೧೮

[ಹದಿನೆಂಟನೆಯ ಅಧ್ಯಾಯ]

ಭಾಗಸೂಚನಾ

ಹಿರಣ್ಯಾಕ್ಷನೊಡನೆ ಭಗವಾನ್ ಶ್ರೀವರಾಹದೇವರ ಯುದ್ಧ

(ಶ್ಲೋಕ - 1)

ಮೂಲಮ್ (ವಾಚನಮ್)

ಮೈತ್ರೇಯ ಉವಾಚ

ಮೂಲಮ್

ತದೇವಮಾಕರ್ಣ್ಯ ಜಲೇಶಭಾಷಿತಂ
ಮಹಾಮನಾಸ್ತದ್ವಿಗಣಯ್ಯ ದುರ್ಮದಃ ।
ಹರೇರ್ವಿದಿತ್ವಾ ಗತಿಮಂಗ ನಾರದಾದ್
ರಸಾತಲಂ ನಿರ್ವಿವಿಶೇ ತ್ವರಾನ್ವಿತಃ ॥

ಅನುವಾದ

ಶ್ರೀಮೈತ್ರೇಯರು ಹೇಳುತ್ತಾರೆ ಮಹಾತ್ಮನಾದ ವಿದುರನೇ ! ‘ಶ್ರೀಹರಿಯು ನಿನ್ನನ್ನು ಯುದ್ಧದಲ್ಲಿ ಕೊಲ್ಲುವನು’ ಎಂಬ ವರುಣ ದೇವರ ಮಾತನ್ನು ಕೇಳಿ ಆ ಉನ್ಮತ್ತನಾದ ಹಿರಣ್ಯಾಕ್ಷನಿಗೆ ಸ್ವಲ್ಪವೂ ಅಂಜಿಕೆಯಾಗಲಿಲ್ಲ. ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ತನಗೆ ತಕ್ಕ ಶತ್ರುವಾದ ಆ ಹರಿಯು ಎಲ್ಲಿದ್ದಾನೆ ಎಂದು ಒಡನೆಯೇ ನಾರದ ರಿಂದ ತಿಳಿದುಕೊಂಡು ರಭಸದಿಂದ ರಸಾತಳವನ್ನು ಹೊಕ್ಕನು.॥1॥

(ಶ್ಲೋಕ - 2)

ಮೂಲಮ್

ದದರ್ಶ ತತ್ರಾಭಿಜಿತಂ ಧರಾಧರಂ
ಪ್ರೋನ್ನೀಯಮಾನಾವನಿಮಗ್ರದಂಷ್ಟ್ರಯಾ ।
ಮುಷ್ಣಂತಮಕ್ಷ್ಣಾ ಸ್ವರುಚೋರುಣಶ್ರಿಯಾ
ಜಹಾಸ ಚಾಹೋ ವನಗೋಚರೋ ಮೃಗಃ ॥

ಅನುವಾದ

ಅಲ್ಲಿ ಅವನು ವಿಶ್ವವಿಜಯಿಯಾದ ಆ ವರಾಹಭಗವಂತನು ಭೂಮಿಯನ್ನು ತನ್ನ ಕೋರೆದಾಡೆಗಳ ಮೇಲಿರಿಸಿಕೊಂಡು ಮೇಲಕ್ಕೆ ಬರುತ್ತಿರುವುದನ್ನು ಕಂಡನು. ಅವನು ತನ್ನ ಕೆಂಗಣ್ಣಿನ ಕಾಂತಿಯಿಂದ ಪರರ ತೇಜಸ್ಸನ್ನು ಕಸಿದುಕೊಳ್ಳುತ್ತಾ ಮುನ್ನಡೆಯುತ್ತಿದ್ದಾನೆ. ಆತ ನನ್ನು ನೋಡಿದೊಡನೆಯೇ ದೈತ್ಯನು ಘೊಳ್ಳನೆ ನಕ್ಕು ‘ಅರೇ! ಈ ಕಾಡಿನ ಪಶುವು ಇಲ್ಲಿಗೆ ಎಲ್ಲಿಂದ ಬಂತು ?’ ಎಂದು ಅಪಹಾಸ್ಯ ಮಾಡಿದನು.॥2॥

(ಶ್ಲೋಕ - 3)

ಮೂಲಮ್

ಆಹೈನಮೇಹ್ಯಜ್ಞ ಮಹೀಂ ವಿಮುಂಚ ನೋ
ರಸೌಕಸಾಂ ವಿಶ್ವಸೃಜೇಯಮರ್ಪಿತಾ ।
ನ ಸ್ವಸ್ತಿ ಯಾಸ್ಯಸ್ಯನಯಾ ಮಮೇಕ್ಷತಃ
ಸುರಾಧಮಾಸಾದಿತಸೂಕರಾಕೃತೇ ॥

ಅನುವಾದ

ಎಲವೋ ಮೂಢನೇ ! ಇತ್ತ ಬಾ. ಈ ಭೂಮಿಯನ್ನು ಬಿಟ್ಟುಬಿಡು. ಇದನ್ನು ವಿಶ್ವಕರ್ತನಾದ ಬ್ರಹ್ಮನು ರಸಾತಳ ದಲ್ಲಿ ವಾಸಿಸುವ ನಮ್ಮ ವಶಕ್ಕೆ ಒಪ್ಪಿಸಿರುವನು. ಎಲೈ ಹಂದಿಯ ರೂಪವನ್ನಾಂತ ಸುರಾಧಮನೇ ! ನನ್ನ ಕಣ್ಣು ಎದುರಿಗೆ ಇದನ್ನು ಎತ್ತಿಕೊಂಡು ನೆಮ್ಮದಿಯಾಗಿ ಹೋಗಲಾರೆ.॥3॥

(ಶ್ಲೋಕ - 4)

ಮೂಲಮ್

ತ್ವಂ ನಃ ಸಪತ್ನೈರಭವಾಯ ಕಿಂ ಭೃತೋ
ಯೋ ಮಾಯಯಾ ಹಂತ್ಯ ಸುರಾನ್ಪರೋಕ್ಷಜಿತ್ ।
ತ್ವಾಂ ಯೋಗಮಾಯಾಬಲಮಲ್ಪಪೌರುಷಂ
ಸಂಸ್ಥಾಪ್ಯ ಮೂಢ ಪ್ರಮೃಜೇ ಸುಹೃಚ್ಛುಚಃ ॥

ಅನುವಾದ

ನೀನು ಮಾಯೆಯಿಂದ ಅಡಗಿಕೊಂಡೇ ದೈತ್ಯರನ್ನು ಜಯಿಸಿಕೊಂಡು ಬಿಡುವೆ. ಹೀಗೆ ಮೋಸದಿಂದ ನಮ್ಮನ್ನು ಕೊಲ್ಲುವುದಕ್ಕಾಗಿಯೇ ನಿನ್ನನ್ನು ನಮ್ಮ ಶತ್ರುಗಳು ಸಾಕಿದ್ದಾರೋ? ನಿನ್ನ ಬಲವಾದರೋ ಯೋಗಮಾಯೆ ಒಂದೇಆಗಿದೆ. ಅದನ್ನು ಬಿಟ್ಟು ನಿನ್ನಲ್ಲಿ ಬೇರೆ ಪೌರುಷವೇನಿದೆ? ಇಂದು ನಿನ್ನನ್ನು ಮುಗಿಸಿ ನನ್ನ ಬಂಧುಗಳ ದುಃಖವನ್ನು ದೂರಮಾಡುವೆನು.॥4॥

(ಶ್ಲೋಕ - 5)

ಮೂಲಮ್

ತ್ವಯಿ ಸಂಸ್ಥಿತೇ ಗದಯಾ ಶೀರ್ಣಶೀರ್ಷ-
ಣ್ಯಸ್ಮದ್ಭುಜಚ್ಯುತಯಾ ಯೇ ಚ ತುಭ್ಯಮ್ ।
ಬಲಿಂ ಹರಂತ್ಯೃಷಯೋ ಯೇ ಚ ದೇವಾಃ
ಸ್ವಯಂ ಸರ್ವೇ ನ ಭವಿಷ್ಯಂತ್ಯಮೂಲಾಃ ॥

ಅನುವಾದ

ಇಂದು ನಾನು ಬೀಸುವ ಗದೆಯ ಏಟಿನಿಂದ ನಿನ್ನ ತಲೆಯು ಒಡೆದುಹೋಗಿ ನೀನು ಸತ್ತು ಹೋದಾಗ ನಿನ್ನನ್ನು ಆರಾಧಿಸುತ್ತಿರುವ ದೇವತೆಗಳೂ, ಋಷಿಗಳೂ ಬೇರುಕಿತ್ತ ಮರದಂತೆ ತಾವಾಗಿಯೇ ನಾಶವಾಗಿ ಹೋಗುವರು.॥5॥

(ಶ್ಲೋಕ - 6)

ಮೂಲಮ್

ಸ ತುದ್ಯ ಮಾನೋರಿದುರುಕ್ತ ತೋಮರೈ-
ರ್ದಂಷ್ಟ್ರಾಗ್ರಗಾಂ ಗಾಮುಪಲಕ್ಷ್ಯ ಭೀತಾಮ್ ।
ತೋದಂ ಮೃಷನ್ನಿರಗಾದಂಬುಮಧ್ಯಾದ್
ಗ್ರಾಹಾಹತಃ ಸಕರೇಣುರ್ಯಥೇಭಃ ॥

ಅನುವಾದ

ಹಿರಣ್ಯಾಕ್ಷನು ಭಗವಂತನನ್ನು ದುರ್ವಚನಗಳೆಂಬ ಬಾಣ ಗಳಿಂದ ನೋಯಿಸುತ್ತಿದ್ದರೂ, ಕೋರೆಹಲ್ಲುಗಳ ತುದಿಯಲ್ಲಿದ್ದ ಭೂದೇವಿಯು ಅಸುರನ ಬೆದರಿಕೆಯಿಂದ ಭಯಗೊಂಡಿರು ವುದನ್ನು ಮನಗಂಡು, ಶತ್ರುವಿನ ವಾಗ್ಬಾಣಗಳನ್ನು ಸ್ವಾಮಿಯು ಸಹಿಸಿಕೊಂಡು ಮೊಸಳೆಯ ಏಟುತಿಂದ ಗಜರಾಜನು ತನ್ನ ಹೆಣ್ಣಾನೆಯೊಡನೆ ಹೊರಬರುವಂತೆ ನೀರಿನಿಂದ ಹೊರಬರುತ್ತಿದ್ದನು.॥6॥

(ಶ್ಲೋಕ - 7)

ಮೂಲಮ್

ತಂ ನಿಃಸರಂತಂ ಸಲಿಲಾದನುದ್ರುತೋ
ಹಿರಣ್ಯಕೇಶೋ ದ್ವಿರದಂ ಯಥಾ ಝಷಃ ।
ಕರಾಲದಂಷ್ಟ್ರೋಶನಿನಿಃಸ್ವನೋಬ್ರವೀತ್
ಗತಹ್ರಿಯಾಂ ಕಿಂ ತ್ವ ಸತಾಂ ವಿಗರ್ಹಿತಮ್ ॥

ಅನುವಾದ

ಹೀಗೆ ತನ್ನ ಹೀಯಾಳಿಕೆಗೆ ಯಾವ ಉತ್ತರವನ್ನೂ ಕೊಡದೇ ಶ್ರೀವರಾಹಮೂರ್ತಿಯು ನೀರಿನಿಂದ ಹೊರಗೆ ಹೊಗು ತ್ತಿರುವುದನ್ನು ಕಂಡಾಗ ಹಳದಿಯ ತಲೆಗೂದಲು ಮತ್ತು ತೀಕ್ಷ್ಣವಾದ ಕೋರೆಹಲ್ಲುಗಳಿಂದ ಕೂಡಿದ್ದ ಆ ದೈತ್ಯನು ಮೊಸಳೆ ಯು ಆನೆಯನ್ನು ಅಟ್ಟಿಸಿಕೊಂಡು ಹೋಗುವಂತೆ ಆತನನ್ನು ಹಿಂಬಾಲಿಸಿ ಸಿಡಿಲಿನಂತೆ ಅಬ್ಬರಿಸುತ್ತಾ ಎಲವೋ! ಹೇಡಿಯಂತೆ ಹೀಗೆ ಓಡಿಹೋಗುವುದರಲ್ಲಿ ನಿನಗೆ ನಾಚಿಕೆಯಾಗುವುದಿಲ್ಲವೇ ? ನಾಚಿಕೆಗೆಟ್ಟ ನೀಚರಿಗೆ ನಿಂದ್ಯವಾದುದು ಏನಿದೆ ? ಎಂದು ನುಡಿದನು.॥7॥

(ಶ್ಲೋಕ - 8)

ಮೂಲಮ್

ಸ ಗಾಮುದಸ್ತಾತ್ಸಲಿಲಸ್ಯ ಗೋಚರೇ
ವಿನ್ಯಸ್ಯ ತಸ್ಯಾಮದಧಾತ್ಸ್ವಸತ್ತ್ವಮ್ ।
ಅಭಿಷ್ಟುತೋ ವಿಶ್ವಸೃಜಾ ಪ್ರಸೂನೈ-
ರಾಪೂರ್ಯಮಾಣೋ ವಿಬುಧೈಃ ಪಶ್ಯತೋರೇಃ ॥

ಅನುವಾದ

ಶ್ರೀಭಗವಂತನು ಭೂಮಿಯನ್ನು ನೀರಿನಿಂದ ಮೇಲಕ್ಕೆತ್ತಿ ತಂದು ಯೋಗ್ಯಜಾಗದಲ್ಲಿ ಇರಿಸಿ, ಅದರಲ್ಲಿ ತನ್ನ ಆಧಾರಶಕ್ತಿಯನ್ನು ತುಂಬಿದನು. ಆಗ ಹಿರಣ್ಯಾಕ್ಷನು ನೋಡುತ್ತಿರುವಂತೆಯೇ ಸೃಷ್ಟಿಕರ್ತನಾದ ಬ್ರಹ್ಮದೇವರು ಅವನನ್ನು ಸ್ತುತಿಸಿದರು; ದೇವತೆಗಳು ಪುಷ್ಪವೃಷ್ಟಿಗರೆದರು.॥8॥

(ಶ್ಲೋಕ - 9)

ಮೂಲಮ್

ಪರಾನುಷಕ್ತಂ ತಪನೀಯೋಪಕಲ್ಪಂ
ಮಹಾಗದಂ ಕಾಂಚನಚಿತ್ರದಂಶಮ್ ।
ಮರ್ಮಾಣ್ಯಭೀಕ್ಷ್ಣಂ ಪ್ರತುದಂತಂ ದುರುಕ್ತೈಃ
ಪ್ರಚಂಡ ಮನ್ಯುಃ ಪ್ರಹಸಂಸ್ತಂ ಬಭಾಷೇ ॥

ಅನುವಾದ

ಆಗ ಚಿನ್ನದ ಆಭರಣ ಗಳನ್ನೂ, ಅದ್ಭುತವಾದ ಕವಚವನ್ನೂ ಧರಿಸಿ, ಕೈಯಲ್ಲಿ ಭಾರೀಗದೆ ಯನ್ನು ಹಿಡಿದುಕೊಂಡು ತನ್ನನ್ನು ಕಟುವಾಕ್ಯಗಳಿಂದ ನಿರಂತರವಾಗಿ ನೋಯಿಸುತ್ತಿದ್ದ ಆ ದೈತ್ಯನನ್ನು ಕುರಿತು ಶ್ರೀಹರಿಯು ಉಕ್ಕೇರಿದ ಕೋಪದಿಂದ ನಗುತ್ತಾ ಇಂತೆಂದನು.॥9॥

(ಶ್ಲೋಕ - 10)

ಮೂಲಮ್

ಶ್ರೀಭಗವಾನುವಾಚ
ಸತ್ಯಂ ವಯಂ ಭೋ ವನಗೋಚರಾ ಮೃಗಾ
ಯುಷ್ಮದ್ವಿಧಾನ್ಮೃಗಯೇ ಗ್ರಾಮಸಿಂಹಾನ್ ।
ನ ಮೃತ್ಯುಪಾಶೈಃ ಪ್ರತಿಮುಕ್ತಸ್ಯ ವೀರಾ
ವಿಕತ್ಥನಂ ತವ ಗೃಹ್ಣಂತ್ಯಭದ್ರ ॥

ಅನುವಾದ

ಶ್ರೀಭಗವಂತನು ಹೇಳುತ್ತಾನೆ ಎಲವೋ ದೈತ್ಯನೇ! ನೀನು ಹೇಳಿದಂತೆ ನಾವು ಕಾಡಿನ ಮೃಗವು ಆಗಿರುವುದು ನಿಜವೇ ಆಗಿದೆ. ನಿನ್ನಂತಹ ಗ್ರಾಮಸಿಂಹ (ನಾಯಿ)ಗಳನ್ನು ಹುಡುಕುತ್ತಾ ತಿರುಗು ತ್ತಿರುತ್ತೇವೆ. ದುಷ್ಟನೇ! ಮೃತ್ಯುಪಾಶದಲ್ಲಿ ಸಿಲುಕಿಕೊಂಡಿರುವ ನಿನ್ನಂತಹ ನಿರ್ಭಾಗ್ಯ ಜೀವಿಗಳ ಆತ್ಮಪ್ರಶಂಸೆಯ ಕಡೆಗೆ ವೀರಪು ರುಷರು ಗಮನವೀಯುವುದಿಲ್ಲ. ॥10॥

(ಶ್ಲೋಕ - 11)

ಮೂಲಮ್

ಏತೇ ವಯಂ ನ್ಯಾಸಹರಾ ರಸೌಕಸಾಂ
ಗತಹ್ರಿಯೋ ಗದಯಾ ದ್ರಾವಿತಾಸ್ತೇ ।
ತಿಷ್ಠಾಮಹೇಥಾಪಿ ಕಥಂಚಿದಾಜೌ
ಸ್ಥೇಯಂ ಕ್ವ ಯಾಮೋ ಬಲಿನೋತ್ಪಾದ್ಯ ವೈರಮ್ ॥

ಅನುವಾದ

‘ರಸಾತಲ ನಿವಾಸಿಗಳ ನಿಕ್ಷೇಪದ ಸಂಪತ್ತನ್ನು ಕಸಿದುಕೊಂಡು ನಾಚಿಕೆಗೆಟ್ಟು, ನಿನ್ನ ಗದೆಯ ಭಯದಿಂದ ಇಲ್ಲಿಗೆ ಓಡಿಬಂದಿದ್ದೇವೆ’ ಎಂದು ನೀನು ಹೇಳಿರು ವುದು ನಿಜವೇ ! ನಿನ್ನಂತಹ ಅದ್ವಿತೀಯನಾದ ವೀರನ ಮುಂದೆ ಯುದ್ಧದಲ್ಲಿ ಸೆಣಸುವ ಸಾಮರ್ಥ್ಯವು ನಮಗೆಲ್ಲಿದೆ! ಆದರೂ ಹೇಗೋ ನಿನ್ನ ಮುಂದೆ ನಿಂತಿರುವೆನು. ನಿನ್ನಂತಹ ಬಲಶಾಲಿ ಗಳೊಡನೆ ವೈರವನ್ನು ಕಟ್ಟಿಕೊಂಡು ಹೋಗುವುದಾದರೂ ಎಲ್ಲಿಗೆ? ॥11॥

(ಶ್ಲೋಕ - 12)

ಮೂಲಮ್

ತ್ವಂ ಪದ್ರಥಾನಾಂ ಕಿಲ ಯೂಥಪಾಧಿಪೋ
ಘಟಸ್ವ ನೋಸ್ವಸ್ತಯ ಆಶ್ವನೂಹಃ ।
ಸಂಸ್ಥಾಪ್ಯ ಚಾಸ್ಮಾನ್ಪ್ರಮೃಜಾಶ್ರು ಸ್ವಕಾನಾಂ
ಯಃ ಸ್ವಾಂ ಪ್ರತಿಜ್ಞಾಂ ನಾತಿಪಿಪರ್ತ್ಯಸಭ್ಯಃ ॥

ಅನುವಾದ

ಪದಾತಿಗಳಾದ ಯೋಧವೀರರಲ್ಲಿ ನೀನು ಮಹಾ ನಾಯಕನಾಗಿರುವೆ. ಆದ್ದರಿಂದ ಈಗ ಯಾವ ಶಂಕೆಯೂ ಇಲ್ಲದೆ ನಮಗೆ ಅನಿಷ್ಟವನ್ನು ಮಾಡಲು ಪ್ರಯತ್ನಿಸು. ನನ್ನನ್ನು ಕೊಂದು ನಿನ್ನ ನೆಂಟರಿಷ್ಟರ ಕಣ್ಣೀರನ್ನು ಒರೆಸುವವನಾಗು. ಇನ್ನು ತಡಮಾಡ ಬೇಡ. ಮಾಡಿದ ಪ್ರತಿಜ್ಞೆಯನ್ನು ನೆರವೇರಿಸದವನು ಅಸಭ್ಯನು. ಸತ್ಪುರುಷರಲ್ಲಿ ಸೇರಿ ಕುಳಿತುಕೊಳ್ಳಲು ಯೋಗ್ಯನಲ್ಲ.॥12॥

(ಶ್ಲೋಕ - 13)

ಮೂಲಮ್ (ವಾಚನಮ್)

ಮೈತ್ರೇಯ ಉವಾಚ

ಮೂಲಮ್

ಸೋಧಿಕ್ಷಿಪ್ತೋ ಭಗವತಾ ಪ್ರಲಬ್ಧಶ್ಚ ರುಷಾ ಭೃಶಮ್ ।
ಆಜಹಾರೋಲ್ಬಣಂ ಕ್ರೋಧಂ ಕ್ರೀಡ್ಯಮಾನೋಹಿರಾಡಿವ ॥

ಅನುವಾದ

ಶ್ರೀಮೈತ್ರೇಯರು ಹೇಳುತ್ತಾರೆ ವಿದುರನೇ! ಶ್ರೀಭಗವಂತನು ಕ್ರೋಧದಿಂದ ಹೀಗೆ ಆ ದೈತ್ಯನನ್ನು ತಿರಸ್ಕರಿಸಿ, ಅಪಹಾಸ್ಯಮಾಡಿದಾಗ, ಅವನು ಕಾಲಿನಿಂದ ಮೆಟ್ಟಿ ಆಟವಾಡಿ ಸಲ್ಪಟ್ಟ ಕಾಳಿಂಗಸರ್ಪದಂತೆ ಕೆರಳಿ ಕ್ರೋಧದಿಂದ ಭುಗಿಲೆದ್ದನು.॥13॥

(ಶ್ಲೋಕ - 14)

ಮೂಲಮ್

ಸೃಜನ್ನಮರ್ಷಿತಃ ಶ್ವಾಸಾನ್ಮನ್ಯುಪ್ರಚಲಿತೇಂದ್ರಿಯಃ ।
ಆಸಾದ್ಯ ತರಸಾ ದೈತ್ಯೋ ಗದಯಾಭ್ಯಹನದ್ಧರಿಮ್ ॥

ಅನುವಾದ

ಅವನು ಸಿಟ್ಟಿನಿಂದ ಸಿಡಿ-ಮಿಡಿಗೊಂಡು ನಿಟ್ಟುಸಿರು ಬಿಡ ತೊಡಗಿದನು. ಆತನ ಇಂದ್ರಿಯಗಳು ಪ್ರಕ್ಷುಬ್ಧವಾದುವು. ಒಡನೆಯೇ ಆತನು ಹೌಹಾರಿ ಹರಿಯ ಮೇಲೆ ಗದೆಯನ್ನು ಪ್ರಯೋಗಿಸಿದನು.॥14॥

(ಶ್ಲೋಕ - 15)

ಮೂಲಮ್

ಭಗವಾಂಸ್ತು ಗದಾವೇಗಂ ವಿಸೃಷ್ಟಂ ರಿಪುಣೋರಸಿ ।
ಅವಂಚಯತ್ತಿರಶ್ಚೀನೋ ಯೋಗಾರೂಢ ಇವಾಂತಕಮ್ ॥

ಅನುವಾದ

ಆದರೆ ಭಗವಂತನು ತನ್ನ ಎದೆಯ ಮೇಲೆ ಪ್ರಯೋಗಿಸಿದ ಶತ್ರುವಿನ ಗದಾಘಾತವನ್ನು ಯೋಗಸಿದ್ಧ ಪುರುಷನು ಮೃತ್ಯುವಿನ ಆಕ್ರಮಣದಿಂದ ತನ್ನನ್ನು ರಕ್ಷಿಸಿಕೊಂಡಂತೆ ವ್ಯರ್ಥವಾಗಿಸಿದನು.॥15॥

(ಶ್ಲೋಕ - 16)

ಮೂಲಮ್

ಪುನರ್ಗದಾಂ ಸ್ವಾಮಾದಾಯ ಭ್ರಾಮಯಂತಮಭೀಕ್ಷ್ಣಶಃ ।
ಅಭ್ಯಧಾವದ್ಧರಿಃ ಕ್ರುದ್ಧಃ ಸಂರಂಭಾದ್ದಷ್ಟದಚ್ಛದಮ್ ॥

ಅನುವಾದ

ಮತ್ತೆ ದೈತ್ಯನು ಕ್ರೋಧದಿಂದ ತುಟಿಯನ್ನು ಕಚ್ಚಿಕೊಳ್ಳುತ್ತಾ ತನ್ನ ಗದೆಯನ್ನು ಮತ್ತೆ-ಮತ್ತೆ ತಿರುಗಿಸತೊಡಗಿದಾಗ ಶ್ರೀಹರಿಯು ಕೋಪಗೊಂಡು ಆತನ ಮೇಲೆ ಛಂಗನೆ ಹಾರಿದನು.॥16॥

(ಶ್ಲೋಕ - 17)

ಮೂಲಮ್

ತತಶ್ಚ ಗದಯಾರಾತಿಂ ದಕ್ಷಿಣಸ್ಯಾಂ ಭ್ರುವಿ ಪ್ರಭುಃ ।
ಆಜಘ್ನೇ ಸ ತು ತಾಂ ಸೌಮ್ಯ ಗದಯಾ ಕೋವಿದೋಹನತ್ ॥

ಅನುವಾದ

ಸಾಧುಶ್ರೇಷ್ಠನಾದ ವಿದುರಾ ! ಆಗ ಪ್ರಭುವು ಶತ್ರುವಿನ ಬಲಹುಬ್ಬಿನ ಮೇಲೆ ಗದೆಯಿಂದ ಬೀಸಿ ಹೊಡೆಯಲು ಗದಾಯುದ್ಧದಲ್ಲಿ ಕುಶಲನಾದ ಹಿರಣ್ಯಾಕ್ಷನು ಅದನ್ನು ಮಧ್ಯದಲ್ಲಿಯೇ ತನ್ನ ಗದೆಯಿಂದ ತಡೆದನು.॥17॥

(ಶ್ಲೋಕ - 18)

ಮೂಲಮ್

ಏವಂ ಗದಾಭ್ಯಾಂ ಗುರ್ವೀಭ್ಯಾಂ ಹರ್ಯಕ್ಷೋ ಹರಿರೇವ ಚ ।
ಜಿಗೀಷಯಾ ಸುಸಂರಬ್ಧಾ ವನ್ಯೋನ್ಯಮಭಿಜಘ್ನತುಃ ॥

ಅನುವಾದ

ಹೀಗೆ ಶ್ರೀಹರಿಯು ಮತ್ತು ಹಿರಣ್ಯಾಕ್ಷನು ಒಬ್ಬರನ್ನೊಬ್ಬರು ಜಯಿಸುವ ಇಚ್ಛೆಯಿಂದ ಅತ್ಯಂತ ಕ್ರುದ್ಧರಾಗಿ ಪರಸ್ಪರ ಭಾರವಾದ ಗದೆಗಳಿಂದ ಪ್ರಹರಿಸತೊಡಗಿದರು.॥18॥

(ಶ್ಲೋಕ - 19)

ಮೂಲಮ್

ತಯೋಃ ಸ್ಪೃಧೋಸ್ತಿಗ್ಮಗದಾಹತಾಂಗಯೋಃ
ಕ್ಷತಾಸ್ರವಘ್ರಾಣವಿವೃದ್ಧಮನ್ವ್ಯೋಃ ।
ವಿಚಿತ್ರಮಾರ್ಗಾಂಶ್ಚ ರತೋರ್ಜಿಗೀಷಯಾ
ವ್ಯಭಾದಿಲಾಯಾಮಿವ ಶುಷ್ಮಿಣೋರ್ಮೃಧಃ ॥

ಅನುವಾದ

ಇಬ್ಬರಲ್ಲಿಯೂ ಒಬ್ಬರನ್ನೊಬ್ಬರು ಗೆಲ್ಲಬೇಕೆಂಬ ಸ್ಪರ್ಧೆಯುಂಟಾಯಿತು. ಇಬ್ಬರ ಅಂಗಗಳೂ ಗದೆಗಳ ಏಟುಗಳಿಂದ ಗಾಯಗೊಂಡು ಅವುಗಳಿಂದ ಸುರಿಯುತ್ತಿದ್ದ ರಕ್ತದ ವಾಸನೆಯಿಂದ ಇಬ್ಬರಿಗೂ ಕ್ರೋಧವು ಉಕ್ಕೇರಿಸುತ್ತಿತ್ತು. ಇಬ್ಬರೂ ಬಗೆ-ಬಗೆಯ ವರಸೆಗಳನ್ನು ತೋರಿಸತೊಡಗಿದರು. ಹಸುವಿಗೋಸ್ಕರ ಸೆಣಸುವ ಎರಡು ಹೋರಿಗಳಂತೆ ಭೂಮಿಗೋಸ್ಕರವಾಗಿ ಇಬ್ಬರೂ ಭಯಂಕರವಾಗಿ ಯುದ್ಧಮಾಡತೊಡಗಿದರು.॥19॥

(ಶ್ಲೋಕ - 20)

ಮೂಲಮ್

ದೈತ್ಯಸ್ಯ ಯಜ್ಞಾವಯವಸ್ಯ ಮಾಯಾ-
ಗೃಹೀತವಾರಾಹತನೋರ್ಮಹಾತ್ಮನಃ ।
ಕೌರವ್ಯ ಮಹ್ಯಾಂ ದ್ವಿಷತೋರ್ವಿಮರ್ದನಂ
ದಿದೃಕ್ಷುರಾಗಾದೃಷಿಭಿರ್ವೃತಃ ಸ್ವರಾಟ್ ॥

ಅನುವಾದ

ವಿದುರನೇ ! ಹೀಗೆ ಹಿರಣ್ಯಾಕ್ಷನಿಗೂ ಮಾಯೆಯಿಂದ ವರಾಹ ರೂಪವನ್ನಾಂತ ಯಜ್ಞಮೂರ್ತಿಯಾದ ಭಗವಂತನಿಗೂ ಭೂದೇವಿ ಯನ್ನು ಗೆಲ್ಲಬೇಕೆಂಬ ಹಗೆತನದಿಂದ ಯುದ್ಧವಾಗುತ್ತಿರಲು, ಅದನ್ನು ನೋಡಲು ಋಷಿಗಳೊಡನೆ ಬ್ರಹ್ಮದೇವರು ಅಲ್ಲಿಗೆ ಬಂದರು.॥20॥

(ಶ್ಲೋಕ - 21)

ಮೂಲಮ್

ಆಸನ್ನ ಶೌಂಡೀರಮಪೇತಸಾಧ್ವಸಂ
ಕೃತಪ್ರತೀಕಾರಮಹಾರ್ಯವಿಕ್ರಮಮ್ ।
ವಿಲಕ್ಷ್ಯ ದೈತ್ಯಂ ಭಗವಾನ್ಸಹಸ್ರಣೀ-
ರ್ಜಗಾದ ನಾರಾಯಣಮಾದಿಸೂಕರಮ್ ॥

ಅನುವಾದ

ಅವರ ಸುತ್ತಲೂ ಸಾವಿರಾರು ಋಷಿಗಳು ನೆರೆದಿದ್ದರು. ‘ಈ ದೈತ್ಯನು ಭಾರೀ ಶೂರನಾಗಿದ್ದಾನೆ, ಇವನಲ್ಲಿ ಭಯವೆಂಬುದೇ ಇಲ್ಲ. ಆಕ್ರಮಣಮಾಡುವುದರಲ್ಲಿ ಸಮರ್ಥನಾಗಿದ್ದಾನೆ. ಈತನ ಪರಾಕ್ರಮವನ್ನು ನುಚ್ಚುನೂರುಮಾಡುವುದು ಅತಿ ಕಠಿಣವಾದ ಕಾರ್ಯವಾಗಿದೆ’ ಎಂಬುದನ್ನು ಗಮನಿಸಿ ಬ್ರಹ್ಮದೇವರು ಆದಿ ವರಾಹರೂಪಿಯಾದ ನಾರಾಯಣನಲ್ಲಿ ಹೀಗೆ ಬಿನ್ನವಿಸಿ ಕೊಂಡರು.॥21॥

(ಶ್ಲೋಕ - 22)

ಮೂಲಮ್ (ವಾಚನಮ್)

ಬ್ರಹ್ಮೋವಾಚ

ಮೂಲಮ್

ಏಷ ತೇ ದೇವ ದೇವಾನಾ-
ಮಂಘ್ರಿಮೂಲಮುಪೇಯುಷಾಮ್ ।
ವಿಪ್ರಾಣಾಂ ಸೌರಭೇಯೀಣಾಂ-
ಭೂತಾನಾಮಪ್ಯನಾಗಸಾಮ್ ॥

(ಶ್ಲೋಕ - 23)

ಮೂಲಮ್

ಆಗಸ್ಕೃದ್ಭಯಕೃದ್ದುಷ್ಕೃದಸ್ಮದ್ರಾದ್ಧವರೋಸುರಃ ।
ಅನ್ವೇಷನ್ನಪ್ರತಿರಥೋ ಲೋಕಾನಟತಿ ಕಂಟಕಃ ॥

ಅನುವಾದ

ಶ್ರೀಬ್ರಹ್ಮದೇವರೆಂದರು ಸ್ವಾಮಿಯೇ ! ಈ ದುಷ್ಟ ದೈತ್ಯನು ನನ್ನಿಂದ ವರವನ್ನು ಪಡೆದು ತುಂಬಾ ಪ್ರಬಲನಾಗಿಬಿಟ್ಟಿರುವನು. ಈಗ ಈತನು ನಿನ್ನಲ್ಲಿ ಶರಣಾಗತರಾಗಿರುವ ಗೋವುಗಳಿಗೂ, ಬ್ರಾಹ್ಮಣರಿಗೂ, ದೇವತೆಗಳಿಗೂ ಹಾಗೂ ನಿರಪರಾಧಿ ಜೀವಿ ಗಳಿಗೂ ತೊಂದರೆಯನ್ನುಂಟುಮಾಡುತ್ತಾ ದುಃಖವನ್ನು - ಭಯ ವನ್ನು ತುಂಬುತ್ತಿದ್ದಾನೆ. ತನಗೆ ಸಾಟಿಯಾದ ಬೇರೊಬ್ಬ ಯೋಧನು ಇಲ್ಲವಾದ್ದರಿಂದ ಈ ಲೋಕಕಂಟಕನು ತನ್ನನ್ನು ಎದುರಿಸಿ ಯುದ್ಧ ಮಾಡುವ ವೀರನನ್ನು ಹುಡುಕುತ್ತಾ ಎಲ್ಲ ಲೋಕಗಳಲ್ಲಿಯೂ ಸಂಚರಿಸುತ್ತಿದ್ದಾನೆ.॥22-23॥

(ಶ್ಲೋಕ - 24)

ಮೂಲಮ್

ಮೈನಂ ಮಾಯಾವಿನಂ ದೃಪ್ತಂ ನಿರಂಕುಶಮಸತ್ತಮಮ್ ।
ಆಕ್ರೀಡ ಬಾಲವದ್ದೇವ ಯಥಾಶೀವಿಷಮುತ್ಥಿತಮ್ ॥

ಅನುವಾದ

ಈ ದುಷ್ಟನು ಅತಿಮಾಯಾ ವಿಯೂ, ದುರಹಂಕಾರಿಯೂ, ನಿರಂಕುಶನೂ ಆಗಿದ್ದಾನೆ. ಮಗುವು ಕೋಪಗೊಂಡ ಹಾವಿನೊಡನೆ ಆಟವಾಡುವಂತೆ ನೀನು ಈತ ನೊಡನೆ ಹುಡುಗಾಟಮಾಡಬೇಡ.॥24॥

(ಶ್ಲೋಕ - 25)

ಮೂಲಮ್

ನ ಯಾವದೇಶ ವರ್ಧೇತ ಸ್ವಾಂ ವೇಲಾಂ ಪ್ರಾಪ್ಯ ದಾರುಣಃ ।
ಸ್ವಾಂ ದೇವ ಮಾಯಾಮಾಸ್ಥಾಯ ತಾವಜ್ಜಹ್ಯಘಮಚ್ಯುತ ॥

ಅನುವಾದ

ಓ ದೇವದೇವನೇ ! ಅಚ್ಯುತಾ ! ಈ ದಾರುಣ ದೈತ್ಯನಿಗೆ ಬಲವನ್ನು ವೃದ್ಧಿಪಡಿಸುವ ಸಮಯವು ಬಂದು ಈತನು ಹೆಚ್ಚು ಬಲಶಾಲಿಯಾಗುವುದ ರೊಳಗೆ ನೀನು ನಿನ್ನ ಯೋಗಮಾಯೆಯನ್ನು ಸ್ವೀಕರಿಸಿ ಈ ಪಾಪಿಯನ್ನು ಸಂಹರಿಸಿಬಿಡು.॥25॥

ಮೂಲಮ್

(ಶ್ಲೋಕ - 27)
ಏಷಾ ಘೋರತಮಾ ಸಂಧ್ಯಾ ಲೋಕಚ್ಛಮ್ಬಟ್ಕರೀ ಪ್ರಭೋ ।
ಉಪಸರ್ಪತಿ ಸರ್ವಾತ್ಮನ್ಸುರಾಣಾಂ ಜಯಮಾವಹ ॥

ಅನುವಾದ

ಪ್ರಭುವೇ ! ಇದೋ ಲೋಕವನ್ನು ಸಂಹಾರಮಾಡುವ ಭಯಂಕರವಾದ ಸಂಧ್ಯಾಕಾಲವು ಬರುವುದರಲ್ಲಿದೆ. ಅಷ್ಟರೊಳಗೆ ಈತನನ್ನು ಸಂಹಾರಮಾಡಿ ದೇವತೆಗಳಿಗೆ ವಿಜಯವನ್ನು ದಯಪಾಲಿಸು.॥26॥

(ಶ್ಲೋಕ - 27)

ಮೂಲಮ್

ಅಧುನೈಷೋಭಿಜಿನ್ನಾಮ ಯೋಗೋ ವೌಹೂರ್ತಿಕೋ ಹ್ಯಗಾತ್ ।
ಶಿವಾಯ ನಸ್ತ್ವಂ ಸುಹೃದಾಮಾಶು ನಿಸ್ತರ ದುಸ್ತರಮ್ ॥

ಅನುವಾದ

ಈಗ ಅಭಿಜಿತ್ ಎಂಬ ಮಂಗಳಮಯ ವಾದ ಮುಹೂರ್ತದ ಯೋಗವೂ ಬಂದಿದೆ. ಆದ್ದರಿಂದ ನಿನ್ನ ಸುಹೃದರಾದ ನಮ್ಮ ಕಲ್ಯಾಣಕ್ಕಾಗಿ ಈ ದುರ್ಜಯ ದೈತ್ಯನನ್ನು ಬೇಗನೇ ಸಂಹರಿಸಿಬಿಡು.॥27॥

(ಶ್ಲೋಕ - 28)

ಮೂಲಮ್

ದಿಷ್ಟ್ಯಾ ತ್ವಾಂ ವಿಹಿತಂ ಮೃತ್ಯುಮಯಮಾಸಾದಿತಃ ಸ್ವಯಮ್ ।
ವಿಕ್ರಮ್ಯೈನಂ ಮೃಧೇ ಹತ್ವಾ ಲೋಕಾನಾಧೇಹಿ ಶರ್ಮಣಿ ॥

ಅನುವಾದ

ಪ್ರಭೋ ! ತನ್ನ ಮೃತ್ಯುವಾಗಿ ವಿಧಾಯಕನಾಗಿರುವ ನಿನ್ನ ಬಳಿಗೆ ನಮ್ಮೆಲ್ಲರ ಸೌಭಾಗ್ಯದಿಂದ ಈತನೇ ಬಂದು ಸೇರಿದ್ದಾನೆ. ಈಗ ನೀನು ಯುದ್ಧದಲ್ಲಿ ಪರಾಕ್ರಮದಿಂದ ಈತನನ್ನು ಕೊಂದು ಲೋಕಗಳಿಗೆ ಶಾಂತಿಯನ್ನು ಉಂಟುಮಾಡು.॥28॥

ಅನುವಾದ (ಸಮಾಪ್ತಿಃ)

ಹದಿನೆಂಟನೆಯ ಅಧ್ಯಾಯವು ಮುಗಿಯಿತು. ॥18॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ತೃತೀಯಸ್ಕಂಧೇ ಹಿರಣ್ಯಾಕ್ಷವಧೇಷ್ಟಾದಶೋಽಧ್ಯಾಯಃ ॥18॥