೦೩

[ಮೂರನೆಯ ಅಧ್ಯಾಯ]

ಭಾಗಸೂಚನಾ

ಸತಿದೇವಿಯು ತಂದೆಯು ಮಾಡುತ್ತಿದ್ದ ಯಜ್ಞೋತ್ಸವಕ್ಕೆ ಹೋಗಬೇಕೆಂದು ಹಠಮಾಡಿದುದು

(ಶ್ಲೋಕ - 1)

ಮೂಲಮ್ (ವಾಚನಮ್)

ಮೈತ್ರೇಯ ಉವಾಚ

ಮೂಲಮ್

ಸದಾ ವಿದ್ವಿಷತೋರೇವಂ ಕಾಲೋ ವೈ ಧ್ರಿಯಮಾಣಯೋಃ ।
ಜಾಮಾತುಃ ಶ್ವಶುರಸ್ಯಾಪಿ ಸುಮಹಾನತಿಚಕ್ರಮೇ ॥

ಅನುವಾದ

ಶ್ರೀಮೈತ್ರೇಯರು ಹೇಳುತ್ತಾರೆ — ಎಲೈ ವಿದುರನೇ! ಹೀಗೆ ಮಾವ-ಅಳಿಯಂದಿರು ಪರಸ್ಪರ ವಿರೋಧವನ್ನು ಕಟ್ಟಿಕೊಂಡಿರುವಂತೆ ಬಹಳ ಕಾಲವು ಸಂದಿತು. ॥1॥

(ಶ್ಲೋಕ - 2)

ಮೂಲಮ್

ಯದಾಭಿಷಿಕ್ಷ್ತೋ ದಕ್ಷಸ್ತು ಬ್ರಹ್ಮಣಾ ಪರಮೇಷ್ಠಿನಾ ।
ಪ್ರಜಾಪತೀನಾಂ ಸರ್ವೇಷಾಮಾಧಿಪತ್ಯೇ ಸ್ಮಯೋಭವತ್ ॥

ಅನುವಾದ

ಇದೇ ಸಮಯದಲ್ಲಿ ಬ್ರಹ್ಮದೇವರು ದಕ್ಷನನ್ನು ಸಮಸ್ತ ಪ್ರಜಾಪತಿಗಳ ಅಧಿಪತಿಯಾಗಿಸಿದನು. ಇದರಿಂದ ಅವನ ಗರ್ವವು ಇನ್ನೂ ಹೆಚ್ಚಿತು. ॥2॥

(ಶ್ಲೋಕ - 3)

ಮೂಲಮ್

ಇಷ್ಟ್ವಾ ಸ ವಾಜಪೇಯೇನ ಬ್ರಹ್ಮಿಷ್ಠಾನಭಿಭೂಯ ಚ ।
ಬೃಹಸ್ಪತಿಸವಂ ನಾಮ ಸಮಾರೇಭೇ ಕ್ರತೂತ್ತಮಮ್ ॥

ಅನುವಾದ

ಅವನು ಭಗವಾನ್ ಶಂಕರನೇ ಮುಂತಾದ ಬ್ರಹ್ಮನಿಷ್ಠರಿಗೆ ಯಜ್ಞಭಾಗವನ್ನು ಕೊಡದೆ, ಅವರನ್ನು ತಿರಸ್ಕರಿಸುತ್ತಾ ಮೊದಲಿಗೆ ‘ವಾಜಪೇಯ’ ಯಜ್ಞವನ್ನು ಮಾಡಿದನು. ಮತ್ತೆ ‘ಬೃಹಸ್ಪತಿಸವ’ ಎಂಬ ಮಹಾಯಜ್ಞವನ್ನು ಪ್ರಾರಂಭಿಸಿದನು. ॥3॥

(ಶ್ಲೋಕ - 4)

ಮೂಲಮ್

ತಸ್ಮಿನ್ ಬ್ರಹ್ಮರ್ಷಯಃ ಸರ್ವೇ ದೇವರ್ಷಿಪಿತೃದೇವತಾಃ ।
ಆಸನ್ ಕೃತಸ್ವಸ್ತ್ಯಯನಾಸ್ತತ್ಪತ್ನ್ಯಶ್ಚ ಸಭರ್ತೃಕಾಃ ॥

ಅನುವಾದ

ಆ ಯಜ್ಞೋತ್ಸವದಲ್ಲಿ ಎಲ್ಲ ಬ್ರಹ್ಮರ್ಷಿಗಳೂ, ದೇವರ್ಷಿಗಳೂ, ಪಿತೃಗಳೂ, ದೇವತೆಗಳೂ ಮುಂತಾದವರು ತಮ್ಮ-ತಮ್ಮ ಪತ್ನಿಯರೊಂದಿಗೆ ದಯಮಾಡಿಸಿದರು. ಅವರೆಲ್ಲರೂ ಸೇರಿ ಅಲ್ಲಿ ಮಂಗಳಕಾರ್ಯಗಳನ್ನು ಸಂಪನ್ನಗೊಳಿಸಿದರು. ದಕ್ಷಪ್ರಜಾಪತಿಯು ಅವರೆಲ್ಲರನ್ನು ಹಾರ್ದಿಕವಾಗಿ ಸ್ವಾಗತಿಸಿದನು. ॥4॥

(ಶ್ಲೋಕ - 5)

ಮೂಲಮ್

ತದುಪಶ್ರುತ್ಯ ನಭಸಿ ಖೇಚರಾಣಾಂ ಪ್ರಜಲ್ಪತಾಮ್ ।
ಸತೀ ದಾಕ್ಷಾಯಣೀ ದೇವೀ ಪಿತುರ್ಯಜ್ಞಮಹೋತ್ಸವಮ್ ॥

ಅನುವಾದ

ಅದೇ ಸಮಯದಲ್ಲಿ ಆಕಾಶಮಾರ್ಗವಾಗಿ ಹೋಗುತ್ತಿದ್ದ ದೇವತೆಗಳು ಆ ಯಜ್ಞದ ವಿಚಾರವಾಗಿಯೇ ಪರಸ್ಪರ ಚರ್ಚಿಸುತ್ತಿದ್ದರು. ಅವರ ಬಾಯಿಂದ ದಕ್ಷಕುಮಾರಿ ಸತೀದೇವಿಯು ತಂದೆಯ ಮನೆಯಲ್ಲಿ ನಡೆಯುತ್ತಿದ್ದ ಯಜ್ಞದ ಸಮಾಚಾರವನ್ನು ಕೇಳಿ ತಿಳಿದಳು. ॥5॥

(ಶ್ಲೋಕ - 6)

ಮೂಲಮ್

ವ್ರಜಂತೀಃ ಸರ್ವತೋ ದಿಗ್ಭ್ಯ ಉಪದೇವವರಸಿಯಃ ।
ವಿಮಾನಯಾನಾಃ ಸಪ್ರೇಷ್ಠಾ ನಿಷ್ಕಕಂಠೀಃ ಸುವಾಸಸಃ ॥

(ಶ್ಲೋಕ - 7)

ಮೂಲಮ್

ದೃಷ್ಟ್ವಾ ಸ್ವನಿಲಯಾಭ್ಯಾಶೇ ಲೋಲಾಕ್ಷೀರ್ಮೃಷ್ಟಕುಂಡಲಾಃ ।
ಪತಿಂ ಭೂತಪತಿಂ ದೈವವೌತ್ಸುಕ್ಯಾದಭ್ಯಭಾಷತ ॥

ಅನುವಾದ

ತಮ್ಮ ವಾಸಸ್ಥಾನವಾದ ಕೈಲಾಸದ ದಾರಿಯಾಗಿ ಎಲ್ಲ ಕಡೆಗಳಿಂದಲೂ ಚಂಚಲವಾದ ಕಣ್ಣುಗಳುಳ್ಳ ಗಂಧರ್ವ ಸ್ತ್ರೀಯರೂ, ಯಕ್ಷರ ಸ್ತ್ರೀಯರೂ ಥಳ-ಥಳಿಸುತ್ತಿರುವ ಕುಂಡಲಗಳನ್ನೂ, ಹಾರಗಳನ್ನೂ ಧರಿಸಿ ಚೆನ್ನಾಗಿ ಅಲಂಕರಿಸಿಕೊಂಡು ತಮ್ಮ-ತಮ್ಮ ಪತಿಗಳೊಡನೆ ವಿಮಾನಗಳಲ್ಲಿ ಕುಳಿತು ಆ ಯಜ್ಞೋತ್ಸವಕ್ಕೆ ಹೋಗುತ್ತಿರುವುದನ್ನು ಸತಿಯು ನೋಡಿದಳು. ಅದರಿಂದ ಆಕೆಗೂ ಯಜ್ಞಕ್ಕೆ ಹೋಗಬೇಕೆಂಬ ಕುತೂಹಲವುಂಟಾಗಿ, ಆಕೆಯು ತನ್ನ ಪತಿದೇವನಾದ ಭಗವಾನ್ ಭೂತನಾಥನಲ್ಲಿ ಪ್ರಾರ್ಥಿಸಿಕೊಂಡಳು. ॥6-7॥

(ಶ್ಲೋಕ - 8)

ಮೂಲಮ್ (ವಾಚನಮ್)

ಸತ್ಯುವಾಚ

ಮೂಲಮ್

ಪ್ರಜಾಪತೇಸ್ತೇ ಶ್ವಶುರಸ್ಯ ಸಾಂಪ್ರತಂ
ನಿರ್ಯಾಪಿತೋ ಯಜ್ಞ ಮಹೋತ್ಸವಃ ಕಿಲ ।
ವಯಂ ಚ ತತ್ರಾಭಿಸರಾಮ ವಾಮ ತೇ
ಯದ್ಯರ್ಥಿತಾಮೀ ವಿಬುಧಾ ವ್ರಜಂತಿ ಹಿ ॥

ಅನುವಾದ

ಸತೀದೇವಿಯು ಹೇಳಿದಳು — ಸ್ವಾಮಿ! ವಾಮ ದೇವರೇ! ಈಗ ನಿಮ್ಮ ಮಾವನಾದ ದಕ್ಷಪ್ರಜಾಪತಿಯ ಮನೆಯಲ್ಲಿ ಭಾರೀ ದೊಡ್ಡ ಯಜ್ಞೋತ್ಸವವು ನಡೆಯುತ್ತಿದೆ ಎಂದು ತಿಳಿಯಿತು. ನೋಡಿ, ಈ ದೇವತೆಗಳೆಲ್ಲರೂ ಅಲ್ಲಿಗೇ ಹೋಗುತ್ತಿದ್ದಾರೆ. ನೀವು ಇಷ್ಟಪಡುವುದಾದರೆ ನಾವೂ ಅದಕ್ಕೆ ಹೋಗೋಣ. ॥8॥

(ಶ್ಲೋಕ - 9)

ಮೂಲಮ್

ತಸ್ಮಿನ್ಭಗಿನ್ಯೋ ಮಮ ಭರ್ತೃಭಿಃ ಸ್ವ ಕೈ-
ರ್ಧ್ರುವಂ ಗಮಿಷ್ಯಂತಿ ಸುಹೃದ್ದಿದೃಕ್ಷವಃ ।
ಅಹಂ ಚ ತಸ್ಮಿನ್ಭವತಾಭಿಕಾಮಯೇ
ಸಹೋಪನೀತಂ ಪರಿಬರ್ಹಮರ್ಹಿತುಮ್ ॥

ಅನುವಾದ

ಆ ಸಮಯದಲ್ಲಿ ತಮ್ಮ ಆತ್ಮೀಯರನ್ನು ಭೆಟ್ಟಿಯಾಗಲು ನನ್ನ ಸೋದರಿಯರೂ ತಮ್ಮ-ತಮ್ಮ ಪತಿಗಳೊಡನೆ ಅಲ್ಲಿಗೆ ಅವಶ್ಯವಾಗಿ ಬರುವರು. ಅಲ್ಲಿಗೆ ನಿಮ್ಮೊಡನೆ ಹೋಗಿ ನನ್ನ ತಂದೆ-ತಾಯಿಗಳು ಕೊಡುವ ಒಡವೆ, ಉಡಿಗೆಗಳ ಉಡುಗರೆಯನ್ನು ಸ್ವೀಕರಿಸ ಬೇಕೆಂದು ನನಗೂ ಅನಿಸುತ್ತದೆ. ॥9॥

(ಶ್ಲೋಕ - 10)

ಮೂಲಮ್

ತತ್ರ ಸ್ವಸೃರ್ಮೇ ನನು ಭರ್ತೃಸಮ್ಮಿತಾ
ಮಾತೃಷ್ವಸೃಃ ಕ್ಲಿನ್ನಧಿಯಂ ಚ ಮಾತರಮ್ ।
ದ್ರಕ್ಷ್ಯೇ ಚಿರೋತ್ಕಂಠಮನಾ ಮಹರ್ಷಿಭಿ-
ರುನ್ನೀಯಮಾನಂ ಚ ಮೃಡಾಧ್ವರಧ್ವಜಮ್ ॥

ಅನುವಾದ

ಅಲ್ಲಿ ತಮ್ಮ ಪತಿಗಳಿಂದ ಸಮ್ಮಾನಿತರಾಗುವ ನನ್ನ ಸೋದರಿಯರು, ಚಿಕ್ಕಮ್ಮ-ದೊಡ್ಡಮ್ಮಂದಿರು, ಸ್ನೇಹದಿಂದ ನೆನೆದ ಮನಸ್ಸುಳ್ಳ ನನ್ನ ತಾಯಿ ಇವರೆಲ್ಲರನ್ನು ನೋಡಬೇಕೆಂದು ನನ್ನ ಮನಸ್ಸು ಬಹಳ ದಿನಗಳಿಂದ ಹಂಬಲಿಸುತ್ತಿದೆ. ಎಲೈ ಸುಖಕರನೇ! ಇದಲ್ಲದೆ ಅಲ್ಲಿಗೆ ಹೋದರೆ ಮಹರ್ಷಿಗಳು ರಚಿಸಿರುವ ಶ್ರೇಷ್ಠವಾದ ಯಜ್ಞವನ್ನೂ ಸಂದರ್ಶಿಸಬಹುದು.॥10॥

(ಶ್ಲೋಕ - 11)

ಮೂಲಮ್

ತ್ವಯ್ಯೇತದಾಶ್ಚರ್ಯಮಜಾತ್ಮಮಾಯಯಾ
ವಿನಿರ್ಮಿತಂ ಭಾತಿ ಗುಣತ್ರಯಾತ್ಮಕಮ್ ।
ತಥಾಪ್ಯಹಂ ಯೋಷಿದತತ್ತ್ವವಿಚ್ಚ ತೇ
ದೀನಾ ದಿದೃಕ್ಷೇ ಭವ ಮೇ ಭವಕ್ಷಿತಿಮ್ ॥

ಅನುವಾದ

ಜನ್ಮರಹಿತರಾದ ಪ್ರಭುವೇ! ನೀವಾದರೋ ಜಗತ್ತಿನ ಉತ್ಪತ್ತಿಗೆ ಕಾರಣರಾದ ದೇವರು. ನಿಮ್ಮ ಮಾಯೆಯಿಂದ ರಚಿತವಾಗಿರುವ ಈ ತ್ರಿಗುಣಾತ್ಮಕವಾದ ಆಶ್ಚರ್ಯಮಯ ಈ ಜಗತ್ತು ನಿಮ್ಮಲ್ಲಿಯೇ ಪ್ರಕಾಶಿಸುತ್ತಿದೆ. ಆದರೆ ನಾನು ನಿಮ್ಮ ತತ್ತ್ವವನ್ನರಿಯದ ಹೆಣ್ಣು ಹೆಂಗಸು. ದೀನಳಾಗಿರುವ ನಾನು ಈಗ ನನ್ನ ಜನ್ಮಭೂಮಿಯನ್ನು ನೋಡಲು ತುಂಬಾ ಉತ್ಸುಕಳಾಗಿದ್ದೇನೆ. ॥11॥

(ಶ್ಲೋಕ - 12)

ಮೂಲಮ್

ಪಶ್ಯ ಪ್ರಯಾಂತೀರಭವಾನ್ಯಯೋಷಿತೋ-
ಪ್ಯಲಂಕೃತಾಃ ಕಾಂತಸಖಾ ವರೂಥಶಃ ।
ಯಾಸಾಂ ವ್ರಜದ್ಭಿಃ ಶಿತಿಕಂಠ ಮಂಡಿತಂ
ನಭೋ ವಿಮಾನೈಃ ಕಲಹಂಸಪಾಂಡುಭಿಃ ॥

ಅನುವಾದ

ಜನ್ಮಾದಿರಹಿತ ನೀಲಕಂಠಸ್ವಾಮಿಯೇ! ಅಲ್ಲಿ ನೋಡಿ! ಆ ಹೆಂಗಸರಲ್ಲಿ ಅನೇಕರಿಗೆ ದಕ್ಷನೊಡನೆ ಯಾವ ಸಂಬಂಧವೂ ಇಲ್ಲ. ಆದರೂ ಅವರು ತಮ್ಮ-ತಮ್ಮ ಪತಿಗಳೊಡನೆ ಗುಂಪು-ಗುಂಪಾಗಿ ಆ ಯಜ್ಞಕ್ಕೆ ಹೋಗುತ್ತಿದ್ದಾರೆ. ಅಲ್ಲಿಗೆ ಹೋಗುತ್ತಿರುವ ದೇವಾಂಗನೆಯರ ರಾಜಹಂಸಸದೃಶವಾದ ಬಿಳಿಯ ವಿಮಾನಗಳಿಂದ ಆಕಾಶಮಂಡಲವು ಹೇಗೆ ಶೋಭಾಯಮಾನವಾಗಿದೆ! ॥12॥

(ಶ್ಲೋಕ - 13)

ಮೂಲಮ್

ಕಥಂ ಸುತಾಯಾಃ ಪಿತೃಗೇಹಕೌತುಕಂ
ನಿಶಮ್ಯ ದೇಹಃ ಸುರವರ್ಯ ನೇಂಗತೇ ।
ಅನಾಹುತಾ ಅಪ್ಯಭಿಯಂತಿ ಸೌಹೃದಂ
ಭರ್ತುರ್ಗುರೋರ್ದೇಹಕೃತಶ್ಚ ಕೇತನಮ್ ॥

ಅನುವಾದ

ಎಲೈ ಸುರಶ್ರೇಷ್ಠರೇ! ಇಂತಹ ಸ್ಥಿತಿಯಲ್ಲಿ ತಂದೆಯ ಮನೆಯಲ್ಲಿ ಉತ್ಸವ ನಡೆಯುವ ಸಮಾಚಾರವನ್ನು ಕೇಳಿ ಅವನ ಮಗಳು ಅಲ್ಲಿಗೆ ಹೋಗಿ ಯಜ್ಞದಲ್ಲಿ ಭಾಗವಹಿಸ ಬೇಕೆಂದು ಹಾತೊರೆಯದೇ ಇರುವುದೇ? ಪತಿ, ಗುರುಗಳು, ತಂದೆ-ತಾಯಿಗಳು, ಗೆಳೆಯರು ಇವರ ಮನೆಗೆ ಕರೆಯದೆಯೂ ಹೋಗಬಹುದಲ್ಲ! ॥13॥

(ಶ್ಲೋಕ - 14)

ಮೂಲಮ್

ತನ್ಮೇ ಪ್ರಸೀದೇದಮಮರ್ತ್ಯವಾಂಛಿತಂ
ಕರ್ತುಂ ಭವಾನ್ಕಾರುಣಿಕೋ ಬತಾರ್ಹತಿ ।
ತ್ವಯಾತ್ಮನೋರ್ಧೇಹಮದಭ್ರಚಕ್ಷುಷಾ
ನಿರೂಪಿತಾ ಮಾನುಗೃಹಾಣ ಯಾಚಿತಃ ॥

ಅನುವಾದ

ಆದುದರಿಂದ ಪತಿದೇವಾ! ನನ್ನ ಮೇಲೆ ಪ್ರಸನ್ನರಾಗಿ ನನ್ನ ಈ ಬಯಕೆಯನ್ನು ಅವಶ್ಯ ವಾಗಿ ಈಡೇರಿಸಬೇಕು. ನೀವು ತುಂಬಾ ಕರುಣಾಮಯರು. ಅದರಿಂದಲೇ ಪರಮಜ್ಞಾನಿಗಳಿದ್ದರೂ ನಿಮ್ಮ ದೇಹದ ಅರ್ಧಭಾಗದಲ್ಲಿ ನನಗೆ ಸ್ಥಾನವನ್ನು ಕರುಣಿಸಿದ್ದೀರಿ. ನನ್ನ ಈ ಬೇಡಿಕೆಯನ್ನು ಗಮನಿಸಿ ನನ್ನನ್ನು ಅನುಗ್ರಹಿಸಿರಿ. ॥14॥

(ಶ್ಲೋಕ - 15)

ಮೂಲಮ್ (ವಾಚನಮ್)

ಋಷಿರುವಾಚ

ಮೂಲಮ್

ಏವಂ ಗಿರಿತ್ರಃ ಪ್ರಿಯಯಾಭಿಭಾಷಿತಃ
ಪ್ರತ್ಯಭ್ಯಧತ್ತ ಪ್ರಹಸನ್ಸುಹೃತ್ಪ್ರಿಯಃ ।
ಸಂಸ್ಮಾರಿತೋ ಮರ್ಮಭಿದಃ ಕುವಾಗಿಷೂನ್
ಯಾನಾಹ ಕೋ ವಿಶ್ವಸೃಜಾಂ ಸಮಕ್ಷತಃ ॥

ಅನುವಾದ

ಶ್ರೀಮೈತ್ರೇಯರು ಹೇಳುತ್ತಾರೆ — ಪ್ರಿಯ ಸತೀದೇವಿಯು ಹೀಗೆ ಪ್ರಾರ್ಥಿಸಿದಾಗ, ಸ್ನೇಹಿತರಿಗೂ, ಆತ್ಮೀಯರಿಗೂ ಪ್ರಿಯವನ್ನು ಉಂಟುಮಾಡುವ ಭಗವಾನ್ ಶಂಕರನಿಗೆ ದಕ್ಷ ಪ್ರಜಾಪತಿಯು ಸಮಸ್ತ ಪ್ರಜಾಪತಿಗಳ ಎದುರಿಗೆ ಹಿಂದೆ ಆಡಿದ ಆ ಮರ್ಮ ಭೇದಕವಾದ ದುರ್ವಚನರೂಪವಾದ ವಾಗ್ಬಾಣಗಳು ನೆನಪಾಗಿ, ನಗುತ್ತಾ ಹೀಗೆಂದನು ॥15॥

(ಶ್ಲೋಕ - 16)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ತ್ವಯೋದಿತಂ ಶೋಭನಮೇವ ಶೋಭನೇ
ಅನಾಹುತಾ ಅಪ್ಯಭಿಯಂತಿ ಬಂಧುಷು ।
ತೇ ಯದ್ಯನುತ್ಪಾದಿತದೋಷದೃಷ್ಟಯೋ
ಬಲೀಯಸಾನಾತ್ಮ್ಯಮದೇನ ಮನ್ಯುನಾ ॥

ಅನುವಾದ

ಶ್ರೀಭಗವಾನ್ ಶಂಕರನು ಹೇಳಿದನು — ಎಲೈ ಸುಂದರಿಯೇ! ‘ಬಂಧುಗಳ ಮನೆಗೆ ಆಹ್ವಾನವಿಲ್ಲದೆಯೂ ಹೋಗಬಹುದು’ ಎಂದು ನೀನು ಹೇಳಿದ ಮಾತೇನೋ ಸಮೀಚೀನವಾಗಿದೆ. ಆದರೆ ಆ ಬಂಧುಗಳ ದೃಷ್ಟಿಯು ಅತಿಪ್ರಬಲವಾದ ದೇಹಾಭಿಮಾನದಿಂದ ಉಂಟಾದ ಮದ ಮತ್ತು ಕ್ರೋಧಗಳಿಂದ ದ್ವೇಷವೆಂಬ ದೋಷದಿಂದ ಕೂಡಿರದಿದ್ದರೆ ಮಾತ್ರ ಹಾಗೆ ಮಾಡಬೇಕು. ॥16॥

(ಶ್ಲೋಕ - 17)

ಮೂಲಮ್

ವಿದ್ಯಾ ತಪೋವಿತ್ತವಪುರ್ವಯಃಕುಲೈಃ
ಸತಾಂ ಗುಣೈಃ ಷಡ್ಭಿರಸತ್ತಮೇತರೈಃ ।
ಸ್ಮೃತೌ ಹತಾಯಾಂ ಭೃತಮಾನದುರ್ದೃಶಃ
ಸ್ತಬ್ಧಾ ನ ಪಶ್ಯಂತಿ ಹಿ ಧಾಮ ಭೂಯಸಾಮ್ ॥

ಅನುವಾದ

ವಿದ್ಯೆ, ತಪಸ್ಸು, ಸಂಪತ್ತು, ಸುದೃಢಶರೀರ, ಯೌವನದ ವಯಸ್ಸು, ಉಚ್ಚವಾದ ಕುಲ ಇವು ಆರು ಸತ್ಪುರುಷರಲ್ಲಿ ಗುಣಗಳಾಗಿ ಶೋಭಿಸುವುವು. ಆದರೆ ನೀಚನಾದ ಪುರುಷ ನಲ್ಲಿ ಅವೇ ಅವಗುಣಗಳಾಗಿ ಬಿಡುವುವು. ಏಕೆಂದರೆ, ಅದರಿಂದ ಅವನ ಗರ್ವವು ಹೆಚ್ಚುವುದು. ದೃಷ್ಟಿಯು ದೋಷಯುಕ್ತವಾಗುವುದು. ವಿವೇಕಶಕ್ತಿಯು ನಾಶವಾಗುವುದು. ಆದ್ದರಿಂದ ಅವರು ಮಹಾಪುರುಷರ ಪ್ರಭಾವವನ್ನು ನೋಡಲಾರರು. ॥17॥

(ಶ್ಲೋಕ - 18)

ಮೂಲಮ್

ನೈತಾದೃಶಾನಾಂ ಸ್ವಜನವ್ಯಪೇಕ್ಷಯಾ
ಗೃಹಾನ್ಪ್ರತೀಯಾದನವಸ್ಥಿತಾತ್ಮನಾಮ್ ।
ಯೇಭ್ಯಾಗತಾನ್ವಕ್ರಧಿಯಾಭಿಚಕ್ಷತೇ
ಆರೋಪಿತಭ್ರೂಭಿರಮರ್ಷಣಾಕ್ಷಿಭಿಃ ॥

ಅನುವಾದ

ಇದರಿಂದಲೇ ತಮ್ಮ ಬಳಿಗೆ ಬಂದ ಮನುಷ್ಯನನ್ನು ಕುಟಿಲಬುದ್ಧಿಯಿಂದ ಹುಬ್ಬುಗಂಟು ಹಾಕಿಕೊಂಡು ಸಿಟ್ಟುತುಂಬಿದ ದೃಷ್ಟಿಯಿಂದ ನೋಡು ವಂತಹ ಅವ್ಯವಸ್ಥಿತಚಿತ್ತರಾದ ಜನರ ಮನೆಗೆ ‘ಇವರು ಎಷ್ಟಾದರೂ ನಮ್ಮ ಬಂಧುಗಳಲ್ಲವೇ!’ ಎಂದು ತಿಳಿದು ಎಂದಿಗೂ ಹೋಗಬಾರದು. ॥18॥

(ಶ್ಲೋಕ - 19)

ಮೂಲಮ್

ತಥಾರಿಭಿರ್ನ ವ್ಯಥತೇ ಶಿಲೀಮುಖೈಃ
ಶೇತೇರ್ದಿತಾಂಗೋ ಹೃದಯೇನ ದೂಯತಾ ।
ಸ್ವಾನಾಂ ಯಥಾ ವಕ್ರಧಿಯಾಂ ದುರುಕ್ತಿಭಿ-
ರ್ದಿವಾನಿಶಂ ತಪ್ಯತಿ ಮರ್ಮತಾಡಿತಃ ॥

ಅನುವಾದ

ದೇವೀ! ಕುಟಿಲ ಬುದ್ಧಿಯುಳ್ಳ ಬಂಧುಗಳ ಕುಟಿಲವಾದ ಚುಚ್ಚುಮಾತುಗಳಿಂದ ಉಂಟಾಗುವಷ್ಟು ನೋವು ಶತ್ರುಗಳ ಬಾಣಗಳು ಚುಚ್ಚಿದರೂ ಆಗುವುದಿಲ್ಲ. ಬಾಣಗಳು ಚುಚ್ಚಿದ ನೋವನ್ನಾದರೂ ಸಹಿಸಿಕೊಂಡು ನಿದ್ದೆ ಮಾಡಬಹುದು. ಆದರೆ ಕೆಟ್ಟಮಾತುಗಳು ಮರ್ಮಸ್ಥಾನಗಳನ್ನು ಭೇದಿಸಿದರೆ ಹಗಲೂ-ರಾತ್ರಿ ಮಾನಸಿಕ ಪೀಡೆಯಿಂದ ನರಳುತ್ತಿರ ಬೇಕಾಗುವುದು. ॥19॥

(ಶ್ಲೋಕ - 20)

ಮೂಲಮ್

ವ್ಯಕ್ತಂ ತ್ವಮುತ್ಕೃಷ್ಟಗತೇಃ ಪ್ರಜಾಪತೇಃ
ಪ್ರಿಯಾತ್ಮಜಾನಾಮಸಿ ಸುಭ್ರು ಸಮ್ಮತಾ ।
ಅಥಾಪಿ ಮಾನಂ ನ ಪಿತುಃ ಪ್ರಪತ್ಸ್ಯಸೇ
ಮದಾಶ್ರಯಾತ್ಕಃ ಪರಿತಪ್ಯತೇ ಯತಃ ॥

ಅನುವಾದ

ಸುಂದರೀ! ಪರಮೋನ್ನತಿಯನ್ನೂ ಪಡೆದಿರುವ ಆ ದಕ್ಷಪ್ರಜಾಪತಿಗೆ ಆತನ ಪುತ್ರಿಯರಲ್ಲೇ ನೀನು ಅತ್ಯಂತ ಪ್ರೀತಿಪಾತ್ರಳಾಗಿರುವೆ ಎಂಬುದನ್ನು ನಾನು ಬಲ್ಲೆನು. ಆದರೂ ನೀನು ನನ್ನನ್ನು ಆಶ್ರಯಿಸಿರುವುದರಿಂದ ನಿನಗೆ ತಂದೆಯ ಮನ್ನಣೆ ಸಿಗಲಾರದು. ಏಕೆಂದರೆ, ಆತನಿಗೆ ನನ್ನಲ್ಲಿ ಮಿತಿಮೀರಿದ ಕಿಚ್ಚಿದೆ. ॥20॥

(ಶ್ಲೋಕ - 21)

ಮೂಲಮ್

ಪಾಪಚ್ಯಮಾನೇನ ಹೃದಾತುರೇಂದ್ರಿಯಃ
ಸಮೃದ್ಧಿಭಿಃ ಪೂರುಷಬುದ್ಧಿಸಾಕ್ಷಿಣಾಮ್ ।
ಅಕಲ್ಪ ಏಷಾಮಧಿರೋಢುಮಂಜಸಾ
ಪದಂ ಪರಂ ದ್ವೇಷ್ಟಿ ಯಥಾಸುರಾ ಹರಿಮ್ ॥

ಅನುವಾದ

ಅಹಂಕಾರಾದಿ ದೋಷ ರಹಿತರಾಗಿ ಪ್ರಕೃತಿ-ಪುರುಷಾದಿ ತತ್ತ್ವಗಳ ಯಥಾರ್ಥ ಜ್ಞಾನವನ್ನು ತಿಳಿದಿರುವ ಸತ್ಪುರುಷರ ಸಮೃದ್ಧತೆಯನ್ನು ಕಂಡು ಕರುಬುತ್ತಾ ಮನಸ್ಸು ಮತ್ತು ಇಂದ್ರಿಯಗಳಲ್ಲಿ ಸಂಕಟ ಪಡುವ ಕುಪುರುಷನಿಗೆ ಆ ಸತ್ಪುರುಷರ ಪದವಿಯಂತೂ ಸಿಗುವುದಿಲ್ಲ. ಆದರೆ ದೈತ್ಯಗಣಗಳು ಶ್ರೀಹರಿಯ ಮೇಲೆ ದ್ವೇಷವನ್ನು ಕಾರುವಂತೆ ಅವನು ಆ ಸತ್ಪುರುಷರ ಮೇಲೆ ದ್ವೇಷವನ್ನು ಕಾರುತ್ತಾ ಕೊರಗುತ್ತಿರುತ್ತಾನೆ, ಅಷ್ಟೆ! ॥21॥

(ಶ್ಲೋಕ - 22)

ಮೂಲಮ್

ಪ್ರತ್ಯುದ್ಗಮಪ್ರಶ್ರಯಣಾಭಿವಾದನಂ
ವಿಧೀಯತೇ ಸಾಧು ಮಿಥಃ ಸುಮಧ್ಯಮೇ ।
ಪ್ರಾಜ್ಞೈಃ ಪರಸ್ಮೈ ಪುರುಷಾಯ ಚೇತಸಾ
ಗುಹಾಶಯಾಯೈವ ನ ದೇಹಮಾನಿನೇ ॥

ಅನುವಾದ

ಸುಂದರಾಂಗಿಯೇ! ನೀವು ಪ್ರಜಾಪತಿಗಳ ಸಭೆಯಲ್ಲಿ ನಮ್ಮ ತಂದೆಯನ್ನು ಏಕೆ ಆದರಿಸಲಿಲ್ಲ? ಎಂದು ನೀನು ನನ್ನನ್ನು ಕೇಳಬಹುದು. ಲೋಕವ್ಯವಹಾರದಲ್ಲಿ ಪರಸ್ಪರವಾಗಿ ಮುಂದೆ ಹೋಗಿ ವಿನಯ ತೋರುವುದು, ನಮಸ್ಕಾರ ಮಾಡುವುದು ಮುಂತಾದ ಕ್ರಿಯೆಗಳಿಂದ ಗೌರವವನ್ನು ಸೂಚಿಸುವರಲ್ಲವೆ? ತತ್ತ್ವಜ್ಞಾನಿಗಳು ಅದನ್ನೇ ಅತ್ಯುತ್ತಮ ರೀತಿಯಲ್ಲಿ ಮಾಡುತ್ತಾರೆ. ಅವರು ಆ ನಮಸ್ಕಾರಾದಿಗಳನ್ನು ಅಂತರ್ಯಾಮಿ ರೂಪದಲ್ಲಿ ಹೃದಯಗುಹೆಯಲ್ಲಿರುವ ಶ್ರೀವಾಸುದೇವನಿಗೇ ಮನಸ್ಸಿನಲ್ಲಿ ಸಮರ್ಪಿಸುತ್ತಾರೆ; ದೇಹಾಭಿಮಾನಿಯಾದ ಪುರುಷನಿಗೆ ಸಲ್ಲಿಸುವುದಿಲ್ಲ.॥22॥

(ಶ್ಲೋಕ - 23)

ಮೂಲಮ್

ಸತ್ತ್ವಂ ವಿಶುದ್ಧಂ ವಸುದೇವಶಬ್ದಿತಂ
ಯದೀಯತೇ ತತ್ರ ಪುಮಾನಪಾವೃತಃ ।
ಸತ್ತ್ವೇ ಚ ತಸ್ಮಿನ್ಭಗವಾನ್ವಾಸುದೇವೋ
ಹ್ಯಧೋಕ್ಷಜೋ ಮೇ ನಮಸಾ ವಿಧೀಯತೇ ॥

ಅನುವಾದ

ಪರಿಶುದ್ಧವಾದ ಸತ್ತ್ವ (ಅಂತಃಕರಣ)ದ ಹೆಸರು. ‘ವಸುದೇವ’ ಎಂದಾಗಿದೆ. ಏಕೆಂದರೆ, ಅದರಲ್ಲಿಯೇ ಭಗವಂತನಾದ ಶ್ರೀವಾಸುದೇವನು ಪ್ರತ್ಯಕ್ಷವಾಗಿ ಆವಿರ್ಭವಿಸಿ ಅನುಭವಕ್ಕೆ ಬರುವನು. ಅಂತಹ ವಿಶುದ್ಧ ಚಿತ್ತದಲ್ಲಿ ನೆಲೆಸಿರುವ ಭಗವಂತನಾದ ಶ್ರೀವಾಸುದೇವನಿಗೇ ನಾನು ನಮಸ್ಕಾರಗಳನ್ನು ಮಾಡುತ್ತೇನೆ.॥23॥

(ಶ್ಲೋಕ - 24)

ಮೂಲಮ್

ತತ್ತೇ ನಿರೀಕ್ಷ್ಯೋ ನ ಪಿತಾಪಿ ದೇಹಕೃದ್
ದಕ್ಷೋ ಮಮ ದ್ವಿಟ್ ತದನುವ್ರತಾಶ್ಚ ಯೇ ।
ಯೋ ವಿಶ್ವಸೃಗ್ಯಜ್ಞಗತಂ ವರೋರು ಮಾಮ್
ಅನಾಗಸಂ ದುರ್ವಚಸಾಕರೋತ್ತಿರಃ ॥

ಅನುವಾದ

ಆದುದರಿಂದ ಪ್ರಿಯೇ! ಆ ದಕ್ಷಪ್ರಜಾಪತಿಯು ನಿನಗೆ ಜನ್ಮವನ್ನು ಕೊಟ್ಟಿರುವ ತಂದೆಯೇ ಆಗಿದ್ದರೂ ನನ್ನನ್ನು ಮಿತಿಮೀರಿ ದ್ವೇಷಿಸುವ ಶತ್ರುವಾಗಿರುವುದರಿಂದ ನೀನು ಆತನನ್ನಾಗಲೀ, ಆತನ ಅನುಯಾಯಿಗಳನ್ನಾಗಲಿ ನೋಡುವ ವಿಚಾರವನ್ನೇ ಮಾಡಬಾರದು. ಆತನು ಪ್ರಜಾಪತಿಗಳ ಯಜ್ಞದಲ್ಲಿ ನಾನು ಯಾವುದೇ ಅಪರಾಧವನ್ನು ಮಾಡದಿದ್ದರೂ ನನ್ನನ್ನು ಕಟುವಾದ ಮಾತುಗಳಿಂದ ತಿರಸ್ಕರಿಸುತ್ತಿದ್ದಾನಲ್ಲ! ॥24॥

(ಶ್ಲೋಕ - 25)

ಮೂಲಮ್

ಯದಿ ವ್ರಜಿಷ್ಯಸ್ಯತಿಹಾಯ ಮದ್ವಚೋ
ಭದ್ರಂ ಭವತ್ಯಾ ನ ತತೋ ಭವಿಷ್ಯತಿ ।
ಸಂಭಾವಿತಸ್ಯ ಸ್ವಜನಾತ್ಪರಾಭವೋ
ಯದಾ ಸ ಸದ್ಯೋ ಮರಣಾಯ ಕಲ್ಪತೇ ॥

ಅನುವಾದ

ನನ್ನ ಮಾತನ್ನು ಮೀರಿ ನೀನು ಅಲ್ಲಿಗೆ ಹೋದರೆ ನಿನಗೆ ಖಂಡಿತವಾಗಿ ಒಳ್ಳೆಯದಾಗದು. ಏಕೆಂದರೆ, ಲೋಕದಲ್ಲಿ ಗೌರವಾನ್ವಿತ ಮನುಷ್ಯನಿಗೆ ಸ್ವಜನರಿಂದ ಏನಾದರೂ ಅಪಮಾನವು ಒದಗಿದರೆ ಅದು ಒಡನೆಯೇ ಅವನ ಮೃತ್ಯುವಿಗೆ ಕಾರಣವಾಗುವುದು. ॥25॥

ಅನುವಾದ (ಸಮಾಪ್ತಿಃ)

ಮೂರನೆಯ ಅಧ್ಯಾಯವು ಮುಗಿಯಿತು. ॥3॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಚತುರ್ಥಸ್ಕಂಧೇ ಉಮಾ-ರುದ್ರಸಂವಾದೇ ತೃತೀಯೋಽಧ್ಯಾಯಃ ॥3॥