[ಒಂಭತ್ತನೆಯ ಅಧ್ಯಾಯ]
ಭಾಗಸೂಚನಾ
ಧ್ರುವನು ವರವನ್ನು ಪಡೆದು ಹಿಂದಿರುಗಿದುದು
(ಶ್ಲೋಕ - 1)
ಮೂಲಮ್ (ವಾಚನಮ್)
ಮೈತ್ರೇಯ ಉವಾಚ
ಮೂಲಮ್
ತ ಏವಮುತ್ಸನ್ನಭಯಾ ಉರುಕ್ರಮೇ
ಕೃತಾವನಾಮಾಃ ಪ್ರಯಯುಸಿವಿಷ್ಟಪಮ್ ।
ಸಹಸ್ರ ಶೀರ್ಷಾಪಿ ತತೋ ಗರುತ್ಮತಾ
ಮಧೋರ್ವನಂ ಭೃತ್ಯದಿದೃಕ್ಷಯಾ ಗತಃ ॥
ಅನುವಾದ
ಶ್ರೀಮೈತ್ರೇಯರು ಹೇಳಿದರು — ಎಲೈ ವಿದುರನೇ! ಶ್ರೀ ಭಗವಂತನ ಆಶ್ವಾಸನೆಯಿಂದ, ಅಭಯಪ್ರದಾನದಿಂದ ದೇವತೆಗಳು ಭಯವನ್ನು ತೊರೆದು ದೇವದೇವನಿಗೆ ವಂದಿಸಿ ಸ್ವರ್ಗಲೋಕಕ್ಕೆ ಹೊರಟುಹೋದರು. ಅನಂತರ ವಿರಾಟ್ ಸ್ವರೂಪಿ ಭಗವಂತನು ಗರುಡನನ್ನೇರಿ ತನ್ನ ಭಕ್ತನನ್ನು ನೋಡಲು ಮಧುವನಕ್ಕೆ ದಯಮಾಡಿಸಿದನು. ॥1॥
(ಶ್ಲೋಕ - 2)
ಮೂಲಮ್
ಸ ವೈ ಧಿಯಾ ಯೋಗವಿಪಾಕತೀವ್ರಯಾ
ಹೃತ್ಪದ್ಮಕೋಶೇ ಸ್ಫುರಿತಂ ತಡಿತ್ಪ್ರಭಮ್ ।
ತಿರೋಹಿತಂ ಸಹಸೈವೋಪಲಕ್ಷ್ಯ
ಬಹಿಃಸ್ಥಿತಂ ತದವಸ್ಥಂ ದದರ್ಶ ॥
ಅನುವಾದ
ಆಗ ಯೋಗಾಭ್ಯಾಸದಿಂದ ಏಕಾಗ್ರವಾಗಿದ್ದ ಬುದ್ಧಿಯಿಂದ ಮಿಂಚಿನಂತೆ ಹೊಳೆಯುತ್ತಿದ್ದ ಯಾವ ಭಗವನ್ಮೂರ್ತಿಯನ್ನು ಧ್ರುವನು ಹೃದಯಕಮಲದಲ್ಲಿ ಧ್ಯಾನಿಸುತ್ತಿದ್ದನೋ ಆ ಮೂರ್ತಿಯು ಇದ್ದಕ್ಕಿದ್ದಂತೆ ಕಣ್ಮರೆಯಾಯಿತು. ‘ಇದೇನು ಹೀಗಾಯಿತಲ್ಲ! ಎಂದು ಅವನು ಕಣ್ಣುತೆರೆದಾಗ ಅದೇ ಭಗವದ್ರೂಪವೇ ಕಣ್ಣುಗಳ ಮುಂದೆ ನಿಂತಿರುವುದು ಆತನಿಗೆ ಗೋಚರಿಸಿತು. ॥2॥
(ಶ್ಲೋಕ - 3)
ಮೂಲಮ್
ತದ್ದರ್ಶನೇನಾಗತಸಾಧ್ವಸಃ ಕ್ಷಿತಾ-
ವವಂದತಾಂಗಂ ವಿನಮಯ್ಯ ದಂಡವತ್ ।
ದೃಗ್ಭ್ಯಾಂ ಪ್ರಪಶ್ಯನ್ಪ್ರಪಿಬನ್ನಿವಾರ್ಭಕ-
ಶ್ಚುಂಬನ್ನಿವಾಸ್ಯೇನ ಭುಜೈರಿವಾಶ್ಲಿ ಷನ್ ॥
ಅನುವಾದ
ಪ್ರಭುವಿನ ದರ್ಶನಪಡೆದು ಬಾಲಕ ಧ್ರುವನಿಗೆ ಅತೀವ ಸಂಭ್ರಮವಾಯಿತು. ಅವನು ಪ್ರೇಮದಲ್ಲಿ ಮೈಮರೆತು, ಸ್ವಾಮಿಗೆ ದೀರ್ಘದಂಡ ಪ್ರಣಾಮಮಾಡಿದನು. ಮತ್ತೆ ಆ ಸುಂದರಮೂರ್ತಿಯನ್ನು ಕಣ್ಣುಗಳಿಂದ ಕುಡಿದುಬಿಡುವನೋ, ಬಾಯಿಂದ ಮುತ್ತಿಕ್ಕುತ್ತಿರುವನೋ, ಭುಜಗಳಿಂದ ಆಲಿಂಗಿಸುತ್ತಿರುವನೋ ಎಂಬಂತೆ ಪ್ರೇಮ ಪೂರ್ಣವಾದ ದೃಷ್ಟಿಯಿಂದ ಎವೆಯಿಕ್ಕದೆ ನೋಡ ತೊಡಗಿದನು. ॥3॥
(ಶ್ಲೋಕ - 4)
ಮೂಲಮ್
ಸ ತಂ ವಿವಕ್ಷಂತಮತದ್ವಿದಂ ಹರಿಃ
ಜ್ಞಾತ್ವಾಸ್ಯ ಸರ್ವಸ್ಯ ಚ ಹೃದ್ಯವಸ್ಥಿತಃ ।
ಕೃತಾಂಜಲಿಂ ಬ್ರಹ್ಮ ಮಯೇನ ಕಂಬುನಾ
ಪಸ್ಪರ್ಶ ಬಾಲಂ ಕೃಪಯಾ ಕಪೋಲೇ ॥
ಅನುವಾದ
ಅವನು ಕೈಜೋಡಿಸಿಕೊಂಡು ಸ್ವಾಮಿಯ ಎದುರಿಗೆ ನಿಂತಿದ್ದನು. ಅವನನ್ನು ಸ್ತುತಿಸ ಬೇಕೆಂದು ಬಯಸುತ್ತಿದ್ದನು. ಆದರೆ ಹೇಗೆ ಸ್ತುತಿಸಬೇಕೆಂದು ತಿಳಿಯದಾದನು. ಸರ್ವಾಂತರ್ಯಾಮಿ ಶ್ರೀಹರಿಯು ಅವನ ಮನಸ್ಸಿನ ಬಯಕೆಯನ್ನು ತಿಳಿದುಕೊಂಡು ಕೃಪೆಯಿಂದ ತನ್ನ ವೇದಮಯ ಶಂಖವನ್ನು ಅವನ ಗಲ್ಲಕ್ಕೆ ಮುಟ್ಟಿಸಿದನು. ॥4॥
(ಶ್ಲೋಕ - 5)
ಮೂಲಮ್
ಸ ವೈ ತದೈವ ಪ್ರತಿಪಾದಿತಾಂ ಗಿರಂ
ದೈವೀಂ ಪರಿಜ್ಞಾತಪರಾತ್ಮ ನಿರ್ಣಯಃ ।
ತಂ ಭಕ್ತಿಭಾವೋಭ್ಯಗೃಣಾದಸತ್ವರಂ
ಪರಿಶ್ರುತೋರುಶ್ರವಸಂ ಧ್ರುವಕ್ಷಿತಿಃ ॥
ಅನುವಾದ
ಧ್ರುವನು ಭವಿಷ್ಯದಲ್ಲಿ ಅವಿಚಲ ಪದವನ್ನು ಪಡೆಯುವವ ನಿದ್ದನು. ಈಗ ಭಗವಂತನ ಪಾಂಚಜನ್ಯ ಶಂಖದ ಸ್ಪರ್ಶ ವಾಗುತ್ತಲೇ ಅವನಿಗೆ ವೇದಮಯ ದಿವ್ಯವಾಣಿಯು ಪ್ರಾಪ್ತವಾಯಿತು. ಜೀವ-ಬ್ರಹ್ಮರ ಸ್ವರೂಪದ ನಿಶ್ಚಯ ಜ್ಞಾನವೂ ಉಂಟಾಯಿತು. ಅವನು ಅತ್ಯಂತ ಭಕ್ತಿಭಾವದಿಂದೊಡಗೂಡಿ ಧೈರ್ಯದಿಂದ ವಿಶ್ವವಿಖ್ಯಾತ ಕೀರ್ತಿಯುಳ್ಳ ಶ್ರೀಹರಿಯನ್ನು ಸ್ತುತಿಸತೊಡಗಿದನು. ॥5॥
(ಶ್ಲೋಕ - 6)
ಮೂಲಮ್ (ವಾಚನಮ್)
ಧ್ರುವ ಉವಾಚ
ಮೂಲಮ್
ಯೋಂತಃ ಪ್ರವಿಶ್ಯ ಮಮ ವಾಚಮಿಮಾಂ ಪ್ರಸುಪ್ತಾಂ
ಸಂಜೀವಯತ್ಯಖಿಲಶಕ್ತಿಧರಃ ಸ್ವಧಾಮ್ನಾ ।
ಅನ್ಯಾಂಶ್ಚ ಹಸ್ತಚರಣಶ್ರವಣತ್ವಗಾದೀನ್
ಪ್ರಾಣಾನ್ನಮೋ ಭಗವತೇ ಪುರುಷಾಯ ತುಭ್ಯಮ್ ॥
ಅನುವಾದ
ಧ್ರುವನು ಹೇಳಿದನು — ಸ್ವಾಮಿಯೇ! ನೀನು ಸರ್ವಶಕ್ತಿ ಸಂಪನ್ನನಾಗಿರುವೆ. ನೀನೇ ನನ್ನೊಳಗೆ ಪ್ರವೇಶಿಸಿ ನನ್ನ ಸುಪ್ತವಾದ ವಾಣಿಯನ್ನು ನಿನ್ನ ತೇಜಸ್ಸಿನಿಂದ ಉಜ್ಜೀವನಗೊಳಿಸುತ್ತೀಯೆ. ಹಾಗೆಯೇ ಕೈ-ಕಾಲು-ಕಿವಿ-ಚರ್ಮ ಮುಂತಾದ ಇತರ ಇಂದ್ರಿಯಗಳಿಗೂ, ಪ್ರಾಣಗಳಿಗೂ ಚೈತನ್ಯವನ್ನು ಕೊಡುತ್ತಿರುವೆ. ಇಂತಹ ಅಂತರ್ಯಾಮಿ ಭಗವಂತನಾದ ನಿನಗೆ ನಮೋ ನಮಃ ॥6॥
(ಶ್ಲೋಕ - 7)
ಮೂಲಮ್
ಏಕಸ್ತ್ವಮೇವ ಭಗವನ್ನಿದಮಾತ್ಮಶಕ್ತ್ಯಾ
ಮಾಯಾಖ್ಯಯೋರುಗುಣಯಾ ಮಹದಾದ್ಯಶೇಷಮ್ ।
ಸೃಷ್ಟ್ವಾನುವಿಶ್ಯ ಪುರುಷಸ್ತದಸದ್ಗುಣೇಷು
ನಾನೇವ ದಾರುಷು ವಿಭಾವಸುವದ್ವಿಭಾಸಿ ॥
ಅನುವಾದ
ಭಗವಂತನೇ! ನೀನು ಒಬ್ಬನೇ ಆಗಿದ್ದರೂ ಅನಂತಗುಣಮಯಿ ನಿನ್ನ ಮಾಯಾಶಕ್ತಿಯಿಂದ ಈ ಮಹತ್ತೇ ಮುಂತಾದ ಸಮಸ್ತ ಪ್ರಪಂಚವನ್ನು ರಚಿಸಿ, ಅಂತರ್ಯಾಮಿಯಾಗಿ ಅದರಲ್ಲಿ ಒಳಹೊಕ್ಕಿರುವೆ. ಬಗೆ-ಬಗೆಯ ಕಟ್ಟಿಗೆಗಳಲ್ಲಿ ಪ್ರಕಟಗೊಳ್ಳುವ ಅಗ್ನಿಯು ತನ್ನ ಉಪಾಧಿಗಳಿಗನುಸಾರವಾಗಿ ಭಿನ್ನ-ಭಿನ್ನರೂಪವಾಗಿ ಕಾಣುವಂತೆ ನೀನು ಇಂದ್ರಿಯಾದಿ ಅಸದ್ಗುಣಗಳಲ್ಲಿ ಅವುಗಳ ಅಧಿಷ್ಠಾತೃ ದೇವತೆಗಳ ರೂಪದಲ್ಲಿದ್ದು ಅನೇಕರೂಪವಾಗಿ ಕಾಣಿಸಿಕೊಳ್ಳುತ್ತಿರುವೆ. ॥7॥
(ಶ್ಲೋಕ - 8)
ಮೂಲಮ್
ತ್ವದ್ದತ್ತಯಾ ವಯುನಯೇದಮಚಷ್ಟ ವಿಶ್ವಂ
ಸುಪ್ತಪ್ರಬುದ್ಧ ಇವ ನಾಥ ಭವತ್ಪ್ರಪನ್ನಃ ।
ತಸ್ಯಾಪವರ್ಗ್ಯಶರಣಂ ತವ ಪಾದಮೂಲಂ
ವಿಸ್ಮರ್ಯತೇ ಕೃತವಿದಾ ಕಥಮಾರ್ತಬಂಧೋ ॥
ಅನುವಾದ
ಒಡೆಯಾ! ಬ್ರಹ್ಮದೇವರು ಕೂಡ ನಿನ್ನಲ್ಲಿ ಶರಣಾಗಿ ಸೃಷ್ಟಿಯ ಪ್ರಾರಂಭದಲ್ಲಿ ನೀನೇ ದಯಪಾಲಿಸಿದ ಜ್ಞಾನದ ಪ್ರಭಾವದಿಂದಲೇ ಈ ಜಗತ್ತನ್ನು ನಿದ್ರೆಯಿಂದ ಎಚ್ಚತ್ತ ಪುರುಷನಂತೆ ಕಂಡರು. ದೀನಬಂಧುವೇ! ಮುಕ್ತ ಪುರುಷರೂ ಕೂಡ ನಿನ್ನ ಚರಣ ಕಮಲಗಳನ್ನು ಆಶ್ರಯಿಸುತ್ತಾರೆ. ಅಂತಹ ಪಾದಕಮಲಗಳನ್ನು ಕೃತಜ್ಞನಾದವರೂ ಯಾರು ತಾನೇ ಮರೆಯಬಲ್ಲರು? ॥8॥
(ಶ್ಲೋಕ - 9)
ಮೂಲಮ್
ನೂನಂ ವಿಮುಷ್ಟಮತಯಸ್ತವ ಮಾಯಯಾ ತೇ
ಯೇ ತ್ವಾಂ ಭವಾಪ್ಯಯವಿಮೋಕ್ಷಣಮನ್ಯಹೇತೋಃ ।
ಅರ್ಚಂತಿ ಕಲ್ಪಕತರುಂ ಕುಣಪೋಪಭೋಗ್ಯ-
ಮಿಚ್ಛಂತಿ ಯತ್ಸ್ಪರ್ಶಜಂ ನಿರಯೇಪಿ ನೃಣಾಮ್ ॥
ಅನುವಾದ
ಶವಕ್ಕೆ ಸಮವಾದ ಈ ಶರೀರಗಳ ಮೂಲಕ ಅನುಭವಿಸಲ್ಪಡುವ, ಇಂದ್ರಿಯಗಳ ಮತ್ತು ಅವುಗಳ ವಿಷಯಗಳ ಸಂಸರ್ಗದಿಂದ ಉಂಟಾಗುವ ಸುಖವು ಮನುಷ್ಯರಿಗೆ ನರಕದಲ್ಲಿಯೂ ದೊರೆಯಬಲ್ಲದು. ಇಂತಹ ವಿಷಯಸುಖಗಳಿಗಾಗಿ ಹಾತೊರೆಯುವವರು ಹುಟ್ಟು-ಸಾವುಗಳ ಕಟ್ಟಿನಿಂದ ಬಿಡುಗಡೆಗೊಳಿಸುವ ಕಲ್ಪತರು ವಿನಂತಿರುವ ನಿನ್ನ ಉಪಾಸನೆಯನ್ನು, ನಿನ್ನ ಪ್ರಾಪ್ತಿಯನ್ನು ಬಿಟ್ಚು ಇತರ ಉದ್ದೇಶಗಳಿಗಾಗಿ ಮಾಡುವಂತಹವರ ಬುದ್ಧಿಯು ನಿಜವಾಗಿ ನಿನ್ನ ಮಾಯೆಯಿಂದ ಮೋಸಹೋಗಿದೆ ಎಂದೇ ತಿಳಿಯ ಬೇಕು. ॥9॥
(ಶ್ಲೋಕ - 10)
ಮೂಲಮ್
ಯಾ ನಿರ್ವೃತಿಸ್ತನುಭೃತಾಂ ತವ ಪಾದಪದ್ಮ-
ಧ್ಯಾನಾದ್ಭವಜ್ಜನಕಥಾಶ್ರವಣೇನ ವಾ ಸ್ಯಾತ್ ।
ಸಾ ಬ್ರಹ್ಮಣಿ ಸ್ವಮಹಿಮನ್ಯಪಿ ನಾಥ ಮಾ ಭೂತ್
ಕಿಂ ತ್ವಂತಕಾಸಿಲುಲಿತಾತ್ಪತತಾಂ ವಿಮಾನಾತ್ ॥
ಅನುವಾದ
ಸ್ವಾಮಿಯೇ! ನಿನ್ನ ಚರಣಕಮಲಗಳ ಧ್ಯಾನದಿಂದ ಮತ್ತು ನಿನ್ನ ಭಕ್ತರ ಪವಿತ್ರ ಚರಿತ್ರಗಳನ್ನು ಕೇಳುವುದರಿಂದ ಪ್ರಾಣಿಗಳಿಗೆ ದೊರೆಯುವ ಆನಂದವು ನಿಜಾನಂದಸ್ವರೂಪವಾದ ಬ್ರಹ್ಮನಲ್ಲಿಯೂ ಸಿಕ್ಕುವುದಿಲ್ಲ. ಹೀಗಿರುವಾಗ ಕಾಲದ ಕತ್ತಿಯಿಂದ ಕತ್ತರಿಸಲ್ಪಡುವ ಸ್ವರ್ಗದ ವಿಮಾನಗಳಿಂದ ಕೆಳಗೆ ಬೀಳುವಂತಹ ಜನರಿಗೆ ಆ ಸುಖವು ಹೇಗೆ ದೊರೆಯಬಲ್ಲದು? ॥10॥
(ಶ್ಲೋಕ - 11)
ಮೂಲಮ್
ಭಕ್ತಿಂ ಮುಹುಃ ಪ್ರವಹತಾಂ ತ್ವಯಿ ಮೇ ಪ್ರಸಂಗೋ
ಭೂಯಾದನಂತ ಮಹತಾಮಮಲಾಶಯಾನಾಮ್ ।
ಯೇನಾಂಜಸೋಲ್ಬಣಮುರುವ್ಯಸನಂ ಭವಾಬ್ಧಿಂ
ನೇಷ್ಯೇ ಭವದ್ಗುಣಕಥಾಮೃತಪಾನಮತ್ತಃ ॥
ಅನುವಾದ
ಓ ಅನಂತನೇ! ನಿನ್ನಲ್ಲಿ ಅವಿಚ್ಛಿನ್ನವಾದ ಭಕ್ತಿಭಾವವುಳ್ಳ ಶುದ್ಧಹೃದಯರಾದ ಮಹಾತ್ಮಾಭಕ್ತರ ಸಂಗವನ್ನು ನನಗೆ ಕರುಣಿಸು. ಅವರ ಸಂಗದಲ್ಲಿದ್ದು ನಾನು ನಿನ್ನ ಲೀಲಾ-ಗುಣಗಳ ಕಥಾಮೃತವನ್ನು ಕುಡಿ-ಕುಡಿದು ಮತ್ತನಾಗಿ ದುಃಖಪೂರ್ಣವಾದ ಭಯಂಕರ ಸಂಸಾರಸಾಗರವನ್ನು ದಾಟಿಬಿಡುವೆನು. ॥11॥
(ಶ್ಲೋಕ - 12)
ಮೂಲಮ್
ತೇ ನ ಸ್ಮರಂತ್ಯತಿತರಾಂ ಪ್ರಿಯಮೀಶ ಮರ್ತ್ಯಂ
ಯೇ ಚಾನ್ವದಃ ಸುತಸುಹೃದ್ಗೃಹವಿತ್ತದಾರಾಃ ।
ಯೇ ತ್ವಬ್ಜನಾಭ ಭವದೀಯಪದಾರವಿಂದ-
ಸೌಗಂಧ್ಯಲುಬ್ಧಹೃದಯೇಷು ಕೃತಪ್ರಸಂಗಾಃ ॥
ಅನುವಾದ
ಓ ಪದ್ಮನಾಭ ಪ್ರಭುವೇ! ನಿನ್ನ ಚರಣ ಕಮಲಗಳ ಸುಗಂಧದಲ್ಲೇ ರಮಿಸುವ ಚಿತ್ತವುಳ್ಳ ಮಹಾನುಭಾವರ ಸಂಗಮಾಡುವವರಿಗೆ ತಮ್ಮ ಈ ಅತ್ಯಂತ ಪ್ರಿಯ ಶರೀರ ಮತ್ತು ಇದರ ಸಂಬಂಧೀ ಪುತ್ರ, ಮಿತ್ರ, ಗೃಹ, ಪತ್ನೀ ಮುಂತಾದವರ ನೆನಪೂ ಕೂಡ ಇರುವುದಿಲ್ಲ. ॥12॥
(ಶ್ಲೋಕ - 13)
ಮೂಲಮ್
ತಿರ್ಯಙ್ನಗದ್ವಿಜಸರೀಸೃಪದೇವದೈತ್ಯ-
ಮರ್ತ್ಯಾದಿಭಿಃ ಪರಿಚಿತಂ ಸದಸದ್ವಿಶೇಷಮ್ ।
ರೂಪಂ ಸ್ಥವಿಷ್ಠಮಜ ತೇ ಮಹದಾದ್ಯನೇಕಂ
ನಾತಃ ಪರಂ ಪರಮ ವೇದ್ಮಿ ನ ಯತ್ರ ವಾದಃ ॥
ಅನುವಾದ
ಜನ್ಮರಹಿತನಾದ ಜಗತ್ಪತಿಯೇ! ಪಶು, ಪಕ್ಷಿ, ವೃಕ್ಷ, ಪರ್ವತ, ಸರೀಸೃಪ, ದೇವತೆಗಳು, ದೈತ್ಯರು, ಮನುಷ್ಯರು ಮುಂತಾದವುಗಳಿಂದ ತುಂಬಿದ ಈ ಸದಸದಾತ್ಮಕವಾದ ಸ್ಥೂಲವಿಶ್ವವನ್ನು ಮಾತ್ರ ನಾನು ತಿಳಿದಿರುವೆನು. ಇದರಿಂದ ಹೊರತಾದ ಮಾತು-ಮನಸ್ಸು ತಲುಪಲಾರದ ನಿನ್ನ ಪರಮಸ್ವರೂಪವನ್ನು ತಿಳಿಯಲಾರೆನು. ॥13॥
(ಶ್ಲೋಕ - 14)
ಮೂಲಮ್
ಕಲ್ಪಾಂತ ಏತದಖಿಲಂ ಜಠರೇಣ ಗೃಹ್ಣನ್
ಶೇತೇ ಪುಮಾನ್ ಸ್ವದೃಗನಂತಸಖಸ್ತದಂಕೇ ।
ಯನ್ನಾಭಿಸಿಂಧುರುಹಕಾಂಚನಲೋಕಪದ್ಮ-
ಗರ್ಭೇ ದ್ಯುಮಾನ್ ಭಗವತೇ ಪ್ರಣತೋಸ್ಮಿ ತಸ್ಮೈ ॥
ಅನುವಾದ
ಕಲ್ಪಾಂತ್ಯದಲ್ಲಿ ಪರಮಪುರುಷನಾದ ನೀನು ಯೋಗನಿದ್ರೆ ಯಲ್ಲಿದ್ದು ಇಡೀ ವಿಶ್ವವನ್ನು ಉದರದಲ್ಲಿ ಅಡಗಿಸಿಕೊಂಡು ಆದಿಶೇಷನ ಮಡಿಲಲ್ಲಿ ಮಲಗುತ್ತೀಯೆ. ಆಗ ನಿನ್ನ ನಾಭಿಸಮುದ್ರದಿಂದ ಪ್ರಕಟವಾದ, ಸರ್ವಲೋಕಮಯ ಸುವರ್ಣ ಕಮಲದಿಂದ ಪರಮ ತೇಜೋಮಯ ಬ್ರಹ್ಮದೇವರು ಉತ್ಪನ್ನರಾದರು. ಇಂತಹ ಮಹಾಮಹಿಮ ನಾದ ನಿನಗೆ ವಂದಿಸುತ್ತೇನೆ.॥14॥
(ಶ್ಲೋಕ - 15)
ಮೂಲಮ್
ತ್ವಂ ನಿತ್ಯಮುಕ್ತಪರಿಶುದ್ಧವಿಬುದ್ಧ ಆತ್ಮಾ
ಕೂಟಸ್ಥ ಆದಿಪುರುಷೋ ಭಗವಾಂಸ್ಯಧೀಶಃ ।
ಯದ್ಬುದ್ಧ್ಯವಸ್ಥಿತಿಮಖಂಡಿತಯಾ ಸ್ವದೃಷ್ಟ್ಯಾ
ದ್ರಷ್ಟಾ ಸ್ಥಿತಾವಧಿಮಖೋ ವ್ಯತಿರಿಕ್ತ ಆಸ್ಸೇ ॥
ಅನುವಾದ
ಪ್ರಭೋ! ನೀನು ನಿನ್ನ ಅಖಂಡ ಚಿನ್ಮಯೀ ದೃಷ್ಟಿಯಿಂದ ಬುದ್ಧಿಯ ಎಲ್ಲ ಅವಸ್ಥೆಗಳ ಸಾಕ್ಷಿಯಾಗಿರುವೆ. ಹಾಗೆಯೇ ನಿತ್ಯ ಮುಕ್ತನೂ, ಶುದ್ಧಸತ್ತ್ವಮಯನೂ, ಸರ್ವಜ್ಞನೂ, ಪರಮಾತ್ಮ ಸ್ವರೂಪನೂ, ನಿರ್ವಿಕಾರನೂ, ಆದಿಪುರುಷನೂ, ಷಡೈಶ್ವರ್ಯ ಸಂಪನ್ನನೂ, ಮೂರುಗುಣಗಳ ಅಧೀಶ್ವರನೂ ಆಗಿರುವೆ. ನೀನು ಜೀವನಿಂದ ಸರ್ವಥಾ ಭಿನ್ನನಾಗಿರುವೆ. ಪ್ರಪಂಚದ ಸ್ಥಿತಿಗಾಗಿ ಯಜ್ಞಾಧಿಷ್ಠಿತನಾದ ವಿಷ್ಣುರೂಪದಿಂದ ವಿರಾಜಿಸುತ್ತೀಯೆ. ॥15॥
(ಶ್ಲೋಕ - 16)
ಮೂಲಮ್
ಯಸ್ಮಿನ್ ವಿರುದ್ಧಗತಯೋ ಹ್ಯನಿಶಂ ಪತಂತಿ
ವಿದ್ಯಾದಯೋ ವಿವಿಧಶಕ್ತಯ ಆನುಪೂರ್ವ್ಯಾತ್ ।
ತದ್ಬ್ರಹ್ಮ ವಿಶ್ವಭವಮೇಕಮನಂತಮಾದ್ಯ-
ಮಾನಂದಮಾತ್ರಮವಿಕಾರಮಹಂ ಪ್ರಪದ್ಯೇ ॥
ಅನುವಾದ
ನಿನ್ನಿಂದಲೇ ವಿದ್ಯೆ-ಅವಿದ್ಯೆ ಮುಂತಾದ ವಿರುದ್ಧ ಗತಿಯುಳ್ಳ ಅನೇಕ ಶಕ್ತಿಗಳು ಧಾರಾವಾಹಿಯಾಗಿ ನಿರಂತರ ಪ್ರಕಟಗೊಳ್ಳುತ್ತಾ ಇರುತ್ತವೆ. ನೀನೇ ಜಗತ್ತಿನ ಕಾರಣನೂ, ಅಖಂಡನೂ, ಅನಾದಿಯೂ, ಅನಂತನೂ, ಆನಂದಮಯನೂ, ನಿರ್ವಿಕಾರನೂ, ಬ್ರಹ್ಮ ಸ್ವರೂಪನೂ ಆಗಿರುವೆ. ಅಂತಹ ನಿನಗೆ ನಾನು ಶರಣಾಗಿದ್ದೇನೆ. ॥16॥
(ಶ್ಲೋಕ - 17)
ಮೂಲಮ್
ಸತ್ಯಾಶಿಷೋ ಹಿ ಭಗವಂಸ್ತವ ಪಾದಪದ್ಮ-
ಮಾಶೀಸ್ತಥಾನುಭಜತಃ ಪುರುಷಾರ್ಥಮೂರ್ತೇಃ ।
ಅಪ್ಯೇವಮರ್ಯ ಭಗವಾನ್ ಪರಿಪಾತಿ ದೀನಾನ್
ವಾಶ್ರೇವ ವತ್ಸಕಮನುಗ್ರಹಕಾತರೋಸ್ಮಾನ್ ॥
ಅನುವಾದ
ಓ ಸರ್ವಪುರುಷಾರ್ಥಪ್ರದನೇ! ನಿನ್ನನ್ನು ಪರಮಪುರುಷಾರ್ಥ ಮೂರ್ತಿ, ಪರಮಾನಂದ ಮೂರ್ತಿ ಎಂದು ತಿಳಿದು ನಿಷ್ಕಾಮ ಭಾವದಿಂದ ನಿರಂತರವಾಗಿ ಭಜಿಸುವವರಿಗೆ ರಾಜ್ಯವೇ ಮುಂತಾದ ಭೋಗಗಳಿಗಿಂತ ನಿನ್ನ ಚರಣಕಮಲಗಳನ್ನು ಹೊಂದುವುದೇ ಭಜನೆಯ ನಿಜವಾದ ಫಲವಾಗಿರುತ್ತದೆ. ಹಾಗಿದ್ದರೂ ಆಕಳು ಆಗತಾನೇ ಹುಟ್ಟಿದ ಕರುವಿಗೆ ಹಾಲುಕುಡಿಸಿ ರಕ್ಷಿಸುವಂತೆ ನೀನು ಭಕ್ತರ ರಕ್ಷಣೆಯಲ್ಲಿ ಸದಾ ಕಾತರನಾಗಿದ್ದು, ದೀನರಾಗಿರುವ ನಮ್ಮಂತಹ ಸಕಾಮಭಕ್ತರ ಇಷ್ಟಾರ್ಥಗಳನ್ನೂ ಈಡೇರಿಸಿ ಅವರನ್ನು ಸಂಸಾರಭಯದಿಂದ ಸಂರಕ್ಷಿಸುತ್ತಿರುವೆ.’’ ॥17॥
(ಶ್ಲೋಕ - 18)
ಮೂಲಮ್ (ವಾಚನಮ್)
ಮೈತ್ರೇಯ ಉವಾಚ
ಮೂಲಮ್
ಅಥಾಭಿಷ್ಟುತ ಏವಂ ವೈ ಸತ್ಸಂಕಲ್ಪೇನ ಧೀಮತಾ ।
ಭೃತ್ಯಾನುರಕ್ತೋ ಭಗವಾನ್ ಪ್ರತಿನಂದ್ಯೇದಮಬ್ರವೀತ್ ॥
ಅನುವಾದ
ಶ್ರೀಮೈತ್ರೇಯರು ಹೇಳುತ್ತಾರೆ — ವಿದುರನೇ! ಶುಭ ಸಂಕಲ್ಪವುಳ್ಳ ಧೀಮಂತನಾದ ಧ್ರುವನು ಹೀಗೆ ಸ್ತುತಿಸಿದಾಗ ಭಕ್ತವತ್ಸಲನಾದ ಭಗವಂತನು ಅವನನ್ನು ಪ್ರಶಂಸಿಸುತ್ತಾ ಹೀಗೆಂದನು ॥18॥
(ಶ್ಲೋಕ - 19)
ಮೂಲಮ್ (ವಾಚನಮ್)
ಶ್ರೀಭಗವಾನುವಾಚ
ಮೂಲಮ್
ವೇದಾಹಂ ತೇ ವ್ಯವಸಿತಂ ಹೃದಿ ರಾಜನ್ಯಬಾಲಕ ।
ತತ್ಪ್ರಯಚ್ಛಾಮಿ ಭದ್ರಂ ತೇ ದುರಾಪಮಪಿ ಸುವ್ರತ ॥
ಅನುವಾದ
ಶ್ರೀಭಗವಂತನು ಹೇಳಿದನು — ಸುವ್ರತನಾದ ರಾಜಕುಮಾರನೇ! ನಿನ್ನ ಹೃದಯದ ಸಂಕಲ್ಪವನ್ನು ನಾನು ಅರಿತಿರುವೆನು. ಆ ಪದವನ್ನು ಪಡೆಯುವುದು ಬಹು ಕಠಿಣ ವಾಗಿದ್ದರೂ ನಾನು ನಿನಗೆ ಅದನ್ನು ಕೊಡುವೆನು. ನಿನಗೆ ಮಂಗಳವಾಗಲಿ. ॥19॥
(ಶ್ಲೋಕ - 20)
ಮೂಲಮ್
ನಾನ್ಯೈರಧಿಷ್ಠಿತಂ ಭದ್ರ ಯದ್ಭ್ರಾಜಿಷ್ಣು ಧ್ರುವಕ್ಷಿತಿ ।
ಯತ್ರ ಗ್ರಹರ್ಕ್ಷತಾರಾಣಾಂ ಜ್ಯೋತಿಷಾಂ ಚಕ್ರಮಾಹಿತಮ್ ॥
(ಶ್ಲೋಕ - 21)
ಮೂಲಮ್
ಮೇಢ್ಯಾಂ ಗೋಚಕ್ರವತ್ಸ್ಥಾಸ್ನು ಪರಸ್ತಾತ್ಕಲ್ಪವಾಸಿನಾಮ್ ।
ಧರ್ಮೋಗ್ನಿಃ ಕಶ್ಯಪಃ ಶುಕ್ರೋ ಮುನಯೋ ಯೇ ವನೌಕಸಃ ।
ಚರಂತಿ ದಕ್ಷಿಣೀಕೃತ್ಯ ಭ್ರಮಂತೋ ಯತ್ಸತಾರಕಾಃ ॥
ಅನುವಾದ
ಎಲೈ ಮಂಗಳಮತಿಯೇ! ಯಾವ ಅವಿನಾಶಿಯಾದ ಸ್ಥಾನವನ್ನು ಇಲ್ಲಿಯವರೆಗೆ ಯಾರೂ ಪಡೆದಿಲ್ಲವೋ, ಯಾವುದು ಗ್ರಹ-ನಕ್ಷತ್ರ-ತಾರಾಗಣಗಳಿಗೆ ಮೇಟಿಕಂಭದಂತೆ ಮೇರುವಾಗಿದೆಯೋ, ಅವಾಂತರ ಪ್ರಳಯದವರೆಗೆ ಮಾತ್ರ ಇರುವ ಇತರ ಲೋಕಗಳು ನಾಶಹೊಂದಿದರೂ ಯಾವುದು ಸ್ಥಿರವಾಗಿರುತ್ತದೋ, ಮತ್ತು ಯಾವುದನ್ನು ತಾರಾಗಣಗಳೊಡನೆ ಕೂಡಿ ಧರ್ಮ, ಅಗ್ನಿ, ಕಶ್ಯಪ, ಶುಕ್ರರೇ ಮುಂತಾದ ಗ್ರಹನಕ್ಷತ್ರಗಳು ಪ್ರದಕ್ಷಿಣೆ ಮಾಡುತ್ತಿರುವರೋ ಅಂತಹ ಧ್ರುವಲೋಕವನ್ನು ನಾನು ನಿನಗೆ ಕೊಡುತ್ತಿದ್ದೇನೆ. ॥20-21॥
(ಶ್ಲೋಕ - 22)
ಮೂಲಮ್
ಪ್ರಸ್ಥಿ ತೇ ತು ವನಂ ಪಿತ್ರಾ ದತ್ತ್ವಾ ಗಾಂ ಧರ್ಮಸಂಶ್ರಯಃ ।
ಷಟ್ತ್ರಿಂಶದ್ವರ್ಷಸಾಹಸ್ರಂ ರಕ್ಷಿತಾವ್ಯಾಹತೇಂದ್ರಿಯಃ ॥
ಅನುವಾದ
ನಿನ್ನ ತಂದೆಯು ನಿನಗೆ ರಾಜ್ಯಸಿಂಹಾಸನವನ್ನು ಕೊಟ್ಟು ವನಕ್ಕೆ ಹೋದಬಳಿಕ ನೀನು ಮೂವತ್ತಾರುಸಾವಿರ ವರ್ಷಗಳವರೆಗೆ ಧರ್ಮದಿಂದ ಭೂಮಂಡಲವನ್ನು ಆಳುವೆ. ಆಗಲೂ ನಿನ್ನ ಇಂದ್ರಿಯಗಳ ಶಕ್ತಿಯು ಹಿಂದಿನಂತೆಯೇ ಇರುವುದು. ॥22॥
(ಶ್ಲೋಕ - 23)
ಮೂಲಮ್
ತ್ವದ್ಭ್ರಾತರ್ಯುತ್ತಮೇ ನಷ್ಟೇ ಮೃಗಯಾಯಾಂ ತು ತನ್ಮನಾಃ ।
ಅನ್ವೇಷಂತೀ ವನಂ ಮಾತಾ ದಾವಾಗ್ನಿಂ ಸಾ ಪ್ರವೇಕ್ಷ್ಯತಿ ॥
ಅನುವಾದ
ಮುಂದೆ ಒಂದು ದಿನ ನಿನ್ನ ತಮ್ಮನಾದ ಉತ್ತಮನು ಬೇಟೆಯಾಡುವುದಕ್ಕಾಗಿ ಅರಣ್ಯಕ್ಕೆ ಹೋದಾಗ ಅಲ್ಲಿ ಸಾವಿಗೆ ಈಡಾಗುವನು. ಆಗ ಆತನ ತಾಯಿ ಸುರುಚಿಯು ಪುತ್ರಪ್ರೇಮದಿಂದ ಹುಚ್ಚೇರಿ ಕಾಡಿನಲ್ಲಿ ಹುಡುಕುತ್ತಾ ಕಾಡ್ಗಿಚ್ಚಿನಲ್ಲಿ ಪ್ರವೇಶಿಸಿ ಬಿಡುವಳು. ॥23॥
(ಶ್ಲೋಕ - 24)
ಮೂಲಮ್
ಇಷ್ಟ್ವಾ ಮಾಂ ಯಜ್ಞ ಹೃದಯಂ ಯಜ್ಞೈಃ ಪುಷ್ಕಲದಕ್ಷಿಣೈಃ ।
ಭುಕ್ತ್ವಾ ಚೇಹಾಶಿಷಃ ಸತ್ಯಾ ಅಂತೇ ಮಾಂ ಸಂಸ್ಮರಿಷ್ಯಸಿ ॥
ಅನುವಾದ
ಯಜ್ಞವು ನನ್ನ ಮೂರ್ತಿಯಾಗಿದೆ. ನೀನು ಬಹುದಕ್ಷಿಣೆಗಳಿಂದ ಕೂಡಿದ ಅನೇಕ ಯಜ್ಞಗಳಿಂದ ನನ್ನನ್ನು ಪೂಜಿಸಿ, ಈ ಲೋಕದಲ್ಲಿ ಉತ್ತಮ ಭೋಗಗಳನ್ನನುಭವಿಸಿ ಕೊನೆಯಲ್ಲಿ ನನ್ನನ್ನೇ ಸ್ಮರಿಸುವೆ. ॥24॥
(ಶ್ಲೋಕ - 25)
ಮೂಲಮ್
ತತೋ ಗಂತಾಸಿ ಮತ್ಸ್ಥಾನಂ ಸರ್ವಲೋಕನಮಸ್ಕೃತಮ್ ।
ಉಪರಿಷ್ಟಾದೃಷಿಭ್ಯಸ್ತ್ವಂ ಯತೋ ನಾವರ್ತತೇ ಗತಃ ॥
ಅನುವಾದ
ಇದರಿಂದ ನೀನು ಕೊನೆಯಲ್ಲಿ ಸಮಸ್ತ ಲೋಕಗಳಿಗೂ ವಂದನೀಯವಾದ ಸಪ್ತರ್ಷಿಗಳಿಗಿಂತಲೂ ಮೇಲಿರುವ ನನ್ನ ನಿಜಧಾಮಕ್ಕೆ ಹೋಗುವೆ. ಅಲ್ಲಿಗೆ ತಲುಪಿದ ಬಳಿಕ ಮತ್ತೆ ಪ್ರಪಂಚಕ್ಕೆ ಮರಳಿ ಬರಬೇಕಾಗುವುದಿಲ್ಲ. ॥25॥
(ಶ್ಲೋಕ - 26)
ಮೂಲಮ್ (ವಾಚನಮ್)
ಮೈತ್ರೇಯ ಉವಾಚ
ಮೂಲಮ್
ಇತ್ಯರ್ಚಿತಃ ಸ ಭಗವಾನತಿದಿಶ್ಯಾತ್ಮನಃ ಪದಮ್ ।
ಬಾಲಸ್ಯ ಪಶ್ಯತೋ ಧಾಮ ಸ್ವಮಗಾದ್ಗರುಡಧ್ವಜಃ ॥
ಅನುವಾದ
ಶ್ರೀಮೈತ್ರೇಯರು ಹೇಳುತ್ತಾರೆ — ಹೀಗೆ ಬಾಲಕ ಧ್ರುವನಿಂದ ಪೂಜಿತನಾಗಿ ಆತನಿಗೆ ತನ್ನ ಪದವನ್ನು ಅನುಗ್ರಹಿಸಿ ಆತನು ನೋಡುತ್ತಿರುವಂತೆಯೇ ಗರುಡಧ್ವಜನು ತನ್ನ ಲೋಕಕ್ಕೆ ಹೊರಟು ಹೋದನು. ॥26॥
(ಶ್ಲೋಕ - 27)
ಮೂಲಮ್
ಸೋಪಿ ಸಂಕಲ್ಪಜಂ ವಿಷ್ಣೋಃ ಪಾದಸೇವೋಪಸಾದಿತಮ್ ।
ಪ್ರಾಪ್ಯ ಸಂಕಲ್ಪನಿರ್ವಾಣಂ ನಾತಿಪ್ರೀತೋಭ್ಯಗಾತ್ಪುರಮ್ ॥
ಅನುವಾದ
ನಾರಾಯಣನ ಪಾದಸೇವೆಯಿಂದ ಧ್ರುವನಿಗೆ ಸಂಕಲ್ಪಿಸಿದ್ದ ಇಷ್ಟವೇನೋ ಈಡೇರಿತು. ಆದರೆ ಅವನ ಚಿತ್ತಕ್ಕೆ ವಿಶೇಷವಾದ ಸಂತೋಷ ಉಂಟಾಗಲಿಲ್ಲ. ಹಾಗೆಯೇ ಆತನು ತನ್ನ ನಗರಿಗೆ ಹಿಂದಿರುಗಿದನು. ॥27॥
(ಶ್ಲೋಕ - 28)
ಮೂಲಮ್ (ವಾಚನಮ್)
ವಿದುರ ಉವಾಚ
ಮೂಲಮ್
ಸುದುರ್ಲಭಂ ಯತ್ಪರಮಂ ಪದಂ ಹರೇ-
ರ್ಮಾಯಾವಿನಸ್ತಚ್ಚರಣಾರ್ಚನಾರ್ಜಿತಮ್ ।
ಲಬ್ಧ್ಯಾಪ್ಯಸಿದ್ಧಾರ್ಥಮಿವೈಕಜನ್ಮನಾ
ಕಥಂ ಸ್ವಮಾತ್ಮಾನಮಮನ್ಯತಾರ್ಥವಿತ್ ॥
ಅನುವಾದ
ವಿದುರನು ಕೇಳಿದನು — ಋಷಿಶ್ರೇಷ್ಠರೇ! ಮಾಯಾಪತಿ ಶ್ರೀಹರಿಯ ಪರಮಪದವಾದರೋ ಅತ್ಯಂತ ದುರ್ಲಭ ವಾಗಿದೆ ಮತ್ತು ಅದು ಅವನ ಚರಣಕಮಲಗಳ ಉಪಾಸನೆಯಿಂದಲೇ ದೊರೆಯುವುದು. ಅಂತಹ ದುರ್ಲಭವಾದ ಪದವನ್ನು ಒಂದೇ ಜನ್ಮದಲ್ಲಿಗಳಿಸಿದ್ದರೂ ವಿವೇಕಿಯಾದ ಧ್ರುವಕುಮಾರನು ತನ್ನನ್ನು ಏತಕ್ಕೆ ಕೃತ ಕೃತ್ಯನಾಗಿ ಭಾವಿಸಲಿಲ್ಲ? ॥28॥
(ಶ್ಲೋಕ - 29)
ಮೂಲಮ್ (ವಾಚನಮ್)
ಮೈತ್ರೇಯ ಉವಾಚ
ಮೂಲಮ್
ಮಾತುಃ ಸಪತ್ನ್ಯಾ ವಾಗ್ಬಾಣೈರ್ಹೃದಿ ವಿದ್ಧಸ್ತುತಾನ್ ಸ್ಮರನ್ ।
ನೈಚ್ಛನ್ಮುಕ್ತಿಪತೇರ್ಮುಕ್ತಿಂ ತಸ್ಮಾತ್ತಾಪಮುಪೇಯಿವಾನ್ ॥
ಅನುವಾದ
ಶ್ರೀಮೈತ್ರೇಯರು ಹೇಳುತ್ತಾರೆ — ವಿದುರನೇ! ಧ್ರುವನ ಹೃದಯವು ಮಲತಾಯಿಯ ವಾಗ್ಬಾಣಗಳಿಂದ ಗಾಯಗೊಂಡಿತ್ತು. ಭಗವಂತನು ವರಕೊಡಲು ಬಂದಿದ್ದನು. ಆಗ ಅವನಿಗೆ ಆ ವಾಗ್ಬಾಣಗಳು ನೆನಪಾಗಿ ಮುಕ್ತಿಯನ್ನು ಕೊಡುವಂತಹ ಶ್ರೀಹರಿಯಲ್ಲಿ ಮುಕ್ತಿಯನ್ನು ಕೇಳಲಿಲ್ಲ. ಈಗ ಭಗವದ್ದರ್ಶನದಿಂದ ಆ ಮನೋಮಾಲಿನ್ಯವು ದೂರವಾದಾಗ ಅವನಿಗೆ ತನ್ನ ತಪ್ಪಿಗಾಗಿ ಪಶ್ಚಾತ್ತಾಪವುಂಟಾಯಿತು. ॥29॥
(ಶ್ಲೋಕ - 30)
ಮೂಲಮ್ (ವಾಚನಮ್)
ಧ್ರುವ ಉವಾಚ
ಮೂಲಮ್
ಸಮಾಧಿನಾ ನೈಕಭವೇನ ಯತ್ಪದಂ
ವಿದುಃ ಸನಂದಾದಯ ಊರ್ಧ್ವರೇತಸಃ ।
ಮಾಸೈರಹಂ ಷಡ್ಭಿರಮುಷ್ಯ ಪಾದಯೋ-
ಶ್ಛಾಯಾಮುಪೇತ್ಯಾಪಗತಃ ಪೃಥಙ್ಮತಿಃ ॥
ಅನುವಾದ
ಧ್ರುವನು ಮನಸ್ಸಿನಲ್ಲೇ ಹೀಗೆ ಅಂದುಕೊಂಡನು ಸನಕಾದಿ ಊರ್ಧ್ವರೇತ (ನೈಷ್ಠಿಕ ಬ್ರಹ್ಮಚಾರಿ)ರಾದ ಸಿದ್ಧರೂ ಕೂಡ ಯಾವುದನ್ನು ಸಮಾಧಿಯ ಮೂಲಕ ಅನೇಕ ಜನ್ಮಗಳ ಬಳಿಕ ಪಡೆಯುವರೋ, ಆ ಭಗವಚ್ಚರಣಗಳ ನೆರಳನ್ನು ನಾನು ಆರೇ ತಿಂಗಳಲ್ಲಿ ಪಡೆದೆನು. ಆದರೆ ಆಗಲೂ ಚಿತ್ತದಲ್ಲಿ ಬೇರೆ ವಾಸನೆಯು ಇದ್ದುದರಿಂದ ನಾನು ಆ ಪಾದಗಳಿಂದ ದೂರವಾದೆನಲ್ಲ! ಅಕಟಾ! ॥30॥
(ಶ್ಲೋಕ - 31)
ಮೂಲಮ್
ಅಹೋ ಬತ ಮಮಾನಾತ್ಮ್ಯಂ ಮಂದಭಾಗ್ಯಸ್ಯ ಪಶ್ಯತ ।
ಭವಚ್ಛಿದಃ ಪಾದಮೂಲಂ ಗತ್ವಾಯಾಚೇ ಯದಂತವತ್ ॥
ಅನುವಾದ
ಅಯ್ಯೋ! ನಾನು ಎಂತಹ ಮೂರ್ಖತನದ ಕೆಲಸ ಮಾಡಿದೆನಲ್ಲ! ಮಂದಭಾಗ್ಯನಾದ ನನ್ನ ಅವಿವೇಕವನ್ನು ನೋಡಿರಿ! ಭವಪಾಶವನ್ನು ಕತ್ತರಿಸುವಂತಹ ಪ್ರಭುವಿನ ಪಾದಪದ್ಮಗಳನ್ನು ತಲುಪಿದರೂ ಅವನಿಂದ ನಾಶವುಳ್ಳ ವಸ್ತುವನ್ನೇ ಬೇಡಿದೆನಲ್ಲ! ॥31॥
(ಶ್ಲೋಕ - 32)
ಮೂಲಮ್
ಮತಿರ್ವಿದೂಷಿತಾ ದೇವೈಃ ಪತದ್ಭಿರಸಹಿಷ್ಣುಭಿಃ ।
ಯೋ ನಾರದವಚಸ್ತಥ್ಯಂ ನಾಗ್ರಾಹಿಷಮಸತ್ತಮಃ ॥
ಅನುವಾದ
ಪುಣ್ಯವು ಕ್ಷಯಿಸಿದ ನಂತರ ತಾವು ಪತನವಾಗುವುದರಿಂದ ನಾನು ಪರಮ ಶ್ರೇಯಸ್ಸಿನ ಮುಕ್ತಿಯನ್ನು ಪಡೆಯುವುದನ್ನು ಸಹಿಸದೆ ದೇವತೆಗಳು ನನ್ನ ಮನಸ್ಸನ್ನು ಕೆಡಿಸಿಬಿಟ್ಟರು. ಅದರಿಂದಲೇ ದುಷ್ಟನಾದ ನಾನು ನಾರದರ ಯಥಾರ್ಥವಾದ ಮಾತನ್ನು ಕೇಳದೇ ಹೋದೆ. ॥32॥
(ಶ್ಲೋಕ - 33)
ಮೂಲಮ್
ದೈವೀಂ ಮಾಯಾಮುಪಾಶ್ರಿತ್ಯ ಪ್ರಸುಪ್ತ ಇವ ಭಿನ್ನದೃಕ್ ।
ತಪ್ಯೇ ದ್ವಿತೀಯೇಪ್ಯಸತಿ ಭ್ರಾತೃಭ್ರಾತೃವ್ಯಹೃದ್ರುಜಾ ॥
ಅನುವಾದ
ಕನಸಿನಲ್ಲಿ ತನ್ನನ್ನು ಬಿಟ್ಟು ಬೇರೆ ಏನೂ ಇಲ್ಲದಿದ್ದರೂ ಮನುಷ್ಯನು ತಾನೇ ಕಲ್ಪಿಸಿಕೊಂಡ ಹುಲಿ, ಹಾವು ಮುಂತಾದವುಗಳಿಗೆ ಹೆದರುವಂತೆ, ಜಗತ್ತಿನಲ್ಲಿ ವಾಸುದೇವನನ್ನು ಬಿಟ್ಟು ಬೇರಾರೂ ಇಲ್ಲದಿದ್ದರೂ, ಭಗವಂತನ ಮಾಯೆಗೆ ಮರುಳಾಗಿ ನಾನು ಒಡಹುಟ್ಟಿದವನನ್ನೇ ವೈರಿಯೆಂದು ಭಾವಿಸಿ ದ್ವೇಷ ರೂಪವಾದ ಮನೋರೋಗದಿಂದ ಸಂತಪ್ತನಾದೆನಲ್ಲ! ॥33॥
(ಶ್ಲೋಕ - 34)
ಮೂಲಮ್
ಮಯೈತತ್ಪ್ರಾರ್ಥಿತಂ ವ್ಯರ್ಥಂ ಚಿಕಿತ್ಸೇವ ಗತಾಯುಷಿ ।
ಪ್ರಸಾದ್ಯ ಜಗದಾತ್ಮಾನಂ ತಪಸಾ ದುಷ್ಪ್ರಸಾದನಮ್ ।
ಭವಚ್ಛಿದಮಯಾಚೇಹಂ ಭವಂ ಭಾಗ್ಯವಿವರ್ಜಿತಃ ॥
ಅನುವಾದ
ಆಯುಸ್ಸು ತೀರಿದವನ ಚಿಕಿತ್ಸೆಯು ವ್ಯರ್ಥವಾಗುವಂತೆ, ಯಾರನ್ನು ಪ್ರಸನ್ನಗೊಳಿಸುವುದು ಅತ್ಯಂತ ಕಠಿಣವೋ ಅಂತಹ ವಿಶ್ವಾತ್ಮನಾದ ವಿಷ್ಣುವನ್ನು ತಪಸ್ಸಿನಿಂದ ಮೆಚ್ಚಿಸಿದ ನಾನು ಅವನಿಂದ ಕೇಳಿಕೊಂಡುದು ವ್ಯರ್ಥವಾಯಿತಲ್ಲ! ಅಯ್ಯೋ! ನಾನು ಎಂತಹ ಭಾಗ್ಯಹೀನನು? ಸಂಸಾರ ಬಂಧನವನ್ನು ಬಿಡಿಸುವ ಪ್ರಭುವಿನಿಂದ ನಾನು ಪುನಃ ಸಂಸಾರವನ್ನೇ ಕೇಳಿದೆನಲ್ಲ! ॥34॥
(ಶ್ಲೋಕ - 35)
ಮೂಲಮ್
ಸ್ವಾರಾಜ್ಯಂ ಯಚ್ಛತೋ ವೌಢ್ಯಾನ್ಮಾನೋ ಮೇ ಭಿಕ್ಷಿತೋ ಬತ ।
ಈಶ್ವರಾತ್ ಕ್ಷೀಣಪುಣ್ಯೇನ ಲೀಕಾರಾನಿವಾಧನಃ ॥ 35 ॥
ಅನುವಾದ
ಸಾರ್ವಭೌಮನು ಪ್ರಸನ್ನನಾಗಿರುವಾಗ ಬುದ್ಧಿಹೀನನಾದವನು ಒಂದು ಮುಷ್ಟಿ ಅಕ್ಕಿಯನ್ನು ಬೇಡುವಂತೆ ದುರದೃಷ್ಟಶಾಲಿಯಾದ ನಾನು ಬುದ್ಧಿಹೀನನಾಗಿ ಸ್ವಾರಾಜ್ಯ (ಮೋಕ್ಷ)ವನ್ನು ಕೊಡುವ ಸ್ವಾಮಿ ಶ್ರೀಹರಿಯಿಂದ ಅಭಿಮಾನವನ್ನು ಬೆಳೆಸುವ ಪದವಿಯನ್ನು ಕೇಳಿಕೊಂಡೆನಲ್ಲ! ॥35॥
(ಶ್ಲೋಕ - 36)
ಮೂಲಮ್
ಮೈತ್ರೇಯ ಉವಾಚ
ನ ವೈ ಮುಕುಂದಸ್ಯ ಪದಾರವಿಂದಯೋ ।
ರಜೋಜುಷಸ್ತಾತ ಭವಾದೃಶಾ ಜನಾಃ
ವಾಂಛಂತಿ ತದ್ದಾಸ್ಯಮೃತೇರ್ಥಮಾತ್ಮನೋ
ಯದೃಚ್ಛಯಾ ಲಬ್ಧಮನಃಸಮೃದ್ಧಯಃ ॥
ಅನುವಾದ
ಶ್ರೀಮೈತ್ರೇಯರು ಹೇಳುತ್ತಾರೆ — ಭಾಗವತೋತ್ತಮನಾದ ವಿದುರನೇ! ಶ್ರೀಮುಕುಂದನ ಪಾದಾರವಿಂದಗಳ ಮಕರಂದವನ್ನು ಪಾನಮಾಡುವ ದುಂಬಿಯಂತಿರುವ ನಿಮ್ಮಂತಹವರು ಪ್ರಭುವಿನ ಪಾದಧೂಳಿಯನ್ನೇ ಸೇವಿಸುವರು. ತಾನಾಗಿಯೇ ಒದಗಿಬಂದ ಪರಿಸ್ಥಿತಿಯಲ್ಲಿ ಸಂತುಷ್ಟ ಮನಸ್ಸುಳ್ಳ ಅವರು ಭಗವಂತನಲ್ಲಿ ಅವನ ಸೇವೆಯನ್ನಲ್ಲದೆ ಬೇರೆ ಏನನ್ನೂ ಬೇಡುವುದಿಲ್ಲ. ॥36॥
(ಶ್ಲೋಕ - 37)
ಮೂಲಮ್
ಆಕರ್ಣ್ಯಾತ್ಮಜಮಾಯಾಂತಂ ಸಂಪರೇತ್ಯ ಯಥಾಗತಮ್ ।
ರಾಜಾ ನ ಶ್ರದ್ಧದೇ ಭದ್ರಮಭದ್ರಸ್ಯ ಕುತೋ ಮಮ ॥
ಅನುವಾದ
ಇತ್ತ ಉತ್ತಾನಪಾದರಾಜನು ತನ್ನ ಪುತ್ರನಾದ ಧ್ರುವನು ಮನೆಗೆ ಹಿಂದಿರುಗುತ್ತಿರುವನೆಂಬ ಸಮಾಚಾರ ಕೇಳಿ ‘ಸತ್ತುಹೋದವನು ಯಮಲೋಕದಿಂದ ಮರಳಿ ಬಂದನು’ ಎಂಬ ವಾರ್ತೆಯಂತೆ ಅವನು ನಂಬಲಿಲ್ಲ. ನನ್ನಂತಹ ಭಾಗ್ಯಹೀನನಿಗೆ ಇಂತಹ ಭಾಗ್ಯವು ಎಲ್ಲಿದೆ? ಎಂದು ಚಿಂತಿಸಿದನು. ॥37॥
(ಶ್ಲೋಕ - 38)
ಮೂಲಮ್
ಶ್ರದ್ಧಾಯ ವಾಕ್ಯಂ ದೇವರ್ಷೇರ್ಹರ್ಷವೇಗೇನ ಧರ್ಷಿತಃ ।
ವಾರ್ತಾಹರ್ತುರತಿಪ್ರೀತೋ ಹಾರಂ ಪ್ರಾದಾನ್ಮಹಾಧನಮ್ ॥
ಅನುವಾದ
ಆದರೆ ದೇವರ್ಷಿ ನಾರದರು ಹೇಳಿದ್ದ ಮಾತು ನೆನಪಾಗಿ ಅವನಿಗೆ ಅದರಲ್ಲಿ ನಂಬಿಕೆ ಉಂಟಾಯಿತು ಹಾಗೂ ಪರಮಾನಂದದ ವೇಗದಿಂದ ಪರವಶನಾದನು. ಅವನು ಅತ್ಯಂತ ಪ್ರಸನ್ನನಾಗಿ ಆ ಶುಭ ಸಮಾಚಾರ ತಂದವನಿಗೆ ಒಂದು ಅಮೂಲ್ಯವಾದ ಹಾರವನ್ನು ಕೊಟ್ಟನು. ॥38॥
(ಶ್ಲೋಕ - 39)
ಮೂಲಮ್
ಸದಶ್ವಂ ರಥಮಾರುಹ್ಯ ಕಾರ್ತಸ್ವರಪರಿಷ್ಕೃತಮ್ ।
ಬ್ರಾಹ್ಮಣೈಃ ಕುಲವೃದ್ಧೈಶ್ಚ ಪರ್ಯಸ್ತೋಮಾತ್ಯಬಂಧುಭಿಃ ॥
(ಶ್ಲೋಕ - 40)
ಮೂಲಮ್
ಶಂಖದುಂದುಭಿನಾದೇನ ಬ್ರಹ್ಮ-ಘೋಷೇಣ ವೇಣುಭಿಃ ।
ನಿಶ್ಚಕ್ರಾಮ ಪುರಾತ್ತೂರ್ಣಮಾತ್ಮಜಾಭೀಕ್ಷಣೋತ್ಸುಕಃ ॥
ಅನುವಾದ
ಪುತ್ರನ ಮುಖವನ್ನು ನೋಡಲು ಉತ್ಸುಕನಾದ ರಾಜನು ಬಹಳಮಂದಿ ಬ್ರಾಹ್ಮಣ ರನ್ನೂ, ಕುಲವೃದ್ಧರನ್ನೂ, ಮಂತ್ರಿಗಳನ್ನೂ, ಪರಿಜನರನ್ನೂ ಜೊತೆಯಲ್ಲಿ ಕರೆದುಕೊಂಡು, ಉತ್ತಮವಾದ ಅಶ್ವಗಳಿಂದ ಹೂಡಲ್ಪಟ್ಟ ಸುವರ್ಣಖಚಿತವಾದ ರಥದಲ್ಲಿ ಕುಳಿತು ಲಗು ಬಗೆಯಿಂದ ನಗರದಿಂದ ಹೊರಬಂದನು. ಅವನ ಮುಂದೆ ಶುಭವಾದ ವೇದಪಾರಾಯಣದ ಘೋಷ ನಡೆಯುತ್ತಿತ್ತು. ಶಂಖ, ದುಂದುಭಿ, ಕೊಳಲು ಮುಂತಾದ ಮಂಗಳವಾದ್ಯಗಳು ಮೊಳಗುತ್ತಿದ್ದವು. ॥39-40॥
(ಶ್ಲೋಕ - 41)
ಮೂಲಮ್
ಸುನೀತಿಃ ಸುರುಚಿಶ್ಚಾಸ್ಯ ಮಹಿಷ್ಯೌ ರುಕ್ಮಭೂಷಿತೇ ।
ಆರುಹ್ಯ ಶಿಬಿಕಾಂ ಸಾರ್ಧಮುತ್ತಮೇನಾಭಿಜಗ್ಮತುಃ ॥
ಅನುವಾದ
ಅವನ ರಾಣಿಯರಾದ ಸುನೀತಿ ಮತ್ತು ಸುರುಚಿಯರು ಸುವರ್ಣಾಭರಣಗಳಿಂದ ಅಲಂಕೃತರಾಗಿ, ರಾಜಕುಮಾರ ಉತ್ತಮನೊಡನೆ ಪಲ್ಲಕ್ಕಿಯಲ್ಲಿ ಕುಳಿತು ಬರುತ್ತಿದ್ದರು. ॥41॥
(ಶ್ಲೋಕ - 42)
ಮೂಲಮ್
ತಂ ದೃಷ್ಟ್ವೋಪವನಾಭ್ಯಾಶ ಆಯಾಂತಂ ತರಸಾ ರಥಾತ್ ।
ಅವರುಹ್ಯ ನೃಪಸ್ತೂರ್ಣಮಾಸಾದ್ಯ ಪ್ರೇಮವಿಹ್ವಲಃ ॥
(ಶ್ಲೋಕ - 43)
ಮೂಲಮ್
ಪರಿರೇಭೇಂಗಜಂ ದೋರ್ಭ್ಯಾಂ ದೀರ್ಘೋತ್ಕಂಠಮನಾಃ ಶ್ವಸನ್ ।
ವಿಷ್ವಕ್ಸೇನಾಂಘ್ರಿಸಂಸ್ಪರ್ಶಹತಾಶೇಷಾಘಬಂಧನಮ್ ॥
ಅನುವಾದ
ಧ್ರುವ ಕುಮಾರನು ಉಪವನದ ಬಳಿಗೆ ಬರುತ್ತಲೇ ಮಹಾರಾಜನು ರಥದಿಂದ ಧಿಗ್ಗನೆ ಕೆಳಗಿಳಿದು, ಮಗನ ಮುಖ ವನ್ನು ನೋಡಲು ಎಷ್ಟೋ ದಿನಗಳಿಂದ ಹಂಬಲಿಸುತ್ತಿದ್ದ ಅವನು ರಭಸದಿಂದ ಮುನ್ನುಗ್ಗಿ ಪ್ರೇಮಾತುರನಾಗಿ, ನಿಟ್ಟುಸಿರು ಬಿಡುತ್ತಾ, ಪುತ್ರನನ್ನು ಬಾಚಿ ತಬ್ಬಿಕೊಂಡನು. ಈಗ ಬಂದಿದ್ದ ಧ್ರುವನು ಹಿಂದಿನಂತಿರಲಿಲ್ಲ. ಪರಮಾತ್ಮನ ಪವಿತ್ರವಾದ ಪಾದಪದ್ಮಗಳ ಸ್ಪರ್ಶದಿಂದ ಇವನ ಸಮಸ್ತ ಪಾಪಬಂಧನವನ್ನು ಕಳಕೊಂಡ ಪುಣ್ಯಮೂರ್ತಿಯಾಗಿದ್ದನು. ॥42-43॥
(ಶ್ಲೋಕ - 44)
ಮೂಲಮ್
ಅಥಾಜಿಘ್ರನ್ಮುಹುರ್ಮೂರ್ಧ್ನಿ ಶೀತೈರ್ನಯನವಾರಿಭಿಃ ।
ಸ್ನಾಪಯಾಮಾಸ ತನಯಂ ಜಾತೋದ್ದಾಮಮನೋರಥಃ ॥
ಅನುವಾದ
ಉತ್ತಾನಪಾದರಾಜನ ಬಹುದೊಡ್ಡ ಮನೋರಥವು ಪೂರ್ಣವಾಗಿತ್ತು. ಅವನು ಪದೇ-ಪದೇ ಮಗನ ತಲೆಯನ್ನು ನೇವರಿಸುತ್ತಾ, ನೆತ್ತಿಯನ್ನು ಮೂಸುತ್ತಾ, ತಂಪಾದ ಆನಂದಾಶ್ರುಗಳಿಂದ ಅವನನ್ನು ತೋಯಿಸಿಬಿಟ್ಟನು. ॥44॥
(ಶ್ಲೋಕ - 45)
ಮೂಲಮ್
ಅಭಿವಂದ್ಯ ಪಿತುಃ ಪಾದಾವಾಶೀರ್ಭಿಶ್ಚಾಭಿಮಂತ್ರಿತಃ ।
ನನಾಮ ಮಾತರೌ ಶೀರ್ಷ್ಣಾ ಸತ್ಕೃತಃ ಸಜ್ಜನಾಗ್ರಣೀಃ ॥
ಅನುವಾದ
ಮತ್ತೆ ಸಜ್ಜನಶಿರೋಮಣಿಯಾದ ಧ್ರುವನು ತಂದೆಯ ಪಾದಗಳಿಗೆ ನಮಸ್ಕರಿಸಿ ಆತನ ಆಶೀರ್ವಾದಗಳನ್ನು ಪಡೆದು, ಕುಶಲ ಪ್ರಶ್ನೆಗಳಿಂದ ಸತ್ಕೃತನಾಗಿ ಇಬ್ಬರೂ ತಾಯಂದಿರ ಚರಣಗಳಿಗೆ ತಲೆಮುಟ್ಟಿಸಿ ನಮಸ್ಕಾರ ಮಾಡಿದನು. ॥45॥
(ಶ್ಲೋಕ - 46)
ಮೂಲಮ್
ಸುರುಚಿಸ್ತಂ ಸಮುತ್ಥಾಪ್ಯ ಪಾದಾವನತಮರ್ಭಕಮ್ ।
ಪರಿಷ್ವಜ್ಯಾಹ ಜೀವೇತಿ ಬಾಷ್ಪಗದ್ಗದಯಾ ಗಿರಾ ॥
ಅನುವಾದ
ಚಿಕ್ಕಮ್ಮಳಾದ ಸುರುಚಿಯು ಕಾಲಿಗೆ ಬಿದ್ದ ಬಾಲಕ ಧ್ರುವನನ್ನು ಮೇಲೆತ್ತಿ ಅಪ್ಪಿಕೊಂಡು ‘ಚಿರಂಜೀವಿಯಾಗು’ ಎಂದು ಕಂಬನಿತುಂಬಿದ ಗದ್ಗದವಾದ ವಾಣಿಯಿಂದ ಆಶೀರ್ವದಿಸಿದಳು. ॥46॥
(ಶ್ಲೋಕ - 47)
ಮೂಲಮ್
ಯಸ್ಯ ಪ್ರಸನ್ನೋ ಭಗವಾನ್ಗುಣೈರ್ಮೈತ್ರ್ಯಾದಿಭಿರ್ಹರಿಃ ।
ತಸ್ಮೈ ನಮಂತಿ ಭೂತಾನಿ ನಿಮ್ನಮಾಪ ಇವ ಸ್ವಯಮ್ ॥
ಅನುವಾದ
ನೀರು ತಾನಾಗಿಯೇ ಹಳ್ಳದ ಕಡೆಗೆ ಹರಿಯುವಂತೆ ಮೈತ್ರಿ, ಕರುಣೆ ಮುಂತಾದ ಗುಣಗಳಿಂದ ಪರಮಾತ್ಮನ ಪ್ರಸನ್ನತೆಗೆ ಪಾತ್ರನಾದವನ ಮುಂದೆ ಎಲ್ಲ ಜೀವಿಗಳು ತಲೆಬಾಗುತ್ತವೆ. ॥47॥
(ಶ್ಲೋಕ - 48)
ಮೂಲಮ್
ಉತ್ತಮಶ್ಚ ಧ್ರುವಶ್ಚೋಭಾವನ್ಯೋನ್ಯಂ ಪ್ರೇಮವಿಹ್ವಲೌ ।
ಅಂಗಸಂಗಾದುತ್ಪುಲಕಾವಸ್ರೌಘಂ ಮುಹುರೂಹತುಃ ॥
ಅನುವಾದ
ಇತ್ತ ಕಡೆ ಉತ್ತಮ ಮತ್ತು ಧ್ರುವನೂ ಪ್ರೇಮದಿಂದ ವಿಹ್ವಲರಾಗಿ ಒಬ್ಬರನ್ನೊಬ್ಬರು ಆಲಿಂಗಿಸಿಕೊಂಡರು. ಪರಸ್ಪರ ಅಂಗಸ್ಪರ್ಶದಿಂದ ಆನಂದಪುಳಕಿತರಾದ ಅವರಿಬ್ಬರ ಕಣ್ಣುಗಳಿಂದಲೂ ಕಂಬನಿಯ ಧಾರೆ ಹರಿಯತೊಡಗಿತು. ॥48॥
(ಶ್ಲೋಕ - 49)
ಮೂಲಮ್
ಸುನೀತಿರಸ್ಯ ಜನನೀ ಪ್ರಾಣೇಭ್ಯೋಪಿ ಪ್ರಿಯಂ ಸುತಮ್ ।
ಉಪಗುಹ್ಯ ಜಹಾವಾಧಿಂ ತದಂಗಸ್ಪರ್ಶನಿರ್ವೃತಾ ॥
ಅನುವಾದ
ತಾಯಿ ಸುನೀತಿಯು ಪ್ರಾಣಕ್ಕಿಂತಲೂ ಪ್ರಿಯನಾದ ಪುತ್ರನನ್ನು ಆಲಿಂಗಿಸಿಕೊಂಡು ತನ್ನ ಎಲ್ಲ ಸಂತಾಪಗಳನ್ನು ಮರೆತುಬಿಟ್ಟಳು. ಅವನ ಸುಕುಮಾರವಾದ ಅಂಗಗಳ ಸ್ಪರ್ಶದಿಂದ ಆಕೆಯು ಮೇರೆಮೀರಿದ ಆನಂದದಲ್ಲಿ ಮುಳುಗಿದಳು. ॥49॥
(ಶ್ಲೋಕ - 50)
ಮೂಲಮ್
ಪಯಃ ಸ್ತನಾಭ್ಯಾಂ ಸುಸ್ರಾವ ನೇತ್ರಜೈಃ ಸಲಿಲೈಃ ಶಿವೈಃ ।
ತದಾಭಿಷಿಚ್ಯಮಾನಾಭ್ಯಾಂ ವೀರ ವೀರಸುವೋ ಮುಹುಃ ॥
ಅನುವಾದ
ವೀರನಾದ ವಿದುರನೇ! ಆ ವೀರ ಮಾತೆಯಾದ ಸುನೀತಿಯ ಸ್ತನಗಳು ಕಂಗಳಿಂದ ಹರಿಯುತ್ತಿದ್ದ ಮಂಗಳಮಯ ಅಶ್ರುಧಾರೆಗಳಿಂದ ನೆನೆದು ಅವುಗಳಿಂದ ಮತ್ತೆ-ಮತ್ತೆ ಹಾಲು ಸುರಿಯತೊಡಗಿತು. ॥50॥
(ಶ್ಲೋಕ - 51)
ಮೂಲಮ್
ತಾಂ ಶಶಂಸುರ್ಜನಾ ರಾಜ್ಞೀಂ ದಿಷ್ಟ್ಯಾ ತೇಪುತ್ರ ಆರ್ತಿಹಾ ।
ಪ್ರತಿಲಬ್ಧಶ್ಚಿರಂ ನಷ್ಟೋ ರಕ್ಷಿತಾ ಮಂಡಲಂ ಭುವಃ ॥
ಅನುವಾದ
ಆಗ ಪುರಜನರು ಸುನೀತಿಯನ್ನು ಕುರಿತು ಮಹಾ ರಾಣಿಯವರೇ! ಬಹುದಿನಗಳಿಂದ ಕಳೆದುಹೋಗಿದ್ದ ನಿಮ್ಮ ಕಣ್ಮಣಿ ಕಂದಮ್ಮನು ಹಿಂದಿರುಗಿ ಬಂದನು. ಎಂತಹ ಮಹಾಭಾಗ್ಯ! ಇವನು ನಮ್ಮೆಲ್ಲರ ದುಃಖವನ್ನು ದೂರ ಮಾಡುವನು. ಬಹಳಕಾಲ ಭೂಮಂಡಲವನ್ನು ರಕ್ಷಿಸುವನು. ॥51॥
(ಶ್ಲೋಕ - 52)
ಮೂಲಮ್
ಅಭ್ಯರ್ಚಿತಸ್ತ್ವಯಾ ನೂನಂ ಭಗವಾನ್ಪ್ರಣತಾರ್ತಿಹಾ ।
ಯದನುಧ್ಯಾಯಿನೋ ಧೀರಾ ಮೃತ್ಯುಂ ಜಿಗ್ಯುಃ ಸುದುರ್ಜಯಮ್ ॥
ಅನುವಾದ
ನೀವು ನಿಜವಾಗಿಯೂ ಶರಣಾಗತರ ಭಯವನ್ನು ಭಂಜಿಸುವ ಶ್ರೀಹರಿಯನ್ನು ಚೆನ್ನಾಗಿ ಆರಾಧಿಸಿದ್ದೀರಿ. ಅವನನ್ನು ನಿರಂತರವಾಗಿ ಧ್ಯಾನಿಸುವ ಧೀರ ಪುರುಷರು ಪರಮ ದುರ್ಜಯವಾದ ಮೃತ್ಯುವನ್ನೂ ಗೆದ್ದು ಬಿಡುತ್ತಾರೆ’ ಎಂದು ಹೇಳಿ ಅಭಿನಂದಿಸಿದರು. ॥52॥
(ಶ್ಲೋಕ - 53)
ಮೂಲಮ್
ಲಾಲ್ಯಮಾನಂ ಜನೈರೇವಂ ಧ್ರುವಂ ಸಭ್ರಾತರಂ ನೃಪಃ ।
ಆರೋಪ್ಯ ಕರಿಣೀಂ ಹೃಷ್ಟಃ ಸ್ತೂಯಮಾನೋವಿಶತ್ಪುರಮ್ ॥
ಅನುವಾದ
ಹೀಗೆ ಎಲ್ಲ ಜನರು ಧ್ರುವಕುಮಾರನನ್ನು ಮುದ್ದಿಸುತ್ತಿರಲು ಉತ್ತಾನಪಾದರಾಜನು ಆತನನ್ನೂ ಮತ್ತು ಆತನ ತಮ್ಮ ಉತ್ತಮನನ್ನೂ ಹೆಣ್ಣಾನೆಯ ಮೇಲೆ ಕುಳ್ಳಿರಿಸಿ ಎಲ್ಲರಿಂದಲೂ ಹೊಗಳಿಸಿಕೊಳ್ಳುತ್ತಾ ಪರಮ ಹರ್ಷದಿಂದ ಪುರವನ್ನು ಪ್ರವೇಶಿಸಿದನು. ॥53॥
(ಶ್ಲೋಕ - 54)
ಮೂಲಮ್
ತತ್ರ ತತ್ರೋಪಸಂಕ್ಲೃಪ್ತೈರ್ಲಸನ್ಮಕರತೋರಣೈಃ ।
ಸವೃಂದೈಃ ಕದಲೀಸ್ತಂಭೈಃ ಪೂಗಪೋತೈಶ್ಚ ತದ್ವಿಧೈಃ ॥
ಅನುವಾದ
ಧ್ರುವನನ್ನು ಸ್ವಾಗತಿಸಲು ಜನರು ನಗರದ ಎಲ್ಲೆಡೆ ಮಕರಾಕಾರದ ಸುಂದರವಾದ ದ್ವಾರ ತೋರಣಗಳನ್ನು ರಚಿಸಿದ್ದರು. ಹೂವು-ಹಣ್ಣುಗಳ ಗೊಂಚಲು-ಗೊನೆಗಳಿಂದ ಕೂಡಿದ ಬಾಳೆಯ ಕಂಬಗಳಿಂದಲೂ ಎಳೆಯ ಅಡಿಕೆಯ ಸಸಿಗಳಿಂದಲೂ ಸಿಂಗರಿಸಿದ್ದರು. ॥54॥
(ಶ್ಲೋಕ - 55)
ಮೂಲಮ್
ಚೂತಪಲ್ಲವವಾಸಃಸ್ರಙ್ಮುಕ್ತಾದಾಮವಿಲಂಬಿಭಿಃ ।
ಉಪಸ್ಕೃತಂ ಪ್ರತಿದ್ವಾರಮಪಾಂ ಕುಂಭೈಃ ಸದೀಪಕೈಃ ॥
ಅನುವಾದ
ಪ್ರತಿಯೊಂದು ಬಾಗಿಲುಗಳಲ್ಲಿಯೂ ಜಲಕಲಶಗಳನ್ನಿಟ್ಟು ದೀಪಗಳನ್ನು ಬೆಳಗಿಸಿದ್ದರು. ಮಾವಿನ ಚಿಗುರುಗಳನ್ನೂ, ವಸ್ತ್ರಗಳನ್ನೂ, ಹೂಮಾಲೆಗಳನ್ನೂ, ಮುತ್ತಿನ ಹಾರಗಳನ್ನೂ ಕಟ್ಟಿ ಅಲಂಕರಿಸಿದ್ದರು. ॥55॥
(ಶ್ಲೋಕ - 56)
ಮೂಲಮ್
ಪ್ರಾಕಾರೈರ್ಗೋಪುರಾಗಾರೈಃ ಶಾತಕುಂಭಪರಿಚ್ಛದೈಃ ।
ಸರ್ವತೋಲಂಕೃತಂ ಶ್ರೀಮದ್ವಿಮಾನಶಿಖರದ್ಯುಭಿಃ ॥
ಅನುವಾದ
ನಗರದ ಪ್ರಾಕಾರಗಳೂ, ಹೆಬ್ಬಾಗಿಲುಗಳೂ, ಭವ್ಯ ಭವನಗಳೂ ಚಿನ್ನದ ಕೆತ್ತನೆಗಳಿಂದ ಎಲ್ಲೆಡೆಯಲ್ಲೂ ಅಲಂಕೃತವಾಗಿದ್ದವು. ಅವುಗಳ ಗೋಪುರಗಳು ವಿಮಾನಗಳ ಶಿಖರಗಳಂತೆ ಹೊಳೆಯುತ್ತಿದ್ದವು. ॥56॥
(ಶ್ಲೋಕ - 57)
ಮೂಲಮ್
ಮೃಷ್ಟಚತ್ವರರಥ್ಯಾಟ್ಟಮಾರ್ಗಂ ಚಂದನಚರ್ಚಿತಮ್ ।
ಲಾಜಾಕ್ಷತೈಃ ಪುಷ್ಪಲೈಸ್ತಂಡುಲೈರ್ಬಲಿಭಿರ್ಯುತಮ್ ॥
ಅನುವಾದ
ನಗರದ ರಸ್ತೆಗಳನ್ನೂ, ವೃತ್ತಗಳನ್ನೂ, ಜಗುಲಿಗಳನ್ನು ಗುಡಿಸಿ-ಸಾರಿಸಿ ಅವುಗಳ ಮೇಲೆ ಗಂಧೋದಕವನ್ನು ಚಿಮುಕಿಸಲಾಗಿತ್ತು. ಅರಳು-ಅಕ್ಷತೆಗಳು, ಅಕ್ಕಿ-ಹೂವು- ಹಣ್ಣುಗಳೇ ಮುಂತಾದ ಮಂಗಳೋಪಹಾರಗಳು ಅಳವಡಿಸಲ್ಪಟ್ಟಿದ್ದವು. ॥57॥
(ಶ್ಲೋಕ - 58)
ಮೂಲಮ್
ಧ್ರುವಾಯ ಪಥಿ ದೃಷ್ಟಾಯ ತತ್ರ ತತ್ರ ಪುರಸಿಯಃ ।
ಸಿದ್ಧಾರ್ಥಾಕ್ಷತದಧ್ಯಂಬುದೂರ್ವಾಪುಷ್ಪಲಾನಿ ಚ ॥
(ಶ್ಲೋಕ - 59)
ಮೂಲಮ್
ಉಪಜಹ್ರುಃ ಪ್ರಯುಂಜಾನಾ ವಾತ್ಸಲ್ಯಾದಾಶಿಷಃ ಸತೀಃ ।
ಶೃಣ್ವಂಸ್ತದ್ವಲ್ಗುಗೀತಾನಿ ಪ್ರಾವಿಶದ್ಭವನಂ ಪಿತುಃ ॥
ಅನುವಾದ
ಧ್ರುವನು ರಾಜಮಾರ್ಗದಲ್ಲಿ ಮೆರವಣಿಗೆ ಹೋಗುತ್ತಿರುವಾಗ ಅಲ್ಲಲ್ಲಿ ನಗರದ ಸುಂದರ ಸುಮಂಗಲಿಯರು ಅವನ ದರ್ಶನಪಡೆಯಲು ನೆರೆದಿದ್ದರು. ಅವರು ವಾತ್ಸಲ್ಯದಿಂದ ಶುಭಾಶೀರ್ವಾದಗಳನ್ನು ಮಾಡುತ್ತಾ ಆತನ ಮೇಲೆ ಬಿಳಿಸಾಸುವೆ, ಅಕ್ಷತೆ, ಮೊಸರು, ತೀರ್ಥೋದಕ, ಗರಿಕೆ, ಹೂವು- ಹಣ್ಣುಗಳ ಮಳೆಗರೆಯುತ್ತಿದ್ದರು. ಅವರು ಹಾಡುತ್ತಿದ್ದ ಇಂಪಾದ ಗೀತೆಗಳನ್ನು ಕೇಳುತ್ತಾ ಧ್ರುವನು ತನ್ನ ತಂದೆಯ ಅರಮನೆಯನ್ನು ಪ್ರವೇಶಿಸಿದನು. ॥58-59॥
(ಶ್ಲೋಕ - 60)
ಮೂಲಮ್
ಮಹಾಮಣಿವ್ರಾತಮಯೇ ಸ ತಸ್ಮಿನ್ ಭವನೋತ್ತಮೇ ।
ಲಾಲಿತೋ ನಿತರಾಂ ಪಿತ್ರಾ ನ್ಯವಸದ್ದಿವಿ ದೇವವತ್ ॥
ಅನುವಾದ
ಆ ಭವ್ಯ ಭವನವು ಬಹುಮೂಲ್ಯವಾದ ವಿವಿಧ ರತ್ನಗಳಿಂದ ಖಚಿತವಾಗಿ ಕಂಗೊಳಿಸುತ್ತಿತ್ತು. ಅಲ್ಲಿ ತಂದೆಯ ವಾತ್ಸಲ್ಯದ ಸುಖವನ್ನು ಅನುಭವಿಸುತ್ತಾ ಧ್ರುವನು ಸ್ವರ್ಗದಲ್ಲಿ ದೇವತೆಗಳು ವಾಸಿಸುವಂತೆ ಪರಮಾನಂದದಿಂದ ಇರುತ್ತಿದ್ದನು. ॥60॥
(ಶ್ಲೋಕ - 61)
ಮೂಲಮ್
ಪಯಃೇನನಿಭಾಃ ಶಯ್ಯಾ ದಾಂತಾ ರುಕ್ಮಪರಿಚ್ಛದಾಃ ।
ಆಸನಾನಿ ಮಹಾರ್ಹಾಣಿ ಯತ್ರ ರೌಕ್ಮಾ ಉಪಸ್ಕರಾಃ ॥
ಅನುವಾದ
ಅಲ್ಲಿ ಹಾಲಿನ ನೊರೆಯಂತೆ ಬೆಳ್ಳಗಿದ್ದ ಮೃದುವಾದ ತಲ್ಪಗಳೂ, ಆನೆಯ ದಂತದ ಮಂಚಗಳೂ, ಚಿನ್ನದ ಕುಸುರಿಕೆಲಸದಿಂದ ಕೂಡಿದ ಪರದೆ ಗಳೂ, ಬಹುಮೂಲ್ಯವಾದ ಪೀಠಗಳೂ, ಹೇರಳವಾದ ಚಿನ್ನದ ಸಲಕರಣೆಗಳು ಇದ್ದುವು. ॥61॥
(ಶ್ಲೋಕ - 62)
ಮೂಲಮ್
ಯತ್ರ ಸ್ಫಟಿಕಕುಡ್ಯೇಷು ಮಹಾಮಾರಕತೇಷು ಚ ।
ಮಣಿಪ್ರದೀಪಾ ಆಭಾಂತಿ ಲಲನಾರತ್ನಸಂಯುತಾಃ ॥
ಅನುವಾದ
ಸ್ಫಟಿಕದಿಂದಲೂ, ಮರಕತಮಣಿಗಳಿಂದಲೂ ರಚಿತವಾಗಿದ್ದ ಗೋಡೆಗಳಲ್ಲಿ ಕೆತ್ತಿದ ರತ್ನಖಚಿತ ಹೆಣ್ಣುಬೊಂಬೆಗಳ ಕೈಯಲ್ಲಿ ನೂರಾರು ಮಣಿದೀಪಗಳು ಬೆಳಗುತ್ತಿದ್ದವು. ॥62॥
(ಶ್ಲೋಕ - 63)
ಮೂಲಮ್
ಉದ್ಯಾನಾನಿ ಚ ರಮ್ಯಾಣಿ ವಿಚಿತ್ರೈರಮರದ್ರುಮೈಃ ।
ಕೂಜದ್ವಿಹಂಗಮಿಥುನೈರ್ಗಾಯನ್ಮತ್ತಮಧುವ್ರತೈಃ ॥
ಅನುವಾದ
ಅರಮನೆಯ ಸುತ್ತಲೂ ನಾನಾಜಾತಿಯ ದಿವ್ಯವೃಕ್ಷಗಳಿಂದ ಕೂಡಿದ ಸುಂದರ ಉದ್ಯಾನವನಗಳಿದ್ದವು. ಅದರಲ್ಲಿ ಗಂಡು ಮತ್ತು ಹೆಣ್ಣು ಹಕ್ಕಿಗಳ ಕಲರವದಿಂದ ಹಾಗೂ ದುಂಬಿಗಳ ಝೇಂಕಾರಗಳಿಂದ ಕಿವಿಗಳು ತಣಿಯುತ್ತಿದ್ದವು. ॥63॥
(ಶ್ಲೋಕ - 64)
ಮೂಲಮ್
ವಾಪ್ಯೋ ವೈದೂರ್ಯಸೋಪಾನಾಃ ಪದ್ಮೋತ್ಪಲಕುಮುದ್ವತೀಃ ।
ಹಂಸಕಾರಂಡ ವಕುಲೈರ್ಜುಷ್ಟಾಶ್ಚಕ್ರಾಹ್ವಸಾರಸೈಃ ॥
ಅನುವಾದ
ಆ ಹೂದೋಟಗಳಲ್ಲಿ ವೈಡೂರ್ಯ ಮಣಿಗಳ ಸೋಪಾನಗಳಿಂದ ರಚಿತವಾದ ತಿಳಿನೀರಿನ ಕೊಳಗಳು ಶೋಭಿಸುತ್ತಿದ್ದವು. ಅವುಗಳಲ್ಲಿ ಕೆಂಪು, ನೀಲಿ, ಬಿಳಿಯ ಬಣ್ಣಗಳ ಅರಳಿದ ಕಮಲಗಳಿಂದಲೂ, ಆಟವಾಡುತ್ತಿದ್ದ ಹಂಸ, ಕಾರಂಡವ, ಚಕ್ರವಾಕ, ಸಾರಸಗಳೇ ಮುಂತಾದ ಪಕ್ಷಿಗಳಿಂದಲೂ ಕಂಗೊಳಿಸುತ್ತಿದ್ದುವು. ॥64॥
(ಶ್ಲೋಕ - 65)
ಮೂಲಮ್
ಉತ್ತಾನಪಾದೋ ರಾಜರ್ಷಿಃ ಪ್ರಭಾವಂ ತನಯಸ್ಯ ತಮ್ ।
ಶ್ರುತ್ವಾ ದೃಷ್ಟ್ವಾದ್ಭುತತಮಂ ಪ್ರಪೇದೇ ವಿಸ್ಮಯಂ ಪರಮ್ ॥
ಅನುವಾದ
ರಾಜರ್ಷಿಯಾದ ಉತ್ತಾನಪಾದನು ಪುತ್ರನ ಅತ್ಯಂತ ಅದ್ಭುತವಾದ ಪ್ರಭಾವವನ್ನು ದೇವರ್ಷಿ ನಾರದರಿಂದ ಹಿಂದೆ ಕೇಳಿದ್ದನು. ಈಗ ಅದನ್ನು ಪ್ರತ್ಯಕ್ಷವಾಗಿಯೇ ನೋಡಿ ಅವನಿಗೆ ತುಂಬಾ ಆಶ್ಚರ್ಯವಾಯಿತು. ॥65॥
(ಶ್ಲೋಕ - 66)
ಮೂಲಮ್
ವೀಕ್ಷ್ಯೋಢವಯಸಂ ತಂ ಚ ಪ್ರಕೃತೀನಾಂ ಚ ಸಮ್ಮತಮ್ ।
ಅನುರಕ್ತಪ್ರಜಂ ರಾಜಾ ಧ್ರುವಂ ಚಕ್ರೇ ಭುವಃ ಪತಿಮ್ ॥
ಅನುವಾದ
ಅನಂತರ ಅವನು ಧ್ರುವನು ವಿವಾಹದ ವಯಸ್ಸಿಗೆ ಬಂದಿರುವುದನ್ನೂ, ಅಮಾತ್ಯವರ್ಗವು ಅವನನ್ನು ಆದರ ಬುದ್ಧಿಯಿಂದ ನೋಡುವುದನ್ನೂ, ಪ್ರಜೆಗಳೂ ಕೂಡ ಆತನಲ್ಲಿ ಅನುರಕ್ತವಾಗಿರುವುದನ್ನೂ ಗಮನಿಸಿ ಅವನಿಗೆ ಅಖಿಲ ಭೂಮಂಡಲದ ಆಧಿಪತ್ಯದ ಪಟ್ಟಾಭಿಷೇಕವನ್ನು ಮಾಡಿದನು. ॥66॥
(ಶ್ಲೋಕ - 67)
ಮೂಲಮ್
ಆತ್ಮಾನಂ ಚ ಪ್ರವಯಸಮಾಕಲಯ್ಯ ವಿಶಾಂಪತಿಃ ।
ವನಂ ವಿರಕ್ತಃ ಪ್ರಾತಿಷ್ಠದ್ವಿಮೃಶನ್ನಾತ್ಮನೋ ಗತಿಮ್ ॥
ಅನುವಾದ
ಮತ್ತೆ ತನಗೆ ಮುಪ್ಪು ಬಂದಿರುವುದನ್ನು ತಿಳಿದು ಆತ್ಮೋದ್ಧಾರದ ಗತಿಯನ್ನು ಚಿಂತಿಸುತ್ತಾ ಸಂಸಾರದಲ್ಲಿ ವಿರಕ್ತನಾಗಿ ವನಕ್ಕೆ ಹೊರಟು ಹೋದನು. ॥67॥
ಅನುವಾದ (ಸಮಾಪ್ತಿಃ)
ಒಂಭತ್ತನೆಯ ಅಧ್ಯಾಯವು ಮುಗಿಯಿತು. ॥9॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಚತುರ್ಥಸ್ಕಂಧೇ ಧ್ರುವರಾಜ್ಯಾಭಿಷೇಕವರ್ಣನಂ ನಾಮ ನವಮೋಽಧ್ಯಾಯಃ ॥9॥