[ಇಪ್ಪತ್ತಮೂರನೆಯ ಅಧ್ಯಾಯ]
ಭಾಗಸೂಚನಾ
ಕರ್ದಮ-ದೇವಹೂತಿಯರ ವಿಹಾರ
(ಶ್ಲೋಕ - 1)
ಮೂಲಮ್ (ವಾಚನಮ್)
ಮೈತ್ರೇಯ ಉವಾಚ
ಮೂಲಮ್
ಪಿತೃಭ್ಯಾಂ ಪ್ರಸ್ಥಿತೇ ಸಾಧ್ವೀ ಪತಿಮಿಂಗಿತಕೋವಿದಾ ।
ನಿತ್ಯಂ ಪರ್ಯಚರತ್ಪ್ರೀತ್ಯಾ ಭವಾನೀವ ಭವಂ ಪ್ರಭುಮ್ ॥
ಅನುವಾದ
ಶ್ರೀಮೈತ್ರೇಯರು ಹೇಳುತ್ತಾರೆ ಎಲೈ ವಿದುರನೇ ! ತಂದೆ-ತಾಯಿಗಳು ಹೊರಟುಹೋದ ಬಳಿಕ ಪತಿಯ ಇಂಗಿತವನ್ನು ತಿಳಿಯುವುದರಲ್ಲಿ ಕುಶಲೆಯಾದ, ಸಾಧ್ವೀಮಣಿ ದೇವಹೂತಿಯು ಶ್ರೀಪಾರ್ವತೀದೇವಿಯು ಪರಶಿವನನ್ನು ಪೂಜಿಸುವಂತೆ ಪ್ರತಿ ದಿನವೂ ಪ್ರೇಮಪೂರ್ವಕವಾಗಿ ಪತಿಯಸೇವೆ, ಶುಶ್ರೂಷೆಗಳನ್ನು ಮಾಡತೊಡಗಿದಳು.॥1॥
(ಶ್ಲೋಕ - 2)
ಮೂಲಮ್
ವಿಶ್ರಮ್ಭೇಣಾತ್ಮಶೌಚೇನ ಗೌರವೇಣ ದಮೇನ ಚ ।
ಶುಶ್ರೂಷಯಾ ಸೌಹೃದೇನ ವಾಚಾ ಮಧುರಯಾ ಚ ಭೋಃ ॥
(ಶ್ಲೋಕ - 3)
ಮೂಲಮ್
ವಿಸೃಜ್ಯ ಕಾಮಂ ದಂಭಂ ಚ ದ್ವೇಷಂ ಲೋಭಮಘಂ ಮದಮ್ ।
ಅಪ್ರಮತ್ತೋದ್ಯತಾ ನಿತ್ಯಂ ತೇಜೀಯಾಂಸಮತೋಷಯತ್ ॥
ಅನುವಾದ
ಅವಳು ಕಾಮವಾಸನೆಯನ್ನೂ, ದಂಭವನ್ನೂ, ದ್ವೇಷವನ್ನೂ, ಲೋಭವನ್ನೂ, ಪಾಪವನ್ನೂ, ಮದವನ್ನೂ, ಪರಿತ್ಯಜಿಸಿ ಬಹಳ ಎಚ್ಚರಿಕೆ ಯಿಂದಲೂ, ಆಸಕ್ತಿಯಿಂದಲೂ ಪತಿಸೇವೆಯಲ್ಲಿ ತತ್ಪರಳಾಗಿದ್ದು, ವಿಶ್ವಾಸ, ಪರಿಶುದ್ಧಿ, ಪಾವಿತ್ರ್ಯ, ಗೌರವ, ಸಂಯಮ, ಶುಶ್ರೂಷೆ, ಒಲವು, ಸವಿಮಾತು ಮುಂತಾದ ಸದ್ಗುಣ-ಸದಾಚಾರಗಳಿಂದ ಪರಮ ತೇಜಸ್ವಿಯಾದ ಪತಿದೇವರನ್ನು ಸಂತೋಷಪಡಿಸಿದಳು.॥2-3॥
(ಶ್ಲೋಕ - 4)
ಮೂಲಮ್
ಸ ವೈ ದೇವರ್ಷಿವರ್ಯಸ್ತಾಂ ಮಾನವೀಂ ಸಮನುವ್ರತಾಮ್ ।
ದೈವಾದ್ಗರೀಯಸಃ ಪತ್ಯುರಾಶಾಸಾನಾಂ ಮಹಾಶಿಷಃ ॥
(ಶ್ಲೋಕ - 5)
ಮೂಲಮ್
ಕಾಲೇನ ಭೂಯಸಾ ಕ್ಷಾಮಾಂ ಕರ್ಶಿತಾಂ ವ್ರತಚರ್ಯಯಾ ।
ಪ್ರೇಮಗದ್ಗದಯಾ ವಾಚಾ ಪೀಡಿತಃ ಕೃಪಯಾಬ್ರವೀತ್ ॥
ಅನುವಾದ
ದೇವಹೂತಿಯು ಪತಿಯನ್ನು ದೇವರಿಗಿಂತಲೂ ಹೆಚ್ಚೆಂದು ಭಾವಿಸಿ ಆತನ ಮಹಾಶೀರ್ವಾದಗಳನ್ನು ಬಯಸುತ್ತಾ, ಅವನ ಸೇವೆಯಲ್ಲೇ ತತ್ಪರಳಾಗಿದ್ದಳು. ಈ ಪ್ರಕಾರ ಬಹಳ ದಿನಗಳವರೆಗೂ ತನ್ನನ್ನು ಅನುವರ್ತಿಸುತ್ತಾ, ವ್ರತಾದಿಗಳನ್ನು ಆಚರಿಸಿದ್ದರಿಂದ ಆ ರಾಜಪುತ್ರಿಯು ದುರ್ಬಲಳಾಗಿದ್ದುದನ್ನು ಕಂಡ ಕರ್ದಮರು ಕನಿಕರದಿಂದ ಕೂಡಿ ನೊಂದುಕೊಂಡು ಪ್ರೇಮದಿಂದ ಗದ್ಗದವಾದ ವಾಣಿಯಿಂದ ಆಕೆಗೆ ಇಂತೆಂದರು.॥4-5॥
(ಶ್ಲೋಕ - 6)
ಮೂಲಮ್ (ವಾಚನಮ್)
ಕರ್ದಮ ಉವಾಚ
ಮೂಲಮ್
ತುಷ್ಟೋಹಮದ್ಯ ತವ ಮಾನವಿ ಮಾನದಾಯಾಃ
ಶುಶ್ರೂಷಯಾ ಪರಮಯಾ ಪರಯಾ ಚ ಭಕ್ತ್ಯಾ ।
ಯೋ ದೇಹಿನಾಮಯಮತೀವ ಸುಹೃತ್ಸ್ವದೇಹೋ
ನಾವೇಕ್ಷಿತಃ ಸಮುಚಿತಃ ಕ್ಷಪಿತುಂ ಮದರ್ಥೇ ॥
ಅನುವಾದ
ಕರ್ದಮರು ಹೇಳಿದರು ಮನುನಂದಿನಿ ! ನೀನು ನನ್ನಲ್ಲಿ ತೋರಿದ ಪ್ರೀತ್ಯಾದರಗಳಿಂದ, ಮಾಡಿದ ಪರಮ ಶುಶ್ರೂಷೆ ಯಿಂದ, ಇಟ್ಟ ಪರಮಭಕ್ತಿಯಿಂದ ನಾನು ಬಹಳ ಸಂತೋಷ ವಾಗಿದ್ದೇನೆ. ಎಲ್ಲ ದೇಹಧಾರಿಗಳಿಗೂ ತಮ್ಮ ಶರೀರದಲ್ಲಿ ಅತೀವ ಪ್ರೀತಿ ಹಾಗೂ ಆದರವಿರುತ್ತದೆ. ಆದರೆ ನೀನು ನನ್ನ ಸೇವೆಯ ಮುಂದೆ ಶರೀರವು ಕ್ಷೀಣಿಸುವುದನ್ನು ಲೆಕ್ಕಿಸಲಿಲ್ಲ. ॥ 6 ॥
(ಶ್ಲೋಕ - 7)
ಮೂಲಮ್
ಯೇ ಮೇ ಸ್ವಧರ್ಮನಿರತಸ್ಯ ತಪಃಸಮಾಧಿ-
ವಿದ್ಯಾತ್ಮಯೋಗವಿಜಿತಾ ಭಗವತ್ಪ್ರಸಾದಾಃ ।
ತಾನೇವ ತೇ ಮದನುಸೇವನಯಾವರುದ್ಧಾನ್
ದೃಷ್ಟಿಂ ಪ್ರಪಶ್ಯ ವಿತರಾಮ್ಯಭಯಾನಶೋಕಾನ್ ॥
ಅನುವಾದ
ಅದರಿಂದ ಸ್ವಧರ್ಮಪಾಲನೆಯಾದ ತಪಸ್ಸು, ಸಮಾಧಿ, ಉಪಾಸನೆ, ಯೋಗ ಮುಂತಾದವುಗಳ ಮೂಲಕ ನಾನು ಭಯ-ಶೋಕರಹಿತ ವಾದ ವಿಭೂತಿ (ಸಿದ್ಧಿ)ಗಳನ್ನು ಭಗವದನುಗ್ರಹದಿಂದ ಸಂಪಾದಿಸಿ ರುವೆನು. ಅವುಗಳ ಮೇಲೆ ನೀನು ನಿನ್ನ ಸೇವಾಯೋಗದಿಂದ ಅಧಿಕಾರವನ್ನು ಗಳಿಸಿದ್ದೀಯೆ. ನಾನು ನಿನಗೆ ದಿವ್ಯ ದೃಷ್ಟಿಯನ್ನು ಕೊಡುತ್ತೇನೆ. ಅದರಿಂದ ನೀನು ಅವುಗಳನ್ನು ನೋಡುವವಳಾಗು.॥7॥
(ಶ್ಲೋಕ - 8)
ಮೂಲಮ್
ಅನ್ಯೇ ಪುನರ್ಭಗವತೋ ಭ್ರುವ ಉದ್ವಿಜೃಂಭ-
ವಿಭ್ರಂಶಿತಾರ್ಥರಚನಾಃ ಕಿಮುರುಕ್ರಮಸ್ಯ ।
ಸಿದ್ಧಾಸಿ ಭುಂಕ್ಷ್ವ ವಿಭವಾನ್ನಿಜಧರ್ಮದೋಹಾನ್
ದಿವ್ಯಾನ್ನರೈರ್ದುರಧಿಗಾನ್ನೃಪವಿಕ್ರಿಯಾಭಿಃ ॥
ಅನುವಾದ
ಇತರ ಭೋಗಗಳಾದರೋ ಭಗವಾನ್ ಶ್ರೀಹರಿಯ ಭ್ರುಕುಟಿವಿಲಾಸ ಮಾತ್ರದಿಂದ ನಾಶವಾಗಿ ಹೋಗುತ್ತವೆ. ಆದ್ದ ರಿಂದ ಅವುಗಳು ನಾನು ತೋರುವ ಈ ವಿಭೂತಿಗಳ ಮುಂದೆ ಏನೂ ಅಲ್ಲ. ನೀನು ನನ್ನ ಸೇವೆಯಿಂದ ಕೃತಕೃತ್ಯಳಾಗಿರುವೆ. ಪಾತಿ ವ್ರತ್ಯ ಧರ್ಮವನ್ನು ಪಾಲಿಸಿದ್ದರಿಂದ ನಿನಗೆ ಈ ದಿವ್ಯಭೋಗಗಳು ದೊರಕಿವೆ. ನೀನು ಇವುಗಳನ್ನು ಭೋಗಿಸಬಹುದು. ‘ನಾವು ರಾಜರು, ನಮಗೆ ಎಲ್ಲವೂ ಸುಲಭವಾಗಿದೆ’ ಎಂಬ ದುರಭಿ ಮಾನವೇ ಮುಂತಾದ ವಿಕಾರಗಳು ಇರುವ ಮನುಷ್ಯರಿಗೆ ಈ ದಿವ್ಯಭೋಗಗಳು ದೊರೆಯಲಾರವು.॥8॥
(ಶ್ಲೋಕ - 9)
ಮೂಲಮ್
ಏವಂ ಬ್ರುವಾಣಮಬಲಾಖಿಲಯೋಗಮಾಯಾ-
ವಿದ್ಯಾವಿಚಕ್ಷಣಮವೇಕ್ಷ್ಯ ಗತಾಧಿರಾಸೀತ್ ।
ಸಂಪ್ರಶ್ರಯಪ್ರಣಯವಿಹ್ವಲಯಾ ಗಿರೇಷದ್
ವ್ರೀಡಾವಲೋಕವಿಲಸದ್ಧಸಿತಾನನಾಹ ॥
ಅನುವಾದ
ಕರ್ದಮರು ಹೀಗೆ ಹೇಳಲು, ತನ್ನ ಪತಿಯು ಸಂಪೂರ್ಣವಾದ ಯೋಗಮಾಯೆಗಳಲ್ಲೂ, ವಿದ್ಯೆಗಳಲ್ಲಿಯೂ ನಿಷ್ಣಾತರೆಂದು ಅರಿತು ಆ ಅಬಲೆಯ ಸರ್ವಚಿಂತೆಗಳು ದೂರವಾದುವು. ಆಕೆಯ ಮುಖವು ಸ್ವಲ್ಪ ಸಂಕೋಚದಿಂದ ತುಂಬಿದ ದೃಷ್ಟಿಯಿಂದಲೂ, ಮಧುರವಾದ ಮುಗುಳ್ನಗೆಯಿಂದಲೂ ಅರಳಿತು. ವಿನಯ ಮತ್ತು ಪ್ರೀತಿಯಿಂದ ಗದ್ಗದವಾದ ವಾಣಿಯಿಂದ ತನ್ನ ಪತಿಯಲ್ಲಿ ಹೀಗೆಂದಳು.॥9॥
(ಶ್ಲೋಕ - 10)
ಮೂಲಮ್ (ವಾಚನಮ್)
ದೇವಹೂತಿರುವಾಚ
ಮೂಲಮ್
ರಾದ್ಧಂ ಬತ ದ್ವಿಜವೃಷೈತದಮೋಘಯೋಗ-
ಮಾಯಾಧಿಪೇ ತ್ವಯಿ ವಿಭೋ ತದವೈಮಿ ಭರ್ತಃ ।
ಯಸ್ತೇಭ್ಯಧಾಯಿ ಸಮಯಃ ಸಕೃದಂಗಸಂಗೋ
ಭೂಯಾದ್ಗರೀಯಸಿ ಗುಣಃ ಪ್ರಸವಃ ಸತೀನಾಮ್ ॥
ಅನುವಾದ
ದೇವಹೂತಿಯು ಹೇಳಿದಳು ‘‘ಬ್ರಾಹ್ಮಣಶ್ರೇಷ್ಠರೇ ! ಪತಿದೇವಾ ! ಎಂದಿಗೂ ವಿಲವಾಗದಿರುವ ಯೋಗಶಕ್ತಿ ಮತ್ತು ತ್ರಿಗುಣಾತ್ಮಕವಾದ ಮಾಯೆಯ ಮೇಲೆ ಅಧಿಕಾರ ಹೊಂದಿರುವ ನಿಮಗೆ ಈ ಐಶ್ವರ್ಯಗಳೆಲ್ಲವೂ ಇವೆಯೆಂದು ನಾನು ಬಲ್ಲೆನು. ಆದರೆ ವಿವಾಹ ಸಮಯದಲ್ಲಿ ನೀವು ‘ಗರ್ಭಾಧಾನವಾಗು ವವರೆಗೆ ನಾನು ನಿನ್ನೊಡನೆ ಗೃಹಸ್ಥಸುಖಗಳನ್ನು ಅನುಭವಿಸುವೆನು’ ಎಂದು ಪ್ರತಿಜ್ಞೆ ಮಾಡಿದುದನ್ನು ಈಗ ನೆರವೇರಿಸಿಕೊಡಬೇಕು. ಏಕೆಂದರೆ, ಶ್ರೇಷ್ಠನಾದ ಪತಿಯಿಂದ ಸಂತಾನವನ್ನು ಪಡೆಯುವುದೇ ಪತಿವ್ರತಾ ಸೀಯಳಿಗೆ ಪರಮಲಾಭವು.॥10॥
(ಶ್ಲೋಕ - 11)
ಮೂಲಮ್
ತತ್ರೇತಿಕೃತ್ಯಮುಪಶಿಕ್ಷ ಯಥೋಪದೇಶಂ
ಯೇನೈಷ ಮೇ ಕರ್ಶಿತೋತಿರಿರಂಸಯಾತ್ಮಾ ।
ಸಿದ್ಧ್ಯೇತ ತೇ ಕೃತಮನೋಭವಧರ್ಷಿತಾಯಾ
ದೀನಸ್ತದೀಶ ಭವನಂ ಸದೃಶಂ ವಿಚಕ್ಷ್ವ ॥
ಅನುವಾದ
ನಮ್ಮಿಬ್ಬರ ಸಮಾ ಗಮಕ್ಕೆ ಶಾಸಾನುಸಾರವಾಗಿ ಮಾಡಬೇಕಾದ ಕರ್ತವ್ಯಗಳನ್ನು ತಾವು ಉಪದೇಶ ಮಾಡಿರಿ. ಗಂಧ, ಮಾಲ್ಯ, ಲೇಪನ, ಭೋಜನ ಮುಂತಾದ ಉಪಯುಕ್ತ ಸಾಮಗ್ರಿಗಳನ್ನು ಸೇರಿಸಿರಿ. ನಿಮ್ಮ ಸಂಗ ವನ್ನು ಬಯಸುವ ನನ್ನ ಈ ದುರ್ಬಲವಾದ ಶರೀರವು ನಿಮ್ಮ ಅಂಗ ಸಂಗಕ್ಕೆ ಯೋಗ್ಯವಾಗಬೇಕಲ್ಲ ! ನೀವೇ ಹೆಚ್ಚಿಸಿರುವ ಕಾಮದಿಂದ ನಾನು ಪೀಡಿತಳಾಗಿರುವೆನು. ಸ್ವಾಮಿ ! ಇದಕ್ಕೆ ಯೋಗ್ಯವಾದ ಒಂದು ಭವ್ಯಭವನವೂ ನಿರ್ಮಾಣವಾಗುವಂತೆ ತಾವು ವಿಚಾರ ಮಾಡಿರಿ.’’॥11॥
(ಶ್ಲೋಕ - 12)
ಮೂಲಮ್ (ವಾಚನಮ್)
ಮೈತ್ರೇಯ ಉವಾಚ
ಮೂಲಮ್
ಪ್ರಿಯಾಯಾಃ ಪ್ರಿಯಮನ್ವಿಚ್ಛನ್ಕರ್ದಮೋ ಯೋಗಮಾಸ್ಥಿತಃ ।
ವಿಮಾನಂ ಕಾಮಗಂ ಕ್ಷತ್ತಸ್ತರ್ಹ್ಯೇವಾವಿರಚೀಕರತ್ ॥
ಅನುವಾದ
ಶ್ರೀಮೈತ್ರೇಯರು ಹೇಳುತ್ತಾರೆ ಎಲೈ ವಿದುರನೇ ! ಕೇಳು. ಕರ್ದಮ ಮಹರ್ಷಿಗಳು ತನ್ನ ಇನಿಯಳ ಇಚ್ಛೆಯನ್ನು ಈಡೇರಿಸಲು ಒಡನೆಯೇ ಯೋಗದಲ್ಲಿ ಸ್ಥಿತನಾಗಿ, ಇಷ್ಟಾನುಸಾರವಾಗಿ ಎಲ್ಲೆಡೆ ಸಂಚರಿಸುವಂತಹ ಒಂದು ದಿವ್ಯ ವಿಮಾನವನ್ನು ರಚಿಸಿದರು.॥12॥
(ಶ್ಲೋಕ - 13)
ಮೂಲಮ್
ಸರ್ವಕಾಮದುಘಂ ದಿವ್ಯಂ ಸರ್ವರತ್ನ ಸಮನ್ವಿತಮ್ ।
ಸರ್ವರ್ದ್ಧ್ಯುಪಚಯೋದರ್ಕಂ ಮಣಿಸ್ತಮ್ಭೈರುಪಸ್ಕೃತಮ್ ॥
ಅನುವಾದ
ಆ ವಿಮಾನವು ಎಲ್ಲ ಇಷ್ಟಾರ್ಥಭೋಗಗಳನ್ನು ಈಡೇ ರಿಸುತ್ತಿತ್ತು. ಅದು ಅತ್ಯಂತ ಸುಂದರವಾಗಿದ್ದು, ಎಲ್ಲ ರೀತಿಯ ರತ್ನಗಳಿಂದ ಕೂಡಿದ್ದು, ಎಲ್ಲ ಸಂಪತ್ತುಗಳು ಉತ್ತರೋತ್ತರ ವೃದ್ಧಿಯಿಂದ ಸಂಪನ್ನವಾಗಿತ್ತು. ರತ್ನಮಯ ಕಂಬಗಳಿಂದ ಅತ್ಯಂತ ಶೋಭಾ ಯಮಾನವಾಗಿತ್ತು.॥13॥
(ಶ್ಲೋಕ - 14)
ಮೂಲಮ್
ದಿವ್ಯೋಪಕರಣೋಪೇತಂ ಸರ್ವಕಾಲಸುಖಾವಹಮ್ ।
ಪಟ್ಟಿಕಾಭಿಃ ಪತಾಕಾಭಿರ್ವಿಚಿತ್ರಾಭಿರಲಂಕೃತಮ್ ॥
ಅನುವಾದ
ಅದು ಎಲ್ಲ ಋತುಗಳಲ್ಲಿಯೂ ಸುಖವನ್ನುಂಟುಮಾಡುವ ಅದ್ಭುತವಾದ ವಿಮಾನ. ಎಲ್ಲೆಡೆಗಳಲ್ಲೂ ಬಗೆ-ಬಗೆಯ ದಿವ್ಯಸಾಮಗ್ರಿಗಳಿಂದ ಕೂಡಿದ್ದು, ಚಿತ್ರ-ವಿಚಿತ್ರ ವಾದ ರೇಶ್ಮೆಯ ಧ್ವಜ-ಪತಾಕೆಗಳಿಂದ ಸಿಂಗರಿಸಲ್ಪಟ್ಟಿತ್ತು.॥14॥
(ಶ್ಲೋಕ - 15)
ಮೂಲಮ್
ಸ್ರಗ್ಭಿರ್ವಿಚಿತ್ರಮಾಲ್ಯಾಭಿರ್ಮಂಜುಶಿಂಜತ್ಷಡಂಘ್ರಿಭಿಃ ।
ದುಕೂಲಕ್ಷೌಮಕೌಶೇಯೈರ್ನಾನಾವಸೈರ್ವಿರಾಜಿತಮ್ ॥
ಅನುವಾದ
ಮಧುರವಾಗಿ ಝೇಂಕರಿಸುವ ದುಂಬಿಗಳ ಹಿಂಡಿನಿಂದ ಕೂಡಿದ ಬಣ್ಣ-ಬಣ್ಣದ ಪುಷ್ಪಮಾಲೆಗಳಿಂದಲೂ, ನಾನಾ-ಪ್ರಕಾರದ ರೇಶ್ಮೆ, ನಾರು, ನೂಲುಗಳ ಪಟ್ಟೆ ಮಡಿವಸಗಳಿಂದಲೂ ಅದು ಅತ್ಯಂತ ಶೋಭಾಯಮಾನವಾಗಿತ್ತು.॥15॥
(ಶ್ಲೋಕ - 16)
ಮೂಲಮ್
ಉಪರ್ಯುಪರಿ ವಿನ್ಯಸ್ತನಿಲಯೇಷು ಪೃಥಕ್ಪೃಥಕ್ ।
ಕ್ಷಿಪ್ತೈಃ ಕಶಿಪುಭಿಃ ಕಾಂತಂ ಪರ್ಯಂಕ ವ್ಯಜನಾಸನೈಃ ॥
ಅನುವಾದ
ಒಂದರ ಮೇಲೊಂದು ನಿರ್ಮಿತವಾಗಿದ್ದ ಕೊಠಡಿಗಳಲ್ಲಿ ಬೇರೆ-ಬೇರೆಯಾಗಿ ಹಾಸಲ್ಪಟ್ಟಿದ್ದ ಹಾಸಿಗೆಗಳು, ಮಂಚಗಳು, ಬೀಸಣಿಗೆಗಳು ಮತ್ತು ಆಸನಗಳಿಂದ ಕೂಡಿ ಅತ್ಯಂತ ರಮಣೀಯವಾಗಿತ್ತು.॥16॥
(ಶ್ಲೋಕ - 17)
ಮೂಲಮ್
ತತ್ರ ತತ್ರ ವಿನಿಕ್ಷಿಪ್ತನಾನಾಶಿಲ್ಪೋಪಶೋಭಿತಮ್ ।
ಮಹಾಮರಕತಸ್ಥಲ್ಯಾ ಜುಷ್ಟಂ ವಿದ್ರುಮವೇದಿಭಿಃ ॥
ಅನುವಾದ
ಅಲ್ಲಲ್ಲಿ ಗೋಡೆಗಳಲ್ಲಿ ಕೆತ್ತಲ್ಪಟ್ಟ ಸುಂದರ ಕೆತ್ತನೆ ಶಿಲ್ಪಗಳಿಂದ ಅದು ಅಪೂರ್ವವಾಗಿ ಶೋಭಿಸುತ್ತಿತ್ತು. ಅದರಲ್ಲಿ ಮರಕತಮಣಿಯ ನೆಲವನ್ನೂ, ಕುಳಿತು ಕೊಳ್ಳಲು ಯೋಗ್ಯವಾದ ಹವಳದ ವೇದಿಕೆಗಳನ್ನು ನಿರ್ಮಿಸಿದ್ದರು.॥17॥
(ಶ್ಲೋಕ - 18)
ಮೂಲಮ್
ದ್ವಾಃಸು ವಿದ್ರುಮದೇಹಲ್ಯಾ ಭಾತಂ ವಜ್ರಕಪಾಟವತ್ ।
ಶಿಖರೇಷ್ವಿಂದ್ರನೀಲೇಷು ಹೇಮಕುಂಭೈರಧಿಶ್ರಿತಮ್ ॥
ಅನುವಾದ
ಬಾಗಿಲುಗಳು ಹವಳದ ಹೊಸ್ತಿಲುಗಳಿಂದಲೂ, ವಜ್ರದ ಕವಾಟಗಳಿಂದಲೂ ವಿರಾಜಿಸುತ್ತಿದ್ದವು. ಇಂದ್ರನೀಲಮಣಿಗಳ ಶಿಖರಗಳ ಮೇಲೆ ಚಿನ್ನದ ಕಲಶಗಳು ಹೊಳೆಯುತ್ತಿದ್ದವು.॥18॥
(ಶ್ಲೋಕ - 19)
ಮೂಲಮ್
ಚಕ್ಷುಷ್ಮತ್ಪದ್ಮರಾಗಾಗ್ರ್ಯೈರ್ವಜ್ರಭಿತ್ತಿಷು ನಿರ್ಮಿತೈಃ ।
ಜುಷ್ಟಂ ವಿಚಿತ್ರವೈತಾನೈರ್ಮಹಾರ್ಹೈರ್ಹೇಮತೋರಣೈಃ ॥
ಅನುವಾದ
ಅದರ ವಜ್ರಮಣಿಯ ಗೋಡೆಗಳಲ್ಲಿ ಕೋದ ಥಳ-ಥಳಿಸುವ ಪದ್ಮರಾಗಮಣಿಗಳು ವಿಮಾನದ ಕಣ್ಣುಗಳಂತೆ ಕಂಗೊಳಿಸುತ್ತಿದ್ದವು. ಬಹುಮೂಲ್ಯವಾದ ಚಿತ್ರ-ವಿಚಿತ್ರವಾದ ತೋರಣಗಳಿಂದಲೂ, ಚಿನ್ನದ ಮೇಲ್ಕಟ್ಟುಗಳಿಂದಲೂ ಆ ವಿಮಾನವು ಮನೋಹರವಾಗಿತ್ತು.॥19॥
(ಶ್ಲೋಕ - 20)
ಮೂಲಮ್
ಹಂಸಪಾರಾವತವ್ರಾತೈಸ್ತತ್ರ ತತ್ರ ನಿಕೂಜಿತಮ್ ।
ಕೃತ್ರಿಮಾನ್ ಮನ್ಯಮಾನೈಃ ಸ್ವಾನಧಿರುಹ್ಯಾಧಿರುಹ್ಯ ಚ ॥
ಅನುವಾದ
ಆ ವಿಮಾನದಲ್ಲಿ ಅಲ್ಲಲ್ಲಿ ಅತಿಸುಂದರವಾದ ಕೃತ್ರಿಮ ಹಂಸಗಳೂ, ಪಾರಿವಾಳಗಳೂ ನಿರ್ಮಿಸಿದ್ದರು. ಅವು ಗಳನ್ನು ಸಜೀವಪಕ್ಷಿಗಳೆಂದೇ ಭ್ರಮಿಸಿ ಬಹುಸಂಖ್ಯೆಯಲ್ಲಿ ಜೀವಂತ ಹಂಸಗಳೂ ಪಾರಿವಾಳಗಳೂ ಅವುಗಳ ಬಳಿಯಲ್ಲಿ ಕುಳಿತು ತಮ್ಮ ಧ್ವನಿಗಳಿಂದ ಕೂಗಿಡುತ್ತಿದ್ದವು.॥20॥
(ಶ್ಲೋಕ - 21)
ಮೂಲಮ್
ವಿಹಾರಸ್ಥಾನವಿಶ್ರಾಮಸಂವೇಶಪ್ರಾಂಗಣಾಜಿರೈಃ ।
ಯಥೋಪಜೋಷಂ ರಚಿತೈರ್ವಿಸ್ಮಾಪನಮಿವಾತ್ಮನಃ ॥
ಅನುವಾದ
ಅದರಲ್ಲಿ ಆವಶ್ಯಕತೆಗನುಸಾರ ಆಟದ ಉದ್ಯಾನಗಳೂ, ಶಯನಗೃಹಗಳೂ, ಕುಳಿತು ಕೊಳ್ಳುವ ಸ್ಥಾನಗಳಿಂದಲೂ, ಅಂಗಳಗಳಿಂದಲೂ, ಹಜಾರಗಳಿಂದಲೂ ರಾರಾಜಿಸುತ್ತಿತ್ತು. ಅದನ್ನು ತನ್ನ ಸಿದ್ಧಿಯಿಂದ ನಿರ್ಮಿಸಿದ ಕರ್ದಮರನ್ನು ಬೆರಗುಗೊಳಿಸುವಂತಿತ್ತು ಆ ವಿಮಾನವು. ॥21॥
(ಶ್ಲೋಕ - 22)
ಮೂಲಮ್
ಈದೃಗ್ಗೃಹಂ ತತ್ಪಶ್ಯಂತೀಂ ನಾತಿಪ್ರೀತೇನ ಚೇತಸಾ ।
ಸರ್ವಭೂತಾಶಯಾಭಿಜ್ಞಃ ಪ್ರಾವೋಚತ್ಕರ್ದಮಃ ಸ್ವಯಮ್ ॥
ಅನುವಾದ
ಇಂತಹ ಸುಂದರವಾದ ಭವನವನ್ನು (ವಿಮಾನವನ್ನು) ನೋಡಿದರೂ ದೇವಹೂತಿಗೆ ಮನಸ್ಸಿನಲ್ಲಿ ಪ್ರಸನ್ನತೆ ಉಂಟಾಗಿಲ್ಲ ವೆಂಬುದನ್ನು ಅರಿತು-ಎಲ್ಲ ಭೂತಗಳ ಭಾವನೆಗಳನ್ನು ತಿಳಿಯುವ ಜ್ಞಾನಿಗಳಾದ ಕರ್ದಮರು ತನ್ನ ಇನಿಯಳನ್ನು ಕುರಿತು ಹೇಳಿದರು.॥22॥
(ಶ್ಲೋಕ - 23)
ಮೂಲಮ್
ನಿಮಜ್ಜ್ಯಾಸ್ಮಿನ್ ಹ್ರದೇ ಭೀರು ವಿಮಾನಮಿದಮಾರುಹ ।
ಇದಂ ಶುಕ್ಲಕೃತಂ ತೀರ್ಥಮಾಶಿಷಾಂ ಯಾಪಕಂ ನೃಣಾಮ್ ॥
ಅನುವಾದ
‘ಪ್ರಿಯೇ ! ನೀನು ಈ ಬಿಂದು ಸರೋವರದಲ್ಲಿ ಸ್ನಾನಮಾಡಿ ವಿಮಾನವನ್ನು ಹತ್ತು. ಭಗವಾನ್ ಶ್ರೀಮಹಾವಿಷ್ಣುವಿ ನಿಂದ ನಿರ್ಮಿತವಾದ ಈ ತೀರ್ಥಕ್ಕೆ ಮನುಷ್ಯರ ಸರ್ವಕಾಮನೆಗಳನ್ನು ಈಡೇರಿಸುವ ಶಕ್ತಿಯಿದೆ.’ ॥23॥
(ಶ್ಲೋಕ - 24)
ಮೂಲಮ್
ಸಾ ತದ್ಭರ್ತುಃ ಸಮಾದಾಯ ವಚಃ ಕುವಲಯೇಕ್ಷಣಾ ।
ಸರಜಂ ಬಿಭ್ರತೀ ವಾಸೋ ವೇಣೀಭೂತಾಂಶ್ಚ ಮೂರ್ಧಜಾನ್ ॥
(ಶ್ಲೋಕ - 25)
ಮೂಲಮ್
ಅಂಗಂ ಚ ಮಲಪಂಕೇನ ಸಂಛನ್ನಂ ಶಬಲಸ್ತನಮ್ ।
ಆವಿವೇಶ ಸರಸ್ವತ್ಯಾಃ ಸರಃ ಶಿವಜಲಾಶಯಮ್ ॥
ಅನುವಾದ
ಕಮಲಲೋಚನೆಯಾದ ದೇವಹೂತಿಯು ಪತಿಯ ಮಾತಿ ನಂತೆ ಸರಸ್ವತಿಯ ಪವಿತ್ರಜಲದಿಂದ ತುಂಬಿದ್ದ ಬಿಂದು ಸರೋವರ ವನ್ನು ಪ್ರವೇಶಿಸಿದಳು. ಆ ಸಮಯದಲ್ಲಿ ಆಕೆಯ ಬಟ್ಟೆಗಳು ಮಲಿನವಾಗಿದ್ದವು. ತಲೆಕೂದಲುಗಳು ಅಂಟಿಕೊಂಡು ಜಡೆಕಟ್ಟಿ ದ್ದವು. ದೇಹದಲ್ಲಿ ಕೊಳೆ ತುಂಬಿಕೊಂಡಿತ್ತು. ಸ್ತನಗಳು ಕಾಂತಿಹೀನವಾಗಿದ್ದವು.॥24-25॥
(ಶ್ಲೋಕ - 26)
ಮೂಲಮ್
ಸಾಂತಃಸರಸಿ ವೇಶ್ಮಸ್ಥಾಃ ಶತಾನಿ ದಶ ಕನ್ಯಕಾಃ ।
ಸರ್ವಾಃ ಕಿಶೋರವಯಸೋ ದದರ್ಶೋತ್ಪಲಗಂಧಯಃ ॥
ಅನುವಾದ
ಸರೋವರದಲ್ಲಿ ಮುಳುಗಿದೊಡ ನೆಯೇ ಅದರೊಳಗೆ ಆಕೆಯು ಒಂದು ಭವ್ಯ ಅರಮನೆಯನ್ನೂ, ಅದರೊಳಗೆ ಕಮಲಗಂಧಿಯರಾದ, ಕಿಶೋರಾವಸ್ಥೆಯಲ್ಲಿದ್ದ ಒಂದು ಸಾವಿರ ಕನ್ಯೆಯರನ್ನು ನೋಡಿದಳು.॥26॥
(ಶ್ಲೋಕ - 27)
ಮೂಲಮ್
ತಾಂ ದೃಷ್ಟ್ವಾ ಸಹಸೋತ್ಥಾಯ ಪ್ರೋಚುಃ ಪ್ರಾಂಜಲಯಃ ಸೀಯಃ ।
ವಯಂ ಕರ್ಮಕರೀಸ್ತುಭ್ಯಂ ಶಾಧಿ ನಃ ಕರವಾಮ ಕಿಮ್ ॥
ಅನುವಾದ
ದೇವಹೂತಿಯನ್ನು ಕಂಡೊಡನೆ ಅವರು ಎದ್ದುನಿಂತು ಕೈಜೋಡಿಸಿಕೊಂಡು ‘ನಾವು ನಿಮ್ಮ ದಾಸಿಯರು. ಏನು ಸೇವೆಮಾಡಬೇಕು ? ಅಪ್ಪಣೆಯಾಗಲಿ’ ಎಂದು ಅರಿಕೆಮಾಡಿಕೊಂಡರು.॥27॥
(ಶ್ಲೋಕ - 28)
ಮೂಲಮ್
ಸ್ನಾನೇನ ತಾಂ ಮಹಾರ್ಹೇಣ ಸ್ನಾಪಯಿತ್ವಾ ಮನಸ್ವಿನೀಮ್ ।
ದುಕೂಲೇ ನಿರ್ಮಲೇ ನೂತ್ನೇ ದದುರಸ್ಯೈ ಚ ಮಾನದಾಃ ॥
ಅನುವಾದ
ಎಲೈ ವಿದುರನೇ ! ಸ್ವಾಮಿನಿಗೆ ಸಮ್ಮಾನಕೊಡುವಂತಹ ಆ ಕುಶಲ ರಮಣಿಯರು ಅಮೂಲ್ಯವಾದ ಕಂಪು-ತಂಪುಗಳಿಂದ ಕೂಡಿದ ಚೂರ್ಣ ಮುಂತಾದವುಗಳಿಂದ ಮಿಶ್ರಿತವಾದ ತೀರ್ಥ ಜಲದಿಂದ ಆಕೆಗೆ ಸ್ನಾನಮಾಡಿಸಿ ನಿರ್ಮಲವಾದ ನೂತನ ಪಟ್ಟೆ ಮಡಿಗಳನ್ನು ಉಡಲು ಕೊಟ್ಟರು.॥28॥
(ಶ್ಲೋಕ - 29)
ಮೂಲಮ್
ಭೂಷಣಾನಿ ಪರಾರ್ಧ್ಯಾನಿ ವರೀಯಾಂಸಿ ದ್ಯುಮಂತಿ ಚ ।
ಅನ್ನಂ ಸರ್ವಗುಣೋಪೇತಂ ಪಾನಂ ಚೈವಾಮೃತಾಸವಮ್ ॥
ಅನುವಾದ
ಮತ್ತೆ ಕಾಂತಿಯುತವೂ, ಕಮನೀಯವು ಆದ ಬಹುಮೂಲ್ಯ ಒಡವೆಗಳನ್ನು ತೊಡಲು ಅರ್ಪಿಸಿದರು. ಸರ್ವಗುಣಗಳಿಂದಲೂ ಕೂಡಿದ ಅನ್ನಾಹಾರಗಳನ್ನೂ, ಅಮೃತಕ್ಕೆಣೆಯಾದ ಪಾನೀಯಗಳನ್ನೂ ನೀಡಿದರು.॥29॥
(ಶ್ಲೋಕ - 30)
ಮೂಲಮ್
ಅಥಾದರ್ಶೇ ಸ್ವಮಾತ್ಮಾನಂ ಸ್ರಗ್ವಿಣಂ ವಿರಜಾಂಬರಮ್ ।
ವಿರಜಂ ಕೃತಸ್ವಸ್ತ್ಯಯನಂ ಕನ್ಯಾಭಿರ್ಬಹುಮಾನಿತಮ್ ॥
ಅನುವಾದ
ದೇವಹೂತಿಯು ತಾನು ಬಗೆ-ಬಗೆಯಾದ ಸುಗಂಧಪುಷ್ಪಗಳ ಹಾರಗಳಿಂದಲೂ, ಸ್ವಚ್ಛವಾದ ವಸಗಳಿಂದಲೂ ಅಲಂಕೃತಳಾಗಿರು ವುದನ್ನೂ, ಹಾಗೆಯೇ ತನ್ನ ದೇಹವು ನಿರ್ಮಲಕಾಂತಿಯಿಂದ ಶೋಭಿಸುತ್ತಿರುವುದನ್ನೂ, ಆ ಕನ್ಯೆಯರು ಅತೀವ ಆದರದಿಂದ ತನಗೆ ಮಾಂಗಲಿಕ ಶೃಂಗಾರಮಾಡಿರುವುದನ್ನು ಕನ್ನಡಿಯಲ್ಲಿ ನೋಡಿಕೊಂಡಳು.॥30॥
(ಶ್ಲೋಕ - 31)
ಮೂಲಮ್
ಸ್ನಾತಂ ಕೃತಶಿರಃಸ್ನಾನಂ ಸರ್ವಾಭರಣಭೂಷಿತಮ್ ।
ನಿಷ್ಕಗ್ರೀವಂ ವಲಯಿನಂ ಕೂಜತ್ಕಾಂಚನನೂಪುರಮ್ ॥ 31 ॥
ಅನುವಾದ
ಅವಳನ್ನು ತಲೆಗೆ ಸ್ನಾನಮಾಡಿಸಿ, ಅಂಗಾಂಗಗಳನ್ನು ಅನೇಕ ಅಭರಣಗಳಿಂದ ಅಲಂಕರಿಸಲಾಗಿತ್ತು. ಅವಳ ಕಂಠಕ್ಕೆ ಒಪ್ಪುವ ಸ್ವರ್ಣಹಾರಗಳನ್ನೂ, ರತ್ನಹಾರಗಳನ್ನೂ ಕೈಗಳಿಗೆ ಬಳೆ-ಉಂಗುರಗಳನ್ನು ಕಾಲುಗಳಿಗೆ ಝಣ-ಝಣಿಸುವ ಚಿನ್ನದ ಕಾಲಂದುಗೆಗಳನ್ನು ತೊಡಿಸಿದ್ದರು.॥31॥
(ಶ್ಲೋಕ - 32)
ಮೂಲಮ್
ಶ್ರೋಣ್ಯೋರಧ್ಯಸ್ತಯಾ ಕಾಂಚ್ಯಾ ಕಾಂಚನ್ಯಾ ಬಹುರತ್ನಯಾ ।
ಹಾರೇಣ ಚ ಮಹಾರ್ಹೇಣ ರುಚಕೇನ ಚ ಭೂಷಿತಮ್ ॥
ಅನುವಾದ
ನಡುವಿನಲ್ಲಿ ನವರತ್ನಗಳು ಕೋದ ಸ್ವರ್ಣದ ಒಡ್ಯಾಣದಿಂದಲೂ, ಅಂಗಾಂಗಗಳಲ್ಲಿ ಕುಂಕುಮ-ಕೇಸರಿ ಮುಂತಾದ ಮಂಗಳದ್ರವ್ಯ ಲೇಪನಗಳಿಂದಲೂ ಅವಳು ಅಪೂರ್ವ ಕಾಂತಿಯಿಂದ ಕಂಗೊಳಿಸುತ್ತಿದ್ದಳು.॥32॥
(ಶ್ಲೋಕ - 33)
ಮೂಲಮ್
ಸುದತಾ ಸುಭ್ರುವಾ ಶ್ಲಕ್ಷ್ಣಸ್ನಿಗ್ಧಾಪಾಂಗೇನ ಚಕ್ಷುಷಾ ।
ಪದ್ಮಕೋಶಸ್ಪೃಧಾ ನೀಲೈರಲಕೈಶ್ಚ ಲಸನ್ಮುಖಮ್ ॥
ಅನುವಾದ
ಆಕೆಯ ಮುಖವು ಸುಂದರ ದಂತಪಂಕ್ತಿಗಳಿಂದಲೂ, ಮನೋಹರವಾದ ಹುಬ್ಬುಗಳಿಂದಲೂ, ಕಮಲದ ಮೊಗ್ಗಿನೊಡನೆ ಸ್ಪರ್ಧಿಸುತ್ತಿದೆಯೋ ಎಂಬಂತಿರುವ ಪ್ರೇಮಕಟಾಕ್ಷದಿಂದ ಕಂಗೊಳಿಸುವ ಕಣ್ಣುಗಳಿಂದಲೂ, ಮೋಹಕವಾದ ಮುಂಗು ರುಳುಗಳಿಂದಲೂ, ಬಹು ಅಂದವಾಗಿ ಕಾಣುತ್ತಿತ್ತು.॥33॥
(ಶ್ಲೋಕ - 34)
ಮೂಲಮ್
ಯದಾ ಸಸ್ಮಾರ ಋಷಭಮೃಷೀಣಾಂ ದಯಿತಂ ಪತಿಮ್ ।
ತತ್ರ ಚಾಸ್ತೇ ಸಹ ಸೀಭಿರ್ಯತ್ರಾಸ್ತೇ ಸ ಪ್ರಜಾಪತಿಃ ॥
ಅನುವಾದ
ವಿದುರನೇ ! ದೇವಹೂತಿಯು ತನ್ನ ಪ್ರಿಯಪತಿಯನ್ನು ನೆನೆದೊಡನೆ ತಾನು ತನ್ನ ಗೆಳತಿಯರೊಡನೆ ಪ್ರಜಾಪತಿ ಕರ್ದಮರ ಬಳಿಯಲ್ಲೇ ವಿರಾಜಿಸುತ್ತಿರುವುದನ್ನು ನೋಡಿ ನಲಿದಳು.॥34॥
(ಶ್ಲೋಕ - 35)
ಮೂಲಮ್
ಭರ್ತುಃ ಪುರಸ್ತಾದಾತ್ಮಾನಂ ಸೀಸಹಸ್ರವೃತಂ ತದಾ ।
ನಿಶಾಮ್ಯ ತದ್ಯೋಗಗತಿಂ ಸಂಶಯಂ ಪ್ರತ್ಯಪದ್ಯತ ॥
ಅನುವಾದ
ಆಗ ತಾನು ಸಾವಿರಾರು ಸೀಯರೊಡನೆ ತನ್ನ ಪ್ರಾಣನಾಥನ ಮುಂದೆಯೇ ಇರುವುದನ್ನು ಕಂಡು, ಇದೆಲ್ಲಾ ಆತನ ಯೋಗದ ಪ್ರಭಾವವೆಂದೇ ತಿಳಿದು ಆಕೆಗೆ ತುಂಬಾ ಅಚ್ಚರಿಯಾಯಿತು.॥35॥
(ಶ್ಲೋಕ - 36)
ಮೂಲಮ್
ಸ ತಾಂ ಕೃತಮಲಸ್ನಾನಾಂ ವಿಭ್ರಾಜಂತೀಮಪೂರ್ವವತ್ ।
ಆತ್ಮನೋ ಬಿಭ್ರತೀಂ ರೂಪಂ ಸಂವೀತರುಚಿರಸ್ತನೀಮ್ ॥
(ಶ್ಲೋಕ - 37)
ಮೂಲಮ್
ವಿದ್ಯಾಧರೀಸಹಸ್ರೇಣ ಸೇವ್ಯಮಾನಾಂ ಸುವಾಸಸಮ್ ।
ಜಾತಭಾವೋ ವಿಮಾನಂ ತದಾರೋಹಯದಮಿತ್ರಹನ್ ॥
ಅನುವಾದ
ಶತ್ರುವಿಜಯಿ ವಿದುರನೇ! ದೇವಹೂತಿಯ ದೇಹವು ಸ್ನಾನಾದಿಗಳಿಂದ ಅತ್ಯಂತ ನಿರ್ಮಲವಾಗಿದೆ. ವಿವಾಹಕ್ಕೆ ಮೊದಲಿದ್ದ ರೂಪ-ಸೌಂದರ್ಯದಿಂದ ಅಪೂರ್ವವಾದ ಶೋಭೆಯಿಂದ ಕೂಡಿ ರುವಳು. ಆಕೆಯು ಶುಭ್ರವಾದ ವಸಗಳನ್ನೂ ಧರಿಸಿದ್ದು, ಆಕೆಯ ಸುಂದರ ವಕ್ಷಃಸ್ಥಳಗಳು ಕುಪ್ಪಸದಿಂದ ಮುಚ್ಚಲ್ಪಟ್ಟಿವೆ. ಸಾವಿರಾರು ಮಂದಿ ವಿದ್ಯಾಧರ ಸೀಯರು ಆಕೆಯ ಸೇವೆಯಲ್ಲಿ ತೊಡಗಿರುವರು. ಇದನ್ನು ನೋಡಿ ಸಂತಸಗೊಂಡ ಕರ್ದಮ ಪ್ರಜಾಪತಿಗಳು ಆಕೆಯನ್ನು ಅತ್ಯಂತ ಪ್ರೇಮದಿಂದ ವಿಮಾನಕ್ಕೆ ಹತ್ತಿಸಿದರು.॥36-37॥
(ಶ್ಲೋಕ - 38)
ಮೂಲಮ್
ತಸ್ಮಿನ್ನಲುಪ್ತಮಹಿಮಾ ಪ್ರಿಯಯಾನುರಕ್ತೋ
ವಿದ್ಯಾಧರೀಭಿರುಪಚೀರ್ಣವಪುರ್ವಿಮಾನೇ ।
ಬಭ್ರಾಜ ಉತ್ಕಚಕುಮುದ್ಗಣವಾನಪೀಚ್ಯ-
ಸ್ತಾರಾಭಿರಾವೃತ ಇವೋಡುಪತಿರ್ನಭಃಸ್ಥಃ ॥
ಅನುವಾದ
ಆಗ ಕರ್ದಮರು ತನ್ನ ಪ್ರಿಯೆಯ ವಿಷಯದಲ್ಲಿ ಅನುರಕ್ತರಾಗಿದ್ದರೂ ಅವರ ಮಹಿಮೆಯು (ಮನಸ್ಸು, ಇಂದ್ರಿಯ ಗಳ ಮೇಲಿನ ಹತೋಟಿ) ಕಡಿಮೆಯಾಗಲಿಲ್ಲ. ವಿದ್ಯಾಧರ ಸೀಯರು ಅವರ ಸೇವೆಯನ್ನು ಮಾಡುತ್ತಿದ್ದರು. ಅರಳಿದ ಕುಮುದ ಪುಷ್ಪ ಗಳಿಂದ ತಮ್ಮನ್ನು ಸಿಂಗರಿಸಿಕೊಂಡು ರಾರಾಜಿಸುತ್ತಿದ್ದ ಅವರು ಆಕಾಶದಲ್ಲಿ ನಕ್ಷತ್ರಗಡದಿಂದ ಸುತ್ತುವರಿಯಲ್ಪಟ್ಟ ಚಂದ್ರನಂತೆ ಬೆಳಗುತ್ತಿದ್ದರು.॥38॥
(ಶ್ಲೋಕ - 39)
ಮೂಲಮ್
ತೇನಾಷ್ಟಲೋಕಪವಿಹಾರಕುಲಾಚಲೇಂದ್ರ-
ದ್ರೋಣೀಷ್ವನಂಗಸಖಮಾರುತಸೌಭಗಾಸು ।
ಸಿದ್ಧೈರ್ನುತೋ ದ್ಯುಧುನಿಪಾತಶಿವಸ್ವನಾಸು
ರೇಮೇ ಚಿರಂ ಧನದವಲ್ಲಲನಾವರೂಥೀ ॥
ಅನುವಾದ
ಆ ವಿಮಾನದಲ್ಲಿ ವಾಸಮಾಡುತ್ತಾ ಅವರು ಕುಬೇರನಂತೆ ಮೇರುಪರ್ವತದ ತಪ್ಪಲುಗಳಲ್ಲಿ ದೀರ್ಘ ಕಾಲದ ವರೆಗೆ ವಿಹರಿಸುತ್ತಿದ್ದರು. ಆ ತಪ್ಪಲುಗಳು ಎಂಟು ಲೋಕಪಾಲರ ವಿಹಾರಭೂಮಿಯಾಗಿತ್ತು. ಕಾಮವನ್ನು ಹೆಚ್ಚಿಸುವ ತಂಪು-ಕಂಪು ಗಳಿಂದ ಕೂಡಿದ ಮಂದಮಾರುತವು ಬೀಸುತ್ತಾ ಅಲ್ಲಿ ಸುಖ- ಸೌಂದರ್ಯಗಳನ್ನು ವಿಸ್ತರಿಸುತ್ತಿತ್ತು. ಶ್ರೀಗಂಗೆಯು ಸ್ವರ್ಗದಿಂದ ಧುಮುಕುತ್ತಿದ್ದ ಮಂಗಳಧ್ವನಿಯು ನಿರಂತರ ಪ್ರತಿಧ್ವನಿಸುತ್ತಿತ್ತು. ಆಗಲೂ ಕೂಡ ದಿವ್ಯವಿದ್ಯಾಧರಿಯರು ಅವರ ಸೇವೆಗಾಗಿ ಸಿದ್ಧ ರಾಗಿದ್ದರು. ಸಿದ್ಧರ ಸಮುದಾಯವು ಅವರಿಗೆ ವಂದನೆ ಸಲ್ಲಿಸುತ್ತಿತ್ತು.॥39॥
(ಶ್ಲೋಕ - 40)
ಮೂಲಮ್
ವೈಶ್ರಂಭಕೇ ಸುರಸನೇ ನಂದನೇ ಪುಷ್ಪಭದ್ರಕೇ ।
ಮಾನಸೇ ಚೈತ್ರರಥ್ಯೇ ಚ ಸ ರೇಮೇ ರಾಮಯಾ ರತಃ ॥
ಅನುವಾದ
ಹೀಗೆ ತನ್ನ ಪ್ರಾಣವಲ್ಲಭೆಯೊಡನೆ ಕರ್ದಮರು ವೈಶ್ರಂಭಕ, ಸುರಸನ, ನಂದನ, ಪುಷ್ಪಭದ್ರ, ಚೈತ್ರರಥ ಮುಂತಾದ ಅನೇಕ ದೇವತೋದ್ಯಾನಗಳಲ್ಲಿಯೂ, ಮಾನಸಸರೋವರದಲ್ಲಿಯೂ ಪರಮಾನುರಾಗದಿಂದ ವಿಹರಿಸುತ್ತಿದ್ದರು. ॥40॥
(ಶ್ಲೋಕ - 41)
ಮೂಲಮ್
ಭ್ರಾಜಿಷ್ಣುನಾ ವಿಮಾನೇನ ಕಾಮಗೇನ ಮಹೀಯಸಾ ।
ವೈಮಾನಿಕಾನತ್ಯಶೇತ ಚರಲ್ಲೋಕಾನ್ಯಥಾನಿಲಃ ॥
ಅನುವಾದ
ಇಚ್ಛಾನುಸಾರ ಸಂಚರಿಸುತ್ತಿದ್ದ ಆ ಕಾಂತಿಯುಕ್ತ ಶ್ರೇಷ್ಠವಾದ ವಿಮಾನದಲ್ಲಿ ಕುಳಿತು ವಾಯುವಿನಂತೆ ಎಲ್ಲ ಲೋಕಗಳಲ್ಲಿ ಸಂಚರಿಸುತ್ತಾ ವಿಮಾನ ವಿಹಾರಿಗಳಾದ ದೇವತೆಗಳಿಗಿಂತಲೂ ಹೆಚ್ಚು ಸುಖ-ಸಂಪತ್ತು ಗಳನ್ನು ಅವರು ಅನುಭವಿಸಿದರು.॥41॥
(ಶ್ಲೋಕ - 42)
ಮೂಲಮ್
ಕಿಂ ದುರಾಪಾದನಂ ತೇಷಾಂ ಪುಂಸಾಮುದ್ದಾಮಚೇತಸಾಮ್ ।
ಯೈರಾಶ್ರಿತಸ್ತೀರ್ಥಪದಶ್ಚರಣೋ ವ್ಯಸನಾತ್ಯಯಃ ॥
ಅನುವಾದ
ವಿದುರನೇ ! ಭಗವಂತನ ಭವಭಯಹಾರಿಯಾದ ಪವಿತ್ರ ಪಾದಪದ್ಮಗಳನ್ನು ಆಶ್ರಯಿಸಿರುವ ಸುಕೃತಿಗಳಿಗೆ ಯಾವ ವಸ್ತುವು ಅಥವಾ ಶಕ್ತಿಯು ತಾನೇ ದುರ್ಲಭವಾಗಿದೆ ? ॥42॥
(ಶ್ಲೋಕ - 43)
ಮೂಲಮ್
ಪ್ರೇಕ್ಷಯಿತ್ವಾ ಭುವೋಗೋಲಂ ಪತ್ನ್ಯೈ ಯಾವಾನ್ಸ್ವಸಂಸ್ಥಯಾ ।
ಬಹ್ವಾಶ್ಚರ್ಯಂ ಮಹಾಯೋಗೀ ಸ್ವಾಶ್ರಮಾಯ ನ್ಯವರ್ತತ ॥
ಅನುವಾದ
ಹೀಗೆ ಮಹಾಯೋಗಿಗಳಾದ ಕರ್ದಮರು ತಮ್ಮ ಪ್ರಿಯೆಗೆ ಜಂಬೂದ್ವೀಪವೇ ಮುಂತಾದ ದ್ವೀಪಗಳೂ, ಭಾರತ-ಕಿಂಪುರುಷ ಮುಂತಾದ ವರ್ಷಗಳೂ, ವಿಚಿತ್ರವಾದ ರಚನೆಯಿಂದ ಅತ್ಯಂತ ಆಶ್ಚರ್ಯಕರವಾಗಿ ಕಾಣುತ್ತಿರುವ ಇಡೀ ಭೂಮಂಡಲವನ್ನು ತೋರಿಸಿ ತಮ್ಮ ಆಶ್ರಮಕ್ಕೆ ಹಿಂದಿರುಗಿದರು.॥43॥
(ಶ್ಲೋಕ - 44)
ಮೂಲಮ್
ವಿಭಜ್ಯ ನವಧಾತ್ಮಾನಂ ಮಾನವೀಂ ಸುರತೋತ್ಸುಕಾಮ್ ।
ರಾಮಾಂ ನಿರಮಯನ್ರೇಮೇ ವರ್ಷಪೂಗಾನ್ಮುಹೂರ್ತವತ್ ॥
ಅನುವಾದ
ಮತ್ತೆ ಅವರು ತನ್ನನ್ನು ಒಂಭತ್ತು ರೂಪಗಳಲ್ಲಿ ವಿಭಕ್ತಗೊಳಿಸಿಕೊಂಡು ರತಿ ಸುಖಕ್ಕಾಗಿ ಅತ್ಯಂತ ಉತ್ಸುಕಳಾದ ಮನುಕುಮಾರಿ ದೇವಹೂತಿಯನ್ನು ಆನಂದಪಡಿಸುತ್ತಾ, ಅವಳೊಂದಿಗೆ ಅನೇಕ ವರ್ಷಗಳ ಕಾಲ ವಿಹರಿಸಿದರು. ಆದರೆ ಆ ಅತಿದೀರ್ಘಕಾಲವು ಒಂದು ಮುಹೂರ್ತದಂತೆ ಕಳೆದುಹೋಯಿತು.॥44॥
(ಶ್ಲೋಕ - 45)
ಮೂಲಮ್
ತಸ್ಮಿನ್ವಿಮಾನ ಉತ್ಕೃಷ್ಟಾಂ ಶಯ್ಯಾಂ ರತಿಕರೀಂ ಶ್ರಿತಾ ।
ನ ಚಾಬುಧ್ಯತ ತಂ ಕಾಲಂ ಪತ್ಯಾಪೀಚ್ಯೇನ ಸಂಗತಾ ॥
ಅನುವಾದ
ಆ ವಿಮಾನದಲ್ಲಿ ರತಿಸುಖವನ್ನು ಹೆಚ್ಚಿಸುವ ಅತಿ ಸುಂದರವಾದ ಶಯ್ಯೆಯನ್ನು ಆಶ್ರಯಿಸಿ, ಪರಮ ಸೌಂದರ್ಯನಿಧಿಯಾದ ತನ್ನ ಪ್ರಿಯತಮ ನೊಡನೆ ಇರುತ್ತಿದ್ದ ದೇವಹೂತಿಗೆ ಆ ಕಾಲದ ಪರಿವೆ ಸ್ವಲ್ಪವೂ ಉಂಟಾಗಲಿಲ್ಲ.॥45॥
(ಶ್ಲೋಕ - 46)
ಮೂಲಮ್
ಏವಂ ಯೋಗಾನುಭಾವೇನ ದಂಪತ್ಯೋ ರಮಮಾಣಯೋಃ ।
ಶತಂ ವ್ಯತೀಯುಃ ಶರದಃ ಕಾಮಲಾಲಸಯೋರ್ಮನಾಕ್ ॥
ಅನುವಾದ
ಹೀಗೆ ರಮಿಸುತ್ತಾ ಆ ದಂಪತಿಗಳು ತಮ್ಮ ಯೋಗಬಲದಿಂದ ನೂರಾರುವರ್ಷಗಳ ಕಾಲ ವಿಹರಿಸು ತ್ತಿದ್ದರೂ ಅವರಿಗೆ ಆ ಕಾಲವು ಅತಿ ಸ್ವಲ್ಪ ಸಮಯದಂತೆ ಕಳೆದು ಹೋಯಿತು.॥46॥
(ಶ್ಲೋಕ - 47)
ಮೂಲಮ್
ತಸ್ಯಾಮಾಧತ್ತ ರೇತಸ್ತಾಂ ಭಾವಯನ್ನಾತ್ಮನಾತ್ಮವಿತ್ ।
ನೋಧಾ ವಿಧಾಯ ರೂಪಂ ಸ್ವಂ ಸರ್ವಸಂಕಲ್ಪವಿದ್ವಿಭುಃ ॥
ಅನುವಾದ
ಆತ್ಮಜ್ಞಾನಿಗಳಾದ ಕರ್ದಮರು ಎಲ್ಲ ಸಂಕಲ್ಪಗಳನ್ನು ಬಲ್ಲವರಾಗಿದ್ದರು. ದೇವಹೂತಿಯು ಸಂತಾನವನ್ನು ಪಡೆಯಲು ಉತ್ಸುಕಳಾಗಿರುವುದನ್ನು ಗಮನಿಸಿ, ಹಾಗೆಯೇ ಭಗವಂತನ ಆದೇಶವನ್ನು ಸ್ಮರಿಸಿಕೊಂಡು, ಅವರು ತಮ್ಮ ಸ್ವರೂಪವನ್ನು ಒಂಭತ್ತು ಬಗೆಯಾಗಿ ವಿಭಾಗಿಸಿಕೊಂಡು ಕನ್ಯೆಯರನ್ನು ಪಡೆಯಲಿಕ್ಕಾಗಿ ಏಕಾಗ್ರಚಿತ್ತದಿಂದ ಅರ್ಧಾಂಗರೂಪದಲ್ಲಿ ತಮ್ಮ ಪತ್ನಿ ಯನ್ನು ಭಾವಿಸುತ್ತಾ ಆಕೆಯ ಗರ್ಭದಲ್ಲಿ ವೀರ್ಯವನ್ನು ಸ್ಥಾಪಿಸಿದರು.॥47॥
(ಶ್ಲೋಕ - 48)
ಮೂಲಮ್
ಅತಃ ಸಾ ಸುಷುವೇ ಸದ್ಯೋ ದೇವಹೂತಿಃ ಸಿಯಃ ಪ್ರಜಾಃ ।
ಸರ್ವಾಸ್ತಾಶ್ಚಾರುಸರ್ವಾಂಗ್ಯೋ ಲೋಹಿತೋತ್ಪಲಗಂಧಯಃ ॥
ಅನುವಾದ
ಅದರ ಲವಾಗಿ ದೇವಹೂತಿಯು ಒಟ್ಟಿಗೆ ಒಂಭತ್ತುಮಂದಿ ಕನ್ಯೆಯರಿಗೆ ಜನ್ಮನೀಡಿದಳು. ಅವರೆಲ್ಲರೂ ಸರ್ವಾಂಗ ಸುಂದರಿ ಯರಾಗಿದ್ದು, ಅವರ ದೇಹದಿಂದ ಕೆಂದಾವರೆಯ ಕಂಪು ಸೂಸುತ್ತಿತ್ತು.॥48॥
(ಶ್ಲೋಕ - 49)
ಮೂಲಮ್
ಪತಿಂ ಸಾ ಪ್ರವ್ರಜಿಷ್ಯಂತಂ ತದಾಲಕ್ಷ್ಯೋಶತೀ ಸತೀ ।
ಸ್ಮಯಮಾನಾ ವಿಕ್ಲವೇನ ಹೃದಯೇನ ವಿದೂಯತಾ ॥
(ಶ್ಲೋಕ - 50)
ಮೂಲಮ್
ಲಿಖಂತ್ಯಧೋಮುಖೀ ಭೂಮಿಂ ಪದಾ ನಖಮಣಿಶ್ರಿಯಾ ।
ಉವಾಚ ಲಲಿತಾಂ ವಾಚಂ ನಿರುಧ್ಯಾಶ್ರುಕಲಾಂ ಶನೈಃ ॥
ಅನುವಾದ
ಅದೇ ಸಮಯದಲ್ಲಿ ಶುದ್ಧ ಸ್ವಭಾವವುಳ್ಳ ದೇವಹೂತಿಯು ತನ್ನ ಪತಿಯಾದ ಕರ್ದಮರು ತಮ್ಮ ಹಿಂದಿನ ಪ್ರತಿಜ್ಞೆಯಂತೆ ಸಂನ್ಯಾಸವನ್ನು ಸ್ವೀಕರಿಸಲು ಬಯಸುತ್ತಿದ್ದಾರೆ ಎಂಬುದನ್ನು ಗಮನಿಸಿದಳು. ಆಗ ಅವಳು ಉಕ್ಕಿಬರುತ್ತಿದ್ದ ತನ್ನ ಕಣ್ಣೀರನ್ನು ತಡೆದುಕೊಂಡು ಮೇಲ್ಮೆಯ ಮುಗುಳುನಗುತ್ತಾ ಕಡು ಕಳವಳಗೊಂಡ ಮನಸ್ಸಿನಿಂದ ಸವಿಮಾತಿನಲ್ಲಿ ತನ್ನ ಪತಿಯಲ್ಲಿ ಮೆಲ್ಲ-ಮೆಲ್ಲನೆ ಮಾತನಾಡಿದಳು. ಆಗ ಆಕೆಯು ತಲೆಯನ್ನು ತಗ್ಗಿಸಿ ಕೊಂಡು ನಖಮಣಿಗಳಿಂದ ಬೆಳಗುತ್ತಿದ್ದ ಕಾಲಿನಿಂದ ನೆಲವನ್ನು ಕೆರೆಯುತ್ತಿದ್ದಳು.॥49-50॥
(ಶ್ಲೋಕ - 51)
ಮೂಲಮ್ (ವಾಚನಮ್)
ದೇವಹೂತಿರುವಾಚ
ಮೂಲಮ್
ಸರ್ವಂ ತದ್ಭಗವಾನ್ಮಹ್ಯಮುಪೋವಾಹ ಪ್ರತಿಶ್ರುತಮ್ ।
ಅಥಾಪಿ ಮೇ ಪ್ರಪನ್ನಾಯಾ ಅಭಯಂ ದಾತುಮರ್ಹಸಿ ॥
ಅನುವಾದ
ದೇವಹೂತಿಯು ಹೇಳಿದಳು ಪೂಜ್ಯಪಾದರೇ ! ತಾವೇನೋ ಮಾಡಿದ್ದ ಪ್ರತಿಜ್ಞೆಯನ್ನು ಪೂರ್ಣವಾಗಿ ನಿಭಾಯಿಸಿ ಬಿಟ್ಟಿರಿ. ಆದರೂ ನಾನು ತಮ್ಮಲ್ಲಿ ಶರಣಾಗತಳಾಗಿದ್ದೇನೆ. ಆದ್ದರಿಂದ ನನಗೆ ತಾವು ಮತ್ತೊಂದು ಆಭಯಪ್ರದಾನವನ್ನು ನೀಡಬೇಕು.॥51॥
(ಶ್ಲೋಕ - 52)
ಮೂಲಮ್
ಬ್ರಹ್ಮನ್ದುಹಿತೃಭಿಸ್ತುಭ್ಯಂ ವಿಮೃಗ್ಯಾಃ ಪತಯಃ ಸಮಾಃ ।
ಕಶ್ಚಿತ್ಸ್ಯಾನ್ಮೇ ವಿಶೋಕಾಯ ತ್ವಯಿ ಪ್ರವ್ರಜಿತೇ ವನಮ್ ॥
ಅನುವಾದ
ಬ್ರಾಹ್ಮಣೋತ್ತಮರೇ! ಈ ಕನ್ಯೆಯರಿಗೆ ಯೋಗ್ಯರಾದ ಪತಿಗಳನ್ನು ಹುಡುಕಬೇಕಾಗಿದೆ. ಇದಲ್ಲದೆ ತಾವು ಅರಣ್ಯಕ್ಕೆ ಹೊರಟುಹೋದ ಬಳಿಕ ನನ್ನ ಜನನ-ಮರಣರೂಪೀ ಶೋಕವನ್ನು ದೂರ ಮಾಡುವುದಕ್ಕೆ ಒಬ್ಬರು ಜೊತೆಯಲ್ಲಿರಬೇಕಲ್ಲವೇ?॥52॥
(ಶ್ಲೋಕ - 53)
ಮೂಲಮ್
ಏತಾವತಾಲಂ ಕಾಲೇನ ವ್ಯತಿಕ್ರಾಂತೇನ ಮೇ ಪ್ರಭೋ ।
ಇಂದ್ರಿಯಾರ್ಥಪ್ರಸಂಗೇನ ಪರಿತ್ಯಕ್ತಪರಾತ್ಮನಃ ॥
ಅನುವಾದ
ಪ್ರಭುವೇ ! ಇಲ್ಲಿಯವರೆಗೂ ಪರಮಾತ್ಮನಿಂದ ವಿಮುಖಳಾಗಿ, ಇಂದ್ರಿಯಗಳ ಸುಖವನ್ನು ಭೋಗಿಸುವುದರಲ್ಲಿ ಕಳೆದು ಹೋದ ನನ್ನ ಸಮಯವಾದರೋ ನಿರರ್ಥಕವೇ ಆಗಿದೆ.॥53॥
(ಶ್ಲೋಕ - 54)
ಮೂಲಮ್
ಇಂದ್ರಿಯಾರ್ಥೇಷು ಸಜ್ಜಂತ್ಯಾ ಪ್ರಸಂಗಸ್ತ್ವಯಿ ಮೇ ಕೃತಃ ।
ಅಜಾನಂತ್ಯಾ ಪರಂ ಭಾವಂ ತಥಾಪ್ಯಸ್ತ್ವಭಯಾಯ ಮೇ ॥
ಅನುವಾದ
ತಮ್ಮ ಪರಮ ಪ್ರಭಾವವನ್ನು ತಿಳಿಯದಿರುವ ಕಾರಣದಿಂದಲೇ ನಾನು ಇಂದ್ರಿಯವಿಷಯಗಳಲ್ಲೇ ಆಸಕ್ತಳಾಗಿದ್ದು ತಮ್ಮಲ್ಲಿ ಅನುರಾಗವನ್ನು ತೋರಿಸುತ್ತಿದ್ದೆ. ಆದರೆ ಅದೂ ಕೂಡ ನನ್ನ ಸಂಸಾರ ಭಯವನ್ನು ನೀಗಿಸುವ ಸಾಮರ್ಥ್ಯವನ್ನು ಹೊಂದಿರಲೇಬೇಕು.॥54॥
(ಶ್ಲೋಕ - 55)
ಮೂಲಮ್
ಸಂಗೋ ಯಃ ಸಂಸೃತೇರ್ಹೇತುರಸತ್ಸು ವಿಹಿತೋಧಿಯಾ ।
ಸ ಏವ ಸಾಧುಷು ಕೃತೋ ನಿಃಸಂಗತ್ವಾಯ ಕಲ್ಪತೇ ॥
ಅನುವಾದ
ಅಜ್ಞಾನವಶದಿಂದ ಅಸಜ್ಜನರೊಡನೆ ಮಾಡಿದ ಸಹ ವಾಸವು ಸಂಸಾರ-ಬಂಧನಕ್ಕೆ ಕಾರಣವಾಗುತ್ತದೆ. ಅದೇ ಸಹವಾಸ ವನ್ನು ಸಜ್ಜನರೊಡನೆ ಮಾಡಿದ್ದೇ ಆದರೆ ಅದರಿಂದ ನಿಸ್ಸಂಗತೆ ಉಂಟಾಗುವುದು.॥55॥
(ಶ್ಲೋಕ - 56)
ಮೂಲಮ್
ನೇಹ ಯತ್ಕರ್ಮ ಧರ್ಮಾಯ ನ ವಿರಾಗಾಯ ಕಲ್ಪತೇ ।
ನ ತೀರ್ಥಪದಸೇವಾಯೈ ಜೀವನ್ನಪಿ ಮೃತೋ ಹಿ ಸಃ ॥
ಅನುವಾದ
ಈ ಪ್ರಪಂಚದಲ್ಲಿ ಕರ್ಮಗಳಿಂದ ಧರ್ಮಾಧರ್ಮವನ್ನು ಸಂಪಾದಿಸದಿರುವವನು, ವೈರಾಗ್ಯ ಉಂಟಾ ಗದವನು, ಭಗವಂತನ ಸೇವೆಯನ್ನು ಮಾಡದವನು ಬದುಕಿದ್ದರೂ ಸತ್ತಿರುವನಂತೆಯೇ ಸರಿ.॥56॥
(ಶ್ಲೋಕ - 57)
ಮೂಲಮ್
ಸಾಹಂ ಭಗವತೋ ನೂನಂ ವಂಚಿತಾ ಮಾಯಯಾ ದೃಢಮ್ ।
ಯತ್ತ್ವಾಂ ವಿಮುಕ್ತಿದಂ ಪ್ರಾಪ್ಯ ನ ಮುಮುಕ್ಷೇಯ ಬಂಧನಾತ್ ॥
ಅನುವಾದ
ಸ್ವಾಮಿ! ಖಂಡಿತವಾಗಿ ನಾನು ಭಗವಂತನ ಮಾಯೆಯಿಂದ ಮೋಸಹೋಗಿರುವೆನು. ಏಕೆಂದರೆ, ತಮ್ಮಂತಹ ಮುಕ್ತಿಪ್ರದರಾದ ಪತಿದೇವರನ್ನು ಪಡೆದರೂ ಸಂಸಾರ ಬಂಧನದಿಂದ ಬಿಡುಗಡೆಯನ್ನು ಬಯಸದೆ ಹೋದೆನಲ್ಲ! ॥57॥
ಅನುವಾದ (ಸಮಾಪ್ತಿಃ)
ಇಪ್ಪತ್ತಮೂರನೆಯ ಅಧ್ಯಾಯವು ಮುಗಿಯಿತು.॥23॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ತೃತೀಯಸ್ಕಂಧೇ ಕಾಪಿಲೇಯೋಪಾಖ್ಯಾನೇ ತ್ರಯೋವಿಂಶೋಧ್ಯಾಯಃ ॥23॥