೧೩

[ಹದಿಮೂರನೆಯ ಅಧ್ಯಾಯ]

ಭಾಗಸೂಚನಾ

ವರಾಹಾವತಾರದ ಕಥೆ

(ಶ್ಲೋಕ - 1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ನಿಶಾಮ್ಯ ವಾಚಂ ವದತೋ ಮುನೇಃ ಪುಣ್ಯತಮಾಂ ನೃಪ ।
ಭೂಯಃ ಪಪ್ರಚ್ಛ ಕೌರವ್ಯೋ ವಾಸುದೇವಕಥಾದೃತಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ - ಪರೀಕ್ಷಿತನೇ! ಮುನಿವರ್ಯ ಶ್ರೀಮೈತ್ರೇಯರ ಮುಖದಿಂದ ಈ ಪರಮ ಪುಣ್ಯ ಪ್ರದ ಕಥೆಯನ್ನು ಕೇಳಿ ವಿದುರನು ಪುನಃ ಕೇಳಿದನು; ಏಕೆಂದರೆ ಭಗವಂತನ ಲೀಲಾಕಥೆಗಳಲ್ಲಿ ಅವರಿಗೆ ಅತ್ಯಂತ ಅನುರಾಗ ಉಂಟಾಗಿತ್ತು.॥1॥

(ಶ್ಲೋಕ - 2)

ಮೂಲಮ್ (ವಾಚನಮ್)

ವಿದುರ ಉವಾಚ

ಮೂಲಮ್

ಸ ವೈ ಸ್ವಾಯಂಭುವಃ ಸಮ್ರಾಟ್ ಪ್ರಿಯಃ ಪುತ್ರಃ ಸ್ವಯಂಭುವಃ ।
ಪ್ರತಿಲಭ್ಯ ಪ್ರಿಯಾಂ ಪತ್ನೀಂ ಕಿಂ ಚಕಾರ ತತೋ ಮುನೇ ॥

ಅನುವಾದ

ವಿದುರನು ಕೇಳಿದನು - ಮುನೀಂದ್ರರೇ! ಬ್ರಹ್ಮದೇವರ ಪ್ರಿಯಪುತ್ರನಾದ ಆ ಸಾಮ್ರಾಟ ಸ್ವಾಯಂಭುವ ಮನುವು ಪ್ರಿಯ ಪತ್ನಿಯಾದ ಶತರೂಪಾದೇವಿಯನ್ನು ಪಡೆದ ಬಳಿಕ ಏನು ಮಾಡಿದನು? ॥2॥

(ಶ್ಲೋಕ - 3)

ಮೂಲಮ್

ಚರಿತಂ ತಸ್ಯ ರಾಜರ್ಷೇರಾದಿರಾಜಸ್ಯ ಸತ್ತಮ ।
ಬ್ರೂಹಿ ಮೇ ಶ್ರದ್ಧಧಾನಾಯ ವಿಷ್ವಕ್ಸೇನಾಶ್ರಯೋ ಹ್ಯಸೌ ॥

ಅನುವಾದ

ತಾವು ಸಾಧುವರೇಣ್ಯರಾಗಿರುವಿರಿ. ಆದಿ ರಾಜನಾದ ರಾಜರ್ಷಿ ಸ್ವಾಯಂಭುವ ಮನುವಿನ ಪವಿತ್ರ ಚರಿತ್ರೆ ಯನ್ನು ಹೇಳಿರಿ. ಅವನು ಭಗವಾನ್ ಶ್ರೀವಿಷ್ಣುವಿನ ಶರಣು ಹೊಂದಿದ ಭಕ್ತಾಗ್ರೇಸರನು. ಆದುದರಿಂದ ಅವರ ಚರಿತ್ರೆ ಕೇಳಲು ನನಗೆ ಬಹಳ ಶ್ರದ್ಧೆ ಉಂಟಾಗಿದೆ.॥3॥

(ಶ್ಲೋಕ - 4)

ಮೂಲಮ್

ಶ್ರುತಸ್ಯ ಪುಂಸಾಂ ಸುಚಿರಶ್ರಮಸ್ಯ
ನನ್ವಂಜಸಾ ಸೂರಿಭಿರೀಡಿತೋರ್ಥಃ ।
ಯತ್ತದ್ಗುಣಾನುಶ್ರವಣಂ ಮುಕುಂದ-
ಪಾದಾರವಿಂದಂ ಹೃದಯೇಷು ಯೇಷಾಮ್ ॥

ಅನುವಾದ

ಯಾರ ಹೃದಯದಲ್ಲಿ ಮುಕುಂದನ ಚರಣಾರವಿಂದಗಳು ವಿರಾಜಿಸುತ್ತವೋ, ಅಂತಹ ಭಕ್ತಶ್ರೇಷ್ಠರ ಗುಣಗಳನ್ನು ಶ್ರವಣ ಮಾಡುವುದೇ ಬಹುಕಾಲ ಶ್ರಮದಿಂದ ಮಾಡಿದ ಶಾಸಾಭ್ಯಾಸದ ಪರಮ ಪ್ರಯೋಜನವೆಂದು ಜ್ಞಾನಿಗಳು ಹೇಳುತ್ತಾರೆ.॥4॥

(ಶ್ಲೋಕ - 5)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಇತಿ ಬ್ರುವಾಣಂ ವಿದುರಂ ವಿನೀತಂ
ಸಹಸ್ರಶೀರ್ಷ್ಣಶ್ಚರಣೋಪಧಾನಮ್ ।
ಪ್ರಹೃಷ್ಟ ರೋಮಾ ಭಗವತ್ಕಥಾಯಾಂ
ಪ್ರಣೀಯಮಾನೋ ಮುನಿರಭ್ಯಚಷ್ಟ ॥

ಅನುವಾದ

ಶ್ರೀಶುಕಮಹರ್ಷಿಗಳು ಹೇಳುತ್ತಾರೆ ಎಲೈ ರಾಜೇಂದ್ರಾ ! ಸಹಸ್ರಶೀರ್ಷನಾದ ಶ್ರೀಹರಿಯ ಚರಣಾಶ್ರಿತ ಭಕ್ತನಾದ ವಿದುರನು ಹೀಗೆ ಅತ್ಯಂತ ವಿಧೇಯನಾಗಿ ಪ್ರಾರ್ಥಿಸಿದಾಗ, ಭಗವತ್ಕಥಾ ನಿರೂಪಣೆ ಮಾಡಲು ಪ್ರೇರಿತರಾದ ಶ್ರೀಮೈತ್ರೇಯರು ರೋಮಾಂ ಚಿತರಾಗಿ ಹೇಳತೊಡಗಿದರು.॥5॥

(ಶ್ಲೋಕ - 6)

ಮೂಲಮ್ (ವಾಚನಮ್)

ಮೈತ್ರೇಯ ಉವಾಚ

ಮೂಲಮ್

ಯದಾ ಸ್ವಭಾರ್ಯಯಾ ಸಾಕಂ ಜಾತಃ ಸ್ವಾಯಂಭುವೋ ಮನುಃ ।
ಪ್ರಾಂಜಲಿಃ ಪ್ರಣತಶ್ಚೇದಂ ವೇದಗರ್ಭಮಭಾಷತ ॥

ಅನುವಾದ

ಶ್ರೀಮೈತ್ರೇಯರು ನುಡಿದರು ವಿದುರನೇ ! ಪತ್ನಿಯೊಡನೆ ಜನಿಸಿದ ಸ್ವಾಯಂಭುವ ಮನುವು ಬ್ರಹ್ಮದೇವರಲ್ಲಿ ವಿನಯದಿಂದ ಕೈಜೋಡಿಸಿಕೊಂಡು ಹೇಳಿದನು.॥6॥

(ಶ್ಲೋಕ - 7)

ಮೂಲಮ್

ತ್ವಮೇಕಃ ಸರ್ವಭೂತಾನಾಂ ಜನ್ಮಕೃದ್ವ ತ್ತಿದಃ ಪಿತಾ ।
ಅಥಾಪಿ ನಃ ಪ್ರಜಾನಾಂ ತೇ ಶುಶ್ರೂಷಾ ಕೇನ ವಾ ಭವೇತ್ ॥

ಅನುವಾದ

ತೀರ್ಥರೂಪರೇ ! ಸಮಸ್ತ ಪ್ರಾಣಿಗಳಿಗೆ ಜನ್ಮನೀಡುವ ಮತ್ತು ಅವುಗಳಿಗೆ ಜೀವಿಕೆಯನ್ನು ಕಲ್ಪಿಸಿಕೊಡುವ ತಂದೆ ತಾವೇ ಆಗಿದ್ದೀರಿ. ಆದರೂ ತಮ್ಮ ಸಂತಾನವಾದ ನಾವು ಏನು ಮಾಡಿದರೆ ತಮ್ಮ ಸೇವೆಯಾಗುವುದು? ಎಂಬುದನ್ನು ಅಪ್ಪಣೆ ಕೊಡಿಸಿರಿ.॥7॥

(ಶ್ಲೋಕ - 8)

ಮೂಲಮ್

ತದ್ವಿಧೇಹಿ ನಮಸ್ತುಭ್ಯಂ ಕರ್ಮಸ್ವೀಡ್ಯಾತ್ಮಶಕ್ತಿಷು ।
ಯತ್ಕೃತ್ವೇಹ ಯಶೋ ವಿಷ್ವಗಮುತ್ರ ಚ ಭವೇದ್ಗತಿಃ ॥

ಅನುವಾದ

ಪೂಜ್ಯಪಾದರೇ ! ತಮಗೆ ನಮೋ ನಮಃ. ‘‘ಯಾವುದನ್ನು ಮಾಡಿದರೆ ನಮಗೆ ಈ ಲೋಕದಲ್ಲಿ ಒಳ್ಳೆಯ ಯಶಸ್ಸು ಹಾಗೂ ಪರ ಲೋಕದಲ್ಲಿ ಸದ್ಗತಿ ಉಂಟಾಗುವಂತಹ, ನಾವು ಮಾಡಲು ಶಕ್ಯವಾಗಿರುವ ಕಾರ್ಯವನ್ನು ನಮಗೆ ಅಪ್ಪಣೆ ನೀಡಿರಿ’’ ಎಂದು ಬೇಡಿಕೊಂಡರು.॥8॥

(ಶ್ಲೋಕ - 9)

ಮೂಲಮ್ (ವಾಚನಮ್)

ಬ್ರಹ್ಮೋವಾಚ

ಮೂಲಮ್

ಪ್ರೀತಸ್ತುಭ್ಯಮಹಂ ತಾತ ಸ್ವಸ್ತಿ ಸ್ತಾದ್ವಾಂ ಕ್ಷಿತೀಶ್ವರ ।
ಯನ್ನಿರ್ವ್ಯಲೀಕೇನ ಹೃದಾ ಶಾಧಿ ಮೇತ್ಯಾತ್ಮನಾರ್ಪಿತಮ್ ॥

ಅನುವಾದ

ಶ್ರೀಬ್ರಹ್ಮದೇವರು ಹೇಳಿದರು - ಅಯ್ಯಾ ! ಭೂಮೀಶ್ವರನೇ ! ನಿಮ್ಮಿಬ್ಬರ ವಿಷಯದಲ್ಲಿ ನಾನು ಬಹಳ ಪ್ರಸನ್ನನಾಗಿದ್ದೇನೆ. ನಿಮಗೆ ಮಂಗಳವಾಗಲಿ. ಏಕೆಂದರೆ, ನಿಷ್ಕಪಟ ಭಾವದಿಂದ ನೀನು ‘ನನಗೆ ಆಜ್ಞೆ ಮಾಡಿರಿ’ ಎಂದು ಹೇಳಿ ಆತ್ಮಸಮರ್ಪಣ ಮಾಡಿರುವಿ.॥9॥

(ಶ್ಲೋಕ - 10)

ಮೂಲಮ್

ಏತಾವತ್ಯಾತ್ಮಜೈರ್ವೀರ ಕಾರ್ಯಾ ಹ್ಯಪಚಿತಿರ್ಗುರೌ ।
ಶಕ್ತ್ಯಾಪ್ರಮತ್ತೈರ್ಗೃಹ್ಯೇತ ಸಾದರಂ ಗತಮತ್ಸರೈಃ ॥

ಅನುವಾದ

ವೀರವರನೇ! ಪುತ್ರರಾದವರು ತಮ್ಮ ತಂದೆಯನ್ನು ಹೀಗೆಯೇ ಪೂಜಿಸಬೇಕು. ಬೇರೆಯವರ ಕುರಿತು ಮಾತ್ಸರ್ಯ ಭಾವವನ್ನಿರಿಸದೆ ತಂದೆಯ ಆಜ್ಞೆಯನ್ನು ಆದರಪೂರ್ವಕವಾಗಿ ಸ್ವೀಕರಿಸಿ, ಎಚ್ಚರಿಕೆಯಿಂದ ಅದನ್ನು ಯಥಾಶಕ್ತಿ ನಡೆಸಿಕೊಡು ವುದೇ ಅವರಿಗೆ ಉಚಿತವಾದ ಕರ್ತವ್ಯವಾಗಿದೆ.॥10॥

(ಶ್ಲೋಕ - 11)

ಮೂಲಮ್

ಸ ತ್ವಮಸ್ಯಾಮಪತ್ಯಾನಿ ಸದೃಶಾನ್ಯಾತ್ಮನೋ ಗುಣೈಃ ।
ಉತ್ಪಾದ್ಯ ಶಾಸ ಧರ್ಮೇಣ ಗಾಂ ಯಜ್ಞೆ ಃ ಪುರುಷಂ ಯಜ ॥

ಅನುವಾದ

ನೀನು ನಿನ್ನ ಪತ್ನಿಯಾದ ಈ ಶತರೂಪೆಯಿಂದ ತನಗೆ ಸಮಾನರಾಗಿರುವ ಸದ್ಗುಣೀ ಸಂತಾನವನ್ನು ಪಡೆದು, ಧರ್ಮದಿಂದ ಪೃಥ್ವಿಯನ್ನು ಪಾಲಿಸುತ್ತಾ, ಯಜ್ಞಗಳ ಮೂಲಕ ಶ್ರೀಹರಿಯನ್ನು ಆರಾಧಿಸುತ್ತಾ ಇರು.॥11॥

(ಶ್ಲೋಕ - 12)

ಮೂಲಮ್

ಪರಂ ಶುಶ್ರೂಷಣಂ ಮಹ್ಯಂ ಸ್ಯಾತ್ಪ್ರಜಾರಕ್ಷಯಾ ನೃಪ ।
ಭಗವಾಂಸ್ತೇ ಪ್ರಜಾಭರ್ತುರ್ಹೃಷೀಕೇಶೋನುತುಷ್ಯತಿ ॥

(ಶ್ಲೋಕ - 13)

ಮೂಲಮ್

ಯೇಷಾಂ ನ ತುಷ್ಟೋ ಭಗವಾನ್ಯಜ್ಞಲಿಂಗೋ ಜನಾರ್ದನಃ ।
ತೇಷಾಂ ಶ್ರಮೋ ಹ್ಯಪಾರ್ಥಾಯ ಯದಾತ್ಮಾ ನಾದೃತಃ ಸ್ವಯಮ್ ॥

ಅನುವಾದ

ರಾಜನೇ! ನಿನ್ನ ಪ್ರಜಾಪಾಲನೆಯಿಂದ ನನ್ನ ದೊಡ್ಡದಾದ ಸೇವೆಯಾದಂತಾದೀತು ಮತ್ತು ನೀನು ಪ್ರಜೆಗಳನ್ನು ಪಾಲಿಸುವುದನ್ನು ನೋಡಿ ಭಗವಾನ್ ಶ್ರೀಹರಿಯು ಪ್ರಸನ್ನನಾಗುವನು. ಯಜ್ಞಮೂರ್ತಿಯಾದ ಭಗವಾನ್ ಜನಾರ್ದನನು ಪ್ರಸನ್ನ ನಾಗದಿರುವವರ ಶ್ರಮವೆಲ್ಲ ವ್ಯರ್ಥವೇ ಸರಿ. ಏಕೆಂದರೆ, ಅವರು ತಮ್ಮ ಆತ್ಮವನ್ನೇ ಅನಾದರ ಮಾಡಿಕೊಂಡಂತೆ ಆಗುತ್ತದೆ.॥12-13॥

(ಶ್ಲೋಕ - 14)

ಮೂಲಮ್

ಮನುರುವಾಚ
ಆದೇಶೇಹಂ ಭಗವತೋ ವರ್ತೇಯಾಮೀವಸೂದನ ।
ಸ್ಥಾನಂ ತ್ವಿಹಾನುಜಾನೀಹಿ ಪ್ರಜಾನಾಂ ಮಮ ಚ ಪ್ರಭೋ ॥

ಅನುವಾದ

ಮನುಮಹಾರಾಜನೆಂದ ಪಾಪವಿನಾಶಕ ಪಿತನೇ ! ಪೂಜ್ಯರಾದ ತಮ್ಮ ಆಣತಿಯನ್ನು ನಾನು ಶಿರಸಾವಹಿಸಿ ಪಾಲಿಸುತ್ತೇನೆ. ಆದರೆ ತಾವು ಈ ಜಗತ್ತಿನಲ್ಲಿ ನಮಗೂ, ನನ್ನ ಭಾವೀ ಪ್ರಜೆಗಳಿಗೆ ಇರಲು ಸ್ಥಾನವನ್ನು ಅನುಗ್ರಹಿಸಿಕೊಡಬೇಕು.॥14॥

(ಶ್ಲೋಕ - 15)

ಮೂಲಮ್

ಯದೋಕಃ ಸರ್ವಸತ್ತ್ವಾನಾಂ ಮಹೀ ಮಗ್ನಾ ಮಹಾಂಭಸಿ ।
ಅಸ್ಯಾ ಉದ್ಧರಣೇ ಯತ್ನೋ ದೇವ ದೇವ್ಯಾ ವಿಧೀಯತಾಮ್ ॥

ಅನುವಾದ

ದೇವಾ ! ಸಮಸ್ತ ಜೀವಿಗಳಿಗೂ ನಿವಾಸಸ್ಥಾನವಾದ ಪೃಥಿವಿಯು ಈಗ ಪ್ರಳಯಜಲದಲ್ಲಿ ಮುಳುಗಿಹೋಗಿದೆ. ಆ ಭೂಮಿಯನ್ನು ಮೇಲಕ್ಕೆತ್ತಲು ತಾವು ಪ್ರಯತ್ನಿಸಬೇಕು, ಎಂದು ಪ್ರಾರ್ಥಿಸಿ ಕೊಂಡನು.॥15॥

(ಶ್ಲೋಕ - 16)

ಮೂಲಮ್ (ವಾಚನಮ್)

ಮೈತ್ರೇಯ ಉವಾಚ

ಮೂಲಮ್

ಪರಮೇಷ್ಠೀ ತ್ವಪಾಂ ಮಧ್ಯೇ ತಥಾ ಸನ್ನಾಮವೇಕ್ಷ್ಯ ಗಾಮ್ ।
ಕಥಮೇನಾಂ ಸಮುನ್ನೇಷ್ಯ ಇತಿ ದಧ್ಯೌ ಧಿಯಾ ಚಿರಮ್ ॥

ಅನುವಾದ

ಶ್ರೀಮೈತ್ರೇಯರು ಹೇಳುತ್ತಿದ್ದಾರೆ ವಿದುರಾ ! ಭೂಮಿಯು ಹೀಗೆ ಆಳವಾದ ನೀರಿನಲ್ಲಿ ಮುಳುಗಿ ಹೋಗಿರುವುದನ್ನು ಕಂಡು ‘ಇದನ್ನು ಹೇಗೆ ಮೇಲಕ್ಕೆ ಎತ್ತುವುದು ?’ ಎಂದು ಬ್ರಹ್ಮದೇವರು ಬಹಳ ಹೊತ್ತು ಚಿಂತಿಸತೊಡಗಿದರು.॥16॥

(ಶ್ಲೋಕ - 17)

ಮೂಲಮ್

ಸೃಜತೋ ಮೇ ಕ್ಷಿತಿರ್ವಾರ್ಭಿಃ ಪ್ಲಾವ್ಯಮಾನಾ ರಸಾಂ ಗತಾ ।
ಅಥಾತ್ರ ಕಿಮನುಷ್ಠೇಯಮಸ್ಮಾಭಿಃ ಸರ್ಗಯೋಜಿತೈಃ ।
ಯಸ್ಯಾಹಂ ಹೃದಯಾದಾಸಂ ಸ ಈಶೋ ವಿದಧಾತು ಮೇ ॥

ಅನುವಾದ

ನಾನು ಲೋಕ ಸೃಷ್ಟಿಯಲ್ಲಿ ತೊಡಗಿದ್ದಾಗ ಭೂಮಿಯು ನೀರಿನಲ್ಲಿ ಮುಳುಗಿ ರಸಾತಳಕ್ಕೆ ಹೋಯಿತು. ಸೃಷ್ಟಿಯನ್ನು ಮಾಡಲು ನೇಮಕಗೊಂಡಿರುವ ನಾನು ಈಗ ಏನು ಮಾಡುವುದು ? ‘ಯಾರ ಸಂಕಲ್ಪದಿಂದ ನಾನು ಜನಿಸಿದೆನೋ, ಆ ಸರ್ವೇಶ್ವರನೇ ನನ್ನ ಈ ಕೆಲಸ ವನ್ನು ನಡೆಸಿಕೊಡಬೇಕು’ ಎಂದು ಅವರು ಯೋಚಿಸಿದರು.॥17॥

(ಶ್ಲೋಕ - 18)

ಮೂಲಮ್

ಇತ್ಯಭಿಧ್ಯಾಯತೋ ನಾಸಾವಿವರಾತ್ಸಹಸಾನಘ ।
ವರಾಹತೋಕೋ ನಿರಗಾದಂಗುಷ್ಠಪರಿಮಾಣಕಃ ॥

ಅನುವಾದ

ಪುಣ್ಯಾತ್ಮನಾದ ವಿದುರನೇ ! ಬ್ರಹ್ಮದೇವರು ಹೀಗೆ ಚಿಂತಿಸುತ್ತಿರುವಂತೆಯೇ ಅವರ ಮೂಗಿನ ಹೊಳ್ಳೆಯಿಂದ ಇದ್ದಕ್ಕಿದ್ದಂತೆ ಹೆಬ್ಬೆರಳಿನ ಗಾತ್ರದ ಒಂದು ಹಂದಿಯ ಮರಿಯು ಹೊರಬಂತು.॥18॥

(ಶ್ಲೋಕ - 19)

ಮೂಲಮ್

ತಸ್ಯಾಭಿಪಶ್ಯತಃ ಖಸ್ಥಃ ಕ್ಷಣೇನ ಕಿಲ ಭಾರತ ।
ಗಜಮಾತ್ರಃ ಪ್ರವವೃಧೇ ತದದ್ಭುತಮಭೂನ್ಮಹತ್ ॥

ಅನುವಾದ

ಆಶ್ಚರ್ಯವೋ ಆಶ್ಚರ್ಯ! ಆಕಾಶದಲ್ಲಿ ನಿಂತುಕೊಂಡ ಆ ಹಂದಿಯ ಮರಿಯು ಬ್ರಹ್ಮದೇವರು ನೋಡು-ನೋಡುತ್ತಿರು ವಂತೆಯೇ ಒಂದು ಕ್ಷಣದಲ್ಲಿ ದೊಡ್ಡ ಆನೆಯ ಗಾತ್ರಕ್ಕೆ ಸಮವಾಗಿ ಬೆಳೆದುಬಿಟ್ಟಿತು.॥19॥

(ಶ್ಲೋಕ - 20)

ಮೂಲಮ್

ಮರೀಚಿಪ್ರಮುಖೈರ್ವಿಪ್ರೈಃ ಕುಮಾರೈರ್ಮನುನಾ ಸಹ ।
ದೃಷ್ಟ್ವಾ ತತ್ಸೌಕರಂ ರೂಪಂ ತರ್ಕಯಾಮಾಸ ಚಿತ್ರಧಾ ॥

ಅನುವಾದ

ಆ ಬೃಹದಾಕಾರದ ವರಾಹಮೂರ್ತಿಯನ್ನು ಕಂಡು, ಮರೀಚಿಗಳೇ ಮುಂತಾದ ಮುನಿಗಳು, ಸನಕಾದಿಗಳು, ಸ್ವಾಯಂಭುವ ಮನುವು ಮುಂತಾದವರ ಜತೆಗೂಡಿ ಬ್ರಹ್ಮ ದೇವರು ಬಗೆ-ಬಗೆಯಾಗಿ ತರ್ಕಿಸತೊಡಗಿದರು.॥20॥

(ಶ್ಲೋಕ - 21)

ಮೂಲಮ್

ಕಿಮೇತತ್ಸೌಕರವ್ಯಾಜಂ ಸತ್ತ್ವಂ ದಿವ್ಯಮವಸ್ಥಿತಮ್ ।
ಅಹೋ ಬತಾಶ್ಚರ್ಯಮಿದಂ ನಾಸಾಯಾ ಮೇ ವಿನಿಃಸೃತಮ್ ॥

ಅನುವಾದ

‘ಅಬ್ಬಾ! ಹಂದಿಯ ರೂಪದಲ್ಲಿ ಇಲ್ಲಿ ಪ್ರಕಟವಾಗಿರುವ ಈ ದಿವ್ಯ ಪ್ರಾಣಿಯು ಯಾವುದು? ಎಂತಹ ಆಶ್ಚರ್ಯ! ಇದು ಈಗತಾನೇ ನನ್ನ ಮೂಗಿನಿಂದ ಹೊರಬಂದಿತಲ್ಲ! ॥21॥

(ಶ್ಲೋಕ - 22)

ಮೂಲಮ್

ದೃಷ್ಟೋಂಗುಷ್ಠ ಶಿರೋಮಾತ್ರಃ ಕ್ಷಣಾದ್ಗಂಡ ಶಿಲಾಸಮಃ ।
ಅಪಿ ಸ್ವಿದ್ಭಗವಾನೇಷ ಯಜ್ಞೋ ಮೇ ಖೇದಯನ್ಮನಃ ॥

ಅನುವಾದ

ಮೊದಲು ಒಂದು ಹೆಬ್ಬೆರಳಿನ ತುದಿಯಷ್ಟು ಗಾತ್ರವಿದ್ದು ಈಗ ಒಂದು ಕ್ಷಣದಲ್ಲಿ ಭಾರೀದೊಡ್ಡ ಬಂಡೆಯಷ್ಟು ಬೆಳೆದುಬಿಟ್ಟಿದೆಯಲ್ಲ! ನಿಜವಾಗಿ ಯಜ್ಞಮೂರ್ತಿಯಾದ ಶ್ರೀಭಗವಂತನೇ ನಮ್ಮ ಮನಸ್ಸನ್ನು ಹೀಗೆ ಮರುಳುಗೊಳಿಸುತ್ತಿರಬೇಕು!’ ಎಂದು ಚಿಂತಿಸಿದರು.॥22॥

(ಶ್ಲೋಕ - 23)

ಮೂಲಮ್

ಇತಿ ಮೀಮಾಂಸತಸ್ತಸ್ಯ ಬ್ರಹ್ಮಣಃ ಸಹ ಸೂನುಭಿಃ ।
ಭಗವಾನ್ಯಜ್ಞ ಪುರುಷೋ ಜಗರ್ಜಾಗೇಂದ್ರಸನ್ನಿಭಃ ॥

ಅನುವಾದ

ಬ್ರಹ್ಮದೇವರು ಮತ್ತು ಅವರ ಪುತ್ರರು ಹೀಗೆ ಯೋಚಿಸುತ್ತಿರು ವಂತೆಯೇ ಭಗವಾನ್ ಯಜ್ಞಪುರುಷನು ಮಹಾಪರ್ವತಾಕಾರ ವನ್ನು ತಳೆದು ಗರ್ಜಿಸತೊಡಗಿದನು.॥23॥

(ಶ್ಲೋಕ - 24)

ಮೂಲಮ್

ಬ್ರಹ್ಮಾಣಂ ಹರ್ಷಯಾಮಾಸ ಹರಿಸ್ತಾಂಶ್ಚ ದ್ವಿಜೋತ್ತಮಾನ್ ।
ಸ್ವಗರ್ಜಿತೇನ ಕಕುಭಃ ಪ್ರತಿಸ್ವನಯತಾ ವಿಭುಃ ॥

ಅನುವಾದ

ಸರ್ವಶಕ್ತನಾದ ಶ್ರೀಹರಿಯು ತನ್ನ ಗರ್ಜನೆಯಿಂದ ಎಲ್ಲ ದಿಕ್ಕುಗಳನ್ನು ಪ್ರತಿಧ್ವನಿ ಸುವಂತೆ ಮಾಡಿ ಬ್ರಹ್ಮದೇವರನ್ನು ಮತ್ತು ಬ್ರಾಹ್ಮಣಶ್ರೇಷ್ಠರನ್ನು ಸಂತೋಷಗೊಳಿಸಿದನು.॥24॥

(ಶ್ಲೋಕ - 25)

ಮೂಲಮ್

ನಿಶಮ್ಯ ತೇ ಘರ್ಘರಿತಂ ಸ್ವಖೇದ-
ಕ್ಷಯಿಷ್ಣು ಮಾಯಾಮಯಸೂಕರಸ್ಯ ।
ಜನಸ್ತಪಃಸತ್ಯನಿವಾಸಿನಸ್ತೇ
ತ್ರಿಭಿಃ ಪವಿತ್ರೈರ್ಮುನಯೋಗೃಣನ್ ಸ್ಮ ॥

ಅನುವಾದ

ತಮ್ಮ ಖೇದವನ್ನು ನಿವಾರಿಸು ತ್ತಿದ್ದ ಆ ಮಾಯಾವರಾಹನ ಘುರ್ಘುರ ಧ್ವನಿಯನ್ನು ಕೇಳಿ ಜನೋಲೋಕ, ತಪೋಲೋಕ ಮತ್ತು ಸತ್ಯಲೋಕ ನಿವಾಸಿಗಳಾದ ಮುನಿಗಳು ಮೂರು ವೇದಗಳ ಪವಿತ್ರವಾದ ಮಂತ್ರಗಳಿಂದ ಅವನನ್ನು ಸ್ತುತಿಸತೊಡಗಿದರು.॥25॥

(ಶ್ಲೋಕ - 26)

ಮೂಲಮ್

ತೇಷಾಂ ಸತಾಂ ವೇದವಿತಾನಮೂರ್ತಿ-
ರ್ಬ್ರಹ್ಮಾವಧಾರ್ಯಾತ್ಮಗುಣಾನುವಾದಮ್ ।
ವಿನದ್ಯ ಭೂಯೋ ವಿಬುಧೋದಯಾಯ
ಗಜೇಂದ್ರಲೀಲೋ ಜಲಮಾವಿವೇಶ ॥

ಅನುವಾದ

ಭಗವಂತನು ವೇದ ಯಜ್ಞಸ್ವರೂಪನಲ್ಲವೇ! ವೇದಮಂತ್ರಸಮೂಹ ಪ್ರತಿಪಾದ್ಯ ನಲ್ಲವೇ! ಆ ಮುನೀಶ್ವರರು ಮಾಡಿದ ಸ್ತುತಿಯನ್ನು ವೇದರೂಪ ವೆಂದು ತಿಳಿದು ಭಗವಂತನಿಗೆ ತುಂಬಾ ಸಂತೋಷವಾಯಿತು. ಮತ್ತೆ ಪುನಃ ಒಮ್ಮೆ ಗರ್ಜಿಸಿ ದೇವತೆಗಳ ಹಿತಕ್ಕಾಗಿ ಗಜರಾಜನಂತೆ ಕ್ರೀಡಿಸುತ್ತಾ ಜಲರಾಶಿಯನ್ನು ಪ್ರವೇಶಿಸಿಬಿಟ್ಟನು.॥26॥

(ಶ್ಲೋಕ - 27)

ಮೂಲಮ್

ಉತ್ಕ್ಷಿಪ್ತವಾಲಃ ಖಚರಃ ಕಠೋರಃ
ಸಟಾ ವಿಧುನ್ವನ್ ಖರರೋಮಶತ್ವಕ್ ।
ಖುರಾಹತಾಭ್ರಃ ಸಿತದಂಷ್ಟ್ರ ಈಕ್ಷಾ-
ಜ್ಯೋತಿರ್ಬಭಾಸೇ ಭಗವಾನ್ಮಹೀಧ್ರಃ ॥

ಅನುವಾದ

ಆ ವರಾಹರೂಪನಾದ ಭಗವಂತನು ಮೊದಲು ಬಾಲವನ್ನು ಮೇಲಕ್ಕೆತ್ತಿ ಅತಿವೇಗದಿಂದ ಆಕಾಶಕ್ಕೆ ಜಿಗಿದು, ಕುತ್ತಿಗೆಯ ಕೂದಲುಗಳನ್ನು ಕೆದರಿಕೊಂಡು, ಗೊರಸುಗಳ ಬಡಿತದಿಂದ ಮೋಡಗಳನ್ನು ಚದು ರಿಸತೊಡಗಿದನು. ಕಠೋರವಾದ ದೇಹ, ತೊಗಲಿನ ಮೇಲೆ ಕೆದರಿದ್ದ ಒರಟಾದ ಮೈಗೂದಲುಗಳು, ಬಿಳುಪಾದ ಕೋರೆದಾಡೆ, ಕಣ್ಣುಗಳು ಕಾರುತ್ತಿದ್ದ ತೇಜಸ್ಸು ಇವುಗಳಿಂದ ಮೆರೆಯುತ್ತಿದ್ದ ಮಹಾವರಾಹದ ಶೋಭೆ ಅವರ್ಣನೀಯವಾಗಿತ್ತು.॥27॥

(ಶ್ಲೋಕ - 28)

ಮೂಲಮ್

ಘ್ರಾಣೇನ ಪೃಥ್ವ್ಯಾಃ ಪದವೀಂ ವಿಜಿಘ್ರನ್
ಕ್ರೋಡಾಪದೇಶಃ ಸ್ವಯಮಧ್ವರಾಂಗಃ ।
ಕರಾಲದಂಷ್ಟ್ರೋಪ್ಯಕರಾಲದೃಗ್ಭ್ಯಾ-
ಮುದ್ವೀಕ್ಷ್ಯ ವಿಪ್ರಾನ್ಗೃಣತೋವಿಶತ್ಕಮ್ ॥

ಅನುವಾದ

ಭಗವಂತನು ಸ್ವಯಂ ಯಜ್ಞಪುರುಷನಾಗಿದ್ದರೂ ಸೂಕರರೂಪ ವನ್ನು ಧರಿಸಿದ್ದರಿಂದ ತನ್ನ ಮೂಗಿನಿಂದ ಭೂಮಿಯ ಮಾರ್ಗವನ್ನು ಮೂಸಿ-ಮೂಸಿ ನೋಡುತ್ತಿದ್ದನು. ಅವನ ಕೋರೆದಾಡೆಗಳು ತುಂಬಾ ಭೀಕರವಾಗಿದ್ದುವು, ಕಠೋರವಾಗಿದ್ದುವು. ಆದರೂ ತನ್ನನ್ನು ಸ್ತುತಿಸುತ್ತಿದ್ದ ಋಷಿಗಳ ವಿಷಯದಲ್ಲಿ ಅವನ ದೃಷ್ಟಿಯು ಪ್ರಸನ್ನವಾಗಿದ್ದು, ತನ್ನ ಸೌಮ್ಯವಾದ ದೃಷ್ಟಿಪಾತದಿಂದ ಅವರನ್ನು ದಿಟ್ಟಿಸುತ್ತಾ, ಅನುಗ್ರಹಿಸುತ್ತಾ ಜಲದಲ್ಲಿ ಪ್ರವೇಶಮಾಡಿಬಿಟ್ಟನು.॥28॥

ಮೂಲಮ್

(ಶ್ಲೋಕ - 29)
ಸ ವಜ್ರಕೂಟಾಂಗ ನಿಪಾತವೇಗ-
ವಿಶೀರ್ಣಕುಕ್ಷಿಃ ಸ್ತನಯನ್ನುದನ್ವಾನ್ ।
ಉತ್ಸೃಷ್ಟದೀರ್ಘೋರ್ಮಿಭುಜೈರಿವಾರ್ತ-
ಶ್ಚುಕ್ರೋಶ ಯಜ್ಞೇಶ್ವರ ಪಾಹಿ ಮೇತಿ ॥

ಅನುವಾದ

ವಜ್ರಮಯವಾದ ಪರ್ವತದ ಶಿಖರದಂತೆ ಕಠೋರ ವಾಗಿದ್ದ ಅವನ ಶ್ರೀದೇಹವು ನೀರಿನಲ್ಲಿ ಬಿದ್ದೊಡನೆಯೇ ಅದರ ರಭಸದಿಂದ ಸಮುದ್ರದ ಹೊಟ್ಟೆಯು ಒಡೆದುಹೋದಂತಾಗಿ ಗುಡುಗು-ಸಿಡಿಲುಗಳಂತೆ ಭಯಂಕರ ಶಬ್ದವುಂಟಾಯಿತು. ಸಮುದ್ರವು ತನ್ನ ಉಕ್ಕೇರಿದ ತರಂಗಗಳೆಂಬ ಭುಜಗಳನ್ನು ಮೇಲ ಕ್ಕೆತ್ತಿಕೊಂಡು ಆರ್ತಸ್ವರದಿಂದ ಓ ಯಜ್ಞೇಶ್ವರನೇ ! ನನ್ನನ್ನು ಕಾಪಾಡು ! ಕಾಪಾಡು ! ಎಂದು ಮೊರೆಯಿಡುತ್ತದೋ ಎಂಬಂತೆ ಕಾಣುತ್ತಿತ್ತು.॥29॥

(ಶ್ಲೋಕ - 30)

ಮೂಲಮ್

ಖುರೈಃ ಕ್ಷುರಪ್ರೈರ್ದರಯಂಸ್ತದಾಪ
ಉತ್ಪಾರಪಾರಂ ತ್ರಿಪರೂ ರಸಾಯಾಮ್ ।
ದದರ್ಶ ಗಾಂ ತತ್ರ ಸುಷುಪ್ಸುರಗ್ರೇ
ಯಾಂ ಜೀವಧಾನೀಂ ಸ್ವಯಮಭ್ಯಧತ್ತ ॥

ಅನುವಾದ

ಆಗ ಭಗವಾನ್ ಯಜ್ಞವರಾಹನು ಬಾಣ ಸದೃಶವಾಗಿದ್ದ ಚೂಪಾದ ತನ್ನ ಗೊರಸುಗಳಿಂದ ಜಲವನ್ನು ಸೀಳುತ್ತಾ ಆ ಜಲರಾಶಿಯ ಆಚೆಯ ದಡವನ್ನು (ತಳಭಾಗವನ್ನು) ತಲುಪಿದನು. ಅಲ್ಲಿ ರಸಾತಳದಲ್ಲಿ ಅವನು ಪ್ರಳಯಸಮಯದಲ್ಲಿ ತಾನು ಪವಡಿಸಲು ತೊಡಗಿದಾಗ ತನ್ನ ಹೊಟ್ಟೆಯಲ್ಲಿ ಹಿಂದೆ ಲಯ ಗೊಳಿಸಿಕೊಂಡಿದ್ದ ಮತ್ತು ಸಮಸ್ತ ಜೀವರಾಶಿಗಳಿಗೂ ಆಶ್ರಯ ವಾಗಿರುವ ಭೂಮಿಯು ಇರುವುದನ್ನು ನೋಡಿದನು.॥30॥

(ಶ್ಲೋಕ - 31)

ಮೂಲಮ್

ಸ್ವದಂಷ್ಟ್ರ ಯೋದ್ಧೃತ್ಯ ಮಹೀಂ ನಿಮಗ್ನಾಂ
ಸ ಉತ್ಥಿತಃ ಸಂರುರುಚೇ ರಸಾಯಾಃ ।
ತತ್ರಾಪಿ ದೈತ್ಯಂ ಗದಯಾಪತಂತ
ಸುನಾಭಸಂದೀಪಿತತೀವ್ರಮನ್ಯುಃ ॥

(ಶ್ಲೋಕ - 32)

ಮೂಲಮ್

ಜಘಾನ ರುಂಧಾನಮಸಹ್ಯವಿಕ್ರಮಂ
ಸ ಲೀಲಯೇಭಂ ಮೃಗರಾಡಿವಾಂಭಸಿ ।
ತದ್ರಕ್ತಪಂಕಾಂಕಿತಗಂಡತುಂಡೋ
ಯಥಾ ಗಜೇಂದ್ರೋ ಜಗತೀಂ ವಿಭಿಂದನ್ ॥

ಅನುವಾದ

ಮತ್ತೆ ಭಗವಂತನು ನೀರಿನಲ್ಲಿ ಮುಳುಗಿಹೋಗಿದ್ದ ಆ ಭೂಮಿ ಯನ್ನು ತನ್ನ ಕೋರೆದಾಡೆಗಳಿಂದ ಎತ್ತಿಕೊಂಡು ಪಾತಾಳದಿಂದ ಮೇಲಕ್ಕೆ ಎದ್ದುಬಂದನು. ಆಗ ಆತನ ಕಾಂತಿಯು ಅತ್ಯಂತ ದರ್ಶ ನೀಯವಾಗಿತ್ತು. ನೀರಿನಿಂದ ಮೇಲಕ್ಕೆ ಎದ್ದು ಬರುತ್ತಿರುವಾಗ ತನ್ನನ್ನು ಎದುರಿಸಿ ಗದೆಯಿಂದ ಆಕ್ರಮಣಮಾಡಿದ ಹಿರಣ್ಯಾಕ್ಷನ ಮೇಲೆ ಸ್ವಾಮಿಗೆ ಸುದರ್ಶನಚಕ್ರದಿಂದ ಉದ್ದೀಪನಗೊಂಡಂತೆ ತೀಕ್ಷ್ಣವಾದ ಕ್ರೋಧವು ಕೆರಳಿತು. ಆ ಅಸುರನು ಮಹಾಪರಾಕ್ರಮಿ ಯಾಗಿದ್ದರೂ ಸಿಂಹವು ಆನೆಯನ್ನು ಕೊಂದುಬಿಡುವಂತೆ ಸ್ವಾಮಿಯು ಆತನನ್ನು ಲೀಲಾಜಾಲವಾಗಿ ಜಲದಲ್ಲೇ ಸಂಹರಿಸಿ ಬಿಟ್ಟನು. ಆಗ ಭಗವಂತನ ಗಂಡಸ್ಥಳ ಮತ್ತು ಮುಖವೂ ದೈತ್ಯನ ರಕ್ತದಿಂದ ನೆನೆದು ಕೆಂಪಾಗಿದ್ದರಿಂದ ಆತನು ಕೆಂಪುಮಣ್ಣಿನಲ್ಲಿ ಮಣ್ಣುಸೀಳುವ ಆಟವನ್ನಾಡಿ ಬಂದ ಗಜರಾಜನಂತೆ ರಾರಾಜಿಸುತ್ತಿದ್ದನು.॥31-32॥

(ಶ್ಲೋಕ - 33)

ಮೂಲಮ್

ತಮಾಲನೀಲಂ ಸಿತದಂತಕೋಟ್ಯಾ
ಕ್ಷ್ಮಾಮುತ್ಕ್ಷಿಪಂತಂ ಗಜಲೀಲಯಾಂಗ ।
ಪ್ರಜ್ಞಾಯ ಬದ್ಧಾಂಜಲಯೋನುವಾಕೈ-
ರ್ವಿರಿಂಚಿಮುಖ್ಯಾ ಉಪತಸ್ಥುರೀಶಮ್ ॥

ಅನುವಾದ

ಅಯ್ಯಾ! ಗಜರಾಜನು ತನ್ನ ದಂತಗಳ ಮೇಲೆ ಕಮಲಪುಷ್ಪವನ್ನು ಎತ್ತಿ ಧರಿಸಿದಂತೆ ಸ್ವಾಮಿಯು ತನ್ನ ಬಿಳಿಯ ದಂತಗಳ ತುದಿಯಲ್ಲಿ ಭೂಮಿಯನ್ನು ಎತ್ತಿ ಹಿಡಿದಿದ್ದನು. ಆತನ ದಿವ್ಯದೇಹವು ಹೊಂಗೆಯ ಮರದಂತೆ ಶ್ಯಾಮಲವರ್ಣ ದಿಂದ ಕಂಗೊಳಿಸುತ್ತಿತ್ತು. ಆಗ ಬ್ರಹ್ಮದೇವರೂ, ಮರೀಚಿಗಳೇ ಮುಂತಾದ ಮಹರ್ಷಿಗಳು ಈತನು ಭಗವಂತನೇ ಆಗಿದ್ದಾನೆಂದು ಗುರುತಿಸಿ, ಕೈಜೋಡಿಸಿಕೊಂಡು ವೇದಾರ್ಥಗರ್ಭಿತವಾದ ವಾಕ್ಯಗಳಿಂದ ಆತನನ್ನು ಹೀಗೆ ಸ್ತೋತ್ರಮಾಡತೊಡಗಿದರು.॥33॥

(ಶ್ಲೋಕ - 34)

ಮೂಲಮ್

ಋಷಯ ಊಚುಃ
ಜಿತಂ ಜಿತಂ ತೇಜಿತ ಯಜ್ಞಭಾವನ
ತ್ರಯೀಂ ತನುಂ ಸ್ವಾಂ ಪರಿಧುನ್ವತೇ ನಮಃ ।
ಯದ್ರೋಮಗರ್ತೇಷು ನಿಲಿಲ್ಯುರಧ್ವರಾ-
ಸ್ತಸ್ಮೈ ನಮಃ ಕಾರಣಸೂಕರಾಯ ತೇ ॥

ಅನುವಾದ

ಋಷಿಗಳು ಹೇಳುತ್ತಾರೆ - ಅಜಿತಮೂರ್ತಿಯಾದ ಭಗವಂತಾ! ನಿನಗೆ ಜಯವಾಗಲಿ! ಜಯವಾಗಲಿ! ಎಲ್ಲರನ್ನೂ ಜಯಿಸಿದವನೂ, ಯಾರಿಗೂ ಸೋಲದವನೂ ನೀನು. ಓ ಯಜ್ಞಪತಿಯೇ ! ಮೂರುವೇದಗಳ ರೂಪವಾದ ದಿವ್ಯ ಮಂಗಳ ವಿಗ್ರಹವನ್ನು ಓಲಾಡಿಸುತ್ತಾ ಕಂಗೊಳಿಸುವ ನಿನಗೆ ನಮ ಸ್ಕಾರವು. ಸಮಸ್ತ ಯಜ್ಞಗಳು ನಿನ್ನ ರೋಮಕೂಪದಲ್ಲಿ ಅಡಗಿವೆ. ನೀನು ಪೃಥಿವಿಯನ್ನು ಉದ್ಧಾರಮಾಡಲಿಕ್ಕಾಗಿಯೇ ಈ ಸೂಕರ ರೂಪವನ್ನು ಧರಿಸಿರುವೆ. ನಿನಗೆ ನಮಸ್ಕಾರವು.॥34॥

(ಶ್ಲೋಕ - 35)

ಮೂಲಮ್

ರೂಪಂ ತವೈತನ್ನನು ದುಷ್ಕೃತಾತ್ಮನಾಂ
ದುರ್ದರ್ಶನಂ ದೇವ ಯದಧ್ವರಾತ್ಮಕಮ್ ।
ಛಂದಾಂಸಿ ಯಸ್ಯ ತ್ವಚಿ ಬರ್ಹಿರೋಮ-
ಸ್ವಾಜ್ಯಂ ದೃಶಿ ತ್ವಂಘ್ರಿಷು ಚಾತುರ್ಹೋತ್ರಮ್ ॥

ಅನುವಾದ

ದೇವಾ ! ದುರಾಚಾರಿಗಳಿಗೆ ನಿನ್ನ ಈ ದಿವ್ಯಮೂರ್ತಿಯ ದರ್ಶನ ವಾಗು ವುದು ಬಹಳ ಕಷ್ಟವು. ಏಕೆಂದರೆ, ಇದು ಯಜ್ಞರೂಪವೇ ಆಗಿದೆ. ಇದರ ತೊಗಲಿನಲ್ಲಿ ಗಾಯತ್ರಿಯೇ ಮುಂತಾದ ಛಂದಸ್ಸುಗಳೂ, ರೋಮಾ ವಳಿಯಲ್ಲಿ ದರ್ಭೆಗಳೂ, ನೇತ್ರಗಳಲ್ಲಿ (ಯಜ್ಞದ ಹವಿಸ್ಸಾದ) ತುಪ್ಪವೂ,. ನಾಲ್ಕು ಚರಣಗಳಲ್ಲಿ ಅಧ್ವರ್ಯು, ಉದ್ಗಾತೃ, ಹೋತೃ ಮತ್ತು ಬ್ರಹ್ಮಾ ಎಂಬ ನಾಲ್ಕು ಋತ್ವಿಜರೂ ಅಡಗಿದ್ದಾರೆ.॥35॥

(ಶ್ಲೋಕ - 36)

ಮೂಲಮ್

ಸ್ರುಕ್ತುಂಡ ಆಸೀತ್ಸ್ರುವ ಈಶ ನಾಸಯೋ-
ರಿಡೋದರೇ ಚಮಸಾಃ ಕರ್ಣರಂಧ್ರೇ ।
ಪ್ರಾಶಿತ್ರಮಾಸ್ಯೇ ಗ್ರಸನೇ ಗ್ರಹಾಸ್ತು ತೇ
ಯಚ್ಚರ್ವಣಂ ತೇ ಭಗವನ್ನಗ್ನಿಹೋತ್ರಮ್ ॥

ಅನುವಾದ

ಈಶ್ವರನೇ! ನಿನ್ನ ಮುಖದ ಅಗ್ರಭಾಗದಲ್ಲಿ ‘ಸ್ರುಕ್’ ಇದೆ. ಮೂಗಿನ ಹೊಳ್ಳೆಗಳಲ್ಲಿ ‘ಸ್ರುವಾ’ ಇದೆ. ಉದರದಲ್ಲಿ ‘ಇಡಾ’ ಎಂಬ ಯಜ್ಞದ ಭಕ್ಷಣಪಾತ್ರೆಯಿದೆ. ಕಿವಿಗಳಲ್ಲಿ ‘ಚಮಸ’ವಿದೆ. ಮುಖದಲ್ಲಿ ‘ಪ್ರಾಶಿತ್ರ’ (ಬ್ರಹ್ಮಭಾಗಪಾತ್ರೆ) ಇದೆ. ಕಂಠದ ರಂಧ್ರದಲ್ಲಿ ‘ಗ್ರಹ’ (ಸೋಮಪಾತ್ರೆ) ಎಂಬ ಯಜ್ಞ ಪಾತ್ರೆಯಿದೆ. ಭಗವಂತನೇ ! ನಿನ್ನ ಅಗಿಯುವಿಕೆಯು ಅಗ್ನಿಹೋತ್ರವಾಗಿದೆ.॥36॥

(ಶ್ಲೋಕ - 37)

ಮೂಲಮ್

ದೀಕ್ಷಾನುಜನ್ಮೋಪಸದಃ ಶಿರೋಧರಂ
ತ್ವಂ ಪ್ರಾಯಣೀಯೋದಯನೀಯದಂಷ್ಟ್ರಃ ।
ಜಿಹ್ವಾ ಪ್ರವರ್ಗ್ಯಸ್ತವ ಶೀರ್ಷಕಂ ಕ್ರತೋಃ
ಸಭ್ಯಾವಸಥ್ಯಂ ಚಿತಯೋಸವೋ ಹಿ ತೇ ॥

ಅನುವಾದ

ಆಗಾಗ ಅವತರಿಸುವುದು ಯಜ್ಞ ಸ್ವರೂಪನಾದ ನಿನ್ನ ‘ದೀಕ್ಷಣೀಯ’ ಎಂಬ ಇಷ್ಟಿಯಾಗಿದೆ. ನಿನ್ನ ಕುತ್ತಿಗೆಯೇ ‘ಉಪಸದ’ ಎಂಬ ಮೂರು ಇಷ್ಟಿಗಳ ರೂಪವಾಗಿದೆ. ಎರಡು ದಾಡೆಗಳು ‘ಪ್ರಾಯ ಣೀಯ’ (ದೀಕ್ಷಾನಂತರದ ಇಷ್ಟಿ) ಮತ್ತು ‘ಉದಯನೀಯ’ (ಯಜ್ಞಸಮಾಪ್ತಿ ಇಷ್ಟಿ) ಇಷ್ಟಿಗಳಾಗಿವೆ. ನಿನ್ನ ನಾಲಿಗೆಯು ‘ಪ್ರವರ್ಗ್ಯ’ವು. (ಪ್ರತಿಯೊಂದು ಉಪಸದಕ್ಕೂ ಹಿಂದೆ ಮಾಡಲ್ಪಡುವ ಮಹಾವೀರ ಎಂಬ ಕರ್ಮವು.) ನಿನ್ನ ಶಿರಸ್ಸು ‘ಸಭ್ಯ’ (ಹೋಮ ರಹಿತವಾದ) ಎಂಬ ಅಗ್ನಿಯು. ‘ಆವಸಥ್ಯ’ ಎಂಬ ಔಪಾಸನಾಗ್ನಿಯೂ ಮತ್ತು ಪ್ರಾಣಚಿತಿಯೂ (ಇಷ್ಟಕಾಚಯನ) ನಿನ್ನ ಪ್ರಾಣಗಳು.॥37॥

(ಶ್ಲೋಕ - 38)

ಮೂಲಮ್

ಸೋಮಸ್ತು ರೇತಃ ಸವನಾನ್ಯವಸ್ಥಿತಿಃ
ಸಂಸ್ಥಾವಿಭೇದಾಸ್ತವ ದೇವ ಧಾತವಃ ।
ಸತ್ರಾಣಿ ಸರ್ವಾಣಿ ಶರೀರಸಂಧಿ-
ಸ್ತ್ವಂ ಸರ್ವಯಜ್ಞಕ್ರತುರಿಷ್ಟಿಬಂಧನಃ ॥

ಅನುವಾದ

ದೇವಾ ! ನಿನ್ನ ವೀರ್ಯವೇ ಸೋಮವು. ಕೂರುವಿಕೆಯು ಪ್ರಾತಃ ಸವನವೇ ಮುಂತಾದ ಮೂರು ಸವನಗಳು. ನಿನ್ನ ಏಳು ಧಾತುಗಳೇ ಅಗ್ನಿಷ್ಟೋಮ, ಅತ್ಯಗ್ನಿಷ್ಟೋಮ, ಉಕ್ಥ್ಯ, ಷೋಡಶೀ, ವಾಜಪೇಯ, ಅತಿರಾತ್ರ ಮತ್ತು ಆಪ್ತೋರ್ಯಾಮಗಳೆಂಬ ಏಳು ಸಂಸ್ಥೆಗಳು ಮತ್ತು ನಿನ್ನ ಶರೀರದ ಸಂಧಿಭಾಗಗಳೇ ಸಂಪೂರ್ಣವಾದ ದ್ವಾದಶಾಹವೇ ಮುಂತಾದ ಸತ್ರಗಳು. ಹೀಗೆ ನೀನು ಸಂಪೂರ್ಣ ಯಜ್ಞವೂ (ಅಂದರೆ ಸೋಮರಹಿತಯಜ್ಞ ) ಮತ್ತು ಕ್ರತುವೂ (ಸೋಮ ಸಹಿತ ಯಜ್ಞ ) ಎರಡೂ ಆಗಿರುವೆ. ಯಜ್ಞಾನುಷ್ಠಾನ ರೂಪವಾದ ಇಷ್ಟಿಗಳು ನಿನ್ನ ಅಂಗಗಳನ್ನು ಒಟ್ಟಿಗೆ ಸೇರಿಸಿರುವ ಮಾಂಸಪೇಶಿಗಳಾಗಿವೆ. ॥38॥

(ಶ್ಲೋಕ - 39)

ಮೂಲಮ್

ನಮೋ ನಮಸ್ತೇಖಿಲಮಂತ್ರ ದೇವತಾ-
ದ್ರವ್ಯಾಯ ಸರ್ವಕ್ರತವೇ ಕ್ರಿಯಾತ್ಮನೇ ।
ವೈರಾಗ್ಯಭಕ್ತ್ಯಾತ್ಮಜಯಾನುಭಾವಿತ-
ಜ್ಞಾನಾಯ ವಿದ್ಯಾಗುರವೇ ನಮೋ ನಮಃ ॥

ಅನುವಾದ

ಸಮಸ್ತ ಮಂತ್ರ ಸ್ವರೂಪನೂ, ದೇವತಾ ಸ್ವರೂಪನೂ, ದ್ರವ್ಯ ಸ್ವರೂಪನೂ, ಯಜ್ಞ ಸ್ವರೂಪನೂ, ಕರ್ಮ ಸ್ವರೂಪನೂ ಆಗಿರುವ ನಿನಗೆ ನಮೋ ನಮಃ. ವೈರಾಗ್ಯ, ಭಕ್ತಿ ಮತ್ತು ಚಿತ್ತದ ಏಕಾಗ್ರತೆಯಿಂದ ಯಾವ ಜ್ಞಾನವು ಅನುಭವಕ್ಕೆ ಬರುವುದೋ, ಅದು ನಿನ್ನ ಸ್ವರೂಪವೇ ಆಗಿದೆ. ನೀನೇ ಎಲ್ಲರ ವಿದ್ಯಾ ಗುರುವು ಆಗಿರುವೆ. ಅಂತಹ ನಿನಗೆ ಮತ್ತೆ-ಮತ್ತೆ ಪ್ರಣಾಮಗಳು.॥39॥

(ಶ್ಲೋಕ - 40)

ಮೂಲಮ್

ದಂಷ್ಟ್ರಾಗ್ರಕೋಟ್ಯಾ ಭಗವಂಸ್ತ್ವಯಾ ಧೃತಾ
ವಿರಾಜತೇ ಭೂಧರ ಭೂಃ ಸಭೂಧರಾ ।
ಯಥಾ ವನಾನ್ನಿಃಸರತೋ ದತಾ ಧೃತಾ
ಮತಂಗಜೇಂದ್ರಸ್ಯ ಸಪತ್ರಪದ್ಮಿನೀ ॥

ಅನುವಾದ

ಭೂದೇವಿಯನ್ನು ಧರಿಸಿಕೊಂಡಿರುವ ಭಗವಂತನೇ! ನೀನು ಕೋರೆದಾಡೆಗಳ ತುದಿಯಲ್ಲಿ ಇರಿಸಿ ಕೊಂಡಿರುವ ಪರ್ವತಗಳಿಂದ ಅಲಂಕೃತವಾದ ಈ ಭೂಗೋಳವು ಜಲಾಶಯ ದಿಂದ ಹೊರಬರುತ್ತಿರುವ ಮದಗಜದ ದಂತಾಗ್ರದಲ್ಲಿ ದಳಗಳ ಸಹಿತ ಕಮಲದಂತೆ ಬೆಳಗುತ್ತಿದೆ.॥40॥

(ಶ್ಲೋಕ - 41)

ಮೂಲಮ್

ತ್ರಯೀಮಯಂ ರೂಪಮಿದಂ ಚ ಸೌಕರಂ
ಭೂಮಂಡಲೇನಾಥ ದತಾ ಧೃತೇನ ತೇ ।
ಚಕಾಸ್ತಿ ಶೃಂಗೋಢಘನೇನ ಭೂಯಸಾ
ಕುಲಾಚಲೇಂದ್ರಸ್ಯ ಯಥೈವ ವಿಭ್ರಮಃ ॥

ಅನುವಾದ

ಕೋರೆಹಲ್ಲುಗಳ ಮೇಲೆ ಭೂಮಂಡಲವನ್ನು ಧರಿಸಿಕೊಂಡಿರುವ ನಿನ್ನ ಈ ವೇದಮಯವಾದ ವರಾಹ ಶ್ರೀವಿಗ್ರಹವು ತನ್ನ ಶಿಖರದ ಮೇಲೆ ಮೇಘಮಾಲೆಯನ್ನು ಧರಿಸಿಕೊಂಡಿರುವ ಮಹಾಕುಲಪರ್ವತ ದಂತೆ ಕಂಗೊಳಿಸುತ್ತಿದೆ.॥41॥

(ಶ್ಲೋಕ - 42)

ಮೂಲಮ್

ಸಂಸ್ಥಾಪಯೈನಾಂ ಜಗತಾಂ ಸತಸ್ಥುಷಾಂ
ಲೋಕಾಯ ಪತ್ನೀಮಸಿ ಮಾತರಂ ಪಿತಾ ।
ವಿಧೇಮ ಚಾಸ್ಯೈ ನಮಸಾ ಸಹ ತ್ವಯಾ
ಯಸ್ಯಾಂ ಸ್ವತೇಜೋಗ್ನಿಮಿವಾರಣಾವಧಾಃ ॥

ಅನುವಾದ

ಸ್ವಾಮಿ! ಚರಾಚರ ಜೀವಿಗಳು ಸುಖವಾಗಿ ವಾಸಿಸಲು ನಿನ್ನ ಪತ್ನಿಯಾದ ಈ ಭೂಮಾತೆಯನ್ನು ಜಲದ ಮೇಲೆ ನೆಲೆಗೊಳಿಸುವವನಾಗು. ಜಗತ್ತಿನ ತಂದೆ ನೀನಾಗಿ ರುವೆ. ಅರಣಿಯಲ್ಲಿ ಅಗ್ನಿಯನ್ನು ಸ್ಥಾಪಿಸುವಂತೆ ನೀನು ಇದರಲ್ಲಿ ಧಾರಣಾಶಕ್ತಿರೂಪವಾದ ನಿನ್ನ ತೇಜಸ್ಸನ್ನು ಸ್ಥಾಪಿಸಿದ್ದೀಯೇ. ಇಂತಹ ನಿನಗೂ ಮತ್ತು ಈ ಭೂಮಾತೆಗೂ ಭೂರಿ-ಭೂರಿ ನಮ ಸ್ಕಾರಗಳು.॥42॥

(ಶ್ಲೋಕ - 43)

ಮೂಲಮ್

ಕಃ ಶ್ರದ್ದಧೀತಾನ್ಯತಮಸ್ತವ ಪ್ರಭೋ
ರಸಾಂ ಗತಾಯಾ ಭುವ ಉದ್ವಿಬರ್ಹಣಮ್ ।
ನ ವಿಸ್ಮಯೋಸೌ ತ್ವಯಿ ವಿಶ್ವವಿಸ್ಮಯೇ
ಯೋ ಮಾಯಯೇದಂ ಸಸೃಜೇತಿವಿಸ್ಮಯಮ್ ॥

ಅನುವಾದ

ಪ್ರಭೋ ! ರಸಾತಳದಲ್ಲಿ ಮುಳುಗಿ ಹೋಗಿದ್ದ ಪೃಥಿವಿಯನ್ನು ಮೇಲಕ್ಕೆ ಎತ್ತುವ ಸಾಹಸವನ್ನು ಮಾಡಲು ನೀನಲ್ಲದೆ ಬೇರೆ ಯಾರಿಗೆ ಶಕ್ಯವಿದೆ. ಆದರೆ ನೀನು ಆಶ್ಚರ್ಯಗಳ ನಿಧಿಯು. ಇದು ನಿನಗೆ ದೊಡ್ಡ ಆಶ್ಚರ್ಯದ ಕೆಲಸವೇನೂ ಅಲ್ಲ. ಮಾಯಾಬಲದಿಂದ ಈ ಅತ್ಯಾಶ್ಚರ್ಯಮಯವಾದ ವಿಶ್ವವನ್ನು ರಚಿಸಿದವನು ನೀನೇ ಅಲ್ಲವೇ!॥43॥

(ಶ್ಲೋಕ - 44)

ಮೂಲಮ್

ವಿಧುನ್ವತಾ ವೇದಮಯಂ ನಿಜಂ ವಪು-
ರ್ಜನಸ್ತಪಃ ಸತ್ಯನಿವಾಸಿನೋ ವಯಮ್ ।
ಸಟಾಶಿಖೋದ್ಧೂತಶಿವಾಂಬುಬಿಂದುಭಿ-
ರ್ವಿಮೃಜ್ಯಮಾನಾ ಭೃಶಮೀಶ ಪಾವಿತಾಃ ॥

ಅನುವಾದ

ನೀನು ನಿನ್ನ ವೇದಮಯವಾದ ದಿವ್ಯಮಂಗಳ ವಿಗ್ರಹವನ್ನು ಅಲುಗಾಡಿಸಿದಾಗ ನಿನ್ನ ಕುತ್ತಿಗೆಯ ಕೂದಲುಗಳಿಂದ ಸಿಡಿದ ಶೀತಲ ಜಲಬಿಂದುಗಳು ನಮ್ಮ ಮೇಲೆ ಬೀಳುತ್ತಿವೆ. ಅದರಲ್ಲಿ ನೆನೆದ ಜನೋಲೋಕ, ತಪೋಲೋಕ, ಸತ್ಯ ಲೋಕಗಳ ನಿವಾಸಿಗಳಾದ ನಾವೆಲ್ಲರೂ ಪವಿತ್ರರಾಗಿ ಬಿಟ್ಟಿದ್ದೇವೆ.॥44॥

(ಶ್ಲೋಕ - 45)

ಮೂಲಮ್

ಸ ವೈ ಬತ ಭ್ರಷ್ಟಮತಿಸ್ತವೈಷ ತೇ
ಯಃ ಕರ್ಮಣಾಂ ಪಾರಮಪಾರಕರ್ಮಣಃ ।
ಯದ್ಯೋಗಮಾಯಾಗುಣಯೋಗಮೋಹಿತಂ
ವಿಶ್ವಂ ಸಮಸ್ತಂ ಭಗವನ್ವಿಧೇಹಿ ಶಮ್ ॥

ಅನುವಾದ

ಅಪಾರವಾದ ಕರ್ಮಗಳುಳ್ಳವನು ನೀನು. ನಿನ್ನ ಕರ್ಮಗಳ ಪಾರ(ಕೊನೆ)ವನ್ನು ಹೊಂದಲು ಬಯಸುವವನು ಬುದ್ಧಿ ಗೆಟ್ಟವನೆಂದೇ ಹೇಳಬೇಕಷ್ಟೆ. ನಿನ್ನ ಯೋಗ ಮಾಯೆಯ ಗುಣಗಳ ಯೋಗದಿಂದಲೇ ಈ ಇಡೀ ಜಗತ್ತು ಮೋಹಿತವಾಗಿದೆ. ಭಗವಂತನೇ ! ಈ ಜಗತ್ತಿಗೆ ಮಂಗಳವನ್ನುಂಟು ಮಾಡು.॥45॥

(ಶ್ಲೋಕ - 46)

ಮೂಲಮ್ (ವಾಚನಮ್)

ಮೈತ್ರೇಯ ಉವಾಚ

ಮೂಲಮ್

ಇತ್ಯುಪಸ್ಥೀಯಮಾನಸ್ತೈರ್ಮುನಿಭಿರ್ಬ್ರಹ್ಮವಾದಿಭಿಃ ।
ಸಲಿಲೇ ಸ್ವಖುರಾಕ್ರಾಂತ ಉಪಾಧತ್ತಾವಿತಾವನಿಮ್ ॥

ಅನುವಾದ

ಶ್ರೀಮೈತ್ರೇಯರು ಹೇಳುತ್ತಾರೆ - ವಿದುರನೇ ! ಆ ಬ್ರಹ್ಮ ವಾದಿಗಳಾದ ಮುನಿಗಳು ಹೀಗೆ ಸ್ತುತಿಸುತ್ತಿರಲಾಗಿ ಸರ್ವರಕ್ಷಕ ನಾದ ವರಾಹಮೂರ್ತಿ ಭಗವಂತನು ತನ್ನ ಗೊರಸುಗಳಿಂದ ನೀರನ್ನು ಸ್ತಂಭನಮಾಡಿ ಅದರ ಮೇಲೆ ಭೂದೇವಿಯನ್ನು ನೆಲೆಗೊಳಿಸಿದನು.॥46॥

(ಶ್ಲೋಕ - 47)

ಮೂಲಮ್

ಸ ಇತ್ಥಂ ಭಗವಾನುರ್ವೀಂ ವಿಷ್ವಕ್ಸೇನಃ ಪ್ರಜಾಪತಿಃ ।
ರಸಾಯಾ ಲೀಲಯೋನ್ನೀತಾಮಪ್ಸು ನ್ಯಸ್ಯ ಯಯೌ ಹರಿಃ ॥

ಅನುವಾದ

ಹೀಗೆ ರಸಾತಳದಿಂದ ಲೀಲಾಜಾಲವಾಗಿ ಎತ್ತಿತಂದಿರುವ ಭೂಮಿಯನ್ನು ಜಲದ ಮೇಲೆ ಇರಿಸಿ ವಿಷ್ವಕ್ಸೇನನೂ, ಪ್ರಜಾಪತಿಯೂ ಆದ ಭಗವಾನ್ ಶ್ರೀಹರಿಯು ಅಂತರ್ಧಾನಹೊಂದಿದನು.॥47॥

(ಶ್ಲೋಕ - 48)

ಮೂಲಮ್

ಯ ಏವಮೇತಾಂ ಹರಿಮೇಧಸೋ ಹರೇಃ
ಕಥಾಂ ಸುಭದ್ರಾಂ ಕಥನೀಯಮಾಯಿನಃ ।
ಶೃಣ್ವೀತ ಭಕ್ತ್ಯಾ ಶ್ರವಯೇತ ವೋಶತೀಂ
ಜನಾರ್ದನೋಸ್ಯಾಶು ಹೃದಿ ಪ್ರಸೀದತಿ ॥

ಅನುವಾದ

ಎಲೈ ವಿದುರನೇ! ಶ್ರೀಭಗವಂತನ ಲೀಲಾಮಯವಾದ ಚರಿತ್ರೆಗಳು ಕೀರ್ತಿಸಲು ಯೋಗ್ಯವಾಗಿದೆ. ಅವುಗಳಲ್ಲೇ ತೊಡಗಿದ ಬುದ್ಧಿಯು ಎಲ್ಲ ರೀತಿಯ ಪಾಪ-ತಾಪಗಳನ್ನು ದೂರಮಾಡುತ್ತದೆ. ಮಂಗಳಮನೋಹರವಾದ ಈ ಕಥೆಯನ್ನು ಭಕ್ತಿಭಾವದಿಂದ ಕೇಳುವ ಅಥವಾ ಹೇಳುವ ಮನುಷ್ಯನ ವಿಷಯದಲ್ಲಿ ಭಕ್ತವತ್ಸಲನಾದ ಭಗವಂತನು ಅಂತರಂಗದಲ್ಲಿ ಬಹುಬೇಗನೇ ಪ್ರಸನ್ನನಾಗುವನು.॥48॥

(ಶ್ಲೋಕ - 49)

ಮೂಲಮ್

ತಸ್ಮಿನ್ಪ್ರಸನ್ನೇ ಸಕಲಾಶಿಷಾಂ ಪ್ರಭೌ
ಕಿಂ ದುರ್ಲಭಂ ತಾಭಿರಲಂ ಲವಾತ್ಮಭಿಃ ।
ಅನನ್ಯದೃಷ್ಟ್ಯಾ ಭಜತಾಂ ಗುಹಾಶಯಃ
ಸ್ವಯಂ ವಿಧತ್ತೇ ಸ್ವಗತಿಂ ಪರಃ ಪರಾಮ್ ॥

ಅನುವಾದ

ಶ್ರೀಭಗವಂತನಾದರೋ ಎಲ್ಲ ಕಾಮನೆಗಳನ್ನೂ ಈಡೇರಿಸುವ ಸಾಮರ್ಥ್ಯವುಳ್ಳವನು. ಅವನು ಪ್ರಸನ್ನವಾದರೆ ಪ್ರಪಂಚದಲ್ಲಿ ಯಾವುದು ತಾನೇ ದುರ್ಲಭವಿದೆ ? ಅದರೆ ಆ ಕ್ಷುದ್ರವಾದ ಬಯಕೆಗಳ ಆವಶ್ಯಕತೆಯಾದರೂ ಏನಿದೆ ? ಅನನ್ಯ ಭಾವದಿಂದ ಅವನನ್ನು ಭಜಿಸುವವರಿಗೆ ಅಂತರ್ಯಾಮಿ ಪರಮಾತ್ಮನು ಸ್ವತಃ ತನ್ನ ಪರಮಪದವನ್ನು ಕೊಟ್ಟುಬಿಡುತ್ತಾನೆ.॥49॥

(ಶ್ಲೋಕ - 50)

ಮೂಲಮ್

ಕೋ ನಾಮ ಲೋಕೇ ಪುರುಷಾರ್ಥಸಾರವಿತ್
ಪುರಾಕಥಾನಾಂ ಭಗವತ್ಕಥಾಸುಧಾಮ್ ।
ಆಪೀಯ ಕರ್ಣಾಂಜಲಿಭಿರ್ಭವಾಪಹಾ-
ಮಹೋ ವಿರಜ್ಯೇತ ವಿನಾ ನರೇತರಮ್ ॥

ಅನುವಾದ

ಸಂಸಾರ ಬಂಧನವನ್ನು ಬಿಡಿಸುವ ಶ್ರೀಭಗವಂತನ ಪ್ರಾಚೀನ ಕಥೆಗಳಲ್ಲಿನ ಕಥಾಮೃತವನ್ನು ಒಮ್ಮೆ ಕರ್ಣಪುಟದಿಂದ ಪಾನಮಾಡಿದರೂ ಪುರುಷಾರ್ಥಗಳ ಸಾರವನ್ನು ಬಲ್ಲ ಮನುಷ್ಯರಿಗೆ ಅದರಲ್ಲಿ ಬೇಸರ ಉಂಟಾಗುವುದಿಲ್ಲ. ಹಾಗೇ ಬೇಸರ ಉಂಟಾದರೆ ಆತನು ಮನುಷ್ಯನೇ ಅಲ್ಲ.॥50॥

ಅನುವಾದ (ಸಮಾಪ್ತಿಃ)

ಹದಿಮೂರನೆಯ ಅಧ್ಯಾಯವು ಮುಗಿಯಿತು. ॥13॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ತೃತೀಯಸ್ಕಂಧೇ ವರಾಹಪ್ರಾದುರ್ಭಾವಾನುವರ್ಣನೇ ತ್ರಯೋದಶೋಽಧ್ಯಾಯಃ ॥13॥