೨೦

[ಇಪ್ಪತ್ತನೆಯ ಅಧ್ಯಾಯ]

ಭಾಗಸೂಚನಾ

ಬ್ರಹ್ಮದೇವರು ಮಾಡಿದ ನಾನಾ ಪ್ರಕಾರದ ಸೃಷ್ಟಿಯ ವರ್ಣನೆ

(ಶ್ಲೋಕ - 1)

ಮೂಲಮ್ (ವಾಚನಮ್)

ಶೌನಕ ಉವಾಚ

ಮೂಲಮ್

ಮಹೀಂ ಪ್ರತಿಷ್ಠಾಮಧ್ಯಸ್ಯ ಸೌತೇ ಸ್ವಾಯಂಭುವೋ ಮನುಃ ।
ಕಾನ್ಯನ್ವತಿಷ್ಠದ್ ದ್ವಾರಾಣಿ ಮಾರ್ಗಾಯಾವರಜನ್ಮನಾಮ್ ॥

ಅನುವಾದ

ಶೌನಕರು ಕೇಳುತ್ತಾರೆ ಸೂತಪುರಾಣಿಕರೇ ! ಜೀವಿಗಳಿಗೆ ಆಧಾರಸ್ಥಾನವಾಗಿರುವ ಭೂಮಿಯನ್ನು ಪಡೆದುಕೊಂಡ ಬಳಿಕ ಸ್ವಾಯಂಭುವ ಮನುವು ಮುಂದೆ ಹುಟ್ಟಲಿರುವ ಸಂತತಿಯನ್ನು ಉಂಟುಮಾಡಲು ಯಾವ-ಯಾವ ಉಪಾಯಗಳನ್ನು ಮಾಡಿದನು? ॥1॥

(ಶ್ಲೋಕ - 2)

ಮೂಲಮ್

ಕ್ಷತ್ತಾ ಮಹಾಭಾಗವತಃ ಕೃಷ್ಣಸ್ಯೈಕಾಂತಿಕಃ ಸುಹೃತ್ ।
ಯಸ್ತತ್ಯಾಜಾಗ್ರಜಂ ಕೃಷ್ಣೇ ಸಾಪತ್ಯಮಘವಾನಿತಿ ॥

ಅನುವಾದ

ವಿದುರನಾದರೋ ಪರಮ ಭಾಗವತೋತ್ತಮನು. ಅವನು ಭಗವಾನ್ ಶ್ರೀಕೃಷ್ಣನ ಏಕಾಂತಭಕ್ತನೂ, ಸ್ನೇಹಿತನೂ ಆಗಿದ್ದನು. ಆದ್ದರಿಂದಲೇ ತನ್ನ ಅಣ್ಣನಾದ ಧೃತರಾಷ್ಟ್ರನೂ, ಅವನ ಪುತ್ರರೂ ಶ್ರೀಕೃಷ್ಣನನ್ನು ತಿರಸ್ಕಾರಮಾಡಿದ ಅಪರಾಧಿಗಳೆಂದು ತಿಳಿದು ಅವ ರನ್ನು ಪರಿತ್ಯಾಗಮಾಡಿಬಿಟ್ಟನು.॥2॥

(ಶ್ಲೋಕ - 3)

ಮೂಲಮ್

ದ್ವೈಪಾಯನಾದನವರೋ ಮಹಿತ್ವೇ ತಸ್ಯ ದೇಹಜಃ ।
ಸರ್ವಾತ್ಮನಾಶ್ರಿತಃ ಕೃಷ್ಣಂ ತತ್ಪರಾಂಶ್ಚಾಪ್ಯನುವ್ರತಃ ॥

ಅನುವಾದ

ಅವನು ದ್ವೈಪಾಯನ ಮಹರ್ಷಿಗಳ ಸುಪುತ್ರನು. ಮಹಿಮೆಯಲ್ಲಿ ಅವನು ತನ್ನ ತೀರ್ಥ ರೂಪರಿಂದ ಯಾವ ವಿಷಯದಲ್ಲಿಯೂ ಕಡಿಮೆಯಾಗಿರಲಿಲ್ಲ. ಎಲ್ಲ ಪ್ರಕಾರಗಳಿಂದಲೂ ಭಗವಾನ್ ಶ್ರೀಕೃಷ್ಣನ ಆಶ್ರಿತನೂ, ಕೃಷ್ಣ ಭಕ್ತರ ಅನುಗಾಮಿಯೂ ಆಗಿದ್ದನು.॥3॥

(ಶ್ಲೋಕ - 4)

ಮೂಲಮ್

ಕಿಮನ್ವಪೃಚ್ಛನ್ ಮೈತ್ರೇಯಂ ವಿರಜಾಸ್ತೀರ್ಥಸೇವಯಾ ।
ಉಪಗಮ್ಯ ಕುಶಾವರ್ತ ಆಸೀನಂ ತತ್ತ್ವವಿತ್ತಮಮ್ ॥

ಅನುವಾದ

ತೀರ್ಥಯಾತ್ರೆಗಳನ್ನು ಮಾಡಿದ್ದರಿಂದ ಆತನ ಅಂತಃಕರಣವು ಇನ್ನೂ ಪರಿಶುದ್ಧವಾಗಿತ್ತು. ಆ ಮಹಾತ್ಮನು ಕುಶಾವರ್ತ (ಹರಿದ್ವಾರ) ಕ್ಷೇತ್ರದಲ್ಲಿ ಕುಳಿತಿದ್ದ ತತ್ತ್ವಜ್ಞಾನಿಶ್ರೇಷ್ಠರಾದ ಮೈತ್ರೇಯಮಹರ್ಷಿಗಳ ಬಳಿಗೆ ಹೋಗಿ ಏನೇನು ಕೇಳಿದನು?॥4॥

(ಶ್ಲೋಕ - 5)

ಮೂಲಮ್

ತಯೋಃ ಸಂವದತೋಃ ಸೂತ ಪ್ರವೃತ್ತಾ ಹ್ಯಮಲಾಃ ಕಥಾಃ ।
ಆಪೋ ಗಾಂಗಾ ಇವಾಘಘ್ನೀರ್ಹರೇಃ ಪಾದಾಂಬುಜಾಶ್ರಯಾಃ ॥

ಅನುವಾದ

ಸೂತಪುರಾಣಿಕರೇ ! ಶ್ರೀಹರಿಯ ಕಥೆಗಳು ಅವನ ಶ್ರೀಪಾದತೀರ್ಥವಾದ ಗಂಗಾಜಲದಂತೆಯೇ ಸಮಸ್ತ ಪಾಪಗಳನ್ನು ನಾಶಮಾಡುವವು. ಶ್ರೀಮೈತ್ರೇಯರಿಗೂ, ವಿದುರನಿಗೂ ನಡೆದ ಸಂಭಾಷಣೆಯಲ್ಲಿ ಶ್ರೀಹರಿಯ ಚರಣಗಳಿಗೆ ಸಂಬಂಧ ಪಟ್ಟ ಪರಮಪವಿತ್ರವಾದ ಯಾವ ಕಥೆಗಳು ನಡೆದುವೋ ಅವುಗಳನ್ನು ನಮಗೂ ಹೇಳಿರಿ.॥5॥

(ಶ್ಲೋಕ - 6)

ಮೂಲಮ್

ತಾ ನಃ ಕೀರ್ತಯ ಭದ್ರಂ ತೇ ಕೀರ್ತನ್ಯೋದಾರಕರ್ಮಣಃ ।
ರಸಜ್ಞಃ ಕೋ ನು ತೃಪ್ಯೇತ ಹರಿಲೀಲಾಮೃತಂ ಪಿಬನ್ ॥

ಅನುವಾದ

ನಿಮಗೆ ಮಂಗಳವಾಗಲೀ. ಸಂಕೀರ್ತನೆ ಮಾಡಲು ಯೋಗ್ಯವಾದ ಉದಾರ ಚಾರಿತ್ರ್ಯವುಳ್ಳ ಸ್ವಾಮಿಯ ಅವತಾರಲೀಲೆಗಳು ಅಮೃತರೂಪವೇ ಆಗಿವೆ. ಅವನ್ನು ನಮಗೂ ಕೀರ್ತಿಸುವವರಾಗಿರಿ. ಅವುಗಳನ್ನು ಎಷ್ಟೇ ಪಾನ ಮಾಡಿ ದರೂ ರಸಿಕರಾದವರಿಗೆ ತೃಪ್ತಿಯು ಹೇಗೆ ಉಂಟಾದೀತು ? ॥6॥

(ಶ್ಲೋಕ - 7)

ಮೂಲಮ್

ಏವಮುಗ್ರಶ್ರವಾಃ ಪೃಷ್ಟ ಋಷಿಭಿರ್ನೈಮಿಷಾಯನೈಃ ।
ಭಗವತ್ಯರ್ಪಿತಾಧ್ಯಾತ್ಮಸ್ತಾನಾಹ ಶ್ರೂಯತಾಮಿತಿ ॥

ಅನುವಾದ

ನೈಮಿಷಾರಣ್ಯನಿವಾಸಿಗಳಾದ ಮುನಿಗಳು ಹೀಗೆ ಪ್ರಶ್ನೆ ಮಾಡಲು ಉಗ್ರಶ್ರವರೆಂಬ ಸೂತಪುರಾಣಿಕರು ಭಗವಂತನಲ್ಲಿ ಚಿತ್ತ ವನ್ನು ನೆಲೆ ಗೊಳಿಸಿ, ಅವರಿಗೆ ಕೇಳಿರಿ ಎಂದು ಹೇಳತೊಡಗಿದರು.॥7॥

(ಶ್ಲೋಕ - 8)

ಮೂಲಮ್ (ವಾಚನಮ್)

ಸೂತ ಉವಾಚ

ಮೂಲಮ್

ಹರೇರ್ಧೃತಕ್ರೋಡತನೋಃ ಸ್ವಮಾಯಯಾ
ನಿಶಮ್ಯ ಗೋರುದ್ಧರಣಂ ರಸಾತಲಾತ್ ।
ಲೀಲಾಂ ಹಿರಣ್ಯಾಕ್ಷಮವಜ್ಞಯಾ ಹತಂ
ಸಂಜಾತಹರ್ಷೋ ಮುನಿಮಾಹ ಭಾರತಃ ॥

ಅನುವಾದ

ಸೂತಪುರಾಣಿಕರು ಹೇಳುತ್ತಾರೆ ಮುನಿಗಳೇ ! ಮಾಯಾ ವರಾಹರೂಪಿಯಾದ ಶ್ರೀಹರಿಯು ಪೃಥ್ವಿಯನ್ನು ರಸಾತಳದಿಂದ ಮೇಲಕ್ಕೆತ್ತಿದ ಮತ್ತು ಹಿರಣ್ಯಾಕ್ಷನನ್ನು ಕಡೆಗಣಿಸಿ ಆಟವಾಡುವಂತೆ ಅನಾಯಾಸವಾಗಿ ಸಂಹರಿಸಿದ ಅವತಾರಲೀಲೆಯನ್ನು ಕೇಳಿ ಪರ ಮಾನಂದಭರಿತನಾದ ವಿದುರನು ಮೈತ್ರೇಯಮಹರ್ಷಿಗಳಲ್ಲಿ ಹೀಗೆ ವಿನಂತಿಸಿಕೊಂಡನು.॥8॥

(ಶ್ಲೋಕ - 9)

ಮೂಲಮ್

ವಿದುರ ಉವಾಚ
ಪ್ರಜಾಪತಿಪತಿಃ ಸೃಷ್ಟ್ವಾ ಪ್ರಜಾಸರ್ಗೇ ಪ್ರಜಾಪತೀನ್ ।
ಕಿಮಾರಭತ ಮೇ ಬ್ರಹ್ಮನ್ ಪ್ರಬ್ರೂಹ್ಯವ್ಯಕ್ತಮಾರ್ಗವಿತ್ ॥

ಅನುವಾದ

ವಿದುರನು ಕೇಳಿದನು ಬ್ರಾಹ್ಮಣಶ್ರೇಷ್ಠರೇ ! ತಾವು ಅಪ ರೋಕ್ಷ ಜ್ಞಾನಿಗಳು. ಆದುದರಿಂದ ಪ್ರಜಾಪತಿಗಳಿಗೂ ಪತಿಯಾದ ಬ್ರಹ್ಮದೇವರು ಮರೀಚಿಯೇ ಮುಂತಾದ ಪ್ರಜಾಪತಿಗಳನ್ನು ಹುಟ್ಟಿ ಸಿದ ಬಳಿಕ ಸೃಷ್ಟಿಯನ್ನು ಮುಂದುವರಿಸಲು ಏನು ಮಾಡಿದರು? ॥9॥

(ಶ್ಲೋಕ - 10)

ಮೂಲಮ್

ಯೇ ಮರೀಚ್ಯಾದಯೋ ವಿಪ್ರಾಯಸ್ತು ಸ್ವಾಯಂಭುವೋ ಮನುಃ ।
ತೇ ವೈ ಬ್ರಹ್ಮಣ ಆದೇಶಾತ್ಕಥಮೇತದಭಾವಯನ್ ॥

ಅನುವಾದ

ಮರೀಚಿಯೇ ಮುಂತಾದ ಮುನೀಶ್ವರರೂ, ಸ್ವಾಯಂಭು ವಮನುವೂ ಬ್ರಹ್ಮದೇವರ ಆಣತಿಯಂತೆ ಹೇಗೆ ಪ್ರಜೆಗಳನ್ನು ವೃದ್ಧಿ ಗೊಳಿಸಿದರು? ॥10॥

(ಶ್ಲೋಕ - 11)

ಮೂಲಮ್

ಸದ್ವಿತೀಯಾಃ ಕಿಮಸೃಜನ್ಸ್ವತಂತ್ರಾ ಉತ ಕರ್ಮಸು ।
ಆಹೋಸ್ವಿತ್ಸಂಹತಾಃ ಸರ್ವ ಇದಂ ಸ್ಮ ಸಮಕಲ್ಪಯನ್ ॥

ಅನುವಾದ

ಅವರು ತಮ್ಮ ಪತ್ನಿಯರ ಸಹಯೋಗ ದಿಂದ ಈ ಜಗತ್ತನ್ನು ಸೃಷ್ಟಿಮಾಡಿದರೋ ? ಅಥವಾ ತಮ್ಮ-ತಮ್ಮ ಕಾರ್ಯಗಳಲ್ಲಿ ಸ್ವತಂತ್ರರಾಗಿದ್ದುಕೊಂಡು ರಚಿಸಿದರೇ ? ಅಥವಾ ಎಲ್ಲರೂ ಒಟ್ಟಿಗೆ ಇದನ್ನು ರಚಿಸಿದರೇ ? ತಿಳಿಸುವವರಾಗಿರಿ.॥11॥

(ಶ್ಲೋಕ - 12)

ಮೂಲಮ್ (ವಾಚನಮ್)

ಮೈತ್ರೇಯ ಉವಾಚ

ಮೂಲಮ್

ದೈವೇನ ದುರ್ವಿತರ್ಕ್ಯೇಣ ಪರೇಣಾನಿಮಿಷೇಣ ಚ ।
ಜಾತಕ್ಷೋಭಾದ್ಭಗವತೋ ಮಹಾನಾಸೀದ್ಗುಣತ್ರಯಾತ್ ॥

ಅನುವಾದ

ಶ್ರೀಮೈತ್ರೇಯರು ಹೇಳಿದರು ಎಲೈ ವಿದುರನೇ! ಕೇಳು. ಪ್ರಕೃತಿಯು ಹಿಂದೆ ತ್ರಿಗುಣಗಳ ಸಾಮ್ಯಾವಸ್ಥೆಯಿಂದ ನಿರ್ವಿಕಾರ ವಾಗಿತ್ತು. ಅನಂತರ ಚಿಂತಿಸಲು ಅಸಾಧ್ಯವಾಗಿರುವ ಜೀವರ ಪ್ರಾರಬ್ಧದಿಂದಲೂ, ಪ್ರಕೃತಿಯ ನಿಯಾಮಕ, ಪುರುಷ ಮತ್ತು ಕಾಲ ಈ ಮೂರು ಕಾರಣಗಳಿಂದ ಹಾಗೂ ಭಗವಂತನ ಸನ್ನಿಧಾನದಿಂದ ತ್ರಿಗುಣಮಯ ಪ್ರಕೃತಿಯಲ್ಲಿ ಕ್ಷೋಭೆ ಉಂಟಾಗಿ ಅದರಿಂದ ಮಹತ್ತತ್ತ್ವ ಉತ್ಪನ್ನವಾಯಿತು. ॥12॥

(ಶ್ಲೋಕ - 13)

ಮೂಲಮ್

ರಜಃಪ್ರಧಾನಾನ್ಮಹತಸಿಲಿಂಗೋ ದೈವಚೋದಿತಾತ್ ।
ಜಾತಃ ಸಸರ್ಜ ಭೂತಾದಿರ್ವಿಯದಾದೀನಿ ಪಂಚಶಃ ॥

ಅನುವಾದ

ಭಗವತ್ಸಂಕಲ್ಪದಿಂದ ರಜಸ್ಸು ಪ್ರಧಾನ ವುಳ್ಳ ಮಹತ್ತತ್ತ್ವದಿಂದ ವೈಕಾರಿಕ (ಸಾತ್ವಿಕ), ರಾಜಸ ಮತ್ತು ತಾಮಸ ಮೂರು ರೀತಿಯ ಅಹಂಕಾರವು ಉಂಟಾಯಿತು. ಅದು ಆಕಾಶಾದಿ ಐದು-ಐದು ತತ್ತ್ವಗಳ ಅನೇಕ ವರ್ಗಗಳನ್ನು* ಪ್ರಕಟಿಸಿತು. ॥13॥

ಟಿಪ್ಪನೀ
  • ಪಂಚತನ್ಮಾತ್ರೆಗಳು, ಪಂಚಮಹಾಭೂತಗಳು, ಐದು ಜ್ಞಾನೇಂದ್ರಿಯಗಳು, ಐದು ಕರ್ಮೇಂದ್ರಿಗಳು ಮತ್ತು ಅವುಗಳ ಐದೈದು ದೇವತೆಗಳು ಹೀಗೆ ಇವೇ ಆರು ವರ್ಗಗಳ ಸಂಕೇತ ಇಲ್ಲಿ ಮಾಡಲಾಗಿದೆ ಎಂದು ತಿಳಿಯಬೇಕು.

(ಶ್ಲೋಕ - 14)

ಮೂಲಮ್

ತಾನಿ ಚೈಕೈಕಶಃ ಸ್ರಷ್ಟುಮಸಮರ್ಥಾನಿ ಭೌತಿಕಮ್ ।
ಸಂಹತ್ಯ ದೈವಯೋಗೇನ ಹೈಮಮಂಡಮವಾಸೃಜನ್ ॥

ಅನುವಾದ

ಅವೆಲ್ಲವೂ ಬೇರೆ-ಬೇರೆಯಾಗಿದ್ದಾಗ ಭೂತಗಳ ಕಾರ್ಯ ರೂಪೀ ಬ್ರಹ್ಮಾಂಡವನ್ನು ರಚಿಸಲು ಅಸಮರ್ಥವಾಗಿದ್ದವು. ಅದಕ್ಕಾಗಿ ಅವು ಭಗವಂತನ ಶಕ್ತಿಯಿಂದ ಪರಸ್ಪರ ಕಲೆತು ಒಂದು ಸುವರ್ಣಮಯ ಅಂಡವು ನಿರ್ಮಿತವಾಯಿತು.॥14॥

(ಶ್ಲೋಕ - 15)

ಮೂಲಮ್

ಸೋಶಯಿಷ್ಟಾಬ್ಧಿಸಲಿಲೇ ಆಂಡಕೋಶೋ ನಿರಾತ್ಮಕಃ ।
ಸಾಗ್ರಂ ವೈ ವರ್ಷಸಾಹಸ್ರಮನ್ವವಾತ್ಸೀತ್ತಮೀಶ್ವರಃ ॥

ಅನುವಾದ

ಆ ಅಂಡವು ಚೈತನ್ಯಶೂನ್ಯವಾದ ಸ್ಥಿತಿಯಲ್ಲಿ ಒಂದು ಸಾವಿರ ವರ್ಷಗಳಿಗಿಂತಲೂ ಹೆಚ್ಚುಕಾಲ ಕಾರಣಜಲದ ಮಧ್ಯದಲ್ಲಿ ಬಿದ್ದುಕೊಂಡಿತ್ತು. ಮತ್ತೆ ಭಗವಂತನು ಆ ಅಂಡಕೋಶದಲ್ಲಿ ಪ್ರವೇಶಿಸಿದನು.॥15॥

(ಶ್ಲೋಕ - 16)

ಮೂಲಮ್

ತಸ್ಯ ನಾಭೇರಭೂತ್ಪದ್ಮಂ ಸಹಸ್ರಾರ್ಕೋರುದೀಧಿತಿ ।
ಸರ್ವಜೀವನಿಕಾಯೌಕೋ ಯತ್ರ ಸ್ವಯಮಭೂತ್ಸ್ವರಾಟ್ ॥

ಅನುವಾದ

ಅದರಲ್ಲಿ ಅಧಿಷ್ಠಿತನಾದ ಬಳಿಕ ಅವನ ನಾಭಿಯಿಂದ ಸಾವಿರಾರು ಸೂರ್ಯರಿಗೆ ಸಮಾನವಾಗಿ ಬೆಳಗುತ್ತಿರುವ ಒಂದು ಕಮಲವು ಪ್ರಕಟಗೊಂಡಿತು. ಅದು ಎಲ್ಲ ಜೀವಸಮು ದಾಯಗಳಿಗೆ ಆಶ್ರಯವಾಗಿತ್ತು. ಅದರಿಂದಲೇ ಸ್ವಯಂ ಬ್ರಹ್ಮ ದೇವರೂ ಆವಿರ್ಭವಿಸಿದರು.॥16॥

(ಶ್ಲೋಕ - 17)

ಮೂಲಮ್

ಸೋನುವಿಷ್ಟೋ ಭಗವತಾ ಯಃ ಶೇತೇ ಸಲಿಲಾಶಯೇ ।
ಲೋಕಸಂಸ್ಥಾಂ ಯಥಾಪೂರ್ವಂ ನಿರ್ಮಮೇ ಸಂಸ್ಥಯಾ ಸ್ವಯಾ ॥

ಅನುವಾದ

ಅನಂತರ ಸಾಗರಜಲಶಾಯಿಯಾದ ಶ್ರೀಮನ್ನಾರಾಯಣನು ತನ್ನ ಸಂಕಲ್ಪದಿಂದ ಆ ಬ್ರಹ್ಮದೇವರಲ್ಲಿ ಪ್ರವೇಶಿಸಿದನು. ಆಗ ಬ್ರಹ್ಮ ದೇವರು ಹಿಂದಿನ ಕಲ್ಪಗಳಲ್ಲಿ ತಾನೇ ನಿಶ್ಚಯಿಸಿದ್ದ ನಾಮ-ರೂಪ ಮಯ ವ್ಯವಸ್ಥೆಗಳಿಗೆ ಅನುಸಾರವಾಗಿ ಲೋಕಗಳನ್ನು ನಿರ್ಮಿಸ ತೊಡಗಿದರು.॥17॥

(ಶ್ಲೋಕ - 18)

ಮೂಲಮ್

ಸಸರ್ಜಚ್ಛಾಯಯಾ ವಿದ್ಯಾಂ ಪಂಚಪರ್ವಾಣಮಗ್ರತಃ ।
ತಾಮಿಸ್ರಮಂಧತಾಮಿಸ್ರಂ ತಮೋ ಮೋಹೋ ಮಹಾತಮಃ ॥

ಅನುವಾದ

ಮೊಟ್ಟಮೊದಲಿಗೆ ಅವರು ತನ್ನ ಛಾಯೆಯಿಂದ ತಾಮಿಸ್ರ, ಅಂಧತಾಮಿಸ್ರ, ತಮ, ಮೋಹ ಮತ್ತು ಮಹಾ ಮೋಹಗಳೆಂಬ ಐದು ಬಗೆಯ ಅವಿದ್ಯೆಗಳನ್ನು ಸೃಷ್ಟಿಮಾಡಿದರು.॥18॥

(ಶ್ಲೋಕ - 19)

ಮೂಲಮ್

ವಿಸಸರ್ಜಾತ್ಮನಃ ಕಾಯಂ ನಾಭಿನಂದಂಸ್ತಮೋಮಯಮ್ ।
ಜಗೃಹುರ್ಯಕ್ಷರಕ್ಷಾಂಸಿ ರಾತ್ರಿಂ ಕ್ಷುತ್ತೃಟ್ಸಮುದ್ಭವಾಮ್ ॥

ಅನುವಾದ

ಬ್ರಹ್ಮದೇವರಿಗೆ ಆ ತಮೋಮಯವಾದ ಶರೀರವು ಮನಸ್ಸಿಗೆ ಒಪ್ಪದಿರಲು ಅವರು ಅವನ್ನು ತೊರೆದುಬಿಟ್ಟರು. ಆ ಶರೀರದಿಂದ ಉಂಟಾದ ಯಕ್ಷ-ರಾಕ್ಷಸರು ಹಸಿವು ಬಾಯಾರಿಕೆಗಳಿಗೆ ಕಾರಣವಾದ ಆ ರಾತ್ರಿರೂಪವಾದ ದೇಹವನ್ನು ಪರಿಗ್ರಹಿಸಿದರು.॥19॥

(ಶ್ಲೋಕ - 20)

ಮೂಲಮ್

ಕ್ಷುತ್ತೃಡ್ಭ್ಯಾಮುಪಸೃಷ್ಟಾಸ್ತೇ ತಂ ಜಗ್ಧುಮಭಿದುದ್ರುವುಃ ।
ಮಾ ರಕ್ಷತೈನಂ ಜಕ್ಷಧ್ವಮಿತ್ಯೂಚುಃ ಕ್ಷುತ್ತೃಡರ್ದಿತಾಃ ॥

ಅನುವಾದ

ಆಗ ಹಸಿವು-ಬಾಯಾರಿಕೆಗಳಿಂದ ಪೀಡಿತರಾದ ಅವರು ಬ್ರಹ್ಮದೇವರನ್ನೇ ತಿಂದುಹಾಕಲು ಓಡಿಬಂದರು. ‘ಈತನನ್ನು ತಿಂದುಹಾಕಿ, ಇವನನ್ನು ರಕ್ಷಿಸಬೇಡಿ’ ಎಂದು ಕೂಗಿಕೊಂಡರು. ಏಕೆಂದರೆ, ಅವರಲ್ಲಿ ಹಸಿವು-ಬಾಯಾರಿಕೆಗಳು ಅಷ್ಟು ಉತ್ಕಟವಾಗಿದ್ದವು.॥20॥

(ಶ್ಲೋಕ - 21)

ಮೂಲಮ್

ದೇವಸ್ತಾನಾಹ ಸಂವಿಗ್ನೋ ಮಾ ಮಾಂ ಜಕ್ಷತ ರಕ್ಷತ ।
ಅಹೋ ಮೇ ಯಕ್ಷರಕ್ಷಾಂಸಿ ಪ್ರಜಾ ಯೂಯಂ ಬಭೂವಿಥ ॥

ಅನುವಾದ

ಆಗ ಬ್ರಹ್ಮದೇವರು ಗಾಬರಿಗೊಂಡು ಎಲೈ! ನೀವು ನನ್ನ ಸಂತಾನಗಳು. ಆದ್ದರಿಂದ ನನ್ನನ್ನು ತಿನ್ನಬೇಡಿರಿ. ನನ್ನನ್ನು ಕಾಪಾಡಿರಿ. (ಅವರಲ್ಲಿ ‘ತಿಂದುಬಿಡಿ’ ಎಂದು ಹೇಳಿದವರು ಯಕ್ಷರಾದರು. ‘ಇವನನ್ನು ರಕ್ಷಿಸಬೇಡಿ’ ಎಂದು ಹೇಳಿದವರು ರಾಕ್ಷಸರಾದರು).॥21॥

(ಶ್ಲೋಕ - 22)

ಮೂಲಮ್

ದೇವತಾಃ ಪ್ರಭಯಾ ಯಾ ಯಾ ದೀವ್ಯನ್ ಪ್ರಮುಖತೋಸೃಜತ್ ।
ತೇ ಅಹಾರ್ಷುದೇವಯಂತೋ ವಿಸೃಷ್ಟಾಂ ತಾಂ ಪ್ರಭಾಮಹಃ ॥

ಅನುವಾದ

ಮತ್ತೆ ಬ್ರಹ್ಮದೇವರು ಸಾತ್ತ್ವಿಕ ಪ್ರಭೆಯಿಂದ ಬೆಳಗುತ್ತಾ ಮುಖ್ಯ-ಮುಖ್ಯರಾದ ದೇವತೆಗಳನ್ನು ಸೃಷ್ಟಿಸಿದರು. ಅವರು ಆಟ ವಾಡುತ್ತಾ ಇದ್ದು ಬ್ರಹ್ಮದೇವರು ತ್ಯಾಗಮಾಡಿದ ಹಗಲುರೂಪ ವಾದ ಪ್ರಕಾಶಮಯ ಶರೀರವನ್ನು ಪರಿಗ್ರಹಿಸಿದರು.॥22॥

(ಶ್ಲೋಕ - 23)

ಮೂಲಮ್

ದೇವೋದೇವಾಂಜಘನತಃ ಸೃಜತಿ ಸ್ಮಾತಿಲೋಲುಪಾನ್ ।
ತ ಏನಂ ಲೋಲುಪತಯಾ ಮೈಥುನಾಯಾಭಿಪೇದಿರೇ ॥

ಅನುವಾದ

ಅನಂತರ ಬ್ರಹ್ಮದೇವರು ತಮ್ಮ ಜಘನ ಪ್ರದೇಶದಿಂದ ಕಾಮಾಸಕ್ತ ರಾದ ಅಸುರರನ್ನು ಸೃಷ್ಟಿಸಿದನು. ಅವರು ಅತ್ಯಂತ ಕಾಮಲೋಲು ಪರಾಗಿದ್ದರಿಂದ ಹುಟ್ಟಿದೊಡನೆಯೇ ಮೈಥುನಕ್ಕಾಗಿ ಬ್ರಹ್ಮದೇವರ ಕಡೆಗೆ ಓಡಿ ಬಂದರು.॥23॥

(ಶ್ಲೋಕ - 24)

ಮೂಲಮ್

ತತೋ ಹಸನ್ ಸ ಭಗವಾನಸುರೈರ್ನಿರಪತ್ರಪೈಃ ।
ಅನ್ವೀಯಮಾನಸ್ತರಸಾ ಕ್ರುದ್ಧೋ ಭೀತಃ ಪರಾಪತತ್ ॥

ಅನುವಾದ

ಅದನ್ನು ಕಂಡು ಬ್ರಹ್ಮದೇವರಿಗೆ ಮೊದಲಿಗೆ ನಗುಬಂತು. ಆದರೆ ಅವರು ನಾಚಿಕೆಗೆಟ್ಟು ತನ್ನನ್ನು ಹಿಂಬಾಲಿಸುತ್ತಿರುವುದನ್ನು ಕಂಡು, ಕೋಪಗೊಂಡು ಭಯದಿಂದ ಪಲಾಯನಮಾಡಿದರು.॥24॥

(ಶ್ಲೋಕ - 25)

ಮೂಲಮ್

ಸ ಉಪವ್ರಜ್ಯ ವರದಂ ಪ್ರಪನ್ನಾರ್ತಿಹರಂ ಹರಿಮ್ ।
ಅನುಗ್ರಹಾಯ ಭಕ್ತಾನಾಮನುರೂಪಾತ್ಮದರ್ಶನಮ್ ॥

ಅನುವಾದ

ಬಳಿಕ ಅವರು ಭಕ್ತರನ್ನು ಅನುಗ್ರಹಿಸಲು ಅವರ ಭಾವನೆಗನು ಸಾರವಾಗಿ ರೂಪಗಳನ್ನು ಧರಿಸಿ ದರ್ಶನ ನೀಡುವವನೂ, ಶರಣಾಗತವತ್ಸಲನೂ, ವರದಾಯಕನೂ ಆದ ಶ್ರೀಹರಿಯ ಬಳಿಗೆ ಹೋಗಿ ಇಂತೆಂದರು.॥25॥

(ಶ್ಲೋಕ - 26)

ಮೂಲಮ್

ಪಾಹಿ ಮಾಂ ಪರಮಾತ್ಮಂಸ್ತೇ ಪ್ರೇಷಣೇನಾಸೃಜಂ ಪ್ರಜಾಃ ।
ತಾ ಇಮಾ ಯಭಿತುಂ ಪಾಪಾ ಉಪಾಕ್ರಾಮಂತಿ ಮಾಂ ಪ್ರಭೋ ॥

ಅನುವಾದ

ಪ್ರಭೋ ! ಪರಮಾತ್ಮಾ ! ನನ್ನನ್ನು ರಕ್ಷಿಸಿರಿ. ನಾನು ನಿನ್ನ ಅಪ್ಪಣೆಯಂತೆ ಪ್ರಜೆಗಳನ್ನು ಸೃಷ್ಟಿಸಿದೆ. ಆದರೆ ಈ ದುಷ್ಟ ಸಂತಾನವು ಪಾಪದಲ್ಲಿ ತೊಡಗಿ ನನ್ನನ್ನೇ ಸತಾಯಿಸುತ್ತಿದ್ದಾರಲ್ಲ! ॥26॥

(ಶ್ಲೋಕ - 27)

ಮೂಲಮ್

ತ್ವಮೇಕಃ ಕಿಲ ಲೋಕಾನಾಂ ಕ್ಲಿಷ್ಟಾನಾಂ ಕ್ಲೇಶನಾಶನಃ ।
ತ್ವಮೇಕಃ ಕ್ಲೇಶದಸ್ತೇಷಾಮನಾಸನ್ನಪದಾಂ ತವ ॥

ಅನುವಾದ

ಸ್ವಾಮಿ ! ದುಃಖದಿಂದ ತಲ್ಲಣಿಸುವ ಜೀವರ ದುಃಖವನ್ನು ಹೋಗಲಾಡಿಸುವವನು ನೀನೊಬ್ಬನೇ. ನಿನ್ನ ಪಾದ ಗಳನ್ನು ಆಶ್ರಯಿಸದೆ ಇರುವ ಜೀವಿಗಳಿಗೆ ದುಃಖವನ್ನು ಕೊಡುವವನೂ ನೀನೇ ಆಗಿರುವೆ. ॥27॥

(ಶ್ಲೋಕ - 28)

ಮೂಲಮ್

ಸೋವಧಾರ್ಯಾಸ್ಯ ಕಾರ್ಪಣ್ಯಂ ವಿವಿಕ್ತಾಧ್ಯಾತ್ಮದರ್ಶನಃ ।
ವಿಮುಂಚಾತ್ಮತನುಂ ಘೋರಾಮಿತ್ಯುಕ್ತೋ ವಿಮುಮೋಚ ಹ ॥

ಅನುವಾದ

ಭಗವಂತನು ಎಲ್ಲರ ಹೃದಯದ ಭಾವನೆಗಳನ್ನು ಪ್ರತ್ಯಕ್ಷದಂತೆ ನೋಡುತ್ತಿರುವನು. ಅವನು ಬ್ರಹ್ಮದೇವರ ಆ ದೈನ್ಯಪರಿಸ್ಥಿತಿಯನ್ನು ಕಂಡು ಕನಿಕರದಿಂದ ‘ವತ್ಸ ! ನೀನು ಈ ನಿನ್ನ ಕಾಮಕಲುಷಿತವಾದ ಘೋರವಾದ ದೇಹವನ್ನು ತೊರೆದುಬಿಡು’ ಎಂದು ಆದೇಶ ನೀಡಲು ಅವರು ಆ ದೇಹವನ್ನು ತೊರೆದುಬಿಟ್ಟರು.॥28॥

(ಶ್ಲೋಕ - 29)

ಮೂಲಮ್

ತಾಂ ಕ್ವಣಚ್ಚರಣಾಂಭೋಜಾಂ ಮದವಿಹ್ವಲಲೋಚನಾಮ್ ।
ಕಾಂಚೀಕಲಾಪವಿಲಸದ್ದುಕೂಲಚ್ಛನ್ನರೋಧಸಮ್ ॥

ಅನುವಾದ

(ಬ್ರಹ್ಮದೇವರು ತೊರೆದ ಆ ಶರೀರವು ಒಂದು ಸುಂದರವಾದ ಸೀರೂಪ ತಾಳಿತು ಅದೇ ಸಾಯಂಸಂಧ್ಯೆಯು.) ಅವಳ ಕಾಲು ಗಳಲ್ಲಿ ಕಾಲ್ಗಡಗಳು ಝಣ-ಝಣ ಶಬ್ದಮಾಡುತ್ತಿದ್ದವು. ಕಣ್ಣುಗಳು ಮದದಿಂದ ಮತ್ತೇರಿದ್ದವು. ನಡುವು ಒಡ್ಯಾಣದಿಂದ ಶೋಭಿ ಸುತ್ತಿರುವ ಸುಂದರವಾದ ಸೀರೆಯಿಂದ ಅಲಂಕೃತವಾಗಿತ್ತು.॥29॥

(ಶ್ಲೋಕ - 30)

ಮೂಲಮ್

ಅನ್ಯೋನ್ಯಶ್ಲೇಷಯೋತ್ತುಂಗನಿರಂತರಪಯೋಧರಾಮ್ ।
ಸುನಾಸಾಂ ಸುದ್ವಿಜಾಂ ಸ್ನಿಗ್ಧಹಾಸಲೀಲಾವಲೋಕನಾಮ್ ॥

ಅನುವಾದ

ಉನ್ನತವಾದ ಸ್ತನಗಳು ನಡುವಿನಲ್ಲಿ ಅಂತರವೇ ಇಲ್ಲ ದಷ್ಟು ಒಂದಕ್ಕೊಂದು ಸೇರಿಕೊಂಡಿದ್ದವು. ಆಕೆಯ ಮೂಗು ಮತ್ತು ದಂತಪಂಕ್ತಿಗಳು ಅತ್ಯಂತ ಆಕರ್ಷಣೀಯವಾಗಿದ್ದವು. ಆ ಸುಂದರಿಯು ಮಧುರವಾದ ಮಂದಹಾಸದಿಂದ, ಹಾವ-ಭಾವ ಪೂರ್ಣವಾದ ದೃಷ್ಟಿಯಿಂದ ಅಸುರರನ್ನು ದಿಟ್ಟಿಸುತ್ತಿದ್ದಳು.॥30॥

(ಶ್ಲೋಕ - 31)

ಮೂಲಮ್

ಗೂಹಂತೀಂ ವ್ರೀಡಯಾತ್ಮಾನಂ ನೀಲಾಲಕವರೂಥಿನೀಮ್ ।
ಉಪಲಭ್ಯಾಸುರಾ ಧರ್ಮ ಸರ್ವೇ ಸಮ್ಮುಮುಹುಃ ಸಿಯಮ್ ॥

ಅನುವಾದ

ತನ್ನ ಕಪ್ಪಾದ ಮುಂಗುರುಳುಗಳಿಂದ ಶೋಭಿಸುತ್ತಿರುವ ಆ ಸುಕುಮಾರಿಯು ಲಜ್ಜೆಯಿಂದ ತನ್ನ ಸೀರೆಯಲ್ಲೇ ಮುಚ್ಚಿಹೋಗಿರುವಳೋ ಎಂದು ಕಾಣುತ್ತಿದ್ದಳು. ವಿದುರನೇ! ಆಕೆಯನ್ನು ಕಂಡು ಅಸುರ ರೆಲ್ಲರೂ ಆಕೆಯಲ್ಲಿ ಮೋಹವಶರಾದರು.॥31॥

(ಶ್ಲೋಕ - 32)

ಮೂಲಮ್

ಅಹೋ ರೂಪಮಹೋ ಧೈರ್ಯಮಹೋ ಅಸ್ಯಾ ನವಂ ವಯಃ ।
ಮಧ್ಯೇ ಕಾಮಯಮಾನಾನಾಮಕಾಮೇವ ವಿಸರ್ಪತಿ ॥

ಅನುವಾದ

ಆಹಾ ! ಈಕೆಯದು ಎಂತಹ ಅದ್ಭುತವಾದ ರೂಪು ! ಎಂತಹ ಅಲೌಕಿಕ ಧೈರ್ಯ ! ಎಂತಹ ಹೊಸ ಯೌವನ ! ಕಾಮಪೀಡಿತರಾದ ನಮ್ಮ ನಡುವೆ ಈ ವೈಯ್ಯಾರಿಯು ದಿಟ್ಟತನದಿಂದ ಓಡಾಡುತ್ತಿರುವಳಲ್ಲ! ॥32॥

(ಶ್ಲೋಕ - 33)

ಮೂಲಮ್

ವಿತರ್ಕಯಂತೋ ಬಹುಧಾ ತಾಂ ಸಂಧ್ಯಾಂ ಪ್ರಮದಾಕೃತಿಮ್ ।
ಅಭಿಸಂಭಾವ್ಯ ವಿಶ್ರಂಭಾತ್ಪರ್ಯಪೃಚ್ಛನ್ ಕುಮೇಧಸಃ ॥

ಅನುವಾದ

ಹೀಗೆ ಆ ದುಷ್ಟಬುದ್ಧಿಯ ದೈತ್ಯರು ಸೀರೂಪಿಣಿಯಾದ ಸಂಧ್ಯೆಯ ವಿಷಯದಲ್ಲಿ ಬಗೆ-ಬಗೆಯ ತರ್ಕ-ವಿತರ್ಕಗಳನ್ನು ಮಾಡುತ್ತಾ, ಆಕೆಯನ್ನು ಬಹಳವಾಗಿ ಆದರಿಸುತ್ತಾ ಪ್ರೇಮಪೂರ್ವಕವಾಗಿ ಕೇಳಿದರು.॥33॥

(ಶ್ಲೋಕ - 34)

ಮೂಲಮ್

ಕಾಸಿ ಕಸ್ಯಾಸಿ ರಂಭೋರು ಕೋ ವಾರ್ಥಸ್ತೇತ್ರ ಭಾಮಿನಿ ।
ರೂಪದ್ರವಿಣಪಣ್ಯೇನ ದುರ್ಭಗಾನ್ನೋ ವಿಬಾಧಸೇ ॥

ಅನುವಾದ

‘‘ಎಲೆಗೆ ಸುಂದರೀ! ನೀನು ಯಾರು? ಯಾರ ಮಗಳಾಗಿರುವೆ? ಭಾಮಿನಿ! ನೀನು ಇಲ್ಲಿಗೆ ಬಂದಿರುವ ಪ್ರಯೋಜನವೇನು? ನಿನ್ನ ಅನುಪಮವಾದ ಸೌಂದರ್ಯವೆಂಬ ಅಮೂಲ್ಯವಾದ ಮಾರಾಟದ ವಸ್ತುವನ್ನು ತೋರಿಸಿ, ದುರದೃಷ್ಟ ಶಾಲಿಗಳಾದ ನಮ್ಮನ್ನು ಏಕೆ ಪೀಡಿಸುತ್ತಿರುವೆ.॥34॥

(ಶ್ಲೋಕ - 35)

ಮೂಲಮ್

ಯಾ ವಾ ಕಾಚಿತ್ತ್ವಮಬಲೇ ದಿಷ್ಟ್ಯಾ ಸಂದರ್ಶನಂ ತವ ।
ಉತ್ಸುನೋಷೀಕ್ಷಮಾಣಾನಾಂ ಕಂದುಕಕ್ರೀಡಯಾ ಮನಃ ॥

ಅನುವಾದ

ಅಬಲೆಯೇ ! ನೀನು ಯಾರೇ ಆಗಿರು. ನಿನ್ನ ದರ್ಶನವಾಗಿರುವುದೇ ನಮ್ಮ ದೊಡ್ಡ ಸೌಭಾಗ್ಯವು. ನೀನು ಚೆಂಡನ್ನು ಆಡಿಸುತ್ತಾ ದರ್ಶಕರಾಗಿರುವ ನಮ್ಮ ಮನಸ್ಸನ್ನು ಕಲಕುತ್ತಿದ್ದೀಯೇ. ॥35॥

(ಶ್ಲೋಕ - 36)

ಮೂಲಮ್

ನೈಕತ್ರ ತೇ ಜಯತಿ ಶಾಲಿನಿ ಪಾದಪದ್ಮಂ
ಘ್ನಂತ್ಯಾ ಮುಹುಃ ಕರತಲೇನ ಪತತ್ಪತಂಗಮ್ ।
ಮಧ್ಯಂ ವಿಷೀದತಿ ಬೃಹತ್ಸ್ತನ ಭಾರಭೀತಂ
ಶಾಂತೇವ ದೃಷ್ಟಿರಮಲಾ ಸುಶಿಖಾಸಮೂಹಃ ॥

ಅನುವಾದ

ಸುಂದರಿಯೇ! ಪುಟಿಯುತ್ತಿರುವ ಚೆಂಡನ್ನು ಅಂಗೈಯಿಂದ ನೀನು ಹೊಡೆಯುತ್ತಿರುವಾಗ ನಿನ್ನ ಪಾದಕಮಲಗಳು ಒಂದೆಡೆ ನಿಲ್ಲದೆ ಚಲಿಸುತ್ತಾ ಇರುತ್ತವೆ. ನಿನ್ನ ಕಟಿಪ್ರದೇಶವು ಸ್ಥೂಲವಾದ ಸ್ತನಗಳ ಭಾರದಿಂದ ಆಯಾಸಗೊಂಡಂತಿದೆ. ನಿನ್ನ ನಿರ್ಮಲವಾದ ದೃಷ್ಟಿಯೂ ಬಳಲಿದಂತಿದೆ. ಆಹಾ! ನಿನ್ನ ಕೇಶಪಾಶವು ಎಷ್ಟು ಸುಂದರವಾಗಿದೆ !’’ ॥36॥

(ಶ್ಲೋಕ - 37)

ಮೂಲಮ್

ಇತಿ ಸಾಯಂತನೀಂ ಸಂಧ್ಯಾಮಸುರಾಃ ಪ್ರಮದಾಯತೀಮ್ ।
ಪ್ರಲೋಭಯಂತೀಂ ಜಗೃಹುರ್ಮತ್ವಾ ಮೂಢಧಿಯಃ ಸಿಯಮ್ ॥

ಅನುವಾದ

ಈ ರೀತಿಯಲ್ಲಿ ಸೀರೂಪದಿಂದ ಪ್ರಕಟ ಗೊಂಡ ಸಾಯಂಸಂಧ್ಯೆಯು ಅವರನ್ನು ಅತ್ಯಂತ ಕಾಮಾಸಕ್ತ ಗೊಳಿಸಿತು. ಆ ಮೂರ್ಖರು ಆಕೆಯನ್ನು ರಮಣೀರತ್ನವೆಂದು ಭಾವಿಸಿ ಪರಿಗ್ರಹಿಸಿದರು.॥37॥

(ಶ್ಲೋಕ - 38)

ಮೂಲಮ್

ಪ್ರಹಸ್ಯ ಭಾವಗಂಭೀರಂ ಜಿಘ್ರಂತ್ಯಾತ್ಮಾನಮಾತ್ಮನಾ ।
ಕಾಂತ್ಯಾ ಸಸರ್ಜ ಭಗವಾನ್ಗಂಧರ್ವಾಪ್ಸರಸಾಂ ಗಣಾನ್ ॥

ಅನುವಾದ

ಅನಂತರ ಬ್ರಹ್ಮದೇವರು ಗಂಭೀರಭಾವದಿಂದ ನಗುತ್ತಾ ತನ್ನ ಸೌಂದರ್ಯವನ್ನು ತಾನೇ ಸವಿಯುತ್ತಿರುವಂತೆ ಕಂಗೊಳಿಸುತ್ತಿದ್ದ ತನ್ನ ಕಾಂತಿಮಯವಾದ ಮೂರ್ತಿಯಿಂದ ಗಂಧರ್ವರನ್ನೂ ಮತ್ತು ಅಪ್ಸರೆಯರನ್ನು ಸೃಷ್ಟಿಸಿದರು.॥38॥

(ಶ್ಲೋಕ - 39)

ಮೂಲಮ್

ವಿಸಸರ್ಜ ತನುಂ ತಾಂ ವೈ ಜ್ಯೋತ್ಸ್ನಾಂ ಕಾಂತಿಮತೀಂ ಪ್ರಿಯಾಮ್ ।
ತ ಏವ ಚಾದದುಃ ಪ್ರೀತ್ಯಾ ವಿಶ್ವಾವಸುಪುರೋಗಮಾಃ ॥

ಅನುವಾದ

ಆಗ ಅವರು ಚಂದ್ರಿಕಾ ರೂಪವಾದ ತಮ್ಮ ಕಾಂತಿಮಯ ಪ್ರಿಯಶರೀರವನ್ನು ತ್ಯಜಿಸಿದರು. ಆ ದೇಹವನ್ನು ವಿಶ್ವಾವಸುವೇ ಮುಂತಾದ ಗಂಧರ್ವರು ಪ್ರೀತಿಯಿಂದ ಪರಿಗ್ರಹಿಸಿದರು. (ಆ ದೇಹವನ್ನು ಪ್ರಾತಃಸಂಧ್ಯೆಯೆಂದು ಕರೆಯುತ್ತಾರೆ.) ॥39॥

(ಶ್ಲೋಕ - 40)

ಮೂಲಮ್

ಸೃಷ್ಟ್ವಾ ಭೂತಪಿಶಾಚಾಂಶ್ಚ ಭಗವಾನಾತ್ಮತಂದ್ರಿಣಾ ।
ದಿಗ್ವಾಸಸೋ ಮುಕ್ತಕೇಶಾನ್ವೀಕ್ಷ್ಯ ಚಾಮೀಲಯದ್ದೃಶೌ ॥

ಅನುವಾದ

ಇದಾದ ಬಳಿಕ ಬ್ರಹ್ಮದೇವರು ತನ್ನ ಆಲಸ್ಯ(ತಂದ್ರಾ)ದಿಂದ ಭೂತ-ಪಿಶಾಚಗಳನ್ನು ಸೃಷ್ಟಿಸಿದರು. ಅವು ದಿಗಂಬರವಾಗಿ ತಲೆ ಗೆದರಿಕೊಂಡಿರುವುದನ್ನು ಕಂಡು ಅವರು ಕಣ್ಣುಗಳನ್ನು ಮುಚ್ಚಿಕೊಂಡರು.॥40॥

(ಶ್ಲೋಕ - 41)

ಮೂಲಮ್

ಜಗೃಹುಸ್ತದ್ವಿಸೃಷ್ಟಾಂ ತಾಂ ಜೃಂಭಣಾಖ್ಯಾಂ ತನುಂ ಪ್ರಭೋಃ ।
ನಿದ್ರಾಮಿಂದ್ರಿಯವಿಕ್ಲೇದೋ ಯಯಾ ಭೂತೇಷು ದೃಶ್ಯತೇ ।
ಯೇನೋಚ್ಛಿಷ್ಟಾಂಧರ್ಷಯಂತಿ ತಮುನ್ಮಾದಂ ಪ್ರಚಕ್ಷತೇ ॥

ಅನುವಾದ

ಬ್ರಹ್ಮದೇವರು ತ್ಯಜಿಸಿದ ಆ ಆಕಳಿಕೆಯ ರೂಪವಾದ ದೇಹವನ್ನು ಭೂತ-ಪಿಶಾಚಿಗಳು ಪರಿಗ್ರಹಿಸಿದರು. ಅದನ್ನೇ ನಿದ್ದೆಯೆಂದೂ ಕರೆಯುತ್ತಾರೆ. ಅದು ಜೀವಿಗಳ ಇಂದ್ರಿಯಗಳಲ್ಲಿ ಶೈಥಿಲ್ಯವನ್ನುಂಟುಮಾಡುತ್ತದೆ. ಮನುಷ್ಯನು ಎಂಜಲು ಬಾಯಿಯಿಂದ ಮಲಗಿದರೆ ಆತನನ್ನೂ ಭೂತ-ಪಿಶಾಚಾದಿಗಳು ಆಕ್ರಮಿಸುತ್ತವೆ. ಇದನ್ನೇ ಉನ್ಮಾದವೆಂದೂ ಹೇಳುತ್ತಾರೆ.॥41॥

(ಶ್ಲೋಕ - 42)

ಮೂಲಮ್

ಊರ್ಜಸ್ವಂತಂ ಮನ್ಯಮಾನ ಆತ್ಮಾನಂ ಭಗವಾನಜಃ ।
ಸಾಧ್ಯಾನ್ ಗಣಾನ್ ಪಿತೃಗಣಾನ್ ಪರೋಕ್ಷೇಣಾಸೃಜತ್ಪ್ರಭುಃ ॥

ಅನುವಾದ

ಮತ್ತೆ ಬ್ರಹ್ಮದೇವರು ‘ನಾನು ತೇಜೋಮಯನಾಗಿದ್ದೇನೆ’ ಎಂದು ಭಾವಿಸಿಕೊಂಡು ತಮ್ಮ ಅದೃಶ್ಯರೂಪದಿಂದ ಸಾಧ್ಯಗಣ ಗಳನ್ನು ಮತ್ತು ಪಿತೃಗಣಗಳನ್ನೂ ಸೃಷ್ಟಿಸಿದರು.॥42॥

(ಶ್ಲೋಕ - 43)

ಮೂಲಮ್

ತ ಆತ್ಮಸರ್ಗಂ ತಂ ಕಾಯಂ ಪಿತರಃ ಪ್ರತಿಪೇದಿರೇ ।
ಸಾಧ್ಯೇಭ್ಯಶ್ಚ ಪಿತೃಭ್ಯಶ್ಚ ಕವಯೋ ಯದ್ವಿತನ್ವತೇ ॥

ಅನುವಾದ

ತಮ್ಮ ಸ್ಥಾನ ವಾದ ಆ ಅದೃಶ್ಯಶರೀರವನ್ನು ಪಿತೃದೇವತೆಗಳು ಪರಿಗ್ರಹಿಸಿದರು. ಅದನ್ನೇ ಗುರಿಯಾಗಿಟ್ಟುಕೊಂಡು ಪಂಡಿತರು ಶ್ರಾದ್ಧಾದಿಗಳ ಮೂಲಕ ಪಿತೃದೇವತೆಗಳಿಗೂ ಮತ್ತು ಸಾಧ್ಯಗಣಗಳಿಗೂ ಕ್ರಮವಾಗಿ ಕವ್ಯ(ಪಿಂಡ)ಗಳನ್ನು , ಹವ್ಯಗಳನ್ನೂ ಅರ್ಪಿಸುತ್ತಾರೆ.॥43॥

(ಶ್ಲೋಕ - 44)

ಮೂಲಮ್

ಸಿದ್ಧಾನ್ವಿದ್ಯಾಧರಾಂಶ್ಚೈವ ತಿರೋಧಾನೇನ ಸೋಸೃಜತ್ ।
ತೇಭ್ಯೋದದಾತ್ತಮಾತ್ಮಾ ನಮಂತರ್ಧಾನಾಖ್ಯಮದ್ಭುತಮ್ ॥

ಅನುವಾದ

ಬ್ರಹ್ಮದೇವರು ತಮ್ಮ ತಿರೋಧಾನಶಕ್ತಿಯಿಂದ ಸಿದ್ಧರನ್ನೂ, ವಿದ್ಯಾ ಧರರನ್ನೂ ಸೃಷ್ಟಿಮಾಡಿ ಅವರಿಗೆ ತಮ್ಮ ಅಂತರ್ಧಾನವೆಂಬ ಅದ್ಭುತ ವಾದ ಶರೀರವನ್ನು ಅನುಗ್ರಹಿಸಿದರು.॥44॥

(ಶ್ಲೋಕ - 45)

ಮೂಲಮ್

ಸ ಕಿನ್ನರಾನ್ ಕಿಂಪುರುಷಾನ್ಪ್ರತ್ಯಾತ್ಮ್ಯೇನಾಸೃಜತ್ಪ್ರಭುಃ ।
ಮಾನಯನ್ನಾತ್ಮನಾತ್ಮಾನಮಾತ್ಮಾಭಾಸಂ ವಿಲೋಕಯನ್ ॥

ಅನುವಾದ

ಒಮ್ಮೆ ಬ್ರಹ್ಮದೇವರು ತಮ್ಮ ಪ್ರತಿಬಿಂಬವನ್ನು ಕಂಡು ಸಂತೋಷಗೊಂಡರು. ತಮ್ಮನ್ನು ಅತಿಸುಂದರರೆಂದು ಭಾವಿಸಿಕೊಂಡು ಆ ಪ್ರತಿಬಿಂಬದಿಂದ ಕಿನ್ನರರನ್ನೂ ಮತ್ತು ಕಿಂಪುರುಷರನ್ನೂ ಸೃಷ್ಟಿಮಾಡಿದರು.॥45॥

(ಶ್ಲೋಕ - 46)

ಮೂಲಮ್

ತೇ ತು ತಜ್ಜಗೃಹೂ ರೂಪಂ ತ್ಯಕ್ತಂ ಯತ್ಪರಮೇಷ್ಠಿನಾ ।
ಮಿಥುನೀಭೂಯ ಗಾಯಂತಸ್ತಮೇವೋಷಸಿ ಕರ್ಮಭಿಃ ॥

ಅನುವಾದ

ಬ್ರಹ್ಮದೇವರು ತಮ್ಮ ಆ ಪ್ರತಿಬಿಂಬಶರೀರವನ್ನು ತ್ಯಜಿಸಲು ಕಿನ್ನರರೂ ಮತ್ತು ಕಿಂಪುರುಷರೂ ಅದನ್ನು ಸ್ವೀಕರಿಸಿದರು. ಅದರಿಂದಲೇ ಇವರೆಲ್ಲರೂ ಉಷಃಕಾಲದಲ್ಲಿ ತಮ್ಮ ಪತ್ನಿಯ ರಿಂದೊಡಗೂಡಿ ಬ್ರಹ್ಮದೇವರ ಗುಣ-ಕರ್ಮಗಳನ್ನು ಹಾಡಿ ಹೊಗಳುತ್ತಾರೆ.॥46॥

(ಶ್ಲೋಕ - 47)

ಮೂಲಮ್

ದೇಹೇನ ವೈ ಭೋಗವತಾ ಶಯಾನೋ ಬಹುಚಿಂತಯಾ ।
ಸರ್ಗೇನುಪಚಿತೇ ಕ್ರೋಧಾದುತ್ಸಸರ್ಜ ಹ ತದ್ವಪುಃ ॥

ಅನುವಾದ

ಒಮ್ಮೆ ಬ್ರಹ್ಮದೇವರು ಸೃಷ್ಟಿಯ ವೃದ್ಧಿಯು ಆಗದಿರುವುರಿಂದ ತುಂಬಾ ಚಿಂತಾಪರವಶರಾಗಿ ಕೈ-ಕಾಲು ಮುಂತಾದ ಅವಯವಗಳನ್ನು ಚಾಚಿಕೊಂಡು ಮಲಗಿಬಿಟ್ಟರು. ಮತ್ತೆ ಕ್ರೋಧವಶರಾಗಿ ತಮ್ಮ ಭೋಗಮಯ ಶರೀರವನ್ನು ತ್ಯಜಿಸಿಬಿಟ್ಟರು.॥47॥

(ಶ್ಲೋಕ - 48)

ಮೂಲಮ್

ಯೇಹೀಯಂತಾಮುತಃ ಕೇಶಾ ಅಹಯಸ್ತೇಂಗ ಜಜ್ಞಿರೇ ।
ಸರ್ಪಾಃ ಪ್ರಸರ್ಪತಃ ಕ್ರೂರಾ ನಾಗಾ ಭೋಗೋರುಕಂಧರಾಃ ॥

ಅನುವಾದ

ಆ ದೇಹದಿಂದ ಕೆಳಗೆ ಉದುರಿದ ಕೂದಲುಗಳಿಂದ ಅಹಿಗಳೆಂಬ ಹಾವುಗಳು ಉಂಟಾದವು. ಅವರು ಆ ದೇಹದಿಂದ ಚಲಿಸಿದಾಗ ಕ್ರೂರಸ್ವಭಾವವುಳ್ಳ ಸರ್ಪಗಳೂ ಮತ್ತು ನಾಗಗಳೆಂಬ ಹಾವುಗಳು ಜನಿಸಿದವು. ಅವುಗಳ ದೇಹಗಳು ಹೆಡೆಗಳ ರೂಪದಲ್ಲಿ ಹೆಗಲಿನ ಹತ್ತಿರ ವಿಸ್ತಾರವಾಗಿ ಹರಡಿಕೊಂಡಿದೆ.॥48॥

(ಶ್ಲೋಕ - 49)

ಮೂಲಮ್

ಸ ಆತ್ಮಾನಂ ಮನ್ಯಮಾನಃ ಕೃತಕೃತ್ಯಮಿವಾತ್ಮಭೂಃ ।
ತದಾ ಮನೂನ್ಸಸರ್ಜಾಂತೇ ಮನಸಾ ಲೋಕಭಾವನಾನ್ ॥

ಅನುವಾದ

ಒಮ್ಮೆ ಬ್ರಹ್ಮದೇವರಿಗೆ ತಾವು ಕೃತಕೃತ್ಯರಾದಂತೆ ಅನುಭವ ಉಂಟಾಯಿತು. ಆಗ ಅವರು ಸೃಷ್ಟಿಯ ಕೊನೆಯಲ್ಲಿ ತಮ್ಮ ಮನಸ್ಸಿ ನಿಂದ ಮನುಗಳನ್ನು ಸೃಷ್ಟಿಸಿದರು. ಇವರೆಲ್ಲರೂ ಪ್ರಜೆಗಳನ್ನು ಬೆಳೆಸುವವರಾಗಿರುತ್ತಾರೆ.॥49॥

(ಶ್ಲೋಕ - 50)

ಮೂಲಮ್

ತೇಭ್ಯಃ ಸೋತ್ಯಸೃಜತ್ಸ್ವೀಯಂ ಪುರಂ ಪುರುಷಮಾತ್ಮವಾನ್ ।
ತಾನ್ದೃಷ್ಟ್ವಾ ಯೇ ಪುರಾ ಸೃಷ್ಟಾಃ ಪ್ರಶಶಂಸುಃ ಪ್ರಜಾಪತಿಮ್ ॥

ಅನುವಾದ

ಪ್ರಶಸ್ತವಾದ ಮನಸ್ಸುಳ್ಳ ಬ್ರಹ್ಮ ದೇವರು ಅವರಿಗಾಗಿ ತನ್ನ ಪುರುಷಾಕಾರ ಶರೀರವನ್ನು ತ್ಯಜಿಸಿದರು. ಮನುಗಳನ್ನು ಕಂಡು ಅವರಿಗಿಂತಲೂ ಮೊದಲು ಸೃಷ್ಟಿಸಲ್ಪಟ್ಟ ದೇವತೆಗಳೂ, ಗಂಧರ್ವರೂ ಮುಂತಾದವರು ಬ್ರಹ್ಮದೇವರನ್ನು ಸ್ತುತಿಸತೊಡಗಿದರು.॥50॥

(ಶ್ಲೋಕ - 51)

ಮೂಲಮ್

ಅಹೋ ಏತಜ್ಜಗತ್ಸ್ರಷ್ಟಃ ಸುಕೃತಂ ಬತ ತೇ ಕೃತಮ್ ।
ಪ್ರತಿಷ್ಠಿತಾಃ ಕ್ರಿಯಾ ಯಸ್ಮಿನ್ ಸಾಕಮನ್ನಮದಾಮಹೇ ॥

ಅನುವಾದ

‘ವಿಶ್ವಸೃಷ್ಟಿಯನ್ನು ಮಾಡಿದ ದೇವರೇ! ನಿಮ್ಮ ಈ ಮನುಗಳ ಸೃಷ್ಟಿಯು ಬಹಳ ಸುಂದರವಾಗಿದೆ. ಇದರಲ್ಲಿ ಅಗ್ನಿಹೋತ್ರಾದಿ ಎಲ್ಲ ಕರ್ಮಗಳು ನೆಲೆಗೊಂಡಿವೆ. ಇದರ ಸಹಾಯದಿಂದ ನಾವೂ ಕೂಡ ನಮ್ಮ ಹವಿರ್ಭಾಗವೆಂಬ ಅನ್ನವನ್ನು ಸ್ವೀಕರಿಸಬಲ್ಲೆವು.’॥51॥

(ಶ್ಲೋಕ - 52)

ಮೂಲಮ್

ತಪಸಾ ವಿದ್ಯಯಾ ಯುಕ್ತೋ ಯೋಗೇನ ಸುಸಮಾಧಿನಾ ।
ಋಷೀನೃಷಿರ್ಹೃಷೀಕೇಶಃ ಸಸರ್ಜಾಭಿಮತಾಃ ಪ್ರಜಾಃ ॥

(ಶ್ಲೋಕ - 53)

ಮೂಲಮ್

ತೇಭ್ಯಶ್ಚೈಕೈಕಶಃ ಸ್ವಸ್ಯ ದೇಹಸ್ಯಾಂಶಮದಾದಜಃ ।
ಯತ್ತತ್ಸಮಾಧಿಯೋಗರ್ಧಿತಪೋವಿದ್ಯಾವಿರಕ್ತಿಮತ್ ॥

ಅನುವಾದ

ಅನಂತರ ಆದಿಋಷಿಯಾದ ಬ್ರಹ್ಮದೇವರು ಇಂದ್ರಿಯ ಸಂಯಮಪೂರ್ವಕವಾದ ತಪಸ್ಸು, ವಿದ್ಯೆ, ಯೋಗ, ಸಮಾಧಿ ಇವು ಗಳಿಂದ ಸಂಪನ್ನರಾಗಿ ತಮ್ಮ, ಪ್ರಿಯಸಂತಾನವಾದ ಋಷಿಗಣವನ್ನು ರಚಿಸಿದರು. ಅವರಲ್ಲಿ ಪ್ರತಿಯೊಬ್ಬರಿಗೂ ತಮ್ಮ ಸಮಾಧಿ, ಯೋಗ, ಐಶ್ವರ್ಯ, ತಪಸ್ಸು, ವಿದ್ಯೆ, ವೈರಾಗ್ಯಮಯವಾದ ಶರೀರದ ಅಂಶಗಳನ್ನು ದಯಪಾಲಿಸಿದರು. ॥52-53॥

ಅನುವಾದ (ಸಮಾಪ್ತಿಃ)

ಇಪ್ಪತ್ತನೆಯ ಅಧ್ಯಾಯವು ಮುಗಿಯಿತು. ॥20॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ತೃತೀಯಸ್ಕಂಧೇ ವಿಂಶೋಽಧ್ಯಾಯಃ ॥20॥