[ಹದಿನಾಲ್ಕನೆಯ ಅಧ್ಯಾಯ]
ಭಾಗಸೂಚನಾ
ದಿತಿ-ಕಶ್ಯಪರ ಸಂವಾದ
(ಶ್ಲೋಕ - 1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ನಿಶಮ್ಯ ಕೌಷಾರವಿಣೋಪವರ್ಣಿತಾಂ
ಹರೇಃ ಕಥಾಂ ಕಾರಣಸೂಕರಾತ್ಮನಃ ।
ಪುನಃ ಸ ಪಪ್ರಚ್ಛ ತಮುದ್ಯತಾಂಜಲಿ-
ರ್ನ ಚಾತಿತೃಪ್ತೋ ವಿದುರೋ ಧೃತವ್ರತಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ - ಪರೀಕ್ಷಿದ್ರಾಜನೇ! ಭಕ್ತಿವ್ರತಧಾರಿಯಾದ ವಿದುರನು ಮೈತ್ರೇಯ ಮಹರ್ಷಿಗಳಿಂದ ಸೃಷ್ಟಿಕಾರಣಕ್ಕಾಗಿ ಯಜ್ಞವರಾಹನಾದ ಶ್ರೀಹರಿಯ ಅಮೃತಮಯ ಕಥೆಯನ್ನು ಕೇಳಿ ಸಂತೋಷಗೊಂಡರೂ ಪೂರ್ಣ ತೃಪ್ತಿಯುಂಟಾಗಲಿಲ್ಲ. ಆದ್ದರಿಂದ ಅವನು ಕೈಜೋಡಿಸಿಕೊಂಡು ಪುನಃ ವಿನಂತಿಸಿಕೊಂಡನು.॥1॥
ಮೂಲಮ್
(ಶ್ಲೋಕ - 2)
ಮೂಲಮ್ (ವಾಚನಮ್)
ವಿದುರ ಉವಾಚ
ಮೂಲಮ್
ತೇನೈವ ತು ಮುನಿಶ್ರೇಷ್ಠ ಹರಿಣಾ ಯಜ್ಞಮೂರ್ತಿನಾ ।
ಆದಿದೈತ್ಯೋ ಹಿರಣ್ಯಾಕ್ಷೋ ಹತ ಇತ್ಯನುಶುಶ್ರುಮ ॥
ಅನುವಾದ
ವಿದುರನು ಕೇಳಿದನು- ‘ಮುನಿಶ್ರೇಷ್ಠರೇ! ಯಜ್ಞವರಾಹ ರೂಪಿಯಾದ ಆ ಭಗವಂತನಿಂದಲೇ ಆದಿದೈತ್ಯನಾದ ಹಿರಣ್ಯಾಕ್ಷನು ಸಂಹರಿಸಲ್ಪಟ್ಟನು’ ಎಂದು ಈಗತಾನೇ ನಿಮ್ಮಿಂದ ಕೇಳಿದೆನು.॥2॥
(ಶ್ಲೋಕ - 3)
ಮೂಲಮ್
ತಸ್ಯ ಚೋದ್ಧರತಃ ಕ್ಷೋಣೀಂ ಸ್ವದಂಷ್ಟ್ರಾಗ್ರೇಣ ಲೀಲಯಾ ।
ದೈತ್ಯರಾಜಸ್ಯ ಚ ಬ್ರಹ್ಮನ್ಕಸ್ಮಾದ್ಧೇತೋರಭೂನ್ಮೃಧಃ ॥
ಅನುವಾದ
ಆ ಭಗವಂತನು ಲೀಲಾಜಾಲವಾಗಿ ತನ್ನ ಕೋರೆ ದಾಡೆಗಳ ಮೇಲೆ ಭೂಮಿಯನ್ನು ಇರಿಸಿಕೊಂಡು ನೀರಿನಿಂದ ಮೇಲಕ್ಕೆ ಬರುವಾಗ ಅವನಿಗೂ ದೈತ್ಯನಾದ ಹಿರಣ್ಯಾಕ್ಷನಿಗೂ ಏತಕ್ಕಾಗಿ ಯುದ್ಧವಾಯಿತು? ದಯಮಾಡಿ ಇದನ್ನು ತಿಳಿಸುವವರಾಗಿರಿ.॥3॥
(ಶ್ಲೋಕ - 4)
ಮೂಲಮ್ (ವಾಚನಮ್)
ಮೈತ್ರೇಯ ಉವಾಚ
ಮೂಲಮ್
ಸಾಧು ವೀರ ತ್ವಯಾ ಪೃಷ್ಟಮವತಾರಕಥಾಂ ಹರೇಃ ।
ಯತ್ತ್ವಂ ಪೃಚ್ಛಸಿ ಮರ್ತ್ಯಾನಾಂ ಮೃತ್ಯುಪಾಶವಿಶಾತನೀಮ್ ॥
ಅನುವಾದ
ಶ್ರೀಮೈತ್ರೇಯರು ಹೇಳತೊಡಗಿದರು ಎಲೈ ವಿದುರನೇ ! ನೀನು ತುಂಬಾ ಒಳ್ಳೆಯ ಪ್ರಶ್ನೆಯನ್ನೇ ಕೇಳಿದೆ. ಮನುಷ್ಯರನ್ನು ಮೃತ್ಯುಪಾಶದಿಂದ ಪಾರಾಗಿಸುವ ಶ್ರೀಹರಿಯ ಅವತಾರಕಥೆಯ ಬಗ್ಗೆಯೇ ಕೇಳುತ್ತಿರುವೆ.॥4॥
(ಶ್ಲೋಕ - 5)
ಮೂಲಮ್
ಯಯೋತ್ತಾನಪದಃ ಪುತ್ರೋ ಮುನಿನಾ ಗೀತಯಾರ್ಭಕಃ ।
ಮೃತ್ಯೋಃ ಕೃತ್ವೈವ ಮೂರ್ಧ್ನ್ಯಂಘ್ರಿಮಾರುರೋಹ ಹರೇಃ ಪದಮ್ ॥
ಅನುವಾದ
ನೋಡು ! ಉತ್ತಾನಪಾದನ ಪುತ್ರ ನಾದ ಧ್ರುವನು ಪುಟ್ಟಬಾಲಕನಾಗಿರುವಾಗಲೇ ಶ್ರೀನಾರದ ಮಹರ್ಷಿ ಗಳು ಹೇಳಿದ ಹರಿಕಥೆಯ ಪ್ರಭಾವದಿಂದಲೇ ಅವನು ಮೃತ್ಯುವಿನ ತಲೆಯನ್ನು ಮೆಟ್ಟಿ ಭಗವಂತನ ಪರಮಪದಕ್ಕೆ ಆರೂಢನಾದುದು.॥5॥
(ಶ್ಲೋಕ - 6)
ಮೂಲಮ್
ಅಥಾತ್ರಾಪೀತಿಹಾಸೋಯಂ ಶ್ರುತೋ ಮೇ ವರ್ಣಿತಃ ಪುರಾ ।
ಬ್ರಹ್ಮಣಾ ದೇವದೇವೇನ ದೇವಾನಾಮನುಪೃಚ್ಛತಾಮ್ ॥
ಅನುವಾದ
ಹಿಂದೆ ಒಮ್ಮೆ ಶ್ರೀವರಾಹರೂಪನಾದ ಭಗವಂತನಿಗೂ-ಹಿರಣ್ಯಾಕ್ಷನಿಗೂ ನಡೆದ ಯುದ್ಧದ ವಿಷಯದಲ್ಲಿ ದೇವತೆಗಳು ದೇವಾಧಿದೇವ ಬ್ರಹ್ಮದೇವರ ಬಳಿ ಪ್ರಶ್ನಿಸಿದಾಗ, ಅವರು ಈ ಇತಿಹಾಸವನ್ನು ವರ್ಣಿಸಿದ್ದರು. ಅದನ್ನು ನಾನೂ ಪರಂಪರೆಯಿಂದ ಕೇಳಿದ್ದೇನೆ.॥6॥
(ಶ್ಲೋಕ - 7)
ಮೂಲಮ್
ದಿತಿರ್ದಾಕ್ಷಾಯಣೀ ಕ್ಷತ್ತರ್ಮಾರೀಚಂ ಕಶ್ಯಪಂ ಪತಿಮ್ ।
ಅಪತ್ಯಕಾಮಾ ಚಕಮೇ ಸಂಧ್ಯಾಯಾಂ ಹೃಚ್ಛಯಾರ್ದಿತಾ ॥
ಅನುವಾದ
ವಿದುರನೇ! ಹಿಂದೊಮ್ಮೆ ದಕ್ಷಪ್ರಜಾಪತಿಯ ಪುತ್ರಿಯಾದ ದಿತಿಯು ಪುತ್ರಪ್ರಾಪ್ತಿಯ ಬಯಕೆಯಿಂದ ಕಾಮಾತುರಳಾಗಿ ಪತಿಯಾದ, ಮರೀಚಿ ಪುತ್ರರಾದ ಕಶ್ಯಪಮಹರ್ಷಿಯ ಬಳಿಗೆ ಸಾಯಂ ಸಂಧ್ಯಾಸಮಯದಲ್ಲಿ ಹೋಗಿ ಪ್ರಾರ್ಥಿಸಿದಳು.॥7॥
(ಶ್ಲೋಕ - 8)
ಮೂಲಮ್
ಇಷ್ಟಾ ್ವ ಗ್ನಿಜಿಹ್ವಂ ಪಯಸಾ ಪುರುಷಂ ಯಜುಷಾಂ ಪತಿಮ್ ।
ನಿಮ್ಲೋಚತ್ಯರ್ಕ ಆಸೀನಮಗ್ನ್ಯಗಾರೇ ಸಮಾಹಿತಮ್ ॥
ಅನುವಾದ
ಕಶ್ಯಪರು ಆಗ ಕ್ಷೀರದ ಆಹುತಿಗಳಿಂದ ಅಗ್ನಿಜಿಹ್ವ ಭಗವಾನ್ ಯಜ್ಞಪತಿಯನ್ನು ಆರಾಧನೆಮಾಡಿ ಸೂರ್ಯಾಸ್ತದ ಸಮಯವನ್ನು ಗಮನಿಸಿ ಅಗ್ನಿಶಾಲೆಯಲ್ಲಿ ಧ್ಯಾನಸ್ಥರಾಗಿ ಕುಳಿತಿದ್ದರು.॥8॥
(ಶ್ಲೋಕ - 9)
ಮೂಲಮ್ (ವಾಚನಮ್)
ದಿತಿರುವಾಚ
ಮೂಲಮ್
ಏಷ ಮಾಂ ತ್ವತ್ಕೃತೇ ವಿದ್ವನ್ಕಾಮ ಆತ್ತಶರಾಸನಃ ।
ದುನೋತಿ ದೀನಾಂ ವಿಕ್ರಮ್ಯ ರಂಭಾಮಿವ ಮತಂಗಜಃ ॥
ಅನುವಾದ
ದಿತಿಯು ಹೇಳಿದಳು ಜ್ಞಾನಿಶ್ರೇಷ್ಠರೇ ! ಮದಭರಿತ ಆನೆಯು ಬಾಳೆಯ ಗಿಡವನ್ನು ಹೊಸಕಿ ಹಾಕುವಂತೆಯೇ ಈ ಪ್ರಸಿದ್ಧ ಬಿಲ್ಲುಗಾರನಾದ ಮನ್ಮಥನು ಅಬಲೆಯಾಗಿರುವ ನನ್ನನ್ನು ನಿಮ್ಮ ವಿಷಯದಲ್ಲಿ ಹುರಿದುಂಬಿಸಿ ಸತಾಯಿಸುತ್ತಿದ್ದಾನೆ.॥9॥
(ಶ್ಲೋಕ - 10)
ಮೂಲಮ್
ತದ್ಭವಾನ್ದಹ್ಯಮಾನಾಯಾಂ ಸಪತ್ನೀನಾಂ ಸಮೃದ್ಧಿಭಿಃ ।
ಪ್ರಜಾವತೀನಾಂ ಭದ್ರಂ ತೇ ಮಯ್ಯಾಯುಂಕ್ತಾಮನುಗ್ರಹಮ್ ॥
ಅನುವಾದ
ನನ್ನ ಸವತಿಯರು ಪುತ್ರವತಿಯಾಗಿ ಸಮೃದ್ಧರಾಗಿರುವುದನ್ನು ನೋಡಿ ನನ್ನ ಮನಸ್ಸು ಅಸೂಯೆಯಿಂದ ಉರಿಯುತ್ತಿದೆ. ಆದ್ದರಿಂದ ನೀವು ನನ್ನ ಮೇಲೆ ಕೃಪೆದೋರಿರಿ. ನಿಮಗೆ ಮಂಗಳವಾಗಲಿ.॥10॥
(ಶ್ಲೋಕ - 11)
ಮೂಲಮ್
ಭರ್ತರ್ಯಾಪ್ತೋರುಮಾನಾನಾಂ ಲೋಕಾನಾವಿಶತೇ ಯಶಃ ।
ಪತಿರ್ಭವದ್ವಿಧೋ ಯಾಸಾಂ ಪ್ರಜಯಾ ನನು ಜಾಯತೇ ॥
ಅನುವಾದ
ನಿಮ್ಮಂತಹ ಪತಿಯು ನನ್ನಲ್ಲಿ ಗರ್ಭವನ್ನಿರಿಸಿ ಪುತ್ರರೂಪದಿಂದ ಜನಿಸಿದರೆತಾನೇ, ಸೀಯರಿಗೆ ಪತಿಯು ಸನ್ಮಾನ ಮಾಡಿದಂತಾಗುತ್ತದೆ. ಅವಳ ಕೀರ್ತಿಯೇ ಪ್ರಪಂಚದಲ್ಲಿ ಹರಡುತ್ತದಲ್ಲ! ॥11॥
(ಶ್ಲೋಕ - 12)
ಮೂಲಮ್
ಪುರಾ ಪಿತಾ ನೋ ಭಗವಾನ್ ದಕ್ಷೋ ದುಹಿತೃವತ್ಸಲಃ ।
ಕಂ ವೃಣೀತ ವರಂ ವತ್ಸಾ ಇತ್ಯಪೃಚ್ಛತ ನಃ ಪೃಥಕ್ ॥
ಅನುವಾದ
ನಮ್ಮ ತಂದೆಯಾದ ದಕ್ಷಪ್ರಜಾಪತಿಗೆ ಪುತ್ರಿಯರ ಮೇಲೆ ಬಹಳ ಸ್ನೇಹವಿತ್ತು. ಅವನು ನಮ್ಮನ್ನು ಒಬ್ಬೊಬ್ಬರನ್ನಾಗಿ ಕರೆದು ‘ನೀನು ಯಾರನ್ನು ಪತಿಯನ್ನಾಗಿ ವರಿಸುತ್ತಿಯೇ?’ ಎಂದು ಕೇಳಿದನು.॥12॥
(ಶ್ಲೋಕ - 13)
ಮೂಲಮ್
ಸ ವಿದಿತ್ವಾತ್ಮಜಾನಾಂ ನೋ ಭಾವಂ ಸಂತಾನಭಾವನಃ ।
ತ್ರಯೋದಶಾದದಾತ್ತಾಸಾಂ ಯಾಸ್ತೇ ಶೀಲಮನುವ್ರತಾಃ ॥
ಅನುವಾದ
ಅವರು ತಮ್ಮ ಸಂತಾನದ ಬಗೆಗೆ ಎಲ್ಲ ರೀತಿಯಿಂದ ಗಮನವಿಡುತ್ತಿದ್ದರು. ಆದ್ದರಿಂದ ನಮ್ಮ ಅಭಿಪ್ರಾಯವನ್ನು ತಿಳಿದು ಅವನು ನಿಮಗೆ ಗುಣಸ್ವಭಾವದಿಂದ ಅನುರೂಪರಾದ ಹದಿಮೂರು ಮಂದಿ ಪುತ್ರಿಯರಾದ ನಮ್ಮನ್ನು ನಿಮ್ಮೊಂದಿಗೆ ವಿವಾಹಮಾಡಿ ಕೊಟ್ಟನು.॥13॥
(ಶ್ಲೋಕ - 14)
ಮೂಲಮ್
ಅಥ ಮೇ ಕುರು ಕಲ್ಯಾಣ ಕಾಮಂ ಕಂಜವಿಲೋಚನ ।
ಆರ್ತೋಪಸರ್ಪಣಂ ಭೂಮನ್ನಮೋಘಂ ಹಿ ಮಹೀಯಸಿ ॥
ಅನುವಾದ
ಆದ್ದರಿಂದ ಮಂಗಳ ಮೂರ್ತಿಯೇ! ಕಮಲನಯನನೇ! ನನ್ನ ಇಷ್ಟಾರ್ಥವನ್ನು ಈಡೇರಿಸಿ ಕೊಡಿರಿ. ಏಕೆಂದರೆ, ಮಹಾತ್ಮರೇ! ನಿಮ್ಮಂತಹ ಮಹಾಪುರುಷರ ಬಳಿಗೆ ಬಂದ ದೀನಜನರ ಇಷ್ಟಾರ್ಥವು ಕೈಗೂಡದಿರುವುದಿಲ್ಲ.॥14॥
(ಶ್ಲೋಕ - 15)
ಮೂಲಮ್
ಇತಿ ತಾಂ ವೀರ ಮಾರೀಚಃ ಕೃಪಣಾಂ ಬಹುಭಾಷಿಣೀಮ್ ।
ಪ್ರತ್ಯಾಹಾನುನಯನ್ವಾಚಾ ಪ್ರವೃದ್ಧಾನಂಗಕಶ್ಮಲಾಮ್ ॥
ಅನುವಾದ
ವಿದುರನೇ! ಹೀಗೆ ಕಾಮನವೇಗದಿಂದ ಅತ್ಯಂತ ಪೀಡಿತಳಾದ ದಿತಿಯು ದೈನ್ಯದಿಂದ ಅಂಗಲಾಚಿ ಬಹಳವಾಗಿ ಬೇಡಿಕೊಳ್ಳು ತ್ತಿರುವ ಪತ್ನಿಯನ್ನು ಸವಿಮಾತುಗಳಿಂದ ಸಂತೈಸುತ್ತಾ ಕಶ್ಯಪರು ಹೇಳಿದರು.॥15॥
(ಶ್ಲೋಕ - 16)
ಮೂಲಮ್
ಏಷ ತೇಹಂ ವಿಧಾಸ್ಯಾಮಿ ಪ್ರಿಯಂ ಭೀರು ಯದಿಚ್ಛಸಿ ।
ತಸ್ಯಾಃ ಕಾಮಂ ನ ಕಃ ಕುರ್ಯಾತ್ಸಿದ್ಧಿಸೈವರ್ಗಿಕೀ ಯತಃ ॥
ಅನುವಾದ
ಎಲೈ ಭೀರುವೇ! ನಿನ್ನ ಬಯಕೆಯಂತೆ ನಿನಗೆ ಪ್ರಿಯವಾದುದನ್ನು ಅವಶ್ಯವಾಗಿ ಮಾಡುವೆನು. ಧರ್ಮ, ಅರ್ಥ, ಕಾಮ ಎಂಬ ಮೂರು ಪುರುಷಾರ್ಥಗಳ ಸಿದ್ಧಿಗೆ ಸಾಧನ ವಾಗಿರುವ ಪತ್ನಿಯ ಕಾಮನೆಯನ್ನು ಯಾವ ಪತಿಯು ತಾನೇ ಪೂರೈಸುವುದಿಲ್ಲ? ॥16॥
(ಶ್ಲೋಕ - 17)
ಮೂಲಮ್
ಸರ್ವಾಶ್ರಮಾನುಪಾದಾಯ ಸ್ವಾಶ್ರಮೇಣ ಕಲತ್ರವಾನ್ ।
ವ್ಯಸನಾರ್ಣವಮತ್ಯೇತಿ ಜಲಯಾನೈರ್ಯಥಾರ್ಣವಮ್ ॥
ಅನುವಾದ
ಮನುಷ್ಯನು ಹಡಗನ್ನು ಹತ್ತಿ ಸಮುದ್ರ ವನ್ನು ದಾಟುವಂತೆ ಗೃಹಸ್ಥಾಶ್ರಮಿಯು ಇತರ ಆಶ್ರಮಗಳಿಗೂ ಆಶ್ರಯ ನೀಡುತ್ತಾ ತನ್ನ ಪತ್ನಿಯಿಂದೊಡಗೂಡಿ ಆಶ್ರಮಧರ್ಮಗಳ ಮೂಲಕ ಸ್ವಯಂ ದುಃಖಸಾಗರವನ್ನು ದಾಟಿಬಿಡುವನು.॥17॥
(ಶ್ಲೋಕ - 18)
ಮೂಲಮ್
ಯಾಮಾಹುರಾತ್ಮನೋ ಹ್ಯರ್ಧಂ ಶ್ರೇಯಸ್ಕಾಮಸ್ಯ ಮಾನಿನಿ ।
ಯಸ್ಯಾಂ ಸ್ವಧುರಮಧ್ಯಸ್ಯ ಪುಮಾಂಶ್ಚರತಿ ವಿಜ್ವರಃ ॥
ಅನುವಾದ
ಎಲೈ ಮಾನಿನಿಯೇ ! ತ್ರಿವಿಧ ಪುರುಷಾರ್ಥದ ಬಯಕೆಯುಳ್ಳ ಪುರುಷನಿಗೆ ಪತ್ನಿಯು ಶರೀರದ ಅರ್ಧಭಾಗವೇ ಆಗಿದ್ದಾಳೆ ಎಂದು ಹೇಳಲಾಗಿದೆ. ಅವಳ ಮೇಲೆ ತನ್ನ ಆಶ್ರಮದ ಭಾರವನ್ನು ಇರಿಸಿ ಗೃಹಸ್ಥನು ನಿಶ್ಚಿಂತವಾಗಿ ಸಂಚರಿಸುತ್ತಾನೆ.॥18॥
(ಶ್ಲೋಕ - 19)
ಮೂಲಮ್
ಯಾಮಾಶ್ರಿತ್ಯೇಂದ್ರಿಯಾರಾತೀನ್ದುರ್ಜಯಾನಿತರಾಶ್ರಮೈಃ ।
ವಯಂ ಜಯೇಮ ಹೇಲಾಭಿರ್ದಸ್ಯೂನ್ದುರ್ಗಪತಿರ್ಯಥಾ ॥
ಅನುವಾದ
ಇತರ ಆಶ್ರಮಗಳಲ್ಲಿರುವವರಿಗೆ ಇಂದ್ರಿಯಗಳೆಂಬ ಶತ್ರು ವನ್ನು ಗೆಲ್ಲುವುದು ಕಷ್ಟ. ಆದರೆ ಕೋಟೆ-ಕೊತ್ತಲಗಳ ಆಶ್ರಯ ದಲ್ಲಿರುವ ದುರ್ಗಪತಿಯು ಲೂಟಿಮಾಡುವ ಕಳ್ಳ-ಕಾಕರನ್ನು ಸುಲಭವಾಗಿ ನಿಗ್ರಹಿಸುತ್ತಾನೆ. ಹಾಗೆಯೇ ನಾವು ಪತ್ನಿಯ ಆಶ್ರಯ ದಿಂದ ಈ ಇಂದ್ರಿಯಗಳೆಂಬ ಶತ್ರುಗಳನ್ನು ಸುಲಭವಾಗಿ ಗೆದ್ದುಕೊಳ್ಳುವೆವು.॥19॥
(ಶ್ಲೋಕ - 20)
ಮೂಲಮ್
ನ ವಯಂ ಪ್ರಭವಸ್ತಾಂ ತ್ವಾಮನುಕರ್ತುಂ ಗೃಹೇಶ್ವರಿ
ಅಪ್ಯಾಯುಷಾ ವಾ ಕಾರ್ತ್ಸ್ನ್ಯೇನ ಯೇ ಚಾನ್ಯೇ ಗುಣಗೃಧ್ನವಃ ॥ 20 ॥
ಅನುವಾದ
ಎಲೈ ಗೃಹೇಶ್ವರಿಯೇ ! ನಿನ್ನಂತಹ ಪತ್ನಿ ಯರು ಮಾಡುವ ಉಪಕಾರವನ್ನು ನಾನಾಗಲೀ ಅಥವಾ ಇತರ ಯಾರೇ ಗುಣಗ್ರಾಹೀ ಪುರುಷನಾಗಲೀ ತನ್ನ ಇಡೀ ಆಯುಷ್ಯದಲ್ಲಿ ಅಥವಾ ಜನ್ಮಾಂತರದಲ್ಲಿಯೂ ಪೂರ್ಣವಾಗಿ ತೀರಿಸಲಾರನು.॥20॥
(ಶ್ಲೋಕ - 21)
ಮೂಲಮ್
ಅಥಾಪಿ ಕಾಮಮೇತಂ ತೇ ಪ್ರಜಾತ್ಯೈ ಕರವಾಣ್ಯಲಮ್ ।
ಯಥಾ ಮಾಂ ನಾತಿವೋಚಂತಿ ಮುಹೂರ್ತಂ ಪ್ರತಿಪಾಲಯ ॥
ಅನುವಾದ
ಆದರೂ ಸಂತಾನವನ್ನು ಪಡೆಯಬೇಕೆಂಬ ನಿನ್ನ ಇಚ್ಛೆ ಯನ್ನು ನಾನು ಅವಶ್ಯವಾಗಿ ಈಡೇರಿಸುವೆನು. ಆದರೆ ನೀನು ಮುಹೂರ್ತಕಾಲ ಕಾಯಬೇಕು. ಹೀಗಾದರೆ ನಾನು ಲೋಕ ನಿಂದೆಗೆ ಗುರಿಯಾಗುವುದಿಲ್ಲ.॥21॥
(ಶ್ಲೋಕ - 22)
ಮೂಲಮ್
ಏಷಾ ಘೋರತಮಾ ವೇಲಾ ಘೋರಾಣಾಂ ಘೋರದರ್ಶನಾ ।
ಚರಂತಿ ಯಸ್ಯಾಂ ಭೂತಾನಿ ಭೂತೇಶಾನುಚರಾಣಿ ಹ ॥ 22 ॥
ಅನುವಾದ
ಈ ಸಂಧ್ಯಾಸಮಯವು ಅತ್ಯಂತ ಘೋರವಾದಕಾಲ. ರಾಕ್ಷಸಾದಿ ಘೋರಜೀವಿಗಳು ವಿಹ ರಿಸುವ ಕಾಲವು. ಇದು ಭಗವಾನ್ ಭೂತನಾಥನ ಗಣಗಳಾದ ಭೂತಭೇತಾಳಾದಿಗಳು ಓಡಾಡುತ್ತಿರುವ ಭೀಕರವಾದ ಸಮಯ.॥22॥
(ಶ್ಲೋಕ - 23)
ಮೂಲಮ್
ಏತಸ್ಯಾಂ ಸಾಧ್ವಿ ಸಂಧ್ಯಾಯಾಂ ಭಗವಾನ್ಭೂತಭಾವನಃ ।
ಪರೀತೋ ಭೂತಪರ್ಷದ್ಭಿರ್ವೃಷೇಣಾಟತಿ ಭೂತರಾಟ್ ॥ 23 ॥
ಅನುವಾದ
ಎಲೈ ಸಾಧ್ವಿಯೇ! ಈ ಸಂಧ್ಯಾಕಾಲದಲ್ಲಿ ಭಗವಾನ್ ಭೂತಪತಿಯಾದ ರುದ್ರದೇವರು ವೃಷಭವನ್ನೇರಿ ತನ್ನ ಗಣ ಗಳೊಡನೆ ಸಂಚರಿಸುತ್ತಾ ಇರುತ್ತಾನೆ.॥23॥
ಮೂಲಮ್
(ಶ್ಲೋಕ - 24)
ಶ್ಮಶಾನಚಕ್ರಾನಿಲಧೂಲಿಧೂಮ್ರ-
ವಿಕೀರ್ಣವಿದ್ಯೋತಜಟಾಕಲಾಪಃ ।
ಭಸ್ಮಾವಗುಂಠಾಮಲರುಕ್ಮದೇಹೋ
ದೇವಸಿ ಭಿಃ ಪಶ್ಯತಿ ದೇವರಸ್ತೇ ॥ 24 ॥
ಅನುವಾದ
ಆತನ ಜಡೆಗಳು ಸ್ಮಶಾನದಲ್ಲಿ ಬೀಸುವ ಬಿರುಗಾಳಿಯಿಂದ ಕೆದರಿ ಧೂಳಿನಿಂದ ಧೂಸರಿತವಾಗಿವೆ. ಅವನು ಬಂಗಾರದಂತೆ ಹೊಳೆಯುತ್ತಿರುವ ತನ್ನ ದೇಹಕ್ಕೆಲ್ಲಾ ವಿಭೂತಿಯನ್ನು ಹಚ್ಚಿಕೊಂಡಿರುವನು. ಇಂತಹ ಪೂಜ್ಯನಾದ ಸತೀರಮಣನಾದ ನಿನ್ನ ಭಾವನು ತನ್ನ ಸೂರ್ಯ, ಚಂದ್ರ, ಅಗ್ನಿ ಎಂಬ ಮೂರು ಕಣ್ಣುಗಳಿಂದ ಎಲ್ಲರನ್ನೂ ನೋಡುತ್ತಿರುತ್ತಾನೆ.॥24॥
(ಶ್ಲೋಕ - 25)
ಮೂಲಮ್
ನ ಯಸ್ಯ ಲೋಕೇ ಸ್ವಜನಃ ಪರೋ ವಾ
ನಾತ್ಯಾದೃತೋ ನೋತ ಕಶ್ಚಿದ್ವಿಗರ್ಹ್ಯಃ ।
ವಯಂ ವ್ರತೈರ್ಯಚ್ಚರಣಾಪವಿದ್ಧಾ-
ಮಾಶಾಸ್ಮಹೇಜಾಂ ಬತ ಭುಕ್ತಭೋಗಾಮ್ ॥
ಅನುವಾದ
ಅವನಿಗೆ ಪ್ರಪಂಚದಲ್ಲಿ ಯಾರೂ ತನ್ನವರು- ಬೇರೆಯವರು, ಬೇಕಾದವರು-ಬೇಡವಾದವರು, ಆದರಣೀಯರು-ನಿಂದನೀಯರು ಎಂಬ ಭೇದವಿಲ್ಲ. ನಾವಾದರೋ ಅನೇಕ ವ್ರತಗಳನ್ನು ಆಚರಿಸುತ್ತಾ, ಆತನು ಭೋಗಿಸಿ ಕಾಲಿನಿಂದ ಒದ್ದು ತಳ್ಳಿರುವ ಮಾಯೆಯನ್ನೇ ಸ್ವೀಕರಿಸಲು ಬಯಸುತ್ತಿರುವವರು.॥25॥
(ಶ್ಲೋಕ - 26)
ಮೂಲಮ್
ಯಸ್ಯಾನವದ್ಯಾಚರಿತಂ ಮನೀಷಿಣೋ
ಗೃಣಂತ್ಯವಿದ್ಯಾಪಟಲಂ ಬಿಭಿತ್ಸವಃ ।
ನಿರಸ್ತ ಸಾಮ್ಯಾತಿಶಯೋಪಿ ಯತ್ಸ್ವಯಂ
ಪಿಶಾಚಚರ್ಯಾಮಚರದ್ಗತಿಃ ಸತಾಮ್ ॥
ಅನುವಾದ
ವಿವೇಕಿಗಳಾದ ಜನರು ಅವಿದ್ಯೆಯ ಆವರಣ ವನ್ನು ಭೇದಿಸುವ ಇಚ್ಛೆಯಿಂದ ಅವನ ನಿರ್ಮಲವಾದ ಚರಿತ್ರವನ್ನು ಹಾಡುತ್ತಿರುತ್ತಾರೆ. ಅವನಿಗಿಂತ ಮಿಗಿಲಾದವರಿರಲಿ, ಅವನಿಗೆ ಸಮಾನರಾದವರೂ ಯಾರೂ ಇಲ್ಲ. ಸತ್ಪುರುಷರು ಮಾತ್ರವೇ ಆತ ನನ್ನು ತಲುಪಬಲ್ಲರು. ಇಷ್ಟೆಲ್ಲ ಇದ್ದರೂ ಅವನು ಪಿಶಾಚದಂತೆ ಆಚರಣೆಯನ್ನು ತೋರುತ್ತಾನೆ. ಇದು ಲೋಕವಿಡಂಬನೆಗಾಗಿಯೇ ಇದೆ. ॥ 26 ॥
(ಶ್ಲೋಕ - 27)
ಮೂಲಮ್
ಹಸಂತಿ ಯಸ್ಯಾಚರಿತಂ ಹಿ ದುರ್ಭಗಾಃ
ಸ್ವಾತ್ಮನ್ರತಸ್ಯಾವಿದುಷಃ ಸಮೀಹಿತಮ್ ।
ಯೈರ್ವಸಮಾಲ್ಯಾಭರಣಾನುಲೇಪನೈಃ
ಶ್ವಭೋಜನಂ ಸ್ವಾತ್ಮತಯೋಪಲಾಲಿತಮ್ ॥
ಅನುವಾದ
ಈ ಶರೀರವು ನರಿ-ನಾಯಿಗಳ ಆಹಾರವಾಗು ವುದು. ಅವಿವೇಕಿಗಳು ಇದನ್ನೇ ಆತ್ಮವೆಂದು ಭ್ರಮಿಸಿ ಇದನ್ನು ವಸ, ಒಡವೆ, ಗಂಧ, ಮಾಲೆ ಇವುಗಳಿಂದ ಅಲಂಕರಿಸುತ್ತಿರುತ್ತಾರೆ. ಇಂತಹ ದುರದೃಷ್ಟಶಾಲಿಗಳು ಆತ್ಮಾರಾಮನಾಗಿರುವ ಭಗವಾನ್ ಶಂಕರನ ಆಚರಣೆಗಳಿಗೆ ನಗುತ್ತಿರುತ್ತಾರೆ.॥27॥
(ಶ್ಲೋಕ - 28)
ಮೂಲಮ್
ಬ್ರಹ್ಮಾದಯೋ ಯತ್ಕೃತಸೇತುಪಾಲಾ
ಯತ್ಕಾರಣಂ ವಿಶ್ವಮಿದಂ ಚ ಮಾಯಾ ।
ಆಜ್ಞಾಕರೀ ತಸ್ಯ ಪಿಶಾಚಚರ್ಯಾ
ಅಹೋ ವಿಭೂಮ್ನಶ್ಚರಿತಂ ವಿಡಂಬನಮ್ ॥
ಅನುವಾದ
ನಮ್ಮ ವಿಷಯ ಹಾಗಿರಲಿ. ಬ್ರಹ್ಮಾದಿ ಲೋಕಪಾಲರೂ ಕೂಡ ಆತನು ಕಟ್ಟಿರುವ, ನಿರ್ದೇಶಿಸಿರುವ ಧರ್ಮಮರ್ಯಾದೆಯನ್ನೇ ಅನುಸರಿಸುತ್ತಾರೆ. ಅವನೇ ಈ ವಿಶ್ವದ ಅಧಿಷ್ಠಾನನಾಗಿದ್ದಾನೆ. ಈ ಮಾಯೆಯೂ ಅವನ ಆಜ್ಞೆಯನ್ನು ಪಾಲಿಸುವಳು. ಹೀಗಿದ್ದರೂ ಆತನು ಪ್ರೇತ ಗಳಂತೆ ನಡೆದುಕೊಳ್ಳುತ್ತಾನೆ. ಅಬ್ಬಾ ! ಎಂತಹ ಅದ್ಭುತ ಲೀಲೆ ಯಿದು ! ಜಗದ್ವ್ಯಾಪಕನಾದ ಪ್ರಭುವು ಮಾಡುತ್ತಿರುವ ಈ ಲೀಲೆ ಗಳು ಸ್ವಲ್ಪವೂ ಅರ್ಥವಾಗುವುದಿಲ್ಲ.॥28॥
(ಶ್ಲೋಕ - 29)
ಮೂಲಮ್ (ವಾಚನಮ್)
ಮೈತ್ರೇಯ ಉವಾಚ
ಮೂಲಮ್
ಸೈವಂ ಸಂವಿದಿತೇ ಭರ್ತ್ರಾ ಮನ್ಮಥೋನ್ಮಥಿತೇಂದ್ರಿಯಾ ।
ಜಗ್ರಾಹ ವಾಸೋ ಬ್ರಹ್ಮರ್ಷೇರ್ವೃಷಲೀವ ಗತತ್ರಪಾ ॥
ಅನುವಾದ
ಶ್ರೀಮೈತ್ರೇಯರು ಹೇಳುತ್ತಾರೆ ವಿದುರನೇ ! ಪತಿಯು ಈ ಪ್ರಕಾರ ತಿಳಿವಳಿಕೆ ನೀಡಿದರೂ ಕಾಮಾತುರಳಾದ ದಿತಿಯು ವೇಶ್ಯೆ ಯಂತೆ ನಾಚಿಕೆಬಿಟ್ಟು ಬ್ರಹ್ಮರ್ಷಿ ಕಶ್ಯಪರ ವಸವನ್ನು ಹಿಡಿದುಕೊಂಡಳು.॥29॥
(ಶ್ಲೋಕ - 30)
ಮೂಲಮ್
ಸ ವಿದಿತ್ವಾಥ ಭಾರ್ಯಾಯಾಸ್ತಂ ನಿರ್ಬಂಧಂ ವಿಕರ್ಮಣಿ ।
ನತ್ವಾ ದಿಷ್ಟಾಯ ರಹಸಿ ತಯಾಥೋಪವಿವೇಶ ಹ ॥
ಅನುವಾದ
ಆಗ ಕಶ್ಯಪರು ಭಾರ್ಯೆಯ ನಿಂದಿತವಾದ ಕರ್ಮದಲ್ಲಿರುವ ಆಗ್ರಹವನ್ನು ಕಂಡು ‘ದೈವೇಚ್ಛೆ ಇದ್ದಂತಾಗಲಿ’ ಎಂದು ದೈವಕ್ಕೆ ಕೈಮುಗಿದು ಏಕಾಂತದಲ್ಲಿ ಆಕೆಯೊಡನೆ ಸಮಾಗಮ ಮಾಡಿದರು.॥30॥
ಮೂಲಮ್
(ಶ್ಲೋಕ - 31)
ಅಥೋಪಸ್ಪೃಶ್ಯ ಸಲಿಲಂ ಪ್ರಾಣಾನಾಯಮ್ಯ ವಾಗ್ಯತಃ ।
ಧ್ಯಾಯನ್ಜಜಾಪ ವಿರಜಂ ಬ್ರಹ್ಮ ಜ್ಯೋತಿಃ ಸನಾತನಮ್ ॥
ಅನುವಾದ
ಅನಂತರ ಸ್ನಾನ ಮಾಡಿ ವೌನಿಯಾಗಿ, ಪ್ರಾಣಾಯಾಮಮಾಡಿ ಪರಿಶುದ್ಧವೂ, ಜ್ಯೋತಿರ್ಮ ಯವೂ, ಸನಾತನವೂ ಆದ ಪರಬ್ರಹ್ಮವನ್ನು ಧ್ಯಾನಿಸುತ್ತಾ, ಅವನನ್ನೇ ಕುರಿತು ಜಪ ಮಾಡತೊಡಗಿದರು.॥31॥
(ಶ್ಲೋಕ - 32)
ಮೂಲಮ್
ದಿತಿಸ್ತು ವ್ರೀಡಿತಾ ತೇನ ಕರ್ಮಾವದ್ಯೇನ ಭಾರತ ।
ಉಪಸಂಗಮ್ಯ ವಿಪ್ರರ್ಷಿಮಧೋಮುಖ್ಯಭ್ಯಭಾಷತ ॥
ಅನುವಾದ
ವಿದುರನೇ ! ದಿತಿಗೂ ತಾನು ಮಾಡಿದ ನಿಂದ್ಯವಾದ ಕರ್ಮದ ಬಗ್ಗೆ ತುಂಬಾ ನಾಚಿಕೆಯಾಗಿ, ಆಕೆಯು ಬ್ರಹ್ಮರ್ಷಿಯ ಬಳಿಗೆ ಬಂದು ತಲೆತಗ್ಗಿಸಿ ಕೊಂಡು ಹೀಗೆ ಹೇಳತೊಡಗಿದಳು. ॥ 32 ॥
(ಶ್ಲೋಕ - 33)
ಮೂಲಮ್ (ವಾಚನಮ್)
ದಿತಿರುವಾಚ
ಮೂಲಮ್
ಮಾ ಮೇ ಗರ್ಭಮಿದಂ ಬ್ರಹ್ಮನ್ಭೂತಾನಾಮೃಷಭೋ ವಧೀತ್ ।
ರುದ್ರಃ ಪತಿರ್ಹಿ ಭೂತಾನಾಂ ಯಸ್ಯಾಕರವಮಂಹಸಮ್ ॥
ಅನುವಾದ
ದಿತಿಯು ಹೇಳುತ್ತಾಳೆ ಓ ಬ್ರಹ್ಮರ್ಷಿಯೇ ! ಭಗವಾನ್ ರುದ್ರನು ಭೂತಗಳ ಸ್ವಾಮಿಯು. ಆತನ ಕುರಿತು ನಾನು ಅಪರಾಧ ವನ್ನೆಸಗಿದ್ದೇನೆ. ಆದರೂ ಆ ಭೂತಶ್ರೇಷ್ಠನಾದ ದೇವನು ನನ್ನ ಗರ್ಭವನ್ನು ನಾಶಮಾಡದಿರಲಿ. ॥ 33 ॥
(ಶ್ಲೋಕ - 34)
ಮೂಲಮ್
ನಮೋ ರುದ್ರಾಯ ಮಹತೇ ದೇವಾಯೋಗ್ರಾಯ ಮೀಢುಷೇ ।
ಶಿವಾಯ ನ್ಯಸ್ತದಂಡಾಯ ಧೃತದಂಡಾಯ ಮನ್ಯವೇ ॥
ಅನುವಾದ
ಮಹಾದೇವನಾದ ರುದ್ರನಿಗೆ ನಮಸ್ಕಾರವು. ಉಗ್ರನಾಗಿದ್ದರೂ ಭಕ್ತರ ಇಷ್ಟಾರ್ಥ ಗಳನ್ನು ಈಡೇರಿಸುವ ಶಿವನಿಗೆ ನಮಸ್ಕಾರವು. ಸತ್ಪುರುಷರ ವಿಷಯದಲ್ಲಿ ದಂಡವನ್ನು ಬಳಸದೆ, ದುಷ್ಟರ ವಿಷಯದಲ್ಲಿಯೇ ದಂಡಪಾಣಿಯಾದ ಕ್ರೋಧಮೂರ್ತಿಗೆ ನಮೋ ನಮಃ ॥ 34 ॥
(ಶ್ಲೋಕ - 35)
ಮೂಲಮ್
ಸ ನಃ ಪ್ರಸೀದತಾಂ ಭಾಮೋ ಭಗವಾನುರ್ವನುಗ್ರಹಃ ।
ವ್ಯಾಧಸ್ಯಾಪ್ಯನುಕಂಪ್ಯಾನಾಂ ಸೀಣಾಂ ದೇವಃ ಸತೀಪತಿಃ ॥
ಅನುವಾದ
ಹೆಂಗಸರಾದ ನಮ್ಮ ಮೇಲಾದರೋ ಪ್ರಾಣಿಹಿಂಸೆಮಾಡುವ ಬೇಡರೂ ಕೂಡ ದಯೆ ತೋರಿಸುವರು. ಹೀಗಿರುವಾಗ ಪರಮ ಕರುಣಾಳುವೂ, ಸತೀಪತಿಯೂ ನನಗೆ ಭಾವನೂ ಆಗಿರುವ ಶಂಕರನು ನನ್ನ ಮೇಲೆ ಪ್ರಸನ್ನನಾಗಲೀ. ॥ 35 ॥
(ಶ್ಲೋಕ - 36)
ಮೂಲಮ್ (ವಾಚನಮ್)
ಮೈತ್ರೇಯ ಉವಾಚ
ಮೂಲಮ್
ಸ್ವಸರ್ಗಸ್ಯಾಶಿಷಂ ಲೋಕ್ಯಾಮಾಶಾಸಾನಾಂ ಪ್ರವೇಪತೀಮ್ ।
ನಿವೃತ್ತಸಂಧ್ಯಾನಿಯಮೋ ಭಾರ್ಯಾಮಾಹ ಪ್ರಜಾಪತಿಃ ॥
ಅನುವಾದ
ಶ್ರೀಮೈತ್ರೇಯರು ಹೇಳಿದರು ಎಲೈ ವಿದುರನೇ ! ಪ್ರಜಾಪತಿ ಕಶ್ಯಪರು ಸಾಯಂ ಸಂಧ್ಯಾವಂದನಾದಿಗಳನ್ನು ಮುಗಿಸಿ ಕೊಂಡು ದಿತಿಯನ್ನು ಗಮನಿಸಿದರು. ಆಕೆಯು ಗಡ-ಗಡನೆ ನಡು ಗುತ್ತಾ ತನ್ನ ಸಂತಾನದ ಲೌಕಿಕ ಮತ್ತು ಪಾರಲೌಕಿಕ ಉನ್ನತಿಗಾಗಿ ಪ್ರಾರ್ಥಿಸುತ್ತಿದ್ದಳು. ಆಗ ಕಶ್ಯಪರು ಅವಳಿಗೆ ಹೇಳಿದರು ॥ 36 ॥
(ಶ್ಲೋಕ - 37)
ಮೂಲಮ್ (ವಾಚನಮ್)
ಕಶ್ಯಪ ಉವಾಚ
ಮೂಲಮ್
ಅಪ್ರಾಯತ್ಯಾದಾತ್ಮನಸ್ತೇ ದೋಷಾನ್ಮೌಹೂರ್ತಿಕಾದುತ ।
ಮನ್ನಿದೇಶಾತಿಚಾರೇಣ ದೇವಾನಾಂ ಚಾತಿಹೇಲನಾತ್ ॥
ಅನುವಾದ
ಕಶ್ಯಪರು ಇಂತೆಂದರು ‘ನಿನ್ನ ಚಿತ್ತವು ದುಷ್ಟಕಾಮದಿಂದ ಕಲುಷಿತವಾಗಿತ್ತು. ನೀನು ಸಮಾಗಮ ಮಾಡಿದ ಸಮಯವೂ ಅಶುಭವಾಗಿತ್ತು. ನೀನು ನನ್ನ ಮಾತನ್ನೂ ಗೌರವಿಸಲಿಲ್ಲ. ದೇವತೆಗಳಿಗೂ ಅಪಚಾರವೆಸಗಿದೆ. ॥ 37 ॥
(ಶ್ಲೋಕ - 38)
ಮೂಲಮ್
ಭವಿಷ್ಯತಸ್ತವಾಭದ್ರಾವಭದ್ರೇ ಜಾಠರಾಧವೌ ।
ಲೋಕಾನ್ಸಪಾಲಾಂಸೀಂಶ್ಚಂಡಿ ಮುಹುರಾಕ್ರಂದಯಿಷ್ಯತಃ ॥
ಅನುವಾದ
ಎಲೈ ಅಮಂಗಳ ವಾದ ಚಂಡಿಯೇ ! ನಿನ್ನ ಗರ್ಭದಿಂದ ಅಮಂಗಳರೂ, ಅಧ ಮರೂ ಆದ ಇಬ್ಬರು ಪುತ್ರರು ಹುಟ್ಟುವರು. ಅವರು ತಮ್ಮ ಅತ್ಯಾಚಾರದಿಂದ ಸಮಸ್ತ ಲೋಕವನ್ನೂ, ಲೋಕಪಾಲಕರನ್ನೂ ಪದೇ-ಪದೇ ಅಳುವಂತೆ ಮಾಡುವರು. ॥ 38 ॥
(ಶ್ಲೋಕ - 39)
ಮೂಲಮ್
ಪ್ರಾಣಿನಾಂ ಹನ್ಯಮಾನಾನಾಂ ದೀನಾನಾಮಕೃತಾಗಸಾಮ್ ।
ಸೀಣಾಂ ನಿಗೃಹ್ಯಮಾಣಾನಾಂ ಕೋಪಿತೇಷು ಮಹಾತ್ಮಸು ॥
(ಶ್ಲೋಕ - 40)
ಮೂಲಮ್
ತದಾ ವಿಶ್ವೇಶ್ವರಃ ಕ್ರುದ್ಧೋ ಭಗವಾಲ್ಲೋಕಭಾವನಃ ।
ಹನಿಷ್ಯತ್ಯವತೀರ್ಯಾಸೌ ಯಥಾದ್ರೀನ್ ಶತಪರ್ವಧೃಕ್ ॥
ಅನುವಾದ
ಅವರ ಕೈಯಿಂದ ನೂರಾರು ನಿರಪರಾಧಿಗಳೂ, ದೀನರೂ ಆದ ಪ್ರಾಣಿ ಗಳು ಕೊಲ್ಲಲ್ಪಡುವುವು. ಸೀಯರ ಮೇಲೆ ಅತ್ಯಾಚಾರ ನಡೆ ಯುವುದು. ಮಹಾತ್ಮರನ್ನು ಕ್ಷುಬ್ಧಗೊಳಿಸಲಾಗುವುದು. ಆಗ ಸರ್ವ ಲೋಕರಕ್ಷಕ ನಾದ ಜಗದೀಶ್ವರನು ಕ್ರುದ್ಧನಾಗಿ ಭುವಿಯಲ್ಲಿ ಅವತರಿಸಿ ಇಂದ್ರನು ಪರ್ವತಗಳನ್ನು ನಿಗ್ರಹಿಸಿದಂತೆ ಅವರನ್ನು ವಧಿಸುವನು. ॥ 39-40 ॥
ಮೂಲಮ್
(ಶ್ಲೋಕ - 41)
ಮೂಲಮ್ (ವಾಚನಮ್)
ದಿತಿರುವಾಚ
ಮೂಲಮ್
ವಧಂ ಭಗವತಾ ಸಾಕ್ಷಾತ್ಸುನಾಭೋದಾರಬಾಹುನಾ ।
ಆಶಾಸೇ ಪುತ್ರಯೋರ್ಮಹ್ಯಂ ಮಾ ಕ್ರದ್ಧಾದ್ಬ್ರಾಹ್ಮಣಾದ್ವಿಭೋ ॥
ಅನುವಾದ
ದಿತಿಯು ಪ್ರಾರ್ಥಿಸಿಕೊಂಡಳು ಸ್ವಾಮಿ ! ನನ್ನ ಪುತ್ರರು ಕುಪಿತರಾದ ಬ್ರಾಹ್ಮಣರ ಶಾಪದಿಂದ ಸಾಯದೇ, ಭಗವಾನ್ ಸಾಕ್ಷಾತ್ ಚಕ್ರಪಾಣಿ ನಾರಾಯಣನ ಕೈಯಿಂದಲೇ ಮರಣ ಹೊಂದುವುದಾದರೆ ನನಗೂ ಸಮ್ಮತವೇ. ॥ 41 ॥
(ಶ್ಲೋಕ - 42)
ಮೂಲಮ್
ನ ಬ್ರಹ್ಮದಂಡದಗ್ಧಸ್ಯ ನ ಭೂತಭಯದಸ್ಯ ಚ ।
ನಾರಕಾಶ್ಚಾನುಗೃಹ್ಣಂತಿ ಯಾಂ ಯಾಂ ಯೋನಿಮಸೌ ಗತಃ ॥
ಅನುವಾದ
ಯಾವ ಜೀವಿಯು ಬ್ರಾಹ್ಮಣರ ಶಾಪದಿಂದ ಸುಟ್ಟುಹೋದವನು ಅಥವಾ ಪ್ರಾಣಿಗಳನ್ನು ಭಯಪಡಿಸುವವನು ಯಾವುದೇ ಯೋನಿಯಲ್ಲಿ ಹುಟ್ಟಿದರೂ ಅವನ ಮೇಲೆ ನಾರಕೀಯ ಜೀವಿಗಳೂ ಕೂಡ ದಯಮಾಡುವುದಿಲ್ಲ. ॥ 42 ॥
(ಶ್ಲೋಕ - 43)
ಮೂಲಮ್ (ವಾಚನಮ್)
ಕಶ್ಯಪ ಉವಾಚ
ಮೂಲಮ್
ಕೃತಶೋಕಾನುತಾಪೇನ ಸದ್ಯಃ ಪ್ರತ್ಯವಮರ್ಶನಾತ್ ।
ಭಗವತ್ಯುರುಮಾನಾಚ್ಚ ಭವೇ ಮಯ್ಯಪಿ ಚಾದರಾತ್ ॥
(ಶ್ಲೋಕ - 44)
ಮೂಲಮ್
ಪುತ್ರಸ್ಯೈವ ತು ಪುತ್ರಾಣಾಂ ಭವಿತೈಕಃ ಸತಾಂ ಮತಃ ।
ಗಾಸ್ಯಂತಿ ಯದ್ಯಶಃ ಶುದ್ಧಂ ಭಗವದ್ಯಶಸಾ ಸಮಮ್ ॥
ಅನುವಾದ
ಕಶ್ಯಪರು ಹೇಳಿದರು ದೇವಿ ! ನೀನು ಗೈದ ಪಾಪದ ಬಗೆಗೆ ಶೋಕವನ್ನೂ, ಪಶ್ಚಾತ್ತಾಪವನ್ನೂ ತೋರಿದ್ದೀಯೆ. ನಿನಗೆ ಉಚಿತ- ಅನುಚಿತ ಇದರ ವಿವೇಕವು ಒಡನೆಯೇ ಉಂಟಾಗಿದೆ. ಇದಲ್ಲದೆ ಭಗವಂತನಾದ ವಿಷ್ಣುವಿನಲ್ಲಿಯೂ, ಶಂಭುವಿನಲ್ಲಿಯೂ ಗೌರವ ವನ್ನೂ, ನನ್ನಲ್ಲಿ ಆದರವನ್ನೂ ತೋರಿಸಿರುವೆ. ಆದ್ದರಿಂದ ನಿನ್ನಲ್ಲಿ ಹುಟ್ಟುವ ಇಬ್ಬರು ಪುತ್ರರಲ್ಲಿ ಒಬ್ಬನಿಗೆ ನಾಲ್ವರು ಪುತ್ರರಾಗುವರು. ಅವರಲ್ಲಿ ಒಬ್ಬನು ಮಾತ್ರ ಸಾಧು-ಸಜ್ಜನ ಶಿರೋಮಣಿ ಯಾಗುವನು. ಸತ್ಪುರುಷರ ಗೌರವಕ್ಕೆ ಪಾತ್ರನಾಗಿ, ಆತನ ಪವಿತ್ರವಾದ ಕೀರ್ತಿಯನ್ನು ಭಕ್ತರು ಭಗವಂತನ ಗುಣ ಕೀರ್ತನೆಯೊಡನೆ ಸೇರಿಸಿ ಹಾಡುವರು. ॥ 43-44 ॥
(ಶ್ಲೋಕ - 45)
ಮೂಲಮ್
ಯೋಗೈರ್ಹೇಮೇವ ದುರ್ವರ್ಣಂ ಭಾವಯಿಷ್ಯಂತಿ ಸಾಧವಃ ।
ನಿರ್ವೈರಾದಿಭಿರಾತ್ಮಾನಂ ಯಚ್ಛೀಲಮನುವರ್ತಿತುಮ್ ॥
ಅನುವಾದ
ಬಣ್ಣಗೆಟ್ಟ ಚಿನ್ನವನ್ನು ಪದೇ-ಪದೇ ಪುಟಕ್ಕಿಟ್ಟು ಶುದ್ಧಗೊಳಿಸಿದಂತೆಯೇ, ಸಜ್ಜನರು ಆತನ ಆಚರಣೆಗಳನ್ನು ಅನುಸರಿಸುವುದಕ್ಕಾಗಿ ನಿರ್ವೈ ರತೆ ಮುಂತಾದ ಉಪಾಯಗಳಿಂದ ತಮ್ಮ ಅಂತಃಕರಣವನ್ನು ಶೋಧಿಸಿಕೊಳ್ಳುವರು. ॥ 45 ॥
(ಶ್ಲೋಕ - 46)
ಮೂಲಮ್
ಯತ್ಪ್ರಸಾದಾದಿದಂ ವಿಶ್ವಂ ಪ್ರಸೀದತಿ ಯದಾತ್ಮಕಮ್ ।
ಸ ಸ್ವದೃಗ್ಭಗವಾನ್ಯಸ್ಯ ತೋಷ್ಯತೇನನ್ಯಯಾ ದೃಶಾ ॥
ಅನುವಾದ
ಯಾರ ಕೃಪೆಯಿಂದ ಅವನ ಸ್ವರೂಪಭೂತವಾದ ಈ ಜಗತ್ತು ಆನಂದಿತವಾಗುತ್ತದೋ ಆ ಸ್ವಯಂ ಪ್ರಕಾಶ ಭಗವಂತನೂ ಕೂಡ ಆತನ ಅನನ್ಯ ಭಕ್ತಿಯಿಂದ ಸಂತುಷ್ಟನಾಗುವನು. ॥ 46 ॥
(ಶ್ಲೋಕ - 47)
ಮೂಲಮ್
ಸ ವೈ ಮಹಾಭಾಗವತೋ ಮಹಾತ್ಮಾ
ಮಹಾನುಭಾವೋ ಮಹತಾಂ ಮಹಿಷ್ಠಃ ।
ಪ್ರವೃದ್ಧಭಕ್ತ್ಯಾ ಹ್ಯನುಭಾವಿತಾಶಯೇ
ನಿವೇಶ್ಯ ವೈಕುಂಠಮಿಮಂ ವಿಹಾಸ್ಯತಿ ॥
ಅನುವಾದ
ದಿತಿಯೇ ! ಆ ಬಾಲಕನು ದೊಡ್ಡ ಭಗವದ್ಭಕ್ತನೂ, ಉದಾರ ಹೃದಯನೂ, ಪ್ರಭಾವಶಾಲಿಯೂ, ಮಹಾಪುರುಷರಿಗೂ ಪೂಜ್ಯನೂ ಆಗುವನು. ಪ್ರೌಢವಾದ ಭಕ್ತಿ ಭಾವದಿಂದ ವಿಶುದ್ಧ ಮತ್ತು ಭಗವದ್ಭಾವದಿಂದ ತುಂಬಿದ ಅಂತಃ ಕರಣದಲ್ಲಿ ಶ್ರೀಭಗವಂತನನ್ನು ನೆಲೆಗೊಳಿಸಿಕೊಂಡು ದೇಹಾಭಿ ಮಾನವನ್ನು ತ್ಯಜಿಸುವನು. ॥ 47 ॥
(ಶ್ಲೋಕ - 48)
ಮೂಲಮ್
ಅಲಂಪಟಃ ಶೀಲಧರೋ ಗುಣಾಕರೋ
ಹೃಷ್ಟಃ ಪರರ್ಧ್ಯಾ ವ್ಯಥಿತೋ ದುಃಖಿತೇಷು ।
ಆಭೂತಶತ್ರುರ್ಜಗತಃ ಶೋಕಹರ್ತಾ
ನೈದಾಘಿಕಂ ತಾಪಮಿವೋಡುರಾಜಃ ॥
ಅನುವಾದ
ಅವನು ವಿಷಯಗಳಲ್ಲಿ ಅಲಂಪಟನೂ, ಗುಣಶೀಲ ಸಂಪ ನ್ನನೂ, ಗುಣಗಳ ಗಣಿಯೂ, ಮತ್ತೊಬ್ಬರ ಸಮೃದ್ಧಿಯಲ್ಲಿ ಸುಖಿಯೂ, ದುಃಖದಲ್ಲಿ ದುಃಖಿಯೂ ಆಗುವನು. ಅವನಿಗೆ ಯಾರೂ ಶತ್ರುಗಳೇ ಇರುವುದಿಲ್ಲ. ಚಂದ್ರನು ಬೇಸಿಗೆಯ ತಾಪವನ್ನು ಕಳೆಯು ವಂತೆ ಆತನು ಜಗತ್ತಿನ ಶೋಕವನ್ನು ಹೋಗಲಾಡಿಸುವನು. ॥ 48 ॥
(ಶ್ಲೋಕ - 49)
ಮೂಲಮ್
ಅಂತರ್ಬಹಿಶ್ಚಾಮಲಮಬ್ಜನೇತ್ರಂ
ಸ್ವಪೂರುಷೇಚ್ಛಾನುಗೃಹೀತರೂಪಮ್ ।
ಪೌತ್ರಸ್ತವ ಶ್ರೀಲಲನಾಲಲಾಮಂ
ದ್ರಷ್ಟಾ ಸ್ಫುರತ್ಕುಂಡಲಮಂಡಿತಾನನಮ್ ॥
ಅನುವಾದ
ಯಾರು ಈ ಪ್ರಪಂಚದ ಒಳ-ಹೊರಗೆ ಎಲ್ಲೆಡೆ ವಿರಾಜಮಾನನಾಗಿದ್ದಾನೋ, ತಮ್ಮ ಭಕ್ತರ ಬಯಕೆಗೆ ತಕ್ಕಂತೆ ಆಗಾಗ ತನ್ನ ಮಂಗಳವಿಗ್ರಹವನ್ನು ಪ್ರಕಟಪಡಿಸುವನೋ, ಥಳ-ಥಳಿಸುತ್ತಿರುವ ಕುಂಡಲಗಳಿಂದ ಶೋಭಿಸುವ ಮುಖಮಂಡಲದಿಂದ ಕಂಗೊಳಿಸು ತ್ತಿದ್ದಾನೆಯೋ, ಅಂತಹ ಶ್ರೀಲಕ್ಷ್ಮೀದೇವಿಗೂ ಸಮೃದ್ಧಿಯನ್ನು ತುಂಬುತ್ತಿರುವ ಕಮಲಾಕ್ಷನಾದ ಶ್ರೀಹರಿಯನ್ನು ನಿನ್ನ ಮೊಮ್ಮಗನು ಪ್ರತ್ಯಕ್ಷವಾಗಿ ದರ್ಶಿಸುವನು. ॥ 49 ॥
(ಶ್ಲೋಕ - 50)
ಮೂಲಮ್
ಮೈತ್ರೇಯ ಉವಾಚ
ಶ್ರುತ್ವಾ ಭಾಗವತಂ ಪೌತ್ರಮಮೋದತ ದಿತಿರ್ಭೃಶಮ್ ।
ಪುತ್ರಯೋಶ್ಚ ವಧಂ ಕೃಷ್ಣಾದ್ವಿದಿತ್ವಾಸೀನ್ಮಹಾಮನಾಃ ॥
ಅನುವಾದ
ಶ್ರೀಮೈತ್ರೇಯರು ಹೇಳುತ್ತಾರೆ ವಿದುರನೇ ! ತನ್ನ ಪೌತ್ರನು ಪರಮ ಭಾಗವತನಾಗುವನೆಂದು ಕೇಳಿ ದಿತಿಗೆ ತುಂಬಾ ಸಂತೋಷವಾಯಿತು. ತನ್ನ ಪುತ್ರರು ಸಾಕ್ಷಾತ್ ಶ್ರೀಹರಿಯಿಂದ ಸಂಹರಿಸಲ್ಪಡು ವರು ಎಂಬುದನ್ನು ಕೇಳಿ ಇನ್ನೂ ಉತ್ಸಾಹವುಂಟಾಯಿತು. ॥ 50 ॥
ಅನುವಾದ (ಸಮಾಪ್ತಿಃ)
ಹದಿನಾಲ್ಕನೆಯ ಅಧ್ಯಾಯವು ಮುಗಿಯಿತು. ॥14॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ತೃತೀಯಸ್ಕಂಧೇ ದಿತಿ-ಕಶ್ಯಪಸಂವಾದೇ ಚತುರ್ದಶೋಽಧ್ಯಾಯಃ ॥14॥