೨೭

[ಇಪ್ಪತ್ತೇಳನೆಯ ಅಧ್ಯಾಯ]

ಭಾಗಸೂಚನಾ

ಪ್ರಕೃತಿ-ಪುರುಷರ ವಿವೇಕದಿಂದ ಮೋಕ್ಷಪ್ರಾಪ್ತಿಯ ವರ್ಣನೆ

(ಶ್ಲೋಕ - 1)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ಪ್ರಕೃತಿಸ್ಥೋಪಿ ಪುರುಷೋ ನಾಜ್ಯತೇ ಪ್ರಾಕೃತೈರ್ಗುಣೈಃ ।
ಅವಿಕಾರಾದಕರ್ತೃತ್ವಾನ್ನಿರ್ಗುಣತ್ವಾಜ್ಜಲಾರ್ಕವತ್ ॥

ಅನುವಾದ

ಶ್ರೀಕಪಿಲಭಗವಂತನು ಹೇಳುತ್ತಾನೆ ತಾಯೆ! ಸೂರ್ಯನು ನೀರಿನಲ್ಲಿ ಪ್ರತಿಬಿಂಬಿಸಿದ್ದಾಗ ಆ ಪ್ರತಿಬಿಂಬದಲ್ಲಿ ನೀರಿನಲ್ಲಿರುವ ಶೈತ್ಯ, ಚಂಚಲತೆ ಮುಂತಾದ ಗುಣಗಳು ಅಂಟಿಕೊಳ್ಳದಂತೆ, ಆತ್ಮನು ಪ್ರಕೃತಿಯ ಕಾರ್ಯವಾದ ಶರೀರದಲ್ಲಿ ಇದ್ದರೂ ಅದರ ಗುಣಗಳಾದ ಸುಖ-ದುಃಖಾದಿಗಳಿಂದ ವಾಸ್ತವವಾಗಿ ಲಿಪ್ತನಾಗುವುದಿಲ್ಲ. ಏಕೆಂದರೆ, ಅವನು ಸ್ವಭಾವದಿಂದಲೇ ನಿರ್ವಿಕಾರನೂ, ಅಕರ್ತನೂ, ನಿರ್ಗುಣನೂ ಆಗಿರುವನು.॥1॥

(ಶ್ಲೋಕ - 2)

ಮೂಲಮ್

ಸ ಏಷ ಯರ್ಹಿ ಪ್ರಕೃತೇರ್ಗುಣೇಷ್ವಭಿವಿಷಜ್ಜತೇ ।
ಅಹಂಕ್ರಿಯಾವಿಮೂಢಾತ್ಮಾ ಕರ್ತಾಸ್ಮೀತ್ಯಭಿಮನ್ಯತೇ ॥

ಅನುವಾದ

ಆದರೆ ಅವನೇ ಪ್ರಾಕೃತಗುಣಗ ಳೊಂದಿಗೆ ತನ್ನ ಸಂಬಂಧವನ್ನು ಸ್ಥಾಪಿಸಿಕೊಂಡಾಗ ಅಹಂಕಾರದಿಂದ ಮೋಹಿತನಾಗಿ ‘ನಾನು ಕರ್ತಾ ಆಗಿದ್ದೇನೆ ’ ಎಂದು ಭಾವಿಸ ತೊಡಗುತ್ತಾನೆ.॥2॥

(ಶ್ಲೋಕ - 3)

ಮೂಲಮ್

ತೇನ ಸಂಸಾರಪದವೀಮವಶೋಭ್ಯೇತ್ಯನಿರ್ವೃತಃ ।
ಪ್ರಾಸಂಗಿಕೈಃ ಕರ್ಮದೋಷೈಃ ಸದಸನ್ಮಿಶ್ರಯೋನಿಷು ॥ 3 ॥

ಅನುವಾದ

ಆ ಅಭಿಮಾನದ ಕಾರಣದಿಂದಲೇ ಅವನು ದೇಹದ ಸಂಸರ್ಗದಿಂದ ಮಾಡಲಾದ ಪುಣ್ಯ- ಪಾಪರೂಪವಾದ ಕರ್ಮಗಳ ದೋಷದಿಂದ ತನ್ನ ಸ್ವಾಧೀನತೆಯನ್ನೂ, ಶಾಂತಿಯನ್ನೂ ಕಳೆದುಕೊಂಡು, ಉತ್ತಮ, ಮಧ್ಯಮ, ನೀಚ ಯೋನಿಗಳಲ್ಲಿ ಜನ್ಮತಳೆದು ಸಂಸಾರಚಕ್ರದಲ್ಲಿ ಸುತ್ತುತ್ತಿರುವನು.॥3॥

(ಶ್ಲೋಕ - 4)

ಮೂಲಮ್

ಅರ್ಥೇ ಹ್ಯವಿದ್ಯಮಾನೇಪಿ ಸಂಸೃತಿರ್ನ ನಿವರ್ತತೇ ।
ಧ್ಯಾಯತೋ ವಿಷಯಾನಸ್ಯ ಸ್ವಪ್ನೇನರ್ಥಾಗಮೋ ಯಥಾ ॥

ಅನುವಾದ

ಸ್ವಪ್ನದಲ್ಲಿ ಭಯ-ಶೋಕಾದಿಗಳಿಗೆ ಯಾವುದೇ ಕಾರಣವಿಲ್ಲದಿದ್ದರೂ ಸ್ವಪ್ನದ ಪದಾರ್ಥಗಳಲ್ಲಿ ಆಸ್ಥೆಯು ಉಂಟಾದ ಕಾರಣ ದುಃಖವನ್ನು ಅನುಭವಿಸಬೇಕಾಗುತ್ತದೆ. ಹಾಗೆಯೇ ಭಯ-ಶೋಕ, ಅಹಂಕಾರ- ಮಮಕಾರ, ಮತ್ತು ಜನ್ಮ-ಮರಣ ಮುಂತಾದ ಸಂಸಾರಕ್ಕೆ ಯಾವ ಅಸ್ತಿತ್ವವೂ ಇಲ್ಲದಿದ್ದರೂ, ಅವಿದ್ಯೆಗೆ ವಶನಾಗಿ ವಿಷಯಗಳನ್ನು ಚಿಂತಿಸುತ್ತಿರುವುದರಿಂದ ಜೀವಿಯ ಸಂಸಾರ ಚಕ್ರವು ಎಂದಿಗೂ ತೊಲಗುವುದಿಲ್ಲ.॥4॥

(ಶ್ಲೋಕ - 5)

ಮೂಲಮ್

ಅತ ಏವ ಶನೈಶ್ಚಿತ್ತಂ ಪ್ರಸಕ್ತಮಸತಾಂ ಪಥಿ ।
ಭಕ್ತಿಯೋಗೇನ ತೀವ್ರೇಣ ವಿರಕ್ತ್ಯಾ ಚ ನಯೇದ್ವಶಮ್ ॥

ಅನುವಾದ

ಅದಕ್ಕಾಗಿ ಬುದ್ಧಿವಂತರಾದವರು ವಿಷಯಚಿಂತನೆಯೆಂಬ ದುರ್ಮಾರ್ಗದಲ್ಲಿ ಸಿಕ್ಕಿಹಾಕಿಕೊಂಡಿರುವ ಚಿತ್ತವನ್ನು ತೀವ್ರವಾದ ಭಕ್ತಿಯೋಗ ಮತ್ತು ವೈರಾಗ್ಯಗಳ ಮೂಲಕ ನಿಧಾನವಾಗಿ ವಶಪಡಿಸಿಕೊಳ್ಳಬೇಕು.॥5॥

(ಶ್ಲೋಕ - 6)

ಮೂಲಮ್

ಯಮಾದಿಭಿರ್ಯೋಗಪಥೈರಭ್ಯಸನ್ ಶ್ರದ್ಧಯಾನ್ವಿತಃ ।
ಮಯಿ ಭಾವೇನ ಸತ್ಯೇನ ಮತ್ಕಥಾಶ್ರವಣೇನ ಚ ॥

(ಶ್ಲೋಕ - 7)

ಮೂಲಮ್

ಸರ್ವಭೂತಸಮತ್ವೇನ ನಿರ್ವೈರೇಣಾಪ್ರಸಂಗತಃ ।
ಬ್ರಹ್ಮಚರ್ಯೇಣ ವೌನೇನ ಸ್ವಧರ್ಮೇಣ ಬಲೀಯಸಾ ॥

(ಶ್ಲೋಕ - 8)

ಮೂಲಮ್

ಯದೃಚ್ಛಯೋಪಲಬ್ಧೇನ ಸಂತುಷ್ಟೋ ಮಿತಭುಙ್ ಮುನಿಃ ।
ವಿವಿಕ್ತಶರಣಃ ಶಾಂತೋ ಮೈತ್ರಃ ಕರುಣ ಆತ್ಮವಾನ್ ॥

(ಶ್ಲೋಕ - 9)

ಮೂಲಮ್

ಸಾನುಬಂಧೇ ಚ ದೇಹೇಸ್ಮಿನ್ನಕುರ್ವನ್ನಸದಾಗ್ರಹಮ್ ।
ಜ್ಞಾನೇನ ದೃಷ್ಟ ತತ್ತ್ವೇನ ಪ್ರಕೃತೇಃ ಪುರುಷಸ್ಯ ಚ ॥

(ಶ್ಲೋಕ - 10)

ಮೂಲಮ್

ನಿವೃತ್ತಬುದ್ಧ್ಯವಸ್ಥಾನೋ ದೂರೀಭೂತಾನ್ಯದರ್ಶನಃ ।
ಉಪಲಭ್ಯಾತ್ಮನಾತ್ಮಾನಂ ಚಕ್ಷುಷೇವಾರ್ಕಮಾತ್ಮದೃಕ್ ॥

(ಶ್ಲೋಕ - 11)

ಮೂಲಮ್

ಮುಕ್ತಲಿಂಗಂ ಸದಾಭಾಸಮಸತಿ ಪ್ರತಿಪದ್ಯತೇ ।
ಸತೋಬಂಧು ಮಸಚ್ಚಕ್ಷುಃ ಸರ್ವಾನುಸ್ಯೂತಮದ್ವಯಮ್ ॥

ಅನುವಾದ

ಯಮ-ನಿಯಮಾದಿ ಯೋಗಸಾಧನೆಯನ್ನು ಶ್ರದ್ಧೆಯಿಂದ ಅಭ್ಯಾಸಮಾಡುತ್ತಾ, ಚಿತ್ತವನ್ನು ಪದೇ-ಪದೇ ಏಕಾಗ್ರಗೊಳಿಸುತ್ತಾ, ನನ್ನಲ್ಲಿ ನಿಜವಾದ ಭಾವವನ್ನಿಟ್ಟು, ನನ್ನ ಕಥೆಗಳನ್ನು ಕೇಳುತ್ತಾ, ಸಮಸ್ತ ಪ್ರಾಣಿಗಳಲ್ಲಿಯೂ ಸಮಭಾವವನ್ನಿರಿಸಿ, ಯಾರಲ್ಲಿಯೂ ವೈರಭಾವವನ್ನು ತಾಳದೆ, ಆಸಕ್ತಿಯನ್ನು ತೊರೆದು, ಬ್ರಹ್ಮಚರ್ಯ-ಮೌನವ್ರತಗಳನ್ನು ಹೊಂದಿ, ಪ್ರಾರಬ್ಧಕ್ಕನುಗುಣವಾಗಿ ಸಿಕ್ಕಿದಷ್ಟರಲ್ಲಿ ಸಂತೋಷಪಟ್ಟುಕೊಳ್ಳುತ್ತಾ, ಮಿತವಾಗಿ ಆಹಾರವನ್ನು ಸೇವಿಸುತ್ತಾ, ಏಕಾಂತದಲ್ಲಿ ವಾಸಿಸುತ್ತಾ, ಶಾಂತಸ್ವಭಾವವುಳ್ಳವನಾಗಿ, ಎಲ್ಲರಿಗೂ ಮಿತ್ರನಾಗಿ, ದಯಾಳುವಾಗಿ, ಧೈರ್ಯಶಾಲಿಯಾಗಿ, ಪ್ರಕೃತಿ- ಪುರುಷರ ನಿಜವಾದ ಸ್ವರೂಪದ ಅನುಭವದಿಂದ ದೊರೆತಿರುವ ತತ್ತ್ವಜ್ಞಾನದ ಕಾರಣ ಪತ್ನೀ, ಪುತ್ರಾದಿಗಳಿಂದ ಕೂಡಿದ ಈ ದೇಹ ದಲ್ಲಿ ‘ನಾನು-ನನ್ನದು’ ಎಂಬ ಮಿಥ್ಯಾ ಅಭಿಮಾನವನ್ನು ತೊರೆದು, ಬುದ್ಧಿಯ ಜಾಗ್ರದಾದಿ ಅವಸ್ಥೆಗಳಿಂದ ತನ್ನನ್ನು ಬೇರ್ಪಡಿಸಿಕೊಂಡು, ಪರಮಾತ್ಮನನ್ನು ಬಿಟ್ಟು ಬೇರೆ ಯಾವ ಪದಾರ್ಥವನ್ನು ನೋಡದ ಆತ್ಮದರ್ಶಿಯಾದ ಮುನಿಗೆ ಆ ಬ್ರಹ್ಮಪದವು ದೊರೆಯುವುದು. ಅವನು ಕಣ್ಣುಗಳಿಂದ ಸೂರ್ಯನನ್ನು ನೋಡುವಂತೆ ತನ್ನ ಶುದ್ಧವಾದ ಅಂತಃಕರಣದ ಮೂಲಕ ಪರಮಾತ್ಮನನ್ನು ಸಾಕ್ಷಾತ್ಕರಿಸಿಕೊಂಡು, ದೇಹವೇ ಮುಂತಾದ ಎಲ್ಲ ಉಪಾಧಿಗಳಿಂದಲೂ ಬೇರೆಯಾಗಿ, ಅಹಂಕಾರಾದಿ ಮಿಥ್ಯಾ ವಸ್ತುಗಳಲ್ಲಿ ಸದ್ವಸ್ತುವಾಗಿ ಬೆಳಗುತ್ತಿರುವ, ಜಗತ್ಕಾರಣಭೂತವಾದ ಪ್ರಕೃತಿಗೂ ಅಧಿಷ್ಠಾನವಾಗಿರುವ, ಮಹ ದಾದಿ ಕಾರ್ಯವರ್ಗಗಳ ಪ್ರಕಾಶಕನಾಗಿರುವ, ಕಾರ್ಯ-ಕಾರಣ ರೂಪವಾದ ಸಮಸ್ತ ಪದಾರ್ಥಗಳಲ್ಲಿ ವ್ಯಾಪ್ತನಾಗಿರುವ ಅದ್ವಿತೀಯ ನಾದ ಪರಬ್ರಹ್ಮನ ಪದವನ್ನು ಪಡೆಯುವನು.॥6-11॥

(ಶ್ಲೋಕ - 12)

ಮೂಲಮ್

ಯಥಾ ಜಲಸ್ಥ ಆಭಾಸಃ ಸ್ಥಲಸ್ಥೇನಾವದೃಶ್ಯತೇ ।
ಸ್ವಾಭಾಸೇನ ತಥಾ ಸೂರ್ಯೋ ಜಲಸ್ಥೇನ ದಿವಿ ಸ್ಥಿತಃ ॥

(ಶ್ಲೋಕ - 13)

ಮೂಲಮ್

ಏವಂ ತ್ರಿವೃದಹಂಕಾರೋ ಭೂತೇಂದ್ರಿಯಮನೋಮಯೈಃ ।
ಸ್ವಾಭಾಸೈರ್ಲಕ್ಷಿತೋನೇನ ಸದಾಭಾಸೇನ ಸತ್ಯದೃಕ್ ॥

(ಶ್ಲೋಕ - 14)

ಮೂಲಮ್

ಭೂತಸೂಕ್ಷ್ಮೇಂದ್ರಿಯಮನೋಬುದ್ಧ್ಯಾದಿಷ್ವಿಹ ನಿದ್ರಯಾ ।
ಲೀನೇಷ್ವಸತಿ ಯಸ್ತತ್ರ ವಿನಿದ್ರೋ ನಿರಹಂಕ್ರಿಯಃ ॥

ಅನುವಾದ

ನೀರಿನಲ್ಲಿ ಪ್ರತಿಬಿಂಬಿಸುವ ಸೂರ್ಯನ ಪ್ರಕಾಶವು ಮನೆ ಯೊಳಗೆ ಹೊಕ್ಕು ಗೋಡೆಯಮೇಲೆ ಬಿದ್ದಾಗ, ಅಲ್ಲಿಯ ಜನರು ಈ ಬಿಸಿಲು ಎಲ್ಲಿಂದ ಬಂತು ಎಂದು ವಿಚಾರ ಮಾಡುತ್ತಾ ಅದಕ್ಕೆ ಆಧಾರವಾಗಿ ನೀರಿನಲ್ಲಿರುವ ಸೂರ್ಯಪ್ರತಿಬಿಂಬವನ್ನು ಕಂಡು, ಅದಕ್ಕೆ ಮೂಲವಾದ ನಿಜವಾದ ಸೂರ್ಯನನ್ನು ಕಾಣುವರು. ಹಾಗೆಯೇ ವೈಕಾರಿಕಾದಿ ಭೇದದಿಂದ ಮೂರು ರೀತಿಯ ಅಹಂ ಕಾರವು ದೇಹ, ಇಂದ್ರಿಯ ಮತ್ತು ಮನಸ್ಸಿನಲ್ಲಿ ಕಂಡುಬರುವ ತನ್ನ ಪ್ರತಿಬಿಂಬಗಳಿಂದ ತಿಳಿದುಬರುತ್ತದೆ. ಮತ್ತು ಪುನಃ ಸತ್ಪರ ಮಾತ್ಮನ ಪ್ರತಿಬಿಂಬದಿಂದ ಕೂಡಿದ ಅಹಂಕಾರದ ಮೂಲಕ ಸತ್ಯಜ್ಞಾನಸ್ವರೂಪ ಪರಮಾತ್ಮನ ದರ್ಶನವಾಗುತ್ತದೆ. ಅದು ಸುಷುಪ್ತಿಯಲ್ಲಿ ನಿದ್ರೆಯಿಂದ ಶಬ್ದಾದಿ ಭೂತಸೂಕ್ಷ್ಮ, ಇಂದ್ರಿಯ ಮತ್ತು ಮನಸ್ಸು, ಬುದ್ಧಿ ಮುಂತಾದವುಗಳು ಅವ್ಯಾಕೃತದಲ್ಲಿ ಲೀನವಾದ ಬಳಿಕ, ಸ್ವಯಂ ಎಚ್ಚರವಾಗಿದ್ದು ಸರ್ವಥಾ ಅಹಂಕಾರ ಶೂನ್ಯವಾಗಿರುತ್ತದೆ.॥12-14॥

(ಶ್ಲೋಕ - 15)

ಮೂಲಮ್

ಮನ್ಯಮಾನಸ್ತದಾತ್ಮಾನಮನಷ್ಟೋ ನಷ್ಟವನ್ಮೃಷಾ ।
ನಷ್ಟೇಹಂಕರಣೇ ದ್ರಷ್ಟಾ ನಷ್ಟವಿತ್ತ ಇವಾತುರಃ ॥

ಅನುವಾದ

(ಜಾಗ್ರತ್-ಅವಸ್ಥೆಯಲ್ಲಿ ಈ ಆತ್ಮನು ಭೂತಸೂಕ್ಷ್ಮಾದಿ ದೃಶ್ಯವರ್ಗದ ದೃಷ್ಟಾರೂಪದಲ್ಲಿ ಸ್ಪಷ್ಟವಾಗಿ ಅನುಭವಕ್ಕೆ ಬರುತ್ತಾನೆ. ಆದರೆ ) ಸುಷುಪ್ತಿಯಲ್ಲಿ ತನ್ನ ಉಪಾಧಿಭೂತ ಅಹಂಕಾರದ ನಾಶ ವಾದ್ದರಿಂದ ಅವನು ಭ್ರಮೆಯಿಂದ ತಾನೇ ನಾಶವಾದೆನೆಂದು ತಿಳಿದುಕೊಳ್ಳುತ್ತಾನೆ. ಧನವು ನಾಶವಾದಾಗ ತಾನೇ ನಾಶವಾದೆನೆಂದು ತಿಳಿದು ಅತ್ಯಂತ ದುಃಖಿತನಾಗುವಂತೆ ಅವನೂ ಕೂಡ ಅತ್ಯಂತ ವಿವಶನಾಗಿ ನಷ್ಟವಾದಂತೆ ಆಗಿಹೋಗುತ್ತಾನೆ.॥15॥

(ಶ್ಲೋಕ - 16)

ಮೂಲಮ್

ಏವಂ ಪ್ರತ್ಯವಮೃಶ್ಯಾಸಾವಾತ್ಮಾನಂ ಪ್ರತಿಪದ್ಯತೇ ।
ಸಾಹಂಕಾರಸ್ಯ ದ್ರವ್ಯಸ್ಯ ಯೋವಸ್ಥಾನಮನುಗ್ರಹಃ ॥

ಅನುವಾದ

ಅಮ್ಮಾ ! ಇವೆಲ್ಲ ಮಾತುಗಳನ್ನು ಮನನಗೈದು ವಿವೇಕಿ ಪುರುಷನು ಅಹಂಕಾರಸಹಿತ ಸಮಸ್ತ ತತ್ತ್ವಗಳ ಅಧಿಷ್ಠಾನವೂ, ಪ್ರಕಾಶಕವೂ ಆದ ತನ್ನ ಆತ್ಮದ ಅನುಭವವನ್ನು ಪಡೆದುಕೊಳ್ಳುತ್ತಾನೆ.॥16॥

(ಶ್ಲೋಕ - 17)

ಮೂಲಮ್ (ವಾಚನಮ್)

ದೇವಹೂತಿರುವಾಚ

ಮೂಲಮ್

ಪುರುಷಂ ಪ್ರಕೃತಿರ್ಬ್ರಹ್ಮನ್ ನ ವಿಮುಂಚತಿ ಕರ್ಹಿಚಿತ್ ।
ಅನ್ಯೋನ್ಯಾಪಾಶ್ರಯತ್ವಾಚ್ಚ ನಿತ್ಯತ್ವಾದನಯೋಃ ಪ್ರಭೋ ॥

ಅನುವಾದ

ದೇವಹೂತಿಯು ಕೇಳಿದಳು ಪ್ರಭುವೇ ! ಪ್ರಕೃತಿ ಮತ್ತು ಪುರುಷ ಇವೆರಡೂ ನಿತ್ಯವೂ, ಒಂದನ್ನೊಂದರ ಆಶ್ರಯದಿಂದಲೂ ಇರುವವು. ಅದಕ್ಕಾಗಿ ಪ್ರಕೃತಿಯಾದರೋ ಪುರುಷನನ್ನು ಎಂದೂ ಬಿಟ್ಟಿರಲಾರದು.॥17॥

(ಶ್ಲೋಕ - 18)

ಮೂಲಮ್

ಯಥಾ ಗಂಧಸ್ಯ ಭೂಮೇಶ್ಚ ನ ಭಾವೋ ವ್ಯತಿರೇಕತಃ ।
ಅಪಾಂ ರಸಸ್ಯ ಚ ಯಥಾ ತಥಾ ಬುದ್ಧೇಃ ಪರಸ್ಯ ಚ ॥

ಅನುವಾದ

ಬ್ರಹ್ಮಸ್ವರೂಪನೇ! ಗಂಧವು ಪೃಥಿವಿಯ, ರಸವು ಜಲದ ಬೇರೆಬೇರೆಯಾದ ಸ್ಥಿತಿಯು ಹೇಗೆ ಆಗಲಾರದೋ ಹಾಗೆಯೇ ಪುರುಷ ಮತ್ತು ಪ್ರಕೃತಿಯೂ ಒಂದನ್ನೊಂದು ಬಿಟ್ಟು ಇರಲಾರವು.॥18॥

(ಶ್ಲೋಕ - 19)

ಮೂಲಮ್

ಅಕರ್ತುಃ ಕರ್ಮಬಂಧೋಯಂ ಪುರುಷಸ್ಯ ಯದಾಶ್ರಯಃ ।
ಗುಣೇಷು ಸತ್ಸು ಪ್ರಕೃತೇಃ ಕೈವಲ್ಯಂ ತೇಷ್ವತಃ ಕಥಮ್ ॥

ಅನುವಾದ

ಆದ್ದರಿಂದ ಯಾವುದರ ಆಶ್ರಯದಿಂದ ಅಕರ್ತೃವಾದ ಪುರುಷನಿಗೆ ಈ ಕರ್ಮಬಂಧನ ಉಂಟಾಗಿದೆಯೋ ಆ ಪ್ರಕೃತಿಯ ಗುಣಗಳು ಇರುವಾಗಲೇ ಅವನಿಗೆ ಕೈವಲ್ಯಪದವು ಹೇಗೆ ದೊರಕಬಲ್ಲದು? ॥19॥

(ಶ್ಲೋಕ - 20)

ಮೂಲಮ್

ಕ್ವಚಿತ್ತತ್ತ್ವಾವಮರ್ಶೇನ ನಿವೃತ್ತಂ ಭಯಮುಲ್ಬಣಮ್ ।
ಅನಿವೃತ್ತನಿಮಿತ್ತತ್ವಾತ್ಪುನಃ ಪ್ರತ್ಯವತಿಷ್ಠತೇ ॥ 20 ॥

ಅನುವಾದ

ತತ್ತ್ವಗಳ ವಿಚಾರ ಮಾಡುವುದರಿಂದ ಎಂದಾದರೂ ಈ ಸಂಸಾರ ಬಂಧನದ ತೀವ್ರ ಭಯವು ನಿವೃತ್ತವಾದರೂ ಕೂಡ ಅದರ ನಿಮಿತ್ತ ಭೂತ ಪ್ರಾಕೃತ ಗುಣಗಣಗಳ ಅಭಾವ ಆಗದಿರುವುದರಿಂದ ಆ ಭಯವು ಪುನಃ ಉಂಟಾಗಬಹುದಲ್ಲ? ॥20॥

(ಶ್ಲೋಕ - 21)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ಅನಿಮಿತ್ತನಿಮಿತ್ತೇನ ಸ್ವಧರ್ಮೇಣಾಮಲಾತ್ಮನಾ ।
ತೀವ್ರಯಾ ಮಯಿ ಭಕ್ತ್ಯಾ ಚ ಶ್ರುತಸಂಭೃತಯಾ ಚಿರಮ್ ॥

(ಶ್ಲೋಕ - 22)

ಮೂಲಮ್

ಜ್ಞಾನೇನ ದೃಷ್ಟತತ್ತ್ವೇನ ವೈರಾಗ್ಯೇಣ ಬಲೀಯಸಾ ।
ತಪೋಯುಕ್ತೇನ ಯೋಗೇನ ತೀವ್ರೇಣಾತ್ಮಸಮಾಧಿನಾ ॥

(ಶ್ಲೋಕ - 23)

ಮೂಲಮ್

ಪ್ರಕೃತಿಃ ಪುರುಷಸ್ಯೇಹ ದಹ್ಯಮಾನಾ ತ್ವಹರ್ನಿಶಮ್ ।
ತಿರೋಭವಿತ್ರೀ ಶನಕೈರಗ್ನೇರ್ಯೋನಿರಿವಾರಣಿಃ ॥

ಅನುವಾದ

ಶ್ರೀಭಗವಂತನು ಹೇಳಿದನು - ತಾಯೇ! ಅರಣಿಯಿಂದಲೇ ಉತ್ಪನ್ನವಾದ ಅಗ್ನಿಯಿಂದ ಅದರ ಉತ್ಪತ್ತಿಸ್ಥಾನವಾದ ಅರಣಿಯೂ ಸುಟ್ಟು ಬೂದಿಯಾಗಿ ಹೋಗುವಂತೆ, ನಿಷ್ಕಾಮಭಾವದಿಂದ ಮಾಡಲಾದ ಸ್ವಧರ್ಮಪಾಲನೆಯ ಮೂಲಕ ಶುದ್ಧವಾದ ಅಂತಃ ಕರಣದಿಂದ, ಬಹಳಕಾಲ ಭಗವತ್ಕಥೆಗಳನ್ನು ಕೇಳುತ್ತಿರುವುದ ರಿಂದ ಪುಷ್ಟಿಗೊಂಡ ನನ್ನ ತೀವ್ರವಾದ ಭಕ್ತಿಯಿಂದ, ತತ್ತ್ವ ಸಾಕ್ಷಾತ್ಕಾರ ಮಾಡಿಸುವ ಜ್ಞಾನದಿಂದ, ಪ್ರಬಲ ವೈರಾಗ್ಯದಿಂದ, ವ್ರತನಿಯಮಗಳೊಂದಿಗೆ ಗೈದ ಧ್ಯಾನಾಭ್ಯಾಸದಿಂದ ಮತ್ತು ಚಿತ್ತದ ಪ್ರಗಾಢವಾದ ಏಕಾಗ್ರತೆಯಿಂದ ಪುರುಷನ ಪ್ರಕೃತಿಯು (ಅವಿದ್ಯೆಯು) ಹಗಲೂ-ರಾತ್ರಿಯೂ ಕ್ಷೀಣಿಸುತ್ತಾ ನಿಧಾನವಾಗಿ ಲೀನವಾಗಿ ಹೋಗುತ್ತದೆ.॥21-23॥

(ಶ್ಲೋಕ - 24)

ಮೂಲಮ್

ಭುಕ್ತಭೋಗಾ ಪರಿತ್ಯಕ್ತಾ ದೃಷ್ಟದೋಷಾ ಚ ನಿತ್ಯಶಃ ।
ನೇಶ್ವರಸ್ಯಾಶುಭಂ ಧತ್ತೇ ಸ್ವೇ ಮಹಿಮ್ನಿ ಸ್ಥಿತಸ್ಯ ಚ ॥

ಅನುವಾದ

ಮತ್ತೆ ಪ್ರತಿದಿನವೂ ದೋಷಗಳನ್ನು ನೋಡಿ ಭೋಗಿಸಿ ತ್ಯಜಿಸಿದ ಆ ಪ್ರಕೃತಿಯು ತನ್ನ ಸ್ವರೂಪದಲ್ಲಿ ಸ್ಥಿತನಾದ ಸ್ವತಂತ್ರ (ಬಂಧಮುಕ್ತ )ನಾದ ಆ ಪುರುಷನ ಯಾವುದೇ ಅಹಿತವನ್ನು ಮಾಡಲಾರಳು. ॥ 24 ॥

(ಶ್ಲೋಕ - 25)

ಮೂಲಮ್

ಯಥಾ ಹ್ಯಪ್ರತಿಬುದ್ಧಸ್ಯ ಪ್ರಸ್ವಾಪೋ ಬಹ್ವನರ್ಥಭೃತ್ ।
ಸ ಏವ ಪ್ರತಿಬುದ್ಧಸ್ಯ ನ ವೈ ಮೋಹಾಯ ಕಲ್ಪತೇ ॥

ಅನುವಾದ

ಮಲಗಿರುವ ಮನುಷ್ಯನಿಗೆ ಸ್ವಪ್ನದಲ್ಲಿ ಎಷ್ಟೇ ಅನರ್ಥಗಳ ಅನುಭವಗಳಾದರೂ ಎಚ್ಚರ ವಾದಾಗ ಅವನಿಗೆ ಆ ಸ್ವಪ್ನದ ಅನುಭವದಿಂದ ಯಾವುದೇ ಮೋಹವು ಉಂಟಾಗುವುದಿಲ್ಲ. ॥ 25 ॥

(ಶ್ಲೋಕ - 26)

ಮೂಲಮ್

ಏವಂ ವಿದಿತತತ್ತ್ವಸ್ಯ ಪ್ರಕೃತಿರ್ಮಯಿ ಮಾನಸಮ್ ।
ಯುಂಜತೋ ನಾಪಕುರುತ ಆತ್ಮಾರಾಮಸ್ಯ ಕರ್ಹಿಚಿತ್ ॥

ಅನುವಾದ

ಹಾಗೆಯೇ ತತ್ತ್ವಜ್ಞಾನ ಉಂಟಾದವನು ನಿರಂತರವಾಗಿ ನನ್ನಲ್ಲೇ ಮನಸ್ಸನ್ನು ತೊಡಗಿಸಿರುತ್ತಾನೆ. ಅಂತಹ ಆತ್ಮಾರಾಮ ಮುನಿಗೆ ಪ್ರಕೃತಿಯು ಯಾವ ತೊಂದರಯನ್ನೂ ಮಾಡಲಾರಳು.॥26॥

(ಶ್ಲೋಕ - 27)

ಮೂಲಮ್

ಯದೈವಮಧ್ಯಾತ್ಮರತಃ ಕಾಲೇನ ಬಹುಜನ್ಮನಾ ।
ಸರ್ವತ್ರ ಜಾತವೈರಾಗ್ಯ ಆಬ್ರಹ್ಮ ಭುವನಾನ್ಮುನಿಃ ॥

ಅನುವಾದ

ಅನೇಕ ಜನ್ಮಗಳಲ್ಲಿ ಮನುಷ್ಯನು ದೀರ್ಘಕಾಲದವರೆಗೆ ಹೀಗೆ ಆತ್ಮಚಿಂತನೆಯಲ್ಲಿಯೇ ಮುಳುಗಿದ್ದರೆ, ಆಗ ಅವನಿಗೆ ಬ್ರಹ್ಮಲೋಕದವರೆಗಿನ ಎಲ್ಲ ರೀತಿಯ ಭೋಗಗಳಿಂದ ವೈರಾಗ್ಯ ಉಂಟಾಗುತ್ತದೆ.॥27॥

(ಶ್ಲೋಕ - 28)

ಮೂಲಮ್

ಮದ್ಭಕ್ತಃ ಪ್ರತಿಬುದ್ಧಾರ್ಥೋ ಮತ್ಪ್ರಸಾದೇನ ಭೂಯಸಾ ।
ನಿಃಶ್ರೇಯಸಂ ಸ್ವಸಂಸ್ಥಾನಂ ಕೈವಲ್ಯಾಖ್ಯಂ ಮದಾಶ್ರಯಮ್ ॥

(ಶ್ಲೋಕ - 29)

ಮೂಲಮ್

ಪ್ರಾಪ್ನೋತೀಹಾಂಜಸಾ ಧೀರಃ ಸ್ವದೃಶಾಂಛಿನ್ನಸಂಶಯಃ ।
ಯದ್ಗತ್ವಾ ನ ನಿವರ್ತೇತ ಯೋಗೀ ಲಿಂಗಾದ್ವಿನಿರ್ಗಮೇ ॥

ಅನುವಾದ

ಧೀರನಾದ ನನ್ನ ಆ ಭಕ್ತನು ನನ್ನ ಮಹತ್ಕೃಪೆಯಿಂದ ತತ್ತ್ವಜ್ಞಾನವನ್ನು ಪಡೆದು ಕೊಂಡು ಆತ್ಮಾನು ಭವದ ಮೂಲಕ ಎಲ್ಲ ಸಂಶಯಗಳಿಂದಲೂ ಮುಕ್ತನಾಗಿ ಹೋಗು ತ್ತಾನೆ. ಮತ್ತೆ ಲಿಂಗದೇಹವು ಭಂಗವಾದ ಮೇಲೆ ಏಕಮಾತ್ರ ನನ್ನನ್ನೇ ಆಶ್ರಯಿಸಿರುವ ತನ್ನ ಸ್ವರೂಪಭೂತ ಕೈವಲ್ಯವೆಂಬ ಮಂಗಳಮಯ ವಾದ ಸ್ಥಾನವನ್ನು ಸಹಜವಾಗಿಯೇ ಪಡೆದುಕೊಳ್ಳುವನು. ಅದನ್ನು ತಲುಪಿದ ಬಳಿಕ ಯೋಗಿಯು ಪುನಃ ಸಂಸಾರಕ್ಕೆ ಮರಳುವುದಿಲ್ಲ.॥28-29॥

(ಶ್ಲೋಕ - 30)

ಮೂಲಮ್

ಯದಾ ನ ಯೋಗೋಪಚಿತಾಸು ಚೇತೋ
ಮಾಯಾಸು ಸಿದ್ಧಸ್ಯ ವಿಷಜ್ಜತೇಂಗ ।
ಅನನ್ಯಹೇತುಷ್ವಥ ಮೇ ಗತಿಃ ಸ್ಯಾದ್
ಆತ್ಯಂತಿಕೀ ಯತ್ರ ನ ಮೃತ್ಯುಹಾಸಃ ॥

ಅನುವಾದ

ಅಮ್ಮಾ! ಯೋಗಿಯ ಚಿತ್ತವು-ಯೋಗಸಾಧನೆ ಯಿಂದ ಹೆಚ್ಚಾಗಿರುವ ಮಾಯಾಮಯ ಅಣಿಮಾದಿ ಅಷ್ಟಸಿದ್ಧಿ ಗಳಲ್ಲಿ, ಅದರ ಪ್ರಾಪ್ತಿಗಾಗಿ ಯೋಗಸಾಧನೆಗಿಂತ ಬೇರೆ ಯಾವ ಸಾಧನವೂ ಇಲ್ಲವೆಂದು ತಿಳಿದು ಅವುಗಳಲ್ಲಿ ಸಿಕ್ಕಿಹಾಕಿಕೊಳ್ಳದಿದ್ದರೆ, ಅವನಿಗೆ ಅವಿನಾಶಿಯಾದ ನನ್ನ ಪರಮಪದವು ಪ್ರಾಪ್ತ ವಾಗುತ್ತದೆ. ಮತ್ತೆ ಮೃತ್ಯುವಿನ ಯಾವುದೇ ಪ್ರಭಾವ ಉಳಿಯುವುದಿಲ್ಲ.॥30॥

ಅನುವಾದ (ಸಮಾಪ್ತಿಃ)

ಇಪ್ಪತ್ತೇಳನೆಯ ಅಧ್ಯಾಯವು ಮುಗಿಯಿತು.॥27॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ತೃತೀಯಸ್ಕಂಧೇ ಕಾಪಿಲೇಯೋಪಾಖ್ಯಾನೇ ಸಪ್ತವಿಂಶೋಽಧ್ಯಾಯಃ ॥27॥