೧೭

[ಹದಿನೇಳನೆಯ ಅಧ್ಯಾಯ]

ಭಾಗಸೂಚನಾ

ಹಿರಣ್ಯಾಕ್ಷ-ಹಿರಣ್ಯಕಶಿಪುಗಳ ಜನನ ಹಿರಣ್ಯಾಕ್ಷನ ದಿಗ್ವಿಜಯ

(ಶ್ಲೋಕ - 1)

ಮೂಲಮ್ (ವಾಚನಮ್)

ಮೈತ್ರೇಯ ಉವಾಚ

ಮೂಲಮ್

ನಿಶಮ್ಯಾತ್ಮಭುವಾ ಗೀತಂ ಕಾರಣಂ ಶಂಕಯೋಜ್ಝಿತಾಃ ।
ತತಃ ಸರ್ವೇ ನ್ಯವರ್ತಂತ ತ್ರಿದಿವಾಯ ದಿವೌಕಸಃ ॥

ಅನುವಾದ

ಶ್ರೀಮೈತ್ರೇಯರು ಹೇಳುತ್ತಾರೆ ಅಯ್ಯಾ ವಿದುರನೇ ! ಬ್ರಹ್ಮದೇವರ ಮಾತಿನಿಂದ ಅಂಧಕಾರದ ಕಾರಣವನ್ನು ತಿಳಿದು ಕೊಂಡ ದೇವತೆಗಳ ಶಂಕೆ ದೂರವಾಯಿತು. ಅವರೆಲ್ಲರೂ ಸ್ವರ್ಗಕ್ಕೆ ಹಿಂದಿರುಗಿದರು.॥1॥

(ಶ್ಲೋಕ - 2)

ಮೂಲಮ್

ದಿತಿಸ್ತು ಭರ್ತುರಾದೇಶಾದಪತ್ಯಪರಿಶಂಕಿನೀ ।
ಪೂರ್ಣೇ ವರ್ಷಶತೇ ಸಾಧ್ವೀ ಪುತ್ರೌ ಪ್ರಸುಷುವೇ ಯವೌ ॥

ಅನುವಾದ

ಇತ್ತ ದಿತಿಗೆ ಪತಿಯ ಮಾತಿನಂತೆ ಪುತ್ರರಿಂದ ಲೋಕಕ್ಕೆ ಉಪ ದ್ರವವು ಉಂಟಾಗಬಹುದೆಂಬ ಶಂಕೆ ಇದ್ದೇ ಇತ್ತು. ಆದ್ದರಿಂದ ಆ ಸಾಧ್ವಿಯು ಪೂರಾ ನೂರು ವರ್ಷಗಳು ಕಳೆದಾಗ ಇಬ್ಬರು ಅವಳಿ ಮಕ್ಕಳನ್ನು ಹಡೆದಳು.॥2॥

(ಶ್ಲೋಕ - 3)

ಮೂಲಮ್

ಉತ್ಪಾತಾ ಬಹವಸ್ತತ್ರ ನಿಪೇತುರ್ಜಾಯಮಾನಯೋಃ ।
ದಿವಿ ಭುವ್ಯಂತರಿಕ್ಷೇ ಚ ಲೋಕಸ್ಯೋರುಭಯಾವಹಾಃ ॥

ಅನುವಾದ

ಆ ಪುತ್ರರು ಹುಟ್ಟಿದಾಗ ಸ್ವರ್ಗದಲ್ಲಿ, ಭೂಮಿಯಲ್ಲಿ ಮತ್ತು ಅಂತರಿಕ್ಷಗಳಲ್ಲೂ ಅನೇಕ ಉತ್ಪಾತಗಳಾಗತೊಡಗಿದವು. ಅದರಿಂದ ಜನರು ಅತ್ಯಂತ ಭಯಗೊಂಡರು.॥3॥

(ಶ್ಲೋಕ - 4)

ಮೂಲಮ್

ಸಹಾಚಲಾ ಭುವಶ್ಚೇಲುರ್ದಿಶಃ ಸರ್ವಾಃ ಪ್ರಜಜ್ವಲುಃ ।
ಸೋಲ್ಕಾಶ್ಚಾಶನಯಃ ಪೇತುಃ ಕೇತವಶ್ಚಾರ್ತಿಹೇತವಃ ॥

ಅನುವಾದ

ಅಲ್ಲಲ್ಲಿ ಭೂಮಿಯೂ, ಪರ್ವತಗಳೂ ನಡುಗ ತೊಡಗಿದವು. ಎಲ್ಲ ದಿಕ್ಕುಗಳಲ್ಲಿಯೂ ಅಗ್ನಿಜ್ವಾಲೆಗಳು ಉರಿಯಹತ್ತಿದವು. ಎಲ್ಲೆಡೆ ಉಲ್ಕೆಗಳು ಉದುರಿದವು. ಸಿಡಿಲು ಬಡಿಯ ತೊಡಗಿತು. ಆಕಾಶದಲ್ಲಿ ಅನಿಷ್ಟಸೂಚಕ ಧೂಮಕೇತುಗಳು ಕಾಣಿಸಿಕೊಂಡವು.॥4॥

(ಶ್ಲೋಕ - 5)

ಮೂಲಮ್

ವವೌ ವಾಯುಃ ಸುದುಃಸ್ಪರ್ಶಃ ೂತ್ಕಾರಾನೀರಯನ್ಮುಹುಃ ।
ಉನ್ಮೂಲಯನ್ನಗಪತೀನ್ವಾತ್ಯಾನೀಕೋ ರಜೋಧ್ವಜಃ ॥

ಅನುವಾದ

ಸೊಯ್ಯನೇ ಶಬ್ದ ಮಾಡುತ್ತಾ ಸೋಂಕಿದವರಿಗೆ ಸಂಕಷ್ಟವನ್ನುಂಟುಮಾಡುತ್ತಾ, ದೊಡ್ಡ-ದೊಡ್ಡ ಮರಗಳನ್ನು ಬುಡಮೇಲಾಗಿಸುತ್ತಾ ಅಸಹ್ಯವಾದ ಬಿರುಗಾಳಿ ಬೀಸತೊಡಗಿತು. ಆಗ ಸುಳಿಗಾಳಿಯು ಸೇನೆಯಂತೆಯೂ, ಧೂಳೀ ಪಟಲವು ಧ್ವಜದಂತೆಯೂ ಕಂಡುಬರುತ್ತಿತ್ತು.॥5॥

(ಶ್ಲೋಕ - 6)

ಮೂಲಮ್

ಉದ್ಧಸತ್ತಡಿದಂಭೋದಘಟಯಾ ನಷ್ಟಭಾಗಣೇ ।
ವ್ಯೋಮ್ನಿ ಪ್ರವಿಷ್ಟತಮಸಾ ನ ಸ್ಮ ವ್ಯಾದೃಶ್ಯತೇ ಪದಮ್ ॥

ಅನುವಾದ

ಕೋಲ್ಮಿಂಚು ಮತ್ತೆ-ಮತ್ತೆ ಸುಳಿಯುತ್ತಾ ವಿಕಟವಾಗಿ ನಗುತ್ತಿದೆಯೋ ಎಂಬಂತಿತ್ತು. ಆಕಾಶದಲ್ಲಿ ಸೂರ್ಯ, ಚಂದ್ರ, ನಕ್ಷತ್ರಗಳು ಯಾವುದೂ ಕಾಣಿಸದಷ್ಟು ದಟ್ಟವಾಗಿ ಮೋಡಗಳು ಮುಸುಕಿದವು. ಇದರಿಂದ ಎಲ್ಲೆಡೆ ಏನೂ ಕಾಣಿಸದಷ್ಟು ಗಾಢಾಂಧಕಾರವು ಮುಸುಕಿತು.॥6॥

(ಶ್ಲೋಕ - 7)

ಮೂಲಮ್

ಚುಕ್ರೋಶ ವಿಮನಾ ವಾರ್ಧಿರುದೂರ್ಮಿಃ ಕ್ಷುಭಿತೋದರಃ ।
ಸೋದಪಾನಾಶ್ಚ ಸರಿತಶ್ಚುಕ್ಷುಭುಃ ಶುಷ್ಕಪಂಕಜಾಃ ॥

ಅನುವಾದ

ಸಮುದ್ರವು ಗಟ್ಟಿಯಾಗಿ ಗೋಳಿಡುತ್ತದೋ ಎಂಬಂತೆ ಭೋರ್ಗರೆ ಯುತ್ತಿತ್ತು. ಆಕಾಶದೆತ್ತರಕ್ಕೆ ಏಳುವ ರುದ್ರತೆರೆಗಳಿಂದ ಅದರಲ್ಲಿನ ಜಲಚರಗಳೆಲ್ಲವೂ ತಳಮಳಗೊಂಡವು. ನದಿಗಳು, ಕೆರೆ, ಕುಂಟೆ- ಕೊಳಗಳಲ್ಲಿ ನೀರು ಬತ್ತಿಹೋಗಿ ಅದರಲ್ಲಿದ್ದ ಕಮಲಗಳು ಒಣಗಿ ಹೋದುವು.॥7॥

(ಶ್ಲೋಕ - 8)

ಮೂಲಮ್

ಮುಹುಃ ಪರಿಧಯೋಭೂವನ್ಸರಾಹ್ವೋಃ ಶಶಿಸೂರ್ಯಯೋಃ ।
ನಿರ್ಘಾತಾ ರಥನಿರ್ಹ್ರಾದಾ ವಿವರೇಭ್ಯಃ ಪ್ರಜಜ್ಞಿರೇ ॥

ಅನುವಾದ

ಸೂರ್ಯ-ಚಂದ್ರರಿಗೆ ಮತ್ತೆ-ಮತ್ತೆ ಗ್ರಹಣ ಹಿಡಿಯುತ್ತಿತ್ತು. ಅವರ ಸುತ್ತಲೂ ಅಮಂಗಳಸೂಚಕವಾದ ಪರಿವೇಷ ವೆಂಬ ಮಂಡಲಗಳು ಆವಿರ್ಭವಿಸಿದವು. ಆಕಾಶದಲ್ಲಿ ಮೋಡ ಗಳೇ ಇಲ್ಲದ ಗರ್ಜನೆಗಳೂ, ಪರ್ವತ ಗುಹೆಗಳಲ್ಲಿ ಘುರ್ಘುರ ಧ್ವನಿಗಳೂ ಅಕಾರಣವಾಗಿ ಕೇಳತೊಡಗಿದವು.॥8॥

(ಶ್ಲೋಕ - 9)

ಮೂಲಮ್

ಅಂತರ್ಗ್ರಾಮೇಷು ಮುಖತೋ ವಮಂತ್ಯೋ ವಹ್ನಿಮುಲ್ಬಣಮ್ ।
ಸೃಗಾಲೋಲೂಕಟಂಕಾರೈಃ ಪ್ರಣೇದುರಶಿವಂ ಶಿವಾಃ ॥

ಅನುವಾದ

ಹಳ್ಳಿಗಳಲ್ಲಿ - ಊರೊಳಗೆ ನರಿಗಳೂ, ಗೂಬೆಗಳೂ ಭಯಾನಕವಾಗಿ ಕೂಗಿ ಕೊಳ್ಳುತ್ತಿರಲು ಹೆಣ್ಣುನರಿಗಳು ಬಾಯಿಂದ ಭೀಕರವಾಗಿ ಬೆಂಕಿ ಯನ್ನುಗುಳುತ್ತಾ ಅಮಂಗಳವಾಗಿ ಊಳಿಡತೊಡಗಿದವು.॥9॥

(ಶ್ಲೋಕ - 10)

ಮೂಲಮ್

ಸಂಗೀತವದ್ರೋದನವದುನ್ನಮಯ್ಯ ಶಿರೋಧರಾಮ್ ।
ವ್ಯಮುಂಚನ್ವಿವಿಧಾ ವಾಚೋ ಗ್ರಾಮಸಿಂಹಾಸ್ತತಸ್ತತಃ ॥

ಅನುವಾದ

ಅಲ್ಲಲ್ಲಿ ನಾಯಿಗಳು ಕತ್ತನ್ನೆತ್ತಿಕೊಂಡು ಕೆಲವೊಮ್ಮೆ ಹಾಡುವಂತೆಯೂ, ಕೆಲವೊಮ್ಮೆ ಅಳುವಂತೆಯೂ ಕರ್ಕಶವಾಗಿ ಕೂಗಿಡುತ್ತಿದ್ದವು.॥10॥

(ಶ್ಲೋಕ - 11)

ಮೂಲಮ್

ಖರಾಶ್ಚ ಕರ್ಕಶೈಃ ಕ್ಷತ್ತಃ ಖುರೈರ್ಘ್ನಂತೋ ಧರಾತಲಮ್ ।
ಖಾರ್ಕಾರರಭಸಾ ಮತ್ತಾಃ ಪರ್ಯಧಾವನ್ವರೂಥಶಃ ॥

ಅನುವಾದ

ಕತ್ತೆಗಳ ಹಿಂಡುಗಳು ತಮ್ಮ ಗೊರಸುಗಳಿಂದ ನೆಲವನ್ನು ಗೆಬರುತ್ತಾ ವಿಕಟವಾಗಿ ಅರಚುತ್ತಾ, ಮತ್ತೇರಿ ರಭಸದಿಂದ ಕಂಡ-ಕಂಡಲ್ಲಿಗೆ ಓಡತೊಡಗಿದವು.॥11॥

(ಶ್ಲೋಕ - 12)

ಮೂಲಮ್

ರುದಂತೋ ರಾಸಭತ್ರಸ್ತಾ ನೀಡಾದುದಪತನ್ಖಗಾಃ ।
ಘೋಷೇರಣ್ಯೇ ಚ ಪಶವಃ ಶಕೃನ್ಮೂತ್ರಮಕುರ್ವತ ॥

ಅನುವಾದ

ಆ ಕತ್ತೆಗಳ ಕೆಟ್ಟ ಶಬ್ದಕ್ಕೆ ಹೆದರಿದ ಹಕ್ಕಿಗಳು ಅಳುವಿನ ಧ್ವನಿಮಾಡುತ್ತಾ ಗೂಡುಗಳಿಂದ ಹೊರಕ್ಕೆ ಹಾರಿದವು. ದೊಡ್ಡಿಗಳಲ್ಲಿ ಕಟ್ಟಿಹಾಕಿದ ಮತ್ತು ಕಾಡಿನಲ್ಲಿ ಮೇಯುತ್ತಿದ್ದ ಹಸುಗಳು, ಹೋರಿಗಳು ಮುಂತಾದ ಪಶುಗಳು ಅಂಜಿಕೆಯಿಂದ ಮಲ-ಮೂತ್ರ ವಿಸರ್ಜಿಸ ತೊಡಗಿವು.॥12॥

(ಶ್ಲೋಕ - 13)

ಮೂಲಮ್

ಗಾವೋತ್ರಸನ್ನಸೃಗ್ ದೋಹಾಸ್ತೋಯದಾಃ ಪೂಯವರ್ಷಿಣಃ ।
ವ್ಯರುದನ್ದೇವಲಿಂಗಾನಿ ದ್ರುಮಾಃ ಪೇತುರ್ವಿನಾನಿಲಮ್ ॥

ಅನುವಾದ

ಆಕಳುಗಳು ಭಯಗೊಂಡು ಹಾಲಿನ ಬದಲಿಗೆ ತಮ್ಮ ಕೆಚ್ಚಲುಗಳಿಂದ ರಕ್ತವನ್ನೇ ಸುರಿಸಿದವು. ಮೋಡಗಳು ಕೀವಿನ ಮಳೆ ಗರೆದವು. ದೇವತಾ ಮೂರ್ತಿಗಳ ಕಣ್ಣುಗಳಿಂದ ಕಣ್ಣೀರು ಸುರಿಯ ತೊಡಗಿತು. ಬಿರುಗಾಳಿ ಬೀಸದೆಯೇ ಮರಗಳು ನೆಲಕ್ಕುರುಳುತ್ತಿದ್ದವು.॥13॥

(ಶ್ಲೋಕ - 14)

ಮೂಲಮ್

ಗ್ರಹಾನ್ಪುಣ್ಯತಮಾನನ್ಯೇ ಭಗಣಾಂಶ್ಚಾಪಿ ದೀಪಿತಾಃ ।
ಅತಿಚೇರುರ್ವಕ್ರಗತ್ಯಾ ಯುಯುಧುಶ್ಚ ಪರಸ್ಪರಮ್ ॥

ಅನುವಾದ

ಶನಿ, ರಾಹು ಮುಂತಾದ ಕ್ರೂರ ಗ್ರಹರು ಪ್ರಬಲರಾಗಿ ಚಂದ್ರ, ಬೃಹಸ್ಪತಿ ಮುಂತಾದ ಶುಭಗ್ರಹರನ್ನು ಮತ್ತು ನಕ್ಷತ್ರಗಳನ್ನೂ ಅತಿಕ್ರಮಿಸಿ ವಕ್ರಗತಿಯಲ್ಲಿ ಚಲಿಸಿ ಪರಸ್ಪರವಾಗಿ ಯುದ್ಧ ಮಾಡತೊಡಗಿದವು.॥14॥

(ಶ್ಲೋಕ - 15)

ಮೂಲಮ್

ದೃಷ್ಟ್ವಾನ್ಯಾಂಶ್ಚ ಮಹೋತ್ಪಾತಾನತತ್ತತ್ತ್ವವಿದಃ ಪ್ರಜಾಃ ।
ಬ್ರಹ್ಮಪುತ್ರಾನೃತೇ ಭೀತಾ ಮೇನಿರೇ ವಿಶ್ವಸಂಪ್ಲವಮ್ ॥

ಅನುವಾದ

ಇಂತಹ ಇನ್ನೂ ಅನೇಕ ಉತ್ಪಾತಗಳನ್ನು ಕಂಡು ಸನಕಾದಿಗಳನ್ನು ಬಿಟ್ಟು, ಉಳಿದೆಲ್ಲ ಜೀವಿಗಳು ಗಾಬರಿಗೊಂಡವು. ಈ ಉತ್ಪಾತಗಳ ಮರ್ಮವನ್ನರಿಯದೆ ‘ಇನ್ನೇನು ಜಗತ್ತಿನ ಪ್ರಳಯವೇ ಆಗಿಬಿಡುವುದು’ ಎಂದು ಭಾವಿಸಿದರು.॥15॥

(ಶ್ಲೋಕ - 16)

ಮೂಲಮ್

ತಾವಾದಿದೈತ್ಯೌ ಸಹಸಾ ವ್ಯಜ್ಯಮಾನಾತ್ಮಪೌರುಷೌ ।
ವವೃಧಾತೇಶ್ಮಸಾರೇಣ ಕಾಯೇನಾದ್ರಿಪತೀ ಇವ ॥

ಅನುವಾದ

ಆದಿ ದೈತ್ಯರಾದ ಅವರಿಬ್ಬರೂ ಹುಟ್ಟುತ್ತಲೇ ತಮ್ಮ ಭಯಂಕರ ವಾದ ಪೌರುಷವನ್ನು ಪ್ರಕಟಪಡಿಸುತ್ತಾ ಬಹುಬೇಗನೇ ಉಕ್ಕಿ ನಂತಹ ತಮ್ಮ ಕಠೋರ ಶರೀರಗಳೊಂದಿಗೆ ಮಹಾ ಪರ್ವತದಂತೆ ಬೆಳೆದರು.॥16॥

(ಶ್ಲೋಕ - 17)

ಮೂಲಮ್

ದಿವಿಸ್ಪೃಶೌ ಹೇಮಕಿರೀಟಕೋಟಿಭಿ-
ರ್ನಿರುದ್ಧ ಕಾಷ್ಠೌ ಸ್ಫುರದಂಗದಾಭುಜೌ ।
ಗಾಂ ಕಂಪಯಂತೌ ಚರಣೈಃ ಪದೇ ಪದೇ
ಕಟ್ಯಾ ಸುಕಾಂಚ್ಯಾರ್ಕಮತೀತ್ಯ ತಸ್ಥತುಃ ॥

ಅನುವಾದ

ಅವರ ಸುವರ್ಣಮಯ ಕಿರೀಟಗಳ ತುದಿಯು ಸ್ವರ್ಗವನ್ನು ಮುಟ್ಟುವಷ್ಟು ಅವರು ಎತ್ತರವಾಗಿದ್ದು ಅವರ ವಿಶಾಲ ದೇಹಗಳಿಂದ ಎಲ್ಲ ದಿಕ್ಕುಗಳು ಮುಚ್ಚಿಹೋಗಿದ್ದವು. ರತ್ನಖಚಿತ ವಾದ ತೋಳ್ಬಳೆಗಳು ಭುಜಗಳಲ್ಲಿ ಹೊಳೆಯುತ್ತಿದ್ದವು. ಅವರು ನೆಲದ ಮೇಲೆ ಒಂದೊಂದು ಹೆಜ್ಜೆಯನ್ನಿರಿಸಿದರೂ ಭೂಮಿಯು ನಡುಗುತ್ತಿತ್ತು. ಅವರು ನಿಂತರೆಂದರೆ ಥಳ-ಥಳಿಸುವ ನಡುದಾರದ ಪ್ರಕಾಶದಿಂದ ಸೂರ್ಯನನ್ನೂ ತಿರಸ್ಕರಿಸುವಂತಿತ್ತು.॥17॥

(ಶ್ಲೋಕ - 18)

ಮೂಲಮ್

ಪ್ರಜಾಪತಿರ್ನಾಮ ತಯೋರಕಾರ್ಷೀದ್
ಯಃ ಪ್ರಾಕ್ಸ್ವ ದೇಹಾದ್ಯಮಯೋರಜಾಯತ ।
ತಂ ವೈ ಹಿರಣ್ಯಕಶಿಪುಂ ವಿದುಃ ಪ್ರಜಾ
ಯಂ ತಂ ಹಿರಣ್ಯಾಕ್ಷಮಸೂತ ಸಾಗ್ರತಃ ॥

ಅನುವಾದ

ಹಾಗೆ ಹುಟ್ಟಿದ ಅವಳೀಮಕ್ಕಳಿಗೆ ಪ್ರಜಾಪತಿ ಕಶ್ಯಪರು ನಾಮಕರಣ ಮಾಡಿದರು. ಅವರಲ್ಲಿ ತಮ್ಮ ವೀರ್ಯದಿಂದ ದಿತಿಯಗರ್ಭದಲ್ಲಿ ಮೊದಲು ಸ್ಥಾಪಿಸಲ್ಪಟ್ಟ ಪುತ್ರನಿಗೆ ‘ಹಿರಣ್ಯಕಶಿಪು’ ಎಂದು ಹೆಸರಿಸಿದರು. ದಿತಿಯ ಹೊಟ್ಟೆಯಿಂದ ಮೊದಲಿಗೆ ಹೊರಬಂದ ಪುತ್ರನು ‘ಹಿರಣ್ಯಾಕ್ಷ’ ಎಂಬ ಹೆಸರಿನಿಂದ ಖ್ಯಾತನಾದನು.॥18॥

(ಶ್ಲೋಕ - 19)

ಮೂಲಮ್

ಚಕ್ರೇ ಹಿರಣ್ಯಕಶಿಪುರ್ದೋರ್ಭ್ಯಾಂ ಬ್ರಹ್ಮವರೇಣ ಚ ।
ವಶೇ ಸಪಾಲಾಲ್ಲೋಕಾಂಸೀನಕುತೋಮೃತ್ಯುರುದ್ಧತಃ ॥

ಅನುವಾದ

ಹಿರಿಯವನಾದ ಹಿರಣ್ಯಕಶಿಪುವು ಬ್ರಹ್ಮದೇವರ ವರದಿಂದ ತನಗೆ ಯಾರಿಂದಲೂ ಮೃತ್ಯುವಿಲ್ಲವೆಂದು ಭಾವಿಸಿ ಅಹಂಕಾರದಿಂದ ಕೊಬ್ಬಿಹೋದನು. ತನ್ನ ಭುಜಬಲದಿಂದ ಲೋಕಪಾಲರ ಸಹಿತ ಮೂರೂ ಲೋಕಗಳನ್ನು ವಶಪಡಿಸಿಕೊಂಡನು.॥19॥

(ಶ್ಲೋಕ - 20)

ಮೂಲಮ್

ಹಿರಣ್ಯಾಕ್ಷೋನುಜಸ್ತಸ್ಯ ಪ್ರಿಯಃ ಪ್ರೀತಿಕೃದನ್ವಹಮ್ ।
ಗದಾಪಾಣಿರ್ದಿವಂ ಯಾತೋ ಯುಯುತ್ಸುರ್ಮೃಗಯನ್ರಣಮ್ ॥

ಅನುವಾದ

ಆತನಿಗೆ ತಮ್ಮನಾದ ಹಿರಣ್ಯಾಕ್ಷನ ಮೇಲೆ ತುಂಬುಪ್ರೀತಿ. ಹಿರಣ್ಯಾಕ್ಷನೂ ತನ್ನಣ್ಣನನ್ನು ಬಹುವಾಗಿ ಪ್ರೀತಿಸುತ್ತಾ ಅವನಿಗೆ ಪ್ರಿಯವಾಗುವಂತೆ ನಡೆದುಕೊಳ್ಳುತ್ತಿದ್ದನು. ಒಂದು ದಿನ ಆ ಹಿರಣ್ಯಾಕ್ಷನು ಕೈಯಲ್ಲಿ ಗದೆಯನ್ನೆತ್ತಿಕೊಂಡು ಯುದ್ಧಕ್ಕಾಗಿ ಹಂಬಲಿಸುತ್ತಾ ಸ್ವರ್ಗಲೋಕಕ್ಕೆ ಹೋದನು.॥20॥

ಮೂಲಮ್

(ಶ್ಲೋಕ - 21)
ತಂ ವೀಕ್ಷ್ಯ ದುಃಸಹಜವಂ ರಣತ್ಕಾಂಚನನೂಪುರಮ್ ।
ವೈಜಯಂತ್ಯಾ ಸ್ರಜಾ ಜುಷ್ಟಮಂಸನ್ಯಸ್ತಮಹಾಗದಮ್ ॥

ಅನುವಾದ

ಆತನ ರೂಪ, ಪರಾಕ್ರಮ ಮತ್ತು ವೇಗಗಳು ಎಲ್ಲರನ್ನು ಭಯಪಡಿಸು ವಂತಿತ್ತು. ಕಾಲುಗಳಲ್ಲಿ ಚಿನ್ನದ ಕಾಲಂದುಗೆಗಳು ಝಣ-ಝಣಿ ಸುತ್ತಿದ್ದವು. ಕತ್ತಿನಲ್ಲಿ ವಿಜಯಸೂಚಕವಾದ ಮಾಲೆ ಧರಿಸಿದ್ದನು. ಹೆಗಲಮೇಲೆ ವಿಶಾಲವಾದ ಗದೆಯು ಮೆರೆಯುತ್ತಿತ್ತು.॥21॥

(ಶ್ಲೋಕ - 22)

ಮೂಲಮ್

ಮನೋವೀರ್ಯವರೋತ್ಸಿಕ್ತಮಸೃಣ್ಯಮಕುತೋಭಯಮ್ ।
ಭೀತಾ ನಿಲಿಲ್ಯಿರೇ ದೇವಾಸ್ತಾರ್ಕ್ಷ್ಯತ್ರಸ್ತಾ ಇವಾಹಯಃ ॥

ಅನುವಾದ

ಮನೋಬಲ, ದೇಹಬಲ ಮತ್ತು ಬ್ರಹ್ಮದೇವರಿಂದ ಪಡೆದ ವರ ಬಲಗಳಿಂದ ಆತನು ಉನ್ಮತ್ತನಾಗಿದ್ದನು. ಆದ್ದರಿಂದ ಅವನು ನಿರಂಕುಶನಾಗಿ, ಯಾರಿಗೂ ಹೆದರದೆ ವರ್ತಿಸುತ್ತಿದ್ದನು. ಆತನನ್ನು ಕಂಡೊಡನೆ ದೇವತೆಗಳು ಗರುಡನನ್ನು ಕಂಡ ಸರ್ಪಗಳಂತೆ ಭಯಗ್ರಸ್ತರಾಗಿ ಎಲ್ಲೆಲ್ಲೋ ಅವಿತುಕೊಂಡರು.॥22॥

(ಶ್ಲೋಕ - 23)

ಮೂಲಮ್

ಸ ವೈ ತಿರೋಹಿತಾನ್ದೃಷ್ಟ್ವಾ ಮಹಸಾ ಸ್ವೇನ ದೈತ್ಯರಾಟ್ ।
ಸೇಂದ್ರಾನ್ ದೇವಗಣಾನ್ ಕ್ಷೀಬಾನಪಶ್ಯನ್ ವ್ಯನದದ್ಭೃಶಮ್ ॥

ಅನುವಾದ

ನನ್ನೆದುರಿಗೆ ಮಹಾ ಸತ್ತ್ವಶಾಲಿಗಳಾದ ಇಂದ್ರಾದಿ ದೇವತೆಗಳೂ ತನ್ನ ತೇಜಸ್ಸಿಗೆ ಅಂಜಿ ಹೇಡಿಗಳಾಗಿ ಅವಿತುಕೊಂಡಿರುವುದನ್ನು ಕಂಡ ಆ ದೈತ್ಯರಾಜ ಹಿರಣ್ಯಾಕ್ಷನು ಮತ್ತೆ-ಮತ್ತೆ ಭಯಂಕರವಾಗಿ ಗರ್ಜಿಸ ತೊಡಗಿದನು. ॥23॥

(ಶ್ಲೋಕ - 24)

ಮೂಲಮ್

ತತೋ ನಿವೃತ್ತಃ ಕ್ರೀಡಿಷ್ಯನ್ಗಂಭೀರಂ ಭೀಮನಿಃಸ್ವನಮ್ ।
ವಿಜಗಾಹೇ ಮಹಾಸತ್ತ್ವೋ ವಾರ್ಧಿಂ ಮತ್ತ ಇವ ದ್ವಿಪಃ ॥

ಅನುವಾದ

ಮತ್ತೆ ಆ ಮಹಾಬಲಶಾಲಿಯಾದ ದೈತ್ಯನು ಅಲ್ಲಿಂದ ಹಿಂದಿರುಗಿ ಜಲಕ್ರೀಡೆಯನ್ನಾಡಬೇಕೆಂದು ಬಯಸಿ ಮದ್ದಾನೆಯಂತೆ ತರಂಗಮಾಲೆಗಳಿಂದ ಭೀಕರವಾಗಿ ಗರ್ಜಿಸುತ್ತಿದ್ದ ಗಂಭೀರವಾದ ಸಮುದ್ರದೊಳಗೆ ನುಗ್ಗಿದನು.
॥24॥

(ಶ್ಲೋಕ - 25)

ಮೂಲಮ್

ತಸ್ಮಿನ್ಪ್ರವಿಷ್ಟೇ ವರುಣಸ್ಯ ಸೈನಿಕಾ
ಯಾದೋಗಣಾಃ ಸನ್ನಧಿಯಃ ಸಸಾಧ್ವಸಾಃ ।
ಅಹನ್ಯಮಾನಾ ಅಪಿ ತಸ್ಯ ವರ್ಚಸಾ
ಪ್ರಧರ್ಷಿತಾ ದೂರತರಂ ಪ್ರದುದ್ರುವುಃ ॥

ಅನುವಾದ

ಅವನು ಸಮುದ್ರದೊಳಗೆ ಹೆಜ್ಜೆಯಿಡುತ್ತಲೇ ಅಲ್ಲಿದ್ದ ವರುಣನ ಸೈನಿಕರಾದ ಜಲಚರ ಜೀವಿಗಳೆಲ್ಲವೂ ತಬ್ಬಿಬ್ಬಾಗಿ, ಆತನು ತಮ್ಮನ್ನು ಏನೂ ಮಾಡದಿದ್ದರೂ ಆತನ ತೇಜಸ್ಸಿನಿಂದಲೇ ಹೆದರಿ ದೂರಕ್ಕೆ ಓಡಿಹೋದವು.॥25॥

(ಶ್ಲೋಕ - 26)

ಮೂಲಮ್

ಸ ವರ್ಷಪೂಗಾನುದಧೌ ಮಹಾಬಲ-
ಶ್ಚರನ್ಮಹೋರ್ಮೀಂಛ್ವಸನೇರಿತಾನ್ಮುಹುಃ ।
ವೌರ್ವ್ಯಾಭಿಜಘ್ನೇ ಗದಯಾ ವಿಭಾವರೀ-
ಮಾಸೇದಿವಾಂಸ್ತಾತ ಪುರೀಂ ಪ್ರಚೇತಸಃ ॥

ಅನುವಾದ

ಆ ಮಹಾಬಲಶಾಲಿಯಾದ ದೈತ್ಯನು ಅನೇಕ ವರ್ಷಗಳ ಕಾಲ ಆ ಕಡಲಿನಲ್ಲೇ ವಿಹರಿಸುತ್ತಿದ್ದನು. ಅಲ್ಲಿಯೂ ತನಗೆ ಯಾರೂ ಎದುರಾಳಿಯು ಸಿಗದಿರುವಾಗ ಆತನು ವಾಯು ವೇಗದಿಂದ ಮೇಲಕ್ಕೆ ಏಳುತ್ತಿದ್ದ ಪ್ರಚಂಡವಾದ ತರಂಗಗಳನ್ನೇ ತನ್ನ ಉಕ್ಕಿನ ಗದೆಯಿಂದ ಅಪ್ಪಳಿಸುತ್ತಿದ್ದನು. ಹೀಗೆಯೇ ಸುತ್ತಾಡುತ್ತಾ ಆತನು ವರುಣದೇವರ ರಾಜಧಾನಿಯಾದ ವಿಭಾವರೀಪುರಿಯನ್ನು ತಲುಪಿದನು.॥26॥

(ಶ್ಲೋಕ - 27)

ಮೂಲಮ್

ತತ್ರೋಪಲಭ್ಯಾಸುರಲೋಕಪಾಲಕಂ
ಯಾದೋಗಣಾನಾಮೃಷಭಂ ಪ್ರಚೇತಸಮ್ ।
ಸ್ಮಯನ್ಪ್ರಲಬ್ಧುಂ ಪ್ರಣಿಪತ್ಯ ನೀಚವ-
ಜ್ಜಗಾದ ಮೇ ದೇಹ್ಯಧಿರಾಜ ಸಂಯುಗಮ್ ॥

ಅನುವಾದ

ಅಲ್ಲಿ ಅವನು ಪಾತಾಳಲೋಕದ ಅಧಿಪತಿಯೂ, ಜಲಚರಗಳ ಒಡೆಯನೂ ಆದ ವರುಣನನ್ನು ನೋಡಿ, ಅವನನ್ನು ಗೇಲಿ-ಕುಚೋದ್ಯಗಳನ್ನು ಮಾಡುತ್ತಾ, ನೀಚ- ಮನುಷ್ಯ ನಂತೆ ಅವನಿಗೆ ನಮಸ್ಕರಿಸಿದನು. ಮತ್ತೆ ಹುಸಿನಗೆಯಿಂದ ವ್ಯಂಗ ವಾಗಿ ಮಹಾರಾಜಾ ! ನನಗೆ ಯುದ್ಧ ಭಿಕ್ಷೆಯನ್ನು ಕೊಡಿರಿ ಎಂದು ನುಡಿದನು.॥27॥

(ಶ್ಲೋಕ - 28)

ಮೂಲಮ್

ತ್ವಂ ಲೋಕಪಾಲೋಧಿಪತಿರ್ಬೃಹಚ್ಛ್ರವಾ
ವೀರ್ಯಾಪಹೋ ದುರ್ಮದವೀರಮಾನಿನಾಮ್ ।
ವಿಜಿತ್ಯ ಲೋಕೇಖಿಲದೈತ್ಯದಾನವಾನ್
ಯದ್ರಾಜಸೂಯೇನ ಪುರಾಜಯತ್ಪ್ರಭೋ ॥

ಅನುವಾದ

ಪ್ರಭುಗಳೇ ! ನೀವಾದರೋ ಲೋಕಪಾಲರು, ರಾಜಾಧಿರಾಜರು, ಮಹಾ ಕೀರ್ತಿಶಾಲಿಗಳು. ತಮ್ಮನ್ನು ಮಹಾವೀ ರರೆಂದು ತಿಳಿದುಕೊಂಡಿದ್ದವರ ಮದವನ್ನು ಮರ್ದನ ಮಾಡಿದವರು ನೀವು. ಮೊದಲೊಮ್ಮೆ ಲೋಕದ ಎಲ್ಲ ದೈತ್ಯ-ದಾನ ವರನ್ನು ಸೋಲಿಸಿ ರಾಜಸೂಯ ಯಜ್ಞವನ್ನೂ ಮಾಡಿದ್ದೀರಿ.॥28॥

(ಶ್ಲೋಕ - 29)

ಮೂಲಮ್

ಸ ಏವಮುತ್ಸಿಕ್ತಮದೇನ ವಿದ್ವಿಷಾ
ದೃಢಂ ಪ್ರಲಬ್ಧೋ ಭಗವಾನಪಾಂ ಪತಿಃ ।
ರೋಷಂ ಸಮುತ್ಥಂ ಶಮಯನ್ಸ್ವಯಾ ಧಿಯಾ
ವ್ಯವೋಚದಂಗೋಪಶಮಂ ಗತಾ ವಯಮ್ ॥

ಅನುವಾದ

ಆ ಮದೋನ್ಮತ್ತ ಶತ್ರುವಿನ ಇಂತಹ ಹೀಯಾಳಿಕೆಯ ಮಾತನ್ನು ಕೇಳಿ ವರುಣನಿಗೆ ಮಿತಿಮೀರಿದ ಕೋಪವುಂಟಾದರೂ, ಅವನು ತನ್ನ ಬುದ್ಧಿಬಲದಿಂದ ಉಮ್ಮಳಿಸಿದ ಕ್ರೋಧವನ್ನು ನುಂಗಿಕೊಂಡು ಅವನಿಗೆ ಇಂತೆಂದನು ಅಯ್ಯಾ ವೀರಾಗ್ರಣಿಯೇ ! ಈಗ ನನಗೆ ಯುದ್ಧದ ಯಾವುದೇ ಅಭಿಲಾಷೆಯು ಉಳಿಯಲಿಲ್ಲ.॥29॥

(ಶ್ಲೋಕ - 30)

ಮೂಲಮ್

ಪಶ್ಯಾಮಿ ನಾನ್ಯಂ ಪುರುಷಾತ್ಪುರಾತನಾದ್
ಯಃ ಸಂಯುಗೇ ತ್ವಾಂ ರಣಮಾರ್ಗಕೋವಿದಮ್ ।
ಆರಾಧಯಿಷ್ಯತ್ಯಸುರರ್ಷಭೇಹಿ ತಂ
ಮನಸ್ವಿನೋ ಯಂ ಗೃಣತೇ ಭವಾದೃಶಾಃ ॥

ಅನುವಾದ

ನಿನ್ನಂತಹ ರಣಕುಶಲಿಯನ್ನು ಯುದ್ಧದಲ್ಲಿ ಸಂತೋಷಪಡಿಸಲು ಪುರಾಣಪುರುಷೋತ್ತಮನಾದ ಭಗವಂತನಲ್ಲದೆ ಬೇರೆ ಯಾರೂ ಕಂಡುಬರುವುದಿಲ್ಲ. ದೈತ್ಯರಾಜನೇ ! ನೀನು ಆತನ ಬಳಿಗೆ ಹೋಗು. ಅವನೇ ನಿನ್ನ ಇಷ್ಟಾರ್ಥವನ್ನು ಈಡೇರಿಸುವನು. ನಿನ್ನಂತಹ ವೀರಾ ಗ್ರಣಿಗಳು ಆತನ ಪರಾಕ್ರಮವನ್ನೇ ಹಾಡಿ ಹೊಗಳುತ್ತಾರೆ.॥30॥

(ಶ್ಲೋಕ - 31)

ಮೂಲಮ್

ತಂ ವೀರಮಾರಾದಭಿಪದ್ಯ ವಿಸ್ಮಯಃ
ಶಯಿಷ್ಯಸೇ ವೀರಶಯೇ ಶ್ವಭಿರ್ವೃತಃ ।
ಯಸ್ತ್ವದ್ವಿಧಾನಾಮಸತಾಂ ಪ್ರಶಾಂತಯೇ
ರೂಪಾಣಿ ಧತ್ತೇ ಸದನುಗ್ರಹೇಚ್ಛಯಾ ॥

ಅನುವಾದ

ಆತನು ಮಹಾವೀರಾಧಿವೀರನು. ಅವನ ಬಳಿಗೆ ಹೋದೊ ಡನೆಯೇ ನಿನ್ನ ಗರ್ವವು ಇಳಿದುಹೋಗಿ, ನೀನು ನಾಯಿಗಳಿಂದ ಸುತ್ತುವರಿಯಲ್ಪಟ್ಟು ವೀರಶಯ್ಯೆಯಲ್ಲಿ ಮಲಗುವೆ. ಅವನು ನಿನ್ನಂತಹ ದುಷ್ಟರನ್ನು ನಿಗ್ರಹಿಸಿ, ಸತ್ಪುರುಷರನ್ನು ಸಲಹುವುದಕ್ಕಾಗಿ ನಾನಾ ರೂಪಗಳನ್ನು ಧರಿಸುತ್ತಾ ಇರುತ್ತಾನೆ.॥31॥

ಅನುವಾದ (ಸಮಾಪ್ತಿಃ)

ಹದಿನೇಳನೆಯ ಅಧ್ಯಾಯವು ಮುಗಿಯಿತು.॥17॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ತೃತೀಯಸ್ಕಂಧೇಹಿರಣ್ಯಾಕ್ಷದಿಗ್ವಿಜಯೇ ಸಪ್ತದಶೋಽಧ್ಯಾಯಃ ॥17॥