೦೨

[ಎರಡನೆಯ ಅಧ್ಯಾಯ]

ಭಾಗಸೂಚನಾ

ಭಗವಾನ್ ಶಿವನಿಗೂ ಮತ್ತು ದಕ್ಷಪ್ರಜಾಪತಿಗೂ ಉಂಟಾದ ಮನಸ್ತಾಪ

(ಶ್ಲೋಕ - 1)

ಮೂಲಮ್ (ವಾಚನಮ್)

ವಿದುರ ಉವಾಚ

ಮೂಲಮ್

ಭವೇ ಶೀಲವತಾಂ ಶ್ರೇಷ್ಠೇ ದಕ್ಷೋ ದುಹಿತೃವತ್ಸಲಃ ।
ವಿದ್ವೇಷಮಕರೋತ್ಕಸ್ಮಾದನಾದೃತ್ಯಾತ್ಮಜಾಂ ಸತೀಮ್ ॥

ಅನುವಾದ

ವಿದುರನು ಕೇಳಿದನು — ಬ್ರಾಹ್ಮಣೋತ್ತಮರೇ! ದಕ್ಷ ಪ್ರಜಾಪತಿಗೆ ತನ್ನ ಪುತ್ರಿಯರಲ್ಲಿ ಅತ್ಯಂತ ಪ್ರೀತಿಯಿತ್ತು. ಹಾಗಿರುವಾಗ ಅವನು ಪುತ್ರಿಯಾದ ಸತಿದೇವಿಯನ್ನು ಅನಾದರಿಸಿ, ಶೀಲವಂತನಾದ ಎಲ್ಲರಿಂದ ಶ್ರೇಷ್ಠನಾದ ಶ್ರೀಮಹಾದೇವನಲ್ಲಿ ದ್ವೇಷವನ್ನು ಏಕೆ ತಾಳಿದನು? ॥1॥

(ಶ್ಲೋಕ - 2)

ಮೂಲಮ್

ಕಸ್ತಂ ಚರಾಚರಗುರುಂ ನಿರ್ವೈರಂ ಶಾಂತವಿಗ್ರಹಮ್ ।
ಆತ್ಮಾರಾಮಂ ಕಥಂ ದ್ವೇಷ್ಟಿ ಜಗತೋ ದೈವತಂ ಮಹತ್ ॥

ಅನುವಾದ

ಪರಮೇಶ್ವರನಾದರೋ ಚರಾಚರಗಳಿಗೆಲ್ಲ ಗುರುವು. ಯಾರಲ್ಲಿಯೂ ವೈರವಿಲ್ಲದವನು. ಶಾಂತ ಮೂರ್ತಿಯು. ಆತ್ಮಾರಾಮನು. ಜಗತ್ತಿಗೆ ಪರಮಾರಾಧ್ಯನಾದ ಪರದೇವತೆಯು. ಅವನಲ್ಲಿ ಯಾರಾದರೂ ವೈರತಾಳುವರೇ? ॥2॥

(ಶ್ಲೋಕ - 3)

ಮೂಲಮ್

ಏತದಾಖ್ಯಾಹಿ ಮೇ ಬ್ರಹ್ಮನ್ ಜಾಮಾತುಃ ಶ್ವಶುರಸ್ಯ ಚ ।
ವಿದ್ವೇಷಸ್ತು ಯತಃ ಪ್ರಾಣಾಂಸ್ತತ್ಯಜೇ ದುಸ್ತ್ಯಜಾನ್ಸತೀ ॥

ಅನುವಾದ

ಪೂಜ್ಯರೇ! ಆ ಮಾವ-ಅಳಿಯಂದಿರಲ್ಲಿ ಇಂತಹ ದ್ವೇಷ ಹೇಗೆ ಉಂಟಾಯಿತು? ಅದರ ಕಾರಣದಿಂದ ಸತಿದೇವಿಯು ತ್ಯಜಿಸಲು ದುಸ್ತರವಾದ ತನ್ನ ಪ್ರಾಣಗಳನ್ನೇ ಬಲಿಗೊಟ್ಟಳಲ್ಲ! ಇದನ್ನು ನನಗೆ ತಿಳಿಸಿರಿ. ॥3॥

(ಶ್ಲೋಕ - 4)

ಮೂಲಮ್ (ವಾಚನಮ್)

ಮೈತ್ರೇಯ ಉವಾಚ

ಮೂಲಮ್

ಪುರಾ ವಿಶ್ವಸೃಜಾಂ ಸತ್ರೇ ಸಮೇತಾಃ ಪರಮರ್ಷಯಃ ।
ತಥಾಮರಗಣಾಃ ಸರ್ವೇ ಸಾನುಗಾ ಮುನಯೋಗ್ನಯಃ ॥

ಅನುವಾದ

ಶ್ರೀಮೈತ್ರೇಯರು ಹೇಳಿದರು — ಎಲೈ ವಿದುರನೇ! ಹಿಂದೊಮ್ಮೆ ಪ್ರಜಾಪತಿಗಳು ಯಜ್ಞವನ್ನು ಮಾಡಿದಾಗ ಆ ಯಜ್ಞದಲ್ಲಿ ಎಲ್ಲ ಮಹರ್ಷಿಗಳೂ, ಮುನಿಗಳೂ, ಅಗ್ನಿಗಳೂ, ಸಮಸ್ತ ದೇವತೆಗಳೂ ತಮ್ಮ ಅನುಯಾಯಿಗಳೊಡನೆ ಬಂದು ಸೇರಿದ್ದರು. ॥4॥

(ಶ್ಲೋಕ - 5)

ಮೂಲಮ್

ತತ್ರ ಪ್ರವಿಷ್ಟಮೃಷಯೋ ದೃಷ್ಟ್ವಾರ್ಕಮಿವ ರೋಚಿಷಾ ।
ಭ್ರಾಜಮಾನಂ ವಿತಿಮಿರಂ ಕುರ್ವಂತಂ ತನ್ಮಹತ್ಸದಃ ॥

(ಶ್ಲೋಕ - 6)

ಮೂಲಮ್

ಉದತಿಷ್ಠನ್ಸದಸ್ಯಾಸ್ತೇ ಸ್ವಧಿಷ್ಣ್ಯೇಭ್ಯಃ ಸಹಾಗ್ನಯಃ ।
ಋತೇ ವಿರಿಂಚಂ ಶರ್ವಂ ಚ ತದ್ಭಾಸಾಕ್ಷಿ ಪ್ತಚೇತಸಃ ॥

ಅನುವಾದ

ಆಗ ದಕ್ಷಪ್ರಜಾಪತಿಯೂ ಆ ಸಭೆಯನ್ನು ಪ್ರವೇಶಿಸಿದನು. ಅವನು ತನ್ನ ತೇಜದಿಂದ ಸೂರ್ಯನಂತೆ ಪ್ರಕಾಶಿಸುತ್ತಾ ಆ ವಿಶಾಲ ಸಭಾಭವನದ ಅಂಧಕಾರವನ್ನು ದೂರಗೊಳಿಸುತ್ತಿದ್ದನು. ಅವನು ಬಂದಿರುವುದನ್ನು ನೋಡಿ, ಅವನ ತೇಜಸ್ಸಿಗೆ ಬೆರಗಾಗಿ ಬ್ರಹ್ಮದೇವರು ಮತ್ತು ಮಹಾದೇವನನ್ನು ಬಿಟ್ಟು ಇತರ ಅಗ್ನಿ ಸಮೇತರಾದ ಎಲ್ಲ ಸಭಾ ಸದರು ತಮ್ಮ-ತಮ್ಮ ಆಸನಗಳನ್ನು ಬಿಟ್ಟು ಎದ್ದುನಿಂತರು. ॥5-6॥

(ಶ್ಲೋಕ - 7)

ಮೂಲಮ್

ಸದಸಸ್ಪತಿಭಿರ್ದಕ್ಷೋ ಭಗವಾನ್ಸಾಧು ಸತ್ಕೃತಃ ।
ಅಜಂ ಲೋಕಗುರಂ ನತ್ವಾ ನಿಷಸಾದ ತದಾಜ್ಞಯಾ ॥

ಅನುವಾದ

ಹೀಗೆ ಎಲ್ಲ ಸಭಾಸದರಿಂದ ಸಮ್ಮಾನ ಪಡೆದು ತೇಜಸ್ವಿಯಾದ ದಕ್ಷಪ್ರಜಾಪತಿಯು ತಂದೆಯಾದ ಬ್ರಹ್ಮ ದೇವರಿಗೆ ವಂದಿಸಿ, ಅವರ ಅಪ್ಪಣೆಯಂತೆ ಆಸನದಲ್ಲಿ ಮಂಡಿಸಿದನು. ॥7॥

(ಶ್ಲೋಕ - 8)

ಮೂಲಮ್

ಪ್ರಾಙ್ನೆಷಣ್ಣಂ ಮೃಡಂ ದೃಷ್ಟ್ವಾ ನಾಮೃಷ್ಯತ್ತದನಾದೃತಃ ।
ಉವಾಚ ವಾಮಂ ಚಕ್ಷುರ್ಭ್ಯಾಮಭಿವೀಕ್ಷ್ಯ ದಹನ್ನಿವ ॥

ಅನುವಾದ

ಆದರೆ ಪರಮೇಶ್ವರನು ಮಾತ್ರ ಕುಳಿತೇ ಇದ್ದು, ತನಗೆ ಗೌರವವನ್ನು ಸಲ್ಲಿಸದೆ ಇದ್ದುದನ್ನು ಆತನು ಗಮನಿಸಿದನು. ಇದನ್ನು ಅವನು ಅನಾದರವೆಂದು ತಿಳಿದನು. ಆಗ ಆತನು ಶಿವನನ್ನು ತನ್ನ ಕ್ರೋಧಾಗ್ನಿಯಿಂದ ಸುಟ್ಟುಬಿಡುವನೋ ಎಂಬಂತೆ ಕಡೆಗಣ್ಣಿನಿಂದ ದುರ-ದುರನೆ ನೋಡುತ್ತಾ ಹೀಗೆ ಹೇಳತೊಡಗಿದನು. ॥8॥

(ಶ್ಲೋಕ - 9)

ಮೂಲಮ್

ಶ್ರೂಯತಾಂ ಬ್ರಹ್ಮರ್ಷಯೋ ಮೇ ಸಹದೇವಾಃ ಸಹಾಗ್ನಯಃ ।
ಸಾಧೂನಾಂ ಬ್ರುವತೋ ವೃತ್ತಂ ನಾಜ್ಞಾನಾನ್ನ ಚ ಮತ್ಸರಾತ್ ॥

ಅನುವಾದ

ದೇವತೆಗಳಿಂದಲೂ, ಅಗ್ನಿಗಳಿಂದಲೂ ಒಡಗೂಡಿರುವ ಎಲೈ ಬ್ರಹ್ಮರ್ಷಿಗಳೇ! ನನ್ನ ಮಾತನ್ನು ಕೇಳಿರಿ. ನಾನು ಅಜ್ಞಾನದಿಂದಾಗಲೀ, ಮಾತ್ಸರ್ಯದಿಂದಾಗಲೀ ಮಾತನಾಡುತ್ತಿಲ್ಲ. ಕೇವಲ ಶಿಷ್ಟಾಚಾರ ವ್ಯವಹಾರದ ಕುರಿತೇ ಆಡುತ್ತಿದ್ದೇನೆ. ॥9॥

(ಶ್ಲೋಕ - 10)

ಮೂಲಮ್

ಅಯಂ ತು ಲೋಕಪಾಲಾನಾಂ ಯಶೋಘ್ನೋ ನಿರಪತ್ರಪಃ ।
ಸದ್ಭಿರಾಚರಿತಃ ಪಂಥಾ ಯೇನ ಸ್ತಬ್ಧೇನ ದೂಷಿತಃ ॥

ಅನುವಾದ

ಈ ನಾಚಿಕೆಗೆಟ್ಟವನು ಎಲ್ಲ ಲೋಕಪಾಲರ ಪವಿತ್ರಕೀರ್ತಿಯನ್ನು ಕೆಡಿಸುತ್ತಿದ್ದಾನೆ. ನೋಡಿದಿರಾ! ಈ ದುರಹಂಕಾರಿಯು ಸತ್ಪುರುಷರು ನಡೆದು ಬಂದಿರುವ ದಾರಿಯನ್ನೇ ಕಲಂಕಿತಗೊಳಿಸುತ್ತಿದ್ದಾನೆ. ॥10॥

(ಶ್ಲೋಕ - 11)

ಮೂಲಮ್

ಏಷ ಮೇ ಶಿಷ್ಯತಾಂ ಪ್ರಾಪ್ತೋ ಯನ್ಮೇ ದುಹಿತುರಗ್ರಹೀತ್ ।
ಪಾಣಿಂ ವಿಪ್ರಾಗ್ನಿಮುಖತಃ ಸಾವಿತ್ರ್ಯಾ ಇವ ಸಾಧುವತ್ ॥

(ಶ್ಲೋಕ - 12)

ಮೂಲಮ್

ಗೃಹೀತ್ವಾ ಮೃಗಶಾವಾಕ್ಷ್ಯಾಃ ಪಾಣಿಂ ಮರ್ಕಟಲೋಚನಃ ।
ಪ್ರತ್ಯುತ್ಥಾನಾಭಿವಾದಾರ್ಹೇ ವಾಚಾಪ್ಯಕೃತ ನೋಚಿತಮ್ ॥

ಅನುವಾದ

ಕಪಿಯ ಕಣ್ಣಿನಂತಿರುವ ಇವನು ಸಾಧು ವಿನಂತಿದ್ದ ನನ್ನ ಸಾವಿತ್ರಿ ಸದೃಶಳೂ, ಮೃಗನಯನಿಯೂ ಆದ ಪವಿತ್ರ ಕನ್ಯೆಯನ್ನು ಆಗ್ನಿ ಮತ್ತು ಬ್ರಾಹ್ಮಣರ ಸಮಕ್ಷಮದಲ್ಲಿ ಪಾಣಿಗ್ರಹಣಮಾಡಿದ್ದನು. ಇದರಿಂದ ಇವನು ಒಂದು ವಿಧದಲ್ಲಿ ನನಗೆ ಮಗನಂತೇ ಇದ್ದಾನೆ. ಇವನೂ ಎದ್ದು ನನಗೆ ಸ್ವಾಗತಿಸಿ, ನಮಸ್ಕರಿಸುತ್ತಿದ್ದರೆ ಉಚಿತವಾಗಿತ್ತು. ಆದರೆ ಇವನು ಮಾತಿನಿಂದಲೂ ನನ್ನನ್ನು ಸತ್ಕರಿಸಲಿಲ್ಲ. ॥11-12॥

(ಶ್ಲೋಕ - 13)

ಮೂಲಮ್

ಲುಪ್ತಕ್ರಿಯಾಯಾಶುಚಯೇ ಮಾನಿನೇ ಭಿನ್ನಸೇತವೇ ।
ಅನಿಚ್ಛನ್ನಪ್ಯದಾಂ ಬಾಲಾಂ ಶೂದ್ರಾಯೇವೋಶತೀಂ ಗಿರಮ್ ॥

ಅನುವಾದ

ಅಯ್ಯೋ! ಅಯೋಗ್ಯನಿಗೆ ವೇದ ಹೇಳಿಕೊಟ್ಟಂತೆ ನಾನು ಇಷ್ಟವಿಲ್ಲದಿದ್ದರೂ ಈತನಿಗೆ ನನ್ನ ಪುತ್ರಿಯನ್ನು ಕೊಟ್ಟೆನಲ್ಲ! ಈತನು ಸತ್ಕರ್ಮಗಳನ್ನು ಲೋಪಗೊಳಿಸಿರುವನು. ಅಶುಚಿಯು, ದುರಭಿಮಾನಿಯು. ಧರ್ಮದ ಮೇರೆಯನ್ನು ಮುರಿದು ಹಾಕಿದನು.॥13॥

(ಶ್ಲೋಕ - 14)

ಮೂಲಮ್

ಪ್ರೇತಾವಾಸೇಷು ಘೋರೇಷು ಪ್ರೇತೈರ್ಭೂತಗಣೈರ್ವೃತಃ ।
ಅಟತ್ಯುನ್ಮತ್ತವನ್ನಗ್ನೋ ವ್ಯಪ್ತಕೇಶೋ ಹಸನ್ರುದನ್ ॥

ಅನುವಾದ

ಇವನು ಪ್ರೇತಗಳಿಗೆ ನಿವಾಸಸ್ಥಾನವಾದ ಭಯಂಕರ ಸ್ಮಶಾನಗಳಲ್ಲಿ ಭೂತ-ಪ್ರೇತಗಳೊಡನೆ ಅಲೆಯುತ್ತಾ ಇರುತ್ತಾನೆ. ಹುಚ್ಚನಂತೆ ತಲೆಗೂದಲನ್ನು ಕೆದರಿಕೊಂಡು, ಬತ್ತಲೆಯಾಗಿ, ನಗುತ್ತಲೂ, ಅಳುತ್ತಲೂ ತಿರುಗಾಡುತ್ತಿರುತ್ತಾನೆ. ॥14॥

(ಶ್ಲೋಕ - 15)

ಮೂಲಮ್

ಚಿತಾಭಸ್ಮಕೃತಸ್ನಾನಃ ಪ್ರೇತಸ್ರಙ್ನ್ರಸ್ಥಿಭೂಷಣಃ ।
ಶಿವಾಪದೇಶೋ ಹ್ಯಶಿವೋ ಮತ್ತೋ ಮತ್ತಜನಪ್ರಿಯಃ ।
ಪತಿಃ ಪ್ರಮಥಭೂತಾನಾಂ ತಮೋಮಾತ್ರಾತ್ಮಕಾತ್ಮನಾಮ್ ॥

ಅನುವಾದ

ಇವನು ಅಪವಿತ್ರವಾದ ಚಿತಾಭಸ್ಮವನ್ನು ಮೈಗೆಲ್ಲ ಬಳಿದುಕೊಂಡು, ಕೊರಳಲ್ಲಿ ಭೂತಗಳು ಧರಿಸಲು ಯೋಗ್ಯವಾದ ನರಮುಂಡ ಮಾಲೆಯನ್ನೂ, ದೇಹದಲ್ಲೆಲ್ಲ ಮೂಳೆಗಳ ಒಡವೆಗಳನ್ನು ಹಾಕಿಕೊಂಡಿರುತ್ತಾನೆ. ಇವನು ಹೆಸರಿಗೆ ಮಾತ್ರ ಶಿವನಾಗಿದ್ದಾನೆ. ಆದರೆ ನಿಜವಾಗಿ ಅಶಿವ ಅಮಂಗಳ ರೂಪಿಯಾಗಿದ್ದಾನೆ. ಮತ್ತೇರಿದವನಿಗೆ ಮತ್ತೇರಿದವರೇ ಪ್ರಿಯರಾಗಿರುವಂತೆ ಈತನಿಗೂ ಭೂತ-ಪ್ರೇತ-ಪಿಶಾಚಾದಿ ತಮೋಗುಣದ ಜೀವರೇ ಪ್ರೀಯರು. ಅವರಿಗೆಲ್ಲ ಈತನು ನಾಯಕನು. ॥15॥

(ಶ್ಲೋಕ - 16)

ಮೂಲಮ್

ತಸ್ಮಾ ಉನ್ಮಾದನಾಥಾಯ ನಷ್ಟಶೌಚಾಯ ದುರ್ಹೃದೇ ।
ದತ್ತಾ ಬತ ಮಯಾ ಸಾಧ್ವೀ ಚೋದಿತೇ ಪರಮೇಷ್ಠಿನಾ ॥

ಅನುವಾದ

ಅಯ್ಯೋ! ನಾನು ಬ್ರಹ್ಮದೇವರ ಮಾತಿಗೆ ಮರುಳಾಗಿ, ಭೂತಪತಿಯೂ, ಆಚಾರಹೀನನೂ, ದುಷ್ಟಸ್ವಭಾವದವನೂ ಆದ ಇಂತಹವನಿಗೆ ಸಾಧ್ವಿಯೂ, ಸುಕುಮಾರಿಯೂ ಆದ ನನ್ನ ಕುವರಿಯನ್ನು ವಿವಾಹಮಾಡಿ ಕೊಟ್ಟೆನಲ್ಲ! ॥16॥

(ಶ್ಲೋಕ - 17)

ಮೂಲಮ್ (ವಾಚನಮ್)

ಮೈತ್ರೇಯ ಉವಾಚ

ಮೂಲಮ್

ವಿನಿಂದ್ಯೈವಂ ಸ ಗಿರಿಶಮಪ್ರತೀಪಮವಸ್ಥಿತಮ್ ।
ದಕ್ಷೋಥಾಪ ಉಪಸ್ಪೃಶ್ಯ ಕ್ರುದ್ಧಃ ಶಪ್ತುಂ ಪ್ರಚಕ್ರಮೇ ॥

ಅನುವಾದ

ಶ್ರೀಮೈತ್ರೇಯರು ಹೇಳುತ್ತಾರೆ — ಸಾಧುಸ್ವಭಾವದ ವಿದುರನೇ! ದಕ್ಷನು ತನ್ನನ್ನು ಹೀಗೆ ನಿಂದಿಸಿದರೂ ಭಗವಾನ್ ಮಹಾದೇವನು ಅದಕ್ಕೆ ಯಾವ ಪ್ರತಿಕ್ರಿಯೆಯನ್ನೂ ತೋರದೆ ಹಿಂದಿನಂತೆ ನಿಶ್ಚಲಭಾವದಿಂದಲೇ ಕುಳಿತಿದ್ದನು. ಇದರಿಂದ ದಕ್ಷನ ಕ್ರೋಧವು ಉಕ್ಕೇರಿ ಅವನು ಕೈಯಲ್ಲಿ ನೀರನ್ನು ತೆಗೆದುಕೊಂಡು ಶಿವನನ್ನು ಶಪಿಸಲು ಸಿದ್ಧನಾದನು. ॥17॥

(ಶ್ಲೋಕ - 18)

ಮೂಲಮ್

ಆಯಂ ತು ದೇವಯಜನ ಇಂದ್ರೋಪೇಂದ್ರಾದಿಭಿರ್ಭವಃ ।
ಸಹಭಾಗಂ ನ ಲಭತಾಂ ದೇವೈರ್ದೇವಗಣಾಧಮಃ ॥

ಅನುವಾದ

ದಕ್ಷನು ‘‘ಈ ಮಹಾದೇವನು ದೇವತೆಗಳಲ್ಲಿ ಅಧಮನು. ಇಂದಿನಿಂದ ಈತನಿಗೆ ಇಂದ್ರ-ಉಪೇಂದ್ರ ಮುಂತಾದ ದೇವತೆಗಳೊಡನೆ ಯಜ್ಞದಲ್ಲಿ ಭಾಗವು ದೊರೆಯದಿರಲಿ’ ಎಂಬ ಶಾಪವಾಕ್ಯವನ್ನುಚ್ಚರಿಸಿದನು. ॥18॥

(ಶ್ಲೋಕ - 19)

ಮೂಲಮ್

ನಿಷಿಧ್ಯಮಾನಃ ಸ ಸದಸ್ಯಮುಖ್ಯೈ-
ರ್ದಕ್ಷೋ ಗಿರಿತ್ರಾಯ ವಿಸೃಜ್ಯ ಶಾಪಮ್ ।
ತಸ್ಮಾದ್ವಿನಿಷ್ಕ್ರಮ್ಯ ವಿವೃದ್ಧಮನ್ಯು-
ರ್ಜಗಾಮ ಕೌರವ್ಯ ನಿಜಂ ನಿಕೇತನಮ್ ॥

ಅನುವಾದ

ಸಭೆಯಲ್ಲಿ ನೆರೆದಿದ್ದ ಮುಖ್ಯ ಸದಸ್ಯರು ‘ಬೇಡ! ಬೇಡ!’ ಎಂದು ತಡೆಯುತ್ತಿದ್ದರೂ ಆತನು ಯಾರಮಾತನ್ನೂ ಕೇಳದೆ ಶಿವನಿಗೆ ಶಾಪವನ್ನು ಕೊಟ್ಟೇ ಬಿಟ್ಟನು. ಹಾಗೂ ಕಡುಕೋಪದಿಂದ ಸಭಾತ್ಯಾಗಮಾಡಿ ಮನೆಗೆ ಹೊರಟುಹೋದನು. ॥19॥

(ಶ್ಲೋಕ - 20)

ಮೂಲಮ್

ವಿಜ್ಞಾಯ ಶಾಪಂ ಗಿರಿಶಾನುಗಾಗ್ರಣೀ
ರ್ನಂದೀಶ್ವರೋ ರೋಷಕಷಾಯದೂಷಿತಃ ।
ದಕ್ಷಾಯ ಶಾಪಂ ವಿಸಸರ್ಜ ದಾರುಣಂ
ಯೇ ಚಾನ್ವಮೋದಂಸ್ತದವಾಚ್ಯತಾಂ ದ್ವಿಜಾಃ ॥

ಅನುವಾದ

ಸ್ವಾಮಿ ಶಂಕರನ ಅನುಯಾಯಿಗಳಲ್ಲಿ ಅಗ್ರಗಣ್ಯನಾದ ನಂದಿಕೇಶ್ವರನಿಗೆ ದಕ್ಷನು ಶಾಪವಿತ್ತುದನ್ನು ತಿಳಿಯುತ್ತಲೇ ಕ್ರೋಧದಿಂದ ಕಿಡಿ-ಕಿಡಿಯಾದನು. ಆ ದಕ್ಷನಿಗೂ, ಅವನ ದುರ್ವಚನಗಳನ್ನು ಅನುಮೋದನೆ ಮಾಡಿದ ಬ್ರಾಹ್ಮಣರಿಗೂ ಅವನು ಭಯಂಕರವಾದ ಶಾಪವನ್ನು ಕೊಟ್ಟನು. ॥20॥

(ಶ್ಲೋಕ - 21)

ಮೂಲಮ್

ಯ ಏತನ್ಮರ್ತ್ಯಮುದ್ದಿಶ್ಯ ಭಗವತ್ಯಪ್ರತಿದ್ರುಹಿ ।
ದ್ರುಹ್ಯತ್ಯಜ್ಞಃ ಪೃಥಗ್ದೃಷ್ಟಿಸ್ತತ್ತ್ವತೋ ವಿಮುಖೋ ಭವೇತ್ ॥

ಅನುವಾದ

‘‘ಮರಣಸ್ವಭಾವವುಳ್ಳ ಈ ದೇಹದಲ್ಲೇ ಅಭಿಮಾನ ಹೊಂದಿರುವ ಈ ಮೂರ್ಖ ದಕ್ಷನು ಯಾರಿಗೂ ದ್ರೋಹಮಾಡದೇ ಇರುವ ಭಗವಾನ್ ಶಂಕರನ ವಿಷಯದಲ್ಲಿ ದ್ವೇಷವನ್ನು ಮಾಡಿರುವನು. ಭೇದಬುದ್ಧಿಯಿಂದ ಕೂಡಿದ ಈತನು ತತ್ತ್ವಜ್ಞಾನ ವಿಮುಖನಾಗಲಿ.’’ ॥21॥

(ಶ್ಲೋಕ - 22)

ಮೂಲಮ್

ಗೃಹೇಷು ಕೂಟಧರ್ಮೇಷು ಸಕ್ತೋ ಗ್ರಾಮ್ಯಸುಖೇಚ್ಛಯಾ ।
ಕರ್ಮತಂತ್ರಂ ವಿತನುತೇ ವೇದವಾದವಿಪನ್ನಧೀಃ ॥

(ಶ್ಲೋಕ - 23)

ಮೂಲಮ್

ಬುದ್ಧ್ಯಾ ಪರಾಭಿಧ್ಯಾಯಿನ್ಯಾ ವಿಸ್ಮೃತಾತ್ಮಗತಿಃ ಪಶುಃ ।
ಸೀಕಾಮಃ ಸೋಸ್ತ್ವ ತಿತರಾಂ ದಕ್ಷೋ ಬಸ್ತಮುಖೋಚಿರಾತ್ ॥

ಅನುವಾದ

ಇವನು ‘ಚಾತುರ್ಮಾಸ್ಯ ಯಜ್ಞಮಾಡುವವನಿಗೆ ಅಕ್ಷಯ ಪುಣ್ಯವು ದೊರೆಯುವುದು’ ಮುಂತಾದ ಅರ್ಥವಾದ ರೂಪೀ ವೇದವಾಕ್ಯಗಳಲ್ಲಿ ಮೋಹಿತನಾಗಿ ಹಾಗೂ ವಿವೇಕ ಭ್ರಷ್ಟನಾಗಿ ವಿಷಯಸುಖದ ಇಚ್ಛೆಯಿಂದ ಕಪಟ ಧರ್ಮಮಯ ಗೃಹಸ್ಥಾಶ್ರಮದಲ್ಲಿ ಆಸಕ್ತನಾಗಿದ್ದು, ಕರ್ಮಕಾಂಡದಲ್ಲೇ ತೊಡಗಿರುತ್ತಾನೆ. ಇವನ ಬುದ್ಧಿಯು ದೇಹಾದಿಗಳಲ್ಲಿ ಆತ್ಮಭಾವವನ್ನು ಚಿಂತಿಸುವಂತಹುದು. ಇದರಿಂದ ಇವನಿಗೆ ಆತ್ಮಸ್ವರೂಪವು ಮರೆಯಾಗಿದೆ. ಇವನು ಸಾಕ್ಷಾತ್ ಪಶು ವಿನಂತೆ ಆಗಿದ್ದಾನೆ. ಆದ್ದರಿಂದ ಈತನು ಅತ್ಯಂತ ಸ್ತ್ರೀಲಂಪಟನಾಗಲಿ ಮತ್ತು ಶೀಘ್ರದಲ್ಲಿಯೇ ಈತನಿಗೆ ಹೋತದಮುಖ ಬರಲಿ. ॥22-23॥

(ಶ್ಲೋಕ - 24)

ಮೂಲಮ್

ವಿದ್ಯಾಬುದ್ಧಿರವಿದ್ಯಾಯಾಂ ಕರ್ಮಮಯ್ಯಾಮಸೌ ಜಡಃ ।
ಸಂಸರಂತ್ವಿಹ ಯೇ ಚಾಮುಮನು ಶರ್ವಾವಮಾನಿನಮ್ ॥

ಅನುವಾದ

ಈ ಮೂರ್ಖನು ಕರ್ಮಮಯ ವಾದ ಅವಿದ್ಯೆಯನ್ನೇ ವಿದ್ಯೆಯೆಂದು ತಿಳಿಯುತ್ತಿದ್ದಾನೆ. ಆದ್ದರಿಂದ ಈತನೂ ಮತ್ತು ಭಗವಾನ್ ಶಂಕರನಿಗೆ ಅಪಮಾನಮಾಡಿರುವ ಈತನ ಬೆಂಬಲಿಗರೆಲ್ಲರೂ ಜನ್ಮ- ಮರಣರೂಪವಾದ ಸಂಸಾರ ಚಕ್ರದಲ್ಲಿ ಸುತ್ತುತ್ತಿರಲಿ. ॥24॥

(ಶ್ಲೋಕ - 25)

ಮೂಲಮ್

ಗಿರಃ ಶ್ರುತಾಯಾಃ ಪುಷ್ಪಿಣ್ಯಾ ಮದುಗಂಧೇನ ಭೂರಿಣಾ ।
ಮಥ್ನಾ ಚೋನ್ಮಥಿತಾತ್ಮಾನಃ ಸಮ್ಮುಹ್ಯಂತು ಹರದ್ವಿಷಃ ॥

ಅನುವಾದ

ವೇದವಾಣಿಯೆಂಬ ಬಳ್ಳಿಯು ಫಲಶ್ರುತಿಯೆಂಬ ಪುಷ್ಪಗಳಿಂದ ಸುಶೋಭಿತವಾಗಿದೆ. ಕರ್ಮಫಲ ರೂಪವಾದ ಅದರ ಮೋಹಕವಾದ ಗಂಧಕ್ಕೆ ವಶವಾದವರ ಚಿತ್ತವು ಕಲಕಿಹೋಗುತ್ತದೆ. ಇದರಿಂದ ಈ ಶಂಕರದ್ರೋಹಿಗಳು ಕರ್ಮಗಳ ಬಲೆಯಲ್ಲಿ ಸಿಕ್ಕಿಹಾಕಿಕೊಂಡಿರಲಿ. ॥25॥

(ಶ್ಲೋಕ - 26)

ಮೂಲಮ್

ಸರ್ವಭಕ್ಷಾ ದ್ವಿಜಾ ವೃತ್ತ್ಯೈ ಧೃತವಿದ್ಯಾತಪೋವ್ರತಾಃ ।
ವಿತ್ತದೇಹೇಂದ್ರಿಯಾರಾಮಾ ಯಾಚಕಾ ವಿಚರಂತ್ವಿಹ ॥

ಅನುವಾದ

ಈ ಬ್ರಾಹ್ಮಣರು ಭಕ್ಷ್ಯಾ-ಭಕ್ಷ್ಯದ ವಿವೇಕವಿಲ್ಲದೆ ಕೇವಲ ಉದರಂಭರಣಕ್ಕಾಗಿ ವಿದ್ಯೆ, ತಪಸ್ಸು, ವ್ರತ ಮುಂತಾದವು ಗಳನ್ನು ಆಶ್ರಯಿಸಿ, ಧನ, ದೇಹೇಂದ್ರಿಯ ಸುಖವನ್ನು ಪರಮಸುಖವೆಂದು ಭಾವಿಸಿ ಅವುಗಳಿಗೆ ಗುಲಾಮರಾಗಿ ಲೋಕದಲ್ಲಿ ಭಿಕ್ಷೆಬೇಡುತ್ತಾ ಅಲೆದಾಡುತ್ತಿರಲಿ’’ ಎಂದು ಶಾಪವನ್ನಿತ್ತನು. ॥26॥

(ಶ್ಲೋಕ - 27)

ಮೂಲಮ್

ತಸ್ಯೈವಂ ದದತಃ ಶಾಪಂ ಶ್ರುತ್ವಾ ದ್ವಿಜಕುಲಾಯ ವೈ ।
ಭೃಗುಃ ಪ್ರತ್ಯಸೃಜಚ್ಛಾಪಂ ಬ್ರಹ್ಮದಂಡಂ ದುರತ್ಯಯಮ್ ॥

ಅನುವಾದ

ನಂದೀಶ್ವರನು ಹೀಗೆ ಬ್ರಾಹ್ಮಣಕುಲವನ್ನು ಶಪಿಸಿದ್ದನ್ನು ಕೇಳಿ ಅದರ ಬದಲಿಗೆ ಭೃಗುಮಹರ್ಷಿಗಳು ಕ್ರುದ್ಧರಾಗಿ ದುಸ್ತರವಾದ ಶಾಪರೂಪವಾದ ಬ್ರಹ್ಮದಂಡವನ್ನು ವಿಧಿಸಿದರು. ॥27॥

(ಶ್ಲೋಕ - 28)

ಮೂಲಮ್

ಭವವ್ರತಧರಾ ಯೇ ಚ ಯೇ ಚ ತಾನ್ಸಮನುವ್ರತಾಃ ।
ಪಾಖಂಡಿನಸ್ತೇ ಭವಂತು ಸಚ್ಛಾಸಪರಿಪಂಥಿನಃ ॥

ಅನುವಾದ

‘‘ಯಾರು ಕಾಪಾಲಿಕರು ಶಿವಭಕ್ತರು ಹಾಗೂ ಅವರ ಅನುಯಾಯಿಗಳಿದ್ದಾರೋ ಅವರು ಸತ್ ಶಾಸ್ತ್ರಗಳಿಗೆ ವಿರುದ್ಧವಾದ ಆಚರಣೆ ಮಾಡುವ ಪಾಷಂಡಿಗಳಾಗಲಿ. ॥28॥

(ಶ್ಲೋಕ - 29)

ಮೂಲಮ್

ನಷ್ಟಶೌಚಾ ಮೂಢಧಿಯೋ ಜಟಾಭಸ್ಮಾಸ್ಥಿಧಾರಿಣಃ ।
ವಿಶಂತು ಶಿವದೀಕ್ಷಾಯಾಂ ಯತ್ರ ದೈವಂ ಸುರಾಸವಮ್ ॥

ಅನುವಾದ

ಶೌಚಾಚಾರವನ್ನು ಬಿಟ್ಟು, ಮಂದ ಬುದ್ಧಿಗಳಾಗಿ, ಜಟೆ, ಬೂದಿ, ಎಲುಬಿನ ಮಾಲೆಗಳನ್ನು ಧರಿಸುವವರೇ ಶೈವ ಸಂಪ್ರದಾಯದಲ್ಲಿ ದೀಕ್ಷಿತರಾಗಲಿ. ಅದರಲ್ಲಿ ಸುರೆ ಮತ್ತು ಆಸವಗಳೆಂಬ ಮದ್ಯಗಳೇ ದೇವತೆಗಳಂತೆ ಆದರಣೀಯವಾಗಿದೆ. ॥29॥

(ಶ್ಲೋಕ - 30)

ಮೂಲಮ್

ಬ್ರಹ್ಮ ಚ ಬ್ರಾಹ್ಮಾಣಾಂಶ್ಚೈವ ಯದ್ಯೂಯಂ ಪರಿನಿಂದಥ ।
ಸೇತುಂ ವಿಧಾರಣಂ ಪುಂಸಾಮತಃ ಪಾಖಂಡಮಾಶ್ರಿತಾಃ ॥

ಅನುವಾದ

ಎಲಾ! ನೀವೆಲ್ಲ ಧರ್ಮ ಮರ್ಯಾದೆಯ ಸಂಸ್ಥಾಪಕರೂ, ವರ್ಣಾಶ್ರಮಗಳ ರಕ್ಷಕರೂ ಆದ ವೇದ ಮತ್ತು ಬ್ರಾಹ್ಮಣರ ನಿಂದೆಯನ್ನು ಮಾಡುತ್ತಿರುವಿರಲ್ಲ! ನೀವು ಪಾಷಂಡ ಮತವನ್ನು ಆಶ್ರಯಿಸಿರುವಿರಿ ಎಂಬುದು ಇದರಿಂದ ತಿಳಿಯುತ್ತದೆ. ॥30॥

(ಶ್ಲೋಕ - 31)

ಮೂಲಮ್

ಏಷ ಏವ ಹಿ ಲೋಕಾನಾಂ ಶಿವಃ ಪಂಥಾಃ ಸನಾತನಃ ।
ಯಂ ಪೂರ್ವೇ ಚಾನುಸಂತಸ್ಥುರ್ಯತ್ಪ್ರಮಾಣಂ ಜನಾರ್ದನಃ ॥

ಅನುವಾದ

ಈ ವೇದಮಾರ್ಗವೇ ಜನರಿಗಾಗಿ ಶ್ರೇಯಸ್ಕರ ಮತ್ತು ಸನಾತನಮಾರ್ಗವಾಗಿದೆ. ಹಿಂದಿನವರು ಇದೇ ದಾರಿಯಲ್ಲಿ ನಡೆದುಬಂದಿರುವರು ಹಾಗೂ ಇದರ ಮೂಲವು ಸಾಕ್ಷಾತ್ ಭಗವಾನ್ ವಿಷ್ಣುವೇ ಆಗಿರುವನು. ॥31॥

(ಶ್ಲೋಕ - 32)

ಮೂಲಮ್

ತದ್ಬ್ರಹ್ಮ ಪರಮಂ ಶುದ್ಧಂ ಸತಾಂ ವರ್ತ್ಮ ಸನಾತನಮ್ ।
ವಿಗರ್ಹ್ಯ ಯಾತ ಪಾಖಂಡಂ ದೈವಂ ವೋ ಯತ್ರ ಭೂತರಾಟ್ ॥

ಅನುವಾದ

ನೀವುಗಳು ಸತ್ಪುರುಷರಿಗೆ ಪರಮಪವಿತ್ರವೂ, ಸನಾತನ ಮಾರ್ಗವೂ ಆದ ವೇದವನ್ನು ನಿಂದಿಸುತ್ತಿರುವಿರಿ. ಆದ್ದರಿಂದ ನೀವು ಭೂತಗಳಿಗೆ ಅಧಿಪತಿಯಾಗಿರುವ, ನಿಮ್ಮ ಇಷ್ಟದೇವನು ವಾಸಿಸುವ ಪಾಷಂಡ ಮಾರ್ಗಕ್ಕೆ ಹೊರಟು ಹೋಗಿರಿ. ॥32॥

(ಶ್ಲೋಕ - 33)

ಮೂಲಮ್ (ವಾಚನಮ್)

ಮೈತ್ರೇಯ ಉವಾಚ

ಮೂಲಮ್

ತಸ್ಯೈವಂ ವದತಃ ಶಾಪಂ ಭೃಗೋಃ ಸ ಭಗವಾನ್ಭವಃ ।
ನಿಶ್ಚಕ್ರಾಮ ತತಃ ಕಿಂಚಿದ್ವಿಮನಾ ಇವ ಸಾನುಗಃ ॥

ಅನುವಾದ

ಶ್ರೀಮೈತ್ರೇಯರು ಹೇಳುತ್ತಾರೆ — ವಿದುರನೇ! ಭೃಗು ಋಷಿಗಳು ಹೀಗೆ ಶಪಿಸಿದಾಗ ಭಗವಾನ್ ಶಂಕರನು ಸ್ವಲ್ಪ ಖೇದಗೊಂಡವನಂತೆ ತನ್ನ ಅನುಯಾಯಿಗಳೊಡನೆ ಅಲ್ಲಿಂದ ಹೊರಟು ಹೋದನು. ॥33॥

(ಶ್ಲೋಕ - 34)

ಮೂಲಮ್

ತೇಪಿ ವಿಶ್ವಸೃಜಃ ಸತ್ರಂ ಸಹಸ್ರಪರಿವತ್ಸರಾನ್ ।
ಸಂವಿಧಾಯ ಮಹೇಷ್ವಾಸ ಯತ್ರೇಜ್ಯ ಋಷಭೋ ಹರಿಃ ॥

(ಶ್ಲೋಕ - 35)

ಮೂಲಮ್

ಆಪ್ಲುತ್ಯಾವಭೃಥಂ ಯತ್ರ ಗಂಗಾ ಯಮುನಯಾನ್ವಿತಾ ।
ವಿರಜೇನಾತ್ಮನಾ ಸರ್ವೇ ಸ್ವಂ ಸ್ವಂ ಧಾಮ ಯಯುಸ್ತತಃ ॥

ಅನುವಾದ

ಪ್ರಜಾಪತಿಗಳು ಆಚರಿಸುತ್ತಿದ್ದ ಆ ಯಜ್ಞದ ಅವಧಿ ಒಂದುಸಾವಿರ ವರ್ಷಗಳಾಗಿದ್ದಿತು. ಅದರಲ್ಲಿ ಉಪಾಸ್ಯ ದೇವತೆಯಾದರೋ ಪುರುಷೋತ್ತಮ ಶ್ರೀಹರಿಯೇ ಆಗಿದ್ದನು. ಅಂತಹ ಯಜ್ಞವನ್ನು ಮುಗಿಸಿ ಆ ಪ್ರಜಾಪತಿಗಳು ಗಂಗಾ-ಯಮುನಾ ಸಂಗಮಸ್ಥಳದಲ್ಲಿ ಅವಭೃತಸ್ನಾನಮಾಡಿ ಪ್ರಸನ್ನವಾದ ಮನಸ್ಸಿನಿಂದ ತಮ್ಮ-ತಮ್ಮ ಸ್ಥಾನಗಳಿಗೆ ಹೊರಟುಹೋದರು. ॥34-35॥

ಅನುವಾದ (ಸಮಾಪ್ತಿಃ)

ಎರಡನೆಯ ಅಧ್ಯಾಯವು ಮುಗಿಯಿತು. ॥2॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಚತುರ್ಥಸ್ಕಂಧೇ ದಕ್ಷಶಾಪೋ ನಾಮ ದ್ವಿತೀಯೋಽಧ್ಯಾಯಃ ॥2॥