[ಇಪ್ಪತ್ತನಾಲ್ಕನೆಯ ಅಧ್ಯಾಯ]
ಭಾಗಸೂಚನಾ
ಭಗವಾನ್ ಶ್ರೀಕಪಿಲರ ಅವತಾರ
(ಶ್ಲೋಕ - 1)
ಮೂಲಮ್ (ವಾಚನಮ್)
ಮೈತ್ರೇಯ ಉವಾಚ
ಮೂಲಮ್
ನಿರ್ವೇದವಾದಿನೀಮೇವಂ ಮನೋರ್ದುಹಿತರಂ ಮುನಿಃ ।
ದಯಾಲುಃ ಶಾಲಿನೀಮಾಹ ಶುಕ್ಲಾಭಿವ್ಯಾಹೃತಂ ಸ್ಮರನ್ ॥
ಅನುವಾದ
ಶ್ರೀಮೈತ್ರೇಯರು ಹೇಳುತ್ತಾರೆ ವಿದುರನೇ ! ಗುಣಶಾಲಿನಿ ಯಾದ ಮನುಕುಮಾರಿ ದೇವಹೂತಿಯು ಹೀಗೆ ವೈರಾಗ್ಯದಿಂದ ಕೂಡಿದ ಮಾತುಗಳನ್ನು ಹೇಳಿದಾಗ ಕರುಣಾಳುಗಳಾದ ಕರ್ದಮ ಮುನಿಗಳು ಭಗವಾನ್ ಶ್ರೀವಿಷ್ಣುವಿನ ಮಾತುಗಳನ್ನು ಸ್ಮರಿಸಿ ಕೊಂಡು, ಆಕೆಗೆ ಹೇಳಿದರು.॥1॥
(ಶ್ಲೋಕ - 2)
ಮೂಲಮ್ (ವಾಚನಮ್)
ಋಷಿರುವಾಚ
ಮೂಲಮ್
ಮಾ ಖಿದೋ ರಾಜಪುತ್ರೀತ್ಥಮಾತ್ಮಾನಂ ಪ್ರತ್ಯನಿಂದಿತೇ ।
ಭಗವಾಂಸ್ತೇಕ್ಷರೋ ಗರ್ಭಮದೂರಾತ್ಸಂಪ್ರಪತ್ಸ್ಯತೇ ॥
ಅನುವಾದ
ಕರ್ದಮರು ಇಂತೆಂದರು ನಿರ್ದೋಷಳಾದ ರಾಜ ಕುಮಾರಿಯೇ ! ನಿನ್ನ ಬಗೆಗೆ ಹೀಗೆ ವಿಷಾದಪಟ್ಟುಕೊಳ್ಳಬೇಡ. ಅವಿ ನಾಶಿಯಾದ ಭಗವಾನ್ ಶ್ರೀಹರಿಯು ಶೀಘ್ರದಲ್ಲಿಯೇ ನಿನ್ನ ಗರ್ಭಕ್ಕೆ ದಯಮಾಡಿಸುವನು.॥2॥
(ಶ್ಲೋಕ - 3)
ಮೂಲಮ್
ಧೃತವ್ರತಾಸಿ ಭದ್ರಂ ತೇ ದಮೇನ ನಿಯಮೇನ ಚ ।
ತಪೋದ್ರವಿಣದಾನೈಶ್ಚ ಶ್ರದ್ಧಯಾ ಚೇಶ್ವರಂ ಭಜ ॥
ಅನುವಾದ
ಪ್ರಿಯೆ ! ನೀನು ಅನೇಕ ಪ್ರಕಾರದ ವ್ರತಗಳನ್ನು ಪಾಲಿಸಿದ್ದೀಯೆ. ಅದರಿಂದ ನಿನ್ನ ಮಂಗಳವೇ ಆಗುವುದು. ಈಗ ನೀನು ಸಂಯಮ, ನಿಯಮ, ತಪಸ್ಸು, ದಾನಾದಿಗಳನ್ನು ಮಾಡುತ್ತಾ ಶ್ರದ್ಧೆಯಿಂದ ಭಗವಂತನನ್ನು ಭಜಿಸುತ್ತಿರು.॥3॥
(ಶ್ಲೋಕ - 4)
ಮೂಲಮ್
ಸ ತ್ವಯಾರಾಧಿತಃ ಶುಕ್ಲೋ ವಿತನ್ವನ್ಮಾಮಕಂ ಯಶಃ ।
ಛೇತ್ತಾ ತೇ ಹೃದಯಗ್ರಂಥಿವೌದರ್ಯೋ ಬ್ರಹ್ಮಭಾವನಃ ॥
ಅನುವಾದ
ನೀನು ಹೀಗೆ ಆರಾಧಿಸುತ್ತಿದ್ದರೆ ಶ್ರೀಹರಿಯು ನಿನ್ನ ಗರ್ಭದಲ್ಲಿ ಅವತರಿಸಿ, ನನ್ನ ಕೀರ್ತಿಯನ್ನು ಹೆಚ್ಚಿಸುವನು ಹಾಗೂ ಬ್ರಹ್ಮಜ್ಞಾನವನ್ನು ಉಪದೇಶಮಾಡಿ ನಿನ್ನ ಅಜ್ಞಾನದ ಗಂಟನ್ನು ಕತ್ತರಿಸಿಹಾಕುವನು.॥4॥
(ಶ್ಲೋಕ - 5)
ಮೂಲಮ್ (ವಾಚನಮ್)
ಮೈತ್ರೇಯ ಉವಾಚ
ಮೂಲಮ್
ದೇವಹೂತ್ಯಪಿ ಸಂದೇಶಂ ಗೌರವೇಣ ಪ್ರಜಾಪತೇಃ ।
ಸಮ್ಯಕ್ ಶ್ರದ್ಧಾಯ ಪುರುಷಂ ಕೂಟಸ್ಥಮಭಜದ್ಗುರುಮ್ ॥
ಅನುವಾದ
ಶ್ರೀಮೈತ್ರೇಯರು ಹೇಳುತ್ತಾರೆ ಸಾಧುಶ್ರೇಷ್ಠನಾದ ವಿದುರನೇ! ದೇವಹೂತಿಯು ಕರ್ದಮ ಪ್ರಜಾಪತಿಗಳ ಆದೇಶ ದಲ್ಲಿ ಗೌರವಬುದ್ಧಿ ತೋರಿ, ಪೂರ್ಣ ನಂಬಿಕೆಯಿಂದ ನಿರ್ವಿಕಾರಿಯಾದ ಜಗದ್ಗುರು ಭಗವಾನ್ ಶ್ರೀಹರಿಯನ್ನು ಚೆನ್ನಾಗಿ ಆರಾಧಿಸ ತೊಡಗಿದಳು.॥5॥
(ಶ್ಲೋಕ - 6)
ಮೂಲಮ್
ತಸ್ಯಾಂ ಬಹುತಿಥೇ ಕಾಲೇ ಭಗವಾನ್ಮಧುಸೂದನಃ ।
ಕಾರ್ದಮಂ ವೀರ್ಯಮಾಪನ್ನೋ ಜಜ್ಞೇಗ್ನಿರಿವ ದಾರುಣಿ ॥
ಅನುವಾದ
ಹೀಗೆ ಬಹಳ ಸಮಯ ಕಳೆಯಲು ಭಗವಾನ್ ಶ್ರೀಮಧುಸೂದನನು ಕರ್ದಮರ ವೀರ್ಯವನ್ನು ಆಶ್ರಯಿಸಿ ಕಟ್ಟಿಗೆಯಿಂದ ಅಗ್ನಿಯು ಉದ್ಭವಿಸುವಂತೆ ದೇವಹೂತಿಯ ಗರ್ಭದಿಂದ ಪ್ರಕಟನಾದನು.॥6॥
(ಶ್ಲೋಕ - 7)
ಮೂಲಮ್
ಅವಾದಯಂಸ್ತದಾ ವ್ಯೋಮ್ನಿ ವಾದಿತ್ರಾಣಿ ಘನಾಘನಾಃ ।
ಗಾಯಂತಿ ತಂ ಸ್ಮ ಗಂಧರ್ವಾ ನೃತ್ಯಂತ್ಯಪ್ಸರಸೋ ಮುದಾ ॥
ಅನುವಾದ
ಆಗ ಆಕಾಶದಲ್ಲಿ ದೇವದುಂದುಭಿ ಗಳು ಮೊಳಗಿದವು. ಮೋಡಗಳು ಗುಡುಗುತ್ತಾ ಅಮೃತದ ಮಳೆಯನ್ನು ಕರೆದವು. ಗಂಧರ್ವರು ಗಾನ ಮಾಡತೊಡಗಿದರು. ಅಪ್ಸರೆ ಯರು ಆನಂದದಿಂದ ನೃತ್ಯವಾಡತೊಡಗಿದರು.॥7॥
(ಶ್ಲೋಕ - 8)
ಮೂಲಮ್
ಪೇತುಃ ಸುಮನಸೋ ದಿವ್ಯಾಃ ಖೇಚರೈರಪವರ್ಜಿತಾಃ ।
ಪ್ರಸೇದುಶ್ಚ ದಿಶಃ ಸರ್ವಾ ಅಂಭಾಂಸಿ ಚ ಮನಾಂಸಿ ಚ ॥
ಅನುವಾದ
ಆಕಾಶದಿಂದ ದೇವತೆಗಳು ಹೂಮಳೆಯನ್ನು ಸುರಿಸಿದರು. ಎಲ್ಲ ದಿಕ್ಕುಗಳಲ್ಲಿಯೂ ಆನಂದವು ಹರಡಿತು. ಜಲಾಶಯಗಳ ಜಲವು ನಿರ್ಮಲವಾಯಿತು. ಎಲ್ಲ ಜೀವಿಗಳ ಮನಸ್ಸು ಪ್ರಸನ್ನಗೊಂಡವು.॥8॥
(ಶ್ಲೋಕ - 9)
ಮೂಲಮ್
ತತ್ಕರ್ದಮಾಶ್ರಮಪದಂ ಸರಸ್ವತ್ಯಾ ಪರಿಶ್ರಿತಮ್ ।
ಸ್ವಯಂಭೂಃ ಸಾಕಮೃಷಿಭಿರ್ಮರೀಚ್ಯಾದಿಭಿರಭ್ಯಯಾತ್ ॥
ಅನುವಾದ
ಇದೇ ಸಮಯಕ್ಕೆ ಸರಸ್ವತೀನದಿಯಿಂದ ಸುತ್ತುವರಿಯಲ್ಪಟ್ಟ ಕರ್ದ ಮರ ಆಶ್ರಮಕ್ಕೆ ಮರೀಚಿಯೇ ಮುಂತಾದ ಮುನಿಗಳ ಸಹಿತ ಶ್ರೀಬ್ರಹ್ಮದೇವರು ದಯಮಾಡಿಸಿದರು.॥9॥
(ಶ್ಲೋಕ - 10)
ಮೂಲಮ್
ಭಗವಂತಂ ಪರಂ ಬ್ರಹ್ಮ ಸತ್ತ್ವೇನಾಂಶೇನ ಶತ್ರುಹನ್ ।
ತತ್ತ್ವಸಂಖ್ಯಾನವಿಜ್ಞಪ್ತ್ಯೈ ಜಾತಂ ವಿದ್ವಾನಜಃ ಸ್ವರಾಟ್ ॥
ಅನುವಾದ
ಎಲೈ ಶತ್ರುದಮನ ವಿದುರನೇ ! ಸಾಕ್ಷಾತ್ ಪರಬ್ರಹ್ಮ ಭಗವಾನ್ ಶ್ರೀವಿಷ್ಣುವೇ ಸಾಂಖ್ಯ ಶಾಸವನ್ನು ಪ್ರವರ್ತನೆ ಮಾಡಲು ತನ್ನ ಪರಿಶುದ್ಧ ಸತ್ತ್ವಮಯವಾದ ಅಂಶದಿಂದ ಅಲ್ಲಿ ಅವತರಿಸಿರುವನು ಎಂಬುದು ಸ್ವಯಂಸಿದ್ಧ ಜ್ಞಾನದಿಂದ ಸಂಪನ್ನರೂ ಜನ್ಮರಹಿತರೂ ಆದ ಬ್ರಹ್ಮದೇವರಿಗೆ ಸ್ಪಷ್ಟವಾಗಿ ತಿಳಿದುಬಂದಿತ್ತು.॥10॥
(ಶ್ಲೋಕ - 11)
ಮೂಲಮ್
ಸಭಾಜಯನ್ ವಿಶುದ್ಧೇನ ಚೇತಸಾ ತಚ್ಚಿಕೀರ್ಷಿತಮ್ ।
ಪ್ರಹೃಷ್ಯಮಾಣೈರಸುಭಿಃ ಕರ್ದಮಂ ಚೇದಮಭ್ಯಧಾತ್ ॥
ಅನುವಾದ
ಆದ್ದರಿಂದ ಭಗವಂತನು ಮಾಡಬೇಕೆಂದಿದ್ದ ಕಾರ್ಯವನ್ನು ಅವರು ವಿಶುದ್ಧವಾದ ಚಿತ್ತದಿಂದ ಅಭಿನಂದನೆ ಮಾಡುತ್ತಾ, ಆದರಿಸುತ್ತಾ, ತಮ್ಮ ಎಲ್ಲ ಇಂದ್ರಿಯಗಳಿಂದಲೂ ಪ್ರಸನ್ನತೆಯನ್ನು ಪ್ರಕಟಿಸುತ್ತಾ ಕರ್ದಮರನ್ನು ಕುರಿತು ಇಂತೆಂದರು.॥11॥
(ಶ್ಲೋಕ - 12)
ಮೂಲಮ್ (ವಾಚನಮ್)
ಬ್ರಹ್ಮೋವಾಚ
ಮೂಲಮ್
ತ್ವಯಾ ಮೇಪಚಿತಿಸ್ತಾತ ಕಲ್ಪಿತಾ ನಿರ್ವ್ಯಲೀಕತಃ ।
ಯನ್ಮೇ ಸಂಜಗೃಹೇ ವಾಕ್ಯಂ ಭವಾನ್ಮಾನದ ಮಾನಯನ್ ॥
ಅನುವಾದ
ಶ್ರೀಬ್ರಹ್ಮದೇವರು ಹೇಳಿದರು ವತ್ಸ ಕರ್ದಮ ! ಬೇರೆ ಯವರಿಗೆ ಮಾನವನ್ನು ಕೊಡುವವನೇ ! ನೀನು ನನ್ನನ್ನು ಸಮ್ಮಾ ನಿಸುತ್ತಾ, ನನ್ನ ಆಜ್ಞೆಯನ್ನು ಪಾಲಿಸಿರುವೆ. ಇದರಿಂದ ನಿನ್ನ ನಿಷ್ಕಪಟ ಭಾವದಿಂದ ನನ್ನ ಪೂಜೆಯನ್ನು ಸಲ್ಲಿಸಿರುವೆ.॥12॥
(ಶ್ಲೋಕ - 13)
ಮೂಲಮ್
ಏತಾವತ್ಯೇವ ಶುಶ್ರೂಷಾ ಕಾರ್ಯಾ ಪಿತರಿ ಪುತ್ರಕೈಃ ।
ಬಾಢಮಿತ್ಯನುಮನ್ಯೇತ ಗೌರವೇಣ ಗುರೋರ್ವಚಃ ॥
ಅನುವಾದ
ಮಕ್ಕಳಾ ದವರು ‘ಏನಪ್ಪಣೆ’ ಎಂದು ಹೇಳಿ ಅತ್ಯಂತ ಆದರದಿಂದ ಅವನ ಆಣತಿಯನ್ನು ಪಾಲಿಸುವುದೇ ತಂದೆಗೆ ಸಲ್ಲಿಸಬೇಕಾದ ಅತ್ಯಂತ ಶ್ರೇಷ್ಠವಾದ ಸೇವೆಯಾಗಿದೆ.॥13॥
(ಶ್ಲೋಕ - 14)
ಮೂಲಮ್
ಇಮಾ ದುಹಿತರಃ ಸಭ್ಯ ತವ ವತ್ಸ ಸುಮಧ್ಯಮಾಃ ।
ಸರ್ಗಮೇತಂ ಪ್ರಭಾವೈಃ ಸ್ವೈರ್ಬೃಂಹಯಿಷ್ಯಂತ್ಯನೇಕಧಾ ॥
ಅನುವಾದ
ಮಗು ! ನೀನು ಸಭ್ಯನಾಗಿ ರುವೆ. ನಿನ್ನ ಸುಂದರಿಯರಾದ ಈ ಕನ್ಯೆಯರು ತಮ್ಮ ವಂಶ ಸಂತತಿಗಳ ಮೂಲಕ ಈ ಸೃಷ್ಟಿಯನ್ನು ಅನೇಕ ಪ್ರಕಾರದಿಂದ ಹೆಚ್ಚಿಸುವರು. ॥ 14 ॥
(ಶ್ಲೋಕ - 15)
ಮೂಲಮ್
ಅತಸ್ತ್ವಮೃಷಿಮುಖ್ಯೇಭ್ಯೋ ಯಥಾಶೀಲಂ ಯಥಾರುಚಿ ।
ಆತ್ಮಜಾಃ ಪರಿದೇಹ್ಯದ್ಯ ವಿಸ್ತೃಣೀಹಿ ಯಶೋ ಭುವಿ ॥
ಅನುವಾದ
ಈಗ ನೀನು ಈ ಮರೀಚಿಗಳೇ ಮುಂತಾದ ಮುನಿವರ್ಯರಿಗೆ ಇವರ ಸ್ವಭಾವ ಮತ್ತು ರುಚಿಗಳಿಗೆ ತಕ್ಕಂತೆ ನಿನ್ನ ಕನ್ಯೆಯರನ್ನು ವಿವಾಹಮಾಡಿಕೊಟ್ಟು ಪ್ರಪಂಚದಲ್ಲಿ ಸತ್ಕೀರ್ತಿಯನ್ನು ಹರಡುವವನಾಗು.॥15॥
(ಶ್ಲೋಕ - 16)
ಮೂಲಮ್
ವೇದಾಹಮಾದ್ಯಂ ಪುರುಷಮವತೀರ್ಣಂ ಸ್ವಮಾಯಯಾ ।
ಭೂತಾನಾಂ ಶೇವಧಿಂ ದೇಹಂ ಬಿಭ್ರಾಣಂ ಕಪಿಲಂ ಮುನೇ ॥
ಅನುವಾದ
ಮುನಿವರ್ಯನೇ ! ಸಮಸ್ತ ಪ್ರಾಣಿಗಳಿಗೂ ನಿಧಿಯಾಗಿ, ಅವರ ಅಭೀಷ್ಟಗಳನ್ನು ಈಡೇರಿಸುವ ಆ ಆದಿಪುರುಷನಾದ ಶ್ರೀಮನ್ನಾರಾಯಣನೇ ಈಗ ತನ್ನ ಯೋಗ ಮಾಯೆಯಿಂದ ಕಪಿಲನೆಂಬ ಹೆಸರಿನಿಂದ ಅವತರಿಸಿರುವನು.॥16॥
(ಶ್ಲೋಕ - 17)
ಮೂಲಮ್
ಜ್ಞಾನವಿಜ್ಞಾನಯೋಗೇನ ಕರ್ಮಣಾಮುದ್ಧರಂಜಟಾಃ ।
ಹಿರಣ್ಯಕೇಶಃ ಪದ್ಮಾಕ್ಷಃ ಪದ್ಮಮುದ್ರಾಪದಾಂಬುಜಃ ॥
(ಶ್ಲೋಕ - 18)
ಮೂಲಮ್
ಏಷ ಮಾನವಿ ತೇ ಗರ್ಭಂ ಪ್ರವಿಷ್ಟಃ ಕೈಟಭಾರ್ದನಃ ।
ಅವಿದ್ಯಾಸಂಶಯಗ್ರಂಥಿಂ ಛಿತ್ತ್ವಾ ಗಾಂ ವಿಚರಿಷ್ಯತಿ ॥
ಅನುವಾದ
(ಮತ್ತೆ ದೇವಹೂತಿಗೆ ಹೇಳಿದರು) ರಾಜಕುಮಾರಿ ! ಹೊನ್ನಿನಂತೆ ಹೊಳೆಯುವ ಕೇಶಗಳಿಂದಲೂ, ತಾವರೆ ಹೂವಿನಂತೆ ಕಂಗೊಳಿಸುವ ಕಣ್ಣುಗಳಿಂದಲೂ, ಪದ್ಮಾಂಕಿತವಾದ ಪದಾರವಿಂದಗಳಿಂದಲೂ ಕೂಡಿ, ಶಿಶುರೂಪದಿಂದ ಕೈಟಭಾರಿಯಾದ ಶ್ರೀಮಹಾವಿಷ್ಣುವೇ ಜ್ಞಾನ-ವಿಜ್ಞಾನಗಳ ಮೂಲಕ ಕರ್ಮಗಳ ವಾಸನೆಯನ್ನು ನಿರ್ಮೂಲಗೊಳಿಸಲು ನಿನ್ನ ಗರ್ಭದಲ್ಲಿ ಪ್ರವೇಶಿಸಿರುವನು. ಈತನು ಅವಿದ್ಯೆಯಿಂದುಂಟಾದ ಮೋಹದ ಗಂಟನ್ನು ಕತ್ತರಿಸಿ, ಭೂಮಿಯಲ್ಲಿ ಯಥೇಚ್ಛವಾಗಿ ಸಂಚರಿಸುವನು.॥17-18॥
(ಶ್ಲೋಕ - 19)
ಮೂಲಮ್
ಅಯಂ ಸಿದ್ಧಗಣಾಧೀಶಃ ಸಾಂಖ್ಯಾಚಾರ್ಯೈಃ ಸುಸಮ್ಮತಃ ।
ಲೋಕೇ ಕಪಿಲ ಇತ್ಯಾಖ್ಯಾಂ ಗಂತಾ ತೇ ಕೀರ್ತಿವರ್ಧನಃ ॥
ಅನುವಾದ
ಇವನು ಸಿದ್ಧರಿಗೂ, ಸಾಂಖ್ಯಾಚಾರ್ಯರಿಗೂ ಸಮ್ಮಾನಯೋಗ್ಯ ನಾಗುವನು. ‘ಕಪಿಲ’ ಎಂಬ ಹೆಸರಿನಿಂದ ಪ್ರಸಿದ್ಧನಾಗಿ ಲೋಕದಲ್ಲಿ ನಿನ್ನ ಕೀರ್ತಿಯನ್ನು ಹೆಚ್ಚಿಸುವನು.॥19॥
(ಶ್ಲೋಕ - 20)
ಮೂಲಮ್ (ವಾಚನಮ್)
ಮೈತ್ರೇಯ ಉವಾಚ
ಮೂಲಮ್
ತಾವಾಶ್ವಾಸ್ಯ ಜಗತ್ಸ್ರಷ್ಟಾ ಕುಮಾರೈಃ ಸಹನಾರದಃ ।
ಹಂಸೋ ಹಂಸೇನ ಯಾನೇನ ತ್ರಿಧಾಮಪರಮಂ ಯಯೌ ॥
ಅನುವಾದ
ಶ್ರೀಮೈತ್ರೇಯರು ಹೇಳುತ್ತಾರೆ ವಿದುರನೇ ! ಜಗತ್ತನ್ನು ಸೃಷ್ಟಿಸುವ ಶ್ರೀಬ್ರಹ್ಮದೇವರು ಅವರಿಬ್ಬರಿಗೂ ಹೀಗೆ ಸಂತೈಸಿ ಸನ ಕಾದಿಗಳನ್ನೂ, ನಾರದರನ್ನೂ ಜೊತೆಗೂಡಿ ಹಂಸಾರೂಢರಾಗಿ ತಮ್ಮ ಬ್ರಹ್ಮಲೋಕಕ್ಕೆ ಹೊರಟುಹೋದರು.॥20॥
(ಶ್ಲೋಕ - 21)
ಮೂಲಮ್
ಗತೇ ಶತಧೃತೌ ಕ್ಷತ್ತಃ ಕರ್ದಮಸ್ತೇನ ಚೋದಿತಃ ।
ಯಥೋದಿತಂ ಸ್ವದುಹಿತೃಃ ಪ್ರಾದಾದ್ವಿಶ್ವಸೃಜಾಂ ತತಃ ॥
ಅನುವಾದ
ಶ್ರೀಬ್ರಹ್ಮ ದೇವರು ಹೋದಬಳಿಕ ಕರ್ದಮರು ಅವರ ಅಪ್ಪಣೆಯಂತೆ ಮರೀಚಿಗಳೇ ಮುಂತಾದ ಪ್ರಜಾಪತಿಗಳಿಗೆ ತಮ್ಮ ಕನ್ಯೆಯರನ್ನು ಕೊಟ್ಟು ವಿವಾಹ ಮಾಡಿದರು. ॥21॥
(ಶ್ಲೋಕ - 22)
ಮೂಲಮ್
ಮರೀಚಯೇ ಕಲಾಂ ಪ್ರಾದಾದನಸೂಯಾಮಥಾತ್ರಯೇ ।
ಶ್ರದ್ಧಾಮಂಗಿರಸೇಯಚ್ಛತ್ಪುಲಸ್ತ್ಯಾಯ ಹವಿರ್ಭುವಮ್ ॥
ಅನುವಾದ
ಅವರು ತಮ್ಮ ಕನ್ಯಾಮಣಿ ಗಳಲ್ಲಿ ’ಕಲಾ’ ಎಂಬಾಕೆಯನ್ನು ಮರೀಚಿ ಮಹರ್ಷಿಗಳಿಗೂ, ‘ಅನಸೂಯೆ’ಯನ್ನು ಅತ್ರಿಗಳಿಗೂ, ‘ಶ್ರದ್ಧೆ’ಯನ್ನು ಅಂಗೀರಸರಿಗೂ, ‘ಹವಿರ್ಭೂ’ ಎಂಬಾಕೆಯನ್ನು ಪುಲಸ್ತ್ಯರಿಗೂ ಕೊಟ್ಟು ವಿವಾಹ ಮಾಡಿದರು.॥22॥
(ಶ್ಲೋಕ - 23)
ಮೂಲಮ್
ಪುಲಹಾಯ ಗತಿಂ ಯುಕ್ತಾಂ ಕ್ರತವೇ ಚ ಕ್ರಿಯಾಂ ಸತೀಮ್ ।
ಖ್ಯಾತಿಂ ಚ ಭೃಗವೇಯಚ್ಛದ್ವಸಿಷ್ಠಾಯಾಪ್ಯರುಂಧತೀಮ್ ॥
ಅನುವಾದ
ಮಹರ್ಷಿ ಪುಲಹರಿಗೆ ಅನುರೂಪಳಾದ ‘ಗತಿ’ ಎಂಬ ಕನ್ಯೆ ಯನ್ನೂ, ಕ್ರತುವಿಗೆ ಸಾಧ್ವೀಮಣಿಯಾದ ‘ಕ್ರಿಯೆ’ ಎಂಬುವಳನ್ನೂ, ಭೃಗು ಮಹರ್ಷಿಗಳಿಗೆ ‘ಖ್ಯಾತಿ’ ಎಂಬಾಕೆಯನ್ನೂ, ಮಹರ್ಷಿ ವಸಿಷ್ಠರಿಗೆ ‘ಅರುಂಧತಿ’ಯನ್ನೂ ವಿವಾಹ ಮಾಡಿಕೊಟ್ಟರು.॥23॥
(ಶ್ಲೋಕ - 24)
ಮೂಲಮ್
ಅಥರ್ವಣೇದದಾಚ್ಛಾಂತಿಂ ಯಯಾ ಯಜ್ಞೋ ವಿತನ್ಯತೇ ।
ವಿಪ್ರರ್ಷಭಾನ್ಕೃತೋದ್ವಾಹಾನ್ಸದಾರಾನ್ಸಮಲಾಲಯತ್ ॥
ಅನುವಾದ
ಅಥರ್ವಾ ಮಹರ್ಷಿಗಳಿಗೆ ಯಜ್ಞಕರ್ಮವನ್ನು ವಿಸ್ತರಿಸುವ ‘ಶಾಂತಿ’ ಎಂಬ ಕನ್ಯೆಯನ್ನು ಕೊಟ್ಟು ವಿವಾಹ ಮಾಡಿದರು. ಕರ್ದಮರು ವಿವಾಹಿತರಾದ ಮಹರ್ಷಿಗಳನ್ನೂ, ಅವರ ಪತ್ನಿಯರನ್ನೂ ಪ್ರೀತಿಯಿಂದ ತುಂಬಾ ಸತ್ಕಾರಮಾಡಿದರು.॥24॥
(ಶ್ಲೋಕ - 25)
ಮೂಲಮ್
ತತಸ್ತ ಋಷಯಃ ಕ್ಷತ್ತಃ ಕೃತದಾರಾ ನಿಮಂತ್ರ್ಯತಮ್ ।
ಪ್ರಾತಿಷ್ಠನ್ನಂದಿಮಾಪನ್ನಾಃ ಸ್ವಂ ಸ್ವಮಾಶ್ರಮಮಂಡಲಮ್ ॥
ಅನುವಾದ
ವಿದುರನೇ! ಹೀಗೆ ವಿವಾಹಮಾಡಿಕೊಂಡ ಆ ಮಹರ್ಷಿಗಳೆಲ್ಲರೂ ಕರ್ದಮರ ಅನುಮತಿಯನ್ನು ಪಡೆದು ಪರಮಾನಂದದಿಂದ ತಮ್ಮ-ತಮ್ಮ ಆಶ್ರಮಗಳಿಗೆ ಹೊರಟುಹೋದರು.॥25॥
(ಶ್ಲೋಕ - 26)
ಮೂಲಮ್
ಸ ಚಾವತೀರ್ಣಂ ತ್ರಿಯುಗಮಾಜ್ಞಾಯ ವಿಬುಧರ್ಷಭಮ್ ।
ವಿವಿಕ್ತ ಉಪಸಂಗಮ್ಯ ಪ್ರಣಮ್ಯ ಸಮಭಾಷತ ॥
ಅನುವಾದ
ದೇವಾಧಿದೇವನಾದ ಸಾಕ್ಷಾತ್ ಶ್ರೀಹರಿಯೇ ತಮ್ಮ ಮನೆಯಲ್ಲಿ ಅವತರಿಸಿರುವುದನ್ನು ಗಮನಿಸಿ ಕರ್ದಮರು ಏಕಾಂತದಲ್ಲಿ ಅವನ ಬಳಿಗೆ ಹೋಗಿ, ಅವನಿಗೆ ನಮಸ್ಕರಿಸಿ ಇಂತೆಂದರು.॥26॥
(ಶ್ಲೋಕ - 27)
ಮೂಲಮ್
ಅಹೋ ಪಾಪಚ್ಯಮಾನಾನಾಂ ನಿರಯೇ ಸ್ವೈರಮಂಗಲೈಃ ।
ಕಾಲೇನ ಭೂಯಸಾ ನೂನಂ ಪ್ರಸೀದಂತೀಹ ದೇವತಾಃ ॥
ಅನುವಾದ
ಆಹಾ ! ನನ್ನದು ಎಂತಹ ಪುಣ್ಯ ! ತಮ್ಮ ಪಾಪಕರ್ಮಗಳ ಫಲವಾಗಿ ಈ ದುಃಖಮಯ ಪ್ರಪಂಚದಲ್ಲಿ ನಾನಾ ಪ್ರಕಾರದ ಪೀಡೆಗಳನ್ನು ಅನುಭವಿಸುತ್ತಿರುವ ಮನುಷ್ಯರ ಮೇಲೆ ದೇವತೆಗಳು ಪ್ರಸನ್ನರಾಗಬೇಕಾದರೆ ಬಹಳ ಸಮಯಬೇಕು. ॥ 27 ॥
(ಶ್ಲೋಕ - 28)
ಮೂಲಮ್
ಬಹುಜನ್ಮವಿಪಕ್ವೇನ ಸಮ್ಯಗ್ಯೋಗಸಮಾಧಿನಾ ।
ದ್ರಷ್ಟುಂ ಯತಂತೇ ಯತಯಃ ಶೂನ್ಯಾಗಾರೇಷು ಯತ್ಪದಮ್ ॥
(ಶ್ಲೋಕ - 29)
ಮೂಲಮ್
ಸ ಏವ ಭಗವಾನದ್ಯ ಹೇಲನಂ ನಗಣಯ್ಯ ನಃ ।
ಗೃಹೇಷು ಜಾತೋ ಗ್ರಾಮ್ಯಾಣಾಂ ಯಃ ಸ್ವಾನಾಂ ಪಕ್ಷಪೋಷಣಃ ॥
ಅನುವಾದ
ಆದರೆ ಯಾರ ಸ್ವರೂಪವನ್ನು ಯೋಗಿಜನರು ಅನೇಕ ಜನ್ಮಗಳ ಸಾಧನೆಯಿಂದ ಸುದೃಢವಾದ ಸಮಾಧಿಯ ಮೂಲಕ ಏಕಾಂತದಲ್ಲಿ ನೋಡಲು ಪ್ರಯತ್ನಿಸುವರೋ ಅಂತಹ ತನ್ನ ಭಕ್ತರನ್ನು ರಕ್ಷಿಸು ತ್ತಿರುವ ಶ್ರೀಹರಿಯು ನಮ್ಮಂತಹ ವಿಷಯಲೋಲುಪರ ಮೂಲಕ ಆಗುವ ತನ್ನ ಅವಜ್ಞತೆಯನ್ನು ಸ್ವಲ್ಪವೂ ಲೆಕ್ಕಿಸದೆ ಇಂದು ನಮ್ಮ ಮನೆಯಲ್ಲಿ ಅವತರಿಸಿದ್ದಾನಲ್ಲ!॥28-29॥
(ಶ್ಲೋಕ - 30)
ಮೂಲಮ್
ಸ್ವೀಯಂ ವಾಕ್ಯಮೃತಂ ಕರ್ತುಮವತೀರ್ಣೋಸಿ ಮೇ ಗೃಹೇ ।
ಚಿಕೀರ್ಷುರ್ಭಗವಾನ್ ಜ್ಞಾನಂ ಭಕ್ತಾನಾಂ ಮಾನವರ್ಧನಃ ॥
ಅನುವಾದ
ಸ್ವಾಮಿಯೇ ! ನೀನು ನಿಜವಾಗಿಯೂ ನಿನ್ನ ಭಕ್ತರ ಮಾನವನ್ನು ಹೆಚ್ಚಿಸುವವ ನಾಗಿರುವೆ. ನೀನು ನಿನ್ನ ವಾಕ್ಯವನ್ನು ಸತ್ಯವಾಗಿಸಲೋಸುಗ ಮತ್ತು ಸಾಂಖ್ಯಯೋಗವನ್ನು ಉಪದೇಶಮಾಡುವುದಕ್ಕಾಗಿಯೇ ನಮ್ಮಲ್ಲಿ ಅವತರಿಸಿರುವೆ.॥30॥
(ಶ್ಲೋಕ - 31)
ಮೂಲಮ್
ತಾನ್ಯೇವ ತೇಭಿರೂಪಾಣಿ ರೂಪಾಣಿ ಭಗವಂಸ್ತವ ।
ಯಾನಿ ಯಾನಿ ಚ ರೋಚಂತೇ ಸ್ವಜನಾನಾಮರೂಪಿಣಃ ॥
ಅನುವಾದ
ಭಗವಂತಾ ! ನೀನು ಪ್ರಾಕೃತರೂಪ ರಹಿತನಾಗಿರುವೆ. ನಿನ್ನ ಚತುರ್ಭುಜಾದಿ ಅಲೌಕಿಕ ರೂಪಗಳೇ ನಿನಗೆ ಯೋಗ್ಯವಾಗಿವೆ. ಆದರೆ ನಿನ್ನ ಸ್ವಜನರಾದ ಭಕ್ತರಿಗೆ ರುಚಿ ಸುವ ಮನುಷ್ಯರೂಪಗಳೇ ನಿನಗೂ ಪ್ರಿಯವಾಗಿ ಅವನ್ನು ಧರಿಸುತ್ತೀಯೆ.॥31॥
(ಶ್ಲೋಕ - 32)
ಮೂಲಮ್
ತ್ವಾಂ ಸೂರಿಭಿಸ್ತತ್ತ್ವಬುಭುತ್ಸಯಾದ್ಧಾ
ಸದಾಭಿವಾದಾರ್ಹಣಪಾದಪೀಠಮ್ ।
ಐಶ್ವರ್ಯವೈರಾಗ್ಯಯಶೋವಬೋಧ-
ವೀರ್ಯಶ್ರಿಯಾ ಪೂರ್ತ್ತಮಹಂ ಪ್ರಪದ್ಯೇ ॥
ಅನುವಾದ
ನಿನ್ನ ಪಾದಪೀಠವು ತತ್ತ್ವಜ್ಞಾನೇಚ್ಛು ಗಳಾದ ವಿದ್ವಾಂಸರಿಂದ ಸರ್ವದಾ ವಂದನೀಯವಾಗಿದೆ. ಹಾಗೂ ನೀನು ಐಶ್ವರ್ಯ, ವೈರಾಗ್ಯ, ಯಶ, ಜ್ಞಾನ, ವೀರ್ಯ, ಶ್ರೀ ಹೀಗೆ ಆರು ಐಶ್ವರ್ಯಗಳಿಂದ ಪೂರ್ಣನಾಗಿರುವೆ. ನಾನು ನಿನಗೆ ಶರಣಾಗಿದ್ದೇನೆ.॥32॥
(ಶ್ಲೋಕ - 33)
ಮೂಲಮ್
ಪರಂ ಪ್ರಧಾನಂ ಪುರುಷಂ ಮಹಾಂತಂ
ಕಾಲಂ ಕವಿಂ ತ್ರಿವೃತಂ ಲೋಕಪಾಲಮ್ ।
ಆತ್ಮಾನುಭೂತ್ಯಾನುಗತಪ್ರಪಂಚಂ
ಸ್ವಚ್ಛಂದಶಕ್ತಿಂ ಕಪಿಲಂ ಪ್ರಪದ್ಯೇ ॥
ಅನುವಾದ
ಭಗವಂತನೇ ! ನೀನು ಸಾಕ್ಷಾತ್ ಪರ ಬ್ರಹ್ಮನಾಗಿರುವೆ. ಎಲ್ಲ ಶಕ್ತಿಗಳು ನಿನ್ನ ಅಧೀನವಾಗಿವೆ. ಪ್ರಕೃತಿ, ಪುರುಷ, ಮಹತ್ತತ್ತ್ವ, ಕಾಲ, ತ್ರಿವಿಧ ಅಹಂಕಾರ, ಸಮಸ್ತ ಲೋಕಗಳು ಮತ್ತು ಲೋಕಪಾಲರ ರೂಪದಲ್ಲಿ ನೀನೇ ಪ್ರಕಟನಾಗಿರುವೆ. ಸರ್ವಜ್ಞ ಪರಮಾತ್ಮನಾದ ನೀನೇ ಈ ಸಮಸ್ತ ಪ್ರಪಂಚವನ್ನು ತನ್ನ ಚೈತನ್ಯಶಕ್ತಿಯ ಮೂಲಕ ತನ್ನಲ್ಲಿ ಲೀನಗೊಳಿಸಿಕೊಳ್ಳುವೆ. ಆದ್ದರಿಂದ ಇವೆಲ್ಲವುಗಳಿಂದಲೂ ನೀನು ಅತೀತನಾಗಿರುವೆ. ಇಂತಹ ಭಗವಾನ್ ಕಪಿಲನಾದ ನಿನ್ನನ್ನು ನಾನು ಶರಣು ಹೊಂದುತ್ತೇನೆ.॥33॥
(ಶ್ಲೋಕ - 34)
ಮೂಲಮ್
ಆ ಸ್ಮಾಭಿಪೃಚ್ಛೇದ್ಯ ಪತಿಂ ಪ್ರಜಾನಾಂ
ತ್ವಯಾವತೀರ್ಣಾರ್ಣ ಉತಾಪ್ತಕಾಮಃ ।
ಪರಿವ್ರಜತ್ಪದವೀಮಾಸ್ಥಿತೋಹಂ
ಚರಿಷ್ಯೇ ತ್ವಾಂ ಹೃದಿ ಯುಂಜನ್ವಿಶೋಕಃ ॥
ಅನುವಾದ
ಸ್ವಾಮಿ! ನಿನ್ನ ಕೃಪೆಯಿಂದ ನಾನು ಮೂರೂ ಋಣಗಳಿಂದ ಮುಕ್ತನಾಗಿರುವೆ. ನನ್ನ ಎಲ್ಲ ಮನೋರಥಗಳೂ ಪೂರ್ಣವಾದುವು. ಇನ್ನು ನಾನು ಸಂನ್ಯಾಸಮಾರ್ಗವನ್ನು ಹಿಡಿದು ನಿನ್ನನ್ನೇ ಚಿಂತಿಸುತ್ತಾ ಶೋಕರಹಿತನಾಗಿ ಸಂಚರಿಸುವೆನು. ನೀನು ಸಮಸ್ತ ಪ್ರಜೆಗಳ ಒಡೆಯನಾಗಿರುವೆ. ಆದ್ದರಿಂದ ಇದಕ್ಕಾಗಿ ನಿನ್ನ ಆಜ್ಞೆ-ಅನುಮತಿಯನ್ನು ಪ್ರಾರ್ಥಿಸುತ್ತೇನೆ.॥34॥
(ಶ್ಲೋಕ - 35)
ಮೂಲಮ್ (ವಾಚನಮ್)
ಶ್ರೀಭಗವಾನುವಾಚ
ಮೂಲಮ್
ಮಯಾ ಪ್ರೋಕ್ತಂ ಹಿ ಲೋಕಸ್ಯ ಪ್ರಮಾಣಂ ಸತ್ಯಲೌಕಿಕೇ ।
ಅಥಾಜನಿ ಮಯಾ ತುಭ್ಯಂ ಯದವೋಚಮೃತಂ ಮುನೇ ॥
ಅನುವಾದ
ಶ್ರೀಭಗವಂತನೆಂದನು ಎಲೈ ಮುನೀಂದ್ರನೇ ! ವೈದಿಕ ಮತ್ತು ಲೌಕಿಕ ಎಲ್ಲ ಕರ್ಮಗಳಲ್ಲಿ ಪ್ರಪಂಚಕ್ಕಾಗಿ ನಾನು ಹೇಳಿ ದುದೇ ಪ್ರಮಾಣವಾಗಿದೆ. ಅದಕ್ಕಾಗಿ ‘ನಾನು ನಿಮ್ಮಲ್ಲಿ ಅವತರಿ ಸುವೆ’ ಎಂದು ಹೇಳಿದುದನ್ನು ಸತ್ಯವಾಗಿಸಲೆಂದೇ ನಾನು ಇಲ್ಲಿ ಅವತರಿಸಿರುವೆನು.॥35॥
(ಶ್ಲೋಕ - 36)
ಮೂಲಮ್
ಏತನ್ಮೇ ಜನ್ಮ ಲೋಕೇಸ್ಮಿನ್ಮುಮುಕ್ಷೂಣಾಂ ದುರಾಶಯಾತ್ ।
ಪ್ರಸಂಖ್ಯಾನಾಯ ತತ್ತ್ವಾನಾಂ ಸಮ್ಮತಾಯಾತ್ಮದರ್ಶನೇ ॥
ಅನುವಾದ
ಅಂತೆಯೇ ಲಿಂಗಶರೀರದಿಂದ ಬಿಡುಗಡೆಹೊಂದುವ ಬಯಕೆಯುಳ್ಳ ಮುನಿಗಳಿಗೆ ಆತ್ಮ ದರ್ಶನಕ್ಕೆ ಉಪಯೋಗವಾಗುವ ಪ್ರಕೃತಿಯೇ ಮುಂತಾದ ತತ್ತ್ವಗಳನ್ನು ವಿವೇಚನೆ ಮಾಡುವುದಕ್ಕಾಗಿಯೂ ನನ್ನ ಈ ಅವತಾರವಾಗಿದೆ.॥36॥
(ಶ್ಲೋಕ - 37)
ಮೂಲಮ್
ಏಷ ಆತ್ಮಪಥೋವ್ಯಕ್ತೋ ನಷ್ಟಃ ಕಾಲೇನ ಭೂಯಸಾ ।
ತಂ ಪ್ರವರ್ತಯಿತುಂ ದೇಹಮಿಮಂ ವಿದ್ಧಿ ಮಯಾ ಭೃತಮ್ ॥
ಅನುವಾದ
ಆತ್ಮಜ್ಞಾನದ ಸೂಕ್ಷ್ಮವಾದ ಈ ಮಾರ್ಗವು ಬಹಳ ಕಾಲ ದಿಂದಲೂ ಲುಪ್ತವಾಗಿಬಿಟ್ಟಿದೆ. ಅದನ್ನು ಮತ್ತೆ ಪ್ರವರ್ತನೆ ಮಾಡು ವುದಕ್ಕಾಗಿಯೇ ನಾನು ಈ ಶರೀರವನ್ನು ಧರಿಸಿರುವೆನು ಎಂದು ತಿಳಿ.॥37॥
(ಶ್ಲೋಕ - 38)
ಮೂಲಮ್
ಗಚ್ಛ ಕಾಮಂ ಮಯಾ ಪೃಷ್ಟೋ ಮಯಿ ಸಂನ್ಯಸ್ತಕರ್ಮಣಾ ।
ಜಿತ್ವಾ ಸುದುರ್ಜಯಂ ಮೃತ್ಯುಮಮೃತತ್ವಾಯ ಮಾಂ ಭಜ ॥
ಅನುವಾದ
ಮುನಿವರ್ಯನೇ ! ನಾನು ಅನುಮತಿಯನ್ನು ನೀಡಿರುವೆನು. ನೀನು ನಿನ್ನ ಇಷ್ಟಾನುಸಾರವಾಗಿ ಹೋಗಬಹುದು. ಸಮಸ್ತ ಕರ್ಮಗಳನ್ನು ನನ್ನಲ್ಲಿ ಸಮರ್ಪಣೆಮಾಡುತ್ತಾ, ದುರ್ಜಯವಾದ ಮೃತ್ಯುವನ್ನು ಗೆದ್ದುಕೊಂಡು ಮೋಕ್ಷವನ್ನು ಪಡೆಯುವು ದಕ್ಕಾಗಿ ನನ್ನನ್ನು ಭಜಿಸುತ್ತಾ ಇರು.॥38॥
(ಶ್ಲೋಕ - 39)
ಮೂಲಮ್
ಮಾಮಾತ್ಮಾನಂ ಸ್ವಯಂಜ್ಯೋತಿಃ ಸರ್ವಭೂತಗುಹಾಶಯಮ್ ।
ಆತ್ಮನ್ಯೇವಾತ್ಮನಾ ವೀಕ್ಷ್ಯ ವಿಶೋಕೋಭಯಮೃಚ್ಛಸಿ ॥
ಅನುವಾದ
ನಾನು ಸ್ವಯಂ ಪ್ರಕಾಶನೂ, ಸಮಸ್ತ ಜೀವರ ಅಂತಃಕರಣದಲ್ಲಿ ವಾಸಿಸುವ ಪರಮಾತ್ಮನೇ ಆಗಿರುವೆ. ಆದ್ದರಿಂದ ನೀನು ವಿಶುದ್ಧಬುದ್ಧಿಯ ಮೂಲಕ ನಿನ್ನ ಅಂತಃಕರಣದಲ್ಲಿ ನನ್ನನ್ನು ಸಾಕ್ಷಾತ್ಕರಿಸಿಕೊಂಡಾಗ ಎಲ್ಲ ರೀತಿಯ ಶೋಕಗಳಿಂದ ಬಿಡುಗಡೆಹೊಂದಿ ನಿರ್ಭಯಪದ (ಮೋಕ್ಷ) ವನ್ನು ಪಡೆದುಕೊಳ್ಳುವೆ.॥39॥
(ಶ್ಲೋಕ - 40)
ಮೂಲಮ್
ಮಾತ್ರ ಆಧ್ಯಾತ್ಮಿಕೀಂ ವಿದ್ಯಾಂ ಶಮನೀಂ ಸರ್ವಕರ್ಮಣಾಮ್ ।
ವಿತರಿಷ್ಯೇ ಯಯಾ ಚಾಸೌ ಭಯಂ ಚಾತಿತರಿಷ್ಯತಿ ॥
ಅನುವಾದ
ತಾಯಿಯಾದ ದೇವ ಹೂತಿಗೂ ನಾನು ಸಮಸ್ತ ಕರ್ಮಗಳಿಂದ ಬಿಡುಗಡೆಹೊಂದುವ ಆತ್ಮಜ್ಞಾನವನ್ನು ಕರುಣಿಸುವೆನು. ಅದರಿಂದ ಅವಳು ಈ ಸಂಸಾರ ಭಯದಿಂದ ಪಾರಾಗಿಹೋಗುವಳು.॥40॥
(ಶ್ಲೋಕ - 41)
ಮೂಲಮ್ (ವಾಚನಮ್)
ಮೈತ್ರೇಯ ಉವಾಚ
ಮೂಲಮ್
ಏವಂ ಸಮುದಿತಸ್ತೇನ ಕಪಿಲೇನ ಪ್ರಜಾಪತಿಃ ।
ದಕ್ಷಿಣೀಕೃತ್ಯ ತಂ ಪ್ರೀತೋ ವನಮೇವ ಜಗಾಮ ಹ ॥
ಅನುವಾದ
ಶ್ರೀಮೈತ್ರೇಯರು ಹೇಳುತ್ತಾರೆ ಭಗವಾನ್ ಕಪಿಲನು ಹೀಗೆ ಹೇಳಿದೊಡನೆ ಪ್ರಜಾಪತಿಯಾದ ಕರ್ದಮರು ಅವನನ್ನು ಪ್ರದಕ್ಷಿಣೆ ಗೈದು ಸಂತೋಷದಿಂದ ಕಾಡಿಗೆ ಹೊರಟುಹೋದರು.॥41॥
(ಶ್ಲೋಕ - 42)
ಮೂಲಮ್
ವ್ರತಂ ಸ ಆಸ್ಥಿತೋ ವೌನಮಾತ್ಮೈಕಶರಣೋ ಮುನಿಃ ।
ನಿಃಸಂಗೋ ವ್ಯಚರತ್ಕ್ಷೋಣೀಮನಗ್ನಿರನಿಕೇತನಃ ॥
ಅನುವಾದ
ಅಲ್ಲಿ ಅಹಿಂಸಾಮಯ ಸಂನ್ಯಾಸಧರ್ಮವನ್ನು ಪಾಲಿಸುತ್ತಾ ಅವರು ಏಕಮಾತ್ರ ಶ್ರೀಭಗವಂತನಲ್ಲಿ ಶರಣಾದರು. ಬಳಿಕ ಅಗ್ನಿ ಯನ್ನೂ, ಆಶ್ರಮವನ್ನೂ ತ್ಯಜಿಸಿ ನಿಃಸಂಗಭಾವದಿಂದ ಭೂಮಿಯಲ್ಲಿ ಸಂಚರಿಸತೊಡಗಿದರು. ॥42॥
(ಶ್ಲೋಕ - 43)
ಮೂಲಮ್
ಮನೋ ಬ್ರಹ್ಮಣಿ ಯುಂಜಾನೋ ಯತ್ತತ್ಸದಸತಃ ಪರಮ್ ।
ಗುಣಾವಭಾಸೇ ವಿಗುಣ ಏಕಭಕ್ತ್ಯಾನುಭಾವಿತೇ ॥
ಅನುವಾದ
ಯಾವಾತನು ಕಾರ್ಯ ಕಾರಣದಿಂದ ಅತೀತವಾಗಿರುವನೋ, ಸತ್ತ್ವಾದಿ ತ್ರಿಗುಣಗಳ ಪ್ರಕಾಶಕನೂ, ಗುಣಾತೀತನೂ, ಅನನ್ಯ ಭಕ್ತಿಯಿಂದಲೇ ಪ್ರತ್ಯಕ್ಷ ನಾಗುವನೋ ಆ ಪರಬ್ರಹ್ಮನಲ್ಲಿ ಅವರು ತಮ್ಮ ಮನವನ್ನು ತೊಡಗಿಸಿದರು.॥43॥
(ಶ್ಲೋಕ - 44)
ಮೂಲಮ್
ನಿರಹಂಕೃತಿರ್ನಿರ್ಮಮಶ್ಚ ನಿರ್ದ್ವಂದ್ವಃ ಸಮದೃಕ್ಸ್ವದೃಕ್ ।
ಪ್ರತ್ಯಕ್ಪ್ರಶಾಂತಧೀರ್ಧೀರಃ ಪ್ರಶಾಂತೋರ್ಮಿರಿವೋದಧಿಃ ॥
ಅನುವಾದ
ಅವರು ಅಹಂಕಾರ, ಮಮತೆ ಮತ್ತು ಸುಖ-ದುಃಖಾದಿ ದ್ವಂದ್ವಗಳಿಂದ ಬಿಡುಗಡೆಹೊಂದಿ, ಸಮದರ್ಶಿಯಾಗಿ, ಎಲ್ಲದರಲ್ಲಿ ತನ್ನ ಆತ್ಮವನ್ನೇ ನೋಡತೊಡಗಿದರು. ಅವರ ಬುದ್ಧಿ ಅಂತ ರ್ಮುಖಿಯೂ, ಶಾಂತವೂ ಆಯಿತು. ಆಗ ಧೀರರಾದ ಕರ್ದ ಮರು ಪ್ರಶಾಂತವೂ, ಗಂಭೀರವೂ ಆದ ಸಮುದ್ರದಂತೆ ಕಂಡು ಬರುತ್ತಿದ್ದರು.॥44॥
(ಶ್ಲೋಕ - 45)
ಮೂಲಮ್
ವಾಸುದೇವೇ ಭಗವತಿ ಸರ್ವಜ್ಞೇ ಪ್ರತ್ಯಗಾತ್ಮನಿ ।
ಪರೇಣ ಭಕ್ತಿಭಾವೇನ ಲಬ್ಧಾತ್ಮಾ ಮುಕ್ತಬಂಧನಃ ॥
ಅನುವಾದ
ಪರಮ ಭಕ್ತಿಭಾವದ ಮೂಲಕ ಸರ್ವಾಂತ ರ್ಯಾಮಿಯೂ, ಸರ್ವಜ್ಞನೂ ಆದ ಶ್ರೀವಾಸುದೇವನಲ್ಲಿ ಚಿತ್ತವು ಸ್ಥಿರವಾದ್ದರಿಂದ ಅವರು ಎಲ್ಲ ಬಂಧನಗಳಿಂದಲೂ ಮುಕ್ತರಾಗಿ ಹೋದರು.॥45॥
(ಶ್ಲೋಕ - 46)
ಮೂಲಮ್
ಆತ್ಮಾನಂ ಸರ್ವಭೂತೇಷು ಭಗವಂತಮವಸ್ಥಿತಮ್ ।
ಅಪಶ್ಯತ್ಸರ್ವಭೂತಾನಿ ಭಗವತ್ಯಪಿ ಚಾತ್ಮನಿ ॥
ಅನುವಾದ
ಸಮಸ್ತ ಪ್ರಾಣಿಗಳಲ್ಲಿ ತನ್ನ ಆತ್ಮಸ್ವರೂಪಿ ಶ್ರೀಹರಿಯನ್ನು ಮತ್ತು ಸಮಸ್ತಪ್ರಾಣಿಗಳನ್ನು ಆತ್ಮಸ್ವರೂಪ ಶ್ರೀಭಗ ವಂತನಲ್ಲಿ ಇರುವುದನ್ನು ನೋಡತೊಡಗಿದರು. ॥46॥
(ಶ್ಲೋಕ - 47)
ಮೂಲಮ್
ಇಚ್ಛಾದ್ವೇಷವಿಹೀನೇನ ಸರ್ವತ್ರ ಸಮಚೇತಸಾ ।
ಭಗವದ್ಭಕ್ತಿಯುಕ್ತೇನ ಪ್ರಾಪ್ತಾ ಭಾಗವತೀ ಗತಿಃ ॥
ಅನುವಾದ
ಹೀಗೆ ಇಚ್ಛಾ-ದ್ವೇಷಗಳಿಂದ ರಹಿತರಾಗಿ ಸರ್ವತ್ರ ಸಮಬುದ್ಧಿ ಮತ್ತು ಭಗವದ್ಭಕ್ತಿಯಿಂದ ಸಂಪನ್ನರಾದ ಶ್ರೀಕರ್ದಮರು ಭಗವಂತನ ಪರಮಪದವನ್ನು ಪಡೆದುಕೊಂಡರು.॥47॥
ಅನುವಾದ (ಸಮಾಪ್ತಿಃ)
ಇಪ್ಪತ್ತನಾಲ್ಕನೆಯ ಅಧ್ಯಾಯವು ಮುಗಿಯಿತು. ॥24॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ತೃತೀಯಸ್ಕಂಧೇ ಕಾಪಿಲೇಯೋಪಾಖ್ಯಾನೇ ಚತುರ್ವಿಂಶೋಽಧ್ಯಾಯಃ ॥24॥