೦೬

[ಆರನೆಯ ಅಧ್ಯಾಯ]

ಭಾಗಸೂಚನಾ

ದೇವತೆಗಳು ಕೈಲಾಸಕ್ಕೆ ಹೋಗಿ ಶಿವನನ್ನು ಪ್ರಸನ್ನಗೊಳಿಸಿದುದು

(ಶ್ಲೋಕ - 1)

ಮೂಲಮ್ (ವಾಚನಮ್)

ಮೈತ್ರೇಯ ಉವಾಚ

ಮೂಲಮ್

ಅಥ ದೇವಗಣಾಃ ಸರ್ವೇ ರುದ್ರಾನೀಕೈಃ ಪರಾಜಿತಾಃ ।
ಶೂಲಪಟ್ಟಿಶನಿಸಿಂಶಗದಾಪರಿಘಮುದ್ಗರೈಃ ॥

(ಶ್ಲೋಕ - 2)

ಮೂಲಮ್

ಸಂಛಿನ್ನಭಿನ್ನಸರ್ವಾಂಗಾಃ ಸರ್ತ್ವಿಕ್ಸಭ್ಯಾ ಭಯಾಕುಲಾಃ ।
ಸ್ವಯಂಭುವೇ ನಮಸ್ಕೃತ್ಯ ಕಾರ್ತ್ಸ್ನ್ಯೇನೈತನ್ನ್ಯವೇದಯನ್ ॥

ಅನುವಾದ

ಶ್ರೀಮೈತ್ರೇಯರು ಹೇಳುತ್ತಾರೆ — ಮಹಾತ್ಮಾ ವಿದುರನೇ! ಈ ವಿಧವಾಗಿ ರುದ್ರದೇವರ ಸೈನಿಕರಿಂದ ಪರಾಜಿತರಾದ ದೇವತೆಗಳು ತ್ರಿಶೂಲ, ಪಟ್ಟಿಶ, ಖಡ್ಗ, ಗದೆ, ಪರಿಘ, ಮುದ್ಗರ ಮುಂತಾದ ಆಯುಧಗಳಿಂದ ಅಂಗಾಂಗಗಳು ಛಿನ್ನ-ಭಿನ್ನವಾಗಿ ನೊಂದು, ಯಜ್ಞಕ್ಕೆ ಬಂದಿದ್ದ ಋತ್ವಿಜರೂ, ಸದಸ್ಯರು ಹೀಗೆ ಎಲ್ಲರೂ ಭಯಗ್ರಸ್ತರಾಗಿ ಬ್ರಹ್ಮದೇವರ ಬಳಿಗೆ ಹೋಗಿ ನಮಸ್ಕಾರಮಾಡಿ ಅವರ ಬಳಿಯಲ್ಲಿ ಎಲ್ಲ ವೃತ್ತಾಂತವನ್ನು ನಿವೇದಿಸಿಕೊಂಡರು ॥1-2॥

(ಶ್ಲೋಕ - 3)

ಮೂಲಮ್

ಉಪಲಭ್ಯ ಪುರೈವೈತದ್ಭಗವಾನಬ್ಜಸಂಭವಃ ।
ನಾರಾಯಣಶ್ಚ ವಿಶ್ವಾತ್ಮಾ ನ ಕಸ್ಯಾಧ್ವರಮೀಯತುಃ ॥

ಅನುವಾದ

ಯಜ್ಞದಲ್ಲಿ ಹೀಗೆ ಉತ್ಪಾತವಾಗುವುದೆಂದು ಮೊದಲೇ ತಿಳಿದಿದ್ದ ಸರ್ವಾಂತರ್ಯಾಮಿ ನಾರಾಯಣನೂ, ಬ್ರಹ್ಮದೇವರೂ ಆ ಯಜ್ಞಕ್ಕೆ ಹೋಗಿರಲಿಲ್ಲ. ॥3॥

(ಶ್ಲೋಕ - 4)

ಮೂಲಮ್

ತದಾಕರ್ಣ್ಯ ವಿಭುಃ ಪ್ರಾಹ ತೇಜೀಯಸಿ ಕೃತಾಗಸಿ ।
ಕ್ಷೇಮಾಯ ತತ್ರ ಸಾ ಭೂಯಾನ್ನ ಪ್ರಾಯೇಣ ಬುಭೂಷತಾಮ್ ॥

ಅನುವಾದ

ಈಗ ದೇವತೆಗಳ ಬಾಯಿಂದ ಅಲ್ಲಿಯ ಎಲ್ಲ ವೃತ್ತಾಂತವನ್ನು ಕೇಳಿದ ಬ್ರಹ್ಮದೇವರು ಹೇಳಿದರು ಎಲೈ ದೇವತೆಗಳಿರಾ! ಮಹಾಸಮರ್ಥನೂ, ತೇಜಸ್ವಿಯೂ ಆದ ಪುರುಷನಿಂದ ಒಂದು ವೇಳೆ ಯಾವುದಾದರೂ ಅಪರಾಧವಾದರೂ ಅದರ ಬದಲಾಗಿ ಅವರಿಗೆ ಅಪರಾಧ ಮಾಡಿದವರಿಗೆ ಒಳ್ಳೆಯದಾಗುವುದಿಲ್ಲ. ॥4॥

(ಶ್ಲೋಕ - 5)

ಮೂಲಮ್

ಅಥಾಪಿ ಯೂಯಂ ಕೃತಕಿಲ್ಬಿಷಾ ಭವಂ
ಯೇ ಬರ್ಹಿಷೋ ಭಾಗಭಾಜಂ ಪರಾದುಃ ।
ಪ್ರಸಾದಯಧ್ವಂ ಪರಿಶುದ್ಧಚೇತಸಾ
ಕ್ಷಿಪ್ರಪ್ರಸಾದಂ ಪ್ರಗೃಹೀತಾಂಘ್ರಿಪದ್ಮಮ್ ॥

ಅನುವಾದ

ಹಾಗಿರುವಾಗ ನೀವಾದರೋ ಯಜ್ಞದಲ್ಲಿ ಭಗವಾನ್ ಶಂಕರನಿಗೆ ದೊರೆಯಬೇಕಾದ ಯಜ್ಞಭಾಗವನ್ನು ಕೊಡದೆ ದೊಡ್ಡ ಅಪರಾಧವನ್ನೆಸಗಿದ್ದೀರಿ. ಆದರೆ ಪರಮೇಶ್ವರನು ಬೇಗನೆ ಪ್ರಸನ್ನನಾಗು ವವನು. ಅದಕ್ಕಾಗಿ ನೀವೆಲ್ಲರೂ ಶುದ್ಧವಾದ ಮನಸ್ಸಿನಿಂದ ಅವನ ಪಾದಗಳನ್ನು ಹಿಡಿದುಕೊಂಡು, ಅವನಲ್ಲಿ ಕ್ಷಮೆಯನ್ನು ಯಾಚಿಸಿರಿ. ॥5॥

(ಶ್ಲೋಕ - 6)

ಮೂಲಮ್

ಆಶಾಸಾನಾ ಜೀವಿತಮಧ್ವರಸ್ಯ
ಲೋಕಃ ಸಪಾಲಃ ಕುಪಿತೇ ನ ಯಸ್ಮಿನ್ ।
ತಮಾಶು ದೇವಂ ಪ್ರಿಯಯಾ ವಿಹೀನಂ
ಕ್ಷಮಾಪಯಧ್ವಂ ಹೃದಿ ವಿದ್ಧಂ ದುರುಕ್ತೈಃ ॥

ಅನುವಾದ

ದಕ್ಷನ ದುರ್ವಚನ ರೂಪವಾದ ಬಾಣಗಳಿಂದ ಅವನ ಹೃದಯ ಮೊದಲೇ ನೊಂದಿತ್ತು. ಅದರ ಜೊತೆಗೆ ಪ್ರಿಯಪತ್ನಿಯಾದ ಸತೀದೇವಿಯ ವಿಯೋಗವೂ ಉಂಟಾಯಿತು. ಆದುದರಿಂದ ಈ ಯಜ್ಞವು ಪುನಃ ಪ್ರಾರಂಭಗೊಂಡು ಪೂರ್ಣವಾಗ ಬೇಕೆಂದು ನೀವೆಲ್ಲ ಬಯಸುವಿರಾದರೆ, ಮೊದಲಿಗೆ ನೀವು ಬೇಗನೇ ಹೋಗಿ ನಿಮ್ಮ ಅಪರಾಧಗಳಿಗಾಗಿ ಕ್ಷಮೆಯನ್ನು ಬೇಡಿಕೊಳ್ಳಿ. ಹಾಗೇನಾದರೂ ಅವನು ಕುಪಿತನಾಗಿ ಬಿಟ್ಟರೆ ಲೋಕಪಾಲಕರ ಸಹಿತ ಈ ಸಮಸ್ತ ಲೋಕಗಳು ಉಳಿಯುವ ಸಂಭವವಿಲ್ಲ. ॥6॥

(ಶ್ಲೋಕ - 7)

ಮೂಲಮ್

ನಾಹಂ ನ ಯಜ್ಞೋ ನ ಚ ಯೂಯಮನ್ಯೇ
ಯೇ ದೇಹಭಾಜೋ ಮುನಯಶ್ಚ ತತ್ತ್ವಮ್ ।
ವಿದುಃ ಪ್ರಮಾಣಂ ಬಲವೀರ್ಯಯೋರ್ವಾ
ಯಸ್ಯಾತ್ಮತಂತ್ರಸ್ಯ ಕ ಉಪಾಯಂ ವಿಧಿತ್ಸೇತ್ ॥

ಅನುವಾದ

ಭಗವಾನ್ ಮಹಾರುದ್ರನು ಪರಮ ಸ್ವತಂತ್ರನು. ಅವನ ತತ್ತ್ವವನ್ನೂ, ಶಕ್ತಿ-ಸಾಮರ್ಥ್ಯಗಳನ್ನೂ, ಋಷಿ-ಮುನಿಗಳು, ದೇವತೆಗಳು, ಯಜ್ಞ ಸ್ವರೂಪೀ ದೇವೆಂದ್ರನೂ, ಸ್ವತಃ ನಾನೂ ಕೂಡ ಅರಿಯೆನು. ಹೀಗಿರುವಾಗ ಬೇರೆಯವರ ಮಾತೇನು? ಇಂತಹ ಸ್ಥಿತಿಯಲ್ಲಿ ಆತನನ್ನು ಶಾಂತಗೊಳಿಸುವ ಉಪಾಯವನ್ನು ಯಾರು ಮಾಡಬಲ್ಲರು? ॥7॥

(ಶ್ಲೋಕ - 8)

ಮೂಲಮ್

ಸ ಇತ್ಥಮಾದಿಸ್ಯ ಸುರಾನಜಸ್ತೈಃ
ಸಮನ್ವಿತಃ ಪಿತೃಭಿಃ ಸಪ್ರಜೇಶೈಃ ।
ಯಯೌ ಸ್ವಧಿಷ್ಣ್ಯಾನ್ನಿಲಯಂ ಪುರದ್ವಿಷಃ
ಕೈಲಾಸಮದ್ರಿಪ್ರವರಂ ಪ್ರಿಯಂ ಪ್ರಭೋಃ ॥

ಅನುವಾದ

ಬ್ರಹ್ಮದೇವರು ಅವರಿಗೆ ಹೀಗೆ ಹೇಳಿ ದೇವತೆಗಳನ್ನೂ, ಪ್ರಜಾಪತಿಗಳನ್ನೂ, ಪಿತೃದೇವತೆಗಳನ್ನೂ, ಜೊತೆಯಲ್ಲಿ ಕರೆದು ಕೊಂಡು, ತನ್ನ ಲೋಕದಿಂದ ಭಗವಾನ್ ಶಂಕರನ ಪ್ರಿಯಧಾಮವಾದ ಪರ್ವತಶ್ರೇಷ್ಠ ಕೈಲಾಸಕ್ಕೆ ಹೋದರು. ॥8॥

(ಶ್ಲೋಕ - 9)

ಮೂಲಮ್

ಜನ್ಮೌಷಧಿತಪೋಮಂತ್ರಯೋಗಸಿದ್ಧೈರ್ನರೇತರೈಃ ।
ಜುಷ್ಟಂ ಕಿನ್ನರಗಂಧರ್ವೈರಪ್ಸರೋಭಿರ್ವೃತಂ ಸದಾ ॥

ಅನುವಾದ

ಆ ಕೈಲಾಸದ ಪವಿತ್ರತೆ, ರಮಣೀಯತೆ ಅವರ್ಣನೀಯವಾಗಿತ್ತು. ಅದು ಔಷಧಿ-ವನಸ್ಪತಿಗಳು, ತಪಸ್ಸು, ಮಂತ್ರ, ಯೋಗ ಮುಂತಾದ ಉಪಾಯಗಳಿಂದ ಮತ್ತು ಹುಟ್ಟಿ ನಿಂದಲೇ ಸಿದ್ಧಿಯನ್ನು ಪಡೆದಿರುವ ದೇವತೆಗಳು ನಿತ್ಯವೂ ವಾಸಮಾಡುವ ದಿವ್ಯಧಾಮವು. ಕಿನ್ನರರೂ, ಗಂಧರ್ವರೂ, ಅಪ್ಸರೆಯರೂ ಸದಾಕಾಲ ಅಲ್ಲಿ ನೆರೆದಿರುತ್ತಾರೆ. ॥9॥

(ಶ್ಲೋಕ - 10)

ಮೂಲಮ್

ನಾನಾಮಣಿಮಯೈಃ ಶೃಂಗೈರ್ನಾನಾಧಾತುವಿಚಿತ್ರಿತೈಃ ।
ನಾನಾದ್ರುಮಲತಾಗುಲ್ಮೈರ್ನಾನಾಮೃಗಗಣಾವೃತೈಃ ॥

ಅನುವಾದ

ಅಲ್ಲಿ ನಾನಾಧಾತುಗಳಿಂದ ಚಿತ್ರ-ವಿಚಿತ್ರವಾಗಿ ವರ್ಣರಂಜಿತ ವಿವಿಧ ರತ್ನಮಯವಾಗಿರುವ ಉನ್ನತವಾದ ಶಿಖರಗಳು ಕಂಗೊಳಿಸುತ್ತವೆ. ಅವು ಬಗೆ-ಬಗೆಯ ಮರ-ಬಳ್ಳಿ-ಪೊದೆಗಳಿಂದ ಕೂಡಿದ್ದು ಅಲ್ಲಿ ಅನೇಕ ವನ್ಯ ಪ್ರಾಣಿಗಳು ಹಿಂಡು-ಹಿಂಡಾಗಿ ಸಂಚರಿಸುತ್ತಿವೆ. ॥10॥

(ಶ್ಲೋಕ - 11)

ಮೂಲಮ್

ನಾನಾಮಲಪ್ರಸ್ರವಣೈರ್ನಾನಾಕಂದರಸಾನುಭಿಃ ।
ರಮಣಂ ವಿಹರಂತೀನಾಂ ರಮಣೈಃ ಸಿದ್ಧಯೋಷಿತಾಮ್ ॥

ಅನುವಾದ

ತಿಳಿನೀರಿನಿಂದ ಕೂಡಿದ ಅನೇಕ ಜಲಪ್ರವಾಹಗಳು ಹರಿಯುತ್ತಿರುವುದರಿಂದ, ತನ್ನ ಎತ್ತರವಾದ ಶಿಖರಗಳಿಂದಲೂ, ಆಳವಾದ ಕಂದಕಗಳಿಂದಲೂ ಶೋಭಿಸುವ ಆ ಪರ್ವತವು ತಮ್ಮ ಪ್ರಿಯತಮರೊಂದಿಗೆ ವಿಹರಿಸುತ್ತಿರುವ ಸಿದ್ಧರ ಪತ್ನಿ ಯರಿಗೆ ಕ್ರೀಡಾಸ್ಥಳವಾಗಿದೆ. ॥11॥

(ಶ್ಲೋಕ - 12)

ಮೂಲಮ್

ಮಯೂರಕೇಕಾಭಿರುತಂ ಮದಾಂಧಾಲಿವಿಮೂರ್ಚ್ಛಿತಮ್ ।
ಪ್ಲಾವಿತೈ ರಕ್ತಕಂಠಾನಾಂ ಕೂಜಿತೈಶ್ಚ ಪತತ್ಪ್ರಿಣಾಮ್ ॥

ಅನುವಾದ

ಅಲ್ಲಿ ಎಲ್ಲೆಡೆ, ಕುಣಿಯುತ್ತಿರುವ ನವಿಲುಗಳ ಕೇಕಾರವಗಳೂ, ಮದವೇರಿದ ದುಂಬಿಗಳ ಝೇಂಕಾರಗಳು, ಕೋಗಿಲೆಗಳ ಪಂಚಮ ಇಂಚರಗಳ ಕೂಜನಗಳೂ, ಬೇರೆ ಪಕ್ಷಿಗಳ ಕಲರವಗಳೂ ಪ್ರತಿಧ್ವನಿಸುತ್ತಿದ್ದವು. ॥12॥

(ಶ್ಲೋಕ - 13)

ಮೂಲಮ್

ಆಹ್ವಯಂತಮಿವೋದ್ಧಸ್ತೈರ್ದ್ವಿಜಾನ್ಕಾಮದುಘೈರ್ದ್ರುಮೈಃ ।
ವ್ರಜಂತಮಿವ ಮಾತಂಗೈರ್ಗೃಣಂತಮಿವ ನಿರ್ಝರೈಃ ॥

ಅನುವಾದ

ಅಲ್ಲಿ ಎತ್ತರವಾಗಿ ಬೆಳೆದಿರುವ ಕಲ್ಪವೃಕ್ಷಗಳು ಹಕ್ಕಿ ಮತ್ತು ಹಾರುವ ದ್ವಿಜಾತಿಗಳನ್ನು ತಮ್ಮ ಕೊಂಬೆಗಳಿಂದ ಕರೆಯುತ್ತಿರುವಂತೆಯೂ, ಕಾಡಾನೆಗಳ ಓಟ ದಿಂದ ಅವರ ಬಳಿಗೆ ಹೋಗುತ್ತಿರುವಂತೆಯೂ, ನದಿಗಳ ಕಲ-ಕಲಧ್ವನಿಯಿಂದ ಅವರನ್ನು ಮಾತನಾಡಿಸಿ ಕರೆಯು ತ್ತಿರುವಂತೆ ಕಂಡುಬರುತ್ತಿತ್ತು. ॥13॥

(ಶ್ಲೋಕ - 14)

ಮೂಲಮ್

ಮಂದಾರೈಃ ಪಾರಿಜಾತೈಶ್ಚ ಸರಲೈಶ್ಚೋಪಶೋಭಿತಮ್ ।
ತಮಾಲೈಃ ಶಾಲತಾಲೈಶ್ಚ ಕೋವಿದಾರಾಸನಾರ್ಜುನೈಃ ॥

(ಶ್ಲೋಕ - 15)

ಮೂಲಮ್

ಚೂತೈಃ ಕದಂಬೈರ್ನೀಪೈಶ್ಚ ನಾಗಪುನ್ನಾಗಚಂಪಕೈಃ ।
ಪಾಟಲಾಶೋಕಬಕುಲೈಃ ಕುಂದೈಃ ಕುರಬಕೈರಪಿ ॥

(ಶ್ಲೋಕ - 16)

ಮೂಲಮ್

ಸ್ವರ್ಣಾರ್ಣಶತಪತ್ರೈಶ್ಚ ವರರೇಣುಕಜಾತಿಭಿಃ ।
ಕುಬ್ಜಕೈರ್ಮಲ್ಲಿಕಾಭಿಶ್ಚ ಮಾಧವೀಭಿಶ್ಚ ಮಂಡಿತಮ್ ॥

ಅನುವಾದ

ಆ ರಜತಗಿರಿಯು ರಮಣೀಯವಾದ ಮಂದಾರ, ಪಾರಿಜಾತ, ಸರಳ, ತಮಾಲ, ಸಾಲ, ತಾಲ, ಕೋವಿದಾರ, ಅಸನ, ಅರ್ಜುನ, ಚೂತ, ಕದಂಬ, ನೀಪ, ನಾಗ, ಪುನ್ನಾಗ, ಚಂಪಕ, ಪಾಟಲ, ಅಶೋಕ, ಬಕುಳ, ಕುಂದ, ಕುರವಕ, ಸ್ವರ್ಣವರ್ಣದ ಶತಪತ್ರ ಮುಂತಾದ ವೃಕ್ಷಗಳಿಂದಲೂ, ಏಲಾ, ಮಾಲತೀ, ರೇಣುಕ, ಜಾಜಿ, ಕುಬ್ಜಕ, ಮಲ್ಲಿಕಾ, ಮಾಧವೀ ಮುಂತಾದ ಬಳ್ಳಿಗಳಿಂದಲೂ, ಹೆಚ್ಚಾಗಿ ಶೋಭಿಸುತ್ತಿತ್ತು. ॥14-16॥

(ಶ್ಲೋಕ - 17)

ಮೂಲಮ್

ಪನಸೋದುಂಬರಾಶ್ವತ್ಥಪ್ಲಕ್ಷನ್ಯಗ್ರೋಧಹಿಂಗುಭಿಃ ।
ಭೂರ್ಜೈರೋಷಧಿಭಿಃ ಪೂಗೈ ರಾಜಪೂಗೈಶ್ಚ ಜಂಬುಭಿಃ ॥

(ಶ್ಲೋಕ - 18)

ಮೂಲಮ್

ಖರ್ಜೂರಾಮ್ರಾತಕಾಮ್ರಾದ್ಯೈಃ ಪ್ರಿಯಾಲಮಧುಕೇಂಗುದೈಃ ।
ದ್ರುಮಜಾತಿಭಿರನ್ಯೈಶ್ಚ ರಾಜಿತಂ ವೇಣುಕೀಚಕೈಃ ॥

ಅನುವಾದ

ಪನಸ, ಔದುಂಬರ, ಅಶ್ವತ್ಥ, ಪ್ಲಕ್ಷ, ನ್ಯಗ್ರೋಧ, ಹಿಂಗು, ಭೂರ್ಜ, ಪೂಗ, ರಾಜಪೂಗ, ಜಂಬೂ, ಖರ್ಜೂರ, ಆಮ್ರಾತಕ, ಆಮ್ರ, ಪ್ರಿಯಾಳು, ಮಧುಕ, ಇಂಗುದ, ವೇಣು, ಕೀಚಕ ಮುಂತಾದ ವೃಕ್ಷ-ಔಷಧಿ-ವನಸ್ಪತಿಗಳಿಂದ ನೋಡುವವರ ಕಣ್ಮನಗಳನ್ನು ಸೆಳೆಯುತ್ತಿತ್ತು. ॥17-18॥

(ಶ್ಲೋಕ - 19)

ಮೂಲಮ್

ಕುಮುದೋತ್ಪಲಕಹ್ಲಾರಶತಪತ್ರವನರ್ದ್ಧಿಭಿಃ ।
ನಲಿನೀಷು ಕಲಂ ಕೂಜತ್ಖಗವೃಂದೋಪಶೋಭಿತಮ್ ॥

ಅನುವಾದ

ಅದರ ಸರೋವರಗಳಲ್ಲಿ ಅರಳಿ ಆಡುತ್ತಿರುವ ಕುಮುದ, ಕನ್ನೈದಿಲೆ, ಕಲ್ಹಾರ, ಶತಪತ್ರ ಮುಂತಾದ ಕಮಲ ಪುಷ್ಪಕದಂಬಗಳಲ್ಲಿ ಕುಳಿತು ಹಂಸ-ಸಾರಸ-ಕಾರಂಡ ಮುಂತಾದ ಜಲಪಕ್ಷಿಗಳು ಹಿಂಡು-ಹಿಂಡಾಗಿ ಕಲರವಮಾಡುವುದರಿಂದ ಅವು ಶೋಭಿಸುತ್ತಿದ್ದವು. ॥19॥

(ಶ್ಲೋಕ - 20)

ಮೂಲಮ್

ಮೃಗೈಃ ಶಾಖಾಮೃಗೈಃ ಕ್ರೋಡೈರ್ಮೃಗೇಂದ್ರೈರ್ಋಕ್ಷಶಲ್ಯಕೈಃ ।
ಗವಯೈಃ ಶರಭೈರ್ವ್ಯಾಘ್ರೈ ರುರುಭಿರ್ಮಹಿಷಾದಿಭಿಃ ॥

(ಶ್ಲೋಕ - 21)

ಮೂಲಮ್

ಕರ್ಣಾಂತ್ರೈಕಪದಾಶ್ವಾಸ್ಯೈರ್ನಿರ್ಜುಷ್ಟಂ ವೃಕನಾಭಿಭಿಃ ।
ಕದಲೀಷಂಡಸಂರುದ್ಧ ನಲಿನೀಪುಲಿನಶ್ರಿಯಮ್ ॥

(ಶ್ಲೋಕ - 22)

ಮೂಲಮ್

ಪರ್ಯಸ್ತಂ ನಂದಯಾ ಸತ್ಯಾಃ ಸ್ನಾನಪುಣ್ಯತರೋದಯಾ ।
ವಿಲೋಕ್ಯ ಭೂತೇಶಗಿರಿಂ ವಿಬುಧಾ ವಿಸ್ಮಯಂ ಯಯುಃ ॥

ಅನುವಾದ

ಅಲ್ಲಲ್ಲಿ ಹುಲ್ಲೆಗಳು, ಕಪಿಗಳು, ಕರಡಿಗಳು, ಕಾಡು ಹಂದಿಗಳು, ಸಿಂಹಗಳು, ಗವಯಗಳು, ಶರಭಗಳೂ, ವ್ಯಾಘ್ರಗಳೂ, ರುರುಮೃಗಗಳು, ಕೃಷ್ಣಮೃಗಗಳು, ಕಾಡುಕೋಣಗಳು, ಕರ್ಣಾಂತ್ರಗಳು, ಊರ್ಣಾ ಮೃಗಗಳು, ಒಕ್ಕಾಲಿನ ಮೃಗಗಳು, ಕುದುರೆಮಖದ ಮೃಗಗಳು, ತೋಳಗಳು, ಕಸ್ತೂರಿಮೃಗಗಳು ಯಥೇಚ್ಛವಾಗಿ ಸಂಚರಿಸುತ್ತವೆ. ಸರೋವರದ ತೀರಗಳು ಬಾಳೆಯ ಸಾಲುಗಳಿಂದ ಶೋಭಿಸುತ್ತಿವೆ. ಸುತ್ತಲೂ ನಂದಾ, ಎಂಬ ನದಿಯು ಹರಿಯುತ್ತಿದ್ದು, ಸತೀದೇವಿಯ ಸ್ನಾನದಿಂದಾಗಿ ಇನ್ನೂ ಪವಿತ್ರ ಸುಗಂಧಿತವಾದ ತಿಳಿನೀರಿನಿಂದ ಕೂಡಿದೆ. ಭಗವಾನ್ ಭೂತನಾಥನ ನಿವಾಸ ಸ್ಥಾನವಾದ ಆ ಕೈಲಾಸ ಪರ್ವತದ ಇಂತಹ ಸೊಬಗನ್ನು ಕಂಡು ದೇವತೆಗಳೂ ಸಹ ಅತ್ಯಂತ ಆಶ್ಚರ್ಯಭರಿತರಾದರು. ॥20-22॥

(ಶ್ಲೋಕ - 23)

ಮೂಲಮ್

ದದೃಶುಸ್ತತ್ರ ತೇ ರಮ್ಯಾಮಲಕಾಂ ನಾಮ ವೈ ಪುರೀಮ್ ।
ವನಂ ಸೌಗಂಧಿಕಂ ಚಾಪಿ ಯತ್ರ ತನ್ನಾಮ ಪಂಕಜಮ್ ॥

ಅನುವಾದ

ಅಲ್ಲಿ ಅವರು ಅಲಕಾ ಎಂಬ ರಮಣೀಯವಾದ ನಗರಿಯನ್ನು ಮತ್ತು ಸುಗಂಧವನ್ನು ಹರಡುವ ಸೌಗಂಧಿಕವೆಂಬ ಕಮಲಗಳು ಅರಳಿರುವ ಸೌಗಂಧಿಕ ವನವನ್ನು ನೋಡಿದರು. ॥23॥

(ಶ್ಲೋಕ - 24)

ಮೂಲಮ್

ನಂದಾ ಚಾಲಕನಂದಾ ಚ ಸರಿತೌ ಬಾಹ್ಯತಃ ಪುರಃ ।
ತೀರ್ಥಪಾದಪದಾಂಭೋಜರಜಸಾತೀವ ಪಾವನೇ ॥

ಅನುವಾದ

ಆ ನಗರಿಯ ಹೊರಭಾಗದಲ್ಲಿ ತೀರ್ಥಪಾದನಾದ ಶ್ರೀಹರಿಯ ಚರಣಧೂಳಿಯ ಸಂಯೋಗದಿಂದ ಅತ್ಯಂತ ಪವಿತ್ರವಾಗಿರುವ ನಂದಾ ಮತ್ತು ಅಲಕನಂದಾ ಎಂಬ ಎರಡು ನದಿಗಳು ಹರಿಯುತ್ತಿವೆ. ॥24॥

(ಶ್ಲೋಕ - 25)

ಮೂಲಮ್

ಯಯೋಃ ಸುರಸಿಯಃ ಕ್ಷತ್ತರವರುಹ್ಯ ಸ್ವಧಿಷ್ಣ್ಯತಃ ।
ಕ್ರೀಡಂತಿ ಪುಂಸಃ ಸಿಂಚಂತ್ಯೋ ವಿಗಾಹ್ಯ ರತಿಕರ್ಶಿತಾಃ ॥

ಅನುವಾದ

ರತಿವಿಲಾಸದಿಂದ ಆಯಾಸಗೊಂಡ ದೇವತಾಸ್ತ್ರೀಯರು ತಮ್ಮ ನಿವಾಸ ಸ್ಥಾನಗಳಿಂದ ಬಂದು ಆ ನದಿಗಳಲ್ಲಿ ಸ್ನಾಮಾಡುತ್ತಾ, ತಮ್ಮ ಪ್ರಿಯತಮರ ಮೇಲೆ ನೀರನ್ನೆರಚುತ್ತಿದ್ದರು. ॥25॥

(ಶ್ಲೋಕ - 26)

ಮೂಲಮ್

ಯಯೋಸ್ತತ್ಸ್ನಾನವಿಭ್ರಷ್ಟನವಕುಂಕುಮಪಿಂಜರಮ್ ।
ವಿತೃಷೋಪಿ ಪಿಬಂತ್ಯಂಭಃ ಪಾಯಯಂತೋ ಗಜಾ ಗಜೀಃ ॥

ಅನುವಾದ

ಸ್ನಾನಮಾಡುವಾಗ ಅವರ ಸ್ತನಗಳ ಮೇಲಿನ ಕೇಸರಿಯ ಲೇಪವು ತೊಳೆದುಹೋದ್ದರಿಂದ ಆ ನದಿಯ ನೀರು ಹಳದಿ ಯಾಗುತ್ತಿತ್ತು. ಆ ಕೇಸರಮಿಶ್ರಿತ ನೀರನ್ನು ಗಂಧದ ಆಸೆಯಿಂದ ಆನೆಗಳು ಬಾಯಾರಿಕೆ ಇಲ್ಲದಿದ್ದರೂ ಕುಡಿಯುತ್ತಾ, ಜೊತೆಯ ಹೆಣ್ಣಾನೆಗಳಿಗೂ ಕುಡಿಸುತ್ತಿದ್ದವು. ॥26॥

(ಶ್ಲೋಕ - 27)

ಮೂಲಮ್

ತಾರಹೇಮಮಹಾರತ್ನವಿಮಾನಶತಸಂಕುಲಾಮ್ ।
ಜುಷ್ಟಾಂ ಪುಣ್ಯಜನಸೀಭಿರ್ಯಥಾ ಖಂ ಸತಡಿದ್ಘನಮ್ ॥

ಅನುವಾದ

ಅಲಕಾನಗರಿಯ ಮೇಲೆ ಚಿನ್ನ, ಬೆಳ್ಳಿ ಮತ್ತು ಬಹುಮೂಲ್ಯ ಮಣಿಗಳಿಂದ ಖಚಿತವಾದ ನೂರಾರು ವಿಮಾನಗಳು ವಿರಾಜಿಸುತ್ತಿವೆ. ಅವುಗಳಲ್ಲಿ ಅನೇಕ ಯಕ್ಷಪತ್ನಿಯರು ವಾಸಮಾಡುತ್ತಿದ್ದರು. ಇವುಗಳ ಕಾರಣ ಆ ವಿಶಾಲನಗರಿಯು ಮಿಂಚು-ಮೋಡಗಳಿಂದ ಆವರಿಸಲ್ಪಟ್ಟಿರುವ ಆಕಾಶದಂತೆ ಮೆರೆಯುತ್ತಿದೆ. ॥27॥

(ಶ್ಲೋಕ - 28)

ಮೂಲಮ್

ಹಿತ್ವಾ ಯಕ್ಷೇಶ್ವರಪುರೀಂ ವನಂ ಸೌಗಂಧಿಕಂ ಚ ತತ್ ।
ದ್ರುಮೈಃ ಕಾಮದುಘೈರ್ಹೃದ್ಯಂ ಚಿತ್ರಮಾಲ್ಯಲಚ್ಛದೈಃ ॥

ಅನುವಾದ

ಯಕ್ಷರಾಜ ಕುಬೇರನ ರಾಜಧಾನಿಯಾದ ಆ ಅಲಕಾಪುರಿಯನ್ನು ಹಿಂದೆ ಹಾಕಿ ದೇವತೆಗಳು ಸೌಗಂಧಿಕವನಕ್ಕೆ ಬಂದರು. ಅದು ಬಣ್ಣ-ಬಣ್ಣದ ಹಣ್ಣು-ಹೂವು ಮತ್ತು ಪತ್ರೆಗಳಿಂದ ಕೂಡಿದ ಅನೇಕ ಕಲ್ಪವೃಕ್ಷಗಳಿಂದ ಸುಶೋಭಿತವಾಗಿತ್ತು. ॥28॥

(ಶ್ಲೋಕ - 29)

ಮೂಲಮ್

ರಕ್ತಕಂಠಖಗಾನೀಕಸ್ವರಮಂಡಿತಷಟ್ಪದಮ್ ।
ಕಲಹಂಸಕುಲಪ್ರೇಷ್ಠಂ ಖರದಂಡಜಲಾಶಯಮ್ ॥

ಅನುವಾದ

ಅದರಲ್ಲಿ ಕೋಗಿಲೆಯೇ ಮುಂತಾದ ಪಕ್ಷಿಗಳ ಕಲರವವು ಮತ್ತು ದುಂಬಿಗಳ ಝೇಂಕಾರಗಳು ಎಲ್ಲೆಡೆ ಕೇಳಿ ಬರುತ್ತಿದ್ದವು. ರಾಜಹಂಸದ ಪರಮ ಪ್ರಿಯ ಕಮಲಕುಸುಮಗಳಿಂದ ಸುಶೋಭಿತವಾದ ಅನೇಕ ಸರೋವರಗಳು ಇದ್ದವು. ॥29॥

(ಶ್ಲೋಕ - 30)

ಮೂಲಮ್

ವನಕುಂಜರಸಂಘೃಷ್ಟಹರಿಚಂದನವಾಯುನಾ ।
ಅಧಿ ಪುಣ್ಯಜನಸೀಣಾಂ ಮುಹುರುನ್ಮಥಯನ್ಮನಃ ॥

ಅನುವಾದ

ಆ ವನವು ಕಾಡಾನೆಗಳು ಉಜ್ಜಿದ್ದರಿಂದ ವಿಶೇಷವಾಗಿ ಗಂಧವನ್ನು ಸೂಸುವ ಹರಿಚಂದನ ವೃಕ್ಷಗಳನ್ನು ಹಾಯ್ದು ಬೀಸುವ ಸುಗಂಧಿತವಾಯುವು ಯಕ್ಷಪತ್ನಿಯರ ಮನಸ್ಸಿನಲ್ಲಿ ವಿಶೇಷವಾಗಿ ಮದವನ್ನೇರಿಸುತ್ತಿತ್ತು. ॥30॥

(ಶ್ಲೋಕ - 31)

ಮೂಲಮ್

ವೈದೂರ್ಯಕೃತಸೋಪಾನಾ ವಾಪ್ಯ ಉತ್ಪಲಮಾಲಿನೀಃ ।
ಪ್ರಾಪ್ತಾಂ ಕಿಂಪುರುಷೈರ್ದೃಷ್ಟ್ವಾ ತ ಆರಾದ್ದದೃಶುರ್ವಟಮ್ ॥

ಅನುವಾದ

ವೈಡೂರ್ಯ ಮಣಿ ಗಳಿಂದ ರಚಿತವಾದ ಸೋಪಾನಗಳಿಂದ ಕೂಡಿ, ಕಮಲ ಪುಷ್ಪಗಳ ಸಮೂಹವು ಅರಳಿನಿಂತಿದ್ದ ಅನೇಕ ಪುಷ್ಕರಿಣಿಗಳು ಅಲ್ಲಿ ಶೋಭಿಸುತ್ತಿದ್ದುವು. ಕಿಂಪುರುಷರು ಆಯಾಸ ಪರಿಹಾರಕ್ಕಾಗಿ ಹಾಗೂ ಮನೋವಿನೋದಗಳಿಗಾಗಿ ಅಲ್ಲಿಗೆ ಬಂದಿದ್ದರು. ಇಂತಹ ವನಶೋಭೆಯನ್ನು ದಿಟ್ಟಿಸುತ್ತಾ ದೇವತೆಗಳು ಸ್ವಲ್ಪ ಮುಂದೆ ಹೋದಾಗ ಅವರಿಗೆ ಸನಿಹದಲ್ಲೇ ಒಂದು ವಿಶಾಲ ವಾದ ವಟವೃಕ್ಷ ಗೋಚರಿಸಿತು. ॥31॥

(ಶ್ಲೋಕ - 32)

ಮೂಲಮ್

ಸ ಯೋಜನಶತೋತ್ಸೇಧಃ ಪಾದೋನವಿಟಪಾಯತಃ ।
ಪರ್ಯಕ್ಕೃತಾಚಲಚ್ಛಾಯೋ ನಿರ್ನೀಡಸ್ತಾಪವರ್ಜಿತಃ ॥

ಅನುವಾದ

ಆ ಅದ್ಭುತವಾದ ವಟವೃಕ್ಷವು ನೂರು ಯೋಜನಗಳಷ್ಟು ಎತ್ತರವಾಗಿತ್ತು. ಅದರ ಕೊಂಬೆಗಳು ಎಪ್ಪತ್ತೈದು ಯೋಜನ ಹರಡಿ ಕೊಂಡಿದ್ದವು. ಅದರ ಸುತ್ತಲೂ ನಿರಂತರ ನೆರಳು ಆವರಿಸಿದ್ದು, ತಾಪವು ಲವಲೇಶವೂ ಇಲ್ಲದೆ ತಂಪಿನ ನೆಲೆ ಯಾಗಿತ್ತು. ಆ ವೃಕ್ಷದಲ್ಲಿ ಒಂದು ಗೂಡೂ ಇರಲಿಲ್ಲ. ॥32॥

(ಶ್ಲೋಕ - 33)

ಮೂಲಮ್

ತಸ್ಮಿನ್ಮಹಾಯೋಗಮಯೇ ಮುಮುಕ್ಷುಶರಣೇ ಸುರಾಃ ।
ದದೃಶುಃ ಶಿವಮಾಸೀನಂ ತ್ಯಕ್ತಾಮರ್ಷಮಿವಾಂತಕಮ್ ॥

ಅನುವಾದ

ಮಹಾಯೋಗಮಯವೂ, ಮುಮುಕ್ಷುಗಳಿಗೆ ಆಶ್ರಯವೂ ಆದ ಆ ವೃಕ್ಷದ ಕೆಳಗೆ ವಿರಾಜಿಸುತ್ತಿದ್ದ ಭಗವಾನ್ ಶಂಕರನನ್ನು ದೇವತೆಗಳು ನೋಡಿದರು. ಅವನು ಸಾಕ್ಷಾತ್ ಕ್ರೋಧವನ್ನು ತೊರೆದ ಕಾಲನಂತೆ ಬೆಳಗುತ್ತಿದ್ದನು. ॥33॥

(ಶ್ಲೋಕ - 34)

ಮೂಲಮ್

ಸನಕಾದ್ಯೈರ್ಮಹಾಸಿದ್ಧೈಃ ಶಾಂತೈಃ ಸಂಶಾಂತವಿಗ್ರಹಮ್ ।
ಉಪಾಸ್ಯಮಾನಂ ಸಖ್ಯಾ ಚ ಭರ್ತ್ರಾ ಗುಹ್ಯಕರಕ್ಷಸಾಮ್ ॥

ಅನುವಾದ

ಭಗವಾನ್ ಭೂತನಾಥನ ಅಂಗಾಂಗಗಳು ತುಂಬಾ ಪ್ರಶಾಂತವಾಗಿದ್ದವು. ಸನಂದನಾದಿ ಶಾಂತ ಸಿದ್ಧಗಣರು ಮತ್ತು ಗೆಳೆಯನಾದ ಯಕ್ಷಪತಿಯಾದ ಕುಬೇರನು ಸ್ವಾಮಿಯ ಸೇವೆ ಮಾಡುತ್ತಿದ್ದರು. ॥34॥

(ಶ್ಲೋಕ - 35)

ಮೂಲಮ್

ವಿದ್ಯಾತಪೋಯೋಗಪಥಮಾಸ್ಥಿತಂ ತಮಧೀಶ್ವರಮ್ ।
ಚರಂತಂ ವಿಶ್ವಸುಹೃದಂ ವಾತ್ಸಲ್ಯಾಲ್ಲೋಕಮಂಗಲಮ್ ॥

ಅನುವಾದ

ಜಗತ್ಪತಿಯಾದ ಮಹಾದೇವನು ಜಗತ್ತಿಗೆ ಮಿತ್ರನಾಗಿ, ವಾತ್ಸಲ್ಯದಿಂದ ಎಲ್ಲರಿಗೂ ಕಲ್ಯಾಣವನ್ನುಂಟುಮಾಡುವವನು. ಲೋಕ ಹಿತಕ್ಕಾಗಿಯೇ ಅವನು ಉಪಾಸನೆ, ತಪಸ್ಸು ಮತ್ತು ಸಮಾಧಿಗಳೇ ಮುಂತಾದ ಯೋಗ ಸಾಧನೆಗಳನ್ನು ಆಚರಿಸುತ್ತಿದ್ದನು. ॥35॥

(ಶ್ಲೋಕ - 36)

ಮೂಲಮ್

ಲಿಂಗಂ ಚ ತಾಪಸಾಭೀಷ್ಟಂ ಭಸ್ಮದಂಡಜಟಾಜಿನಮ್ ।
ಅಂಗೇನ ಸಂಧ್ಯಾಭ್ರರುಚಾ ಚಂದ್ರಲೇಖಾಂ ಚ ಬಿಭ್ರತಮ್ ॥

ಅನುವಾದ

ಭಗವಂತನು ಸಂಜೆಯ ಮೋಡದಂತೆ ಬೆಳಗುತ್ತಿದ್ದು, ತನ್ನ ದೇಹದಲ್ಲಿ ತಪಸ್ವಿಗಳಿಗೆ ಇಷ್ಟ ಚಿಹ್ನೆಗಳಾದ ಭಸ್ಮ, ಯೋಗದಂಡ, ಮೃಗಚರ್ಮವನ್ನೂ, ತಲೆಯಲ್ಲಿ ಚಂದ್ರಕಲೆ ಯನ್ನೂ ಧರಿಸಿದ್ದನು. ॥36॥

(ಶ್ಲೋಕ - 37)

ಮೂಲಮ್

ಉಪವಿಷ್ಟಂ ದರ್ಭಮಯ್ಯಾಂ ಬೃಸ್ಯಾಂ ಬ್ರಹ್ಮ ಸನಾತನಮ್ ।
ನಾರದಾಯ ಪ್ರವೋಚಂತಂ ಪೃಚ್ಛತೇ ಶೃಣ್ವತಾಂ ಸತಾಮ್ ॥

ಅನುವಾದ

ದರ್ಭೆಯ ಆಸನದಲ್ಲಿ ವಿರಾಜಿಸುತ್ತಿದ್ದ ಪ್ರಭು ದಕ್ಷಿಣಾಮೂರ್ತಿಯು ಶ್ರೋತೃಗಳ ನಡುವೆ ಪ್ರಶ್ನಿಸುತ್ತಿದ್ದ ನಾರದಮಹರ್ಷಿಗಳಿಗೆ ಸನಾತನ ಪರಬ್ರಹ್ಮವನ್ನು ಕುರಿತು ಉಪದೇಶಿಸುತ್ತಿದ್ದನು. ॥37॥

(ಶ್ಲೋಕ - 38)

ಮೂಲಮ್

ಕೃತ್ವೋರೌ ದಕ್ಷಿಣೇ ಸವ್ಯಂ ಪಾದಪದ್ಮಂ ಚ ಜಾನುನಿ ।
ಬಾಹುಂ ಪ್ರಕೋಷ್ಠೇಕ್ಷಮಾಲಾಮಾಸೀನಂ ತರ್ಕಮುದ್ರಯಾ ॥

ಅನುವಾದ

ಎಡಗಾಲನ್ನು ಬಲಮೊಣಕಾಲಿನ ಮೇಲೂ, ಎಡಗೈಯನ್ನು ಎಡಮಂಡಿಯ ಮೇಲೂ ಇರಿಸಿಕೊಂಡು ಮಣಿಕಟ್ಟಿನಲ್ಲಿ ರುದ್ರಾಕ್ಷಿ ಮಾಲೆಯನ್ನು ಧರಿಸಿ, ತರ್ಕಮುದ್ರೆಯಿಂದ* ಕೂಡಿ ವಿರಾಜಿಸುತ್ತಿದ್ದನು. ॥38॥

ಟಿಪ್ಪನೀ
  • ತರ್ಜನಿಯನ್ನು ಅಂಗುಷ್ಠದೊಡನೆ ಸೇರಿಸಿ ಇತರ ಬೆರಳುಗಳನ್ನು ಒಟ್ಟಿಗೆ ಸೇರಿಸಿ ಚಾಚಿ, ಜ್ಞಾನವನ್ನು ಬೋಧಿಸುವ ಮುದ್ರೆಗೆ ತರ್ಕಮುದ್ರೆ ಎಂದು ಜ್ಞಾನಮುದ್ರೆ ಎಂದೂ ಹೇಳುತ್ತಾರೆ. ಚಿನ್ಮುದ್ರೆ ಎಂದೂ ಇದರದ್ದೇ ಹೆಸರು.

(ಶ್ಲೋಕ - 39)

ಮೂಲಮ್

ತಂ ಬ್ರಹ್ಮನಿರ್ವಾಣಸಮಾಧಿಮಾಶ್ರಿತಂ
ವ್ಯಪಾಶ್ರಿತಂ ಗಿರಿಶಂ ಯೋಗಕಕ್ಷಾಮ್ ।
ಸಲೋಕಪಾಲಾ ಮುನಯೋ ಮನೂನಾಂ
ಮಾದ್ಯಂ ಮನುಂ ಪ್ರಾಂಜಲಯಃ ಪ್ರಣೇಮುಃ ॥

ಅನುವಾದ

ಅವನು ಯೋಗ ಪಟ್ಟವನ್ನು ಆಶ್ರಯಿಸಿ ಏಕಾಗ್ರಚಿತ್ತದಿಂದ ಬ್ರಹ್ಮ ಸಮಾಧಿಯ ಸುಖವನ್ನು ಅನುಭವಿಸುತ್ತಿದ್ದನು. ಲೋಕಪಾಲರ ಸಹಿತ ಸಮಸ್ತ ಮುನಿಗಳು ಮನನಶೀಲರಲ್ಲಿ ಸರ್ವಶ್ರೇಷ್ಠ ಭಗವಾನ್ ಶಂಕರನಿಗೆ ಕೈಜೋಡಿಸಿ ಪ್ರಣಾಮಮಾಡಿದರು. ॥39॥

(ಶ್ಲೋಕ - 40)

ಮೂಲಮ್

ಸ ತೂಪಲಭ್ಯಾಗತಮಾತ್ಮಯೋನಿಂ
ಸುರಾಸುರೇಶೈರಭಿವಂದಿತಾಂಘ್ರಿಃ ।
ಉತ್ಥಾಯ ಚಕ್ರೇ ಶಿರಸಾಭಿವಂದನ-
ಮರ್ಹತ್ತಮಃ ಕಸ್ಯ ಯಥೈವ ವಿಷ್ಣುಃ ॥

ಅನುವಾದ

ಸಮಸ್ತ ದೇವಾಧಿಪತಿಗಳೂ, ದೈತ್ಯಾಧಿಪತಿಗಳೂ ದೇವದೇವ ನಾದ ಮಹಾದೇವನ ಚರಣಕಮಲಗಳನ್ನು ವಂದಿಸುತ್ತಿದ್ದರೂ, ಅವನು ಬ್ರಹ್ಮ ದೇವರು ತನ್ನ ಸ್ಥಾನಕ್ಕೆ ಬಂದಿರುವುದನ್ನು ನೋಡಿ ಕೂಡಲೇ ಮೇಲೆದ್ದು ವಾಮನಾವತಾರದಲ್ಲಿ ಪರಮಪೂಜ್ಯ ಭಗವಾನ್ ಮಹಾವಿಷ್ಣುವು ಕಶ್ಯಪರಿಗೆ ವಂದಿಸಿದಂತೆಯೇ ತಲೆತಗ್ಗಿಸಿ ಅವರಿಗೆ ನಮಸ್ಕಾರ ಮಾಡಿದನು. ॥40॥

ಮೂಲಮ್

(ಶ್ಲೋಕ - 41)
ತಥಾಪರೇ ಸಿದ್ಧಗಣಾ ಮಹರ್ಷಿಭಿ-
ರ್ಯೇ ವೈ ಸಮಂತಾದನು ನೀಲಲೋಹಿತಮ್ ।
ನಮಸ್ಕೃತಃ ಪ್ರಾಹ ಶಶಾಂಕಶೇಖರಂ
ಕೃತಪ್ರಣಾಮಂ ಪ್ರಹಸನ್ನಿವಾತ್ಮಭೂಃ ॥

ಅನುವಾದ

ಹಾಗೆಯೇ ಶಿವನ ಸುತ್ತಲೂ ಕುಳಿತಿದ್ದ ಮಹರ್ಷಿಸಹಿತರಾದ ಸಿದ್ಧಗಣಗಳೂ ಬ್ರಹ್ಮದೇವರಿಗೆ ಎದ್ದು ಪ್ರಣಾಮಮಾಡಿದರು. ಎಲ್ಲರೂ ನಮಸ್ಕಾರಮಾಡಿದ ಬಳಿಕ ಬ್ರಹ್ಮದೇವರು ತನಗೆ ನಮಸ್ಕಾರಮಾಡಿದ್ದ ಭಗವಾನ್ ಚಂದ್ರಶೇಖರನಿಗೆ ನಗುತ್ತಾ ಹೀಗೆಂದರು.॥41॥

(ಶ್ಲೋಕ - 42)

ಮೂಲಮ್ (ವಾಚನಮ್)

ಬ್ರಹ್ಮೋವಾಚ

ಮೂಲಮ್

ಜಾನೇ ತ್ವಾಮೀಶಂ ವಿಶ್ವಸ್ಯ ಜಗತೋ ಯೋನಿಬೀಜಯೋಃ ।
ಶಕ್ತೇಃ ಶಿವಸ್ಯ ಚ ಪರಂ ಯತ್ತದ್ಬ್ರಹ್ಮ ನಿರಂತರಮ್ ॥

ಅನುವಾದ

ಬ್ರಹ್ಮದೇವರು ಹೇಳುತ್ತಾರೆ — ಓ ದೇವದೇವಾ! ನೀನು ಇಡೀ ಜಗತ್ತಿಗೆ ಕ್ಷೇತ್ರ ಮತ್ತು ಬೀಜಗಳಾಗಿರುವ ಪ್ರಕೃತಿ ಹಾಗೂ ಪುರುಷ ಇವರಿಬ್ಬರಿಗೂ ಪರನಾಗಿ ಏಕರಸನಾಗಿ ರುವ ಶಾಶ್ವತ ಪರಬ್ರಹ್ಮನೇ ಆಗಿದ್ದೀಯೆ ಎಂಬುದನ್ನು ನಾನು ಬಲ್ಲೆನು. ॥42॥

(ಶ್ಲೋಕ - 43)

ಮೂಲಮ್

ತ್ವಮೇವ ಭಗವನ್ನೇತಚ್ಛಿವಶಕ್ತ್ಯೋಃ ಸರೂಪಯೋಃ ।
ವಿಶ್ವಂ ಸೃಜಸಿ ಪಾಸ್ಯತ್ಸಿ ಕ್ರೀಡನ್ನೂರ್ಣಪಟೋ ಯಥಾ ॥

ಅನುವಾದ

ಎಲೈ ಭಗವಂತನೇ! ನೀನು ನಿನ್ನ ಸ್ವರೂಪಭೂತ ಶಿವ-ಶಕ್ತಿ (ಪ್ರಕೃತಿ-ಪುರುಷ) ರೂಪದಲ್ಲಿ ಕ್ರೀಡಿಸುತ್ತಾ ಜೇಡರ ಹುಳುವಿನಂತೆ ಬೇರಾವುದರ ಅಪೇಕ್ಷೆ ಇಲ್ಲದೆ ಲೀಲೆಯಿಂದ ಈ ಜಗತ್ತೆಂಬ ಬಲೆಯನ್ನು ರಚಿಸಿ, ರಕ್ಷಿಸಿ, ಉಪಸಂಹಾರ ಮಾಡಿಕೊಳ್ಳುತ್ತಿರುವೆ. ॥43॥

ಮೂಲಮ್

(ಶ್ಲೋಕ - 44)
ತ್ವಮೇವ ಧರ್ಮಾರ್ಥದುಘಾಭಿಪತ್ತಯೇ
ದಕ್ಷೇಣ ಸೂತ್ರೇಣ ಸಸರ್ಜಿಥಾಧ್ವರಮ್ ।
ತ್ವಯೈವ ಲೋಕೇವಸಿತಾಶ್ಚ ಸೇತವೋ
ಯಾನ್ ಬ್ರಾಹ್ಮಣಾ ಶ್ರದ್ದಧತೇ ಧೃತವ್ರತಾಃ ॥

ಅನುವಾದ

ಧರ್ಮವನ್ನೂ ಅರ್ಥವನ್ನೂ ದೊರಕಿಸಿಕೊಡುವ ವೇದಗಳ ರಕ್ಷಣೆಗಾಗಿ ದಕ್ಷನನ್ನು ನಿಮಿತ್ತವನ್ನಾಗಿಸಿಕೊಂಡು ಯಜ್ಞವನ್ನು ಪ್ರಕಟಪಡಿಸಿದವನೂ ನೀನೇ. ನಿಯಮನಿಷ್ಠರಾದ ಬ್ರಾಹ್ಮಣರು ಶ್ರದ್ಧೆಯಿಂದ ಪಾಲಿಸುತ್ತಿರುವ ವರ್ಣಾಶ್ರಮಗಳ ಮರ್ಯಾದೆಗಳನ್ನು ನೆಲೆಗೊಳಿಸಿದವನೂ ನೀನೇ ಆಗಿರುವೆ. ॥44॥

(ಶ್ಲೋಕ - 45)

ಮೂಲಮ್

ತ್ವಂ ಕರ್ಮಣಾಂ ಮಂಗಲ ಮಂಗಲಾನಾಂ
ಕರ್ತುಃ ಸ್ಮ ಲೋಕಂ ತನುಷೇ ಸ್ವಃ ಪರಂ ವಾ ।
ಅಮಂಗಲಾನಾಂ ಚ ತಮಿಸ್ರಮುಲ್ಬಣಂ
ವಿಪರ್ಯಯಃ ಕೇನ ತದೇವ ಕಸ್ಯಚಿತ್ ॥

ಅನುವಾದ

ಮಂಗಳಮಯ ಮಹೇಶ್ವರನೇ! ನೀನು ಶುಭಕರ್ಮಗಳನ್ನು ಮಾಡುವವರಿಗೆ ಸ್ವರ್ಗಲೋಕವನ್ನು ಅಥವಾ ಮೋಕ್ಷವನ್ನು ಕರುಣಿಸುತ್ತಿರುವೆ ಹಾಗೂ ಅಮಂಗಳ ಪಾಪಕರ್ಮಗಳನ್ನು ಮಾಡುವವರಿಗೆ ಘೋರ ನರಕದಲ್ಲಿ ಕೆಡಹುವೆ. ಹಾಗಿರುವಾಗಲೂ ಕೆಲ-ಕೆಲವ್ಯಕ್ತಿಗಳಿಗೆ ಈ ಕರ್ಮಗಳ ಫಲಗಳು ವಿಪರೀತ ಹೇಗಾಗುತ್ತದೆ? ॥45॥

(ಶ್ಲೋಕ - 46)

ಮೂಲಮ್

ನ ವೈ ಸತಾಂ ತ್ವಚ್ಚರಣಾರ್ಪಿತಾತ್ಮನಾಂ
ಭೂತೇಷು ಸರ್ವೇಷ್ವಭಿಪಶ್ಯತಾಂ ತವ ।
ಭೂತಾನಿ ಚಾತ್ಮನ್ಯಪೃಥಗ್ದಿದೃಕ್ಷತಾಂ
ಪ್ರಾಯೇಣ ರೋಷೋಭಿಭವೇದ್ಯಥಾ ಪಶುಮ್ ॥

ಅನುವಾದ

ನಿನ್ನ ಚರಣಾರವಿಂದಗಳಲ್ಲಿ ತಮ್ಮನ್ನು ಅರ್ಪಿಸಿಕೊಂಡ ಮಹಾನುಭಾವರು ಸಮಸ್ತ ಪ್ರಾಣಿಗಳಲ್ಲಿ ನಿನ್ನನ್ನೇ ನೋಡುತ್ತಾರೆ ಹಾಗೂ ಸಮಸ್ತ ಜೀವರನ್ನು ಅಭೇದದೃಷ್ಟಿಯಿಂದ ಆತ್ಮನಲ್ಲೇ ನೋಡುತ್ತಾರೆ. ಅಂತಹವರು ಪಶುಗಳಂತೆ ಕ್ರೋಧಕ್ಕೆ ವಶರಾಗುವುದಿಲ್ಲ. ॥46॥

(ಶ್ಲೋಕ - 47)

ಮೂಲಮ್

ಪೃಥಗ್ಧಿಯಃ ಕರ್ಮದೃಶೋ ದುರಾಶಯಾಃ
ಪರೋದಯೇನಾರ್ಪಿತಹೃದ್ರುಜೋನಿಶಮ್ ।
ಪರಾನ್ದುರುಕ್ತೈರ್ವಿತುದಂತ್ಯರುಂತುದಾ-
ಸ್ತಾನ್ಮಾ ವಧೀದ್ದೈವವಧಾನ್ಭವದ್ವಿಧಃ ॥

ಅನುವಾದ

ಭೇದ ಬುದ್ಧಿ ಇರುವ ಕಾರಣ ಕರ್ಮಗಳಲ್ಲೇ ಆಸಕ್ತರಾದ ಜನರ ನಿಯತ್ತು ಸರಿಯಿರುವುದಿಲ್ಲ. ಬೇರೆಯವರ ಉನ್ನತಿಯನ್ನು ನೋಡಿ ಹಗಲು-ರಾತ್ರಿ ಅವರ ಮನಸ್ಸು ಕುದಿಯುತ್ತಾ ಇರುತ್ತದೆ. ಮರ್ಮಭೇದಿಯಾದ ತಮ್ಮ ದುರ್ವಚನಗಳಿಂದ ಇತರರ ಮನಸ್ಸನ್ನು ನೋಯಿಸುತ್ತಿರುವ ಇಂತಹ ಅಜ್ಞಾನಿಗಳನ್ನೂ ಕೂಡ ನಿನ್ನಂತಹವರು ಕೊಲ್ಲುವುದು ಉಚಿತವಾಗಲಾರದು. ಏಕೆಂದರೆ, ಆ ಬಡಪಾಯಿಗಳಾದರೋ ವಿಧಿಯಿಂದಲೇ ಮರಣಕ್ಕೆ ತುತ್ತಾದವರು. ॥47॥

(ಶ್ಲೋಕ - 48)

ಮೂಲಮ್

ಯಸ್ಮಿನ್ ಯದಾ ಪುಷ್ಕರನಾಭಮಾಯಯಾ
ದುರಂತಯಾ ಸ್ಪೃಷ್ಟಧಿಯಃ ಪೃಥಗ್ದೃಶಃ ।
ಕುರ್ವಂತಿ ತತ್ರ ಹ್ಯನುಕಂಪಯಾ ಕೃಪಾಂ
ನ ಸಾಧವೋ ದೈವಬಲಾತ್ಕೃತೇ ಕ್ರಮಮ್ ॥

ಅನುವಾದ

ದೇವದೇವಾ! ಭಗವಾನ್ ಪದ್ಮನಾಭನ ಪ್ರಬಲ ಮಾಯೆಯಿಂದ ಮೋಹಿತನಾಗಿ ಯಾರಾದರೂ ಭೇದಬುದ್ಧಿಯನ್ನು ತೋರಿದರೂ ಸಾಧು- ಸತ್ಪುರುಷರು ತಮ್ಮ ಪರದುಃಖಕಾತರ ಸ್ವಭಾವದಿಂದಾಗಿ ಅವರ ಮೇಲೆ ಕೃಪೆಯನ್ನೇ ಮಾಡುತ್ತಾರೆ. ದೈವವಶದಿಂದ ಏನಾದರೂ ನಡೆದು ಹೋದರೆ ‘ಇದೆಲ್ಲ ಕರ್ಮಗಳ ಫಲ’ವೆಂದು ಅದನ್ನು ತಡೆಯುವ ಪ್ರಯತ್ನ ಮಾಡುವುದಿಲ್ಲ. ॥48॥

(ಶ್ಲೋಕ - 49)

ಮೂಲಮ್

ಭವಾಂಸ್ತು ಪುಂಸಃ ಪರಮಸ್ಯ ಮಾಯಯಾ
ದುರಂತಯಾಸ್ಪೃಷ್ಟಮತಿಃ ಸಮಸ್ತದೃಕ್ ।
ತಯಾ ಹತಾತ್ಮಸ್ವನುಕರ್ಮಚೇತಃ
ಸ್ವನುಗ್ರಹಂ ಕರ್ತುಮಿಹಾರ್ಹಸಿ ಪ್ರಭೋ ॥

ಅನುವಾದ

ಪ್ರಭುವೇ! ನೀನು ಸರ್ವಜ್ಞನಾಗಿರುವೆ. ಪರಮಪುರುಷ ಭಗವಂತನ ದುಸ್ತರ ಮಾಯೆಯು ನಿನ್ನ ಬುದ್ಧಿಯನ್ನು ಸ್ಪರ್ಶಿಸಲಾರದು. ಆದ್ದರಿಂದ ಯಾರ ಚಿತ್ತವು ಮಾಯೆಗೆ ವಶವಾಗಿ ಕರ್ಮ ಮಾರ್ಗದಲ್ಲಿ ಆಸಕ್ತವಾಗಿದೆಯೋ, ಅವನಿಂದ ಅಪರಾಧ ನಡೆದು ಹೋದರೂ ಕೂಡ ಅವನ ಮೇಲೆ ನೀನು ಕೃಪೆಯನ್ನೇ ತೋರಬೇಕು. ॥49॥

(ಶ್ಲೋಕ - 50)

ಮೂಲಮ್

ಕುರ್ವಧ್ವರಸ್ಯೋದ್ಧರಣಂ ಹತಸ್ಯ ಭೋಃ
ತ್ವಯಾಸಮಾಪ್ತಸ್ಯ ಮನೋ ಪ್ರಜಾಪತೇಃ ।
ನ ಯತ್ರ ಭಾಗಂ ತವ ಭಾಗಿನೋ ದದುಃ
ಕುಯಜ್ವಿನೋ ಯೇನ ಮಖೋ ನಿನೀಯತೇ ॥

ಅನುವಾದ

ಭಗವಂತಾ! ನೀನೇ ಎಲ್ಲಕ್ಕೂ ಮುಲನಾದವನು. ಎಲ್ಲ ಯಜ್ಞಗಳನ್ನು ಪೂರ್ಣಗೊಳಿಸುವವನೂ ನೀನೇ ಆಗಿರುವೆ. ಯಜ್ಞಭಾಗವನ್ನು ಪಡೆಯುವ ಪೂರ್ಣ ಅಧಿಕಾರ ನಿನಗಿದೆ. ಆದರೂ ಈ ದಕ್ಷಯಜ್ಞದ ಬುದ್ಧಿಹೀನರಾದ ಯಾಜಕರು ನಿನಗೆ ಯಜ್ಞದ ಹವಿರ್ಭಾಗವನ್ನು ಕೊಡಲಿಲ್ಲ. ಇದರಿಂದಲೇ ಅದು ಧ್ವಂಸವಾಯಿತು. ಈಗ ನೀನು ಅಪೂರ್ಣವಾಗಿರುವ ಯಜ್ಞವನ್ನು ಪೂರ್ಣಗೊಳಿಸುವ ಕೃಪೆಯನ್ನು ಮಾಡಬೇಕು. ॥50॥

(ಶ್ಲೋಕ - 51)

ಮೂಲಮ್

ಜೀವತಾದ್ಯಜಮಾನೋಯಂ ಪ್ರಪದ್ಯೇತಾಕ್ಷಿಣೀ ಭಗಃ ।
ಭೃಗೋಃ ಶ್ಮಶ್ರೂಣಿ ರೋಹಂತು ಪೂಷ್ಣೋ ದಂತಾಶ್ಚ ಪೂರ್ವವತ್ ॥

ಅನುವಾದ

ಪ್ರಭೋ! ನಿನ್ನ ಅನುಗ್ರಹದಿಂದ ಯಜ್ಞದ ಯಜಮಾನನಾದ ದಕ್ಷನು ಜೀವಂತನಾಗಲಿ. ಭಗದೇವತೆಗೆ ಕಣ್ಣುಗಳು ಬರಲಿ. ಭೃಗುಮಹರ್ಷಿಗಳಿಗೆ ಗಡ್ಡ-ಮೀಸೆಗಳು ಬರಲಿ. ಪೂಷಾದೇವತೆಗೆ ಮೊದಲಿನಂತೆ ಹಲ್ಲುಗಳು ಮೂಡಲಿ. ॥51॥

(ಶ್ಲೋಕ - 52)

ಮೂಲಮ್

ದೇವಾನಾಂ ಭಗ್ನಗಾತ್ರಾಣಾಮೃತ್ವಿಜಾಂ ಚಾಯುಧಾಶ್ಮಭಿಃ ।
ಭವತಾನುಗೃಹೀತಾನಾಮಾಶು ಮನ್ಯೋಸ್ತ್ವನಾತುರಮ್ ॥

ಅನುವಾದ

ರುದ್ರದೇವನೇ! ಅಸ್ತ್ರ-ಶಸ್ತ್ರಗಳಿಂದ ಮತ್ತು ಕಲ್ಲುಮಳೆಯಿಂದ ದೇವತೆಗಳ, ಋತ್ವಿಜರಗಾಯ ಗೊಂಡ ಅಂಗಾಂಗಗಳೆಲ್ಲವೂ ನಿನ್ನ ಅನುಗ್ರಹದಿಂದ ಸರಿಯಾಗಲಿ. ॥52॥

(ಶ್ಲೋಕ - 53)

ಮೂಲಮ್

ಏಷ ತೇ ರುದ್ರ ಭಾಗೋಸ್ತು ಯದುಚ್ಛಿಷ್ಟೋಧ್ವರಸ್ಯ ವೈ ।
ಯಜ್ಞಸ್ತೇ ರುದ್ರ ಭಾಗೇನ ಕಲ್ಪತಾಮದ್ಯ ಯಜ್ಞಹನ್ ॥

ಅನುವಾದ

ಯಜ್ಞವು ಸಂಪೂರ್ಣವಾದ ಬಳಿಕ ಶೇಷವಾಗಿ ಉಳಿಯುವುದೆಲ್ಲವೂ ಯಾವಾಗಲೂ ನಿನ್ನ ಭಾಗವೇ ಆಗಿದೆ. ಓ ಯಜ್ಞವಿಧ್ವಂಸಕನೇ! ನಿನ್ನ ಈ ಯಜ್ಞಭಾಗದಿಂದಲೇ ಈಗ ಈ ಯಜ್ಞವು ಪೂರ್ಣವಾಗಲೀ. ॥53॥

ಅನುವಾದ (ಸಮಾಪ್ತಿಃ)

ಆರನೆಯ ಅಧ್ಯಾಯವು ಮುಗಿಯಿತು. ॥6॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಚತುರ್ಥಸ್ಕಂಧೇ ರುದ್ರಸಾಂತ್ವನಂ ನಾಮ ಷಷ್ಠೋಽಧ್ಯಾಯಃ ॥6॥