿಸಿ ಕೊಳ್ಳುವಂತೆ ನಾನು ಮಾಡಿರುವ ಉಪದೇಶದ ಕುರಿತು ವಿಚಾರ ಮಾಡಿ ನಿನ್ನ ಕ್ರೋಧವನ್ನು ಶಾಂತಗೊಳಿಸಿಕೋ. ಕ್ರೋಧವು ಎಲ್ಲ ಶ್ರೇಯಸ್ಸುಗಳಿಗೂ ವಿರೋಧಿಯಾದುದು. ಭಗವಂತನು ನಿನಗೆ ಮಂಗಳವನ್ನುಂಟುಮಾಡಲಿ. ॥31॥

(ಶ್ಲೋಕ - 32)

ಮೂಲಮ್

ಯೇನೋಪಸೃಷ್ಟಾತ್ಪುರುಷಾಲ್ಲೋಕ ಉದ್ವಿಜತೇ ಭೃಶಮ್ ।
ನ ಬುಧಸ್ತದ್ವಶಂ ಗಚ್ಛೇದಿಚ್ಛನ್ನಭಯಮಾತ್ಮನಃ ॥

ಅನುವಾದ

ಕ್ರೋಧವಶನಾದ ಮನುಷ್ಯನನ್ನು ಕಂಡರೆ ಎಲ್ಲರಿಗೂ ಭಯವುಂಟಾಗುವುದು. ಆದ್ದರಿಂದ ‘ತನ್ನಿಂದ ಯಾವ ಪ್ರಾಣಿಗೂ ಭಯ ಉಂಟಾಗಬಾರದು ಮತ್ತು ತನಗೂ ಯಾವ ಪ್ರಾಣಿಯಿಂದ ಭಯ ಉಂಟಾಗಬಾರದು’ ಎಂದು ಬಯಸುವ ಬುದ್ಧಿವಂತನಾದವನು ಎಂದಿಗೂ ಕ್ರೋಧಕ್ಕೆ ವಶನಾಗಬಾರದು. ॥32॥

(ಶ್ಲೋಕ - 33)

ಮೂಲಮ್

ಹೇಲನಂ ಗಿರಿಶಭ್ರಾತುರ್ಧನದಸ್ಯ ತ್ವಯಾ ಕೃತಮ್ ।
ಯಜ್ಜಘ್ನಿವಾನ್ ಪುಣ್ಯಜನಾನ್ ಭ್ರಾತೃಘ್ನಾನಿತ್ಯಮರ್ಷಿತಃ ॥

ಅನುವಾದ

‘ಇವರು ನನ್ನ ತಮ್ಮನನ್ನು ಕೊಂದು ಹಾಕಿದವರು’ ಎಂದು ತಿಳಿದು ನೀನು ಇಷ್ಟೆಲ್ಲಾ ಯಕ್ಷರನ್ನು ಸಂಹಾರ ಮಾಡಿದೆ. ಇದರಿಂದ ಭಗವಾನ್ ಶಂಕರನ ಸಖನಾದ ಕುಬೇರನಲ್ಲಿ ಅಪರಾಧಮಾಡಿದಂತಾಗಿದೆ. ॥33॥

(ಶ್ಲೋಕ - 34)

ಮೂಲಮ್

ತಂ ಪ್ರಸಾದಯ ವತ್ಸಾಶು ಸಂನತ್ಯಾ ಪ್ರಶ್ರಯೋಕ್ತಿಭಿಃ ।
ನ ಯಾವನ್ಮಹತಾಂ ತೇಜಃ ಕುಲಂ ನೋಭಿಭವಿಷ್ಯತಿ ॥

ಅನುವಾದ

ಆದುದರಿಂದ ಮಗು! ಮಹಾ ಪುರುಷರ ತೇಜಸ್ಸು ನಮ್ಮ ಕುಲವನ್ನು ಆಕ್ರಮಿಸಿಕೊಳ್ಳುವ ಮೊದಲೇ ನೀನು ವಿನಯಪೂರ್ವಕವಾಗಿ ಮಾತು, ವರ್ತನೆಯಿಂದ ಬೇಗನೇ ಆ ಕುಬೇರನನ್ನು ಪ್ರಸನ್ನಗೊಳಿಸಿಕೋ. ॥34॥

(ಶ್ಲೋಕ - 35)

ಮೂಲಮ್

ಏವಂ ಸ್ವಾಯಂಭುವಃ ಪೌತ್ರಮನುಶಾಸ್ಯ ಮನುರ್ಧ್ರುವಮ್ ।
ತೇನಾಭಿವಂದಿತಃ ಸಾಕಮೃಷಿಭಿಃ ಸ್ವಪುರಂ ಯಯೌ ॥

ಅನುವಾದ

ಹೀಗೆ ಸ್ವಾಯಂಭುವಮನುವು ತನ್ನ ಮೊಮ್ಮಗನಾದ ಧ್ರುವನಿಗೆ ತಿಳಿವಳಿಕೆ ನೀಡಿದನು. ಆಗ ಧ್ರುವನು ಆತನಿಗೆ ನಮಸ್ಕರಿಸಿದನು. ಇದಾದ ಬಳಿಕ ಮನುವು ಮಹರ್ಷಿಗಳೊಡನೆ ತನ್ನ ಲೋಕಕ್ಕೆ ಹೊರಟುಹೋದನು. ॥35॥

ಅನುವಾದ (ಸಮಾಪ್ತಿಃ)

ಹನ್ನೊಂದನೆಯ ಅಧ್ಯಾಯವು ಮುಗಿಯಿತು. ॥11॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಚತುರ್ಥಸ್ಕಂಧೇ ಏಕಾದಶೋಽಧ್ಯಾಯಃ ॥11॥