೨೧

[ಇಪ್ಪತ್ತೊಂದನೆಯ ಅಧ್ಯಾಯ]

ಭಾಗಸೂಚನಾ

ಕರ್ದಮರ ತಪಸ್ಸು ಮತ್ತು ಭಗವಂತನ ವರಪ್ರದಾನ

(ಶ್ಲೋಕ - 1)

ಮೂಲಮ್

ವಿದುರ ಉವಾಚ
ಸ್ವಾಯಂಭುವಸ್ಯ ಚ ಮನೋರ್ವಂಶಃ ಪರಮಸಮ್ಮತಃ ।
ಕಥ್ಯತಾಂ ಭಗವನ್ಯತ್ರ ಮೈಥುನೇನೈಧಿರೇ ಪ್ರಜಾಃ ॥

ಅನುವಾದ

ವಿದುರನು ಕೇಳಿದನು ಪೂಜ್ಯ ಮೈತ್ರೇಯರೇ ! ಸ್ವಾಯಂ ಭುವ ಮನುವಿನ ವಂಶವು ಅತ್ಯಂತ ಆದರಣೀಯವೆಂದು ಕೇಳಿದ್ದೇನೆ. ಅದರಲ್ಲಿ ಮೈಥುನಧರ್ಮದ ಮೂಲಕ ಪ್ರಜೆಯ ವೃದ್ಧಿಯಾಗಿತ್ತು. ಈಗ ನೀವು ನನಗೆ ಅವನ ಕಥೆಯನ್ನು ಹೇಳಿರಿ.॥1॥

(ಶ್ಲೋಕ - 2)

ಮೂಲಮ್

ಪ್ರಿಯವ್ರತೋತ್ತಾನಪಾದೌ ಸುತೌ ಸ್ವಾಯಂಭುವಸ್ಯ ವೈ ।
ಯಥಾಧರ್ಮಂ ಜುಗುಪತುಃ ಸಪ್ತದ್ವೀಪವತೀಂ ಮಹೀಮ್ ॥

(ಶ್ಲೋಕ - 3)

ಮೂಲಮ್

ತಸ್ಯ ವೈ ದುಹಿತಾ ಬ್ರಹ್ಮನ್ ದೇವಹೂತೀತಿ ವಿಶ್ರುತಾ ।
ಪತ್ನೀ ಪ್ರಜಾಪತೇರುಕ್ತಾ ಕರ್ದಮಸ್ಯ ತ್ವಯಾನಘ ॥

ಅನುವಾದ

ಪೂಜ್ಯರೇ ! ಸ್ವಾಯಂಭುವ ಮನುವಿನ ಪುತ್ರರಾದ ಪ್ರಿಯವ್ರತ ಮತ್ತು ಉತ್ತಾನಪಾದ ಇವರು ಸಪ್ತದ್ವೀಪಗಳಿಂದ ಒಡಗೊಂಡ ಪೃಥ್ವಿಯನ್ನು ಧರ್ಮದಿಂದ ಆಳಿದರು ಹಾಗೂ ಖ್ಯಾತಳಾದ ಪುತ್ರಿ ದೇವಹೂತಿ ಎಂಬುವಳು ಕರ್ದಮ ಪ್ರಜಾಪತಿಯನ್ನು ವಿವಾಹವಾಗಿದ್ದಳು ಎಂದು ತಾವು ತಿಳಿಸಿರುವಿರಿ.॥2-3॥

(ಶ್ಲೋಕ - 4)

ಮೂಲಮ್

ತಸ್ಯಾಂ ಸ ವೈ ಮಹಾಯೋಗೀ ಯುಕ್ತಾಯಾಂ ಯೋಗಲಕ್ಷಣೈಃ ।
ಸಸರ್ಜ ಕತಿಧಾ ವೀರ್ಯಂ ತನ್ಮೇ ಶುಶ್ರೂಷವೇ ವದ ॥

ಅನುವಾದ

ದೇವಹೂತಿಯು ಯಮ-ನಿಯಮ ಗಳೇ ಮುಂತಾದ ಯೋಗಲಕ್ಷಣಗಳಿಂದ ಸಂಪನ್ನಳಾಗಿದ್ದಳು. ಅವಳು ಕರ್ದಮ ಪ್ರಜಾಪತಿಯಿಂದ ಎಷ್ಟು ಸಂತಾನಗಳನ್ನು ಪಡೆದಳು ? ಎಂಬುದನ್ನು ತಿಳಿಯಲು ಇಚ್ಛೆಪಡುತ್ತಿದ್ದೇನೆ. ಈ ಎಲ್ಲ ಪ್ರಸಂಗವನ್ನು ನನಗೆ ತಿಳಿಸುವವರಾಗಿರಿ.॥4॥

(ಶ್ಲೋಕ - 5)

ಮೂಲಮ್

ರುಚಿರ್ಯೋ ಭಗವಾನ್ ಬ್ರಹ್ಮನ್ ದಕ್ಷೋ ವಾ ಬ್ರಹ್ಮಣಃ ಸುತಃ ।
ಯಥಾ ಸಸರ್ಜ ಭೂತಾನಿ ಲಬ್ಧ್ವಾ ಭಾರ್ಯಾಂ ಚ ಮಾನವೀಮ್ ॥

ಅನುವಾದ

ಹಾಗೆಯೇ ಭಗವಾನ್ ರುಚಿಯೂ ಮತ್ತು ಬ್ರಹ್ಮಪುತ್ರನಾದ ದಕ್ಷಪ್ರಜಾಪತಿಯೂ ಸ್ವಾಯಂಭುವ ಮನುವಿನ ಪುತ್ರಿಯರನ್ನು ವಿವಾಹವಾಗಿ ಅವರಿಂದ ಎಷ್ಟೆಷ್ಟು ಸಂತಾನಗಳನ್ನು ಪಡೆದರು ? ಇದೆಲ್ಲ ಚರಿತ್ರೆಯನ್ನೂ ನನಗೆ ಹೇಳುವವರಾಗಿರಿ.॥5॥

(ಶ್ಲೋಕ - 6)

ಮೂಲಮ್ (ವಾಚನಮ್)

ಮೈತ್ರೇಯ ಉವಾಚ

ಮೂಲಮ್

ಪ್ರಜಾಃ ಸೃಜೇತಿ ಭಗವಾನ್ ಕರ್ದಮೋ ಬ್ರಹ್ಮಣೋದಿತಃ ।
ಸರಸ್ವತ್ಯಾಂ ತಪಸ್ತೇಪೇ ಸಹಸ್ರಾಣಾಂ ಸಮಾ ದಶ ॥

ಅನುವಾದ

ಶ್ರೀಮೈತ್ರೇಯ ಮಹರ್ಷಿಗಳು ಹೇಳುತ್ತಾರೆ ವಿದುರನೇ ! ಬ್ರಹ್ಮದೇವರು ಪೂಜ್ಯರಾದ ಕರ್ದಮರಿಗೆ ‘ನೀನು ಸಂತಾನವನ್ನು ಪಡೆ’ ಎಂದು ಆಜ್ಞಾಪಿಸಿದಾಗ ಅವರು ಸರಸ್ವತಿನದೀತೀರದಲ್ಲಿ ಹತ್ತುಸಾವಿರ ವರ್ಷ ತಪಸ್ಸು ಮಾಡಿದರು.॥6॥

(ಶ್ಲೋಕ - 7)

ಮೂಲಮ್

ತತಃ ಸಮಾಧಿಯುಕ್ತೇನ ಕ್ರಿಯಾಯೋಗೇನ ಕರ್ದಮಃ ।
ಸಂಪ್ರಪೇದೇ ಹರಿಂ ಭಕ್ತ್ಯಾ ಪ್ರಪನ್ನವರದಾಶುಷಮ್ ॥

ಅನುವಾದ

ಕರ್ದಮ ಪ್ರಜಾಪತಿಗಳು ಏಕಾಗ್ರಚಿತ್ತದಿಂದ ಭಕ್ತಿಪೂರ್ವಕ ಪೂಜೋಪಚಾರಾ ದಿಗಳಿಂದ (ಕ್ರಿಯಾಯೋಗ) ಶರಣಾಗತರಿಗೆ ವರದಾಯಕನಾದ ಶ್ರೀಹರಿಯನ್ನು ಆರಾಧಿಸತೊಡಗಿದರು.॥7॥

(ಶ್ಲೋಕ - 8)

ಮೂಲಮ್

ತಾವತ್ಪ್ರಸನ್ನೋ ಭಗವಾನ್ ಪುಷ್ಕರಾಕ್ಷಃ ಕೃತೇ ಯುಗೇ ।
ದರ್ಶಯಾಮಾಸ ತಂ ಕ್ಷತ್ತಃ ಶಾಬ್ದಂ ಬ್ರಹ್ಮ ದಧದ್ವಪುಃ ॥

ಅನುವಾದ

ಆಗ ಕೃತ ಯುಗದ ಪ್ರಾರಂಭದಲ್ಲಿ ಪುಂಡರೀಕಾಕ್ಷನಾದ ಭಗವಾನ್ ಶ್ರೀಹರಿಯು ಅವರ ತಪಸ್ಸಿನಿಂದ ಸಂತುಷ್ಟನಾಗಿ ತನ್ನ ಶಬ್ದಬ್ರಹ್ಮಮಯ ರೂಪದಿಂದ ಸಾಕಾರನಾಗಿ ಅವರಿಗೆ ದರ್ಶನವನ್ನು ಕರುಣಿಸಿದನು.॥8॥

(ಶ್ಲೋಕ - 9)

ಮೂಲಮ್

ಸ ತಂ ವಿರಜಮರ್ಕಾಭಂ ಸಿತಪದ್ಮೋತ್ಪಲಸ್ರಜಮ್ ।
ಸ್ನಿಗ್ಧನೀಲಾಲಕವ್ರಾತವಕಾಬ್ಜಂ ವಿರಜೋಂಬರಮ್ ॥

ಅನುವಾದ

ಕರ್ದಮರಿಗೆ ದರ್ಶನವಿತ್ತ ಭಗವಂತನ ಶ್ರೀವಿಗ್ರಹವು ಸೂರ್ಯ ನಂತೆ ತೇಜಸ್ವಿಯಾಗಿತ್ತು. ಅವನು ಕಂಠದಲ್ಲಿ ಕಮಲ ಮತ್ತು ಕುಂದ ಪುಷ್ಪಗಳ ಮಾಲೆಗಳನ್ನು ಧರಿಸಿದ್ದನು. ಮುಖಕಮಲವು ನುಣುಪಾದ ನೀಲಿಬಣ್ಣದ ಮುಂಗುರುಳುಗಳಿಂದ ಕಂಗೊಳಿಸುತ್ತಿತ್ತು. ಸ್ವಾಮಿಯು ನಿರ್ಮಲವಾದ ವಸಗಳನ್ನು ಧರಿಸಿದ್ದನು.॥9॥

(ಶ್ಲೋಕ - 10)

ಮೂಲಮ್

ಕಿರೀಟಿನಂ ಕುಂಡಲಿನಂ ಶಂಖಚಕ್ರಗದಾಧರಮ್ ।
ಶ್ವೇತೋತ್ಪಲಕ್ರೀಡನಕಂ ಮನಃಸ್ಪರ್ಶಸ್ಮಿತೇಕ್ಷಣಮ್ ॥

ಅನುವಾದ

ಅವನ ತಲೆಯ ಮೇಲೆ ಥಳ-ಥಳಿಸುವ ಸ್ವರ್ಣಕಿರೀಟವೂ, ಕಿವಿಗಳಲ್ಲಿ ಹೊಳೆಯು ತ್ತಿರುವ ಕರ್ಣಕುಂಡಲಗಳು, ಕರಕಮಲಗಳಲ್ಲಿ ಶಂಖ, ಚಕ್ರ, ಗದೆ ಮುಂತಾದ ದಿವ್ಯಾಯುಧಗಳು ವಿರಾಜಿಸುತ್ತಿದ್ದವು. ಒಂದು ಕೈಯಲ್ಲಿ ಬಿಳಿಯ ಲೀಲಾಕಮಲವು ಆಡುತ್ತಿತ್ತು. ಪ್ರಭುವಿನ ಮಧುರ ಮಂದಹಾಸದಿಂದ ಶೋಭಿಸುತ್ತಿದ್ದ ದೃಷ್ಟಿಯು ಚಿತ್ತವನ್ನು ಅಪಹರಿಸುವಂತಿತ್ತು.॥10॥

(ಶ್ಲೋಕ - 11)

ಮೂಲಮ್

ವಿನ್ಯಸ್ತಚರಣಾಂಭೋಜಮಂಸದೇಶೇ ಗರುತ್ಮತಃ ।
ದೃಷ್ಟ್ವಾ ಖೇವಸ್ಥಿತಂ ವಕ್ಷಃಶ್ರಿಯಂ ಕೌಸ್ತುಭಕಂಧರಮ್ ॥

(ಶ್ಲೋಕ - 12)

ಮೂಲಮ್

ಜಾತಹರ್ಷೋಪತನ್ಮೂರ್ಧ್ನಾ ಕ್ಷಿತೌ ಲಬ್ಧಮನೋರಥಃ ।
ಗೀರ್ಭಿಸ್ತ್ವಭ್ಯಗೃಣಾತ್ಪ್ರೀತಿಸ್ವಭಾವಾತ್ಮಾ ಕೃತಾಂಜಲಿಃ ॥

ಅನುವಾದ

ಅವನ ಪಾದಾರವಿಂದಗಳು ಗರುಡದೇವನ ಹೆಗಲ ಮೇಲೆ ವಿರಾಜಿಸುತ್ತಿದ್ದವು. ವಕ್ಷಃಸ್ಥಳದಲ್ಲಿ ಶ್ರೀಲಕ್ಷ್ಮೀದೇವಿಯೂ, ಕಂಠದಲ್ಲಿ ಕೌಸ್ತುಭ ಮಣಿಯೂ ಶೋಭಿಸುತ್ತಿತ್ತು. ಆಕಾಶದಲ್ಲಿ ಬೆಳಗುತ್ತಿದ್ದ ಭಗವಂತನ ಮನೋಹರ ಮೂರ್ತಿಯನ್ನು ದರ್ಶನ ಮಾಡುತ್ತಾ ಕರ್ದಮರು ಪರಮಾನಂದದಲ್ಲಿ ಮುಳುಗಿ, ಸಕಲ ಕಾಮನೆಗಳೂ ಈಡೇರಿದಂತೆ ಭಾವಿಸಿದರು. ಅವರು ಆನಂದ ತುಂಬಿದ ಹೃದಯದಿಂದ ಭಗವಂತನಿಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತಾ ಪ್ರೇಮಪೂರ್ಣವಾದ ಚಿತ್ತದಿಂದ ಕೈಜೋಡಿಸಿಕೊಂಡು ಸವಿಮಾತುಗಳಿಂದ ಸ್ವಾಮಿಯನ್ನು ಸ್ತುತಿಸತೊಡಗಿದರು.॥11-12॥

(ಶ್ಲೋಕ - 13)

ಮೂಲಮ್

ಋಷಿರುವಾಚ
ಜುಷ್ಟಂ ಬತಾದ್ಯಾಖಿಲಸತ್ತ್ವರಾಶೇಃ
ಸಾಂಸಿಧ್ಯಮಕ್ಷ್ಣೋಸ್ತವ ದರ್ಶನಾನ್ನಃ ।
ಯದ್ದರ್ಶನಂ ಜನ್ಮಭಿರೀಡ್ಯ ಸದ್ಭಿ-
ರಾಶಾಸತೇ ಯೋಗಿನೋ ರೂಢಯೋಗಾಃ ॥

ಅನುವಾದ

ಕರ್ದಮರು ನುಡಿದರು ಸ್ತುತಿಸಲು ಯೋಗ್ಯವಾದ ಪರಮೇಶ್ವರಾ ! ನೀನು ಸಂಪೂರ್ಣ ಸತ್ತ್ವಗುಣದ ಆಧಾರ ನಾಗಿರುವೆ ! ಯೋಗಿಗಳು ಉತ್ತರೋತ್ತರ ಶುಭಯೋನಿಗಳಲ್ಲಿ ಜನಿಸಿ, ಕೊನೆಗೆ ಯೋಗಾರೂಢರಾಗಿ ಯಾರನ್ನು ದರ್ಶಿಸಲು ಬಯಸು ತ್ತಾರೋ, ಅಂತಹ ನಿನ್ನ ಅದೇ ದರ್ಶನವನ್ನು ಪಡೆದು ಇಂದು ನನ್ನ ಕಣ್ಣುಗಳು ಸಲವಾದುವು.॥13॥

(ಶ್ಲೋಕ - 14)

ಮೂಲಮ್

ಯೇ ಮಾಯಯಾ ತೇ ಹತಮೇಧಸಸ್ತ್ವತ್
ಪಾದಾರವಿಂದಂ ಭವಸಿಂಧುಪೋತಮ್ ।
ಉಪಾಸತೇ ಕಾಮಲವಾಯ ತೇಷಾಂ
ರಾಸೀಶ ಕಾಮಾನ್ನಿರಯೇಪಿ ಯೇ ಸ್ಯುಃ ॥

ಅನುವಾದ

ನಿನ್ನ ಚರಣಕಮಲಗಳು ಭವಸಾಗರವನ್ನು ದಾಟಲು ನಾವೆಯಾಗಿವೆ. ಅಂತಹ ಪಾದಾರವಿಂದ ಗಳನ್ನು ನಿನ್ನ ಮಾಯೆಯಿಂದ ವಿವೇಕವನ್ನು ಕಳೆದುಕೊಂಡವರು ಮಾತ್ರ ತುಚ್ಛವೂ, ಕ್ಷಣಿಕವೂ ಆದ ವಿಷಯಸುಖಗಳಿಗಾಗಿ ಆಶ್ರಯಿಸುತ್ತಾರೆ. ಆ ಸುಖಗಳು ನರಕದಲ್ಲೂ ದೊರೆಯಬಲ್ಲವು. ಆದರೆ ಸ್ವಾಮಿ ! ನೀನಾದರೋ ಅವರಿಗೆ ಆ ವಿಷಯ ಭೋಗಗಳನ್ನೂ ಕೊಡುತ್ತೀಯೆ.॥14॥

(ಶ್ಲೋಕ - 15)

ಮೂಲಮ್

ತಥಾ ಸ ಚಾಹಂ ಪರಿವೋಢುಕಾಮಃ
ಸಮಾನಶೀಲಾಂ ಗೃಹಮೇಧಧೇನುಮ್ ।
ಉಪೇಯಿವಾನ್ಮೂಲಮಶೇಷಮೂಲಂ
ದುರಾಶಯಃ ಕಾಮದುಘಾಂಘ್ರಿಪಸ್ಯ ॥

ಅನುವಾದ

ಪ್ರಭುವೇ ! ನೀನು ಕಲ್ಪವೃಕ್ಷನಾಗಿರುವೆ. ನಿನ್ನ ಚರಣಗಳು ಸಮಸ್ತ ಮನೋರಥಗಳನ್ನು ಪೂರ್ಣಗೊಳಿಸು ವಂತಹವುಗಳು. ನನ್ನ ಹೃದಯವು ಕಾಮದಿಂದ ಕಲುಷಿತವಾಗಿದೆ. ನಾನು ನನಗೆ ಅನುರೂಪಳಾಗಿ, ಗೃಹಸ್ಥಧರ್ಮವನ್ನು ಪಾಲನೆ ಮಾಡಲು ಸಹಾಯಕಳಾದ ಶೀಲವತಿಯಾದ ಕನ್ಯೆಯನ್ನು ಪತ್ನಿಯ ನ್ನಾಗಿ ಪಡೆಯಲಿಕ್ಕಾಗಿಯೇ ನಿನ್ನ ಅಡಿದಾವರೆಗಳಲ್ಲಿ ಶರಣು ಹೊಂದಿರುವೆನು.॥15॥

(ಶ್ಲೋಕ - 16)

ಮೂಲಮ್

ಪ್ರಜಾಪತೇಸ್ತೇ ವಚಸಾಧೀಶ ತಂತ್ಯಾ
ಲೋಕಃ ಕಿಲಾಯಂ ಕಾಮಹತೋನುಬದ್ಧಃ ।
ಅಹಂ ಚ ಲೋಕಾನುಗತೋ ವಹಾಮಿ
ಬಲಿಂ ಚ ಶುಕ್ಲಾನಿಮಿಷಾಯ ತುಭ್ಯಮ್ ॥

ಅನುವಾದ

ಸರ್ವೇಶ್ವರಾ ! ನೀನು ಸಮಸ್ತ ಲೋಕಗಳ ಅಧಿಪತಿಯಾಗಿರುವೆ. ನಾನಾ ಪ್ರಕಾರದ ಕಾಮನೆಗಳಿಗೆ ಸಿಲುಕಿಕೊಂಡ ಈ ಲೋಕವು ನಿನ್ನ ವೇದವಾಣಿರೂಪವಾದ ಹಗ್ಗದಿಂದ ಬಂಧಿತವಾಗಿದೆ. ಧರ್ಮಮೂರ್ತಿಯೇ ! ಅದನ್ನೇ ಅನುಸರಿಸುತ್ತಾ ನಾನೂ ಕೂಡ ಕಾಲಸ್ವರೂಪನಾದ ನಿನಗೆ ಆಜ್ಞಾಪಾಲನರೂಪೀ ಪೂಜೆ- ಉಪಹಾರಾದಿಗಳನ್ನು ಸಮರ್ಪಿಸುತ್ತಿದ್ದೇನೆ.॥16॥

(ಶ್ಲೋಕ - 17)

ಮೂಲಮ್

ಲೋಕಾಂಶ್ಚ ಲೋಕಾನುಗತಾನ್ಪಶೂಂಶ್ಚ
ಹಿತ್ವಾ ಶ್ರಿತಾಸ್ತೇ ಚರಣಾತಪತ್ರಮ್ ।
ಪರಸ್ಪರಂ ತ್ವದ್ಗುಣವಾದಸೀಧು-
ಪೀಯೂಷನಿರ್ಯಾಪಿತದೇಹಧರ್ಮಾಃ ॥

ಅನುವಾದ

ಮಹಾಪ್ರಭೋ ! ವಿಷಯಸುಖಗಳಲ್ಲಿ ಆಸಕ್ತರಾದ ಜನರನ್ನೂ, ಅವರ ಮಾರ್ಗಾವಲಂಬಿಯಾದ ನನ್ನಂತಹ ಕರ್ಮಜಡರಾದ ಪಶು ಗಳನ್ನೂ, ನಿನ್ನ ಏಕಾಂತಭಕ್ತರು ಸ್ವಲ್ಪವೂ ಲೆಕ್ಕಿಸದೆ ನಿನ್ನ ಪಾದಾರ ವಿಂದಗಳ ನೆರಳನ್ನೆ ಆಶ್ರಯಿಸುತ್ತಾರೆ. ನಿನ್ನ ಗುಣ-ಕೀರ್ತನರೂಪವಾದ ದಿವ್ಯೋನ್ಮಾದವನ್ನುಂಟುಮಾಡುವ ಸುಧೆಯನ್ನು ಪಾನಮಾಡುತ್ತಾ ಹಸಿವು ಬಾಯಾರಿಕೆಗಳೇ ಮುಂತಾದ ದೇಹಧರ್ಮಗಳನ್ನು ಶಮನಗೊಳಿಸಿಕೊಳ್ಳುತ್ತಾರೆ.॥17॥

(ಶ್ಲೋಕ - 18)

ಮೂಲಮ್

ನ ತೇಜರಾಕ್ಷಭ್ರಮಿರಾಯುರೇಷಾಂ
ತ್ರಯೋದಶಾರಂ ತ್ರಿಶತಂ ಷಷ್ಟಿಪರ್ವ ।
ಷಣ್ನೇಮ್ಯನಂತಚ್ಛದಿ ಯತಿಣಾಭಿ
ಕರಾಲಸ್ರೋತೋ ಜಗದಾಚ್ಛಿದ್ಯ ಧಾವತ್ ॥

ಅನುವಾದ

ಸ್ವಾಮಿ ! ಈ ಕಾಲಚಕ್ರವು ತುಂಬಾ ಬಲಿಷ್ಠವಾದುದು. ಸಾಕ್ಷಾತ್ ಪರಬ್ರಹ್ಮವೇ ಇದರ ಅಚ್ಚು. ಅಧಿಕಮಾಸದಿಂದ ಕೂಡಿದ ಹದಿಮೂರು ತಿಂಗಳುಗಳು ಇದರ ಅರೆ(ಕಾಲು)ಗಳು. ಮುನ್ನೂರಅರವತ್ತು ದಿವಸಗಳು ಇದರ ಗಿಣ್ಣು ಗಳು. ಇದು ಆರು ಋತುಗಳೆಂಬ ಅಂಚುಪಟ್ಟಿಗಳಿಂದಲೂ, ಅನಂತ ವಾದ ಕಲಾ-ಕಾಷ್ಠಾದಿ ಪತ್ರಾಕಾರವಾದ ಧಾರೆಗಳಿಂದಲೂ, ಮೂರು ಚಾತುರ್ಮಾಸ್ಯ ಇದರ ಆಧಾರಭೂತ ನಾಭಿಯಿಂದಲೂ ಕೂಡಿದೆ. ಇದು ಅತ್ಯಂತ ವೇಗವುಳ್ಳ ಸಂವತ್ಸರರೂಪೀ ಕಾಲಚಕ್ರವು ಜಗತ್ತಿನ ಆಯುಷ್ಯನ್ನು ಕತ್ತರಿಸುತ್ತಾ ಸುತ್ತುತ್ತಿದೆ. ಆದರೆ ಇದು ನಿನ್ನ ಏಕಾಂತಭಕ್ತರ ಆಯುಸ್ಸನ್ನು ಕಳೆಯಲಾರದು.॥18॥

(ಶ್ಲೋಕ - 19)

ಮೂಲಮ್

ಏಕಃ ಸ್ವಯಂ ಸಂಜಗತಃ ಸಿಸೃಕ್ಷಯಾ-
ದ್ವಿತೀಯಯಾತ್ಮನ್ನಧಿಯೋಗಮಾಯಯಾ ।
ಸೃಜಸ್ಯದಃ ಪಾಸಿ ಪುನರ್ಗ್ರಸಿಷ್ಯಸೇ
ಯಥೋರ್ಣನಾಭಿರ್ಭಗವನ್ಸ್ವಶಕ್ತಿಭಿಃ ॥

ಅನುವಾದ

ಭಗವಂತನೇ ! ಜೇಡರ ಹುಳುವು ತನ್ನ ಬಲೆಯನ್ನು ತಾನೇ ಹೊರಹೊಮ್ಮಿಸಿ, ಅದನ್ನು ರಕ್ಷಿಸುತ್ತಾ ಕೊನೆಗೆ ನುಂಗಿಹಾಕುತ್ತದೆ. ಹಾಗೆಯೇ ನೀನೊಬ್ಬನೇ ನಿನ್ನಿಂದ ಅಭಿನ್ನವಾದ ಯೋಗಮಾಯೆಯನ್ನು ಅವಲಂಬಿಸಿ ಅದರಿಂದ ವ್ಯಕ್ತವಾದ ನಿನ್ನ ಸತ್ತ್ವಾದಿಶಕ್ತಿಗಳಿಂದ ಈ ಜಗತ್ತನ್ನು ಸೃಷ್ಟಿಸಿ, ರಕ್ಷಿಸಿ, ಲಯಗೊಳಿಸುತ್ತೀಯೆ.॥19॥

(ಶ್ಲೋಕ - 20)

ಮೂಲಮ್

ನೈತದ್ಬತಾಧೀಶ ಪದಂ ತವೇಪ್ಸಿತಂ
ಯನ್ಮಾಯಯಾ ನಸ್ತನುಷೇ ಭೂತಸೂಕ್ಷ್ಮಮ್ ।
ಅನುಗ್ರಹಾಯಾಸ್ತ್ವಪಿ ಯರ್ಹಿ ಮಾಯಯಾ
ಲಸತ್ತುಲಸ್ಯಾ ತನುವಾ ವಿಲಕ್ಷಿತಃ ॥

ಅನುವಾದ

ಪ್ರಭೋ ! ಈಗ ನೀನು ತನ್ನ ತುಲಸೀಮಾಲೆಯಿಂದ ಅಲಂಕೃತವಾದ, ಮಾಯೆಯಿಂದ ಪರಿಚ್ಛಿನ್ನನಂತೆ ಕಂಡುಬರುವ ಸಗುಣಮೂರ್ತಿಯಾಗಿ ದರ್ಶನವನ್ನು ನನಗೆ ದಯಪಾಲಿಸಿರುವೆ. ನೀನು ನಮ್ಮಂತಹ ಭಕ್ತರಿಗೆ ಕರುಣಿಸುವ ಶಬ್ದಾದಿ ವಿಷಯ-ಸುಖಗಳು ಮಾಯಿಕವಾಗಿದ್ದರೂ, ನಿನಗೆ ಇಷ್ಟವಿಲ್ಲದಿದ್ದರೂ, ಪರಿಣಾಮದಲ್ಲಿ ನಮಗೆ ಶುಭವೇ ಉಂಟಾಗುವಂತೆ ಇಂತಹ ಐಹಿಕಸುಖಗಳನ್ನು ಕೊಡುವವನಾಗು.॥20॥

(ಶ್ಲೋಕ - 21)

ಮೂಲಮ್

ತಂ ತ್ವಾನುಭೂತ್ಯೋಪರತಕ್ರಿಯಾರ್ಥಂ
ಸ್ವಮಾಯಯಾ ವರ್ತಿತಲೋಕತಂತ್ರಮ್ ।
ನಮಾಮ್ಯಭೀಕ್ಷ್ಣಂ ನಮನೀಯಪಾದ-
ಸರೋಜಮಲ್ಪೀಯಸಿ ಕಾಮವರ್ಷಮ್ ॥

ಅನುವಾದ

ಸ್ವಾಮಿ ! ನೀನು ಸ್ವರೂಪತಃ ನಿಷ್ಕ್ರಿಯನಾಗಿದ್ದರೂ ಮಾಯಾ ಶಕ್ತಿಯಿಂದ ಇಡೀ ಪ್ರಪಂಚದ ವ್ಯವಹಾರಗಳನ್ನು ನಡೆಸುತ್ತಿದ್ದೀಯೆ. ಸ್ವಲ್ಪವೇ ಉಪಾಸನೆ ಮಾಡುವವರ ಮೇಲೆಯೂ ಕೂಡ ನೀನು ಬಯಸಿದ ಎಲ್ಲ ವಸ್ತುಗಳನ್ನು ಮಳೆಗರೆಯುತ್ತಾ ಇರುತ್ತೀಯೆ. ನಿನ್ನ ವಂದನೀಯವಾದ ಚರಣಕಮಲಗಳಿಗೆ ನಾನು ಮತ್ತೆ-ಮತ್ತೆ ನಮಸ್ಕರಿಸುತ್ತಿದ್ದೇನೆ.॥21॥

(ಶ್ಲೋಕ - 22)

ಮೂಲಮ್ (ವಾಚನಮ್)

ಋಷಿರುವಾಚ

ಮೂಲಮ್

ಇತ್ಯವ್ಯಲೀಕಂ ಪ್ರಣುತೋಬ್ಜನಾಭ-
ಸ್ತಮಾಬಭಾಷೇ ವಚಸಾಮೃತೇನ ।
ಸುಪರ್ಣಪಕ್ಷೋಪರಿ ರೋಚಮಾನಃ
ಪ್ರೇಮಸ್ಮಿತೋದ್ವೀಕ್ಷಣವಿಭ್ರಮದ್ಭ್ರೂಃ ॥

ಅನುವಾದ

ಶ್ರೀಮೈತ್ರೇಯರು ಹೇಳುತ್ತಾರೆ ವಿದುರನೇ ! ಕರ್ದಮರು ಹೀಗೆ ನಿಷ್ಕಪಟಭಾವದಿಂದ ಭಗವಂತನನ್ನು ಸ್ತೋತ್ರಮಾಡಲು ಸ್ವಾಮಿಯು ಅತ್ಯಂತ ಪ್ರಸನ್ನನಾದನು. ಗರುಡದೇವನ ಹೆಗಲಮೇಲೆ ವಿರಾಜಿಸುತ್ತಿರುವ ಭಗವಂತನು ಪ್ರೇಮಪೂರ್ಣವಾದ ಕಿರುನಗೆಯನ್ನು ಸೂಸುತ್ತಾ, ಪ್ರೇಮತುಂಬಿದ ದೃಷ್ಟಿಯನ್ನು ಬೀರುತ್ತಾ ಅಮೃತಮಯ ವಚನಗಳಿಂದ ಕರ್ದಮರಿಗೆ ಇಂತೆಂದನು.॥22॥

(ಶ್ಲೋಕ - 23)

ಮೂಲಮ್

ಶ್ರೀಭಗವಾನುವಾಚ
ವಿದಿತ್ವಾ ತವ ಚೈತ್ಯಂ ಮೇ ಪುರೈವ ಸಮಯೋಜಿ ತತ್ ।
ಯದರ್ಥಮಾತ್ಮನಿಯಮೈಸ್ತ್ವಯೈವಾಹಂ ಸಮರ್ಚಿತಃ ॥

ಅನುವಾದ

ಶ್ರೀಭಗವಂತನು ಹೇಳಿದನು ಮಹರ್ಷಿಯೇ ! ಯಾವ ಪ್ರಯೋಜನಕ್ಕಾಗಿ ನೀನು ಆತ್ಮಸಂಯಮಾದಿಗಳ ಮೂಲಕ ನನ್ನನ್ನು ಆರಾಧಿಸಿರುವೆಯೋ, ಆ ನಿನ್ನ ಹೃದಯದ ಭಾವವನ್ನು ಅರಿತವನಾದ ನಾನು ಮೊದಲಿನಿಂದಲೇ ಅದರ ವ್ಯವಸ್ಥೆ ಮಾಡಿರುವೆನು.॥23॥

(ಶ್ಲೋಕ - 24)

ಮೂಲಮ್

ನ ವೈ ಜಾತು ಮೃಷೈವ ಸ್ಯಾತ್ಪ್ರಜಾಧ್ಯಕ್ಷ ಮದರ್ಹಣಮ್ ।
ಭವದ್ವಿಧೇಷ್ವ ತಿತರಾಂ ಮಯಿ ಸಂಗೃಭಿತಾತ್ಮನಾಮ್ ॥

ಅನುವಾದ

ಪ್ರಜಾಪತಿಯೇ ! ನನ್ನನ್ನು ಕುರಿತು ಮಾಡಿದ ಪೂಜೆಯು ಎಂದಿಗೂ ವಿಲವಾಗುವುದಿಲ್ಲ. ಏಕಾಂತಭಕ್ತಿಯಿಂದ ನನ್ನಲ್ಲೇ ಚಿತ್ತವನ್ನು ತೊಡಗಿಸಿರುವ ನಿನ್ನಂತಹ ಮಹಾತ್ಮರು ಮಾಡಿದ ಉಪಾಸನೆಗಾದರೋ ಅತ್ಯಧಿಕವಾದ ಲವು ಸಿಕ್ಕಿಯೇ ಸಿಕ್ಕುವುದು.॥24॥

(ಶ್ಲೋಕ - 25)

ಮೂಲಮ್

ಪ್ರಜಾಪತಿಸುತಃ ಸಮ್ರಾಣ್ಮನುರ್ವಿಖ್ಯಾತಮಂಗಲಃ ।
ಬ್ರಹ್ಮಾವರ್ತಂ ಯೋಧಿವಸನ್ ಶಾಸ್ತಿ ಸಪ್ತಾರ್ಣವಾಂ ಮಹೀಮ್ ॥

ಅನುವಾದ

ಬ್ರಹ್ಮದೇವರ ಸುಪುತ್ರನಾದ ಸ್ವಾಯಂಭುವಮನು ಚಕ್ರವರ್ತಿಯು ಸದಾಚಾರ ಸಂಪನ್ನನಾಗಿ ಬ್ರಹ್ಮಾವರ್ತದಲ್ಲಿದ್ದು ಸಪ್ತ ಸಮುದ್ರಗಳಿಂದ ಕೂಡಿದ ಇಡೀ ಭೂಮಂಡಲವನ್ನು ಈಗ ಆಳುತ್ತಿದ್ದಾನೆ.॥25॥

ಮೂಲಮ್

(ಶ್ಲೋಕ - 26)
ಸ ಚೇಹ ವಿಪ್ರ ರಾಜರ್ಷಿರ್ಮಹಿಷ್ಯಾ ಶತರೂಪಯಾ ।
ಆಯಾಸ್ಯತಿ ದಿದೃಕ್ಷುಸ್ತ್ವಾಂ ಪರಶ್ವೋ ಧರ್ಮಕೋವಿದಃ ॥

ಅನುವಾದ

ವಿಪ್ರಶ್ರೇಷ್ಠನೇ ! ಆ ಪರಮಧರ್ಮಜ್ಞನಾದ ಮಹಾರಾಜನು ತನ್ನ ಪತ್ನಿಯಾದ ಶತರೂಪಾದೇವಿಯೊಂದಿಗೆ ನಿನ್ನನ್ನು ಭೆಟ್ಟಿಯಾಗಲು ನಾಳಿದ್ದು ಇಲ್ಲಿಗೆ ಬರುವನು.॥26॥

(ಶ್ಲೋಕ - 27)

ಮೂಲಮ್

ಆತ್ಮಜಾಮಸಿತಾಪಾಂಗೀಂ ವಯಃಶೀಲಗುಣಾನ್ವಿತಾಮ್ ।
ಮೃಗಯಂತೀಂ ಪತಿಂ ದಾಸ್ಯತ್ಯನುರೂಪಾಯ ತೇ ಪ್ರಭೋ ॥

ಅನುವಾದ

ಅವನಿಗೆ ರೂಪ, ಯೌವನ, ಗುಣ-ಶೀಲಗಳಿಂದ ಸಂಪನ್ನಳಾಗಿರುವ ಶ್ಯಾಮಲಲೋಚನೆಯಾದ ವಿವಾಹಯೋಗ್ಯಳಾದ ಕನ್ಯೆಯೊಬ್ಬಳಿದ್ದಾಳೆ. ಆಕೆಗೆ ನೀನೇ ಯೋಗ್ಯನಾದ ವರನಾಗಿರುವೆ. ಆಕೆಯನ್ನು ನಿನಗೆ ಆ ರಾಜನು ವಿವಾಹ ಮಾಡಿಕೊಡುವನು.॥27॥

(ಶ್ಲೋಕ - 28)

ಮೂಲಮ್

ಸಮಾಹಿತಂ ತೇ ಹೃದಯಂ ಯತ್ರೇಮಾನ್ಪರಿವತ್ಸರಾನ್ ।
ಸಾ ತ್ವಾಂ ಬ್ರಹ್ಮನ್ನೃಪವಧೂಃ ಕಾಮಮಾಶು ಭಜಿಷ್ಯತಿ ॥

ಅನುವಾದ

ಬ್ರಾಹ್ಮಣೋತ್ತಮನೇ! ಕಳೆದ ಅನೇಕ ವರ್ಷಗಳಿಂದ ನಿನ್ನ ಮನಸ್ಸು ಎಂತಹ ಭಾರ್ಯೆಯನ್ನು ಪಡೆಯಬೇಕೆಂದು ನೆಲೆಗೊಂಡಿದೆಯೋ, ಅಂತಹ ಪತ್ನಿಯಾಗಿ ಆ ರಾಜಕುಮಾರಿಯು ಬೇಗನೇ ನಿನಗೆ ದೊರೆತು ಯಥೇಷ್ಟವಾಗಿ ಸೇವೆಮಾಡುವಳು.॥28॥

(ಶ್ಲೋಕ - 29)

ಮೂಲಮ್

ಯಾ ತ ಆತ್ಮಭೃತಂ ವೀರ್ಯಂ ನವಧಾ ಪ್ರಸವಿಷ್ಯತಿ ।
ವೀರ್ಯೇ ತ್ವದೀಯೇ ಋಷಯ ಆಧಾಸ್ಯಂತ್ಯಂಜಸಾತ್ಮನಃ ॥

ಅನುವಾದ

ಆಕೆಯು ನಿನ್ನ ವೀರ್ಯವನ್ನು ತನ್ನ ಗರ್ಭದಲ್ಲಿ ಧರಿಸಿಕೊಂಡು ಅದರಿಂದ ಒಂಭತ್ತು ಕನ್ಯೆಯರನ್ನು ಹಡೆಯುವಳು. ಅನಂತರ ಮರೀಚಿಗಳೇ ಮುಂತಾದ ಮಹಾತ್ಮರು ಅವರನ್ನು ವಿವಾಹವಾಗಿ ಅವರಿಂದ ಸಂತಾನಗಳನ್ನು ಪಡೆಯುವರು.॥29॥

(ಶ್ಲೋಕ - 30)

ಮೂಲಮ್

ತ್ವಂ ಚ ಸಮ್ಯಗನುಷ್ಠಾಯ ನಿದೇಶಂ ಮ ಉಶತ್ತಮಃ ।
ಮಯಿ ತೀರ್ಥೀಕೃತಾಶೇಷಕ್ರಿಯಾರ್ಥೋ ಮಾಂ ಪ್ರಪತ್ಸ್ಯಸೇ ॥

ಅನುವಾದ

ನೀನೂ ಕೂಡ ನನ್ನ ಆಜ್ಞೆಯನ್ನು ಚೆನ್ನಾಗಿ ಪಾಲಿಸುವುದರಿಂದ ಚಿತ್ತಶುದ್ಧಿಯಾಗಿ, ಮತ್ತೆ ತನ್ನ ಎಲ್ಲ ಕರ್ಮಲಗಳನ್ನು ನನಗೆ ಅರ್ಪಿಸಿ ನನ್ನನ್ನೇ ಪಡೆಯುವೆ.॥30॥

(ಶ್ಲೋಕ - 31)

ಮೂಲಮ್

ಕೃತ್ವಾ ದಯಾಂ ಚ ಜೀವೇಷು ದತ್ತ್ವಾ ಚಾಭಯಮಾತ್ಮವಾನ್ ।
ಮಯ್ಯಾತ್ಮಾನಂ ಸಹ ಜಗದ್ದ್ರಕ್ಷ್ಯಸ್ಯಾತ್ಮನಿ ಚಾಪಿ ಮಾಮ್ ॥

ಅನುವಾದ

ಸಮಸ್ತ ಜೀವಿಗಳಲ್ಲಿಯೂ ದಯೆಯನ್ನು ತೋರಿ, ಅವುಗಳಿಗೆ ಅಭಯದಾನವನ್ನಿತ್ತು ಆತ್ಮಜ್ಞಾನವನ್ನು ಹೊಂದುವೆ. ಮತ್ತೆ ತನ್ನ ಸಹಿತ ಇಡೀ ಜಗತ್ತನ್ನು ನನ್ನಲ್ಲಿಯೂ ಮತ್ತು ನನ್ನನ್ನು ತನ್ನಲ್ಲಿಯೂ ಸ್ಥಿತನೆಂದು ನೋಡುವೆ.॥31॥

(ಶ್ಲೋಕ - 32)

ಮೂಲಮ್

ಸಹಾಹಂ ಸ್ವಾಂಶಕಲಯಾ ತ್ವದ್ವೀರ್ಯೇಣ ಮಹಾಮುನೇ ।
ತವ ಕ್ಷೇತ್ರೇ ದೇವಹೂತ್ಯಾಂ ಪ್ರಣೇಷ್ಯೇ ತತ್ತ್ವಸಂಹಿತಾಮ್ ॥

ಅನುವಾದ

ಮಹಾಮುನಿಯೇ ! ನಾನೂ ಕೂಡ ನನ್ನ ಅಂಶ-ಕಲೆಯಿಂದ ನಿನ್ನ ವೀರ್ಯದ ಮೂಲಕ ನಿನ್ನ ಪತ್ನಿಯಾದ ದೇವಹೂತಿಯ ಗರ್ಭದಲ್ಲಿ ಅವತರಿಸಿ ಸಾಂಖ್ಯಶಾಸದ ಪ್ರವರ್ತಕನಾಗುವೆನು.॥32॥

(ಶ್ಲೋಕ - 33)

ಮೂಲಮ್ (ವಾಚನಮ್)

ಮೈತ್ರೇಯ ಉವಾಚ

ಮೂಲಮ್

ಏವಂ ತಮನುಭಾಷ್ಯಾಥ ಭಗವಾನ್ಪ್ರತ್ಯಗಕ್ಷಜಃ ।
ಜಗಾಮ ಬಿಂದುಸರಸಃ ಸರಸ್ವತ್ಯಾ ಪರಿಶ್ರಿತಾತ್ ॥

ಅನುವಾದ

ಶ್ರೀಮೈತ್ರೇಯರು ಹೇಳುತ್ತಾರೆ ವಿದುರನೇ! ಅಂತರ್ಮುಖವಾದ ಇಂದ್ರಿಯಗಳಿಗೆ ಗೋಚರನಾಗುವ ಶ್ರೀಹರಿಯು ಕರ್ದಮ ಋಷಿಗಳೊಡನೆ ಹೀಗೆ ಸಂಭಾಷಿಸಿ ಸರಸ್ವತೀನದಿಯಿಂದ ಸುತ್ತುವರಿಯಲ್ಪಟ್ಟ ಬಿಂದುಸರೋವರ ತೀರ್ಥದಿಂದ ತನ್ನ ಲೋಕಕ್ಕೆ ಹೊರಟನು.॥33॥

(ಶ್ಲೋಕ - 34)

ಮೂಲಮ್

ನಿರೀಕ್ಷತಸ್ತಸ್ಯ ಯಯಾವಶೇಷಸಿದ್ಧೇಶ್ವರಾಭಿಷ್ಟುತಸಿದ್ಧಮಾರ್ಗಃ ।
ಆಕರ್ಣಯನ್ ಪತ್ರರಥೇಂದ್ರಪಕ್ಷೈರುಚ್ಚಾರಿತಂ ಸ್ತೋಮಮುದೀರ್ಣಸಾಮ ॥

ಅನುವಾದ

ಮಹಾಮಹಿಮರಾದ ಕರ್ದಮರು ನೋಡುತ್ತಿರುವಂತೆಯೇ ಗರುಡನನ್ನೇರಿ ಅವನ ರೆಕ್ಕೆಗಳಿಂದ ಕೇಳಿಬರುತ್ತಿದ್ದ ಸಾಮಗಾನವನ್ನೂ, ಸ್ತೋಮವೆಂಬ ಋಕ್ಕುಗಳ ಸ್ತುತಿಯನ್ನು ಕೇಳುತ್ತಾ ಜ್ಞಾನಸಿದ್ಧರಾದ ಮಹಾಯೋಗಿಗಳು ಶ್ಲಾಘಿಸುತ್ತಿರುವ ಸಿದ್ಧಮಾರ್ಗದಿಂದ ಶ್ರೀಹರಿಯು ವೈಕುಂಠಕ್ಕೆ ತೆರಳಿದನು.॥34॥

(ಶ್ಲೋಕ - 35)

ಮೂಲಮ್

ಅಥ ಸಂಪ್ರಸ್ಥಿತೇ ಶುಕ್ಲೇ ಕರ್ದಮೋ ಭಗವಾನೃಷಿಃ ।
ಆಸ್ತೇ ಸ್ಮ ಬಿಂದುಸರಸಿ ತಂ ಕಾಲಂ ಪ್ರತಿಪಾಲಯನ್ ॥

ಅನುವಾದ

ವಿದುರನೇ ! ಭಗವಂತನು ಹಾಗೆ ತೆರಳಿದ ಬಳಿಕ ಪೂಜ್ಯರಾದ ಕರ್ದಮರು ಆತನು ಹೇಳಿದ್ದ ಕಾಲವನ್ನು ಎದುರುನೋಡುತ್ತಾ ಬಿಂದುಸರೋವರದ ಬಳಿಯಲ್ಲೇ ಇದ್ದರು.॥35॥

(ಶ್ಲೋಕ - 36)

ಮೂಲಮ್

ಮನುಃ ಸ್ಯಂದನಮಾಸ್ಥಾಯ ಶಾತಕೌಂಭಪರಿಚ್ಛದಮ್ ।
ಆರೋಪ್ಯ ಸ್ವಾಂ ದುಹಿತರಂ ಸಭಾರ್ಯಃ ಪರ್ಯಟನ್ಮಹೀಮ್ ॥

(ಶ್ಲೋಕ - 37)

ಮೂಲಮ್

ತಸ್ಮಿನ್ ಸುಧನ್ವನ್ನಹನಿ ಭಗವಾನ್ಯತ್ಸಮಾದಿಶತ್ ।
ಉಪಾಯಾದಾಶ್ರಮಪದಂ ಮುನೇಃ ಶಾಂತವ್ರತಸ್ಯ ತತ್ ॥

ಅನುವಾದ

ಇತ್ತಕಡೆಯಿಂದ ಸ್ವಾಯಂಭುವಮನುವು ಮಹಾರಾಣಿ ಶತರೂಪಾಳೊಂದಿಗೆ ಸುವರ್ಣಮಯ ರಥದಲ್ಲಿ ತನ್ನ ಮಗಳೊಂದಿಗೆ ಭೂಮಿಯಲ್ಲಿ ಸಂಚರಿಸುತ್ತಾ ಶ್ರೀಭಗವಂತನು ಹೇಳಿದ್ದ ದಿವಸದಲ್ಲಿ ಶಾಂತಿ ಪರಾಯಣ, ವ್ರತನಿಷ್ಠರಾದ ಮಹರ್ಷಿಕರ್ದಮರ ಆಶ್ರಮವನ್ನು ತಲುಪಿದರು.॥36-37॥

(ಶ್ಲೋಕ - 38)

ಮೂಲಮ್

ಯಸ್ಮಿನ್ಭಗವತೋ ನೇತ್ರಾನ್ನ್ಯಪತನ್ನಶ್ರುಬಿಂದವಃ ।
ಕೃಪಯಾ ಸಂಪರೀತಸ್ಯ ಪ್ರಪನ್ನೇರ್ಪಿತಯಾ ಭೃಶಮ್ ॥

(ಶ್ಲೋಕ - 39)

ಮೂಲಮ್

ತದ್ವೈ ಬಿಂದುಸರೋ ನಾಮ ಸರಸ್ವತ್ಯಾ ಪರಿಪ್ಲುತಮ್ ।
ಪುಣ್ಯಂ ಶಿವಾಮೃತಜಲಂ ಮಹರ್ಷಿಗಣಸೇವಿತಮ್ ॥

ಅನುವಾದ

ಸರಸ್ವತೀನದಿಯ ಜಲದಿಂದ ತುಂಬಿ ತುಳುಕುತ್ತಿದ್ದ ಆ ‘ಬಿಂದುಸರೋವರ’ವು ತನ್ನ ಶರಣಾಗತ ಭಕ್ತನಾದ ಕರ್ದಮರ ವಿಷಯದಲ್ಲಿ ಪರಮ ಕರುಣೆತುಂಬಿದ ಕಣ್ಣುಗಳಿಂದ ಭಗವಂತನ ಕಣ್ಣೀರಿನ ಬಿಂದುಗಳು ಉದುರಿದ್ದರಿಂದ ಇದಕ್ಕೆ ಈ ಹೆಸರು ಬಂದಿತ್ತು. ಆ ತೀರ್ಥವು ಅತ್ಯಂತ ಪವಿತ್ರವಾದುದು. ಅದರ ಜಲವು ಮಂಗಳಮಯವೂ, ಅಮೃತದಂತೆ ಮಧುರವಾದುದು. ಮಹರ್ಷಿಗಡಣವು ಸದಾಕಾಲ ಅದನ್ನು ಸೇವಿಸುತ್ತಿದ್ದರು.॥38-39॥

(ಶ್ಲೋಕ - 40)

ಮೂಲಮ್

ಪುಣ್ಯದ್ರುಮಲತಾಜಾಲೈಃ ಕೂಜತ್ಪುಣ್ಯಮೃಗದ್ವಿಜೈಃ ।
ಸರ್ವರ್ತುಲಪುಷ್ಪಾಢ್ಯಂ ವನರಾಜಿಶ್ರಿಯಾನ್ವಿತಮ್ ॥

ಅನುವಾದ

ಆ ಸರೋವರವು ಬಗೆ-ಬಗೆಯಾಗಿ ಶಬ್ದಮಾಡುತ್ತಿದ್ದ ಪವಿತ್ರವಾದ ಮೃಗಗಳಿಂದಲೂ, ಪಕ್ಷಿಗಳಿಂದಲೂ ಕೂಡಿದ್ದು, ಪುಣ್ಯ ವೃಕ್ಷಗಳಿಂದಲೂ, ಬಳ್ಳಿಗಳಿಂದಲೂ ಸುತ್ತುವರಿಯಲ್ಪಟ್ಟಿತ್ತು. ಎಲ್ಲ ಋತುಗಳಲ್ಲಿಯೂ ಬಿಡುವ ಹೂವು-ಹಣ್ಣುಗಳಿಂದ ಸಂಪನ್ನವಾಗಿ ಸುಂದರವಾದ ವನಶ್ರೇಣಿಯಿಂದ ಅದರ ಶೋಭೆ ಹೆಚ್ಚಿಸಿತ್ತು.॥40॥

(ಶ್ಲೋಕ - 41)

ಮೂಲಮ್

ಮತ್ತದ್ವಿಜಗಣೈರ್ಘುಷ್ಟಂ ಮತ್ತಭ್ರಮರವಿಭ್ರಮಮ್ ।
ಮತ್ತಬರ್ಹಿನಟಾಟೋಪಮಾಹ್ವಯನ್ಮತ್ತಕೋಕಿಲಮ್ ॥

ಅನುವಾದ

ಅಲ್ಲಿ ಮದಿಸಿದ ಹಕ್ಕಿಗಳ ಹಿಂಡುಗಳು ಚಿಲಿ-ಪಿಲಿಗುಟ್ಟುತ್ತಿದ್ದವು. ಮದಭರಿತ ದುಂಬಿಗಳು ಝೇಂಕರಿಸುತ್ತಿದ್ದವು. ಉನ್ಮತ್ತ ನವಿಲುಗಳು ಗರಿಗಳನ್ನು ಕೆದರಿಕೊಂಡು ನಟರಂತೆ ಕುಣಿದಾಡುತ್ತಿದ್ದವು. ಮದಿಸಿದ ಕೋಗಿಲೆಗಳು ‘ಕುಹೂ-ಕುಹೂ’ ಎಂದು ಶಬ್ದಮಾಡುತ್ತಾ ಒಂದನ್ನೊಂದು ಕರೆಯುವಂತೆ ಕಾಣುತ್ತಿದ್ದವು.॥41॥

(ಶ್ಲೋಕ - 42)

ಮೂಲಮ್

ಕದಂಬಚಂಪಕಾಶೋಕಕರಂಜಬಕುಲಾಸನೈಃ ।
ಕುಂದಮಂದಾರಕುಟಜೈಶ್ಚೂತಪೋತೈರಲಂಕೃತಮ್ ॥

ಅನುವಾದ

ಆ ಆಶ್ರಮವು ಕದಂಬ, ಚಂಪಕ, ಅಶೋಕ, ಕರಂಜ (ಹೊಂಗೆ), ಬಕುಳ, ಅಸನ, ಕುಂದ, ಮಂದಾರ, ಕುಟಜ, ಚೂತ ಮುಂತಾದ ವೃಕ್ಷಗಳಿಂದ ತುಂಬಿಕೊಂಡು ರಮಣೀಯವಾಗಿತ್ತು.॥42॥

(ಶ್ಲೋಕ - 43)

ಮೂಲಮ್

ಕಾರಂಡವೈಃ ಪ್ಲವೈರ್ಹಂಸೈಃ ಕುರರೈರ್ಜಲಕುಕ್ಕುಟೈಃ ।
ಸಾರಸೈಶ್ಚಕ್ರವಾಕೈಶ್ಚ ಚಕೋರೈರ್ವಲ್ಗು ಕೂಜಿತಮ್ ॥

ಅನುವಾದ

ಹಾಗೆಯೇ ಅಲ್ಲಿ ಕಾರಂಡವ, ಪ್ಲವ, ಹಂಸ, ಕುಕರ, ನೀರುಕೋಳಿ, ಸಾರಸ, ಚಕ್ರವಾಕ, ಚಕೋರ ಮುಂತಾದ ಪಕ್ಷಿಗಳು ಇಂಪಾಗಿ ಕಲರವಮಾಡುತ್ತಿದ್ದವು.॥43॥

(ಶ್ಲೋಕ - 44)

ಮೂಲಮ್

ತಥೈವ ಹರಿಣೈಃ ಕ್ರೋಡೈಃ ಶ್ವಾವಿದ್ಗವಯಕುಂಜರೈಃ ।
ಗೋಪುಚ್ಛೈರ್ಹರಿಭಿರ್ಮರ್ಕೈರ್ನಕುಲೈರ್ನಾಭಿಭಿರ್ವೃತಮ್ ॥

ಅನುವಾದ

ಜಿಂಕೆ, ಹಂದಿ, ಶಲ್ಯಕ, ಗವಯ, ಗಜ, ಗೋಪುಚ್ಛ, ಸಿಂಹ, ವಾನರ, ಮುಂಗುಸಿ, ಕಸ್ತೂರಿಮೃಗ ಮುಂತಾದ ವನ್ಯಜೀವಿಗಳೂ ಅಲ್ಲಿ ಓಡಾಡುತ್ತಿದ್ದವು.॥44॥

(ಶ್ಲೋಕ - 45)

ಮೂಲಮ್

ಪ್ರವಿಶ್ಯ ತತ್ತೀರ್ಥವರಮಾದಿರಾಜಃ ಸಹಾತ್ಮಜಃ ।
ದದರ್ಶ ಮುನಿಮಾಸೀನಂ ತಸ್ಮಿನ್ ಹುತಹುತಾಶನಮ್ ॥

ಅನುವಾದ

ಅಂತಹ ಆಶ್ರಮವನ್ನೂ, ತೀರ್ಥವನ್ನೂ ಆದಿರಾಜನಾದ ಸ್ವಾಯಂಭುವ ಮನುವು ತನ್ನ ಕನ್ಯೆಯೊಡನೆ ತಲುಪಿದಾಗ ಕರ್ದಮ ಮುನಿಗಳು ಅಗ್ನಿಹೋತ್ರಾದಿಗಳಿಂದ ನಿವೃತ್ತರಾಗಿ ಸುಖಾಸೀನರಾಗಿರುವುದನ್ನು ಕಂಡನು.॥45॥

(ಶ್ಲೋಕ - 46)

ಮೂಲಮ್

ವಿದ್ಯೋತಮಾನಂ ವಪುಷಾ ತಪಸ್ಯುಗ್ರಯುಜಾ ಚಿರಮ್ ।
ನಾತಿಕ್ಷಾಮಂ ಭಗವತಃ ಸ್ನಿಗ್ಧಾಪಾಂಗಾವಲೋಕನಾತ್ ।
ತದ್ವ್ಯಾಹೃತಾಮೃತಕಲಾಪೀಯೂಷಶ್ರವಣೇನ ಚ ॥

ಅನುವಾದ

ಬಹಳ ದಿವಸಗಳ ಕಾಲ ಉಗ್ರವಾದ ತಪಸ್ಸಿನಿಂದಾಗಿ ಅವರ ಶರೀರವು ಮಹಾತೇಜಸ್ಸಿನಿಂದ ಬೆಳಗುತ್ತಿತ್ತು. ದೀರ್ಘಕಾಲ ತಪಸ್ಸು ಆಚರಿಸಿದ್ದರೂ ಅವರು ಬಳಲಿದಂತೆ ಕಾಣುತ್ತಿರಲಿಲ್ಲ. ಏಕೆಂದರೆ, ಭಗವಂತನ ಸ್ನೇಹಪೂರ್ಣವಾದ ದೃಷ್ಟಿಯಿಂದಲೂ, ಕರ್ಣಾಮೃತವಾದ ವಚನಗಳಿಂದಲೂ ಆವರಿಗೆ ಅನುಗ್ರಹವಾಗಿತ್ತು.॥46॥

(ಶ್ಲೋಕ - 47)

ಮೂಲಮ್

ಪ್ರಾಂಶುಂ ಪದ್ಮಪಲಾಶಾಕ್ಷಂ ಜಟಿಲಂ ಚೀರವಾಸಸಮ್ ।
ಉಪಸಂಸೃತ್ಯ ಮಲಿನಂ ಯಥಾರ್ಹಣಮಸಂಸ್ಕೃತಮ್ ॥

ಅನುವಾದ

ಅವರ ದೇಹವು ನೀಳವಾಗಿದ್ದು, ಕಣ್ಣುಗಳು ಕಮಲದ ಎಸಳಿನಂತೆ ಕಮನೀಯವಾಗಿದ್ದವು. ತಲೆಯಲ್ಲಿ ಜಟಾಜೂಟವೂ, ನಡುವಿನಲ್ಲಿ ನಾರುಮಡಿಯು ಶೋಭಿಸುತ್ತಿತ್ತು. ಹತ್ತಿರದಿಂದ ನೋಡಿದರೆ ಅವರು ಸಾಣೆ ಹಿಡಿಯದಿರುವ ಮಹಾಮೂಲ್ಯ ರತ್ನದಂತೆ ಮಲಿನರಾಗಿ ಕಾಣುತ್ತಿದ್ದರು.॥47॥

(ಶ್ಲೋಕ - 48)

ಮೂಲಮ್

ಅಥೋಟಜಮುಪಾಯಾತಂ ನೃದೇವಂ ಪ್ರಣತಂ ಪುರಃ ।
ಸಪರ್ಯಯಾ ಪರ್ಯಗೃಹ್ಣಾತ್ಪ್ರತಿನಂದ್ಯಾನುರೂಪಯಾ ॥

ಅನುವಾದ

ಮಹಾರಾಜ ಸ್ವಾಯಂಭುವಮನುವು ತನ್ನ ಕುಟೀರಕ್ಕೆ ಬಂದು ತನಗೆ ನಮಸ್ಕರಿಸುವುದನ್ನು ಕಂಡು ಅವರು ಆತನನ್ನು ಆಶೀರ್ವಾದ ದಿಂದ ಸಂತೋಷಗೊಳಿಸಿ ಯಥೋಚಿತವಾದ ಆತಿಥ್ಯದಿಂದ ಸತ್ಕರಿಸಿದರು.॥48॥

(ಶ್ಲೋಕ - 49)

ಮೂಲಮ್

ಗೃಹೀತಾರ್ಹಣಮಾಸೀನಂ ಸಂಯತಂ ಪ್ರೀಣಯನ್ಮುನಿಃ ।
ಸ್ಮರನ್ ಭಗವದಾದೇಶಮಿತ್ಯಾಹ ಶ್ಲಕ್ಷ್ಣಯಾ ಗಿರಾ ॥

ಅನುವಾದ

ಮನುವು ಅವರ ಸತ್ಕಾರವನ್ನು ಸ್ವೀಕರಿಸಿ, ಶಾಂತವಾದ ಮನಸ್ಸಿನಿಂದ ಆಸನದಲ್ಲಿ ಸುಖವಾಗಿ ಕುಳಿತುಕೊಳ್ಳಲು ಮುನಿ ವರ್ಯರು ಭಗವಂತನ ಆಜ್ಞೆಯನ್ನು ಸ್ಮರಿಸಿಕೊಂಡು ಅವನನ್ನು ಮಧುರವಾಣಿಯಿಂದ ಸಂತೋಷಪಡಿಸುತ್ತಾ ಹೀಗೆಂದರು.॥49॥

(ಶ್ಲೋಕ - 50)

ಮೂಲಮ್

ನೂನಂ ಚಂಕ್ರಮಣಂ ದೇವ ಸತಾಂ ಸಂರಕ್ಷಣಾಯ ತೇ ।
ವಧಾಯ ಚಾಸತಾಂ ಯಸ್ತ್ವಂ ಹರೇಃ ಶಕ್ತಿರ್ಹಿ ಪಾಲಿನೀ ॥

ಅನುವಾದ

ದೇವಾ ! ಪೂಜ್ಯನಾದ ನೀನು ಭಗವಂತನಾದ ಮಹಾ ವಿಷ್ಣುವಿನ ಪಾಲನಶಕ್ತಿರೂಪನು. ಆದ್ದರಿಂದ ನಿನ್ನ ಸಂಚಾರದ ಉದ್ದೇಶವು ನಿಃಸಂಶಯವಾಗಿ ಸಜ್ಜನರ ರಕ್ಷಣೆ ಮತ್ತು ದುರ್ಜನರ ಸಂಹಾರಕ್ಕಾಗಿಯೇ ಇರುವುದು.॥50॥

(ಶ್ಲೋಕ - 51)

ಮೂಲಮ್

ಯೋರ್ಕೇಂದ್ವಗ್ನೀಂದ್ರವಾಯೂನಾಂ ಯಮಧರ್ಮಪ್ರಚೇತಸಾಮ್ ।
ರೂಪಾಣಿ ಸ್ಥಾನ ಆಧತ್ಸೇ ತಸ್ಮೈ ಶುಕ್ಲಾಯ ತೇ ನಮಃ ॥

ಅನುವಾದ

ನೀನು ಸಾಕ್ಷಾತ್ತಾಗಿ ಪರಿಶುದ್ಧವಾದ ವಿಷ್ಣುರೂಪಿಯೇ ಆಗಿದ್ದು, ಬೇರೆ-ಬೇರೆ ಕರ್ಮಗಳಿಗೋಸ್ಕರ ಸೂರ್ಯ, ಚಂದ್ರ, ಇಂದ್ರ, ಅಗ್ನಿ, ವಾಯು, ಯಮ, ವರುಣ ಮುಂತಾದ ರೂಪಗಳನ್ನು ಧರಿಸುವವ ನಾಗಿದ್ದೀಯೇ. ನಿನಗೆ ನಮಸ್ಕಾರಗಳು.॥51॥

(ಶ್ಲೋಕ - 52)

ಮೂಲಮ್

ನ ಯದಾ ರಥಮಾಸ್ಥಾಯ ಚೈತ್ರಂ ಮಣಿಗಣಾರ್ಪಿತಮ್ ।
ವಿಸ್ಫೂರ್ಜಚ್ಚಂಡ ಕೋದಂಡೋ ರಥೇನ ತ್ರಾಸಯನ್ನಘಾನ್ ॥

(ಶ್ಲೋಕ - 53)

ಮೂಲಮ್

ಸ್ವಸೈನ್ಯಚರಣಕ್ಷುಣ್ಣಂ ವೇಪಯನ್ಮಂಡಲಂ ಭುವಃ ।
ವಿಕರ್ಷನ್ ಬೃಹತೀಂ ಸೇನಾಂ ಪರ್ಯಟಸ್ಯಂಶುಮಾನಿವ ॥

(ಶ್ಲೋಕ - 54)

ಮೂಲಮ್

ತದೈವ ಸೇತವಃ ಸರ್ವೇ ವರ್ಣಾಶ್ರಮನಿಬಂಧನಾಃ ।
ಭಗವದ್ರಚಿತಾ ರಾಜನ್ ಭಿದ್ಯೇರನ್ಬತ ದಸ್ಯುಭಿಃ ॥

(ಶ್ಲೋಕ - 55)

ಮೂಲಮ್

ಅಧರ್ಮಶ್ಚ ಸಮೇಧೇತ ಲೋಲುಪೈರ್ವ್ಯಂಕುಶೈರ್ನೃಭಿಃ ।
ಶಯಾನೇ ತ್ವಯಿ ಲೋಕೋಯಂ ದಸ್ಯುಗ್ರಸ್ತೋ ವಿನಂಕ್ಷ್ಯತಿ ॥

ಅನುವಾದ

ನೀನು ರತ್ನಘಟಿತ ವಾದ ವಿಜಯರಥದಲ್ಲಿ ಕುಳಿತು ಪ್ರಚಂಡವಾದ ಧನುಸ್ಸನ್ನು ಟಂಕಾರಮಾಡುತ್ತಾ ರಥದ ಘುರ್ಘರ ಧ್ವನಿಯಿಂದಲೇ ಪಾಪಿಗಳು ಭಯಗ್ರಸ್ತರಾಗುವಂತೆ ಮಾಡುವೆ. ಸೈನ್ಯದ ಪದಹತಿಯಿಂದ ಭೂಮಿಯನ್ನು ನಡುಗಿಸುತ್ತಾ ವಿಶಾಲವಾದ ಸೇನೆಯೊಡನೆ ಭೂಮಿಯ ಮೇಲೆ ಸೂರ್ಯನಂತೆ ಸಂಚರಿಸುತ್ತಿರುವೆ. ನೀನೇನಾದರೂ ಹೀಗೆ ಮಾಡದಿದ್ದರೆ ದಸ್ಯುಗಳು ಭಗವಂತನು ರಚಿಸಿದ ವರ್ಣಾ ಶ್ರಮಧರ್ಮಗಳ ಮರ್ಯಾದೆಯನ್ನು ಒಡನೆಯೇ ನಾಶ ಮಾಡಿ ಬಿಡುವರು. ವಿಷಯಾಸಕ್ತರಾದ ಜನರು ಅಡೆ-ತಡೆಗಳಿಲ್ಲದೆ ಎಲ್ಲೆಡೆ ಅಧರ್ಮವನ್ನೇ ಹರಡುವರು. ನೀನೇನಾದರೂ ಲೋಕದ ಕಡೆಗೆ ಗಮನ ಕೊಡದೆ ನಿಶ್ಚಿಂತನಾಗಿಬಿಟ್ಟರೆ ಈ ಲೋಕವು ದುರಾಚಾರಿಗಳ ತೆಕ್ಕೆಯಲ್ಲಿ ಸಿಕ್ಕಿಬಿದ್ದು ನಾಶವಾಗಿ ಬಿಡುವುದು. ॥52-55॥

(ಶ್ಲೋಕ - 56)

ಮೂಲಮ್

ಅಥಾಪಿ ಪೃಚ್ಛೇ ತ್ವಾಂ ವೀರ ಯದರ್ಥಂ ತ್ವಮಿಹಾಗತಃ ।
ತದ್ವಯಂ ನಿರ್ವ್ಯಲೀಕೇನ ಪ್ರತಿಪದ್ಯಾಮಹೇ ಹೃದಾ ॥

ಅನುವಾದ

ಎಲೈ ಮಹಾವೀರನೇ! ಇಷ್ಟೆಲ್ಲಾ ಇದ್ದರೂ ‘ನೀನು ಇಲ್ಲಿಗೆ ಯಾವ ಪ್ರಯೋಜನಕ್ಕಾಗಿ ಬಂದಿರುವೆ?’ ಎಂದು ನಾನು ಕೇಳುತ್ತೇನೆ. ನೀವು ಯಾವುದೇ ಅಪ್ಪಣೆ ಮಾಡಿದರೂ ಅದನ್ನು ನಾನು ನಿಷ್ಕಪಟಭಾವದಿಂದ ಸಂತೋಷವಾಗಿ ಸ್ವೀಕರಿಸುವೆನು.॥56॥

ಅನುವಾದ (ಸಮಾಪ್ತಿಃ)

ಇಪ್ಪತ್ತೊಂದನೆಯ ಅಧ್ಯಾಯವು ಮುಗಿಯಿತು.॥21॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ತೃತೀಯಸ್ಕಂಧೇ ಏಕವಿಂಶೋಽಧ್ಯಾಯಃ॥21॥