೩೧

[ಮೂವತ್ತೊಂದನೆಯ ಅಧ್ಯಾಯ]

ಭಾಗಸೂಚನಾ

ಗರ್ಭಸ್ಥ ಜೀವಿಯ ಬೆಳವಣಿಗೆ

(ಶ್ಲೋಕ - 1)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ಕರ್ಮಣಾ ದೈವನೇತ್ರೇಣ ಜಂತುರ್ದೇಹೋಪಪತ್ತಯೇ ।
ಸಿಯಾಃ ಪ್ರವಿಷ್ಟ ಉದರಂ ಪುಂಸೋ ರೇತಃಕಣಾಶ್ರಯಃ ॥

ಅನುವಾದ

ಶ್ರೀಕಪಿಲಭಗವಂತನು ಹೇಳುತ್ತಾನೆ ಅಮ್ಮಾ ! ಜೀವಿಯು ಮನುಷ್ಯ ದೇಹವನ್ನು ಪಡೆಯಬೇಕಾದಾಗ ಅವನು ಭಗವಂತನ ಪ್ರೇರಣೆಯಿಂದ, ತನ್ನ ಹಿಂದಿನ ಕರ್ಮಾನುಸಾರವಾಗಿ ಪುರುಷನ ವೀರ್ಯಕಣದ ಮೂಲಕ ಸೀಯ ಗರ್ಭಾಶಯವನ್ನು ಪ್ರವೇಶಿಸುವನು.॥1॥

(ಶ್ಲೋಕ - 2)

ಮೂಲಮ್

ಕಲಲಂ ತ್ವೇಕರಾತ್ರೇಣ ಪಂಚರಾತ್ರೇಣ ಬುದ್ಬುದಮ್ ।
ದಶಾಹೇನ ತು ಕರ್ಕಂಧೂಃ ಪೇಶ್ಯಂಡಂ ವಾ ತತಃ ಪರಮ್ ॥

ಅನುವಾದ

ಅಲ್ಲಿ ಒಂದು ರಾತ್ರಿಯಲ್ಲಿ ಸೀಯ ರಜಸ್ಸಿನಲ್ಲಿ ಕಲೆತು ‘ಕಲಲ’ ಎಂಬ ರೂಪವನ್ನು ತಾಳುವನು. ಐದು ರಾತ್ರಿಗಳಲ್ಲಿ ಬುದ್ಬುದನಾಗಿ, ಹತ್ತು ದಿನಗಳಲ್ಲಿ ಬೋರೆಯ ಹಣ್ಣಿನಂತೆ ಸ್ವಲ್ಪ ಗಟ್ಟಿಯಾಗುವನು. ಅನಂತರ ಮಾಂಸದ ಮುದ್ದೆಯ ಅಥವಾ ಮೊಟ್ಟೆಯ ಆಕಾರವನ್ನು ತಳೆಯುವನು.॥2॥

(ಶ್ಲೋಕ - 3)

ಮೂಲಮ್

ಮಾಸೇನ ತು ಶಿರೋ ದ್ವಾಭ್ಯಾಂ ಬಾಹ್ವಂಘ್ರ್ಯಾದ್ಯಂಗವಿಗ್ರಹಃ ।
ನಖಲೋಮಾಸ್ಥಿ ಚರ್ಮಾಣಿ ಲಿಂಗಚ್ಛಿದ್ರೋದ್ಭವಸಿಭಿಃ ॥

ಅನುವಾದ

ಒಂದು ತಿಂಗಳಲ್ಲಿ ಅದರಲ್ಲೇ ಅವನ ತಲೆಯು ಏರ್ಪಡುವುದು. ಎರಡು ತಿಂಗಳು ಗಳಲ್ಲಿ ಕೈ, ಕಾಲು ಮುಂತಾದ ಅವಯವಗಳ ವಿಭಾಗವಾಗುತ್ತದೆ. ಮೂರು ತಿಂಗಳಲ್ಲಿ ಉಗುರು, ರೋಮ, ಎಲುಬು, ಚರ್ಮ, ಹೆಣ್ಣು-ಗಂಡು ಸೂಚಿಸುವ ಚಿಹ್ನೆ ಹಾಗೂ ಇತರ ಛಿದ್ರಗಳು ಉತ್ಪನ್ನವಾಗುತ್ತವೆ.॥3॥

(ಶ್ಲೋಕ - 4)

ಮೂಲಮ್

ಚತುರ್ಭಿರ್ಧಾತವಃ ಸಪ್ತ ಪಂಚಭಿಃ ಕ್ಷುತ್ತೃಡುದ್ಭವಃ
ಷಡ್ಭಿರ್ಜರಾಯುಣಾ ವೀತಃ ಕುಕ್ಷೌ ಭ್ರಾಮ್ಯತಿ ದಕ್ಷಿಣೇ ॥

ಅನುವಾದ

ನಾಲ್ಕು ತಿಂಗಳುಗಳಲ್ಲಿ ಮಾಂಸವೇ ಮುಂತಾದ ಏಳು ಧಾತುಗಳೂ ಉಂಟಾಗುವವು. ಐದನೆಯ ತಿಂಗಳಲ್ಲಿ ಹಸಿವು-ಬಾಯಾರಿಕೆಗಳು ಆಗತೊಡಗುತ್ತವೆ. ಆರನೆಯ ತಿಂಗಳಿನಲ್ಲಿ ಅದು ಗರ್ಭದ ಚೀಲದಿಂದ ಆವರಿಸಲ್ಪಟ್ಟು ಗರ್ಭ ಕೋಶದ ಬಲಭಾಗದಲ್ಲಿ ತಿರುಗುವುದು.॥4॥

(ಶ್ಲೋಕ - 5)

ಮೂಲಮ್

ಮಾತುರ್ಜಗ್ಧಾನ್ನಪಾನಾದ್ಯೈರೇಧದ್ಧಾತುರಸಮ್ಮತೇ ।
ಶೇತೇ ವಿಣ್ಮೂತ್ರಯೋರ್ಗರ್ತೇ ಸ ಜಂತುರ್ಜಂತುಸಂಭವೇ ॥

ಅನುವಾದ

ಆಗ ತಾಯಿಯು ತಿಂದಿರುವ ಅನ್ನ-ನೀರುಗಳಿಂದ ಅದರ ಎಲ್ಲ ಧಾತುಗಳು ಪುಷ್ಟ ವಾಗತೊಡಗುವವು. ಹಾಗೆಯೇ ಅದು ಕ್ರಿಮಿ, ಕೀಟ ಮುಂತಾದ ಜಂತುಗಳಿಗೆ ಉತ್ಪತ್ತಿಸ್ಥಾನವಾದ ಮಲ-ಮೂತ್ರಗಳ ಹಳ್ಳದಲ್ಲಿ ಬಿದ್ದುಕೊಂಡಿರುವುದು.॥5॥

(ಶ್ಲೋಕ - 6)

ಮೂಲಮ್

ಕೃಮಿಭಿಃ ಕ್ಷತಸರ್ವಾಂಗಃ ಸೌಕುಮಾರ್ಯಾತ್ಪ್ರತಿಕ್ಷಣಮ್ ।
ಮೂರ್ಚ್ಛಾಮಾಪ್ನೋತ್ಯುರುಕ್ಲೇಶಸ್ತತ್ರತ್ಯೈಃ ಕ್ಷುಧಿತೈರ್ಮುಹುಃ ॥

ಅನುವಾದ

ಅದರ ದೇಹವು ತುಂಬಾ ಕೋಮಲವಾಗಿರುವುದರಿಂದ ಅಲ್ಲಿಯ ಹಸಿದ ಕ್ರಿಮಿಗಳು ಅದರ ಅಂಗಾಂಗಗಳನ್ನು ಕಚ್ಚುವವು. ಆ ಕ್ಲೇಶವನ್ನು ತಾಳಲಾರದೆ ಕ್ಷಣ-ಕ್ಷಣಕ್ಕೂ ಮೂರ್ಛಿತನಾಗುವನು.॥6॥

(ಶ್ಲೋಕ - 7)

ಮೂಲಮ್

ಕಟುತೀಕ್ಷ್ಣೋಷ್ಣಲವಣರೂಕ್ಷಾಮ್ಲಾದಿಭಿರುಲ್ಬಣೈಃ ।
ಮಾತೃಭುಕ್ತೈರುಪಸ್ಪೃಷ್ಟಃ ಸರ್ವಾಂಗೋತ್ಥಿತವೇದನಃ ॥

ಅನುವಾದ

ತಾಯಿಯು ತಿಂದಿರುವ ಕಹಿ, ಖಾರ, ಒಗರು, ಉಪ್ಪು, ಹುಳಿ ಮುಂತಾದ ತೀಕ್ಷ್ಣ ಪದಾರ್ಥಗಳ ಸ್ಪರ್ಶದಿಂದ ಅದರ ದೇಹಕ್ಕೆಲ್ಲ ಪೀಡೆಯುಂಟಾಗುವುದು.॥7॥

(ಶ್ಲೋಕ - 8)

ಮೂಲಮ್

ಉಲ್ಬೇನ ಸಂವೃತಸ್ತಸ್ಮಿನ್ನಂತ್ರೈಶ್ಚ ಬಹಿರಾವೃತಃ ।
ಆಸ್ತೇ ಕೃತ್ವಾ ಶಿರಃ ಕುಕ್ಷೌ ಭುಗ್ನಪೃಷ್ಠಶಿರೋಧರಃ ॥

ಅನುವಾದ

ಆ ಜೀವಿಯು ತಾಯಿಯ ಗರ್ಭಾಶಯದಲ್ಲಿ ಗರ್ಭಚೀಲದಿಂದ ಮುಚ್ಚಲ್ಪಟ್ಟು, ಕರುಳಬಳ್ಳಿಗಳಿಂದ ಸುತ್ತುವರಿಯಲ್ಪಡುತ್ತದೆ. ಅದು ಬೆನ್ನನ್ನೂ, ಕೊರಳನ್ನೂ ಕುಂಡಲಾಕಾರವಾಗಿ ಬಗ್ಗಿಸಿಕೊಂಡು ತಲೆಯು ಹೊಟ್ಟೆ ಯಕಡೆಗೆ ವಾಲಿರುತ್ತದೆ.॥8॥

(ಶ್ಲೋಕ - 9)

ಮೂಲಮ್

ಅಕಲ್ಪಃ ಸ್ವಾಂಗಚೇಷ್ಟಾಯಾಂ ಶಕುಂತ ಇವ ಪಂಜರೇ ।
ತತ್ರ ಲಬ್ಧ ಸ್ಮೃತಿರ್ದೈವಾತ್ಕರ್ಮ ಜನ್ಮಶತೋದ್ಭವಮ್ ।
ಸ್ಮರಂದೀರ್ಘಮನುಚ್ಛ್ವಾಸಂ ಶರ್ಮ ಕಿಂ ನಾಮ ವಿಂದತೇ ॥

ಅನುವಾದ

ಅದು ಪಂಜರದಲ್ಲಿ ಸೆರೆಸಿಕ್ಕಿದ ಹಕ್ಕಿಯಂತೆ ಪರಾಧೀನವಾಗಿ, ತನ್ನ ಅಂಗಾಂಗಗಳನ್ನು ಆಡಿಸುವುದಕ್ಕೂ ಅಸಮರ್ಥವಾಗಿರುತ್ತದೆ. ಆಗಲೇ ಅದೃಷ್ಟದ ಪ್ರೇರಣೆಯಿಂದ ಅದಕ್ಕೆ ಸ್ಮರಣಶಕ್ತಿಯು ಉಂಟಾಗುತ್ತದೆ. ಆಗ ತನ್ನ ನೂರಾರು ಜನ್ಮಗಳ ಕರ್ಮಗಳು ನೆನ ಪಾಗಿ ಪಶ್ಚಾತ್ತಾಪದಿಂದ ನಿಟ್ಟುಸಿರುಬಿಡುತ್ತಾನೆ. ಅಂತಹ ಸ್ಥಿತಿಯಲ್ಲಿ ಅದಕ್ಕೆ ನೆಮ್ಮದಿಯಾದರೂ ಹೇಗೆ ತಾನೇ ದೊರೆಯಬಲ್ಲದು?॥9॥

(ಶ್ಲೋಕ - 10)

ಮೂಲಮ್

ಆರಭ್ಯ ಸಪ್ತಮಾನ್ಮಾಸಾಲ್ಲಬ್ಧ ಬೋಧೋಪಿ ವೇಪಿತಃ ।
ನೈಕತ್ರಾಸ್ತೇ ಸೂತಿವಾತೈರ್ವಿಷ್ಠಾಭೂರಿವ ಸೋದರಃ ॥

ಅನುವಾದ

ಏಳನೆಯ ತಿಂಗಳು ಪ್ರಾರಂಭವಾದಾಗಿನಿಂದ ಅದಕ್ಕೆ ಜ್ಞಾನ ಶಕ್ತಿಯೂ ಉಂಟಾಗುವುದು. ಆದರೆ ಪ್ರಸೂತಿವಾಯುನಿಂದ ಅತ್ತ-ಇತ್ತ ಕದಲಿಸಲ್ಪಡುತ್ತಾ, ಅದೇ ಹೊಟ್ಟೆಯಲ್ಲಿ ಹುಟ್ಟಿಕೊಂಡ ಮಲದ ಕ್ರಿಮಿಯಂತೆ ಒಂದೆಡೆಯಲ್ಲಿ ನಿಲ್ಲದೆ ಅಲ್ಲಿಯೇ ಚಲಿಸುತ್ತಿರುತ್ತದೆ.॥10॥

(ಶ್ಲೋಕ - 11)

ಮೂಲಮ್

ನಾಥಮಾನ ಋಷಿರ್ಭೀತಃ ಸಪ್ತವಧ್ರಿಃ ಕೃತಾಂಜಲಿಃ ।
ಸ್ತುವೀತ ತಂ ವಿಕ್ಲವಯಾ ವಾಚಾ ಯೇನೋದರೇರ್ಪಿತಃ ॥

ಅನುವಾದ

ಆಗ ಸಪ್ತಧಾತುಗಳಿಂದ ಸ್ಥೂಲಶರೀರದಲ್ಲಿ ಬಂಧಿತನಾದ ಆ ದೇಹಾತ್ಮದರ್ಶಿ ಜೀವವು ಅತ್ಯಂತ ಭಯಭೀತನಾಗಿ ದೀನವಾಣಿಯಿಂದ ಪರಮಾತ್ಮನ ಕೃಪೆಯನ್ನು ಯಾಚಿಸುವುದು. ತನ್ನನ್ನು ಆ ತಾಯಿಯ ಗರ್ಭವಾಸಕ್ಕೆ ಸೇರಿಸಿದ ಸ್ವಾಮಿಯನ್ನು ಕೈ ಜೋಡಿಸಿಕೊಂಡು ಹೀಗೆ ಸ್ತುತಿಸುವನು.॥11॥

(ಶ್ಲೋಕ - 12)

ಮೂಲಮ್ (ವಾಚನಮ್)

ಜಂತುರುವಾಚ

ಮೂಲಮ್

ತಸ್ಯೋಪಸನ್ನಮವಿತುಂ ಜಗದಿಚ್ಛಯಾತ್ತ-
ನಾನಾತನೋರ್ಭುವಿ ಚಲಚ್ಚರಣಾರವಿಂದಮ್ ।
ಸೋಹಂ ವ್ರಜಾಮಿ ಶರಣಂ ಹ್ಯಕುತೋಭಯಂ ಮೇ
ಯೇನೇದೃಶೀ ಗತಿರದರ್ಶ್ಯಸತೋನುರೂಪಾ ॥

ಅನುವಾದ

ಜೀವವು ಹೇಳುತ್ತದೆ ಪ್ರಭೂ! ನಾನು ತುಂಬಾ ಅಧಮ ನಾಗಿರುವೆನು. ಭಗವಂತನು ಕೊಟ್ಟಿರುವ ಈ ಗತಿಯು ನನಗೆ ಯೋಗ್ಯವೇ ಆಗಿದೆ. ಅವನು ಶರಣು ಬಂದಿರುವ ನಶ್ವರ ಜಗತ್ತಿನ ರಕ್ಷಣೆಗಾಗಿ ಅನೇಕ ವಿಧದ ರೂಪಗಳನ್ನು ಧರಿಸುತ್ತಾನೆ. ಆದ್ದರಿಂದ ನಾನು ಕೂಡ ಭೂತಲದಲ್ಲಿ ವಿಚರಣಮಾಡುವ ಅವನ ನಿರ್ಭಯ ಚರಣಾರವಿಂದಗಳಲ್ಲಿ ಶರಣಾಗಿರುವೆನು.॥12॥

(ಶ್ಲೋಕ - 13)

ಮೂಲಮ್

ಯಸ್ತ್ವತ್ರ ಬದ್ಧ ಇವ ಕರ್ಮಭಿರಾವೃತಾತ್ಮಾ
ಭೂತೇಂದ್ರಿಯಾಶಯಮಯೀಮವಲಂಬ್ಯ ಮಾಯಾಮ್ ।
ಆಸ್ತೇ ವಿಶುದ್ಧ ಮವಿಕಾರಮಖಂಡಬೋಧ-
ಮಾತಪ್ಯಮಾನಹೃದಯೇವಸಿತಂ ನಮಾಮಿ ॥

ಅನುವಾದ

ನಾನು (ಜೀವ) ನನ್ನ ಕರ್ಮವಾಸನೆಯಿಂದ ಬಂಧಿತನಾಗಿದ್ದೇನೆ. ಅಲ್ಲದೆ ಭೂತ, ಇಂದ್ರಿಯಗಳಿಗೆ ಆಶ್ರಯವಾಗಿರುವ ದೇಹರೂಪಿ ಮಾಯೆಯನ್ನು ಆಶ್ರಯಿಸಿದ್ದೇನೆ. ನನ್ನ ಪರಿತಪ್ತ ಹೃದಯದಲ್ಲಿಯೇ ನೀನು ಇದ್ದರೂ ನಿನ್ನ ಸ್ವರೂಪವು ಶುದ್ಧವೂ ಅವಿಕಾರಿಯೂ, ಅಖಂಡ ಜ್ಞಾನ ಸ್ವರೂಪವೂ ಆಗಿದೆ. ಅಂತಹ ಪರಮಪುರಷನಿಗೆ ನಾನು ನಮಸ್ಕರಿಸುತ್ತೇನೆ.॥13॥

(ಶ್ಲೋಕ - 14)

ಮೂಲಮ್

ಯಃ ಪಂಚಭೂತರಚಿತೇ ರಹಿತಃ ಶರೀರೇ-
ಚ್ಛನ್ನೋ ಯಥೇಂದ್ರಿಯಗುಣಾರ್ಥಚಿದಾತ್ಮ ಕೋಹಮ್ ।
ತೇನಾವಿಕುಂಠ ಮಹಿಮಾನಮೃಷಿಂ ತಮೇನಂ
ವಂದೇ ಪರಂ ಪ್ರಕೃತಿಪೂರುಷಯೋಃ ಪುಮಾಂಸಮ್ ॥

ಅನುವಾದ

ನಾನು ವಾಸ್ತವವಾಗಿ ಶರೀರಾದಿಗಳಿಂದ ರಹಿತ (ಅಸಂಗ)ನಾಗಿದ್ದರೂ ನೋಡಲು ಪಾಂಚಭೌತಿಕ ಶರೀರದಿಂದ ಬದ್ಧನಾಗಿದ್ದೇನೆ. ಇದರಿಂದ ಇಂದ್ರಿಯ, ಗುಣ, ಶಬ್ದಾದಿ ವಿಷಯ ಮತ್ತು ಚಿದಾಭಾಸ (ಅಹಂಕಾರ) ರೂಪನಾಗಿ ತಿಳಿಯಲ್ಪಡುವೆನು. ಆದ್ದರಿಂದ ಈ ಶರೀರಾದಿ ಆವರಣಗಳಿಂದ ಯಾರ ಮಹಿಮೆಯು ಮುಚ್ಚಲ್ಪಟ್ಟಿಲ್ಲವೋ, ಆ ಪ್ರಕೃತಿ ಮತ್ತು ಪುರುಷರ ನಿಯಾಮಕನೂ, ಸರ್ವಜ್ಞನೂ ಆದ ಪರಮಪುರುಷನನ್ನು ನಾನು ವಂದಿಸುತ್ತಿದ್ದೇನೆ.॥14॥

(ಶ್ಲೋಕ - 15)

ಮೂಲಮ್

ಯನ್ಮಾಯಯೋರುಗುಣಕರ್ಮನಿಬಂಧನೇಸ್ಮಿನ್
ಸಾಂಸಾರಿಕೇ ಪಥಿ ಚರಂಸ್ತದಭಿಶ್ರಮೇಣ ।
ನಷ್ಟ ಸ್ಮೃತಿಃ ಪುನರಯಂ ಪ್ರವೃಣೀತ ಲೋಕಂ
ಯುಕ್ತ್ಯಾ ಕಯಾ ಮಹದನುಗ್ರಹಮಂತರೇಣ ॥

ಅನುವಾದ

ಅವನ ಮಾಯೆಯಿಂದಲೇ ತನ್ನ ಸ್ವರೂಪದ ಸ್ಮೃತಿಯು ನಾಶ ವಾದ ಕಾರಣ ಈ ಜೀವವು ಅನೇಕ ರೀತಿಯ ಸತ್ತ್ವಾದಿ ಗುಣಗಳ ಮತ್ತು ಕರ್ಮಗಳ ಬಂಧನದಿಂದ ಕೂಡಿದ್ದು ಈ ಸಂಸಾರದಲ್ಲಿ ಬಗೆ-ಬಗೆಯ ಕಷ್ಟಗಳನ್ನು ಸಹಿಸುತ್ತಾ ಅಲೆಯುತ್ತಿರುವೆನು. ಆದ್ದರಿಂದ ಆ ಪರಮಪುರುಷ ಪರಮಾತ್ಮನ ಕೃಪೆಯಿಲ್ಲದೆ ಬೇರೆ ಯಾವುದೇ ಯುಕ್ತಿಗಳಿಂದ ನನಗೆ ನನ್ನ ಸ್ವರೂಪದ ಜ್ಞಾನವು ಉಂಟಾಗಲಾರದು.॥15॥

(ಶ್ಲೋಕ - 16)

ಮೂಲಮ್

ಜ್ಞಾನಂ ಯದೇತದದಧಾತ್ಕತಮಃ ಸ ದೇವ-
ಸೈಕಾಲಿಕಂ ಸ್ಥಿರಚರೇಷ್ವನುವರ್ತಿತಾಂಶಃ ।
ತಂ ಜೀವಕರ್ಮಪದವೀಮನುವರ್ತಮಾನಾ-
ಸ್ತಾಪತ್ರಯೋಪಶಮನಾಯ ವಯಂ ಭಜೇಮ ॥

ಅನುವಾದ

ನನಗೆ ಉಂಟಾದ ತ್ರೈಕಾಲಿಕ ಜ್ಞಾನವೂ ಆತನು ದಯಪಾಲಿಸಿದುದೇ ಆಗಿದೆ. ಆತನಲ್ಲದೆ ಬೇರೆ ಯಾರು ತಾನೇ ಇವನ್ನು ಕೊಡಬಲ್ಲರು? ಸ್ಥಾವರಜಂಗಮರೂಪ ವಾದ ಸಮಸ್ತ ಪ್ರಾಣಿಗಳಲ್ಲಿಯೂ ಅವನೊಬ್ಬನೇ ಅಂತರ್ಯಾಮಿ ರೂಪವಾದ ಅಂಶದಿಂದ ನೆಲೆಸಿರುವನು. ಆದುದರಿಂದ ಜೀವಿಗಳ ಕರ್ಮಮಾರ್ಗವನ್ನು ಅನುಸರಿಸುತ್ತಿರುವ ನಾನು ತ್ರಿವಿಧತಾಪಗಳ ಶಮನಕ್ಕಾಗಿ ಆತನನ್ನೇ ಭಜಿಸುತ್ತೇನೆ.॥16॥

(ಶ್ಲೋಕ - 17)

ಮೂಲಮ್

ದೇಹ್ಯನ್ಯದೇಹವಿವರೇ ಜಠರಾಗ್ನಿನಾಸೃಗ್
ವಿಣ್ಮೂತ್ರಕೂಪಪತಿತೋ ಭೃಶತಪ್ತದೇಹಃ ।
ಇಚ್ಛನ್ನಿತೋ ವಿವಸಿತುಂ ಗಣಯನ್ಸ್ವಮಾಸಾನ್
ನಿರ್ವಾಸ್ಯತೇ ಕೃಪಣಧೀರ್ಭಗವನ್ಕದಾ ನು ॥

ಅನುವಾದ

ಓ ಭಗವಂತಾ! ಈ ದೇಹಧಾರಿಯಾದ ಜೀವನು ಮತ್ತೊಂದು (ತಾಯಿಯ) ದೇಹದಲ್ಲಿ ಮಲ-ಮೂತ್ರ, ರಕ್ತ ಇವುಗಳ ಮಡುವಿ ನಲ್ಲಿ ಬಿದ್ದಿರುವನು. ಅವಳ ಜಠರಾಗ್ನಿಯಿಂದ ಇವನ ದೇಹವು ಸುಡುತ್ತಿದೆ. ಇಲ್ಲಿಂದ ಯಾವಾಗ ಹೊರಬಿದ್ದೇನು ಎಂದು ತಿಂಗಳು ಗಳನ್ನು ಎಣಿಸುತ್ತಿರುವನು. ಭಗವಂತಾ! ಈ ದೀನನು ಯಾವಾಗ ಇಲ್ಲಿಂದ ಹೊರಬರುವನೋ ತಿಳಿಯದಾಗಿದೆ.॥17॥

(ಶ್ಲೋಕ - 18)

ಮೂಲಮ್

ಯೇನೇದೃಶೀಂ ಗತಿಮಸೌ ದಶಮಾಸ್ಯ ಈಶ
ಸಂಗ್ರಾಹಿತಃ ಪುರುದಯೇನ ಭವಾದೃಶೇನ ।
ಸ್ವೇನೈವ ತುಷ್ಯತು ಕೃತೇನ ಸ ದೀನನಾಥಃ
ಕೋ ನಾಮ ತತ್ಪ್ರತಿ ವಿನಾಂಜಲಿಮಸ್ಯ ಕುರ್ಯಾತ್ ॥

ಅನುವಾದ

ಸ್ವಾಮಿಯೇ ! ನೀನು ಪರಮದಯಾಳು ಆಗಿರುವೆ. ನಿನ್ನಂತಹ ಉದಾರಿಯಾದ ಪ್ರಭುವೇ ! ಈ ಹತ್ತುತಿಂಗಳ ಜೀವಕ್ಕೆ ಈ ಉತ್ಕೃಷ್ಟವಾದ ಜ್ಞಾನವನ್ನು ಕೊಟ್ಟಿರುವೆ. ಓ ದೀನಬಂಧೋ ! ನಿನಗೆ ಕೈ ಜೋಡಿಸುತ್ತೇನೆ, ಇಷ್ಟರಿಂದಲೇ ಪ್ರಸನ್ನನಾಗು. ಏಕೆಂದರೆ, ಇದಲ್ಲದೆ ನೀನು ಮಾಡಿದ ಉಪಕಾರವನ್ನು ಯಾರಾದರೂ ಹೇಗೆ ತೀರಿಸಬಲ್ಲರು?॥18॥

(ಶ್ಲೋಕ - 19)

ಮೂಲಮ್

ಪಶ್ಯತ್ಯಯಂ ಧಿಷಣಯಾ ನನು ಸಪ್ತವಧ್ರಿಃ
ಶಾರೀರಕೇ ದಮಶರೀರ್ಯಪರಃ ಸ್ವದೇಹೇ ।
ಯತ್ಸೃಷ್ಟಯಾಸಂ ತಮಹಂ ಪುರುಷಂ ಪುರಾಣಂ
ಪಶ್ಯೇ ಬಹಿರ್ಹೃದಿ ಚ ಚೈತ್ಯಮಿವ ಪ್ರತೀತಮ್ ॥

ಅನುವಾದ

ಪ್ರಭುವೇ ! ಪ್ರಪಂಚದ ಈ ಪಶು-ಪಕ್ಷಿ ಮುಂತಾದ ಬೇರೆ ಜೀವರಾದರೋ ತಮ್ಮ ಮೂಢ ಬುದ್ಧಿಗನುಸಾರವಾಗಿ ತಮ್ಮ ಶರೀರ ದಲ್ಲಾಗುವ ಸುಖ-ದುಃಖಾದಿಗಳನ್ನೇ ಅನುಭವಿಸುತ್ತಿರುತ್ತಾರೆ. ಆದರೆ ನಾನಾದರೋ ನಿನ್ನ ಕೃಪೆಯಿಂದ ಶಮ-ದಮಾದಿ ಸಾಧನ ಸಂಪನ್ನ ಶರೀರದಿಂದ ಕೂಡಿರುವೆನು. ಆದ್ದರಿಂದ ನೀನು ಕೊಟ್ಟಿರುವ ವಿವೇಕದಿಂದ ಕೂಡಿದ ಬುದ್ಧಿಯಿಂದ ಪುರಾಣಪುರುಷ ನಾದ ನಿನ್ನನ್ನು ನನ್ನ ಶರೀರದ ಹೊರಗೂ, ಹೃದಯದ ಒಳಗೂ ಆತ್ಮ ಚೈತನ್ಯಸ್ವರೂಪದಂತೆ ಪ್ರತ್ಯಕ್ಷವಾಗಿ ಅನುಭವಿಸುತ್ತಿದ್ದೇನೆ.॥19॥

(ಶ್ಲೋಕ - 20)

ಮೂಲಮ್

ಸೋಹಂ ವಸನ್ನಪಿ ವಿಭೋ ಬಹುದುಃಖವಾಸಂ
ಗರ್ಭಾನ್ನ ನಿರ್ಜಿಗಮಿಷೇ ಬಹಿರಂಧಕೂಪೇ ।
ಯತ್ರೋಪಯಾತಮುಪಸರ್ಪತಿ ದೇವಮಾಯಾ
ಮಿಥ್ಯಾಮತಿರ್ಯದನು ಸಂಸೃತಿಚಕ್ರಮೇತತ್ ॥

ಅನುವಾದ

ಶ್ರೀಭಗವಂತನೇ ! ಅತ್ಯಂತ ದುಃಖದಿಂದ ತುಂಬಿರುವ ಈ ಗರ್ಭಾ ಶಯದಲ್ಲಿ ನಾನು ಬಹು ಕಷ್ಟದಿಂದ ಇದ್ದರೂ, ಇದರಿಂದ ಹೊರ ಬಂದು ಸಂಸಾರಮಯವಾದ ಕತ್ತಲೆಯ ಬಾವಿಯಲ್ಲಿ ಬೀಳಲು ಖಂಡಿತವಾಗಿ ನನಗೆ ಇಷ್ಟವಿಲ್ಲ. ಏಕೆಂದರೆ, ಅಲ್ಲಿಗೆ ಹೋಗುವ ಜೀವರನ್ನು ನಿನ್ನ ಮಾಯೆಯು ಅವರಿಸಿಬಿಡುತ್ತದೆ. ಇದರಿಂದ ಅವನಿಗೆ ಶರೀರದಲ್ಲಿ ಅಹಂ ಬುದ್ಧಿಯು ಉಂಟಾಗುತ್ತದೆ ಹಾಗೂ ಅದರ ಪರಿಣಾಮದಿಂದ ಪುನಃ ಈ ಸಂಸಾರಚಕ್ರದಲ್ಲೇ ಬೀಳ ಬೇಕಾಗುತ್ತದೆ.॥20॥

(ಶ್ಲೋಕ - 21)

ಮೂಲಮ್

ತಸ್ಮಾದಹಂ ವಿಗತವಿಕ್ಲವ ಉದ್ಧರಿಷ್ಯ
ಆತ್ಮಾನಮಾಶು ತಮಸಃ ಸುಹೃದಾತ್ಮನೈವ ।
ಭೂಯೋ ಯಥಾ ವ್ಯಸನಮೇತದನೇಕರಂಧ್ರಂ
ಮಾ ಮೇ ಭವಿಷ್ಯದುಪಸಾದಿತವಿಷ್ಣುಪಾದಃ ॥

ಅನುವಾದ

ಆದ್ದರಿಂದ ನಾನು ಕಳವಳವನ್ನು ಬಿಟ್ಟು ಹೃದಯದಲ್ಲಿ ಭಗವಾನ್ ಶ್ರೀವಿಷ್ಣುವಿನ ಚರಣಗಳನ್ನು ನೆಲೆಗೊಳಿಸಿ ಕೊಂಡು, ತನ್ನ ಬುದ್ಧಿಯ ಸಹಾಯದಿಂದಲೇ ತನ್ನನ್ನು ಬಹು ಬೇಗನೇ ಈ ಸಂಸಾರಸಮುದ್ರದಿಂದ ಉದ್ಧರಿಸಿಕೊಳ್ಳುವೆನು. ಅದ ರಿಂದ ಅನೇಕ ಪ್ರಕಾರದ ದೋಷಗಳಿಂದ ಕೂಡಿದ ಈ ಸಂಸಾರದ ದುಃಖವು ನನಗೆ ಪುನಃ ದೊರಕದಿರಲಿ.॥21॥

(ಶ್ಲೋಕ - 22)

ಮೂಲಮ್ (ವಾಚನಮ್)

ಕಪಿಲ ಉವಾಚ

ಮೂಲಮ್

ಏವಂ ಕೃತಮತಿರ್ಗರ್ಭೇ ದಶಮಾಸ್ಯಃ ಸ್ತುವನ್ನೃಷಿಃ ।
ಸದ್ಯಃ ಕ್ಷಿಪತ್ಯವಾಚೀನಂ ಪ್ರಸೂತ್ಯೈ ಸೂತಿಮಾರುತಃ ॥

ಅನುವಾದ

ಶ್ರೀಕಪಿಲ ಭಗವಂತನು ಹೇಳುತ್ತಾನೆ ತಾಯೇ! ಆ ಹತ್ತು ತಿಂಗಳ ಜೀವವು ಹೀಗೆ ಗರ್ಭದಲ್ಲೇ ವಿವೇಕಸಂಪನ್ನವಾಗಿ ಭಗವಂತ ನನ್ನು ಸ್ತುತಿಸಿರುತ್ತದೆ. ಆಗ ಕೆಳಮುಖವಾಗಿರುವ ಶಿಶುವನ್ನು ಪ್ರಸವ ಕಾಲದ ವಾಯುವು ಒಡನೆಯೇ ಹೊರಬರಲು ತಳ್ಳಿಬಿಡುತ್ತದೆ.॥22॥

(ಶ್ಲೋಕ - 23)

ಮೂಲಮ್

ತೇನಾವಸೃಷ್ಟಃ ಸಹಸಾ ಕೃತ್ವಾವಾಕ್ಶಿರ ಆತುರಃ ।
ವಿನಿಷ್ಕ್ರಾಮತಿ ಕೃಚ್ಛ್ರೇಣ ನಿರುಚ್ಛ್ವಾಸೋ ಹತಸ್ಮೃತಿಃ ॥

ಅನುವಾದ

ಹೀಗೆ ಇದ್ದಕ್ಕಿದ್ದಂತೆ ಆ ವಾಯು ಹೊರಗೆ ನೂಕಿದಾಗ ಆ ಮಗುವು ತುಂಬಾ ಕಳವಳಗೊಂಡು ತಲೆಕೆಳಗಾಗಿ ಅತಿಕಷ್ಟದಿಂದ ಹೊರಗೆ ಬರುವುದು. ಆಗ ಅದರ ಶ್ವಾಸಗತಿಯು ತಡೆಯಲ್ಪಟ್ಟು ಹಿಂದಿನ ಸ್ಮೃತಿಯು ಕಳೆದುಹೋಗುವುದು.॥23॥

(ಶ್ಲೋಕ - 24)

ಮೂಲಮ್

ಪತಿತೋ ಭುವ್ಯಸೃಙ್ಮೂತ್ರೇ ವಿಷ್ಠಾಭೂರಿವ ಚೇಷ್ಟತೇ ।
ರೋರೂಯತಿ ಗತೇ ಜ್ಞಾನೇ ವಿಪರೀತಾಂ ಗತಿಂ ಗತಃ ॥

ಅನುವಾದ

ತಾಯಿಯ ರಕ್ತ ಮತ್ತು ಮೂತ್ರಗಳೊಡನೆ ಭೂಮಿಯ ಮೇಲೆ ಬಿದ್ದ ಆ ಶಿಶುವು ಮಲದ ಹುಳದಂತೆ ವಿಲವಿಲನೆ ಚಡಪಡಿಸುವುದು. ಅದರ ಗರ್ಭ ವಾಸದಲ್ಲಿ ಉಂಟಾದ ಎಲ್ಲ ಜ್ಞಾನವು ನಾಶಹೊಂದಿ, ಅದಕ್ಕೆ ವಿರುದ್ಧವಾದ ಗತಿಯನ್ನು ಅಂದರೆ, ಅಜ್ಞಾನಾವಸ್ಥೆಯನ್ನು ಹೊಂದಿ ಅದು ಗಟ್ಟಿಯಾಗಿ ಅಳತೊಡಗುವುದು.॥24॥

(ಶ್ಲೋಕ - 25)

ಮೂಲಮ್

ಪರಚ್ಛಂದಂ ನ ವಿದುಷಾ ಪುಷ್ಯಮಾಣೋ ಜನೇನ ಸಃ ।
ಅನಭಿಪ್ರೇತಮಾಪನ್ನಃ ಪ್ರತ್ಯಾಖ್ಯಾತುಮನೀಶ್ವರಃ ॥

ಅನುವಾದ

ಮತ್ತೆ ಶಿಶುವಿನ ಅಭಿಪ್ರಾಯವನ್ನು ಅರಿಯದಿರುವ ಜನರು ಅದನ್ನು ಸಾಕಿ ಸಲಹುತ್ತಾರೆ. ಇಂತಹ ಸ್ಥಿತಿಯಲ್ಲಿ ಅದಕ್ಕೆ ಆಗುವ ಪ್ರತಿಕೂಲತೆಗಳನ್ನೂ ಕೂಡ ನಿಷೇಧಿಸುವ ಶಕ್ತಿಯೂ ಅದರಲ್ಲಿ ಇರುವುದಿಲ್ಲ.॥25॥

(ಶ್ಲೋಕ - 26)

ಮೂಲಮ್

ಶಾಯಿತೋಶುಚಿಪರ್ಯಂಕೇ ಜಂತುಃ ಸ್ವೇದಜದೂಷಿತೇ ।
ನೇಶಃ ಕಂಡೂ ಯನೇಂಗಾನಾಮಾಸನೋತ್ಥಾನಚೇಷ್ಟನೇ ॥

ಅನುವಾದ

ತಿಗಣೆಯೇ ಮುಂತಾದ ಬೆವರಿನಿಂದ ಹುಟ್ಟುವ ಜಂತುಗಳಿಂದ ತುಂಬಿರುವ ಕೊಳಕು ಮಂಚ-ತೊಟ್ಟಿಲು-ಹಾಸಿಗೆ ಯಲ್ಲಿ ಅದನ್ನು ಮಲಗಿಸುವರು. ಆಗ ಅದಕ್ಕೆ ತನ್ನ ಅಂಗಗಳನ್ನು ಕೆರೆದುಕೊಳ್ಳುವುದಕ್ಕೂ, ಏಳುವುದಕ್ಕೂ, ಹೊರಳಾಡುವುದಕ್ಕೂ ಶಕ್ತಿಯಿಲ್ಲದೆ ಕಷ್ಟಪಡುವುದು.॥26॥

(ಶ್ಲೋಕ - 27)

ಮೂಲಮ್

ತುದಂತ್ಯಾಮತ್ವಚಂ ದಂಶಾಃ ಮಶಕಾ ಮತ್ಕುಣಾದಯಃ ।
ರುದಂತಂ ವಿಗತಜ್ಞಾನಂ ಕೃಮಯಃ ಕೃಮಿಕಂ ಯಥಾ ॥

ಅನುವಾದ

ಅದರ ಚರ್ಮವು ತುಂಬಾ ಕೋಮಲವಾಗಿರುತ್ತದೆ. ಅದನ್ನು ನೊಣ, ತಿಗಣೆ, ಸೊಳ್ಳೆ ಮುಂತಾದ ಕೀಟಗಳು ಚಿಕ್ಕಹುಳುಗಳು ದೊಡ್ಡ ಹುಳುಗಳನ್ನು ಕಚ್ಚುವಂತೆ ನೋಯಿಸುತ್ತಾ ಇರುತ್ತವೆ. ಈಗ ಅದರ ಗರ್ಭಾ ವಸ್ಥೆಯ ಎಲ್ಲ ಜ್ಞಾನವೂ ಹೊರಟುಹೋಗಿ, ಅಳುವುದಲ್ಲದೆ ಅದರಿಂದ ಬೇರೆ ಏನನ್ನೂ ಮಾಡಲಾಗುವುದಿಲ್ಲ.॥27॥

(ಶ್ಲೋಕ - 28)

ಮೂಲಮ್

ಇತ್ಯೇವಂ ಶೈಶವಂ ಭುಕ್ತ್ವಾ ದುಃಖಂ ಪೌಗಂಡಮೇವ ಚ ।
ಅಲಬ್ಧಾ ಭೀಪ್ಸಿತೋಜ್ಞಾನಾದಿದ್ಧಮನ್ಯುಃ ಶುಚಾರ್ಪಿತಃ ॥

ಅನುವಾದ

ಈ ಪ್ರಕಾರ ಬಾಲ್ಯ (ಕೌಮಾರ) ಮತ್ತು ಪೌಗಂಡವೆಂಬ ಬಾಲ್ಯ-ಯೌವನಗಳ ಮಧ್ಯಾವಸ್ಥೆಯ ದುಃಖವನ್ನು ಅನುಭವಿಸಿದ ಆ ಬಾಲಕನು ಯೌವನವನ್ನು ಹೊಂದುವನು. ಆಗ ಆತನಿಗೆ ಇಷ್ಟ ವಾದ ಭೋಗವು ಸಿಗದೆ ಇದ್ದರೆ ಅಜ್ಞಾನದಿಂದ ಕೋಪವು ಕೆರಳಿ ದುಃಖವೇಗಕ್ಕೆ ಒಳಗಾಗುವನು.॥28॥

(ಶ್ಲೋಕ - 29)

ಮೂಲಮ್

ಸಹ ದೇಹೇನ ಮಾನೇನ ವರ್ಧಮಾನೇನ ಮನ್ಯುನಾ ।
ಕರೋತಿ ವಿಗ್ರಹಂ ಕಾಮೀ ಕಾಮಿಷ್ವಂತಾಯ ಚಾತ್ಮನಃ ॥

ಅನುವಾದ

ದೇಹದೊಂದಿಗೆ ಅಭಿ ಮಾನವೂ, ಕ್ರೋಧವೂ ಹೆಚ್ಚುವುದರಿಂದ ಆ ಕಾಮಪರವಶನಾದ ಜೀವನು ಇತರ ಕಾಮುಕರೊಡನೆ ತನ್ನ ವಿನಾಶಕರವಾದ ರೀತಿಯಲ್ಲಿ ಸ್ಪರ್ಧಿಸಿ ಕಾದಾಡುವನು.॥29॥

(ಶ್ಲೋಕ - 30)

ಮೂಲಮ್

ಭೂತೈಃ ಪಂಚಭಿರಾರಬ್ಧೇ ದೇಹೇ ದೇಹ್ಯ ಬುಧೋಸಕೃತ್ ।
ಅಹಂ ಮಮೇತ್ಯಸದ್ಗ್ರಾಹಃ ಕರೋತಿ ಕುಮತಿರ್ಮತಿಮ್ ॥

ಅನುವಾದ

ದುರ್ಬುದ್ಧಿಯಿಂದ ಕೂಡಿದ ಅಜ್ಞಾನಿಯಾದ ಆ ಜೀವನು ಪಂಚಭೂತಗಳಿಂದ ನಿರ್ಮಿತವಾಗಿ ರುವ ಶರೀರದಲ್ಲಿ ‘ನಾನು-ನನ್ನದು’ ಎಂಬ ಅಭಿಮಾನ ಆಗ್ರಹ ವನ್ನು ಹೊಂದುವನು.॥30॥

(ಶ್ಲೋಕ - 31)

ಮೂಲಮ್

ತದರ್ಥಂ ಕುರುತೇ ಕರ್ಮ ಯದ್ಬದ್ಧೋ ಯಾತಿ ಸಂಸೃತಿಮ್ ।
ಯೋನುಯಾತಿ ದದತ್ಕ್ಲೇಶಮವಿದ್ಯಾಕರ್ಮಬಂಧನಃ ॥

ಅನುವಾದ

ಮುಪ್ಪು, ಖಾಯಿಲೆ ಮುಂತಾದ ಬಗೆ-ಬಗೆಯ ಕಷ್ಟಗಳನ್ನೇ ಕೊಡುತ್ತಾ ; ಅವಿದ್ಯೆ, ಕಾಮ ಮತ್ತು ಕರ್ಮಗಳಿಗೆ ಕಟ್ಟುಬಿದ್ದು ಸದಾ ಈತನನ್ನು ಹಿಂಬಾಲಿಸುತ್ತಿರುವ ಆ ದೇಹದ ರಕ್ಷಣೆಗಾಗಿಯೇ ಕರ್ಮಗಳನ್ನು ಮಾಡುತ್ತಾ ಸಂಸಾರ ಚಕ್ರದಲ್ಲಿ ಸಿಕ್ಕಿಬೀಳುವನು.॥31॥

(ಶ್ಲೋಕ - 32)

ಮೂಲಮ್

ಯದ್ಯಸದ್ಭಿಃ ಪಥಿ ಪುನಃ ಶಿಶ್ನೋದರಕೃತೋದ್ಯಮೈಃ ।
ಆಸ್ಥಿತೋ ರಮತೇ ಜಂತುಸ್ತಮೋ ವಿಶತಿ ಪೂರ್ವವತ್ ॥

ಅನುವಾದ

ಸನ್ಮಾರ್ಗದಲ್ಲಿ ನಡೆಯುತ್ತಿರುವಾಗ ಇವನಿಗೆ ಎಲ್ಲಾದರೂ ಆಹಾರ-ಮೈಥುನಗಳಿಗೆ ಪ್ರಯತ್ನಿಸುವ ವಿಷಯಿ-ಜನರೊಡನೆ ಸಂಸರ್ಗ ಉಂಟಾದರೆ, ಅವರ ದಾರಿಯನ್ನೇ ಹಿಡಿದು ಹಿಂದಿ ನಂತೆಯೇ ಮತ್ತೆ ನರಕಯೋನಿಗಳಲ್ಲಿಯೇ ಬೀಳಬೇಕಾಗುವುದು.॥32॥

(ಶ್ಲೋಕ - 33)

ಮೂಲಮ್

ಸತ್ಯಂ ಶೌಚಂ ದಯಾ ವೌನಂ ಬುದ್ಧಿಃ ಶ್ರೀರ್ಹ್ರೀರ್ಯಶಃ ಕ್ಷಮಾ ।
ಶಮೋ ದಮೋ ಭಗಶ್ಚೇತಿ ಯತ್ಸಂಗಾದ್ಯಾತಿ ಸಂಕ್ಷಯಮ್ ॥

(ಶ್ಲೋಕ - 34)

ಮೂಲಮ್

ತೇಷ್ವಶಾಂತೇಷು ಮೂಢೇಷು ಖಂಡಿತಾತ್ಮಸ್ವಸಾಧುಷು ।
ಸಂಗಂ ನ ಕುರ್ಯಾಚ್ಛೋಚ್ಯೇಷು ಯೋಷಿತ್ಕ್ರೀಡಾಮೃಗೇಷು ಚ ॥

ಅನುವಾದ

ಯಾರ ಸಂಗದಿಂದ ಸತ್ಯ, ಶೌಚ (ಒಳ-ಹೊರಗಿನ ಶುಚಿತ್ವ), ದಯೆ, ಮಿತಭಾಷಣ, ಸದ್ಬುದ್ಧಿ, ಸಂಪತ್ತು, ನಾಚಿಕೆ, ಕೀರ್ತಿ, ಕ್ಷಮೆ, ಮನ-ಇಂದ್ರಿಯಗಳ ಸಂಯಮ ಮತ್ತು ಐಶ್ವರ್ಯ ಮುಂತಾದ ಎಲ್ಲ ಸದ್ಗುಣಗಳು ನಾಶವಾಗಿ ಬಿಡುವವೋ, ಅಂತಹ ಅತ್ಯಂತ ಶೋಚನೀಯರಾದ ಹೆಂಗಸರ ಆಟದ ಬೊಂಬೆ ಯಂತಿರುವ ಅಶಾಂತರೂ, ಮೂರ್ಖರೂ, ದೇಹಾತ್ಮದರ್ಶಿ ಗಳೂ, ಆದ ದುಷ್ಟಜನರ ಸಹವಾಸವನ್ನು ಎಂದಿಗೂ ಮಾಡಬಾರದು.॥33-34॥

(ಶ್ಲೋಕ - 35)

ಮೂಲಮ್

ನ ತಥಾಸ್ಯ ಭವೇನ್ಮೋಹೋ ಬಂಧಶ್ಚಾನ್ಯಪ್ರಸಂಗತಃ ।
ಯೋಷಿತ್ಸಂಗಾದ್ಯಥಾ ಪುಂಸೋ ಯಥಾ ತತ್ಸಂಗಿಸಂಗತಃ ॥ 35 ॥

ಅನುವಾದ

ಮನುಷ್ಯನಿಗೆ ಸೀಯರ ಮತ್ತು ಸೀಸಂಗಿಗಳ ಸಂಗದಿಂದ ಉಂಟಾಗುವ ಮೋಹ-ಬಂಧನಗಳು ಬೇರೆ ಯಾವುದರಿಂದಲೂ ಇಂತಹ ಮೋಹ-ಬಂಧನಗಳಂತೆ ಉಂಟಾಗುವುದಿಲ್ಲ.॥35॥

(ಶ್ಲೋಕ - 36)

ಮೂಲಮ್

ಪ್ರಜಾಪತಿಃ ಸ್ವಾಂ ದುಹಿತರಂ ದೃಷ್ಟ್ವಾ ತದ್ರೂಪಧರ್ಷಿತಃ ।
ರೋಹಿದ್ಭೂತಾಂ ಸೋನ್ವಧಾವದೃಕ್ಷರೂಪೀ ಹತತ್ರಪಃ ॥ 36 ॥

ಅನುವಾದ

ಒಮ್ಮೆ ತನ್ನ ಪುತ್ರಿಯಾದ ಸರಸ್ವತಿಯನ್ನು ನೋಡಿ ಬ್ರಹ್ಮದೇವರೂ ಕೂಡ ಅವಳ ರೂಪಲಾವಣ್ಯಗಳಿಗೆ ಮರುಳಾಗಿದ್ದರು. ಆಕೆಯು ಮೃಗರೂಪವಾಗಿ ಓಡುತ್ತಿದ್ದರೂ ತಾನು ನಾಚಿಕೆಗೆಟ್ಟು ಮೃಗರೂಪವಾಗಿ ಓಡತೊಡಗಿದರು.॥36॥

(ಶ್ಲೋಕ - 37)

ಮೂಲಮ್

ತತ್ಸೃಷ್ಟಸೃಷ್ಟಸೃಷ್ಟೇಷು ಕೋ ನ್ವಖಂಡಿತಧೀಃ ಪುಮಾನ್ ।
ಋಷಿಂ ನಾರಾಯಣಮೃತೇ ಯೋಷಿನ್ಮಯ್ಯೇಹ ಮಾಯಯಾ ॥

ಅನುವಾದ

ಹೀಗಿರುವ ಅದೇ ಬ್ರಹ್ಮನು ಸೃಷ್ಟಿಸಿದ ಮರೀಚಿಯೇ ಮುಂತಾದ ವರಿಂದ ಸೃಷ್ಟಿಸಲ್ಪಟ್ಟ, ಕಶ್ಯಪರೇ ಮುಂತಾದವರಿಂದ ಬೆಳೆದು ಬಂದಿರುವ ಈ ಜೀವಿಗಳಲ್ಲಿ ಯಾರು ತಾನೇ ಸೀರೂಪವಾದ ಮಾಯೆಗೆ ಒಳಗಾಗದೇ ಇರುವನು? ಆ ಮಾಯೆಗೆ ಒಳಗಾಗದ ಬುದ್ದಿಯುಳ್ಳವನು ಋಷಿಶ್ರೇಷ್ಠನಾದ ನಾರಾಯಣಮುನಿಯೊಬ್ಬನೇ.॥37॥

(ಶ್ಲೋಕ - 38)

ಮೂಲಮ್

ಬಲಂ ಮೇ ಪಶ್ಯ ಮಾಯಾಯಾಃ ಸೀಮಯ್ಯಾ ಜಯಿನೋ ದಿಶಾಮ್ ।
ಯಾ ಕರೋತಿ ಪದಾಕ್ರಾಂತಾನ್ ಭ್ರೂವಿಜೃಂಭೇಣ ಕೇವಲಮ್ ॥

ಅನುವಾದ

ಆಹಾ ! ನನ್ನ ಈ ಸೀರೂಪಿಯಾದ ಮಾಯೆಯ ಬಲ ವನ್ನು ನೋಡು ! ಅದು ತನ್ನ ಹುಟ್ಟಿನಾಟದಿಂದಲೇ ದಿಗ್ವಿಜಯಿ ಗಳಾದ ದೊಡ್ಡ-ದೊಡ್ಡ ವೀರರನ್ನು ಕಾಲಿನಿಂದ ಹೊಸೆದು ಹಾಕುವುದು.॥38॥

(ಶ್ಲೋಕ - 39)

ಮೂಲಮ್

ಸಂಗಂ ನ ಕುರ್ಯಾತ್ಪ್ರಮದಾಸು ಜಾತು ಯೋಗಸ್ಯ ಪಾರಂ ಪರಮಾರುರುಕ್ಷುಃ ।
ಮತ್ಸೇವಯಾ ಪ್ರತಿಲಬ್ಧಾತ್ಮಲಾಭೋ ವದಂತಿ ಯಾ ನಿರಯದ್ವಾರಮಸ್ಯ ॥

ಅನುವಾದ

ಯೋಗದ ಪರಮ ಪದದಲ್ಲಿ ಆರೂಢನಾಗಲು ಬಯಸು ವವನು, ಅಥವಾ ನನ್ನ ಸೇವೆಯ ಪ್ರಭಾವದಿಂದ ಆತ್ಮಲಾಭವನ್ನು ಪಡೆದ ವಿವೇಕಿಯು ಸೀಯರ ಸಂಗವನ್ನು ಮಾಡಲೇ ಬಾರದು. ಏಕೆಂದರೆ, ಸೀಸಂಗಿಗಳಿಗೆ ನರಕದ ಬಾಗಿಲು ತೆರೆದುಕೊಂಡಿರುತ್ತದೆ ಎಂದು ಹೇಳುತ್ತಾರೆ.॥39॥

(ಶ್ಲೋಕ - 40)

ಮೂಲಮ್

ಯೋಪಯಾತಿ ಶನೈರ್ಮಾಯಾ ಯೋಷಿದ್ದೇವವಿನಿರ್ಮಿತಾ ।
ತಾಮೀಕ್ಷೇತಾತ್ಮನೋ ಮೃತ್ಯುಂ ತೃಣೈಃ ಕೂಪಮಿವಾವೃತಮ್ ॥

ಅನುವಾದ

ಭಗವಂತನು ರಚಿಸಿದ ಈ ಸೀರೂಪಿಯಾದ ಮಾಯೆಯು ಮೆಲ್ಲ-ಮೆಲ್ಲನೆ ಸೇವಾದಿಗಳ ನೆಪದಿಂದ ಬಳಿಗೆ ಬರುತ್ತಾಳೆ. ಇವಳು ಹುಲ್ಲು ಮುಚ್ಚಿಕೊಂಡಿರುವ ಪಾಳುಬಾವಿಯಂತೆ ತನ್ನ ಮೃತ್ಯುವೆಂದೇ ತಿಳಿಯಬೇಕು.॥40॥

(ಶ್ಲೋಕ - 41)

ಮೂಲಮ್

ಯಾಂ ಮನ್ಯತೇ ಪತಿಂ ಮೋಹಾನ್ಮನ್ಮಾಯಾಮೃಷಭಾಯತೀಮ್ ।
ಸೀತ್ವಂ ಸೀಸಂಗತಃ ಪ್ರಾಪ್ತೋ ವಿತ್ತಾಪತ್ಯಗೃಹಪ್ರದಮ್ ॥

(ಶ್ಲೋಕ - 42)

ಮೂಲಮ್

ತಾಮಾತ್ಮನೋ ವಿಜಾನೀಯಾತ್ಪತ್ಯಪತ್ಯಗೃಹಾತ್ಮಕಮ್ ।
ದೈವೋಪಸಾದಿತಂ ಮೃತ್ಯುಂ ಮೃಗಯೋರ್ಗಾಯನಂ ಯಥಾ ॥

ಅನುವಾದ

ಸೀಯಲ್ಲೇ ಸದಾ ಆಸಕ್ತನಾದ್ದರಿಂದ ಮನುಷ್ಯನು ಅಂತ್ಯಕಾಲ ದಲ್ಲಿಯೂ ಸೀಯನ್ನೇ ಚಿಂತನೆ ಮಾಡುವುದರಿಂದ ಮುಂದೆ ಸೀಯೋನಿಯಲ್ಲೇ ಜನಿಸುತ್ತಾನೆ. ಹೀಗೆ ಸೀಯೋನಿಯಲ್ಲಿರುವ ಜೀವನು ಪುರುಷರೂಪದಲ್ಲಿ ಕಾಣುವ ನನ್ನ ಮಾಯೆಯನ್ನೇ ಧನ, ಪುತ್ರ, ಮನೆ ಮುಂತಾದವುಗಳನ್ನು ಕೊಡುವ ತನ್ನ ಪತಿಯೆಂದು ತಿಳಿಯುತ್ತಿರುತ್ತಾನೆ. ವ್ಯಾಧನ ಕಿವಿಗಿಂಪಾದ ಹಾಡನ್ನು ಕೇಳಿದ ಬಡಪಾಯಿ ಪಶು-ಪಕ್ಷಿಗಳು ಮೋಸಹೋಗಿ ಬಲೆಯಲ್ಲಿ ಸಿಕ್ಕಿಬಿದ್ದು ತಮ್ಮ ನಾಶಕ್ಕೆ ಕಾರಣವಾಗುವಂತೆ ಆ ಜೀವನು ಪುತ್ರ, ಪತಿ, ಗೃಹಾದಿಗಳು ವಿಧಾತನು ನಿಶ್ಚಯಿಸಿದ ತನ್ನ ಮೃತ್ಯುವೆಂದೇ ತಿಳಿಯ ಬೇಕು. ಪುರುಷಸಂಗದಿಂದ ದೂರವುಳಿಯಬೇಕು.॥41-42॥

(ಶ್ಲೋಕ - 43)

ಮೂಲಮ್

ದೇಹೇನ ಜೀವಭೂತೇನ ಲೋಕಾಲ್ಲೋಕಮನುವ್ರಜನ್ ।
ಭುಂಜಾ ನ ಏವ ಕರ್ಮಾಣಿ ಕರೋತ್ಯವಿರತಂ ಪುಮಾನ್ ॥

ಅನುವಾದ

ಅಮ್ಮಾ! ಜೀವನು ತನ್ನ ಲಿಂಗದೇಹದಿಂದ ಒಂದು ಲೋಕದಿಂದ ಮತ್ತೊಂದು ಲೋಕಕ್ಕೆ ಹೋಗುತ್ತಿರುತ್ತಾನೆ. ತನ್ನ ಪ್ರಾರಬ್ಧಕರ್ಮ ಗಳನ್ನು ಅನುಭವಿಸುತ್ತಾ ಬೇರೆ ದೇಹಗಳನ್ನು ಪಡೆಯಲಿಕ್ಕಾಗಿ ನಿರಂತರ ಬೇರೆ ಕರ್ಮಗಳನ್ನು ಮಾಡುತ್ತಾ ಇರುತ್ತಾನೆ.॥43॥

(ಶ್ಲೋಕ - 44)

ಮೂಲಮ್

ಜೀವೋ ಹ್ಯಸ್ಯಾನುಗೋ ದೇಹೋ ಭೂತೇಂದ್ರಿಯಮನೋಮಯಃ ।
ತನ್ನಿರೋಧೋಸ್ಯ ಮರಣಮಾವಿರ್ಭಾವಸ್ತು ಸಂಭವಃ ॥ 44 ॥

ಅನುವಾದ

ಜೀವಿಯ ಈ ಉಪಾಧಿರೂಪವಾದ ಲಿಂಗಶರೀರವಾದರೋ ಮೋಕ್ಷದವರೆಗೂ ಜೊತೆಯಲ್ಲೇ ಇರುತ್ತದೆ. ಭೂತಗಳು, ಇಂದ್ರಿಯಗಳು, ಮನಸ್ಸು ಇವುಗಳ ಕಾರ್ಯರೂಪವಾದ ಸ್ಥೂಲ ದೇಹವು ಭೋಗಕ್ಕೆ ಅಧಿಷ್ಠಾನವು. ಈ ಲಿಂಗದೇಹ ಮತ್ತು ಸ್ಥೂಲ ದೇಹಗಳು ಒಟ್ಟಿಗೆ ಸೇರಿ ಕೆಲಸಮಾಡದೇ ಇರುವುದು ಮೃತ್ಯುವು. ಅವೆರಡೂ ಒಟ್ಟಿಗೆ ಸೇರಿ ಕಾರ್ಯಮಾಡುವುದನ್ನೇ ಜನ್ಮ ಎಂದು ಕರೆಯುತ್ತಾರೆ.॥44॥

(ಶ್ಲೋಕ - 45)

ಮೂಲಮ್

ದ್ರವ್ಯೋಪಲಬ್ಧಿಸ್ಥಾನಸ್ಯ ದ್ರವ್ಯೇಕ್ಷಾಯೋಗ್ಯತಾ ಯದಾ ।
ತತ್ಪಂಚತ್ವಮಹಂ ಮಾನಾದುತ್ಪತ್ತಿರ್ದ್ರವ್ಯದರ್ಶನಮ್ ॥ 45 ॥

ಅನುವಾದ

ಪದಾರ್ಥಗಳನ್ನು ಪಡೆಯುವ ಸ್ಥಾನ ವಾದ ಈ ಸ್ಥೂಲಶರೀರದಲ್ಲಿ ಅವುಗಳನ್ನು ಗ್ರಹಿಸುವ ಯೋಗ್ಯತೆಯು ಇಲ್ಲದಿದ್ದಾಗ ಅದರ ಮರಣವಾಗಿದೆ; ಮತ್ತು ಈ ಸ್ಥೂಲ ಶರೀರವೇ ‘ನಾನಾಗಿದ್ದೇನೆ’ ಈ ಅಭಿಮಾನದೊಂದಿಗೆ ಅದನ್ನು ನೋಡುವುದೇ ಜನ್ಮವಾಗಿದೆ.॥45॥

(ಶ್ಲೋಕ - 46)

ಮೂಲಮ್

ಯಥಾಕ್ಷ್ಣೋರ್ಧ್ರವ್ಯಾವಯವದರ್ಶನಾಯೋಗ್ಯ ತಾ ಯದಾ ।
ತದೈವ ಚಕ್ಷುಷೋ ದ್ರಷ್ಟುರ್ದ್ರಷ್ಟೃತ್ವಾಯೋಗ್ಯ ತಾನಯೋಃ ॥ 46 ॥

ಅನುವಾದ

ಕಣ್ಣುಗಳಲ್ಲಿ ಯಾವುದೋ ದೋಷದಿಂದ ರೂಪಾದಿಗಳನ್ನು ನೋಡುವ ಯೋಗ್ಯತೆಯು ಇಲ್ಲದಿದ್ದಾಗ, ಅದರಲ್ಲಿರುವ ಚಕ್ಷುರಿಂದ್ರಿಯವು ರೂಪವನ್ನು ನೋಡಲು ಅಸಮರ್ಥವಾಗುತ್ತದೆ. ಕಣ್ಣು ಮತ್ತು ಅದರಲ್ಲಿರುವ ಇಂದ್ರಿಯ ಇವೆರಡೂ ರೂಪವನ್ನು ನೋಡಲು ಅಸಮರ್ಥವಾಗುತ್ತದೆ. ಹೀಗೆ ಅಸಮರ್ಥವಾದಾಗ ಇವೆರಡರ ಸಾಕ್ಷಿಯಾದ ಜೀವನಲ್ಲಿಯೂ ಆ ಯೋಗ್ಯತೆ ಉಳಿಯುವುದಿಲ್ಲ.॥46॥

(ಶ್ಲೋಕ - 47)

ಮೂಲಮ್

ತಸ್ಮಾನ್ನ ಕಾರ್ಯಃ ಸಂತ್ರಾಸೋ ನ ಕಾರ್ಪಣ್ಯಂ ನ ಸಂಭ್ರಮಃ ।
ಬುದ್ಧ್ವಾ ಜೀವಗತಿಂ ಧೀರೋ ಮುಕ್ತಸಂಗಶ್ಚರೇದಿಹ ॥

(ಶ್ಲೋಕ - 48)

ಮೂಲಮ್

ಸಮ್ಯಗ್ದರ್ಶನಯಾ ಬುದ್ಧ್ಯಾ ಯೋಗವೈರಾಗ್ಯಯುಕ್ತಯಾ ।
ಮಾಯಾವಿರಚಿತೇ ಲೋಕೇ ಚರೇನ್ನ್ಯಸ್ಯ ಕಲೇವರಮ್ ॥

ಅನುವಾದ

ಆದುದರಿಂದ ಮುಮುಕ್ಷು ವಾದವನು ಮರಣಕ್ಕೆ ಭಯಪಡಬಾರದು. ಜೀವನಕ್ಕಾಗಿ ದೀನ ನಾಗ ಬಾರದು ಅಥವಾ ಮೋಹಿತನಾಗಬಾರದು. ಅವನು ಜೀವಿಯ ಸ್ವರೂಪವನ್ನು ಅರಿತುಕೊಂಡು ಧೈರ್ಯವಾಗಿ ನಿಃಸಂಗ ಭಾವ ದಿಂದ ವಿಚರಿಸುತ್ತಿರಬೇಕು. ಈ ಮಾಯಾಮಯ ಸಂಸಾರದಲ್ಲಿ ಯೋಗ-ವೈರಾಗ್ಯಗಳಿಂದ ಕೂಡಿ ಸಮ್ಯಕ್ ಜ್ಞಾನಮಯ ಬುದ್ಧಿ ಯಿಂದ ಶರೀರವು ಗಿರವಿಯಿಟ್ಟಿರುವಂತೆ ತಿಳಿದು ಅದರ ಕುರಿತು ಅನಾಸಕ್ತನಾಗಿದ್ದುಕೊಂಡು ವಿಚರಿಸುತ್ತಿರಬೇಕು.॥47-48॥

ಅನುವಾದ (ಸಮಾಪ್ತಿಃ)

ಮೂವತ್ತೊಂದನೆಯ ಅಧ್ಯಾಯವು ಮುಗಿಯಿತು. ॥31॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ತೃತೀಯಸ್ಕಂಧೇ ಕಾಪಿಲೇಯೋಪಾಖ್ಯಾನೇ ಜೀವಗತಿರ್ನಾಮೈಕತ್ರಿಂಶೋಽಧ್ಯಾಯಃ ॥31॥