[ಇಪ್ಪತ್ತಾರನೆಯ ಅಧ್ಯಾಯ]
ಭಾಗಸೂಚನಾ
ಮಹತ್ತು ಮುಂತಾದ ಬೇರೆ-ಬೇರೆ ತತ್ತ್ವಗಳ ಉತ್ಪತ್ತಿಯ ವರ್ಣನೆ
(ಶ್ಲೋಕ - 1)
ಮೂಲಮ್ (ವಾಚನಮ್)
ಶ್ರೀಭಗವಾನುವಾಚ
ಮೂಲಮ್
ಅಥ ತೇ ಸಂಪ್ರವಕ್ಷ್ಯಾಮಿ ತತ್ತ್ವಾನಾಂ ಲಕ್ಷಣಂ ಪೃಥಕ್ ।
ಯದ್ವಿದಿತ್ವಾ ವಿಮುಚ್ಯೇತ ಪುರುಷಃ ಪ್ರಾಕೃತೈರ್ಗುಣೈಃ ॥
ಅನುವಾದ
ಶ್ರೀಭಗವಂತನು ಹೇಳುತ್ತಾನೆ ಅಮ್ಮಾ ! ಈಗ ನಾನು ನಿನಗೆ ಪ್ರಕೃತಿಯೇ ಮುಂತಾದ ಎಲ್ಲ ತತ್ತ್ವಗಳ ಬೇರೆ-ಬೇರೆಯಾದ ಲಕ್ಷಣವನ್ನು ಹೇಳುವೆನು. ಇದನ್ನು ತಿಳಿದುಕೊಂಡ ಮನುಷ್ಯನು ಪ್ರಕೃತಿಯ ಗುಣಗಳಿಂದ ಮುಕ್ತನಾಗುವನು.॥1॥
(ಶ್ಲೋಕ - 2)
ಮೂಲಮ್
ಜ್ಞಾನಂ ನಿಃಶ್ರೇಯಸಾರ್ಥಾಯ ಪುರುಷಸ್ಯಾತ್ಮದರ್ಶನಮ್ ।
ಯದಾಹುರ್ವರ್ಣಯೇ ತತ್ತೇ ಹೃದಯಗ್ರಂಥಿಭೇದನಮ್ ॥
ಅನುವಾದ
ಆತ್ಮದರ್ಶನ ರೂಪವಾದ ಜ್ಞಾನವೇ ಪುರುಷನಿಗೆ ಮೋಕ್ಷದ ಕಾರಣವಾಗಿದೆ. ಅದೇ ಅವನ ಅಹಂಕಾರರೂಪೀ ಹೃದಯಗ್ರಂಥಿಯನ್ನು ಕತ್ತರಿಸು ವುದಾಗಿದೆ ಎಂದು ಪಂಡಿತರು ಹೇಳುತ್ತಾರೆ. ಅದೇ ಜ್ಞಾನವನ್ನು ನಾನು ಮುಂದೆ ನಿನಗೆ ವರ್ಣಿಸುವೆನು.॥2॥
(ಶ್ಲೋಕ - 3)
ಮೂಲಮ್
ಅನಾದಿರಾತ್ಮಾ ಪುರುಷೋ ನಿರ್ಗುಣಃ ಪ್ರಕೃತೇಃ ಪರಃ ।
ಪ್ರತ್ಯಗ್ಧಾಮಾ ಸ್ವಯಂಜ್ಯೋತಿರ್ವಿಶ್ವಂ ಯೇನ ಸಮನ್ವಿತಮ್ ॥
ಅನುವಾದ
ಈ ಇಡೀ ಜಗತ್ತು ಯಾರಿಂದ ವ್ಯಾಪ್ತವಾಗಿ, ಪ್ರಕಾಶಿಸುತ್ತದೋ ಆ ಆತ್ಮನೇ ಪುರುಷ ನಾಗಿದ್ದಾನೆ. ಅವನು ಅನಾದಿಯೂ, ನಿರ್ಗುಣನೂ, ಪ್ರಕೃತಿಗಿಂತ ಅತೀತನೂ, ಅಂತಃಕರಣದಲ್ಲಿ ಸ್ಫುರಿತನಾಗುವವನೂ, ಸ್ವಯಂ ಪ್ರಕಾಶನೂ ಆಗಿರುವನು.॥3॥
(ಶ್ಲೋಕ - 4)
ಮೂಲಮ್
ಸ ಏಷ ಪ್ರಕೃತಿಂ ಸೂಕ್ಷ್ಮಾಂ ದೈವೀಂ ಗುಣಮಯೀಂ ವಿಭುಃ ।
ಯದೃಚ್ಛಯೈವೋಪಗತಾಮಭ್ಯಪದ್ಯತ ಲೀಲಯಾ ॥
ಅನುವಾದ
ಆ ಸರ್ವವ್ಯಾಪಕ ಪುರುಷನು ತನ್ನ ಬಳಿಗೆ ಲೀಲಾವಿಲಾಸಪೂರ್ವಕವಾಗಿ ಬಂದಿರುವ ಅವ್ಯಕ್ತ ಮತ್ತು ತ್ರಿಗುಣಾತ್ಮಿಕೆಯಾದ ವೈಷ್ಣವೀಮಾಯೆಯನ್ನು ತನ್ನ ಇಚ್ಛೆ ಯಿಂದಲೇ ಸ್ವೀಕರಿಸಿದನು.॥4॥
(ಶ್ಲೋಕ - 5)
ಮೂಲಮ್
ಗುಣೈರ್ವಿಚಿತ್ರಾಃ ಸೃಜತೀಂ ಸ್ವರೂಪಾಃ ಪ್ರಕೃತಿಂ ಪ್ರಜಾಃ ।
ವಿಲೋಕ್ಯ ಮುಮುಹೇ ಸದ್ಯಃ ಸ ಇಹ ಜ್ಞಾನಗೂಹಯಾ ॥
ಅನುವಾದ
ಲೀಲಾಪರಾಯಣಳಾಗಿರುವ ಪ್ರಕೃತಿಯು ತನ್ನ ಸತ್ತ್ವಾದಿ ಗುಣಗಳಿಂದ, ಅವುಗಳಿಗೆ ಅನುರೂಪ ವಾದ ಪ್ರಜೆಗಳನ್ನು ಸೃಷ್ಟಿಸತೊಡಗಿದಳು. ಇದನ್ನು ಕಂಡ ಪುರುಷನು ಜ್ಞಾನವನ್ನು ಮುಚ್ಚಿಹಾಕುವ ಅದರ ಆವರಣಶಕ್ತಿಯಿಂದ ಮೋಹಿತ ನಾಗಿ ತನ್ನ ಸ್ವರೂಪವನ್ನು ಮರೆತುಬಿಟ್ಟನು.॥5॥
(ಶ್ಲೋಕ - 6)
ಮೂಲಮ್
ಏವಂ ಪರಾಭಿಧ್ಯಾನೇನ ಕರ್ತೃತ್ವಂ ಪ್ರಕೃತೇಃ ಪುಮಾನ್ ।
ಕರ್ಮಸು ಕ್ರಿಯಾಮಾಣೇಷು ಗುಣೈರಾತ್ಮನಿ ಮನ್ಯತೇ ॥
ಅನುವಾದ
ಹೀಗೆ ತನ್ನಿಂದ ಭಿನ್ನವಾದ ಪ್ರಕೃತಿಯನ್ನೇ ತನ್ನ ಸ್ವರೂಪವೆಂದು ತಿಳಿದುಕೊಂಡಿದ್ದ ರಿಂದ ಪುರುಷನು ಪ್ರಕೃತಿಯ ಗುಣಗಳ ಮೂಲಕ ಮಾಡಲಾಗುವ ಕರ್ಮಗಳಲ್ಲಿ ತನ್ನನ್ನೇ ಕರ್ತಾ ಎಂದು ತಿಳಿಯತೊಡಗಿದನು.॥6॥
(ಶ್ಲೋಕ - 7)
ಮೂಲಮ್
ತದಸ್ಯ ಸಂಸೃತಿರ್ಬಂಧಃ ಪಾರತಂತ್ರ್ಯಂ ಚ ತತ್ಕೃತಮ್ ।
ಭವತ್ಯಕರ್ತುರೀಶಸ್ಯ ಸಾಕ್ಷಿಣೋ ನಿರ್ವೃತಾತ್ಮನಃ ॥
ಅನುವಾದ
ಕರ್ತೃತ್ತ್ವಾಭಿಮಾನದಿಂದಲೇ ಅಕರ್ತೃವೂ, ಸ್ವಾಧೀನನೂ, ಸಾಕ್ಷಿಯೂ, ಆನಂದಸ್ವರೂಪನೂ ಆದ ಪುರುಷನಿಗೆ ಜನ್ಮ-ಮೃತ್ಯುರೂಪವಾದ ಬಂಧನವೂ ಹಾಗೂ ಪರತಂತ್ರತೆಯೂ ಪ್ರಾಪ್ತವಾಯಿತು.॥7॥
(ಶ್ಲೋಕ - 8)
ಮೂಲಮ್
ಕಾರ್ಯಕಾರಣಕರ್ತೃತ್ವೇ ಕಾರಣಂ ಪ್ರಕೃತಿಂ ವಿದುಃ ।
ಭೋಕ್ತೃತ್ವೇ ಸುಖದುಃಖಾನಾಂ ಪುರುಷಂ ಪ್ರಕೃತೇಃ ಪರಮ್ ॥
ಅನುವಾದ
ಕಾರ್ಯರೂಪವಾದ ಶರೀರದಲ್ಲಿಯೂ, ಕಾರಣರೂಪವಾದ ಇಂದ್ರಿಯಗಳಲ್ಲಿಯೂ, ಕರ್ತೃರೂಪವಾದ ಇಂದ್ರಿಯಗಳ ಅಭಿಮಾನೀ ದೇವತೆಗಳಲ್ಲಿಯೂ ಪುರುಷನು ‘ಅವು ನನ್ನವು’ ಎಂದು ಆರೋಪಿಸಿ ಕೊಳ್ಳುವುದಕ್ಕೆ ಪ್ರಕೃತಿಯೇ ಕಾರಣವೆಂದು ಪಂಡಿತರು ಹೇಳುತ್ತಾರೆ. ವಾಸ್ತವದಲ್ಲಿ ಪ್ರಕೃತಿಗೆ ಅತೀತನಾಗಿದ್ದರೂ ಪ್ರಕೃತಿಸ್ಥನಾದ ಆ ಪುರುಷನನ್ನೇ ಸುಖ-ದುಃಖಗಳನ್ನೂ ಭೋಗಿಸಲು ಕಾರಣನೆಂದು ತಿಳಿಯುತ್ತಾರೆ. ॥ 8 ॥
(ಶ್ಲೋಕ - 9)
ಮೂಲಮ್ (ವಾಚನಮ್)
ದೇವಹೂತಿರುವಾಚ
ಮೂಲಮ್
ಪ್ರಕೃತೇಃ ಪುರುಷಸ್ಯಾಪಿ ಲಕ್ಷಣಂ ಪುರುಷೋತ್ತಮ ।
ಬ್ರೂಹಿ ಕಾರಣಯೋರಸ್ಯ ಸದಸಚ್ಚ ಯದಾತ್ಮಕಮ್ ॥
ಅನುವಾದ
ದೇವಹೂತಿಯು ಕೇಳಿದಳು ಪುರುಷೋತ್ತಮನೇ ! ಈ ವಿಶ್ವದ ಸ್ಥೂಲ-ಸೂಕ್ಷ್ಮಕಾರ್ಯಗಳೆಲ್ಲವೂ ಯಾರ ಸ್ವರೂಪವಾಗಿ ದೆಯೋ ಹಾಗೂ ಯಾರು ಇದರ ಕಾರಣನಾಗಿದ್ದಾನೋ, ಆ ಪ್ರಕೃತಿ-ಪುರುಷರ ಲಕ್ಷಣವನ್ನೂ ಕೂಡ ನೀನು ನನಗೆ ತಿಳಿಸು ವವನಾಗು.॥9॥
(ಶ್ಲೋಕ - 10)
ಮೂಲಮ್ (ವಾಚನಮ್)
ಶ್ರೀಭಗವಾನುವಾಚ
ಮೂಲಮ್
ಯತ್ತತಿಗುಣಮವ್ಯಕ್ತಂ ನಿತ್ಯಂ ಸದಸದಾತ್ಮಕಮ್ ।
ಪ್ರಧಾನಂ ಪ್ರಕೃತಿಂ ಪ್ರಾಹುರವಿಶೇಷಂ ವಿಶೇಷವತ್ ॥
ಅನುವಾದ
ಶ್ರೀಭಗವಂತನು ಹೇಳಿದನು ತಾಯೇ ! ಯಾವುದು ತ್ರಿಗುಣಾತ್ಮಕವೂ, ಅವ್ಯಕ್ತವೂ, ನಿತ್ಯವೂ ಆಗಿ ಕಾರ್ಯಕಾರಣರೂಪ ವಾಗಿದೆಯೋ ಹಾಗೂ ಸ್ವತಃ ನಿರ್ವಿಶೇಷವಾಗಿದ್ದರೂ ಸಮಸ್ತ ವಿಶೇಷ ಧರ್ಮಗಳಿಗೆ ಆಶ್ರಯವಾಗಿದೆಯೋ ಆ ಪ್ರಧಾನವೆಂಬ ತತ್ತ್ವವನ್ನೇ ಪ್ರಕೃತಿ ಎನ್ನುತ್ತಾರೆ.॥10॥
(ಶ್ಲೋಕ - 11)
ಮೂಲಮ್
ಪಂಚಭಿಃ ಪಂಚಭಿರ್ಬ್ರಹ್ಮ ಚತುರ್ಭಿರ್ದಶಭಿಸ್ತಥಾ ।
ಏತಚ್ಚತುರ್ವಿಂಶತಿಕಂ ಗಣಂ ಪ್ರಾಧಾನಿಕಂ ವಿದುಃ ॥
ಅನುವಾದ
ಪಂಚಮಹಾಭೂತಗಳೂ, ಪಂಚತನ್ಮಾತ್ರೆಗಳೂ, ನಾಲ್ಕು ಅಂತಃಕರಣ ವಿಶೇಷಗಳೂ, ಹತ್ತು ಇಂದ್ರಿಯಗಳೂ ಹೀಗೆ ಈ ಇಪ್ಪತ್ತನಾಲ್ಕು ತತ್ತ್ವಗಳ ಸಮೂಹವನ್ನು ವಿದ್ವಾಂಸರು ಪ್ರಕೃತಿಯ ಕಾರ್ಯವೆಂದು ತಿಳಿಯುತ್ತಾರೆ.॥11॥
(ಶ್ಲೋಕ - 12)
ಮೂಲಮ್
ಮಹಾಭೂತಾನಿ ಪಂಚೈವ ಭೂರಾಪೋಗ್ನಿರ್ಮರುನ್ನಭಃ ।
ತನ್ಮಾತ್ರಾಣಿ ಚ ತಾವಂತಿ ಗಂಧಾದೀನಿ ಮತಾನಿ ಮೇ ॥
ಅನುವಾದ
ಪೃಥಿವಿ, ಜಲ, ತೇಜ, ವಾಯು, ಆಕಾಶ ಇವು ಪಂಚಮಹಾ ಭೂತಗಳು. ಗಂಧ, ರಸ, ರೂಪ, ಸ್ಪರ್ಶ, ಶಬ್ದ ಇವು ಪಂಚತನ್ಮಾತ್ರೆ ಗಳು ಎಂದು ತಿಳಿಯಲಾಗಿದೆ.॥12॥
(ಶ್ಲೋಕ - 13)
ಮೂಲಮ್
ಇಂದ್ರಿಯಾಣಿ ದಶ ಶ್ರೋತ್ರಂ ತ್ವಗ್ದೃಗ್ರಸನನಾಸಿಕಾಃ ।
ವಾಕ್ಕರೌ ಚರಣೌ ಮೇಢ್ರಂ ಪಾಯುರ್ದಶಮ ಉಚ್ಯತೇ ॥
ಅನುವಾದ
ಕಿವಿ, ಚರ್ಮ, ಕಣ್ಣು, ನಾಲಿಗೆ, ಮೂಗು, ಮಾತು, ಕೈ, ಕಾಲು, ಉಪಸ್ಥ, ಪಾಯು ಎಂಬ ಈ ಹತ್ತು ಇಂದ್ರಿಯಗಳು.॥13॥
(ಶ್ಲೋಕ - 14)
ಮೂಲಮ್
ಮನೋ ಬುದ್ಧಿರಹಂಕಾರಶ್ಚಿತ್ತಮಿತ್ಯಂತರಾತ್ಮಕಮ್ ।
ಚತುರ್ಧಾ ಲಕ್ಷ್ಯತೇ ಭೇದೋ ವೃತ್ತ್ಯಾ ಲಕ್ಷಣರೂಪಯಾ ॥
ಅನುವಾದ
ಮನ, ಬುದ್ಧಿ, ಚಿತ್ತ, ಅಹಂಕಾರ ಎಂಬ ಇವೇ ಅಂತಃಕರಣ ರೂಪಗಳು. ಇವುಗಳಿಗೆ ಕ್ರಮವಾಗಿ ಸಂಕಲ್ಪ, ನಿಶ್ಚಯ, ಚಿಂತೆ, ಅಭಿಮಾನ ಎಂಬ ನಾಲ್ಕು ಪ್ರವೃತ್ತಿಗಳು.॥14॥
(ಶ್ಲೋಕ - 15)
ಮೂಲಮ್
ಏತಾವಾನೇವ ಸಂಖ್ಯಾತೋ ಬ್ರಹ್ಮಣಃ ಸಗುಣಸ್ಯ ಹ ।
ಸನ್ನಿವೇಶೋ ಮಯಾ ಪ್ರೋಕ್ತೋ ಯಃ ಕಾಲಃ ಪಂಚವಿಂಶಕಃ ॥
ಅನುವಾದ
ತತ್ತ್ವಜ್ಞಾನಿಗಳು ಹೀಗೆ ಸಗುಣಬ್ರಹ್ಮನ ಸನ್ನಿವೇಶಸ್ಥಾನಗಳ ನ್ನಾಗಿ ಇಪ್ಪತ್ತನಾಲ್ಕು ತತ್ತ್ವಗಳ ಸಂಖ್ಯೆಯನ್ನು ತಿಳಿಸಿರುವರು. ಇವು ಗಳಲ್ಲದೆ ಕಾಲ ಎಂಬುದು ಇಪ್ಪತ್ತೈದನೆಯ ತತ್ತ್ವವಾಗಿದೆ.॥15॥
(ಶ್ಲೋಕ - 16)
ಮೂಲಮ್
ಪ್ರಭಾವಂ ಪೌರುಷಂ ಪ್ರಾಹುಃ ಕಾಲಮೇಕೇ ಯತೋ ಭಯಮ್ ।
ಅಹಂಕಾರವಿಮೂಢಸ್ಯ ಕರ್ತುಃ ಪ್ರಕೃತಿಮೀಯುಷಃ ॥
ಅನುವಾದ
ಕೆಲವು ಜ್ಞಾನಿಗಳು ಕಾಲವನ್ನು ಪುರುಷನಿಂದ ಬೇರೆಯಾದ ತತ್ತ್ವ ವೆಂದು ತಿಳಿಯದೆ, ಪುರುಷನ ಪ್ರಭಾವ ಅಂದರೆ ಈಶ್ವರನ ಸಂಹಾರಕಾರಕ ಶಕ್ತಿಯನ್ನಾಗಿ ತಿಳಿಸುತ್ತಾರೆ. ಅದರಿಂದ ಮಾಯೆಯ ಕಾರ್ಯವಾದ ದೇಹಾದಿಗಳನ್ನು ಆತ್ಮವೆಂದು ಅಭಿಮಾನಪಟ್ಟು, ಅಹಂಕಾರದಿಂದ ಮೋಹಿತನಾಗಿ ತನ್ನನ್ನು ಕರ್ತಾ ಎಂದು ತಿಳಿಯುವ ಜೀವನಿಗೆ ನಿರಂತರವಾದ ಭಯವು ಇದ್ದೇ ಇರುತ್ತದೆ.॥16॥
(ಶ್ಲೋಕ - 17)
ಮೂಲಮ್
ಪ್ರಕೃತೇರ್ಗುಣಸಾಮ್ಯಸ್ಯ ನಿರ್ವಿಶೇಷಸ್ಯ ಮಾನವಿ ।
ಚೇಷ್ಟಾ ಯತಃ ಸ ಭಗವಾನ್ಕಾಲ ಇತ್ಯುಪಲಕ್ಷಿತಃ ॥
ಅನುವಾದ
ಅಮ್ಮಾ! ಮನುಪುತ್ರಿಯೇ! ಯಾರ ಪ್ರೇರಣೆಯಿಂದ ಗುಣಗಳ ಸಾಮ್ಯಾವಸ್ಥೆಯ ರೂಪದಲ್ಲಿರುವ ನಿರ್ವಿಶೇಷವಾದ ಪ್ರಕೃತಿಯಲ್ಲಿ ಗತಿಯು ಉಂಟಾಗುತ್ತದೋ, ಆ ಪುರುಷರೂಪಿ ಯಾದ ಭಗವಂತನೇ ವಾಸ್ತವವಾಗಿ ‘ಕಾಲ’ನೆಂದು ಕರೆಯಲ್ಪಡುತ್ತಾನೆ. ॥ 17॥
(ಶ್ಲೋಕ - 18)
ಮೂಲಮ್
ಅಂತಃ ಪುರುಷರೂಪೇಣ ಕಾಲರೂಪೇಣ ಯೋ ಬಹಿಃ ।
ಸಮನ್ವೇತ್ಯೇಷ ಸತ್ತ್ವಾನಾಂ ಭಗವಾನಾತ್ಮಮಾಯಯಾ ॥
ಅನುವಾದ
ಹೀಗೆ ತನ್ನ ಮಾಯೆಯ ಮೂಲಕ ಎಲ್ಲ ಪ್ರಾಣಿಗಳೊಳಗೆ ಜೀವರೂಪದಿಂದಲೂ ಹೊರಗೆ ಕಾಲರೂಪದಿಂದಲೂ ವ್ಯಾಪ್ತನಾಗಿರುವ ಭಗವಂತನೇ ಇಪ್ಪತ್ತೈದನೆಯ ತತ್ತ್ವವು.॥18॥
(ಶ್ಲೋಕ - 19)
ಮೂಲಮ್
ದೈವಾತ್ಕ್ಷುಭಿತಧರ್ಮಿಣ್ಯಾಂ ಸ್ವಸ್ಯಾಂ ಯೋನೌ ಪರಃ ಪುಮಾನ್ ।
ಆಧತ್ತ ವೀರ್ಯಂ ಸಾಸೂತ ಮಹತ್ತತ್ತ್ವಂ ಹಿರಣ್ಮಯಮ್ ॥
ಅನುವಾದ
ಪರಮಪುರುಷ ಪರಮಾತ್ಮನು ಜೀವರ ಅದೃಷ್ಟವಶದಿಂದ ಕ್ಷೋಭೆಗೊಂಡ ಸರ್ವಜೀವಿಗಳ ಉತ್ಪತ್ತಿಸ್ಥಾನರೂಪವಾದ ತನ್ನ ಮಾಯೆಯಲ್ಲಿ ಚಿಚ್ಛಕ್ತಿರೂಪವಾದ ವೀರ್ಯವನ್ನು ಸ್ಥಾಪಿಸಿದಾಗ ಅದರಿಂದ ತೇಜೋಮಯ ಮಹತ್ತತ್ತ್ವವು ಉತ್ಪನ್ನವಾಯಿತು.॥19॥
(ಶ್ಲೋಕ - 20)
ಮೂಲಮ್
ವಿಶ್ವಮಾತ್ಮಗತಂ ವ್ಯಂಜನ್ಕೂಟಸ್ಥೋ ಜಗದಂಕುರಃ ।
ಸ್ವತೇಜಸಾಪಿಬತ್ತೀವ್ರಮಾತ್ಮಪ್ರಸ್ವಾಪನಂ ತಮಃ ॥
ಅನುವಾದ
ಲಯ-ವಿಕ್ಷೇಪಾದಿ ರಹಿತ ಹಾಗೂ ಜಗತ್ತಿಗೆ ಅಂಕುರ ದಂತಿರುವ ಈ ಮಹತ್ತತ್ತ್ವವು ತನ್ನಲ್ಲಿದ್ದ ವಿಶ್ವವನ್ನು ಪ್ರಕಟಪಡಿಸಲು ತನ್ನ ಸ್ವರೂಪವನ್ನು ಮುಚ್ಚಿಕೊಂಡಿದ್ದ ಪ್ರಳಯಕಾಲದ ಕಗ್ಗತ್ತಲೆಯನ್ನು ತನ್ನದೇ ತೇಜದಿಂದ ಕುಡಿದುಬಿಟ್ಟಿತು.॥20॥
(ಶ್ಲೋಕ - 21)
ಮೂಲಮ್
ಯತ್ತತ್ಸತ್ವ್ವಗುಣಂ ಸ್ವಚ್ಛಂ ಶಾಂತಂ ಭಗವತಃ ಪದಮ್ ।
ಯದಾಹುರ್ವಾಸುದೇವಾಖ್ಯಂ ಚಿತ್ತಂ ತನ್ಮಹದಾತ್ಮಕಮ್ ॥
ಅನುವಾದ
ಸತ್ತ್ವಗುಣಮಯವಾಗಿ, ಸ್ವಚ್ಛವಾಗಿ, ಶಾಂತವಾಗಿ, ಭಗವಂತನ ಉಪಲಬ್ಧಿಸ್ಥಾನವಾದ ಚಿತ್ತವೇ ಮಹತ್ತತ್ತ್ವವಾಗಿದೆ. ಅದನ್ನೇ ‘ವಾಸುದೇವ’* ಎಂದೂ ಹೇಳುತ್ತಾರೆ.॥21॥
ಟಿಪ್ಪನೀ
- ಅಧ್ಯಾತ್ಮದಲ್ಲಿ ಯಾವುದನ್ನು ಚಿತ್ತವೆಂದು ಕರೆಯುವರೋ, ಅದನ್ನೇ ಅಧಿಭೂತದಲ್ಲಿ ಮಹತ್ತತ್ತ್ವ ಎಂದು ಹೇಳಲಾಗುತ್ತದೆ. ಚಿತ್ತದಲ್ಲಿ ಅಧಿಷ್ಠಾತೃನಾಗಿರುವವನು. ‘ಕ್ಷೇತ್ರಜ್ಞನು’ ಮತ್ತು ಉಪಾಸ್ಯದೇವನು ‘ವಾಸುದೇವ’ನಾಗಿದ್ದಾನೆ. ಹೀಗೆಯೇ ಅಹಂಕಾರದಲ್ಲಿ ಅಧಿಷ್ಠಾತೃನಾಗಿರುವವನು ರುದ್ರನು ಮತ್ತು ಉಪಾಸ್ಯ ದೇವನು ಸಂಕರ್ಷಣನಾಗಿದ್ದಾನೆ. ಬುದ್ಧಿಯಲ್ಲಿ ಅಧಿಷ್ಠಾತೃನಾಗಿರುವನು ಬ್ರಹ್ಮನು ಮತ್ತು ಉಪಾಸ್ಯದೇವನು ಪ್ರದ್ಯುಮ್ನನು. ಮನಸ್ಸಿನಲ್ಲಿ ಅಧಿಷ್ಠಾತೃನಾದವನು ಚಂದ್ರನು ಮತ್ತು ಉಪಾಸ್ಯದೇವನು ‘ಅನಿರುದ್ಧ’ನಾಗಿದ್ದಾನೆ.
(ಶ್ಲೋಕ - 22)
ಮೂಲಮ್
ಸ್ವಚ್ಛತ್ವಮವಿಕಾರಿತ್ವಂ ಶಾಂತತ್ವಮಿತಿ ಚೇತಸಃ ।
ವೃತ್ತಿಭಿರ್ಲಕ್ಷಣಂ ಪ್ರೋಕ್ತಂ ಯಥಾಪಾಂ ಪ್ರಕೃತಿಃ ಪರಾ ॥
ಅನುವಾದ
ಪೃಥಿ ವಿಯೇ ಮುಂತಾದ ಪದಾರ್ಥಗಳೊಡನೆ ಸಂಸರ್ಗಹೊಂದುವ ಮೊದಲು ನೀರು ನೊರೆ-ಗುಳ್ಳೆಗಳೇ ಇಲ್ಲದೆ ಸಹಜಸ್ಥಿತಿಯಲ್ಲಿರು ವಾಗ ಅತ್ಯಂತ ಸ್ವಚ್ಛವೂ, ವಿಕಾರಶೂನ್ಯವೂ, ಶಾಂತವೂ ಆಗಿರು ತ್ತದೆ. ಹಾಗೆಯೇ ತನ್ನ ಸ್ವಾಭಾವಿಕ ಅವಸ್ಥೆಯ ದೃಷ್ಟಿಯಿಂದ ಸ್ವಚ್ಛತ್ವ, ಅವಿಕಾರಿತ್ವ ಮತ್ತು ಶಾಂತತ್ವಗಳೇ ವೃತ್ತಿಗಳೊಡನೆ ಚಿತ್ತದ ಲಕ್ಷಣವೆಂದು ಹೇಳಲಾಗಿದೆ.॥22॥
(ಶ್ಲೋಕ - 23)
ಮೂಲಮ್
ಮಹತ್ತತ್ತ್ವಾದ್ವಿಕುರ್ವಾಣಾದ್ಭಗವದ್ವೀರ್ಯಸಂಭವಾತ್ ।
ಕ್ರಿಯಾಶಕ್ತಿರಹಂಕಾರಸಿವಿಧಃ ಸಮಪದ್ಯತ ॥
(ಶ್ಲೋಕ - 24)
ಮೂಲಮ್
ವೈಕಾರಿಕಸ್ತೈಜಸಶ್ಚ ತಾಮಸಶ್ಚ ಯತೋ ಭವಃ ।
ಮನಸಶ್ಚೇಂದ್ರಿಯಾಣಾಂ ಚ ಭೂತಾನಾಂ ಮಹತಾಮಪಿ ॥
ಅನುವಾದ
ಅನಂತರ ಭಗವಂತನ ವೀರ್ಯರೂಪವಾದ ಚಿತ್-ಶಕ್ತಿಯಿಂದ ಉತ್ಪನ್ನವಾದ ಮಹತ್ತತ್ತ್ವ ದಲ್ಲಿ ವಿಕಾರ ಉಂಟಾದಾಗ, ಅದರಿಂದ ಕ್ರಿಯಾಶಕ್ತಿಪ್ರಧಾನವಾದ ಅಹಂಕಾರವು ಉತ್ಪನ್ನವಾಯಿತು. ಅದು ವೈಕಾರಿಕ, ತೈಜಸ ಮತ್ತು ತಾಮಸ ಎಂಬ ಮೂರು ಪ್ರಕಾರದಿಂದ ಕೂಡಿದೆ. ಅದರಿಂದಲೇ ಕ್ರಮವಾಗಿ ಮನಸ್ಸು, ಇಂದ್ರಿಯಗಳು ಮತ್ತು ಪಂಚಭೂತಗಳ ಉತ್ಪತ್ತಿಯಾಯಿತು.॥23-24॥
(ಶ್ಲೋಕ - 25)
ಮೂಲಮ್
ಸಹಸ್ರಶಿರಸಂ ಸಾಕ್ಷಾದ್ಯಮನಂತಂ ಪ್ರಚಕ್ಷತೇ ।
ಸಂಕರ್ಷಣಾಖ್ಯಂ ಪುರುಷಂ ಭೂತೇಂದ್ರಿಯಮನೋಮಯಮ್ ॥
ಅನುವಾದ
ಈ ಭೂತ, ಇಂದ್ರಿಯ ಮತ್ತು ಮನೋರೂಪವಾದ ಅಹಂಕಾರವನ್ನೇ ಪಂಡಿತರು ಸಾಕ್ಷಾತ್ ‘ಸಂಕರ್ಷಣ’ ಹೆಸರಿನ ಸಾವಿರತಲೆಯುಳ್ಳ ‘ಅನಂತ-ನಾಗರಾಜ’ ಎಂದು ಕರೆಯುತ್ತಾರೆ.॥25॥
(ಶ್ಲೋಕ - 26)
ಮೂಲಮ್
ಕರ್ತೃತ್ವಂ ಕರಣತ್ವಂ ಚ ಕಾರ್ಯತ್ವಂ ಚೇತಿ ಲಕ್ಷಣಮ್ ।
ಶಾಂತ ಘೋರವಿಮೂಢತ್ವಮಿತಿ ವಾ ಸ್ಯಾದಹಂಕೃತೇಃ ॥
ಅನುವಾದ
ಈ ಅಹಂಕಾರದ ಲಕ್ಷಣವು ದೇವತಾರೂಪದಿಂದ ಕರ್ತೃತ್ವ, ಇಂದ್ರಿಯರೂಪದಿಂದ ಕರಣತ್ವ, ಪಂಚಭೂತರೂಪದಿಂದ ಕಾರ್ಯತ್ವವಾಗಿದೆ ಹಾಗೂ ಸತ್ತ್ವಾದಿ ಗುಣಗಳ ಸಂಬಂಧದಿಂದ ಶಾಂತತ್ವ, ಘೋರತ್ವ, ಮತ್ತು ಮೂಢತ್ವವೂ ಇದರ ಲಕ್ಷಣವಾಗಿದೆ.॥26॥
(ಶ್ಲೋಕ - 27)
ಮೂಲಮ್
ವೈಕಾರಿಕಾದ್ವಿಕುರ್ವಾಣಾನ್ಮನಸ್ತತ್ತ್ವಮಜಾಯತ ।
ಯತ್ಸಂಕಲ್ಪವಿಕಲ್ಪಾಭ್ಯಾಂ ವರ್ತತೇ ಕಾಮಸಂಭವಃ ॥
ಅನುವಾದ
ಮೇಲೆ ಹೇಳಿದ ಮೂರು ಬಗೆಯ ಅಹಂಕಾರದಲ್ಲಿನ ವೈಕಾರಿಕ ಅಹಂಕಾರವು ವಿಕೃತವಾದಾಗ ಅದ ರಿಂದ ಮನಸ್ಸುಂಟಾಯಿತು. ಅದರ ಸಂಕಲ್ಪ-ವಿಕಲ್ಪಗಳಿಂದ ಕಾಮನೆಗಳ ಉತ್ಪತ್ತಿಯಾಗುತ್ತದೆ.॥27॥
(ಶ್ಲೋಕ - 28)
ಮೂಲಮ್
ಯದ್ವಿದುರ್ಹ್ಯನಿರುದ್ಧಾಖ್ಯಂ ಹೃಷೀಕಾಣಾಮಧೀಶ್ವರಮ್ ।
ಶಾರದೇಂದೀವರಶ್ಯಾಮಂ ಸಂರಾಧ್ಯಂ ಯೋಗಿಭಿಃ ಶನೈಃ ॥
ಅನುವಾದ
ಈ ಮನಸ್ತತ್ತ್ವವೇ ಇಂದ್ರಿಯಗಳಿಗೆ ಅಧಿಷ್ಠಾತೃವಾದ ‘ಅನಿರುದ್ಧ’ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ ಯೋಗಿಗಳು ಶರತ್ಕಾಲದ ನೀಲಕಮಲದಂತೆ ಶ್ಯಾಮಲ ವರ್ಣವುಳ್ಳ ಈ ಅನಿರುದ್ಧನನ್ನು ಮೆಲ್ಲ-ಮೆಲ್ಲನೆ ಮನಸ್ಸನ್ನು ಸ್ವಾಧೀನಪಡಿಸಿಕೊಂಡು ಆರಾಧಿಸುತ್ತಾರೆ.॥28॥
(ಶ್ಲೋಕ - 29)
ಮೂಲಮ್
ತೈಜಸಾತ್ತು ವಿಕುರ್ವಾಣಾದ್ಬುದ್ಧಿ ತತ್ತ್ವಮಭೂತ್ಸತಿ ।
ದ್ರವ್ಯಸ್ಫುರಣವಿಜ್ಞಾನಮಿಂದ್ರಿಯಾಣಾಮನುಗ್ರಹಃ ॥
ಅನುವಾದ
ಎಲೈ ಸಾಧ್ವಿಯೇ ! ಮತ್ತೆ ತೈಜಸ ಅಹಂಕಾರವು ವಿಕಾರಗೊಳ್ಳಲು ಅದ ರಿಂದ ಬುದ್ಧಿತತ್ತ್ವವು ಉಂಟಾಯಿತು. ವಸ್ತುವಿನ ಸ್ಫೂರ್ತಿರೂಪ ವಾದ ವಿಜ್ಞಾನ ಮತ್ತು ಇಂದ್ರಿಯಗಳ ವ್ಯಾಪಾರದಲ್ಲಿ ಸಹಾಯಕ ವಾಗುವಿಕೆ ಪದಾರ್ಥಗಳ ವಿಶೇಷಜ್ಞಾನ ಪಡೆಯುವಿಕೆ ಇವು ಬುದ್ಧಿಯ ಕಾರ್ಯವಾಗಿವೆ.॥29॥
(ಶ್ಲೋಕ - 30)
ಮೂಲಮ್
ಸಂಶಯೋಥ ವಿಪರ್ಯಾಸೋ ನಿಶ್ಚಯಃ ಸ್ಮೃತಿರೇವ ಚ ।
ಸ್ವಾಪ ಇತ್ಯುಚ್ಯತೇ ಬುದ್ಧೇರ್ಲಕ್ಷಣಂ ವೃತ್ತಿತಃ ಪೃಥಕ್ ॥
ಅನುವಾದ
ವೃತ್ತಿಗಳ ಭೇದದಿಂದ ಸಂಶಯ, ವಿಪರ್ಯಯ (ವಿಪರೀತ ಜ್ಞಾನ), ನಿಶ್ಚಯ, ಸ್ಮೃತಿ ಮತ್ತು ನಿದ್ದೆ ಇವುಗಳೂ ಬುದ್ಧಿಯ ಲಕ್ಷಣಗಳಾಗಿವೆ. ಈ ಬುದ್ಧಿ ತತ್ತ್ವವೇ ‘ಪ್ರದ್ಯುಮ್ನ’ನೆನಿಸುತ್ತದೆ.॥30॥
(ಶ್ಲೋಕ - 31)
ಮೂಲಮ್
ತೈಜಸಾನೀಂದ್ರಿಯಾಣ್ಯೇವ ಕ್ರಿಯಾಜ್ಞಾನವಿಭಾಗಶಃ ।
ಪ್ರಾಣಸ್ಯ ಹಿ ಕ್ರಿಯಾ ಶಕ್ತಿರ್ಬುದ್ಧೇರ್ವಿಜ್ಞಾನಶಕ್ತಿತಾ ॥
ಅನುವಾದ
ಇಂದ್ರಿಯಗಳೂ ಕೂಡ ತೈಜಸ ಅಹಂಕಾರದ್ದೇ ಕಾರ್ಯವಾಗಿದೆ. ಕರ್ಮ ಮತ್ತು ಜ್ಞಾನ ಇವುಗಳ ವಿಭಾಗದಿಂದ ಅವುಗಳಲ್ಲಿ ಜ್ಞಾನೇಂದ್ರಿಯ ಮತ್ತು ಕರ್ಮೇಂದ್ರಿಯಗಳೆಂಬ ಎರಡು ಭೇದಗಳಿವೆ. ಇವುಗಳಲ್ಲಿ ಕರ್ಮ ಪ್ರಾಣದ ಶಕ್ತಿ ಮತ್ತು ಜ್ಞಾನ ಬುದ್ಧಿಯ ಶಕ್ತಿಯಾಗಿದೆ.॥31॥
(ಶ್ಲೋಕ - 32)
ಮೂಲಮ್
ತಾಮಸಾಚ್ಚ ವಿಕುರ್ವಾಣಾದ್ಭಗವದ್ವೀರ್ಯಚೋದಿತಾತ್ ।
ಶಬ್ದ ಮಾತ್ರಮಭೂತ್ತಸ್ಮಾನ್ನಭಃ ಶ್ರೋತ್ರಂ ತು ಶಬ್ದಗಮ್ ॥
ಅನುವಾದ
ಭಗವಂತನ ಚೈತನ್ಯಶಕ್ತಿಯ ಪ್ರೇರಣೆಯಿಂದ ತಾಮಸ ಅಹಂ ಕಾರವು ವಿಕೃತವಾದಾಗ ಅದರಿಂದ ಶಬ್ದ ತನ್ಮಾತ್ರೆಯು ಉದ್ಭವಿಸಿತು. ಶಬ್ದ ತನ್ಮಾತ್ರೆಯಿಂದ ಆಕಾಶ ಹಾಗೂ ಶಬ್ದಜ್ಞಾನವನ್ನುಂಟು ಮಾಡುವ ಶ್ರೋತ್ರೇಂದ್ರಿಯವು ಉತ್ಪನ್ನವಾಯಿತು.॥32॥
(ಶ್ಲೋಕ - 33)
ಮೂಲಮ್
ಅರ್ಥಾಶ್ರಯತ್ವಂ ಶಬ್ದಸ್ಯ ದ್ರಷ್ಟುರ್ಲಿಂಗತ್ವಮೇವ ಚ ।
ತನ್ಮಾತ್ರತ್ವಂ ಚ ನಭಸೋ ಲಕ್ಷಣಂ ಕವಯೋ ವಿದುಃ ॥
ಅನುವಾದ
ಅರ್ಥವನ್ನು ಪ್ರಕಾಶ ಪಡಿಸುವುದು, ಪರೋಕ್ಷದಲ್ಲಿ ಮಾತನಾಡುವವನ ಜ್ಞಾನವನ್ನು ಉಂಟುಮಾಡುವುದು, ಆಕಾಶದಂತೆ ಸೂಕ್ಷ್ಮರೂಪವಾಗುವಿಕೆ, ಇವೇ ಶಬ್ದದ ಲಕ್ಷಣವೆಂಬುದು ವಿದ್ವಾಂಸರ ಮತವಾಗಿದೆ.॥33॥
(ಶ್ಲೋಕ - 34)
ಮೂಲಮ್
ಭೂತಾನಾಂ ಛಿದ್ರದಾತೃತ್ವಂ ಬಹಿರಂತರಮೇವ ಚ ।
ಪ್ರಾಣೇಂದ್ರಿಯಾತ್ಮಧಿಷ್ಣ್ಯತ್ವಂ ನಭಸೋ ವೃತ್ತಿಲಕ್ಷಣಮ್ ॥
ಅನುವಾದ
ಭೂತಗಳಿಗೆ ಅವಕಾಶ ಕೂಡುವಿಕೆ, ಎಲ್ಲರ ಒಳ-ಹೊರಗೆ ಇರುವುದು ಮತ್ತು ಪ್ರಾಣ, ಇಂದ್ರಿಯ, ಮನಸ್ಸುಗಳಿಗೆ ಆಶ್ರಯವಾಗಿರುವಿಕೆ, ಇವಿಷ್ಟೂ ಆಕಾಶದ ವೃತ್ತಿ (ಕಾರ್ಯ) ರೂಪವಾದ ಲಕ್ಷಣವಾಗಿದೆ.॥34॥
(ಶ್ಲೋಕ - 35)
ಮೂಲಮ್
ನಭಸಃ ಶಬ್ದತನ್ಮಾತ್ರಾತ್ ಕಾಲಗತ್ಯಾ ವಿಕುರ್ವತಃ ।
ಸ್ಪರ್ಶೋಭವತ್ತತೋ ವಾಯುಸ್ತ್ವಕ್ ಸ್ಪರ್ಶಸ್ಯ ಚ ಸಂಗ್ರಹಃ ॥
ಅನುವಾದ
ಅನಂತರ ಶಬ್ದತನ್ಮಾತ್ರೆಯ ಕಾರ್ಯವಾದ ಆಕಾಶದಲ್ಲಿ ಕಾಲಗತಿಯಿಂದ ವಿಕಾರವುಂಟಾದಾಗ ಸ್ಪರ್ಶತನ್ಮಾತ್ರೆಯು ಉಂಟಾಯಿತು ಮತ್ತು ಅದರಿಂದ ವಾಯು ಹಾಗೂ ಸ್ಪರ್ಶಗ್ರಹಣವನ್ನು ಮಾಡಿಸುವ ತ್ವಗಿಂದ್ರಿಯ (ತ್ವಚಾ)ವು ಉತ್ಪನ್ನವಾಯಿತು.॥35॥
(ಶ್ಲೋಕ - 36)
ಮೂಲಮ್
ಮೃದುತ್ವಂ ಕಠಿನತ್ವಂ ಚ ಶೈತ್ಯಮುಷ್ಣತ್ವಮೇವ ಚ ।
ಏತತ್ಸ್ಪರ್ಶಸ್ಯ ಸ್ಪರ್ಶತ್ವಂ ತನ್ಮಾತ್ರತ್ವಂ ನಭಸ್ವತಃ ॥
ಅನುವಾದ
ಕೋಮಲತೆ, ಕಠೋರತೆ, ಶೀತಲತೆ, ಉಷ್ಣತೆ ಮತ್ತು ವಾಯುವಿನಂತೆ ಸೂಕ್ಷ್ಮರೂಪ ವಾಗುವುದು ಇವು ಸ್ಪರ್ಶದ ಲಕ್ಷಣಗಳಾಗಿವೆ.॥36॥
(ಶ್ಲೋಕ - 37)
ಮೂಲಮ್
ಚಾಲನಂ ವ್ಯೆಹನಂ ಪ್ರಾಪ್ತಿರ್ನೇತೃತ್ವಂ ದ್ರವ್ಯಶಬ್ದಯೋಃ ।
ಸರ್ವೇಂದ್ರಿಯಾಣಾಮಾತ್ಮತ್ವಂ ವಾಯೋಃ ಕರ್ಮಾಭಿಲಕ್ಷಣಮ್ ॥
ಅನುವಾದ
ಮರದ ಕೊಂಬೆಯೇ ಮುಂತಾದವುಗಳನ್ನು ಅಲ್ಲಾಡಿಸುವುದು, ಹುಲ್ಲು ಇತ್ಯಾದಿಗಳನ್ನು ಒಟ್ಟುಗೂಡಿಸುವುದು, ಎಲ್ಲೆಡೆಗೂ ತಲುಪುವುದು, ಗಂಧಾದಿಗಳಿಂದ ಕೂಡಿದ ದ್ರವ್ಯವನ್ನು ಘ್ರಾಣಾದಿ ಇಂದ್ರಿಯದ ಬಳಿಗೆ ಮತ್ತು ಶಬ್ದವನ್ನು ಶ್ರೋತ್ರೇಂದ್ರಿಯದ ಬಳಿಗೆ ಒಯ್ಯುವುದು ಹಾಗೂ ಎಲ್ಲ ಇಂದ್ರಿಯಗಳಿಗೆ ಕಾರ್ಯಶಕ್ತಿಯನ್ನು ಕೊಡುವುದು ಇವು ವಾಯುವಿನ ವೃತ್ತಿಗಳ ಲಕ್ಷಣವಾಗಿವೆ.॥37॥
(ಶ್ಲೋಕ - 38)
ಮೂಲಮ್
ವಾಯೋಶ್ಚ ಸ್ಪರ್ಶತನ್ಮಾತ್ರಾದ್ರೂಪಂ ದೈವೇರಿತಾದಭೂತ್ ।
ಸಮುತ್ಥಿತಂ ತತಸ್ತೇಜಶ್ಚಕ್ಷೂ ರೂಪೋಪಲಂಭನಮ್ ॥
ಅನುವಾದ
ಇದಾದ ನಂತರ ದೈವ ಪ್ರೇರಣೆಯಿಂದ ಸ್ಪರ್ಶತನ್ಮಾತ್ರೆಯಿಂದ ಕೂಡಿದ ವಾಯುವು ವಿಕಾರಗೊಂಡಾಗ ಅದರಿಂದ ರೂಪತ ನ್ಮಾತ್ರೆಯು ಉಂಟಾಯಿತು. ಅದರಿಂದ ತೇಜಸ್ಸೂ ಮತ್ತು ರೂಪವನ್ನು ಅರಿವಿಗೆ ತರುವ ನೇತ್ರೇಂದ್ರಿಯವೂ ಆವಿರ್ಭವಿಸಿದವು.॥38॥
(ಶ್ಲೋಕ - 39)
ಮೂಲಮ್
ದ್ರವ್ಯಾಕೃತಿತ್ವಂ ಗುಣತಾ ವ್ಯಕ್ತಿಸಂಸ್ಥಾತ್ವಮೇವ ಚ ।
ತೇಜಸ್ತ್ವಂ ತೇಜಸಃ ಸಾಧ್ವಿ ರೂಪಮಾತ್ರಸ್ಯ ವೃತ್ತಯಃ ॥
ಅನುವಾದ
ಎಲೈ ಸಾಧ್ವಿಯೇ ! ವಸ್ತುವಿನ ಆಕಾರದ ಅರಿವನ್ನುಂಟು ಮಾಡುವುದು, ಗೌಣವಾಗುವುದು ಅಂದರೆ ದ್ರವ್ಯದ ಅಂಗರೂಪವಾಗಿ ಭಾಸವಾಗುವುದು, ದ್ರವ್ಯಕ್ಕೆ ಇರುವ ಆಕಾರ-ಪ್ರಕಾರ, ಪರಿಮಾಣ ಮುಂತಾದವುಗಳನ್ನು ಅದೇ ರೂಪದಲ್ಲಿ ಉಪಲಕ್ಷಿತ ವಾಗುವುದು ಹಾಗೂ ತೇಜಸ್ಸಿಗೆ ಸ್ವರೂಪಭೂತವಾಗುವುದು ಇವೆಲ್ಲವೂ ರೂಪತನ್ಮಾತ್ರೆಯ ವೃತ್ತಿಗಳಾಗಿವೆ.॥39॥
(ಶ್ಲೋಕ - 40)
ಮೂಲಮ್
ದ್ಯೋತನಂ ಪಚನಂ ಪಾನಮದನಂ ಹಿಮಮರ್ದನಮ್ ।
ತೇಜಸೋ ವೃತ್ತಯಸ್ತ್ವೇತಾಃ ಶೋಷಣಂ ಕ್ಷುತ್ತೃಡೇವ ಚ ॥ 40 ॥
ಅನುವಾದ
ಹೊಳೆಯುವುದು, ಬೇಯಿಸುವುದು, ಚಳಿಯನ್ನು ಹೋಗಲಾಡಿಸುವುದು, ಒಣಗಿಸುವುದು, ಹಸಿವು-ಬಾಯಾರಿಕೆಗಳನ್ನು ಉಂಟುಮಾಡು ವುದು ಮತ್ತು ಅವುಗಳನ್ನು ಕಳೆದುಕೊಳ್ಳಲು ಆಹಾರ-ಪಾನೀಯಗಳನ್ನು ಸೇವಿಸುವಂತೆ ಮಾಡುವುದು ಇವು ತೇಜಸ್ಸಿನ ವೃತ್ತಿಗಳು.॥40॥
(ಶ್ಲೋಕ - 41)
ಮೂಲಮ್
ರೂಪಮಾತ್ರಾದ್ವಿಕುರ್ವಾಣಾತ್ತೇಜಸೋ ದೈವಚೋದಿತಾತ್ ।
ರಸಮಾತ್ರಮಭೂತ್ತಸ್ಮಾದಂಭೋ ಜಿಹ್ವಾ ರಸಗ್ರಹಃ ॥
ಅನುವಾದ
ಮತ್ತೆ ದೈವದ ಪ್ರೇರಣೆಯಿಂದ ರೂಪತನ್ಮಾತ್ರಮಯವಾದ ತೇಜಸ್ಸು ವಿಕಾರಗೊಳ್ಳಲು, ಅದರಿಂದ ರಸತನ್ಮಾತ್ರೆಯು ಉಂಟಾ ಯಿತು ಮತ್ತು ಅದರಿಂದ ಜಲ ಹಾಗೂ ರಸವನ್ನು ಗ್ರಹಣ ಮಾಡಿ ಸುವ ರಸನೇಂದ್ರಿಯ (ಜಿಹ್ವೆ)ವು ಉತ್ಪನ್ನವಾಯಿತು.॥41॥
(ಶ್ಲೋಕ - 42)
ಮೂಲಮ್
ಕಷಾಯೋ ಮಧುರಸ್ತಿಕ್ತಃ ಕಟ್ವಮ್ಲ ಇತಿ ನೈಕಧಾ ।
ಭೌತಿಕಾನಾಂ ವಿಕಾರೇಣ ರಸ ಏಕೋ ವಿಭಿದ್ಯತೇ ॥
ಅನುವಾದ
ರಸವು ತನ್ನ ಶುದ್ಧಸ್ವರೂಪದಲ್ಲಿ ಒಂದೇ ಆಗಿದ್ದರೂ ಬೇರೆ ಭೌತಿಕ ಪದಾರ್ಥಗಳ ಸಂಯೋಗದಿಂದ ಅದು ಒಗರು, ಸಿಹಿ, ಕಾರ, ಕಹಿ, ಹುಳಿ, ಉಪ್ಪು ಮುಂತಾಗಿ ನಾನಾಪ್ರಕಾರವಾಗುವುದು.॥42॥
(ಶ್ಲೋಕ - 43)
ಮೂಲಮ್
ಕ್ಲೇದನಂ ಪಿಂಡನಂ ತೃಪ್ತಿಃ ಪ್ರಾಣನಾಪ್ಯಾಯನೋಂದನಮ್ ।
ತಾಪಾಪನೋದೋ ಭೂಯಸ್ತ್ವಮಂಭಸೋ ವೃತ್ತಯಸ್ತ್ವಿಮಾಃ ॥
ಅನುವಾದ
ಪದಾರ್ಥಗಳನ್ನು ನೆನೆಸಿ ಒದ್ದೆ ಮಾಡುವುದು, ಮಣ್ಣು ಮುಂತಾದವುಗಳನ್ನು ಮುದ್ದೆಯನ್ನಾಗಿಸುವುದು, ತೃಪ್ತಿಯನ್ನುಂಟು ಮಾಡುವುದು, ಜೀವಂತವಾಗಿಡುವುದು, ಬಾಯಾರಿಕೆ ಹೋಗಲಾಡಿಸುವುದು, ಪದಾರ್ಥಗಳನ್ನು ಮೃದುವಾಗಿಸುವುದು, ತಾಪವನ್ನು ಶಮನಗೊಳಿಸುವುದು, ಬಾವಿಯೇ ಮುಂತಾದವುಗಳಿಂದ ತೆಗೆದರೂ ಅಲ್ಲಿ ಮತ್ತೆ-ಮತ್ತೆ ಪ್ರಕಟವಾಗುವುದು ಇವು ಜಲದ ವೃತ್ತಿಗಳಾಗಿವೆ.॥43॥
(ಶ್ಲೋಕ - 44)
ಮೂಲಮ್
ರಸಮಾತ್ರಾದ್ವಿಕುರ್ವಾಣಾದಂಭಸೋ ದೈವಚೋದಿತಾತ್ ।
ಗಂಧಮಾತ್ರಮಭೂತ್ತಸ್ಮಾತ್ಪೃಥ್ವೀ ಘ್ರಾಣಸ್ತು ಗಂಧಗಃ ॥
ಅನುವಾದ
ಇದಾದ ಬಳಿಕ ಭಗವತ್ಪ್ರೇರಣೆಯಂತೆ ರಸಸ್ವರೂಪವಾದ ಜಲವು ವಿಕಾರಗೊಳ್ಳಲು ಅದರಿಂದ ಗಂಧತನ್ಮಾತ್ರೆಯು ಉಂಟಾಯಿತು ಮತ್ತು ಅದರಿಂದ ಪೃಥ್ವಿಯೂ ಹಾಗೂ ಗಂಧವನ್ನು ಗ್ರಹಿ ಸುವ ಘ್ರಾಣೇಂದ್ರಿಯವೂ ಪ್ರಕಟಗೊಂಡಿತು. ॥44॥
(ಶ್ಲೋಕ - 45)
ಮೂಲಮ್
ಕರಂಭಪೂತಿಸೌರಭ್ಯಶಾಂತೋಗ್ರಾಮ್ಲಾದಿಭಿಃ ಪೃಥಕ್ ।
ದ್ರವ್ಯಾವಯವವೈಷಮ್ಯಾದ್ಗಂಧ ಏಕೋ ವಿಭಿದ್ಯತೇ ॥
ಅನುವಾದ
ಗಂಧವು ಒಂದೇ ಆಗಿದ್ದರೂ ಪರಸ್ಪರ ಬೆರೆತಿರುವ ದ್ರವ್ಯಭಾಗಗಳ ಹೆಚ್ಚು-ಕಡಿಮೆಯಿಂದ ಅದು ಮಿಶ್ರಿತಗಂಧ, ದುರ್ಗಂಧ, ಸುಗಂಧ, ಮೃದು, ತೀವ್ರ, ಹುಳಿ ಮುಂತಾದ ನಾನಾ ಪ್ರಕಾರಗಳಾಗುವವು.॥45॥
(ಶ್ಲೋಕ - 46)
ಮೂಲಮ್
ಭಾವನಂ ಬ್ರಹ್ಮಣಃ ಸ್ಥಾನಂ ಧಾರಣಂ ಸದ್ವಿಶೇಷಣಮ್ ।
ಸರ್ವಸತ್ತ್ವಗುಣೋದ್ಭೇದಃ ಪೃಥಿವೀವೃತ್ತಿಲಕ್ಷಣಮ್ ॥
ಅನುವಾದ
ಪ್ರತಿಮಾದಿ ರೂಪದಿಂದ ಬ್ರಹ್ಮನ ಸಾಕಾರ ಭಾವನೆಗೆ ಆಶ್ರಯವಾಗುವಿಕೆ, ಜಲವೇ ಮುಂತಾದ ಕಾರಣ ತತ್ತ್ವಗಳಿಂದ ಭಿನ್ನವಾದ ಯಾವುದೇ ಆಶ್ರಯದ ಅಪೇಕ್ಷೆ ಇಲ್ಲದೆಯೇ ಇರು ವುದು, ಜಲವೇ ಮುಂತಾದ ಬೇರೆ ಪದಾರ್ಥಗಳನ್ನು ಧರಿಸು ವುದು, ಆಕಾಶಾದಿಗಳಿಗೆ ಅವಚ್ಛೇದಕವಾಗುವುದು ಅಂದರೆ ಘಟಾಕಾಶ, ಮಠಾಕಾಶ ಮುಂತಾದ ಭೇದಗಳನ್ನು ಸಿದ್ಧಪಡಿಸು ವುದು, ಹಾಗೂ ಪರಿಣಾಮ ವಿಶೇಷದಿಂದ ಸರ್ವಪ್ರಾಣಿಗಳ ಸೀತ್ವ ಪುರುಷತ್ವ ಮುಂತಾದ ಗುಣಗಳನ್ನು ಪ್ರಕಟಪಡಿಸುವುದು ಇವು ಪೃಥಿವಿಯ ಕಾರ್ಯರೂಪೀ ಲಕ್ಷಣಗಳು.॥46॥
(ಶ್ಲೋಕ - 47)
ಮೂಲಮ್
ನಭೋಗುಣವಿಶೇಷೋರ್ಥೋ ಯಸ್ಯ ತಚ್ಛ್ರೋತ್ರಮುಚ್ಯತೇ ।
ವಾಯೋರ್ಗುಣವಿಶೇಷೋರ್ಥೋ ಯಸ್ಯ ತತ್ಸ್ಪರ್ಶನಂ ವಿದುಃ ॥
ಅನುವಾದ
ಆಕಾಶದ ವಿಶೇಷ ಗುಣವಾದ ಶಬ್ದವನ್ನು ಗ್ರಹಿಸುವುದೇ ಶ್ರೋತ್ರೇಂದ್ರಿಯವೆನಿಸುವುದು. ವಾಯುವಿನ ವಿಶೇಷಗುಣವಾದ ಸ್ಪರ್ಶವನ್ನೇ ವಿಷಯವಾಗಿರುವುದು ತ್ವಕ್ (ಚರ್ಮ) ಇಂದ್ರಿಯವು.॥47॥
(ಶ್ಲೋಕ - 48)
ಮೂಲಮ್
ತೇಜೋಗುಣವಿಶೇಷೋರ್ಥೋ ಯಸ್ಯ ತಚ್ಚಕ್ಷುರುಚ್ಯತೇ ।
ಅಂಭೋಗುಣವಿಶೇಷೋರ್ಥೋ ಯಸ್ಯ ತದ್ರಸನಂ ವಿದುಃ ।
ಭೂಮೇರ್ಗುಣವಿಶೇಷೋರ್ಥೋ ಯಸ್ಯ ಸ ಘ್ರಾಣ ಉಚ್ಯತೇ ॥
ಅನುವಾದ
ತೇಜದ ವಿಶೇಷಗುಣವಾದ ರೂಪವನ್ನೇ ವಿಷಯವಾಗಿ ರುವ ಇಂದ್ರಿಯವೇ ನೇತ್ರೇಂದ್ರಿಯ. ಜಲದ ವಿಶೇಷಗುಣವಾದ ರಸವನ್ನೇ ವಿಷಯವನ್ನಾಗಿ ಹೊಂದಿರುವ ಇಂದ್ರಿಯವು ರಸ ನೇಂದ್ರಿಯ(ನಾಲಿಗೆ)ವಾಗಿದೆ. ಪೃಥಿವಿಯ ವಿಶೇಷಗುಣವಾದ ಗಂಧವನ್ನೇ ವಿಷಯವಾಗಿರುವ ಇಂದ್ರಿಯವು ಘ್ರಾಣೇಂದ್ರಿಯ (ಮೂಗು) ಎಂದು ಹೇಳುತ್ತಾರೆ.॥48॥
(ಶ್ಲೋಕ - 49)
ಮೂಲಮ್
ಪರಸ್ಯ ದೃಶ್ಯತೇ ಧರ್ಮೋ ಹ್ಯಪರಸ್ಮಿನ್ಸಮನ್ವಯಾತ್ ।
ಅತೋ ವಿಶೇಷೋ ಭಾವಾನಾಂ ಭೂಮಾವೇವೋಪಲಕ್ಷ್ಯತೇ ॥
ಅನುವಾದ
ವಾಯುವೇ ಮುಂತಾದ ಕಾರ್ಯತತ್ತ್ವಗಳಲ್ಲಿ ಆಕಾಶಾದಿ ಕಾರಣತತ್ತ್ವಗಳು ಇರುವುದ ರಿಂದ ಅವುಗಳ ಗುಣಗಳೂ ಅನುಸರಿಸಿ ಬಂದಿರುವುದು ನೋಡಲಾಗುತ್ತದೆ. ಅದಕ್ಕಾಗಿ ಸಮಸ್ತ ಮಹಾಭೂತಗಳ ಗುಣ-ಶಬ್ದ, ಸ್ಪರ್ಶ, ರೂಪ, ರಸ, ಗಂಧ ಕೇವಲ ಪೃಥ್ವಿಯಲ್ಲೇ ದೊರೆಯುತ್ತವೆ.॥49॥
(ಶ್ಲೋಕ - 50)
ಮೂಲಮ್
ಏತಾನ್ಯಸಂಹತ್ಯ ಯದಾ ಮಹದಾದೀನಿ ಸಪ್ತ ವೈ ।
ಕಾಲಕರ್ಮಗುಣೋಪೇತೋ ಜಗದಾದಿರುಪಾವಿಶತ್ ॥
ಅನುವಾದ
ಮಹತ್ತತ್ತ್ವ, ಅಹಂಕಾರ ಮತ್ತು ಪಂಚಭೂತ ಈ ಏಳು ತತ್ತ್ವಗಳು ಪರಸ್ಪರ ಸೇರಿಕೊಳ್ಳದೆ ಬೇರೆ-ಬೇರೆಯಾಗಿದ್ದಾಗ ಜಗತ್ತಿನ ಆದಿಕಾರಣನಾದ ಶ್ರೀಮನ್ನಾರಾಯಣನು ಕಾಲ, ಅದೃಷ್ಟ ಮತ್ತು ಸತ್ತ್ವಾದಿಗುಣಗಳೊಂದಿಗೆ ಅವುಗಳಲ್ಲಿ ಪ್ರವೇಶಿಸಿದನು.॥50॥
(ಶ್ಲೋಕ - 51)
ಮೂಲಮ್
ತತಸ್ತೇನಾನುವಿದ್ಧೇಭ್ಯೋ ಯುಕ್ತೇಭ್ಯೋಂಡಮಚೇತನಮ್ ।
ಉತ್ಥಿತಂ ಪುರುಷೋ ಯಸ್ಮಾದುದತಿಷ್ಠದಸೌ ವಿರಾಟ್ ॥ 51 ॥
ಅನುವಾದ
ಅನಂತರ ಪರಮಾತ್ಮನ ಪ್ರವೇಶದಿಂದ ಕ್ಷೋಭೆಗೊಂಡು ಒಂದ ರೊಡನೊಂದು ಬೆರೆತುಕೊಂಡ ಆ ತತ್ತ್ವಗಳಿಂದ ಒಂದು ಜಡ ವಾದ ಅಂಡವು ಉತ್ಪನ್ನವಾಯಿತು. ಆ ಅಂಡದಿಂದಲೇ ಈ ವಿರಾಟ್ ಪುರುಷನು ಅಭಿವ್ಯಕ್ತಗೊಂಡನು.॥51॥
(ಶ್ಲೋಕ - 52)
ಮೂಲಮ್
ಏತದಂಡಂ ವಿಶೇಷಾಖ್ಯಂ ಕ್ರಮವೃದ್ಧೈರ್ದಶೋತ್ತರೈಃ ।
ತೋಯಾದಿಭಿಃ ಪರಿವೃತಂ ಪ್ರಧಾನೇನಾವೃತೈರ್ಬಹಿಃ ।
ಯತ್ರ ಲೋಕವಿತಾನೋಯಂ ರೂಪಂ ಭಗವತೋ ಹರೇಃ ॥
ಅನುವಾದ
ಆ ಅಂಡದ ಹೆಸರು ‘ವಿಶೇಷ’ ಎಂದಾಗಿದೆ. ಇದರೊಳಗೆ ಇದ್ದ ಶ್ರೀಹರಿಯ ಸ್ವರೂಪಭೂತ ಹದಿನಾಲ್ಕು ಭುವನಗಳ ವಿಸ್ತಾರವಿದೆ. ಇದು ನಾಲ್ಕೂ ಕಡೆಗಳಿಂದ ಕ್ರಮವಾಗಿ ಒಂದು ಮತ್ತೊಂದಕ್ಕೆ ಹತ್ತರಷ್ಟು ಇರುವ ಜಲ, ಅಗ್ನಿ, ವಾಯು, ಆಕಾಶ, ಅಹಂಕಾರ ಮತ್ತು ಮಹತ್ತತ್ತ್ವ ಎಂಬ ಆರು ಆವರಣಗಳಿಂದ ಕೂಡಿದೆ. ಇದೆಲ್ಲದರ ಹೊರಗೆ ಏಳನೆಯ ಆವರಣ ಪ್ರಕೃತಿಯದಾಗಿದೆ.॥52॥
(ಶ್ಲೋಕ - 53)
ಮೂಲಮ್
ಹಿರಣ್ಮಯಾದಂಡಕೋಶಾದುತ್ಥಾಯ ಸಲಿಲೇಶಯಾತ್ ।
ತಮಾವಿಶ್ಯ ಮಹಾದೇವೋ ಬಹುಧಾ ನಿರ್ಬಿಭೇದ ಖಮ್ ॥
ಅನುವಾದ
ಅನಂತರ ಕಾರಣಮಯವಾದ ನೀರಿನಲ್ಲಿದ್ದ ಆ ತೇಜೋಮಯ ಅಂಡದಿಂದ ಮೇಲಕ್ಕೆದ್ದು ಆ ವಿರಾಟಪುರುಷನು ಪುನಃ ಅದರಲ್ಲಿ ಪ್ರವೇಶಮಾಡಿದನು ಮತ್ತು ಅದರಲ್ಲಿ ಹಲವು ಬಗೆಯ ಛಿದ್ರಗಳನ್ನು ಮಾಡಿದನು.॥53॥
(ಶ್ಲೋಕ - 54)
ಮೂಲಮ್
ನಿರಭಿದ್ಯತಾಸ್ಯ ಪ್ರಥಮಂ ಮುಖಂ ವಾಣೀ ತತೋಭವತ್ ।
ವಾಣ್ಯಾ ವಹ್ನಿರಥೋ ನಾಸೇ ಪ್ರಾಣೋತೋ ಘ್ರಾಣ ಏತಯೋಃ ॥
ಅನುವಾದ
ಎಲ್ಲಕ್ಕಿಂತ ಮೊದಲು ಅದರಲ್ಲಿ ಬಾಯಿಯು ಪ್ರಕಟಗೊಂಡಿತು. ಅದರಲ್ಲಿ ವಾಗಿಂದ್ರಿಯವಾದ ನಾಲಿಗೆಯೂ ಮತ್ತು ಅನಂತರ ಅದರ ಅಧಿಷ್ಠಾತೃದೇವತೆಯೂ ಆದ ಅಗ್ನಿಯು ಉತ್ಪನ್ನವಾಯಿತು. ಮತ್ತೆ ಮೂಗಿನಹೊಳ್ಳೆಗಳು ಪ್ರಕಟ ಗೊಂಡವು. ಅದರಿಂದ ಪ್ರಾಣಸಹಿತ ಘ್ರಾಣೇಂದ್ರಿಯವು ಉತ್ಪತ್ತಿಯಾಯಿತು.॥54॥
(ಶ್ಲೋಕ - 55)
ಮೂಲಮ್
ಘ್ರಾಣಾದ್ವಾಯುರಭಿದ್ಯೇತಾಮಕ್ಷಿಣೀ ಚಕ್ಷುರೇತಯೋಃ ।
ತಸ್ಮಾತ್ಸೂರ್ಯೋ ವ್ಯಭಿದ್ಯೇತಾಂ ಕರ್ಣೌ ಶ್ರೋತ್ರಂ ತತೋ ದಿಶಃ ॥
ಅನುವಾದ
ಘ್ರಾಣೇಂದ್ರಿಯದ ಬಳಿಕ ಅದರ ಅಧಿಷ್ಠಾತೃ ವಾಯುವು ಉತ್ಪನ್ನವಾಯಿತು. ಆಮೇಲೆ ಕಣ್ಣಿನ ಗೋಳಗಳು ಪ್ರಕಟಗೊಂಡವು. ಅದರಿಂದ ನೇತ್ರೇಂದ್ರಿಯವು ಪ್ರಕಟವಾಗಿ, ಮತ್ತೆ ಅದರ ಅಧಿಷ್ಠಾತೃದೇವತೆಯಾದ ಸೂರ್ಯನು ಉತ್ಪನ್ನನಾದನು. ಅನಂತರ ಕಿವಿಗಳ ರಂಧ್ರಗಳು ಪ್ರಕಟಗೊಂಡವು. ಅವುಗಳಿಂದ ಅವುಗಳ ಇಂದ್ರಿಯವಾದ ಶ್ರೋತೃ ಮತ್ತು ಅದರ ಅಭಿಮಾನಿದೇವತೆಯಾದ ದಿಗ್ದೇವತೆಯೂ ಪ್ರಕಟಗೊಂಡಿತು. ॥ 55 ॥
(ಶ್ಲೋಕ - 56)
ಮೂಲಮ್
ನಿರ್ಬಿಭೇದ ವಿರಾಜಸ್ತ್ವಗ್ ರೋಮಶ್ಮಶ್ರ್ವಾದಯಸ್ತತಃ ।
ತತ ಓಷಧಯಶ್ಚಾಸನ್ ಶಿಶ್ನಂ ನಿರ್ಬಿಭಿದೇ ತತಃ ॥
ಅನುವಾದ
ಅನಂತರ ಈ ವಿರಾಟ್ಪುರುಷನ ತ್ವಚೆ ಉಂಟಾಯಿತು. ಅದರಿಂದ ಮೈಗೂದಲು, ಗಡ್ಡ-ಮೀಸೆಗಳೂ, ತಲೆಗೂದಲುಗಳು ಆವಿರ್ಭವಿಸಿದವು. ಅನಂತರ ತ್ವಚೆಯ ಅಭಿಮಾನೀ ಔಷಧಿ (ಅನ್ನ ಮುಂತಾದವು) ಗಳು ಉತ್ಪನ್ನ ವಾದವು. ಇದಾದ ಬಳಿಕ ಲಿಂಗವು ಪ್ರಕಟಗೊಂಡಿತು.॥56॥
(ಶ್ಲೋಕ - 57)
ಮೂಲಮ್
ರೇತಸ್ತಸ್ಮಾದಾಪ ಆಸನ್ನಿರಭಿದ್ಯತ ವೈ ಗುದಮ್ ।
ಗುದಾದಪಾನೋಪಾನಾಚ್ಚ ಮೃತ್ಯುರ್ಲೋಕಭಯಂಕರಃ ॥
ಅನುವಾದ
ಅದರಿಂದ ವೀರ್ಯ ಮತ್ತು ವೀರ್ಯದಿಂದ ಲಿಂಗದ ಅಭಿಮಾನಿ ದೇವತೆಯಾದ ಆಪೋ (ಜಲ) ದೇವತೆಯೂ ಉತ್ಪನ್ನವಾಯಿತು. ಮತ್ತೆ ಗುದವು ಪ್ರಕಟಗೊಂಡು, ಅದರಿಂದ ಅಪಾನವಾಯುವೂ ಮತ್ತು ಅಪಾನವಾಯುವಿನ ಬಳಿಕ ಅದರ ಅಭಿಮಾನಿಯಾದ ಲೋಕಗಳಲ್ಲಿ ಭಯವನ್ನುಂಟುಮಾಡುವ ಮೃತ್ಯುದೇವತೆ ಕಾಣಿಸಿಕೊಂಡಿತು.॥57॥
(ಶ್ಲೋಕ - 58)
ಮೂಲಮ್
ಹಸ್ತೌ ಚ ನಿರಭಿದ್ಯೇತಾಂ ಬಲಂ ತಾಭ್ಯಾಂ ತತಃ ಸ್ವರಾಟ್ ।
ಪಾದೌ ಚ ನಿರಭಿದ್ಯೇತಾಂ ಗತಿಸ್ತಾಭ್ಯಾಂ ತತೋ ಹರಿಃ ॥
ಅನುವಾದ
ಅದಾದಮೇಲೆ ಹಸ್ತ(ಕೈ)ಗಳು ಪ್ರಕಟ ಗೊಂಡವು. ಅದರಿಂದ ಬಲ ಮತ್ತು ಬಲದ ಬಳಿಕ ಹಸ್ತೇಂದ್ರಿಯದ ಅಭಿಮಾನಿ ಇಂದ್ರನು ಉತ್ಪನ್ನನಾದನು. ಮತ್ತೆ ಚರಣ(ಕಾಲು)ಗಳು ಪ್ರಕಟಗೊಂಡವು. ಅವುಗಳಿಂದ ನಡೆ ಎಂಬ ಕ್ರಿಯೆಯೂ, ಪಾದೇಂದ್ರಿಯವೂ, ಅದರ ಅಭಿಮಾನಿಯಾದ ವಿಷ್ಣು ದೇವತೆಯೂ ಪ್ರಕಟಗೊಂಡನು.॥58॥
(ಶ್ಲೋಕ - 59)
ಮೂಲಮ್
ನಾಡ್ಯೋಸ್ಯ ನಿರಭಿದ್ಯಂತ ತಾಭ್ಯೋ ಲೋಹಿತಮಾಭೃತಮ್ ।
ನದ್ಯಸ್ತತಃ ಸಮಭವನ್ನುದರಂ ನಿರಭಿದ್ಯತ ॥
ಅನುವಾದ
ಹೀಗೆಯೇ ವಿರಾಟ್ ಪುರುಷನ ನಾಡಿಗಳು ಪ್ರಕಟಗೊಂಡಾಗ ಅವುಗಳಿಂದ ರಕ್ತವೂ ಉತ್ಪನ್ನವಾಯಿತು ಮತ್ತು ಅದರಿಂದ ನದಿಗಳು ಆವಿರ್ಭವಿಸಿದವು. ಮತ್ತೆ ಆತನ ಹೊಟ್ಟೆಯು ಪ್ರಕಟವಾಯಿತು.॥59॥
(ಶ್ಲೋಕ - 60)
ಮೂಲಮ್
ಕ್ಷುತ್ಪಿಪಾಸೇ ತತಃ ಸ್ಯಾತಾಂ ಸಮುದ್ರಸ್ತ್ವೇತಯೋರಭೂತ್ ।
ಅಥಾಸ್ಯ ಹೃದಯಂ ಭಿನ್ನಂ ಹೃದಯಾನ್ಮನ ಉತ್ಥಿತಮ್ ॥
ಅನುವಾದ
ಅದರಿಂದ ಹಸಿವು-ಬಾಯಾರಿಕೆಗಳು ಕಾಣಿಸಿಕೊಂಡವು. ಬಳಿಕ ಉದರದ ಅಭಿಮಾನಿ ಸಮುದ್ರದೇವತೆ ಉತ್ಪನ್ನವಾಯಿತು. ಅದಾದ ಬಳಿಕ ಅವನ ಹೃದಯ ಪ್ರಕಟ ವಾಯಿತು. ಅದರಿಂದ ಮನಸ್ಸಿನ ಪ್ರಾಕಟ್ಯವಾಯಿತು. ॥ 60 ॥
(ಶ್ಲೋಕ - 61)
ಮೂಲಮ್
ಮನಸಶ್ಚಂದ್ರಮಾ ಜಾತೋ ಬುದ್ಧಿರ್ಬುದ್ಧೇರ್ಗಿರಾಂ ಪತಿಃ ।
ಅಹಂಕಾರಸ್ತತೋ ರುದ್ರಶ್ಚಿತ್ತಂ ಚೈತ್ಯಸ್ತತೋಭವತ್ ॥
ಅನುವಾದ
ಮನಸ್ಸಿನ ಬಳಿಕ ಅದರ ಅಭಿಮಾನಿದೇವತೆ ಚಂದ್ರನು ಉಂಟಾ ದನು. ಮತ್ತೆ ಹೃದಯದಿಂದಲೇ ಬುದ್ಧಿಯೂ, ಅದರ ಅಭಿಮಾನೀ ದೇವತೆ ಯಾದ ಬ್ರಹ್ಮನೂ ಕಾಣಿಸಿಕೊಂಡನು. ಅನಂತರ ಅಹಂಕಾರವೂ, ಅದರ ಅಭಿಮಾನಿ ರುದ್ರದೇವತೆಯೂ ಉತ್ಪನ್ನ ವಾಯಿತು. ಇದಾದಬಳಿಕ ಚಿತ್ತ ಮತ್ತು ಅದರ ಅಭಿಮಾನಿ ಕ್ಷೇತ್ರಜ್ಞನು ಪ್ರಕಟನಾದನು.॥61॥
(ಶ್ಲೋಕ - 62)
ಮೂಲಮ್
ಏತೇ ಹ್ಯಭ್ಯುತ್ಥಿತಾ ದೇವಾ ನೈವಾಸ್ಯೋತ್ಥಾಪನೇಶಕನ್ ।
ಪುನರಾವಿವಿಶುಃ ಖಾನಿ ತಮುತ್ಥಾಪಯಿತುಂ ಕ್ರಮಾತ್ ॥
ಅನುವಾದ
ಈ ಕ್ಷೇತ್ರಜ್ಞನನ್ನು ಬಿಟ್ಟು ಇತರ ಎಲ್ಲ ದೇವತೆಗಳು ಉತ್ಪನ್ನ ರಾದರೂ ಕೂಡ ವಿರಾಟ್ಪುರುಷನನ್ನು ಎಬ್ಬಿಸಲು ಅಸಮರ್ಥ ರಾದಾಗ, ಅವನನ್ನು ಎಬ್ಬಿಸಲು ಅವರು ಕ್ರಮವಾಗಿ ಮತ್ತೆ ತಮ್ಮ-ತಮ್ಮ ಉತ್ಪತ್ತಿಸ್ಥಾನಗಳಲ್ಲಿ ಪ್ರವೇಶಮಾಡಿದರು.॥62॥
(ಶ್ಲೋಕ - 63)
ಮೂಲಮ್
ವಹ್ನಿರ್ವಾಚಾ ಮುಖಂ ಭೇಜೇ ನೋದತಿಷ್ಠತ್ತದಾ ವಿರಾಟ್ ।
ಘ್ರಾಣೇನ ನಾಸಿಕೇ ವಾಯುರ್ನೋದತಿಷ್ಠತ್ತದಾ ವಿರಾಟ್ ॥
ಅನುವಾದ
ಅಗ್ನಿಯು ವಾಣಿಯೊಂದಿಗೆ ಬಾಯೊಳಗೆ ಪ್ರವೇಶಿಸಿದನು. ಆದರೆ ಇದರಿಂದ ವಿರಾಟ್ಪುರುಷನು ಏಳಲಿಲ್ಲ. ವಾಯುವು ಘ್ರಾಣೇಂದ್ರಿಯ ಸಹಿತ ಮೂಗಿನಹೊಳ್ಳೆಗಳಲ್ಲಿ ಪ್ರವೇಶಿಸಿದನು. ಆದರೂ ವಿರಾಟ್ಪುರುಷನು ಏಳಲಿಲ್ಲ.॥63॥
(ಶ್ಲೋಕ - 64)
ಮೂಲಮ್
ಅಕ್ಷಿಣೀ ಚಕ್ಷುಷಾದಿತ್ಯೋ ನೋದತಿಷ್ಠತ್ತದಾ ವಿರಾಟ್ ।
ಶ್ರೋತ್ರೇಣ ಕರ್ಣೌ ಚ ದಿಶೋ ನೋದತಿಷ್ಠತ್ತದಾ ವಿರಾಟ್ ॥
ಅನುವಾದ
ಸೂರ್ಯನು ಚಕ್ಷುಗಳೊಂದಿಗೆ ನೇತ್ರಗಳಲ್ಲಿ ಪ್ರವೇಶಿಸಿದನು. ಆದರೂ ವಿರಾಟ್ ಪುರುಷನು ಏಳಲಿಲ್ಲ. ದಿಕ್ಕುಗಳು ಶ್ರವಣೇಂದ್ರಿಯ ಸಹಿತ ಕಿವಿಯಲ್ಲಿ ಪ್ರವೇಶಿಸಿದವು. ಆದರೂ ವಿರಾಟ್ಪುರುಷನು ಏಳಲಿಲ್ಲ.॥64॥
(ಶ್ಲೋಕ - 65)
ಮೂಲಮ್
ತ್ವಚಂ ರೋಮಬಿರೋಷಧ್ಯೋ ನೋದತಿಷ್ಠತ್ತದಾ ವಿರಾಟ್ ।
ರೇತಸಾ ಶಿಶ್ನಮಾಪಸ್ತು ನೋದತಿಷ್ಠತ್ತದಾ ವಿರಾಟ್ ॥
ಅನುವಾದ
ಔಷಧಿಗಳು ರೋಮಗಳೊಡನೆ ತ್ವಚೆಯಲ್ಲಿ ಪ್ರವೇಶಿಸಿದವು. ಆಗಲೂ ವಿರಾಟ್ಪುರುಷನು ಏಳಲಿಲ್ಲ. ಜಲವು ವೀರ್ಯದೊಂದಿಗೆ ಲಿಂಗದಲ್ಲಿ ಪ್ರವೇಶಿಸಿತು. ಆಗಲೂ ವಿರಾಟ್ಪುರುಷನು ಏಳಲಿಲ್ಲ.॥65॥
(ಶ್ಲೋಕ - 66)
ಮೂಲಮ್
ಗುದಂ ಮೃತ್ಯುರಪಾನೇನ ನೋದತಿಷ್ಠತ್ತದಾ ವಿರಾಟ್ ।
ಹಸ್ತಾವಿಂದ್ರೋ ಬಲೇನೈವ ನೋದತಿಷ್ಠತ್ತದಾ ವಿರಾಟ್ ॥
ಅನುವಾದ
ಮೃತ್ಯುವು ಅಪಾನದೊಂದಿಗೆ ಗುದದೊಳಗೆ ಪ್ರವೇಶಿ ಸಿತು. ಆದರೂ ವಿರಾಟ್ಪುರುಷನು ಏಳಲಿಲ್ಲ. ಇಂದ್ರನು ಬಲ ದೊಂದಿಗೆ ಕೈಗಳಲ್ಲಿ ಪ್ರವೇಶಿಸಿದನು. ಆದರೂ ವಿರಾಟ್ಪುರುಷನು ಏಳಲಿಲ್ಲ.॥66॥
(ಶ್ಲೋಕ - 67)
ಮೂಲಮ್
ವಿಷ್ಣುರ್ಗತ್ಯೈವ ಚರಣೌ ನೋದತಿಷ್ಠತ್ತದಾ ವಿರಾಟ್ ।
ನಾಡೀರ್ನದ್ಯೋ ಲೋಹಿತೇನ ನೋದತಿಷ್ಠತ್ತದಾ ವಿರಾಟ್ ॥
ಅನುವಾದ
ವಿಷ್ಣುದೇವರು ಗತಿಯೊಡನೆ ಚರಣಗಳಲ್ಲಿ ಹೊಕ್ಕರೂ ವಿರಾಟ್ ಪುರುಷನು ಏಳಲಿಲ್ಲ. ನದಿಗಳು ರಕ್ತದೊಡನೆ ನಾಡಿಗಳಲ್ಲಿ ಪ್ರವೇಶಿಸಿದರೂ ವಿರಾಟ್ಪುರುಷನು ಏಳಲಿಲ್ಲ.॥67॥
(ಶ್ಲೋಕ - 68)
ಮೂಲಮ್
ಕ್ಷುತ್ತೃಡ್ಭ್ಯಾಮುದರಂ ಸಿಂಧುರ್ನೋದತಿಷ್ಠತ್ತದಾ ವಿರಾಟ್ ।
ಹೃದಯಂ ಮನಸಾ ಚಂದ್ರೋ ನೋದತಿಷ್ಠತ್ತದಾ ವಿರಾಟ್ ॥
ಅನುವಾದ
ಸಮುದ್ರವು ಹಸಿವು-ಬಾಯಾರಿಕೆಗಳೊಂದಿಗೆ ಉದರ ದಲ್ಲಿ ಪ್ರವೇಶಮಾಡಿತು. ಆದರೂ ವಿರಾಟ್ಪುರುಷನು ಏಳಲಿಲ್ಲ. ಚಂದ್ರನು ಮನಸ್ಸಿನ ಸಹಿತ ಹೃದಯದಲ್ಲಿ ಹೊಕ್ಕರೂ ವಿರಾಟ್ ಪುರುಷನು ಏಳಲಿಲ್ಲ.॥68॥
(ಶ್ಲೋಕ - 69)
ಮೂಲಮ್
ಬುದ್ಧ್ಯಾ ಬ್ರಹ್ಮಾಪಿ ಹೃದಯಂ ನೋದತಿಷ್ಠತ್ತದಾ ವಿರಾಟ್ ।
ರುದ್ರೋಭಿಮತ್ಯಾ ಹೃದಯಂ ನೋದತಿಷ್ಠತ್ತದಾ ವಿರಾಟ್ ॥
ಅನುವಾದ
ಬ್ರಹ್ಮದೇವರು ಬುದ್ಧಿಯಸಹಿತ ಹೃದಯದಲ್ಲಿ ಪ್ರವೇಶಿಸಿದನು ಆಗಲೂ ವಿರಾಟ್ಪುರುಷನು ಏಳಲಿಲ್ಲ. ರುದ್ರದೇವರು ಅಹಂಕಾರದೊಂದಿಗೆ ಅದೇ ಹೃದಯದಲ್ಲಿ ಪ್ರವೇಶಿಸಿದರೂ ವಿರಾಟ್ ಪುರುಷನು ಏಳಲಿಲ್ಲ.॥69॥
(ಶ್ಲೋಕ - 70)
ಮೂಲಮ್
ಚಿತ್ತೇನ ಹೃದಯಂ ಚೈತ್ಯಃ ಕ್ಷೇತ್ರಜ್ಞಃ ಪ್ರಾವಿಶದ್ಯದಾ ।
ವಿರಾಟ್ ತದೈವ ಪುರುಷಃ ಸಲಿಲಾದುದತಿಷ್ಠತ ॥
ಅನುವಾದ
ಆದರೆ ಚಿತ್ತದ ಅಧಿಷ್ಠಾತೃ ಕ್ಷೇತ್ರಜ್ಞನು ಚಿತ್ತದೊಂದಿಗೆ ಹೃದಯದಲ್ಲಿ ಪ್ರವೇಶಿಸಿದಾಗ ವಿರಾಟ್ಪುರುಷನು ಒಡನೆಯೇ ಜಲದಿಂದ ಮೇಲೆದ್ದು ನಿಂತುಕೊಂಡನು.॥70॥
(ಶ್ಲೋಕ - 71)
ಮೂಲಮ್
ಯಥಾ ಪ್ರಸುಪ್ತಂ ಪುರುಷಂ ಪ್ರಾಣೇಂದ್ರಿಯಮನೋಧಿಯಃ ।
ಪ್ರಭವಂತಿ ವಿನಾ ಯೇನ ನೋತ್ಥಾಪಯಿತುಮೋಜಸಾ ॥
ಅನುವಾದ
ಲೋಕದಲ್ಲಿ ನಿದ್ರಿಸು ತ್ತಿರುವ ಪ್ರಾಣಿಯನ್ನು ಪ್ರಾಣ, ಇಂದ್ರಿಯಗಳು, ಮನಸ್ಸು, ಬುದ್ಧಿ ಮುಂತಾದವುಗಳೂ ಚಿತ್ತದ ಅಧಿಷ್ಠಾತೃವಾಗಿರುವ ಕ್ಷೇತ್ರಜ್ಞನ ಸಹಾಯವಿಲ್ಲದೆ ತಮ್ಮ ಬಲದಿಂದ ಏಳಿಸಲಾರವೋ, ಹಾಗೆಯೇ ವಿರಾಟ್ಪುರುಷನನ್ನೂ ಕೂಡ ಅವರು ಕ್ಷೇತ್ರಜ್ಞನಾದ ಪರಮಾತ್ಮನಲ್ಲದೆ ಏಳಿಸಲು ಅಸಮರ್ಥರಾದುವು.॥71॥
(ಶ್ಲೋಕ - 72)
ಮೂಲಮ್
ತಮಸ್ಮಿನ್ಪ್ರತ್ಯಗಾತ್ಮಾನಂ ಧಿಯಾ ಯೋಗಪ್ರವೃತ್ತಯಾ ।
ಭಕ್ತ್ಯಾ ವಿರಕ್ತ್ಯಾ ಜ್ಞಾನೇನ ವಿವಿಚ್ಯಾತ್ಮನಿ ಚಿಂತಯೇತ್ ॥
ಅನುವಾದ
ಆದ್ದರಿಂದ ಭಕ್ತಿ, ವೈರಾಗ್ಯ ಮತ್ತು ಚಿತ್ತದ ಏಕಾಗ್ರತೆಯಿಂದ ಪ್ರಕಟಗೊಂಡ ಜ್ಞಾನದ ಮೂಲಕ ಆ ಅಂತರಾತ್ಮಸ್ವರೂಪನಾದ ಕ್ಷೇತ್ರಜ್ಞನು ಈ ಶರೀರದಲ್ಲಿ ಇದ್ದರೂ ಇದರಿಂದ ನಿರ್ಲಿಪ್ತನೆಂದು ತಿಳಿದುಕೊಂಡು ಅವನನ್ನು ಚಿಂತಿಸಬೇಕು.॥72॥
ಅನುವಾದ (ಸಮಾಪ್ತಿಃ)
ಇಪ್ಪತ್ತಾರನೆಯ ಅಧ್ಯಾಯವು ಮುಗಿಯಿತು. ॥26॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ತೃತೀಯಸ್ಕಂಧೇ ಕಾಪಿಲೇಯೇ ತತ್ತ್ವಸಮಾಮ್ನಾಯೇ ಷಡ್ವಿಂಶೋಽಧ್ಯಾಯಃ ॥26॥