[ಮೂವತ್ತೆರಡನೆಯ ಅಧ್ಯಾಯ]
ಭಾಗಸೂಚನಾ
ಧೂಮಮಾರ್ಗ ಮತ್ತು ಅರ್ಚಿರಾದಿ ಮಾರ್ಗಗಳಿಂದ ಹೋಗುವವರ ಗತಿಯ ಮತ್ತು ಭಕ್ತಿಯೋಗದ ಶ್ರೇಷ್ಠತೆ
(ಶ್ಲೋಕ - 1)
ಮೂಲಮ್ (ವಾಚನಮ್)
ಕಪಿಲ ಉವಾಚ
ಮೂಲಮ್
ಅಥ ಯೋ ಗೃಹಮೇಧೀಯಾನ್ ಧರ್ಮಾನೇವಾವಸನ್ಗೃಹೇ ।
ಕಾಮಮರ್ಥಂ ಚ ಧರ್ಮಾನ್ಸ್ವಾನ್ ದೋಗ್ಧಿ ಭೂಯಃ ಪಿಪರ್ತಿ ತಾನ್ ॥
(ಶ್ಲೋಕ - 2)
ಮೂಲಮ್
ಸ ಚಾಪಿ ಭಗವದ್ಧರ್ಮಾತ್ಕಾಮಮೂಢಃ ಪರಾಙ್ಮುಖಃ ।
ಯಜತೇ ಕ್ರತುಭಿರ್ದೇವಾನ್ಪಿತೃಂಶ್ಚ ಶ್ರದ್ಧಯಾನ್ವಿತಃ ॥
ಅನುವಾದ
ಶ್ರೀಭಗವಾನ್ ಕಪಿಲರು ಹೇಳುತ್ತಾರೆ ಅಮ್ಮಾ! ಮನೆ ಯಲ್ಲೇ ಇದ್ದುಕೊಂಡು ಸಕಾಮಭಾವದಿಂದ ಗೃಹಸ್ಥಧರ್ಮಗಳನ್ನು ಪಾಲಿಸುತ್ತಾ, ಅವುಗಳ ಲವಾಗಿ ಅರ್ಥ ಮತ್ತು ಕಾಮಗಳನ್ನು ಅನುಭವಿಸುತ್ತಾ ಪುನಃ ಅವನ್ನೇ ಅನುಷ್ಠಾನ ಮಾಡುತ್ತಾ ಇರುವ ವನು, ಬಗೆ-ಬಗೆಯ ಕಾಮನೆಗಳಿಂದ ಮೋಹಿತನಾದ್ದರಿಂದ ಭಗವದ್ಧರ್ಮಗಳಿಂದ ವಿಮುಖನಾಗುತ್ತಾನೆ ಹಾಗೂ ಯಜ್ಞಗಳ ಮೂಲಕ ಶ್ರದ್ಧೆಯಿಂದ ದೇವತೆಗಳನ್ನೂ, ಪಿತೃಗಳನ್ನೂ ಆರಾಧಿಸುತ್ತಾ ಇರುತ್ತಾನೆ.॥1-2॥
(ಶ್ಲೋಕ - 3)
ಮೂಲಮ್
ತಚ್ಛ್ರದ್ಧಯಾಕ್ರಾಂತಮತಿಃ ಪಿತೃದೇವವ್ರತಃ ಪುಮಾನ್ ।
ಗತ್ವಾ ಚಾಂದ್ರಮಸಂ ಲೋಕಂ ಸೋಮಪಾಃ ಪುನರೇಷ್ಯತಿ ॥
ಅನುವಾದ
ಆತನ ಬುದ್ಧಿಯು ಅದೇ ರೀತಿಯ ಶ್ರದ್ಧೆಯಿಂದ ತುಂಬಿರುತ್ತದೆ. ದೇವತೆಗಳು ಮತ್ತು ಪಿತೃಗಳೇ ಆತನ ಉಪಾಸ್ಯ ದೇವತೆಗಳಾಗಿರುತ್ತಾರೆ. ಆದ್ದರಿಂದ ಅವನು ಚಂದ್ರಲೋಕಕ್ಕೆ ಹೋಗಿ ಅವರೊಂದಿಗೆ ಸೋಮಪಾನ ಮಾಡುತ್ತಾನೆ. ಮತ್ತೆ ಪುಣ್ಯಕ್ಷೀಣವಾದಾಗ ಇದೇ ಲೋಕಕ್ಕೆ ಮರಳುತ್ತಾನೆ.॥3॥
(ಶ್ಲೋಕ - 4)
ಮೂಲಮ್
ಯದಾ ಚಾಹೀಂದ್ರಶಯ್ಯಾಯಾಂ ಶೇತೇನಂತಾಸನೋ ಹರಿಃ ।
ತದಾ ಲೋಕಾಲಯಂ ಯಾಂತಿ ತ ಏತೇ ಗೃಹಮೇಧಿನಾಮ್ ॥
ಅನುವಾದ
ಪ್ರಳಯಕಾಲದಲ್ಲಿ ಭಗವಾನ್ ಶೇಷಶಾಯಿಯು ಪವಡಿಸಿದಾಗ ಸಕಾಮ ಗೃಹಸ್ಥಾಶ್ರಮಿಗಳಿಗೆ ದೊರೆಯುವ ಈ ಲೋಕಗಳೆಲ್ಲ ಲೀನವಾಗಿ ಹೋಗುತ್ತವೆ.॥4॥
(ಶ್ಲೋಕ - 5)
ಮೂಲಮ್
ಯೇ ಸ್ವಧರ್ಮಾನ್ನ ದುಹ್ಯಂತಿ ಧೀರಾಃ ಕಾಮಾರ್ಥಹೇತವೇ ।
ನಿಃಸಂಗಾ ನ್ಯಸ್ತಕರ್ಮಾಣಃ ಪ್ರಶಾಂತಾಃ ಶುದ್ಧಚೇತಸಃ ॥
(ಶ್ಲೋಕ - 6)
ಮೂಲಮ್
ನಿವೃತ್ತಿ ಧರ್ಮನಿರತಾ ನಿರ್ಮಮಾ ನಿರಹಂಕೃತಾಃ ।
ಸ್ವಧರ್ಮಾಖ್ಯೇನ ಸತ್ತ್ವೇನ ಪರಿಶುದ್ಧೇನ ಚೇತಸಾ ॥
ಅನುವಾದ
ವಿವೇಕಿಗಳಾದ ಮನುಷ್ಯರು ತಮ್ಮ ಧರ್ಮಗಳನ್ನೂ ಅರ್ಥ- ಕಾಮಗಳ ಭೋಗ-ವಿಲಾಸಕ್ಕಾಗಿ ಉಪಯೋಗಿಸುವುದಿಲ್ಲ. ಅವರು ಶ್ರೀಭಗವಂತನ ಪ್ರಸನ್ನತೆಗಾಗಿಯೇ ಅವನ್ನು ಪಾಲಿಸುತ್ತಾರೆ. ಅಂತಹ ಅನಾಸಕ್ತರೂ, ಪ್ರಶಾಂತರೂ, ಶುದ್ಧಚಿತ್ತರೂ, ನಿವೃತ್ತಿ ಧರ್ಮಪಾರಾ ಯಣರೂ, ಮಮತಾ ರಹಿತರೂ, ಅಹಂಕಾರಶೂನ್ಯರೂ ಆದ ಸುಕೃತಿಗಳು ಸ್ವಧರ್ಮಪಾಲನರೂಪವಾದ ಸತ್ತ್ವಗುಣದಿಂದ ಸರ್ವಥಾ ಶುದ್ಧಚಿತ್ತರಾಗುತ್ತಾರೆ.॥5-6॥
(ಶ್ಲೋಕ - 7)
ಮೂಲಮ್
ಸೂರ್ಯದ್ವಾರೇಣ ತೇ ಯಾಂತಿ ಪುರುಷಂ ವಿಶ್ವತೋಮುಖಮ್ ।
ಪರಾವರೇಶಂ ಪ್ರಕೃತಿಮಸ್ಯೋತ್ಪತ್ತ್ಯಂತಭಾವನಮ್ ॥
ಅನುವಾದ
ಅವರು ಕೊನೆಯಲ್ಲಿ ಸೂರ್ಯಮಾರ್ಗ (ಅರ್ಚಿಮಾರ್ಗ ಅಥವಾ ದೇವಯಾನ)ದ ಮೂಲಕ ಸರ್ವವ್ಯಾಪಿ ಪೂರ್ಣಪುರುಷ ಶ್ರೀಹರಿಯನ್ನೇ ಪಡೆದು ಕೊಳ್ಳುವರು. ಅವನೇ ಕಾರ್ಯಕಾರಣರೂಪೀ ಜಗತ್ತಿನ ನಿಯಾಮ ಕನೂ, ಪ್ರಪಂಚದ ಉಪಾದಾನ ಕಾರಣನೂ ಹಾಗೂ ಅದರ ಉತ್ಪತ್ತಿ, ಪಾಲನೆ, ಸಂಹಾರ ಮಾಡುವವನಾಗಿದ್ದಾನೆ.॥7॥
(ಶ್ಲೋಕ - 8)
ಮೂಲಮ್
ದ್ವಿಪರಾರ್ದ್ಧಾವಸಾನೇ ಯಃ ಪ್ರಲಯೋ ಬ್ರಹ್ಮಣಸ್ತು ತೇ ।
ತಾವದಧ್ಯಾಸತೇ ಲೋಕಂ ಪರಸ್ಯ ಪರಚಿಂತಕಾಃ ॥
ಅನುವಾದ
ಯಾರು ಸ್ವಾಮಿಯಾದ ಹಿರಣ್ಯಗರ್ಭನನ್ನು ಪರಮಾತ್ಮದೃಷ್ಟಿಯಿಂದ ಉಪಾಸನೆ ಮಾಡುವರೋ ಅವರು ಎರಡು ಪರಾರ್ಧದಲ್ಲಿ ಆಗುವ ಬ್ರಹ್ಮದೇವರ ಪ್ರಳಯದವರೆಗೆ ಸತ್ಯಲೋಕದಲ್ಲೇ ವಾಸಿಸುತ್ತಾರೆ.॥8॥
(ಶ್ಲೋಕ - 9)
ಮೂಲಮ್
ಕ್ಷ್ಮಾಂಭೋನಲಾನಿಲವಿಯನ್ಮನಇಂದ್ರಿಯಾರ್ಥ-
ಭೂತಾದಿಭಿಃ ಪರಿವೃತಂ ಪ್ರತಿಸಂಜಿಹೀರ್ಷುಃ ।
ಅವ್ಯಾಕೃತಂ ವಿಶತಿ ಯರ್ಹಿ ಗುಣತ್ರಯಾತ್ಮಾ ।
ಕಾಲಂ ಪರಾಖ್ಯಮನುಭೂಯ ಪರಃ ಸ್ವಯಂಭೂಃ ॥
(ಶ್ಲೋಕ - 10)
ಮೂಲಮ್
ಏವಂ ಪರೇತ್ಯ ಭಗವಂತ ಮನುಪ್ರವಿಷ್ಟಾ ।
ಯೇ ಯೋಗಿನೋ ಜಿತಮರುನ್ಮನಸೋ ವಿರಾಗಾಃ ।
ತೇನೈವ ಸಾಕಮಮೃತಂ ಪುರುಷಂ ಪುರಾಣಂ ।
ಬ್ರಹ್ಮ ಪ್ರಧಾನಮುಪಯಾಂತ್ಯ ಗತಾಭಿಮಾನಾಃ ॥
ಅನುವಾದ
ಯಾವಾಗ ದೇವಶ್ರೇಷ್ಠರಾದ ಬ್ರಹ್ಮದೇವರು ತನ್ನ ದ್ವಿಪರಾರ್ಧಕಾಲದ ಅಧಿಕಾರವನ್ನು ಮುಗಿಸಿಕೊಂಡು, ಪೃಥ್ವಿ, ಜಲ, ಅಗ್ನಿ, ವಾಯು, ಅಕಾಶ, ಮನ, ಇಂದ್ರಿಯಗಳು, ಅವುಗಳ ವಿಷಯ (ಶಬ್ದಾದಿ)ಗಳು ಮತ್ತು ಅಹಂಕಾರವೇ ಮುಂತಾದವುಗಳ ಸಹಿತ ಇಡೀ ವಿಶ್ವವನ್ನು ಉಪಸಂಹಾರ ಮಾಡಿಕೊಳ್ಳುವ ಇಚ್ಛೆ ಯಿಂದ ತ್ರಿಗುಣಾತ್ಮಕವಾದ ಪ್ರಕೃತಿಯೊಂದಿಗೆ ಒಂದಾಗಿ ನಿರ್ವಿಶೇಷ ಪರಮಾತ್ಮನಲ್ಲಿ ಲೀನವಾಗಿ ಹೋಗುವರೋ, ಆಗ ಪ್ರಾಣಗಳನ್ನೂ, ಮನಸ್ಸನ್ನೂ ಗೆದ್ದುಕೊಂಡಿರುವ ಆ ವಿರಕ್ತ ಯೋಗಿಗಳೂ ಕೂಡ ದೇಹಗಳನ್ನು ತೊರೆದು ಬ್ರಹ್ಮದೇವರ ದೇಹದಲ್ಲಿ ಪ್ರವೇಶಿಸುವರು. ಮತ್ತೆ ಅವರೊಂದಿಗೆ ಪರಮಾನಂದಸ್ವರೂಪನೂ, ಪುರಾಣಪುರು ಷನೂ ಆದ ಪರಬ್ರಹ್ಮ ಪರಮಾತ್ಮನಲ್ಲಿ ಲೀನವಾಗಿ ಹೋಗುವರು. ಇದಕ್ಕೆ ಮೊದಲು ಅವರು ಭಗವಂತನಲ್ಲಿ ಏಕೆ ಲೀನವಾಗಲಿಲ್ಲ ವೆಂದರೆ ಅವರಲ್ಲಿ ಅಹಂಕಾರ ಶೇಷವಾಗಿತ್ತು.॥9-10॥
(ಶ್ಲೋಕ - 11)
ಮೂಲಮ್
ಅಥ ತಂ ಸರ್ವಭೂತಾನಾಂ ಹೃತ್ಪದ್ಮೇಷು ಕೃತಾಲಯಮ್ ।
ಶ್ರುತಾನುಭಾವಂ ಶರಣಂ ವ್ರಜ ಭಾವೇನ ಭಾಮಿನಿ ॥
ಅನುವಾದ
ಆದ್ದರಿಂದ ಅಮ್ಮಾ! ಈಗ ನೀನೂ ಕೂಡ ಅತ್ಯಂತ ಭಕ್ತಿ-ಭಾವದಿಂದ ಆ ಶ್ರೀಹರಿಯ ಚರಣಕಮಲಗಳಲ್ಲಿ ಶರಣಾಗು. ಸಮಸ್ತ ಪ್ರಾಣಿಗಳ ಹೃದಯಕಮಲವೇ ಅವನ ವಾಸಮಂದಿರವಾಗಿದೆ. ಆತನ ಮಹಿಮೆಯನ್ನು ನಾನು ನಿನಗೆ ವರ್ಣಿಸಿರುವೆನಲ್ಲ!॥11॥
(ಶ್ಲೋಕ - 12)
ಮೂಲಮ್
ಆದ್ಯಃ ಸ್ಥಿರಚರಾಣಾಂ ಯೋ ವೇದಗರ್ಭಃ ಸಹರ್ಷಿಭಿಃ ।
ಯೋಗೇಶ್ವರೈಃ ಕುಮಾರಾದ್ಯೈಃ ಸಿದ್ಧೈರ್ಯೋಗಪ್ರವರ್ತಕೈಃ ॥
(ಶ್ಲೋಕ - 13)
ಮೂಲಮ್
ಭೇದದೃಷ್ಟ್ಯಾಭಿಮಾನೇನ ನಿಃಸಂಗೇನಾಪಿ ಕರ್ಮಣಾ ।
ಕರ್ತೃತ್ವಾತ್ಸಗುಣಂ ಬ್ರಹ್ಮ ಪುರುಷಂ ಪುರುಷರ್ಷಭಮ್ ॥
(ಶ್ಲೋಕ - 14)
ಮೂಲಮ್
ಸ ಸಂಸೃತ್ಯ ಪುನಃ ಕಾಲೇ ಕಾಲೇನೇಶ್ವರಮೂರ್ತಿನಾ ।
ಜಾತೇ ಗುಣವ್ಯತಿಕರೇ ಯಥಾಪೂರ್ವಂ ಪ್ರಜಾಯತೇ ॥
ಅನುವಾದ
ಸಮಸ್ತ ಸ್ಥಾವರ ಜಂಗಮ ಪ್ರಾಣಿಗಳಿಗೆ ಆದಿಕಾರಣರಾದ, ವೇದಗರ್ಭ ಬ್ರಹ್ಮದೇವರೂ ಕೂಡ, ಮರೀಚಿಗಳೇ ಮುಂತಾದ ಋಷಿಗಳೂ, ಯೋಗೇಶ್ವರರೂ, ಸನಕಾದಿಗಳೂ ಹಾಗೂ ಯೋಗ ಪ್ರವರ್ತಕ ಸಿದ್ಧರೊಡನೆ ನಿಷ್ಕಾಮಕರ್ಮಗಳ ಮೂಲಕ ಆದಿ ಪುರುಷನೂ ಆದ ಸಗುಣಬ್ರಹ್ಮನನ್ನು ಹೊಂದಿದ್ದರೂ ಆಗಲೇ ಆತನಲ್ಲಿ ಸೇರಿ ಮುಕ್ತರಾಗುವುದಿಲ್ಲ. ಏಕೆಂದರೆ, ಅವರಲ್ಲಿಯೂ ಭೇದದೃಷ್ಟಿಯೂ, ಕರ್ತೃತ್ವಾಭಿಮಾನವು ಇರುವುದರಿಂದ ಭಗ ವಂತನ ಇಚ್ಛೆಯಂತೆ ಸೃಷ್ಟಿಕಾಲವು ಬಂದಾಗ ಕಾಲರೂಪನಾದ ಪರಮೇಶ್ವರನ ಪ್ರೇರಣೆಯಂತೆ ತ್ರಿಗುಣಗಳಲ್ಲಿ ಕ್ಷೋಭೆಯುಂಟಾ ದಾಗ ಹಿಂದಿನಂತೆಯೇ ಅವರು ಮತ್ತೆ ಪ್ರಕಟಗೊಳ್ಳುವರು.॥12-14॥
(ಶ್ಲೋಕ - 15)
ಮೂಲಮ್
ಐಶ್ವರ್ಯಂ ಪಾರಮೇಷ್ಠ್ಯಂ ಚ ತೇಪಿ ಧರ್ಮವಿನಿರ್ಮಿತಮ್ ।
ನಿಷೇವ್ಯ ಪುನರಾಯಾಂತಿ ಗುಣವ್ಯತಿಕರೇ ಸತಿ ॥
ಅನುವಾದ
ಹಾಗೆಯೇ ಹಿಂದೆ ಹೇಳಿದ ಸಿದ್ಧ-ಋಷಿಗಣಗಳೂ ಕೂಡ ತಮ್ಮ ಕರ್ಮಾನುಸಾರವಾಗಿ ಬ್ರಹ್ಮಲೋಕದ ಐಶ್ವರ್ಯವನ್ನು ಭೋಗಿಸಿ ಶ್ರೀಭಗವಂತನ ಇಚ್ಛೆಯಿಂದ ಗುಣಗಳಲ್ಲಿ ಕ್ಷೋಭೆ ಯುಂಟಾದಾಗ ಪುನಃ ಈ ಲೋಕಕ್ಕೆ ಮರಳಿಬರುವರು. ॥15॥
(ಶ್ಲೋಕ - 16)
ಮೂಲಮ್
ಯೇ ತ್ವಿಹಾಸಕ್ತಮನಸಃ ಕರ್ಮಸು ಶ್ರದ್ಧಯಾನ್ವಿತಾಃ ।
ಕುರ್ವಂತ್ಯಪ್ರತಿಷಿದ್ಧಾನಿ ನಿತ್ಯಾನ್ಯಪಿ ಚ ಕೃತ್ಸ್ನಶಃ ॥
ಅನುವಾದ
ಯಾರ ಚಿತ್ತವು ಈ ಲೋಕದಲ್ಲಿಯೇ ಆಸಕ್ತವಾಗಿ, ಕರ್ಮ ಗಳಲ್ಲಿ ಶ್ರದ್ಧೆಯನ್ನು ಇಟ್ಟುಕೊಂಡಿರುವರೋ, ಅವರು ವೇದೋಕ್ತವಾದ ಕಾಮ್ಯಕರ್ಮಗಳನ್ನು ಹಾಗೂ ನಿತ್ಯಕರ್ಮಗಳನ್ನು ಸಾಂಗೋ ಪಾಂಗವಾಗಿ ಅನುಷ್ಠಾನ ಮಾಡುವುದರಲ್ಲಿಯೇ ತೊಡಗಿರುತ್ತಾರೆ.॥16॥
(ಶ್ಲೋಕ - 17)
ಮೂಲಮ್
ರಜಸಾ ಕುಂಠಮನಸಃ ಕಾಮಾತ್ಮಾನೋಜಿತೇಂದ್ರಿಯಾಃ ।
ಪಿತೃನ್ಯಜಂತ್ಯನುದಿನಂ ಗೃಹೇಷ್ವಭಿರತಾಶಯಾಃ ॥
ಅನುವಾದ
ಅವರ ಬುದ್ಧಿಯು ರಜೋಗುಣದ ಹೆಚ್ಚಳದಿಂದ ಕುಂಠಿತ ವಾಗಿರುತ್ತದೆ. ಹೃದಯದಲ್ಲಿ ಕಾಮನೆಗಳ ಬಲೆಯು ಹರಡಿಕೊಂಡಿ ರುತ್ತದೆ. ಇಂದ್ರಿಯಗಳು ಅವರ ವಶದಲ್ಲಿರುವುದಿಲ್ಲ. ಅದರಿಂದ ಅವರು ತಮ್ಮ ಮನೆಯಲ್ಲೇ ಆಸಕ್ತರಾಗಿ ಪ್ರತಿದಿನವು ಪಿತೃಗಳ ಪೂಜೆಯಲ್ಲೇ ತೊಡಗಿರುತ್ತಾರೆ.॥17॥
(ಶ್ಲೋಕ - 18)
ಮೂಲಮ್
ತ್ರೈವರ್ಗಿಕಾಸ್ತೇ ಪುರುಷಾ ವಿಮುಖಾ ಹರಿಮೇಧಸಃ ।
ಕಥಾಯಾಂ ಕಥನೀಯೋರುವಿಕ್ರಮಸ್ಯ ಮಧುದ್ವಿಷಃ ॥
ಅನುವಾದ
ಇವರು ಅರ್ಥ, ಧರ್ಮ, ಕಾಮಗಳಲ್ಲಿಯೇ ಪರಾಯಣರಾಗಿರುತ್ತಾರೆ. ಆದ್ದರಿಂದ ಕೀರ್ತನೆಗೆ ಯೋಗ್ಯನಾದ, ಮಹಾಪರಾಕ್ರಮವುಳ್ಳ, ಭವಭಯ ಹಾರಿಯಾದ ಶ್ರೀಮಧುಸೂದನನ ಕಥಾ-ಕೀರ್ತನೆಯಿಂದ ವಿಮುಖರಾಗಿರುತ್ತಾರೆ.॥18॥
(ಶ್ಲೋಕ - 19)
ಮೂಲಮ್
ನೂನಂ ದೈವೇನ ವಿಹತಾ ಯೇ ಚಾಚ್ಯುತಕಥಾಸುಧಾಮ್ ।
ಹಿತ್ವಾ ಶೃಣ್ವಂತ್ಯಸದ್ಗಾಥಾಃ ಪುರೀಷಮಿವ ವಿಡ್ಭುಜಃ ॥
ಅನುವಾದ
ಅಯ್ಯೋ ! ಹೇಸಿಗೆಯನ್ನೇ ತಿನ್ನುವ ಹಂದಿ-ನಾಯಿಗಳು ಅದನ್ನೇ ಬಯಸುವಂತೆ ಶ್ರೀಭಗವಂತನ ಕಥಾ ಮೃತವನ್ನು ಬಿಟ್ಟು ನಿಂದಿತವಾದ ವಿಷಯ-ವಾರ್ತೆಗಳನ್ನೇ ಕೇಳುತ್ತಿರುವ ಜನರು ಎಂತಹ ದೈವಹತರು! ಮಂದ ಭಾಗ್ಯರು! ॥19॥
(ಶ್ಲೋಕ - 20)
ಮೂಲಮ್
ದಕ್ಷಿಣೇನ ಪಥಾರ್ಯಮ್ಣಃ ಪಿತೃಲೋಕಂ ವ್ರಜಂತಿ ತೇ ।
ಪ್ರಜಾಮನು ಪ್ರಜಾಯಂತೇ ಶ್ಮಶಾನಾಂತಕ್ರಿಯಾಕೃತಃ ॥
ಅನುವಾದ
ಗರ್ಭಾಧಾನದಿಂದ ಹಿಡಿದು ಅಂತ್ಯೇಷ್ಟಿಯವರೆಗಿನ ಎಲ್ಲ ಸಂಸ್ಕಾರಗಳನ್ನೂ ವಿಧಿಪೂರ್ವಕ ಆಚರಿಸಿದ ಈ ಸಕಾಮಕರ್ಮಿ ಗಳು ಪಿತೃಯಾನ ಅಥವಾ ಧೂಮಯಾನವೆಂಬ ಮಾರ್ಗದಿಂದ ಪಿತೃಲೋಕಕ್ಕೆ ಹೋಗಿ ಮತ್ತೆ ತಮ್ಮ ಸಂತಾನದ ವಂಶದಲ್ಲೇ ಜನಿಸುವರು.॥20॥
(ಶ್ಲೋಕ - 21)
ಮೂಲಮ್
ತತಸ್ತೇ ಕ್ಷೀಣಸುಕೃತಾಃ ಪುನರ್ಲೋಕಮಿಮಂ ಸತಿ ।
ಪತಂತಿ ವಿವಶಾ ದೇವೈಃ ಸದ್ಯೋ ವಿಭ್ರಂಶಿತೋದಯಾಃ ॥
ಅನುವಾದ
ತಾಯೇ! ಪಿತೃಲೋಕದ ಭೋಗಗಳನ್ನು ಅನುಭವಿಸಿದ ಬಳಿಕ ಅವರ ಪುಣ್ಯವೆಲ್ಲ ಕ್ಷೀಣವಾದಾಗ ದೇವತೆಗಳು ಅವನನ್ನು ಅಲ್ಲಿಯ ಐಶ್ವರ್ಯದಿಂದ ತಳ್ಳಿಬಿಡುತ್ತಾರೆ. ಮತ್ತೆ ಅವರು ವಿವಶರಾಗಿ ಈ ಲೋಕದಲ್ಲೇ ಬಂದುಬೀಳಬೇಕಾಗುವುದು.॥21॥
(ಶ್ಲೋಕ - 22)
ಮೂಲಮ್
ತಸ್ಮಾತ್ತ್ವಂ ಸರ್ವಭಾವೇನ ಭಜಸ್ವ ಪರಮೇಷ್ಠಿನಮ್ ।
ತದ್ಗುಣಾಶ್ರಯಯಾ ಭಕ್ತ್ಯಾ ಭಜನೀಯಪದಾಂಬುಜಮ್ ॥
ಅನುವಾದ
ಅಮ್ಮಾ! ಆದುದರಿಂದ ನೀನು ಸದಾ ಭಜಿಸಲು ಯೋಗ್ಯವಾದ ಚರಣಕಮಲಗಳುಳ್ಳ ಶ್ರೀಭಗವಂತನನ್ನು, ಆತನ ಕಲ್ಯಾಣಗುಣಗಳನ್ನೂ ಆಶ್ರಯಿಸಿರುವ ಭಕ್ತಿಯ ಮೂಲಕ ಸರ್ವ ಪ್ರಕಾರದಿಂದಲೂ ಭಜಿಸುವವಳಾಗು.॥22॥
(ಶ್ಲೋಕ - 23)
ಮೂಲಮ್
ವಾಸುದೇವೇ ಭಗವತಿ ಭಕ್ತಿಯೋಗಃ ಪ್ರಯೋಜಿತಃ ।
ಜನಯತ್ಯಾಶು ವೈರಾಗ್ಯಂ ಜ್ಞಾನಂ ಯದ್ಬ್ರಹ್ಮದರ್ಶನಮ್ ॥
ಅನುವಾದ
ಭಗವಾನ್ ವಾಸುದೇವನ ಕುರಿತು ಮಾಡಿದ ಭಕ್ತಿಯೋಗವು ಶೀಘ್ರವಾಗಿ ಸಂಸಾರದಿಂದ ವೈರಾಗ್ಯ ಮತ್ತು ಬ್ರಹ್ಮಸಾಕ್ಷಾತ್ಕಾರ ರೂಪವಾದ ಜ್ಞಾನವನ್ನು ದೊರಕಿಸಿಕೊಡುತ್ತದೆ.॥23॥
(ಶ್ಲೋಕ - 24)
ಮೂಲಮ್
ಯದಾಸ್ಯ ಚಿತ್ತಮರ್ಥೇಷು ಸಮೇಷ್ವಿಂದ್ರಿಯವೃತ್ತಿಭಿಃ ।
ನ ವಿಗೃಹ್ಣಾತಿ ವೈಷಮ್ಯಂ ಪ್ರಿಯಮಪ್ರಿಯಮಿತ್ಯುತ ॥
(ಶ್ಲೋಕ - 25)
ಮೂಲಮ್
ಸ ತದೈವಾತ್ಮನಾತ್ಮಾನಂ ನಿಃಸಂಗಂ ಸಮದರ್ಶನಮ್ ।
ಹೇಯೋಪಾದೇಯರಹಿತಮಾರೂಢಂ ಪದಮೀಕ್ಷತೇ ॥
ಅನುವಾದ
ವಸ್ತುತಃ ಎಲ್ಲ ಇಂದ್ರಿಯವಿಷಯಗಳು ಭಗವದ್ರೂಪವೇ ಇರುವುದರಿಂದ ಸಮಾನವಾಗಿವೆ. ಆದ್ದರಿಂದ ಇಂದ್ರಿಯ ವೃತ್ತಿಗಳ ಮೂಲಕವೂ ಭಗವದ್ಭಕ್ತನ ಚಿತ್ತವು ಅವುಗಳಲ್ಲಿ ಪ್ರಿಯ-ಅಪ್ರಿಯಗಳೆಂಬ ಭೇದ ವನ್ನೆಣಿಸದೆ ಸರ್ವತ್ರ ಭಗವಂತನನ್ನೇ ದರ್ಶಿಸುತ್ತದೆ. ಆಗಲೇ ಅವನು ಸಂಗದೋಷರಹಿತನಾಗಿ ‘ಇದು ಗ್ರಾಹ್ಯ’ ‘ಇದು ಗ್ರಾಹ್ಯ ವಲ್ಲ’ ಎಂಬ ಗುಣದೋಷಗಳಿಂದ ರಹಿತನಾಗಿ ಎಲ್ಲದರಲ್ಲಿಯೂ ಸಮವಾಗಿರುವ ತನ್ನ ಸ್ವರೂಪ ಮಹಿಮೆಯಲ್ಲಿ ಆರೂಢನಾಗಿ, ತನಗೆ ಆತ್ಮನಾಗಿರುವ ಪರಬ್ರಹ್ಮನನ್ನು ಸಾಕ್ಷಾತ್ಕರಿಸಿ ಕೊಳ್ಳುವನು.॥24-25॥
(ಶ್ಲೋಕ - 26)
ಮೂಲಮ್
ಜ್ಞಾನಮಾತ್ರಂ ಪರಂ ಬ್ರಹ್ಮ ಪರಮಾತ್ಮೇಶ್ವರಃ ಪುಮಾನ್ ।
ದೃಶ್ಯಾದಿಭಿಃ ಪೃಥಗ್ಭಾವೈರ್ಭಗವಾನೇಕ ಈಯತೇ ॥
ಅನುವಾದ
ಆ ಭಗವಂತನೇ ಜ್ಞಾನಸ್ವರೂಪನೂ, ಪರಬ್ರಹ್ಮನೂ, ಪರಮಾತ್ಮನೂ, ಈಶ್ವರನೂ, ಪರಮಪುರುಷನೂ ಆಗಿರುವನು. ನಾನಾರೂಪಗಳಲ್ಲಿ ಕಾಣಿಸುವವನೂ ಆತನೋರ್ವನೇ.॥26॥
(ಶ್ಲೋಕ - 27)
ಮೂಲಮ್
ಏತಾವಾನೇವ ಯೋಗೇನ ಸಮಗ್ರೇಣೇಹ ಯೋಗಿನಃ ।
ಯುಜ್ಯತೇಭಿಮತೋ ಹ್ಯರ್ಥೋ ಯದಸಂಗಸ್ತು ಕೃತ್ಸ್ನಶಃ ॥
ಅನುವಾದ
ಇಡೀ ಪ್ರಪಂಚದ ಕುರಿತು ಅನಾಸಕ್ತಿಯನ್ನು ಹೊಂದುವುದೇ ಯೋಗಿಗಳು ಆಚರಿಸುವ ಎಲ್ಲ ಯೋಗಸಾಧನೆಗಳಿಗೂ ಏಕಮಾತ್ರ ಉದ್ದೇಶವಾಗಿದೆ.॥27॥
(ಶ್ಲೋಕ - 28)
ಮೂಲಮ್
ಜ್ಞಾನಮೇಕಂ ಪರಾಚೀನೈರಿಂದ್ರಿಯೈರ್ಬ್ರಹ್ಮ ನಿರ್ಗುಣಮ್ ।
ಅವಭಾತ್ಯರ್ಥರೂಪೇಣ ಭ್ರಾಂತ್ಯಾ ಶಬ್ದಾದಿಧರ್ಮಿಣಾ ॥
ಅನುವಾದ
ಬ್ರಹ್ಮವಸ್ತುವು ಒಂದೇ ಆಗಿದ್ದು , ಜ್ಞಾನಸ್ವರೂಪನೂ, ನಿರ್ಗುಣನೂ ಆಗಿರುವನು. ಆದರೂ ಅವನು ಬಾಹ್ಯವೃತ್ತಿಗಳುಳ್ಳ ಇಂದ್ರಿಯಗಳ ಮೂಲಕ ಭ್ರಾಂತಿಯಿಂದ ಶಬ್ದಾದಿ ಧರ್ಮವುಳ್ಳ ಬೇರೆ-ಬೇರೆ ಪದಾರ್ಥಗಳ ರೂಪಗಳಲ್ಲಿ ಕಂಡು ಬರುತ್ತಾನೆ.॥28॥
(ಶ್ಲೋಕ - 29)
ಮೂಲಮ್
ಯಥಾ ಮಹಾನಹಂರೂಪಸಿ ವೃತ್ಪಂಚವಿಧಃ ಸ್ವರಾಟ್ ।
ಏಕಾದಶವಿಧಸ್ತಸ್ಯ ವಪುರಂಡಂ ಜಗದ್ಯತಃ ॥
ಅನುವಾದ
ಹೇಗೆ ಒಂದೇ ಪರಬ್ರಹ್ಮವು ಮಹತ್ತತ್ತ್ವ; ವೈಕಾರಿಕ, ರಾಜಸ, ತಾಮಸ-ಮೂರು ರೀತಿಯ ಅಹಂಕಾರ ; ಪಂಚ ಭೂತಗಳೂ ಹಾಗೂ ಹನ್ನೊಂದು ಇಂದ್ರಿಯಗಳೂ ಆಗಿರುವನೋ ಮತ್ತು ಪುನಃ ಅದೇ ಸ್ವಯಂ ಪ್ರಕಾಶವು ಇವುಗಳ ಸಂಯೋಗದಿಂದ ಜೀವನೆನಿಸಿದನೋ ಅಂತೆಯೇ ಆ ಜೀವನ ಶರೀರರೂಪೀ ಈ ಬ್ರಹ್ಮಾಂಡವೂ ವಸ್ತುತಃ ಬ್ರಹ್ಮವೇ ಆಗಿದೆ. ಏಕೆಂದರೆ, ಬ್ರಹ್ಮ ನಿಂದಲೇ ಇದರ ಉತ್ಪತ್ತಿಯಾಗಿದೆ.॥29॥
(ಶ್ಲೋಕ - 30)
ಮೂಲಮ್
ಏತದ್ವೈ ಶ್ರದ್ಧಯಾ ಭಕ್ತ್ಯಾ ಯೋಗಾಭ್ಯಾಸೇನ ನಿತ್ಯಶಃ ।
ಸಮಾಹಿತಾತ್ಮಾ ನಿಃಸಂಗೋ ವಿರಕ್ತ್ಯಾ ಪರಿಪಶ್ಯತಿ ॥
ಅನುವಾದ
ಆದರೆ ಶ್ರದ್ಧಾ-ಭಕ್ತಿ, ವೈರಾಗ್ಯ, ನಿರಂತರ ಯೋಗಾಭ್ಯಾಸದ ಮೂಲಕ ಏಕಾಗ್ರಚಿತ್ತನೂ, ಅಸಂಗ ಬುದ್ದಿಯವನೂ ಆದವನೇ ಇದನ್ನು ಬ್ರಹ್ಮರೂಪದಿಂದ ನೋಡಬಲ್ಲನು.॥30॥
(ಶ್ಲೋಕ - 31)
ಮೂಲಮ್
ಇತ್ಯೇತತ್ಕಥಿತಂ ಗುರ್ವಿ ಜ್ಞಾನಂ ತದ್ಬ್ರಹ್ಮದರ್ಶನಮ್ ।
ಯೇನಾನುಬುದ್ಧ್ಯತೇ ತತ್ತ್ವಂ ಪ್ರಕೃತೇಃ ಪುರುಷಸ್ಯ ಚ ॥
ಅನುವಾದ
ಪೂಜನೀಯಳಾದ ಮಾತೆಯೇ ! ಇದುವರೆಗೆ ನಾನು ನಿನಗೆ ಬ್ರಹ್ಮದರ್ಶನರೂಪವಾದ ಶ್ರೇಷ್ಠತಮಜ್ಞಾನವನ್ನು ವಿವರಿಸಿದೆನು. ಅದರ ಮೂಲಕ ಪ್ರಕೃತಿ ಮತ್ತು ಪುರುಷರ ಸ್ವರೂಪವನ್ನೂ ಯಥಾವತ್ತಾಗಿ ತಿಳಿಸಿದೆನು.॥31॥
(ಶ್ಲೋಕ - 32)
ಮೂಲಮ್
ಜ್ಞಾನಯೋಗಶ್ಚ ಮನ್ನಿಷ್ಠೋ ನೈರ್ಗುಣ್ಯೋ ಭಕ್ತಿಲಕ್ಷಣಃ ।
ದ್ವಯೋರಪ್ಯೇಕ ಏವಾರ್ಥೋ ಭಗವಚ್ಛಬ್ಧ ಲಕ್ಷಣಃ ॥
ಅನುವಾದ
ದೇವಿ ! ನಿರ್ಗುಣ ಬ್ರಹ್ಮವಿಷಯಕ ಜ್ಞಾನಯೋಗ ಹಾಗೂ ನನ್ನ ಕುರಿತಾಗಿ ಆಚರಿಸಿದ ಭಕ್ತಿಯೋಗ ಇವೆರಡರ ಲವು ಒಂದೇ ಆಗಿದೆ. ಅದನ್ನೇ ‘ಭಗವಂತ’ನೆಂಬ ಶಬ್ದದಿಂದ ಹೇಳುತ್ತಾರೆ.॥32॥
(ಶ್ಲೋಕ - 33)
ಮೂಲಮ್
ಯಥೇಂದ್ರಿಯೈಃ ಪೃಥಗ್ದ್ವಾರೈರರ್ಥೋ ಬಹುಗುಣಾಶ್ರಯಃ ।
ಏಕೋ ನಾನೇಯತೇ ತದ್ವದ್ಭಗವಾನ್ ಶಾಸವರ್ತ್ಮಭಿಃ ॥
ಅನುವಾದ
ರೂಪ, ರಸ, ಗಂಧ ಮುಂತಾದ ಅನೇಕ ಗುಣಗಳಿಗೆ ಆಶ್ರಯವಾಗಿ ರುವ ಒಂದೇ ಪದಾರ್ಥವು ಬೇರೆ-ಬೇರೆ ಇಂದ್ರಿಯಗಳ ಮೂಲಕ ಭಿನ್ನ-ಭಿನ್ನವಾಗಿ ಅನುಭವಕ್ಕೆ ಬರುವದು. ಹಾಗೆಯೇ ಶಾಸಗಳ ವಿಭಿನ್ನ ಮಾರ್ಗಗಳಿಂದ ಒಬ್ಬನೇ ಭಗವಂತನು ಅನೇಕ ಪ್ರಕಾರಗಳಿಂದ ಅನುಭವಕ್ಕೆ ಬರುವನು.॥33॥
(ಶ್ಲೋಕ - 34)
ಮೂಲಮ್
ಕ್ರಿಯಯಾ ಕ್ರತುಭಿರ್ದಾನೈಸ್ತಪಃಸ್ವಾಧ್ಯಾಯಮರ್ಶನೈಃ ।
ಆತ್ಮೇಂದ್ರಿಯಜಯೇನಾಪಿ ಸಂನ್ಯಾಸೇನ ಚ ಕರ್ಮಣಾಮ್ ॥
(ಶ್ಲೋಕ - 35)
ಮೂಲಮ್
ಯೋಗೇನ ವಿವಿಧಾಂಗೇನ ಭಕ್ತಿಯೋಗೇನ ಚೈವ ಹಿ ।
ಧರ್ಮೇಣೋಭಯಚಿಹ್ನೇನ ಯಃ ಪ್ರವೃತ್ತಿನಿವೃತ್ತಿಮಾನ್ ॥
(ಶ್ಲೋಕ - 36)
ಮೂಲಮ್
ಆತ್ಮತತ್ತ್ವಾವಬೋಧೇನ ವೈರಾಗ್ಯೇಣ ದೃಢೇನ ಚ ।
ಈಯತೇ ಭಗವಾನೇಭಿಃ ಸಗುಣೋ ನಿರ್ಗುಣಃ ಸ್ವದೃಕ್ ॥
ಅನುವಾದ
ನಾನಾರೀತಿಯ ಕರ್ಮಕಲಾಪಗಳು, ಯಜ್ಞಗಳು, ದಾನಗಳು, ತಪಸ್ಸುಗಳು, ವೇದಾಧ್ಯಯನ, ವೇದವಿಚಾರ (ವಿಾಮಾಂಸಾ), ಮನಸ್ಸು, ಇಂದ್ರಿಯಗಳ ಸಂಯಮ, ಕರ್ಮಗಳ ತ್ಯಾಗ, ವಿವಿಧ ಅಂಗಗಳುಳ್ಳ ಯೋಗಗಳು, ಭಕ್ತಿಯೋಗ, ನಿವೃತ್ತಿ ಮತ್ತು ಪ್ರವೃತ್ತಿ ರೂಪವಾದ ಎರಡೂ ರೀತಿಯ ಧರ್ಮಗಳು, ಆತ್ಮತತ್ತ್ವದ ಜ್ಞಾನ ಹಾಗೂ ದೃಢವಾದ ವೈರಾಗ್ಯ ಇವೆಲ್ಲ ಸಾಧನೆಗಳಿಂದ ಸಗುಣ-ನಿರ್ಗುಣರೂಪನಾದ ಸ್ವಯಂಪ್ರಕಾಶ ಭಗವಂತನನ್ನೇ ಪಡೆಯಲಾಗುತ್ತದೆ.॥34-36॥
(ಶ್ಲೋಕ - 37)
ಮೂಲಮ್
ಪ್ರಾವೋಚಂ ಭಕ್ತಿಯೋಗಸ್ಯ ಸ್ವರೂಪಂ ತೇ ಚತುರ್ವಿಧಮ್ ।
ಕಾಲಸ್ಯ ಚಾವ್ಯಕ್ತಗತೇರ್ಯೋಂತರ್ಧಾವತಿ ಜಂತುಷು ॥
ಅನುವಾದ
ಜನನಿಯೇ ! ನಾನು ನಿನಗೆ ಸಾತ್ತ್ವಿಕ, ರಾಜಸ, ತಾಮಸ ಮತ್ತು ನಿರ್ಗುಣಗಳೆಂಬ ನಾಲ್ಕು ಪ್ರಕಾರದ ಭಕ್ತಿಯೋಗಗಳನ್ನು ವರ್ಣಿ ಸಿರುವೆನು. ಹೀಗೆಯೇ ಪ್ರಾಣಿಗಳ ಜನ್ಮಾದಿ ವಿಕಾರಗಳಿಗೆ ಕಾರಣ ಮತ್ತು ಯಾವುದರ ಗತಿಯು ತಿಳಿಯುವುದಿಲ್ಲವೋ ಅಂತಹ ಕಾಲದ ಸ್ವರೂಪವನ್ನೂ ವಿವರಿಸಿದ್ದೇನೆ.॥37॥
(ಶ್ಲೋಕ - 38)
ಮೂಲಮ್
ಜೀವಸ್ಯ ಸಂಸೃತೀರ್ಬಹ್ವೀರವಿದ್ಯಾಕರ್ಮನಿರ್ಮಿತಾಃ ।
ಯಾಸ್ವಂಗ ಪ್ರವಿಶನ್ನಾತ್ಮಾ ನ ವೇದ ಗತಿಮಾತ್ಮನಃ ॥
ಅನುವಾದ
ದೇವಿ ! ಅವಿದ್ಯೆಯಿಂದ ಉಂಟಾದ ಕರ್ಮದ ಕಾರಣ ಜೀವಕ್ಕೆ ಅನೇಕಗತಿಗಳು ಉಂಟಾಗುತ್ತವೆ. ಅವುಗಳಲ್ಲಿ ಹೋದಾಗ ಜೀವನು ತನ್ನ ಸ್ವರೂಪಗಳನ್ನು ಗುರುತಿಸಿಕೊಳ್ಳಲಾರನು.॥38॥
(ಶ್ಲೋಕ - 39)
ಮೂಲಮ್
ನೈತತ್ಖಲಾಯೋಪದಿಶೇನ್ನಾ ವಿನೀತಾಯ ಕರ್ಹಿಚಿತ್ ।
ನ ಸ್ತಬ್ಧಾಯ ನ ಭಿನ್ನಾಯ ನೈವ ಧರ್ಮಧ್ವಜಾಯ ಚ ॥
ಅನುವಾದ
ನಾನು ನಿನಗೆ ಮಾಡಿ ರುವ ಈ ಜ್ಞಾನೋಪದೇಶವನ್ನು ದುಷ್ಟರಿಗೂ, ಅವಿನೀತರಿಗೂ, ಅಹಂಕಾರಿಗಳಿಗೂ, ದುರಾಚಾರಿಗಳಿಗೂ, ಧರ್ಮದ ಸೋಗು ಹಾಕುವ ಡಾಂಭಿಕರಿಗೂ ಹೇಳಬಾರದು.॥39॥
(ಶ್ಲೋಕ - 40)
ಮೂಲಮ್
ನ ಲೋಲುಪಾಯೋಪದಿಶೇನ್ನ ಗೃಹಾರೂಢಚೇತಸೇ ।
ನಾಭಕ್ತಾಯ ಚ ಮೇ ಜಾತು ನ ಮದ್ಭಕ್ತದ್ವಿಷಾಮಪಿ ॥
ಅನುವಾದ
ಹಾಗೆಯೇ ವಿಷಯಲಂಪಟರೂ, ಗೃಹಾಸಕ್ತರೂ, ನನ್ನ ಭಕ್ತರಲ್ಲದವರೂ ಅಥವಾ ನನ್ನ ಭಕ್ತರನ್ನು ದ್ವೇಷಿಸುವವರೂ ಇವರಿಗೂ ಇದನ್ನು ಎಂದೂ ಉಪದೇಶಿಸಬಾರದು.॥40॥
(ಶ್ಲೋಕ - 41)
ಮೂಲಮ್
ಶ್ರದ್ದಧಾನಾಯ ಭಕ್ತಾಯ ವಿನೀತಾಯಾನಸೂಯವೇ ।
ಭೂತೇಷು ಕೃತಮೈತ್ರಾಯ ಶುಶ್ರೂಷಾಭಿರತಾಯ ಚ ॥
(ಶ್ಲೋಕ - 42)
ಮೂಲಮ್
ಬಹಿರ್ಜಾತವಿರಾಗಾಯ ಶಾಂತಚಿತ್ತಾಯ ದೀಯತಾಮ್ ।
ನಿರ್ಮತ್ಸರಾಯ ಶುಚಯೇ ಯಸ್ಯಾಹಂ ಪ್ರೇಯಸಾಂ ಪ್ರಿಯಃ ॥
ಅನುವಾದ
ಯಾರು ಅತ್ಯಂತ ಶ್ರದ್ಧಾ ಳುವೂ, ಭಕ್ತನೂ, ವಿನಯಶಾಲಿಯೂ, ಬೇರೆಯವರ ಕುರಿತು ದೋಷ ದೃಷ್ಟಿಯಿಲ್ಲದವನೂ, ಎಲ್ಲ ಪ್ರಾಣಿಗಳಲ್ಲಿ ಮೈತ್ರಿಯನ್ನಿಡುವವನೂ, ಗುರುಸೇವಾ ತತ್ಪರನೂ, ಬಾಹ್ಯವಿಷಯಗಳಲ್ಲಿ ಅನಾಸಕ್ತನೂ, ಶಾಂತಚಿತ್ತನೂ, ಮತ್ಸರವಿಲ್ಲದವರೂ, ಶುದ್ಧಚಿತ್ತನೂ, ನನ್ನನ್ನು ಪರಮಪ್ರಿಯನೆಂದು ತಿಳಿಯುವವನೂ, ಇಂಥವನಿಗೆ ಮಾತ್ರ ಇದನ್ನು ಅವಶ್ಯವಾಗಿ ಉಪದೇಶಿಸಬೇಕು.॥41-42॥
(ಶ್ಲೋಕ - 43)
ಮೂಲಮ್
ಯ ಇದಂ ಶೃಣುಯಾದಂಬ ಶ್ರದ್ಧಯಾ ಪುರುಷಃ ಸಕೃತ್ ।
ಯೋ ವಾಭಿಧತ್ತೇ ಮಚ್ಚಿತ್ತಃ ಸ ಹ್ಯೇತಿ ಪದವೀಂ ಚ ಮೇ ॥
ಅನುವಾದ
ತಾಯೇ ! ನನ್ನಲ್ಲಿ ಚಿತ್ತವನ್ನು ತೊಡಗಿಸಿ ಇದನ್ನು ಶ್ರದ್ಧೆಯಿಂದ ಒಮ್ಮೆಯಾದರೂ ಕೇಳು ವವನೂ, ಹೇಳುವವನೂ, ಆದ ಸುಕೃತಿಯು ನನ್ನ ಪರಮಪದವನ್ನೇ ಪಡೆಯುವನು.॥43॥
ಅನುವಾದ (ಸಮಾಪ್ತಿಃ)
ಮೂವತ್ತೆರಡನೆಯ ಅಧ್ಯಾಯವು ಮುಗಿಯಿತು. ॥32॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ತೃತೀಯಸ್ಕಂಧೇ ಕಾಪಿಲೇಯೇ ದ್ವಾತ್ರಿಂಶೋಧ್ಯಾಯಃ ॥32॥