೦೫

[ಐದನೆಯ ಅಧ್ಯಾಯ]

ಭಾಗಸೂಚನಾ

ವೀರಭದ್ರನಿಂದ ದಕ್ಷಯಜ್ಞ ವಿಧ್ವಂಸ ದಕ್ಷನ ವಧೆ

(ಶ್ಲೋಕ - 1)

ಮೂಲಮ್ (ವಾಚನಮ್)

ಮೈತ್ರೇಯ ಉವಾಚ

ಮೂಲಮ್

ಭವೋ ಭವಾನ್ಯಾ ನಿಧನಂ ಪ್ರಜಾಪತೇ-
ರಸತ್ಕೃತಾಯಾ ಅವಗಮ್ಯ ನಾರದಾತ್ ।
ಸ್ವಪಾರ್ಷದಸೈನ್ಯಂ ಚ ತದಧ್ವರರ್ಭುಭಿ-
ರ್ವಿದ್ರಾವಿತಂ ಕ್ರೋಧಮಪಾರಮಾದಧೇ ॥

ಅನುವಾದ

ಶ್ರೀಮೈತ್ರೇಯರು ಹೇಳುತ್ತಾರೆ — ವಿದುರನೇ! ತನ್ನ ತಂದೆಯಾದ ದಕ್ಷನಿಂದ ಅಪಮಾನಿತಳಾದ್ದರಿಂದ ಸತೀದೇವಿಯು ಪ್ರಾಣತ್ಯಾಗ ಮಾಡಿದಳು. ಯಜ್ಞವೇದಿಕೆಯಿಂದ ಪ್ರಕಟಗೊಂಡ ಋಭುಗಳೆಂಬ ದೇವತೆಗಳು ತನ್ನ ಪಾರ್ಷದರನ್ನು ಹೊಡೆದೋಡಿಸಿದರು. ಈ ವಾರ್ತೆಯನ್ನು ನಾರದರಿಂದ ಕೇಳಿದ ಮಹಾದೇವನಿಗೆ ಮಿತಿಮೀರಿದ ಕ್ರೋಧವುಂಟಾಯಿತು. ॥1॥

(ಶ್ಲೋಕ - 2)

ಮೂಲಮ್

ಕ್ರುದ್ಧಃ ಸುದಷ್ಟೋಷ್ಠಪುಟಃ ಸ ಧೂರ್ಜಟಿ-
ರ್ಜಟಾಂ ತಡಿದ್ವಹ್ನಿಸಟೋಗ್ರರೋಚಿಷಮ್ ।
ಉತ್ಕೃತ್ಯ ರುದ್ರಃ ಸಹಸೋತ್ಥಿತೋ ಹಸನ್
ಗಂಭೀರನಾದೋ ವಿಸಸರ್ಜ ತಾಂ ಭುವಿ ॥

ಅನುವಾದ

ರುದ್ರದೇವನು ಎದ್ದುನಿಂತು ಉಗ್ರರೂಪವನ್ನು ಧರಿಸಿ, ಕ್ರೋಧದಿಂದ ತುಟಿಗಳನ್ನು ಕಚ್ಚುತ್ತಾ ಮಿಂಚಿನಂತೆಯೂ, ಬೆಂಕಿಯಂತೆಯೂ, ಭಯಂಕರವಾಗಿ ಹೊಳೆಯುತ್ತಿದ್ದ ತನ್ನ ಒಂದು ಜಟೆಯನ್ನು ಕಿತ್ತು ಗಂಭೀರನಾದದಿಂದ ಅಟ್ಟಹಾಸ ಮಾಡುತ್ತಾ ಅದನ್ನು ನೆಲಕ್ಕೆ ಅಪ್ಪಳಿಸಿದನು. ॥2॥

(ಶ್ಲೋಕ - 3)

ಮೂಲಮ್

ತತೋತಿಕಾಯಸ್ತನುವಾ ಸ್ಪೃಶನ್ದಿವಂ
ಸಹಸ್ರಬಾಹುರ್ಘನರುಕ್ ತ್ರಿಸೂರ್ಯದೃಕ್ ।
ಕರಾಲದಂಷ್ಟ್ರೋ ಜ್ವಲದಗ್ನಿಮೂರ್ಧಜಃ
ಕಪಾಲಮಾಲೀ ವಿವಿಧೋದ್ಯತಾಯುಧಃ ॥

ಅನುವಾದ

ತತ್ಕ್ಷಣದಲ್ಲೇ ಅದರಿಂದ ಸ್ವರ್ಗವನ್ನು ಮುಟ್ಟುತ್ತಿದ್ದ ವಿಶಾಲಕಾಯನಾಗಿದ್ದ ಒಬ್ಬ ಪುರುಷನು ಉತ್ಪನ್ನನಾದನು. ಆತನಿಗೆ ಸಾವಿರ ತೋಳುಗಳೂ, ನೀಲಮೇಘದಂತೆ ಶ್ಯಾಮವರ್ಣದ ಅಂಗ ಕಾಂತಿಯೂ, ಸೂರ್ಯನಂತೆ ಬೆಳಗುತ್ತಿರುವ ಮೂರು ಕಣ್ಣುಗಳು, ಕರಾಳವಾದ ಕೋರೆದಾಡೆಗಳೂ, ಉರಿಯುತ್ತಿರುವ ಬೆಂಕಿಯಂತೆ ಕೆಂಪಾದ ಕೇಶರಾಶಿಗಳೂ, ಕುತ್ತಿಗೆಯಲ್ಲಿ ನರಮುಂಡ ಮಾಲೆಯೂ, ಕೈಗಳಲ್ಲಿ ಬಗೆ-ಬಗೆಯ ಅಸ್ತ್ರ-ಶಸ್ತ್ರಗಳಿದ್ದವು. ॥3॥

(ಶ್ಲೋಕ - 4)

ಮೂಲಮ್

ತಂ ಕಿಂ ಕರೋಮೀತಿ ಗೃಣಂತಮಾಹ
ಬದ್ಧಾಂಜಲಿಂ ಭಗವಾನ್ಭೂತನಾಥಃ ।
ದಕ್ಷಂ ಸಯಜ್ಞಂ ಜಹಿ ಮದ್ಭಟಾನಾಂ
ತ್ವಮಗ್ರಣೀ ರುದ್ರ ಭಟಾಂಶಕೋ ಮೇ ॥

ಅನುವಾದ

ಅವನು ಕೈಜೋಡಿಸಿಕೊಂಡು ಜೀಯಾ! ನಾನೇನು ಮಾಡಲಿ? ಎಂದು ಪ್ರಾರ್ಥನೆ ಮಾಡಲು ಭಗವಾನ್ ಭೂತನಾಥನು ‘ವತ್ಸ! ವೀರಭದ್ರ! ನೀನು ನನ್ನ ಅಂಶಸಂಭೂತನು. ನನ್ನ ಭಟರಿಗೆ ಅಧಿನಾಯಕನಾಗಿ ಬೇಗನೇ ಇಲ್ಲಿಂದ ಹೋಗಿ ಆ ದಕ್ಷನನ್ನೂ, ಆತನ ಯಜ್ಞವನ್ನೂ ಧ್ವಂಸಮಾಡಿ ಬಾ ಎಂದು ಆತನಿಗೆ ಅಪ್ಪಣೆ ಕೊಟ್ಟನು. ॥4॥

(ಶ್ಲೋಕ - 5)

ಮೂಲಮ್

ಆಜ್ಞಪ್ತ ಏವಂ ಕುಪಿತೇನ ಮನ್ಯುನಾ
ಸ ದೇವದೇವಂ ಪರಿಚಕ್ರಮೇ ವಿಭುಮ್ ।
ಮೇನೇ ತದಾತ್ಮಾನಮಸಂಗ ರಂಹಸಾ
ಮಹೀಯಸಾಂ ತಾತ ಸಹಃ ಸಹಿಷ್ಣುಮ್ ॥

ಅನುವಾದ

ಪ್ರಿಯ ವಿದುರನೇ! ದೇವಾಧಿದೇವನಾದ ಭಗವಾನ್ ಶಂಕರನು ಕ್ರೋಧಗೊಂಡು ಹೀಗೆ ಅಪ್ಪಣೆಮಾಡಲು, ಆ ವೀರಭದ್ರನು ಆತನಿಗೆ ಪ್ರದಕ್ಷಿಣೆಮಾಡಿ ಅಲ್ಲಿಂದ ಹೊರಡಲು ಸಿದ್ಧ ನಾದನು. ‘ನನ್ನನ್ನು ಪ್ರತಿಭಟಿಸುವವನು ಈ ಲೋಕದಲ್ಲಿ ಯಾರೂ ಇಲ್ಲ. ‘ಇಲ್ಲಿ ನಾನು ಎಂತಹ ಪರಾ ಕ್ರಮಿಗಳ ವೇಗವನ್ನೂ, ಬಲವನ್ನೂ ಸಹಿಸಬಲ್ಲೆನು’ ಎಂಬ ವಿಶ್ವಾಸವು ಆತನ ಹೃದಯದಲ್ಲಿ ತುಂಬಿತ್ತು. ॥5॥

(ಶ್ಲೋಕ - 6)

ಮೂಲಮ್

ಅನ್ವೀಯಮಾನಃ ಸ ತು ರುದ್ರಪಾರ್ಷದೈ-
ರ್ಭೃಶಂ ನದದ್ಭಿರ್ವ್ಯನದತ್ಸುಭೈರವಮ್ ।
ಉದ್ಯಮ್ಯ ಶೂಲಂ ಜಗದಂತಕಾಂತಕಂ
ಸ ಪ್ರಾದ್ರವದ್ಘೋಷಣಭೂಷಣಾಂಘ್ರಿಃ ॥

ಅನುವಾದ

ಅವನು ಭಯಂಕರವಾದ ಸಿಂಹನಾದವನ್ನು ಮಾಡುತ್ತಾ, ಕರಾಳವಾದ ಒಂದು ತ್ರಿಶೂಲವನ್ನು ಕೈಗೆತ್ತಿಕೊಂಡು, ಕಾಲ್ಗಡ ಗಗಳು ಝಣ-ಝಣಿಸುವಂತೆ ಹೆಜ್ಜೆಹಾಕುತ್ತಾ ದಕ್ಷನ ಯಜ್ಞಮಂಟಪದತ್ತ ದಡದಡನೆ ಓಡಿದನು. ಅವನ ತ್ರಿಶೂಲಕ್ಕೆ ಸಂಹಾರಕಾರಕನಾದ ಮೃತ್ಯುವನ್ನು ಸಂಹರಿಸುವ ಶಕ್ತಿಯಿತ್ತು. ಭಗವಾನ್ ರುದ್ರನ ಇತರ ಪ್ರಮಥಗಣಗಳು ಆರ್ಭಟಿಸುತ್ತಾ ಆತನನ್ನು ಹಿಂಬಾಲಿಸಿದವು. ॥6॥

(ಶ್ಲೋಕ - 7)

ಮೂಲಮ್

ಅಥರ್ತ್ವಿಜೋ ಯಜಮಾನಃ ಸದಸ್ಯಾಃ
ಕಕುಭ್ಯುದೀಚ್ಯಾಂ ಪ್ರಸಮೀಕ್ಷ್ಯ ರೇಣುಮ್ ।
ತಮಃ ಕಿಮೇತತ್ಕುತ ಏತದ್ರಜೋಭೂ-
ದಿತಿ ದ್ವಿಜಾ ದ್ವಿಜಪತ್ನ್ಯಶ್ಚ ದಧ್ಯುಃ ॥

ಅನುವಾದ

ಇತ್ತ ಯಜ್ಞಶಾಲೆಯಲ್ಲಿ ಕುಳಿತಿದ್ದ ಋತ್ವಿಜರೂ, ಯಜಮಾನನೂ, ಸದಸ್ಯರೂ, ಇತರ ಬ್ರಾಹ್ಮಣರೂ, ಬ್ರಾಹ್ಮಣ ಪತ್ನಿಯರೂ, ಉತ್ತರ ದಿಕ್ಕಿನ ಕಡೆ ಭಯಂಕರವಾಗಿ ಎದ್ದಿರುವ ಧೂಳನ್ನು ಕಂಡು ಅಯ್ಯೋ! ಈ ಕತ್ತಲೆ ಏಕೆ ಕವಿಯುತ್ತಿದೆ? ಧೂಳೀಪಟಲ ಎಲ್ಲಿಂದ, ಹೇಗೆ ಏಳುತ್ತಿದೆ? ಎಂದು ಯೋಚಿಸ ತೊಡಗಿದರು. ॥7॥

(ಶ್ಲೋಕ - 8)

ಮೂಲಮ್

ವಾತಾ ನ ವಾಂತಿ ನ ಹಿ ಸಂತಿ ದಸ್ಯವಃ
ಪ್ರಾಚೀನಬರ್ಹಿರ್ಜೀವತಿ ಹೋಗ್ರದಂಡಃ ।
ಗಾವೋ ನ ಕಾಲ್ಯಂತ ಇದಂ ಕುತೋ ರಜೋ
ಲೋಕೋಧುನಾ ಕಿಂ ಪ್ರಲಯಾಯ ಕಲ್ಪತೇ ॥

ಅನುವಾದ

ಇದೇನೋ ಬಿರುಗಾಳಿಯ ಸಮಯವಲ್ಲ. ಕಳ್ಳ-ಕಾಕರ ಹಾವಳಿಯೂ ಇಲ್ಲ. ಏಕೆಂದರೆ, ದುಷ್ಟರಿಗೆ ಉಗ್ರವಾದ ದಂಡನೆಯನ್ನು ಕೊಡುವ ಪ್ರಾಚೀನ ಬರ್ಹಿ ಮಹಾರಾಜನು ದೇಶವನ್ನು ಆಳುತ್ತಿದ್ದಾನೆ. ಹಸುಗಳು ಮನೆಗೆ ಬರುವ ಸಮಯವಾಗಿಲ್ಲ. ಹಾಗಿದ್ದರೂ ಧೂಳು ಏಕೆ ಏಳುತ್ತಿದೆ? ಜಗತ್ತಿನ ಪ್ರಳಯ ಕಾಲವೇ ಬಂದು ಬಿಟ್ಟಿದೆಯೋ ಏನೋ! ಎಂದು ಗಾಬರಿಗೊಂಡು ಚಿಂತಿಸತೊಡಗಿದರು. ॥8॥

(ಶ್ಲೋಕ - 9)

ಮೂಲಮ್

ಪ್ರಸೂತಿಮಿಶ್ರಾಃ ಸಿಯ ಉದ್ವಿಗ್ನಚಿತ್ತಾ
ಊಚುರ್ವಿಪಾಕೋ ವೃಜಿನಸ್ಯೈಷ ತಸ್ಯ ।
ಯತ್ಪಶ್ಯಂತೀನಾಂ ದುಹಿತೃಣಾಂ ಪ್ರಜೇಶಃ
ಸುತಾಂ ಸತೀಮವದಧ್ಯಾವನಾಗಾಮ್ ॥

ಅನುವಾದ

ಆಗ ದಕ್ಷನ ಪತ್ನಿಯಾದ ಪ್ರಸೂತಿಯೇ ಮುಂತಾದ ಸ್ತ್ರೀಯರು ಚಿಂತೆಗೀಡಾಗಿ ‘ಈ ದಕ್ಷಪ್ರಜಾಪತಿಯು ತನ್ನ ಎಲ್ಲ ಕನ್ಯೆಯ ಎದುರಿಗೇ ನಿರಪರಾಧಿಯಾಗಿದ್ದ ಸತೀದೇವಿಯನ್ನು ಅವಮಾನ ಪಡಿಸಿದ್ದನು. ಈ ಪಾಪದ ಫಲವೇ ಇದು ಎಂದು ಕಾಣುತ್ತದೆ. ॥9॥

(ಶ್ಲೋಕ - 10)

ಮೂಲಮ್

ಯಸ್ತ್ವಂತಕಾಲೇ ವ್ಯಪ್ತಜಟಾಕಲಾಪಃ
ಸ್ವಶೂಲಸೂಚ್ಯರ್ಪಿತದಿಗ್ಗಜೇಂದ್ರಃ ।
ವಿತತ್ಯ ನೃತ್ಯತ್ಯುದಿತಾಸದೋರ್ಧ್ವಜಾ-
ನುಚ್ಚಾಟ್ಟಹಾಸಸ್ತನಯಿತ್ನುಭಿನ್ನದಿಕ್ ॥

ಅನುವಾದ

(ಅಥವಾ ಸಂಹಾರಮೂರ್ತಿ ಭಗವಾನ್ ಶ್ರೀರುದ್ರನ ಅನಾದರದ ಪರಿಣಾಮವು ಇದ್ದರೂ ಇರಬಹುದು.) ಪ್ರಳಯಕಾಲವು ಬಂದೊದಗಿದಾಗ ರುದ್ರನು ತನ್ನ ಜಟಾಜೂಟವನ್ನು ಕೆದರಿಕೊಂಡು, ಶಸ್ತ್ರಾಸ್ತ್ರಗಳಿಂದ ಸಜ್ಜಿತವಾದ ಭುಜಗಳನ್ನು ಧ್ವಜದಂತೆ ಬೀಸುತ್ತಾ, ತಾಂಡವನೃತ್ಯವನ್ನು ಮಾಡುತ್ತಿರುವಾಗ ಅವನ ತ್ರಿಶೂಲದ ಅಲಗುಗಳಿಂದ ದಿಗ್ಗಜಗಳು ಗಾಯಗೊಳ್ಳುತ್ತವೆ. ಅವನ ಮೇಘ ಗರ್ಜನೆಯಂತಿದ್ದ ಭಯಂಕರ ಅಟ್ಟಹಾಸದಿಂದ ದಿಕ್ಕುಗಳು ಚಲ್ಲಾ ಪಿಲ್ಲಿಯಾಗಿ ಹೋಗುತ್ತವೆ. ॥10॥

(ಶ್ಲೋಕ - 11)

ಮೂಲಮ್

ಅಮರ್ಷಯಿತ್ವಾ ತಮಸಹ್ಯತೇಜಸಂ
ಮನ್ಯುಪ್ಲುತಂ ದುರ್ವಿಷಹಂ ಭ್ರುಕುಟ್ಯಾ ।
ಕರಾಲದಂಷ್ಟ್ರಾಭಿರುದಸ್ತಭಾಗಣಂ
ಸ್ಯಾತ್ಸ್ವಸ್ತಿ ಕಿಂ ಕೋಪಯತೋ ವಿಧಾತುಃ ॥

ಅನುವಾದ

ಆಗ ಸಹಿಸಲಸದಳವಾದ ತೇಜಸ್ಸು ಆತನಲ್ಲಿ ಉಕ್ಕೇರಿ ಬರುತ್ತದೆ. ಕ್ರೋಧದಿಂದ ಹುಬ್ಬು ಗಂಟಿಕ್ಕಿಕೊಂಡು ನಿಂತ ಆತನನ್ನು ಯಾರೂ ಎದುರಿಸಲಾರರು. ಅವನ ಕರಾಳ ಕೋರೆಹಲ್ಲುಗಳಿಂದ ನಕ್ಷತ್ರಗಳೆಲ್ಲಾ ಚೆಲ್ಲಿಹೋಗುವುವು. ಅಂತಹ ರೋಷಭೀಷಣನಾದ ಭಗವಾನ್ ಶಂಕರನನ್ನು ಕೆಣಕಿದರೆ ಸಾಕ್ಷಾತ್ ಸೃಷ್ಟಿಕರ್ತನಿಗಾದರೂ ಕ್ಷೇಮವೆಲ್ಲಿಯದು? ಎಂದು ಹೇಳತೊಡಗಿದರು. ॥11॥

(ಶ್ಲೋಕ - 12)

ಮೂಲಮ್

ಬಹ್ವೇವಮುದ್ವಿಗ್ನದೃಶೋಚ್ಯಮಾನೇ
ಜನೇನ ದಕ್ಷಸ್ಯ ಮುಹುರ್ಮಹಾತ್ಮನಃ ।
ಉತ್ಪೇತುರುತ್ಪಾತತಮಾಃ ಸಹಸ್ರಶೋ
ಭಯಾವಹಾ ದಿವಿ ಭೂವೌ ಚ ಪರ್ಯಕ್ ॥

ಅನುವಾದ

ದಕ್ಷನ ಯಜ್ಞಮಂಟಪದಲ್ಲಿ ಕುಳಿತಿದ್ದ ಮಹಾತ್ಮರು ಭಯಗ್ರಸ್ತರಾಗಿ ಒಬ್ಬರನ್ನೊಬ್ಬರು ಅಂಜಿಕೆಯ ದೃಷ್ಟಿಯಿಂದ ದಿಟ್ಟಿಸುತ್ತಾ ಬಗೆ-ಬಗೆಯಾಗಿ ಮಾತಾಡಿಕೊಳ್ಳುತ್ತಿರುವಂತೆ ಭೂಮಿಯಲ್ಲೂ, ಆಕಾಶದಲ್ಲೂ ಎಲ್ಲ ಕಡೆಗಳಲ್ಲಿ ಸಾವಿರಾರು ಉತ್ಪಾತಗಳು ಕಾಣಿಸಿಕೊಂಡವು. ॥12॥

(ಶ್ಲೋಕ - 13)

ಮೂಲಮ್

ತಾವತ್ಸ ರುದ್ರಾನುಚರೈರ್ಮಖೋ ಮಹಾ-
ನ್ನಾನಾಯುಧೈರ್ವಾಮನಕೈರುದಾಯುಧೈಃ ।
ಪಿಂಗೈಃ ಪಿಶಂಗೈರ್ಮಕರೋದರಾನನೈಃ
ಪರ್ಯಾದ್ರವದ್ಭಿರ್ವಿದುರಾನ್ವರುಧ್ಯತ ॥

ಅನುವಾದ

ವಿದುರನೇ! ಅಷ್ಟರಲ್ಲೇ ರುದ್ರನ ಸೇವಕರಾದ ಪ್ರಮಥಗಣಗಳು ಆ ದೊಡ್ಡ ಯಜ್ಞಮಂಟಪವನ್ನು ಸುತ್ತುವರಿದು ಮುತ್ತಿಗೆ ಹಾಕಿದರು. ಅವರೆಲ್ಲರೂ ಅಸ್ತ್ರ-ಶಸ್ತ್ರಗಳಿಂದ ಸಜ್ಜಿತರಾಗಿದ್ದರು. ಅವರಲ್ಲಿ ಕೆಲವರು ಕುಳ್ಳರೂ, ಕೆಲವರು ಕೆಂಪು ಬಣ್ಣದವರೂ, ಕೆಲವರು ಕಂದುಬಣ್ಣದವರೂ, ಕೆಲವರು ಹಳದಿ ಬಣ್ಣದವರೂ, ಕೆಲವರು ಮೊಸಳೆಯಂತೆ ಮುಖ-ಹೊಟ್ಟೆಗಳಿಂದ ಕಾಣುತ್ತಿದ್ದರು. ॥13॥

(ಶ್ಲೋಕ - 14)

ಮೂಲಮ್

ಕೇಚಿದ್ಬಭಂಜುಃ ಪ್ರಾಗ್ವಂಶಂ ಪತ್ನೀಶಾಲಾಂ ತಥಾಪರೇ ।
ಸದ ಆಗ್ನೀಧ್ರಶಾಲಾಂ ಚ ತದ್ವಿಹಾರಂ ಮಹಾನಸಮ್ ॥

ಅನುವಾದ

ಅವರಲ್ಲಿ ಕೆಲವರು ಯಜ್ಞದ ಪ್ರಾಗ್ವಂಶವನ್ನು (ಯಜ್ಞಶಾಲೆಯ ಪೂರ್ವ ಮತ್ತು ಪಶ್ಚಿಮದ ಕಂಬಗಳ ಮೇಲೆ ಅಡ್ಡಲಾಗಿ ಇರುವ ತೊಲೆ) ಮುರಿದು ಹಾಕಿದರು. ಮತ್ತೆ ಕೆಲವರು ಯಜ್ಞಶಾಲೆಯ ಪಶ್ಚಿಮಕ್ಕಿದ್ದ ಪತ್ನೀಶಾಲೆಯನ್ನು ನಾಶಗೊಳಿಸಿದರು. ಕೆಲವರು ಯಜ್ಞಶಾಲೆಯ ಮುಂಭಾಗದ ಸಭಾಮಂಟಪವನ್ನು, ಮುಂದೆ ಉತ್ತರದಿಕ್ಕಿನತ್ತ ಇರುವ ಆಗ್ನೀಧ್ರಶಾಲೆಯನ್ನು ಕಿತ್ತು ಹಾಕಿದರು. ಕೆಲವರು ಯಜಮಾನ ಗೃಹ ಮತ್ತು ಪಾಕಶಾಲೆಯನ್ನು ಕೆಡವಿ ಹಾಳುಮಾಡಿದರು. ॥14॥

(ಶ್ಲೋಕ - 15)

ಮೂಲಮ್

ರುರುಜುರ್ಯಜ್ಞ ಪಾತ್ರಾಣಿ ತಥೈಕೇಗ್ನೀನನಾಶಯನ್ ।
ಕುಂಡೇಷ್ವಮೂತ್ರಯನ್ಕೇಚಿದ್ಬಿಭಿದುರ್ವೇದಿಮೇಖಲಾಃ ॥

ಅನುವಾದ

ಕೆಲವರು ಯಜ್ಞಪಾತ್ರೆಗಳನ್ನು ಒಡೆದು ಹಾಕಿದರು. ಕೆಲವರು ಯಜ್ಞಾಗ್ನಿಗಳನ್ನು ಆರಿಸಿಬಿಟ್ಟರು. ಕೆಲವರು ಯಜ್ಞಕುಂಡದಲ್ಲಿ ಮೂತ್ರವಿಸರ್ಜನೆ ಮಾಡಿದರು. ಮತ್ತೆ ಕೆಲವರು ವೇದಿಕೆಯ ಸೀಮೆಯ ಸೂತ್ರಗಳನ್ನು ಹರಿದು ಹಾಕಿದರು. ॥15॥

(ಶ್ಲೋಕ - 16)

ಮೂಲಮ್

ಅಬಾಧಂತ ಮುನೀನನ್ಯ ಏಕೇ ಪತ್ನೀರತರ್ಜಯನ್ ।
ಅಪರೇ ಜಗೃಹುರ್ದೇವಾನ್ಪ್ರತ್ಯಾಸನ್ನಾನ್ಪಲಾಯಿತಾನ್ ॥

ಅನುವಾದ

ಕೆಲವರು ಮುನಿಗಳನ್ನು ಪೀಡಿಸಿದರೆ, ಮತ್ತೆ ಕೆಲವರು ಹೆಂಗಸರನ್ನು ಗದರಿಸತೊಡಗಿದರು. ಕೆಲವರು ತಮ್ಮ ಬಳಿಯಿಂದ ಓಡುತ್ತಿದ್ದ ದೇವತೆಗಳನ್ನು ಹಿಡಿದುಕೊಂಡರು. ॥16॥

(ಶ್ಲೋಕ - 17)

ಮೂಲಮ್

ಭೃಗುಂ ಬಬಂಧ ಮಣಿಮಾನ್ವೀರಭದ್ರಃ ಪ್ರಜಾಪತಿಮ್ ।
ಚಂಡೀಶಃ ಪೂಷಣಂ ದೇವಂ ಭಗಂ ನಂದೀಶ್ವರೋಗ್ರಹೀತ್ ॥

ಅನುವಾದ

ಮಣಿಮಂತನು ಭೃಗುಋಷಿಯನ್ನು ಕಟ್ಟಿಹಾಕಿದನು. ವೀರಭದ್ರನು ದಕ್ಷಪ್ರಜಾಪತಿಯನ್ನು ಸೆರೆ ಹಿಡಿದನು. ಚಂಡೀಶನು ಪೂಷಾನನ್ನೂ ಮತ್ತು ನಂದೀ ಶ್ವರನು ಭಗದೇವತೆಯನ್ನು ಹಿಡಿದುಕೊಂಡರು. ॥17॥

(ಶ್ಲೋಕ - 18)

ಮೂಲಮ್

ಸರ್ವ ಏವರ್ತ್ವಿಜೋ ದೃಷ್ಟ್ವಾ ಸದಸ್ಯಾಃ ಸದಿವೌಕಸಃ ।
ತೈರರ್ದ್ಯಮಾನಾಃ ಸುಭೃಶಂ ಗ್ರಾವಭಿರ್ನೈಕಧಾದ್ರವನ್ ॥

ಅನುವಾದ

ಭಗವಾನ್ ಶಂಕರನ ಪಾರ್ಷದರ ಈ ಭಯಂಕರ ಲೀಲೆಯನ್ನು ನೋಡಿ ಹಾಗೂ ಅವರ ಕಲ್ಲು-ಕವಣೆಗಳ ಏಟುಗಳನ್ನೂ ತಾಳಲಾರದೆ ಅಲ್ಲಿದ್ದ ಋತ್ವಿಜರೂ, ಸದಸ್ಯರೂ, ದೇವತೆಗಳೂ ಹೀಗೆ ಎಲ್ಲರೂ ದಿಕ್ಕಾಪಾಲಾಗಿ ಓಡಿ ಹೋದರು. ॥18॥

(ಶ್ಲೋಕ - 19)

ಮೂಲಮ್

ಜುಹ್ವತಃ ಸ್ರುವಹಸ್ತಸ್ಯ ಶ್ಮಶ್ರೂಣಿ ಭಗವಾನ್ಭವಃ ।
ಭೃಗೋರ್ಲುಲುಂಚೇ ಸದಸಿ ಯೋಹಸಚ್ಛ್ಮಶ್ರು ದರ್ಶಯನ್ ॥

ಅನುವಾದ

ಭೃಗು ಮಹರ್ಷಿಗಳು ಕೈಯಲ್ಲಿ ಸ್ರುವೆಯನ್ನೆತ್ತಿಕೊಂಡು ಹೋಮ ಮಾಡುತ್ತಿದ್ದರು. ಅವರು ಪ್ರಜಾಪತಿಯರ ಸಭೆಯಲ್ಲಿ ಮೀಸೆಗಳನ್ನು ತಿರುಹುತ್ತಾ ಶಿವನ ಕುರಿತು ಅಪಹಾಸ್ಯ ಮಾಡಿದ್ದರು. ಆದ್ದರಿಂದ ವೀರಭದ್ರನು ಅವರ ಗಡ್ಡ-ಮೀಸೆಗಳನ್ನು ಕಿತ್ತು ಬಿಸಾಡಿದನು. ॥19॥

(ಶ್ಲೋಕ - 20)

ಮೂಲಮ್

ಭಗಸ್ಯ ನೇತ್ರೇ ಭಗವಾನ್ಪಾತಿತಸ್ಯ ರುಷಾ ಭುವಿ ।
ಉಜ್ಜಹಾರ ಸದಃಸ್ಥೋಕ್ಷ್ಣಾ ಯಃ ಶಪಂತಮಸೂಸುಚತ್ ॥

ಅನುವಾದ

ಭಗದೇವತೆಯು ಸಭೆಯಲ್ಲಿ ದಕ್ಷನು ಶಿವನನ್ನು ನಿಂದಿಸುವಾಗ ಕಣ್ಣನ್ನು ಮಿಟುಕಿಸಿ ಪ್ರೇರೇಪಿಸಿದ್ದನು. ಆದ್ದರಿಂದ ವೀರಭದ್ರನು ಅವನನ್ನು ಕೋಪದಿಂದ ಕೆಳಕ್ಕೆ ಕುಕ್ಕಿ ಆತನ ಕಣ್ಣನ್ನು ಕಿತ್ತು ಹಾಕಿದನು. ॥20॥

(ಶ್ಲೋಕ - 21)

ಮೂಲಮ್

ಪೂಷ್ಣಶ್ಚಾಪಾತಯದ್ದಂತಾನ್ಕಾಲಿಂಗಸ್ಯ ಯಥಾ ಬಲಃ ।
ಶಪ್ಯಮಾನೇ ಗರಿಮಣಿ ಯೋಹಸದ್ದರ್ಶಯಂದತಃ ॥

ಅನುವಾದ

ಮತ್ತೆ ಪೂಷನನ್ನು ಹಿಡಿದುಕೊಂಡು ಮುಂದೆ ಬಲರಾಮನು ಅನಿರುದ್ಧನ ವಿವಾಹದಲ್ಲಿ ಕಳಿಂಗ ರಾಜನ ಹಲ್ಲುಗಳನ್ನು ಮುರಿದು ಹಾಕುವಂತೆ ಆತನ ಹಲ್ಲುಗಳನ್ನು ಕಿತ್ತುಹಾಕಿದನು. ಏಕೆಂದರೆ, ದಕ್ಷನು ಮಹಾದೇವನನ್ನು ಬಯ್ಯುತ್ತಿದ್ದಾಗ ಈ ಪೂಷಾದೇವತೆಯು ಹಲ್ಲು ಕಿರಿದು ನಕ್ಕಿದ್ದನು. ॥21॥

(ಶ್ಲೋಕ - 22)

ಮೂಲಮ್

ಆಕ್ರಮ್ಯೋರಸಿ ದಕ್ಷಸ್ಯ ಶಿತಧಾರೇಣ ಹೇತಿನಾ ।
ಛಿಂದನ್ನಪಿ ತದುದ್ಧರ್ತುಂ ನಾಶಕ್ನೋತ್ಯಂಬಕಸ್ತದಾ ॥

ಅನುವಾದ

ಬಳಿಕ ವೀರಭದ್ರನು ದಕ್ಷನ ಎದೆಯ ಮೇಲೆ ಕುಳಿತು ಹರಿತವಾದ ಕತ್ತಿಯಿಂದ ಅವನ ತಲೆಯನ್ನು ಕತ್ತರಿಸ ತೊಡಗಿದನು. ಆದರೆ ಎಷ್ಟು ಕಡಿದರೂ ಆ ತಲೆಯನ್ನು ಕಿತ್ತು ಹಾಕಲು ಸಾಧ್ಯವಾಗಲಿಲ್ಲ. ॥22॥

(ಶ್ಲೋಕ - 23)

ಮೂಲಮ್

ಶಸೈರಸಾನ್ವಿತೈರೇವಮನಿರ್ಭಿನ್ನತ್ವಚಂ ಹರಃ ।
ವಿಸ್ಮಯಂ ಪರಮಾಪನ್ನೋ ದಧ್ಯೌ ಪಶುಪತಿಶ್ಚಿರಮ್ ॥

ಅನುವಾದ

ಯಾವ ರೀತಿಯಿಂದಲೂ ಅಸ್ತ್ರ-ಶಸ್ತ್ರಗಳಿಂದ ದಕ್ಷಪ್ರಜಾಪತಿಯ ಚರ್ಮವು ಕತ್ತರಿಸದೇ ಇರುವಾಗ, ವೀರಭದ್ರನಿಗೆ ತುಂಬಾ ಆಶ್ಚರ್ಯವಾಯಿತು ಮತ್ತು ಏನು ಮಾಡುವುದು ಎಂದು ಬಹಳ ಹೊತ್ತು ಯೋಚನೆ ಮಾಡಿದನು. ॥23॥

(ಶ್ಲೋಕ - 24)

ಮೂಲಮ್

ದೃಷ್ಟ್ವಾ ಸಂಜ್ಞಪನಂ ಯೋಗಂ ಪಶೂನಾಂ ಸ ಪತಿರ್ಮಖೇ ।
ಯಜಮಾನಪಶೋಃ ಕಸ್ಯ ಕಾಯಾತ್ತೇನಾಹರಚ್ಛಿರಃ ॥

ಅನುವಾದ

ಅನಂತರ ಅವನು ಯಜ್ಞದಲ್ಲಿ ಪಶುವನ್ನು ಬಲಿಕೊಡುವಂತೆಯೇ ದಕ್ಷನೆಂಬ ಯಜಮಾನ ಪಶುವಿನ ಕತ್ತನ್ನು ಕತ್ತರಿಸಿ ಬೇರ್ಪಡಿಸಿದನು. ॥24॥

(ಶ್ಲೋಕ - 25)

ಮೂಲಮ್

ಸಾಧುವಾದಸ್ತದಾ ತೇಷಾಂ ಕರ್ಮ ತತ್ತಸ್ಯ ಶಂಸತಾಮ್ ।
ಭೂತಪ್ರೇತಪಿಶಾಚಾನಾಮನ್ಯೇಷಾಂ ತದ್ವಿಪರ್ಯಯಃ ॥

ಅನುವಾದ

ಹೀಗೆ ದಕ್ಷನನ್ನು ಬಲಿಕೊಟ್ಟು ವೀರಭದ್ರನು ಮಾಡಿದ ಆ ಕರ್ಮವನ್ನು ಭೂತ-ಪ್ರೇತ-ಪಿಶಾಚಾದಿಗಳು ಭಲೇ! ಭಲೇ! ಎಂದು ಕೊಂಡಾಡಿದರು. ದಕ್ಷನ ಕಡೆಯವರಲ್ಲಿ ಹಾಹಾಕಾರವೆದ್ದಿತು. ॥25॥

(ಶ್ಲೋಕ - 26)

ಮೂಲಮ್

ಜುಹಾವೈತಚ್ಛಿರಸ್ತಸ್ಮಿನ್ದಕ್ಷಿಣಾಗ್ನಾವಮರ್ಷಿತಃ ।
ತದ್ದೇವಯಜನಂ ದಗ್ಧ್ವಾ ಪ್ರಾತಿಷ್ಠದ್ ಗುಹ್ಯಕಾಲಯಮ್ ॥

ಅನುವಾದ

ವೀರಭದ್ರನು ಅತ್ಯಂತ ಕ್ರೋಧಾವೇಶದಿಂದ ಕತ್ತರಿಸಿದ ದಕ್ಷನ ತಲೆಯನ್ನು ದಕ್ಷಿಣಾಗ್ನಿಯಲ್ಲಿ ಎಸೆದು ಬಿಟ್ಟನು. ಮತ್ತೆ ಯಜ್ಞಶಾಲೆಗೆ ಬೆಂಕಿಹಚ್ಚಿ, ಯಜ್ಞವನ್ನು ಧ್ವಂಸಗೊಳಿಸಿ, ಕೈಲಾಸಕ್ಕೆ ಹಿಂತಿರುಗಿದನು. ॥26॥

ಅನುವಾದ (ಸಮಾಪ್ತಿಃ)

ಐದನೆಯ ಅಧ್ಯಾಯವು ಮುಗಿಯಿತು. ॥5॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಚತುರ್ಥಸ್ಕಂಧೇ ದಕ್ಷಯಜ್ಞ ವಿಧ್ವಂಸೋ ನಾಮ ಪಂಚಮೋಽಧ್ಯಾಯಃ ॥5॥