೦೧

[ಮೊದಲನೆಯ ಅಧ್ಯಾಯ]

ಭಾಗಸೂಚನಾ

ಸ್ವಾಯಂಭುವ ಮನುವಿನ ಕನ್ಯೆಯರ ವಂಶದ ವರ್ಣನೆ

(ಶ್ಲೋಕ - 1)

ಮೂಲಮ್ (ವಾಚನಮ್)

ಮೈತ್ರೇಯ ಉವಾಚ

ಮೂಲಮ್

ಮನೋಸ್ತು ಶತರೂಪಾಯಾಂ ತಿಸ್ರಃ ಕನ್ಯಾಶ್ಚ ಜಜ್ಞಿರೇ ।
ಆಕೂತಿರ್ದೇವಹೂತಿಶ್ಚ ಪ್ರಸೂತಿರಿತಿ ವಿಶ್ರುತಾಃ ॥

ಅನುವಾದ

ಶ್ರೀಮೈತ್ರೇಯ ಮಹರ್ಷಿಗಳು ಹೇಳುತ್ತಾರೆ — ವಿದುರನೇ! ಸ್ವಾಯಂಭುವ ಮನುವು ತನ್ನ ಪತ್ನಿಯಾದ ಶತರೂಪಾದೇವಿ ಯಲ್ಲಿ ಪ್ರಿಯವ್ರತ ಮತ್ತು ಉತ್ತಾನಪಾದರೆಂಬ ಇಬ್ಬರು ಪುತ್ರರು, ಅಲ್ಲದೆ ಮೂವರು ಪುತ್ರಿಯರನ್ನು ಪಡೆದನು. ಅವರು ಆಕೂತಿ, ದೇವಹೂತಿ, ಪ್ರಸೂತಿ ಎಂಬ ಹೆಸರುಗಳಿಂದ ವಿಖ್ಯಾತರಾದರು. ॥1॥

(ಶ್ಲೋಕ - 2)

ಮೂಲಮ್

ಆಕೂತಿಂ ರುಚಯೇ ಪ್ರಾದಾದಪಿ ಭ್ರಾತೃಮತೀಂ ನೃಪಃ ।
ಪುತ್ರಿಕಾಧರ್ಮಮಾಶ್ರಿತ್ಯ ಶತರೂಪಾನುಮೋದಿತಃ ॥

ಅನುವಾದ

ಆಕೂತಿಯನ್ನು ಸೋದರರಿಬ್ಬರು ಇದ್ದರೂ ಮಹಾರಾಣಿ ಶತರೂಪೆಯ ಅನುಮತಿಯನ್ನು ಪಡೆದು ರುಚಿ ಪ್ರಜಾಪತಿಯೊಂದಿಗೆ ‘ಪುತ್ರಿಕಾ ಧರ್ಮ’ಕ್ಕನುಸಾರವಾಗಿ* ವಿವಾಹಮಾಡಿ ಕೊಟ್ಟನು.॥2॥

ಟಿಪ್ಪನೀ
  • ಪುತ್ರಿಕಾಧರ್ಮ’ಕ್ಕನುಸಾರವಾಗಿ ಮಾಡುವ ವಿವಾಹದಲ್ಲಿ ಮಗಳಲ್ಲಿ ಹುಟ್ಟುವ ಮೊದಲನೆಯ ಮಗನನ್ನು ಮಗಳ ತಂದೆಯು ಪಡೆಯುವುದೆಂಬ ನಿಬಂಧನೆ ಇರುತ್ತದೆ.

(ಶ್ಲೋಕ - 3)

ಮೂಲಮ್

ಪ್ರಜಾಪತಿಃ ಸ ಭಗವಾನ್ರುಚಿಸ್ತಸ್ಯಾಮಜೀಜನತ್ ।
ಮಿಥುನಂ ಬ್ರಹ್ಮವರ್ಚಸ್ವೀ ಪರಮೇಣ ಸಮಾಧಿನಾ ॥

ಅನುವಾದ

ಭಗವಂತನ ಅನನ್ಯ ಚಿಂತನೆಯಿಂದ ಪ್ರಜಾಪತಿ ರುಚಿಯು ಬ್ರಹ್ಮತೇಜದಿಂದ ಸಂಪನ್ನನಾಗಿದ್ದನು. ಆತನು ತನ್ನ ಪರಮ ಸಮಾಧಿಯೋಗದ ಫಲವಾಗಿ ಆಕೂತಿಯಲ್ಲಿ ಒಂದು ಗಂಡುಮಗು ಮತ್ತು ಒಂದು ಹೆಣ್ಣು ಮಗು ಹೀಗೆ ಅವಳಿ ಮಕ್ಕಳನ್ನು ಪಡೆದನು. ॥3॥

(ಶ್ಲೋಕ - 4)

ಮೂಲಮ್

ಯಸ್ತಯೋಃ ಪುರುಷಃ ಸಾಕ್ಷಾದ್ವಿಷ್ಣುರ್ಯಜ್ಞ ಸ್ವರೂಪಧೃಕ್ ।
ಯಾ ಸೀ ಸಾ ದಕ್ಷಿಣಾ ಭೂತೇರಂಶಭೂತಾನಪಾಯಿನೀ ॥

ಅನುವಾದ

ಅವರಲ್ಲಿ ಗಂಡು ಮಗುವು ಸಾಕ್ಷಾತ್ ಯಜ್ಞಸ್ವರೂಪಧರನಾದ ಭಗವಾನ್ ವಿಷ್ಣುವಾಗಿದ್ದನು. ಹೆಣ್ಣುಮಗುವು ಭಗವಂತನಿಂದ ಎಂದಿಗೂ ಅಗಲದೆ ಇರುವ ಸಾಕ್ಷಾತ್ ಶ್ರೀಮಹಾಲಕ್ಷ್ಮಿಯ ಅಂಶ ರೂಪಳಾದ ‘ದಕ್ಷಿಣಾ’ ದೇವಿಯಾಗಿದ್ದಳು. ॥4॥

(ಶ್ಲೋಕ - 5)

ಮೂಲಮ್

ಆನಿನ್ಯೇ ಸ್ವಗೃಹಂ ಪುತ್ರ್ಯಾಃ ಪುತ್ರಂ ವಿತತರೋಚಿಷಮ್ ।
ಸ್ವಾಯಂಭುವೋ ಮುದಾ ಯುಕ್ತೋ ರುಚಿರ್ಜಗ್ರಾಹ ದಕ್ಷಿಣಾಮ್ ॥

ಅನುವಾದ

ಸ್ವಾಯಂಭುವ ಮನುವು ತನ್ನ ಪುತ್ರಿಯಾದ ಆಕೂತಿಯ ಆ ಪರಮ ತೇಜಸ್ವೀ ಪುತ್ರನನ್ನು ಅತ್ಯಂತ ಪ್ರಸನ್ನತೆಯಿಂದ ಮನೆಗೆ ತಂದನು ಮತ್ತು ದಕ್ಷಿಣಾಳನ್ನು ರುಚಿ ಪ್ರಜಾಪತಿಯು ತನ್ನ ಬಳಿ ಇರಿಸಿಕೊಂಡನು. ॥5॥

(ಶ್ಲೋಕ - 6)

ಮೂಲಮ್

ತಾಂ ಕಾಮಯಾನಾಂ ಭಗವಾನುವಾಹ ಯಜುಷಾಂ ಪತಿಃ ।
ತುಷ್ಟಾಯಾಂ ತೋಷಮಾಪನ್ನೋಜನಯದ್ದ್ವಾದಶಾತ್ಮಜಾನ್ ॥

ಅನುವಾದ

ದಕ್ಷಿಣಾದೇವಿಯು ವಿವಾಹಯೋಗ್ಯಳಾದಾಗ ಅವಳು ಭಗವಾನ್ ಯಜ್ಞನನ್ನೇ ಪತಿರೂಪದಿಂದ ಪಡೆಯುವ ಇಚ್ಛೆಯನ್ನು ಪ್ರಕಟಿಸಿದಳು. ಆಗ ಭಗವಾನ್ ಯಜ್ಞ ಪುರುಷನು ಅವಳೊಂದಿಗೆ ವಿವಾಹವಾದನು. ಇದರಿಂದ ಪತಿ-ಪತ್ನಿಯರಿಬ್ಬರಿಗೂ ಪರಸ್ಪರ ಸಂತೋಷವಾಯಿತು. ಹೀಗೆ ಸಂತುಷ್ಟಳಾದ ದಕ್ಷಿಣಾದೇವಿಯಲ್ಲಿ ಯಜ್ಞನು ಹನ್ನೆರಡು ಪುತ್ರರನ್ನು ಪಡೆದನು. ॥6॥

(ಶ್ಲೋಕ - 7)

ಮೂಲಮ್

ತೋಷಃ ಪ್ರತೋಷಃ ಸಂತೋಷೋ ಭದ್ರಃ ಶಾಂತಿರಿಡಸ್ಪತಿಃ ।
ಇಧ್ಮಃ ಕವಿರ್ವಿಭುಃ ಸ್ವಹ್ನಃ ಸುದೇವೋ ರೋಚನೋ ದ್ವಿಷಟ್ ॥

ಅನುವಾದ

ಅವರ ಹೆಸರು ಇಂತಿವೆ ತೋಷ, ಪ್ರತೋಷ, ಸಂತೋಷ, ಭದ್ರ, ಶಾಂತಿ, ಇಡಸ್ಪತಿ, ಇಧ್ಮ, ಕವಿ, ವಿಭು, ಸ್ವಹ್ನ, ಸುದೇವ ಮತ್ತು ರೋಚನ. ॥7॥

(ಶ್ಲೋಕ - 8)

ಮೂಲಮ್

ತುಷಿತಾ ನಾಮ ತೇ ದೇವಾ ಆಸನ್ ಸ್ವಾಯಮ್ಭುವಾಂತರೇ ।
ಮರೀಚಿಮಿಶ್ರಾ ಋಷಯೋ ಯಜ್ಞಃ ಸುರಗಣೇಶ್ವರಃ ॥

(ಶ್ಲೋಕ - 9)

ಮೂಲಮ್

ಪ್ರಿಯವ್ರತೋತ್ತಾನಪಾದೌ ಮನುಪುತ್ರೌ ಮಹೌಜಸೌ ।
ತತ್ಪುತ್ರಪೌತ್ರನಪ್ತೃಣಾಮನುವೃತ್ತಂ ತದಂತರಮ್ ॥

ಅನುವಾದ

ಈ ಹನ್ನೆರಡು ಮಂದಿ ಪುತ್ರರೇ ಸ್ವಾಯಂಭುವ ಮನ್ವಂತರ ದಲ್ಲಿ ‘ತುಷಿತ’ರೆಂಬ ದೇವತೆಗಳಾದರು. ಆ ಮನ್ವಂತರದಲ್ಲಿ ಮರೀಚಿಯೇ ಮುಂತಾದವರು ಸಪ್ತರ್ಷಿಗಳಾಗಿದ್ದರು. ಭಗವಂತನಾದ ಯಜ್ಞನೇ ದೇವತೆಗಳೊಡೆಯ ಇಂದ್ರ ನಾಗಿದ್ದನು. ಮಹಾನ್ ಪ್ರಭಾವಶಾಲಿ ಪ್ರಿಯವ್ರತ ಮತ್ತು ಉತ್ತಾನಪಾದರೇ ಮನುಪುತ್ರರಾಗಿದ್ದರು. ಆ ಮನ್ವಂತರವು ಇವರಿಬ್ಬರ ಪುತ್ರರ, ಪೌತ್ರರ ದೌಹಿತ್ರರ ವಂಶಗಳಿಂದ ತುಂಬಿ ಹೋಗಿತ್ತು. ॥8-9॥

(ಶ್ಲೋಕ - 10)

ಮೂಲಮ್

ದೇವಹೂತಿಮದಾತ್ತಾತ ಕರ್ದಮಾಯಾತ್ಮಜಾಂ ಮನುಃ
ತತ್ಸಮ್ಬಂಧಿ ಶ್ರುತಪ್ರಾಯಂ ಭವತಾ ಗದತೋ ಮಮ ॥ 10 ॥

ಅನುವಾದ

ಪ್ರಿಯ ವಿದುರನೇ! ಮನುವಿನ ಎರಡನೆಯ ಮಗಳಾದ ದೇವಹೂತಿಯು ಕರ್ದಮರನ್ನು ವಿವಾಹವಾಗಿದ್ದಳು. ಅವಳ ಸಂಬಂಧವಾದ ಎಲ್ಲ ವಿಷಯಗಳನ್ನು ಸಾಮಾನ್ಯವಾಗಿ ನಿನಗೆ ಹೇಳಿಯೇ ಆಗಿದೆ. ॥10॥

(ಶ್ಲೋಕ - 11)

ಮೂಲಮ್

ದಕ್ಷಾಯ ಬ್ರಹ್ಮಪುತ್ರಾಯ ಪ್ರಸೂತಿಂ ಭಗವಾನ್ಮನುಃ ।
ಪ್ರಾಯಚ್ಛದ್ಯತ್ಕೃತಃ ಸರ್ಗಸಿಲೋಕ್ಯಾಂ ವಿತತೋ ಮಹಾನ್ ॥

ಅನುವಾದ

ಭಗವಾನ್ ಮನುವು ತನ್ನ ಮೂರನೆಯ ಮಗಳು ಪ್ರಸೂತಿಯನ್ನು ಬ್ರಹ್ಮಪುತ್ರನಾದ ದಕ್ಷಪ್ರಜಾಪತಿಗೆ ವಿವಾಹಮಾಡಿ ಕೊಟ್ಟಿದ್ದನು. ಆಕೆಯ ವಿಶಾಲ ವಂಶಪರಂಪರೆಯು ತ್ರಿಲೋಕಗಳಲ್ಲಿ ಹರಡಿಕೊಂಡಿದೆ. ॥11॥

(ಶ್ಲೋಕ - 12)

ಮೂಲಮ್

ಯಾಃ ಕರ್ದಮಸುತಾಃ ಪ್ರೋಕ್ತಾ ನವ ಬ್ರಹ್ಮರ್ಷಿಪತ್ನಯಃ ।
ತಾಸಾಂ ಪ್ರಸೂತಿಪ್ರಸವಂ ಪ್ರೋಚ್ಯಮಾನಂ ನಿಬೋಧ ಮೇ ॥

ಅನುವಾದ

ಕರ್ದಮರು ತಮ್ಮ ಒಂಭತ್ತುಮಂದಿ ಕನ್ಯೆಯರನ್ನು ಒಂಭತ್ತು ಬ್ರಹ್ಮರ್ಷಿಗಳಿಗೆ ವಿವಾಹಮಾಡಿಕೊಟ್ಟ ವಿಷಯವನ್ನು ಈ ಮೊದಲೇ ವರ್ಣಿಸಿರುವೆನು. ಈಗ ಅವರ ವಂಶ ಪರಂಪರೆಯನ್ನು ವರ್ಣಿಸುತ್ತೇನೆ; ಕೇಳು. ॥12॥

(ಶ್ಲೋಕ - 13)

ಮೂಲಮ್

ಪತ್ನೀ ಮರೀಚೇಸ್ತು ಕಲಾ ಸುಷುವೇ ಕರ್ದಮಾತ್ಮಜಾ ।
ಕಶ್ಯಪಂ ಪೂರ್ಣಿಮಾನಂ ಚ ಯಯೋರಾಪೂರಿತಂ ಜಗತ್ ॥

ಅನುವಾದ

ಮರೀಚಿ ಋಷಿಗಳು ತಮ್ಮ ಪತ್ನಿಯಾದ ಕರ್ದಮಪುತ್ರಿಯಾದ ಕಲಾದೇವಿಯಿಂದ ಕಶ್ಯಪ ಮತ್ತು ಪೂರ್ಣಿಮಾ ಎಂಬ ಈರ್ವರು ಮಕ್ಕಳನ್ನು ಪಡೆದರು. ಇವರ ವಂಶದಿಂದಲೇ ಇಡೀ ಜಗತ್ತು ತುಂಬಿಹೋಗಿದೆ. ॥13॥

(ಶ್ಲೋಕ - 14)

ಮೂಲಮ್

ಪೂರ್ಣಿಮಾಸೂತ ವಿರಜಂ ವಿಶ್ವಗಂ ಚ ಪರಂತಪ ।
ದೇವಕುಲ್ಯಾಂ ಹರೇಃ ಪಾದಶೌಚಾದ್ಯಾಭೂತ್ಸರಿದ್ದಿವಃ ॥

ಅನುವಾದ

ಎಲೈ ಪರಂತಪನೇ! ಪೂರ್ಣಿಮಾಗೆ ವಿರಜ ಮತ್ತು ವಿಶ್ವಗ ಎಂಬ ಇಬ್ಬರು ಪುತ್ರರು ಹಾಗೂ ದೇವಕುಲ್ಯಾ ಎಂಬ ಕನ್ಯೆಯು ಹುಟ್ಟಿದರು. ಈ ದೇವಕುಲ್ಯೆಯೇ ಮುಂದಿನ ಜನ್ಮದಲ್ಲಿ ಬ್ರಹ್ಮದೇವರು ಶ್ರೀಹರಿಯ ಚರಣಗಳನ್ನು ತೊಳೆದಾಗ ದೇವನದಿ ಗಂಗೆಯ ರೂಪದಿಂದ ಪ್ರಕಟಗೊಂಡಳು. ॥14॥

(ಶ್ಲೋಕ - 15)

ಮೂಲಮ್

ಅತ್ರೇಃ ಪತ್ನ್ಯನಸೂಯಾ ತ್ರೀನ್ ಜಜ್ಞೆ ಸುಯಶಸಃ ಸುತಾನ್ ।
ದತ್ತಂ ದುರ್ವಾಸಸಂ ಸೋಮಮಾತ್ಮೇಶಬ್ರಹ್ಮ ಸಂಭವಾನ್ ॥

ಅನುವಾದ

ಅತ್ರಿ ಮಹರ್ಷಿಗಳ ಪತ್ನೀ ಅನುಸೂಯೆಯಲ್ಲಿ ದತ್ತಾತ್ರೇಯ, ದುರ್ವಾಸ ಮತ್ತು ಚಂದ್ರ ಎಂಬ ಪರಮ ಯಶಸ್ವಿಗಳಾದ ಮೂವರು ಪುತ್ರರು ಹುಟ್ಟಿದರು. ಇವರು ಕ್ರಮವಾಗಿ ವಿಷ್ಣು, ಶಂಕರ ಮತ್ತು ಬ್ರಹ್ಮದೇವರ ಅಂಶಗಳಿಂದ ಜನಿಸಿದವರು. ॥15॥

(ಶ್ಲೋಕ - 16)

ಮೂಲಮ್ (ವಾಚನಮ್)

ವಿದುರ ಉವಾಚ

ಮೂಲಮ್

ಅತ್ರೇರ್ಗೃಹೇ ಸುರಶ್ರೇಷ್ಠಾಃ ಸ್ಥಿತ್ಯುತ್ಪತ್ತ್ಯಂತಹೇತವಃ ।
ಕಿಂಚಿಚ್ಚಿಕೀರ್ಷವೋ ಜಾತಾ ಏತದಾಖ್ಯಾಹಿ ಮೇ ಗುರೋ ॥

ಅನುವಾದ

ವಿದುರನು ಕೇಳಿದನು — ಗುರುಗಳೇ! ಜಗತ್ತಿನ ಉತ್ಪತ್ತಿ, ಸ್ಥಿತಿ, ಲಯಗಳಿಗೆ ಕಾರಣರಾದ ಸರ್ವಶ್ರೇಷ್ಠ ದೇವತೆಗಳು ಏತಕ್ಕಾಗಿ ಅತ್ರಿಮಹರ್ಷಿಗಳ ಗೃಹದಲ್ಲಿ ಅವತರಿಸಿದರು? ದಯವಿಟ್ಟು ತಿಳಿಸುವವರಾಗಿರಿ. ॥16॥

(ಶ್ಲೋಕ - 17)

ಮೂಲಮ್ (ವಾಚನಮ್)

ಮೈತ್ರೇಯ ಉವಾಚ

ಮೂಲಮ್

ಬ್ರಹ್ಮಣಾ ನೋದಿತಃ ಸೃಷ್ಟಾವತ್ರಿರ್ಬ್ರಹ್ಮವಿದಾಂ ವರಃ ।
ಸಹ ಪತ್ನ್ಯಾ ಯಯೌಋಕ್ಷಂ ಕುಲಾದ್ರಿಂ ತಪಸಿ ಸ್ಥಿತಃ ॥

ಅನುವಾದ

ಶ್ರೀಮೈತ್ರೇಯರು ಹೇಳಿದರು — ವಿದುರನೇ! ಬ್ರಹ್ಮದೇವರು ಬ್ರಹ್ಮಜ್ಞಾನಿಗಳಲ್ಲಿ ಶ್ರೇಷ್ಠರಾದ ಅತ್ರಿಮಹರ್ಷಿಗಳಿಗೆ ಸೃಷ್ಟಿಯನ್ನು ಮಾಡುವಂತೆ ಆಜ್ಞಾಪಿಸಲು ಅವರು ತಮ್ಮ ಸಹಧರ್ಮಿಣಿ ಅನುಸೂಯೆಯೊಂದಿಗೆ ತಪಸ್ಸನ್ನಾ ಚರಿಸುವುದಕ್ಕಾಗಿ ‘ಋಕ್ಷ’ ಎಂಬ ಕುಲಪರ್ವತಕ್ಕೆಹೋದರು. ॥17॥

(ಶ್ಲೋಕ - 18)

ಮೂಲಮ್

ತಸ್ಮಿನ್ ಪ್ರಸೂನಸ್ತಬಕಪಲಾಶಾಶೋಕಕಾನನೇ ।
ವಾರ್ಭಿಃ ಸ್ರವದ್ಭಿರುದ್ಘುಷ್ಟೇ ನಿರ್ವಿಂಧ್ಯಾಯಾಃ ಸಮಂತತಃ ॥

ಅನುವಾದ

ಅಲ್ಲಿ ಮುತ್ತುಗ ಮತ್ತು ಅಶೋಕ ವೃಕ್ಷಗಳ ಒಂದು ವಿಶಾಲವಾದ ವನವಿತ್ತು. ಅದರ ಎಲ್ಲ ವೃಕ್ಷಗಳು ಹೂವಿನ ಗೊಂಚಲುಗಳಿಂದ ತುಂಬಿದ್ದವು. ಆ ವನದ ಎಲ್ಲ ಕಡೆಗಳಲ್ಲಿ ‘ನಿರ್ವಿಂಧ್ಯಾ’ ಎಂಬ ನದಿಯ ಕಲರವವು ಪ್ರತಿಧ್ವನಿಸುತ್ತಿತ್ತು. ॥18॥

(ಶ್ಲೋಕ - 19)

ಮೂಲಮ್

ಪ್ರಾಣಾಯಾಮೇನ ಸಂಯಮ್ಯ ಮನೋ ವರ್ಷಶತಂ ಮುನಿಃ ।
ಅತಿಷ್ಠದೇಕಪಾದೇನ ನಿರ್ದ್ವಂದ್ವೋನಿಲಭೋಜನಃ ॥

ಅನುವಾದ

ಆ ವನದಲ್ಲಿ ಮುನಿಶ್ರೇಷ್ಠರು ಪ್ರಾಣಾಯಾಮದ ಮೂಲಕ ಚಿತ್ತವನ್ನು ವಶಪಡಿಸಿಕೊಂಡು ನೂರು ವರ್ಷಗಳ ಕಾಲ ಕೇವಲ ಗಾಳಿಯನ್ನೇ ಕುಡಿದು, ಚಳಿ-ಸೆಕೆಗಳೆಂಬ ದ್ವಂದ್ವಗಳನ್ನು ಪರಿಗಣಿಸದೆ ಒಂಟಿಕಾಲಿನ ಮೇಲೆ ನಿಂತು ತಪಸ್ಸನ್ನಾ ಚರಿಸಿದರು. ॥19॥

(ಶ್ಲೋಕ - 20)

ಮೂಲಮ್

ಶರಣಂ ತಂ ಪ್ರಪದ್ಯೇಹಂ ಯ ಏವ ಜಗದೀಶ್ವರಃ ।
ಪ್ರಜಾಮಾತ್ಮಸಮಾಂ ಮಹ್ಯಂ ಪ್ರಯಚ್ಛತ್ವಿತಿ ಚಿಂತಯನ್ ॥

ಅನುವಾದ

ಅವರು ಆಗ ಮನಸ್ಸಿನಲ್ಲಿಯೇ ‘ಸಮಸ್ತ ಜಗತ್ತಿಗೆ ಸ್ವಾಮಿಯಾದ ಯಾವ ಭಗವಂತನಿರುವನೋ ಆತನನ್ನು ನಾನು ಶರಣು ಹೊಂದುತ್ತೇನೆ. ಅವನು ತನಗೆ ಸಮಾನರಾದ ಪುತ್ರರನ್ನು ನನಗೆ ಕರುಣಿಸಲಿ’ ಎಂದು ಪ್ರಾರ್ಥಿಸುತ್ತಿದ್ದರು. ॥20॥

(ಶ್ಲೋಕ - 21)

ಮೂಲಮ್

ತಪ್ಯಮಾನಂ ತ್ರಿಭುವನಂ ಪ್ರಾಣಾಯಾಮೈಧಸಾಗ್ನಿನಾ ।
ನಿರ್ಗತೇನ ಮುನೇರ್ಮೂಧ್ನಃ ಸಮೀಕ್ಷ್ಯ ಪ್ರಭವಸಯಃ ॥

(ಶ್ಲೋಕ - 22)

ಮೂಲಮ್

ಅಪ್ಸರೋಮುನಿಗಂಧರ್ವಸಿದ್ಧವಿದ್ಯಾಧರೋರಗೈಃ ।
ವಿತಾಯಮಾನಯಶಸಸ್ತದಾಶ್ರಮಪದಂ ಯಯುಃ ॥

ಅನುವಾದ

ಆಗ ಪ್ರಾಣಾಯಾಮವೆಂಬ ಕಟ್ಟಿಗೆಯಿಂದ ಭುಗಿಲೆದ್ದ ಅತ್ರಿ ಮಹರ್ಷಿಗಳ ತೇಜಸ್ಸು ಅವರ ಮಸ್ತಕದಿಂದ ಹೊರ ಬಿದ್ದು ಮೂರು ಲೋಕಗಳನ್ನು ಸುಡುತ್ತಿರುವುದನ್ನು ಕಂಡು ಜಗತ್ತಿಗೆ ಅಧಿಪತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರು ಮಹರ್ಷಿಯ ಆಶ್ರಮಕ್ಕೆ ದಯಮಾಡಿಸಿದರು. ಆಗ ಅಪ್ಸರೆಯರೂ, ಮುನಿಗಳೂ, ಗಂಧರ್ವರೂ, ಸಿದ್ಧರೂ, ವಿದ್ಯಾಧರರೂ, ನಾಗರೂ ಹೀಗೆ ಎಲ್ಲರೂ ಅವರ ಸುಕೀರ್ತಿಯನ್ನು ಕೊಂಡಾಡುತ್ತಿದ್ದರು. ॥21-22॥

(ಶ್ಲೋಕ - 23)

ಮೂಲಮ್

ತತ್ಪ್ರಾದುರ್ಭಾವಸಂಯೋಗವಿದ್ಯೋತಿತಮನಾ ಮುನಿಃ
ಉತ್ತಿಷ್ಠನ್ನೇಕಪಾದೇನ ದದರ್ಶ ವಿಬುಧರ್ಷಭಾನ್ ॥

(ಶ್ಲೋಕ - 24)

ಮೂಲಮ್

ಪ್ರಣಮ್ಯ ದಂಡವದ್ಭೂಮಾವುಪತಸ್ಥೇರ್ಹಣಾಂಜಲಿಃ ।
ವೃಷಹಂಸಸುಪರ್ಣಸ್ಥಾನ್ ಸ್ವೈಃ ಸ್ವೈಶ್ಚಿಹ್ನೈಶ್ಚ ಚಿಹ್ನಿತಾನ್ ॥

ಅನುವಾದ

ಆ ಮೂವರೂ ದೇವತೆಗಳು ಒಟ್ಟಿಗೆ ಪ್ರಾದುರ್ಭವಿಸಿದ್ದರಿಂದ ಅತ್ರಿ ಮುನಿಗಳ ಅಂತಃಕರಣವು ಹರ್ಷದಿಂದ ತುಂಬಿಹೋಯಿತು. ಅವರು ಒಂಟಿಕಾಲಿನಲ್ಲಿ ನಿಂತಿದ್ದಂತೆಯೇ ಅವರನ್ನು ನೋಡಿದರು. ಒಡನೆಯೇ ಅವರಿಗೆ ದೀರ್ಘದಂಡ ನಮಸ್ಕಾರಮಾಡಿ, ಅರ್ಘ್ಯ-ಪುಷ್ಪಾದಿ ಸಾಮಗ್ರಿಗಳಿಂದ ಪೂಜೆಯನ್ನು ಸಲ್ಲಿಸಿದರು. ಆ ಮೂವರೂ ತಮ್ಮ-ತಮ್ಮ ವಾಹನಗಳಾದ ಹಂಸ, ಗರುಡ, ವೃಷಭಗಳ ಮೇಲೆ ಕುಳಿತಿದ್ದು, ಕಮಂಡಲು, ಚಕ್ರ, ತ್ರಿಶೂಲ ಮುಂತಾದ ತಮ್ಮ-ತಮ್ಮ ಆಯುಧಗಳನ್ನು ಧರಿಸಿದ್ದರು. ॥23-24॥

(ಶ್ಲೋಕ - 25)

ಮೂಲಮ್

ಕೃಪಾವಲೋಕೇನ ಹಸದ್ವದನೇನೋಪಲಂಭಿತಾನ್ ।
ತದ್ರೋಚಿಷಾ ಪ್ರತಿಹತೇ ನಿಮೀಲ್ಯ ಮುನಿರಕ್ಷಿಣೀ ॥

ಅನುವಾದ

ಅವರು ಕಣ್ಣುಗಳಿಂದ ಕರುಣೆಯ ಮಳೆಯನ್ನು ಕರೆಯುತ್ತಾ, ಮುಖದಿಂದ ಮುಗುಳ್ನಗೆಯ ಬೆಳದಿಂಗಳನ್ನು ಚೆಲ್ಲುತ್ತಾ, ಪ್ರಸನ್ನ ಮೂರ್ತಿಗಳಾಗಿದ್ದರು. ಮುನಿವರ್ಯರು ಅವರ ಕೋರೈಸುವ ತೇಜಸ್ಸನ್ನು ಕಂಡು ಕಣ್ಣುಗಳನ್ನು ಮುಚ್ಚಿಕೊಂಡರು. ॥25॥

(ಶ್ಲೋಕ - 26)

ಮೂಲಮ್

ಚೇತಸ್ತತ್ಪ್ರವಣಂ ಯುಂಜನ್ನಸ್ತಾವೀತ್ಸಂಹತಾಂಜಲಿಃ ।
ಶ್ಲಕ್ಷ್ಣಯಾ ಸೂಕ್ತಯಾ ವಾಚಾ ಸರ್ವಲೋಕಗರೀಯಸಃ ॥

ಅನುವಾದ

ಅವರು ತನ್ನ ಚಿತ್ತವನ್ನು ಅವರಲ್ಲೇ ನೆಟ್ಟು, ಕೈಜೋಡಿಸಿಕೊಂಡು, ಅತಿಮಧುರವೂ, ಭಾವಪೂರ್ಣವೂ ಆದ ನುಡಿಗಳಿಂದ ಸರ್ವಲೋಕಗಳಲ್ಲಿಯೂ, ಶ್ರೇಷ್ಠತಮರಾದ ಅವರನ್ನು ಸ್ತುತಿಸತೊಡಗಿದರು. ॥26॥

(ಶ್ಲೋಕ - 27)

ಮೂಲಮ್ (ವಾಚನಮ್)

ಅತ್ರಿರುವಾಚ

ಮೂಲಮ್

ವಿಶ್ವೋದ್ಭವಸ್ಥಿತಿಲಯೇಷು ವಿಭಜ್ಯಮಾನೈ
ರ್ಮಾಯಾಗುಣೈರನುಯುಗಂ ವಿಗೃಹೀತದೇಹಾಃ ।
ತೇ ಬ್ರಹ್ಮವಿಷ್ಣುಗಿರಿಶಾಃ ಪ್ರಣತೋಸ್ಮ್ಯಹಂ ವ-
ಸ್ತೇಭ್ಯಃ ಕ ಏವ ಭವತಾಂ ಮ ಇಹೋಪಹೂತಃ ॥

ಅನುವಾದ

ಅತ್ರಿಮಹರ್ಷಿಗಳು ಹೇಳುತ್ತಾರೆ — ಓ ಭಗವಂತಾ! ಪ್ರತಿಯೊಂದು ಕಲ್ಪದ ಪ್ರಾರಂಭದಲ್ಲೂ ಜಗತ್ತಿನ ಸೃಷ್ಟಿ, ಸ್ಥಿತಿ, ಸಂಹಾರಗಳನ್ನು ಮಾಡುವುದಕ್ಕಾಗಿ ಅದ್ಭುತವಾದ ಮಾಯಾ ಶಕ್ತಿಯ ಸತ್ತ್ವಾದಿ ಮೂರು ಗುಣಗಳನ್ನು ವಿಭಾಗಗೈದು ಬೇರೆ-ಬೇರೆ ಶರೀರವನ್ನು ಧರಿಸಿರುವಿರಿ. ಬ್ರಹ್ಮಾ, ವಿಷ್ಣು, ಮಹೇಶ್ವರರಾದ ನಿಮಗೆ ನಮಸ್ಕರಿಸುತ್ತಿದ್ದೇನೆ. ನಿಮ್ಮ ಮೂವರಲ್ಲಿ ನಾನು ಆಹ್ವಾನಿಸಿದ ಮಹಾನುಭಾವರು ಯಾರು? ಎಂಬುದನ್ನು ದಯವಿಟ್ಟು ತಿಳಿಸಿರಿ. ॥27॥

(ಶ್ಲೋಕ - 28)

ಮೂಲಮ್

ಏಕೋ ಮಯೇಹ ಭಗವಾನ್ವಿಬುಧಪ್ರಧಾನ-
ಶ್ಚಿತ್ತೀಕೃತಃ ಪ್ರಜನನಾಯ ಕಥಂ ನು ಯೂಯಮ್ ।
ಅತ್ರಾಗತಾಸ್ತನುಭೃತಾಂ ಮನಸೋಪಿ ದೂರಾಃ
ಬ್ರೂತ ಪ್ರಸೀದತ ಮಹಾನಿಹ ವಿಸ್ಮಯೋ ಮೇ ॥

ಅನುವಾದ

ಏಕೆಂದರೆ, ನಾನಾದರೋ ಸಂತಾನದ ಇಚ್ಛೆಯಿಂದ ಸುರೇಶ್ವರನಾದ ಒಬ್ಬನೇ ಭಗವಂತನನ್ನು ಚಿಂತಿಸಿದ್ದೆ. ಹಾಗಿರುವಾಗ ನೀವು ಮೂವರು ಇಲ್ಲಿಗೆ ಏಕೆ ದಯಮಾಡಿಸಿದಿರಿ. ದೇಹ ಧಾರಿಗಳ ಮನಸ್ಸಿಗೆ ದೂರವಾಗಿರುವ ನೀವು ಮೂವರೂ ಹೀಗೆ ಬಂದುದು ನನಗೆ ಪರಮಾಶ್ಚರ್ಯವನ್ನುಂಟು ಮಾಡಿದೆ. ಪ್ರಭುಗಳೇ! ಕೃಪೆಗೈದು ನಿಮ್ಮ ಈ ರಹಸ್ಯವನ್ನು ತಿಳಿಸಿರಿ. ॥28॥

(ಶ್ಲೋಕ - 29)

ಮೂಲಮ್ (ವಾಚನಮ್)

ಮೈತ್ರೇಯ ಉವಾಚ

ಮೂಲಮ್

ಇತಿ ತಸ್ಯ ವಚಃ ಶ್ರುತ್ವಾ ತ್ರಯಸ್ತೇ ವಿಬುಧರ್ಷಭಾಃ ।
ಪ್ರತ್ಯಾಹುಃ ಶ್ಲಕ್ಷ್ಣಯಾ ವಾಚಾ ಪ್ರಹಸ್ಯ ತಮೃಷಿಂ ಪ್ರಭೋ ॥

ಅನುವಾದ

ಶ್ರೀಮೈತ್ರೇಯರು ಹೇಳುತ್ತಾರೆ — ವಿದುರನೇ! ಅತ್ರಿಮುನಿಯ ಆ ವಚನಗಳನ್ನು ಕೇಳಿ ಆ ಮೂವರು ದೇವಶ್ರೇಷ್ಠರು ನಕ್ಕು ಮಧುರ ವಾಣಿಯಿಂದ ಹೇಳ ತೊಡಗಿದರು. ॥29॥

(ಶ್ಲೋಕ - 30)

ಮೂಲಮ್ (ವಾಚನಮ್)

ದೇವಾ ಊಚುಃ

ಮೂಲಮ್

ಯಥಾ ಕೃತಸ್ತೇ ಸಂಕಲ್ಪೋ ಭಾವ್ಯಂ ತೇನೈವ ನಾನ್ಯಥಾ ।
ಸತ್ಸಂಕಲ್ಪಸ್ಯ ತೇ ಬ್ರಹ್ಮನ್ಯದ್ವೈ ಧ್ಯಾಯತಿ ತೇ ವಯಮ್ ॥

ಅನುವಾದ

ಶ್ರೀದೇವತೆಗಳೆಂದರು — ಬ್ರಾಹ್ಮಣೋತ್ತಮನೇ! ನೀನು ಸತ್ಯ ಸಂಕಲ್ಪನಾಗಿರುವುದರಿಂದ ಹೇಗೆ ಸಂಕಲ್ಪಮಾಡಿದೆಯೋ ಹಾಗೆಯೇ ಆಗುವುದು. ಇದಕ್ಕೆ ವಿಪರೀತವಾಗಿ ಹೇಗಾಗ ಬಲ್ಲದು? ನೀನು ಧ್ಯಾನಮಾಡುತ್ತಿದ್ದ ಜಗದೀಶ್ವರ ತತ್ತ್ವವು ನಾವು ಮೂವರೂ ಆಗಿದ್ದೇವೆ. ॥30॥

(ಶ್ಲೋಕ - 31)

ಮೂಲಮ್

ಅಥಾಸ್ಮದಂಶಭೂತಾಸ್ತೇ ಆತ್ಮಜಾ ಲೋಕವಿಶ್ರುತಾಃ ।
ಭವಿತಾರೋಂಗ ಭದ್ರಂ ತೇ ವಿಸ್ರಪ್ಸ್ಯಂತಿ ಚ ತೇ ಯಶಃ ॥
ಮಹರ್ಷಿಯೇ ನಿನಗೆ ಮಂಗಳವಾಗಲೀ. ನಮ್ಮ ಅಂಶಸ್ವರೂಪರೇ ಆಗಿ ಲೋಕವಿಖ್ಯಾತರಾಗಿರುವ ಮೂವರು ಪುತ್ರರು ನಿನಗೆ ಜನಿಸಿ ನಿನ್ನ ಕೀರ್ತಿಯನ್ನು ಹರಡುವರು. ॥31॥

(ಶ್ಲೋಕ - 32)

ಮೂಲಮ್

ಏವಂ ಕಾಮವರಂ ದತ್ತ್ವಾ ಪ್ರತಿಜಗ್ಮುಃ ಸುರೇಶ್ವರಾಃ ।
ಸಭಾಜಿತಾಸ್ತಯೋಃ ಸಮ್ಯಗ್ದಂಪತ್ಯೋರ್ಮಿಷತೋಸ್ತತಃ ॥

ಅನುವಾದ

ಅತ್ರಿ ಮಹರ್ಷಿಗಳಿಗೆ ಹೀಗೆ ಅಭೀಷ್ಟವಾದ ವರವನ್ನು ಕರುಣಿಸಿ, ಪತಿ-ಪತ್ನಿಯರಿಂದ ಚೆನ್ನಾಗಿ ಪೂಜೆಗೊಂಡು ಅವರು ನೋಡುತ್ತಿರುವಂತೆ ಆ ಮೂವರು ದೇವಶ್ರೇಷ್ಠರು ತಮ್ಮ-ತಮ್ಮ ಲೋಕಗಳಿಗೆ ಬಿಜಯಂಗೈದರು. ॥32॥

(ಶ್ಲೋಕ - 33)

ಮೂಲಮ್

ಸೋಮೋಭೂದ್ಬ್ರಹ್ಮಣೋಂಶೇನ ದತ್ತೋ ವಿಷ್ಣೋಸ್ತು ಯೋಗವಿತ್ ।
ದುರ್ವಾಸಾಃ ಶಂಕರಸ್ಯಾಂಶೋ ನಿಬೋಧಾಂಗಿರಸಃ ಪ್ರಜಾಃ ॥

ಅನುವಾದ

ಬ್ರಹ್ಮದೇವರ ಅಂಶದಿಂದ ಚಂದ್ರನೂ, ವಿಷ್ಣುವಿನ ಅಂಶದಿಂದ ಯೋಗಜ್ಞನಾದ ದತ್ತಾತ್ರೇಯನೂ, ಶಂಕರನ ಅಂಶದಿಂದ ದುರ್ವಾಸ ಮಹರ್ಷಿಗಳೂ ಅತ್ರಿಗೆ ಪುತ್ರರೂಪದಲ್ಲಿ ಪ್ರಕಟಗೊಂಡರು. ಇನ್ನು ಅಂಗಿರಾ ಋಷಿಯ ಸಂತಾನದ ವರ್ಣನೆಯನ್ನು ಕೇಳು. ॥33॥

(ಶ್ಲೋಕ - 34)

ಮೂಲಮ್

ಶ್ರದ್ಧಾ ತ್ವಂಗಿರಸಃ ಪತ್ನೀ ಚತಸ್ರೋಸೂತ ಕನ್ಯಕಾಃ ।
ಸಿನೀವಾಲೀ ಕುಹೂ ರಾಕಾ ಚತುರ್ಥ್ಯನುಮತಿಸ್ತಥಾ ॥

ಅನುವಾದ

ಮಹರ್ಷಿ ಅಂಗಿರಸರ ಪತ್ನಿಯಾದ ಶ್ರದ್ಧೆಯು ಸಿನೀವಾಲೀ, ಕುಹು, ರಾಕಾ ಮತ್ತು ಅನುಮತಿ ಎಂಬ ನಾಲ್ವರು ಪುತ್ರಿಯರಿಗೆ ಜನ್ಮನೀಡಿದಳು. ॥34॥

(ಶ್ಲೋಕ - 35)

ಮೂಲಮ್

ತತ್ಪುತ್ರಾವಪರಾವಾಸ್ತಾಂ ಖ್ಯಾತೌ ಸ್ವಾರೋಚಿಷೇಂತರೇ ।
ಉತಥ್ಯೋ ಭಗವಾನ್ಸಾಕ್ಷಾದ್ಬ್ರಹ್ಮಿಷ್ಠಶ್ಚ ಬೃಹಸ್ಪತಿಃ ॥

ಅನುವಾದ

ಇದಲ್ಲದೆ ಅವಳಲ್ಲಿ ಸ್ವಾರೋಚಿಷ ಮನ್ವಂತರದಲ್ಲಿ ಖ್ಯಾತರಾದ ಅತ್ಯಂತ ಪೂಜ್ಯರಾದ ಭಗವಾನ್ ಉತಥ್ಯರು ಮತ್ತು ಬ್ರಹ್ಮನಿಷ್ಠರಾದ ಬೃಹಸ್ಪತಿ ಎಂಬ ಇಬ್ಬರು ಪುತ್ರರು ಜನಿಸಿದರು. ॥35॥

(ಶ್ಲೋಕ - 36)

ಮೂಲಮ್

ಪುಲಸ್ತ್ಯೋಜನಯತ್ಪತ್ನ್ಯಾಮಗಸ್ತ್ಯಂ ಚ ಹವಿರ್ಭುವಿ ।
ಸೋನ್ಯಜನ್ಮನಿ ದಹ್ರಾಗ್ನಿರ್ವಿಶ್ರವಾಶ್ಚ ಮಹಾತಪಾಃ ॥

ಅನುವಾದ

ಪುಲಸ್ತ್ಯರಿಗೆ ಅವರ ಪತ್ನಿಯಾದ ಹವಿರ್ಭೂ ಎಂಬಾಕೆಯಲ್ಲಿ ಮಹರ್ಷಿಗಳಾದ ಅಗಸ್ತ್ಯರು ಮತ್ತು ಮಹಾತಪಸ್ವೀ ವಿಶ್ರವಸರೂ ಪುತ್ರರಾಗಿ ಜನಿಸಿದರು. ಇವರಲ್ಲಿ ಅಗಸ್ತ್ಯರು ಮುಂದಿನ ಜನ್ಮದಲ್ಲಿ ಜಠರಾಗ್ನಿಸ್ವರೂಪರಾದರು. ॥36॥

(ಶ್ಲೋಕ - 37)

ಮೂಲಮ್

ತಸ್ಯ ಯಕ್ಷಪತಿರ್ದೇವಃ ಕುಬೇರಸ್ತ್ವಿಡವಿಡಾಸುತಃ ।
ರಾವಣಃ ಕುಂಭಕರ್ಣಶ್ಚ ತಥಾನ್ಯಸ್ಯಾಂ ವಿಭೀಷಣಃ ॥

ಅನುವಾದ

ಮಹರ್ಷಿ ವಿಶ್ರವಸರಿಗೆ ಇಡವಿಡಾ ಎಂಬುವಳ ಗರ್ಭದಿಂದ ಯಕ್ಷರಾಜನಾದ ಕುಬೇರನು ಜನಿಸಿದನು. ಅವರ ಇನ್ನೋರ್ವ ಪತ್ನಿಯಾದ ಕೇಶಿನಿಯಿಂದ ರಾವಣ, ಕುಂಭಕರ್ಣ ಹಾಗೂ ವಿಭೀಷಣರೆಂಬ ಪುತ್ರರು ಹುಟ್ಟಿದರು. ॥37॥

(ಶ್ಲೋಕ - 38)

ಮೂಲಮ್

ಪುಲಹಸ್ಯ ಗತಿರ್ಭಾರ್ಯಾ ತ್ರೀನಸೂತ ಸತೀ ಸುತಾನ್ ।
ಕರ್ಮಶ್ರೇಷ್ಠಂ ವರೀಯಾಂಸಂ ಸಹಿಷ್ಣುಂ ಚ ಮಹಾಮತೇ ॥

ಅನುವಾದ

ಎಲೈ ಮಹಾಮತಿಯಾದ ವಿದುರನೇ! ಮಹರ್ಷಿ ಪುಲಹ ಪತ್ನಿಯಾದ ಸಾಧ್ವೀಗತಿ ಎಂಬಾಕೆಯಿಂದ ಕರ್ಮಶ್ರೇಷ್ಠ, ವರೀಯಾನ್ ಮತ್ತು ಸಹಿಷ್ಣು ಎಂಬ ಮೂವರು ಪುತ್ರರು ಜನಿಸಿದರು. ॥38॥

(ಶ್ಲೋಕ - 39)

ಮೂಲಮ್

ಕ್ರತೋರಪಿ ಕ್ರಿಯಾ ಭಾರ್ಯಾ ವಾಲಖಿಲ್ಯಾನಸೂಯತ ।
ಋಷೀನ್ ಷಷ್ಟಿಸಹಸ್ರಾಣಿ ಜ್ವಲತೋ ಬ್ರಹ್ಮತೇಜಸಾ ॥

ಅನುವಾದ

ಹಾಗೆಯೇ ಕ್ರತುವಿನ ಪತ್ನಿಯಾದ ಕ್ರಿಯಾದೇವಿಯು ಬ್ರಹ್ಮ ತೇಜಸ್ಸಿನಿಂದ ಬೆಳಗುವ ವಾಲಖಿಲ್ಯರೆಂಬ ಅರವತ್ತು ಸಾವಿರ ಋಷಿಗಳನ್ನು ಪುತ್ರರನ್ನಾಗಿ ಪಡೆದಳು. ॥39॥

(ಶ್ಲೋಕ - 40)

ಮೂಲಮ್

ಊರ್ಜಾಯಾಂ ಜಜ್ಞಿರೇ ಪುತ್ರಾ ವಸಿಷ್ಠಸ್ಯ ಪರಂತಪ ।
ಚಿತ್ರಕೇತುಪ್ರಧಾನಾಸ್ತೇ ಸಪ್ತ ಬ್ರಹ್ಮರ್ಷಯೋಮಲಾಃ ॥

ಅನುವಾದ

ಶತ್ರುಗಳಿಗೆ ತಾಪವನ್ನು ಉಂಟುಮಾಡುವ ವಿದುರನೇ! ವಸಿಷ್ಠರ ಪತ್ನಿಯಾದ ಊರ್ಜಾ (ಅರುಂಧತಿ) ಎಂಬುವಳಿಗೆ ಚಿತ್ರಕೇತುವೇ ಮುಂತಾದ ಪರಿಶುದ್ಧ ಚಿತ್ತರಾದ ಏಳುಮಂದಿ ಬ್ರಹ್ಮರ್ಷಿಗಳು ಪುತ್ರರಾಗಿ ಜನಿಸಿದರು. ॥40॥

(ಶ್ಲೋಕ - 41)

ಮೂಲಮ್

ಚಿತ್ರಕೇತುಃ ಸುರೋಚಿಶ್ಚ ವಿರಜಾ ಮಿತ್ರ ಏವ ಚ ।
ಉಲ್ಬಣೋ ವಸುಭೃದ್ಯಾನೋ ದ್ಯುಮಾನ್ ಶಕ್ತ್ಯಾದಯೋಪರೇ ॥

ಅನುವಾದ

ಅವರ ಹೆಸರು ಇಂತಿದೆ ಚಿತ್ರಕೇತು, ಸುರೋಚಿ, ವಿರಜಾ, ಮಿತ್ರ, ಉಲ್ಬಣ, ವಸುಭೃದ್ಯಾನ ಮತ್ತು ದ್ಯುಮಾನ್. ಇವರಲ್ಲದೆ ಅವರ ಇನ್ನೊಂದು ಪತ್ನಿಯಿಂದ ಶಕ್ತಿ ಮುಂತಾದ ಇನ್ನೂ ಅನೇಕ ಪುತ್ರರನ್ನು ಪಡೆದರು. ॥41॥

(ಶ್ಲೋಕ - 42)

ಮೂಲಮ್

ಚಿತ್ತಿಸ್ತ್ವಥರ್ವಣಃ ಪತ್ನೀ ಲೇಭೇ ಪುತ್ರಂ ಧೃತವ್ರತಮ್ ।
ದಧ್ಯಞ್ಚಮಶ್ವಶಿರಸಂ ಭೃಗೋರ್ವಂಶಂ ನಿಭೋಧ ಮೇ ॥

ಅನುವಾದ

ಅಥರ್ವಾಮುನಿಯ ಪತ್ನಿಯಾದ ಚಿತ್ತಿಯು ದಧ್ಯಂಚ (ದಧೀಚಿ) ಎಂಬ ತಪೋನಿಷ್ಠನಾದ ಪುತ್ರನನ್ನು ಪಡೆದಳು. ಈ ದಧೀಚಿ ಋಷಿಗಳಿಗೆ ‘ಅಶ್ವಶಿರಾ’ ಎಂಬ ಮತ್ತೊಂದು ಹೆಸರಿತ್ತು. ಇನ್ನು ಭೃಗುವಂಶವನ್ನು ವರ್ಣಿಸುವೆನು ಕೇಳು. ॥42॥

(ಶ್ಲೋಕ - 43)

ಮೂಲಮ್

ಭೃಗುಃ ಖ್ಯಾತ್ಯಾಂ ಮಹಾಭಾಗಃ ಪತ್ನ್ಯಾಂ ಪುತ್ರಾನಜೀಜನತ್ ।
ಧಾತಾರಂ ಚ ವಿಧಾತಾರಂ ಶ್ರಿಯಂ ಚ ಭಗವತ್ಪರಾಮ್ ॥

ಅನುವಾದ

ಮಹಾಭಾಗರಾದ ಭೃಗುಮಹರ್ಷಿಗಳು ತಮ್ಮ ಪತ್ನಿಯಾದ ಖ್ಯಾತಿಯಲ್ಲಿ ಧಾತಾ ಮತ್ತು ವಿಧಾತಾ ಎಂಬ ಇಬ್ಬರು ಪುತ್ರರನ್ನೂ ಹಾಗೂ ಭಗವತ್ಪರಾಯಣೆಯಾದ ಶ್ರೀ ಎಂಬ ಕನ್ಯೆಯನ್ನು ಪಡೆದರು. ॥43॥

(ಶ್ಲೋಕ - 44)

ಮೂಲಮ್

ಆಯತಿಂ ನಿಯತಿಂ ಚೈವ ಸುತೇ ಮೇರುಸ್ತಯೋರದಾತ್ ।
ತಾಭ್ಯಾಂ ತಯೋರಭವತಾಂ ಮೃಕಂಡಃ ಪ್ರಾಣ ಏವ ಚ ॥

ಅನುವಾದ

ಮೇರು ಋಷಿಗಳು ತಮ್ಮ ಆಯತಿ ಮತ್ತು ನಿಯತಿ ಎಂಬ ಕನ್ಯೆಯರನ್ನು ಕ್ರಮವಾಗಿ ಧಾತಾ ಮತ್ತು ವಿಧಾತಾ ಇವರಿಗೆ ವಿವಾಹ ಮಾಡಿಕೊಟ್ಟರು. ಅವರಿಗೆ ಮೃಕಂಡ ಹಾಗೂ ಪ್ರಾಣರೆಂಬ ಇಬ್ಬರು ಪುತ್ರರು ಜನಿಸಿದರು. ॥44॥

(ಶ್ಲೋಕ - 45)

ಮೂಲಮ್

ಮಾರ್ಕಂಡೇಯೋ ಮೃಕಂಡಸ್ಯ ಪ್ರಾಣಾದ್ವೇದಶಿರಾ ಮುನಿಃ ।
ಕವಿಶ್ಚ ಭಾರ್ಗವೋ ಯಸ್ಯ ಭಗವಾನುಶನಾ ಸುತಃ ॥

ಅನುವಾದ

ಅವರಿಬ್ಬರಲ್ಲಿ ಮೃಕಂಡರಿಗೆ ಮಾರ್ಕಂಡೇಯರೂ, ಪ್ರಾಣರಿಗೆ ಮುನಿವರ್ಯರಾದ ವೇದಶಿರಾ ಹುಟ್ಟಿದರು. ಭೃಗುಮಹರ್ಷಿಗಳಿಗೆ ಕವಿ ಎಂಬ ಓರ್ವ ಪುತ್ರನೂ ಇದ್ದನು. ಆ ಕವಿಯ ಪುತ್ರರೇ ಭಗವಾನ್ ಉಶನಾ (ಶುಕ್ರಾಚಾರ್ಯ)ರವರು. ॥45॥

(ಶ್ಲೋಕ - 46)

ಮೂಲಮ್

ತ ಏತೇ ಮುನಯಃ ಕ್ಷತ್ತರ್ಲೋಕಾನ್ಸರ್ಗೈರಭಾವಯನ್
ಏಷ ಕರ್ದಮದೌಹಿತ್ರಸಂತಾನಃ ಕಥಿತಸ್ತವ ।
ಶೃಣ್ವತಃ ಶ್ರದ್ದಧಾನಸ್ಯ ಸದ್ಯಃ ಪಾಪಹರಃ ಪರಃ ॥

ಅನುವಾದ

ವಿದುರನೇ! ಇವೆಲ್ಲ ಮುನೀಶ್ವರರೂ ಸಂತಾನಗಳನ್ನು ಪಡೆದು ಸೃಷ್ಟಿಯನ್ನು ಮುಂದುವರಿಸಿದರು. ಹೀಗೆ ನಿನಗೆ ಕರ್ದಮ ಋಷಿಗಳ ಪುತ್ರಿಯರ ಸಂತಾನಗಳನ್ನು ವರ್ಣಿಸಿರುವೆನು. ಇದನ್ನು ಶ್ರದ್ಧೆಯಿಂದ ಕೇಳುವವನ ಪಾಪಗಳು ಒಡನೆಯೇ ನಾಶಹೊಂದುವವು. ॥46॥

(ಶ್ಲೋಕ - 47)

ಮೂಲಮ್

ಪ್ರಸೂತಿಂ ಮಾನವೀಂ ದಕ್ಷ ಉಪಯೇಮೇ ಹ್ಯಜಾತ್ಮಜಃ ।
ತಸ್ಯಾಂ ಸಸರ್ಜ ದುಹಿತೃಃ ಷೋಡಶಾಮಲಲೋಚನಾಃ ॥

ಅನುವಾದ

ಬ್ರಹ್ಮದೇವರ ಪುತ್ರರಾದ ದಕ್ಷಪ್ರಜಾಪತಿಯು ಮನುಪುತ್ರಿಯಾದ ಪ್ರಸೂತಿಯನ್ನು ವಿವಾಹವಾಗಿ ಆಕೆಯಲ್ಲಿ ಸುಂದರವಾದ ಕಣ್ಣುಗಳುಳ್ಳ ಹದಿನಾರು ಮಂದಿ ಕನ್ಯೆಯರನ್ನು ಪಡೆದನು. ॥47॥

(ಶ್ಲೋಕ - 48)

ಮೂಲಮ್

ತ್ರಯೋದಶಾದಾದ್ಧರ್ಮಾಯ ತಥೈಕಾಮಗ್ನಯೇ ವಿಭುಃ ।
ಪಿತೃಭ್ಯ ಏಕಾಂ ಯುಕ್ತೇಭ್ಯೋ ಭವಾಯೈಕಾಂ ಭವಚ್ಛಿದೇ ॥

ಅನುವಾದ

ಪೂಜ್ಯನಾದ ದಕ್ಷಪ್ರಜಾಪತಿಯು ಅವರಲ್ಲಿ ಹದಿಮೂರು ಕನ್ಯೆಯರನ್ನು ಧರ್ಮನಿಗೂ, ಒಬ್ಬಳನ್ನು ಅಗ್ನಿಗೂ, ಒಬ್ಬಳನ್ನು ಸಮಸ್ತ ಪಿತೃಗಣಗಳಿಗೂ, ಮತ್ತೊಬ್ಬಳನ್ನು ಜಗತ್ಸಂಹಾರಕನೂ, ಸಂಸಾರ ಬಂಧನವನ್ನು ನಾಶಪಡಿಸುವವನೂ ಆದ ಭಗವಾನ್ ಶ್ರೀಶಂಕರನಿಗೂ ವಿವಾಹಮಾಡಿ ಕೊಟ್ಟನು. ॥48॥

(ಶ್ಲೋಕ - 49)

ಮೂಲಮ್

ಶ್ರದ್ಧಾ ಮೈತ್ರೀ ದಯಾ ಶಾಂತಿಸ್ತುಷ್ಟಿಃ ಪುಷ್ಟಿಃ ಕ್ರಿಯೋನ್ನತಿಃ ।
ಬುದ್ಧಿರ್ಮೇಧಾ ತಿತಿಕ್ಷಾ ಹ್ರೀರ್ಮೂರ್ತಿರ್ಧರ್ಮಸ್ಯ ಪತ್ನಯಃ ॥

ಅನುವಾದ

ಅವರಲ್ಲಿ ಶ್ರದ್ಧಾ, ಮೈತ್ರೀ, ದಯಾ, ಶಾಂತಿ, ತುಷ್ಟಿ, ಪುಷ್ಟಿ, ಕ್ರಿಯಾ, ಉನ್ನತಿ, ಬುದ್ಧಿ, ಮೇಧಾ, ತಿತಿಕ್ಷಾ, ಹ್ರೀಃ ಮತ್ತು ಮೂರ್ತಿ ಈ ಹದಿಮೂರು ಮಂದಿ ಧರ್ಮನ ಪತ್ನಿಯರು. ॥49॥

(ಶ್ಲೋಕ - 50)

ಮೂಲಮ್

ಶ್ರದ್ಧಾಸೂತ ಶುಭಂ ಮೈತ್ರೀ ಪ್ರಸಾದಮಭಯಂ ದಯಾ ।
ಶಾಂತಿಃ ಸುಖಂ ಮುದಂ ತುಷ್ಟಿಃ ಸ್ಮಯಂ ಪುಷ್ಟಿರಸೂಯತ ॥

ಅನುವಾದ

ಇವರಲ್ಲಿ ಶ್ರದ್ಧಾ ದೇವಿಯು ಶುಭನಿಗೂ, ಮೈತ್ರಿಯು ಪ್ರಸಾದನಿಗೂ, ದಯೆಯು ಅಭಯಕ್ಕೂ ಶಾಂತಿಯು ಸುಖಕ್ಕೂ, ತುಷ್ಟಿಯು ಮೋದಕ್ಕೂ, ಪುಷ್ಟಿಯು ಅಹಂಕಾರಕ್ಕೂ ಜನ್ಮವಿತ್ತರು. ॥50॥

(ಶ್ಲೋಕ - 51)

ಮೂಲಮ್

ಯೋಗಂ ಕ್ರಿಯೋನ್ನತಿರ್ದರ್ಪಮರ್ಥಂ ಬುದ್ಧಿರಸೂಯತ ।
ಮೇಧಾ ಸ್ಮೃತಿಂ ತಿತಿಕ್ಷಾ ತು ಕ್ಷೇಮಂ ಹ್ರೀಃ ಪ್ರಶ್ರಯಂ ಸುತಮ್ ॥

ಅನುವಾದ

ಕ್ರಿಯೆಯು ಯೋಗಕ್ಕೂ, ಉನ್ನತಿಯು ದರ್ಪವನ್ನೂ, ಬುದ್ಧಿಯು ಅರ್ಥವನ್ನೂ, ಮೇಧೆಯು ಸ್ಮೃತಿಯನ್ನೂ, ತಿತಿಕ್ಷೆಯು ಕ್ಷೇಮವನ್ನೂ, ಹ್ರೀ(ಲಜ್ಜಾ)ದೇವಿಯು ಪ್ರಶ್ರಯ(ವಿನಯ)ವನ್ನೂ ಸಂತಾನವಾಗಿ ಪಡೆದರು. ॥51॥

(ಶ್ಲೋಕ - 52)

ಮೂಲಮ್

ಮೂರ್ತಿಃ ಸರ್ವಗುಣೋತ್ಪತ್ತಿರ್ನರನಾರಾಯಣಾವೃಷೀ ॥

ಅನುವಾದ

ಸಮಸ್ತ ಸದ್ಗುಣಗಳಿಗೂ ನಿಧಿಯಾಗಿದ್ದ ಮೂರ್ತಿದೇವಿಯು ನರ-ನಾರಾಯಣ ಮಹರ್ಷಿಗಳಿಗೆ ಜನ್ಮವನ್ನಿತ್ತಳು. ॥52॥

(ಶ್ಲೋಕ - 53)

ಮೂಲಮ್

ಯಯೋರ್ಜನ್ಮನ್ಯದೋ ವಿಶ್ವಮಭ್ಯನಂದತ್ಸುನಿರ್ವೃತಮ್ ।
ಮನಾಂಸಿ ಕಕುಭೋ ವಾತಾಃ ಪ್ರಸೇದುಃ ಸರಿತೋದ್ರಯಃ ॥

ಅನುವಾದ

ಆ ನರ-ನಾರಾಯಣರು ಅವತರಿಸಿದೊಡನೆಯೇ ಇಡೀ ವಿಶ್ವವೇ ಆನಂದಿತವಾಗಿ ಪ್ರಸನ್ನತೆಯನ್ನು ಪ್ರಕಟಿಸಿತು. ಆಗ ಜನರ ಮನಸ್ಸಿನಲ್ಲೂ, ದಿಕ್ಕುಗಳಲ್ಲೂ, ವಾಯುವಿನಲ್ಲೂ ನದಿ-ಪರ್ವತಗಳಲ್ಲೂ ಪ್ರಸನ್ನತೆ ಹರಡಿತು. ॥53॥

(ಶ್ಲೋಕ - 54)

ಮೂಲಮ್

ದಿವ್ಯವಾದ್ಯಂತ ತೂರ್ಯಾಣಿ ಪೇತುಃ ಕುಸುಮವೃಷ್ಟಯಃ ।
ಮುನಯಸ್ತುಷ್ಟುವುಸ್ತುಷ್ಟಾ ಜಗುರ್ಗಂಧರ್ವಕಿನ್ನರಾಃ ॥

ಅನುವಾದ

ಆಕಾಶದಲ್ಲಿ ಮಂಗಳವಾದ್ಯಗಳು ಮೊಳಗತೊಡಗಿದವು. ದೇವತೆಗಳು ಹೂಮಳೆಯನ್ನು ಸುರಿಸಿದರು. ಗಂಧರ್ವರೂ, ಕಿನ್ನರರೂ ಹಾಡತೊಡಗಿದರು. ॥54॥

(ಶ್ಲೋಕ - 55)

ಮೂಲಮ್

ನೃತ್ಯಂತಿ ಸ್ಮ ಸಿಯೋ ದೇವ್ಯ ಆಸೀತ್ಪರಮಮಂಗಲಮ್ ।
ದೇವಾ ಬ್ರಹ್ಮಾದಯಃ ಸರ್ವೇ ಉಪತಸ್ಥುರಭಿಷ್ಟವೈಃ ॥

ಅನುವಾದ

ಅಪ್ಸರೆಯರು ನೃತ್ಯವಾಡ ತೊಡಗಿದರು. ಹೀಗೆ ಆಗ ಎಲ್ಲೆಲ್ಲಿಯೂ ಆನಂದ- ಮಂಗಳವಾಯಿತು. ಬ್ರಹ್ಮಾದಿ ಸಮಸ್ತ ದೇವತೆಗಳು ದಿವ್ಯಸ್ತೋತ್ರಗಳಿಂದ ಭಗವಂತನನ್ನು ಸ್ತುತಿಸತೊಡಗಿದರು.॥55॥

(ಶ್ಲೋಕ - 56)

ಮೂಲಮ್ (ವಾಚನಮ್)

ದೇವಾ ಊಚುಃ

ಮೂಲಮ್

ಯೋ ಮಾಯಯಾ ವಿರಚಿತಂ ನಿಜಯಾತ್ಮನೀದಂ
ಖೇ ರೂಪಭೇದಮಿವ ತತ್ಪ್ರತಿಚಕ್ಷಣಾಯ ।
ಏತೇನ ಧರ್ಮಸದನೇ ಋಷಿಮೂರ್ತಿನಾದ್ಯ
ಪ್ರಾದುಶ್ಚಕಾರ ಪುರುಷಾಯ ನಮಃ ಪರಸ್ಮೈ ॥

ಅನುವಾದ

ದೇವತೆಗಳು ಹೇಳಿದರು — ಭಗವಂತನೇ! ಆಕಾಶದಲ್ಲಿ ಬಗೆ-ಬಗೆಯ ರೂಪಗಳ ಕಲ್ಪನೆ ಮಾಡಿದಂತೆ, ಭಗವಂತನು ತನ್ನ ಸ್ವರೂಪದಲ್ಲಿಯೇ ಮಾಯಾಶಕ್ತಿಯಿಂದ ಈ ವಿವಿಧ ರೂಪಗಳುಳ್ಳ ಜಗತ್ತನ್ನು ರಚಿಸಿರುವವನು. ಈಗ ತನ್ನ ಸ್ವರೂಪವನ್ನು ಪ್ರಕಾಶ ಪಡಿಸುವುದಕ್ಕಾಗಿ ಈ ನರ-ನಾರಾಯಣ ಮಹರ್ಷಿಗಳ ರೂಪದಲ್ಲಿ ಧರ್ಮನ ಮನೆಯಲ್ಲಿ ಪ್ರಕಟಗೊಂಡಿರುವನು. ಇಂತಹ ಪರಮಪುರುಷನಿಗೆ ನಮೋ ನಮಃ ॥56॥

(ಶ್ಲೋಕ - 57)

ಮೂಲಮ್

ಸೋಯಂ ಸ್ಥಿತಿವ್ಯತಿಕರೋಪಶಮಾಯ ಸೃಷ್ಟಾನ್
ಸತ್ತ್ವೇನ ನಃ ಸುರಗಣಾನನುಮೇಯತತ್ತ್ವಃ ।
ದೃಶ್ಯಾದದಭ್ರಕರುಣೇನ ವಿಲೋಕನೇನ
ಯಚ್ಛ್ರೀನಿಕೇತಮಮಲಂ ಕ್ಷಿಪತಾರವಿಂದಮ್ ॥

ಅನುವಾದ

ಯಾರ ತತ್ತ್ವವನ್ನು ಶಾಸ್ತ್ರದ ಆಧಾರದಿಂದ ನಾವುಗಳು ಕೇವಲ ಅನುಮಾನಿಸಬಹುದೇ ಹೊರತು ಪ್ರತ್ಯಕ್ಷವಾಗಿ ತಿಳಿದುಕೊಳ್ಳುವುದು ಸಾಧ್ಯವಾಗದು ಅಂತಹ ಭಗವಂತನೇ ಜಗತ್ತಿನ ಮರ್ಯಾದೆಯನ್ನು ಕಾಪಾಡು ವುದಕ್ಕಾಗಿಯೇ ಸತ್ತ್ವಗುಣದಿಂದ ದೇವತೆಗಳಾದ ನಮ್ಮನ್ನು ನಿರ್ಮಿಸಿದ್ದಾನೆ. ದಯಾಮೂರ್ತಿಯಾದ ಈ ಭಗವಂತನು ಸಮಸ್ತ ಸೌಂದರ್ಯ-ಲಾವಣ್ಯಗಳಿಗೆ ನೆಲೆಮನೆಯಾದ ತಾವರೆಯ ಹೂವನ್ನೂ ನಾಚಿಸುವಂತಹ ತನ್ನ ಪರಮ ಕರುಣೆಯ ನೋಟವನ್ನು ನಮ್ಮತ್ತ ಬೀರಲಿ. ॥57॥

(ಶ್ಲೋಕ - 58)

ಮೂಲಮ್

ಏವಂ ಸುರಗಣೈಸ್ತಾತ ಭಗವಂತಾವಭಿಷ್ಟುತೌ ।
ಲಬ್ಧಾವಲೋಕೈರ್ಯಯತುರರ್ಚಿತೌ ಗಂಧಮಾದನಮ್ ॥

ಅನುವಾದ

ಪ್ರಿಯ ವಿದುರನೇ! ದೇವತೆಗಳು ಪ್ರಭುವಿನ ಸಾಕ್ಷಾತ್ ದರ್ಶನವನ್ನು ಪಡೆದು ಅವನನ್ನು ಈ ಪ್ರಕಾರವಾಗಿ ಪೂಜಿಸಿ, ಸ್ತುತಿಸಿದರು. ಅನಂತರ ಭಗವಾನ್ ನರ-ನಾರಾಯಣರು ಗಂಧಮಾದನ ಪರ್ವತಕ್ಕೆ ತೆರಳಿದರು. ॥58॥

(ಶ್ಲೋಕ - 59)

ಮೂಲಮ್

ತಾವಿವೌ ವೈ ಭಗವತೋ ಹರೇರಂಶಾವಿಹಾಗತೌ ।
ಭಾರವ್ಯಯಾಯ ಚ ಭುವಃ ಕೃಷ್ಣೌ ಯದುಕುರೂದ್ವಹೌ ॥

ಅನುವಾದ

ಭಗವಾನ್ ಶ್ರೀಹರಿಯ ಅಂಶ ಸಂಭೂತರಾದ ನರ-ನಾರಾಯಣರೇ ಈಗ ಭೂಮಿಯ ಭಾರವನ್ನು ಇಳುಹುವುದಕ್ಕಾಗಿ ಯದು ಕುಲಭೂಷಣನಾದ ಶ್ರೀಕೃಷ್ಣ ಮತ್ತು ಕುರುಕುಲ ಭೂಷಣನಾದ ಅರ್ಜುನ ಎಂಬ ರೂಪಗಳಿಂದ ಅವತರಿಸಿರುವರು. ॥59॥

(ಶ್ಲೋಕ - 60)

ಮೂಲಮ್

ಸ್ವಾಹಾಭಿಮಾನಿನಶ್ಚಾಗ್ನೇರಾತ್ಮಜಾಂಸೀನಜೀಜನತ್ ।
ಪಾವಕಂ ಪವಮಾನಂ ಚ ಶುಚಿಂ ಚ ಹುತಭೋಜನಮ್ ॥

ಅನುವಾದ

ಅಗ್ನಿದೇವರ ಪತ್ನಿಯಾದ ಸ್ವಾಹಾದೇವಿಯು ಅಗ್ನಿಯ ಅಭಿಮಾನಿಗಳಾದ ಪಾವಕ, ಪವಮಾನ ಮತ್ತು ಶುಚಿ ಎಂಬ ಮೂವರು ಪುತ್ರರನ್ನು ಪಡೆದಳು. ಅವರೂ ತಂದೆಯಂತೆ ಹವಿಸ್ಸನ್ನು ಭುಂಜಿಸುವರು. ॥60॥

(ಶ್ಲೋಕ - 61)

ಮೂಲಮ್

ತೇಭ್ಯೋಗ್ನಯಃ ಸಮಭವನ್ ಚತ್ವಾರಿಂಶಚ್ಚ ಪಂಚ ಚ ।
ತ ಏವೈಕೋನಪಂಚಾಶತ್ಸಾಕಂ ಪಿತೃಪಿತಾಮಹೈಃ ॥

ಅನುವಾದ

ಈ ಮೂವರಿಂದಲೇ ನಲವತ್ತೈದು ಪ್ರಕಾರಗಳಾದ ಅಗ್ನಿಗಳು ಉಂಟಾದವು. ಇವರೇ ತಮ್ಮ ಮೂವರು ಪಿತೃಗಳು, ಓರ್ವ ಪಿತಾಮಹ ಸೇರಿ ನಲವತ್ತೊಂಭತ್ತು ಅಗ್ನಿಗಳೆಂದು ಪ್ರಸಿದ್ಧರಾದರು. ॥61॥

(ಶ್ಲೋಕ - 62)

ಮೂಲಮ್

ವೈತಾನಿಕೇ ಕರ್ಮಣಿ ಯನ್ನಾಮಭಿರ್ಬ್ರಹ್ಮವಾದಿಭಿಃ ।
ಆಗ್ನೇಯ್ಯ ಇಷ್ಟಯೋ ಯಜ್ಞೇ ನಿರೂಪ್ಯಂತೇಗ್ನಯಸ್ತು ತೇ ॥

ಅನುವಾದ

ವೇದಜ್ಞ ಬ್ರಾಹ್ಮಣರು ವೈದಿಕ ಯಜ್ಞ ಕರ್ಮದಲ್ಲಿ ಆಗ್ನೇಯಿ ಇಷ್ಟಿಗಳನ್ನು ಇವೇ ನಲವತ್ತೊಂಭತ್ತು ಅಗ್ನಿಗಳ ಹೆಸರಿನಿಂದ ಮಾಡುವರು. ॥62॥

(ಶ್ಲೋಕ - 63)

ಮೂಲಮ್

ಅಗ್ನಿಷ್ವಾತ್ತಾ ಬರ್ಹಿಷದಃ ಸೋಮ್ಯಾಃ ಪಿತರ ಆಜ್ಯಪಾಃ ।
ಸಾಗ್ನಯೋನಗ್ನಯಸ್ತೇಷಾಂ ಪತ್ನೀ ದಾಕ್ಷಾಯಣೀ ಸ್ವಧಾ ॥

ಅನುವಾದ

ಅಗ್ನಿಷ್ವಾತ್ತ, ಬರ್ಹಿಷದ, ಸೋಮಪ ಮತ್ತು ಆಜ್ಯಪ ಇವರು ಪಿತೃಗಳಾಗಿದ್ದಾರೆ. ಇವರಲ್ಲಿ ಸಾಗ್ನಿಕರೂ (ಗೃಹಸ್ಥರು) ಇದ್ದಾರೆ. ನಿರಗ್ನಿಕರೂ (ಸಂನ್ಯಾಸಿಗಳು) ಇದ್ದಾರೆ. ಇವರೆಲ್ಲ ಪಿತೃಗಳ ಪತ್ನಿಯು ದಕ್ಷಕುಮಾರಿಯಾದ ಸ್ವಧಾದೇವಿಯಾಗಿದ್ದಳು.॥63॥

(ಶ್ಲೋಕ - 64)

ಮೂಲಮ್

ತೇಭ್ಯೋ ದಧಾರ ಕನ್ಯೇ ದ್ವೇ ವಯುನಾಂ ಧಾರಿಣೀಂ ಸ್ವಧಾ ।
ಉಭೇ ತೇ ಬ್ರಹ್ಮವಾದಿನ್ಯೌ ಜ್ಞಾನವಿಜ್ಞಾನಪಾರಗೇ ॥

ಅನುವಾದ

ಈ ಪಿತೃಗಳಿಂದ ಸ್ವಧಾದೇವಿಗೆ ಧಾರಿಣೀ ಮತ್ತು ವಯುನಾ ಎಂಬ ಎರಡು ಕನ್ಯೆಗಳಾದರು. ಇವರಿಬ್ಬರೂ ಜ್ಞಾನ-ವಿಜ್ಞಾನ ಪಾರಂಗತೆಯರೂ, ಬ್ರಹ್ಮವಾದಿನಿಯರೂ ಆದರು. ॥64॥

(ಶ್ಲೋಕ - 65)

ಮೂಲಮ್

ಭವಸ್ಯ ಪತ್ನೀ ತು ಸತೀ ಭವಂ ದೇವಮನುವ್ರತಾ ।
ಆತ್ಮನಃ ಸದೃಶಂ ಪುತ್ರಂ ನ ಲೇಭೇ ಗುಣಶೀಲತಃ ॥

ಅನುವಾದ

ಮಹಾದೇವನ ಪತ್ನೀ ಸಾಧ್ವೀಮಣಿಯಾದ ಸತಿದೇವಿಯು ಎಲ್ಲ ರೀತಿಯಿಂದಲೂ ಪತಿನಿಷ್ಠೆಯಿಂದ ಕೂಡಿದವಳಾಗಿ ಪತಿಸೇವಾ ಪರಾಯಣೆಯಾಗಿದ್ದಳು. ಆದರೆ ಆಕೆಗೆ ತನ್ನ ಗುಣಶೀಲಗಳಿಗೆ ಅನುರೂಪನಾದ ಪುತ್ರನು ಆಗಲಿಲ್ಲ. ॥65॥

(ಶ್ಲೋಕ - 66)

ಮೂಲಮ್

ಪಿತರ್ಯಪ್ರತಿರೂಪೇ ಸ್ವೇ ಭವಾಯಾನಾಗಸೇ ರುಷಾ ।
ಅಪ್ರೌಢೈವಾತ್ಮನಾತ್ಮಾನಮಜಹಾದ್ಯೋಗಸಂಯುತಾ ॥

ಅನುವಾದ

ಏಕೆಂದರೆ, ಶಿವನು ನಿರಪರಾಧಿಯಾಗಿದ್ದರೂ ಸತೀದೇವಿಯು ತನ್ನ ತಂದೆಯಾದ ದಕ್ಷಪ್ರಜಾ ಪತಿಯು ಆತನಿಗೆ ಪ್ರತಿಕೂಲವನ್ನು ಆಚರಿಸಿದ್ದರಿಂದ ಕ್ರುದ್ಧಳಾಗಿ ಆಕೆಯು ತಾರುಣ್ಯದಲ್ಲಿಯೇ ಯೋಗಸಮಾಧಿಯಿಂದ ತನ್ನ ದೇಹವನ್ನು ತ್ಯಜಿಸಿದ್ದಳು.॥66॥

ಅನುವಾದ (ಸಮಾಪ್ತಿಃ)

ಮೊದಲನೆಯ ಅಧ್ಯಾಯವು ಮುಗಿಯಿತು. ॥1॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಚತುರ್ಥಸ್ಕಂಧೇ ವಿದುರ-ಮೈತ್ರೇಯ ಸಂವಾದೇ ಪ್ರಥಮೋಽಧ್ಯಾಯಃ ॥1॥