[ಹನ್ನೆರಡನೆಯ ಅಧ್ಯಾಯ]
ಭಾಗಸೂಚನಾ
ಸೃಷ್ಟಿಯ ವಿಸ್ತಾರ
(ಶ್ಲೋಕ - 1)
ಮೂಲಮ್ (ವಾಚನಮ್)
ಮೈತ್ರೇಯ ಉವಾಚ
ಮೂಲಮ್
ಇತಿ ತೇ ವರ್ಣಿತಃ ಕ್ಷತ್ತಃ ಕಾಲಾಖ್ಯಃ ಪರಮಾತ್ಮನಃ ।
ಮಹಿಮಾ ವೇದಗರ್ಭೋಥ ಯಥಾಸ್ರಾಕ್ಷೀನ್ನಿಬೋಧ ಮೇ ॥
ಅನುವಾದ
ಶ್ರೀಮೈತ್ರೇಯರು ಹೇಳುತ್ತಾರೆ - ಮಹಾತ್ಮನಾದ ವಿದುರನೇ ! ಇಲ್ಲಿಯವರೆಗೆ ನಾನು ನಿನಗೆ ಭಗವಂತನ ಕಾಲರೂಪ ವಾದ ಮಹಿಮೆಯನ್ನು ಹೇಳಿದೆನು. ಈಗ ಬ್ರಹ್ಮದೇವರು ಜಗತ್ತನ್ನು ಹೇಗೆ ಸೃಷ್ಟಿಸಿದರೆಂಬುದನ್ನು ಹೇಳುತ್ತೇನೆ ; ಕೇಳು.॥1॥
(ಶ್ಲೋಕ - 2)
ಮೂಲಮ್
ಸಸರ್ಜಾಗ್ರೇಂಧತಾಮಿಸ್ರಮಥ ತಾಮಿಸ್ರಮಾದಿಕೃತ್ ।
ಮಹಾಮೋಹಂ ಚ ಮೋಹಂ ಚ ತಮಶ್ಚಾಜ್ಞಾನವೃತ್ತಯಃ ॥
ಅನುವಾದ
ಮೊಟ್ಟ ಮೊದಲಿಗೆ ಅವರು ಅಜ್ಞಾನದ ಐದು ವೃತ್ತಿಗಳಾದ ತಮಸ್ಸು (ಅವಿದ್ಯೆ), ಮೋಹ (ಅಸ್ಮಿತೆ), ಮಹಾಮೋಹ (ರಾಗ), ತಾಮಿಸ್ರ (ದ್ವೇಷ) ಮತ್ತು ಅಂಧತಾಮಿಸ್ರ (ಅಭಿನಿವೇಶ) ಇವುಗಳನ್ನು ಸೃಷ್ಟಿಸಿದರು.॥2॥
(ಶ್ಲೋಕ - 3)
ಮೂಲಮ್
ದೃಷ್ಟ್ವಾ ಪಾಪೀಯಸೀಂ ಸೃಷ್ಟಿಂ ನಾತ್ಮಾನಂ ಬಹ್ವಮನ್ಯತ ।
ಭಗವದ್ಧ್ಯಾನಪೂತೇನ ಮನಸಾನ್ಯಾಂ ತತೋಸೃಜತ್ ॥
ಅನುವಾದ
ಆದರೆ ಈ ಅತ್ಯಂತ ಪಾಪಮಯ ಸೃಷ್ಟಿಯನ್ನು ನೋಡಿ ಅವರಿಗೆ ಸಂತೋಷವಾಗಲಿಲ್ಲ. ಆಗ ಅವರು ತಮ್ಮ ಮನಸ್ಸನ್ನು ಪರಮಾತ್ಮನ ಧ್ಯಾನದಿಂದ ಪವಿತ್ರವಾಗಿಸಿಕೊಂಡು ಬೇರೊಂದು ಸೃಷ್ಟಿಯನ್ನು ಮಾಡಿದರು.॥3॥
(ಶ್ಲೋಕ - 4)
ಮೂಲಮ್
ಸನಕಂ ಚ ಸನಂದಂ ಚ ಸನಾತನಮಥಾತ್ಮಭೂಃ ।
ಸನತ್ಕುಮಾರಂ ಚ ಮುನೀನ್ನಿಷ್ಕ್ರಿಯಾನೂರ್ಧ್ವರೇತಸಃ ॥
ಅನುವಾದ
ಈ ಬಾರಿ ಅವರು ಸನಕ, ಸನಂದನ, ಸನಾತನ ಮತ್ತು ಸನತ್ಕುಮಾರ ಎಂಬ ನಾಲ್ಕುಮಂದಿ ನಿವೃತ್ತಿಧರ್ಮಪರಾಯಣರಾದ ಊರ್ಧ್ವರೇತಸ್ಕ ರಾದ ಮುನಿಶ್ರೇಷ್ಠರನ್ನು ಸೃಷ್ಟಿಸಿದರು.॥4॥
(ಶ್ಲೋಕ - 5)
ಮೂಲಮ್
ತಾನ್ಬಭಾಷೇ ಸ್ವಭೂಃ ಪುತ್ರಾನ್ಪ್ರಜಾಃ ಸೃಜತ ಪುತ್ರಕಾಃ ।
ತನ್ನೈಚ್ಛನ್ಮೋಕ್ಷಧರ್ಮಾಣೋ ವಾಸುದೇವಪರಾಯಣಾಃ ॥
ಅನುವಾದ
ತಮ್ಮ ಆ ಪುತ್ರರಿಗೆ ಸ್ವಯಂಭೂ ಬ್ರಹ್ಮದೇವರು ‘ಪುತ್ರರೇ! ನೀವು ಸೃಷ್ಟಿಯನ್ನು ಮಾಡಿರಿ’ ಎಂದು ಹೇಳಿದರು. ಆದರೆ ಅವರು ಹುಟ್ಟಿನಿಂದಲೇ ಮೋಕ್ಷಧರ್ಮವುಳ್ಳವರೂ, ನಿವೃತ್ತಿಮಾರ್ಗನಿಷ್ಠರೂ, ವಾಸುದೇವ ಪರಾಯಣರೂ ಆಗಿದ್ದರಿಂದ ಪ್ರವೃತ್ತಿಧರ್ಮರೂಪವಾದ ಸೃಷ್ಟಿಯನ್ನು ಮಾಡಲು ಇಷ್ಟಪಡಲಿಲ್ಲ.॥5॥
(ಶ್ಲೋಕ - 6)
ಮೂಲಮ್
ಸೋವಧ್ಯಾತಃ ಸುತೈರೇವಂ ಪ್ರತ್ಯಾಖ್ಯಾತಾನುಶಾಸನೈಃ ।
ಕ್ರೋಧಂ ದುರ್ವಿಷಹಂ ಜಾತಂ ನಿಯಂತುಮುಪಚಕ್ರಮೇ ॥
ಅನುವಾದ
ನನ್ನ ಪುತ್ರರು ಹೀಗೆ ತನ್ನ ಅಪ್ಪಣೆಯನ್ನು ಮೀರಿ ತಿರಸ್ಕಾರ ಮಾಡಿದುದನ್ನು ನೋಡಿ ಬ್ರಹ್ಮದೇವರಿಗೆ ಸಹಿಸಲಾರದಷ್ಟು ಕ್ರೋಧವುಂಟಾಯಿತು. ಅವರು ಅದನ್ನು ತಡೆದುಕೊಳ್ಳಲು ಪ್ರಯತ್ನಮಾಡಿದರು.॥6॥
(ಶ್ಲೋಕ - 7)
ಮೂಲಮ್
ಧಿಯಾ ನಿಗೃಹ್ಯಮಾಣೋಪಿ ಭ್ರುವೋರ್ಮಧ್ಯಾತ್ಪ್ರಜಾಪತೇಃ ।
ಸದ್ಯೋಜಾಯತ ತನ್ಮನ್ಯುಃ ಕುಮಾರೋ ನೀಲಲೋಹಿತಃ ॥
ಅನುವಾದ
ಆದರೆ ಬುದ್ಧಿಯಿಂದ ಅದನ್ನು ತಡೆದರೂ ಕೂಡ ಆ ಕ್ರೋಧವು ಪ್ರಜಾಪತಿಯ ಹುಬ್ಬುಗಳ ಮಧ್ಯದಿಂದ ನೀಲಿ ಮತ್ತು ಕೆಂಪುಬಣ್ಣದ ಓರ್ವ ಬಾಲಕನ ರೂಪದಲ್ಲಿ ಪ್ರಕಟಗೊಂಡಿತು.॥7॥
(ಶ್ಲೋಕ - 8)
ಮೂಲಮ್
ಸ ವೈ ರುರೋದ ದೇವಾನಾಂ ಪೂರ್ವಜೋ ಭಗವಾನ್ಭವಃ ।
ನಾಮಾನಿ ಕುರು ಮೇ ಧಾತಃ ಸ್ಥಾನಾನಿ ಚ ಜಗದ್ಗುರೋ ॥
ಅನುವಾದ
ಆ ಬಾಲಕನೇ ದೇವತೆಗಳಿಗೆಲ್ಲ ಮೊದಲು ಹುಟ್ಟಿದ ಭಗವಾನ್ ರುದ್ರದೇವರು. ಆತನು ಅಳುತ್ತಾ-ಅಳುತ್ತಾ ‘ಓ ಜಗದ್ಗುರೋ, ಸೃಷ್ಟಿಕರ್ತನೇ ! ನನಗೆ ಹೆಸರನ್ನೂ , ವಾಸಸ್ಥಾನವನ್ನೂ ತಿಳಿಸುವವನಾಗು ಎಂದು ಕೇಳತೊಡಗಿದನು.॥8॥
(ಶ್ಲೋಕ - 9)
ಮೂಲಮ್
ಇತಿ ತಸ್ಯ ವಚಃ ಪಾದ್ಮೋ ಭಗವಾನ್ಪರಿಪಾಲಯನ್ ।
ಅಭ್ಯಧಾದ್ಭದ್ರಯಾ ವಾಚಾ ಮಾ ರೋದೀಸ್ತತ್ಕರೋಮಿ ತೇ ॥
ಅನುವಾದ
ಆಗ ಪದ್ಮಸಂಭವ ಭಗವಾನ್ ಬ್ರಹ್ಮದೇವರು ಆ ಬಾಲಕನ ಪ್ರಾರ್ಥನೆಯನ್ನು ಈಡೇರಿಸಲು ಮಧುರವಾದ ವಾಣಿಯಿಂದ ಮಗೂ ! ಅಳಬೇಡ, ನಿನ್ನ ಇಚ್ಛೆಯನ್ನು ಪೂರೈಸುತ್ತೇನೆ ಎಂದು ಹೇಳಿದರು.॥9॥
(ಶ್ಲೋಕ - 10)
ಮೂಲಮ್
ಯದರೋದೀಃ ಸುರಶ್ರೇಷ್ಠ ಸೋದ್ವೇಗ ಇವ ಬಾಲಕಃ ।
ತತಸ್ತ್ವಾಮಭಿಧಾಸ್ಯಂತಿ ನಾಮ್ನಾ ರುದ್ರ ಇತಿ ಪ್ರಜಾಃ ॥
ಅನುವಾದ
ದೇವಶ್ರೇಷ್ಠನೇ ! ನೀನು ಹುಟ್ಟಿದೊಡನೆಯೇ ಬಾಲಕನಂತೆ ಅಳತೊಡಗಿದೆ. ಆದ್ದರಿಂದ ಜನರು ನಿನ್ನನ್ನು ‘ರುದ್ರ’ ನೆಂಬ ಹೆಸರಿನಿಂದ ಕರೆಯುವರು.॥10॥
(ಶ್ಲೋಕ - 11)
ಮೂಲಮ್
ಹೃದಿಂದ್ರಿಯಾಣ್ಯಸುರ್ವ್ಯೋಮ ವಾಯುರಗ್ನಿರ್ಜಲಂ ಮಹೀ ।
ಸೂರ್ಯಶ್ಚಂದ್ರಸ್ತಪಶ್ಚೈವ ಸ್ಥಾನಾನ್ಯಗ್ರೇ ಕೃತಾನಿ ಮೇ ॥
ಅನುವಾದ
ನಿನಗೆ ವಾಸಿಸಲು ಹೃದಯ, ಇಂದ್ರಿಯ, ಪ್ರಾಣ, ಆಕಾಶ, ವಾಯು, ಅಗ್ನಿ, ಜಲ, ಪೃಥಿವಿ, ಸೂರ್ಯ, ಚಂದ್ರ ಮತ್ತು ತಪಸ್ಸು ಈ ಸ್ಥಾನಗಳನ್ನು ಮೊದಲೇ ರಚಿಸಿರುವೆನು.॥11॥
(ಶ್ಲೋಕ - 12)
ಮೂಲಮ್
ಮನ್ಯುರ್ಮನುರ್ಮಹಿನಸೋ ಮಹಾನ್ಶಿವ ಋತಧ್ವಜಃ ।
ಉಗ್ರರೇತಾ ಭವಃ ಕಾಲೋ ವಾಮದೇವೋ ಧೃತವ್ರತಃ ॥
ಅನುವಾದ
ನೀನು ಮನ್ಯು, ಮನು, ಮಹಿನಸ, ಮಹಾನ್, ಶಿವ, ಋತಧ್ವಜ, ಉಗ್ರರೇತಸ, ಭವ, ಕಾಲ, ವಾಮದೇವ, ಧೃತವ್ರತ ಈ ಹೆಸರುಗಳಿಂದ ಖ್ಯಾತನಾಗುವೆ.॥12॥
(ಶ್ಲೋಕ - 13)
ಮೂಲಮ್
ಧೀರ್ವೃತ್ತಿರುಶನೋಮಾ ಚ ನಿಯುತ್ಸರ್ಪಿರಿಲಾಂಬಿಕಾ ।
ಇರಾವತೀ ಸುಧಾ ದೀಕ್ಷಾ ರುದ್ರಾಣ್ಯೋ ರುದ್ರ ತೇ ಸಿಯಃ ॥
ಅನುವಾದ
ರುದ್ರದೇವನೇ! ಧೀ, ವೃತ್ತಿ, ಉಶನಾ, ಉಮಾ, ನಿಯುತ್, ಸರ್ಪಿ, ಇಳಾ, ಅಂಬಿಕಾ, ಇರಾವತೀ, ಸುಧಾ ಮತ್ತು ದೀಕ್ಷಾ ಎಂಬ ಹನ್ನೊಂದು ಮಂದಿ ರುದ್ರಾಣಿಯರು ನಿನ್ನ ಪತ್ನಿಯರಾಗುವರು.॥13॥
(ಶ್ಲೋಕ - 14)
ಮೂಲಮ್
ಗೃಹಾಣೈತಾನಿ ನಾಮಾನಿ ಸ್ಥಾನಾನಿ ಚ ಸಯೋಷಣಃ ।
ಏಭಿಃ ಸೃಜ ಪ್ರಜಾ ಬಹ್ವೀಃ ಪ್ರಜಾನಾಮಸಿ ಯತ್ಪತಿಃ ॥
ಅನುವಾದ
ಈ ಹೆಸರುಗಳನ್ನೂ, ಸ್ಥಾನಗಳನ್ನೂ, ಪತ್ನಿಯರನ್ನೂ ಸ್ವೀಕರಿಸಿ ಇವರ ಮೂಲಕ ಬಹುಮಂದಿ ಪ್ರಜೆಗಳನ್ನು ಸೃಷ್ಟಿಸು. ಏಕೆಂದರೆ, ನೀನು ಪ್ರಜಾಪತಿಯಾಗಿರುವೆ, ಎಂದು ಆತನಿಗೆ ಹೇಳಿದರು.॥14॥
(ಶ್ಲೋಕ - 15)
ಮೂಲಮ್
ಇತ್ಯಾದಿಷ್ಟಃ ಸ ಗುರುಣಾ ಭಗವಾನ್ನೀಲಲೋಹಿತಃ ।
ಸತ್ತ್ವಾಕೃತಿಸ್ವಭಾವೇನ ಸಸರ್ಜಾತ್ಮಸಮಾಃ ಪ್ರಜಾಃ ॥
ಅನುವಾದ
ಲೋಕಪಿತಾ ಬ್ರಹ್ಮದೇವರಿಂದ ಹೀಗೆ ಅಪ್ಪಣೆಪಡೆದು ಭಗವಾನ್ ನೀಲಲೋಹಿತ ರುದ್ರದೇವರು ಬಲ, ಆಕಾರ ಮತ್ತು ಸ್ವಭಾವಗಳೆಲ್ಲ ದರಲ್ಲಿಯೂ ತನ್ನಂತೇ ಇರುವ ಪ್ರಜೆಗಳನ್ನು ಸೃಷ್ಟಿಸತೊಡಗಿದರು.॥15॥
ಮೂಲಮ್
(ಶ್ಲೋಕ - 16)
ರುದ್ರಾಣಾಂ ರುದ್ರಸೃಷ್ಟಾನಾಂ ಸಮಂತಾದ್ಗ್ರಸತಾಂ ಜಗತ್ ।
ನಿಶಾಮ್ಯಾ ಸಂಖ್ಯಶೋ ಯೂಥಾನ್ ಪ್ರಜಾಪತಿರಶಂಕತ ॥
ಅನುವಾದ
ಭಗವಾನ್ ರುದ್ರನಿಂದ ಉತ್ಪನ್ನರಾದ ಈ ಅಸಂಖ್ಯ ರುದ್ರರು ಗುಂಪುಗಳನ್ನು ಮಾಡಿಕೊಂಡು ಜಗತ್ತನ್ನು ಭಕ್ಷಿಸತೊಡ ಗಿದರು. ಅದನ್ನು ನೋಡಿ ಬ್ರಹ್ಮದೇವರಿಗೆ ತುಂಬಾ ಭಯ-ಶಂಕೆಗಳು ಉಂಟಾದುವು.॥16॥
(ಶ್ಲೋಕ - 17)
ಮೂಲಮ್
ಅಲಂ ಪ್ರಜಾಭಿಃ ಸೃಷ್ಟಾಭಿರೀದೃಶೀಭಿಃ ಸುರೋತ್ತಮ ।
ಮಯಾ ಸಹ ದಹಂತೀಭಿರ್ದಿಶಶ್ಚಕ್ಷುರ್ಭಿರುಲ್ಬಣೈಃ ॥
ಅನುವಾದ
ಆಗ ಅವರು ರುದ್ರನನ್ನು ಕುರಿತು ‘‘ದೇವಶ್ರೇಷ್ಠನೇ ! ನಿನ್ನ ಪ್ರಜೆಗಳಾದರೋ ತಮ್ಮ ಭಯಂಕರ ದೃಷ್ಟಿಗಳಿಂದ ನನ್ನನ್ನೂ ಹಾಗೂ ಎಲ್ಲ ದಿಕ್ಕುಗಳನ್ನೂ ಸುಟ್ಟುಹಾಕಲು ತೊಡಗಿದ್ದಾರೆ. ಆದ್ದರಿಂದ ಇಂತಹ ಸೃಷ್ಟಿಯನ್ನು ಮುಂದೆ ಮಾಡ ಬೇಡ’’ ಎಂದು ಹೇಳಿದರು.॥17॥
(ಶ್ಲೋಕ - 18)
ಮೂಲಮ್
ತಪ ಆತಿಷ್ಠ ಭದ್ರಂ ತೇ ಸರ್ವಭೂತಸುಖಾವಹಮ್ ।
ತಪಸೈವ ಯಥಾಪೂರ್ವಂ ಸ್ರಷ್ಟಾ ವಿಶ್ವಮಿದಂ ಭವಾನ್ ॥
ಅನುವಾದ
ನಿನಗೆ ಮಂಗಳವಾಗಲೀ, ಈಗ ನೀನು ಸಮಸ್ತ ಪ್ರಾಣಿಗಳಿಗೆ ಸುಖವನ್ನುಂಟುಮಾಡು ವುದಕ್ಕಾಗಿ ತಪಸ್ಸನ್ನಾಚರಿಸು. ಮತ್ತೆ ಆ ತಪಸ್ಸಿನ ಪ್ರಭಾವದಿಂದಲೇ ನೀನು ಹಿಂದಿನಂತೆ ಈ ವಿಶ್ವವನ್ನು ಸೃಷ್ಟಿಸುವೆಯಂತೆ.॥18॥
(ಶ್ಲೋಕ - 19)
ಮೂಲಮ್
ತಪಸೈವ ಪರಂ ಜ್ಯೋತಿರ್ಭಗವಂತಮಧೋಕ್ಷಜಮ್ ।
ಸರ್ವಭೂತಗುಹಾವಾಸಮಂಜಸಾ ವಿಂದತೇ ಪುಮಾನ್ ॥
ಅನುವಾದ
ತಪಸ್ಸಿನ ಮೂಲಕವೇ ಇಂದ್ರಿಯಾತೀತನೂ, ಸರ್ವಾಂತರ್ಯಾ ಮಿಯೂ, ಜ್ಯೋತಿ ಸ್ವರೂಪನೂ ಆದ ಶ್ರೀಹರಿಯನ್ನು ಮನುಷ್ಯನು ಸುಲಭವಾಗಿ ಹೊಂದಬಲ್ಲನು.॥19॥
(ಶ್ಲೋಕ - 20)
ಮೂಲಮ್ (ವಾಚನಮ್)
ಮೈತ್ರೇಯ ಉವಾಚ
ಮೂಲಮ್
ಏವಮಾತ್ಮಭುವಾದಿಷ್ಟಃ ಪರಿಕ್ರಮ್ಯ ಗಿರಾಂ ಪತಿಮ್ ।
ಬಾಢಮಿತ್ಯಮುಮಾಮಂತ್ರ್ಯ ವಿವೇಶ ತಪಸೇ ವನಮ್ ॥
ಅನುವಾದ
ಶ್ರೀಮೈತ್ರೇಯರು ಹೇಳುತ್ತಾರೆ ವಿದುರನೇ ! ಬ್ರಹ್ಮದೇವರ ಅಪ್ಪಣೆಯಂತೆ ರುದ್ರದೇವರು ‘ಹಾಗೆಯೇ ಆಗಲಿ’ ಎಂದು ಹೇಳಿ, ಅವರಿಗೆ ಪ್ರದಕ್ಷಿಣೆ ಮಾಡಿ, ಅವರಿಂದ ಅನುಮತಿಯನ್ನು ಪಡೆದು ತಪಸ್ಸನ್ನಾಚರಿಸಲು ವನಕ್ಕೆ ತೆರಳಿದರು.॥20॥
ಮೂಲಮ್
(ಶ್ಲೋಕ - 21)
ಅಥಾಭಿಧ್ಯಾಯತಃ ಸರ್ಗಂ ದಶ ಪುತ್ರಾಃ ಪ್ರಜಜ್ಞಿರೇ ।
ಭಗವಚ್ಛಕ್ತಿಯುಕ್ತಸ್ಯ ಲೋಕಸಂತಾನಹೇತವಃ ॥
ಅನುವಾದ
ಅನಂತರ ಭಗವಂತನ ಶಕ್ತಿಯಿಂದ ಸಂಪನ್ನರಾದ ಬ್ರಹ್ಮ ದೇವರು ಸೃಷ್ಟಿಯನ್ನು ಮಾಡಲು ಸಂಕಲ್ಪಿಸಿದಾಗ ಅವರಿಗೆ ಹತ್ತು ಮಂದಿ ಪುತ್ರರು ಜನಿಸಿದರು. ಅವರಿಂದಲೇ ಲೋಕದಲ್ಲಿ ಬಹು ಮಟ್ಟಿಗೆ ಪ್ರಜಾವೃದ್ಧಿಯಾದದ್ದು.॥21॥
(ಶ್ಲೋಕ - 22)
ಮೂಲಮ್
ಮರೀಚಿರತ್ರ್ಯಂಗಿರಸೌ ಪುಲಸ್ತ್ಯಃ ಪುಲಹಃ ಕ್ರತುಃ ।
ಭೃಗುರ್ವಸಿಷ್ಠೋ ದಕ್ಷಶ್ಚ ದಶಮಸ್ತತ್ರ ನಾರದಃ ॥
ಅನುವಾದ
ಮರೀಚಿ, ಅತ್ರಿ, ಅಂಗಿರಾ, ಪುಲಸ್ತ್ಯ, ಪುಲಹ, ಕ್ರತು, ಭೃಗು, ವಸಿಷ್ಠ, ದಕ್ಷ ಮತ್ತು ನಾರದರು ಇವರೇ ಆ ಹತ್ತು ಮಂದಿ ಪುತ್ರಶ್ರೇಷ್ಠರು.॥22॥
(ಶ್ಲೋಕ - 23)
ಮೂಲಮ್
ಉತ್ಸಂಗಾನ್ನಾರದೋ ಜಜ್ಞೇ ದಕ್ಷೋಂಗುಷ್ಠಾತ್ಸ್ವಯಂಭುವಃ ।
ಪ್ರಾಣಾದ್ವಸಿಷ್ಠಃ ಸಂಜಾತೋ ಭೃಗುಸ್ತ್ವಚಿ ಕರಾತ್ಕ್ರತುಃ ॥
(ಶ್ಲೋಕ - 24)
ಪುಲಹೋ ನಾಭಿತೋ ಜಜ್ಞೇ ಪುಲಸ್ತ್ಯಃ ಕರ್ಣಯೋರ್ಋಷಿಃ ।
ಅಂಗಿರಾ ಮುಖತೋಕ್ಷ್ಣೋತ್ರಿರ್ಮರೀಚಿರ್ಮನಸೋಭವತ್ ॥
ಅನುವಾದ
ಇವರಲ್ಲಿ ನಾರದರು ಬ್ರಹ್ಮದೇವರ ತೊಡೆಯಿಂದಲೂ, ದಕ್ಷನು ಅಂಗುಷ್ಠದಿಂದಲೂ, ವಸಿಷ್ಠರು ಪ್ರಾಣದಿಂದಲೂ, ಭೃಗು ತ್ವಚೆ ಯಿಂದಲೂ, ಕ್ರತು ಕೈಯಿಂದಲೂ, ಪುಲಹ ನಾಭಿಯಿಂದಲೂ, ಪುಲಸ್ತ್ಯರು ಕಿವಿಯಿಂದಲೂ, ಅಂಗಿರಾ ಬಾಯಿಯಿಂದಲೂ, ಅತ್ರಿಯು ನೇತ್ರಗಳಿಂದಲೂ, ಮರೀಚಿಯು ಮನದಿಂದಲೂ ಉತ್ಪನ್ನರಾದರು.॥23-24॥
(ಶ್ಲೋಕ - 25)
ಮೂಲಮ್
ಧರ್ಮಃ ಸ್ತನಾದ್ದಕ್ಷಿಣತೋ ಯತ್ರ ನಾರಾಯಣಃ ಸ್ವಯಮ್ ।
ಅಧರ್ಮಃ ಪೃಷ್ಠತೋ ಯಸ್ಮಾನ್ಮೃತ್ಯುರ್ಲೋಕಭಯಂಕರಃ ॥
ಅನುವಾದ
ಮತ್ತೆ ಬ್ರಹ್ಮದೇವರ ಬಲಗಡೆಯ ಸ್ತನದಿಂದ ‘ಧರ್ಮ’ವು ಉತ್ಪನ್ನವಾಯಿತು. ಅವನ ಪತ್ನೀ ಮೂರ್ತಿ ಯಿಂದ ಸ್ವಯಂ ನಾರಾಯಣನು ಅವತರಿಸಿದನು. ಬ್ರಹ್ಮದೇವರ ಬೆನ್ನಿನಿಂದ ಅಧರ್ಮದ ಜನ್ಮವಾಯಿತು ಮತ್ತು ಅವನಿಂದ ಜಗತ್ತಿಗೆ ಭಯವನ್ನುಂಟುಮಾಡುವ ಮೃತ್ಯುವು ಜನಿಸಿದನು.॥25॥
(ಶ್ಲೋಕ - 26)
ಮೂಲಮ್
ಹೃದಿ ಕಾಮೋ ಭ್ರುವಃ ಕ್ರೋಧೋ ಲೋಭಶ್ಚಾಧರದಚ್ಛದಾತ್ ।
ಆಸ್ಯಾದ್ವಾಕ್ಸಿಂಧವೋ ಮೇಢ್ರಾನ್ನಿರ್ಋತಿಃ ಪಾಯೋರಘಾಶ್ರಯಃ ॥
ಅನುವಾದ
ಹೀಗೆಯೇ ಬ್ರಹ್ಮದೇವರ ಹೃದಯದಿಂದ ಕಾಮವು, ಹುಬ್ಬುಗಳಿಂದ ಕ್ರೋಧವೂ, ಕೆಳಗಿನ ತುಟಿಯಿಂದ ಲೋಭವೂ, ಬಾಯಿಯಿಂದ ಮಾತಿಗೆ ಅಧಿಷ್ಠಾತ್ರಿ ದೇವತೆಯಾದ ಸರಸ್ವತಿಯೂ, ಲಿಂಗದಿಂದ ಸಮುದ್ರವೂ, ಗುದದಿಂದ ರಾಕ್ಷಸಾಧಿಪತಿಯೂ, ಪಾಪಗಳಿಗೆ ನಿವಾಸಸ್ಥಾನವಾದ ನಿರ್ಋತಿಯೂ ಉದ್ಭವಿಸಿದರು.॥26॥
(ಶ್ಲೋಕ - 27)
ಮೂಲಮ್
ಛಾಯಾಯಾಃ ಕರ್ದಮೋ ಜಜ್ಞೇ ದೇವಹೂತ್ಯಾಃ ಪತಿಃ ಪ್ರಭುಃ ।
ಮನಸೋ ದೇಹತಶ್ಚೇದಂ ಜಜ್ಞೇ ವಿಶ್ವಕೃತೋ ಜಗತ್ ॥
ಅನುವಾದ
ನೆರಳಿನಿಂದ ದೇವಹೂತಿಯ ಪತಿಪೂಜ್ಯರಾದ ಕರ್ದಮರೂ ಜನಿಸಿದರು. ಹೀಗೆ ಈ ಇಡೀ ಜಗತ್ತು ಸೃಷ್ಟಿಕರ್ತರಾದ ಬ್ರಹ್ಮದೇವರ ಶರೀರ ಮತ್ತು ಮನಸ್ಸುಗಳಿಂದ ಉಂಟಾಗಿದೆ.॥27॥
(ಶ್ಲೋಕ - 28)
ಮೂಲಮ್
ವಾಚಂ ದುಹಿತರಂ ತನ್ವೀಂ ಸ್ವಯಂಭೂರ್ಹರತೀಂ ಮನಃ ।
ಅಕಾಮಾಂ ಚಕಮೇ ಕ್ಷತ್ತಃ ಸಕಾಮ ಇತಿ ನಃ ಶ್ರುತಮ್ ॥
ಅನುವಾದ
ಮಹಾತ್ಮನಾದ ವಿದುರನೇ! ಬ್ರಹ್ಮದೇವರ ಕನ್ಯೆಯಾದ ಸರಸ್ವತಿಯು ಅತ್ಯಂತ ಸುಕುಮಾರಿಯೂ, ಸುಂದರಿಯೂ ಆಗಿದ್ದಳು. ಆಕೆಗೆ ಕಾಮವಿಲ್ಲದಿದ್ದರೂ ಬ್ರಹ್ಮದೇವರು ಆಕೆಯನ್ನು ಕಾಮಿಸಿದರು ಎಂದು ನಾವು ಕೇಳಿದ್ದೇವೆ.॥28॥
(ಶ್ಲೋಕ - 29)
ಮೂಲಮ್
ತಮಧರ್ಮೇ ಕೃತಮತಿಂ ವಿಲೋಕ್ಯ ಪಿತರಂ ಸುತಾಃ ।
ಮರೀಚಿಮುಖ್ಯಾ ಮುನಯೋ ವಿಶ್ರಮ್ಭಾತ್ಪ್ರತ್ಯಬೋಧಯನ್ ॥
ಅನುವಾದ
ಬ್ರಹ್ಮದೇವರು ಇಂತಹ ಅಧರ್ಮಮಯವಾದ ಸಂಕಲ್ಪ ಮಾಡಿದ್ದನ್ನು ಕಂಡು ಅವರ ಪುತ್ರರಾದ ಮರೀಚಿಗಳೇ ಮುಂತಾದ ಮಹರ್ಷಿಗಳು ಅವರಿಗೆ ವಿಶ್ವಾಸಪೂರ್ವಕ ತಿಳಿಹೇಳಿದರು.॥29॥
(ಶ್ಲೋಕ - 30)
ಮೂಲಮ್
ನೈತತ್ಪೂರ್ವೈಃ ಕೃತಂ ತ್ವದ್ಯೇ ನ ಕರಿಷ್ಯಂತಿ ಚಾಪರೇ ।
ಯತ್ತ್ವಂ ದುಹಿತರಂ ಗಚ್ಛೇರನಿಗೃಹ್ಯಾಂಗಜಂ ಪ್ರಭುಃ ॥
ಅನುವಾದ
ತೀರ್ಥರೂಪರೇ ! ತಾವು ಸಮರ್ಥರು. ಮನಸ್ಸಿನಲ್ಲಿ ಉಂಟಾಗಿರುವ ಈ ಕಾಮದ ವೇಗವನ್ನು ತಡೆಯುವ ಶಕ್ತಿ ಇದ್ದರೂ ತಾವು ಅದನ್ನು ತಡೆಗಟ್ಟದೆ ಪುತ್ರೀಗಮನವನ್ನು ಮಾಡಲು ಸಂಕಲ್ಪಿಸಿದ್ದೀರಲ್ಲ ! ಇಂತಹ ಪಾಪವನ್ನು ಹಿಂದಿನ ಯಾವ ಬ್ರಹ್ಮದೇವರೂ ಮಾಡಿಲ್ಲ; ಮುಂದಿನವರೂ ಮಾಡಲಾರರು.॥30॥
(ಶ್ಲೋಕ - 31)
ಮೂಲಮ್
ತೇಜೀಯಸಾಮಪಿ ಹ್ಯೇತನ್ನ ಸುಶ್ಲೋಕ್ಯಂ ಜಗದ್ಗುರೋ ।
ಯದ್ವ ತ್ತಮನುತಿಷ್ಠನ್ವೈ ಲೋಕಃ ಕ್ಷೇಮಾಯ ಕಲ್ಪತೇ ॥ 31 ॥
ಅನುವಾದ
ಜಗದ್ಗುರುವೇ ! ನಿಮ್ಮಂತಹ ತೇಜಸ್ವೀ ಪುರುಷರಿಗೆ ಇಂತಹ ಕೆಲಸ ಶೋಭಿಸುವುದಿಲ್ಲ. ಏಕೆಂದರೆ, ನಿಮ್ಮಂತಹವರ ಆಚರಣೆಗಳನ್ನು ಅನುಸರಿಸು ವುದರಿಂದಲೇ ಜಗತ್ತಿನ ಕಲ್ಯಾಣವಾಗುತ್ತದೆ.॥31॥
ಮೂಲಮ್
(ಶ್ಲೋಕ - 32)
ತಸ್ಮೈ ನಮೋ ಭಗವತೇ ಯ ಇದಂ ಸ್ವೇನ ರೋಚಿಷಾ ।
ಆತ್ಮಸ್ಥಂ ವ್ಯಂಜಯಾಮಾಸ ಸ ಧರ್ಮಂ ಪಾತುಮರ್ಹತಿ ॥ 32 ॥
ಅನುವಾದ
ಯಾರು ತನ್ನಲ್ಲಿ ವಿಲೀನಗೊಂಡಿರುವ ಈ ಜಗತ್ತನ್ನು ಸ್ವಪ್ರಕಾಶದಿಂದಲೇ ಪ್ರಕಟಪಡಿಸುವನೋ ಆ ಪರಮಾತ್ಮನಿಗೆ ನಮೋ ನಮಃ. ಈ ಸಮಯದಲ್ಲಿ ಆತನೇ ಧರ್ಮವನ್ನು ರಕ್ಷಿಸಬಲ್ಲನು.॥32॥
(ಶ್ಲೋಕ - 33)
ಮೂಲಮ್
ಸ ಇತ್ಥಂ ಗೃಣತಃ ಪುತ್ರಾನ್ಪುರೋ ದೃಷ್ಟ್ವಾ ಪ್ರಜಾಪತೀನ್ ।
ಪ್ರಜಾಪತಿಪತಿಸ್ತನ್ವಂ ತತ್ಯಾಜ ವ್ರೀಡಿತಸ್ತದಾ ।
ತಾಂ ದಿಶೋ ಜಗೃಹುರ್ಘೋರಾಂ ನೀಹಾರಂ ಯದ್ವಿದುಸ್ತಮಃ ॥
ಅನುವಾದ
ತನ್ನ ಪುತ್ರರಾದ ಮರೀಚಿಗಳೇ ಮುಂತಾದ ಪ್ರಜಾಪತಿಗಳು ತಮ್ಮ ಮುಂದೆ ಹೀಗೆ ಹೇಳುತ್ತಿರುವುದನ್ನು ನೋಡಿ ಪ್ರಜಾಪತಿಗಳಿಗೂ ಪತಿ ಯಾದ ಬ್ರಹ್ಮದೇವರಿಗೆ ತುಂಬಾ ನಾಚಿಕೆಯುಂಟಾಗಿ, ಅವರು ಒಡನೆಯೇ ಆ ದೇಹವನ್ನು ತೊರೆದುಬಿಟ್ಟರು. ಹೀಗೆ ಅವರು ತೊರೆದ ಘೋರವಾದ ಶರೀರವನ್ನು ದಿಕ್ಕುಗಳು ಸ್ವೀಕರಿಸಿದವು. ಅದೇ ಮಂಜು ಆಯಿತು. ಅದನ್ನು ಅಂಧಕಾರವೆಂದೂ ಹೇಳುತ್ತಾರೆ.॥33॥
(ಶ್ಲೋಕ - 34)
ಮೂಲಮ್
ಕದಾಚಿದ್ಧ್ಯಾಯತಃ ಸ್ರಷ್ಟುರ್ವೇದಾ ಆಸಂಶ್ಚತುರ್ಮುಖಾತ್ ।
ಕಥಂ ಸ್ರಕ್ಷ್ಯಾಮ್ಯಹಂ ಲೋಕಾನ್ಸಮವೇತಾನ್ಯಥಾ ಪುರಾ ॥
ಅನುವಾದ
ಒಮ್ಮೆ ಬ್ರಹ್ಮದೇವರು ‘ನಾನು ಎಲ್ಲ ಲೋಕಗಳನ್ನು ಹಿಂದೆ ಇದ್ದಂತೆಯೇ ವ್ಯವಸ್ಥಿತವಾದ ರೂಪದಲ್ಲಿ ಸೃಷ್ಟಿಮಾಡಬೇಕು’ ಎಂದು ಯೋಚಿಸುತ್ತಿದ್ದರು. ಆಗ ಅವರ ನಾಲ್ಕು ಮುಖಗಳಿಂದ ನಾಲ್ಕು ವೇದಗಳು ಪ್ರಕಟಗೊಂಡವು.॥34॥
(ಶ್ಲೋಕ - 35)
ಮೂಲಮ್
ಚಾತುರ್ಹೋತ್ರಂ ಕರ್ಮತಂತ್ರಮುಪವೇದನಯೈಃ ಸಹ ।
ಧರ್ಮಸ್ಯ ಪಾದಾಶ್ಚತ್ವಾರಸ್ತಥೈವಾಶ್ರಮವೃತ್ತಯಃ ॥
ಅನುವಾದ
ಇವುಗಳಲ್ಲದೆ ಉಪವೇದಗಳು, ನ್ಯಾಯಶಾಸ, ಅಧ್ವರ್ಯು, ಉದ್ಗಾತೃ, ಹೋತೃ ಮತ್ತು ಬ್ರಹ್ಮ ಎಂಬ ನಾಲ್ಕು ಮಂದಿ ಋತ್ವಿಕ್ಕುಗಳ ಕರ್ಮಗಳು, ಯಜ್ಞಗಳ ವಿಸ್ತಾರ, ಧರ್ಮದ ನಾಲ್ಕು ಪಾದಗಳು, ನಾಲ್ಕು ಆಶ್ರಮಗಳು ಹಾಗೂ ಅವುಗಳ ವೃತ್ತಿಗಳು ಹೀಗೆ ಎಲ್ಲವೂ ಬ್ರಹ್ಮ ದೇವರ ಮುಖಗಳಿಂದ ಉದ್ಭವಿಸಿದವು.॥35॥
(ಶ್ಲೋಕ - 36)
ಮೂಲಮ್ (ವಾಚನಮ್)
ವಿದುರ ಉವಾಚ
ಮೂಲಮ್
ಸ ವೈ ವಿಶ್ವಸೃಜಾಮೀಶೋ ವೇದಾದೀನ್ಮುಖತೋಸೃಜತ್ ।
ಯದ್ಯದ್ಯೇನಾಸೃಜದ್ದೇವಸ್ತನ್ಮೇ ಬ್ರೂಹಿ ತಪೋಧನ ॥
ಅನುವಾದ
ವಿದುರನು ಕೇಳಿದನು ‘ತಪೋಧನರೇ ! ಸೃಷ್ಟಿಕರ್ತರಾದ ಪ್ರಜಾಪತಿಗಳಿಗೂ ಪ್ರಭುವಾದ ಬ್ರಹ್ಮದೇವರು ತಮ್ಮ ಮುಖ ಗಳಿಂದ ಈ ವೇದಾದಿಗಳನ್ನು ಹೊರಹೊಮ್ಮಿಸಿದಾಗ ಅವರು ಯಾವ-ಯಾವ ಮುಖದಿಂದ ಯಾವ-ಯಾವ ವಸ್ತುಗಳನ್ನು ನಿರ್ಮಾಣಮಾಡಿದರು ? ಎಂಬುದನ್ನು ದಯವಿಟ್ಟು ನನಗೆ ತಿಳಿಸುವರಾಗಿ’ ಎಂದು ವಿಜ್ಞಾಪಿಸಿಕೊಂಡನು.॥36॥
(ಶ್ಲೋಕ - 37)
ಮೂಲಮ್ (ವಾಚನಮ್)
ಮೈತ್ರೇಯ ಉವಾಚ
ಮೂಲಮ್
ಋಗ್ಯಜುಃಸಾಮಾಥರ್ವಾಖ್ಯಾನ್ವೇದಾನ್ಪೂರ್ವಾದಿಭಿರ್ಮುಖೈಃ ।
ಶಸಮಿಜ್ಯಾಂ ಸ್ತುತಿಸ್ತೋಮಂ ಪ್ರಾಯಶ್ಚಿತ್ತಂ ವ್ಯಧಾತ್ಕ್ರಮಾತ್ ॥
ಅನುವಾದ
ಶ್ರೀಮೈತ್ರೇಯರು ಹೇಳುತ್ತಾರೆ ‘ಎಲೈ ವಿದುರನೇ ! ಬ್ರಹ್ಮ ದೇವರು ತಮ್ಮ ಪೂರ್ವ, ದಕ್ಷಿಣ, ಪಶ್ಚಿಮ, ಉತ್ತರ ಈ ದಿಕ್ಕುಗಳ ಮುಖಗಳಿಂದ ಕ್ರಮವಾಗಿ ಋಗ್ವೇದ, ಯಜುರ್ವೇದ, ಸಾಮ ವೇದ, ಅಥರ್ವವೇದಗಳನ್ನು ಪ್ರಕಟಪಡಿಸಿದರು. ಇದೇ ಕ್ರಮ ದಲ್ಲೇ ಹೋತೃವಿನ ಕರ್ಮವಾದ ಶಸವನ್ನೂ, ಅಧ್ವರ್ಯುವಿನ ಕರ್ಮವಾದ ಇಜ್ಯೆಯನ್ನೂ, ಉದ್ಗಾತೃವಿನ ಕರ್ಮವಾದ ಸ್ತುತಿ- ಸ್ತೋಮವನ್ನು ಮತ್ತು ಬ್ರಹ್ಮನ ಕರ್ಮವಾದ ಪ್ರಾಯಶ್ಚಿತ್ತವನ್ನೂ ಹೊರಹೊಮ್ಮಿಸಿದರು.॥37॥
(ಶ್ಲೋಕ - 38)
ಮೂಲಮ್
ಆಯುರ್ವೇದಂ ಧನುರ್ವೇದಂ ಗಾಂಧರ್ವಂ ವೇದಮಾತ್ಮನಃ ।
ಸ್ಥಾಪತ್ಯಂ ಚಾಸೃಜದ್ವೇದಂ ಕ್ರಮಾತ್ಪೂರ್ವಾದಿಭಿರ್ಮುಖೈಃ ॥
ಅನುವಾದ
ಹೀಗೆಯೇ ಆಯುರ್ವೇದ (ಚಿಕಿತ್ಸಾಶಾಸ), ಧನುರ್ವೇದ (ಶಸವಿದ್ಯೆ), ಗಾಂಧರ್ವವೇದ (ಸಂಗೀತಶಾಸ) ಮತ್ತು ಸ್ಥಾಪತ್ಯವೇದ (ಶಿಲ್ಪವಿದ್ಯೆ) ಈ ನಾಲ್ಕು ಉಪವೇದಗಳನ್ನು ಕ್ರಮವಾಗಿ ಪೂರ್ವಾದಿ ದಿಕ್ಕುಗಳ ಮುಖ ಗಳಿಂದಲೇ ನಿರ್ಮಾಣಮಾಡಿದರು.॥38॥
(ಶ್ಲೋಕ - 39)
ಮೂಲಮ್
ಇತಿಹಾಸಪುರಾಣಾನಿ ಪಂಚಮಂ ವೇದಮೀಶ್ವರಃ ।
ಸರ್ವೇಭ್ಯ ಏವ ವಕೇಭ್ಯಃ ಸಸೃಜೇ ಸರ್ವದರ್ಶನಃ ॥
ಅನುವಾದ
ಮತ್ತೆ ಸರ್ವಜ್ಞರಾದ ಆ ಬ್ರಹ್ಮದೇವರು ಇತಿಹಾಸ ಪುರಾಣರೂಪವಾದ ಐದನೆಯ ವೇದವನ್ನೂ ಎಲ್ಲ ಮುಖಗಳಿಂದ ನಿರ್ಮಿಸಿದರು.॥39॥
(ಶ್ಲೋಕ - 40)
ಮೂಲಮ್
ಷೋಡಶ್ಯುಕ್ಥೌ ಪೂರ್ವವಕಾತ್ಪುರೀಷ್ಯಗ್ನಿಷ್ಟುತಾವಥ ।
ಆಪ್ತೋರ್ಯಾಮಾತಿರಾತ್ರೌ ಚ ವಾಜಪೇಯಂ ಸಗೋಸವಮ್ ॥
ಅನುವಾದ
ಅದೇ ಕ್ರಮದಲ್ಲಿ ಷೋಡಶೀ ಮತ್ತು ಉಕ್ಥ್ಯ, ಚಯನ ಮತ್ತು ಅಗ್ನಿ ಷ್ಟೋಮ, ಆಪ್ತೋರ್ಯಾಮ ಮತ್ತು ಅತಿರಾತ್ರ, ವಾಜಪೇಯ ಮತ್ತು ಗೋಸವ ಎಂಬ ಎರಡೆರಡು ಯಾಗಗಳೂ ಪೂರ್ವಾದಿ ಮುಖಗಳಿಂದ ಉತ್ಪನ್ನವಾದುವು.॥40॥
(ಶ್ಲೋಕ - 41)
ಮೂಲಮ್
ವಿದ್ಯಾ ದಾನಂ ತಪಃ ಸತ್ಯಂ ಧರ್ಮಸ್ಯೇತಿ ಪದಾನಿ ಚ ।
ಆಶ್ರಮಾಂಶ್ಚ ಯಥಾಸಂಖ್ಯಮಸೃಜತ್ಸಹ ವೃತ್ತಿಭಿಃ ॥
ಅನುವಾದ
ವಿದ್ಯಾ, ದಾನ, ತಪಸ್ಸು, ಸತ್ಯ ಎಂಬ ಧರ್ಮದ ನಾಲ್ಕು ಪಾದಗಳನ್ನೂ, ವೃತ್ತಿಗಳ ಸಹಿತ ನಾಲ್ಕು ಆಶ್ರಮಗಳನ್ನೂ, ಇದೇ ಕ್ರಮದಲ್ಲಿ ಪ್ರಕಟಪಡಿಸಿದನು.॥41॥
(ಶ್ಲೋಕ - 42)
ಮೂಲಮ್
ಸಾವಿತ್ರಂ ಪ್ರಾಜಾಪತ್ಯಂ ಚ ಬ್ರಾಹ್ಮಂ ಚಾಥ ಬೃಹತ್ತಥಾ ।
ವಾರ್ತಾಸಂಚಯಶಾಲೀನಶಿಲೋಂಛ ಇತಿ ವೈ ಗೃಹೇ ॥
ಅನುವಾದ
ಸಾವಿತ್ರ,* ಪ್ರಾಜಾಪತ್ಯ,1 ಬ್ರಾಹ್ಮ 2 ಮತ್ತು ಬೃಹತ್ 3 ಈ ನಾಲ್ಕು ವೃತ್ತಿಗಳು ಬ್ರಹ್ಮಚಾರಿಯದಾಗಿವೆ. ವಾರ್ತಾ,4 ಸಂಚಯ,5 ಶಾಲೀನ 6 ಮತ್ತು ಶಿಲೊಂಛ 7 ಇವು ನಾಲ್ಕು ವೃತ್ತಿಗಳು ಗೃಹಸ್ಥರಿಗೆ ಸಂಬಂಧಪಟ್ಟವುಗಳು.॥42॥
(ಶ್ಲೋಕ - 43)
ಮೂಲಮ್
ವೈಖಾನಸಾ ವಾಲಖಿಲ್ಯೌದುಂಬರಾಃ ೇನಪಾ ವನೇ ।
ನ್ಯಾಸೇ ಕುಟೀಚಕಃ ಪೂರ್ವಂ ಬಹ್ವೋದೋ ಹಂಸನಿಷ್ಕ್ರಿಯೌ ॥
ಅನುವಾದ
ಇದೇ ರೀತಿಯಲ್ಲಿ ವಾನಪ್ರಸ್ಥರಲ್ಲಿ ವೃತ್ತಿಭೇದಕ್ಕನುಸಾರವಾಗಿ ವೈಖಾನಸ,8 ವಾಲಖಿಲ್ಯ,9 ಔದುಂಬರ,10 ಮತ್ತು ೇನಪ 11 ಇವು ನಾಲ್ಕು ವಾನಪ್ರಸ್ಥಿಯರ ಹಾಗೂ ಕುಟೀಚಕ,12 ಬಹೂದಕ,13 ಹಂಸ 14 ಮತ್ತು ನಿಷ್ಕ್ರಿಯ (ಪರಮಹಂಸ)15 ಇವು ನಾಲ್ಕು ಸನ್ಯಾಸಿಗಳ ಭೇದವಾಗಿವೆ. ॥ 43॥
(ಶ್ಲೋಕ - 44)
ಮೂಲಮ್
ಆನ್ವೀಕ್ಷಿಕೀ ತ್ರಯೀ ವಾರ್ತಾ ದಂಡನೀತಿಸ್ತಥೈವ ಚ ।
ಏವಂ ವ್ಯಾಹೃತಯಶ್ಚಾಸನ್ಪ್ರಣವೋ ಹ್ಯಸ್ಯ ದಹ್ರತಃ ॥
ಅನುವಾದ
ಇದೇ ಕ್ರಮದಲ್ಲಿ ಆನ್ವೀಕ್ಷಿಕಿ,16 ತ್ರಯೀ,17 ವಾರ್ತಾ 18 ಮತ್ತು ದಂಡನೀತಿ 19 ಈ ನಾಲ್ಕು ವಿದ್ಯೆಗಳೂ ಹಾಗೂ ನಾಲ್ಕು ವ್ಯಾಹೃತಿಗಳೂ20 ಕೂಡ ಬ್ರಹ್ಮದೇವನ ನಾಲ್ಕು ಮುಖಗಳಿಂದ ಉತ್ಪನ್ನವಾದುವು. ಅವರ ಹೃದಯಾ ಕಾಶದಿಂದ ಓಂಕಾರವು ಪ್ರಕಟಗೊಂಡಿತು.॥44॥
(ಶ್ಲೋಕ - 45)
ಮೂಲಮ್
ತಸ್ಯೋಷ್ಣಿ ಗಾಸೀಲ್ಲೋಮಭ್ಯೋ ಗಾಯತ್ರೀ ಚ ತ್ವಚೋ ವಿಭೋಃ ।
ತ್ರಿಷ್ಟುಮ್ಮಾಂಸಾತ್ಸ್ನುತೋನುಷ್ಟುಬ್ಜಗತ್ಯಸ್ಥ್ನಃ ಪ್ರಜಾಪತೇಃ ॥
(ಶ್ಲೋಕ - 46)
ಮೂಲಮ್
ಮಜ್ಜಾಯಾಃ ಪಂಕ್ತಿರುತ್ಪನ್ನಾ ಬೃಹತೀ ಪ್ರಾಣತೋಭವತ್ ।
ಸ್ಪರ್ಶಸ್ತಸ್ಯಾಭವಜ್ಜೀವಃ ಸ್ವರೋ ದೇಹ ಉದಾಹೃತಃ ॥
ಅನುವಾದ
ಬ್ರಹ್ಮದೇವರ ರೋಮಗಳಿಂದ ಉಷ್ಣಿಕ್, ತ್ವಚೆಯಿಂದ ಗಾಯತ್ರಿ, ಮಾಂಸದಿಂದ ತ್ರಿಷ್ಟುಪ್, ಸ್ನಾಯುಗಳಿಂದ ಅನುಷ್ಟುಪ್, ಅಸ್ಥಿಗಳಿಂದ ಜಗತಿ, ಮಜ್ಜೆಯಿಂದ ಪಂಕ್ತಿ ಮತ್ತು ಪ್ರಾಣಗಳಿಂದ ಬೃಹತಿ ಎಂಬ ಛಂದ ಗಳು ಉತ್ಪನ್ನವಾದುವು. ಹೀಗೆಯೇ ಅವರ ಜೀವ ಸ್ಪರ್ಶವರ್ಣ (ಕವರ್ಗಾದಿ ಪಂಚವರ್ಗ) ಮತ್ತು ದೇಹ ಸ್ವರವರ್ಣ (ಅಕಾರಾದಿ) ಗಳೆಂದು ಕರೆಯಲ್ಪಟ್ಟವು.॥45-46॥
(ಶ್ಲೋಕ - 47)
ಮೂಲಮ್
ಊಷ್ಮಾಣಮಿಂದ್ರಿಯಾಣ್ಯಾಹುರಂತಃಸ್ಥಾ ಬಲಮಾತ್ಮನಃ ।
ಸ್ವರಾಃ ಸಪ್ತ ವಿಹಾರೇಣ ಭವಂತಿ ಸ್ಮ ಪ್ರಜಾಪತೇಃ ॥
ಅನುವಾದ
ಅವರ ಇಂದ್ರಿಯಗಳನ್ನು ಊಷ್ಮವರ್ಣ (ಶ, ಷ, ಸ, ಹ) ಮತ್ತು ಬಲವನ್ನು ಅಂತ ಸ್ಥವರ್ಣ (ಯ, ರ, ಲ, ವ) ಎಂದು ಹೇಳುತ್ತಾರೆ. ಅವರ ಕ್ರೀಡೆಯಿಂದ ನಿಷಾದ, ಋಷಭ, ಗಾಂಧಾರ, ಷಡ್ಜ, ಮಧ್ಯಮ, ಧೈವತ, ಪಂಚಮ ಇವು ಏಳು ಸ್ವರಗಳು ಉಂಟಾದುವು.॥47॥
(ಶ್ಲೋಕ - 48)
ಮೂಲಮ್
ಶಬ್ದಬ್ರಹ್ಮಾತ್ಮನಸ್ತಸ್ಯ ವ್ಯಕ್ತಾವ್ಯಕ್ತಾತ್ಮನಃ ಪರಃ ।
ಬ್ರಹ್ಮಾವಭಾತಿ ವಿತತೋ ನಾನಾಶಕ್ತ್ಯುಪಬೃಂಹಿತಃ ॥
ಅನುವಾದ
ಅಯ್ಯಾ ವಿದುರಾ ! ಬ್ರಹ್ಮದೇವರು ಶಬ್ದಬ್ರಹ್ಮಸ್ವರೂಪರಾಗಿ, ವೈಖರೀ ರೂಪದಿಂದ ವ್ಯಕ್ತರಾಗಿಯೂ, ಪರಾರೂಪ (ಓಂಕಾರ) ದಿಂದ ಅವ್ಯಕ್ತರಾಗಿಯೂ ಇದ್ದಾರೆ ಮತ್ತು ಆ ಶಬ್ದಬ್ರಹ್ಮನ ಮೇಲಿರುವ ಹಾಗೂ ಎಲ್ಲೆಡೆಗಳಲ್ಲಿಯೂ ಪರಿಪೂರ್ಣವಾಗಿರುವ ಪರ ಬ್ರಹ್ಮವು ಅನೇಕ ಪ್ರಕಾರದ ಶಕ್ತಿಗಳಿಂದ ಕೂಡಿ ಇಂದ್ರಾದಿ ದೇವತಾ ರೂಪಗಳಿಂದ ಬೆಳಗುತ್ತಿದೆ.॥48॥
(ಶ್ಲೋಕ - 49)
ಮೂಲಮ್
ತತೋಪರಾಮುಪಾದಾಯ ಸ ಸರ್ಗಾಯ ಮನೋ ದಧೇ ।
ಋಷೀಣಾಂ ಭೂರಿವೀರ್ಯಾಣಾಮಪಿ ಸರ್ಗಮವಿಸ್ತೃತಮ್ ॥
(ಶ್ಲೋಕ - 50)
ಮೂಲಮ್
ಜ್ಞಾತ್ವಾ ತದ್ಧೃದಯೇ ಭೂಯಶ್ಚಿಂತಯಾಮಾಸ ಕೌರವ ।
ಅಹೋ ಅದ್ಭುತಮೇತನ್ಮೇ ವ್ಯಾಪೃತಸ್ಯಾಪಿ ನಿತ್ಯದಾ ॥
(ಶ್ಲೋಕ - 51)
ಮೂಲಮ್
ನ ಹ್ಯೇಧಂತೇ ಪ್ರಜಾ ನೂನಂ ದೈವಮತ್ರ ವಿಘಾತಕಮ್ ।
ಏವಂ ಯುಕ್ತಕೃತಸ್ತಸ್ಯ ದೈವಂ ಚಾವೇಕ್ಷತಸ್ತದಾ ॥
(ಶ್ಲೋಕ - 52)
ಮೂಲಮ್
ಕಸ್ಯ ರೂಪಮಭೂದ್ದ್ವೇಧಾ ಯತ್ಕಾಯಮಭಿಚಕ್ಷತೇ ।
ತಾಭ್ಯಾಂ ರೂಪವಿಭಾಗಾಭ್ಯಾಂ ಮಿಥುನಂ ಸಮಪದ್ಯತ ॥
ಅನುವಾದ
ಎಲೈ ವಿದುರನೇ ! ಬ್ರಹ್ಮದೇವರು ಕಾಮಾಸಕ್ತವಾದ ತಮ್ಮ ಮೊದಲನೆಯ ದೇಹವನ್ನು ತ್ಯಜಿಸಿದ ನಂತರ ಬೇರೊಂದು ಶರೀರ ವನ್ನು ಧರಿಸಿ ವಿಶ್ವವನ್ನು ವಿಸ್ತರಿಸಬೇಕೆಂದು ಯೋಚಿಸಿದರು. ಮರೀಚಿ ಗಳೇ ಮುಂತಾದ ಮಹಾಶಕ್ತಿಸಂಪನ್ನರಾದ ಋಷಿಗಳಿಂದಲೂ ಕೂಡ ಸೃಷ್ಟಿಯ ವಿಸ್ತಾರವು ಹೆಚ್ಚಾಗಿ ಆಗದೇ ಇದ್ದುದನ್ನು ಕಂಡು ಅವರು ತಮ್ಮ ಮನಸ್ಸಿನಲ್ಲಿ ‘ಏನಿದು ಎಂತಹ ಆಶ್ಚರ್ಯ ! ನಾನು ನಿರಂತರವಾಗಿ ಪ್ರಯತ್ನಮಾಡಿದರೂ ಪ್ರಜಾವೃದ್ಧಿಯು ಆಗುತ್ತಿಲ್ಲ ವಲ್ಲ ! ದೈವವೇ ಇದಕ್ಕೆ ಏನೋ ವಿಘ್ನವನ್ನು ತಂದೊಡ್ಡುತ್ತಿದೆ ಎಂದು ಕಾಣುತ್ತದೆ’ ಎಂದು ಚಿಂತೆಗೊಳಗಾದರು. ಮಾಡಬೇಕಾದ ಯುಕ್ತ ವಾದ ಕಾರ್ಯಗಳನ್ನು ಮಾಡುತ್ತಿದ್ದ ಬ್ರಹ್ಮದೇವರು ಹೀಗೆ ದೈವದ ಕುರಿತು ವಿಚಾರಮಾಡುತ್ತಿದ್ದಾಗ ಅಕಸ್ಮಾತ್ತಾಗಿ ಅವರ ಶರೀರದಲ್ಲಿ ಎರಡು ಭಾಗಗಳು ಉಂಟಾದುವು. ‘ಕ’ ಎಂಬುದು ಬ್ರಹ್ಮದೇವರ ಹೆಸರು. ಅದರಿಂದ ವಿಭಾಗಗೊಂಡಿದ್ದರಿಂದ ‘ಕಾಯ’ ಎಂದು ಶರೀರಕ್ಕೆ ಹೆಸರಾಯಿತು. ಹೀಗೆ ಒಡೆದ ಅವರ ಶರೀರದ ಎರಡು ಭಾಗಗಳಿಂದ ಒಂದು ಸೀ-ಪುರುಷರ ಜೋಡಿ ಪ್ರಕಟವಾಯಿತು.॥49-52॥
(ಶ್ಲೋಕ - 53)
ಮೂಲಮ್
ಯಸ್ತು ತತ್ರ ಪುಮಾನ್ಸೋಭೂನ್ಮನುಃ ಸ್ವಾಯಂಭುವಃ ಸ್ವರಾಟ್ ।
ಸೀ ಯಾಸೀಚ್ಛತರೂಪಾಖ್ಯಾ ಮಹಿಷ್ಯಸ್ಯ ಮಹಾತ್ಮನಃ ॥
ಅನುವಾದ
ಅವುಗಳಲ್ಲಿ ಪುರುಷಭಾಗವು ಸಾಮ್ರಾಟ್ ಸ್ವಾಯಂಭುವ ಮನುವಾಯಿತು. ಸೀಭಾಗವು ಅವನ ಸಾಮ್ರಾಜ್ಞೀ ಶತರೂಪಾದೇವಿಯಾಯಿತು.॥53॥
(ಶ್ಲೋಕ - 54)
ಮೂಲಮ್
ತದಾ ಮಿಥುನಧರ್ಮೇಣ ಪ್ರಜಾ ಹ್ಯೇಧಾಂಬಭೂವಿರೇ ।
ಸ ಚಾಪಿ ಶತರೂಪಾಯಾಂ ಪಂಚಾಪತ್ಯಾನ್ಯಜೀಜನತ್ ॥
ಅನುವಾದ
ಅಂದಿನಿಂದ ಮಿಥುನ ಧರ್ಮ (ಸೀ-ಪುರುಷ ಸಂಭೋಗ)ದಿಂದ ಪ್ರಜೆಯ ವೃದ್ಧಿಯಾಗ ತೊಡಗಿತು. ಮಹಾರಾಜ ಸ್ವಾಯಂಭುವ ಮನುವು ಶತ ರೂಪಾದೇವಿಯಲ್ಲಿ ಐದು ಸಂತಾನಗಳನ್ನು ಪಡೆದನು.॥54॥
(ಶ್ಲೋಕ - 55)
ಮೂಲಮ್
ಪ್ರಿಯವ್ರತೋತ್ತಾನಪಾದೌ ತಿಸ್ರಃ ಕನ್ಯಾಶ್ಚ ಭಾರತ ।
ಆಕೂತಿರ್ದೇವಹೂತಿಶ್ಚ ಪ್ರಸೂತಿರಿತಿ ಸತ್ತಮ ॥
ಅನುವಾದ
ಸಾಧು ಶಿರೋಮಣಿಯಾದ ವಿದುರನೇ ! ಅವರಲ್ಲಿ ಪ್ರಿಯವ್ರತ ಮತ್ತು ಉತ್ತಾನಪಾದರೆಂಬ ಇಬ್ಬರು ಪುತ್ರರು ಹಾಗೂ ಆಕೂತಿ, ದೇವಹೂತಿ, ಪ್ರಸೂತಿ ಎಂಬ ಮೂವರು ಪುತ್ರಿಯರು.॥55॥
(ಶ್ಲೋಕ - 56)
ಮೂಲಮ್
ಆಕೂತಿಂ ರುಚಯೇ ಪ್ರಾದಾತ್ಕರ್ದಮಾಯ ತು ಮಧ್ಯಮಾಮ್ ।
ದಕ್ಷಾಯಾದಾತ್ಪ್ರಸೂತಿಂ ಚ ಯತ ಆಪೂರಿತಂ ಜಗತ್ ॥
ಅನುವಾದ
ಮನುವು ಅವರಲ್ಲಿ ಆಕೂತಿಯನ್ನು ರುಚಿ ಎಂಬ ಪ್ರಜಾಪತಿಗೂ, ಮಧ್ಯದ ಮಗಳಾದ ದೇವಹೂತಿಯನ್ನು ಕರ್ದಮ ಪ್ರಜಾಪತಿಗೂ, ಪ್ರಸೂತಿಯನ್ನು ದಕ್ಷಪ್ರಜಾಪತಿಗೂ ಕೊಟ್ಟು ವಿವಾಹಮಾಡಿದರು. ಆ ಮೂರು ಪುತ್ರಿಯರ ಸಂತಾನದಿಂದ ಇಡೀ ಜಗತ್ತೇ ತುಂಬಿ ಹೋಯಿತು.॥56॥
ಅನುವಾದ (ಸಮಾಪ್ತಿಃ)
ಹನ್ನೆರಡನೆಯ ಅಧ್ಯಾಯವು ಮುಗಿಯಿತು. ॥12॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ತೃತೀಯಸ್ಕಂಧೇ ದ್ವಾದಶೋಽಧ್ಯಾಯಃ ॥12॥