೧೬

[ಹದಿನಾರನೆಯ ಅಧ್ಯಾಯ]

ಭಾಗಸೂಚನಾ

ಜಯ - ವಿಜಯರು ವೈಕುಂಠದಿಂದ ಚ್ಯುತರಾದುದು

(ಶ್ಲೋಕ - 1)

ಮೂಲಮ್ (ವಾಚನಮ್)

ಬ್ರಹ್ಮೋವಾಚ

ಮೂಲಮ್

ಇತಿ ತದ್ಗೃಣತಾಂ ತೇಷಾಂ ಮುನೀನಾಂ ಯೋಗಧರ್ಮಿಣಾಮ್ ।
ಪ್ರತಿನಂದ್ಯ ಜಗಾದೇದಂ ವಿಕುಂಠನಿಲಯೋ ವಿಭುಃ ॥

ಅನುವಾದ

ಬ್ರಹ್ಮದೇವರು ಹೇಳುತ್ತಾರೆ - ಎಲೈ ದೇವತೆಗಳಿರಾ ! ಯೋಗ ನಿಷ್ಠರಾದ ಸನಕಾದಿ ಮುನಿಗಳು ಹೀಗೆ ಸ್ತುತಿಸಿದಾಗ ವೈಕುಂಠಪತಿ ಯಾದ ಶ್ರೀಹರಿಯು ಅವರನ್ನು ಪ್ರಶಂಸಿಸುತ್ತಾ ಇಂತೆಂದನು. ॥ 1 ॥

(ಶ್ಲೋಕ - 2)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ಏತೌ ತೌ ಪಾರ್ಷದೌ ಮಹ್ಯಂ ಜಯೋ ವಿಜಯ ಏವ ಚ ।
ಕದರ್ಥೀಕೃತ್ಯ ಮಾಂ ಯದ್ವೋ ಬಹ್ವಕ್ರಾತಾಮತಿಕ್ರಮಮ್ ॥

ಅನುವಾದ

ಶ್ರೀಭಗವಂತನು ಹೇಳಿದನು - ಮುನಿವರ್ಯರೇ ! ಈ ಜಯ-ವಿಜಯರು ನನ್ನ ಪಾರ್ಷದರಾಗಿದ್ದಾರೆ. ಇವರು ನನ್ನನ್ನೂ ಲೆಕ್ಕಿಸದೆ ನಿಮಗೆ ಬಹಳ ದೊಡ್ಡ ಅಪರಾಧ ಮಾಡಿದ್ದಾರೆ. ॥ 2 ॥

(ಶ್ಲೋಕ - 3)

ಮೂಲಮ್

ಯಸ್ತ್ವೇತಯೋರ್ಧೃತೋ ದಂಡೋ ಭವದ್ಭಿರ್ಮಾಮನುವ್ರತೈಃ ।
ಸ ಏವಾನುಮತೋಸ್ಮಾಭಿರ್ಮುನಯೋ ದೇವಹೇಲನಾತ್ ॥

ಅನುವಾದ

ನೀವು ನನಗೆ ಏಕಾಂತ ಭಕ್ತರು. ಆದ್ದರಿಂದ ಹೀಗೆ ನನಗೆ ಅಪಚಾರ ಮಾಡಿದ್ದಕ್ಕೆ, ನೀವು ಇವರಿಗೆ ವಿಧಿಸಿದ ದಂಡನೆಯು ನನಗೆ ಸಮ್ಮತವೇ ಆಗಿದೆ. ॥ 3 ॥

(ಶ್ಲೋಕ - 4)

ಮೂಲಮ್

ತದ್ವಃ ಪ್ರಸಾದಯಾಮ್ಯದ್ಯ ಬ್ರಹ್ಮ ದೈವಂ ಪರಂ ಹಿ ಮೇ ।
ತದ್ಧೀತ್ಯಾತ್ಮಕೃತಂ ಮನ್ಯೇ ಯತ್ಸ್ವಪುಂಭಿರಸತ್ಕೃತಾಃ ॥ 4 ॥

ಅನುವಾದ

ಬ್ರಾಹ್ಮಣರು ನನಗೆ ಪರಮಾರಾಧ್ಯರು. ನನ್ನ ಅನುಚರರರಾದ ಇವರಿಂದ ನಿಮಗಾದ ತಿರಸ್ಕಾರವನ್ನು ನನಗೆ ಆಗಿರುವ ತಿರಸ್ಕಾರವೆಂದೇ ತಿಳಿಯುತ್ತೇನೆ. ಆದ್ದರಿಂದ ನಾನು ನಿಮ್ಮಲ್ಲಿ ಪ್ರಸನ್ನತೆಯನ್ನು ಬಯಸುತ್ತೇನೆ. ॥ 4 ॥

(ಶ್ಲೋಕ - 5)

ಮೂಲಮ್

ಯನ್ನಾಮಾನಿ ಚ ಗೃಹ್ಣಾತಿ ಲೋಕೋ ಭೃತ್ಯೇ ಕೃತಾಗಸಿ ।
ಸೋಸಾಧುವಾದಸ್ತತ್ಕೀರ್ತಿಂ ಹಂತಿ ತ್ವಚಮಿವಾಮಯಃ ॥

ಅನುವಾದ

ಸೇವಕರು ಅಪರಾಧವನ್ನು ಮಾಡಿದರೆ ಜನರು ಅದಕ್ಕೆ ಯಜಮಾನರ ಹೆಸರನ್ನೇ ಹೇಳುತ್ತಾರೆ. ಚರ್ಮರೋಗವು ತ್ವಚೆಯನ್ನು ಕೆಡಿಸು ವಂತೆ, ಸೇವಕರು ಮಾಡುವ ಅಪರಾಧವು ಒಡೆಯನ ಕೀರ್ತಿ ಯನ್ನು ಕಳಂಕಿತವಾಗಿಸುತ್ತದೆ. ॥ 5 ॥

ಮೂಲಮ್

(ಶ್ಲೋಕ - 6)
ಯಸ್ಯಾಮೃತಾಮಲಯಶಃ ಶ್ರವಣಾವಗಾಹಃ
ಸದ್ಯಃ ಪುನಾತಿ ಜಗದಾಶ್ವಪಚಾದ್ವಿಕುಂಠಃ ।
ಸೋಹಂ ಭವದ್ಭ್ಯ ಉಪಲಬ್ಧಸುತೀರ್ಥಕೀರ್ತಿ-
ಶ್ಛಿಂದ್ಯಾಂ ಸ್ವಬಾಹುಮಪಿ ವಃ ಪ್ರತಿಕೂಲವೃತ್ತಿಮ್ ॥

ಅನುವಾದ

ನನ್ನ ನಿರ್ಮಲವಾದ ಕೀರ್ತಿ ಸುಧೆಯಲ್ಲಿ ಸ್ನಾನಮಾಡಿದರೆ ಚಾಂಡಾಲವರೆಗಿನ ಇಡೀ ಜಗತ್ತು ಪವಿತ್ರವಾಗುತ್ತದೆ. ಅದಕ್ಕಾಗಿ ನಾನು ‘ವಿಕುಂಠ’ನೆಂದು ಕರೆಯ ಲ್ಪಡುತ್ತೇನೆ. ಆದರೆ ಈ ಪವಿತ್ರಕೀರ್ತಿಯು ನಿಮ್ಮಿಂದಲೇ ಬಂದಿರು ವುದು. ಆದ್ದರಿಂದ ನಿಮಗೆ ಪ್ರತಿಕೂಲವಾಗಿ ನಡೆದುಕೊಂಡರೆ, ಅದು ನನ್ನ ಭುಜವೇ ಆಗಿದ್ದರೂ ಅದನ್ನು ನಾನು ಕೂಡಲೇ ಕತ್ತರಿಸಿಬಿಡುವೆನು. ॥ 6 ॥

ಮೂಲಮ್

(ಶ್ಲೋಕ - 7)
ಯತ್ಸೇವಯಾ ಚರಣಪದ್ಮಪವಿತ್ರರೇಣುಂ
ಸದ್ಯಃಕ್ಷತಾಖಿಲಮಲಂ ಪ್ರತಿಲಬ್ಧಶೀಲಮ್ ।
ನ ಶ್ರೀರ್ವಿರಕ್ತಮಪಿ ಮಾಂ ವಿಜಹಾತಿ ಯಸ್ಯಾಃ
ಪ್ರೇಕ್ಷಾಲವಾರ್ಥ ಇತರೇ ನಿಯಮಾನ್ವಹಂತಿ ॥

ಅನುವಾದ

ನಿಮ್ಮಂತಹವರ ಸೇವೆ ಮಾಡಿದ್ದರಿಂದಲೇ ನನ್ನ ಪಾದಧೂಳಿಗೆ ಎಲ್ಲ ಪಾಪಗಳನ್ನು ಒಡನೆಯೇ ನಾಶಪಡಿಸುವ ಪಾವಿತ್ರ್ಯ ವುಂಟಾಗಿದೆ. ಯಾರ ಲೇಶಮಾತ್ರವಾದ ಕೃಪಾಕಟಾಕ್ಷಕ್ಕಾಗಿ ಬ್ರಹ್ಮಾದಿ ದೇವತೆಗಳೂ ಬಗೆ-ಬಗೆಯ ನಿಯಮಗಳನ್ನೂ, ವ್ರತ ಗಳನ್ನೂ ಆಚರಿಸುತ್ತಾರೋ, ಅಂತಹ ಲಕ್ಷ್ಮೀದೇವಿಯು ನಾನು ಉದಾಸೀನ ಮಾಡಿದರೂ ನನ್ನನ್ನು ಒಂದು ಕ್ಷಣಕಾಲವು ಬಿಡದೆ ಇರುವ ಲೋಕೋತ್ತರವಾದ ಶೀಲಸ್ವಭಾವವು ನನಗೆ ದೊರೆತುದು ನಿಮ್ಮ ಸೇವೆಯಿಂದಲೇ. ॥ 7 ॥

(ಶ್ಲೋಕ - 8)

ಮೂಲಮ್

ನಾಹಂ ತಥಾದ್ಮಿ ಯಜಮಾನಹವಿರ್ವಿತಾನೇ
ಶ್ಚ್ಯೋತದ್ಘತಪ್ಲುತಮದನ್ ಹುತಭುಂಗ್ಮುಖೇನ ।
ಯದ್ಬ್ರಾಹ್ಮಣಸ್ಯ ಮುಖತಶ್ಚರತೋನುಘಾಸಂ
ತುಷ್ಟಸ್ಯ ಮಯ್ಯವಹಿತೈರ್ನಿಜಕರ್ಮಪಾಕೈಃ ॥

ಅನುವಾದ

ತಮ್ಮ ಸಮಸ್ತ ಕರ್ಮಲವನ್ನು ನನಗೆ ಸಮರ್ಪಿಸಿ ಸದಾ ಸಂತುಷ್ಟರಾಗಿರುವ ನಿಷ್ಕಾಮರಾದ ಬ್ರಾಹ್ಮಣರು ಪ್ರತಿಯೊಂದು ತುತ್ತಿನಲ್ಲಿಯೂ ತೃಪ್ತಿಯನ್ನು ಅನು ಭವಿಸುತ್ತಾ, ತುಪ್ಪದಲ್ಲಿ ನೆನೆದಿರುವ ಬಗೆ-ಬಗೆಯ ಪಕ್ವಾನ್ನಗಳನ್ನು ಭುಂಜಿಸುವಾಗ ಅವರ ಬಾಯಿಯ ಮೂಲಕ ನಾನು ತೃಪ್ತ ನಾಗುವಂತೆ, ಯಜ್ಞದಲ್ಲಿ ಅಗ್ನಿಮುಖದಲ್ಲಿ ಯಜಮಾನನು ಅರ್ಪಿಸಿದ ಆಹುತಿಯನ್ನು ಸ್ವೀಕರಿಸುವುದರಿಂದಲೂ ನಾನು ತೃಪ್ತ ನಾಗುವುದಿಲ್ಲ. ॥ 8 ॥

(ಶ್ಲೋಕ - 9)

ಮೂಲಮ್

ಯೇಷಾಂ ಬಿಭರ್ಮ್ಯಹಮಖಂಡವಿಕುಂಠಯೋಗ-
ಮಾಯಾವಿಭೂತಿರಮಲಾಂಘ್ರಿರಜಃ ಕಿರೀಟೈಃ ।
ವಿಪ್ರಾಂಸ್ತು ಕೋ ನ ವಿಷಹೇತ ಯದರ್ಹಣಾಂಭಃ
ಸದ್ಯಃ ಪುನಾತಿ ಸಹಚಂದ್ರಲಲಾಮಲೋಕಾನ್ ॥

ಅನುವಾದ

ಅಖಂಡವಾದ ಯೋಗಮಾಯೆಯೂ, ಅಸೀಮ ಐಶ್ವರ್ಯವೂ ನನಗೆ ಅಧೀನವಾಗಿದೆ. ನನ್ನ ಪಾದೋದಕ ವಾದ ಗಂಗೆಯು ಚಂದ್ರಶೇಖರ ಭಗವಾನ್ ಶಿವನ ಸಹಿತ ಸಮಸ್ತ ಲೋಕಗಳನ್ನು ಪವಿತ್ರಗೊಳಿಸುತ್ತದೆ. ಇಂತಹ ಪರಮ ಪವಿತ್ರನೂ, ಪರಮೇಶ್ವರನೂ ಆಗಿದ್ದರೂ ನಾನು ಯಾರ ಪವಿತ್ರವಾದ ಪಾದ ರಜವನ್ನು ನನ್ನ ಕಿರೀಟದಲ್ಲಿ ಧರಿಸಿಕೊಂಡಿರುವೆನೋ, ಅಂತಹ ಬ್ರಾಹ್ಮಣರ ಕರ್ಮವನ್ನು ಯಾರು ತಾನೇ ಸಹಿಸುವುದಿಲ್ಲ ? ॥ 9 ॥

(ಶ್ಲೋಕ - 10)

ಮೂಲಮ್

ಯೇ ಮೇ ತನೂರ್ದ್ವಿಜವರಾನ್ದುಹತೀರ್ಮದೀಯಾ
ಭೂತಾನ್ಯಲಬ್ಧ ಶರಣಾನಿ ಚ ಭೇದಬುದ್ಧ್ಯಾ ।
ದ್ರಕ್ಷ್ಯಂತ್ಯಘಕ್ಷತದೃಶೋ ಹ್ಯಹಿಮನ್ಯವಸ್ತಾನ್
ಗೃಧ್ರಾ ರುಷಾ ಮಮ ಕುಷಂತ್ಯಧಿದಂಡನೇತುಃ ॥

ಅನುವಾದ

ಬ್ರಾಹ್ಮಣರು, ಹಾಲುಕರೆಯುವ ಹಸುಗಳು, ಅನಾಥ ಪ್ರಾಣಿಗಳು ನನ್ನ ಶರೀರಗಳೇ ಆಗಿವೆ. ಪಾಪಗಳಿಂದ ವಿವೇಕ ದೃಷ್ಟಿಯನ್ನು ಕಳೆದುಕೊಂಡು ಈ ಮೂವರನ್ನು ನನ್ನಿಂದ ಬೇರೆ ಎಂದು ತಿಳಿಯುವವರು ಯಮನಿಗೆ ಅತಿಥಿಗಳಾಗುವರು. ಕಾಳಸರ್ಪ ದಂತೆ ಕ್ರೂರಿಗಳಾದ ಅವರನ್ನು ಯಮನ ದೂತರೆಂಬ ಹದ್ದುಗಳು ಅತ್ಯಂತ ಕ್ರೋಧಗೊಂಡು ತಮ್ಮ ಕೊಕ್ಕುಗಳಿಂದ ಕುಕ್ಕಿಹಾಕುತ್ತವೆ. ॥ 10 ॥

(ಶ್ಲೋಕ - 11)

ಮೂಲಮ್

ಯೇ ಬ್ರಾಹ್ಮಣಾನ್ಮಯಿ ಧಿಯಾ ಕ್ಷಿಪತೋರ್ಚಯಂತ-
ಸ್ತುಷ್ಯದ್ಧೃದಃ ಸ್ಮಿತಸುಧೋಕ್ಷಿತಪದ್ಮವಕಾಃ ।
ವಾಣ್ಯಾನುರಾಗಕಲಯಾತ್ಮಜವದ್ಗೃಣಂತಃ
ಸಂಬೋಧಯಂತ್ಯಹಮಿವಾಹಮುಪಾಹೃತಸ್ತೈಃ ॥

ಅನುವಾದ

ಬ್ರಾಹ್ಮಣರು ತಿರಸ್ಕಾರಪೂರ್ವಕವಾಗಿ ಕಟುವಾಗಿ ನುಡಿ ದರೂ ಅವರಲ್ಲಿ ‘ಪರಮಾತ್ಮನಾದ ನಾನೇ ಆ ಬ್ರಾಹ್ಮಣರು’ ಎಂದು ಭಾವಿಸಿ, ಪ್ರಸನ್ನವಾದ ಚಿತ್ತದಿಂದ ಮತ್ತು ಅಮೃತಮಯವಾದ ಕಿರುನಗೆಯಿಂದ ಕೂಡಿದ ಪ್ರಸನ್ನವಾದ ಮುಖಕಮಲದಿಂದ ಯಾರು ಅವರನ್ನು ಆದರಿಸುತ್ತಾರೋ ಹಾಗೂ ಮುನಿಸಿಕೊಂಡ ತಂದೆಯನ್ನು ಮಗನೂ ಮತ್ತು ನಿಮ್ಮನ್ನು ನಾನು ಭಾವಿಸುವಂತೆ ಪ್ರೇಮಪೂರ್ಣ ಮಾತುಗಳಿಂದ ಪ್ರಾರ್ಥನೆ ಮಾಡುತ್ತಾ ಅವರನ್ನು ಶಾಂತಗೊಳಿಸುತ್ತಾರೋ ಅಂತಹವರು ನನ್ನನ್ನು ವಶಪಡಿಸಿ ಕೊಳ್ಳುವರು. ॥ 11 ॥

(ಶ್ಲೋಕ - 12)

ಮೂಲಮ್

ತನ್ಮೇ ಸ್ವಭರ್ತುರವಸಾಯಮಲಕ್ಷಮಾಣೌ
ಯುಷ್ಮದ್ವ್ಯತಿಕ್ರಮಗತಿಂ ಪ್ರತಿಪದ್ಯ ಸದ್ಯಃ ।
ಭೂಯೋ ಮಮಾಂತಿಕಮಿತಾಂ ತದನುಗ್ರಹೋ ಮೇ
ಯತ್ಕಲ್ಪತಾಮಚಿರತೋ ಭೃತಯೋರ್ವಿವಾಸಃ ॥

ಅನುವಾದ

ನನ್ನ ಈ ಸೇವಕರು ನನ್ನ ಅಭಿಪ್ರಾಯವನ್ನು ಅರಿಯದೆಯೇ ನಿಮಗೆ ಅವಮಾನಮಾಡಿದ್ದಾರೆ. ಅದಕ್ಕಾಗಿ ಒತ್ತಾಯದಿಂದ ನೀವು ಈ ಜಯ-ವಿಜಯರ ಲೋಕಭ್ರಂಶದ ಅವಧಿಯು ಬೇಗನೇ ಮುಗಿದು, ಅವರು ತಮ್ಮ ಅಪರಾಧಕ್ಕನು ರೂಪವಾದ ಅಧಮಗತಿಯನ್ನು ಹೊಂದಿ ಶೀಘ್ರವೇ ನನ್ನ ಬಳಿಗೆ ಹಿಂದಿರುಗುವಂತೆ ಕೃಪೆ ತೋರಬೇಕು. ॥ 12 ॥

(ಶ್ಲೋಕ - 13)

ಮೂಲಮ್

ಬ್ರಹ್ಮೋವಾಚ
ಅಥ ತಸ್ಯೋಷತೀಂ ದೇವೀಮೃಷಿಕುಲ್ಯಾಂ ಸರಸ್ವತೀಮ್ ।
ನಾಸ್ವಾದ್ಯ ಮನ್ಯುದಷ್ಟಾನಾಂ ತೇಷಾಮಾತ್ಮಾಪ್ಯತೃಪ್ಯತ ॥

ಅನುವಾದ

ಶ್ರೀಬ್ರಹ್ಮದೇವರು ಹೇಳುತ್ತಾರೆ ದೇವತೆಗಳಿರಾ ! ಸನಕಾದಿ ಮುನಿಗಳು ಕ್ರೋಧವೆಂಬ ಸರ್ಪದಿಂದ ಕಚ್ಚಲ್ಪಟ್ಟಿದ್ದರೂ ಅವರ ಕ್ರೋಧವು ಆಗಲೇ ಶಾಂತವಾಗಿತ್ತು. ಈಗ ಅಂತಃಕರಣವನ್ನು ಪ್ರಕಾಶಪಡಿಸುವ ಭಗವಂತನ ಅಮೃತಮಯವಾದ ಮಧುರವಾಣಿ ಯನ್ನು ಎಷ್ಟು ಕೇಳಿದರೂ ಅವರ ಚಿತ್ತಕ್ಕೆ ತೃಪ್ತಿಯಾಗಲಿಲ್ಲ. ॥ 13 ॥

(ಶ್ಲೋಕ - 14)

ಮೂಲಮ್

ಸತೀಂ ವ್ಯಾದಾಯ ಶೃಣ್ವಂತೋ ಲಘ್ವೀಂ ಗುರ್ವರ್ಥಗಹ್ವರಾಮ್ ।
ವಿಗಾಹ್ಯಾಗಾಧಗಂಭೀರಾಂ ನ ವಿದುಸ್ತಚ್ಚಿಕೀರ್ಷಿತಮ್ ॥

ಅನುವಾದ

ಭಗವಂತನ ವಾಣಿಯು ಅತ್ಯಂತ ಸತ್ಯವೂ, ಸುಮನೋಹರವೂ ಆಗಿತ್ತು. ಕಡಿಮೆ ಅಕ್ಷರಗಳಿಂದ ಕೂಡಿದ್ದು, ಅರ್ಥಗರ್ಭಿತವೂ, ಸಾರಭೂತವೂ, ಅರ್ಥೈಸಲು ಬಹು ಕಷ್ಟವೂ, ಗಂಭೀರವೂ ಆಗಿತ್ತು. ಬಹಳ ಸಾವಧಾನವಾಗಿ ಕೇಳಿ, ವಿಚಾರಮಾಡಿದರೂ ಭಗವಂತನು ಏನು ಹೇಳಲು ಬಯಸುತ್ತಿರುವನು ಎಂಬುದು ತಿಳಿದು ಬರುತ್ತಿರಲಿಲ್ಲ. ॥ 14 ॥

(ಶ್ಲೋಕ - 15)

ಮೂಲಮ್

ತೇ ಯೋಗಮಾಯಯಾರಬ್ಧ ಪಾರಮೇಷ್ಠ್ಯಮಹೋದಯಮ್ ।
ಪ್ರೋಚುಃ ಪ್ರಾಂಜಲಯೋ ವಿಪ್ರಾಃ ಪ್ರಹೃಷ್ಟಾಃ ಕ್ಷುಭಿತತ್ವಚಃ ॥

ಅನುವಾದ

ಭಗವಂತನ ಅದ್ಭುತವಾದ ಔದಾರ್ಯವನ್ನು ಕಂಡು ಅವರು ಆನಂದಿತರಾಗಿ, ಅವರ ಅಂಗಾಂಗಗಳೆಲ್ಲವೂ ರೋಮಾಂಚಿತವಾದುವು. ಯೋಗಮಾಯೆಯ ಪ್ರಭಾವದಿಂದ ತನ್ನ ಪರಮೈಶ್ವರ್ಯದ ಪ್ರಭಾವವನ್ನು ಪ್ರಕಟ ಪಡಿಸುವಂತಹ ಪ್ರಭುವಿನ ಮುಂದೆ ಕೈಜೋಡಿಸಿಕೊಂಡು ಅವರು ವಿಜ್ಞಾಪಿಸಿಕೊಂಡರು. ॥ 15 ॥

(ಶ್ಲೋಕ - 16)

ಮೂಲಮ್

ಋಷಯ ಊಚುಃ
ನ ವಯಂ ಭಗವನ್ ವಿದ್ಮಸ್ತವ ದೇವ ಚಿಕೀರ್ಷಿತಮ್ ।
ಕೃತೋ ಮೇನುಗ್ರಹಶ್ಚೇತಿ ಯದಧ್ಯಕ್ಷಃ ಪ್ರಭಾಷಸೇ ॥

ಅನುವಾದ

ಸನಕಾದಿ ಮುನಿಗಳು ಹೇಳಿದರು ಸ್ವಯಂಪ್ರಕಾಶವಾದ ಪರಮಾತ್ಮನೇ ! ನೀನು ಸರ್ವೇಶ್ವರನೂ, ಲೋಕಾಧ್ಯಕ್ಷನೂ ಆಗಿ ದ್ದರೂ ನಮ್ಮನ್ನು ಕುರಿತು ‘ನೀವು ನನ್ನಲ್ಲಿ ತುಂಬಾ ಅನುಗ್ರಹ ಮಾಡಿದಿರಿ’ ಎಂದು ಹೇಳಿದೆಯಲ್ಲ ! ಇದರ ಅಭಿಪ್ರಾಯ ವೇನೆಂದು ನಮಗೆ ತಿಳಿಯಲಿಲ್ಲ. ॥ 16 ॥

(ಶ್ಲೋಕ - 17)

ಮೂಲಮ್

ಬ್ರಹ್ಮಣ್ಯಸ್ಯ ಪರಂ ದೈವಂ ಬ್ರಾಹ್ಮಣಾಃ ಕಿಲ ತೇ ಪ್ರಭೋ ।
ವಿಪ್ರಾಣಾಂ ದೇವದೇವಾನಾಂ ಭಗವಾನಾತ್ಮದೈವತಮ್ ॥

ಅನುವಾದ

ಪ್ರಭುವೇ ! ನೀನು ಬ್ರಾಹ್ಮಣರಿಗೂ, ದೇವತೆಗಳಿಗೂ ದೇವತೆಯಾಗಿದ್ದು, ಬ್ರಹ್ಮಾದಿ ಗಳಿಗೂ ಆತ್ಮನೂ, ಆರಾಧ್ಯದೈವವೂ ಆಗಿರುವೆ. ಬ್ರಾಹ್ಮಣರ ಪರಮಹಿತಕಾರಿಯಾಗಿರುವೆ. ಇಂತಹ ನೀನು ‘ಬ್ರಾಹ್ಮಣರೇ ನನಗೆ ಪರಮದೈವ’ರೆಂದು ಹೇಳಿರುವುದು ಕೇವಲ ಲೋಕ ಶಿಕ್ಷಣ ಕ್ಕಾಗಿಯೇ ಇದೆ. (ಜನರು ಬ್ರಾಹ್ಮಣರನ್ನು ಗೌರವಿಸಬೇಕೆಂಬ ಆದರ್ಶವನ್ನು ತೋರಲು ಹೀಗೆ ಹೇಳಿರುವೆ ಎಂದು ನಾವು ಭಾವಿಸುತ್ತೇವೆ.) ॥ 17 ॥

(ಶ್ಲೋಕ - 18)

ಮೂಲಮ್

ತ್ವತ್ತಃ ಸನಾತನೋ ಧರ್ಮೋ ರಕ್ಷ್ಯತೇ ತನುಭಿಸ್ತವ ।
ಧರ್ಮಸ್ಯ ಪರಮೋ ಗುಹ್ಯೋ ನಿರ್ವಿಕಾರೋ ಭವಾನ್ಮತಃ ॥

ಅನುವಾದ

ಸನಾತನ ಧರ್ಮವು ನಿನ್ನಿಂದಲೇ ಉಂಟಾಗಿದೆ. ನಿನ್ನ ಹಲವು ಅವತಾರಗಳ ಮೂಲಕ ಆಗಾಗ ಆ ಧರ್ಮಸೇತುವನ್ನು ರಕ್ಷಿಸುವವನೂ ನೀನೇ. ನಿರ್ವಿಕಾರ ಸ್ವರೂಪನೂ, ಧರ್ಮದ ಪರಮರಹಸ್ಯವೂ ನೀನೇ ಆಗಿರುವೆ ಎಂದು ಶಾಸಗಳು ಸಾರುತ್ತಿವೆ. ॥ 18 ॥

(ಶ್ಲೋಕ - 19)

ಮೂಲಮ್

ತರಂತಿ ಹ್ಯಂಜಸಾ ಮೃತ್ಯುಂ ನಿವೃತ್ತಾ ಯದನುಗ್ರಹಾತ್ ।
ಯೋಗಿನಃ ಸ ಭವಾನ್ಕಿಂಸ್ವಿದನುಗೃಹ್ಯೇತ ಯತ್ಪರೈಃ ॥

ಅನುವಾದ

ನಿವೃತ್ತಿಧರ್ಮವನ್ನು ಸಾಧಿಸುವ ಯೋಗಿಗಳು ನಿನ್ನ ಅನುಗ್ರಹದಿಂದಲೇ ಮೃತ್ಯುರೂಪವಾದ ಸಂಸಾರಸಾಗರವನ್ನು ಸಹಜವಾಗಿ ದಾಟಿ ದಡವನ್ನು ಕಾಣುವರು. ಹೀಗಿರುವಾಗ ನಿನಗೆ ಇತರರು ಕೃಪೆಮಾಡುವುದು ಎಂದರೇನು ? ॥ 19 ॥

(ಶ್ಲೋಕ - 20)

ಮೂಲಮ್

ಯಂ ವೈ ವಿಭೂತಿರುಪಯಾತ್ಯನುವೇಲಮನ್ಯೈ-
ರರ್ಥಾರ್ಥಿಭಿಃ ಸ್ವಶಿರಸಾ ಧೃತಪಾದರೇಣುಃ ।
ಧನ್ಯಾರ್ಪಿತಾಂಘ್ರಿತುಲಸೀನವದಾಮಧಾಮ್ನೋ
ಲೋಕಂ ಮಧುವ್ರತಪತೇರಿವ ಕಾಮಯಾನಾ ॥

ಅನುವಾದ

ಐಶ್ವರ್ಯವೇ ಮುಂತಾದ ಪ್ರಯೋಜನಕ್ಕಾಗಿ ಉಪಾಸಿಸುವ ಅರ್ಥಾರ್ಥಿ ಭಕ್ತರು ಶ್ರೀಲಕ್ಷ್ಮೀದೇವಿಯ ಪಾದಧೂಳಿಯನ್ನು ತಮ್ಮ ತಲೆಯಲ್ಲಿ ಮುಡಿದುಕೊಳ್ಳುತ್ತಾರೆ. ಆದರೆ ಆ ದೇವಿಯೇ ನಿರಂತರವಾಗಿ ನಿನ್ನ ಸೇವೆಯಲ್ಲಿ ಆಸಕ್ತಳಾಗಿರುತ್ತಾಳೆ. ಭಾಗ್ಯಶಾಲಿಗಳಾದ ಭಕ್ತರು ನಿನ್ನ ಪಾದಾರವಿಂದಗಳಲ್ಲಿ ಸಮರ್ಪಿಸುವ ನವ-ನವೀನ ತುಳಸೀ ಮಾಲೆಯ ಮೇಲೆ ಝೇಂಕರಿಸುತ್ತಿರುವ ದುಂಬಿಗಳಂತೆ ಆಕೆಯೂ ಕೂಡ ನಿನ್ನ ಪಾದಪದ್ಮಗಳನ್ನೇ ತನ್ನ ನಿವಾಸಸ್ಥಾನವನ್ನಾಗಿ ಮಾಡಿ ಕೊಳ್ಳಲು ಬಯಸುತ್ತಾಳೆ. (ಸವತಿ ಯಾಗಿರುವ ತುಳಸೀದೇವಿಗೆ ಒದಗಿದ ಸೌಭಾಗ್ಯವು ತನಗೂ ಬರಲಿ ಎಂದು ತಾನೂ ನಿನ್ನ ಚರಣಗಳಲ್ಲೇ ಇದ್ದು ಅವುಗಳನ್ನು ಸೇವಿಸಲು ಇಷ್ಟಪಡುತ್ತಿರುವಳು.)॥20॥

(ಶ್ಲೋಕ - 21)

ಮೂಲಮ್

ಯಸ್ತಾಂ ವಿವಿಕ್ತಚರಿತೈರನುವರ್ತಮಾನಾಂ
ನಾತ್ಯಾದ್ರಿಯತ್ಪರಮಭಾಗವತಪ್ರಸಂಗಃ ।
ಸ ತ್ವಂ ದ್ವಿಜಾನುಪಥಪುಣ್ಯರಜಃಪುನೀತಃ
ಶ್ರೀವತ್ಸಲಕ್ಷ್ಮ ಕಿಮಗಾ ಭಗಭಾಜನಸ್ತ್ವಮ್ ॥

ಅನುವಾದ

ಆದರೆ ತನ್ನ ಪವಿತ್ರ ಚರಿತ್ರಗಳಿಂದ ನಿರಂತರ ತತ್ಪರಳಾಗಿರುವ ಆ ಲಕ್ಷ್ಮೀದೇವಿಯನ್ನೂ ಕೂಡ ಹೆಚ್ಚಾಗಿ ಆದರಿಸದೆ ನೀನು ನಿನ್ನ ಭಕ್ತರಮೇಲೆಯೇ ವಿಶೇಷವಾದ ಪ್ರೀತಿಯನ್ನು ತೋರಿಸುತ್ತೀಯೇ. ಹೀಗಿರುವಾಗ ಎಲ್ಲೆಲ್ಲಿಯೋ ಸಂಚರಿಸುವ ಬ್ರಾಹ್ಮಣರ ಪಾದಗಳಿಗೆ ತಗುಲಿದ ಪುಣ್ಯವಾದ ಮಾರ್ಗದ ಧೂಳಿ ಯಾಗಲೀ, ಶ್ರೀವತ್ಸಲಾಂಛನವಾಗಲೀ ನಿನ್ನನ್ನು ಪವಿತ್ರಗೊಳಿಸಿ ಯಾವೇ ? ಅವುಗಳಿಂದ ನಿನ್ನ ಕಾಂತಿಯು ಹೆಚ್ಚೀತೇ ?॥21॥

(ಶ್ಲೋಕ - 22)

ಮೂಲಮ್

ಧರ್ಮಸ್ಯ ತೇ ಭಗವತಸಿಯುಗ ತ್ರಿಭಿಃ ಸ್ವೈಃ
ಪದ್ಭಿಶ್ಚರಾಚರಮಿದಂ ದ್ವಿಜದೇವತಾರ್ಥಮ್ ।
ನೂನಂ ಭೃತಂ ತದಭಿಘಾತಿ ರಜಸ್ತಮಶ್ಚ
ಸತ್ತ್ವೇನ ನೋ ವರದಯಾ ತನುವಾ ನಿರಸ್ಯ ॥

ಅನುವಾದ

ಭಗವಂತನೇ ! ನೀನು ಸಾಕ್ಷಾತ್ ಧರ್ಮಸ್ವರೂಪಿಯಾಗಿರುವೆ. ನೀನೇ ಕೃತ, ತ್ರೇತ, ದ್ವಾಪರವೆಂದು ಮೂರು ಯುಗಗಳಲ್ಲಿಯೂ ಪ್ರತ್ಯಕ್ಷವಾಗಿ ಇರುವವನು. ತಪಸ್ಸು, ಶೌಚ, ದಾನಗಳೆಂಬ ಮೂರು ಚರಣಗಳಿಂದ ದೇವತೆಗಳ ಮತ್ತು ಬ್ರಾಹ್ಮಣರ ಹಿತಕ್ಕಾಗಿ ಚರಾಚರ ಜಗತ್ತನ್ನು ರಕ್ಷಿಸುತ್ತಿರುವವನು. ಶುದ್ಧ ಸತ್ತ್ವಮಯವೂ, ವರಪ್ರದವೂ ಆದ ನಿನ್ನ ಶ್ರೀಮೂರ್ತಿಯಿಂದ ನಮ್ಮಲ್ಲಿರುವ ಧರ್ಮವಿರೋಧಿಗಳಾದ ರಜೋಗುಣ-ತಮೋಗುಣಗಳನ್ನು ದೂರಮಾಡು ಸ್ವಾಮಿ. ॥ 22 ॥

(ಶ್ಲೋಕ - 23)

ಮೂಲಮ್

ನ ತ್ವಂ ದ್ವಿಜೋತ್ತಮಕುಲಂ ಯದಿಹಾತ್ಮಗೋಪಂ
ಗೋಪ್ತಾ ವೃಷಃ ಸ್ವರ್ಹಣೇನ ಸಸೂನೃತೇನ ।
ತರ್ಹ್ಯೇವ ನಂಕ್ಷ್ಯತಿ ಶಿವಸ್ತವ ದೇವ ಪಂಥಾ
ಲೋಕೋಗ್ರಹೀಷ್ಯದೃಷಭಸ್ಯ ಹಿ ತತ್ಪ್ರಮಾಣಮ್ ॥

ಅನುವಾದ

ದೇವಾ ! ಈ ಬ್ರಾಹ್ಮಣಕುಲವನ್ನು ನೀನು ಅವಶ್ಯವಾಗಿ ರಕ್ಷಿಸಬೇಕು. ನೀನು ಸಾಕ್ಷಾತ್ ಧರ್ಮ ರೂಪಿಯೇ ಆಗಿದ್ದರೂ ನಿನ್ನ ಸುಮಧುರವಾಣಿಯಿಂದಲೂ, ಪೂಜಾದಿಗಳಿಂದಲೂ ಈ ಉತ್ತಮ ಕುಲವನ್ನು ರಕ್ಷಿಸದೇ ಇದ್ದರೆ ನೀನು ನಿಯತಮಾಡಿರುವ ಮಂಗಳಕರ ವಾದ ಮಾರ್ಗವು ನಷ್ಟವಾಗಿ ಬಿಡುವುದು. ಏಕೆಂದರೆ, ಶ್ರೇಷ್ಠರಾದ ಪುರುಷರು ಆಚರಿಸುವುದನ್ನೇ ಜನರು ಪ್ರಮಾಣವೆಂದು ಭಾವಿಸಿ ಅನುಸರಿಸುತ್ತಾರೆ. ॥ 23 ॥

(ಶ್ಲೋಕ - 24)

ಮೂಲಮ್

ತತ್ತೇನಭೀಷ್ಟಮಿವ ಸತ್ತ್ವನಿಧೇರ್ವಿಧಿತ್ಸೋಃ
ಕ್ಷೇಮಂ ಜನಾಯ ನಿಜಶಕ್ತಿಭಿರುದ್ಧೃತಾರೇಃ ।
ನೈತಾವತಾ ತ್ರ್ಯಧಿಪತೇರ್ಬತ ವಿಶ್ವಭರ್ತು-
ಸ್ತೇಜಃ ಕ್ಷತಂ ತ್ವವನತಸ್ಯ ಸ ತೇ ವಿನೋದಃ ॥

ಅನುವಾದ

ಪ್ರಭೋ ! ನೀನು ಸತ್ತ್ವಗುಣದ ಗಣಿಯಾಗಿದ್ದು, ಸಮಸ್ತ ಜೀವಿಗಳಿಗೆ ಕಲ್ಯಾಣವನ್ನುಂಟುಮಾಡು ವುದರಲ್ಲಿ ತತ್ಪರನಾಗಿದ್ದೀಯೇ. ಧರ್ಮಕ್ಕೆ ದ್ರೋಹಿಗಳಾದವರನ್ನು ನಿನ್ನ ಶಕ್ತಿ ಹಾಗೂ ವಿಭೂತಿಗಳಾದ ರಾಜರೇ ಮುಂತಾದವರ ಮೂಲಕ ಸಂಹಾರ ಮಾಡಿಸುತ್ತೀಯೇ. ವೇದಮಾರ್ಗವು ನಾಶ ಹೊಂದುವುದು ನಿನಗೆ ಎಳ್ಳಷ್ಟೂ ಇಷ್ಟವಿಲ್ಲ. ನೀನು ಮೂರು ಲೋಕಗಳಿಗೆ ಒಡೆಯನೂ, ಜಗದ್ರಕ್ಷಕನೂ ಆಗಿದ್ದರೂ ಬ್ರಾಹ್ಮಣರ ವಿಷಯದಲ್ಲಿ ಇಷ್ಟೊಂದು ವಿನಯದಿಂದ ನಡೆದುಕೊಳ್ಳುತ್ತೀಯೆ ! ಆದರೆ ಇದರಿಂದ ನಿನ್ನ ತೇಜಸ್ಸಿಗೆ ಯಾವ ಕೊರತೆಯೂ ಇಲ್ಲ. ಏಕೆಂದರೆ, ಇದು ನಿನ್ನ ಲೀಲಾವಿಲಾಸವಲ್ಲವೇ ! ॥24॥

(ಶ್ಲೋಕ - 25)

ಮೂಲಮ್

ಯಂ ವಾನಯೋರ್ದಮಮಧೀಶ ಭವಾನ್ವಿಧತ್ತೇ
ವೃತ್ತಿಂ ನು ವಾ ತದನುಮನ್ಮಹಿ ನಿರ್ವ್ಯಲೀಕಮ್ ।
ಅಸ್ಮಾಸು ವಾ ಯ ಉಚಿತೋ ಧ್ರಿಯತಾಂ ಸ ದಂಡೋ
ಯೇನಾಗಸೌ ವಯಮಯುಂಕ್ಷ್ಮಹಿ ಕಿಲ್ಬಿಷೇಣ ॥ 25 ॥

ಅನುವಾದ

ಸರ್ವೇ ಶ್ವರನೇ ! ನೀನು ಈ ಜಯ-ವಿಜಯರಿಗೆ ಉಚಿತವೆನಿಸಿದ ಶಿಕ್ಷೆಯನ್ನು ಕೊಡಬಹುದು ಅಥವಾ ಪುರಸ್ಕಾರರೂಪವಾಗಿ ಅವರ ವೃತ್ತಿಯನ್ನು ವೃದ್ಧಿಪಡಿಸ ಬಹುದು. ನೀನು ಏನು ಮಾಡಿದರೂ ನಮಗೆ ಸಮ್ಮತವೇ. ಅಥವಾ ನಿನ್ನ ನಿರಪರಾಧಿಗಳಾದ ಅನುಚರರಿಗೆ ಶಾಪಕೊಟ್ಟಿದ್ದಕ್ಕಾಗಿ ನೀನು ನಮಗೆ ತಕ್ಕ ಶಿಕ್ಷೆಯನ್ನು ವಿಧಿಸಬಹುದು. ಅದನ್ನೂ ಕೂಡ ನಾವು ಹರ್ಷದಿಂದ ಸ್ವೀಕರಿಸುತ್ತೇವೆ. ॥ 25 ॥

(ಶ್ಲೋಕ - 26)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ಏತೌ ಸುರೇತರಗತಿಂ ಪ್ರತಿಪದ್ಯ ಸದ್ಯಃ
ಸಂರಂಭಸಂಭೃತಸಮಾಧ್ಯನುಬದ್ಧಯೋಗೌ ।
ಭೂಯಃ ಸಕಾಶಮುಪಯಾಸ್ಯತ ಆಶು ಯೋ ವಃ
ಶಾಪೋ ಮಯೈವ ನಿಮಿತಸ್ತದವೈತ ವಿಪ್ರಾಃ ॥

ಅನುವಾದ

ಶ್ರೀಭಗವಂತನೆಂದನು ಬ್ರಾಹ್ಮಣೋತ್ತಮರೇ ! ನೀವು ಇವರಿಗೆ ಕೊಟ್ಟರುವ ಶಾಪವು ನನ್ನ ಪ್ರೇರಣೆಯಿಂದಲೇ ಎಂದು ತಿಳಿಯಿರಿ. ಈಗ ಇವರು ಒಡನೆಯೇ ನಿಮ್ಮ ಶಾಪಕ್ಕನುಸಾರವಾಗಿ ದೈತ್ಯ ಯೋನಿಯನ್ನು ಪಡೆದು, ಕ್ರೋಧಾವೇಷದಿಂದ ಹೆಚ್ಚಿನ ಏಕಾಗ್ರತೆ ಯನ್ನು ಸುದೃಢ ಯೋಗಸಂಪನ್ನರಾಗಿ ಮತ್ತೆ ಬೇಗನೇ ನನ್ನ ಬಳಿಗೆ ಹಿಂತಿರುಗುವರು, ಎಂದು ಅಪ್ಪಣೆಕೊಟ್ಟನು. ॥ 26 ॥

(ಶ್ಲೋಕ - 27)

ಮೂಲಮ್ (ವಾಚನಮ್)

ಬ್ರಹ್ಮೋವಾಚ

ಮೂಲಮ್

ಅಥ ತೇ ಮುನಯೋ ದೃಷ್ಟ್ವಾ ನಯನಾನಂದಭಾಜನಮ್ ।
ವೈಕುಂಠಂ ತದಧಿಷ್ಠಾನಂ ವಿಕುಂಠಂ ಚ ಸ್ವಯಂಪ್ರಭಮ್ ॥

(ಶ್ಲೋಕ - 28)

ಮೂಲಮ್

ಭಗವಂತಂ ಪರಿಕ್ರಮ್ಯ ಪ್ರಣಿಪತ್ಯಾನುಮಾನ್ಯ ಚ ।
ಪ್ರತಿಜಗ್ಮುಃ ಪ್ರಮುದಿತಾಃ ಶಂಸಂತೋ ವೈಷ್ಣವೀಂ ಶ್ರಿಯಮ್ ॥

ಅನುವಾದ

ಶ್ರೀಬ್ರಹ್ಮದೇವರು ಹೇಳುತ್ತಾರೆ ಎಲೈ ದೇವತೆಗಳಿರಾ ! ಅನಂತರ ಆ ಮುನೀಂದ್ರರು ಕಣ್ಣುಗಳಿಗೆ ಹಬ್ಬವಾಗಿರುವ ಭಗವಾನ್ ವಿಷ್ಣುವನ್ನು ಹಾಗೂ ಸ್ವಯಂಪ್ರಕಾಶವಾದ ವೈಕುಂಠ ಧಾಮವನ್ನು ದರ್ಶಿಸಿ, ಸ್ವಾಮಿಗೆ ಪ್ರದಕ್ಷಿಣೆಮಾಡಿ ನಮಸ್ಕರಿಸಿ ಆತನ ಅಪ್ಪಣೆ ಪಡೆದು, ಭಗವಂತನ ಮಹಿಮೆಯನ್ನು ಕೊಂಡಾಡುತ್ತಾ ಪರಮಾ ನಂದಭರಿತರಾಗಿ ಅಲ್ಲಿಂದ ಹಿಂದಿರುಗಿದರು. ॥ 27-28 ॥

(ಶ್ಲೋಕ - 29)

ಮೂಲಮ್

ಭಗವಾನನುಗಾವಾಹ ಯಾತಂ ಮಾ ಭೈಷ್ಟಮಸ್ತು ಶಮ್ ।
ಬ್ರಹ್ಮತೇಜಃ ಸಮರ್ಥೋಪಿ ಹಂತುಂ ನೇಚ್ಛೇ ಮತಂ ತು ಮೇ ॥

ಅನುವಾದ

ಅನಂತರ ಭಗವಂತನು ತನ್ನ ಅನುಚರರಿಗೆ ‘ಹೋಗಿ, ಭಯ ಪಡಬೇಡಿರಿ. ನಿಮಗೆ ಮಂಗಳವಾಗಲಿ. ನಾನು ಸರ್ವಸಮರ್ಥನಾಗಿದ್ದರೂ, ಬ್ರಹ್ಮತೇಜಸ್ಸನ್ನು ಅಳಿಸಲು ಬಯಸುವುದಿಲ್ಲ. ಇದೇ ನನ್ನ ಅಭಿಪ್ರಾಯವೂ ಆಗಿದೆ. ॥ 29 ॥

(ಶ್ಲೋಕ - 30)

ಮೂಲಮ್

ಏತತ್ಪುರೈವ ನಿರ್ದಿಷ್ಟಂ ರಮಯಾ ಕ್ರುದ್ಧಯಾ ಯದಾ ।
ಪುರಾಪವಾರಿತಾ ದ್ವಾರಿ ವಿಶಂತೀ ಮಯ್ಯುಪಾರತೇ ॥

ಅನುವಾದ

ಹಿಂದೊಮ್ಮೆ ನಾನು ಯೋಗ ನಿದ್ರೆಯಲ್ಲಿ ವಿಶ್ರಮಿಸಿದ್ದಾಗ ಒಳಗೆ ಪ್ರವೇಶಿಸುತ್ತಿದ್ದ ಲಕ್ಷ್ಮೀದೇವಿಯನ್ನು ನೀವು ತಡೆದಿದ್ದೀರಿ. ಆಗ ಅವಳೂ ನಿಮಗೆ ಹೀಗೆಯೇ ಶಾಪ ಕೊಟ್ಟಿದ್ದಳು. ॥ 30 ॥

(ಶ್ಲೋಕ - 31)

ಮೂಲಮ್

ಮಯಿ ಸಂರಂಭಯೋಗೇನ ನಿಸ್ತೀರ್ಯ ಬ್ರಹ್ಮಹೇಲನಮ್ ।
ಪ್ರತ್ಯೇಷ್ಯತಂ ನಿಕಾಶಂ ಮೇ ಕಾಲೇನಾಲ್ಪೀಯಸಾ ಪುನಃ ॥

ಅನುವಾದ

ಈಗ ನೀವು ದೈತ್ಯಯೋನಿಯಲ್ಲಿದ್ದು, ನನ್ನ ಬಗೆಗೆ ಕ್ರೋಧಾಕಾರವಾದ ವೃತ್ತಿಯಿಂದ ಏಕಾಗ್ರತೆಯನ್ನು ಪಡೆದು, ಅದರಿಂದ ಈ ವಿಪ್ರಶಾಪದ ಪಾಪದಿಂದ ಬಿಡುಗಡೆಹೊಂದಿ, ಸ್ವಲ್ಪ ಸಮಯದಲ್ಲೇ ನನ್ನ ಬಳಿಗೆ ಮರಳಿ ಬರುವಿರಿ ಎಂದು ಹೇಳಿದನು. ॥ 31 ॥

ಮೂಲಮ್

(ಶ್ಲೋಕ - 32)
ದ್ವಾಃಸ್ಥಾವಾದಿಶ್ಯ ಭಗವಾನ್ ವಿಮಾನಶ್ರೇಣಿಭೂಷಣಮ್ ।
ಸರ್ವಾತಿಶಯಯಾ ಲಕ್ಷ್ಮ್ಯಾಜುಷ್ಟಂ ಸ್ವಂ ಧಿಷ್ಣ್ಯಮಾವಿಶತ್ ॥

ಅನುವಾದ

ಶ್ರೀಭಗವಂತನು ದ್ವಾರಪಾಲಕರಿಗೆ ಹೀಗೆ ಅಪ್ಪಣೆಯನ್ನಿತ್ತು, ವಿಮಾನಗಳ ಸಾಲುಗಳಿಂದ ಅಲಂಕೃತವಾಗಿ ಸರ್ವಾತಿಶಯ ಶ್ರೀಸಮೃದ್ಧಿಯಿಂದ ಕೂಡಿದ ತನ್ನ ಧಾಮವನ್ನು ಒಳಹೊಕ್ಕನು. ॥ 32 ॥

(ಶ್ಲೋಕ - 33)

ಮೂಲಮ್

ತೌ ತು ಗೀರ್ವಾಣಋಷಭೌ ದುಸ್ತರಾದ್ಧರಿಲೋಕತಃ ।
ಹತಶ್ರಿಯೌ ಬ್ರಹ್ಮಶಾಪಾದಭೂತಾಂ ವಿಗತಸ್ಮಯೌ ॥

ಅನುವಾದ

ದೇವಶ್ರೇಷ್ಠರಾದ ಆ ಜಯ-ವಿಜಯ ರಾದರೋ ಉಲ್ಲಂಘಿಸಲಸದಳವಾದ ಬ್ರಾಹ್ಮಣರ ಶಾಪದ ಲವಾಗಿ ಭಗವದ್ಧಾಮದಲ್ಲೇ ದೈವೀಸಂಪತ್ತನ್ನು ಕಳಕೊಂಡರು. ಅವರ ಗರ್ವವೆಲ್ಲ ಕರಗಿಹೋಯಿತು. ॥ 33 ॥

(ಶ್ಲೋಕ - 34)

ಮೂಲಮ್

ತದಾ ವಿಕುಂಠಧಿಷಣಾತ್ತಯೋರ್ನಿಪತಮಾನಯೋಃ
ಹಾಹಾಕಾರೋ ಮಹಾನಾಸೀದ್ವಿಮಾನಾಗ್ರ್ಯೇಷು ಪುತ್ರಕಾಃ ॥

ಅನುವಾದ

ಅವರು ವೈಕುಂಠ ಲೋಕದಿಂದ ಬೀಳತೊಡಗಿದಾಗ ಶ್ರೇಷ್ಠವಾದ ವಿಮಾನಗಳಲ್ಲಿ ಕುಳಿತ್ತಿದ್ದ ವೈಕುಂಠವಾಸಿಗಳು ಹಾಹಾಕಾರ ಮಾಡತೊಡಗಿದರು. ॥ 34 ॥

(ಶ್ಲೋಕ - 35)

ಮೂಲಮ್

ತಾವೇವ ಹ್ಯಧುನಾ ಪ್ರಾಪ್ತೌ ಪಾರ್ಷದಪ್ರವರೌ ಹರೇಃ ।
ದಿತೇರ್ಜಠರನಿರ್ವಿಷ್ಟಂ ಕಾಶ್ಯಪಂ ತೇಜ ಉಲ್ಬಣಮ್ ॥

ಅನುವಾದ

ಎಲೈ ದೇವತೆಗಳಿರಾ ! ಈಗ ದಿತಿಯ ಗರ್ಭದಲ್ಲಿ ಬೆಳಗುತ್ತಿರುವ ಕಶ್ಯಪರ ಉಗ್ರವಾದ ತೇಜಸ್ಸಿನಲ್ಲಿ ಭಗವಂತನ ಆ ಪಾರ್ಷದರಾದ ಜಯ-ವಿಜಯರು ಪ್ರವೇಶಿಸಿರುವರು. ॥ 35 ॥

(ಶ್ಲೋಕ - 36)

ಮೂಲಮ್

ತಯೋರಸುರಯೋರದ್ಯ ತೇಜಸಾ ಯಮಯೋರ್ಹಿ ವಃ ।
ಆಕ್ಷಿಪ್ತಂ ತೇಜ ಏತರ್ಹಿ ಭಗವಾಂಸ್ತದ್ವಿಧಿತ್ಸತಿ ॥

ಅನುವಾದ

ಆ ಇಬ್ಬರ ತೇಜಸ್ಸಿ ನಿಂದಲೇ ನಿಮ್ಮೆಲ್ಲರ ತೇಜಸ್ಸು ಕಳೆಗುಂದಿದೆ. ಭಗವಂತನ ವಿಧಾನ ದಂತೆಯೇ ಹೀಗೆಲ್ಲಾ ಆಗಿದೆ.॥36॥

(ಶ್ಲೋಕ - 37)

ಮೂಲಮ್

ವಿಶ್ವಸ್ಯ ಯಃ ಸ್ಥಿತಿಲಯೋದ್ಭವಹೇತುರಾದ್ಯೋ
ಯೋಗೇಶ್ವರೈರಪಿ ದುರತ್ಯಯಯೋಗಮಾಯಃ ।
ಕ್ಷೇಮಂ ವಿಧಾಸ್ಯತಿ ಸ ನೋ ಭಗವಾಂಸ್ಯಧೀಶ-
ಸ್ತತ್ರಾಸ್ಮದೀಯವಿಮೃಶೇನ ಕಿಯಾನಿಹಾರ್ಥಃ ॥

ಅನುವಾದ

ಜಗತ್ತಿನ ಸೃಷ್ಟಿ, ಸ್ಥಿತಿ, ಲಯಗಳಿಗೆ ಯಾರು ಕಾರಣನಾಗಿದ್ದಾನೋ, ಯಾರ ಯೋಗ ಮಾಯೆಯನ್ನು ದೊಡ್ಡ-ದೊಡ್ಡ ಯೋಗಿಗಳೂ ಕಷ್ಟಪಟ್ಟು ದಾಟುವರೋ, ತ್ರಿಗುಣಗಳಿಗೆ ನಿಯಾಮಕನಾದ ಆ ಶ್ರೀಹರಿಯೇ ನಮಗೆ ಕ್ಷೇಮವನ್ನುಂಟು ಮಾಡುವನು. ಈ ವಿಷಯದಲ್ಲಿ ನಾವು ಹೆಚ್ಚು ವಿಚಾರ ಮಾಡುವುದರಿಂದ ಏನು ಪ್ರಯೋಜನ ? ‘ಪರಮಾತ್ಮನೇ! ನಿನಗೆ ಶರಣು’ ಎಂದು ಬ್ರಹ್ಮದೇವರು ದೇವತೆಗಳನ್ನು ಸಂತೈಸಿದರು. ॥37॥

ಅನುವಾದ (ಸಮಾಪ್ತಿಃ)

ಹದಿನಾರನೆಯ ಅಧ್ಯಾಯವು ಮುಗಿಯಿತು. ॥16॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ತೃತೀಯಸ್ಕಂಧೇ ಷೋಡಶೋಽಧ್ಯಾಯಃ ॥16॥