೨೯

[ಇಪ್ಪತ್ತೊಂಭತ್ತನೆಯ ಅಧ್ಯಾಯ]

ಭಾಗಸೂಚನಾ

ಭಕ್ತಿಯೋಗದ ಮರ್ಮ ಮತ್ತು ಕಾಲದ ಮಹಿಮೆ

(ಶ್ಲೋಕ - 1)

ಮೂಲಮ್ (ವಾಚನಮ್)

ದೇವಹೂತಿರುವಾಚ

ಮೂಲಮ್

ಲಕ್ಷಣಂ ಮಹದಾದೀನಾಂ ಪ್ರಕೃತೇಃ ಪುರುಷಸ್ಯ ಚ ।
ಸ್ವರೂಪಂ ಲಕ್ಷ್ಯತೇಮೀಷಾಂ ಯೇನ ತತ್ಪಾರಮಾರ್ಥಿಕಮ್ ॥

(ಶ್ಲೋಕ - 2)

ಮೂಲಮ್

ಯಥಾ ಸಾಂಖ್ಯೇಷು ಕಥಿತಂ ಯನ್ಮೂಲಂ ತತ್ಪ್ರಚಕ್ಷತೇ ।
ಭಕ್ತಿಯೋಗಸ್ಯ ಮೇ ಮಾರ್ಗಂ ಬ್ರೂಹಿ ವಿಸ್ತರಶಃ ಪ್ರಭೋ ॥

ಅನುವಾದ

ದೇವಹೂತಿಯು ಕೇಳಿದಳು ಪ್ರಭುವೇ ! ಸಾಂಖ್ಯಶಾಸ ದಲ್ಲಿ ಪ್ರಕೃತಿ, ಪುರುಷ ಮತ್ತು ಮಹತ್ತತ್ತ್ವಾದಿ ಲಕ್ಷಣಗಳು ಇರು ವಂತೆ, ಹಾಗೂ ಯಾವುದರ ಮೂಲಕ ಅವುಗಳ ವಾಸ್ತವಿಕ ಸ್ವರೂಪ ವನ್ನು ಬೇರೆ-ಬೇರೆ ತಿಳಿಯಲಾಗುತ್ತದೋ ಮತ್ತು ಭಕ್ತಿಯೋಗ ವನ್ನೂ , ಅದರ ಪ್ರಯೋಜನವನ್ನೂ ಹೇಳಲಾಗಿದೆಯೋ ಅದೆಲ್ಲ ವನ್ನು ನೀನು ನನಗೆ ತಿಳಿಸಿದೆ. ಈಗ ದಯಮಾಡಿ ಭಕ್ತಿಯೋಗದ ಮಾರ್ಗವನ್ನು ವಿಸ್ತಾರವಾಗಿ ನನಗೆ ಹೇಳುವವನಾಗು.॥1-2॥

(ಶ್ಲೋಕ - 3)

ಮೂಲಮ್

ವಿರಾಗೋ ಯೇನ ಪುರುಷೋ ಭಗವನ್ಸರ್ವತೋ ಭವೇತ್ ।
ಆಚಕ್ಷ್ವ ಜೀವಲೋಕಸ್ಯ ವಿವಿಧಾ ಮಮ ಸಂಸೃತೀಃ ॥

ಅನುವಾದ

ಇದಲ್ಲದೆ ಜೀವರ ಜನ್ಮ-ಮರಣರೂಪವಾದ ಅನೇಕ ವಿಧವಾದ ಗತಿಗಳನ್ನೂ ವರ್ಣಿಸು. ಅವುಗಳನ್ನು ಕೇಳುವುದರಿಂದ ಜೀವನಿಗೆ ಎಲ್ಲ ವಿಧದ ವಸ್ತುಗಳಲ್ಲಿ ವೈರಾಗ್ಯ ಉಂಟಾಗುತ್ತದೆ.॥3॥

(ಶ್ಲೋಕ - 4)

ಮೂಲಮ್

ಕಾಲಸ್ಯೇಶ್ವರರೂಪಸ್ಯ ಪರೇಷಾಂ ಚ ಪರಸ್ಯ ತೇ ।
ಸ್ವರೂಪಂ ಬತ ಕುರ್ವಂತಿ ಯದ್ಧೇತೋಃ ಕುಶಲಂ ಜನಾಃ ॥

ಅನುವಾದ

ಯಾವುದರ ಭಯದಿಂದ ಜನರು ಶುಭ ಕರ್ಮಗಳಲ್ಲಿ ಪ್ರವೃತ್ತ ರಾಗುತ್ತಾರೋ ಮತ್ತು ಯಾವುದು ಬ್ರಹ್ಮಾದಿಗಳಿಗೂ ಶಾಸನ ಮಾಡುವಂತಹುದೋ ಆ ಸರ್ವಸಮರ್ಥ ಕಾಲದ ಸ್ವರೂಪ ವನ್ನೂ ಕೂಡ ನೀನು ನನಗೆ ಹೇಳು.॥4॥

(ಶ್ಲೋಕ - 5)

ಮೂಲಮ್

ಲೋಕಸ್ಯ ಮಿಥ್ಯಾಭಿಮತೇರಚಕ್ಷುಷ-
ಶ್ಚಿರಂ ಪ್ರಸುಪ್ತಸ್ಯ ತಮಸ್ಯನಾಶ್ರಯೇ ।
ಶ್ರಾಂತಸ್ಯ ಕರ್ಮಸ್ವನುವಿದ್ಧಯಾ ಧಿಯಾ
ತ್ವಮಾವಿರಾಸೀಃ ಕಿಲ ಯೋಗಭಾಸ್ಕರಃ ॥

ಅನುವಾದ

ಜ್ಞಾನದೃಷ್ಟಿಯು ಲುಪ್ತ ವಾದ ಕಾರಣ ದೇಹಾದಿ ಮಿಥ್ಯಾ ವಸ್ತುಗಳಲ್ಲಿ ಯಾರಿಗೆ ಆತ್ಮಾಭಿ ಮಾನ ಉಂಟಾಗಿದೆಯೋ, ಹಾಗೂ ಬುದ್ಧಿಯು ಕರ್ಮಾಸಕ್ತ ವಾಗಿರುವ ಕಾರಣ ಅತ್ಯಂತ ಶ್ರಮಪಡುತ್ತಾ ಯಾರು ಬಹಳ ಕಾಲ ದಿಂದ ಅಪಾರ ಅಂಧಕಾರಮಯ ಸಂಸಾರದಲ್ಲಿ ಮಲಗಿರು ವರೋ ಅಂತಹವರನ್ನು ಎಚ್ಚರಿಸಲು ಯೋಗಭಾಸ್ಕರನಂತೆ ನೀನು ಅವತರಿಸಿರುವೆ.॥5॥

(ಶ್ಲೋಕ - 6)

ಮೂಲಮ್ (ವಾಚನಮ್)

ಮೈತ್ರೇಯ ಉವಾಚ

ಮೂಲಮ್

ಇತಿ ಮಾತುರ್ವಚಃ ಶ್ಲಕ್ಷ್ಣಂ ಪ್ರತಿನಂದ್ಯ ಮಹಾಮುನಿಃ ।
ಆಬಭಾಷೇ ಕುರುಶ್ರೇಷ್ಠ ಪ್ರೀತಸ್ತಾಂ ಕರುಣಾರ್ದಿತಃ ॥

ಅನುವಾದ

ಶ್ರೀಮೈತ್ರೇಯರು ಹೇಳುತ್ತಾರೆ ಕುರುಶ್ರೇಷ್ಠನಾದ ವಿದುರನೇ ! ತಾಯಿಯ ಆ ಚೆನ್ನುಡಿಯನ್ನು ಕೇಳಿ ಕಪಿಲ ಮಹಾ ಮುನಿಗಳು ಆಕೆಯನ್ನು ಪ್ರಶಂಸಿಸುತ್ತಾ, ಜೀವರ ಕುರಿತು ದಯೆಯಿಂದ ದ್ರವೀಭೂತರಾಗಿ ಹೆಚ್ಚಾದ ಪ್ರಸನ್ನತೆಯಿಂದ ಅವಳಲ್ಲಿ ಹೇಳತೊಡಗಿದರು.॥6॥

(ಶ್ಲೋಕ - 7)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ಭಕ್ತಿಯೋಗೋ ಬಹುವಿಧೋ ಮಾರ್ಗೈರ್ಭಾಮಿನಿ ಭಾವ್ಯತೇ ।
ಸ್ವಭಾವಗುಣಮಾರ್ಗೇಣ ಪುಂಸಾಂ ಭಾವೋ ವಿಭಿದ್ಯತೇ ॥

ಅನುವಾದ

ಶ್ರೀಭಗವಂತನು ಹೇಳಿದನು ಅಮ್ಮಾ ! ಸಾಧಕರ ಭಾವಕ್ಕನು ಸಾರವಾಗಿ ಭಕ್ತಿಯೋಗವು ಅನೇಕ ಪ್ರಕಾರವಾಗಿ ಪ್ರಕಾಶಿಸುತ್ತದೆ. ಏಕೆಂದರೆ, ಸ್ವಭಾವ ಮತ್ತು ಗುಣಗಳ ಭೇದದಿಂದ ಮನುಷ್ಯರ ಭಾವದಲ್ಲಿಯೂ ವಿಭಿನ್ನತೆ ಬಂದುಬಿಡುತ್ತದೆ.॥7॥

(ಶ್ಲೋಕ - 8)

ಮೂಲಮ್

ಅಭಿಸಂಧಾಯ ಯೋ ಹಿಂಸಾಂ ದಂಭಂ ಮಾತ್ಸರ್ಯಮೇವ ವಾ ।
ಸಂರಂಭೀ ಭಿನ್ನದೃಗ್ಭಾವಂ ಮಯಿ ಕುರ್ಯಾತ್ಸತಾಮಸಃ ॥

ಅನುವಾದ

ಭೇದಬುದ್ಧಿ ಯಿಂದ ಕೂಡಿ, ಹೃದಯದಲ್ಲಿ ಹಿಂಸೆ, ದಂಭ ಅಥವಾ ಮಾತ್ಸರ್ಯ ಭಾವವನ್ನಿರಿಸಿಕೊಂಡು ನನ್ನಲ್ಲಿ ಭಕ್ತಿಯನ್ನಿಡುವವನು ನನ್ನ ತಾಮಸ ಭಕ್ತನಾಗಿದ್ದಾನೆ.॥8॥

(ಶ್ಲೋಕ - 9)

ಮೂಲಮ್

ವಿಷಯಾನಭಿಸಂಧಾಯ ಯಶ ಐಶ್ವರ್ಯಮೇವ ವಾ ।
ಅರ್ಚಾದಾವರ್ಚಯೇದ್ಯೋ ಮಾಂ ಪೃಥಗ್ಭಾವಃ ಸ ರಾಜಸಃ ॥

ಅನುವಾದ

ವಿಷಯಸುಖಕ್ಕಾಗಿಯೇ, ಯಶಸ್ಸು, ಐಶ್ವರ್ಯದ ಕಾಮನೆಯಿಂದಲೇ ಪ್ರತಿಮಾದಿಗಳಲ್ಲಿ ಭೇದಭಾವ ದಿಂದ ನನ್ನನ್ನು ಪೂಜಿಸುವವನು ರಾಜಸ ಭಕ್ತನಾಗಿದ್ದಾನೆ.॥9॥

(ಶ್ಲೋಕ - 10)

ಮೂಲಮ್

ಕರ್ಮನಿರ್ಹಾರಮುದ್ದಿಶ್ಯ ಪರಸ್ಮಿನ್ವಾ ತದರ್ಪಣಮ್ ।
ಯಜೇದ್ಯಷ್ಟವ್ಯಮಿತಿ ವಾ ಪೃಥಗ್ಭಾವಃ ಸ ಸಾತ್ತ್ವಿಕಃ ॥

ಅನುವಾದ

ಪಾಪಗಳನ್ನು ಕಳಕೊಳ್ಳುವುದಕ್ಕಾಗಿಯೇ, ಪರಮಾತ್ಮನಿಗೆ ಅರ್ಪಿಸಲೋಸುಗವೇ ಮತ್ತು ಪೂಜೆಯು ಕರ್ತವ್ಯವಾಗಿದೆ ಎಂಬ ಬುದ್ಧಿಯಿಂದ ಭೇದಭಾವದಿಂದ ನನ್ನನ್ನು ಪೂಜಿಸುವವನು ಸಾತ್ತ್ವಿಕ ಭಕ್ತನೆನಿಸುವನು. ॥10॥

(ಶ್ಲೋಕ - 11)

ಮೂಲಮ್

ಮದ್ಗುಣಶ್ರುತಿಮಾತ್ರೇಣ ಮಯಿ ಸರ್ವಗುಹಾಶಯೇ ।
ಮನೋಗತಿರವಿಚ್ಛಿನ್ನಾ ಯಥಾ ಗಂಗಾಂಭಸೋಂಬುಧೌ ॥

(ಶ್ಲೋಕ - 12)

ಮೂಲಮ್

ಲಕ್ಷಣಂ ಭಕ್ತಿಯೋಗಸ್ಯ ನಿರ್ಗುಣಸ್ಯ ಹ್ಯುದಾಹೃತಮ್ ।
ಆಹೈತುಕ್ಯವ್ಯವಹಿತಾ ಯಾ ಭಕ್ತಿಃ ಪುರುಷೋತ್ತಮೇ ॥

ಅನುವಾದ

ಗಂಗಾಪ್ರವಾಹವು ಅಖಂಡವಾಗಿ ಸಮುದ್ರಕಡೆಗೆ ಹರಿಯುವಂತೆಯೇ ನನ್ನ ಗುಣಗಳನ್ನು ಶ್ರವಣ ಮಾತ್ರದಿಂದಲೇ ಮನಸ್ಸಿನ ಗತಿಯು ತೈಲಧಾರೆಯಂತೆ ಅವಿಚ್ಛಿನ್ನ ರೂಪದಿಂದ ಸರ್ವಾಂತರ್ಯಾಮಿಯಾದ ನನ್ನ ಕಡೆಗೆ ಹರಿಯು ವುದು ಹಾಗೂ ಪುರುಷೋತ್ತಮನಾದ ನನ್ನಲ್ಲಿ ನಿಷ್ಕಾಮವಾದ ಅನನ್ಯಪ್ರೇಮ ಉಂಟಾಗುವುದು ನಿರ್ಗುಣಭಕ್ತಿಯ ಲಕ್ಷಣ ವೆಂದು ಹೇಳಲಾಗಿದೆ.॥11-12॥

(ಶ್ಲೋಕ - 13)

ಮೂಲಮ್

ಸಾಲೋಕ್ಯಸಾರ್ಷ್ಟಿಸಾಮೀಪ್ಯಸಾರೂಪ್ಯೈಕತ್ವಮಪ್ಯುತ ।
ದೀಯಮಾನಂ ನ ಗೃಹ್ಣಂತಿ ವಿನಾ ಮತ್ಸೇವನಂ ಜನಾಃ ॥

ಅನುವಾದ

ಇಂತಹ ನಿಷ್ಕಾಮಭಕ್ತರು ನನ್ನ ಸೇವೆಯನ್ನು ಬಿಟ್ಟು ನಾನು ಕೊಟ್ಟರೂ* ಸಾಲೋಕ್ಯ,1 ಸಾರ್ಷ್ಟಿ,2 ಸಾಮೀಪ್ಯ,3 ಸಾರೂಪ್ಯ 4 ಮತ್ತು ಸಾಯುಜ್ಯ 5 ಮುಕ್ತಿಗಳನ್ನೂ ಕೂಡ ಸ್ವೀಕರಿಸುವುದಿಲ್ಲ.॥13॥

ಟಿಪ್ಪನೀ
  • 1 ಭಗವಂತನ ನಿತ್ಯಧಾಮದಲ್ಲಿ ವಾಸಿಸುವುದು, 2 ಭಗವಂತನಂತೆಯೇ ಐಶ್ವರ್ಯವನ್ನು ಹೊಂದುವಿಕೆ, 3 ಸದಾ ಭಗವಂತನ ಸಮೀಪದಲ್ಲಿಯೇ ಇರುವುದು, 4 ಭಗವಂತನಂತೆಯೇ ರೂಪವನ್ನು ಹೊಂದುವಿಕೆ, 5 ಭಗವಂತನ ವಿಗ್ರಹದಲ್ಲಿ ಸೇರಿ ಹೋಗುವುದು. ಅವನೊಂದಿಗೆ ಒಂದಾಗುವುದು, ಅಥವಾ ಬ್ರಹ್ಮರೂಪನಾಗುವುದು.

(ಶ್ಲೋಕ - 14)

ಮೂಲಮ್

ಸ ಏವ ಭಕ್ತಿಯೋಗಾಖ್ಯ ಆತ್ಯಂತಿಕ ಉದಾಹೃತಃ ।
ಯೇನಾತಿವ್ರಜ್ಯ ತ್ರಿಗುಣಂ ಮದ್ಭಾವಾಯೋಪಪದ್ಯತೇ ॥

ಅನುವಾದ

ಭಗವಂತನ ಸೇವೆಗಾಗಿಯೇ ಮುಕ್ತಿಯನ್ನು ತಿರಸ್ಕರಿಸುವಂತಹ ಈ ಭಕ್ತಿಯೋಗವೇ ಪರಮ ಪುರುಷಾರ್ಥ ಅಥವಾ ಸಾಧ್ಯವೆಂದು ಹೇಳಲಾಗಿದೆ. ಇದರ ಮೂಲಕ ಮನುಷ್ಯನು ಮೂರೂ ಗುಣಗಳನ್ನು ದಾಟಿ ನನ್ನ ಭಾವವನ್ನು ಅಂದರೆ ನನ್ನ ಪ್ರೇಮರೂಪೀ ಅಪ್ರಾಕೃತ ಸ್ವರೂಪವನ್ನು ಪಡೆದುಕೊಳ್ಳುವನು.॥14॥

(ಶ್ಲೋಕ - 15)

ಮೂಲಮ್

ನಿಷೇವಿತೇನಾನಿಮಿತ್ತೇನ ಸ್ವಧರ್ಮೇಣ ಮಹೀಯಸಾ ।
ಕ್ರಿಯಾಯೋಗೇನ ಶಸ್ತೇನ ನಾತಿಹಿಂಸ್ರೇಣ ನಿತ್ಯಶಃ ॥

(ಶ್ಲೋಕ - 16)

ಮೂಲಮ್

ಮದ್ಧಿಷ್ಣ್ಯದರ್ಶನಸ್ಪರ್ಶಪೂಜಾಸ್ತುತ್ಯಭಿವಂದನೈಃ ।
ಭೂತೇಷು ಮದ್ಭಾವನಯಾ ಸತ್ತ್ವೇನಾಸಂಗಮೇನ ಚ ॥

(ಶ್ಲೋಕ - 17)

ಮೂಲಮ್

ಮಹತಾಂ ಬಹುಮಾನೇನ ದೀನಾನಾಮನುಕಂಪಯಾ ।
ಮೈತ್ರ್ಯಾ ಚೈವಾತ್ಮತುಲ್ಯೇಷು ಯಮೇನ ನಿಯಮೇನ ಚ ॥

(ಶ್ಲೋಕ - 18)

ಮೂಲಮ್

ಆಧ್ಯಾತ್ಮಿಕಾನುಶ್ರವಣಾನ್ನಾಮಸಂಕೀರ್ತನಾಚ್ಚ ಮೇ ।
ಆರ್ಜವೇನಾರ್ಯಸಂಗೇನ ನಿರಹಂಕ್ರಿಯಯಾ ತಥಾ ॥

(ಶ್ಲೋಕ - 19)

ಮೂಲಮ್

ಮದ್ಧರ್ಮಣೋ ಗುಣೈರೇತೈಃ ಪರಿಸಂಶುದ್ಧ ಆಶಯಃ ।
ಪುರುಷಸ್ಯಾಂಜಸಾಭ್ಯೇತಿ ಶ್ರುತಮಾತ್ರಗುಣಂ ಹಿ ಮಾಮ್ ॥

ಅನುವಾದ

ನಿಷ್ಕಾಮಭಾವದಿಂದ ಶ್ರದ್ಧಾಪೂರ್ವಕ ತನ್ನ ನಿತ್ಯ-ನೈಮಿತ್ತಿಕ ಕರ್ತವ್ಯಗಳನ್ನು ಪಾಲಿಸುತ್ತಾ ಪ್ರತಿದಿನವೂ ಹಿಂಸಾರಹಿತ ಉತ್ತಮ ಕ್ರಿಯಾಯೋಗವನ್ನು ಅನುಷ್ಠಾನ ಮಾಡುವುದು ; ನನ್ನ ಪ್ರತಿಮೆ ಯನ್ನು ದರ್ಶನ, ಸ್ಪರ್ಶ, ಪೂಜೆ, ಸ್ತುತಿ, ವಂದನೆ ಮಾಡುವುದು; ಸರ್ವಪ್ರಾಣಿಗಳಲ್ಲಿ ನನ್ನನ್ನು ಭಾವಿಸುವುದು ; ಧೈರ್ಯ ಮತ್ತು ವೈರಾಗ್ಯವನ್ನು ಅವಲಂಬಿಸುವುದು; ಮಹಾಪುರುಷರನ್ನು ಗೌರ ವಿಸುವುದು ; ದೀನರಲ್ಲಿ ದಯೆ, ಸಮಾನರಲ್ಲಿ ಮಿತ್ರತೆಯ ವ್ಯವ ಹಾರಮಾಡುವುದು ; ಯಮ-ನಿಯಮಗಳನ್ನು ಪಾಲಿಸುವುದು; ಅಧ್ಯಾತ್ಮಶಾಸಗಳ ಶ್ರವಣ ಮತ್ತು ನನ್ನ ನಾಮಗಳನ್ನು ಗಟ್ಟಿಯಾಗಿ ಕೀರ್ತಿಸುವುದರಿಂದ; ಮನಸ್ಸಿನ ಸರಳತೆ, ಸತ್ಪುರುಷರ ಸಂಗ, ಅಹಂಕಾರದ ತ್ಯಾಗದಿಂದ ನನ್ನ ಧರ್ಮಗಳನ್ನು (ಭಾಗವತ ಧರ್ಮಗಳನ್ನು) ಅನುಷ್ಠಾನ ಮಾಡುವಂತಹ ಭಕ್ತಜನರ ಚಿತ್ತವು ಅತ್ಯಂತ ಶುದ್ಧವಾಗಿ ನನ್ನ ಗುಣಗಳ ಶ್ರವಣಮಾತ್ರದಿಂದ ಆಯಾಸ ವಿಲ್ಲದೆಯೇ ನನ್ನಲ್ಲಿ ತೊಡಗುತ್ತದೆ.॥15-19॥

(ಶ್ಲೋಕ - 20)

ಮೂಲಮ್

ಯಥಾ ವಾತರಥೋ ಘ್ರಾಣಮಾವೃಂಕ್ತೇ ಗಂಧ ಆಶಯಾತ್ ।
ಏವಂ ಯೋಗರತಂ ಚೇತ ಆತ್ಮಾನಮವಿಕಾರಿ ಯತ್ ॥

ಅನುವಾದ

ಸುಗಂಧವು ತನಗೆ ಆಶ್ರಯವಾದ ಪುಷ್ಪದಿಂದ ಗಾಳಿಯೆಂಬ ಯಾನದ ಮೂಲಕ ಮೂಗನ್ನು ತಲುಪುವಂತೆಯೇ, ನಿರ್ವಿಕಾರಿ ಯಾದ ಚಿತ್ತವು ಭಕ್ತಿಯೋಗದಲ್ಲಿ ತತ್ಪರವಾಗಿ ಪರಮಾತ್ಮನನ್ನು ಸೇರಿ ಕೊಳ್ಳುತ್ತದೆ.॥20॥

(ಶ್ಲೋಕ - 21)

ಮೂಲಮ್

ಅಹಂ ಸರ್ವೇಷು ಭೂತೇಷು ಭೂತಾತ್ಮಾವಸ್ಥಿತಃ ಸದಾ ।
ತಮವಜ್ಞಾಯ ಮಾಂ ಮರ್ತ್ಯಃ ಕುರುತೇರ್ಚಾವಿಡಂಬನಮ್ ॥

ಅನುವಾದ

ನಾನು ಆತ್ಮರೂಪದಿಂದ ಸದಾಕಾಲ ಎಲ್ಲ ಜೀವರಲ್ಲಿ ಇದ್ದೇನೆ. ಅದಕ್ಕಾಗಿ ಸರ್ವಭೂತಗಳಲ್ಲಿರುವ ಪರಮಾತ್ಮ ನಾದ ನನ್ನನ್ನು ಅನಾದರಿಸಿ ಕೇವಲ ಪ್ರತಿಮೆಯಲ್ಲೇ ನನ್ನನ್ನು ಪೂಜಿಸುವವರ ಪೂಜೆಯು ಕೇವಲ ವಿಡಂಬನೆಯಾಗಿದೆ.॥21॥

(ಶ್ಲೋಕ - 22)

ಮೂಲಮ್

ಯೋ ಮಾಂ ಸರ್ವೇಷು ಭೂತೇಷು ಸಂತಮಾತ್ಮಾನಮೀಶ್ವರಮ್ ।
ಹಿತ್ವಾರ್ಚಾಂ ಭಜತೇ ವೌಢ್ಯಾದ್ಭಸ್ಮನ್ಯೇವ ಜುಹೋತಿ ಸಃ ॥

ಅನುವಾದ

ಎಲ್ಲರ ಆತ್ಮಾ ಪರಮೇಶ್ವರನಾದ ನಾನು ಎಲ್ಲ ಪ್ರಾಣಿಗಳಲ್ಲಿಯೂ ಇದ್ದೇನೆ. ಇಂತಹ ಸ್ಥಿತಿಯಲ್ಲಿ ಮೋಹವಶರಾಗಿ ನನ್ನನ್ನು ಉಪೇಕ್ಷಿಸಿ ಕೇವಲ ಪ್ರತಿಮೆಯ ಪೂಜೆಯಲ್ಲೇ ತೊಡಗಿರುವವರು ಬೂದಿ ಯಲ್ಲಿ ಹೋಮ ಮಾಡಿದಂತೆ ಆಗುವುದು.॥22॥

(ಶ್ಲೋಕ - 23)

ಮೂಲಮ್

ದ್ವಿಷತಃ ಪರಕಾಯೇ ಮಾಂ ಮಾನಿನೋ ಭಿನ್ನದರ್ಶಿನಃ ।
ಭೂತೇಷು ಬದ್ಧವೈರಸ್ಯ ನ ಮನಃ ಶಾಂತಿ ಮೃಚ್ಛತಿ ॥

ಅನುವಾದ

ಭೇದದೃಷ್ಟಿ ಯುಳ್ಳವನು ಅಭಿಮಾನದಿಂದ ಬೇರೆ ಜೀವರೊಂದಿಗೆ ವೈರಕಟ್ಟಿ ಕೊಳ್ಳುವನು. ಹೀಗೆ ಅವುಗಳ ದೇಹದಲ್ಲಿ ಇರುವ ಆತ್ಮನಾದ ನನ್ನನ್ನು ದ್ವೇಷಿಸುತ್ತಾನೆ. ಇಂತಹವರ ಮನಸ್ಸಿಗೆ ಎಂದಿಗೂ ಶಾಂತಿ ಯು ದೊರೆಯುವುದಿಲ್ಲ.॥23॥

(ಶ್ಲೋಕ - 24)

ಮೂಲಮ್

ಅಹಮುಚ್ಚಾವಚೈರ್ದ್ರವ್ಯೈಃ ಕ್ರಿಯಯೋತ್ಪನ್ನಯಾನಘೇ ।
ನೈವ ತುಷ್ಯೇರ್ಚಿತೋರ್ಚಾಯಾಂ ಭೂತಗ್ರಾಮಾವಮಾನಿನಃ ॥

ಅನುವಾದ

ತಾಯೇ ! ಇತರ ಜೀವರಿಗೆ ಅಪಮಾನ ಮಾಡುವವನು ಸಾಮಾನ್ಯವಾದ ಮತ್ತು ಶ್ರೇಷ್ಠವಾದ ಹಲವು ಬಗೆಯ ಸಾಮಗ್ರಿಗಳಿಂದ ಅನೇಕ ಪ್ರಕಾರವಾದ ವಿಧಿ-ವಿಧಾನಗಳೊಡನೆ ನನ್ನ ಮೂರ್ತಿಯನ್ನು ಪೂಜಿಸಿದರೂ ನಾನು ಅದರಿಂದ ಪ್ರಸನ್ನನಾಗಲಾರೆನು.॥24॥

(ಶ್ಲೋಕ - 25)

ಮೂಲಮ್

ಅರ್ಚಾದಾವರ್ಚಯೇತ್ತಾವದೀಶ್ವರಂ ಮಾಂ ಸ್ವಕರ್ಮಕೃತ್ ।
ಯಾವನ್ನ ವೇದ ಸ್ವಹೃದಿ ಸರ್ವಭೂತೇಷ್ವವಸ್ಥಿತಮ್ ॥

ಅನುವಾದ

ತನ್ನ ಹೃದಯದಲ್ಲಿಯೂ ಹಾಗೂ ಸಂಪೂರ್ಣ ಪ್ರಾಣಿಗಳಲ್ಲಿಯೂ ಇರುವ ಪರಮಾತ್ಮನ ಅನುಭವವು ಆಗುವವರೆಗೆ ಮನುಷ್ಯನು ತನ್ನ ಧರ್ಮದ ಅನುಷ್ಠಾನ ಮಾಡುತ್ತಾ ಈಶ್ವರನಾದ ನನ್ನನ್ನು ಪ್ರತಿಮೆಯೇ ಮುಂತಾದವುಗಳಲ್ಲಿ ಪೂಜೆ ಮಾಡುತ್ತಾ ಇರಬೇಕು.॥25॥

(ಶ್ಲೋಕ - 26)

ಮೂಲಮ್

ಆತ್ಮನಶ್ಚ ಪರಸ್ಯಾಪಿ ಯಃ ಕರೋತ್ಯಂತರೋದರಮ್ ।
ತಸ್ಯ ಭಿನ್ನ ದೃಶೋ ಮೃತ್ಯುರ್ವಿದಧೇ ಭಯಮುಲ್ಬಣಮ್ ॥

ಅನುವಾದ

ಆತ್ಮ ಮತ್ತು ಪರಮಾತ್ಮರ ನಡುವೆ ಸ್ವಲ್ಪವಾದರೂ ಅಂತರ ತೋರುವ ಭೇದದರ್ಶಿಯಾದವನಿಗೆ ನಾನು ಮೃತ್ಯುರೂಪದಿಂದ ಮಹಾ ಭಯವನ್ನು ತಂದು ಒಡ್ಡುತ್ತೇನೆ.॥26॥

(ಶ್ಲೋಕ - 27)

ಮೂಲಮ್

ಅಥ ಮಾಂ ಸರ್ವಭೂತೇಷು ಭೂತಾತ್ಮಾನಂ ಕೃತಾಲಯಮ್ ।
ಅರ್ಹಯೇದ್ದಾನಮಾನಾಭ್ಯಾಂ ಮೈತ್ರ್ಯಾಭಿನ್ನೇನ ಚಕ್ಷುಷಾ ॥

ಅನುವಾದ

ಆದ್ದರಿಂದ ಎಲ್ಲ ಪ್ರಾಣಿಗಳ ಒಳಗೂ ಮನೆಮಾಡಿಕೊಂಡು ಅವುಗಳ ಆತ್ಮನಾಗಿರುವ ಪರಮಾತ್ಮನಾದ ನನ್ನನ್ನು ಯಥೋಚಿತವಾಗಿ ದಾನ, ಸಮ್ಮಾನ, ಸ್ನೇಹದ ವ್ಯವಹಾರ ಹಾಗೂ ಸಮದೃಷ್ಟಿಯ ಮೂಲಕ ಪೂಜಿಸ ಬೇಕು.॥27॥

(ಶ್ಲೋಕ - 28)

ಮೂಲಮ್

ಜೀವಾಃ ಶ್ರೇಷ್ಠಾ ಹ್ಯಜೀವಾನಾಂ ತತಃ ಪ್ರಾಣಭೃತಃ ಶುಭೇ ।
ತತಃ ಸ್ವಚಿತ್ತಾಃ ಪ್ರವರಾಸ್ತತಶ್ಚೇಂದ್ರಿಯವೃತ್ತಯಃ ॥

(ಶ್ಲೋಕ - 29)

ಮೂಲಮ್

ತತ್ರಾಪಿ ಸ್ಪರ್ಶವೇದಿಭ್ಯಃ ಪ್ರವರಾ ರಸವೇದಿನಃ ।
ತೇಭ್ಯೋ ಗಂಧವಿದಃ ಶ್ರೇಷ್ಠಾಸ್ತತಃ ಶಬ್ದವಿದೋ ವರಾಃ ॥

ಅನುವಾದ

ಅಮ್ಮಾ ! ಕಲ್ಲು ಮುಂತಾದ ಅಚೇತನಗಳಿಗಿಂತ ವೃಕ್ಷವೇ ಮುಂತಾದ ಜೀವಗಳು ಶ್ರೇಷ್ಠವಾಗಿವೆ. ಅವುಗಳಿಗಿಂತಲೂ ಉಸಿ ರಾಡುವ ಪ್ರಾಣಿಗಳು ಶ್ರೇಷ್ಠರು. ಅವುಗಳಲ್ಲಿಯೂ ಮನಸ್ಸುಳ್ಳ ಪ್ರಾಣಿಗಳು ಉತ್ತಮರು. ಅವುಗಳಿಗಿಂತಲೂ ಇಂದ್ರಿಯಗಳ ವೃತ್ತಿಗ ಳಿಂದ ಕೂಡಿದ ಪ್ರಾಣಿಗಳು ಶ್ರೇಷ್ಠವಾದವುಗಳು. ಇಂದ್ರಿಯ ಗಳುಳ್ಳ ಪ್ರಾಣಿಗಳಿಗಿಂತಲೂ ಕೇವಲ ಸ್ಪರ್ಶವನ್ನು ಮಾತ್ರ ಅನುಭವಿ ಸುವ ಪ್ರಾಣಿಗಳೂ, ಅವುಗಳಿಗಿಂತ ರಸವನ್ನು ಗ್ರಹಿಸುವ ಮತ್ಸ್ಯವೇ ಮುಂತಾದ ಪ್ರಾಣಿಗಳು ಶ್ರೇಷ್ಠ ಹಾಗೂ ರಸವನ್ನು ತಿಳಿಯುವ ವರಿಗಿಂತಲೂ ಗಂಧವನ್ನು ಗ್ರಹಿಸುವ ಭ್ರಮರಾದಿಗಳು, ಗಂಧವನ್ನು ಗ್ರಹಿಸುವವುಗಳಿಗಿಂತ ಶಬ್ದವನ್ನು ಗ್ರಹಿಸುವ ಸರ್ಪಾದಿ ಪ್ರಾಣಿಗಳೂ ಶ್ರೇಷ್ಠ ಎನಿಸುವವು.॥28-29॥

(ಶ್ಲೋಕ - 30)

ಮೂಲಮ್

ರೂಪಭೇದವಿದಸ್ತತ್ರ ತತಶ್ಚೋಭಯತೋದತಃ ।
ತೇಷಾಂ ಬಹುಪದಾಃ ಶ್ರೇಷ್ಠಾಶ್ಚತುಷ್ಪಾದಸ್ತತೋ ದ್ವಿಪಾತ್ ॥

ಅನುವಾದ

ಅವುಗಳಿಗಿಂತಲೂ ರೂಪ ವನ್ನು ಅನುಭವಿಸುವ ಕಾಗೆಯೇ ಮುಂತಾದವುಗಳು ಉತ್ತಮ. ಅವುಗಳಿಗಿಂತಲೂ ಬಾಯಿಯೊಳಗೆ ಮೇಲೆ-ಕೆಳಗೆ ಹಲ್ಲು ಇರುವ ಜೀವರು ಶ್ರೇಷ್ಠವಾಗಿವೆ. ಅವುಗಳಲ್ಲಿಯೂ ಕಾಲುಗಳಿಲ್ಲದ ಜೀವಿ ಗಳಿಗಿಂತಲೂ ಅನೇಕ ಚರಣವುಳ್ಳವುಗಳು ಶ್ರೇಷ್ಠವಾಗಿವೆ. ಅನೇಕ ಚರಣಗಳುಳ್ಳವುಗಳಿಗಿಂತ ನಾಲ್ಕುಚರಣಗಳುಳ್ಳವುಗಳು ಶ್ರೇಷ್ಠವು. ನಾಲ್ಕು ಚರಣಗಳುಳ್ಳವುಗಳಿಗಿಂತಲೂ ಎರಡು ಕಾಲುಗಳುಳ್ಳ ಮನುಷ್ಯನು ಶ್ರೇಷ್ಠನಾಗಿದ್ದಾನೆ.॥30॥

(ಶ್ಲೋಕ - 31)

ಮೂಲಮ್

ತತೋ ವರ್ಣಾಶ್ಚ ಚತ್ವಾರಸ್ತೇಷಾಂ ಬ್ರಾಹ್ಮಣ ಉತ್ತಮಃ ।
ಬ್ರಾಹ್ಮಣೇಷ್ವಪಿ ವೇದಜ್ಞೋ ಹ್ಯರ್ಥಜ್ಞೋಭ್ಯಧಿಕಸ್ತತಃ ॥

ಅನುವಾದ

ಮನುಷ್ಯರಲ್ಲಿಯೂ ನಾಲ್ಕು ವರ್ಣಗಳು ಶ್ರೇಷ್ಠ . ಆ ನಾಲ್ಕು ವರ್ಣಗಳಲ್ಲಿಯೂ ಬ್ರಾಹ್ಮಣರು ಶ್ರೇಷ್ಠರು. ಬ್ರಾಹ್ಮಣರಲ್ಲಿಯೂ ವೇದಗಳನ್ನು ತಿಳಿದವರು, ವೇದಜ್ಞರಲ್ಲಿಯೂ ವೇದಗಳ ತಾತ್ಪರ್ಯವನ್ನು ತಿಳಿದವರು ಶ್ರೇಷ್ಠರಾಗಿದ್ದಾರೆ.॥31॥

(ಶ್ಲೋಕ - 32)

ಮೂಲಮ್

ಅರ್ಥಜ್ಞಾತ್ಸಂಶಯಚ್ಛೇತ್ತಾ ತತಃ ಶ್ರೇಯಾನ್ಸ್ವಕರ್ಮಕೃತ್ ।
ಮುಕ್ತಸಂಗಸ್ತತೋ ಭೂಯಾನದೋಗ್ಧಾ ಧರ್ಮಮಾತ್ಮನಃ ॥

ಅನುವಾದ

ತಾತ್ಪರ್ಯ ತಿಳಿದವರಲ್ಲಿ ಸಂಶಯವನ್ನು ಹೋಗ ಲಾಡಿಸುವವರೂ, ಅವರಿಗಿಂತಲೂ ತಮ್ಮ ವರ್ಣಾಶ್ರಮೋಚಿತ ವಾದ ಧರ್ಮವನ್ನು ಪಾಲಿಸುವವರು ಹಾಗೂ ಅವರಿಗಿಂತಲೂ ಆಸಕ್ತಿಯನ್ನು ತ್ಯಜಿಸಿದವರು ಮತ್ತು ತಮ್ಮ ಧರ್ಮವನ್ನು ನಿಷ್ಕಾಮ ಭಾವದಿಂದ ಆಚರಿಸುವವರು ಶ್ರೇಷ್ಠರಾಗಿದ್ದಾರೆ.॥32॥

(ಶ್ಲೋಕ - 33)

ಮೂಲಮ್

ತಸ್ಮಾನ್ಮಯ್ಯರ್ಪಿತಾಶೇಷಕ್ರಿಯಾರ್ಥಾತ್ಮಾ ನಿರಂತರಃ ।
ಮಯ್ಯರ್ಪಿತಾತ್ಮನಃ ಪುಂಸೋ ಮಯಿ ಸಂನ್ಯಸ್ತಕರ್ಮಣಃ ।
ನ ಪಶ್ಯಾಮಿ ಪರಂ ಭೂತಮಕರ್ತುಃ ಸಮದರ್ಶನಾತ್ ॥

ಅನುವಾದ

ಅವರಿ ಗಿಂತಲೂ ತಮ್ಮ ಎಲ್ಲ ಕರ್ಮಗಳನ್ನು, ಅವುಗಳ ಲವನ್ನು ಹಾಗೂ ತಮ್ಮ ಶರೀರವನ್ನೂ ನನ್ನಲ್ಲಿ ಅರ್ಪಿಸಿ ಭೇದಭಾವವನ್ನು ಬಿಟ್ಟು ನನ್ನ ಉಪಾಸನೆ ಮಾಡುವವರು ಶ್ರೇಷ್ಠರಾಗಿದ್ದಾರೆ. ಹೀಗೆ ನನ್ನಲ್ಲಿಯೇ ಚಿತ್ತವನ್ನು ಮತ್ತು ಕರ್ಮವನ್ನು ಸಮರ್ಪಿಸುವ ಕರ್ತೃತ್ವವನ್ನು ತೊರೆದು, ಸಮದರ್ಶಿಗಳಾದ ಮನುಷ್ಯರಿಗಿಂತ ಹೆಚ್ಚಿನ ಬೇರೆ ಯಾವ ಪ್ರಾಣಿಯೂ ನನಗೆ ಕಂಡುಬರುವುದಿಲ್ಲ.॥33॥

(ಶ್ಲೋಕ - 34)

ಮೂಲಮ್

ಮನಸೈತಾನಿ ಭೂತಾನಿ ಪ್ರಣಮೇದ್ಬಹು ಮಾನಯನ್ ।
ಈಶ್ವರೋ ಜೀವಕಲಯಾ ಪ್ರವಿಷ್ಟೋ ಭಗವಾನಿತಿ ॥

ಅನುವಾದ

ಆದ್ದ ರಿಂದ ಸಾಕ್ಷಾತ್ ಶ್ರೀಭಗವಂತನೇ ತನ್ನ ಜೀವರೂಪವಾದ ಅಂಶದಿಂದ ಎಲ್ಲದರಲ್ಲಿ ಪ್ರವೇಶಮಾಡಿದ್ದಾನೆ ಎಂದು ಭಾವಿಸಿ ಸಮಸ್ತ ಪ್ರಾಣಿಗಳನ್ನು ತುಂಬು ಆದರದಿಂದ ಮನಸ್ಸಿನಿಂದ ನಮಸ್ಕರಿಸಬೇಕು.॥34॥

(ಶ್ಲೋಕ - 35)

ಮೂಲಮ್

ಭಕ್ತಿಯೋಗಶ್ಚ ಯೋಗಶ್ಚ ಮಯಾ ಮಾನವ್ಯದೀರಿತಃ ।
ಯಯೋರೇಕತರೇಣೈವ ಪುರುಷಃ ಪುರುಷಂ ವ್ರಜೇತ್ ॥

ಅನುವಾದ

ಅಮ್ಮಾ ! ಹೀಗೆ ನಾನು ನಿನಗಾಗಿ ಭಕ್ತಿಯೋಗ ಮತ್ತು ಅಷ್ಟಾಂಗ ಯೋಗವನ್ನು ವರ್ಣಿಸಿರುವೆನು. ಇವುಗಳಲ್ಲಿ ಒಂದನ್ನಾದರೂ ಸಾಧನೆಮಾಡುವುದರಿಂದ ಜೀವನು ಪರಮಪುರುಷ ಭಗವಂತ ನನ್ನು ಪಡೆದುಕೊಳ್ಳಬಲ್ಲನು.॥35॥

(ಶ್ಲೋಕ - 36)

ಮೂಲಮ್

ಏತದ್ಭಗವತೋ ರೂಪಂ ಬ್ರಹ್ಮಣಃ ಪರಮಾತ್ಮನಃ ।
ಪರಂ ಪ್ರಧಾನಂ ಪುರುಷಂ ದೈವಂ ಕರ್ಮವಿಚೇಷ್ಟಿತಮ್ ॥

(ಶ್ಲೋಕ - 37)

ಮೂಲಮ್

ರೂಪಭೇದಾಸ್ಪದಂ ದಿವ್ಯಂ ಕಾಲ ಇತ್ಯಭಿಧೀಯತೇ ।
ಭೂತಾನಾಂ ಮಹದಾದೀನಾಂ ಯತೋ ಭಿನ್ನದೃಶಾಂ ಭಯಮ್ ॥

ಅನುವಾದ

ಪರಮಾತ್ಮ ಪರಬ್ರಹ್ಮನಾದ ಭಗವಂತನ ಅದ್ಭುತವಾದ ಪ್ರಭಾವದಿಂದ ಸಂಪನ್ನವಾಗಿ, ಜಗತ್ತಿನ ಪದಾರ್ಥಗಳ ನಾನಾವಿಧ ವೈಚಿತ್ರ್ಯಕ್ಕೆ ಕಾರಣವಾಗಿರುವ ಸ್ವರೂಪ ವಿಶೇಷವೇ ‘ಕಾಲ’ವಾಗಿದೆ. ಪ್ರಕೃತಿ ಮತ್ತು ಪುರುಷರು ಇದರ ರೂಪಗಳೇ ಆಗಿವೆ ಹಾಗೂ ಈ ಎರಡರಿಂದಲೂ ಬೇರೆ ಆಗಿದೆ. ಇದು ನಾನಾ ಪ್ರಕಾರದ ಕರ್ಮ ಗಳಿಗೆ ಮೂಲವಾದ ಅದೃಷ್ಟವೂ ಆಗಿದೆ. ಮಹತ್ತತ್ತ್ವವೇ ಮುಂತಾ ದವುಗಳಲ್ಲಿ ಅಭಿಮಾನವನ್ನಿಟ್ಟಿರುವ ಭೇದದರ್ಶಿ ಪ್ರಾಣಿಗಳು ಸದಾ ಭಯಪಡುತ್ತಿರುವುದೂ ಇದಕ್ಕೆ.॥36-37॥

(ಶ್ಲೋಕ - 38)

ಮೂಲಮ್

ಯೋಂತಃಪ್ರವಿಶ್ಯ ಭೂತಾನಿ ಭೂತೈರತ್ತ್ಯಖಿಲಾಶ್ರಯಃ ।
ಸ ವಿಷ್ಣ್ವಾಖ್ಯೋಧಿಯಜ್ಞೋಸೌ ಕಾಲಃ ಕಲಯತಾಂ ಪ್ರಭುಃ ॥

ಅನುವಾದ

ಇದು ಎಲ್ಲಕ್ಕೂ ಆಶ್ರಯವಾಗಿರುವುದರಿಂದ ಎಲ್ಲ ಪ್ರಾಣಿಗಳಲ್ಲಿಯೂ ಒಳಹೊಕ್ಕು ಭೂತಗಳ ಮೂಲಕವೇ ಅವುಗಳನ್ನು ಸಂಹರಿಸುವುದು. ಜಗತ್ತಿನ ಶಾಸನ ಮಾಡುವಂತಹ ಬ್ರಹ್ಮಾದಿಗಳಿಗೂ ಒಡೆಯನಾದ ಭಗವಾನ್ ಕಾಲನೇ ಯಜ್ಞಗಳ ಲವನ್ನು ಕೊಡುವ ವಿಷ್ಣುವಾಗಿದ್ದಾನೆ.॥38॥

(ಶ್ಲೋಕ - 39)

ಮೂಲಮ್

ನ ಚಾಸ್ಯ ಕಶ್ಚಿದ್ದಯಿತೋ ನ ದ್ವೇಷ್ಯೋ ನ ಚ ಬಾಂಧವಃ ।
ಆವಿಶತ್ಯಪ್ರಮತ್ತೋಸೌ ಪ್ರಮತ್ತಂ ಜನಮಂತಕೃತ್ ॥

ಅನುವಾದ

ಇದಕ್ಕೆ ಮಿತ್ರರಾಗಲೀ, ಶತ್ರು ಗಳಾಗಲೀ ಯಾರೂ ಇಲ್ಲ. ಬಂಧು-ಬಾಂಧವರೂ ಇಲ್ಲ. ಇದು ಸದಾಕಾಲ ಎಚ್ಚರವಾಗಿದ್ದು, ತನ್ನ ಸ್ವರೂಪಭೂತ ಶ್ರೀಭಗವಂತನನ್ನು ಮರೆತು, ಭೋಗರೂಪವಾದ ಪ್ರಮಾದದಲ್ಲಿ ಬಿದ್ದಿರುವ ಪ್ರಾಣಿಗಳ ಮೇಲೆ ಆಕ್ರಮಣಗೈದು ಅವರನ್ನು ಸಂಹರಿಸುತ್ತದೆ.॥39॥

(ಶ್ಲೋಕ - 40)

ಮೂಲಮ್

ಯದ್ಭಯಾದ್ವಾತಿ ವಾತೋಯಂ ಸೂರ್ಯಸ್ತಪತಿ ಯದ್ಭಯಾತ್ ।
ಯದ್ಭಯಾದ್ವರ್ಷತೇ ದೇವೋ ಭಗಣೋ ಭಾತಿ ಯದ್ಭಯಾತ್ ॥

ಅನುವಾದ

ಇದರ ಭಯದಿಂದಲೇ ಗಾಳಿಯು ಬೀಸುವುದು, ಇದರ ಭಯದಿಂದಲೇ ಸೂರ್ಯನು ಬೆಳಗುತ್ತಾನೆ. ಇದರ ಭಯದಿಂದಲೇ ಇಂದ್ರನು ಮಳೆಗರೆಯುವನು. ಇದರ ಭಯದಿಂದಲೇ ತಾರೆಗಳು ಮಿನುಗುತ್ತವೆ.॥40॥

(ಶ್ಲೋಕ - 41)

ಮೂಲಮ್

ಯದ್ವನಸ್ಪತಯೋ ಭೀತಾ ಲತಾಶ್ಚೌಷಧಿಭಿಃ ಸಹ ।
ಸ್ವೇ ಸ್ವೇ ಕಾಲೇಭಿಗೃಹ್ಣಂತಿ ಪುಷ್ಪಾಣಿ ಚ ಲಾನಿ ಚ ॥

ಅನುವಾದ

ಇದರ ಭಯದಿಂದಲೇ ಔಷಧಿಗಳ ಸಹಿತ ಬಳ್ಳಿಗಳು ಮತ್ತು ಎಲ್ಲ ವನಸ್ಪತಿಗಳೂ ಕಾಲ-ಕಾಲದಲ್ಲಿ ಫಲ-ಪುಷ್ಪಗಳನ್ನು ಬಿಡುತ್ತವೆ.॥41॥

(ಶ್ಲೋಕ - 42)

ಮೂಲಮ್

ಸ್ರವಂತಿ ಸರಿತೋ ಭೀತಾ ನೋತ್ಸರ್ಪತ್ಯುದಧಿರ್ಯತಃ ।
ಅಗ್ನಿರಿಂಧೇ ಸಗಿರಿಭಿರ್ಭೂರ್ನ ಮಜ್ಜತಿ ಯದ್ಭಯಾತ್ ॥

ಅನುವಾದ

ಇದರ ಭಯದಿಂದಲೇ ನದಿಗಳು ಹರಿಯುತ್ತವೆ ಮತ್ತು ಸಮುದ್ರವು ಮೇರೆ ಮೀರುವುದಿಲ್ಲ. ಇದರ ಭಯದಿಂದಲೇ ಅಗ್ನಿಯು ಪ್ರಜ್ವಲಿಸುತ್ತಿರುವುದು ಹಾಗೂ ಪರ್ವತಗಳ ಸಹಿತ ಪೃಥ್ವಿಯು ನೀರಿನಲ್ಲಿ ಮುಳುಗುವುದಿಲ್ಲ.॥42॥

(ಶ್ಲೋಕ - 43)

ಮೂಲಮ್

ನಭೋ ದದಾತಿ ಶ್ವಸತಾಂ ಪದಂ ಯನ್ನಿಯಮಾದದಃ ।
ಲೋಕಂ ಸ್ವದೇಹಂ ತನುತೇ ಮಹಾನ್ಸಪ್ತಭಿರಾವೃತಮ್ ॥

ಅನುವಾದ

ಇದರ ಶಾಸನದಿಂದಲೇ ಈ ಆಕಾಶವು ಜೀವಂತ ಪ್ರಾಣಿ ಗಳಿಗೆ ಉಸಿರಾಡಲು ಅವಕಾಶ ಮಾಡಿ ಕೊಡುತ್ತದೆ ಮತ್ತು ಮಹತ್ತತ್ತ್ವವು ಅಹಂಕಾರರೂಪವಾದ ಶರೀರವನ್ನು ಏಳು ಆವರಣಗಳಿಂದ ಕೂಡಿರುವ ಬ್ರಹಾಂಡದ ರೂಪದಲ್ಲಿ ವಿಸ್ತರಿಸುತ್ತದೆ.॥43॥

(ಶ್ಲೋಕ - 44)

ಮೂಲಮ್

ಗುಣಾಭಿಮಾನಿನೋ ದೇವಾಃ ಸರ್ಗಾದಿಷ್ವಸ್ಯ ಯದ್ಭಯಾತ್ ।
ವರ್ತಂತೇನುಯುಗಂ ಯೇಷಾಂ ವಶ ಏತಚ್ಚರಾಚರಮ್ ॥

ಅನುವಾದ

ಈ ಚರಾಚರ ಜಗತ್ತೆಲ್ಲವೂ ಯಾರ ಅಧೀನದಲ್ಲಿದೆಯೋ ಅಂತಹ ಸತ್ತ್ವಾದಿಗುಣಗಳ ನಿಯಾಮಕನಾದ ವಿಷ್ಣುವೇ ಮೊದಲಾದ ದೇವತೆಗಳೂ ಕೂಡ ಇದರ ಭಯದಿಂದಲೇ ಯುಗಗಳ ಕ್ರಮಕ್ಕೆ ಅನುಗುಣವಾಗಿ ಜಗತ್ತಿನ ಸೃಷ್ಟಿಯೇ ಮುಂತಾದ ಕಾರ್ಯ ಗಳಲ್ಲಿ ತತ್ಪರರಾಗಿರುತ್ತಾರೆ.॥44॥

(ಶ್ಲೋಕ - 45)

ಮೂಲಮ್

ಸೋನಂತೋಂತಕರಃ ಕಾಲೋನಾದಿರಾದಿಕೃದವ್ಯಯಃ ।
ಜನಂ ಜನೇನ ಜನಯನ್ಮಾರಯನ್ಮೃತ್ಯುನಾಂತಕಮ್ ॥

ಅನುವಾದ

ಅವಿನಾಶಿಯಾದ ಈ ಕಾಲವು ಸ್ವಯಂ ಅನಾದಿಯಾಗಿದ್ದರೂ, ಇತರ ತತ್ತ್ವಗಳಿಗೆ ಆದಿಯಾಗಿದೆ. ತಾನು ಅನಂತ ನಾಗಿದ್ದರೂ ಬೇರೆಯವರ ಅಂತವನ್ನು ಮಾಡುವುದಾಗಿದೆ. ಜನ ರಿಂದ ಜನರು ಹುಟ್ಟುವಂತೆ ಮಾಡಿ ಜಗತ್ತನ್ನು ರಚಿಸುತ್ತದೆ ಮತ್ತು ತನ್ನ ಸಂಹಾರಶಕ್ತಿಯಾದ ಮೃತ್ಯುವಿನ ಮೂಲಕ ಯಮ ರಾಜನನ್ನೂ ಕೂಡ ಕೊಂದು ಇದರ ಅಂತವನ್ನು ಮಾಡುತ್ತಾನೆ.॥45॥

ಅನುವಾದ (ಸಮಾಪ್ತಿಃ)

ಇಪ್ಪತ್ತೊಂಭತ್ತನೆಯ ಅಧ್ಯಾಯವು ಮುಗಿಯಿತು. ॥ 29 ॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ತೃತೀಯಸ್ಕಂಧೇಕಾಪಿಲೇಯೋಪಾಖ್ಯಾನೇ ಏಕೋನತ್ರಿಂಶೋಽಧ್ಯಾಯಃ ॥29॥