೩೩

[ಮೂವತ್ತಮೂರನೆಯ ಅಧ್ಯಾಯ]

ಭಾಗಸೂಚನಾ

ದೇವಹೂತಿಗೆ ತತ್ತ್ವಜ್ಞಾನವುಂಟಾಗಿ ಮೋಕ್ಷಪದವಿ ಪ್ರಾಪ್ತವಾದುದು

(ಶ್ಲೋಕ - 1)

ಮೂಲಮ್ (ವಾಚನಮ್)

ಮೈತ್ರೇಯ ಉವಾಚ

ಮೂಲಮ್

ಏವಂ ನಿಶಮ್ಯ ಕಪಿಲಸ್ಯ ವಚೋ ಜನಿತ್ರೀ
ಸಾ ಕರ್ದಮಸ್ಯ ದಯಿತಾ ಕಿಲ ದೇವಹೂತಿಃ ।
ವಿಸ್ರಸ್ತಮೋಹಪಟಲಾ ತಮಭಿಪ್ರಣಮ್ಯ
ತುಷ್ಟಾವ ತತ್ತ್ವವಿಷಯಾಂಕಿತಸಿದ್ಧಿ ಭೂಮಿಮ್ ॥

ಅನುವಾದ

ಶ್ರೀಮೈತ್ರೇಯರು ಹೇಳುತ್ತಾರೆ ಅಯ್ಯಾ ! ವಿದುರನೇ ! ಶ್ರೀಕಪಿಲಭಗವಂತನ ಈ ವಚನಗಳನ್ನು ಕೇಳಿ ಕರ್ದಮರ ಪ್ರಿಯಪತ್ನಿಯಾದ ಮಾತೆ ದೇವಹೂತಿಯ ಮೋಹದ ತೆರೆ ಕಳಚಿಹೋಯಿತು. ಆಕೆಯು ತತ್ತ್ವಪ್ರತಿಪಾದಕವಾದ ಸಾಂಖ್ಯಶಾಸಜ್ಞಾನದ ಆಧಾರ ಭೂಮಿಯಾಗಿರುವ ಶ್ರೀಕಪಿಲದೇವರಿಗೆ ನಮಸ್ಕಾರಮಾಡಿ ಅವನನ್ನು ಸ್ತುತಿಸತೊಡಗಿದಳು.॥1॥

(ಶ್ಲೋಕ - 2)

ಮೂಲಮ್ (ವಾಚನಮ್)

ದೇವಹೂತಿರುವಾಚ

ಮೂಲಮ್

ಅಥಾಪ್ಯಜೋಂತಃಸಲಿಲೇ ಶಯಾನಂ
ಭೂತೇಂದ್ರಿಯಾರ್ಥಾತ್ಮಮಯಂ ವಪುಸ್ತೇ ।
ಗುಣಪ್ರವಾಹಂ ಸದಶೇಷಬೀಜಂ
ದಧ್ಯೌ ಸ್ವಯಂ ಯಜ್ಜ ಠರಾಬ್ಜ ಜಾತಃ ॥

ಅನುವಾದ

ದೇವಹೂತಿಯು ಇಂತೆಂದಳು ಪ್ರಭುವೇ ! ಬ್ರಹ್ಮದೇವರು ನಿನ್ನ ನಾಭಿಕಮಲದಿಂದಲೇ ಪ್ರಕಟರಾಗಿದ್ದರು. ಅವರು ಪ್ರಳಯ ಕಾಲದಲ್ಲಿ ಪವಡಿಸಿದ್ದ ಪಂಚಭೂತಗಳೂ, ಇಂದ್ರಿಯಗಳೂ, ಶಬ್ದಾದಿ ವಿಷಯಗಳೂ, ಮನೋಮಯವಾದ ನಿನ್ನ ವಿಗ್ರಹವನ್ನೇ ಧ್ಯಾನಮಾಡಿದರು. ಸತ್ತ್ವಾದಿಗುಣಗಳ ಪ್ರವಾಹದಿಂದ ಕೂಡಿರುವ, ಸತ್ತ್ವರೂಪವೂ, ಕಾರ್ಯ-ಕಾರಣಗಳೆರಡಕ್ಕೂ ಬೀಜ ರೂಪನೂ ಆದ ನಿನ್ನ ಮಂಗಳವಿಗ್ರಹವನ್ನು ಅವರು ಧ್ಯಾನಮಾಡಿದರು.॥2॥

(ಶ್ಲೋಕ - 3)

ಮೂಲಮ್

ಸ ಏವ ವಿಶ್ವಸ್ಯ ಭವಾನ್ವಿಧತ್ತೇ
ಗುಣಪ್ರವಾಹೇಣ ವಿಭಕ್ತವೀರ್ಯಃ ।
ಸರ್ಗಾದ್ಯ ನೀಹೋವಿತಥಾಭಿಸಂಧಿ-
ರಾತ್ಮೇಶ್ವರೋತರ್ಕ್ಯಸಹಸ್ರಶಕ್ತಿಃ ॥

ಅನುವಾದ

ನೀನು ನಿಷ್ಕ್ರಿಯನೂ, ಸತ್ಯಸಂಕಲ್ಪನೂ, ಸಮಸ್ತ ಜೀವರ ಪ್ರಭುವೂ, ಸಾವಿರಾರು ಅಚಿಂತ್ಯ ಶಕ್ತಿಗಳಿಂದಲೂ ಸಂಪನ್ನ ನಾಗಿರುವೆ. ತನ್ನ ಶಕ್ತಿಯನ್ನು ಗುಣಪ್ರವಾಹರೂಪದಿಂದ ಬ್ರಹ್ಮಾದಿ ಅನಂತಮೂರ್ತಿಗಳಲ್ಲಿ , ವಿಭಕ್ತಗೊಳಿಸಿ, ಅವುಗಳ ಮೂಲಕ ಸ್ವತಃ ವಿಶ್ವದ ರಚನಾದಿಗಳನ್ನು ಮಾಡುತ್ತಿರುವೆ. ॥ 3 ॥

(ಶ್ಲೋಕ - 4)

ಮೂಲಮ್

ಸ ತ್ವಂ ಭೃತೋ ಮೇ ಜಠರೇಣ ನಾಥ
ಕಥಂ ನು ಯಸ್ಯೋದರ ಏತದಾಸೀತ್ ।
ವಿಶ್ವಂ ಯುಗಾಂತೇ ವಟಪತ್ರ ಏಕಃ
ಶೇತೇ ಸ್ಮ ಮಾಯಾಶಿಶುರಂಘ್ರಿಪಾನಃ ॥

ಅನುವಾದ

ಸ್ವಾಮಿ ! ಯಾರ ಉದರದಲ್ಲಿ ಪ್ರಳಯಕಾಲವು ಬಂದಾಗ ಈ ಇಡೀ ಪ್ರಪಂಚವು ಲೀನವಾಗಿ ಹೋಗುತ್ತದೋ, ಯಾರು ಕಲ್ಪಾಂತ್ಯದಲ್ಲಿ ಮಾಯಾ ಶಿಶುವಿನ ರೂಪದಲ್ಲಿ ಕಾಲುಹೆಬ್ಬೆರಳನ್ನು ಚೀಪುತ್ತಾ ಒಬ್ಬಂಟಿಗನಾಗಿ ವಟವೃಕ್ಷದ ಎಲೆಯಮೇಲೆ ಪವಡಿಸಿರುವನೋ, ಅಂತಹ ನಿನ್ನನ್ನು ನಾನು ಗರ್ಭದಲ್ಲಿ ಧರಿಸಿದೆನಲ್ಲ ! ಇದೆಂತಹ ಆಶ್ಚರ್ಯ ವಾದುದು. ॥ 4॥

(ಶ್ಲೋಕ - 5)

ಮೂಲಮ್

ತ್ವಂ ದೇಹತಂತ್ರಃ ಪ್ರಶಮಾಯ ಪಾಪ್ಮನಾಂ
ನಿದೇಶಭಾಜಾಂ ಚ ವಿಭೋ ವಿಭೂತಯೇ ।
ಯಥಾವತಾರಾಸ್ತವ ಸೂಕರಾದಯ-
ಸ್ತಥಾಯಮಪ್ಯಾತ್ಮಪಥೋಪಲಬ್ಧಯೇ ॥

ಅನುವಾದ

ವಿಭುವೇ! ನೀನು ಪಾಪಿಗಳನ್ನು ದಮನಗೊಳಿಸಲು ಮತ್ತು ನಿನ್ನ ಆಜ್ಞಾಕಾರಿಯಾದ ಭಕ್ತರ ಅಭ್ಯುದಯ ಮತ್ತು ನಿಃಶ್ರೇಯಸ್ಸನ್ನು ಉಂಟುಮಾಡುವುದಕ್ಕಾಗಿ ಸ್ವೇಚ್ಛೆಯಿಂದ ದೇಹವನ್ನು ಧರಿಸುತ್ತೀಯೆ. ವರಾಹವೇ ಮುಂತಾದ ಅವತಾರಗಳಂತೆಯೇ ಈ ಕಪಿಲಾವತಾರವನ್ನು ಮುಮುಕ್ಷುಗಳಿಗೆ ಜ್ಞಾನ ಮಾರ್ಗವನ್ನು ತೋರುವುದಕ್ಕಾಗಿಯೇ ಕೈಗೊಂಡಿದ್ದೀಯೆ.॥5॥

(ಶ್ಲೋಕ - 6)

ಮೂಲಮ್

ಯನ್ನಾಮಧೇಯಶ್ರವಣಾನುಕೀರ್ತನಾದ್
ಯತ್ಪ್ರಹ್ವಣಾದ್ಯತ್ಸ್ಮರಣಾದಪಿ ಕ್ವಚಿತ್ ।
ಶ್ವಾದೋಪಿ ಸದ್ಯಃ ಸವನಾಯ ಕಲ್ಪತೇ
ಕುತಃ ಪುನಸ್ತೇ ಭಗವನ್ನು ದರ್ಶನಾತ್ ॥

ಅನುವಾದ

ಭಗವಂತಾ ! ನಿನ್ನ ನಾಮಗಳನ್ನು ಶ್ರವಣಿಸಿದರೂ, ಕೀರ್ತಿಸಿದರೂ ಅಥವಾ ಅಪ್ಪಿ-ತಪ್ಪಿ ಎಂದಾದರೂ ನಿನ್ನನ್ನು ವಂದಿಸಿ, ಸ್ಮರಿಸಿದರೂ ಚಾಂಡಾಲನೂ ಕೂಡ ಸೋಮಯಾಜಿ ಬ್ರಾಹ್ಮಣನಿಗೆ ಸಮಾನ ವಾಗಿ ಪೂಜ್ಯನಾಗುತ್ತಾನೆ. ಮತ್ತೆ ನಿನ್ನ ದರ್ಶನದಿಂದ ಕೃತಕೃತ್ಯರಾದ ಮನುಷ್ಯರ ಕುರಿತು ಹೇಳುವುದೇನಿದೆ?॥6॥

(ಶ್ಲೋಕ - 7)

ಮೂಲಮ್

ಅಹೋ ಬತ ಶ್ವಪಚೋತೋ ಗರೀಯಾನ್
ಯಜ್ಜಿಹ್ವಾಗ್ರೇ ವರ್ತತೇ ನಾಮ ತುಭ್ಯಮ್ ।
ತೇಪುಸ್ತಪಸ್ತೇ ಜುಹುವುಃ ಸಸ್ನುರಾರ್ಯಾ
ಬ್ರಹ್ಮಾನೂಚುರ್ನಾಮ ಗೃಣಂತಿ ಯೇ ತೇ ॥

ಅನುವಾದ

ಆಹಾ ! ಆತನ ನಾಲಿಗೆಯ ತುದಿಯಲ್ಲಿ ನಿನ್ನ ನಾಮವು ವಿರಾಜಮಾನವಾಗಿದೆ. ಅದರಿಂದ ಆ ಚಾಂಡಾಲನೂ ಸರ್ವಶ್ರೇಷ್ಠನೇ ಆಗಿದ್ದಾನೆ. ನಿನ್ನ ನಾಮಗಳನ್ನು ಉಚ್ಚರಿಸಿದ ಶ್ರೇಷ್ಠ ಪುರುಷರು ತಪಸ್ಸು, ಹೋಮ, ತೀರ್ಥಸ್ನಾನ, ಸದಾಚಾರ ಪಾಲನೆ ಮತ್ತು ವೇದಾಧ್ಯಯನ ಎಲ್ಲವನ್ನು ಮಾಡಿದಂತೆಯೇ ಸರಿ.॥7॥

(ಶ್ಲೋಕ - 8)

ಮೂಲಮ್

ತಂ ತ್ವಾಮಹಂ ಬ್ರಹ್ಮ ಪರಂ ಪುಮಾಂಸಂ
ಪ್ರತ್ಯಕ್ಸ್ರೋತಸ್ಯಾತ್ಮನಿ ಸಂವಿಭಾವ್ಯಮ್ ।
ಸ್ವತೇಜಸಾ ಧ್ವಸ್ತಗುಣಪ್ರವಾಹಂ
ವಂದೇ ವಿಷ್ಣುಂ ಕಪಿಲಂ ವೇದಗರ್ಭಮ್ ॥

ಅನುವಾದ

ಸ್ವಾಮಿ ! ನೀನು ಸಾಕ್ಷಾತ್ ಪರಬ್ರಹ್ಮನಾಗಿರುವೆ. ಪರಮ ಪುರುಷನೂ ನೀನೇ. ಚಿತ್ತವೃತ್ತಿಗಳ ಪ್ರವಾಹವನ್ನು ಅಂತರ್ಮುಖ ವಾಗಿಸಿ ಅಂತಃಕರಣದಲ್ಲಿ ನಿನ್ನನ್ನೇ ಚಿಂತಿಸಲಾಗುವುದು. ನೀನು ತನ್ನ ತೇಜದಿಂದ ಮಾಯೆಯ ಕಾರ್ಯವಾದ ಗುಣಪ್ರವಾಹವನ್ನು ಶಾಂತಗೊಳಿಸುವೆ ಹಾಗೂ ನಿನ್ನ ಉದರದಲ್ಲೇ ಸಮಸ್ತ ವೇದತತ್ತ್ವ ಗಳು ಅಡಗಿವೆ. ಇಂತಹ ಸಾಕ್ಷಾತ್ ವಿಷ್ಣುರೂಪನಾದ ನಿನಗೆ ನಾನು ನಮಸ್ಕರಿಸುತ್ತೇನೆ.॥8॥

(ಶ್ಲೋಕ - 9)

ಮೂಲಮ್ (ವಾಚನಮ್)

ಮೈತ್ರೇಯ ಉವಾಚ

ಮೂಲಮ್

ಈಡಿತೋ ಭಗವಾನೇವಂ ಕಪಿಲಾಖ್ಯಃ ಪರಃ ಪುಮಾನ್ ।
ವಾಚಾವಿಕ್ಲವಯೇತ್ಯಾಹ ಮಾತರಂ ಮಾತೃವತ್ಸಲಃ ॥

ಅನುವಾದ

ಶ್ರೀಮೈತ್ರೇಯರು ಹೇಳುತ್ತಾರೆ ತಾಯಿಯು ಹೀಗೆ ಸ್ತುತಿಸಿ ದಾಗ ಮಾತೃವತ್ಸಲನಾದ ಪರಮಪುರುಷ ಭಗವಾನ್ ಕಪಿಲ ದೇವರು ಗಂಭೀರವಾದ ವಾಣಿಯಿಂದ ಇಂತೆಂದರು.॥9॥

(ಶ್ಲೋಕ - 10)

ಮೂಲಮ್ (ವಾಚನಮ್)

ಕಪಿಲ ಉವಾಚ

ಮೂಲಮ್

ಮಾರ್ಗೇಣಾನೇನ ಮಾತಸ್ತೇ ಸುಸೇವ್ಯೇನೋದಿತೇನ ಮೇ ।
ಆಸ್ಥಿತೇನ ಪರಾಂ ಕಾಷ್ಠಾ ಮಚಿರಾದವರೋತ್ಸ್ಯಸಿ ॥

ಅನುವಾದ

ಶ್ರೀಕಪಿಲಭಗವಂತನು ಹೇಳುತ್ತಾನೆ ಅಮ್ಮಾ ! ನಾನು ನಿನಗೆ ಹೇಳಿದ ಈ ಸುಗಮ ಮಾರ್ಗವನ್ನು ಅವಲಂಬಿಸುವುದರಿಂದ ನೀನು ಶೀಘ್ರವಾಗಿ ಪರಮಪದವನ್ನು ಪಡೆದುಕೊಳ್ಳುವೆ.॥10॥

(ಶ್ಲೋಕ - 11)

ಮೂಲಮ್

ಶ್ರದ್ಧತ್ಸ್ವೈತನ್ಮತಂ ಮಹ್ಯಂ ಜುಷ್ಟಂ ಯದ್ಬ್ರಹ್ಮವಾದಿಭಿಃ ।
ಯೇನ ಮಾಮಭವಂ ಯಾಯಾ ಮೃತ್ಯುಮೃಚ್ಛಂತ್ಯತದ್ವಿದಃ ॥

ಅನುವಾದ

ನನ್ನ ಈ ಮತದಲ್ಲಿ ಶ್ರದ್ಧೆಯನ್ನಿಡು. ಬ್ರಹ್ಮವಾದಿ ಜನರು ಇದನ್ನು ಸೇವನೆಮಾಡಿರುವರು. ಇದರ ಮೂಲಕ ನೀನು ನನ್ನ ಜನ್ಮ-ಮರಣ ರಹಿತವಾದ ಸ್ವರೂಪವನ್ನು ಪಡೆಯುವೆ. ಈ ಮತವನ್ನು ತಿಳಿಯ ದವರು ಜನ್ಮ-ಮರಣದ ಚಕ್ರದಲ್ಲಿ ಸಿಲುಕಿಕೊಳ್ಳುವರು.॥11॥

(ಶ್ಲೋಕ - 12)

ಮೂಲಮ್ (ವಾಚನಮ್)

ಮೈತ್ರೇಯ ಉವಾಚ

ಮೂಲಮ್

ಇತಿ ಪ್ರದರ್ಶ್ಯ ಭಗವಾನ್ಸತೀಂ ತಾಮಾತ್ಮನೋ ಗತಿಮ್ ।
ಸ್ವಮಾತ್ರಾ ಬ್ರಹ್ಮವಾದಿನ್ಯಾ ಕಪಿಲೋನುಮತೋ ಯಯೌ ॥

ಅನುವಾದ

ಶ್ರೀಮೈತ್ರೇಯ ಮಹರ್ಷಿಗಳು ಹೇಳುತ್ತಾರೆ ವಿದುರನೇ ! ಶ್ರೀಕಪಿಲಭಗವಂತನು ಹೀಗೆ ತನ್ನ ಶ್ರೇಷ್ಠವಾದ ಆತ್ಮಜ್ಞಾನವನ್ನು ಉಪದೇಶಿಸಿ, ಬ್ರಹ್ಮವಾದಿನಿಯಾದ ಆ ತಾಯಿಯ ಅನುಮತಿಯನ್ನು ಪಡೆದು ಅಲ್ಲಿಂದ ಹೊರಟು ಹೋದನು.॥12॥

(ಶ್ಲೋಕ - 13)

ಮೂಲಮ್

ಸಾ ಚಾಪಿ ತನಯೋಕ್ತೇನ ಯೋಗಾದೇಶೇನ ಯೋಗಯುಕ್ ।
ತಸ್ಮಿನ್ನಾಶ್ರಮ ಆಪೀಡೇ ಸರಸ್ವತ್ಯಾಃ ಸಮಾಹಿತಾ ॥

ಅನುವಾದ

ಆಗ ದೇವಹೂತಿಯೂ ಸರಸ್ವತಿನದಿಗೆ ಶಿರೋಭೂಷದಂತಿದ್ದ ತನ್ನ ಆಶ್ರಮದಲ್ಲಿ ಪುತ್ರನು ಉಪದೇಶಿಸಿರುವ ಯೋಗಸಾಧನೆಯ ಮೂಲಕ ಯೋಗಾಭ್ಯಾಸವನ್ನು ಮಾಡುತ್ತಾ ಸಮಾಧಿಯಲ್ಲಿ ಸ್ಥಿತಳಾದಳು. ॥13॥

(ಶ್ಲೋಕ - 14)

ಮೂಲಮ್

ಅಭೀಕ್ಷ್ಣಾವಗಾಹಕಪಿಶಾನ್ ಜಟಿಲಾನ್ಕುಟಿಲಾಲಕಾನ್ ।
ಆತ್ಮಾನಂ ಚೋಗ್ರತಪಸಾ ಬಿಭ್ರತೀ ಚೀರಿಣಂ ಕೃಶಮ್ ॥

ಅನುವಾದ

ತ್ರಿಕಾಲಸ್ನಾನ ಮಾಡುವುದರಿಂದ ಅವಳ ಗುಂಗುರುಕೂದಲುಗಳು ಜಟೆಗಟ್ಟಿದವು. ನಾರುಮಡಿಯನ್ನು ಧರಿಸಿದ ಆಕೆಯ ದೇಹವು ಉಗ್ರವಾದ ತಪಸ್ಸಿನಿಂದಾಗಿ ದುರ್ಬಲವಾಯಿತು.॥14॥

(ಶ್ಲೋಕ - 15)

ಮೂಲಮ್

ಪ್ರಜಾಪತೇಃ ಕರ್ದಮಸ್ಯ ತಪೋಯೋಗವಿಜೃಂಭಿತಮ್ ।
ಸ್ವಗಾರ್ಹಸ್ಥ್ಯಮನೌಪಮ್ಯಂ ಪ್ರಾರ್ಥ್ಯಂ ವೈಮಾನಿಕೈರಪಿ ॥

ಅನುವಾದ

ಆಕೆಯು ಕರ್ದಮರ ತಪಸ್ಸು ಮತ್ತು ಯೋಗ ಬಲಗಳಿಂದ ದೊರಕಿದ್ದ, ದೇವತೆಗಳೂ ಆಶಿಸುತ್ತಿದ್ದ, ಅನುಪಮ ವಾದ ಗಾರ್ಹಸ್ಥ್ಯ ಸುಖವನ್ನು ತೊರೆದುಬಿಟ್ಟಳು.॥15॥

(ಶ್ಲೋಕ - 16)

ಮೂಲಮ್

ಪಯಃೇನನಿಭಾಃ ಶಯ್ಯಾ ದಾಂತಾ ರುಕ್ಮಪರಿಚ್ಛದಾಃ ।
ಆಸನಾನಿ ಚ ಹೈಮಾನಿ ಸುಸ್ಪರ್ಶಾಸ್ತರಣಾನಿ ಚ ॥

(ಶ್ಲೋಕ - 17)

ಮೂಲಮ್

ಸ್ವಚ್ಛ ಸ್ಫಟಿಕಕುಡ್ಯೇಷು ಮಹಾಮಾರಕತೇಷು ಚ ।
ರತ್ನಪ್ರದೀಪಾ ಆಭಾಂತಿ ಲಲನಾರತ್ನಸಂಯುತಾಃ ॥

(ಶ್ಲೋಕ - 18)

ಮೂಲಮ್

ಗೃಹೋದ್ಯಾನಂ ಕುಸುಮಿತೈ ರಮ್ಯಂ ಬಹ್ವಮರದ್ರುಮೈಃ ।
ಕೂಜದ್ವಿಹಂಗಮಿಥುನಂ ಗಾಯನ್ಮತ್ತಮಧುವ್ರತಮ್ ॥

(ಶ್ಲೋಕ - 19)

ಮೂಲಮ್

ಯತ್ರ ಪ್ರವಿಷ್ಟಮಾತ್ಮಾನಂ ವಿಬುಧಾನುಚರಾ ಜಗುಃ ।
ವಾಪ್ಯಾಮುತ್ಪಲಗಂಧಿನ್ಯಾಂ ಕರ್ದಮೇನೋಪಲಾಲಿತಮ್ ॥

(ಶ್ಲೋಕ - 20)

ಮೂಲಮ್

ಹಿತ್ವಾ ತದೀಪ್ಸಿತತಮಮಪ್ಯಾಖಂಡ ಲಯೋಷಿತಾಮ್ ।
ಕಿಂಚಿಚ್ಚಕಾರ ವದನಂ ಪುತ್ರವಿಶ್ಲೇಷಣಾತುರಾ॥

ಅನುವಾದ

ಅದ ರಲ್ಲಿ ಹಾಲಿನ ನೊರೆಯಂತೆ ಬಿಳುಪಾದ ಮೃದು ಹಾಸಿಗೆಗಳು, ಹಸ್ತಿ ದಂತದಿಂದ ಕೂಡಿದ ಮಂಚಗಳೂ, ಸುವರ್ಣದ ಪಾತ್ರೆಗಳು, ಮೆದುವಾದ ಮೆತ್ತೆಗಳಿಂದ ಕೂಡಿದ ಚಿನ್ನದ ಸಿಂಹಾಸನಗಳೂ, ಮಹಾಮರಕತಮಣಿಗಳಿಂದ ಅಲಂಕೃತವಾಗಿದ್ದ ಸ್ಫಟಿಕದ ಸ್ವಚ್ಛ ಗೋಡೆಗಳಲ್ಲಿ ರತ್ನಗಳಿಂದ ಕೆತ್ತಿದ ರಮಣಿಯರ ಮೂರ್ತಿಗಳಿಂದ ಕೂಡಿದ್ದು, ಮಣಿಮಯ ದೀಪಗಳು ಬೆಳಗುತ್ತಿದ್ದವು. ಅದು ಹೂ ಗೊಂಚಲುಗಳಿಂದ ಕಂಗೊಳಿಸುವ ಅನೇಕ ದಿವ್ಯ ವೃಕ್ಷಗಳಿಂದ ಶೋಭಿತವಾಗಿತ್ತು. ಅವುಗಳಲ್ಲಿ ಅನೇಕ ಪ್ರಕಾರದ ಪಕ್ಷಿಗಳು ಕಲರವ ಮಾಡುತ್ತಾ, ಮತ್ತ ಭೃಂಗಗಳು ಝೇಂಕರಿಸುತ್ತಿದ್ದವು. ಕಮಲಗಳ ಕಂಪಿನಿಂದ ಸುವಾಸಿತವಾಗಿದ್ದ ತಿಳಿಗೊಳಗಳಿಂದಲೂ ಸೊಗಸು ಗೊಂಡು, ಕರ್ದಮರಿಂದ ಮುದ್ದಿಸಲ್ಪಟ್ಟು ತಾನು ಅಲ್ಲಿಗೆ ವಿಹಾರ ಕ್ಕಾಗಿ ಪ್ರವೇಶಿಸಿದೊಡನೆ ಗಂಧರ್ವಗಣಗಳು ಸ್ತುತಿಸುತ್ತಿರುವಾಗ, ಇಂದ್ರನ ಮಡದಿಯರೂ ಆಸೆ ಪಡುತ್ತಿದ್ದ ಆ ಗೃಹೋದ್ಯಾನಗಳ ಮಮತೆಯನ್ನು ಆಕೆಯು ತ್ಯಜಿಸಿಬಿಟ್ಟಿದ್ದಳು. ಆದರೆ ಪುತ್ರವಿ ಯೋಗದ ದುಃಖವುಮಾತ್ರ ಆಕೆಯ ಮುಖದಲ್ಲಿ ಕೊಂಚ ಕಾಣಿಸುತ್ತಿತ್ತು.॥16-20॥

(ಶ್ಲೋಕ - 21)

ಮೂಲಮ್

ವನಂ ಪ್ರವ್ರಜಿತೇ ಪತ್ಯಾವಪತ್ಯವಿರಹಾತುರಾ ।
ಜ್ಞಾತತತ್ತ್ವಾಪ್ಯಭೂನ್ನಷ್ಟೇ ವತ್ಸೇ ಗೌರಿವ ವತ್ಸಲಾ ॥

ಅನುವಾದ

ಪತಿಯು ಅರಣ್ಯಕ್ಕೆ ತೆರಳಿದ ಬಳಿಕ ಪುತ್ರನೂ ಅಗಲಿ ದೂರ ಹೋಗಲು ಆಕೆಯು ಆತ್ಮಜ್ಞಾನಸಂಪನ್ನಳಾಗಿದ್ದರೂ ಕರುವನ್ನು ಅಗಲಿದ ಹಸುವಿನಂತೆ ಕಳವಳಗೊಂಡಳು.॥21॥

(ಶ್ಲೋಕ - 22)

ಮೂಲಮ್

ತಮೇವ ಧ್ಯಾಯತೀ ದೇವಮಪತ್ಯಂ ಕಪಿಲಂ ಹರಿಮ್ ।
ಬಭೂವಾಚಿರತೋ ವತ್ಸ ನಿಃಸ್ಪೃಹಾ ತಾದೃಶೇ ಗೃಹೇ ॥

ಅನುವಾದ

ವಿದುರನೇ ! ಆದರೆ ಆಕೆಯು ತನ್ನ ಪುತ್ರನಾಗಿದ್ದ ಕಪಿಲರೂಪಿಯಾದ ಶ್ರೀಹರಿಯ ಧ್ಯಾನದಲ್ಲಿ ತೊಡಗಿ ಕೆಲವೇ ದಿನಗಳಲ್ಲಿ ವೈರಾಗ್ಯಸಂಪನ್ನೆಯಾಗಿ ಆ ವೈಭವದ ಮನೆಯನ್ನೂ ಬಿಟ್ಟುಬಿಟ್ಟಳು.॥22॥

(ಶ್ಲೋಕ - 23)

ಮೂಲಮ್

ಧ್ಯಾಯತೀ ಭಗವದ್ರೂಪಂ ಯದಾಹ ಧ್ಯಾನಗೋಚರಮ್ ।
ಸುತಃ ಪ್ರಸನ್ನವದನಂ ಸಮಸ್ತವ್ಯಸ್ತಚಿಂತಯಾ ॥

ಅನುವಾದ

ಅನಂತರ ಆಕೆಯು ಶ್ರೀಕಪಿಲಭಗವಂತನು ತನಗೆ ಧ್ಯಾನಯೋಗ್ಯವಾದ ಪ್ರಸನ್ನ ವದನಾರವಿಂದದಿಂದ ಕೂಡಿದ ಸ್ವರೂಪವನ್ನು ವರ್ಣನೆಮಾಡಿದ ಸ್ವರೂಪದ ಒಂದೊಂದು ಅವಯವವನ್ನೂ ಮತ್ತು ಇಡೀ ವಿಗ್ರಹ ವನ್ನು ಚಿಂತಿಸುತ್ತಾ ಧ್ಯಾನಮಗ್ನಳಾದಳು.॥23॥

(ಶ್ಲೋಕ - 24)

ಮೂಲಮ್

ಭಕ್ತಿಪ್ರವಾಹಯೋಗೇನ ವೈರಾಗ್ಯೇಣ ಬಲೀಯಸಾ ।
ಯುಕ್ತಾನುಷ್ಠಾನಜಾತೇನ ಜ್ಞಾನೇನ ಬ್ರಹ್ಮಹೇತುನಾ ॥

(ಶ್ಲೋಕ - 25)

ಮೂಲಮ್

ವಿಶುದ್ಧೇನ ತದಾತ್ಮಾನಮಾತ್ಮನಾ ವಿಶ್ವತೋಮುಖಮ್ ।
ಸ್ವಾನುಭೂತ್ಯಾ ತಿರೋಭೂತಮಾಯಾಗುಣವಿಶೇಷಣಮ್ ॥

ಅನುವಾದ

ಭಗವದ್ಭಕ್ತಿಯ ಪ್ರವಾಹ, ಪ್ರಬಲವಾದ ವೈರಾಗ್ಯ, ಯಥೋಚಿತವಾದ ಕರ್ಮಾನು ಷ್ಠಾನಗಳಿಂದ ಉಂಟಾದ ಬ್ರಹ್ಮಸಾಕ್ಷಾತ್ಕಾರವನ್ನುಂಟು ಮಾಡಿಸುವ ಜ್ಞಾನದಿಂದ ಚಿತ್ತವು ಶುದ್ಧವಾದ್ದರಿಂದ ಆಕೆಯು ತನ್ನ ಸ್ವರೂಪ ಪ್ರಕಾಶದಿಂದ ಮಾಯೆಯ ಆವರಣವನ್ನು ಕಳಚಿ ಹಾಕುವ ಸರ್ವ ವ್ಯಾಪಕನಾದ ಪರಮಾತ್ಮನ ಧ್ಯಾನದಲ್ಲಿ ಮುಳುಗಿಹೋದಳು.॥24-25॥

(ಶ್ಲೋಕ - 26)

ಮೂಲಮ್

ಬ್ರಹ್ಮಣ್ಯವಸ್ಥಿತಮತಿರ್ಭಗವತ್ಯಾತ್ಮಸಂಶ್ರಯೇ ।
ನಿವೃತ್ತಜೀವಾಪತ್ತಿತ್ವಾತ್ಕ್ಷೀಣಕ್ಲೇಶಾಪ್ತನಿರ್ವೃತಿಃ ॥

ಅನುವಾದ

ಹೀಗೆ ಜೀವಕ್ಕೆ ಅಧಿಷ್ಠಾನವಾಗಿರುವ ಪರಬ್ರಹ್ಮನಾದ ಭಗವಂತನಲ್ಲಿ ಬುದ್ಧಿಯು ನೆಲೆಗೊಳ್ಳಲು ಆಕೆಯ ಜೀವಭಾವವು ಕಳೆದುಹೋಯಿತು ಹಾಗೂ ಸಮಸ್ತ ಕ್ಲೇಶಗಳಿಂದ ಮುಕ್ತಳಾಗಿ ಪರಮಾನಂದದಲ್ಲಿ ಮಗ್ನಳಾದಳು.॥26॥

(ಶ್ಲೋಕ - 27)

ಮೂಲಮ್

ನಿತ್ಯಾರೂಢಸಮಾಧಿತ್ವಾತ್ಪರಾವೃತ್ತಗುಣಭ್ರಮಾ
ನ ಸಸ್ಮಾರ ತದಾತ್ಮಾನಂ ಸ್ವಪ್ನೇ ದೃಷ್ಟಮಿವೋತ್ಥಿತಃ ॥

ಅನುವಾದ

ಈಗ ನಿರಂತರ ಸಮಾಧಿಸ್ಥಳಾದ ಕಾರಣ ಆಕೆಗೆ ವಿಷಯಗಳಲ್ಲಿರುವ ಸತ್ಯತ್ವದ ಭ್ರಾಂತಿಯು ಅಳಿದುಹೋಯಿತು. ನಿದ್ದೆಯಿಂದ ಎಚ್ಚರಗೊಂಡ ವನು ಕನಸಿನಲ್ಲಿನ ದೇಹವನ್ನು ಮರೆಯುವಂತೆ ಆಕೆಗೆ ತನ್ನ ದೇಹದ ಎಚ್ಚರವೂ ಇರಲಿಲ್ಲ.॥27॥

(ಶ್ಲೋಕ - 28)

ಮೂಲಮ್

ತದ್ದೇಹಃ ಪರತಃ ಪೋಷೋಪ್ಯಕೃಶಶ್ಚಾಧ್ಯಸಂಭವಾತ್ ।
ಬಭೌ ಮಲೈರವಚ್ಛನ್ನಃ ಸಧೂಮ ಇವ ಪಾವಕಃ ॥

(ಶ್ಲೋಕ - 29)

ಮೂಲಮ್

ಸ್ವಾಂಗಂ ತಪೋಯೋಗಮಯಂ ಮುಕ್ತಕೇಶಂ ಗತಾಂಬರಮ್ ।
ದೈವಗುಪ್ತಂ ನ ಬುಬುಧೇ ವಾಸುದೇವಪ್ರವಿಷ್ಟಧೀಃ ॥

ಅನುವಾದ

ಆಕೆಯ ಶರೀರದ ಪೋಷಣೆಯನ್ನು ಇತರರು ಮಾಡುತ್ತಿದ್ದರು. ಆದರೂ ಯಾವುದೇ ಮಾನಸಿಕ ಕ್ಲೇಶ ವಿಲ್ಲದ ಕಾರಣ ಅವಳ ದೇಹವು ದುರ್ಬಲಗೊಂಡಿಲ್ಲ. ಅದರ ತೇಜಸ್ಸು ಇನ್ನೂ ಹೆಚ್ಚಿತ್ತು. ಹೊರಗಿನ ಕೊಳೆಯಿಂದ ಕೂಡಿದ್ದ ಆ ದೇಹವು ಹೊಗೆಯಾಡುವ ಅಗ್ನಿಯಂತೆ ಶೋಭಿಸತೊಡಗಿತು. ಆಕೆಯ ಕೂದಲು ಕೆದರಿಹೋಗಿದ್ದವು. ಬಟ್ಟೆಯೂ ಕಳಚಿ ಹೋಗಿತ್ತು. ಆದರೂ ನಿರಂತರವಾಗಿ ಅವಳ ಚಿತ್ತವು ಭಗವಂತನಲ್ಲೇ ನೆಟ್ಟಿದ್ದರಿಂದ ಆಕೆಗೆ ತನ್ನ ತಪೋಮಯವಾಗಿದ್ದ ಶರೀರದ ಅರಿವು ಕಿಂಚಿತ್ತೂ ಇರಲಿಲ್ಲ. ಕೇವಲ ಪ್ರಾರಬ್ಧವೇ ಅದನ್ನು ರಕ್ಷಿಸುತ್ತಿತ್ತು.॥28-29॥

(ಶ್ಲೋಕ - 30)

ಮೂಲಮ್

ಏವಂ ಸಾ ಕಪಿಲೋಕ್ತೇನ ಮಾರ್ಗೇಣಾಚಿರತಃ ಪರಮ್ ।
ಆತ್ಮಾನಂ ಬ್ರಹ್ಮ ನಿರ್ವಾಣಂ ಭಗವಂತಮವಾಪ ಹ ॥

ಅನುವಾದ

ಎಲೈ ವಿದುರನೇ ! ಹೀಗೆ ದೇವಹೂತಿಯೂ ಶ್ರೀಕಪಿಲ ಭಗವಂತನು ಹೇಳಿದ್ದ ಮಾರ್ಗದಲ್ಲಿ ನಡೆದು ಸ್ವಲ್ಪ ಸಮಯದಲ್ಲೇ ಪರಮಶಾಂತಸ್ವರೂಪನಾದ ಶ್ರೀಪರಮಾತ್ಮನನ್ನು ಪಡೆದು ಕೊಂಡಳು.॥30॥

(ಶ್ಲೋಕ - 31)

ಮೂಲಮ್

ತದ್ವೀರಾಸೀತ್ಪುಣ್ಯತಮಂ ಕ್ಷೇತ್ರಂ ತ್ರೈಲೋಕ್ಯವಿಶ್ರುತಮ್ ।
ನಾಮ್ನಾ ಸಿದ್ಧಪದಂ ಯತ್ರ ಸಾ ಸಂಸಿದ್ಧಿಮುಪೇಯುಷೀ ॥

ಅನುವಾದ

ಎಲೈ ವೀರವರನೇ ! ಅವಳಿಗೆ ಸಿದ್ಧಿಯು ದೊರಕಿದ ಸ್ಥಾನವು ಪರಮಪವಿತ್ರ ‘ಸಿದ್ಧಪದ’ (ಇದು ಈಗ ಗುಜರಾತದಲ್ಲಿದೆ.) ಎಂಬ ಹೆಸರಿನಿಂದ ಮೂರು ಲೋಕಗಳಲ್ಲಿ ಪ್ರಸಿದ್ಧವಾಯಿತು.॥31॥

(ಶ್ಲೋಕ - 32)

ಮೂಲಮ್

ತಸ್ಯಾಸ್ತದ್ಯೋಗವಿಧುತಮಾರ್ತ್ಯಂ ಮರ್ತ್ಯಮಭೂತ್ಸರಿತ್ ।
ಸ್ರೋತಸಾಂ ಪ್ರವರಾ ಸೌಮ್ಯ ಸಿದ್ಧಿದಾ ಸಿದ್ಧಸೇವಿತಾ ॥

ಅನುವಾದ

ಸಾಧುಶ್ರೇಷ್ಠನೇ! ಯೋಗಸಾಧನೆಯಿಂದ ಆಕೆಯ ಶರೀರದ ಎಲ್ಲ ದೈಹಿಕ ಕೊಳೆಯು ಕಳೆದುಹೋಗಿ ಶುದ್ಧವಾಗಿ ಅದು ಒಂದು ನದಿಯರೂಪವನ್ನು ತಾಳಿತು. ಅದು ಸಿದ್ಧಗಣರಿಂದ ಸೇವಿಸಲ್ಪಡುತ್ತಾ ಸರ್ವಸಿದ್ಧಿಗಳನ್ನೂ ಕೊಡುವುದಾಗಿದೆ.॥32॥

(ಶ್ಲೋಕ - 33)

ಮೂಲಮ್

ಕಪಿಲೋಪಿ ಮಹಾಯೋಗೀ ಭಗವಾನ್ಪಿತುರಾಶ್ರಮಾತ್ ।
ಮಾತರಂ ಸಮನುಜ್ಞಾಪ್ಯ ಪ್ರಾಗುದೀಚೀಂ ದಿಶಂ ಯಯೌ ॥

ಅನುವಾದ

ಯೋಗಿವರೇಣ್ಯರಾದ ಭಗವಾನ್ ಕಪಿಲದೇವರು ತಾಯಿಯ ಅಪ್ಪಣೆಯನ್ನು ಪಡೆದು, ತಂದೆಯ ಆಶ್ರಮದಿಂದ ಈಶಾನ್ಯದಿಕ್ಕಿನ ಕಡೆಗೆ ಹೊರಟುಹೋದರು.॥33॥

(ಶ್ಲೋಕ - 34)

ಮೂಲಮ್

ಸಿದ್ಧಚಾರಣಗಂಧರ್ವೈರ್ಮುನಿಭಿಶ್ಚಾಪ್ಸರೋಗಣೈಃ ।
ಸ್ತೂಯಮಾನಃ ಸಮುದ್ರೇಣ ದತ್ತಾರ್ಹಣನಿಕೇತನಃ ॥ 34 ॥

(ಶ್ಲೋಕ - 35)

ಮೂಲಮ್

ಆಸ್ತೇ ಯೋಗಂ ಸಮಾಸ್ಥಾಯ ಸಾಂಖ್ಯಾಚಾರ್ಯೈರಭಿಷ್ಟುತಃ ।
ತ್ರಯಾಣಾಮಪಿ ಲೋಕಾನಾಮುಪಶಾಂತ್ಯೈ ಸಮಾಹಿತಃ ॥

ಅನುವಾದ

ಅಲ್ಲಿ ಸ್ವತಃ ಸಮುದ್ರ ರಾಜನು ಅವರಿಗೆ ಪೂಜೆಮಾಡಿ ಇರಲು ಜಾಗವನ್ನು ನೀಡಿದನು. ಅಲ್ಲಿ ಅವರು ಮೂರು ಲೋಕಗಳಿಗೂ ಶಾಂತಿಯನ್ನು ಕೊಡುವುದ ಕ್ಕಾಗಿ ಯೋಗಮಾರ್ಗವನ್ನು ಅವಲಂಬಿಸಿ ಸಮಾಧಿಯಲ್ಲಿ ಸ್ಥಿತ ರಾದರು. ಸಿದ್ಧ, ಚಾರಣ, ಗಂಧರ್ವ, ಮುನಿಗಳು ಹಾಗೂ ಅಪ್ಸರೆ ಯರು ಹೀಗೆ ಎಲ್ಲರೂ ಅವರನ್ನು ಸ್ತುತಿಸುತ್ತಿದ್ದಾರೆ ಮತ್ತು ಸಾಂಖ್ಯಾ ಚಾರ್ಯರ ಸಮೂಹವೂ ಅವರನ್ನು ಎಲ್ಲ ವಿಧದಿಂದ ಸ್ತೋತ್ರ ಮಾಡುತ್ತಿವೆ.॥34-35॥

(ಶ್ಲೋಕ - 36)

ಮೂಲಮ್

ಏತನ್ನಿಗದಿತಂ ತಾತ ಯತ್ಪೃಷ್ಟೋಹಂ ತವಾನಘ ।
ಕಪಿಲಸ್ಯ ಚ ಸಂವಾದೋ ದೇವಹೂತ್ಯಾಶ್ಚ ಪಾವನಃ ॥

ಅನುವಾದ

ಪುಣ್ಯಾತ್ಮನಾದ ವಿದುರನೇ ! ನೀನು ಕೇಳಿದ್ದಂತೆ ನಾನು ನಿನಗೆ ಭಗವಾನ್ ಕಪಿಲರ ಮತ್ತು ದೇವಹೂತಿಯ ಪರಮ ಪವಿತ್ರವಾದ ಸಂವಾದವನ್ನು ಹೇಳಿರುವೆನು.॥36॥

(ಶ್ಲೋಕ - 37)

ಮೂಲಮ್

ಯ ಇದಮನುಶೃಣೋತಿ ಯೋಭಿಧತ್ತೇ
ಕಪಿಲಮುನೇರ್ಮತಮಾತ್ಮ ಯೋಗಗುಹ್ಯಮ್ ।
ಭಗವತಿ ಕೃತಧೀಃ ಸುಪರ್ಣಕೇತಾ-
ವುಪಲಭತೇ ಭಗವತ್ಪದಾರವಿಂದಮ್ ॥

ಅನುವಾದ

ಶ್ರೀಕಪಿಲಭಗವಂತನ ಈ ಸಿದ್ಧಾಂತವು ಅಧ್ಯಾತ್ಮಯೋಗದ ಪರಮ ರಹಸ್ಯವಾಗಿದೆ. ಇದನ್ನು ಶ್ರವಣಿಸುವ ಅಥವಾ ವರ್ಣಿಸುವವನು ಭಗವಾನ್ ಗರುಡಧ್ವಜನ ಭಕ್ತಿಯಿಂದ ಕೂಡಿಕೊಂಡು ಬೇಗನೇ ಶ್ರೀಹರಿಯ ಚರಣಾರವಿಂದ ಗಳನ್ನು ಹೊಂದುವನು.॥37॥

ಅನುವಾದ (ಸಮಾಪ್ತಿಃ)

ಮೂವತ್ತಮೂರನೆಯ ಅಧ್ಯಾಯವು ಮುಗಿಯಿತು. ॥33॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ತೃತೀಯಸ್ಕಂಧೇ ಕಾಪಿಲೇಯೋಪಾಖ್ಯಾನೇ ತ್ರಯಸಿಂಶೋಽಧ್ಯಾಯಃ ॥33॥
ಮೂರನೆಯ ಸ್ಕಂಧವು ಸಂಪೂರ್ಣವಾಯಿತು.