[ಏಳನೆಯ ಅಧ್ಯಾಯ]
ಭಾಗಸೂಚನಾ
ದಕ್ಷಯಜ್ಞದ ಪರಿಸಮಾಪ್ತಿ
(ಶ್ಲೋಕ - 1)
ಮೂಲಮ್ (ವಾಚನಮ್)
ಮೈತ್ರೇಯ ಉವಾಚ
ಮೂಲಮ್
ಇತ್ಯಜೇನಾನುನೀತೇನ ಭವೇನ ಪರಿತುಷ್ಯತಾ ।
ಅಭ್ಯಧಾಯಿ ಮಹಾಬಾಹೋ ಪ್ರಹಸ್ಯ ಶ್ರೂಯತಾಮಿತಿ ॥
ಅನುವಾದ
ಶ್ರೀಮೈತ್ರೇಯರು ಹೇಳುತ್ತಾರೆ — ಮಹಾಬಾಹುವಾದ ವಿದುರನೇ! ಬ್ರಹ್ಮದೇವರು ಈ ವಿಧವಾಗಿ ಪ್ರಾರ್ಥಿಸಿದಾಗ ಭಗವಾನ್ ಶಂಕರನು ಪ್ರಸನ್ನತೆಯಿಂದ ನಗುತ್ತಾ ಹೀಗೆ ಹೇಳಿದನು ಕೇಳಿರಿ. ॥1॥
(ಶ್ಲೋಕ - 2)
ಮೂಲಮ್ (ವಾಚನಮ್)
ಶ್ರೀಮಹಾದೇವ ಉವಾಚ
ಮೂಲಮ್
ನಾಘಂ ಪ್ರಜೇಶ ಬಾಲಾನಾಂ ವರ್ಣಯೇ ನಾನುಚಿಂತಯೇ ।
ದೇವಮಾಯಾಭಿಭೂತಾನಾಂ ದಂಡಸ್ತತ್ರ ಧೃತೋ ಮಯಾ ॥
ಅನುವಾದ
ಶ್ರೀಮಹಾದೇವನಿಂತೆಂದನು — ಪ್ರಜಾಪತಿಯೇ! ಭಗ ವಂತನ ಮಾಯೆಯಿಂದ ಮೋಹಿತರಾದ ದಕ್ಷನಂತಹ ತಿಳಿ ಗೇಡಿಗಳ ಅಪರಾಧವನ್ನು ನಾನು ಚರ್ಚಿಸುವುದಿಲ್ಲ ಹಾಗೂ ನೆನಪಿಡುವುದೂ ಇಲ್ಲ. ನಾನಾದರೋ ಕೇವಲ ಅವನನ್ನು ಎಚ್ಚರಿಸಲಿಕ್ಕಾಗಿ ಸ್ವಲ್ಪ ದಂಡನೆಯನ್ನು ವಿಧಿಸಿದ್ದೇನೆ. ॥2॥
(ಶ್ಲೋಕ - 3)
ಮೂಲಮ್
ಪ್ರಜಾಪತೇರ್ದಗ್ಧಶೀರ್ಷ್ಣೋ ಭವತ್ವಜಮುಖಂ ಶಿರಃ ।
ಮಿತ್ರಸ್ಯ ಚಕ್ಷುಷೇಕ್ಷೇತ ಭಾಗಂ ಸ್ವಂ ಬರ್ಹಿಷೋ ಭಗಃ ॥
ಅನುವಾದ
ದಕ್ಷಪ್ರಜಾಪತಿಯ ತಲೆಯು ಸುಟ್ಟುಹೋಗಿದೆ. ಅದಕ್ಕಾಗಿ ಅವನಿಗೆ ಹೋತದ ತಲೆ ಜೋಡಿಸಲಾಗುವುದು. ಭಗ ದೇವತೆಯು ಮಿತ್ರದೇವತೆಯ ಕಣ್ಣುಗಳಿಂದ ತನ್ನ ಯಜ್ಞಭಾಗವನ್ನು ನೋಡಲಿ. ॥3॥
(ಶ್ಲೋಕ - 4)
ಮೂಲಮ್
ಪೂಷಾ ತು ಯಜಮಾನಸ್ಯ ದದ್ಭಿರ್ಜಕ್ಷತು ಪಿಷ್ಟಭುಕ್ ।
ದೇವಾಃ ಪ್ರಕೃತಸರ್ವಾಂಗಾ ಯೇ ಮ ಉಚ್ಛೇಷಣಂ ದದುಃ ॥
ಅನುವಾದ
ಹಿಟ್ಟಿನ ರೂಪದಲ್ಲಿ ಆಹಾರವನ್ನು ತಿನ್ನುತ್ತಿದ್ದ ಪೂಷಾದೇವತೆಯು ಯಜಮಾನನ ಹಲ್ಲು ಗಳಿಂದ ಹವಿರ್ಭಾಗವನ್ನು ತಿನ್ನುವಂತಾಗಲಿ. ಅಂಗವೈಕಲ್ಯ ವನ್ನು ಪಡೆದ ಇತರ ದೇವತೆಗಳ ಅಂಗೋಪಾಂಗಗಳು ಆರೋಗ್ಯವನ್ನು ಹೊಂದಲಿ. ಏಕೆಂದರೆ, ಅವರು ಯಜ್ಞದ ಶೇಷ ಭಾಗವಾದ ‘ಸ್ವಿಷ್ಟಕೃತ್’ ಎಂಬ ಹವಿರ್ಭಾಗವು ನನಗೆ ಸೇರತಕ್ಕದೆಂದು ನಿಶ್ಚಯಿಸಿರುವರು. ॥4॥
(ಶ್ಲೋಕ - 5)
ಮೂಲಮ್
ಬಾಹುಭ್ಯಾಮಶ್ವಿನೋಃ ಪೂಷ್ಣೋ ಹಸ್ತಾಭ್ಯಾಂ ಕೃತಬಾಹವಃ ।
ಭವಂತ್ವಧ್ವರ್ಯವಶ್ಚಾನ್ಯೇ ಬಸ್ತಶ್ಮಶ್ರುರ್ಭೃಗುರ್ಭವೇತ್ ॥
ಅನುವಾದ
ಅಧ್ವರ್ಯುಗಳೇ ಮುಂತಾದ ಋತ್ವಿಜರಲ್ಲಿ ಭುಜಗಳು ಮುರಿದು ಹೋಗಿರು ವವರು ಅಶ್ವಿನೀ ದೇವತೆಗಳ ಭುಜಗಳಿಂದಲೂ, ಹಸ್ತಗಳನ್ನು ಕಳೆದು ಕೊಂಡಿರುವವರು ಪೂಷಾದೇವತೆಯ ಕೈಗಳಿಂದಲೂ ತಮ್ಮ ಕಾರ್ಯಗಳನ್ನು ಮಾಡಲಿ. ಭೃಗುಮಹರ್ಷಿಗಳಿಗೆ ಹೋತದಂತಹ ಗಡ್ಡ-ಮೀಸೆಗಳು ಉಂಟಾಗಲಿ. ॥5॥
(ಶ್ಲೋಕ - 6)
ಮೂಲಮ್ (ವಾಚನಮ್)
ಮೈತ್ರೇಯ ಉವಾಚ
ಮೂಲಮ್
ತದಾ ಸರ್ವಾಣಿ ಭೂತಾನಿ ಶ್ರುತ್ವಾ ಮೀಢುಷ್ಟಮೋದಿತಮ್ ।
ಪರಿತುಷ್ಟಾತ್ಮಭಿಸ್ತಾತ ಸಾಧು ಸಾಧ್ವಿತ್ಯಥಾಬ್ರುವನ್ ॥
ಅನುವಾದ
ಶ್ರೀಮೈತ್ರೇಯರು ಹೇಳುತ್ತಾರೆ — ವತ್ಸ ವಿದುರನೇ! ಆಗ ಭಗವಾನ್ಶಂಕರನ ಮಾತನ್ನು ಕೇಳಿ ಎಲ್ಲರೂ ಪ್ರಸನ್ನಾತ್ಮರಾಗಿ ಧನ್ಯ-ಧನ್ಯವೆಂದು ಕೊಂಡಾಡಿ ಜಯಕಾರಮಾಡಿದರು.॥6॥
(ಶ್ಲೋಕ - 7)
ಮೂಲಮ್
ತತೋ ಮೀಢ್ವಾಂಸಮಾಮಂತ್ರ್ಯ ಶುನಾಸೀರಾಃ ಸಹರ್ಷಿಭಿಃ ।
ಭೂಯಸ್ತದ್ದೇವಯಜನಂ ಸಮೀಢ್ವದ್ವೇಧಸೋ ಯಯುಃ ॥
ಅನುವಾದ
ಮತ್ತೆ ಎಲ್ಲ ದೇವತೆಗಳೂ ಮತ್ತು ಋಷಿಗಳೂ ಮಹಾದೇವನನ್ನು ದಕ್ಷನ ಯಜ್ಞಕ್ಕೆ ದಯಮಾಡಿಸಬೇಕೆಂದು ಪ್ರಾರ್ಥಿಸಿ ಅವನನ್ನೂ ಮತ್ತು ಬ್ರಹ್ಮದೇವರನ್ನು ಕರೆದುಕೊಂಡು ಯಜ್ಞಶಾಲೆಗೆ ಹೋದರು. ॥7॥
(ಶ್ಲೋಕ - 8)
ಮೂಲಮ್
ವಿಧಾಯ ಕಾರ್ತ್ಸ್ನ್ಯೇನ ಚ ತದ್ಯದಾಹ ಭಗವಾನ್ಭವಃ ।
ಸಂದಧುಃ ಕಸ್ಯ ಕಾಯೇನ ಸವನೀಯಪಶೋಃ ಶಿರಃ ॥
ಅನುವಾದ
ಭಗವಾನ್ ಶಂಕರನು ಹೇಳಿದಂತೆಯೇ ಅಲ್ಲಿ ಎಲ್ಲವನ್ನು ಮಾಡಿದರು. ದಕ್ಷನ ದೇಹಕ್ಕೆ ಯಜ್ಞಪಶುವಿನ ತಲೆಯನ್ನು ಜೋಡಿಸಿದರು. ॥8॥
(ಶ್ಲೋಕ - 9)
ಮೂಲಮ್
ಸಂಧೀಯಮಾನೇ ಶಿರಸಿ ದಕ್ಷೋ ರುದ್ರಾಭಿವೀಕ್ಷಿತಃ ।
ಸದ್ಯಃ ಸುಪ್ತ ಇವೋತ್ತಸ್ಥೌ ದದೃಶೇ ಜಾಗ್ರತೋ ಮೃಡಮ್ ॥
ಅನುವಾದ
ತಲೆಯು ಜೋಡಿಸಿದಾಗ ರುದ್ರದೇವರ ದೃಷ್ಟಿ ಬೀಳುತ್ತಲೇ ದಕ್ಷನು ನಿದ್ದೆಯಿಂದ ಎಚ್ಚರಗೊಂಡ ವನಂತೆ ಮೇಲೆದ್ದು, ತನ್ನ ಮುಂದೆ ನಿಂತಿದ್ದ ಭಗವಾನ್ ಶಿವನನ್ನು ನೋಡಿದನು. ॥9॥
(ಶ್ಲೋಕ - 10)
ಮೂಲಮ್
ತದಾ ವೃಷಧ್ವಜದ್ವೇಷಕಲಿಲಾತ್ಮಾ ಪ್ರಜಾಪತಿಃ ।
ಶಿವಾವಲೋಕಾದಭವಚ್ಛರದ್ಧ್ರದ ಇವಾಮಲಃ ॥
ಅನುವಾದ
ಶಂಕರದ್ರೋಹದಿಂದ ಕಲುಷಿತವಾಗಿದ್ದ ಅವನ ಹೃದಯವು ಶಿವನ ದರ್ಶನದಿಂದ ಶರತ್ಕಾಲದ ಸರೋವರದಂತೆ ಸ್ವಚ್ಛವಾಗಿ ಬಿಟ್ಟಿತು. ॥10॥
(ಶ್ಲೋಕ - 11)
ಮೂಲಮ್
ಭವಸ್ತವಾಯ ಕೃತಧೀರ್ನಾಶಕ್ನೋದನುರಾಗತಃ ।
ಔತ್ಕಂಠ್ಯಾದ್ಬಾಷ್ಪಕಲಯಾ ಸಂಪರೇತಾಂ ಸುತಾಂ ಸ್ಮರನ್ ॥
ಅನುವಾದ
ಅವನು ಮಹಾದೇವನನ್ನು ಸ್ತುತಿಸಲು ಬಯಸಿದರೂ ಮೃತಿಯನ್ನೈದಿದ ತನ್ನ ಪುತ್ರಿಯು ಸ್ಮರಣೆಗೆ ಬಂದು ಪ್ರೀತಿ ಯಿಂದ ಹಾಗೂ ಉತ್ಕಂಠತೆಯ ಕಾರಣ ಅವನ ಕಣ್ಣುಗಳಲ್ಲಿ ನೀರು ತುಂಬಿ, ಮಾತೇ ಹೊರಡದಾಯಿತು. ॥11॥
(ಶ್ಲೋಕ - 12)
ಮೂಲಮ್
ಕೃಚ್ಛ್ರಾತ್ಸಂಸ್ತಭ್ಯ ಚ ಮನಃ ಪ್ರೇಮವಿಹ್ವಲಿತಃ ಸುಧೀಃ ।
ಶಶಂಸ ನಿರ್ವ್ಯಲೀಕೇನ ಭಾವೇನೇಶಂ ಪ್ರಜಾಪತಿಃ ॥
ಅನುವಾದ
ಪ್ರೇಮವಿಹ್ವಲ, ಮೇಧಾವಿಯಾದ ಪ್ರಜಾಪತಿಯು ಹೇಗೋ ತನ್ನ ಹೃದಯದ ಶೋಕವೇಗವನ್ನು ತಡೆದುಕೊಂಡು, ವಿಶುದ್ಧಭಾವದಿಂದ ಭಗವಾನ್ ಶಿವನನ್ನು ಸ್ತುತಿಸ ತೊಡಗಿದನು. ॥12॥
(ಶ್ಲೋಕ - 13)
ಮೂಲಮ್ (ವಾಚನಮ್)
ದಕ್ಷ ಉವಾಚ
ಮೂಲಮ್
ಭೂಯಾನನುಗ್ರಹ ಅಹೋ ಭವತಾ ಕೃತೋ ಮೇ
ದಂಡಸ್ತ್ವಯಾ ಮಯಿ ಭೃತೋ ಯದಪಿ ಪ್ರಲಬ್ಧಃ ।
ನ ಬ್ರಹ್ಮ ಬಂಧುಷು ಚ ವಾಂ ಭಗವನ್ನವಜ್ಞಾ
ತುಭ್ಯಂ ಹರೇಶ್ಚ ಕುತ ಏವ ಧೃತವ್ರತೇಷು ॥
ಅನುವಾದ
ದಕ್ಷನು ಹೇಳುತ್ತಾನೆ — ‘‘ಭಗವಂತನೇ! ನಾನು ನಿನ್ನಲ್ಲಿ ಮಹಾಪರಾಧವನ್ನೇ ಮಾಡಿದ್ದೆ. ಆದರೆ ನೀನು ಅದರ ಬದಲಿಗೆ ನನ್ನನ್ನು ಶಿಕ್ಷೆಯ ಮೂಲಕ ಶುದ್ಧಗೊಳಿಸಿ ಮಹದನುಗ್ರಹವನ್ನೇ ಮಾಡಿರುವೆ. ಆಹಾ! ಎಂತಹ ಕೃಪೆ ನಿನ್ನದು! ಪೂಜ್ಯನಾದ ನೀನು ಮತ್ತು ಶ್ರೀಹರಿಯಾದರೋ ಆಚಾರಹೀನರಾದ ಹೆಸರಿಗೆ ಮಾತ್ರ ಬ್ರಾಹ್ಮಣರನ್ನೂ ಕೂಡ ಉಪೇಕ್ಷಿಸುವುದಿಲ್ಲ. ಹಾಗಿರುವಾಗ ನಮ್ಮಂತಹ ಯಜ್ಞ ಮಾಡುವವರನ್ನು ಮರೆಯುವುದುಂಟೇ? ॥13॥
(ಶ್ಲೋಕ - 14)
ಮೂಲಮ್
ವಿದ್ಯಾತಪೋವ್ರತಧರಾನ್ಮುಖತಃ ಸ್ಮ ವಿಪ್ರಾನ್
ಬ್ರಹ್ಮಾತ್ಮತತ್ತ್ವಮವಿತುಂ ಪ್ರಥಮಂ ತ್ವಮಸ್ರಾಕ್ ।
ತದ್ಬ್ರಾಹ್ಮಣಾನ್ಪರಮ ಸರ್ವವಿಪತ್ಸು ಪಾಸಿ
ಪಾಲಃ ಪಶೂನಿವ ವಿಭೋ ಪ್ರಗೃಹೀತದಂಡಃ ॥
ಅನುವಾದ
ಪ್ರಭುವೇ! ನೀನೇ ಬ್ರಹ್ಮರೂಪದಿಂದ ಮೊಟ್ಟಮೊದಲು ಆತ್ಮತತ್ತ್ವವನ್ನು ರಕ್ಷಿಸಲಿಕ್ಕಾಗಿ ತನ್ನ ಮುಖದಿಂದ ವಿದ್ಯೆ, ತಪಸ್ಸು, ವ್ರತಾದಿಗಳನ್ನು ಧರಿಸುವ ಬ್ರಾಹ್ಮಣರನ್ನು ಸೃಷ್ಟಿ ಮಾಡಿದೆ. ಅನಂತರ ಗೋವಳನು ದೊಣ್ಣೆ ಹಿಡಿದುಕೊಂಡು ಗೋವುಗಳನ್ನು ರಕ್ಷಿಸುತ್ತಿರುವಂತೇ ಆ ಬ್ರಾಹ್ಮಣರನ್ನು ಸಕಲ ವಿಪತ್ತುಗಳಿಂದ ರಕ್ಷಿಸುತ್ತಿರುವೆ. ॥14॥
(ಶ್ಲೋಕ - 15)
ಮೂಲಮ್
ಯೋಸೌ ಮಯಾವಿದಿತತತ್ತ್ವದೃಶಾ ಸಭಾಯಾಂ
ಕ್ಷಿಪ್ತೋ ದುರುಕ್ತಿವಿಶಿಖೈರಗಣಯ್ಯ ತನ್ಮಾಮ್ ।
ಅರ್ವಾಕ್ಪತಂತಮರ್ಹತ್ತಮನಿಂದಯಾಪಾದ್
ದೃಷ್ಟ್ಯಾರ್ದ್ರಯಾ ಸ ಭಗವಾನ್ಸ್ವಕೃತೇನ ತುಷ್ಯೇತ್ ॥
ಅನುವಾದ
ನಾನು ನಿನ್ನ ತತ್ತ್ವವನ್ನು ತಿಳಿದಿರದಿಲಿಲ್ಲ. ಅದರಿಂದ ತುಂಬಿದ ಸಭೆಯಲ್ಲಿ ನಿನ್ನನ್ನು ವಾಗ್ಬಾಣಗಳಿಂದ ಘಾತಿಗೊಳಿಸಿದೆ. ಆದರೆ ನೀನು ನನ್ನ ಆ ಅಪರಾಧವನ್ನು ಎಣಿಸಲೇ ಇಲ್ಲ. ನಾನಾದರೋ ನಿಮ್ಮಂತಹ ಪೂಜ್ಯತಮ ಮಹಾನುಭಾವರ ವಿಷಯದದಲ್ಲಿ ಅಪರಾಧ ಮಾಡಿದ್ದರಿಂದ ನರಕಾದಿ ನೀಚ ಲೋಕಗಳಲ್ಲಿ ಬೀಳುವವನಾಗಿದ್ದೆ. ಆದರೆ ನೀನು ನಿನ್ನ ಕರುಣಾಪೂರ್ಣ ದೃಷ್ಟಿಯಿಂದ ನನ್ನನ್ನು ಉದ್ಧರಿಸಿ ಬಿಟ್ಟೆ. ಈಗಲೂ ನಿನ್ನನ್ನು ಸಂತೋಷಪಡಿಸುವಂತಹ ಯಾವ ಗುಣವೂ ನನ್ನಲ್ಲಿಲ್ಲ. ಆದರೆ ನೀನು ತನ್ನ ಔದಾರ್ಯದ ವರ್ತನೆಯಿಂದ ನಿನ್ನ ಮೇಲೆ ಪ್ರಸನ್ನನಾಗು.’’ ॥15॥
(ಶ್ಲೋಕ - 16)
ಮೂಲಮ್ (ವಾಚನಮ್)
ಮೈತ್ರೇಯ ಉವಾಚ
ಮೂಲಮ್
ಕ್ಷಮಾಪ್ಯೈವಂ ಸ ಮೀಢ್ವಾಂಸಂ ಬ್ರಹ್ಮಣಾ ಚಾನುಮಂತ್ರಿತಃ ।
ಕರ್ಮ ಸಂತಾನಯಾಮಾಸ ಸೋಪಾಧ್ಯಾಯರ್ತ್ವಿಗಾದಿಭಿಃ ॥
ಅನುವಾದ
ಶ್ರೀಮೈತ್ರೇಯರು ಹೇಳುತ್ತಾರೆ — ವಿದುರಾ! ಹೀಗೆ ಆಶುತೋಷ ಶಂಕರನಲ್ಲಿ ತಾನು ಮಾಡಿದ ಅಪರಾಧಕ್ಕೆ ಕ್ಷಮೆಯನ್ನೂ ಯಾಚಿಸಿ, ದಕ್ಷಪ್ರಜಾಪತಿಯು ಬ್ರಹ್ಮದೇವರ ಆದೇಶದಂತೆ ಉಪಾಧ್ಯಾಯರೂ, ಋತ್ವಿಜರೂ ಮುಂತಾದವರ ಸಹಾಯದಿಂದ ಮತ್ತೆ ಯಜ್ಞವನ್ನು ಪ್ರಾರಂಭಿಸಿದನು. ॥16॥
(ಶ್ಲೋಕ - 17)
ಮೂಲಮ್
ವೈಷ್ಣವಂ ಯಜ್ಞಸಂತತ್ಯೈ ತ್ರಿಕಪಾಲಂ ದ್ವಿಜೋತ್ತಮಾಃ ।
ಪುರೋಡಾಶಂ ನಿರವಪನ್ ವೀರಸಂಸರ್ಗಶುದ್ಧಯೇ ॥
ಅನುವಾದ
ಆಗ ಬ್ರಾಹ್ಮಣರು ಯಜ್ಞವನ್ನು ನೆರವೇರಿಸುವ ಉದ್ದೇಶದಿಂದ, ರುದ್ರ ಪರಿವಾರವಾದ ಭೂತ-ಪ್ರೇತಾದಿಗಳ ಸಂಬಂಧದಿಂದ ಉಂಟಾದ ದೋಷದ ಶಾಂತಿಗಾಗಿ ಮೂರು ಪಾತ್ರೆಗಳಲ್ಲಿ ಭಗವಾನ್ ವಿಷ್ಣುವಿಗಾಗಿ ಸಿದ್ಧಪಡಿಸಿದ ಪುರೋಡಾಶವೆಂಬ ಚರುವನ್ನು ಹೋಮ ಮಾಡಿದರು. ॥17॥
(ಶ್ಲೋಕ - 18)
ಮೂಲಮ್
ಅಧ್ವರ್ಯುಣಾತ್ತಹವಿಷಾ ಯಜಮಾನೋ ವಿಶಾಂಪತೇ ।
ಧಿಯಾ ವಿಶುದ್ಧಯಾ ದಧ್ಯೌ ತಥಾ ಪ್ರಾದುರಭೂದ್ಧರಿಃ ॥
ಅನುವಾದ
ವಿದುರನೇ! ಆ ಹವಿಸ್ಸನ್ನು ಕೈಯಲ್ಲಿ ಎತ್ತಿಕೊಂಡು ನಿಂತಿರುವ ಅಧ್ವರ್ಯುವಿನೊಡನೆ ಯಜಮಾನನಾದ ದಕ್ಷನು ಪರಿಶುದ್ಧವಾದ ಚಿತ್ತದಿಂದ ಧ್ಯಾನ ಮಾಡುತ್ತಲೇ ಭಗವಂತನು ಅಲ್ಲಿ ಪ್ರಕಟನಾದನು. ॥18॥
(ಶ್ಲೋಕ - 19)
ಮೂಲಮ್
ತದಾ ಸ್ವಪ್ರಭಯಾ ತೇಷಾಂ ದ್ಯೋತಯಂತ್ಯಾ ದಿಶೋ ದಶ ।
ಮುಷ್ಣಂಸ್ತೇಜ ಉಪಾನೀತಸ್ತಾರ್ಕ್ಷ್ಯೇಣ ಸ್ತೋತ್ರವಾಜಿನಾ ॥
ಅನುವಾದ
‘ಬೃಹತ್’ ಮತ್ತು ‘ರಥಂತರ’ ಎಂಬ ಸಾಮಮಂತ್ರಗಳೇ ರೆಕ್ಕಗಳುಳ್ಳ ಗರುಡದೇವರಿಂದ ಹತ್ತಿರಕ್ಕೆ ಒಯ್ಯಲ್ಪಟ್ಟ ಆ ಭಗವಂತನು ಹತ್ತುದಿಕ್ಕುಗಳನ್ನು ತನ್ನ ತೇಜಸ್ಸಿನಿಂದ ಬೆಳಗಿಸುತ್ತಾ, ತನ್ನ ಅಂಗಕಾಂತಿಯಿಂದ ಎಲ್ಲ ದೇವತೆಗಳ ತೇಜಸ್ಸನ್ನು ಕಸಿದುಕೊಂಡನು. ಅವನ ಮುಂದೆ ಎಲ್ಲರೂ ನಿಸ್ತೇಜರಾದರು. ॥19॥
(ಶ್ಲೋಕ - 20)
ಮೂಲಮ್
ಶ್ಯಾಮೋ ಹಿರಣ್ಯರಶನೋರ್ಕಕಿರೀಟಜುಷ್ಟೋ
ನೀಲಾಲಕಭ್ರಮರಮಂಡಿತಕುಂಡಲಾಸ್ಯಃ ।
ಕಂಬ್ವಬ್ಜಚಕ್ರಶರಚಾಪಗದಾಸಿಚರ್ಮ-
ವ್ಯಗ್ರೈರ್ಹಿರಣ್ಮಯಭುಜೈರಿವ ಕರ್ಣಿಕಾರಃ ॥
ಅನುವಾದ
ಅವನ ನೀಲಮೇಘದಂತೆ ಶ್ಯಾಮಲನಾದ ದೇಹಕಾಂತಿಯು. ನಡುವಿನಲ್ಲಿ ಕನಕದ ಕಟಿಸೂತ್ರವೂ, ಮಿಂಚಿನಂತೆ ಮಿನುಗುವ ಪೀತಾಂಬರವೂ ಪ್ರಕಾಶಿಸುತ್ತದೆ. ತಲೆಯಮೇಲೆ ಸೂರ್ಯನಂತೆ ದೇದೀಪ್ಯ ಮಾನವಾದ ಕಿರೀಟವಿತ್ತು. ಮುಖಕಮಲವೂ ದುಂಬಿಗಳಂತಿರುವ ನೀಲ ಮುಂಗುರುಳಗಳಿಂದ ಮತ್ತು ಹೊಳೆಯುವ ಕರ್ಣಕುಂಡಲಗಳಿಂದ ಶೋಭಿಸುತ್ತಿದೆ. ಭಕ್ತರ ರಕ್ಷಣೆಗಾಗಿ ಸದಾ ಸಿದ್ಧವಾಗಿರುವ ಎಂಟು ಭುಜಗಳು ಸುವರ್ಣಾಭರಣಗಳಿಂದ ಶೋಭಿಸುತ್ತಾ ಶಂಖ, ಪದ್ಮ, ಚಕ್ರ, ಬಾಣ, ಧನುಷ್ಯ, ಗದೆ, ಖಡ್ಗ ಮತ್ತು ಗುರಾಣಿಗಳೆಂಬ ದಿವ್ಯಾಯುಧಗಳನ್ನು ಧರಿಸಿ, ಪುಷ್ಪಗಳಿಂದ ತುಂಬಿದ ಕರ್ಣಿಕಾರವೃಕ್ಷದಂತೆ ವಿರಾಜಿಸುತ್ತಿವೆ. ॥20॥
(ಶ್ಲೋಕ - 21)
ಮೂಲಮ್
ವಕ್ಷಸ್ಯಧಿಶ್ರಿತವಧೂರ್ವನಮಾಲ್ಯುದಾರ-
ಹಾಸಾವಲೋಕಕಲಯಾ ರಮಯಂಶ್ಚ ವಿಶ್ವಮ್ ।
ಪಾರ್ಶ್ವಭ್ರಮದ್ವ್ಯಜನಚಾಮರರಾಜಹಂಸಃ
ಶ್ವೇತಾತಪತ್ರಶಶಿನೋಪರಿ ರಜ್ಯಮಾನಃ ॥
ಅನುವಾದ
ಶ್ರೀಹರಿಯ ಹೃದಯದಲ್ಲಿ ಶ್ರೀವತ್ಸಚಿಹ್ನೆಯೂ, ಕೊರಳಿನಲ್ಲಿ ಕಮನೀಯ ವೈಜಯಂತಿವನಮಾಲೆಯೂ ಸುಶೋಭಿತವಾಗಿದೆ. ಅವನು ತನ್ನ ಉದಾರವಾದ ನಗುವಿನಿಂದಲೂ, ಕೃಪಾಕಟಾಕ್ಷದಿಂದಲೂ ಇಡೀ ವಿಶ್ವವನ್ನೇ ಆನಂದಮಗ್ನನಾಗಿಸುತ್ತಿದ್ದನು. ಪಾರ್ಷದರು ಇಕ್ಕೆಲಗಳಲ್ಲಿ ರಾಜಹಂಸದಂತಿರುವ ಬಿಳಿಯ ಚಾಮರಗಳನ್ನು ಬೀಸುತ್ತಿದ್ದರು. ಭಗವಂತನ ತಲೆಯಮೇಲೆ ಚಂದ್ರನಂತೆ ಶುಭ್ರವಾದ ಬೆಳ್ಗೊಡೆಯು ಶೋಭಿಸುತ್ತಿತ್ತು. ॥21॥
(ಶ್ಲೋಕ - 22)
ಮೂಲಮ್
ತಮುಪಾಗತಮಾಲಕ್ಷ್ಯ ಸರ್ವೇ ಸುರಗಣಾದಯಃ ।
ಪ್ರಣೇಮುಃ ಸಹಸೋತ್ಥಾಯ ಬ್ರಹ್ಮೇಂದ್ರತ್ರ್ಯಕ್ಷನಾಯಕಾಃ ॥
ಅನುವಾದ
ಭಗವಂತನು ದಯಮಾಡಿಸಿದುದನ್ನು ಕಂಡು ಬ್ರಹ್ಮದೇವರು, ಮಹಾದೇವರು, ಇಂದ್ರನೇ ಮೊದಲಾದ ಸಮಸ್ತ ದೇವತೆಗಳು ಗಂಧರ್ವರು, ಋಷಿಗಳು ಹೀಗೆ ಎಲ್ಲರೂ ನಿಂತುಕೊಂಡು ಅವನಿಗೆ ಪ್ರಣಾಮಮಾಡಿದರು. ॥22॥
(ಶ್ಲೋಕ - 23)
ಮೂಲಮ್
ತತ್ತೇಜಸಾ ಹತರುಚಃ ಸನ್ನಜಿಹ್ವಾಃ ಸಸಾಧ್ವಸಾಃ ।
ಮೂರ್ಧ್ನಾ ಧೃತಾಂಜಲಿಪುಟಾ ಉಪತಸ್ಥುರಧೋಕ್ಷಜಮ್ ॥
ಅನುವಾದ
ಅವನ ತೇಜಸ್ಸಿನಿಂದ ಎಲ್ಲರ ಕಾಂತಿಯು ಮಸಕಾಯಿತು. ನಾಲಿಗೆ ತೊದಲಿತು. ಅವರೆಲ್ಲರೂ ಭಯ-ಭಕ್ತಿಗಳಿಂದ ತಲೆಯಮೇಲೆ ಕೈಜೋಡಿಸಿಕೊಂಡು ಭಗವಂತನ ಮುಂದೆ ನಿಂತುಕೊಂಡರು. ॥23॥
(ಶ್ಲೋಕ - 24)
ಮೂಲಮ್
ಅಪ್ಯರ್ವಾಗ್ವತ್ತಯೋ ಯಸ್ಯ ಮಹಿ ತ್ವಾತ್ಮಭುವಾದಯಃ ।
ಯಥಾಮತಿ ಗೃಣಂತಿ ಸ್ಮ ಕೃತಾನುಗ್ರಹವಿಗ್ರಹಮ್ ॥
ಅನುವಾದ
ಬ್ರಹ್ಮಾದಿ ದೇವತೆಗಳ ಮತಿಗಳು ಮುಟ್ಟಲಾರದ ಮಹಾಮಹಿಮನವನು. ಆದರೂ ಭಕ್ತರಮೇಲೆ ಕೃಪೆದೋರಲು ಹೀಗೆ ಸಾಕಾರನಾಗಿ ಪ್ರಕಟಗೊಂಡ ಆ ಶ್ರೀಹರಿಯನ್ನು ದೇವತೆಗಳು ತಮ್ಮ-ತಮ್ಮ ಬುದ್ಧಿಗನುಗುಣವಾಗಿ ಸ್ತುತಿಸತೊಡಗಿದರು. ॥24॥
(ಶ್ಲೋಕ - 25)
ಮೂಲಮ್
ದಕ್ಷೋ ಗೃಹೀತಾರ್ಹಣಸಾದನೋತ್ತಮಂ
ಯಜ್ಞೇಶ್ವರಂ ವಿಶ್ವಸೃಜಾಂ ಪರಂ ಗುರುಮ್ ।
ಸುನಂದನಂದಾದ್ಯನುಗೈರ್ವೃತಂ ಮುದಾ
ಗೃಣನ್ ಪ್ರಪೇದೇ ಪ್ರಯತಃ ಕೃತಾಂಜಲಿಃ ॥
ಅನುವಾದ
ಎಲ್ಲರಿಗಿಂತ ಮೊದಲಿಗೆ ದಕ್ಷ ಪ್ರಜಾಪತಿಯು ಒಂದು ಉತ್ತಮ ಪಾತ್ರೆಯಲ್ಲಿ ಪೂಜಾ ಸಾಮಗ್ರಿಗಳನ್ನು ತುಂಬಿಕೊಂಡು ನಂದ-ಸುನಂದರೇ ಮುಂತಾದ ಪಾರ್ಷದರಿಂದ ಪರಿವೃತನಾಗಿದ್ದ, ಪ್ರಜಾಪತಿಗಳಿಗೆ ಪರಮಗುರುವಾದ ಭಗವಾನ್ ಯಜ್ಞಪತಿಯ ಬಳಿಗೆ ಬಂದು ವಿನೀತನಾಗಿ ಪರಮಾನಂದದಿಂದ ಕೈಜೋಡಿಸಿ ಪ್ರಾರ್ಥಿಸುತ್ತಾ ಪ್ರಭುವಿಗೆ ಶರಣಾದನು. ॥25॥
(ಶ್ಲೋಕ - 26)
ಮೂಲಮ್ (ವಾಚನಮ್)
ದಕ್ಷ ಉವಾಚ
ಮೂಲಮ್
ಶುದ್ಧಂ ಸ್ವಧಾಮ್ನ್ಯುಪರತಾಖಿಲಬುದ್ಧ್ಯವಸ್ಥಂ
ಚಿನ್ಮಾತ್ರಮೇಕಮಭಯಂ ಪ್ರತಿಷಿಧ್ಯ ಮಾಯಾಮ್ ।
ತಿಷ್ಠಂಸ್ತಯೈವ ಪುರುಷತ್ವಮುಪೇತ್ಯ ತಸ್ಯಾ-
ಮಾಸ್ತೇ ಭವಾನಪರಿಶುದ್ಧ ಇವಾತ್ಮತಂತ್ರಃ ॥
ಅನುವಾದ
ದಕ್ಷನು ಹೇಳಿದನು — ಭಗವಂತನೇ! ನಿರಂತರವೂ ಸ್ವಸ್ವರೂಪದಲ್ಲಿ ರಮಿಸುವ ನೀನು ಜಾಗ್ರದಾದಿ ಬುದ್ಧ್ಯವ ಸ್ಥಾತೀತನಾದ್ದರಿಂದ, ಮಾಯಾರಹಿತನಾಗಿಯೂ, ಚಿನ್ಮಾತ್ರನಾಗಿಯೂ, ಅದ್ವಿತೀಯನಾಗಿಯೂ, ನಿರ್ಭಯನಾಗಿಯೂ ಇರುವೆ. ಹೀಗೆ ನೀನು ಸ್ವತಂತ್ರನಾಗಿದ್ದರೂ, ಮಾಯೆಯಿಂದಾಗಿ ಜೀವಭಾವನನ್ನೂ ಸ್ವೀಕರಿಸಿ, ಅದೇ ಮಾಯೆಯಲ್ಲಿ ಸ್ಥಿತನಾದಾಗ ಅಜ್ಞಾನಿಯಂತೆ ಕಂಡುಬರುವೆ. ॥26॥
(ಶ್ಲೋಕ - 27)
ಮೂಲಮ್ (ವಾಚನಮ್)
ಋತ್ವಿಜ ಊಚುಃ
ಮೂಲಮ್
ತತ್ತ್ವಂ ನ ತೇ ವಯಮನಂಜನ ರುದ್ರಶಾಪಾತ್
ಕರ್ಮಣ್ಯವಗ್ರಹಧಿಯೋ ಭಗವನ್ವಿದಾಮಃ ।
ಧರ್ಮೋಪಲಕ್ಷಣಮಿದಂ ತ್ರಿವೃದಧ್ವರಾಖ್ಯಂ
ಜ್ಞಾತಂ ಯದರ್ಥಮಧಿದೈವಮದೋವ್ಯವಸ್ಥಾಃ ॥
ಅನುವಾದ
ಋತ್ವಿಜರು ಹೇಳಿದರು — ನಿರಂಜನಸ್ವರೂಪನಾದ ನಾರಾಯಣನೇ! ನಂದಿಕೇಶ್ವರನ ಶಾಪದಿಂದ ನಮ್ಮ ಬುದ್ಧಿಯು ಕೇವಲ ಕರ್ಮಕಾಂಡದಲ್ಲೇ ಸಿಲುಕಿಕೊಂಡಿದೆ. ಆದ್ದರಿಂದ ನಾವು ನಿನ್ನ ತತ್ತ್ವವನ್ನು ತಿಳಿಯಲಾರದೆ ಹೋಗಿದ್ದೇವೆ. ‘‘ಈ ಕರ್ಮಕ್ಕೆ ಇದೇ ದೇವತೆಯು’’ ಎಂಬ ಧರ್ಮಪ್ರವೃತ್ತಿಯನ್ನು ಹೇಳುವ ಮೂರು ವೇದಗಳು ಪ್ರತಿಪಾದನೆ ಮಾಡುವ ಯಜ್ಞವನ್ನೇ ನಿನ್ನ ಸ್ವರೂಪವೆಂದು ಭಾವಿಸುತ್ತೇವೆ. ॥27॥
(ಶ್ಲೋಕ - 28)
ಮೂಲಮ್ (ವಾಚನಮ್)
ಸದಸ್ಯಾ ಊಚುಃ
ಮೂಲಮ್
ಉತ್ಪತ್ಯಧ್ವನ್ಯಶರಣ ಉರುಕ್ಲೇಶದುರ್ಗೇಂತಕೋಗ್ರ-
ವ್ಯಾಲಾನ್ವಿಷ್ಟೇ ವಿಷಯಮೃಗತೃಷ್ಯಾತ್ಮಗೇಹೋರುಭಾರಃ ।
ದ್ವಂದ್ವಶ್ವಭ್ರೇ ಖಲಮೃಗಭಯೇ ಶೋಕದಾವೇಜ್ಞ ಸಾರ್ಥಃ
ಪಾದೌಕಸ್ತೇ ಶರಣದ ಕದಾ ಯಾತಿ ಕಾಮೋಪಸೃಷ್ಟಃ ॥
ಅನುವಾದ
ಸದಸ್ಯರು ಹೇಳಿದರು ಶರಣಾಗತರಿಗೆ ಆಶ್ರಯ ನೀಡುವ ಪ್ರಭುವೇ! ಯಾವುದು ಅನೇಕ ಪ್ರಕಾರದ ಕ್ಲೇಶಗಳ ಕಾರಣ ಅತ್ಯಂತ ದುರ್ಗಮವಾಗಿದೆಯೋ, ಯಾವುದರಲ್ಲಿ ಕಾಲರೂಪೀ ಭಯಂಕರ ಸರ್ಪಗಳು ಹೊಂಚುಹಾಕುತ್ತಿವೆಯೋ, ದ್ವಂದ್ವ ರೂಪವಾದ ಬಹಳಷ್ಟು ಹಳ್ಳ-ಕೊಳ್ಳಗಳಿವೆಯೋ, ದುರ್ಜನರೆಂಬ ಕಾಡುಪ್ರಾಣಿಗಳ ಭಯ ವಿದೆಯೋ, ಶೋಕವೆಂಬ ಕಾಡ್ಗಿಚ್ಚು ಧಗ-ಧಗನೆ ಉರಿಯುತ್ತಿದೆಯೋ, ಇಂತಹ ವಿಶ್ರಾಂತಿ ಸ್ಥಳವಿಲ್ಲದ ಸಂಸಾರ ಮಾರ್ಗದಲ್ಲಿ ಅಜ್ಞಾನೀ ಜೀವರು ಕಾಮನೆಗಳಿಂದ ಪೀಡಿತರಾಗಿ, ವಿಷಯಗಳೆಂಬ ಮೃಗತೃಷ್ಣೆಯಿಂದಾಗಿ ದೇಹ-ಗೇಹಗಳೆಂಬ ಭಾರೀ ಹೊರೆಯನ್ನು ತಲೆಯ ಮೇಲೆ ಹೊತ್ತು ಕೊಂಡು ಹೋಗುತ್ತಿರುವಲ್ಲ! ಇಂತಹ ಪಥಿಕರು ಯಾವಾಗ ನಿನ್ನ ಚರಣಕಮಲಗಳಲ್ಲಿ ಶರಣು ಬರುವರೋ! ॥28॥
(ಶ್ಲೋಕ - 29)
ಮೂಲಮ್ (ವಾಚನಮ್)
ರುದ್ರ ಉವಾಚ
ಮೂಲಮ್
ತವ ವರದ ವರಾಂಘ್ರಾವಾಶಿಷೇಹಾಖಿಲಾರ್ಥೇ
ಹ್ಯಪಿ ಮುನಿಭಿರಸಕ್ತೈರಾದರೇಣಾರ್ಹಣೀಯೇ ।
ಯದಿ ರಚಿತಧಿಯಂ ಮಾವಿದ್ಯಲೋಕೋಪವಿದ್ಧಂ
ಜಪತಿ ನ ಗಣಯೇ ತತ್ತ್ವತ್ಪರಾನುಗ್ರಹೇಣ ॥
ಅನುವಾದ
ರುದ್ರದೇವರು ಹೇಳುತ್ತಾರೆ — ವರಪ್ರದನಾದ ವಾಸುದೇವನೇ! ನಿನ್ನ ಉತ್ತಮೋತ್ತಮವಾದ ಚರಣಕಮಲಗಳು ಈ ಜಗತ್ತಿನಲ್ಲಿ ಸಕಾಮರಾಗಿ ಪ್ರಾರ್ಥಿಸುವವರ ಎಲ್ಲ ಪುರುಷಾರ್ಥಗಳನ್ನು ಕರುಣಿಸುತ್ತಿವೆ. ಹಾಗೆಯೇ ನಿಷ್ಕಾಮರಾದ ಮಹಾಮುನಿಗಳೂ ನಿನ್ನ ಈ ಪಾದಾರವಿಂದಗಳನ್ನು ಆದರದಿಂದ ಆರಾಧಿಸುತ್ತಾರೆ. ಅವುಗಳಲ್ಲಿ ಸದಾ ಚಿತ್ತನೆಟ್ಟಿರುವ ನನ್ನನ್ನು ಅಜ್ಞಾನಿಗಳು ಆಚಾರಭ್ರಷ್ಟನೆಂದು ಹೇಳಿದರೆ ಹೇಳಿಕೊಳ್ಳಲಿ. ನಿನ್ನ ಪರಮಾನುಗ್ರಹದಿಂದ ನಾನು ಅವರ ನಿಂದೆಯನ್ನು ಮನಸ್ಸಿಗೆ ಹಚ್ಚಿಕೊಳ್ಳುವುದೇ ಇಲ್ಲ. ॥29॥
(ಶ್ಲೋಕ - 30)
ಮೂಲಮ್ (ವಾಚನಮ್)
ಭೃಗುರುವಾಚ
ಮೂಲಮ್
ಯನ್ಮಾಯಯಾ ಗಹನಯಾಪಹೃತಾತ್ಮಬೋಧಾ
ಬ್ರಹ್ಮಾದಯಸ್ತನುಭೃತಸ್ತಮಸಿ ಸ್ವಪಂತಃ ।
ನಾತ್ಮನ್ ಶ್ರಿತಂ ತವ ವಿದಂತ್ಯಧುನಾಪಿ ತತ್ತ್ವಂ
ಸೋಯಂ ಪ್ರಸೀದತು ಭವಾನ್ಪ್ರಣತಾತ್ಮಬಂಧುಃ ॥
ಅನುವಾದ
ಭೃಗುಮುನಿಗಳು ಹೇಳಿದರು — ಸ್ವಾಮಿ! ನಿನ್ನ ಗಹನವಾದ ಮಾಯೆಯಿಂದ ಆತ್ಮಜ್ಞಾನವು ಲೋಪವಾಗಿ, ಅಜ್ಞಾನ- ನಿದ್ದೆಯಲ್ಲಿ ನಿದ್ರಿಸುತ್ತಿರುವ ಬ್ರಹ್ಮದೇವರೇ ಮುಂತಾದ ದೇಹಧಾರಿಗಳಿಂದ ಆತ್ಮಜ್ಞಾನಕ್ಕೆ ಉಪಯೋಗಿಯಾದ ನಿನ್ನ ತತ್ತ್ವವನ್ನು ಇಲ್ಲಿಯವರೆಗೂ ತಿಳಿಯಲಾಗಲಿಲ್ಲ. ಹೀಗಿದ್ದರೂ ನೀನು ನಿನ್ನ ಶರಣಾಗತಭಕ್ತರ ಆತ್ಮನೂ, ಶ್ರೇಷ್ಠ ಸ್ನೇಹಿತನೂ ಆಗಿರುವೆ. ಅಂತಹ ನೀನು ನನ್ನಮೇಲೆ ಪ್ರಸನ್ನನಾಗು. ॥30॥
(ಶ್ಲೋಕ - 31)
ಮೂಲಮ್ (ವಾಚನಮ್)
ಬ್ರಹ್ಮೋವಾಚ
ಮೂಲಮ್
ನೈತತ್ಸ್ವರೂಪಂ ಭವತೋಸೌ ಪದಾರ್ಥ-
ಭೇದಗ್ರಹೈಃ ಪುರುಷೋ ಯಾವದೀಕ್ಷೇತ್ ।
ಜ್ಞಾನಸ್ಯ ಚಾರ್ಥಸ್ಯ ಗುಣಸ್ಯ ಚಾಶ್ರಯೋ
ಮಾಯಾಮಯಾದ್ವ್ಯತಿರಿಕ್ತೋ ಯತಸ್ತ್ವಮ್ ॥
ಅನುವಾದ
ಬ್ರಹ್ಮದೇವರೆಂದರು — ಪ್ರಭುವೇ! ಬೇರೆ-ಬೇರೆ ಪದಾರ್ಥಗಳನ್ನು ಅರಿಯುವ ಇಂದ್ರಿಯಗಳಿಂದ ಪುರುಷನು ಏನೆಲ್ಲ ನೋಡುತ್ತಾನೋ, ಅದು ನಿನ್ನ ಸ್ವರೂಪವಲ್ಲ. ಏಕೆಂದರೆ, ನೀನು ಆ ಜ್ಞಾನಕ್ಕೂ, ಶಬ್ದ-ಸ್ಪರ್ಶಾದಿ ವಿಷಯಗಳಿಗೂ, ಶ್ರೋತ್ರಾದಿ ಇಂದ್ರಿಯಗಳಿಗೂ ಅಧಿಷ್ಠಾನನಾಗಿರುವೆ. ಇವೆಲ್ಲವೂ ನಿನ್ನಲ್ಲೇ ನೆಲೆಸಿವೆ. ಆದ್ದರಿಂದ ನೀನು ಈ ಮಾಯಾಮಯ ಪ್ರಪಂಚದಿಂದ ಅತಿರಿಕ್ತನಾಗಿರುವೆ. ॥31॥
(ಶ್ಲೋಕ - 32)
ಮೂಲಮ್ (ವಾಚನಮ್)
ಇಂದ್ರ ಉವಾಚ
ಮೂಲಮ್
ಇದಮಪ್ಯಚ್ಯುತ ವಿಶ್ವಭಾವನಂ
ವಪುರಾನಂದಕರಂ ಮನೋದೃಶಾಮ್ ।
ಸುರವಿದ್ವಿಟ್ಕ್ಷಪಣೈರುದಾಯುಧೈ-
ರ್ಭುಜದಂಡೈರುಪಪನ್ನಮಷ್ಟಭಿಃ ॥
ಅನುವಾದ
ಇಂದ್ರನು ಹೇಳಿದನು — ಅಚ್ಯುತನೇ! ದೇವದ್ರೋಹಿಗಳನ್ನು ಸಂಹಾರಮಾಡುವ ನಾನಾ ದಿವ್ಯಾಯುಧಗಳನ್ನು ಧರಿಸಿರುವ, ಅಷ್ಟಭುಜಗಳಿಂದ ಕಂಗೊಳಿಸುತ್ತಿರುವ, ಜಗತ್ತನ್ನು ಪ್ರಕಾಶಿಸುವಂತಹ ನಿನ್ನ ಈ ದಿವ್ಯರೂಪವು ನಮ್ಮ ಕಣ್ಮನಗಳಿಗೆ ಪರಮಾನಂದವನ್ನು ತುಂಬುತ್ತಿದೆ. ॥32॥
(ಶ್ಲೋಕ - 33)
ಮೂಲಮ್ (ವಾಚನಮ್)
ಪತ್ನ್ಯ ಊಚುಃ
ಮೂಲಮ್
ಯಜ್ಞೋಯಂ ತವ ಯಜನಾಯ ಕೇನ ಸೃಷ್ಟೋ
ವಿಧ್ವಸ್ತಃ ಪಶುಪತಿನಾದ್ಯ ದಕ್ಷಕೋಪಾತ್ ।
ತಂ ನಸ್ತ್ವಂ ಶವಶಯನಾಭಶಾಂತಮೇಧಂ
ಯಜ್ಞಾತ್ಮನ್ನಲಿನರುಚಾ ದೃಶಾ ಪುನೀಹಿ ॥
ಅನುವಾದ
ಯಜ್ಞಪತ್ನಿಯರು ಹೇಳಿದರು — ಎಲೈ ಯಜ್ಞಾತ್ಮಕನಾದ ಪ್ರಭುವೇ! ಬ್ರಹ್ಮದೇವರು ನಿನ್ನ ಆರಾಧನೆಗಾಗಿಯೇ ಈ ಯಜ್ಞವನ್ನು ರಚಿಸಿದ್ದಾರೆ. ಆದರೆ ದಕ್ಷನ ಮೇಲೆ ಕೋಪಗೊಂಡು ಭಗವಾನ್ ಪಶುಪತಿಯು ಇದನ್ನು ನಾಶ ಪಡಿಸಿರುವನು. ಯಜ್ಞಮೂರ್ತಿಯೇ! ಸ್ಮಶಾನ ಭೂಮಿಯಂತೆ ಉತ್ಸವಹೀನವಾದ ನಮ್ಮ ಈ ಯಜ್ಞವನ್ನು ನೀನು ನೀಲಕಮಲದಂತೆ ಕಾಂತಿಯಿಂದ ಕಂಗೊಳಿಸುವ ನಿನ್ನ ಅನುಗ್ರಹದೃಷ್ಟಿಯನ್ನು ಬೀರಿ ಅದನ್ನು ಪವಿತ್ರಗೊಳಿಸು. ॥33॥
(ಶ್ಲೋಕ - 34)
ಮೂಲಮ್ (ವಾಚನಮ್)
ಋಷಯ ಊಚುಃ
ಮೂಲಮ್
ಅನನ್ವಿತಂ ತೇ ಭಗವನ್ವಿಚೇಷ್ಟಿತಂ
ಯದಾತ್ಮನಾ ಚರಸಿ ಹಿ ಕರ್ಮ ನಾಜ್ಯಸೇ ।
ವಿಭೂತಯೇ ಯತ ಉಪಸೇದುರೀಶ್ವರೀಂ
ನ ಮನ್ಯತೇ ಸ್ವಯಮನುವರ್ತತೀಂ ಭವಾನ್ ॥
ಅನುವಾದ
ಋಷಿಗಳು ಹೇಳಿದರು — ಭಗವಂತಾ! ನಿನ್ನ ಲೀಲೆಯು ತುಂಬಾಘಿಘಿಅದ್ಭುತವಾಗಿದೆ. ನೀನು ಕರ್ಮಗಳನ್ನು ಆಚರಿಸುತ್ತಿದ್ದರೂ ಅವು ನಿನಗೆ ಸ್ವಲ್ಪವೂ ಅಂಟಿಕೊಳ್ಳುವುದಿಲ್ಲ. ಇತರ ಜನರು ವೈಭವದ ಆಸೆಯಿಂದ ಯಾವ ಲಕ್ಷ್ಮೀಯನ್ನು ಉಪಾಸನೆ ಮಾಡುವರೋ ಆಕೆಯು ಸದಾ ನಿನ್ನ ಸೇವೆಯಲ್ಲೇ ತೊಡಗಿರುವಳು. ಆದರೂ ನೀನು ಆಕೆಯಲ್ಲಿ ನಿಃಸ್ಪೃಹನಾಗಿರುವೆಯಲ್ಲ!॥34॥
(ಶ್ಲೋಕ - 35)
ಮೂಲಮ್ (ವಾಚನಮ್)
ಸಿದ್ಧಾ ಊಚುಃ
ಮೂಲಮ್
ಅಯಂ ತ್ವತ್ಕಥಾಮೃಷ್ಟಪೀಯೂಷನದ್ಯಾಂ
ಮನೋವಾರಣಃ ಕ್ಲೇಶದಾವಾಗ್ನಿದಗ್ಧಃ ।
ತೃಷಾರ್ತೋೀವಗಾಢೋ ನ ಸಸ್ಮಾರ ದಾವಂ
ನ ನಿಷ್ಕ್ರಾಮತಿ ಬ್ರಹ್ಮಸಂಪನ್ನವನ್ನಃ ॥
ಅನುವಾದ
ಸಿದ್ಧರು ಹೇಳಿದರು — ಪ್ರಭುವೇ! ನಮ್ಮ ಮನಸ್ಸೆಂಬ ಆನೆಯು ಬಗೆ-ಬಗೆಯ ಕ್ಲೇಶಗಳೆಂಬ ಕಾಡ್ಗಿಚ್ಚಿನಿಂದ ಬೆಂದು, ಅತ್ಯಂತ ಬಾಯಾರಿಕೆಯಿಂದ ನಿನ್ನ ಕಥೆಗಳೆಂಬ ಪರಿಶುದ್ಧ ಅಮೃತಮಯ ಮಹಾನದಿಯಲ್ಲಿ ಮುಳುಗಿ-ತೇಲುತ್ತಿದೆ. ಅಲ್ಲಿ ಬ್ರಹ್ಮಾನಂದಾನುಭವದಲ್ಲಿ ಲಯಗೊಂಡಂತೆ ಇರುವ ಅದಕ್ಕೆ ಸಂಸಾರವೆಂಬ ಕಾಡ್ಗಿಚ್ಚಿನ ನೆನಪೂ ಬರುವುದಿಲ್ಲ. ಅದು ಆ ನದಿಯಿಂದ ಹೊರ ಬರಲೂ ಬಯಸುವುದಿಲ್ಲ. ॥35॥
(ಶ್ಲೋಕ - 36)
ಮೂಲಮ್ (ವಾಚನಮ್)
ಯಜಮಾನ್ಯುವಾಚ
ಮೂಲಮ್
ಸ್ವಾಗತಂ ತೇ ಪ್ರಸೀದೇಶ ತುಭ್ಯಂ ನಮಃ
ಶ್ರೀನಿವಾಸ ಶ್ರಿಯಾ ಕಾಂತಯಾ ತ್ರಾಹಿ ನಃ ।
ತ್ವಾಮೃತೇಧೀಶ ನಾಂಗೈರ್ಮಖಃ ಶೋಭತೇ
ಶೀರ್ಷಹೀನಃ ಕಬಂಧೋ ಯಥಾ ಪೂರುಷಃ ॥
ಅನುವಾದ
ಯಜಮಾನನ ಪತ್ನಿಯು ಹೇಳಿದಳು — ಸರ್ವಸಮರ್ಥ ಪರಮೇಶ್ವರಾ! ನಿನಗೆ ಸ್ವಾಗತವು. ನಿನಗೆ ನಮೋ ನಮಃ. ನೀನು ನನ್ನ ಮೇಲೆ ಪ್ರಸನ್ನನಾಗು. ನಿನ್ನ ಮನದನ್ನೆ ಯಾದ ಶ್ರೀಲಕ್ಷ್ಮೀದೇವಿಯೊಡನೆ ನಮ್ಮನ್ನು ಕಾಪಾಡು. ಓ ಶ್ರೀನಿವಾಸನೇ! ಓ ಯಜ್ಞೇಶ್ವರನೇ! ಉಳಿದ ಎಲ್ಲ ಅಂಗಗಳಿದ್ದರೂ ತಲೆಯಿಲ್ಲದಿದ್ದರೆ ಮನುಷ್ಯದೇಹವು ಶೋಭಿಸುವುದಿಲ್ಲ. ಹಾಗೆಯೇ ನೀನಿಲ್ಲದಿದ್ದರೆ ಯಜ್ಞಕ್ಕೆ ಶೋಭೆಯೇ ಇರುವುದಿಲ್ಲ. ॥36॥
(ಶ್ಲೋಕ - 37)
ಮೂಲಮ್ (ವಾಚನಮ್)
ಲೋಕಪಾಲಾ ಊಚುಃ
ಮೂಲಮ್
ದೃಷ್ಟಃ ಕಿಂ ನೋ ದೃಗ್ಭಿರಸದ್ಗ್ರಹೈಸ್ತ್ವಂ
ಪ್ರತ್ಯಗ್ದ್ರಷ್ಟಾ ದೃಶ್ಯತೇ ಯೇನ ದೃಶ್ಯಮ್ ।
ಮಾಯಾ ಹ್ಯೇಷಾ ಭವದೀಯಾ ಹಿ ಭೂಮನ್
ಯಸ್ತ್ವಂ ಷಷ್ಠಃ ಪಂಚಭಿರ್ಭಾಸಿ ಭೂತೈಃ ॥
ಅನುವಾದ
ಲೋಕಪಾಲಕರು ಹೇಳಿದರು — ಎಲೈ ಅನಂತನಾದ ಪರಮಾತ್ಮನೇ! ನೀನು ಸಮಸ್ತ ಅಂತಃಕರಣಗಳಿಗೆ ಸಾಕ್ಷಿಯಾಗಿರುವೆ. ಈ ಇಡೀ ಜಗತ್ತನ್ನು ನಿನ್ನ ಮೂಲಕವೇ ನೋಡಲಾಗುತ್ತದೆ. ಆದರೂ ಮಾಯಾಮಯವಾದ ಈ ಪ್ರಾಕೃತ ಪದಾರ್ಥಗಳನ್ನು ಗ್ರಹಿಸುವ ನಮ್ಮ ಕಣ್ಣುಗಳೇ ಮುಂತಾದ ಇಂದ್ರಿಯಗಳಿಗೆ ನೀನು ಪ್ರತ್ಯಕ್ಷನಾಗಲಾರೆ. ಏಕೆಂದರೆ ವಾಸ್ತವಿಕವಾಗಿ ನೀನಾದರೋ ಈ ಪಂಚಭೂತ ಗಳಿಂದ ಪ್ರತ್ಯೇಕವಾಗಿರುವೆ. ಆದರೂ ಈ ಪಾಂಚಭೌತಿಕ ಶರೀರಗಳೊಡನೆ ಕಂಡುಬರುವ ಸಂಬಂಧವು ನಿನ್ನ ಮಾಯೆಯೇ ಆಗಿವೆ. ॥37॥
(ಶ್ಲೋಕ - 38)
ಮೂಲಮ್ (ವಾಚನಮ್)
ಯೋಗೇಶ್ವರಾ ಊಚುಃ
ಮೂಲಮ್
ಪ್ರೇಯಾನ್ನ ತೇನ್ಯೋಸ್ತ್ಯಮುತಸ್ತ್ವಯಿ ಪ್ರಭೋ
ವಿಶ್ವಾತ್ಮನೀಕ್ಷೇನ್ನ ಪೃಥಗ್ಯ ಆತ್ಮನಃ ।
ಅಥಾಪಿ ಭಕ್ತ್ಯೇಶತಯೋಪಧಾವತಾ-
ಮನನ್ಯವೃತ್ತ್ಯಾನುಗೃಹಾಣ ವತ್ಸಲ ॥
ಅನುವಾದ
ಯೋಗೇಶ್ವರರು ಹೇಳಿದರು — ಇಡೀ ವಿಶ್ವಕ್ಕೆ ಆತ್ಮನಾಗಿರುವ ನಿನ್ನಿಂದ ತನ್ನನ್ನು ಅಭೇದವಾಗಿ ನೋಡುವವ ನಿಗಿಂತ ಹೆಚ್ಚಿನ ಪ್ರಿಯರು ನಿನಗೆ ಯಾರೂ ಇಲ್ಲ. ಆದರೂ ಭಕ್ತವತ್ಸಲಾ! ನಿನ್ನಲ್ಲಿ ಸ್ವಾಮಿಭಾವವನ್ನಿಟ್ಟು ಅನನ್ಯ ಭಕ್ತಿ ಯಿಂದ ನಿನ್ನನ್ನು ಸೇವೆಮಾಡುವ ಭಕ್ತರಮೇಲೂ ನೀನು ಕರುಣೆತೋರು. ॥38॥
(ಶ್ಲೋಕ - 39)
ಮೂಲಮ್
ಜಗದುದ್ಭವಸ್ಥಿತಿಲಯೇಷು ದೈವತೋ
ಬಹುಭಿದ್ಯಮಾನಗುಣಯಾತ್ಮಮಾಯಯಾ ।
ರಚಿತಾತ್ಮಭೇದಮತಯೇ ಸ್ವಸಂಸ್ಥಯಾ
ವಿನಿವರ್ತಿತಭ್ರಮಗುಣಾತ್ಮನೇ ನಮಃ ॥
ಅನುವಾದ
ಜೀವಿಗಳ ಅದೃಷ್ಟ ವಶದಿಂದ ಪ್ರಕೃತಿಯ ಸತ್ತ್ವಾದಿಗುಣಗಳಲ್ಲಿ ವಿಭಿನ್ನತೆ ಉಂಟಾಗುವುದು. ಅಂತಹ ವಿಚಿತ್ರವಾದ ಮಾಯಾಪ್ರಕೃತಿಯಿಂದ ನೀನು ಜಗತ್ತಿನ ಸೃಷ್ಟಿ, ಸ್ಥಿತಿ, ಲಯಗಳಿಗಾಗಿ ಬ್ರಹ್ಮನೇ ಮುಂತಾದ ವಿಭಿನ್ನ ರೂಪಗಳನ್ನು ಧರಿಸಿ ಭೇದಬುದ್ಧಿಯನ್ನು ಉಂಟು ಮಾಡುತ್ತೀಯೆ. ಆದರೆ ಸ್ವರೂಪತಃ ನೀನು ಆ ಭೇದ ಜ್ಞಾನಕ್ಕೂ ಮತ್ತು ಅದಕ್ಕೆ ಕಾರಣವಾದ ಸತ್ತ್ವಾದಿ ಗುಣಗಳಿಗೂ ಸರ್ವಥಾ ದೂರವಾಗಿರುವೆ. ಅಂತಹ ನಿನಗೆ ನಮೋ ನಮಃ ॥39॥
ಮೂಲಮ್
(ಶ್ಲೋಕ - 40)
ಮೂಲಮ್ (ವಾಚನಮ್)
ಬ್ರಹ್ಮೋವಾಚ
ಮೂಲಮ್
ನಮಸ್ತೇ ಶ್ರಿತಸತ್ತ್ವಾಯ ಧರ್ಮಾದೀನಾಂ ಚ ಸೂತಯೇ ।
ನಿರ್ಗುಣಾಯ ಚ ಯತ್ಕಾಷ್ಠಾಂ ನಾಹಂ ವೇದಾಪರೇಪಿ ಚ ॥
ಅನುವಾದ
ಬ್ರಹ್ಮಸ್ವರೂಪ ವೇದಗಳು ಹೇಳಿದವು — ನೀನೇ ಧರ್ಮಾದಿಗಳ ಉತ್ಪತ್ತಿಗಾಗಿ ಶುದ್ಧಸತ್ತ್ವವನ್ನು ಸ್ವೀಕರಿಸಿದರೂ ನಿರ್ಗುಣವೇ ಆಗಿರುವೆ. ನಿನ್ನ ತತ್ತ್ವವನ್ನು ನಾವಾಗಲೀ, ಬ್ರಹ್ಮಾದಿಗಳಾಗಲೀ ಯಾರೂ ಅರಿಯರು. ಇಂತಹ ನಿನಗೆ ನಮಸ್ಕಾರವು.॥40॥
(ಶ್ಲೋಕ - 41)
ಮೂಲಮ್ (ವಾಚನಮ್)
ಅಗ್ನಿರುವಾಚ
ಮೂಲಮ್
ಯತ್ತೇಜಸಾಹಂ ಸುಸಮಿದ್ಧತೇಜಾ
ಹವ್ಯಂ ವಹೇ ಸ್ವಧ್ವರ ಆಜ್ಯಸಿಕ್ತಮ್ ।
ತಂ ಯಜ್ಞಿಯಂ ಪಂಚವಿಧಂ ಚ ಪಂಚಭಿಃ
ಸ್ವಿಷ್ಟಂ ಯಜುರ್ಭಿಃ ಪ್ರಣತೋಸ್ಮಿ ಯಜ್ಞಮ್ ॥
ಅನುವಾದ
ಅಗ್ನಿದೇವರು ಹೇಳಿದರು — ಓ ಭಗವಂತಾ! ನಿನ್ನ ತೇಜದಿಂದಲೇ ಪ್ರಕಾಶಿತನಾಗಿ ನಾನು ಶ್ರೇಷ್ಠವಾದ ಯಜ್ಞಗಳಲ್ಲಿ ದೇವತೆಗಳ ಬಳಿಗೆ ತುಪ್ಪವು ಬೆರೆತಿರುವ ಹವಿಸ್ಸನ್ನು ತಲುಪಿಸುತ್ತೇನೆ. ನೀನು ಸಾಕ್ಷಾತ್ ಯಜ್ಞಪುರುಷನೂ, ಯಜ್ಞಸಂರಕ್ಷಕನೂ ಆಗಿರುವೆ. ಅಗ್ನಿಹೋತ್ರ, ದರ್ಶ, ಪೌರ್ಣಮಾಸ್ಯ, ಚಾತು ರ್ಮಾಸ್ಯ ಮತ್ತು ಪಶುಸೋಮ ಎಂಬ ಈ ಐದುಬಗೆಯ ಯಜ್ಞಗಳು ನಿನ್ನ ಸ್ವರೂಪಗಳೇ ಆಗಿವೆ. ‘ಆಶ್ರಾವಯಾ’, ‘ಅಸ್ತುಶ್ರೌಷಟ್’, ‘ಯಜೆ’, ‘ಯೇಯ ಜಾಮಹೇ’ ಮತ್ತು ವೌಷಟ್ ಈ ಐದು ಬಗೆಯ ಯಜುರ್ಮಂತ್ರಗಳಿಂದ ನಿನ್ನದೇ ಪೂಜೆ ನಡೆಯುತ್ತಿದೆ. ನಾನು ನಿನಗೆ ವಂದಿಸುತ್ತಿದ್ದೇನೆ. ॥41॥
(ಶ್ಲೋಕ - 42)
ಮೂಲಮ್ (ವಾಚನಮ್)
ದೇವಾ ಊಚುಃ
ಮೂಲಮ್
ಪುರಾ ಕಲ್ಪಾಪಾಯೇ ಸ್ವಕೃತಮುದರೀಕೃತ್ಯ ವಿಕೃತಂ
ತ್ವಮೇವಾದ್ಯಸ್ತಸ್ಮಿನ್ಸಲಿಲ ಉರಗೇಂದ್ರಾಧಿಶಯನೇ ।
ಪುಮಾನ್ ಶೇಷೇ ಸಿದ್ಧೈರ್ಹೃದಿ ವಿಮೃಶಿತಾಧ್ಯಾತ್ಮಪದವಿಃ
ಸ ಏವಾದ್ಯಾಕ್ಷ್ಣೋರ್ಯಃ ಪಥಿ ಚರಸಿ ಭೃತ್ಯಾನವಸಿ ನಃ ॥
ಅನುವಾದ
ದೇವತೆಗಳು ಹೇಳಿದರು — ದೇವಾ! ನೀನೇ ಆದಿಪುರುಷನಾಗಿರುವೆ. ಹಿಂದಿನ ಕಲ್ಪವು ಮುಗಿದಾಗ ನಿನ್ನ ಕಾರ್ಯರೂಪವಾದ ಈ ಪ್ರಪಂಚವನ್ನು ಉದರದಲ್ಲಿ ಲೀನಗೊಳಿಸಿಕೊಂಡು ನೀನೇ ಪ್ರಳಯಕಾಲದ ಜಲದೊಳಗೆ ಆದಿಶೇಷನೆಂಬ ಹಾಸಿಗೆಯ ಮೇಲೆ ಪವಡಿಸಿದ್ದೆ. ಆಗ ನಿನ್ನ ಆಧ್ಯಾತ್ಮಿಕ ಸ್ವರೂಪವನ್ನು ಸಿದ್ಧಗಣಗಳು ತಮ್ಮ ಹೃದಯದಲ್ಲಿ ಚಿಂತಿಸುತ್ತಾರೆ. ಅಂತಹ ಆದಿಪುರುಷನಾದ ನೀನೇ ಈಗ ಭಕ್ತರಾದ ನಮ್ಮ ಕಣ್ಣುಗಳಿಗೆ ವಿಷಯವಾಗಿ ನಮ್ಮನ್ನು ರಕ್ಷಿಸುತ್ತಿದ್ದೀಯೆ. ॥42॥
(ಶ್ಲೋಕ - 43)
ಮೂಲಮ್ (ವಾಚನಮ್)
ಗಂಧರ್ವಾ ಊಚುಃ
ಮೂಲಮ್
ಅಂಶಾಂಶಾಸ್ತೇ ದೇವ ಮರೀಚ್ಯಾ ದಯ ಏತೇ
ಬ್ರಹ್ಮೇಂದ್ರಾದ್ಯಾ ದೇವಗಣಾ ರುದ್ರಪುರೋಗಾಃ ।
ಕ್ರೀಡಾಭಾಂಡಂ ವಿಶ್ವಮಿದಂ ಯಸ್ಯ ವಿಭೂಮನ್
ತಸ್ಮೈ ನಿತ್ಯಂ ನಾಥ ನಮಸ್ತೇ ಕರವಾಮ ॥
ಅನುವಾದ
ಗಂಧರ್ವರು ಹೇಳಿದರು — ದೇವಾ! ಮರೀಚಿಯೇ ಮುಂತಾದ ಋಷಿಗಳೂ ಮತ್ತು ಬ್ರಹ್ಮದೇವರು, ರುದ್ರದೇವರು, ಇಂದ್ರನೇ ಮೊದಲಾದ ದೇವತೆಗಳು, ನಿನ್ನ ಅಂಶ ದಲ್ಲಿಯೂ ಅಂಶವಾಗಿದ್ದಾರೆ. ಮಹತ್ತಮನಾದ ಪ್ರಭುವೇ! ಈ ಇಡೀ ವಿಶ್ವವು ನಿನ್ನ ಆಟದ ವಸ್ತುವೇ ಆಗಿದೆ. ಸ್ವಾಮಿ! ಅಂತಹ ನಿನಗೆ ನಾವು ಸದಾಕಾಲ ನಮಸ್ಕರಿಸುತ್ತೇವೆ. ॥43॥
(ಶ್ಲೋಕ - 44)
ಮೂಲಮ್ (ವಾಚನಮ್)
ವಿದ್ಯಾಧರಾ ಊಚುಃ
ಮೂಲಮ್
ತ್ವನ್ಮಾಯಯಾರ್ಥಮಭಿಪದ್ಯ ಕಲೇವರೇಸ್ಮಿನ್
ಕೃತ್ವಾ ಮಮಾಹಮಿತಿ ದುರ್ಮತಿರುತ್ಪಥೈಃ ಸ್ವೈಃ ।
ಕ್ಷಿಪ್ತೋಪ್ಯಸದ್ವಿಷಯಲಾಲಸ ಆತ್ಮಮೋಹಂ
ಯುಷ್ಮತ್ಕಥಾಮೃತನಿಷೇವಕ ಉದ್ವ್ಯುದಸ್ಯೇತ್ ॥
ಅನುವಾದ
ವಿದ್ಯಾಧರರು ಹೇಳಿದರು — ಒಡೆಯಾ! ಪರಮ ಪುರುಷಾರ್ಥದ ಪ್ರಾಪ್ತಿಗಾಗಿ ಸಾಧನರೂಪವಾಗಿ ಈ ಮಾನವ ದೇಹವನ್ನು ಪಡೆದುಕೊಂಡರೂ ಜೀವನು ನಿನ್ನ ಮಾಯೆಯಿಂದ ಮೋಹಿತನಾಗಿ ಇದರಲ್ಲಿ ‘ನಾನು-ನನ್ನದು’ ಎಂಬ ಅಭಿಮಾನ ಪಡುತ್ತಾನೆ. ಮತ್ತೆ ಆ ದುರ್ಬುದ್ಧಿಯು ತನ್ನ ಆತ್ಮೀಯರಿಂದ ತಿರಸ್ಕೃತನಾದರೂ ಅಸತ್ ಪದಾರ್ಥಗಳಿಗಾಗಿಯೇ ಹಂಬಲಿಸುತ್ತಾನೆ. ಆದರೆ ಇಂತಹ ಅವಸ್ಥೆಯಲ್ಲೂ ನಿನ್ನ ಕಥಾಮೃತವನ್ನು ಸೇವಿಸುವವನು ಈ ಅಂತಃಕರಣದ ಮೋಹವನ್ನು ಪೂರ್ಣರೂಪದಿಂದ ತ್ಯಜಿಸುವನು. ॥44॥
(ಶ್ಲೋಕ - 45)
ಮೂಲಮ್ (ವಾಚನಮ್)
ಬ್ರಾಹ್ಮಣಾ ಊಚುಃ
ಮೂಲಮ್
ತ್ವಂ ಕ್ರತುಸ್ತ್ವಂ ಹವಿಸ್ತ್ವಂ ಹುತಾಶಃ ಸ್ವಯಂ
ತ್ವಂ ಹಿ ಮಂತ್ರಃ ಸಮಿದ್ದರ್ಭಪಾತ್ರಾಣಿ ಚ ।
ತ್ವಂ ಸದಸ್ಯರ್ತ್ವಿಜೋ ದಂಪತೀ ದೇವತಾ
ಅಗ್ನಿಹೋತ್ರಂ ಸ್ವಧಾ ಸೋಮ ಆಜ್ಯಂ ಪಶುಃ ॥
ಅನುವಾದ
ಬ್ರಾಹ್ಮಣರು ಹೇಳಿದರು — ಭಗವಂತನೇ! ಯಜ್ಞವೂ ನೀನೇ. ಹವಿಸ್ಸು ನೀನೇ. ಅಗ್ನಿಯೂ ನೀನೇ. ಮಂತ್ರವೂ ನೀನೇ ಆಗಿರುವೆ. ಸಮಿತ್ತು, ದರ್ಭೆಗಳು, ಯಜ್ಞಪಾತ್ರೆಗಳೂ ನೀನೇ. ಹಾಗೆಯೇ ಸದಸ್ಯರೂ, ಋತ್ವಿಜರೂ, ಯಜಮಾನನೂ, ಯಜಮಾನ ಪತ್ನಿಯೂ, ದೇವತೆಯೂ, ಅಗ್ನಿಹೋತ್ರವೂ, ಸ್ವಧೆಯೂ, ಸೋಮರಸವೂ, ಘೃತವೂ ಮತ್ತು ಪಶುವೂ ನೀನೇ ಆಗಿರುವಿ. ॥45॥
(ಶ್ಲೋಕ - 46)
ಮೂಲಮ್
ತ್ವಂ ಪುರಾ ಗಾಂ ರಸಾಯಾ ಮಹಾಸೂಕರೋ
ದಂಷ್ಟ್ರಯಾ ಪದ್ಮಿನೀಂ ವಾರಣೇಂದ್ರೋ ಯಥಾ ।
ಸ್ತೂಯಮಾನೋ ನದಂಲ್ಲೀಲಯಾ ಯೋಗಿಭಿ-
ರ್ವ್ಯಜ್ಜಹರ್ಥ ತ್ರಯೀಗಾತ್ರ ಯಜ್ಞಕ್ರತುಃ ॥
ಅನುವಾದ
ವೇದಮೂರ್ತಿಯೇ! ಯಜ್ಞ ಮತ್ತು ಅದರ ಸಂಕಲ್ಪವೂ ನೀನೇ. ಹಿಂದೆ ನೀನೇ ವಿಶಾಲ ವಾದ ವರಾಹರೂಪವನ್ನು ಧರಿಸಿ ರಸಾತಲದಲ್ಲಿ ಮುಳುಗಿದ್ದ ಭೂಮಿಯನ್ನು ಗಜರಾಜನು ನೀಲಕಮಲವನ್ನು ಎತ್ತಿ ತಂದಂತೆ ತನ್ನ ಕೋರೆದಾಡೆಗಳ ಮೇಲೆ ಎತ್ತಿಕೊಂಡು ಲೀಲಾಜಾಲವಾಗಿಯೇ ಮೇಲಕ್ಕೆ ಎತ್ತಿಕೊಂಡು ಬಂದೆ. ಆಗ ಗಂಭೀರವಾಗಿ ಗರ್ಜಿಸುತ್ತಿದ್ದ ನಿನ್ನನ್ನು ಯೋಗಿಗಳು ಈ ಅಲೌಕಿಕ ಪರಾಕ್ರಮವನ್ನು ಕಂಡು ಸ್ತುತಿಸುತ್ತಾ ಇದ್ದರು. ॥46॥
(ಶ್ಲೋಕ - 47)
ಮೂಲಮ್
ಸ ಪ್ರಸೀದ ತ್ವಮಸ್ಮಾಕಮಾಕಾಂಕ್ಷತಾಂ
ದರ್ಶನಂ ತೇ ಪರಿಭ್ರಷ್ಟಸತ್ಕರ್ಮಣಾಮ್ ।
ಕೀರ್ತ್ಯಮಾನೇ ನೃಭಿರ್ನಾಮ್ನಿ ಯಜ್ಞೇಶ ತೇ
ಯಜ್ಞ ವಿಘ್ನಾಃ ಕ್ಷಯಂ ಯಾಂತಿ ತಸ್ಮೈ ನಮಃ ॥
ಅನುವಾದ
ಯಜ್ಞೇಶ್ವರನೇ! ಜನರು ನಿನ್ನ ನಾಮಗಳನ್ನು ಕೀರ್ತಿಸುವಾಗ ಯಜ್ಞದ ಎಲ್ಲ ವಿಘ್ನಗಳು ನಾಶವಾಗಿ ಹೋಗುತ್ತವೆ. ನಮ್ಮ ಈ ಯಜ್ಞಸ್ವರೂಪವಾದ ಸತ್ಕರ್ಮವು ನಾಶವಾಗಿ ಹೋಗಿತ್ತು. ಆದ್ದರಿಂದ ನಾವು ನಿನ್ನ ದಿವ್ಯದರ್ಶನವನ್ನು ಬಯಸುತ್ತಿದ್ದೆವು. ಈಗ ನಮ್ಮ ಮೇಲೆ ಪ್ರಸನ್ನನಾಗು. ನಿನಗೆ ಅನಂತ ವಂದನೆಗಳು. ॥47॥
(ಶ್ಲೋಕ - 48)
ಮೂಲಮ್ (ವಾಚನಮ್)
ಮೈತ್ರೇಯ ಉವಾಚ
ಮೂಲಮ್
ಇತಿ ದಕ್ಷಃ ಕವಿರ್ಯಜ್ಞಂ ಭದ್ರ ರುದ್ರಾವಮರ್ಶಿತಮ್ ।
ಕೀರ್ತ್ಯಮಾನೇ ಹೃಷೀಕೇಶೇ ಸನ್ನಿನ್ಯೇ ಯಜ್ಞಭಾವನೇ ॥
ಅನುವಾದ
ಶ್ರೀಮೈತ್ರೇಯರು ಹೇಳುತ್ತಾರೆ — ಅಯ್ಯಾ ವಿದುರಾ! ಎಲ್ಲ ಜನರು ಹೀಗೆ ಯಜ್ಞರಕ್ಷಕನಾದ ಭಗವಾನ್ ಹೃಷೀಕೇಶನನ್ನು ಸ್ತುತಿಸತೊಡಗಿದಾಗ ಚತುರನಾದ ದಕ್ಷ ಪ್ರಜಾಪತಿಯು ರುದ್ರ ಪಾರ್ಷದನಾದ ವೀರಭದ್ರನಿಂದ ಧ್ವಂಸಮಾಡಲ್ಪಟ್ಟ ಯಜ್ಞವನ್ನು ಪುನಃ ಪ್ರಾರಂಭಿಸಿದನು. ॥48॥
(ಶ್ಲೋಕ - 49)
ಮೂಲಮ್
ಭಗವಾನ್ಸ್ವೇನ ಭಾಗೇನ ಸರ್ವಾತ್ಮಾ ಸರ್ವಭಾಗಭುಕ್ ।
ದಕ್ಷಂ ಬಭಾಷ ಆಭಾಷ್ಯ ಪ್ರೀಯಮಾಣ ಇವಾನಘ ॥
ಅನುವಾದ
ಸರ್ವಾಂತರ್ಯಾಮಿಯಾದ ಶ್ರೀಹರಿಯಾದರೋ ಎಲ್ಲರ ಯಜ್ಞಭಾಗಗಳ ಭೋಕ್ತಾ ಆಗಿದ್ದರೂ ತ್ರಿಕಪಾಲ ಪುರೋಡಾಶ ರೂಪವಾದ ತನ್ನ ಭಾಗದಿಂದಲೇ ಹೆಚ್ಚು ಪ್ರಸನ್ನನಾಗಿ ದಕ್ಷನನ್ನು ಸಂಬೋಧಿಸಿ ಇಂತೆಂದನು. ॥49॥
(ಶ್ಲೋಕ - 50)
ಮೂಲಮ್ (ವಾಚನಮ್)
ಶ್ರೀಭಗವಾನುವಾಚ
ಮೂಲಮ್
ಅಹಂ ಬ್ರಹ್ಮಾ ಚ ಶರ್ವಶ್ಚ ಜಗತಃ ಕಾರಣಂ ಪರಮ್ ।
ಆತ್ಮೇಶ್ವರ ಉಪದ್ರಷ್ಟಾ ಸ್ವಯಂದೃಗವಿಶೇಷಣಃ ॥
ಅನುವಾದ
ಶ್ರೀಭಗವಂತನು ಹೇಳಿದನು — ದಕ್ಷ ಪ್ರಜಾಪತಿಯೇ! ಜಗತ್ತಿನ ಪರಮಕಾರಣನಾದ ನಾನೇ ಬ್ರಹ್ಮನೂ, ಮಹಾದೇವನೂ ಆಗಿದ್ದೇನೆ. ಎಲ್ಲರ ಆತ್ಮನೂ, ಈಶ್ವರನೂ, ಸಾಕ್ಷಿಯೂ ನಾನೇ ಆಗಿರುವೆ ಹಾಗೂ ಸ್ವಯಂಪ್ರಕಾಶನೂ ಉಪಾಧಿಶೂನ್ಯನೂ ಆಗಿರುವೆನು. ॥50॥
(ಶ್ಲೋಕ - 51)
ಮೂಲಮ್
ಆತ್ಮಮಾಯಾಂ ಸಮಾವಿಶ್ಯ ಸೋಹಂ ಗುಣಮಯೀಂ ದ್ವಿಜ ।
ಸೃಜನ್ರಕ್ಷನ್ ಹರನ್ವಿಶ್ವಂ ದಧ್ರೇ ಸಂಜ್ಞಾಂ ಕ್ರಿಯೋಚಿತಾಮ್ ॥
ಅನುವಾದ
ಬ್ರಾಹ್ಮಣೋತ್ತಮನೇ! ನಾನೇ ನನ್ನ ತ್ರಿಗುಣಾತ್ಮಿಕೆಯಾದ ಮಾಯೆಯನ್ನು ಸ್ವೀಕರಿಸಿ ಜಗತ್ತಿನ ಸೃಷ್ಟಿ, ಸ್ಥಿತಿ, ಸಂಹಾರಗಳನ್ನು ಮಾಡುತ್ತಾ ಇರುವೆನು. ನಾನೇ ಆ ಕರ್ಮಗಳಿಗಾಗಿ ಬ್ರಹ್ಮಾ, ವಿಷ್ಣು, ಮಹೇಶ್ವರ ಎಂಬ ಹೆಸರುಗಳನ್ನು ಧರಿಸಿರುವೆನು. ॥51॥
(ಶ್ಲೋಕ - 52)
ಮೂಲಮ್
ತಸ್ಮಿನ್ ಬ್ರಹ್ಮಣ್ಯದ್ವಿತೀಯೇ ಕೇವಲೇ ಪರಮಾತ್ಮನಿ ।
ಬ್ರಹ್ಮರುದ್ರೌ ಚ ಭೂತಾನಿ ಭೇದೇನಾಜ್ಞೋನುಪಶ್ಯತಿ ॥
ಅನುವಾದ
ಅಂತಹ ಭೇದರಹಿತನಾದ ವಿಶುದ್ಧ ಪರಬ್ರಹ್ಮಸ್ವರೂಪನು ನಾನೇ ಆಗಿರುವೆನು. ಅಜ್ಞಾನೀ ಜನರು ನನ್ನಲ್ಲೇ ಬ್ರಹ್ಮ-ರುದ್ರಾದಿ ಇತರ ಎಲ್ಲ ಜೀವರನ್ನು ಬೇರೆ-ಬೇರೆಯಾಗಿ ಕಾಣುತ್ತಾರೆ. ॥52॥
(ಶ್ಲೋಕ - 53)
ಮೂಲಮ್
ಯಥಾ ಪುಮಾನ್ನ ಸ್ವಾಂಗೇಷು ಶಿರಃ ಪಾಣ್ಯಾದಿಷು ಕ್ವಚಿತ್ ।
ಪಾರಕ್ಯಬುದ್ಧಿಂ ಕುರುತೇ ಏವಂ ಭೂತೇಷು ಮತ್ಪರಃ ॥
ಅನುವಾದ
ಮನುಷ್ಯನು ತನ್ನ ತಲೆ-ಕೈಕಾಲು ಮುಂತಾದ ಅಂಗಗಳಲ್ಲಿ ‘ಇವುಗಳು ನನ್ನಿಂದ ಬೇರೆಯಾಗಿವೆ’ ಎಂಬುದಾಗಿ ಎಂದೂ ತಿಳಿಯುವುದಿಲ್ಲ. ನನ್ನ ಭಕ್ತನಾದ ವನು ಸಮಸ್ತ ಪ್ರಾಣಿಗಳನ್ನು ನನ್ನಿಂದ ಭಿನ್ನರೆಂದು ನೋಡುವುದಿಲ್ಲ. ॥53॥
(ಶ್ಲೋಕ - 54)
ಮೂಲಮ್
ತ್ರಯಾಣಾಮೇಕಭಾವಾನಾಂ ಯೋ ನ ಪಶ್ಯತಿ ವೈ ಭಿದಾಮ್ ।
ಸರ್ವಭೂತಾತ್ಮನಾಂ ಬ್ರಹ್ಮನ್ ಸ ಶಾಂತಿಮಧಿಗಚ್ಛತಿ ॥
ಅನುವಾದ
ಎಲೈ ಬ್ರಾಹ್ಮಣವರ್ಯಾ! ಬ್ರಹ್ಮಾ, ವಿಷ್ಣು, ಮಹೇಶ್ವರರೆಂಬ ನಾವು ಮೂವರೂ ಸ್ವರೂಪತಃ ಒಂದೇ ಆಗಿದ್ದೇವೆ. ಎಲ್ಲ ಜೀವರೂಪರೂ ನಾವೇ ಆಗಿರುವೆವು. ಆದ್ದರಿಂದ ನಮ್ಮಲ್ಲಿ ಸ್ವಲ್ಪವೂ ಭೇದಬುದ್ಧಿಯನ್ನು ಇರಿಸದವನೇ ಶಾಂತಿಯನ್ನು ಪಡೆಯುವನು. ॥54॥
(ಶ್ಲೋಕ - 55)
ಮೂಲಮ್ (ವಾಚನಮ್)
ಮೈತ್ರೇಯ ಉವಾಚ
ಮೂಲಮ್
ಏವಂ ಭಗವತಾದಿಷ್ಟಃ ಪ್ರಜಾಪತಿಪತಿರ್ಹರಿಮ್ ।
ಅರ್ಚಿತ್ವಾ ಕ್ರತುನಾ ಸ್ವೇನ ದೇವಾನುಭಯತೋಯಜತ್ ॥
ಅನುವಾದ
ಶ್ರೀಮೈತ್ರೇಯರು ಹೇಳುತ್ತಾರೆ — ಭಗವಂತನು ಹೀಗೆ ಅಪ್ಪಣೆಕೊಡಿಸಲು ಪ್ರಜಾಪತಿಗಳ ಅಧಿಪತಿಯಾದ ದಕ್ಷನು ತ್ರಿಕಪಾಲ ಯಜ್ಞದಿಂದ ಶ್ರೀಹರಿಯನ್ನು ಆರಾಧಿಸಿ, ಅನಂತರ ಅಂಗಭೂತ ಮತ್ತು ಪ್ರಧಾನವಾದ ಎರಡೂ ಬಗೆಯ ಯಜ್ಞಗಳಿಂದ ಇತರ ದೇವತೆಗಳನ್ನೂ ಪೂಜಿಸಿದನು. ॥55॥
(ಶ್ಲೋಕ - 56)
ಮೂಲಮ್
ರುದ್ರಂ ಚ ಸ್ವೇನ ಭಾಗೇನ ಹ್ಯುಪಾಧಾವತ್ಸಮಾಹಿತಃ ।
ಕರ್ಮಣೋದವಸಾನೇನ ಸೋಮಪಾನಿತರಾನಪಿ ।
ಉದವಸ್ಯ ಸಹರ್ತ್ವಿಗ್ಭಿಃ ಸಸ್ನಾವವಭೃಥಂ ತತಃ ॥
ಅನುವಾದ
ಮತ್ತೆ ಏಕಾಗ್ರಚಿತ್ತನಾಗಿ ಯಜ್ಞಶೇಷವಾದ ಭಾಗದಿಂದ ಅಂದರೆ ‘ಸ್ವಿಷ್ಟಕೃತ್’ ಎಂಬ ಹವಿರ್ಭಾಗದಿಂದ ಭಗವಾನ್ ರುದ್ರನನ್ನು ಪೂಜಿಸಿದನು. ಕೊನೆಯಲ್ಲಿ ಮಾಡಲಾಗುವ ‘ಉದವಸಾನ’ ಎಂಬ ಕರ್ಮದಿಂದ ಇತರ ಸೋಮಪಾಯಿಗಳನ್ನು ಹಾಗೂ ಇತರ ದೇವತೆಗಳನ್ನೂ ಆರಾಧಿಸಿ ಯಜ್ಞವನ್ನು ಮುಗಿಸಿ ಕೊನೆಗೆ ಋತ್ವಿಜರ ಸಹಿತ ಅವಭೃತಸ್ನಾನವನ್ನು ಮಾಡಿದನು. ॥56॥
(ಶ್ಲೋಕ - 57)
ಮೂಲಮ್
ತಸ್ಮಾ ಅಪ್ಯನುಭಾವೇನ ಸ್ವೇನೈವಾವಾಪ್ತರಾಧಸೇ ।
ಧರ್ಮ ಏವ ಮತಿಂ ದತ್ತ್ವಾ ತ್ರಿದಶಾಸ್ತೇ ದಿವಂ ಯಯುಃ ॥
ಅನುವಾದ
ಬಳಿಕ ತನ್ನ ಪುರುಷಾರ್ಥದಿಂದಲೇ ಎಲ್ಲ ರೀತಿಯ ಸಿದ್ಧಿಗಳನ್ನು ಪಡೆದು ಕೊಂಡಿದ್ದ ದಕ್ಷಪ್ರಜಾಪತಿಯನ್ನು ‘ನಿನ್ನ ಬುದ್ಧಿಯು ಸದಾ ಕಾಲ ಧರ್ಮದಲ್ಲೇ ನೆಲೆಸಲಿ’ ಎಂದು ಆಶೀರ್ವದಿಸಿ ಎಲ್ಲ ದೇವತೆಗಳು ಸ್ವರ್ಗಲೋಕಕ್ಕೆ ಹೊರಟು ಹೋದರು. ॥57॥
(ಶ್ಲೋಕ - 58)
ಮೂಲಮ್
ಏವಂ ದಾಕ್ಷಾಯಣೀ ಹಿತ್ವಾ ಸತೀ ಪೂರ್ವಕಲೇವರಮ್ ।
ಜಜ್ಞೇ ಹಿಮವತಃ ಕ್ಷೇತ್ರೇ ಮೇನಾಯಾಮಿತಿ ಶುಶ್ರುಮ ॥
ಅನುವಾದ
ವಿದುರನೇ! ದಕ್ಷಸುತೆಯಾದ ಸತೀದೇವಿಯು ಹೀಗೆ ತನ್ನ ಹಿಂದಿನ ಶರೀರವನ್ನು ತ್ಯಾಗಗೈದು ಮತ್ತೆ ಹಿಮವಂತನ ಪತ್ನಿಯಾದ ಮೇನಾದೇವಿಯ ಗರ್ಭದಿಂದ ಆವಿರ್ಭವಿಸಿದಳು. ॥58॥
(ಶ್ಲೋಕ - 59)
ಮೂಲಮ್
ತಮೇವ ದಯಿತಂ ಭೂಯ ಆವೃಂಕ್ತೇ ಪತಿಮಂಬಿಕಾ ।
ಅನನ್ಯಭಾವೈಕಗತಿಂ ಶಕ್ತಿಃ ಸುಪ್ತೇವ ಪೂರುಷಮ್ ॥
ಅನುವಾದ
ಪ್ರಳಯಕಾಲದಲ್ಲಿ ಲೀನವಾದ ಶಕ್ತಿಯು ಸೃಷ್ಟಿಯ ಪ್ರಾರಂಭದಲ್ಲಿ ಪುನಃ ಈಶ್ವರನನ್ನು ಆಶ್ರಯಿಸುವಂತೆ, ಅನನ್ಯ ಪರಾಯಣೆಯಾದ ಶ್ರೀಜಗದಂಬೆಯು ಆ ಜನ್ಮದಲ್ಲಿಯೂ ತನ್ನ ಏಕಮಾತ್ರ ಆಶ್ರಯನೂ, ಪ್ರಿಯತಮನೂ ಆದ ಭಗವಾನ್ ಶ್ರೀಶಂಕರನನ್ನೇ ಪತಿಯಾಗಿ ವರಿಸಿದಳು. ॥59॥
(ಶ್ಲೋಕ - 60)
ಮೂಲಮ್
ಏತದ್ಭಗವತಃ ಶಂಭೋಃ ಕರ್ಮ ದಕ್ಷಾಧ್ವರದ್ರುಹಃ ।
ಶ್ರುತಂ ಭಾಗವತಾಚ್ಛಿಷ್ಯಾದುದ್ಧವಾನ್ಮೇ ಬೃಹಸ್ಪತೇಃ ॥
ಅನುವಾದ
ವಿದುರನೇ! ದಕ್ಷಯಜ್ಞವನ್ನು ಧ್ವಂಸಮಾಡಿದ ಭಗವಾನ್ ಶಿವನ ಈ ಚರಿತ್ರವನ್ನು ನಾನು ಹಿಂದೆ ಬೃಹಸ್ಪತ್ಯಾಚಾರ್ಯರ ಶಿಷ್ಯನಾದ ಪರಮಭಾಗವತೋತ್ತಮ ಉದ್ಧವನ ಮುಖದಿಂದ ಕೇಳಿದ್ದೆನು. ॥60॥
(ಶ್ಲೋಕ - 61)
ಮೂಲಮ್
ಇದಂ ಪವಿತ್ರಂ ಪರಮೀಶಚೇಷ್ಟಿತಂ
ಯಶಸ್ಯಮಾಯುಷ್ಯಮಘೌಘಮರ್ಷಣಮ್ ।
ಯೋ ನಿತ್ಯದಾಕರ್ಣ್ಯ ನರೋನುಕೀರ್ತಯೇತ್
ಧುನೋತ್ಯಘಂ ಕೌರವ ಭಕ್ತಿಭಾವತಃ ॥
ಅನುವಾದ
ಕುರುನಂದನಾ! ಶ್ರೀಪರಮೇಶ್ವರನ ಈ ಪಾವನ ಚರಿತ್ರವು, ಯಶಸ್ಸನ್ನೂ, ಆಯುಸ್ಸನ್ನೂ ವೃದ್ಧಿಪಡಿಸುವುದು ಮತ್ತು ಪಾಪರಾಶಿಯನ್ನು ನಾಶಪಡುವಂತಹುದು. ಭಕ್ತಿಭಾವದಿಂದ ಇದನ್ನು ಪ್ರತಿದಿನವೂ ಶ್ರವಣ-ಕೀರ್ತನೆ ಮಾಡುವವನು ತನ್ನ ಸಕಲ ಪಾಪರಾಶಿಯನ್ನು ತೊಳೆದು ಪವಿತ್ರನಾಗುವನು. ॥61॥
ಅನುವಾದ (ಸಮಾಪ್ತಿಃ)
ಏಳನೆಯ ಅಧ್ಯಾಯವು ಮುಗಿಯಿತು.॥7॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಚತುರ್ಥಸ್ಕಂಧೇ ದಕ್ಷಯಜ್ಞ ಸಂಧಾನಂ ನಾಮ ಸಪ್ತಮೋಽಧ್ಯಾಯಃ ॥7॥