[ಹತ್ತನೆಯ ಅಧ್ಯಾಯ]
ಭಾಗಸೂಚನಾ
ಯಕ್ಷನಿಂದ ಉತ್ತಮನ ಸಾವು ಧ್ರುವನು ಯಕ್ಷರೊಡನೆ ಮಾಡಿದ ಯುದ್ಧ
(ಶ್ಲೋಕ - 1)
ಮೂಲಮ್ (ವಾಚನಮ್)
ಮೈತ್ರೇಯ ಉವಾಚ
ಮೂಲಮ್
ಪ್ರಜಾಪತೇರ್ದುಹಿತರಂ ಶಿಶುಮಾರಸ್ಯ ವೈ ಧ್ರುವಃ ।
ಉಪಯೇಮೇ ಭ್ರಮಿಂ ನಾಮ ತತ್ಸುತೌ ಕಲ್ಪವತ್ಸರೌ ॥
ಅನುವಾದ
ಶ್ರೀಮೈತ್ರೇಯರು ಹೇಳುತ್ತಾರೆ — ಎಲೈ ವಿದುರನೇ! ಧ್ರುವನು ಶಿಶುಮಾರನೆಂಬ ಪ್ರಜಾಪತಿಯ ಪುತ್ರಿಯಾದ ಭ್ರಮಿ ಎಂಬಾಕೆಯೊಂದಿಗೆ ವಿವಾಹವಾಗಿ, ಅವಳಲ್ಲಿ ಕಲ್ಪ ಮತ್ತು ವತ್ಸರ ಎಂಬ ಇಬ್ಬರು ಪುತ್ರರನ್ನು ಪಡೆದನು. ॥1॥
(ಶ್ಲೋಕ - 2)
ಮೂಲಮ್
ಇಲಾಯಾಮಪಿ ಭಾರ್ಯಾಯಾಂ ವಾಯೋಃ ಪುತ್ರ್ಯಾಂ ಮಹಾಬಲಃ ।
ಪುತ್ರಮುತ್ಕಲನಾಮಾನಂ ಯೋಷಿದ್ರತ್ನಮಜೀಜನತ್ ॥
ಅನುವಾದ
ಆ ಮಹಾಬಲಿಯಾದ ಧ್ರುವನು ತನ್ನ ಮತ್ತೊಬ್ಬ ಭಾರ್ಯೆ ಯಾಗಿದ್ದ ವಾಯುಪುತ್ರಿಯಾದ ಇಳಾದೇವಿಯಿಂದ ಉತ್ಕಲ ನೆಂಬ ಪುತ್ರನನ್ನೂ, ಒಂದು ಕನ್ಯಾರತ್ನವನ್ನೂ ಪಡೆದನು. ॥2॥
(ಶ್ಲೋಕ - 3)
ಮೂಲಮ್
ಉತ್ತಮಸ್ತ್ವಕೃತೋದ್ವಾಹೋ ಮೃಗಯಾಯಾಂ ಬಲೀಯಸಾ ।
ಹತಃ ಪುಣ್ಯಜನೇನಾದ್ರೌ ತನ್ಮಾತಾಸ್ಯ ಗತಿಂ ಗತಾ ॥
ಅನುವಾದ
ಉತ್ತಮ ಕುಮಾರನು ವಿವಾಹವಾಗುವುದಕ್ಕೆ ಮೊದಲೇ ಒಮ್ಮೆ ಬೇಟೆಯಾಡುತ್ತಿದ್ದಾಗ ಹಿಮಾಲಯ ಪರ್ವತದಲ್ಲಿ ಒಬ್ಬ ಮಹಾಬಲಶಾಲಿಯಾದ ಯಕ್ಷನು ಅವನನ್ನು ಕೊಂದುಹಾಕಿದನು. ಆತನ ತಾಯಿಯಾದ ಸುರುಚಿಯು ಆತನೊಂದಿಗೆ ಪರಲೋಕವನ್ನೈದಿದಳು.॥3॥
(ಶ್ಲೋಕ - 4)
ಮೂಲಮ್
ಧ್ರುವೋ ಭ್ರಾತೃವಧಂ ಶ್ರುತ್ವಾ ಕೋಪಾಮರ್ಷಶುಚಾರ್ಪಿತಃ ।
ಜೈತ್ರಂ ಸ್ಯಂದನಮಾಸ್ಥಾಯ ಗತಃ ಪುಣ್ಯಜನಾಲಯಮ್ ॥
ಅನುವಾದ
ತಮ್ಮನ ಸಾವಿನ ಸಮಾಚಾರವನ್ನು ಕೇಳಿದ ಧ್ರುವನು ಕ್ರೋಧ, ಶೋಕ ಮತ್ತು ಉದ್ವೇಗಗೊಂಡು ಒಂದು ವಿಜಯರಥವನ್ನು ಏರಿ ಯಕ್ಷರ ನೆಲೆಯಾದ ಅಲಕಾವತಿಗೆ ಪ್ರಯಾಣ ಬೆಳೆಸಿದನು. ॥4॥
(ಶ್ಲೋಕ - 5)
ಮೂಲಮ್
ಗತ್ವೋದೀಚೀಂ ದಿಶಂ ರಾಜಾ ರುದ್ರಾನುಚರಸೇವಿತಾಮ್ ।
ದದರ್ಶ ಹಿಮವದ್ದ್ರೋಣ್ಯಾಂ ಪುರೀಂ ಗುಹ್ಯಕಸಂಕುಲಾಮ್ ॥
ಅನುವಾದ
ಉತ್ತರದಿಕ್ಕಿಗೆ ಹೋಗಿ ಅವನು ಹಿಮಾಲಯದ ತಪ್ಪಲಿನಲ್ಲಿ ಯಕ್ಷರಿಂದ ತುಂಬಿದ್ದ ಕುಬೇರನ ರಾಜಧಾನಿಯನ್ನು ಕಂಡನು. ಅಲ್ಲಿ ರುದ್ರದೇವರ ಅನುಚರರಾದ ಅನೇಕ ಭೂತ-ಪ್ರೇತ-ಪಿಶಾಚಿಗಳು ವಾಸ ವಾಗಿದ್ದವು. ॥5॥
(ಶ್ಲೋಕ - 6)
ಮೂಲಮ್
ದಧ್ಮೌ ಶಂಖಂ ಬೃಹದ್ಬಾಹುಃ ಖಂ ದಿಶಶ್ಚಾನುನಾದಯನ್ ।
ಯೇನೋದ್ವಿಗ್ನದೃಶಃ ಕ್ಷತ್ತರುಪದೇವ್ಯೋತ್ರಸನ್ಭೃಶಮ್ ॥
ಅನುವಾದ
ವಿದುರನೇ! ಅಲ್ಲಿಗೆ ತಲುಪಿ ಮಹಾ ಬಾಹುವಾದ ಧ್ರುವನು ಹತ್ತುದಿಕ್ಕುಗಳಲ್ಲಿಯೂ ತುಂಬಿ ಮೊಳಗುವಂತೆ ಶಂಖಧ್ವನಿಯನ್ನು ಗೈದನು. ಆ ಧ್ವನಿಯನ್ನು ಕೇಳಿ ಯಕ್ಷಪತ್ನಿಯರು ತುಂಬಾ ಹೆದರಿ ಹೋದರು. ಅವರ ಕಣ್ಣುಗಳು ಭಯದಿಂದ ಕಾತರಗೊಂಡವು. ॥6॥
(ಶ್ಲೋಕ - 7)
ಮೂಲಮ್
ತತೋ ನಿಷ್ಕ್ರಮ್ಯ ಬಲಿನ ಉಪದೇವ ಮಹಾಭಟಾಃ ।
ಅಸಹಂತಸ್ತನ್ನಿನಾದಮಭಿಪೇತುರುದಾಯುಧಾಃ ॥
ಅನುವಾದ
ವೀರನಾದ ವಿದುರನೇ! ಮಹಾಬಲಶಾಲಿಗಳಾದ ಯಕ್ಷ ವೀರರು ಆ ಶಂಖನಾದವನ್ನು ಸಹಿಸಲಾರದೆ ಕ್ರೋಧೋ ದ್ಪೀಡಿತರಾಗಿ ಬಗೆ-ಬಗೆಯ ಅಸ್ತ್ರ-ಶಸ್ತ್ರಗಳನ್ನು ಹಿಡಿದು ಕೊಂಡು ನಗರದಿಂದ ಹೊರಬಿದ್ದು ಧ್ರುವನನ್ನು ಮುತ್ತಿದರು. ॥7॥
(ಶ್ಲೋಕ - 8)
ಮೂಲಮ್
ಸ ತಾನಾಪತತೋ ವೀರ ಉಗ್ರಧನ್ವಾ ಮಹಾರಥಃ ।
ಏಕೈಕಂ ಯುಗಪತ್ಸರ್ವಾನಹನ್ ಬಾಣೈಸಿಭಿಸಿಭಿಃ ॥
ಅನುವಾದ
ಮಹಾರಥಿಯಾದ ಧ್ರುವನು ಪ್ರಚಂಡ ಧನುರ್ಧರನಾಗಿದ್ದನು. ಅವನು ಒಮ್ಮೆಗೆ ಬಾಣಪ್ರಯೋಗಮಾಡಿ ಆ ಯಕ್ಷರಲ್ಲಿ ಒಬ್ಬೊಬ್ಬರಿಗೂ ಮೂರು-ಮೂರು ಬಾಣಗಳನ್ನು ಹೊಡೆದನು. ॥8॥
(ಶ್ಲೋಕ - 9)
ಮೂಲಮ್
ತೇ ವೈ ಲಲಾಟಲಗ್ನೈಸ್ತೈರಿಷುಭಿಃ ಸರ್ವ ಏವ ಹಿ ।
ಮತ್ವಾ ನಿರಸ್ತಮಾತ್ಮಾನಮಾಶಂಸನ್ಕರ್ಮ ತಸ್ಯ ತತ್ ॥
ಅನುವಾದ
ತಮ್ಮಲ್ಲಿ ಪ್ರತಿಯೊಬ್ಬರ ತಲೆಗೆ ಮೂರು-ಮೂರು ಬಾಣಗಳು ನೆಟ್ಟಿರುವುದನ್ನು ನೋಡಿ ದಾಗಯಕ್ಷರಿಗೆ ಖಂಡಿತವಾಗಿಯೂ ಸೋತು ಹೋಗುವೆವು ಎಂಬ ವಿಶ್ವಾಸವುಂಟಾಯಿತು. ಧ್ರುವನ ಅದ್ಭುತ ಪರಾಕ್ರಮ ವನ್ನು ಅವರು ಪ್ರಶಂಸೆ ಮಾಡತೊಡಗಿದರು. ॥9॥
(ಶ್ಲೋಕ - 10)
ಮೂಲಮ್
ತೇಪಿ ಚಾಮುಮಮೃಷ್ಯಂತಃ ಪಾದಸ್ಪರ್ಶಮಿವೋರಗಾಃ ।
ಶರೈರವಿಧ್ಯನ್ ಯುಗಪದ್ ದ್ವಿಗುಣಂ ಪ್ರಚಿಕೀರ್ಷವಃ ॥
ಅನುವಾದ
ಸರ್ಪವು ಮತ್ತೊಬ್ಬರ ಕಾಲ್ತುಳಿತವನ್ನು ಸಹಿಸದೆ ಕೆರಳುವಂತೆ ಅವರೂ ಧ್ರುವನ ಪರಾಕ್ರಮವನ್ನು ಸಹಿಸಲಾರದೆ ಕೋಪದಿಂದ ಕೆರಳಿ ಅವನ ಬಾಣಗಳಿಗೆ ಉತ್ತರವಾಗಿ ಆತನ ಮೇಲೆ ಅವನ ಬಾಣಗಳಿಗೆ ಎರಡರಷ್ಟು ಬಾಣಗಳನ್ನು ಒಟ್ಟಿಗೆ ಪ್ರಯೋಗಿಸಿದರು. ॥10॥
(ಶ್ಲೋಕ - 11)
ಮೂಲಮ್
ತತಃ ಪರಿಘನಿಸಿಂಶೈಃ ಪ್ರಾಸಶೂಲಪರಶ್ವಧೈಃ ।
ಶಕ್ತ್ಯೃಷ್ಟಿಭಿರ್ಭುಶುಂಡೀಭಿಶ್ಚಿತ್ರವಾಜೈಃ ಶರೈರಪಿ ॥
(ಶ್ಲೋಕ - 12)
ಮೂಲಮ್
ಅಭ್ಯವರ್ಷನ್ಪ್ರಕುಪಿತಾಃ ಸರಥಂ ಸಹಸಾರಥಿಮ್ ।
ಇಚ್ಛಂತಸ್ತತ್ಪ್ರತೀಕರ್ತುಮಯುತಾನಿ ತ್ರಯೋದಶ ॥
ಅನುವಾದ
ಅಲ್ಲಿದ್ದ ಒಂದು ಲಕ್ಷದ ಮೂವತ್ತುಸಾವಿರ ಮಂದಿಯೂ ಒಟ್ಟಿಗೆ ಬಾಣ ಪ್ರಯೋಗ ಮಾಡಿದರು. ಧ್ರುವನ ಮೇಲೆ ಸೇಡುತೀರಿಸಿಕೊಳ್ಳಲು ಅವರು ಅತ್ಯಂತ ಕ್ರುದ್ಧರಾಗಿ ರಥ, ಸಾರಥಿಸಹಿತ ಅವನ ಮೇಲೆ ಪರಿಘ, ಖಡ್ಗ, ಪ್ರಾಸ, ತ್ರಿಶೂಲ, ಪರಶು, ಶಕ್ತಿ, ಋಷ್ಟಿ, ಭುಶುಂಡಿ ಮತ್ತು ಚಿತ್ರ-ವಿಚಿತ್ರವಾದ ಗರಿಕಟ್ಟಿದ ಬಾಣಗಳ ಮಳೆಯನ್ನೇ ಸುರಿಸಿದರು. ॥11-12॥
(ಶ್ಲೋಕ - 13)
ಮೂಲಮ್
ಔತ್ತಾನಪಾದಿಃ ಸ ತದಾ ಶಸವರ್ಷೇಣ ಭೂರಿಣಾ ।
ನ ಉಪಾದೃಶ್ಯ ತಚ್ಛನ್ನ ಆಸಾರೇಣ ಯಥಾ ಗಿರಿಃ ॥
ಅನುವಾದ
ಭಯಂಕರ ವಾದ ಬಾಣಗಳ ಮಳೆಯಲ್ಲಿ ಧ್ರುವನು ಪೂರ್ಣವಾಗಿ ಮುಚ್ಚಿಹೋದನು. ದೊಡ್ಡದಾದ ಮಳೆಯಿಂದ ಪರ್ವತವು ಕಾಣಿಸದಂತೆ ಆ ಬಾಣವರ್ಷದಿಂದ ಧ್ರುವನು ಕಾಣಿಸದಾದನು. ॥13॥
(ಶ್ಲೋಕ - 14)
ಮೂಲಮ್
ಹಾಹಾಕಾರಸ್ತದೈವಾಸೀತ್ಸಿದ್ಧಾನಾಂ ದಿವಿ ಪಶ್ಯತಾಮ್ ।
ಹತೋಯಂ ಮಾನವಃ ಸೂರ್ಯೋ ಮಗ್ನಃ ಪುಣ್ಯಜನಾರ್ಣವೇ ॥
ಅನುವಾದ
ಆಗ ಆಕಾಶದಲ್ಲಿದ್ದು ಆ ದೃಶ್ಯವನ್ನು ನೋಡುತ್ತಿದ್ದ ಸಿದ್ಧಗಡಣವು ‘ಹಾ! ಹಾ! ಈ ಮನುವಂಶದ ಸೂರ್ಯನು ಯಕ್ಷಸೇನೆಯೆಂಬ ಸಮುದ್ರದಲ್ಲಿ ಮುಳುಗಿ ಅಸ್ತಂಗತನಾದನಲ್ಲ!’ ಎಂದು ಗೋಳಾಡಿದರು. ॥14॥
(ಶ್ಲೋಕ - 15)
ಮೂಲಮ್
ನದತ್ಸು ಯಾತುಧಾನೇಷು ಜಯಕಾಶಿಷ್ವಥೋ ಮೃಧೇ ।
ಉದತಿಷ್ಠದ್ರಥಸ್ತಸ್ಯ ನೀಹಾರಾದಿವ ಭಾಸ್ಕರಃ ॥
ಅನುವಾದ
ಯಕ್ಷರು ತಮ್ಮ ವಿಜಯವನ್ನು ಘೋಷಿಸುತ್ತಾ ಯುದ್ಧಕ್ಷೇತ್ರ ದಲ್ಲಿ ಸಿಂಹದಂತೆ ಗರ್ಜಿಸತೊಡಗಿದರು. ಆದರೆ ಈ ನಡುವೆ ಸೂರ್ಯಭಗವಂತನು ಮಂಜನ್ನು ಭೇದಿಸಿಕೊಂಡು ಹೊರಬರುವಂತೆ ಧ್ರುವನು ರಥದೊಂದಿಗೆ ಇದ್ದಕ್ಕಿದ್ದಂತೆ ಹೊರಗೆ ಪ್ರಕಟನಾದನು. ॥15॥
(ಶ್ಲೋಕ - 16)
ಮೂಲಮ್
ಧನುರ್ವಿಸ್ಫೂರ್ಜಯನ್ದಿವ್ಯಂ ದ್ವಿಷತಾಂ ಖೇದಮುದ್ವಹನ್ ।
ಅಸೌಘಂ ವ್ಯಧಮದ್ಬಾಣೈರ್ಘನಾನೀಕಮಿವಾನಿಲಃ ॥
ಅನುವಾದ
ಧ್ರುವನು ತನ್ನ ದಿವ್ಯವಾದ ಧನುಸ್ಸನ್ನು ಟಂಕಾರಮಾಡಿ ಶತ್ರುಗಳ ಎದೆಯನ್ನು ನಡುಗಿಸಿಬಿಟ್ಟನು. ಪ್ರಚಂಡವಾದ ಬಾಣಗಳ ಮಳೆಯನ್ನೇ ಸುರಿಸಿ ಬಿರುಗಾಳಿಯು ಮೋಡಗಳನ್ನು ಚದುರಿಸಿ ಬಿಡುವಂತೆ ಅವರ ಅಸ್ತ್ರ-ಶಸ್ತ್ರಗಳನ್ನು ಛಿನ್ನ-ಭಿನ್ನವಾಗಿಸಿದನು. ॥16॥
(ಶ್ಲೋಕ - 17)
ಮೂಲಮ್
ತಸ್ಯ ತೇ ಚಾಪನಿರ್ಮುಕ್ತಾ ಭಿತ್ತ್ವಾ ವರ್ಮಾಣಿ ರಕ್ಷಸಾಮ್ ।
ಕಾಯಾನಾವಿವಿಶುಸ್ತಿಗ್ಮಾ ಗಿರೀನಶನಯೋ ಯಥಾ ॥
ಅನುವಾದ
ಆತನ ಧನುಸ್ಸಿನಿಂದ ಹೊರಟ ತೀಕ್ಷ್ಣವಾದ ಬಾಣಗಳು ಯಕ್ಷ-ರಾಕ್ಷಸರ ಕವಚ ಗಳನ್ನು ಭೇದಿಸಿ ಇಂದ್ರನು ಪ್ರಯೋಗಿಸಿದ ವಜ್ರವು ಪರ್ವತದೊಳಗೆ ನುಗ್ಗುವಂತೆ ಅವರ ಶರೀರದೊಳಗೆ ನುಗ್ಗಿದವು.॥17॥
(ಶ್ಲೋಕ - 18)
ಮೂಲಮ್
ಭಲ್ಲೈಃ ಸಂಛಿದ್ಯಮಾನಾನಾಂ ಶಿರೋಭಿಶ್ಚಾರುಕುಂಡಲೈಃ ।
ಊರುಭಿರ್ಹೇಮತಾಲಾಭೈರ್ದೋರ್ಭಿರ್ವಲಯವಲ್ಗುಭಿಃ ॥
(ಶ್ಲೋಕ - 19)
ಮೂಲಮ್
ಹಾರಕೇಯೂರಮುಕುಟೈರುಷ್ಣೀಷೈಶ್ಚ ಮಹಾಧನೈಃ ।
ಆಸ್ತೃತಾಸ್ತಾ ರಣಭುವೋ ರೇಜುರ್ವೀರಮನೋಹರಾಃ ॥
ಅನುವಾದ
ವಿದುರನೇ! ಧ್ರುವನ ಬಾಣಗಳಿಂದ ಕತ್ತರಿಸಲ್ಪಟ್ಟ ಯಕ್ಷರ ಸುಂದರವಾದ ಕುಂಡಲಸಹಿತವಾದ ತಲೆಗಳಿಂದಲೂ, ಸುವರ್ಣವರ್ಣವಾದ ತಾಳೆಮರದಂತಿರುವ ಮೊಣಕಾಲುಗಳಿಂದಲೂ, ಬಳೆಗಳಿಂದ ಭೂಷಿತವಾದ ಬಾಹುಗಳಿಂದಲೂ, ಹಾರಗಳು ತೋಳಬಂದಿಗಳು ಕಿರೀಟಗಳು ಮತ್ತು ಬಹುಮೂಲ್ಯವಾದ ರುಮಾಲುಗಳಿಂದಲೂ ನಿಬಿಡವಾಗಿ, ವೀರರಿಗೆ ಉತ್ಸಾಹ ವರ್ಧಕವಾದ ಆ ಯುದ್ಧ ಭೂಮಿಯು ಅತ್ಯಂತ ರಮಣೀಯವಾಗಿ ಕಾಣುತ್ತಿತ್ತು. ॥18-19॥
(ಶ್ಲೋಕ - 20)
ಮೂಲಮ್
ಹತಾವಶಿಷ್ಟಾ ಇತರೇ ರಣಾಜಿರಾದ್
ರಕ್ಷೋಗಣಾಃ ಕ್ಷತ್ರಿಯವರ್ಯಸಾಯಕೈಃ ।
ಪ್ರಾಯೋ ವಿವೃಕ್ಣಾವಯವಾ ವಿದುದ್ರುವು-
ರ್ಮೃಗೇಂದ್ರವಿಕ್ರೀಡಿತಯೂಥಪಾ ಇವ ॥
ಅನುವಾದ
ಅಳಿದುಳಿದ ಯಕ್ಷರು ಕ್ಷತ್ರಿಯಶ್ರೇಷ್ಠನಾದ ಧ್ರುವನ ಬಾಣಗಳಿಂದ ಅಂಗಗಳೆಲ್ಲ ಛಿನ್ನ-ಭಿನ್ನವಾಗಿದ್ದರಿಂದ ಸಿಂಹದೊಡನೆ ಸೆಣಸಿ ಸೋತ ಗಜರಾಜನಂತೆ ಭಯಗ್ರಸ್ತರಾಗಿ ರಣರಂಗದಿಂದ ಪಲಾಯನ ಮಾಡಿಬಿಟ್ಟಿದ್ದರು. ॥20॥
(ಶ್ಲೋಕ - 21)
ಮೂಲಮ್
ಅಪಶ್ಯಮಾನಃ ಸ ತದಾತತಾಯಿನಂ
ಮಹಾಮೃಧೇ ಕಂಚನ ಮಾನವೋತ್ತಮಃ ।
ಪುರೀಂ ದಿದೃಕ್ಷನ್ನಪಿ ನಾವಿಶದ್ವಷಾಂ
ನ ಮಾಯಿನಾಂ ವೇದ ಚಿಕೀರ್ಷಿತಂ ಜನಃ ॥
(ಶ್ಲೋಕ - 22)
ಮೂಲಮ್
ಇತಿ ಬ್ರುವನ್ಶ್ಚಿತ್ರರಥಃ ಸ್ವಸಾರಥಿಂ
ಯತ್ತಃ ಪರೇಷಾಂ ಪ್ರತಿಯೋಗಶಂಕಿತಃ ।
ಶುಶ್ರಾವ ಶಬ್ದಂ ಜಲಧೇರಿವೇರಿತಂ
ನಭಸ್ವತೋ ದಿಕ್ಷು ರಜೋನ್ವದೃಶ್ಯತ ॥
ಅನುವಾದ
ಆ ವಿಸ್ತಾರವಾದ ರಣಭೂಮಿಯಲ್ಲಿ ಅಸ್ತ್ರ-ಶಸ್ತ್ರಗಳನ್ನು ಹಿಡಿದಿದ್ದ ಶತ್ರುಗಳಲ್ಲಿ ಒಂದು ಪಿಳ್ಳೆಯು ಕಾಣದಿರಲು, ನರಶ್ರೇಷ್ಠನಾದ ಧ್ರುವನಿಗೆ ಅಲಕಾಪುರಿಯನ್ನು ನೋಡಬೇಕೆಂಬ ಬಯಕೆ ಉಂಟಾಯಿತು. ಆದರೆ ಅವನುಪುರದೊಳಗೆ ಹೋಗಲಿಲ್ಲ. ‘ಈ ಮಾಯಾವಿಗಳು ಏನು ಮಾಡಲು ಬಯಸುತ್ತಾರೋ ಎಂಬುದು ಮನುಷ್ಯರಿಗೆ ತಿಳಿಯುವುದಿಲ್ಲ’ ಎಂದು ಸಾರಥಿಗೆ ಹೇಳಿ ಆತನು ಆ ವಿಚಿತ್ರವಾದ ರಥದಲ್ಲಿಯೇ ಕುಳಿತುಕೊಂಡು, ಶತ್ರುಗಳು ಹೊಸದಾಗಿ ಆಕ್ರಮಣ ಮಾಡಬಹುದೆಂಬ ಆಶಂಕೆಯಿಂದ ಎಚ್ಚರವಾಗಿಯೇ ಇದ್ದನು. ಅಷ್ಟರಲ್ಲೇ ಅವನಿಗೆ ಸಮುದ್ರದ ಗರ್ಜನೆಯಂತೆ ಚಂಡಮಾರುತದ ಭಯಂಕರ ಶಬ್ದ ಕೇಳಿಬಂತು. ಎಲ್ಲ ದಿಕ್ಕುಗಳಲ್ಲಿಯೂ ಬಿರುಗಾಳಿ ಬೀಸತೊಡಗಿ ಧೂಳು ತುಂಬಿಹೋಯಿತು. ॥21-22॥
(ಶ್ಲೋಕ - 23)
ಮೂಲಮ್
ಕ್ಷಣೇನಾಚ್ಛಾದಿತಂ ವ್ಯೋಮ ಘನಾನೀಕೇನ ಸರ್ವತಃ ।
ವಿಸ್ಫುರತ್ತಡಿತಾ ದಿಕ್ಷು ತ್ರಾಸಯತ್ಸ್ತನಯಿತ್ನುನಾ ॥
ಅನುವಾದ
ಕ್ಷಣಕಾಲದಲ್ಲೇ ಇಡೀ ಆಕಾಶವು ಮೋಡಗಳ ಸಾಲು ಗಳಿಂದ ತುಂಬಿಹೋಯಿತು. ಎಲ್ಲೆಡೆ ಭಯಂಕರವಾದ ಬರಸಿಡಿಲುಗಳೊಡನೆ ಮಿಂಚುಗಳು ಥಳ-ಥಳಿಸ ತೊಡಗಿತು. ॥23॥
(ಶ್ಲೋಕ - 24)
ಮೂಲಮ್
ವವೃಷೂ ರುಧಿರೌಘಾಸೃಕ್ಪೂಯವಿಣ್ಮೂತ್ರಮೇದಸಃ ।
ನಿಪೇತುರ್ಗಗನಾದಸ್ಯ ಕಬಂಧಾನ್ಯಗ್ರತೋನಘ ॥
ಅನುವಾದ
ಪುಣ್ಯಾತ್ಮನಾದ ವಿದುರನೇ! ಮೋಡಗಳಿಂದ ರಕ್ತ, ಮಾಂಸ, ಕೀವು, ಮಲ-ಮೂತ್ರ, ಚರ್ಬಿ ಮುಂತಾದವುಗಳ ಮಳೆ ಸುರಿಯತೊಡಗಿತು. ಅನೇಕ ತಲೆಯಿಲ್ಲದ ದೇಹಗಳು ಮುಗಿಲಿನಿಂದ ಧ್ರುವನ ಮುಂದೆಯೇ ಬೀಳ ತೊಡಗಿದವು. ॥24॥
(ಶ್ಲೋಕ - 25)
ಮೂಲಮ್
ತತಃ ಖೇದೃಶ್ಯತ ಗಿರಿರ್ನಿಪೇತುಃ ಸರ್ವತೋದಿಶಮ್ ।
ಗದಾಪರಿಘನಿಸಿಂಶಮುಸಲಾಃ ಸಾಶ್ಮವರ್ಷಿಣಃ ॥
ಅನುವಾದ
ಮತ್ತೆ ಆಕಾಶದಲ್ಲಿ ಒಂದು ಪರ್ವತವು ಕಾಣಿಸಿಕೊಂಡು ಎಲ್ಲ ದಿಕ್ಕುಗಳಿಂದಲೂ ಕಲ್ಲುಗಳ ಮಳೆಯೇ ಸುರಿಯತೊಡಗಿತು. ಜೊತೆಗೆ ಗದೆಗಳು, ಪರಿಘಗಳು, ಕತ್ತಿಗಳು, ಒನಕೆಗಳು ಬೀಳತೊಡಗಿದವು. ॥25॥
(ಶ್ಲೋಕ - 26)
ಮೂಲಮ್
ಅಹಯೋಶನಿನಿಃಶ್ವಾಸಾ ವಮಂತೋಗ್ನಿಂ ರುಷಾಕ್ಷಿಭಿಃ ।
ಅಭ್ಯಧಾವನ್ಗಜಾ ಮತ್ತಾಃ ಸಿಂಹವ್ಯಾಘ್ರಾಶ್ಚ ಯೂಥಶಃ ॥
ಅನುವಾದ
ಸಾವಿರಾರು ಸರ್ಪಗಳು ಸಿಡಿಲಿನಂತೆ ಬುಸುಗುಟ್ಟುತ್ತಾ ರೋಷಪೂರ್ಣವಾದ ಕಣ್ಣುಗಳಿಂದ ಕೆಂಡಗಳನ್ನು ಕಾರು ತ್ತಿರುವುದು ಕಾಣಿಸಿತು. ಮದಿಸಿದ ಆನೆಗಳು, ಸಿಂಹಗಳು, ಹುಲಿಗಳು, ಹಿಂಡು-ಹಿಂಡಾಗಿ ಓಡೋಡಿಬರುತ್ತಿರುವುದು ಗೋಚರಿಸಿತು.॥26॥
(ಶ್ಲೋಕ - 27)
ಮೂಲಮ್
ಸಮುದ್ರ ಊರ್ಮಿಭಿರ್ಭೀಮಃ ಪ್ಲಾವಯನ್ಸರ್ವತೋ ಭುವಮ್ ।
ಆಸಸಾದ ಮಹಾಹ್ರಾದಃ ಕಲ್ಪಾಂತ ಇವ ಭೀಷಣಃ ॥
ಅನುವಾದ
ಸಮುದ್ರಗಳು ಪ್ರಳಯ ಕಾಲದಂತೆ ಭೀಕರವಾಗಿ ಭೋರ್ಗರೆಯುತ್ತಾ ಮುಗಿಲೆತ್ತರದ ಅಲೆಗಳಿಂದ ಎಲ್ಲ ಕಡೆಗಳಿಂದಲೂ ಭೂಮಿಯನ್ನು ಮುಳುಗಿಸುತ್ತಾ ಬರುತ್ತಿರುವಂತೆ ಕಾಣಿಸಿತು. ॥27॥
(ಶ್ಲೋಕ - 28)
ಮೂಲಮ್
ಏವಂ ವಿಧಾನ್ಯನೇಕಾನಿ ತ್ರಾಸನಾನ್ಯಮನಸ್ವಿನಾಮ್ ।
ಸಸೃಜುಸ್ತಿಗ್ಮಗತಯ ಆಸುರ್ಯಾ ಮಾಯಯಾಸುರಾಃ ॥
ಅನುವಾದ
ಕ್ರೂರಿಗಳಾದ ಅಸುರರು ತಮ್ಮ ಆಸುರೀ ಮಾಯೆಯಿಂದ ಹೇಡಿಗಳ ಹೃದಯ ನಡುಗಿಸುವಂತಹ ಅನೇಕ ಉತ್ಪಾತಗಳನ್ನು ತೋರಿದರು. ॥28॥
(ಶ್ಲೋಕ - 29)
ಮೂಲಮ್
ಧ್ರುವೇ ಪ್ರಯುಕ್ತಾಮಸುರೈಸ್ತಾಂ ಮಾಯಾಮತಿದುಸ್ತರಾಮ್ ।
ನಿಶಾಮ್ಯ ತಸ್ಯ ಮುನಯಃ ಶಮಾಶಂಸನ್ಸಮಾಗತಾಃ ॥
ಅನುವಾದ
ಧ್ರುವನ ಮೇಲೆ ಅಸುರರು ದುಸ್ತರವಾದ ಮಾಯೆಯನ್ನು ಸೃಷ್ಟಿಸುತ್ತಿದ್ದಾರೆ ಎಂಬುದನ್ನು ಕೇಳಿ ಮುನಿಗಳು ಅಲ್ಲಿಗೆ ಬಂದು ಆತನಿಗೆ ಮಂಗಳವನ್ನು ಹಾರೈಸಿದರು. ॥29॥
(ಶ್ಲೋಕ - 30)
ಮೂಲಮ್ (ವಾಚನಮ್)
ಮುನಯ ಊಚುಃ
ಮೂಲಮ್
ಔತ್ತಾನಪಾದೇ ಭಗವಾನ್ಸ್ತವ ಶಾರ್ಙ್ಗಧನ್ವಾ
ದೇವಃ ಕ್ಷಿಣೋತ್ವವನತಾರ್ತಿಹರೋ ವಿಪಕ್ಷಾನ್ ।
ಯನ್ನಾಮಧೇಯಮಭಿಧಾಯ ನಿಶಮ್ಯ ಚಾದ್ಧಾ
ಲೋಕೋಂಜಸಾ ತರತಿ ದುಸ್ತರಮಂಗ ಮೃತ್ಯುಮ್ ॥
ಅನುವಾದ
ಮುನಿಗಳು ಹೇಳುತ್ತಾರೆ ಉತ್ತಾನಪಾದನ ಸುಪುತ್ರನೇ! ಧ್ರುವನೇ! ಶರಣಾಗತರ ಭಯವನ್ನು ಭಂಜಿಸುವ ಶಾರ್ಙ್ಗಪಾಣಿ ಭಗವಾನ್ ನಾರಾಯಣನು ನಿನ್ನ ಶತ್ರುಗಳನ್ನು ಸಂಹರಿಸಲಿ. ಶ್ರೀಭಗವಂತನ ನಾಮವನ್ನು ಕೇಳಿದ್ದರಿಂದ, ಕೀರ್ತಿಸುವುದರಿಂದ ಮನುಷ್ಯನು ದುಸ್ತರವಾದ ಮೃತ್ಯು ವನ್ನು ಆಯಾಸವಿಲ್ಲದೆ ಬೇಗನೇ ದಾಟಿಬಿಡುವನು ॥30॥
ಅನುವಾದ (ಸಮಾಪ್ತಿಃ)
ಹತ್ತನೆಯ ಅಧ್ಯಾಯವು ಮುಗಿಯಿತು. ॥10॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಚತುರ್ಥಸ್ಕಂಧೇ ದಶಮೋಽಧ್ಯಾಯಃ ॥10॥