[ಹತ್ತೊಂಭತ್ತನೆಯ ಅಧ್ಯಾಯ]
ಭಾಗಸೂಚನಾ
ಹಿರಣ್ಯಾಕ್ಷನ ವಧೆ
(ಶ್ಲೋಕ - 1)
ಮೂಲಮ್ (ವಾಚನಮ್)
ಮೈತ್ರೇಯ ಉವಾಚ
ಮೂಲಮ್
ಅವಧಾರ್ಯ ವಿರಿಂಚಸ್ಯ ನಿರ್ವ್ಯಲೀಕಾಮೃತಂ ವಚಃ ।
ಪ್ರಹಸ್ಯ ಪ್ರೇಮಗರ್ಭೇಣ ತದಪಾಂಗೇನ ಸೋಗ್ರಹೀತ್ ॥
ಅನುವಾದ
ಶ್ರೀಮೈತ್ರೇಯರು ಹೇಳುತ್ತಾರೆ ಎಲೈ ವಿದುರನೇ! ಬ್ರಹ್ಮದೇವರು ನುಡಿದ ನಿಷ್ಕಪಟವೂ, ಅಮೃತಮಯವೂ ಆದ ವಿಜ್ಞಾಪನೆಯನ್ನು ಕೇಳಿ ಭಗವಂತನು ಅವನ ಮುಗ್ಧತನಕ್ಕಾಗಿ ನಸುನಕ್ಕು ತನ್ನ ಪ್ರೇಮಪೂರಿತವಾದ ಕಡೆಗಣ್ಣ ನೋಟದಿಂದ ಅವನ ಪ್ರಾರ್ಥನೆಯನ್ನು ಸ್ವೀಕರಿಸಿದನು.॥1॥
ಮೂಲಮ್
(ಶ್ಲೋಕ - 2)
ತತಃ ಸಪತ್ನಂ ಮುಖತಶ್ಚರಂತಮಕುತೋಭಯಮ್ ।
ಜಘಾನೋತ್ಪತ್ಯ ಗದಯಾ ಹನಾವಸುರಮಕ್ಷಜಃ ॥
(ಶ್ಲೋಕ - 3)
ಮೂಲಮ್
ಸಾ ಹತಾ ತೇನ ಗದಯಾ ವಿಹತಾ ಭಗವತ್ಕರಾತ್ ।
ವಿಘೂರ್ಣಿತಾಪತದ್ರೇಜೇ ತದದ್ಭುತಮಿವಾಭವತ್ ॥
ಅನುವಾದ
ಮತ್ತೆ ಅವನು ತನ್ನ ಮುಂದೆ ನಿರ್ಭಯನಾಗಿ ಸಂಚರಿಸುತ್ತಿದ್ದ ಶತ್ರುವಿನ ಮೇಲೆ ದಿಢೀರನೆ ಎರಗಿ ಆತನ ದವಡೆಯ ಮೇಲೆ ಗದೆಯನ್ನು ಬೀಸಿದನು. ಆದರೆ ಹಿರಣ್ಯಾಕ್ಷನ ಗದೆಗೆ ಢಿಕ್ಕಿಹೊಡೆದು ಆ ಗದೆಯು ಭಗವಂತನ ಕೈಯಿಂದ ಜಾರಿ ಸುತ್ತುಹೊಡೆಯುತ್ತಾ ನೆಲದಲ್ಲಿ ಉರುಳಿ ಕಂಗೊಳಿಸಿತು. ಆದರೆ ಅದು ತುಂಬಾ ಅದ್ಭುತವಾದ ಘಟನೆಯಂತೆ ಎಂದು ಎಲ್ಲರಿಗೆ ಅನಿಸಿತು.॥2-3॥
(ಶ್ಲೋಕ - 4)
ಮೂಲಮ್
ಸ ತದಾ ಲಬ್ಧ ತೀರ್ಥೋಪಿ ನ ಬಬಾಧೇ ನಿರಾಯುಧಮ್ ।
ಮಾನಯನ್ಸ ಮೃಧೇ ಧರ್ಮಂ ವಿಷ್ವಕ್ಸೇನಂ ಪ್ರಕೋಪಯನ್ ॥
ಅನುವಾದ
ಆಗ ಶತ್ರುವಿನ ಮೇಲೆ ಆಕ್ರಮಣ ಮಾಡಲು ಒಳ್ಳೆಯ ಅವಕಾಶವಿದ್ದರೂ ಶತ್ರುವು ಆಯುಧರಹಿತನಾಗಿರುವುದನ್ನು ಕಂಡು ಹಿರಣ್ಯಾಕ್ಷನು ಯುದ್ಧಧರ್ಮವನ್ನು ಪಾಲಿಸುತ್ತಾ ಅವನ ಮೇಲೆ ಆಕ್ರಮಣ ಮಾಡಲಿಲ್ಲ. ಭಗವಂತನ ಕ್ರೋಧವನ್ನು ಹೆಚ್ಚಿಸಲೆಂದೇ ಅವನು ಹೀಗೆ ಮಾಡಿದನು.॥4॥
(ಶ್ಲೋಕ - 5)
ಮೂಲಮ್
ಗದಾಯಾಮಪವಿದ್ಧಾಯಾಂ ಹಾಹಾಕಾರೇ ವಿನಿರ್ಗತೇ ।
ಮಾನಯಾಮಾಸ ತದ್ಧರ್ಮಂ ಸುನಾಭಂ ಚಾಸ್ಮರದ್ವಿಭುಃ ॥
ಅನುವಾದ
ಗದೆಯು ಕೆಳಗೆ ಉರುಳಿ ಜನರು ಅದಕ್ಕಾಗಿ ಹಾಹಾಕಾರ ಮಾಡಿ ಸುಮ್ಮನಾಗಲು, ಪ್ರಭುವು ಆತನ ಧರ್ಮಬುದ್ಧಿಯನ್ನು ಪ್ರಶಂಸೆಮಾಡಿ ತನ್ನ ಸುದರ್ಶನಚಕ್ರವನ್ನು ಸ್ಮರಿಸಿದನು.॥5॥
ಮೂಲಮ್
(ಶ್ಲೋಕ - 6)
ತಂ ವ್ಯಗ್ರಚಕ್ರಂ ದಿತಿಪುತ್ರಾಧಮೇನ
ಸ್ವಪಾರ್ಷದಮುಖ್ಯೇನ ವಿಷಜ್ಜಮಾನಮ್ ।
ಚಿತ್ರಾ ವಾಚೋತದ್ವಿದಾಂ ಖೇಚರಾಣಾಂ
ತತ್ರಾಸ್ಮಾಸನ್ ಸ್ವ್ವಸ್ತಿ ತೇಮುಂ ಜಹೀತಿ ॥
ಅನುವಾದ
ಸುದರ್ಶನ ಚಕ್ರವು ಒಡನೆಯೇ ಅಲ್ಲಿ ಕಾಣಿಸಿಕೊಂಡು ಭಗವಂತನ ಕರದಲ್ಲಿ ತಿರುಗತೊಡಗಿತು. ಆದರೆ ಭಗವಂತನು ತನ್ನ ಮುಖ್ಯಪಾರ್ಷದನಾಗಿದ್ದ ದೈತ್ಯಾಧಮ ಹಿರಣ್ಯಾಕ್ಷನೊಡನೆ ವಿಶೇಷ ವಾಗಿ ಕ್ರೀಡಿಸತೊಡಗಿದನು. ಆಗ ಆತನ ಪ್ರಭಾವವನ್ನರಿಯದ ದೇವತೆಗಳು ‘ಪ್ರಭೋ ! ನಿನಗೆ ಜಯವಾಗಲೀ. ಈತನನ್ನು ಇನ್ನು ಆಟವಾಡಿಸಬೇಡ. ಶೀಘ್ರವಾಗಿ ಸಂಹರಿಸಿಬಿಡು’ ಎಂದು ವಿಚಿತ್ರ ವಾಗಿ ಪ್ರಾರ್ಥಿಸುತ್ತಿರುವುದು ಸ್ವಾಮಿಗೆ ಕೇಳಿಸಿತು.॥6॥
(ಶ್ಲೋಕ - 7)
ಮೂಲಮ್
ಸ ತಂ ನಿಶಾಮ್ಯಾತ್ತರಥಾಂಗಮಗ್ರತೋ
ವ್ಯವಸ್ಥಿತಂ ಪದ್ಮಪಲಾಶಲೋಚನಮ್ ।
ವಿಲೋಕ್ಯ ಚಾಮರ್ಷಪರಿಪ್ಲುತೇಂದ್ರಿಯೋ
ರುಷಾ ಸ್ವದಂತಚ್ಛದಮಾದಶಚ್ಛ್ವಸನ್ ॥
ಅನುವಾದ
ಕಮಲಾಕ್ಷನಾದ ಶ್ರೀಹರಿಯು ತನ್ನೆದುರಿಗೆ ಸುದರ್ಶನಚಕ್ರಧಾರಿಯಾಗಿ ನಿಂತಿರುವುದನ್ನು ನೋಡಿ ಆ ದೈತ್ಯರಾಜನ ಸಕಲೇಂದ್ರಿಯಗಳು ತಳಮಳಗೊಂಡವು. ಅವನು ನಿಟ್ಟುಸಿರುಬಿಡುತ್ತಾ ಹಲ್ಲುಗಳಿಂದ ತುಟಿಯನ್ನು ಕಚ್ಚಿಕೊಳ್ಳತೊಡಗಿದನು.॥7॥
(ಶ್ಲೋಕ - 8)
ಮೂಲಮ್
ಕರಾಲದಂಷ್ಟ್ರಶ್ಚಕ್ಷುರ್ಭ್ಯಾಂ ಸಂಚಕ್ಷಾಣೋ ದಹನ್ನಿವ ।
ಅಭಿಪ್ಲುತ್ಯ ಸ್ವಗದಯಾ ಹತೋಸೀತ್ಯಾಹನದ್ಧರಿಮ್ ॥
ಅನುವಾದ
ಆಗ ತೀಕ್ಷ್ಣವಾದ ಕೋರೆಹಲ್ಲುಗಳುಳ್ಳ ದೈತ್ಯನು ಭಗವಂತನನ್ನು ಭಸ್ಮ ಮಾಡಿಬಿಡುವನೋ ಎಂಬಂತೆ ದುರುಗುಟ್ಟಿ ನೋಡತೊಡಗಿದನು. ಅವನು ಛಂಗನೆ ಜಿಗಿದು ‘ಎಲವೋ ! ಈಗ ನೀನು ಉಳಿಯಲಾರೆ’ ಎಂದು ಗರ್ಜಿಸುತ್ತಾ ಶ್ರೀಹರಿಯ ಮೇಲೆ ಬಲವಾಗಿ ಗದೆಯನ್ನು ಪ್ರಯೋಗಿಸಿದನು.॥8॥
(ಶ್ಲೋಕ - 9)
ಮೂಲಮ್
ಪದಾ ಸವ್ಯೇನ ತಾಂ ಸಾಧೋ ಭಗವಾನ್ಯಜ್ಞಸೂಕರಃ ।
ಲೀಲಯಾ ಮಿಷತಃ ಶತ್ರೋಃ ಪ್ರಾಹರದ್ವಾತರಂಹಸಮ್ ॥
(ಶ್ಲೋಕ - 10)
ಮೂಲಮ್
ಆಹ ಚಾಯುಧಮಾಧತ್ಸ್ವ ಘಟಸ್ವ ತ್ವಂ ಜಿಗೀಷಸಿ ।
ಇತ್ಯುಕ್ತಃ ಸ ತದಾ ಭೂಯಸ್ತಾಡಯನ್ವ್ಯನದದ್ಭೃಶಮ್ ॥
ಅನುವಾದ
ಸಾಧುಶ್ರೇಷ್ಠ ವಿದುರನೇ ! ಯಜ್ಞಮೂರ್ತಿಯಾದ ಭಗವಾನ್ ವರಾಹಸ್ವಾಮಿಯು ಶತ್ರುವು ನೋಡುತ್ತಿರುವಂತೆ ತನ್ನ ಎಡಗಾಲಿನಿಂದ ಆ ಗದೆಯನ್ನು ಲೀಲಾಜಾಲವಾಗಿ ಕೆಳಕ್ಕೆ ಉರುಳಿಸಿ ‘ಎಲೈ ದೈತ್ಯನೇ ! ನೀನು ನನ್ನನ್ನು ಗೆಲ್ಲಲು ಬಯಸು ತ್ತೀಯೆ. ಆದ್ದರಿಂದ ನಿನ್ನ ಶಸವನ್ನು ಎತ್ತಿಕೊಂಡು ಮತ್ತೊಂದುಬಾರಿ ಆಕ್ರಮಣಮಾಡುವವನಾಗು’ ಎಂದು ಆತನಿಗೆ ಹೇಳಿದನು. ಭಗವಂತನು ಹೇಳಿದುದನ್ನು ಕೇಳಿ ಆತನು ಮತ್ತೆ ಗದೆಯನ್ನು ಪ್ರಯೋಗಿಸಿ ಭಯಂಕರವಾಗಿ ಗರ್ಜಿಸಿದನು.॥9-10॥
(ಶ್ಲೋಕ - 11)
ಮೂಲಮ್
ತಾಂ ಸ ಆಪತತೀಂ ವೀಕ್ಷ್ಯ ಭಗವಾನ್ ಸಮವಸ್ಥಿತಃ ।
ಜಗ್ರಾಹ ಲೀಲಯಾ ಪ್ರಾಪ್ತಾಂ ಗರುತ್ಮಾನಿವ ಪನ್ನಗೀಮ್ ॥
ಅನುವಾದ
ಗದೆಯು ತನ್ನತ್ತ ಬರುತ್ತಿರುವುದನ್ನು ಕಂಡು ಭಗವಂತನು ಗರುಡನು ಹೆಣ್ಣು ಸರ್ಪವನ್ನು ಹಿಡಿಯುವಂತೆ ನಿಂತಲ್ಲೇ ಅದನ್ನು ಅನಾಯಾಸವಾಗಿ ಹಿಡಿದುಕೊಂಡನು.॥11॥
(ಶ್ಲೋಕ - 12)
ಮೂಲಮ್
ಸ್ವಪೌರುಷೇ ಪ್ರತಿಹತೇ ಹತಮಾನೋ ಮಹಾಸುರಃ ।
ನೈಚ್ಛದ್ಗದಾಂ ದೀಯಮಾನಾಂ ಹರಿಣಾ ವಿಗತಪ್ರಭಃ ॥
ಅನುವಾದ
ತನ್ನ ಪ್ರಯತ್ನವು ವ್ಯರ್ಥವಾದುದನ್ನು ಕಂಡು ಆ ಮಹಾದೈತ್ಯನ ಗರ್ವವು ಇಳಿದು, ತೇಜಸ್ಸು ನಷ್ಟವಾಗಿ ಹೋಯಿತು. ಈ ಸಲ ಭಗವಂತನು ಗದೆಯನ್ನು ಕೊಡಲು ಬಂದಾಗ ಆತನು ಅದನ್ನು ಪಡೆಯಲು ಬಯಸಲಿಲ್ಲ.॥12॥
(ಶ್ಲೋಕ - 13)
ಮೂಲಮ್
ಜಗ್ರಾಹ ತ್ರಿಶಿಖಂ ಶೂಲಂ ಜ್ವಲಜ್ಜ್ವಲನಲೋಲುಪಮ್ ।
ಯಜ್ಞಾಯ ಧೃತರೂಪಾಯ ವಿಪ್ರಾಯಾಭಿಚರನ್ಯಥಾ ॥
ಅನುವಾದ
ಆದರೆ ಯಾರಾದರೂ ಬ್ರಾಹ್ಮಣನ ಮೇಲೆ ನಿಷ್ಫಲವಾದ ಅಭಿಚಾರವನ್ನು ಪ್ರಯೋಗಿ ಸುವಂತೆ ಅವನು ಯಜ್ಞಪುರುಷನ ಮೇಲೆ ಪ್ರಯೋಗಿಸಲಿಕ್ಕಾಗಿ ಉರಿಯುವ ಬೆಂಕಿಯಂತಿದ್ದ ತ್ರಿಶೂಲವನ್ನು ಕೈಗೆತ್ತಿಕೊಂಡನು.॥13॥
(ಶ್ಲೋಕ - 14)
ಮೂಲಮ್
ತದೋಜಸಾ ದೈತ್ಯಮಹಾಭಟಾರ್ಪಿತಂ
ಚಕಾಸದಂತಃ ಖ ಉದೀರ್ಣದೀಧಿತಿ ।
ಚಕ್ರೇಣ ಚಿಚ್ಛೇದ ನಿಶಾತನೇಮಿನಾ
ಹರಿರ್ಯಥಾ ತಾರ್ಕ್ಷ್ಯಪತತಮುಜ್ಝಿತಮ್ ॥
ಅನುವಾದ
ಮಹಾಬಲಶಾಲಿಯಾದ ಹಿರಣ್ಯಾಕ್ಷನು ಬಲಪೂರ್ವಕವಾಗಿ ಅತ್ಯಂತ ರಭಸದಿಂದ ಪ್ರಯೋಗಿಸಿದ ತೇಜಸ್ವೀಯಾದ ಆ ತ್ರಿಶೂಲವು ಆಕಾಶದಲ್ಲಿ ಥಳ-ಥಳಿಸತೊಡಗಿತು. ಭಗವಂತನು ಅದನ್ನು ತನ್ನ ತೀಕ್ಷ್ಣಧಾರೆವುಳ್ಳ ಸುದರ್ಶನಚಕ್ರದಿಂದ ಇಂದ್ರನು ಗರುಡನ ಗರಿಯನ್ನು ಕತ್ತರಿಸಿದಂತೆ* ಕತ್ತರಿಸಿಹಾಕಿದನು.॥14॥
ಟಿಪ್ಪನೀ
- ಒಮ್ಮೆ ಗರುಡದೇವನು ತನ್ನ ತಾಯಿಯಾದ ವಿನತಾದೇವಿಯನ್ನು ಸರ್ಪಗಳ ತಾಯಿ ಕದ್ರುವಿನ ದಾಸ್ಯದಿಂದ ಬಿಡಿಸಲೋಸುಗ ಸ್ವರ್ಗದಿಂದ ಅಮೃತವನ್ನು ತರಲು ಹೋದಾಗ ಇಂದ್ರನು ಗರುಡನ ಮೇಲೆ ತನ್ನ ವಜ್ರಾಯುಧವನ್ನು ಪ್ರಯೋಗಿಸಿದನು. ದೇವೇಂದ್ರನ ವಜ್ರವು ಎಂದೂ ವ್ಯರ್ಥವಾಗುವುದಿಲ್ಲ. ಆ ದಿವ್ಯಾಯುಧಕ್ಕೆ ಗೌರವ ತೋರಲು ಗರುಡದೇವರು ತನ್ನ ರೆಕ್ಕೆಯ ಒಂದು ಗರಿಯನ್ನು ಅದಕ್ಕೆ ಲಕ್ಷ್ಯವಾಗಿ ಕೊಟ್ಟರು. ಅದನ್ನು ಮಾತ್ರ ಕತ್ತರಿಸಿತ್ತು ವಜ್ರಾಯುಧವು.
(ಶ್ಲೋಕ - 15)
ಮೂಲಮ್
ವೃಕ್ಣೇ ಸ್ವಶೂಲೇ ಬಹುಧಾರಿಣಾ ಹರೇಃ
ಪ್ರತ್ಯೇತ್ಯ ವಿಸ್ತೀರ್ಣಮುರೋ ವಿಭೂತಿಮತ್ ।
ಪ್ರವೃದ್ಧರೋಷಃ ಸ ಕಠೋರಮುಷ್ಟಿನಾ
ನದನ್ಪ್ರಹೃತ್ಯಾಂತರಧೀಯತಾಸುರಃ ॥
ಅನುವಾದ
ಭಗವಂತನ ಚಕ್ರದಿಂದ ನುಚ್ಚುನೂರಾದ ತನ್ನ ತ್ರಿಶೂಲವನ್ನು ಕಂಡು ದೈತ್ಯನಿಗೆ ಮಿತಿಮೀರಿದ ಕ್ರೋಧವುಂಟಾಯಿತು. ಆಗ ಅವನು ಭಗವಂತನ ಬಳಿಗೆ ಬಂದು ತನ್ನ ಕಠೋರವಾದ ಮುಷ್ಠಿಯಿಂದ ಶ್ರೀವತ್ಸಚಿಹ್ನೆಯಿಂದ ಬೆಳಗುತ್ತಿದ್ದ ಆತನ ಎದೆಗೆ ಬಲವಾಗಿ ಗುದ್ದಿ ಜೋರಾಗಿ ಗರ್ಜಿಸಿ ಕಣ್ಮರೆಯಾಗಿಬಿಟ್ಟನು.॥15॥
(ಶ್ಲೋಕ - 16)
ಮೂಲಮ್
ತೇನೇತ್ಥ ಮಾಹತಃ ಕ್ಷತ್ತರ್ಭಗವಾನಾದಿಸೂಕರಃ ।
ನಾಕಂಪತ ಮನಾಕ್ಕ್ವಾಪಿ ಸ್ರಜಾ ಹತ ಇವ ದ್ವಿಪಃ ॥ 16 ॥
ಅನುವಾದ
ವಿದುರನೇ ! ಗಜರಾಜನ ಮೇಲೆ ಹೂವಿನ ಹಾರದ ಏಟು ಏನೂ ಪರಿಣಾಮ ಬೀರದಂತೆ, ದೈತ್ಯನು ಈ ಏಟು ಹೊಡೆದರೂ ಭಗವಾನ್ ಆದಿವರಾಹನು ಸ್ವಲ್ಪವೂ ವಿಚಲಿತನಾಗಲಿಲ್ಲ.॥16॥
(ಶ್ಲೋಕ - 17)
ಮೂಲಮ್
ಅಥೋರುಧಾಸೃಜನ್ಮಾಯಾಂ ಯೋಗಮಾಯೇಶ್ವರೇ ಹರೌ ।
ಯಾಂ ವಿಲೋಕ್ಯ ಪ್ರಜಾಸಸ್ತಾ ಮೇನಿರೇಸ್ಯೋಪಸಂಯಮಮ್ ॥
ಅನುವಾದ
ಆಗ ಆ ಮಹಾ ಮಾಯಾವಿಯಾದ ದೈತ್ಯನು ಮಾಯೆಗೆ ಅಧಿಪತಿಯಾದ ಶ್ರೀಹರಿಯ ಮೇಲೆ ಅನೇಕ ರೀತಿಯ ಮಾಯೆಗಳನ್ನು ಪ್ರಯೋಗಿಸತೊಡಗಿದನು. ಅದನ್ನು ಕಂಡು ಎಲ್ಲ ಪ್ರಜೆಗಳು ಭಯಗೊಂಡು ಈಗಲೇ ಜಗತ್ತಿನ ಪ್ರಳಯವಾಗುವುದೋ ಎಂದು ತಿಳಿದರು.॥17॥
(ಶ್ಲೋಕ - 18)
ಮೂಲಮ್
ಪ್ರವವುರ್ವಾಯವಶ್ಚಂಡಾಸ್ತಮಃ ಪಾಂಸವಮೈರಯನ್ ।
ದಿಗ್ಭ್ಯೋ ನಿಪೇತುರ್ಗ್ರಾವಾಣಃ ಕ್ಷೇಪಣೈಃ ಪ್ರಹಿತಾ ಇವ ॥
ಅನುವಾದ
ಆಗ ಭಯಂಕರವಾದ ಬಿರುಗಾಳಿಯು ಬೀಸುತ್ತಾ ಧೂಳಿನಿಂದ ಎಲ್ಲೆಡೆ ಕತ್ತಲೆಯೇ ತುಂಬಿಹೋಯಿತು. ಎಲ್ಲ ಕಡೆಯಿಂದ ಕವಣೆಯ ಯಂತ್ರದಿಂದ ಎಸೆಯುತ್ತಿವೆಯೋ ಎಂಬಂತೆ ಕಲ್ಲುಗಳ ಸುರಿಮಳೆ ಬೀಳತೊಡಗಿತು.॥18॥
(ಶ್ಲೋಕ - 19)
ಮೂಲಮ್
ದ್ಯೌರ್ನಷ್ಟ ಭಗಣಾಭ್ರೌಘೈಃ ಸವಿದ್ಯುತ್ಸ್ತನಯಿತ್ನುಭಿಃ ।
ವರ್ಷದ್ಭಿಃ ಪೂಯಕೇಶಾಸೃಗ್ವಿಣ್ಮೂತ್ರಾಸ್ಥೀನಿ ಚಾಸಕೃತ್ ॥
ಅನುವಾದ
ಸುಳಿಮಿಂಚುಗಳೊಡನೆ ಸಿಡಿಲುಗಳಿಂದ ಮೋಡಗಳು ಎಲ್ಲೆಡೆ ಕವಿದು ಆಕಾಶದಲ್ಲಿ ಸೂರ್ಯ, ಚಂದ್ರ, ನಕ್ಷತ್ರಗಳೆಲ್ಲ ಅಡಗಿಹೋದುವು ಹಾಗೂ ಕೂದಲೂ, ಕೀವು, ಮಲ-ಮೂತ್ರಗಳು, ಎಲುಬುಗಳು ನಿರಂತರ ಸುರಿಯತೊಡಗಿದವು.॥19॥
(ಶ್ಲೋಕ - 20)
ಮೂಲಮ್
ಗಿರಯಃ ಪ್ರತ್ಯದೃಶ್ಯಂತ ನಾನಾಯುಧಮುಚೋನಘ ।
ದಿಗ್ವಾಸಸೋ ಯಾತುಧಾನ್ಯಃ ಶೂಲಿನ್ಯೋ ಮುಕ್ತಮೂರ್ಧಜಾಃ ॥
ಅನುವಾದ
ವಿದುರನೇ ! ಬಗೆ- ಬಗೆಯ ಅಸ-ಶಸಗಳ ಮಳೆಗರೆಯುವ ಪರ್ವತಗಳೇ ಕಾಣಿಸ ತೊಡಗಿದವು. ಕೈಯಲ್ಲಿ ತ್ರಿಶೂಲವನ್ನು ಹಿಡಿದು. ತಲೆಗೆದರಿ ಕೊಂಡಿದ್ದ, ಬೆತ್ತಲೆಯರಾದ ರಾಕ್ಷಸಿಯರು ಕಾಣಿಸತೊಡಗಿದರು.॥20॥
(ಶ್ಲೋಕ - 21)
ಮೂಲಮ್
ಬಹುಭಿರ್ಯಕ್ಷರಕ್ಷೋಭಿಃ ಪತ್ತ್ಯಶ್ವರಥಕುಂಜರೈಃ ।
ಆತತಾಯಿಭಿರುತ್ಸೃಷ್ಟಾ ಹಿಂಸ್ರಾ ವಾಚೋತಿವೈಶಸಾಃ ॥
ಅನುವಾದ
ಬಹುಸಂಖ್ಯೆಯಲ್ಲಿ ಕಾಲಾಳುಗಳು, ಕುದುರೆ ಸವಾರರು, ರಥಿಕರು, ಮದ್ದಾನೆಗಳ ಮೇಲೇರಿದ್ದ ಮಾವುತರು, ಕೊಲ್ಲುವುದಕ್ಕೆ ಸಿದ್ಧರಾಗಿದ್ದ ಯಕ್ಷ-ರಾಕ್ಷಸರು ಕೊಲ್ಲು-ಕಡಿ ಎಂದು ಕೂಗುತ್ತಿರುವ ಅತ್ಯಂತ ಕ್ರೂರವೂ, ಹಿಂಸಾಮಯವೂ ಆದ ಕೋಲಾಹಲ ಶಬ್ದವು ಎಲ್ಲೆಡೆ ಕೇಳಿಸತೊಡಗಿತು.॥21॥
(ಶ್ಲೋಕ - 22)
ಮೂಲಮ್
ಪ್ರಾದುಷ್ಕೃತಾನಾಂ ಮಾಯಾನಾಮಾಸುರೀಣಾಂ ವಿನಾಶಯತ್ ।
ಸುದರ್ಶನಾಸಂ ಭಗವಾನ್ ಪ್ರಯುಂಕ್ತ ದಯಿತಂ ತ್ರಿಪಾತ್ ॥
ಅನುವಾದ
ಹೀಗೆ ಪ್ರಕಟಗೊಂಡ ಆ ಆಸುರಿಮಾಯೆಯನ್ನು ನಾಶಗೊಳಿಸ ಲೋಸುಗ ಯಜ್ಞಮೂರ್ತಿಯಾದ ಶ್ರೀವರಾಹ ಭಗವಂತನು ತನ್ನ ಪ್ರಿಯವಾದ ಸುದರ್ಶನಚಕ್ರವನ್ನು ಪ್ರಯೋಗಿಸಿದನು.॥22॥
(ಶ್ಲೋಕ - 23)
ಮೂಲಮ್
ತದಾ ದಿತೇಃ ಸಮಭವತ್ಸಹಸಾ ಹೃದಿ ವೇಪಥುಃ ।
ಸ್ಮರಂತ್ಯಾ ಭರ್ತುರಾದೇಶಂ ಸ್ತನಾಚ್ಚಾಸೃಕ್ ಪ್ರಸುಸ್ರುವೇ ॥
ಅನುವಾದ
ಆಗ ದಿತಿದೇವಿಗೆ ತನ್ನ ಪತಿಯು ಹಿಂದೆ ಹೇಳಿದ ಮಾತು ನೆನಪಿಗೆ ಬಂದು ಆಕೆಯ ಹೃದಯವು ನಡುಗಿದಂತಾಗಿ ಇದ್ದಕ್ಕಿದ್ದಂತೆ ಸ್ತನಗಳಿಂದ ರಕ್ತವು ಸುರಿಯತೊಡಗಿತು.॥23॥
(ಶ್ಲೋಕ - 24)
ಮೂಲಮ್
ವಿನಷ್ಟಾಸು ಸ್ವಮಾಯಾಸು ಭೂಯಶ್ಚಾವ್ರಜ್ಯ ಕೇಶವಮ್ ।
ರುಷೋಪಗೂಹಮಾನೋಮುಂ ದದೃಶೇವಸ್ಥಿತಂ ಬಹಿಃ ॥
ಅನುವಾದ
ತನ್ನ ಮಾಯೆಯು ನಾಶವಾದಾಗ ಆ ದೈತ್ಯನು ಪುನಃ ಭಗವಂತನ ಬಳಿಗೆ ಬಂದನು. ಅವನು ಕೆರಳಿದ ಕೋಪದಿಂದ ಭಗವಂತನನ್ನು ಚೂರು-ಚೂರು ಮಾಡಬೇಕೆಂದು ಬಯಸಿ ಆತನನ್ನು ತನ್ನ ತೋಳ್ತೆಕ್ಕೆಯಲ್ಲಿ ಅವಚಿ ಹಿಡಿದುಕೊಂಡನು. ಆದರೆ ಭಗವಂತನಾದರೋ ಹೊರಗೆ ನಿಂತಿರು ವುದನ್ನು ನೋಡಿದನು.॥24॥
(ಶ್ಲೋಕ - 25)
ಮೂಲಮ್
ತಂ ಮುಷ್ಟಿಭಿರ್ವಿನಿಘ್ನಂತಂ ವಜ್ರಸಾರೈರಧೋಕ್ಷಜಃ ।
ಕರೇಣ ಕರ್ಣಮೂಲೇಹನ್ ಯಥಾ ತ್ವಾಷ್ಟ್ರಂ ಮರುತ್ಪತಿಃ ॥
ಅನುವಾದ
ಆಗ ಅವನು ಮತ್ತೂ ಕ್ರುದ್ಧನಾಗಿ ತನ್ನ ವಜ್ರದಂತಹ ಮುಷ್ಟಿಗಳಿಂದ ಭಗವಂತನನ್ನು ಥಳಿಸತೊಡಗಿ ದನು. ಒಡನೆಯೇ ಭಗವಂತನು ದೇವೇಂದ್ರನು ವೃತ್ರಾಸುರ ನನ್ನು ಬಡಿವಂತೆ ಆತನ ಕೆನ್ನೆಗೆ ಒಂದು ಪೆಟ್ಟುಕೊಟ್ಟನು.॥25॥
(ಶ್ಲೋಕ - 26)
ಮೂಲಮ್
ಸ ಆಹತೋ ವಿಶ್ವಜಿತಾ ಹ್ಯವಜ್ಞಯಾ
ಪರಿಭ್ರಮದ್ಗಾತ್ರ ಉದಸ್ತಲೋಚನಃ ।
ವಿಶೀರ್ಣಬಾಹ್ವಂಘ್ರಿ ಶಿರೋರುಹೋಪತದ್
ಯಥಾ ನಗೇಂದ್ರೋ ಲುಲಿತೋ ನಭಸ್ವತಾ ॥
ಅನುವಾದ
ವಿಶ್ವವಿಜಯಿಯಾದ ಭಗವಂತನೇನೋ ಆತನಿಗೆ ಉಪೇಕ್ಷೆ ಯಿಂದಲೇ ಹೊಡೆದಿದ್ದನು. ಆದರೂ ಕೂಡ ಆ ಏಟಿನಿಂದ ಹಿರಣ್ಯಾಕ್ಷನ ದೇಹವು ಗಿರ್ರನೇ ತಿರುಗಿತು, ಕಣ್ಣಾಲಿಗಳು ಹೊರ ಬಂದವು. ಕೈ-ಕಾಲು-ಕೂದಲು ಛಿನ್ನ-ಭಿನ್ನವಾಗಿ ಆತನು ಗತ ಪ್ರಾಣನಾಗಿ ಬಿರುಗಾಳಿಯಿಂದ ಬುಡಸಹಿತ ಉರುಳಿದ ಮಹಾ ವೃಕ್ಷದಂತೆ ನೆಲಕ್ಕೆ ಉರುಳಿದನು.॥26॥
(ಶ್ಲೋಕ - 27)
ಮೂಲಮ್
ಕ್ಷಿತೌ ಶಯಾನಂ ತಮಕುಂಠವರ್ಚಸಂ
ಕರಾಲದಂಷ್ಟ್ರಂ ಪರಿದಷ್ಟದಚ್ಛದಮ್ ।
ಅಜಾದಯೋ ವೀಕ್ಷ್ಯ ಶಶಂಸುರಾಗತಾ
ಅಹೋ ಇಮಾಂ ಕೋ ನು ಲಭೇತ ಸಂಸ್ಥಿತಿಮ್ ॥
ಅನುವಾದ
ಹಿರಣ್ಯಾಕ್ಷನ ತೇಜವು ಆಗಲೂ ಕುಂದಲಿಲ್ಲ. ಕರಾಳವಾದ ಕೋರೆಹಲ್ಲುಗಳಿಂದ ತುಟಿಗಳನ್ನು ಕಚ್ಚಿಕೊಂಡು ನೆಲದಮೇಲೆ ಶವವಾಗಿ ಬಿದ್ದಿರುವ ದೈತ್ಯನನ್ನು ನೋಡಿ ಯುದ್ಧವನ್ನು ನೋಡಲು ಬಂದಿದ್ದ ಬ್ರಹ್ಮಾದಿದೇವತೆಗಳು ಅವನನ್ನು ಪ್ರಶಂಸಿಸುತ್ತಾ ‘‘ಆಹಾ ! ಇಂತಹ ಅಲಭ್ಯವಾದ ಮೃತ್ಯುವು ಬೇರಾರಿಗೆ ತಾನೇ ದೊರಕೀತು ಎಂದು ಉದ್ಗರಿಸಿದರು.॥27॥
(ಶ್ಲೋಕ - 28)
ಮೂಲಮ್
ಯಂ ಯೋಗಿನೋ ಯೋಗಸಮಾಧಿನಾ ರಹೋ
ಧ್ಯಾಯಂತಿ ಲಿಂಗಾದಸತೋ ಮುಮುಕ್ಷಯಾ ।
ತಸ್ಯೈಷ ದೈತ್ಯಋಷಭಃ ಪದಾಹತೋ
ಮುಖಂ ಪ್ರಪಶ್ಯಂಸ್ತನುಮುತ್ಸಸರ್ಜ ಹ ॥
ಅನುವಾದ
ತಮ್ಮ ಮಿಥ್ಯಾ ಉಪಾಧಿಗಳಿಂದ ಬಿಡುಗಡೆ ಹೊಂದಲು ಯೋಗಿಗಳು ಏಕಾಂತ ದಲ್ಲಿ ಸಮಾಧಿಯೋಗದಿಂದ ಯಾವಾತನ ಧ್ಯಾನಮಾಡುತ್ತಾರೋ, ಅಂತಹ ಭಗವಂತನ ಚರಣ ಹತಿಯಿಂದ, ಆತನ ಮುಖಾರ ವಿಂದವನ್ನೇ ನೋಡುತ್ತಾ ದೇಹತ್ಯಾಗ ಮಾಡಿದನಲ್ಲವೇ ಈ ದೈತ್ಯರಾಜನು! ॥28॥
(ಶ್ಲೋಕ - 29)
ಮೂಲಮ್
ಏತೌ ತೌ ಪಾರ್ಷದಾವಸ್ಯ ಶಾಪಾದ್ಯಾತಾವಸದ್ಗತಿಮ್ ।
ಪುನಃ ಕತಿಪಯೈಃ ಸ್ಥಾನಂ ಪ್ರಪತ್ಸ್ಯೇತೇ ಹ ಜನ್ಮಭಿಃ ॥
ಅನುವಾದ
ಈ ಹಿರಣ್ಯಾಕ್ಷ ಮತ್ತು ಹಿರಣ್ಯಕಶಿಪು ಭಗವಂತನ ಪಾರ್ಷದರೇ ಆಗಿದ್ದಾರೆ. ಶಾಪವಶದಿಂದ ಅಧೋಗತಿ ಪ್ರಾಪ್ತವಾಗಿತ್ತು. ಇನ್ನು ಒಂದೆರಡು ಜನ್ಮಗಳಲ್ಲೇ ಇವರು ಮತ್ತೆ ತಮ್ಮ ಸ್ವಸ್ಥಾನಕ್ಕೆ ಹಿಂದಿರುಗುವರು’’ ಎಂದು ಆತನ ಧನ್ಯತೆಯನ್ನು ಕೊಂಡಾಡಿದರು.॥29॥
(ಶ್ಲೋಕ - 30)
ಮೂಲಮ್
ದೇವಾ ಊಚುಃ
ನಮೋ ನಮಸ್ತೇಖಿಲಯಜ್ಞತಂತವೇ
ಸ್ಥಿತೌ ಗೃಹೀತಾಮಲಸತ್ತ್ವಮೂರ್ತಯೇ ।
ದಿಷ್ಟ್ಯಾ ಹತೋಯಂ ಜಗತಾಮರುಂತುದ-
ಸ್ತ್ವತ್ಪಾದಭಕ್ತ್ಯಾ ವಯಮೀಶ ನಿರ್ವೃತಾಃ ॥
ಅನುವಾದ
ದೇವತೆಗಳು ಸ್ತುತಿಸತೊಡಗಿದರು ಪ್ರಭುವೇ ! ನಿನಗೆ ಮತ್ತೆ-ಮತ್ತೆ ನಮಸ್ಕಾರಗಳು. ಸಮಸ್ತ ಯಜ್ಞಗಳನ್ನು ವಿಸ್ತರಿಸುವ ವಿಭುವು ನೀನು. ಜಗತ್ತಿನ ಸ್ಥಿತಿಗಾಗಿ ಶುದ್ಧಸತ್ತ್ವಮಯವಾದ ದಿವ್ಯ ಮಂಗಳವಿಗ್ರಹವನ್ನು ಪ್ರಕಟಪಡಿಸುತ್ತೀಯೆ. ಜಗತ್ತಿಗೆ ಕಷ್ಟ ಕೊಡು ತ್ತಿದ್ದ ಈ ದುಷ್ಟದೈತ್ಯನು ನಾಶಹೊಂದಿರುವುದು ಬಹಳ ಸಂತಸದ ಸುದ್ದಿ. ನಿನ್ನ ಚರಣಗಳಲ್ಲಿನ ಭಕ್ತಿಯ ಪ್ರಭಾವದಿಂದ ನಮಗೂ ಸುಖ-ಶಾಂತಿಗಳು ಲಭಿಸಿದುವು.॥30॥
(ಶ್ಲೋಕ - 31)
ಮೂಲಮ್
ಮೈತ್ರೇಯ ಉವಾಚ
ಏವಂ ಹಿರಣ್ಯಾಕ್ಷಮಸಹ್ಯವಿಕ್ರಮಂ
ಸ ಸಾದಯಿತ್ವಾ ಹರಿರಾದಿಸೂಕರಃ ।
ಜಗಾಮ ಲೋಕಂ ಸ್ವಮಖಂಡಿತೋತ್ಸವಂ
ಸಮೀಡಿತಃ ಪುಷ್ಕರವಿಷ್ಟರಾದಿಭಿಃ ॥
ಅನುವಾದ
ಶ್ರೀಮೈತ್ರೇಯರು ಹೇಳುತ್ತಾರೆ ಎಲೈ ವಿದುರನೇ ! ಹೀಗೆ ಮಹಾಪರಾಕ್ರಮಿಯಾದ ಹಿರಣ್ಯಾಕ್ಷನನ್ನು ವಧಿಸಿ, ಬ್ರಹ್ಮಾದಿ ದೇವತೆಗಳು ಸ್ತುತಿಮಾಡುತ್ತಿರುವಂತೆ ಭಗವಾನ್ ಆದಿವರಾಹ ಸ್ವಾಮಿಯು ತನ್ನ ಅಖಂಡ ಆನಂದಮಯ ಧಾಮಕ್ಕೆ ಬಿಜಯ ಮಾಡಿದನು.॥31॥
(ಶ್ಲೋಕ - 32)
ಮೂಲಮ್
ಮಯಾ ಯಥಾನೂಕ್ತಮವಾದಿ ತೇ ಹರೇಃ
ಕೃತಾವತಾರಸ್ಯ ಸುಮಿತ್ರ ಚೇಷ್ಟಿತಮ್ ।
ಯಥಾ ಹಿರಣ್ಯಾಕ್ಷ ಉದಾರವಿಕ್ರಮೋ
ಮಹಾಮೃಧೇ ಕ್ರೀಡನವನ್ನಿರಾಕೃತಃ ॥
ಅನುವಾದ
ಮಿತ್ರಾ ವಿದುರನೇ ! ಭಗವಂತನು ಅವತರಿಸಿ ಹೇಗೆ ಲೀಲೆಗಳನ್ನು ಮಾಡುತ್ತಾನೆ ಮತ್ತು ಮಹಾ ಪರಾ ಕ್ರಮಿಯಾದ ಹಿರಣ್ಯಾಕ್ಷನನ್ನು ಯುದ್ಧದಲ್ಲಿ ಹೇಗೆ ಆಟದ ಬೊಂಬೆಯಂತೆ ಮುರಿದುಹಾಕಿದನು ಎಂಬುದನ್ನು ನಾನು ಗುರುಮುಖ ದಿಂದ ಕೇಳಿದಂತೆಯೇ ನಿನಗೆ ನಿರೂಪಿಸಿರುವೆನು. ॥ 32 ॥
(ಶ್ಲೋಕ - 33)
ಮೂಲಮ್ (ವಾಚನಮ್)
ಸೂತ ಉವಾಚ
ಮೂಲಮ್
ಇತಿ ಕೌಷಾರವಾಖ್ಯಾತಾಮಾಶ್ರುತ್ಯ ಭಗವತ್ಕಥಾಮ್ ।
ಕ್ಷತ್ತಾನಂದಂ ಪರಂ ಲೇಭೇ ಮಹಾಭಾಗವತೋ ದ್ವಿಜ ॥
ಅನುವಾದ
ಸೂತಪುರಾಣಿಕರು ಹೇಳುತ್ತಾರೆ ಶೌನಕಾದಿ ಋಷಿಗಳೇ ! ಮೈತ್ರೇಯ ಮಹರ್ಷಿಗಳಿಂದ ಭಗವಂತನ ಈ ಕಥೆಯನ್ನು ಕೇಳಿ ಪರಮಭಾಗವತೋತ್ತಮನಾದ ವಿದುರನಿಗೆ ಪರಮಾನಂದ ಉಂಟಾಯಿತು. ॥33॥
(ಶ್ಲೋಕ - 34)
ಮೂಲಮ್
ಅನ್ಯೇಷಾಂ ಪುಣ್ಯಶ್ಲೋಕಾನಾಮುದ್ದಾಮಯಶಸಾಂ ಸತಾಮ್ ।
ಉಪಶ್ರುತ್ಯ ಭವೇನ್ಮೋದಃ ಶ್ರೀವತ್ಸಾಂಕಸ್ಯ ಕಿಂ ಪುನಃ ॥
ಅನುವಾದ
ಪವಿತ್ರವಾದ ಕೀರ್ತಿಯುಳ್ಳ ಮಹಾಯಶಸ್ವಿಗಳಾದ ಮಹಾಪುರುಷರ ಚರಿತ್ರೆಗಳನ್ನು ಕೇಳಿದರೂ ಪರಮಾನಂದ ವುಂಟಾಗುವುದು. ಹೀಗಿರುವಾಗ ಶ್ರೀವತ್ಸಲಾಂಛನಭೂಷಿತ ಶ್ರೀ ಭಗವಂತನ ಲೀಲೆಗಳನ್ನು ಕೇಳಿದಾಗ ಆಗುವ ಆನಂದದ ಬಗೆಗೆ ಹೇಳುವುದೇನಿದೆ? ॥34॥
(ಶ್ಲೋಕ - 35)
ಮೂಲಮ್
ಯೋ ಗಜೇಂದ್ರಂ ಝಷಗ್ರಸ್ತಂ
ಧ್ಯಾಯಂತಂ ಚರಣಾಂಬುಜಮ್ ।
ಕ್ರೋಶಂತೀನಾಂ ಕರೇಣೂನಾಂ
ಕೃಚ್ಛ್ರತೋಮೋಚಯದ್ದ್ರುತಮ್ ॥
(ಶ್ಲೋಕ - 36)
ಮೂಲಮ್
ತಂ ಸುಖಾರಾಧ್ಯಮೃಜುಭಿರನನ್ಯಶರಣೈರ್ನೃಭಿಃ ।
ಕೃತಜ್ಞಃ ಕೋ ನ ಸೇವೇತ ದುರಾರಾಧ್ಯಮಸಾಧುಭಿಃ ॥
ಅನುವಾದ
ಘೋರವಾದ ಮೊಸಳೆಯು ಗಜ ರಾಜನ ಕಾಲನ್ನು ಹಿಡಿದುಕೊಂಡಾಗ ಗಜರಾಜನು ಪ್ರಭುವಿನ ಪಾದಗಳನ್ನು ಧ್ಯಾನಿಸತೊಡಗಿದನು. ಅವನ ಪರಿವಾರದ ಹೆಣ್ಣಾನೆ ಗಳೂ ದುಃಖದಿಂದ ಕೂಗಿಕೊಳ್ಳತೊಡಗಿದವು. ಅಂತಹ ಕಷ್ಟ ಸಮಯದಲ್ಲಿ ಒಡನೆಯೇ ಮೈದೋರಿ ಭಕ್ತಗಜೇಂದ್ರನನ್ನು ದುಃಖದ ದೆಸೆಯಿಂದ ಬಿಡಿಸಿದ ಪರಮ ಕರುಣಾಳುವೇ ಈತನು. ಶರಣು ಬಂದ ಸರಳಹೃದಯರಾದ ಭಕ್ತರಲ್ಲಿ ಸಹಜವಾಗಿಯೇ ಪ್ರಸನ್ನ ನಾಗುವನು. ಆದರೆ ದುಷ್ಟಪುರುಷರಿಗೆ ದೂರವಾಗಿರುವನು. ಅವರಿಗೆ ಅವನ ಒಲುಮೆ ದೊರೆಯದು. ಉಪಕಾರಗಳನ್ನು ಗುರು ತಿಸುವ ಕೃತಜ್ಞನಾದ ಯಾರು ತಾನೇ ಆ ಭಕ್ತಪ್ರಿಯನನ್ನು ಸೇವಿಸುವುದಿಲ್ಲ? ॥35-36॥
(ಶ್ಲೋಕ - 37)
ಮೂಲಮ್
ಯೋ ವೈ ಹಿರಣ್ಯಾಕ್ಷವಧಂ ಮಹಾದ್ಭುತಂ
ವಿಕ್ರೀಡಿತಂ ಕಾರಣಸೂಕರಾತ್ಮನಃ ।
ಶೃಣೋತಿ ಗಾಯತ್ಯನುಮೋದತೇಂಜಸಾ
ವಿಮುಚ್ಯತೇ ಬ್ರಹ್ಮವಧಾದಪಿ ದ್ವಿಜಾಃ ॥
ಅನುವಾದ
ಶೌನಕಾದಿ ಮಹರ್ಷಿಗಳೇ ! ಭೂಮಿ ಯನ್ನು ಉದ್ಧರಿಸುವುದಕ್ಕಾಗಿ ವರಾಹರೂಪವನ್ನು ಧರಿಸಿದ ಶ್ರೀಹರಿಯು ಮಾಡಿದ ಹಿರಣ್ಯಾಕ್ಷವಧವೆಂಬ ಅದ್ಭುತವಾದ ಈ ಲೀಲೆಯನ್ನು ಕೇಳುವವನೂ, ಹಾಡುವವನೂ, ಅನುಮೋದಿಸುವವನೂ, ಬ್ರಹ್ಮ ಹತ್ಯೆಯೇ ಮುಂತಾದ ಘೋರ ಪಾತಕಗಳಿಂದ ಸಹಜವಾಗಿ ಬಿಡುಗಡೆಹೊಂದುತ್ತಾನೆ.॥37॥
(ಶ್ಲೋಕ - 38)
ಮೂಲಮ್
ಏತನ್ಮಹಾಪುಣ್ಯಮಲಂ ಪವಿತ್ರಂ
ಧನ್ಯಂ ಯಶಸ್ಯಂ ಪದಮಾಯುರಾಶಿಷಾಮ್ ।
ಪ್ರಾಣೇಂದ್ರಿಯಾಣಾಂ ಯುಧಿ ಶೌರ್ಯವರ್ಧನಂ
ನಾರಾಯಣೋಂತೇ ಗತಿರಂಗ ಶೃಣ್ವತಾಮ್ ॥
ಅನುವಾದ
ಈ ಚರಿತ್ರೆಯು ಅತ್ಯಂತ ಪುಣ್ಯಪ್ರದವಾದುದು. ಪರಮ ಪವಿತ್ರವಾದುದು, ಧನ್ಯವಾದುದು. ಕೇಳುವ ಸುಕೃತಿಗಳಿಗೆ ಧನವನ್ನೂ, ಯಶಸ್ಸನ್ನೂ ದಯಪಾಲಿಸುವುದು. ಆಯುಸ್ಸನ್ನು ವೃದ್ಧಿಗೊಳಿಸುವುದು. ಕಾಮನೆಗಳನ್ನೂ ಈಡೇರಿಸುವುದು. ಯುದ್ಧದಲ್ಲಿ ಪ್ರಾಣ ಮತ್ತು ಇಂದ್ರಿಯಗಳ ಶಕ್ತಿ ಯನ್ನು ಹೆಚ್ಚಿಸುವುದು. ಇದನ್ನು ಕೇಳಿದವರಿಗೆ ಕೊನೆಗೆ ಶ್ರೀಮನ್ನಾ ರಾಯಣನ ಆಶ್ರಯವೇ ದೊರೆಯುವುದು.॥38॥
ಅನುವಾದ (ಸಮಾಪ್ತಿಃ)
ಹತ್ತೊಂಭತ್ತನೆಯ ಅಧ್ಯಾಯವು ಮುಗಿಯಿತು.॥19॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ತೃತೀಯಸ್ಕಂಧೇ ಹಿರಣ್ಯಾಕ್ಷವಧೋನಾಮೈಕೋನವಿಂಶೋಽಧ್ಯಾಯಃ ॥19॥